ಪ್ರವಾಸಿಗರ ವಿಧಗಳು (Types of Tourists)

ಪ್ರವಾಸಿಗರ ವಿಧಗಳು (Types of Tourists)

ಪ್ರಯಾಣ ಮಾಡುವ ಎಲ್ಲರನ್ನೂ ಪ್ರವಾಸಿಗರು ಎಂದು ಪರಿಗಣಿಸಲು ಬರುವುದಿಲ್ಲ. ಯಾರು ಪ್ರವಾಸೋದ್ಯಮಕ್ಕಾಗಿ ಪ್ರಯಾಣಿಸುವವರೋ ಅವರನ್ನು ಮಾತ್ರ ಪ್ರವಾಸಿಗರು ಎಂದು ಹೇಳಬಹುದು.

 1. ಪ್ರಯಾಣಿಕರು: ತಮ್ಮ ಕೆಲಸ, ಸಂಬಳ ಹಾಗೂ ವಾಸಸ್ಥಾನಗಳನ್ನು ಅರಸಿ ಪ್ರಯಾಣ ಮಾಡುವವರನ್ನು ಪ್ರಯಾಣಿಕರು ಎಂದು ಕರೆಯಬಹುದಾಗಿದೆ. ಇವರು ಯಾವುದೇ ಮನರಂಜನೆ, ವಿರಾಮ ಹಾಗೂ ನಿಖರವಾದ ಉದ್ದೇಶಗಳಿಗಾಗಿ ಪ್ರಯಾಣಿಸುವವರಲ್ಲ. ಇವರಿಗೆ ತಾವು ಪ್ರಯಾಣಿಸುವ ದೂರ ಹಾಗೂ ಸ್ಥಳದ ಬಗ್ಗೆ ನಿರ್ಬಂಧವಿರುವುದಿಲ್ಲ.

 2. ಪ್ರವಾಸಿಗರು: ಒಬ್ಬ ವ್ಯಕ್ತಿ ಸಂತೋಷ, ಮನರಂಜನೆ, ವಿರಾಮ ಹಾಗೂ ಕ್ರೀಡಾ ಉದ್ದೇಶಗಳನ್ನು ಇಟ್ಟುಕೊಂಡು ಪ್ರಯಾಣಿಸಿದರೆ ಅವನನ್ನು ಪ್ರವಾಸಿಗ ಎಂದು ಕರೆಯಬಹುದಾಗಿದೆ. ಅಂತವರು ತಾವು ತಮ್ಮ ಮೂಲ ವಾಸ ಸ್ಥಳದಿಂದ ಹೊರಗೆ ಕನಿಷ್ಠ 24 ಗಂಟೆಗಳಿಗಿಂತ ಹೆಚ್ಚು ಕಾಲ ಹೊರಗೆ ಹೋಗಿ ಸಂತೋಷವಾಗಿ ಕಾಲ ಕಳೆಯುತ್ತಾರೆ. ಇವರು ತಮ್ಮ ಸ್ವಂತ ಖರ್ಚಿನಿಂದಲೇ ಪ್ರವಾಸವನ್ನು ಕೈಗೊಂಡು ವಿರಾಮದಲ್ಲಿ ತೊಡಗುತ್ತಾರೆ. ಇವರು ಸ್ವಂತ ಸಂಪಾದನೆಗೆ ಬೇರೆಡೆಗೆ ಹೋದವರಲ್ಲ ಇವರಿಗೆ ಯಾವುದೇ ಸ್ವಂತ ಮನೆಗಳು ಅಲ್ಲಿ ಇರುವುದಿಲ್ಲ. ಇವರು ತಾತ್ಕಾಲಿಕವಾಗಿ ನೆಲೆ ನಿಂತು ಮತ್ತೆ ತಮ್ಮ ಸ್ವಂತ ಸ್ಥಳಕ್ಕೆ ಬರುತ್ತಾರೆ.

 3. ವಿಹಾರಿಗಳು: 24 ಗಂಟೆಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ತಂಗುವ ತಾತ್ಕಾಲಿಕ ಸಂದರ್ಶಕವನ್ನು ವಿಹಾರಿಗಳು ಎಂದು ಕರೆಯುವರು. ಇವರು ತಮ್ಮ ವಾಸ ಸ್ಥಳದಿಂದ ಹೊರಟು 24 ಗಂಟೆಗಳ ಅವಧಿಯ ಒಳಗೆ ತಮ್ಮ ನಿವಾಸವನ್ನು ಬಂದು ಸೇರಿಕೊಳ್ಳುತ್ತಾರೆ. ಉದಾ: ಶಿವಮೊಗ್ಗದಿಂದ ಹೊರಟ ಸಂದರ್ಶಕನು ಅದೇ ದಿನ ಜೋಗ ಜಲಪಾತವನ್ನು ನೋಡಿಕೊಂಡು ಮತ್ತೆ ಶಿವಮೊಗ್ಗಕ್ಕೆ ಹಿಂತಿರುಗುತ್ತಾನೆ. ವಿಮಾನಯಾನ ಮಾಡುವವರು ನೌಕಯಾನಿಗಳು ಈ ವರ್ಗಕ್ಕೆ ಸೇರಿದವರಾಗಿರುತ್ತಾರೆ.

 4. ಸ್ವದೇಶಿ ಪ್ರವಾಸಿಗರು: ದೇಶದ ಪರಿಮಿತಿ ಒಳಗೆ ತನ್ನ ಸ್ವಸ್ಥಾನದಿಂದ ಹೊರಟು 24 ಗಂಟೆಗಳಿಗಿಂತ ಹೆಚ್ಚು ಹಾಗೂ 12 ತಿಂಗಳುಗಳ ಒಳಗೆ ಹೊರಗೆ ಹೋಗಿ ವಿರಾಮ ಅಥವಾ ಸಂತೋಷದಿಂದ ಕಾಲ ಕಳೆದು ಬರುವ ಪ್ರವಾಸಿಗನನ್ನು ಸ್ವದೇಶಿ ಪ್ರವಾಸಿಗ ಎಂದು ಕರೆಯಲಾಗಿದೆ ಈ ರೀತಿ ಪ್ರಯಾಣವನ್ನು ಮಾಡುವವರು ಕಡ್ಡಾಯವಾಗಿ ವೀಸಾ, ವಿದೇಶಿ ಹಣ ಹಾಗೂ ಪಾಸ್‌ಪೋರ್ಟ್‌ನ್ನು ಪಡೆಯಬೇಕಾಗಿಲ್ಲ.

 5. ವಿದೇಶಿ ಪ್ರವಾಸಿಗರು: ಒಬ್ಬ ವ್ಯಕ್ತಿ ತನ್ನ ದೇಶದ ಗಡಿ ಭಾಗವನ್ನು ದಾಟಿಕೊಂಡು ಹೋಗಿ ವಿದೇಶದಲ್ಲಿ ಕನಿಷ್ಟ 24 ಗಂಟೆಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಯವರೆಗೆ ಪ್ರವಾಸ ಕೈಗೊಂಡರೆ ಆತನನ್ನು ವಿದೇಶಿ ಪ್ರವಾಸಿಗ ಎಂದು ಕರೆಯುತ್ತಾರೆ. ಈತ ಕನಿಷ್ಟ 12 ತಿಂಗಳುಗಳ ಕಾಲ ವಿದೇಶಗಳಲ್ಲಿ ವಿಹಾರ ಮಾಡಬೇಕೆ ಹೊರತು ಯಾವುದೇ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಬಾರದು. ಇವರಿಗೆ ವೀಸಾ, ಪಾಸ್‌ಪೋರ್ಟ್ ಹಾಗೂ ವಿದೇಶಿ ಕರೆನ್ಸಿ ಕಡ್ಡಾಯವಾಗಿ ಬೇಕೇ ಬೇಕು.

 6. ಹಂಗಾಮಿ ಅತಿಥಿ: ಒಬ್ಬ ಪ್ರವಾಸಿಯು ಒಂದು ದೇಶದಿಂದ ಬೇರೊಂದು ದೇಶಕ್ಕೆ ಹೋಗುವಾಗ ಕನಿಷ್ಟ 12 ಗಂಟೆಗಳಿಗಿಂತಲೂ ಕಡಿಮೆ ಅವಧಿಯವರೆಗೆ ಉಳಿದುಕೊಳ್ಳುವವರನ್ನು ಹಂಗಾಮಿ ಅತಿಥಿ ಎಂದು ಕರೆಯುತ್ತಾರೆ. ಉದಾ: ಪ್ರವಾಸಿ ಚೀನಾ ದೇಶಕ್ಕೆ ಹೋಗುವಾಗ ಭಾರತದ ದೆಹಲಿಯಲ್ಲಿ ಇಳಿದು ಕೆಲವು ತಾಸುಗಳವರೆಗೆ ಸುತ್ತಾಡಿ ಎಲ್ಲಿಯೂ ನಿಲ್ಲದೆ ಚೀನಾಕ್ಕೆ ಹೋದರೆ ಅವನನ್ನು ಹಾದುಹೋಗುವ ಸಂದರ್ಶಕ ಎಂದು ಕರೆಯುತ್ತಾರೆ.

 7. ವಲಸಿಗ: ಒಬ್ಬ ಪ್ರವಾಸಿಗನು ಭಾರತಕ್ಕೆ ಬಂದು ಒಂದು ವರ್ಷವಿಡೀ ಇಲ್ಲಿಯೇ ಉಳಿದುಕೊಂಡರೆ ಅವನು ಪ್ರವಾಸಿಗ ಅನಿಸಿಕೊಳ್ಳದೆ ವಲಸಿಗನೆಂದು ಕರೆಸಿಕೊಳ್ಳುತ್ತಾನೆ.

 ಒಬ್ಬ ವ್ಯಕ್ತಿ ಪ್ರವಾಸಕ್ಕೆ ಹೋಗುತ್ತಾನೆ ಎಂದರೆ ಅವನು ಸಂತೋಷ, ವಿನೋದ ಹಾಗೂ ವಿರಾಮವನ್ನು ಪಡೆಯಲು ಕಾತುರನಾಗಿದ್ದಾನೆ ಎಂದರ್ಥ. ಇದರೊಂದಿಗೆ ಆತ ವಿರಾಮದ ಸಮಯವನ್ನು ಮನರಂಜನೆಗಾಗಿ ಬಳಸಿಕೊಳ್ಳುತ್ತಾನೆ. ತಾನು ವಾರವಿಡೀ ದುಡಿದು ದಣಿದಿದ್ದ ಕಾರಣದಿಂದ ಅವನು ದಣಿವಾರಿಸಿಕೊಳ್ಳಲು ಬಯಸುತ್ತಾನಲ್ಲದೆ ಹೊಸ ಚೈತನ್ಯ ಪಡೆಯುವ ಆಸೆಯನ್ನು ಹೊಂದಿರುತ್ತಾನೆ.

ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮದ ಅರ್ಥ ಮತ್ತು ವ್ಯಾಖ್ಯೆ

ಪ್ರವಾಸೋದ್ಯಮ ಹಾಗೂ ಪ್ರವಾಸಿಗರ ನಡುವೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಪ್ರವಾಸ ಉದ್ಯಮವು ಪ್ರವಾಸಿಗರನ್ನು ಅವಲಂಬಿಸಿದೆ. ಪ್ರವಾಸಿಗರಲ್ಲದೆ ಪ್ರವಾಸೋದ್ಯಮವು ನಡೆಯಲಾರದು. ಪ್ರವಾಸಿಗರು ಎಂಬ ಪದವು ಆಂಗ್ಲ ಭಾಷೆಯ Turists  ಎಂದಾದರೆ ಪ್ರವಾಸೋದ್ಯಮ ಎಂಬ ಪದವು ಆಂಗ್ಲ ಭಾಷೆಯಲ್ಲಿ Turism  ಎಂದು ಅರ್ಥವಾಗುತ್ತದೆ. ಈ ಎರಡೂ ಪದಗಳು ಲ್ಯಾಟಿನ್ ಭಾಷೆಯ Tour  ಎಂಬ ಪದದಿಂದ ಉತ್ಪತ್ತಿಯಾಗಿದೆ. Tour  ಎಂಬ ಲ್ಯಾಟಿನ್ ಪದವು ಲ್ಯಾಟಿನ್ ಪದವಾದ “ ಟೋರನಸ್ʼʼ ಎಂಬ ಪದದಿಂದ ಬಂದಿದೆ. ಟೋರನಸ್ ಎಂದರೆ ಸುತ್ತಾಟ ಮಾಡುವುದು ಅಥವಾ ಚಲಿಸುವುದು ಎಂದಾಗುತ್ತದೆ.  ಸರಳವಾಗಿ ಹೇಳಬೇಕೆಂದರೆ ಪ್ರವಾಸೋದ್ಯಮ ಎಂದರೆ ವ್ಯಕ್ತಿಗಳು ತಾವು ವಾಸ ಮಾಡುವ ಸ್ಥಳದಿಂದ ಮನರಂಜನೆ, ವಿಶ್ರಾಂತಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಧಾರ್ಮಿಕ ಅಥವಾ ಇತರ ಉದ್ದೇಶಗಳ ಸಲುವಾಗಿ ತಾತ್ಕಾಲಿಕವಾಗಿ ಬೇರೆ ಸ್ಥಳಗಳಿಗೆ ಹೋಗುವುದು. ಅಂದರೆ ಪ್ರವಾಸಿಗನು ಬೇರಡೆ ಹೋದಾಗ ಅಲ್ಲಿ ಶಾಶ್ವತವಾಗಿ ನೆಲೆನಿಲ್ಲದೆ ಆದಾಯ ಗಳಿಸುವ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವುದನ್ನು ಮಾಡದಿರುವುದಾಗಿದೆ. Tour and Turist  ಎಂಬ ಎರಡು ಪದಗಳು 1800 ರಲ್ಲಿ ಪ್ರಥಮ ಬಾರಿಗೆ ಬಳಕೆಯಲ್ಲಿ ಬಂದವು. ಆಂಗ್ಲ ಭಾಷೆಯಲ್ಲಿ ಟ್ರ್ಯಾವೆಲ್ ಎಂದರೆ ಸಂಕಷ್ಟ ಅಥವಾ ಯಾತನೆ ಎಂದರ್ಥ. ಅಂದರೆ ಹಿಂದಿನ ಕಾಲದಲ್ಲಿ ಸಾರಿಗೆ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣದಿಂದ ಪ್ರಯಾಣ ತುಂಬಾ ಕಷ್ಟದಿಂದ ಕೂಡಿತ್ತು. ಎಂದು ಹೇಳಲಾಗಿದೆ. ಹೀಗಾಗಿ ಪ್ರಯಾಣವೆಂದರೆ ಅದು ನರಕ ಸದೃಶ್ಯವಾಗಿತ್ತು. ಈ ಕಾರಣದಿಂದ ಟ್ರ್ಯಾವೆಲ್ ಎಂಬ ಶಬ್ದವು ಹುಟ್ಟಿಕೊಂಡಿತು. 1800ರ ವೇಳೆಗೆ ಥಾಮಸ್ ಪೇಜ್ ಎಂಬುವರು ಟೂರಿಸ್ಟ್ ಎಂಬ ಪದವನ್ನು ಪ್ರವಾಸಿಗ ಎಂಬ ಪದಕ್ಕೆ ಸರಿಸಾಟಿಯಾಗಿ ಬಳಸಿದರು. ತದನಂತರ ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ಸೇರಿಸಿ ಟೂರಿಸಂ ಎಂಬ ಪದವನ್ನು ಬಳಕೆಯಲ್ಲಿ ತರಲಾಯಿತು. ಆಕ್ಸ್‌ಫರ್ಡ್ ಶಬ್ದಕೋಶದ ಪ್ರಕಾರ ಪ್ರವಾಸಿಗ ಎಂದರೆ ʻʻವ್ಯಕ್ತಿಯೊಬ್ಬನು ಕುತೂಹಲ ಅಥವಾ ಮೋಜಿಗಾಗಿ ಪ್ರಯಾಣ ಮಾಡುವವನು ಎಂದರ್ಥ.

                                                                                              ವ್ಯಾಖ್ಯೆಗಳು

ಪ್ರವಾಸ, ಪ್ರವಾಸಿ ಹಾಗೂ ಪ್ರವಾಸೋದ್ಯಮದ ತಾಂತ್ರಿಕ ವ್ಯಾಖ್ಯಾನಗಳ ಬಗ್ಗೆ ಸಾಮಾನ್ಯ ಗ್ರಹಿಕೆ ಇರುವುದಾದರೂ ಅವುಗಳ ವ್ಯಾಖ್ಯಾನದ ವ್ಯಾಪ್ತಿ ಬಹಳ ವಿಶಾಲವಾಗಿದೆ. ಪ್ರವಾಸೋದ್ಯಮದ ಕುರಿತು ವಿವಿಧ ಪಂಡಿತರು ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಅವುಗಳನ್ನು ಈ ಕೆಳಗಿನಂತೆ ನೋಡಬಹುದಾಗಿದೆ.

1.ಹ್ರನ್ಜಿಕರ್‌ ಹಾಗೂ ಕ್ರಾಪ್‌ರವರ ಪ್ರಕಾರ: ಪ್ರವಾಸೋದ್ಯಮವೆಂದರೆ ನಿವಾಸಿಯಲ್ಲದ ವ್ಯಕ್ತಿಗಳು ಪ್ರಯಾಣ ಮಾಡುವುದು ಹಾಗೂ ಶಾಶ್ವತವಾಗಿ ನೆಲೆಯೂರದೆ ಆದಾಯ ಗಳಿಕೆ ಉದ್ದೇಶವನ್ನು ಚಟುವಟಿಕೆಯಾಗಿ ಹೊಂದಿರದ ಪರಿಸ್ಥಿತಿಯನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ.

2.ಯುನೈಟೆಡ್ ನೇಶನ್ಸ್ ವರ್ಲ್ಡ್ ಟೂರಿಸಂ ಆರ್ಗನೈಜೇಷನ್: ʻʻಪ್ರವಾಸೋದ್ಯಮವೆಂದರೆ ವ್ಯಕ್ತಿಗಳು ತಮ್ಮ ಸಾಮಾನ್ಯ ಪರಿಸರದ ಹೊರಗಿನ ಸ್ಥಳಗಳಿಗೆ ಮನರಂಜನೆ, ವ್ಯಾಪಾರ ಅಥವಾ ಇತರೆ ಉದ್ದೇಶಗಳಿಗಾಗಿ ಒಂದು ವರ್ಷದ ಅವಧಿಗೆ ಪ್ರಯಾಣಿಸಿ ವಾಸಿಸುವ ಚಟುವಟಿಕೆಗಳಾಗಿವೆ.

3. ವೆಬ್ ಸ್ಟರ್ ವಿಶ್ವಕೋಶದ ಪ್ರಕಾರ: ಸಂಭಾವನೆಯ ಉದ್ದೇಶವನ್ನು ಹೊಂದಿರದ ಒಬ್ಬ ವ್ಯಕ್ತಿ ತಾನು ವಾಸವಾಗಿದ್ದ ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಲಸೆ ಹೋಗಿ ವಿಶ್ರಾಂತಿಯ ಸಮಯವನ್ನು ವಿನೋದಕ್ಕಾಗಿ ಕಳೆಯುವವನು ಪ್ರವಾಸಿಗ ಎಂದು ಹೇಳಿದ್ದಾರೆ.

4. ಹರ್ಮನ್ ವಿ ಶುಲಾರ್ಡ್‌ರವರ ಪ್ರಕಾರ: ಒಂದು ಗೊತ್ತಾದ ಪ್ರದೇಶಕ್ಕೆ ವಿದೇಶಿಯರು ಹೋಗಿ ಅಲ್ಲಿ ತಾತ್ಕಾಲಿಕವಾಗಿ ವಾಸಿಸಿ ನಂತರ ಅಲ್ಲಲ್ಲಿ ತಿರುಗಾಡಿ ಬರುವ ಎಲ್ಲಾ ಪ್ರಕ್ರಿಯೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

5. 1937ರಲ್ಲಿ ಸಂಯುಕ್ತ ರಾಷ್ಟ್ರಸಂಘವು ಪ್ರವಾಸೋದ್ಯಮದ ವ್ಯಾಖ್ಯಾನವನ್ನು ಈ ರೀತಿಯಾಗಿ ಮಾಡಿತು. ಒಬ್ಬ ವ್ಯಕ್ತಿ ತಾನು ವಾಸಮಾಡಿದ ನಾಡನ್ನು ಹೊರತುಪಡಿಸಿ ಬೇರೆ ನಾಡಿನಲ್ಲಿ ಕನಿಷ್ಠ 24 ಗಂಟೆಗಿಂತಲೂ ಅಧಿಕ ಸಮಯದವರೆಗೆ ಪ್ರಯಾಣಿಸಿದರೆ ಅದು ಅವನನ್ನು ಪ್ರವಾಸಿಗ ಎಂದು ಕರೆಯುವರು.

6. ಡಾ|| ಜಿವಾದಿನ್‌ ಜೋವಿಯಾಕೆ ಸಾಂಸ್ಕೃತಿಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು ವಿಹಾರ ಮತ್ತು ವಿರಾಮದಂತ ಸಾಮಾಜಿಕ ಚಲನೆಯನ್ನು ಪ್ರವಾಸೋದ್ಯಮ ಎಂದು ಕರೆಯುವರು.

7. ಸಿ.ಪಿ ಕೂಪರ್‌ರವರ ಪ್ರಕಾರ: ಪ್ರವಾಸಿಗನು ತನ್ನ ಮೂಲ ವಾಸ ಸ್ಥಳದಿಂದ ಗಮ್ಯ ಸ್ಥಳಗಳಿಗೆ ತಾತ್ಕಾಲಿಕವಾಗಿ ಹೋಗಿ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿದರೆ ಅದನ್ನು ಪ್ರವಾಸೋದ್ಯಮ ಎನ್ನುವರು.

8. ರಾಬಿನ್ ಸನ್ ಹೇಳಿದಂತೆ: ಬಹು ಆಕರ್ಷಕವಾದ ಮತ್ತು ಕಡಿಮೆ ಖರ್ಚಿನ ಹಾಗೂ ವಿಶೇಷ ಸೌಲಭ್ಯಗಳ ಭೌಗೋಳಿಕ ಸುಂದರವಾದ ಸ್ಥಳಗಳಿಗೆ ಜನರು ಮನಸೋತು ಹೋಗುವುದನ್ನು ಪ್ರವಾಸೋದ್ಯಮ ಎಂದು ಕರೆಯುವರು.

9. ವಿಶ್ವಸಂಸ್ಥೆಯ ಪ್ರಕಾರ ವೃತ್ತಿ ಸಂಭಾವನೆಯ ಕಾರಣಕ್ಕಾಗಿ ಒಬ್ಬ ವ್ಯಕ್ತಿ ಯಾವುದೇ ಪ್ರದೇಶಕ್ಕೆ ಭೇಟಿ ನೀಡದೆ. ತನ್ನ ಸ್ವಸ್ಥಳದಿಂದ ಅನ್ಯ ಸ್ಥಳಕ್ಕೆ ತಾತ್ಕಾಲಿಕವಾಗಿ ಹೋಗಿ ಬರುವುದನ್ನು ಪ್ರವಾಸೋದ್ಯಮ ಎಂದು ಕರೆಯಲಾಗುತ್ತದೆ. 

10. WTO ದ ಪ್ರಕಾರ ವ್ಯಕ್ತಿಯೊಬ್ಬನು ವಿರಾಮ ವ್ಯಾಪಾರ ಹಾಗೂ ಇನ್ನಿತರ ಉದ್ದೇಶಗಳಿಗಾಗಿ ಒಂದು ವರ್ಷದ ಒಳಗೆ ತನ್ನ ವಾಸ ಸ್ಥಳದಿಂದ ಹೋಗಿ ಬೇರೆ ಪ್ರದೇಶದಲ್ಲಿ ತಾತ್ಕಾಲಿಕವಾಗಿ ತಂಗಿ ಬರುವ ಚಟುವಟಿಕೆಗಳನ್ನು ಪ್ರವಾಸೋದ್ಯಮ ಎಂದು ಕರೆಯುವರು. 

11. ಕಾರ್ಡಿಪ್‌ ಪ್ರಕಾರ: ವ್ಯಕ್ತಿಯೊಬ್ಬನು ತಾನು ವಾಸಮಾಡುವ ಸ್ಥಳದಿಂದ ಹೊರಗೆ ಹೋಗಿ ತನಗೆ ಮನಸ್ಸಿಗೆ ಬಂದ ಚಟುವಟಿಕೆಗಳಲ್ಲಿ ಪಾಲ್ಗೊಂಡು ಬರುವುದನ್ನು ಪ್ರವಾಸೋದ್ಯಮ ಎಂದು ಕರೆದಿದ್ದಾರೆ. 

12. ಪ್ರವಾಸಿಗರ ಅಗತ್ಯಗಳನ್ನು ಪೂರೈಸುವ ವಸ್ತುಗಳು ಹಾಗೂ ಸೇವೆಗಳ ಮೂಲಕ ಆದಾಯ ಹಾಗೂ ಉದ್ಯೋಗವನ್ನು ಸೃಷ್ಟಿಸುವ ಕೈಗಾರಿಕೆಯೆ ಪ್ರವಾಸೋದ್ಯಮವಾಗಿದೆ.

 ಈ ಕೆಳಕಂಡ ವ್ಯಕ್ತಿಯು ಪ್ರವಾಸಿಗನಾಗಲಾರನು:

  1. ಪ್ರವಾಸಿಗನು 24 ಗಂಟೆಗಳ ಕಡಿಮೆ ಕಾಲ ಪ್ರಯಾಣಿಸಿ ಒಂದು ಕಡೆಯಲ್ಲಿ ವಾಸವಿದ್ದು ಮರಳಿ ಸ್ವಸ್ಥಾನಕ್ಕೆ ಬರುತ್ತಾನೆ.
  2. ಹಣ ಗಳಿಗೆಗಾಗಿ, ವ್ಯಾಪಾರ ಹಾಗೂ ವೃತ್ತಿ ಕಾರಣಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಿ ಬರುವವರು ಪ್ರವಾಸಿ ಎನಿಸಿಕೊಳ್ಳುವುದಿಲ್ಲ.
  3. ಸರ್ಕಾರಿ ಉದ್ಯೋಗದಿಂದ ನಿವೃತ್ತನಾಗಿ ವಿಶ್ರಾಂತಿಯನ್ನು ಪಡೆಯಲು ಹೋಗುವವರನ್ನು ಪ್ರವಾಸಿಗರು ಎಂದು ಕರೆಯಲಾಗದು.
  4. ಬೇರೆ ದೇಶಗಳಿಗೆ ಶಾಶ್ವತವಾಗಿ ನೆಲೆನಿಲ್ಲಲು ಪ್ರವಾಸ ಕೈಗೊಳ್ಳುವವರನ್ನು ಪ್ರವಾಸಿಗರು ಎಂದು ಪರಿಗಣಿಸಲಾಗುವುದಿಲ್ಲ.
  5. ವಿಹಾರಾರ್ಥಿಗಳು ಹಾಗೂ ವಲಸೆಗಾರರನ್ನು ಪ್ರವಾಸಿಗರು ಎಂದು ಹೇಳಲು ಸಾಧ್ಯವಿಲ್ಲ.
  6. ಹಂಗಾಮಿ ಅತಿಥಿಗಳು, ನೌಕೆಗಳಲ್ಲಿ ಸಂಚರಿಸುವವರು ಹಾಗೂ ರೈಲುಗಳಲ್ಲಿ ತಂಗುವವರನ್ನು ಪ್ರವಾಸಿಗರು ಎಂದು ಕರೆಯಲಾಗುವುದಿಲ್ಲ.
  7. ಸಂಶೋಧನೆ, ಶಿಕ್ಷಣ ಹಾಗೂ ಕರಾರಿನ ಮೇಲೆ ನೌಕರಿ ಮಾಡಲು ದೀರ್ಘಕಾಲದವರೆಗೆ ಬರುವ ಪ್ರವಾಸಿಗರನ್ನು ಪ್ರವಾಸಿಗರನ್ನಾಗಿ ಪರಿಗಣಿಸಲು ಬರುವುದಿಲ್ಲ.

ವಿದೇಶಿ ಪ್ರವಾಸಿಗರು

ಮನರಂಜನೆ, ರಜಾ ದಿನಗಳಲ್ಲಿ ಆನಂದದಿಂದ ಕಾಲಕಳೆಯುವಿಕೆ, ಸಂಶೋಧನೆ, ಅಧ್ಯಯನ, ಶಿಕ್ಷಣ, ಆರೋಗ್ಯ, ವಿರಾಮ, ಕೌಟುಂಬಿಕ ಸಮಾವೇಶ, ಕ್ರೀಡೆ, ಧಾರ್ಮಿಕ ಮೊದಲಾದ ಕಾರಣಗಳಿಗಾಗಿ ಪಾಸ್‌ಪೋರ್ಟ್‌ನ್ನು ಹೊಂದಿ ತನ್ನ ವಾಸಸ್ಥಳದಿಂದ ಅಥವಾ ದೇಶದಿಂದ ಹೊರಗೆ ಕನಿಷ್ಠ 24 ಗಂಟೆಗಳ ಕಾಲ ತಂಗುವವರನ್ನು ವಿದೇಶಿ ಪ್ರವಾಸಿಗರು ಎಂದು ಕರೆಯಬಹುದಾಗಿದೆ. ಆದರೆ ಭಾರತವು ಈ ಕೆಳಕಂಡವರನ್ನು ವಿದೇಶಿ ಪ್ರವಾಸಿಗರೆಂದು ಪರಿಗಣಿಸುವುದಿಲ್ಲ.

  1. ಗಡಿ ಭಾಗಗಳಲ್ಲಿ ವಾಸಮಾಡುವವರು.
  2. ಬೇರೆ ದೇಶಗಳಿಂದ ಭಾರತಕ್ಕೆ ಸಂಬಳಕ್ಕಾಗಿ ಕರಾರಿನ ಮೇಲೆ ಬರುವವರು.
  3. ಶಾಲಾ ವಿದ್ಯಾರ್ಥಿಗಳು ಹಾಗೂ ಈ ದೇಶದಲ್ಲಿ ವಾಸ ಮಾಡಲು ಇಚ್ಛಿಸಿ ಬರುವವರು.
  4.  ವಿಹಾರಾರ್ಥಿಗಳಾಗಿ ಬಂದು ಕನಿಷ್ಠ 24 ಗಂಟೆಗಿಂತಲೂ ಕಡಿಮೆ ಅವಧಿಯವರೆಗೆ ತಂಗುವವರು ಒಂದು ಕಡೆ ಶಾಶ್ವತವಾಗಿ ನೆಲೆ ನಿಲ್ಲದ ಒಂದು ದೇಶದವರು. ಭಾರತದ ಮೂಲಕ ಹಾಯ್ದು ಹೋಗುವ ಸಂದರ್ಶಕರು ಪ್ರವಾಸಿಗರು ಎನಿಸಿಕೊಳ್ಳುವುದಿಲ್ಲ.
  5.  ಒಬ್ಬ ವ್ಯಕ್ತಿ 24 ಗಂಟೆಗಿಂತಲೂ ಹೆಚ್ಚುಕಾಲ ಸಂಚರಿಸಿ ಆತ ಎಲ್ಲಿಯೂ ತಂಗದೆ ಒಂದು ದೇಶದ ಮೂಲಕ ಹಾಯ್ದು ಹೋದರೆ ಅವನು ಪ್ರವಾಸಿಗನಲ್ಲ.
  6. ಬಾಂಗ್ಲಾದೇಶ ಹಾಗೂ ಪಾಕಿಸ್ಥಾನಿಯ ರಾಷ್ಟ್ರೀಯರು.
  7.  ಗಡಿಭಾಗದಲ್ಲಿ ನೆಲೆಸಿದ್ದವರು ಬೇರೆ ದೇಶದಲ್ಲಿ ಕೆಲಸ ನಿರ್ವಹಿಸುವಂಥವರು ಪ್ರವಾಸಿಗರು ಆಗಲಾರರು.
  8.  ರಸ್ತೆಯ ಮೂಲಕ ಭಾರತಕ್ಕೆ ಬರುವ ನೇಪಾಳಿಯರು ಹಾಗೂ ಭೂತಾನಿಗಳು ಪ್ರವಾಸಿಗರು ಆಗಲಾರರು.

 

ಪುರಾತತ್ವಶಾಸ್ತ್ರ ಕಾಲಗಳು (ಶಿಲಾಯುಗದ ಸಂಸ್ಕೃತಿಗಳು)

ಪುರಾತತ್ವಶಾಸ್ತ್ರ ಕಾಲಗಳು (ಶಿಲಾಯುಗದ ಸಂಸ್ಕೃತಿಗಳು)

1. ಪ್ರಾಚೀನ ಹಳೆಯ ಶಿಲಾಯುಗ / ಆದಿ ಹಳೆಯ ಶಿಲಾಯುಗ (Lower Paleolithic) :

ನಿವೇಶನಗಳು:  ಆದಿ ಹಳೆ ಶಿಲಾಯುಗವು ಹಿಮಯುಗದ ಒಂದು ಭಾಗವನ್ನು ವ್ಯಾಪಿಸಿತ್ತು. ಈ ಶಿಲಾಯುಗದ ಅವಶೇಷಗಳು ಪಾಕಿಸ್ಥಾನದ ಸೋಹನ್ ನದಿ ಕಣಿವೆ. ಥಾರ್‌ ಮರುಭೂಮಿಯ ಪ್ರದೇಶ, ಕಾಶ್ಮೀರ ಹಾಗೂ ಬೇಲಂ ಕಣಿವೆ, ರಾಜಸ್ಥಾನದ ಮರಳುಗಾಡಿನ ಪ್ರದೇಶ, ನರ್ಮದಾ ನದಿ ಪ್ರದೇಶ, ಮಧ್ಯಪ್ರದೇಶದ ಭೂಪಾಲಿನ ಗುಹೆಗಳು, ತಮಿಳುನಾಡಿನ ವಾದ ಮಧುರೈ, ಆಂಧ್ರದ ಬೇತಂ ಚರ್ಲಾ, ಮಹಾರಾಷ್ಟ್ರದ ಸಾಲ್ಸೆಟ್‌ ದ್ವೀಪ, ನೇವಾಸ, ರಾಜಸ್ಥಾನದ ಜೈಪುರ, ಪಂಜಾಬಿನ ಬೌಂತ್ರ, ಉತ್ತರ ಪ್ರದೇಶದ ಬೇಲಾನ್ ಮೊದಲಾದವುಗಳಲ್ಲಿ ದೊರಕಿದೆ.

 ಕರ್ನಾಟಕದಲ್ಲಿ ಮಂಜಾರಾ, ಕಾರಂಜಾ ಭೀಮಾ, ಕೃಷ್ಣ, ಮಲಪ್ರಭಾ, ತುಂಗಭದ್ರಾ, ಹೇಮಾವತಿ, ಕಾವೇರಿ ಹಾಗೂ ನೇತ್ರಾವತಿ ನದಿಯ ದಡದಲ್ಲಿ ಶಿಲಾಯುಗದ ಅವಶೇಷಗಳು ದೊರಕಿವೆ. ಘಟಪ್ರಭಾ ಕೊಳ್ಳದ ಅನಗವಾಡಿ, ಮಲಪ್ರಭಾ ಕೊಳ್ಳದ ಖ್ಯಾಡ, ನೇತ್ರಾವತಿಕೊಳ್ಳಲು ಉಪ್ಪಿನಂಗಡಿ ಮೊದಲಾದ ಕಡೆಗಳಲ್ಲಿ ಹಳೆಯ ಶಿಲಾಯುಗದ ಸಂಸ್ಕೃತಿ ಕಂಡು ಬಂದಿದೆ. ಅದೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ದರೋಜಿ, ಹುಲುಕುಂಡಿ, ಗಡಿನೂರು, ನಿಟ್ಟೂರು ಹಾಗೂ ಸಂಗನಕಲ್ಲು. ವಿಜಾಪುರ ಜಿಲ್ಲೆಯ-ಖೇಡ, ಧನಕ್ಕ ಶಿರೂರು ಹಾಗೂ ಮನ್ನೇರಿ. ಬೆಳಗಾವಿ ಜಿಲ್ಲೆಯ-ಯಾದವಾಡ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಲಿಂಗದಹಳ್ಳಿ, ನಿಡಗಟ್ಟಿ. ಚಿತ್ರದುರ್ಗ ಜಿಲ್ಲೆಯ ತಾಳ್ಯ ಹಾಗೂ ಜಾನಕಲ್. ದಾವಣಗೆರೆ ಜಿಲ್ಲೆಯ-ನ್ಯಾಮತಿ. ಗುಲ್ಬರ್ಗ ಜಿಲ್ಲೆಯ-ಹುಣಸಗಿ, ಮರಳಬಾವಿ, ದೇವಪುರ ತುಮಕೂರು ಜಿಲ್ಲೆಯ-ಕರಡಿಗುಡ್ಡ, ಬಿಳಿಗೆರೆ, ಕಿಬ್ಬನಹಳ್ಳಿ ಮುಂತಾದ ಸ್ಥಳಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳನ್ನು ಕಾಣಬಹುದು.

 ಉಪಕರಣಗಳು: ಹಳೆಯಶಿಲಾಯುಗದ ಮಾನವ ಕ್ವಾರ್ಟಜೈಟ್‌ ಕಲ್ಲನ್ನು ಬಳಸಿ ಉಪಕರಣಗಳನ್ನು ತಯಾರಿಸುತ್ತಿದ್ದನು. ಈ ಉಪಕರಣಗಳು ಹೆಚ್ಚಾಗಿ ಆಶ್ಯೂಲ್ ಮಾದರಿಯಲ್ಲಿವೆ. (ಆಶ್ಯೂಲ್‌ ಮಾದರಿ ಎಂದರೆ ಆಫ್ರಿಕಾದ ಆದಿ ಶಿಲಾಯುಗದ ಉಪಕರಣ)  ಇವುಗಳಲ್ಲಿ ಕೈಕೊಡಲಿ, ಸೀಳುಗತ್ತಿ, ಮಚ್ಚುಗಳು, ಕೊರೆಗತ್ತಿಗಳು ಹಾಗೂ ದುಂಡು ಚಪ್ಪಟೆ ಉಪಕರಣ ಮುಂತಾದ ಆಕೃತಿಯ ಉಪಕರಣಗಳು ಕಂಡು ಬಂದಿವೆ. ಕಲ್ಲಿನ ಉಪಕರಣಗಳ ಜೊತೆಗೆ ಮರದ ಉಪಕರಣಗಳು ಸಹ ದೊರಕಿವೆ.

 ತಯಾರಿಕೆ: ಉರುಟು ಕಲ್ಲಿನ ತಿರುಳುಭಾಗ ಮತ್ತು ದೊಡ್ಡದಾದ ಹಾಗೂ ದಪ್ಪನೆಯ ಕಲ್ಲುಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿ ಉಪಕರಣಗಳನ್ನು ತಯಾರಿಸುತ್ತಿದ್ದರು. ಲಘು ಸುತ್ತಿಗೆಗಳನ್ನು ಬಳಸಿ ಆಯುಧಗಳನ್ನು ತಮಗೆ ಬೇಕಾದ ಆಕಾರಕ್ಕೆ ತಿರುಗಿಸಿಕೊಳ್ಳುತ್ತಿದ್ದರು. ಒಂದು ಕಲ್ಲು ಅಡಿಗೆ ಇಟ್ಟು ಇನ್ನೊಂದು ಕಲ್ಲನ್ನು ಸುತ್ತಿಗೆಯ ರೀತಿಯಲ್ಲಿ ಬಳಸಿ  ಉಪಕರಣಗಳನ್ನು ತಯಾರಿಸುತ್ತಿದ್ದರು.

 ಉಪಕರಣ ಬಳಕೆ : ಶಿಲಾಯುಗದ ಜನರು ತಾವು ತಯಾರಿಸಿದ ಉಪಕರಣಗಳನ್ನು ಬೇಟೆಯಾಡಲು. ಬೇಟೆಯಾಡಿದ ಪ್ರಾಣಿಗಳ ಮಾಂಸವನ್ನು ಕತ್ತರಿಸಲು, ಮರಗಿಡಗಳನ್ನು ಕಡಿಯಲು, ಅವುಗಳ ತೊಗಟೆಯನ್ನು ಬಿಚ್ಚಲು, ಗಡ್ಡೆ ಗೆಣಸುಗಳನ್ನು ಮತ್ತು ಮುಳ್ಳು ಕಂಟಿಗಳನ್ನು ಅಗೆಯಲು, ಮೃತ ಪ್ರಾಣಿಗಳ ಚರ್ಮವನ್ನು ಸುಲಿಯಲು, ಪ್ರಾಣಿಗಳ ಚರ್ಮವನ್ನು ಹದಗೊಳಿಸಲು, ಸಸ್ಯಾಹಾರ ಸಿದ್ಧಪಡಿಸಲು, ಕಟ್ಟಿಗೆ ಉಪಕರಣ ಹಾಗೂ ಆಯುಧಗಳನ್ನು ತಯಾರಿಸಲು ಬಳಸುತ್ತಿದ್ದರು.

 ಜೀವನೋಪಾಯ:  ಆದಿ ಹಳೆಯ ಶಿಲಾಯುಗದ ಮಾನವರು ಕಾಡು ಸಸ್ಯಗಳನ್ನು ಕಡಿಯುವುದು ಮತ್ತು ಕಾಡು ಪ್ರಾಣಿಗಳ ಬೇಟೆಯಾಡುವುದು ಅವರ ಪ್ರಮುಖ ಉದ್ಯೋಗವಾಗಿತ್ತು. ಹುಣಸಗಿ, ಮಲಪ್ರಭಾ ಕೊಳ್ಳ, ತುಂಗಭದ್ರ ಕೊಳ್ಳದ ನಿಟ್ಟೂರು, ಬೆಳಗಾವಿ ಜಿಲ್ಲೆಯ ಹಳೆಯ ಶಿಲಾಯುಗದ ವ್ಯವಸಾಯ ಪರಿಕರಗಳು ಸಿಕ್ಕಿವೆ. ಜೊತೆಗೆ ಕಾಡು ಎಮ್ಮೆ, ಕಾಡುಕತ್ತೆ ಹಾಗೂ ಕಾಡು ದನಗಳ ಪಳಿಯುಳಿಕೆಗಳು ದೊರಕಿವೆ. ಈ ಯುಗದ ಮಾನವ ಗೆಡ್ಡ-ಗೆಣಸು, ಹಣ್ಣು-ಹಂಪಲು, ಪ್ರಾಣಿಗಳ ಮಾಂಸ ಹಾಗೂ ಮೀನುಗಳನ್ನು ಸೇವಿಸುತ್ತಿದ್ದನು. ಪ್ರಾಣಿಗಳ ಚರ್ಮವನ್ನು ಉಡುಪಾಗಿ ಉಪಯೋಗಿಸಿಕೊಳ್ಳುತ್ತಿದ್ದನು.

2. ಪ್ರಾಚೀನ ಮಧ್ಯ ಶಿಲಾಯುಗ/ಮಧ್ಯ ಹಳೆಯ ಶಿಲಾಯುಗ (Middle Paleolithic) :

ಶಿಲಾಯುಗವು ಆದಿ ಹಳೆಯ ಶಿಲಾಯುಗ ಮತ್ತು ಅಂತಿಮ ಹಳೆಯ ಶಿಲಾಯುಗದ ನಡುವಿನ ಕಾಲವಾಗಿದೆ. ಸಂಕಾಲಿಯಾ ಅವರು 1954 ರಲ್ಲಿ ಮಹಾರಾಷ್ಟ್ರದ ಅಹಮದಾಬಾದ್‌ ಜಿಲ್ಲೆಯ ಗೋದಾವರಿಯ ಉಪನದಿಯ ಪ್ರವರಾ ನದಿಯ ದಂಡೆಯ ಮೇಲಿನ ನೇವಾಸಾದಲ್ಲಿ ಈ ಸಂಸ್ಕೃತಿ ಉಪಕರಣಗಳನ್ನು ಸಂಶೋಧಿಸಿದರು. ಎಂ.ಎಚ್ ಕೃಷ್ಣನವರು ಕರ್ನಾಟಕದ ಬ್ರಹ್ಮಗಿರಿ, ಜಾಲಹಳ್ಳಿ, ಕಿಬ್ಬನಹಳ್ಳಿ ಹಾಗೂ ಸಂಗನಕಲ್ಲನ್ನು ಪತ್ತೆ ಹಚ್ಚಿದರು. ಹಾಗೆಯೇ ಮಹಾರಾಷ್ಟ್ರದ ಪಂಚಮರಿ, ಪಂಜಾಬಿನ ಉಚಾಲಿ, ರಾಜಸ್ಥಾನದ ಬಾಗೋರ್ ಮತ್ತು ತಿವಾರ್, ಉತ್ತರಪ್ರದೇಶದ ಲೇಖಾನಿಯಾ, ಪಶ್ಚಿಮ ಬಂಗಾಳದ ಬೀಕ್‌ಬಾನ್‌ಪುರ ಇನ್ನು ಮುಂತಾದ ಕಡೆಗಳಲ್ಲಿ ಮಧ್ಯಕಾಲೀನ ಹಳೆಯ ಶಿಲಾಯುಗದ ಅವಶೇಷಗಳು ಲಭ್ಯವಾಗಿವೆ.

 ಮುಂದುವರೆದು ಬಾಗಲಕೋಟೆ, ಹೆರಕಲ್, ಕದಮಪುರ, ಅನಗವಾಡಿ, ತಮ್ಮಿನಹಾಳ, ಸಾವಳಗಿ, ಸಾಲವಾಡಗಿ, ಕೂಚಬಾಳೆ ಹಾಗೂ ಮಟಕದೇವನ ಹಳ್ಳಿಯಲ್ಲಿಯೂ ನಿವೇಶನಗಳು ಸಿಕ್ಕಿವೆ.

 ದೊರಕಿದ ಉಪಕರಣಗಳು: ಈ ಯುಗದಲ್ಲಿ ಮಾನವ ಬಳಸಿದ ವಿವಿಧ ಉಪಕರಣಗಳು ನಮಗೆ ದೊರಕಿದ್ದು ಅವುಗಳು ವಿವಿಧ ಆಕಾರವನ್ನು ಹೊಂದಿವೆ. ಉದಾ: ಹೆರೆಯುವ ಉಪಕರಣಗಳು, ಮೊನಚು ಉಪಕರಣ, ರಂಧ್ರಾಕಾರ ಉಪಕರಣ, ಚೂರಿ ತರಹದ ಉಪಕರಣ, ದಂತಾಕಾರದ ಉಪಕರಣ, ಬೈರಿಗೆಗಳು, ಕೈ ಕೊಡಲಿಗಳು, ಕಡಿಗತ್ತಿಗಳು, ಕತ್ತಿಗಳು, ಮಚ್ಚುಗಳು, ಮೊದಲಾದವುಗಳು. ಇವೆಲ್ಲವುಗಳನ್ನು ಕಲ್ಲಿನಿಂದಲೇ ತಯಾರಿಸಿದ್ದರು ಎಂಬುದು ವಿಶೇಷ. ಇವರು ಬಳಸಿದ ಉಪಕರಣಗಳಲ್ಲಿ ಕಲ್ಲು ಚಕ್ಕೆ ಉಪಕರಣಗಳ ಸಂಖ್ಯೆಯೇ ಅಧಿಕವಾಗಿವೆ. ಅವರು ಗಟ್ಟಿಯಾದ ಕಲ್ಲುಗಳಿಂದ ಚಕ್ಕೆಯನ್ನು ಬೇರ್ಪಡಿಸಿದ್ದರೆಂದು ತೋರುತ್ತದೆ. ಕಲ್ಲು ಚಕ್ಕೆಯನ್ನು ತಯಾರಿಸಲು ಮತ್ತು ಅವುಗಳಿಗೆ ಹೊಳಪು ನೀಡಲು ಅವರು ಮಸ್ತೂರ್ ತಂತ್ರವನ್ನು ಉಪಯೋಗಿಸುತ್ತಿದ್ದರು.

 ಉಪಕರಣಗಳ ನೆಲೆಗಳು:  ಆದಿ ಹಳೆಯ ಶಿಲಾಯುಗದ ಮಾನವರು ಬಳಸಿದ ಉಪಕರಣಗಳನ್ನೇ ಮಧ್ಯ ಶಿಲಾಯುಗದ ಜನರು ಬಳಸಿದರು ಸಹ ಸಾಂಸ್ಕೃತಿಕ ವಿಭಿನ್ನತೆ ಎರಡೂ ಜನಾಂಗಗಳಲ್ಲಿ ಕಂಡುಬಂದಿದೆ. ಕೈ ಕೊಡಲಿ, ಕಡಿಗತ್ತಿ ಹಾಗೂ ಉರುಟು ಕಲ್ಲುಗಳು ಆದೇಶದಿಂದ ಮಧ್ಯ ಶಿಲಾಯುಗದವರೆಗೂ ಬಳಕೆಯಲ್ಲಿದ್ದವು. ಘಟಪ್ರಭಾ ಕೊಳ್ಳದ ಅನಗವಾಡಿ, ಕೋವಳ್ಳಿ, ಹುಣಸೆ ದೇವಪುರ ಹಾಗೂ ಕಲದೇವನ ಹಳ್ಳಿಯಲ್ಲಿ ಇಂತಹ ಉಪಕರಣಗಳು ಕಂಡುಬಂದಿವೆ.

 ಉಪಕರಣಗಳ ಕಾರ್ಯ:  ಈ ಉಪಕರಣಗಳು ಗಾತ್ರದಲ್ಲಿ ಚಿಕ್ಕವೂ ಮತ್ತು ತೂಕದಲ್ಲಿ ಹಗುರವಾದವು ಆಗಿದ್ದವು. ಬೇಟೆಯಾಡುವುದು, ನೆಲವನ್ನು ಅಗೆಯುವುದು, ಮರ ಕೀಳುವುದು ಇಂತಹ ಕೆಲಸ ಕಾರ್ಯಗಳಿಗೆ ಈ ಉಪಕರಣಗಳನ್ನು ಬಳಸುತ್ತಿರಲಿಲ್ಲ. ಇವು  5 ರಿಂದ 8 ಸೆಂ ಮೀ ಉದ್ದವಾಗಿದ್ದವು.  ಹೆರೆಯುವ ಉಪಕರಣದಿಂದ ಚರ್ಮ ಹಾಗೂ ಮರದ ತೊಗಟೆಯನ್ನು ಹದಗೊಳಿಸುತ್ತಿದ್ದರು ರಂಧ್ರಕಾರಕಗಳಿಂದ ತೊಗಟೆಯಲ್ಲಿ ತೂತು ಮಾಡಲು ಹಾಗೂ ಮೊನಚು ಉಪಕರಣದಿಂದ ಕಾಡು ಮೃಗಗಳನ್ನು ಬೇಟೆಯಾಡುತ್ತಿದ್ದರು.

 ನಿವೇಶನಗಳ ಸ್ವರೂಪ:  ಆದಿ ಹಳೆಯ ಶಿಲಾಯುಗದ ಜನರ ಹಾಗೆ ಮಧ್ಯಶಿಲಾಯುಗದ ಜನರು ಸಹ ನದಿ ದಂಡೆಯ ಮೇಲೆ, ಕಡಲ ತೀರಗಳಲ್ಲಿ ಬೆಟ್ಟಗಳ ಇಳಿಜಾರು ಪ್ರದೇಶಗಳ ಕೆಳಬದಿಗಳಲ್ಲಿ ವಾಸಿಸುತ್ತಿದ್ದರು. ಉತ್ತರ ಕರ್ನಾಟಕದ ಮಲಪ್ರಭಾ, ಘಟಪ್ರಭಾ ನದಿಗಳ ದಂಡೆ ಹಾಗೂ ಇಳಿಜಾರು ಪ್ರದೇಶಗಳಲ್ಲಿ ಇಂತಹ ನಿವೇಶನಗಳು ಇದ್ದುದ್ದು ಸಂಶೋಧನೆಯಿಂದ ರುಜುವಾತಾಗಿದೆ. ಇಲ್ಲಿ ಸಿದ್ಧವಾದ ಹಾಗೂ ಅಪೂರ್ಣವಾಗಿರುವ ಉಪಕರಣಗಳು, ಚೆಕ್ಕೆಗಳು, ತಿರುಳು ಕಲ್ಲುಗಳು ಹಾಗೂ ಸಾಕಷ್ಟು ಪುಡಿ ಚಕ್ಕೆಗಳು ದೊರಕಿವೆ.

 ಪರಿಸರ:  ಆದಿ ಹಳೆಯ ಹಾಗೂ ಮಧ್ಯ ಪ್ರಾಚೀನ ಶಿಲಾಯುಗದ ಹವಾಮಾನದ ಸ್ಥಿತಿಗತಿಗಳಲ್ಲಿ ಅಷ್ಟೇನೂ ಬದಲಾವಣೆ ಇರಲಿಲ್ಲ. ಇವುಗಳ ನಡುವಿನ ಪಳೆಯುಳಿಕೆಗಳ ವ್ಯತ್ಯಾಸವೇನೂ ಕಂಡು ಬರುವುದಿಲ್ಲ. ಸುರಪುರ ನದಿ ಸಂಗಮ, ಘಟಪ್ರಭಾ, ಕೃಷ್ಣ ಹಾಗೂ ತುಂಗಭದ್ರ ನದಿ ಕೊಳ್ಳದಲ್ಲಿ ಸಿಕ್ಕ ಪ್ರಾಣಿಗಳ ಪಳೆಯುಳಿಕೆಗಳು ಎತ್ತು, ಎಮ್ಮೆ, ಕುದುರೆ, ಕತ್ತೆ, ಆನೆ, ಖಡ್ಗ ಮೃಗ, ಜಿಂಕೆ, ಆಮೆ ಮೊದಲಾದ ಪ್ರಾಣಿಗಳ ಸಂಬಂಧ ಆದಿ ಶಿಲಾಯುಗಗಳ ಸಂಬಂಧಕ್ಕೆ ಹೋಲಿಕೆಯಾಗುತ್ತದೆ.

ಕಾಲಗಣನೆ:  ಈ ಸಂಸ್ಕೃತಿಯು 10, ವರ್ಷಗಳಿಂದ 40 ಸಾವಿರ ವರ್ಷಗಳಷ್ಟು ಪೂರ್ವದಾಗಿರಬೇಕೆಂದು ತರ್ಕಿಸಲಾಗಿದೆ. ಯುರೇನಿಯಂ ಹಾಗೂ ಥೋರಿಯಂ ವಿಧಾನಗಳಿಂದ ಕಾಲಗಳನ್ನ ಕುರಿತು ಹಲವಾರು ಪರೀಕ್ಷೆಯನ್ನು ಮಾಡಲಾಗಿದೆ. ಈ ಪರೀಕ್ಷೆಯ ಫಲವಾಗಿ ಈ ಸಂಸ್ಕೃತಿಯ ಕಾಲಮಾನವು 1,00,000 ವರ್ಷಗಳಿಂದ 1,50,000 ವರ್ಷಗಳಷ್ಟು ಹಳೆಯದಾಗಿದೆಯಂದು ಹೇಳಲಾಗಿದೆ.

 ಜೀವನ ಶೈಲಿ: ಸಿದ ಅವಶೇಷಗಳ ನೀಡುವ ಮಾಹಿತಿಯ ಪ್ರಕಾರ ಆದಿಮಾನವ ಚಿಕ್ಕ ಮರಗಳು ಹಾಗೂ ಬಂಡೆಗಳ ನೆರಳಿನಲ್ಲಿ ವಾಸವಾಗಿದ್ದನೆಂದು ತಿಳಿದು ಬರುತ್ತದೆ. ಅವನು ಮೂಲತಃ ಬೇಟೆಗಾರನಾಗಿದ್ದ. ಬೇಟೆಗಾಗಿ ಕಲ್ಲು, ಮೂಳೆ, ಜಿಂಕೆಯ ಕೊಂಬು ಹಾಗೂ ದಂತವನ್ನು ಬಳಸಿ ಆಯುಧ ಮಾಡಿಕೊಳ್ಳುತ್ತಿದ್ದನು. ಕೈಯಿಂದಲೇ ಮಡಿಕೆ ಮಾಡುವ ಕಲೆಗಳನ್ನು ಕರಗತ ಮಾಡಿಕೊಂಡಿದ್ದನು. ಆಹಾರಕ್ಕಾಗಿ ಎಮ್ಮೆ, ಆಕಳು, ಕುರಿ, ಹೋತ, ಹಂದಿ, ಮೊಲ, ನರಿ, ಮೀನು, ಸಾರಂಗ, ಆಮೆ ಮೊದಲಾದ ಪ್ರಾಣಿಗಳ ಮಾಂಸವನ್ನು ಬಳಸುತ್ತಿದ್ದನು. ಶವ ಸಂಸ್ಕಾರದ ಮೇಲೆ ಕಲೆ ಇವನಿಗೆ ಗೊತ್ತಿತ್ತು. ಮಾನವನ ಮೂಳೆಯ ಹತ್ತಿರದಲ್ಲಿಯೇ ನಾಯಿಯ ಮೂಳೆಗಳು ಇರುವುದನ್ನು ಗಮನಿಸಿದರೆ ಮಾನವನಿಗೆ ಎಲ್ಲಾ ಚಟುವಟಿಕೆಗಳಲ್ಲಿ ನಾಯಿಯು ಭಾಗವಹಿಸುತ್ತಿತ್ತು ಎಂಬುದು  ಗಮನಾರ್ಹ ಬೇಸಾಯ ಅವರ ಮೂಲ ಉದ್ಯೋಗವಾಗಿತ್ತು.

3. ಪ್ರಾಚೀನ ಅಂತಿಮ ಶಿಲಾಯುಗ/ಅಂತಿಮ ಹಳೆಯ ಶಿಲಾಯುಗ (Upper Paleolithic):

ಹಳೆಯ ಶಿಲಾಯುಗದ ಸಂಸ್ಕೃತಿಯ ಅಂತಿಮ ಹಂತವೇ ಕೊನೆಯ ಶಿಲಾಯುಗ ಇದು ಮಧ್ಯಶಿಲಾಯುಗ ಮತ್ತು ಸ್ಥಿತಿಯಂತರದ ಸೂಕ್ಷ್ಮಶಿಲಾಯುಗದ ನಡುವಿನ ಹಂತವಾಗಿದೆ. ಇದು ಯುರೋಪ್ ಹಾಗೂ ಪಶ್ಚಿಮ ಏಷ್ಯಾಗಳ ಲಕ್ಷಣವನ್ನು ಹೊಂದಿದೆ.

ಈ ಶಿಲಾಯುಗದ ಅವಶೇಷಗಳು ಭಾರತದಲ್ಲಿ ಕೆಲವೇ ಪ್ರದೇಶಗಳಲ್ಲಿ ಕಂಡುಬಂದಿದೆ. ಇದಕ್ಕೆ ಕಾರಣ ಉತ್ಖನನದ ಕಾಲದಲ್ಲಿ ಈ ಶಿಲಾಯುಗದ ಸಂಸ್ಕೃತಿಯನ್ನು ಗುರುತಿಸುವಲ್ಲಿ ತುಂಬಾ ತಡವಾದುದು 1972ರವರೆಗೂ ಈ ಪ್ರದೇಶದ ವಿಷಯವಾಗಿ ಗೊಂದಲಗಳು ಉಂಟಾಗಿದ್ದವು. ಆದರೆ ಆ ಸುಂದರ ಅವರ ಉತ್ಖನನದ ನಂತರ ಅಲ್ಲಿ ಎರಡು ಔದ್ಯಮಿಕ ಸಂಪ್ರದಾಯಗಳು ಇದ್ದದ್ದು ಕಂಡುಬಂದಿತು. ಚಕ್ಕೆ ಹಾಗೂ ತೆಳು ನೀಲಿ ಚಕ್ಕೆ ಉದ್ಯಮ ಇದು ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಲಗು ಉಪಕರಣ ಉದ್ಯಮ ಇದು ಅಂತಿಮ ಹಳೆಯ ಶಿಲಾಯುಗಕ್ಕೆ ಸೇರಿದ್ದು. ಅಂತಿಮ ಹಳೆಯ ಶಿಲಾಯುಗದ ಅವಶೇಷಗಳನ್ನು ಮತ್ತು ನಿವೇಶನಗಳನ್ನು ಬೇರೆ ಬೇರೆ ಭಾಗಗಳಲ್ಲಿ ಕಂಡು ಹಿಡಿಯಲಾಗಿದೆ. ಮಂಜಾರಾಕೊಳ್ಳದ ಬಳ್ಳೂರಾ, ದೋಣಿ ಕೊಳ್ಳದ ಇಂಗಳೇಶ್ವರ, ಕೃಷ್ಣ ಕೊಳ್ಳದ ಸಾಲವಾಡಗಿ, ತುಂಗಭದ್ರ ಕೊಳ್ಳದ ತಕ್ಕಲಹಳ್ಳಿ, ಪೆನ್ನಾರ್‌ಕೊಳ್ಳದ, ದೊಡ್ಡಗುಣಿ ಹಾಗೂ ನಾಗಲಾಪುರಗಳಲ್ಲಿ ತೆರೆನಾದ ನಿವೇಶನಗಳು ದೊರಕಿದೆ.

ಉಪಕರಣಗಳ ವಿಧಗಳು:  ಅಂತಿಮ ಹಳೆಯ ಶಿಲಾಯುಗದ ಮಾನವನು  ನೀಳ ಅಲಗುಗಳು, ಕೊರೆಯುವ ಓರೆ ಮೊನೆಗಳು, ಹೆರೆಯುವ ಚಕ್ಕೆಗಳು, ದಬ್ಬಣ ದಂತಹ ಮೊನೆಗಳು, ಚೂರಿಗಳು ರಂಧ್ರಾಕಾರಗಳ ಮುಂತಾದ ವಿವಿಧ ಬಗೆಯ ಉಪಕರಣಗಳನ್ನು ದಿನನಿತ್ಯ ಜೀವನದಲ್ಲಿ ಬಳಕೆ ಮಾಡುತ್ತಿದ್ದನು.

 ಈ ಉಪಕರಣಗಳನ್ನು ಪ್ರಾಣಿಗಳ ಬೇಟೆಯಾಡಲು, ಕೃಷಿ ಕಾರ್ಯಮಾಡಲು, ಮೀನು ಹಿಡಿಯಲು, ಮಾಂಸವನ್ನು ತುಂಡರಿಸಲು ಬಳಸುತ್ತಿದ್ದರು. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮುಚ್ಚಟ್ಲ ಚಿಂತಾಮಣಿ ಗವಿ ಎಂಬಲ್ಲಿ ಈ ಸಂಸ್ಕೃತಿಯ ಸ್ಪಷ್ಟ ಕುರುಹುಗಳು ಪುಣೆಯ ಡೆಕ್ಕನ್ ಕಾಲೇಜಿನ ಡಾ|| ಎಂ.ಎಲ್.ಕೆ  ಮೂರ್ತಿಯವರಿಂದ ಶೋಧವಾಗಿದೆ.

ಕಲ್ಲಿನ ಉಪಕರಣಗಳೊಂದಿಗೆ ಎಲುಬಿನಿಂದ ತಯಾರಿಸಿದ ಉಪಕರಣಗಳು ಹಾಗೂ ಪ್ಲಿಸ್ಟೋಸಿನ್‌ ಕಾಲದ ಕೊನೆಯ ಹಂತದ ಪ್ರಾಣಿ ಪಳೆಯುಳಿಕೆಗಳು ಈ ನೆಲೆಯ ವೈಶಿಷ್ಟವಾಗಿದೆ. ಇಂಗಾಲ-14 (c14) ಹಾಗೂ  ಇ.ಎಸ್.ಆರ್ (ESR) ವಿಧಾನಗಳಿಂದ ಪರೀಕ್ಷಿಸಲಾದ ಸಂಸ್ಕೃತಿಯ ಕಾಲಮಾನಗಳ ವಿವರಗಳು ದೊರಕಿದ್ದು ಅವುಗಳು ಅಂತಿಮ ಹಳೆಯ ಶಿಲಾಯುಗದ ಸಂಸ್ಕೃತಿ ಅಧ್ಯಯನಕ್ಕೆ ಸಾಕ್ಷಿಯಾಗಿವೆ. ಮಹಾರಾಷ್ಟ್ರದ ಪಾಟ್ನೆ ಹಾಗೂ ರಾಜಸ್ಥಾನದ ಬಾಗೋರ್ ನೆಲೆಗಳಲ್ಲಿ ಸಹ ಈ ಶಿಲಾಯುಗದ ಅವಶೇಷಗಳು ದೊರಕಿವೆ.

ಪರಿಸರ:  ಅಂತಿಮ ಹಳೆಯ ಶಿಲಾಯುಗದ ಸಮಕಾಲಿನವೆನಿಸಬಲ್ಲ ಯಾವುದೇ ಪ್ರಾಣಿಗಳ ಪಳೆಯುಳಿಕೆಗಳು ದೊರಕಿಲ್ಲ. ಆದರೆ ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಲ್ಲಿ ಅಂತಿಮ ಹಳೆ ಶಿಲಾಯುಗ ಉಪಕರಣಗಳೊಂದಿಗೆ ಆಗಿನ ಪ್ರಾಣಿಗಳ ಪಳೆಯುಳಿಕೆಗಳು ಸಿಕ್ಕಿವೆ. ಈ ಪ್ರಾಣಿಗಳ ಪಳೆಯುಳಿಕೆಗಳನ್ನು ಗಮನಿಸಿದರೆ. ಸವನ್ನಾ ಮಾದರಿ ಪರಿಸರವಿದ್ದಂತೆ ಭಾಸವಾಗುತ್ತದೆ. ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಹಲವಾರು ಪ್ರಾಣಿಗಳ ಪಳೆಯುಳಿಕೆಗಳು ದೊರಕಿವೆ. ಉದಾ: ಲಾಂಗೂರ್, ಬೆಕ್ಕಿನ ಜಾತಿಯ ಒಂದು ಪ್ರಾಣಿ, ಜಿಂಕೆ ಜಾತಿಯ ಪ್ರಾಣಿ, ಒಂದು ಪ್ರಕಾರದ ಜಿಂಕೆ ಜಾತಿ, ಆಡು, ಹಂದಿ ಹಾಗೂ ಜಿಂಕೆ ಮೊದಲಾದವುಗಳು ಪ್ರಮುಖವಾಗಿವೆ.

ಕಾಲಗಣನೆ: ಅಂತಿಮ ಹಳೆ ಶಿಲಾಯುಗದ ಸಂಸ್ಕೃತಿಯು ಮಧ್ಯ ಶಿಲಾಯುಗ ಸಂಸ್ಕೃತಿಯ ಹಂತದ ನಂತರ ಹಾಗೂ ಸೂಕ್ಷ್ಮ ಶಿಲಾಯುಗದ ಹಿಂದಿನದೆಂದು ಈಗಾಗಲೇ ಗಮನಿಸಲಾಗಿದೆ. ಹರಿಯುವ ನೀರಿನ ಚಿಪ್ಪುಗಳು, ಉಷ್ಟ್ರ ಪಕ್ಷಿಯ ಮೊಟ್ಟೆಯ ಚೂರುಗಳು ಹಾಗೂ ಎಲುಬಿನ ಚೂರುಗಳನ್ನು ಇಂಗಾಲದ c14 ಪರೀಕ್ಷೆಗೆ ಒಳಪಡಿಸಿ ಕಾಲ ನಿರ್ಣಯವನ್ನು ಮಾಡಲಾಗಿದೆ. ಈ ಶಿಲಾಯುಗದ 10,000 ವರ್ಷಗಳ ಹಿಂದೆ 25000 ವರ್ಷಗಳಷ್ಟು ಪೂರ್ವದಲ್ಲಿ ಈ ಸಂಸ್ಕೃತಿ ಇದ್ದಿತೆಂದು ಹೇಳಲಾಗುತ್ತದೆ.

4. ಮಧ್ಯಶಿಲಾ ಯುಗ (Mesolithic) :

ಈ ಶಿಲಾಯುಗದಲ್ಲಿ ಪ್ಲಿಸ್ಟೋಸಿನ್‌ ಯುಗದ ನಂತರ ಆದಿ ಹಾಲೋಸಿನ್ ಎಂಬ ಸೂಕ್ಷ್ಮ ಉಪಕರಣಗಳನ್ನು ಉಪಯೋಗಿಸುತ್ತಿದ್ದರು. ಅಸ್ಸಾಂ ಹಾಗೂ ಗಂಗಾ ನದಿಯ ಬಯಲಿನಲ್ಲಿನ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಭಾರತದ ಬಹುತೇಕ ಕಡೆಗಳಲ್ಲಿ ಈ ಸಂಸ್ಕೃತಿ ಉಪಕರಣಗಳು ಸಿಕ್ಕಿವೆ.

 ಪ್ರಸಾರ:  ತಮಿಳುನಾಡಿನ ಟೇರಿ ನೆಲೆಗಳಲ್ಲಿ ದೊರಕಿದ ವಿಶಿಷ್ಟ ಮಾದರಿಯ ಸೂಕ್ಷ್ಮ ಶಿಲಾ ಉಪಕರಣಗಳುಳ್ಳ ಉದ್ಯಮವು ಝೂನ್ನಾರ್ ಎಂಬ ವಿದ್ವಾಂಸರಿಂದ ಉತ್ಖನನವಾಯಿತು. ಇಲ್ಲಿನ ಕುರುಹುಗಳನ್ನು ಆಧಾರವಾಗಿಟ್ಟುಕೊಂಡು ಇದು ಕ್ರಿ.ಪೂ 4000 ವರ್ಷಕ್ಕೆ ಅನ್ವಯವಾಗುವುದು ಎಂದು ಹೇಳಿದ್ದಾರೆ.

 ಅದು ಅಲ್ಲದೆ ಗುಜರಾತ್  (ಲಾಘ್‌ನಾಜ್), ಬಾಗೋರ್ (ರಾಜಸ್ಥಾನ್), ಸರಾಹಿನಹರರಾಯ್‌, ಮದಹನ (ಉತ್ತರ ಪ್ರದೇಶ) ಆದಮಗಡ, ಬೀಮ್‌ಬೇಟ್ಕಾ (ಮಧ್ಯಪ್ರದೇಶ) ಗಳಲ್ಲಿ ನಡೆದ ಉತ್ಖನನಗಳು ಈ ಮಾಹಿತಿಯನ್ನು ಹೊರಹಾಕುತ್ತವೆ. ಈ ಶಿಲಾಯುಗದ ಮಾಹಿತಿಗಳನ್ನು ಕರ್ನಾಟಕದ ಕಾರಂಜಾಕೊಳ್ಳದ ಬೇಗಂಪುರ, ಮಂಜಾರಾಕೊಳ್ಳದ, ಏಕಲಾರ, ಭೀಮಾಕೊಳ್ಳದ ದೋಣಿ, ತುಂಗಾಭದ್ರ ಕೊಳ್ಳದ ಸಂಗನಕಲ್ಲು, ಮಲಪ್ರಭಾದ ಅಮ್ಮಿನಹಳ್ಳಿ, ತುಂಗಾ ನದಿಯ ದಂಡೆಯ ಶೃಂಗೇರಿ, ಹೇಮಾವತಿ ಕೊಳ್ಳದ ಕಟ್ಟೆ ಬೆಳಗಲಿ, ಜೋಳನಹಳ್ಳಿ, ಶೆಟ್ಟಿಹಳ್ಳಿ, ಕರಾವಳಿಯ ಬೇಲೆಕೆರೆ ಮೊದಲಾದ ಕಡೆಗಳಲ್ಲಿ ಈ ಶಿಲಾಯುಗದ ಅವಶೇಷಗಳು ದೊರಕಿವೆ. ಇದು ಅಲ್ಲದೆ ಬೆಟ್ಟ ಗುಡ್ಡಗಳಲ್ಲಿ ಬಯಲು ಪ್ರದೇಶಗಳಲ್ಲಿ ಹಾಗೂ ಇಳಿಜಾರಿನ ಭಾಗಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ. ನದಿ ದಂಡೆ, ಕೆರೆಗಳು, ಸಮುದ್ರ ತೀರ, ಕಾಡುಗಳು, ದಟ್ಟ ಅರಣ್ಯಗಳಲ್ಲಿಯೂ ಸಹ ಇವೆ.

 ಉಪಕರಣಗಳ ವಿಧಗಳು:  ಈ ಶಿಲಾಯುಗದಲ್ಲಿ ದೊರಕಿದ ಬಗೆಬಗೆಯ ಕಲ್ಲುಗಳು ಹಾಗೂ ಕಲ್ಲಿನ ಉಪಕರಣಗಳು ನಿರ್ದಿಷ್ಟವಾದ ಆಕಾರದಲ್ಲಿ ಇಲ್ಲ. ಉದಾ: ಅಲಗುಗಳು, ಚಿಕ್ಕ ಅಲಗುಗಳು, ಬಾಗಿದ ಅಲಗುಗಳು, ಚಿಕ್ಕಚೂರಿಯ ಆಕಾರದ ಅಲಗುಗಳು, ಎರಡೂ ಬದಿಗಳಲ್ಲಿ ಮೊನಚಾದ ಚಿಕ್ಕ ಬೈರಿಗೆಗಳು, ಅಪರೂಪದ ಚಿಕ್ಕ ಮುಚ್ಚುಗಳು, ಮೊದಲಾದವುಗಳು ಕಂಡುಬಂದಿವೆ. ಕೆಲವು ಉಪಕರಣಗಳು ತ್ರಿಕೋನಾಕಾರ, ಕೆಲವು ಸಮಭುಜ ತ್ರಿಕೋನಾಕಾರ, ಅಸಮಭುಜ ತ್ರಿಕೋನಾಕಾರ ಹಾಗೂ ಸಮದ್ವಿಭುಜ ತ್ರಿಕೋನಾಕಾರದಲ್ಲಿ ಇವೆ.

 ಉಪಕರಣ ಬಳಕೆ:  ಈ ಉಪಕರಣಗಳನ್ನು ಗಾಳ, ಕುರುಪಿ, ಬಾಣ, ಚಾಕು ಮೊದಲಾದ ಸಲಕರಣೆಗಳನ್ನು ಮಾಡಲು ಬಳಸುತ್ತಿದ್ದರು. ಈ ಸಲಕರಣೆಗಳಿಂದ ಆಹಾರ ಸಂಗ್ರಹಣೆ ಮಾಡುತ್ತಿದ್ದರು.

 ಜೀವನ ಕ್ರಮ:  ಶಿಲಾಯುಗದ ಜನರ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಅಲಹಾಬಾದಿನ ಉತ್ತರಕ್ಕೆ ಬೇಲಾನ ನದಿಯ ಬಯಲಿನಲ್ಲಿ ಪಾನಿಮಾಂಡೋ, ಮಹದಹ, ಮಹಗರ ಸರಾಯಿ ಮುಂತಾದ ಕಡೆಗಳಲ್ಲಿ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ. ಪ್ರಾಣಿಗಳ ಎಲಬುಗಳು ದೊರಕಿವೆ. ಅವುಗಳಲ್ಲಿ ದನ, ಎಮ್ಮೆ, ಹಂದಿ, ಸಾಂಬಾರ್, ಚಿರತೆ, ನೀಲಗಾಯ್‌, ಜಿಂಕೆ, ನರಿ ಮುಂತಾದ ಪ್ರಾಣಿ ಅಸ್ತಿಗಳು ಇವೆ. ಖಡ್ಗ ಮೃಗ, ಆನೆ ಹಾಗೂ ಮೀನುಗಳ ಎಲುಬುಗಳು ಸಹ ದೊರಕಿವೆ.

 ಜನರು ಗೆಡ್ಡೆ ಗೆಣಸು, ಕಾಳು ಕಡಿ, ಸಸ್ಯ, ಗೋದಿ, ಅಕ್ಕಿ, ಬೀಜಗಳು ಮೊದಲಾದವುಗಳನ್ನು ಆಹಾರವನ್ನಾಗಿ ಉಪಯೋಗಿಸುತ್ತಿದ್ದರು. ಇವುಗಳ ಅವಶೇಷಗಳು ಸುಮಾರು ಕ್ರಿ.ಪೂ 7,000-3000 ಅವಧಿಯಲ್ಲಿ ಸೂಕ್ಷ್ಮ ಶಿಲಾಯುಗದ ನೆಲೆಯಲ್ಲಿ ಸಿಕ್ಕಿವೆ. ಇದರ ಜೊತೆಗೆ ಚಾಪೆಯು ದೊರಕಿದೆ. ಅವುಗಳನ್ನು ಈಚಲು ಮರದ ಗಳದಿಂದ ಸೀಳಿದ ತೆಳ್ಳನೆಯ ದಬ್ಬೆಗಳಿಂದ ಮಾಡುತ್ತಿದ್ದರು. ಎಲುಬಿನಿಂದ ಕಿವಿಯೋಲೆ ಮಾಡುವ ಕಲೆಯನ್ನು ಕಲಿತಿದ್ದರು.

 ಶವಸಂಸ್ಕಾರ: ಜನರು ಸಾಂಪ್ರದಾಯಿಕ ಶವಸಂಸ್ಕಾರ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಸರಿಯಾಗಿ ಉದ್ದನೆಯ ಕುಣಿಯನ್ನು ತೋಡಿ ಅದರಲ್ಲಿ ಶವಗಳನ್ನು ಇಟ್ಟು ಹೂಳಲಾಗುತ್ತಿತ್ತು. ಸ್ತ್ರೀಯರು ಆಗಿದ್ದರೆ ಅವರನ್ನು ಕಿವಿಯೋಲೆ ಸಮೇತ ಹೂಳಲಾಗುತ್ತಿತ್ತು. ಕೆಲವು ಸಲ ಎರಡೆರಡು ಶವಗಳನ್ನು ಒಂದೇ ಗುಂಡಿಯಲ್ಲಿ ಹಾಕಿ ಹೂಳುತ್ತಿದ್ದರು.

 ಕಲೆ: ಬಾದಾಮಿಯ ಸಮೀಪ ಅರೆಗುಡ್ಡ ಹಾಗೂ ಹಿರೆಗುಡ್ಡ ಎಂಬಲ್ಲಿ ಗುಹೆಗಳು ಮತ್ತು ಕಲ್ಲಿನ ಆಸರೆಗಳಲ್ಲಿ ಕೆಲವು ಅಪರೂಪದ ಕೆಂಪು ಮಣ್ಣಿನ ಚಿತ್ರಗಳು ಸಿಕ್ಕಿವೆ. ಬಹುಶಃ ಸೂಕ್ಷ್ಮಶಿಲಯೋಗದ ಅದ್ಭುತ ಕಲೆಗಳಾಗಿರಬೇಕು. ಈ ಚಿತ್ರದಲ್ಲಿ ಮಾನವ, ಪ್ರಾಣಿ ಹಾಗೂ ವಿಶಿಷ್ಟ ಆಕೃತಿಯ ಚಿತ್ರಗಳ ಆಕೃತಿಗಳಾಗಿವೆ.

 ಕಾಲಗಣನೆ : ಅಂತಿಮ ಶಿಲಾಯುಗ ಮತ್ತು ನವಶಿಲಾಯುಗದ ನಡುವಿನ ಯುಗವೇ ಸೂಕ್ಷ್ಮ ಶಿಲಾಯುಗವಾಗಿದೆ. ಈ ಶಿಲಾಯುಗ 2500 ರಿಂದ 10000 ವರ್ಷಗಳ ಪೂರ್ವದಲ್ಲಿ ಇತ್ತು ಎಂದು ಅಂದಾಜಿಸಲಾಗಿದೆ. ಆದರೆ ಇದು ಆದಿ ಹಾಗೂ ಮಧ್ಯ ಹೆಲೋಸಿನ್‌ ಯುಗಕ್ಕೆ ಸಮನಾಗಿದೆ. ಜನರು ನಿರಂತರವಾಗಿ ನೀರಿನ ಸೌಲಭ್ಯವಿದ್ದ ಕಡೆಗಳಲ್ಲಿ, ಮುಕ್ತವಾದ ವಿಶಾಲ ಬಯಲಿನಲ್ಲಿ, ನದಿ ದಂಡೆಗಳಲ್ಲಿ  ಹಾಗೂ ಶಿಲೆಗಳು ವಿಫುಲವಾಗಿ ದೊರಕುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದರು. ಈ ಶಿಲಾಯುಗದ ಜನಸಾಂದ್ರತೆ ಅಧಿಕವಾಗಿತ್ತು. ಜನರು ಪ್ರಾಣಿಗಳನ್ನು ಬೇಟೆಯಾಡುತ್ತಾ ಪ್ರಾಣಿ ಸಾಗಾಣಿಕೆಯನ್ನು ಮಾಡುತ್ತಿದ್ದರು. ಬೀಜವನ್ನು ಬಿತ್ತಿ ಆಹಾರ ಪಡೆಯುತ್ತಿದ್ದರು. ವಸತಿ ನಿರ್ಮಾಣ ಹಾಗೂ ಚಾಪೆ ಹೆಣೆಯುವುದು, ಮಣ್ಣಿನ ಪಾತ್ರೆ, ಎಲುಬಿನ ಮಣಿಗಳ ತಯಾರಿಕೆ ಮುಂತಾದ ಉದ್ಯೋಗದಲ್ಲಿ ನಿರತರಾಗಿರುತ್ತಿದ್ದರು. ಬೇಟೆ ಹಾಗೂ ಆಹಾರ ಸಂಗ್ರಹನೆ ಪ್ರಮುಖ ಕಸುಬುಗಳು ಆಗಿದ್ದವು. ಹಣ್ಣು-ಹಂಪಲು ಹಾಗೂ ಗೆಡ್ಡೆ-ಗೆಣಸುಗಳನ್ನು ತಿನ್ನುತ್ತಿದ್ದರು.

 

5. ತಾಮ್ರಯುಗದ ಸಂಸ್ಕೃತಿ  (Chalcolithic Age)

ನವಶಿಲಾಯುಗದ ಅಂತ್ಯದಲ್ಲಿ ಮಾನವನಿಗೆ ಲೋಹಗಳ ಪರಿಚಯವಾಯಿತು. ಈ ಅವಧಿಯಲ್ಲಿ ಮಾನವನು ತಾಮ್ರದ ಲೋಹಗಳನ್ನು ಬಳಸಲು ಆರಂಭ ಮಾಡಿದನು. ಈ ಯುಗವನ್ನು ಚಾಕೋಲಿಥಿಕ್ ಎಂದು ಕರೆಯಲಾಗಿದೆ.

ತಾಮ್ರಯುಗದ ನೆಲೆಗಳು:  ತಾಮ್ರ ಶಿಲಾಯುಗಕ್ಕೆ ಸಂಬಂಧಿಸಿದ ಸ್ಥಳಗಳು ಆಗ್ನೇಯ ರಾಜಸ್ಥಾನ್‌, ಮಧ್ಯಪ್ರದೇಶದ ಪಶ್ಚಿಮಭಾಗ, ಮಹಾರಾಷ್ಟ್ರ ಭಾರತದ ಪೂರ್ವ ಹಾಗೂ ದಕ್ಷಿಣ ಭಾಗಗಳು ಆಹಾರ ಗಿಲುಂಡ್‌, ಮಧ್ಯಪ್ರದೇಶದ ಮಾಳ್ವ, ಕೈಯಾತ್ ಮತ್ತು ಎರಾನ್, ಅಹಮ್ಮದ್ ನಗರದ ಜೋರ್ವೆ, ನೇವಾಸ, ಡೈಮಾಬಾದ್‌, ಪುಣೆ, ಚಿಂಚೋಳ್ಳಿ, ಸೋನಾಗಾಂವ್, ಗೋದಾವರಿ ನದಿ ತೀರ, ವಿಂದ್ಯ ಪರ್ವತ ಪ್ರದೇಶ, ಗಂಗಾ ತೀರ, ಚಿರಾಂಡ್‌, ಬರ್ದಮಾನ್ ರಾಜರ್ ದಿಬಿ, ಬೀರ್‌ಭೂಮ್‌, ಬಿಹಾರದ ಸೆನ್ವಾರ್, ಸೋಣ್‌ಪುರ, ತರಧಿ, ಖೈರಾಧಿ ಮೊದಲಾದವುಗಳು.

ಕರ್ನಾಟಕದಲ್ಲಿ ಸಂಗನಕಲ್ಲು, ತೆಕ್ಕಲುಕೋಟೆ, ತಾವರೆಕೆರೆ, ಬ್ರಹ್ಮಗಿರಿ, ಪಿಕ್ಲಿಹಾಳ, ಉತ್ತನೂರು, ಟಿ ನರಸೀಪುರ, ಹೆಮ್ಮಿಗೆ, ನಿಲಸಕಲ್ (ಹೊಸನಗರ) ಎಡೆಗುಡ್ಡೆ (ತೀರ್ಥಹಳ್ಳಿ) ಮೇಗರವಳ್ಳಿ ಮೊದಲಾದ ಕಡೆಗಳಲ್ಲಿ ನೂತನ ಶಿಲಾಯುಗದ ನಿವೇಶನಗಳು ದೊರಕಿವೆ.

ಸಲಕರಣೆಗಳು: ಜನರು ಮರಗಳನ್ನು ಕತ್ತರಿಸಲು, ಪ್ರಾಣಿಗಳ ಚರ್ಮವನ್ನು ಸುಲಿಯಲು ಹಾಗೂ ಕೊರೆಯಲು ಅನೇಕ ಬಗೆ ಉಪಕರಣಗಳನ್ನು ಬಳಸುತ್ತಿದ್ದರು. ಕಲ್ಲು ಹಾಗೂ ತಾಮ್ರದಿಂದ ತಯಾರಿಸಿದ ಉಪಕರಣಗಳು ಆಗಿದ್ದವು. ರಾಜಸ್ಥಾನದ ಬನಾಸ್ ನದಿ ತೀರದಲ್ಲಿ ಹಲ್ಲೆ ಕೊಡಲಿ, ಬಳೆಗಳು, ತಗಡುಗಳು, ಅಲಗು, ಮೊನೆಗಳು, ಕೊಡಲಿ, ಬಾಚಿ, ಚಿಣಿ, ಉಳಿ ಮೊದಲಾದವುಗಳು ದೊರಕಿವೆ. ಇವುಗಳು ಅರ್ಧಚಂದ್ರಾಕೃತಿ, ಚತುರ ಚತುರಸ್ರಾಕಾರದ, ತ್ರಿಕೋನಾಕಾರದಲ್ಲಿ ದೊರಕಿವೆ. ಕೆಲವನ್ನು ಬೇಟೆಯಲ್ಲಿ ಕವಣೆ ಕಲ್ಲುಗಳಾಗಿ ಉಪಯೋಗಿಸುತ್ತಿದ್ದರು. ಸೂಜಿ, ಚಾಕು ಹಾಗೂ ಉದ್ದನೆಯ ಕತ್ತಿಗಳು ಹಳ್ಳೂರು ಹಾಗೂ ಬನಹಳ್ಳಿಗಳಲ್ಲಿ ಸಿಕ್ಕಿವೆ. ಉದ್ದನೆಯ ಹಿಡಿಕೆಯುಳ್ಳ ಗಡಿಗೆಗಳು ಅಗಲವಾದ ಬಾಲವುಳ್ಳ ಬಟ್ಟಲುಗಳು, ತಟ್ಟೆಗಳು,  ಮುಚ್ಚಳ ಮೊದಲಾದ ಪಾತ್ರಗಳು ಸಿಕ್ಕಿವೆ.

ರಾಜಸ್ಥಾನ್, ಮಧ್ಯಪ್ರದೇಶ, ಮಹಾರಾಷ್ಟ್ರ, ಬಿಹಾರ್, ಪಶ್ಚಿಮ ಬಂಗಾಳದಲ್ಲಿ ಮಣ್ಣಿನ ಮಡಿಕೆಗಳು ದೊರಕಿವೆ. ಉದಾ: ಗಿಂಡಿಗಳು, ಬೋಗುಣಿಗಳು ಮೊದಲಾದವುಗಳು.

ಅಲಂಕಾರ ಸಾಧನೆಗಳು:  ಮಣಿಗಳು ಹಾಗೂ ಬಳೆಗಳು ತಾಮ್ರಯುಗದ ಜನರ ಅಲಂಕಾರದ ವಸ್ತುಗಳಾಗಿದ್ದವು. ಉತ್ಖನನದಲ್ಲಿ ದಾರದಲ್ಲಿ ಪೋಣಿಸಿದ ಮಣಿಗಳ ಸರವಂದು ಸಿಕ್ಕಿದೆ. ತಾಮ್ರದ ದಪ್ಪ ತಂತಿಯಲ್ಲಿ ಸಿಕ್ಕಿಸಿದ ಬಳೆಗಳು ಸರ್ವೇ ಸಾಮಾನ್ಯವಾಗಿದ್ದವು. ಬ್ರಹ್ಮಗಿರಿ ಹಾಗೂ ತೇರದಾಳದಲ್ಲಿ ಬಳೆಗಳು ದೊರಕಿವೆ.

 ಕಲೆ: ತಾಮ್ರ ಶಿಲಾಯುಗದ ಜನರು ಸೌಂದರ್ಯಾಸಕ್ತರಾಗಿದ್ದರು. ಅವರು ಮಣ್ಣಿನ ಗೊಂಬೆಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಸಂಗನ ಕಲ್ಲು. ಪಿಕ್ಲಿಹಾಳ ಮುಂತಾದ ಕಡೆಗಳಲ್ಲಿ ದೊರಕಿದ ಮಣ್ಣಿನ ಗೊಂಬೆಗಳೇ ಸಾಕ್ಷಿಯಾಗಿವೆ. ದನ, ಎತ್ತು, ಪಕ್ಷಿ ಹಾಗೂ ಮನುಷ್ಯರೂಪದ ಗೊಂಬೆಗಳು ಸಿಕ್ಕಿವೆ. ಇದು ಅಲ್ಲದೆ ಗುಹೆಗಳು ಮತ್ತು ಕಲ್ಲು ಬಂಡೆಗಳ ಮೇಲೆ ನೃತ್ಯ, ಬೇಟೆಗಾರಿಕೆ, ಆಕಳು, ಜಿಂಕೆ, ಹುಲಿ ಹಾಗೂ ಹುಲಿಗಳ ರೇಖಾಚಿತ್ರಗಳಿವೆ. ಇಂತಹ ಚಿತ್ರಗಳು ಬಳ್ಳಾರಿ ಜಿಲ್ಲೆಯ ಬೆಳಗಲಿ, ಲಿಂಗಸೂರು ಜಿಲ್ಲೆಯ ಕುರುಗೋಡು, ಬಿಲ್ಲಮರಾಯನಗುಡ್ಡ, ಮಸ್ಕಿ, ಜಂಟಿಗರಾಮೇಶ್ವರ ಮೊದಲಾದ ಕಡೆಗಳಲ್ಲಿ ಕಂಡುಬಂದಿವೆ.

ಶವ ಸಂಸ್ಕಾರ ಪದ್ಧತಿ: ತಾಮ್ರ ಯುಗದಲ್ಲಿ ಶವ ಸಂಸ್ಕಾರ ಪದ್ಧತಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಶವವನ್ನು ದೊಡ್ಡ ಮಡಿಕೆಯಲ್ಲಿಟ್ಟಿದ್ದು ಉತ್ತರ ಅಭಿಮುಖವಾಗಿ ಮನೆಯಲ್ಲಿಯೇ ಹೂಳುವ ಪದ್ಧತಿಯನ್ನು ರೂಢಿಸಿಕೊಂಡಿದ್ದರು. ಶವದ ಜೊತೆಗೆ ಅದರ ಉಪಯೋಗಿಸುತ್ತಿದ್ದ ಬಟ್ಟೆಗಳು ಆವರಣಗಳು ಹಾಗೂ ದಿನನಿತ್ಯದ ವಸ್ತುಗಳನ್ನು ಇಟ್ಟು ಹೂಳುತ್ತಿದ್ದರು. ಟಿ.ನರಸೀಪುರ, ತೆಕ್ಕಲುಕೋಟೆ, ಬೂದಿಹಾಳ ಮೊದಲಾದ ಕಡೆಗಳಲ್ಲಿ ಅಸ್ತಿಪಂಜರಗಳು ದೊರಕಿವೆ.

ಆಗಲೇ ಸಾಮಾಜಿಕ ಅಸಮಾನತೆ ಕಂಡುಬಂದಿದ್ದಿತೆಂದು ಶವವನ್ನು ಹೂಳುವ ವಿಧಾನದಿಂದ ತಿಳಿಯಬಹುದು. ಮಹಾರಾಷ್ಟ್ರದಲ್ಲಿ ಶ್ರೇಣಿ ವ್ಯವಸ್ಥೆ ಆರಂಭವಾಗಿತ್ತು. ಊರಿನ ನಾಯಕನು ಈತ ನಡುಭಾಗದ ಊರಿನಲ್ಲಿ ವಾಸಿಸುತ್ತಿದ್ದನು.

ಸಾಮಾಜಿಕ ಜೀವನ:  ಈ ಯುಗದಲ್ಲೂ ವ್ಯವಸಾಯ ಹಾಗೂ ಪಶುಪಾಲನೆ ಮುಂದುವರೆಯಿತು. ಭತ್ತ, ರಾಗಿ, ಗೋದಿ, ಹತ್ತಿ, ಕಬ್ಬು, ಜೋಳ, ಉದ್ದು, ನೆಲಗಡಲೆ, ಬಟಾಣಿ, ಎಣ್ಣೆ ಮೊದಲಾದವುಗಳನ್ನು ಬೆಳೆಯುತ್ತಿದ್ದರು. ನಾಯಿ, ಮೇಕೆ, ಕುರಿ, ಎಮ್ಮೆ ಮುಂತಾದ ಪ್ರಾಣಿಗಳನ್ನು ಸಾಕುತ್ತಿದ್ದರು. ಮೀನು, ಮಾಂಸ ಹಾಗೂ ತರಕಾರಿಗಳನ್ನು ಆಹಾರ ಪದಾರ್ಥಗಳಾಗಿ ಬಳಸುತ್ತಿದ್ದರು. ಇಟ್ಟಿಗೆಗಳಿಂದ ಮನೆಯನ್ನು ತಯಾರಿಸುತ್ತಿದ್ದರು. ಬಣ್ಣ ಬಣ್ಣದ ಮಡಿಕೆಗಳನ್ನು ತಯಾರಿಸುತ್ತಿದ್ದರು ಶವಗಳನ್ನು ಹೋಳುತ್ತಿದ್ದರು.

ನೆಲೆಗಳ ಶೋಧ:  ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಬ್ರಿಟಿಷರ ಕಾಲದಲ್ಲಿ ಸಿಂಧೂ ನಾಗರಿಕತೆ ಬೆಳಕಿಗೆ ಬಂದಿತು. ಸ್ವಾತಂತ್ರ್ಯದ ನಂತರ ಮತ್ತಷ್ಟು ಶೋಧವನ್ನು ಸಿಂಧು ಬಯಲಿನಲ್ಲಿ ನಡೆಸಲಾಯಿತು. ಅದರ ಫಲವಾಗಿ ಪಂಜಾಬಿನ ರೋಪರ್‌ನ್ನು ವಾಯ್‌.ಡಿ.ಶರ್ಮಾ, ಆಲಂಗಿಪುರ (ವಾಯ್‌.ಡಿ.ಶರ್ಮನ್ 1958-59) ಗುಜರಾತಿನ ರಂಗಪುರ (ಎಸ್.ಆರ್. ರಾವ್ 1955-62), ಲೋಥಾಲ್ ಗುಜರಾತ್ 1955-66 ರಾಜಸ್ಥಾನದ ಕಾಲಿಬಂಗನ್‌-ಬಿ.ಬಿ ಲಾಲ್ ಹಾಗೂ ಬಿ.ಕೆ ಥಾಪರ್ ಕಚನ್ ಸರಕೋತದ ಜೋಶಿ, ನಾಗೇಶ್ವರ ಕುಂತಾಸಿ ಇತ್ಯಾದಿಗಳು ಉತ್ಖನನಗೊಂಡವು. ಸಿಂಧೂ ನಾಗರಿಕತೆಯ ಅವನತಿಯ ನಂತರ ಪುರಾತತ್ವ ಶಾಸ್ತ್ರಜ್ಞರಿಗೆ ಸಿಕ್ಕ ಮತ್ತೊಂದು ಸ್ಥಳವೆಂದರೆ ಗಂಗಾ ನದಿಯ ದಂಡೆಯ ಮೇಲಿರುವ ಹಸ್ತಿನಾಪುರ. ಇಲ್ಲಿ  ಬಿ.ಬಿ ಲಾಲ್‌ರವರು 1950-52ರ ಅವಧಿಯಲ್ಲಿ ಉತ್ಖನನ ನಡೆಸಿದರು. ಇಲ್ಲಿ ಕ್ಯಾವಿಗೆಂಪು ಬಣ್ಣದ ಮಡಿಕೆಗಳು ಬಳಕೆಯಲ್ಲಿದ್ದ ಸಂಸ್ಕೃತಿ ಅವಶೇಷಗಳು ದೊರಕಿದವು. ಈ ಸಂಸ್ಕೃತಿ ಹಾಗೂ ತಾಮ್ರ ನಿಧಿ ನೆಲೆಗಳ ನಡುವೆ ಸಂಬಂಧ ಕಲ್ಪಿಸಲಾಗಿದೆ. ನೆರೆಹಾವಳಿಗಿಂದ ಗಂಗಾನದಿಯ ಬಹುಭಾಗ ನಾಶವಾಯಿತು. ನಂತರ ಕಪ್ಪು ಮಡಿಕೆ ಬಳಕೆಯಲ್ಲಿದ್ದ ಸಂಸ್ಕೃತಿಯ ಜನರು ಇಲ್ಲಿ ವಾಸಿಸಿದರು. ಮುಂದೆ ಕುರುಕ್ಷೇತ್ರ, ಮಥುರಾ, ಕಂಪಿಲ, ಶ್ರಾವಸ್ತಿ ಹಾಗೂ ಕೌಶಾಂಬಿ ಮೊದಲಾದವು ಮುಖ್ಯ ನೆಲೆಗಳಾಗಿ ಬೆಳೆದು ಬಂದವು.

1950-51 ರಲ್ಲಿ ಮಹಾರಾಷ್ಟ್ರದ ನಾಸಿಕ್ ನೆಲೆಗಳ ಉತ್ಖನನದಲ್ಲಿ ಜೋರ್ವೆ ಸಂಸ್ಕೃತಿಯೊಂದಿಗೆ ಡೆಕ್ಕನ್ನಿನ ತಾಮ್ರ ಶಿಲಾ ಸಂಸ್ಕೃತಿಗಳ ಅಧ್ಯಯನ ಆರಂಭವಾಯಿತು. ನಂತರ 1954-55 ರಲ್ಲಿ ಸಾಂಕಾಲಿಯ ಅವರು ಕೆಂಪು ಮಡಿಕೆಯನ್ನು ಬಳಸುತ್ತಿದ್ದ ತಾಮ್ರಯುಗದ ಬನಾಸ್ ಹಾಗೂ ಆಹಾರ ಸಂಸ್ಕೃತಿಯ ಬೆಳಕಿಗೆ ತಂದರು. 1964-68 ರಲ್ಲಿ (ಎಂ ಕೆ ದವಳಿಕರ್) ಕಾಯಥಾ ಸಂಸ್ಕೃತಿ ಎಂದು ಕರೆಯಲಾಗುವ ಇನ್ನೊಂದು ತಾಮ್ರ ಶಿಲಾಯುಗ ಗಮನಕ್ಕೆ ಬಂದಿತ್ತು.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 2300-1000 ಎಂದು ಗುರುತಿಸಲಾಗಿದೆ. ಟಿ.ನರಸೀಪುರ, ಹಳ್ಳೂರು, ತೆಕ್ಕಲಕೋಟೆ, ಕೊಡೆಕಲ್, ತೇರದಾಳ, ಮೊದಲಾದ ನೆಲೆಗಳ ಶಿಲಾಯುಗ ತಾಮ್ರಾಯುಗ ಹಂತಗಳಿಂದ ಸಂಗ್ರಹಿಸಿದ ಇದ್ದಿಲುಗಳಿಂದ ಕಾಲಮಾನವನ್ನು ಇಂಗಾಲ 14 ರ ವೈಜ್ಞಾನಿಕ ತಂತ್ರದಿಂದ ನಿಗದಿಗೊಳಿಸಲಾಯಿತು.

6. ಕಂಚಿನ ಯುಗ  :

ಕಂಚು ಯುಗವು ಮಾನವ ಇತಿಹಾಸದ ಒಂದು ಮಹತ್ವದ ಹಂತವಾಗಿದ್ದು, ಈ ಕಾಲದಲ್ಲಿ ಮಾನವರು ಕಂಚು (Bronze) ಎಂಬ ಲೋಹವನ್ನು ತಯಾರಿಸುವುದನ್ನು ಕಲಿಸಿದರು. ಕಂಚು ಎಂದರೆ ತಾಮ್ರ ಮತ್ತು ಟಿನ್ ಮಿಶ್ರಣದಿಂದ ತಯಾರಾಗುವ ಬಲವಾದ ಲೋಹ. ಇದು ಕಲ್ಲು ಉಪಕರಣಗಳಿಗಿಂತ ಹೆಚ್ಚು ದೃಢವಾಗಿದ್ದು, ಕೃಷಿ ಮತ್ತು ಯುದ್ಧ ಕ್ಷೇತ್ರಗಳಲ್ಲಿ ದೊಡ್ಡ ಬದಲಾವಣೆಗಳನ್ನು ತಂದಿತು. ಉತ್ತಮ ಗುಣಮಟ್ಟದ ಹಗುರ ಮತ್ತು ಬಲವಾದ ಉಪಕರಣಗಳ ಕಾರಣದಿಂದ ಕೃಷಿ ಸುಲಭವಾಯಿತು; ಜೊತೆಗೆ, ಯುದ್ಧದಲ್ಲಿ ಬಳಸುವ ಆಯುಧಗಳು ಹೆಚ್ಚು ಪರಿಣಾಮಕಾರಿಯಾಗಿದವು.

ಕೃಷಿಯಲ್ಲಿ ಉಂಟಾದ ಸುಧಾರಣೆಯಿಂದ ಆಹಾರದ ಉತ್ಪಾದನೆ ಹೆಚ್ಚಾಯಿತು. ಈ ಆಹಾರ ಮಿತಿಮೀರಿದ ಉತ್ಪಾದನೆ (surplus) ಜನಸಂಖ್ಯೆ ಹೆಚ್ಚಲು ಕಾರಣವಾಯಿತು. ಜನರು ದೊಡ್ಡ ಗುಂಪುಗಳಾಗಿ ವಾಸಿಸಲು ಪ್ರಾರಂಭಿಸಿದರು ಮತ್ತು ಈ ವಾಸಸ್ಥಳಗಳು ನಿಧಾನವಾಗಿ ನಗರಗಳು ಮತ್ತು ರಾಜ್ಯಗಳಾಗಿ ರೂಪುಗೊಂಡವು. ಈ ಸಮಾಜಗಳಲ್ಲಿ ರಾಜರು, ಪೂಜಾರಿಗಳು, ವ್ಯಾಪಾರಿಗಳು ಮತ್ತು ಕಾರ್ಮಿಕರು ಎಂಬಂತೆ ಸ್ಪಷ್ಟವಾದ ಸಾಮಾಜಿಕ ವರ್ಗೀಕರಣ ಕಂಡುಬಂದಿತು.

ಕಂಚು ಯುಗದಲ್ಲಿ ವಿಶ್ವದ ವಿವಿಧ ಭಾಗಗಳಲ್ಲಿ ಮಹತ್ವದ ನಾಗರಿಕತೆಗಳು ಬೆಳವಣಿಗೆ ಕಂಡವು. ಮೆಸಪೊಟೇಮಿಯ ಪ್ರದೇಶದಲ್ಲಿ ಸುಮೇರಿಯನ್ ಮತ್ತು ಬಾಬಿಲೋನಿಯನ್ ನಾಗರಿಕತೆಗಳು ನಗರಗಳನ್ನು ನಿರ್ಮಿಸಿ, ಕಾನೂನುಗಳನ್ನು ರೂಪಿಸಿ, ಜಿಗ್ಗುರಾಟ್‌ಗಳು ಎಂಬ ಭವ್ಯ ದೇವಾಲಯಗಳನ್ನು ಕಟ್ಟಿದರು. ಪ್ರಾಚೀನ ಈಜಿಪ್ಟ್‌ ನಲ್ಲಿ ಫೆರೋಗಳು ಕೇಂದ್ರಿತ ಆಡಳಿತವನ್ನು ಸ್ಥಾಪಿಸಿ, ಪಿರಮಿಡ್‌ಗಳಂತಹ ಮಹತ್ತರ ಸಮಾಧಿಗಳನ್ನು ನಿರ್ಮಿಸಿದರು. ಸಿಂದೂ ಬಯಲಿನ ನಾಗರೀಕತೆಯಲ್ಲಿ ತನ್ನ ಯೋಜಿತ ನಗರ ವಿನ್ಯಾಸ, ಸಮಮಟ್ಟದ ಇಟ್ಟಿಗೆ ಮನೆಗಳು ಮತ್ತು ಸುಧಾರಿತ ಒಳಚರಂಡಿ ವ್ಯವಸ್ಥೆಗಳಿಗಾಗಿ ಪ್ರಸಿದ್ಧವಾಗಿದೆ. ಪ್ರಾಚೀನ ಚೀನದಲ್ಲಿ ಕಂಚಿನ ನಿಪುಣ ತಯಾರಿಕೆ, ರಥಯುದ್ಧ ಮತ್ತು ಪ್ರಮುಖ ನಗರಗಳ ನಿರ್ಮಾಣ ಕಂಡುಬಂತು. ಏಜಿಯನ್ ಪ್ರದೇಶದಲ್ಲಿ ಮಿನೋನ್ ಮತ್ತು ಮೈಸಿನಿಯನ್ ನಾಗರಿಕತೆಗಳು ವ್ಯಾಪಾರ ಮತ್ತು ಸಮುದ್ರಯಾನದ ಮೂಲಕ ಅಭಿವೃದ್ಧಿ ಹೊಂದಿದವು.

ಈ ಕಾಲದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಲೇಖನ ಪದ್ಧತಿಯ ಆವಿಷ್ಕಾರ. ವ್ಯಾಪಾರ, ತೆರಿಗೆ ಮತ್ತು ಕೃಷಿ ದಾಖಲೆಗಳನ್ನು ಉಳಿಸಿಕೊಳ್ಳಲು ಅಗತ್ಯವಿದ್ದ ಕಾರಣ ಬರವಣಿಗೆ ವ್ಯವಸ್ಥೆಗಳು ರೂಪುಗೊಂಡವು. ಮೆಸೊಪೊಟೇಮಿಯಾದಲ್ಲಿ ಕ್ಯೂನಿಫಾರ್ಮ್ ಮತ್ತು ಈಜಿಪ್ಟ್‌ನಲ್ಲಿ ಹೈರೋಗ್ಲಿಫ್ಸ್ ಎಂಬ ಲೇಖನ ಪದ್ಧತಿಗಳು ಅಭಿವೃದ್ಧಿ ಹೊಂದಿದವು. ಬರವಣಿಗೆ ವ್ಯವಸ್ಥೆಗಳು ದೊಡ್ಡ ರಾಜ್ಯಗಳನ್ನು ನಿರ್ವಹಿಸಲು ಸಹಾಯ ಮಾಡಿದ್ದು, ಧಾರ್ಮಿಕ ನಂಬಿಕೆಗಳು ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗಳಿಗೆ ಉಳಿಸಿವೆ. ಈ ಕಾಲದಲ್ಲಿ ಗಣಿತ, ಖಗೋಳಶಾಸ್ತ್ರ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿಯೂ ಮಹತ್ವದ ಪ್ರಗತಿ ಕಂಡುಬಂದಿತು.

ಕಂಚು ಯುಗದಲ್ಲಿ ದೂರವ್ಯಾಪಿ ವ್ಯಾಪಾರ ಜಾಲಗಳು ಬೆಳೆಯಲು ಆರಂಭವಾಯಿತು. ಟಿನ್ ಮೊದಲಾದ ಮೂಲವಸ್ತುಗಳು ಎಲ್ಲೆಡೆ ಲಭ್ಯವಾಗದ ಕಾರಣ ವಿವಿಧ ಪ್ರದೇಶಗಳ ನಡುವೆ ವ್ಯಾಪಾರ ನಡೆಯಿತು. ಧಾತುಗಳು, ವಸ್ತ್ರಗಳು ಮತ್ತು ಐಶ್ವರ್ಯ ವಸ್ತುಗಳ ವಿನಿಮಯದ ಜೊತೆಗೆ ಸಂಸ್ಕೃತಿ ಮತ್ತು ಆಲೋಚನೆಗಳೂ ಹರಡಿದವು. ಇದರಿಂದ ಕಂಚು ಯುಗದ ಜಗತ್ತು ಪರಸ್ಪರ ಸಂಪರ್ಕ ಹೊಂದಿದ ಜಾಲವಾಗಿ ರೂಪುಗೊಂಡಿತು.

ಆದರೆ, ಈ ಪ್ರಗತಿಯ ನಡುವೆಯೇ ಕಂಚು ಯುಗವು ಸುಮಾರು ಕ್ರಿ.ಪೂ. 1200ರ ವೇಳೆಗೆ ಅಂತ್ಯ ಕಂಡಿತು. ಬರಡು, ಆಹಾರ ಕೊರತೆ ಮತ್ತು ಪ್ರಕೃತಿ ವಿಕೋಪಗಳು ಕೃಷಿಯನ್ನು ಹಾನಿಗೊಳಿಸಿದವು. ಜೊತೆಗೆ, ಸಮುದ್ರ ಜನರು (Sea Peoples) ಎಂದು ಕರೆಯಲ್ಪಡುವ ಗುಂಪುಗಳ ದಾಳಿಗಳು ವ್ಯಾಪಾರ ಮಾರ್ಗಗಳನ್ನು ಹಾಳುಮಾಡಿದವು. ಈ ನಾಗರಿಕತೆಗಳು ಪರಸ್ಪರ ಅವಲಂಬಿತವಾಗಿದ್ದರಿಂದ, ಒಂದರ ಪತನ ಮತ್ತೊಂದರ ಮೇಲೂ ಪರಿಣಾಮ ಬೀರಿತು. ಈ ಘಟನೆಗಳನ್ನು “ವ್ಯವಸ್ಥಾತ್ಮಕ ಕುಸಿತ” (systems collapse) ಎಂದು ಕರೆಯಲಾಗುತ್ತದೆ. ಇದರಿಂದ ಕಂಚು ಯುಗ ಮುಕ್ತಾಯಗೊಂಡು ಕಬ್ಬಿಣ ಯುಗ ಆರಂಭವಾಯಿತು.

ಒಟ್ಟಿನಲ್ಲಿ, ಕಂಚು ಯುಗವು ಮಾನವ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳನ್ನು ತಂದ ಕಾಲವಾಗಿದ್ದು, ನಗರಗಳ ಅಭಿವೃದ್ಧಿ, ಬರವಣಿಗೆ, ವ್ಯಾಪಾರ ಮತ್ತು ಶಕ್ತಿಶಾಲಿ ನಾಗರಿಕತೆಗಳ ಉದಯಕ್ಕೆ ಕಾರಣವಾಯಿತು. ಇದರ ಕೊಡುಗೆಗಳು ಮುಂದಿನ ಮಾನವ ಅಭಿವೃದ್ಧಿಗೆ ಗಟ್ಟಿ ಅಡಿಪಾಯವಾಯಿತು.

  1. ಕಬ್ಬಿಣ ಯುಗ (Iron age)

ತಾಮ್ರ ಶಿಲಾಯುಗದ ಸಂಸ್ಕೃತಿಯ ನಂತರ ಕಬ್ಬಿಣ ಯುಗ ಆರಂಭವಾಯಿತು. ಈ ಯುಗದ ಸಂಸ್ಕೃತಿಯ ನೆಲೆಗಳು ಕರ್ನಾಟಕ, ಆಂಧ್ರ, ತಮಿಳುನಾಡು ಹಾಗೂ ಕೇರಳಗಳಲ್ಲಿ ದೊರಕಿವೆ. ಬ್ರಹ್ಮಗಿರಿಯಲ್ಲಿ ಸರ್ ಮಾರ್ಟಿಮರ್ ವೀಲರ್ ನಡೆಸಿದ ಉತ್ಖನನನದಿಂದ ಈ ಸಂಸ್ಕೃತಿಯು ಕಬ್ಬಿಣ ಯುಗದ್ದು ಎಂಬ ತೀರ್ಮಾನಕ್ಕೆ ಬರಲಾಯಿತು. ನಂತರ ಕರ್ನಾಟಕದ ಮಸ್ಕಿ, ಟಿ.ನರಸೀಪುರ, ಜಡಿಗೇನಹಳ್ಳಿ, ಹೆಮ್ಮಿಗೆ, ಹಳ್ಳೂರು, ತಡಕನಹಳ್ಳಿ, ತೇರದಾಳ ಮೊದಲಾದ ಕಡೆ, ಆಂಧ್ರದ ನಾಗಾರ್ಜುನಕೊಂಡ, ಕೇರಳದ ಪೋಕಾ, ತಮಿಳುನಾಡಿನ ಸಾಣೂರು, ಅಮೃತ ಮಂಗಲಂ, ಸಂಗಮೇಡು ಮೊದಲಾದ ಪ್ರದೇಶಗಳಲ್ಲಿ ನಡೆಸಿದ ಉತ್ಖನನನಗಳಿಂದ ಬೃಹತ್ ಶಿಲಾ ಗೋರಿಗಳು ಬೆಳಕಿಗೆ ಬಂದ ಹಾಗೆಯೇ ಮಹಾರಾಷ್ಟ್ರದ ತೇಕವಾಡಾ, ವಿದರ್ಭ ಪ್ರದೇಶದ ಟಾಕಲಘಾಟ, ಮಾಹುರ್ಜರಿ, ನಯಾಕುಂಡ, ಬೋರಗಾಂವ, ಭಾಗಿ ಮೊಹರಿ ಮೊದಲಾದ ಕಡೆ ಶಿಲಾಗೋರಿಗಳು ಸಿಕ್ಕಿವೆ. ಈ ಶಿಲಾಗೋರಿಗಳನ್ನು ಡಾ|| ವಿ.ಡಿ ಕೃಷ್ಣಸ್ವಾಮಿ, ಡಾ|| ಅ ಸುಂದರ, ಡಾ|| ಬಿ.ಕೆ ಗುರುರಾಜ್‌, ಡಾ|| ಬಿ. ನರಸಿಂಹಯ್ಯ, ಆರ್ ಮೋಹಂತಿ ಮೊದಲಾದವರು ಅಧ್ಯಯನ ಮಾಡಿ ವರದಿ ನೀಡಿದ್ದಾರೆ.

ಜೀವನ ಶೈಲಿ:  ಪಶುಸಂಗೋಪನೆ, ಬೇಟೆಗಾರಿಕೆ, ಬೇಸಾಯ ಮೊದಲಾದವುಗಳು ಕಬ್ಬಿಣ ಯುಗದ ಜನರ ಪ್ರಮುಖ ಉದ್ಯೋಗಗಳಾಗಿದ್ದವು. ಇವರು ತಯಾರಿಸಿದ ಕಬ್ಬಿಣ, ಉಕ್ಕಿನ ನೇಗಿಲ ಕುಳ, ಕುಡಗೋಲು ಮೊದಲಾದವು ಕೃಷಿ ಕಾರ್ಯದಲ್ಲಿ ಬಳಕೆಯಾಗುತ್ತಿದ್ದವು. ಇವರ ಕಾಲದ ದೊಡ್ಡ ಉದ್ದಿಮೆಯೆಂದರೆ ಕಬ್ಬಿಣದ ಅದಿರಿನಿಂದ ಲೋಹ ತಯಾರಿಸುವುದು ಹಾಗೂ ಕಮ್ಮಾರಿಕೆಗೆ ಬೇಕಾದ ಆಯುಧಗಳನ್ನು ತಯಾರಿಸುವುದು ಕಬ್ಬಿಣದ ಜೊತೆಗೆ ಕಲ್ಲಿನ ಉಪಕರಣಗಳನ್ನು ಬಳಸುತ್ತಿದ್ದರು.

ಮನೆ ಬಳಕೆಯಲ್ಲಿ ಕಬ್ಬಿಣ ಹಾಗೂ ಉಕ್ಕಿನಿಂದ ತಯಾರಿಸಿದ ಉಪಕರಣಗಳಾದ ಅಡ್ಡಣಿಗೆ, ಕೈ ನೇಗಿಲ ಕುಳ, ಕುಡಗೋಲು, ಚಾಕು, ಕತ್ತಿ, ಭಲ್ಲೆ, ಈಟಿ, ಕೊಡಲಿ, ಬಿಲ್ಲುಬಾಣ ಮೊದಲಾದವುಗಳನ್ನು ಉಪಯೋಗಿಸುತ್ತಿದ್ದರು. ವಿವಿಧ ಆಕಾರದ ಬಟ್ಟಲುಗಳು, ತಪ್ಪಲಿಗಳು, ಕೊಡಗಳು ಉಂಗುರಾಕಾರದ ಅಡ್ಡಣೆಗೆಗಳು ಗೂಡಾಣಗಳು ಹಾಗೂ ಬಾನಿಗಳಂತ ಪಾತ್ರೆಗಳಿದ್ದವು.

ಇವರು ಶಂಕದಿಂದ, ಮಣ್ಣಿನಿಂದ, ಚಿನ್ನದಿಂದ ಮಾಡಿದ ಮಣಿಗಳನ್ನು ಮಾಲೆಗಳನ್ನು ಸಹ ಧರಿಸುತ್ತಿದ್ದರು.  ಶಂಕಗಳ ಮಾಲೆಯನ್ನು ಸಹ ಧರಿಸುತ್ತಿದ್ದರು. ಮಣ್ಣಿನ ಮಣಿಗಳು ಅಡಿಕೆ ಗಾತ್ರದಲ್ಲಿದ್ದವು. ಶಂಖಗಳಿಗೆ ತೂತುಗಳನ್ನು ಮಾಡಿದ್ದರು.  

ಶವಸಂಸ್ಕಾರ ಪದ್ಧತಿ:  ಶವ ಸಂಸ್ಕಾರದ ನೂರಾರು ಕಲ್ಗೋರಿಗಳು ದೊರಕಿವೆ. ಒಂದೊಂದು ಗೋರಿಗಳಲ್ಲಿ ಒಂದಕ್ಕಿಂತ ಹೆಚ್ಚು ಅಸ್ತಿಪಂಜರಗಳು ದೊರಕಿವೆ. ಕಬ್ಬಿಣ ಶಿಲಾಯುಗದ ಜನರು  ಅಂಡಾಕಾರದಲ್ಲಿ ಗುಂಡಿಯನ್ನು ತೋಡಿ ನೆಲದ ಮೇಲೆ ಬೂದಿಯನ್ನು ಹಾಕಿ ಅದರ ಮೇಲೆ ಶವವನ್ನು ಅಡ್ಡಲಾಗಿ ಮಲಗಿಸಿ ಶವದ ಜೊತೆ ಎರಡು ಪಾತ್ರಗಳನ್ನು ಇಡುತ್ತಿದ್ದರು. ಇನ್ನೊಂದು ಬಗೆಯ ಗೋರಿಯಲ್ಲಿ ಸಂಗ್ರಹಿಸಿದ ಅಸ್ತಿ ಅವಶೇಷಗಳನ್ನು ಮಣ್ಣಿನ ಪಾತ್ರೆಯೊಳಗೆ ಇಟ್ಟು ಅದನ್ನು ಗುಂಡಿಯೊಳಗೆ ಹಾಕಿ ಮಣ್ಣಿನಿಂದ ಮುಚ್ಚಿ ಗುಂಡಿಯ ಬಾಯಿ ಸುತ್ತಲೂ ಚಿಕ್ಕಚಿಕ್ಕ ಕಲ್ಲುಗಳನ್ನು ಇಟ್ಟು ವೃತ್ತದೊಳಗೆ ಕೆಲವು ಕಲ್ಲಿನ ಚೂರುಗಳನ್ನು ಹಾಕಲಾಗುತ್ತದೆ.

 ಕಾಲಮಾನ:  ಈ ಶಿಲಾಯುಗದ ಕಾಲಮಾನ ಕ್ರಿ.ಪೂ 1000 ದಿಂದ 900 ಎಂದು ತರ್ಕಿಸಲಾಗಿದೆ. ಕರ್ನಾಟಕದ ಬನಹಳ್ಳಿಯ ಇಂಗಾಲದ 14ರ ಕಾಲಮಾನದ ಕ್ರಿಸ್ತಪೂರ್ವ 600 ರಿಂದ ಕ್ರಿಸ್ತಶಕ 1ನೇ ಶತಮಾನ ಎಂದು ದೃಢಪಡಿಸಲಾಗಿದೆ.

ಭಾರತ ಮತ್ತು ಕರ್ನಾಟಕದಲ್ಲಿ ಶಿಲಾಯುಗದ ಸಂಶೋಧನೆ

ಭಾರತದಲ್ಲಿ ಶಿಲಾಯುಗದ ಸಂಶೋಧನೆಗೆ Robert Bruce Foote ಪ್ರಮುಖ ಕೊಡುಗೆ ನೀಡಿದ್ದಾರೆ.

ಕರ್ನಾಟಕದಲ್ಲಿ:

  • R. V. Joshi — ಮಲಪ್ರಭಾ ನದೀ ತೀರದಲ್ಲಿ ಸಂಶೋಧನೆ
  • Sampath Iyengar — ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿ
  • S. Seshadri — ಮಂಡ್ಯ ಜಿಲ್ಲೆಯ Kaveri River ತೀರದಲ್ಲಿ ಆವಿಷ್ಕಾರ
  • Paddayya — ಹುಣಸಗಿ ಮತ್ತು ಸಾಲವಡಗಿ ಪ್ರದೇಶಗಳಲ್ಲಿ ಅಧ್ಯಯನ

ಇದಲ್ಲದೆ, ಬಾದಾಮಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ ಮತ್ತು ಚಿತ್ರದುರ್ಗ ಪ್ರದೇಶಗಳಲ್ಲಿ ಶಿಲಾಯುಗದ ಅವಶೇಷಗಳು ಕಂಡುಬಂದಿವೆ.

ಉಪಸಂಹಾರ

ಶಿಲಾ ಯುಗದ ಅಧ್ಯಯನವು ಮಾನವನ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಸಮಾಜದ ರೂಪುಗೊಳಿಸುವಿಕೆಯನ್ನು ತಿಳಿಯಲು ಬಹಳ ಮುಖ್ಯವಾಗಿದೆ. ಸರಳ ಕಲ್ಲು ಉಪಕರಣಗಳಿಂದ ಪ್ರಾರಂಭಿಸಿ, ಲೋಹ ಉಪಕರಣಗಳ ಬಳಕೆಯವರೆಗೆ ಮಾನವನು ತನ್ನ ಜೀವನವನ್ನು ಕ್ರಮೇಣ ಸುಧಾರಿಸಿಕೊಂಡಿದ್ದಾನೆ.

ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ನಡೆದ ಪುರಾತತ್ತ್ವ ಸಂಶೋಧನೆಗಳು ಜಗತ್ತಿನ ಇತಿಹಾಸ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿವೆ.

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತತ್ವ ಶಾಸ್ತ್ರದ ವಿಧಗಳು (Kinds of Archaealogy)

ಪುರಾತನ ಅವಶೇಷಗಳನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವುದನ್ನು ಪುರಾತತ್ವಶಾಸ್ತ್ರ ಎಂದು ಕರೆಯಲಾಗಿದೆ. ಭೂಮಿಯ ಮೇಲೆ ವಾಸ ಮಾಡಿದ ಮಾನವ ಸಮಾಜ ತಾನು ಬಾಳಿ ಬದುಕಿದ ಸಮಾಜದಲ್ಲಿ ತಾನು ಉಪಯೋಗಿಸುತ್ತಿದ್ದ ದಿನನಿತ್ಯದ ವಸ್ತುಗಳು, ನಂಬಿಕೆಗಳು, ಸಾಮಾಜಿಕ ಕುರುಹುಗಳು, ವಸ್ತ್ರಗಳು, ಆಭರಣಗಳು, ಸಲಕರಣೆಗಳು ಹಾಗೂ ಆಯುಧಗಳನ್ನು ಬಿಟ್ಟು ಹೋಗುತ್ತಾನೆ. ಈತ ಬಿಟ್ಟು ಹೋಗಿದ್ದ ಕುರುಹುಗಳು ಸ್ಪಷ್ಟ ಹಾಗೂ ಪರಿಪೂರ್ಣವಾಗಿರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಲಿಖಿತ ಆಧಾರಗಳು ಇಲ್ಲದಿದ್ದಾಗಲೂ ಸಹ ಕೆಲವು ವಿಶಿಷ್ಟ ಅಧ್ಯಯನಗಳ ವಿಧಾನದಿಂದ ಈ ಕುರುಹುಗಳನ್ನು ಒರೆಗಲ್ಲಿಗೆ ಹಚ್ಚಿ ಆಯಾ ಸಮಾಜದ ಸಂಸ್ಕೃತಿ ವಿವರಗಳನ್ನು ಅಸ್ಪಷ್ಟವಾಗಿ ಚಿತ್ರಿಸಲು ಸಾಧ್ಯ ಎಂಬ ಸಂಗತಿಗಳನ್ನು ಪುರಾತತ್ವಶಾಸ್ತ್ರ ಮನವರಿಕೆ ಮಾಡಿಕೊಡುತ್ತದೆ. ಪುರಾತತ್ವಶಾಸ್ತ್ರವು ಪ್ರಮುಖವಾಗಿ ಎರಡು ಭಾಗಗಳನ್ನು ಒಳಗೊಂಡಿದೆ. ಅವುಗಳೆಂದರೆ.

  1. ಜನಾಂಗ ವಿವರಣ ಪುರಾತತ್ವಶಾಸ್ತ್ರ
  2. ಸಮುದ್ರ ತಳದ ಪುರಾತತ್ವಶಾಸ್ತ್ರ

1. ಜನಾಂಗ ವಿವರಣ ಪುರಾತತ್ವ ಶಾಸ್ತ್ರ (Ethno Archaeology): ಜನಾಂಗ ವಿವರಣ ಪುರಾತತ್ವಶಾಸ್ತ್ರವು ಭಾರತದಲ್ಲಿ ಇತ್ತೀಚಿಗೆ ಹೆಚ್ಚು ಪ್ರಚಲಿತವಾಗುತ್ತಿದೆ. ಔದ್ಯೋಗಿಕ ಕ್ರಾಂತಿಯ ನಂತರ ಪ್ರಗತಿಯ ಪ್ರಭಾವಕ್ಕೆ ಸಿಲುಕಿ ನಲುಗದೆ ಸಂಪ್ರದಾಯ ಹಾಗೂ ಸಂಸ್ಕೃತಿಗಳನ್ನು ಶುದ್ಧವಾಗಿ ಉಳಿಸಿಕೊಂಡು ಬಂದಿರುವ ಆದಿವಾಸಿ ಜನಾಂಗದ ಮತ್ತು ವಲಸೆ ಜನಾಂಗಗಳ ಕುರಿತು ಅಧ್ಯಯನ ಮಾಡುವುದು ಪುರಾತತ್ವ ಶಾಸ್ತ್ರದ ಪ್ರಮುಖ ಗುರಿಯಾಗಿದೆ. ಹೀಗಾಗಿ ಪುರಾತತ್ವ ಅಧ್ಯಯನದಿಂದ ಗುಡ್ಡಗಾಡು ಜನರ ನಿಜವಾದ ಸಂಸ್ಕೃತಿಯ ದಾಖಲೆಗಳು ಬೆಳಕಿಗೆ ಬಂದಿವೆ. ಆದಿವಾಸಿ ಜನರು ಪ್ರಾಣಿಗಳನ್ನು ಬೇಟೆಯಾಡುವ ರೀತಿ, ವಾಸಸ್ಥಳಕ್ಕೆ ಗುಡಿಸಲುಗಳನ್ನು ಕಟ್ಟಿಕೊಳ್ಳುವ ಪರಿ, ಅವುಗಳ ಸಾಮಾಜಿಕ ರಚನೆ ಮೊದಲಾದವುಗಳನ್ನು ಅಧ್ಯಯನದಿಂದ ತಿಳಿದುಕೊಂಡು ಪುರಾತತ್ವ ಅವಶೇಷಗಳು ನೀಡುವ ಚಿತ್ರಗಳನ್ನು ಬಳಸಿಕೊಂಡು ನಿಖರವಾದ ಮಾಹಿತಿಯನ್ನು ವರದಿಯ ಮೂಲಕ ಹೊರಹಾಕುವುದು ಪುರಾತತ್ವ ಶಾಸ್ತ್ರದ ಮೊದಲ ಆದ್ಯತೆಯಾಗಿದೆ. ಡೆಕ್ಕನ್ ಕಾಲೇಜಿನ ಸಿಬ್ಬಂದಿಯು ಆಹಾರ್, ನಾವಾತೋಲಿ ಹಾಗೂ ತೆಕ್ಕಲಕೋಟೆ ಸ್ಥಳಗಳನ್ನು ಉತ್ಖನನ ಮಾಡುವುದರ ಜೊತೆಗೆ ಅದರ ಸುತ್ತಮುತ್ತ ವಾಸಿಸುತ್ತಿದ್ದ ಜನರ ಅಧ್ಯಯನವನ್ನು ಮಾಡಿದರು. ಮಧ್ಯಪ್ರದೇಶದ ಬಸ್ತರ ಪ್ರದೇಶದ ಜನಾಂಗಗಳು ಮತ್ತು ಒಡಿಸ್ಸಾದ ಬೋಡೋ ಜನಾಂಗಗಳ ಹಾಗೂ ಆಂಧ್ರದ ಯಾನಾಡಿ ಜನಾಂಗದ ಜೀವನ ಶೈಲಿಯ ಕುರಿತು ಸಹ ಅಧ್ಯಯನವನ್ನು ಮಾಡಲಾಗಿದೆ.

2. ಜಲತಳ ಪುರಾತತ್ವ ಶಾಸ್ತ್ರ(Marine Archaeology): ಜಲತಳ ಅಥವಾ ಸಮುದ್ರತಳ ಪುರಾತತ್ವಶಾಸ್ತ್ರ ಎಂದು ಕರೆಯಲಾಗುವ ಶಾಸ್ತ್ರವು ಸಮುದ್ರ ಹಾಗೂ ಸರೋವರಗಳ ತಳಭಾಗದಲ್ಲಿ ಕಂಡುಬರುವ ಪ್ರಾಚೀನ ನೆಲೆಗಳು ಹಾಗೂ ಮುಳುಗಡೆ ಹೊಂದಿರುವ ಹಡಗುಗಳನ್ನು ಗುರುತಿಸಿ ಅಧ್ಯಯನ ಮಾಡುತ್ತದೆ. ಜಲತಳ ಅಧ್ಯಯನವು ಪ್ರಾಚ್ಯವಸ್ತು ಅಧ್ಯಯನಕ್ಕಿಂತ ಭಿನ್ನವಾಗಿದೆ. ಇದು ಜಲತಳದ ನೆಲೆಯನ್ನು ಗುರುತಿಸುವ, ಉತ್ಖನನ ಮಾಡುವ ಹಾಗೂ ಪ್ರಾಚೀನ ಅವಶೇಷಗಳನ್ನು ದಾಖಲು ಮಾಡುವ ವಿಶಿಷ್ಟ ತಂತ್ರಗಳನ್ನು ʻʻ ಸ್ಕ್ಯೂಬಾ ಡೈವಿಂಗ್‌ʼʼ ಎಂಬ ತಂತ್ರಜ್ಞಾನದಿಂದ ರೂಪಿಸಿಕೊಳ್ಳಲಾಗಿದೆ. ಜಮೈಕಾದ ಪೋರ್ಟ್ ರಾಯಲ್ ಉತ್ಖನನಗಳು, ಉತ್ತರ ಸೈಪ್ರಸ್‌ನ ಕೈರೇನಿಯಾ ಹಡಗಿನ ಪುನಾರಚನೆ ಮುಂತಾದ ಸಾಧನೆಗಳು ಸ್ಕ್ಯೂಬಾ ಡೈವಿಂಗ್‌ ತಂತ್ರಜ್ಞಾನದಿಂದಲೇ ಪತ್ತೆ ಹಚ್ಚಲಾಯಿತು.

ಭಾರತದಲ್ಲಿಯೂ ಸಹ ಜಲತಳ ಪುರಾತತ್ವಶಾಸ್ತ್ರ ಇತ್ತೀಚೆಗೆ ಬೆಳಕಿಗೆ ಬಂದು ಅದರಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ಇದಕ್ಕಾಗಿ ಗೋವಾದಲ್ಲಿ ʻʻಭಾರತೀಯ ಸಾಗರ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸಲಾಗಿದೆʼʼ. ಇದು ʻʻಸಾಗರ ಪುರಾತತ್ವ ಘಟಕದ ಮೂಲಕ ಎಸ್‌. ಆರ್‌. ರಾವ್‌ ಅವರ ಅಧ್ಯಕ್ಷತೆಯಲ್ಲಿ ಭಾರತದ ಕರಾವಳಿ ಗುಂಟ ಸಂಶೋಧನೆ ಮಾಡಿ ಸುಮಾರು 200 ಹಡಗುಗಳು ಸಮುದ್ರದಲ್ಲಿ ಮುಳುಗಡೆಯಾದ ಕುರಿತು ನಿಖರ ಮಾಹಿತಿಗಳನ್ನು ಕಲೆ ಹಾಕಲಾಯಿತು. ನಂತರ ಗುಜರಾತಿನ ಕರಾವಳಿಯಲ್ಲಿ ದ್ವಾರಕಾ ನಗರದ ಅವಶೇಷಗಳನ್ನು ಗುರುತಿಸಲಾಗಿದೆ. 1983ರಲ್ಲಿ ಸ್ಕ್ಯೂಬಾ ಡೈವಿಂಗ್‌ ಮೂಲಕ ದ್ವಾರಕ ಹಾಗೂ ಬೇಟ್‌ ದ್ವಾರಕಗಳಲ್ಲಿ ಜಲತಳ ಅನ್ವೇಷಣೆ ಮಾಡಲು ಅರಬ್ಬಿ ಸಮುದ್ರದಲ್ಲಿ ಸುಮಾರು 10ಮೀಟರ್ ಆಳದಲ್ಲಿ ಇಳಿದು ಕಟ್ಟಡಗಳು ಹಾಗೂ ಕೋಟೆ ಕೊತ್ತಲುಗಳನ್ನು ಕಂಡು ಹಿಡಿಯಲಾಯಿತು. ಪ್ರಾಚೀನ ಕಾಲದ ತ್ರಿಕೋನಾಕಾರದ ಕಲ್ಲಿನ ಲಂಗರುಗಳು ಇಲ್ಲಿ ಪತ್ತೆಯಾಗಿವೆ. ಇವುಗಳು ಕ್ರಿಸ್ತಪೂರ್ವ 14 ನೇ ಶತಮಾನದ ಸೈಪ್ರಸ್‌ ಹಾಗೂ ಸಿರಿಯಾದ ಲಂಗರುಗಳನ್ನು ಹೋಲುತ್ತವೆ. ಬೇಟ್‌ ದ್ವಾರಕಾದಲ್ಲಿ ಸಿಕ್ಕ ಉತ್ತರ ಹರಪ್ಪಾ ಕಾಲದ ಮುದ್ರೆಯ ಮೇಲೆ ಮೂರು ತಲೆಯ ಪ್ರಾಣಿಯ ಚಿತ್ರವಿದೆ. ಇದು ಪರ್ಶಿಯನ್‌ ಕೊಲ್ಲಿಯ ಬೆಹ್ರನ್‌ನಲ್ಲಿ   ದೊರಕಿರುವ ಮುದ್ರೆಗಳನ್ನು ಹೋಲುತ್ತದೆ. ಇಲ್ಲಿನ ಸಾಗರ ತಳದಲ್ಲಿ ದೊರೆತ ಮಣ್ಣಿನ ಪಾತ್ರೆಯ ಮೇಲೆ ವಿಕಸಿತ ಹರಪ್ಪ ನೆಲೆಯ ಲಿಪಿಯ ಚಿತ್ರವಿದೆ. ಈ ಎಲ್ಲಾ ಪುರಾತತ್ವ ವಸ್ತುಗಳು ಬೇಟ್‌ ದ್ವಾರಕಾ ನೆಲೆ ಕ್ರಿಸ್ತಪೂರ್ವ 1500 ರಷ್ಟು ಹಿಂದೆ ಅಸ್ತಿತ್ವದಲ್ಲಿದ್ದು ತದನಂತರ ಸಮುದ್ರ ಪಾತಳಿಯ ಹೆಚ್ಚಳದಿಂದ ಮುಳುಗಡೆಯಾಗಿರ ಬಹುದೆಂದು ಉಲ್ಲೇಖಿಸಲಾಗಿದೆ.

ಇದೇ ರೀತಿ ತಮಿಳುನಾಡು ಕಾವೇರಿಪಟ್ಲಂ ಪ್ರದೇಶದಲ್ಲಿ ಅನ್ವೇಷಣೆ ಮಾಡಿ ಅನೇಕ ಅವಶೇಷಗಳನ್ನು ಹೊರ ತಗೆಯಲಾಗಿದೆ.

ಆಳವಾಗಿಲ್ಲದ ಸಾಗರ ತಳದ ನೆಲೆಯನ್ನು ವ್ಯೋಮ್‌ ಛಾಯಾಚಿತ್ರದ ಸಹಾಯದಿಂದ ಕಂಡುಹಿಡಿಯ ಬಹುದಾಗಿದೆ. ಒಂದು ವೇಳೆ ಅಲ್ಲಿ ಹಡಗುಗಳು ಮುಳಗಡೆಯಾದ ಕುರುಹುಗಳು ಇದ್ದರೆ ವ್ಯೋಮ ಛಾಯಾಚಿತ್ರ ಅದನ್ನು ಸೆರೆಹಿಡಿದು ವರದಿ ಮಾಡುತ್ತದೆ. ಸಾಗರದ ಆಳ ಹೆಚ್ಚಿದಂತೆ ವ್ಯೋಮ ಛಾಯಾಚಿತ್ರವು ಕೆಲಸ ಮಾಡಲಾರದು.

ಸಾಗರದ ಆಳದಲ್ಲಿ ಮುಳುಗಡೆಯಾಗಿರುವ ವಸ್ತುಗಳನ್ನು ಕಂಡುಹಿಡಿಯಲು ಪ್ರತಿಧ್ವನಿ ನಿನಾದಕ ಮತ್ತು ಆಕಾಸ್ಟಿಕ್‌ ವ್ಯವಸ್ಥೆ ಎಂಬ ಎರಡು ವೈಜ್ಞಾನಿಕ ಸಾಧನಗಳು ಸಹಕಾರಿಯಾಗಿವೆ. ಹಡಗು ಮುಳುಗಡೆಯಾದ ಸ್ಥಳದ ಮೇಲೆ ಈ ಉಪಕರಣ ಹಾಯ್ದು ಹೋಗುವಾಗ ನಿನಾದಕ ಹೊರಡಿಸುವ ಪ್ರತಿಧ್ವನಿಯಲ್ಲಿ ತೀವ್ರ ಹೆಚ್ಚಳ ಕಂಡು ಬರುತ್ತದೆ. ಇದರಿಂದ ಸಮುದ್ರ ತಳದಲ್ಲಿನ ಹಡಗುಗಳ ಅವಶೇಷಗಳನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಸಮುದ್ರದಲ್ಲಿ ಪೂರ್ತಿ ಮುಳುಗಿಹೋಗಿರುವ ವಸ್ತುಗಳನ್ನು ಗುರುತಿಸುವುದಕ್ಕೆ ʻʻ ಓರ್‌ ಪ್ರೊ ಫೈಲರ್‌ʼʼ ಎಂಬ ಉಪಕರಣವನ್ನು ಬಳಕೆ ಮಾಡಲಾಗುತ್ತದೆ. ಈ ಉಪಕರಣವು ಎಷ್ಟು ಆಳದಲ್ಲಿ ಬೇಕಾದರೂ ತೂರಿಕೊಳ್ಳಬಲ್ಲದು. ಸಮುದ್ರದಲ್ಲಿ ಇನ್ನೂ ಹೆಚ್ಚಿನ ಆಳದಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚಲು ʻʻ ಬೂಮರ್‌ ಹಾಗೂ ಸ್ವಾರ್ಕರ್‌” ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇವುಗಳು ತೀವ್ರವಾಗಿ ಶೋಧ ಕಾರ್ಯವನ್ನು ಮಾಡಿ ವಸ್ತುಗಳನ್ನು ಕಂಡು ಹಿಡಿಯುತ್ತವೆ.

ಹಾಗೆಯೇ ʻಸೈಡ್ ಸ್ಕ್ಯಾನ್ ಸೋನಾರ್ʼ ಎಂಬ ಉಪಕರಣವು ಸಮುದ್ರದ ತಳದಲ್ಲಿನ ವಸ್ತುಗಳ ಆಕೃತಿಗಳನ್ನು ಮತ್ತು ಅವುಗಳ ವಿಸ್ತಾರಗಳನ್ನು ಕಂಡುಹಿಡಿಯುವ ಪ್ರಮುಖ ಉಪಕರಣವಾಗಿದೆ. ಸರ್ವೇಕ್ಷಣ ಮಾಡುವ ಪಥದ ಎರಡೂ ಬದಿಗಳಲ್ಲಿನ ಲಕ್ಷಣಗಳನ್ನು ಸಹ ದಾಖಲು ಮಾಡುತ್ತದೆ. ಮುಳುಗಡೆಯಾಗಿರುವ ಹಡಗುಗಳು, ಲಂಗರುಗಳು ಹಾಗೂ ಕಟ್ಟಡ ರಚನೆಯ ಅವಶೇಷಗಳನ್ನು ಇದರ ಸಹಾಯದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ.

    ಭಾರತಕ್ಕೆ ಆಂಗ್ಲರ ಆಗಮನ

    ಭಾರತಕ್ಕೆ ಆಂಗ್ಲರ ಆಗಮನ

    ಸೆಪ್ಟೆಂಬರ್‌ 22, 1599ರಲ್ಲಿ ಭಾರತದೊಂದಿಗೆ ವ್ಯಾಪಾರಮಾಡಲು ಸಂಸ್ಥೆಯೊಂದನ್ನು ಸ್ಥಾಪಿಸಲು(ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ) ಲಂಡನ್‌ ನಲ್ಲಿ ಸಭೆ ಸೇರಿರುವ ದೃಶ್ಯ ಮೇಲಿದೆ. 

    ಇಂಗ್ಲಿಷ್ ವರ್ತಕರು ಪೂರ್ವದ ದೇಶಗಳೊಂದಿಗೆ ವ್ಯಾಪಾರ ಮಾಡಲು ತುಂಬಾ ಆಸಕ್ತರಾಗಿದ್ದರು. ಪರಿಣಾಮವಾಗಿ ಅವರು ಕ್ರಿಸ್ತಶಕ 1600 ಡಿಸೆಂಬರ್ 31 ರಂದು “ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ” ಯನ್ನು ಸ್ಥಾಪಿಸಿ ಇಂಗ್ಲೆಂಡಿನ ರಾಣಿ ಎಲಿಜೆಬೆತ್‌ಳಿಂದ 15 ವರ್ಷಗಳವರೆಗೆ ವ್ಯಾಪಾರ ಸನ್ನದನ್ನು(ಅನುಮತಿಯನ್ನು) ಪಡೆದರು. ಆರಂಭದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಸಾಂಬಾರ ದ್ವೀಪಗಳೆಂದು ಹೆಸರಾದ ಜಾವಾ, ಸುಮಾತ್ರಾ, ದ್ವೀಪಗಳಿಗೆ ಹಲವು ನೌಕೆಗಳನ್ನು ಕಳುಹಿಸಿತು. ತದನಂತರ 1609ರ ವೇಳೆಗೆ ಆಂಗ್ಲರು ಭಾರತದಲ್ಲಿ ತಮ್ಮ ವ್ಯಾಪಾರಿ ಕೋಠಿಗಳನ್ನು ಸ್ಥಾಪಿಸಲು ಆರಂಭಿಸಿದರು. ಬ್ರಿಟಿಷ್ ಕಂಪನಿಯು ಕ್ಯಾಪ್ಟನ್ ಹಾಕಿನ್ಸ್ ಎಂಬುವವನನ್ನು ಭಾರತಕ್ಕೆ ಕಳುಹಿಸಿತು. ಇಂಗ್ಲೆಂಡಿನ ದೊರೆ ಮೊದಲನೆಯ ಜೇಮ್ಸ್‌ನಿಂದ ಪರವಾನಿಗೆ ಪತ್ರವನ್ನು ಪಡೆದುಕೊಂಡು ಬಂದ ಹಾಕಿನ್ಸ್ ಮೊಗಲ್ ದೊರೆ ಜಹಾಂಗೀರನಿಂದ ಪುರಸ್ಕೃತನಾಗಿ ಕ್ರಿ.ಶ. 1609 ರಿಂದ 1611 ರವರೆಗೆ ಮೊಗಲರ ಆಸ್ಥಾನದಲ್ಲಿದ್ದನು. ನಂತರ ಗುಜರಾತಿನ ಸೂರತ್ ನಗರದಲ್ಲಿ ಬ್ರಿಟಿಷ್ ವ್ಯಾಪಾರಿ ಕೋಠಿಯನ್ನು ಆರಂಭಿಸುವ ಅಭಿಲಾಷೆಯನ್ನು ಚಕ್ರವರ್ತಿಯ ಮುಂದೆ ಇಟ್ಟನು. ಆದರೆ ಮೊಗಲರ ಆಸ್ಥಾನದಲ್ಲಿ ಈಗಾಗಲೇ ತಮ್ಮ ಪ್ರಭಾವವನ್ನು ಸ್ಥಾಪಿಸಿದ್ದ ಪೋರ್ಚುಗೀಸರು ಬ್ರಿಟಿಷರು ಕೋಠಿಯನ್ನು ನಿರ್ಮಿಸಲು ಅವಕಾಶ ಕೊಡಲಿಲ್ಲ. ಈ ವಿಷಯವಾಗಿ ಪೋರ್ಚುಗೀಸರು ಜಹಾಂಗೀರನಿಗೆ ಚಾಡಿ ಹೇಳಿದರು. ಪರಿಣಾಮವಾಗಿ ಜಹಾಂಗೀರ್ ಆಂಗ್ಲರ ಬೇಡಿಕೆಯನ್ನು ತಿರಸ್ಕರಿಸಿದನು.‌

    ಸ್ವಾಲಿ ಯುದ್ಧ (1612)

    ತಮ್ಮ ವ್ಯಾಪಾರಿ ಕೋಠಿಯನ್ನು ನಿರ್ಮಿಸಲು ತಡೆಗೋಡೆಯಾಗಿದ್ದ ಪೋರ್ಚುಗೀಸರನ್ನು ಬಗ್ಗು ಬಡಿಯಲು ಬ್ರಿಟಿಷರು ಸರ್‌ಥಾಮಸ್‌‌ ಬೆಸ್ಟ್ ಎಂಬ ಆಂಗ್ಲ ಸೇನಾನಿಯನ್ನು ಕಳುಹಿಸಿದರು. ಕ್ರಿಸ್ತಶಕ 1612ರಲ್ಲಿ ಥಾಮಸ್‌ಬೆಸ್ಟ್ ಭಾರತಕ್ಕೆ ಬಂದು ಪೋರ್ಚುಗೀಸರನ್ನು ಸ್ವಾಲಿ ಎಂಬಲ್ಲಿ ಪರಾಭವಗೊಳಿಸಿದನು. ಬ್ರಿಟಿಷರ ವಿಜಯವು ಸಾಮ್ರಾಟನ ಮೇಲೆ ಪ್ರಭಾವ ಬೀರಿತು. ಮರುವರ್ಷವೇ ಅಂದರೆ 1613ರಲ್ಲಿ ಸೂರತ್‌ನಲ್ಲಿ ಒಂದು ಖಾಯಂ ಕೋಠಿಯನ್ನು ನಿರ್ಮಿಸಲು ಇಂಗ್ಲಿಷರಿಗೆ ಜಹಾಂಗೀರ್ ಪರ್ಮಾನ್(ಅನುಮತಿ ಆದೇಶ) ನೀಡಿದನು. ಹೀಗೆ ಆಂಗ್ಲರು ಸೂರತ್‌ನಲ್ಲಿ ತಮ್ಮ ಪ್ರಥಮ ವ್ಯಾಪಾರಿ ಕೋಠಿಯನ್ನು ನಿರ್ಮಿಸಿದರು.

    ಸರ್‌ ಥಾಮಸ್‌ರೋನ ಭೇಟಿ : ಕ್ರಿಸ್ತಶಕ 1615ರಲ್ಲಿ ಬ್ರಿಟಿಷ್ ಕಂಪನಿ ಸರ್‌ಥಾಮಸ್ ರೋ ಎಂಬಾತನನ್ನು ಮೊಗಲ್ ಚಕ್ರವರ್ತಿ ಜಹಾಂಗೀರನ ಆಸ್ಥಾನಕ್ಕೆ ಕಳುಹಿಸಿತು. ಆತ ಕ್ರಿಸ್ತಶಕ 1615 ರಿಂದ 1618 ರವರೆಗೆ ಭಾರತದಲ್ಲಿದ್ದು ಅಹಮದಾಬಾದ್, ಬ್ರೋಚ್, ಆಗ್ರಾಗಳಲ್ಲಿ ಕೋಠಿಗಳನ್ನು ನಿರ್ಮಿಸಲು ಅನುಮತಿಯನ್ನು ಪಡೆದುಕೊಂಡನು. ಕ್ರಿಸ್ತಶಕ 1668ರಲ್ಲಿ ಮೊದಲು ಪೋರ್ಚುಗೀಸರ ವಸಾಹತುವಾಗಿದ್ದು ಅನಂತರ ಬ್ರಿಟಿಷರಿಗೆ ಸೇರಿದ್ದ ಬೊಂಬಾಯಿ ನಗರವನ್ನು ಇಂಗ್ಲೆಂಡಿನ ದೊರೆ ಚಾರ್ಲ್ಸನು ಕಂಪನಿಯ ಅಧೀನಕ್ಕೆ ವರ್ಗಾಯಿಸಿದನು.

    ಮದ್ರಾಸ್‌ ಸ್ಥಾಪನೆ (1639):

    ಕ್ರಿಸ್ತಶಕ 1639ರಲ್ಲಿ ಪ್ರಾನ್ಸಿಸ್ ಡೇ ಎಂಬಾತನು ಚಂದ್ರಗಿರಿಯ ರಾಜನಿಂದ ಮದ್ರಾಸ್‌ನಗರವನ್ನು ಪಡೆದು ಅಲ್ಲಿ ಬಲವಾದ ಕೋಟೆಯೊಂದನ್ನು ಕಟ್ಟಿಸಿದನು. ಇದನ್ನೇ ಪೋರ್ಟ್‌ಸೇಂಟ್ ಚಾರ್ಜ್ ಎಂದು ಕರೆಯಲಾಯಿತು. ಮುಂದೆ ಇದರ ಸುತ್ತ ಮದ್ರಾಸ್ ನಗರವು ಬೃಹದಾಕಾರವಾಗಿ ಬೆಳೆಯಿತು. ಅದು ಕೋರಮಂಡಲ ಕರಾವಳಿಯಲ್ಲಿ ಬ್ರಿಟಿಷರ ಮುಖ್ಯ ವ್ಯಾಪಾರ ಕೇಂದ್ರವಾಗಿ ಪ್ರಸಿದ್ಧಿಯನ್ನು ಪಡೆಯಿತು. ಪೂರ್ವ ಕರಾವಳಿಯುದ್ದಕ್ಕೂ ಉತ್ತರಾಭಿಮುಖವಾಗಿ ಸಾಗಿ ಕಂಪನಿಯು ಓರಿಸ್ಸಾದ ಹರಿಹರಪುರ ಮತ್ತು ಬಾಲಸೋರ್ ಗಳಲ್ಲಿ ಕೋಠಿಗಳನ್ನು(ದಾಸ್ತಾನು ಕೊಠಡಿ ಮತ್ತು ಕಛೇರಿ) ಸ್ಥಾಪಿಸಿತು. ಬಂಗಾಳದಲ್ಲಿ ಹೂಗ್ಲಿ ಮತ್ತು ಕಾಸೀಂ ಬಜಾರಗಳು, ಬಿಹಾರದಲ್ಲಿ ಪಾಟ್ನಾ ಬ್ರಿಟಿಷರ ವಸಾಹತುಗಳಾಗಿ ಹೆಸರು ಪಡೆದವು.

    ಬಾಂಬೆ ಸ್ಥಾಪನೆ (1720) :

    ಇಂಗ್ಲೆಂಡಿನ ಅರಸನಾದ ಎರಡನೆಯ ಚಾರ್ಲ್ಸ್ ಪೋರ್ಚುಗೀಸರ ರಾಜಕುಮಾರಿ ಕ್ಯಾಥರೀನ್ ಬೃಗಾಂಜಳನ್ನು ಮದುವೆಯಾದನು. ಆಗ ಪೋರ್ಚುಗೀಸರು ಚಾರ್ಲ್ಸ್ ಗೆ ವರದಕ್ಷಿಣೆಯಾಗಿ ಮುಂಬೈ ಪ್ರಾಂತ್ಯವನ್ನು ನೀಡಿದರು. ಎರಡನೆಯ ಚಾರ್ಲ್ಸ್ ನು ನಂತರದ ದಿನಗಳಲ್ಲಿ ಮುಂಬೈ ಪ್ರಾಂತ್ಯವನ್ನು ಬ್ರಿಟಿಷರಿಗೆ ವಾರ್ಷಿಕ 10 ಪೌಂಡುಗಳ ಬಾಡಿಗೆಗೆ ನೀಡಿದನು. ಆರಂಭದಲ್ಲಿ ಒಂದು ಹಳ್ಳಿಯಂತಿದ್ದ ಮುಂಬೈ ಮುಂದೆ ಅದು ಸೂರತ್‌ನ್ನು ಮೀರಿ ಬೆಳೆಯಿತು. ಬ್ರಿಟಿಷರು ಅದರ ಸುತ್ತಲೂ ಒಂದು ಕೋಟೆಯನ್ನು ನಿರ್ಮಿಸಿದರು.

    ಕಲ್ಕತ್ತ ಸ್ಥಾಪನೆ (1696) :

    ಬಂಗಾಳದಲ್ಲಿಯೂ ಬ್ರಿಟಿಷರು ತಮ್ಮ ಪ್ರಭಾವವಲಯವನ್ನು ವಿಸ್ತರಿಸಿದರು. ಚಕ್ರವರ್ತಿ ಷಾಹಜಹಾನನ ಪುತ್ರ ಷೂಜನು ಬಂಗಾಳದ ಪ್ರಾಂತಾಧಿಕಾರಿಯಾಗಿದ್ದಾಗ ಮೂರುಸಾವಿರ ರೂಗಳ ವಾರ್ಷಿಕ ಪೊಗದಿಯ ಪಾವತಿಯ ಷರತ್ತಿನ ಮೇಲೆ ಯಾವುದೇ ತೆರಿಗೆಗಳಿಲ್ಲದೆ ಬಂಗಾಳದಲ್ಲಿ ವ್ಯಾಪಾರ ಮಾಡಲು ಕಂಪನಿಗೆ ಅನುಮತಿ ನೀಡಿದನು. ಆದರೆ ನಂತರದ ವರ್ಷಗಳಲ್ಲಿ ಆಂಗ್ಲರು ಹಾಗೂ ಮೊಗಲರ ನಡುವೆ ಘರ್ಷಣೆಗಳು ನಡೆದು ಬ್ರಿಟಿಷರು ಬಂಗಾಳದಿಂದ ಮದ್ರಾಸಿಗೆ ಪಲಾಯನ ಮಾಡಿದರು. ಕ್ರಿಸ್ತಶಕ 1690ರ ಅವಧಿಯಲ್ಲಿ ಆಂಗ್ಲರು ಮೊಗಲರೊಂದಿಗೆ ಶಾಂತಿಯನ್ನು ಏರ್ಪಡಿಸಿಕೊಂಡು ಮತ್ತೆ ಬಂಗಾಳಕ್ಕೆ ಬಂದರು. ಅದೇ ವರ್ಷ ಜಾಬ್‌ಚಾರ್ನಾರ್ ಎಂಬ ಬ್ರಿಟಿಷ್ ಅಧಿಕಾರಿಯು ಗಂಗಾನದಿಯ ದಂಡೆಯ ಮೇಲಿನ ಸುತಾನತಿ ಎಂಬ ಹಳ್ಳಿಯಲ್ಲಿ ಒಂದು ವ್ಯಾಪಾರದ ನೆಲೆಯನ್ನು ಸ್ಥಾಪಿಸಿದನು. ಅದುವೆ ಮುಂದೆ ಕಲ್ಕತ್ತಾ ಮಹಾನಗರವಾಗಿ ಬೆಳೆಯಿತು ಕ್ರಿಸ್ತಶಕ 1696ರ ವೇಳೆಗೆ ಈ ಕೋಠಿಯ ನೆರೆಯ ಪ್ರದೇಶದ ಜನರು ಆಂಗ್ಲರ ವಿರುದ್ಧ ದಂಗೆ ಎದ್ದರು. ಇದು ಕಲ್ಕತ್ತಾದ ವ್ಯಾಪಾರ ನೆಲೆಯ ಸುತ್ತಲೂ ಒಂದು ಬಲವಾದ ಕೋಟೆಯನ್ನು ನಿರ್ಮಿಸಲು ಕಾರಣವಾಯಿತು. ಕೋಟೆಯನ್ನು ನಿರ್ಮಿಸಿ ಅದರ ಸುತ್ತಲೂ ರಕ್ಷಣಾ ಸೈನ್ಯವನ್ನು ನೇಮಿಸಿದ ಬ್ರಿಟಿಷ್ ಕಂಪನಿಯು ಕಾಲಕ್ರಮೇಣ ರಾಜಕೀಯ ಶಕ್ತಿಯಾಗಿ ಬೆಳೆಯಿತು. ಕಲ್ಕತ್ತಾದ ಕೋಟೆಗೆ ಅಂದಿನ ಬ್ರಿಟಿಷ್ ಚಕ್ರವರ್ತಿಯಾದ ಮೂರನೆಯ ವಿಲಿಯಂನ ಹೆಸರನ್ನಿಟ್ಟು ಪೋರ್ಟವಿಲಿಯಂ ಎಂದು ಕರೆಯಲಾಯಿತು. ಇದು ಕ್ರಿಸ್ತಶಕ 1911ರ ವರೆಗೆ ಬ್ರಿಟಿಷ್ ಭಾರತದ ರಾಜಧಾನಿಯಾಗಿ ಮುಂದುವರೆಯಿತು. ಕ್ರಿಸ್ತಶಕ 1750ರ ವೇಳೆಗೆ ಕಲ್ಕತ್ತಾದ ಜನಸಂಖ್ಯೆ 2 ಲಕ್ಷಕ್ಕೆ ಏರಿತು. ಕಂಪನಿಯ ವೈದ್ಯ ಗೇಬ್ರಿಯಲ್ ಬೋಲ್ಟನು ಬಂಗಾಳದ ಸುಬೇದಾರನ ರೋಗವನ್ನು ಗುಣಪಡಿಸಿ ಅವನಿಂದ ಮತ್ತಷ್ಟು ವ್ಯಾಪಾರದ ರಿಯಾಯ್ತಿಗಳನ್ನು ಪಡೆದನು. 

    ಸರ್ಮನ್ ಆಯೋಗ ಮತ್ತು ಅವಿವೇಕಿ ಫರೂಖ್ಸಿಯಾರ್

    ಸರ್ಮನ್ ಆಯೋಗದ ಭೇಟಿಯನ್ನು (1715ರಲ್ಲಿ) ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವುಗಳಲ್ಲಿ ಒಂದೆಂದು ಉಲ್ಲೇಖಿಸಲಾಗುತ್ತದೆ. ಇದು ಕಂಪನಿಯನ್ನು ಇತರೇ ವಿದೇಶಿ ವ್ಯಾಪಾರಿಗಳಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ಕಾನೂನುಬದ್ಧವಾಗಿ ಸಂರಕ್ಷಿತ ರಾಜಕೀಯ ಘಟಕವಾಗಿ ಪರಿವರ್ತಿಸಿತು. ವೈದ್ಯಕೀಯ ಚಿಕಿತ್ಸೆಯ ಕಾರಣದಿಂದಾಗಿ ಇತಿಹಾಸಕಾರರು ಈಸ್ಟ್ ಇಂಡಿಯಾ ಕಂಪನಿಯ “ಮ್ಯಾಗ್ನಾ ಕಾರ್ಟಾ” ಎಂದು ಕರೆಯುವುದಕ್ಕೆ ಕಾರಣವಾಯಿತು.

    1715ರಲ್ಲಿ, ಮೊಘಲ್ ಚಕ್ರವರ್ತಿ ಫರೂಖ್ಸಿಯಾರ್ ತೀವ್ರ ಅನಾರೋಗ್ಯಕ್ಕೆ ತುತ್ತಾದನು. ಅವನ ಕಾಯಿಲೆಯನ್ನು ಗುಣಪಡಿಸಲು ದೇಶದ ಅನೇಕ ವೈದ್ಯರು ಪ್ರಯತ್ನಿಸಿದರು. ಆದರೆ ಯಾರಿಂದಲೂ ಅವನ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ. ಇದೇ ಸಂದರ್ಭದಲ್ಲಿ ಸ್ಥಳೀಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತಿದ್ದ ಆಂಗ್ಲ ವ್ಯಾಪಾರಿಗಳು, ವ್ಯಾಪಾರ ರಿಯಾಯಿತಿಗಳನ್ನು ಪಡೆಯುವ ಸಲುವಾಗಿ ಚಕ್ರವರ್ತಿ ಫರೂಖ್ಸಿಯಾರ್ ನನ್ನು ಬೇಟಿಯಾಗಲು ಅರಮನೆಗೆ ಬೇಟಿನೀಡಿದರು. ಇದರ ನೇತೃತ್ವವನ್ನು ಜಾನ್ ಸರ್ಮನ್ ವಹಿಸಿದ್ದನು. ಈ ತಂಡದಲ್ಲಿ ವಿಲಿಯಂ ಹ್ಯಾಮಿಲ್ಟನ್ ಎಂಬ ಪ್ರತಿಭಾನ್ವಿತ ವೈದ್ಯನೂ ಇದ್ದನು. ಇವನು ಫರೂಖ್ಸಿಯಾರ್ ನ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಿದನು. ಈ ಕಾಯಿಲೆಯನ್ನು ಸಾಮಾನ್ಯವಾಗಿ ಗೆಡ್ಡೆ ಅಥವಾ ತೀವ್ರವಾದ ತೊಡೆಸಂದು ಬಾವು ಎಂದು ಗುರುತಿಸಲಾಗಿದೆ.

    ಹೀಗೆ ಹ್ಯಾಮಿಲ್ಟನ್‌ನ ಯಶಸ್ವಿ ಶಸ್ತ್ರಚಿಕಿತ್ಸೆಯು ಚಕ್ರವರ್ತಿಯ ನೋವನ್ನು ನಿವಾರಿಸಿದ್ದಲ್ಲದೆ, ಅಂತಿಮವಾಗಿ ಜೋಧ್‌ಪುರದ ರಾಜಕುಮಾರಿಯನ್ನು ಮದುವೆಯಾಗಲು ಅವಕಾಶ ಮಾಡಿಕೊಟ್ಟಿತು.

    ಇದರಿಂದ ಸಂತೃಪ್ತನಾದ ಚಕ್ರವರ್ತಿ ಫರೂಖ್ಸಿಯಾರ್ ಕೃತಜ್ಞತೆಯಿಂದ, ಹ್ಯಾಮಿಲ್ಟನ್‌ಗೆ ತಾನು ಏನು ಬೇಕಾದರೂ ಕೇಳಬಹುದು ಎಂದು ಹೇಳಿದನು. ಹ್ಯಾಮಿಲ್ಟನ್ ತನ್ನ ಉದ್ಯೋಗದಾತರಿಗೆ ಹೆಚ್ಚಿನ ನಿಷ್ಠೆಯನ್ನು ತೋರಿಸುತ್ತಾ, ವೈಯಕ್ತಿಕ ಸಂಪತ್ತಿಗಿಂತ ಕಂಪನಿಯ ವ್ಯಾಪಾರ ಅರ್ಜಿಗಳನ್ನು ಪೂರೈಸುವಂತೆ ಕೇಳಿದನು.

    ಆಗ ಚಕ್ರವರ್ತಿ ಫರೂಖ್ಸಿಯಾರ್ ಆಂಗ್ಲರ ಕೋರಿಕೆಯ ಮೇರೆಗೆ ಕೆಲವು ಫಾರ್ಮನ್‌ಗಳನ್ನು (ರಾಜಮನೆತನದ ಆಜ್ಞೆಗಳು) ಹೊರಡಿಸಿದನು.

    ಈ ಕಾನೂನುಗಳು ಬ್ರಿಟಿಷರ ಅದೃಷ್ಟವನ್ನೇ ಬದಲಾಯಿಸಿತು:

    ೧. ಸುಂಕಗಳಿಂದ ವಿನಾಯಿತಿ ವ್ಯಾಪಾರ: ಬಂಗಾಳದಲ್ಲಿ, 3,000 ರೂಪಾಯಿಗಳ ಅಲ್ಪ ವಾರ್ಷಿಕ ಪಾವತಿಗೆ ಬದಲಾಗಿ ಕಂಪನಿಯನ್ನು ಎಲ್ಲಾ ಕಸ್ಟಮ್ಸ್ ಸುಂಕಗಳಿಂದ ವಿನಾಯಿತಿ ನೀಡಲಾಯಿತು.

    ೨. ದಸ್ತಕ್ಸ್ ಗಳ ಅವಕಾಶ: ಕಂಪನಿಯು ತಮ್ಮ ಸರಕುಗಳ ಚಲನೆಗೆ ದಸ್ತಕ್ಸ್ (ಪಾಸ್‌ಗಳು) ನೀಡಲು ಅನುಮತಿಸಲಾಯಿತು. ಸ್ಥಳೀಯ ಅಧಿಕಾರಿಗಳು ಈ ಸರಕುಗಳನ್ನು ಪರಿಶೀಲಿಸುವುದನ್ನು ನಿಷೇಧಿಸಲಾಯಿತು.

    ೩. ಭೂಸ್ವಾಧೀನ: ಕಂಪನಿಗೆ ಕಲ್ಕತ್ತಾದ ಸುತ್ತಮುತ್ತಲಿನ ಹೆಚ್ಚುವರಿ ಹಳ್ಳಿಗಳನ್ನು ಬಾಡಿಗೆಗೆ ಪಡೆಯುವ ಹಕ್ಕನ್ನು ನೀಡಲಾಯಿತು.

    ೪. ಕರೆನ್ಸಿ ಹಕ್ಕುಗಳು: ಬಾಂಬೆಯಲ್ಲಿ ಮುದ್ರಿಸಲಾದ ಕಂಪನಿಯ ನಾಣ್ಯಗಳನ್ನು ಇಡೀ ಮೊಘಲ್ ಸಾಮ್ರಾಜ್ಯದಾದ್ಯಂತ ಮಾನ್ಯ ಕರೆನ್ಸಿ ಎಂದು ಘೋಷಿಸಲಾಯಿತು.

    ಐತಿಹಾಸಿಕ ಪರಿಣಾಮ ಇತಿಹಾಸಕಾರ ಓರ್ಮ್ ಈ ಫಾರ್ಮನ್ ಅನ್ನು “ಕಂಪನಿಯ ಮ್ಯಾಗ್ನಾ ಕಾರ್ಟಾ” ಎಂದು ಕರೆದನು. ಯಾಕೆಂದರೆ

    ೧. ಇದು ಅವರಿಗೆ ಇತರ ಯುರೋಪಿಯನ್ ಶಕ್ತಿಗಳು (ಫ್ರೆಂಚ್ ಮತ್ತು ಡಚ್‌ನಂತಹ) ಮತ್ತು ಸ್ಥಳೀಯ ವ್ಯಾಪಾರಿಗಳ ಮೇಲೆ ಕಾನೂನು ಮತ್ತು ನೈತಿಕ ಹಕ್ಕನ್ನು ನೀಡಿತು.

    ೨. ಪರಿಣಾಮವಾಗಿ ಇದು ಮೊಗಲರ ಖಜಾನೆಗೆ ಬೃಹತ್ ತೆರಿಗೆಯ ಆದಾಯ ಪಾವತಿಯಾಗದೇ ಆಂಗ್ಲರಿಗೆ ಅನುಕೂಲವಾಯಿತು..

    ೩. ಬಂಗಾಳದ ನವಾಬನ ಅಧಿಕಾರವನ್ನು ದುರ್ಬಲಗೊಳಿಸಿತು.

    ೪. ಕಂಪನಿ ಅಧಿಕಾರಿಗಳು ದಸ್ತಕ್‌ಗಳನ್ನು(ಉಚಿತ ಪಾಸ್‌ಗಳು) ತಮ್ಮ ಖಾಸಗಿ ವ್ಯಾಪಾರಕ್ಕಾಗಿ ಬಳಸಿಕೊಂಡಿದ್ದರಿಂದ  ಅವುಗಳ ದುರುಪಯೋಗವಾಯಿತು. ಇದು ಬ್ರಿಟಿಷರು ಮತ್ತು ಬಂಗಾಳದ ನವಾಬರ ನಡುವಿನ ಘರ್ಷಣೆಗೆ ಪ್ರಾಥಮಿಕ ಕಾರಣವಾಯಿತು.

    ಇದೇ ಅಂತಿಮವಾಗಿ 1757 ರಲ್ಲಿ ಪ್ಲಾಸಿ ಕದನಕ್ಕೆ ಮತ್ತು ನಂತರ ಬಕ್ಸಾರ್‌ ಕದನಕ್ಕೆ ಕಾರಣವಾಗಿ ಭಾರತದಲ್ಲಿ ಬ್ರಿಟೀಷ್‌ ಸಾಮ್ರಾಜ್ಯದ ಸ್ಥಾಪನೆಗೆ ಅಡಿಪಾಯವಾಯಿತು.

    ರಾಜಕೀಯದ ಮೇಲೆ ಐರೋಪ್ಯ ಕಂಪನಿಗಳ ಪ್ರಭಾವ

    1) ಭಾರತಕ್ಕೆ ಬಂದ ಯೂರೋಪಿಯನ್ನರು ಇಲ್ಲಿ ರಾಜಕೀಯ ಸಾರ್ವಭೌಮಾಧಿಕಾರವನ್ನು ಸ್ಥಾಪಿಸಲು ಪರಸ್ಪರ ಕಚ್ಚಾಟದಲ್ಲಿ ತೊಡಗಿ ಭಾರತವನ್ನು ರಣಭೂಮಿಯನ್ನಾಗಿ ಮಾಡಿದರು. ಕೊನೆಯದಾಗಿ ಆಂಗ್ಲರು ಭಾರತದ ಸಾರ್ವಭೌಮರಾಗಿ ಮೆರೆದರು.

    2) ಯೂರೋಪಿಯನ್ನರ ಆಡಳಿತ ಪದ್ಧತಿ ಮತ್ತು ಅವರ ರಾಜಕೀಯ ವಿಚಾರಧಾರೆಗಳು ಭಾರತದ ರಾಜಕೀಯದ ಮೇಲೆ ಪ್ರಭಾವ ಬೀರಿದವು.

    3) ಭಾರತೀಯರು ಯೂರೋಪಿಯನ್ನರ ಯುದ್ಧಕಲೆ ಮತ್ತು ರಾಜ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡರು.

    4) ಭಾರತದಲ್ಲಿ ಕೋಮುವಾದ ಜನ್ಮ ತಾಳಲು ಬ್ರಿಟಿಷ್ ನೀತಿಯೇ ಕಾರಣವಾಯಿತು.

    5) ಬ್ರಿಟಿಷರು ಭಾರತದಲ್ಲಿ ಕೋಮುವಾದದ ಬೀಜ ಬಿತ್ತಿ ವರ್ಗ ಸಂಘರ್ಷಕ್ಕೆ ಕಾರಣರಾದರು.

    6) ಭಾರತದ ಮೆಣಸಿನಕಾಳು ಮತ್ತು ಮಸ್ಲಿನ್ ಬಟ್ಟೆಗೆ ಯೂರೋಪಿನಲ್ಲಿ ಬೇಡಿಕೆ ಹೆಚ್ಚಿತು