ಶಾಸನಶಾಸ್ತ್ರದ ಅರ್ಥ,ಉದ್ದೇಶ,ಸ್ವರೂಪ,ವ್ಯಾಪ್ತಿ ಮತ್ತು ಮಹತ್ವ

ಶಾಸನಶಾಸ್ತ್ರದ ಅರ್ಥ,ಉದ್ದೇಶ,ಸ್ವರೂಪ,ವ್ಯಾಪ್ತಿ ಮತ್ತು ಮಹತ್ವ

ಶಾಸನಶಾಸ್ತ್ರದ ಅರ್ಥ

ಪುರಾತತ್ವ ಶಾಸ್ತ್ರದ ಬಹುಮುಖ್ಯ ಶಾಖೆಯೆಂದರೆ ಶಾಸನಶಾಸ್ತ್ರ. ಇದನ್ನು ಇಂಗ್ಲೀಷಿನಲ್ಲಿ ಎಪಿಗ್ರಫಿ ಎಂದು ಕರೆಯಲಾಗುತ್ತದೆ.“Epigraphy” ಎಂಬ ಪದವು ಗ್ರೀಕ್ ಭಾಷೆಯಿಂದ ಬಂದದ್ದು.

  • “Epi” (ἐπί) = ಮೇಲೆ
  • “Graphein” (γράφειν) = ಬರೆಯುವುದು

ಅದರ ಅರ್ಥ: ಮೇಲೆ ಬರೆಯುವುದು ಅಥವಾ “ಮೇಲ್ಮೈಯ ಮೇಲೆ ಬರಹ”.

ಈ ಪದವು ನಂತರ ಲ್ಯಾಟಿನ್ ಭಾಷೆಯ ಮೂಲಕ ಇಂಗ್ಲಿಷ್‌ಗೆ ಸೇರಿ, 18ನೇ ಮತ್ತು 19ನೇ ಶತಮಾನಗಳಲ್ಲಿ ವಿದ್ಯಾಶಾಖೆಯಾಗಿ ಬಳಕೆಗೆ ಬಂದಿದೆ.

ಶಾಸನಶಾಸ್ತ್ರ (Epigraphy) ಎಂದರೆ ಕಲ್ಲು, ಲೋಹ, ಮಣ್ಣು, ಗೋಡೆ, ತಂಬೆ, ನಾಣ್ಯಗಳು ಮುಂತಾದ ಗಟ್ಟಿಯಾದ ವಸ್ತುಗಳ ಮೇಲೆ ಕೆತ್ತಿದ ಅಥವಾ ಕೆತ್ತನೆ ಮಾಡಿದ ಲಿಪಿ-ಲೇಖನಗಳ ಅಧ್ಯಯನ.

ಇದರಲ್ಲಿ ಮುಖ್ಯವಾಗಿ:

  • ಪ್ರಾಚೀನ ಲಿಪಿಗಳನ್ನು ಓದುವುದು
  • ಅವುಗಳನ್ನು ವಿವರಣೆ ಮಾಡಿ ಭಾಷಾಂತರಿಸುವುದು
  • ಇತಿಹಾಸ, ರಾಜಕೀಯ, ಸಮಾಜ, ಧರ್ಮ ಹಾಗೂ ಆರ್ಥಿಕ ಸ್ಥಿತಿಗಳ ಬಗ್ಗೆ ಮಾಹಿತಿಯನ್ನು ವಿಶ್ಲೇಷಿಸುವುದು

ಸರಳವಾಗಿ ಹೇಳುವುದಾದರೆ, ಗಟ್ಟಿಯಾದ ಮೇಲ್ಮೈಗಳ ಮೇಲೆ ಕೆತ್ತಿದ ಬರಹಗಳ ಅಧ್ಯಯನವೇ ಶಾಸನಶಾಸ್ತ್ರ.ಬರಹಗಳ ಅಧ್ಯಯನಶಾಸ್ತ್ರ ಎಂಬ ಅರ್ಥದಲ್ಲಿಯೂ ಇದನ್ನು ಬಳಸಲಾಗುತ್ತದೆ.

ಶಾಸನಶಾಸ್ತ್ರವು ಅಕ್ಷರಗಳ (graphemes) ಗುರುತಿಸುವಿಕೆ, ಅವುಗಳ ಅರ್ಥ ಸ್ಪಷ್ಟೀಕರಣ, ಅವುಗಳ ದಿನಾಂಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಣ, ಹಾಗೂ ಆ ಬರಹವನ್ನು ರಚಿಸಿದ ವ್ಯಕ್ತಿಗಳ ಮತ್ತು ಸಮಾಜದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಳಗೊಂಡಿದೆ. ಶಾಸನಗಳನ್ನು ಅಧ್ಯಯನ ಮಾಡುವ ವ್ಯಕ್ತಿಯನ್ನು ಶಾಸನಶಾಸ್ತ್ರಜ್ಞ (Epigraphist) ಎಂದು ಕರೆಯುತ್ತಾರೆ.

ಇದು ಮುಖ್ಯವಾಗಿ ಬರಹದ ರೂಪ, ಲಿಪಿ, ಭಾಷೆ ಮತ್ತು ಶೈಲಿಯ ಅಧ್ಯಯನ ಮಾಡುತ್ತದೆ. ಶಾಸನದಲ್ಲಿರುವ ಇತಿಹಾಸದ ಘಟನೆಗಳ ವಿವರಣೆ ಮಾಡುವುದು ಇತಿಹಾಸಕಾರರ ಕೆಲಸವಾಗಿದ್ದರೆ, ಶಾಸನವನ್ನು ಓದಿ, ಪುನರ್‌ರಚಿಸಿ, ದಿನಾಂಕ ನಿಗದಿಪಡಿಸುವುದು ಶಾಸನಶಾಸ್ತ್ರಜ್ಞರ ಕಾರ್ಯವಾಗಿದೆ.

ಶಾಸನಶಾಸ್ತ್ರದ ಅಭಿವೃದ್ಧಿ

ಯೂರೋಪಿನಲ್ಲಿ 16ನೇ ಶತಮಾನದಿಂದ ಶಾಸನಶಾಸ್ತ್ರವು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಆರಂಭವಾಯಿತು. ವಿಶೇಷವಾಗಿ ಲ್ಯಾಟಿನ್ ಮತ್ತು ಗ್ರೀಕ್ ಶಾಸನಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಕಾರ್ಯ ನಡೆಯಿತು.

ಈ ಕ್ಷೇತ್ರದ ಮಹತ್ವದ ಸಾಧನೆಯಿಂದಾಗಿ ಈಜಿಪ್ಟ್‌ನ ಹೈರೋಗ್ಲಿಫ್ ಲಿಪಿಯನ್ನು ರೋಸೆಟ್ಟಾ ಶಿಲಾಶಾಸನದ ಸಹಾಯದಿಂದ ಓದುವುದು ಗಮನಾರ್ಹವಾಗಿದೆ. ಈ ಶಿಲಾಶಾಸನದಲ್ಲಿ ಗ್ರೀಕ್, ಡೆಮೋಟಿಕ್ ಮತ್ತು ಹೈರೋಗ್ಲಿಫ್ ಲಿಪಿಗಳಲ್ಲಿ ಬರಹವಿದ್ದು, ಅದನ್ನು ಜೀನ್-ಫ್ರಾಂಸ್ವಾ ಶಾಂಪೊಲಿಯನ್ ಮತ್ತು ಥಾಮಸ್ ಯಂಗ್ ಅವರು ವಿವೇಚಿಸಿದರು.

ಭಾರತದಲ್ಲಿ ಶಾಸನಶಾಸ್ತ್ರ

ಭಾರತವು ಶಾಸನ ಸಂಪತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶವಾಗಿದೆ. ಇಂದಿನವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಶಾಸನಗಳು ಪತ್ತೆಯಾಗಿವೆ. ಮೌರ್ಯ ಸಾಮ್ರಾಟ ಅಶೋಕ (ಕ್ರಿ.ಪೂ. 3ನೇ ಶತಮಾನ) ಕಾಲದಿಂದ ಹಿಡಿದು ಮಧ್ಯಯುಗದ ಅಂತ್ಯದವರೆಗೆ ಭಾರತೀಯ ಇತಿಹಾಸ ತಿಳಿಯಲು ಶಾಸನಗಳು ಮಹತ್ವದ ಮೂಲಗಳಾಗಿವೆ.

1886ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ (Archaeological Survey of India) ಶಾಸನ ಶಾಖೆ ಸ್ಥಾಪಿಸಲಾಯಿತು. ನಂತರ ಅದು ಊಟಿ ಮತ್ತು ಬಳಿಕ ಮೈಸೂರು ನಗರಕ್ಕೆ ಸ್ಥಳಾಂತರಗೊಂಡಿತು. ಇ. ಹುಲ್ಟ್ಷ್, ವಿ. ವೆಂಕಯ್ಯ, ಹಚ್. ಕೃಷ್ಣ ಶಾಸ್ತ್ರಿ, ಡಿ. ಸಿ. ಸರ್ಕಾರ್ ಮುಂತಾದ ಪಂಡಿತರು ಭಾರತೀಯ ಶಾಸನ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಭಾರತದಲ್ಲಿ ಬರವಣಿಗೆಯ ಪ್ರಾಚೀನತೆ

ನಮ್ಮ ದೇಶದ ಅತ್ಯಂತ ಪ್ರಾಚೀನ ಬರವಣಿಗೆಯು ಕ್ರಿ.ಪೂ. ೨೫೦೦- ಕ್ರಿ.ಪೂ. ೧೫೦೦ರ ಕಾಲದ ಸಿಂಧೂ ಸಂಸ್ಕೃತಿಯ ಮಣ್ಣಿನ ಮುದ್ರೆಗಳ ಮೇಲೆ ದೊರೆತಿದೆ. ಆದರೆ ಈ ಲಿಪಿಯನ್ನಿನ್ನೂ ಸುಸಂಬದ್ಧವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಅಶೋಕನ ಶಾಸನಗಳನ್ನು ಜನಸಾಮಾನ್ಯರು ಓದಿ ತಿಳಿದುಕೊಳ್ಳಬೇಕೆಂಬ ಉದ್ದೇಶಕ್ಕಾಗಿ ಬರೆಸಲಾಗಿತ್ತೆಂಬುದನ್ನು ಪರಿಗಣಿಸಿದರೆ ಆ ಕಾಲಕ್ಕಿಂತ ಮೊದಲೇ ಕೆಲವು ಜನರಿಗಾದರೂ ಓದು ಬರಹ ತಿಳಿದಿತ್ತೆಂಬುದನ್ನು ಅಲ್ಲಗಳೆಯುವಂತಿಲ್ಲ.

ಶಾಸನಾಧ್ಯಯನದ ಆದ್ಯ ಪ್ರವರ್ತಕರು

ವಿಲಿಯಂ ಜೋನ್ಸ್, ಲ್ಯಾನ್ಸನ್ ಮೊದಲಾದ ಪಾಶ್ಚಾತ್ಯ ಪಂಡಿತರು ಬ್ರಾಹ್ಮಿ ಲಿಪಿ ಯನ್ನು ಓದಿ ತಿಳಿದುಕೊಳ್ಳಲು ಬಹಳ ಶ್ರಮಿಸಿದರು. ಕೊನೆಗೆ ೧೮೩೭ರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬ ವಿದ್ವಾಂಸನು ಬ್ರಾಹ್ಮಿಲಿಪಿಯ ಒಗಟನ್ನೊಡೆಯಲು ಸಮರ್ಥನಾದನು. ಆದಾಗ್ಯೂ ಬ್ರಾಹ್ಮಿಲಿಪಿಯ ವೈಜ್ಞಾನಿಕವಾದ ಅಕ್ಷರಮಾಲಿಕೆಯನ್ನು ವ್ಯವಸ್ಥೆಗೊಳಿಸಿದ ಕೀರ್ತಿ ಬ್ಯುಹ್ವಲರ್ ನೆಂಬ ಜರ್ಮನ್ ಪಂಡಿತನಿಗೆ ಸಲ್ಲುತ್ತದೆ. ಅಂತೆಯೆ, ಮ್ಯಾಸ್ಸನ್, ಲ್ಯಾನ್ಸನ್, ಕನ್ನಿಂಗ್‌ಹ್ಯಾಮ್ ಮೊದಲಾದ ವಿದ್ವಾಂಸರ ಕೊಡುಗೆ ಗಣನೀಯವಾದುದು.

ಶಾಸನದ ಉದ್ದೇಶ

1. ಶಾಸನವನ್ನು ಹಾಕಿಸಿದಂತಹ ಅಥವಾ ಅದಕ್ಕೆ ಕಾರಣನಾದ ವ್ಯಕ್ತಿಯು ಉದ್ದೇಶವನ್ನು ಇಟ್ಟುಕೊಂಡೇ ಬರೆಸಿರುತ್ತಾನೆ.

2. ಅವನು ನಾಯಕ/ಅರಸನಾಗಿದ್ದರೆ ತನ್ನ ಯಶೋಗಾಥೆಯನ್ನು, ದಿಗ್ವಿಜಯವನ್ನು ಸಾರುವ ಉದ್ದೇಶ ಹೊಂದಿರುತ್ತಾನೆ.

3. ತನ್ನ ಕಾನೂನು ಶಾಸನವಾಗಿರುವಾಗ ಅಂತಹ ಶಾಸನವನ್ನು ಜನಸಾಮಾನ್ಯರಿಗೂ ಜಾಹೀರುಮಾಡುವ ಇರಾದೆ ಅವನದಾಗಿರುತ್ತದೆ.

4. ತಾನು ಕಟ್ಟಿಸಿದ ದೇವಾಲಯದ ಮಾಹಿತಿಯು ಅಚಂದ್ರಾಕರವಾಗಿ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಶಾಸನವನ್ನು ಅದರ ಮಾಹಿತಿಯನ್ನು ಕೆತ್ತಿಸಿರುತ್ತಾನೆ.

5. ತಾನು ನೀಡಿದ ದಾನವನ್ನು ಮುಂದೆ ಬರಲಿರುವ ಜನರು ಯಾರೂ ಉಲ್ಲಂಘನೆ ಮಾಡದಿರಲಿ ಎಂಬ ಶಾಪಭೀತಿಯನ್ನು ತುಂಬಿ ಶಾಸನವನ್ನು ಹೊರಡಿಸಿರುತ್ತಾರೆ.

6. ತಮ್ಮ ಕಾಲದ ಗ್ರಾಮಾಡಳಿತ ಯಾವ ರೀತಿ ಇದೆ, ಅದನ್ನು ಮುಂದೆಯೂ ಅನುಚಾನವಾಗಿ ನಡೆದುಕೊಂಡು ಹೋಗಲಿ ಎಂಬ ಉದ್ದೇಶದಿಂದ ಶಾಸನವನ್ನು ಮಾಹಿತಿ ಹಂಚುವ ಸಲುವಾಗಿ ಶಾಸನ ಹಾಕಿಸಿರುವುದು ಕಂಡುಬರುತ್ತದೆ.

7. ಭೂಮಿಯ ಹಕ್ಕುದಾರಿಕೆಯ ವ್ಯಾಪ್ತಿಯನ್ನು ತಿಳಿಸಲು ಅದರ ಮೂಲೆ-ಮೂಲೆಗೂ ಗಡಿಗಲ್ಲು ಶಾಸನವಾಗಿರಬಹುದು.

8. ತನ್ನ ದೇಶ,ಅರಸ,ಸ್ತ್ರೀಯರ ಅಥವಾ ದನ,ಕರುಗಳ ಸಲುವಾಗಿ ಹೋರಾಡಿ ಬಲಿದಾನಗೈದ ವೀರರ ನೆನಪಿನಲ್ಲಿ ಶಾಸನವನ್ನು ನೆಟ್ಟಿರುವುದು ಕಂಡುಬರುತ್ತದೆ.

ಹೀಗೆ ಶಾಸನವು ಅನೇಕ ಉದ್ದೇಶಗಳನ್ನು ಹೊಂದಿರುವುದನ್ನು ಕಾಣಬಹುದು.

ಶಾಸನದ ಸ್ವರೂಪ

ಶಾಸನವನ್ನು ಕೆಳಕಂಡಂತೆ ವರ್ಗೀಕರಿಸಬಹುದಾಗಿದ್ದು ಅದೇ ಅದರ ಸ್ವರೂಪವಾಗಿದೆ.

೧. ರಾಜಶಾಸನ : ರಾಜನ ಆಜ್ಞೆಯನ್ನು ಸಾರುವ ಲೇಖನ.

೨. ತಾಮ್ರಶಾಸನ : ಅರಸನೇ ಮೊದಲಾದವರು ಕೊಟ್ಟ ಭೂದಾನ ಮುಂತಾದವುಗಳನ್ನು ದಾಖಲಿಸುವ ತಾಮ್ರ ಪಟ್ಟಿಕೆಗಳ ಮೇಲಿನ ಬರಹ.

೩. ದಾನಶಾಸನ : ವಿವಿಧ ರೀತಿಯ ದಾನಗಳನ್ನು ದಾಖಲಿಸುವ, ತಾಮ್ರಶಾಸನದಿಂದ ಭಿನ್ನವಾದ, ಬರಹ.

೪. ಜಯಪತ್ರ : ವಿವಾದವೊಂದರಲ್ಲಿ ಯಾವುದೊಂದು ಪಕ್ಷದ ಗೆಲುವನ್ನು ಸಾರುವ ಬರಹ.

೫. ಯೂಪಶಾಸನ : ಯಜ್ಞಯಾಗಾದಿಗಳಲ್ಲಿ ಬಳಸುವ ಯೂಪ-ಸ್ತಂಭದ ಮೇಲಣ ಬರಹ. ಯಾಗದ ಸಂದರ್ಭದಲ್ಲಿ ಬಲಿ ಕೊಡಲಿರುವ ಪಶುಗಳನ್ನು ಕಟ್ಟಿಹಾಕಲೆಂದು ನೆಟ್ಟಿರುವ ಕಂಬಗಳೇ ಯೂಪಸ್ತಂಭ ಅಥವಾ ಶಾಸನಗಳು.

೬. ಸ್ತಂಭ ಶಾಸನ : ದೇವಾಲಯ ಮುಂತಾದ ವಾಸ್ತುವಿನ ಭಾಗವಾದ ಸ್ತಂಭ ಅಥವಾ ಸ್ಮಾರಕಸ್ತಂಭದ ಮೇಲಿನ ಬರಹ.

೭. ಪ್ರತಿಮಾಶಾಸನ : ಕಲ್ಲಿನ ದೇವತಾ ವಿಗ್ರಹಗಳ ಪೀಠದ ಮೇಲೆ ಅಥವಾ ಧಾತುನಿರ್ಮಿತ ಮೂರ್ತಿಗಳ ಹಿಂಭಾಗದಲ್ಲಿ ಕೆತ್ತಿದ ಬರಹ.

೮. ವಿಜಯಶಾಸನ : ಯುದ್ಧದಲ್ಲಿ ರಾಜನ ಗೆಲುವಿನ ಘೋಷಣೆಯನ್ನು ಹೊಂದಿದ ಬರಹ.

೯. ವೀರಗಲ್ಲು: ನಾಡಿಗಾಗಿ ಮಡಿದ ವೀರನನ್ನು ಸ್ಮರಿಸುವ ಬರಹ. ಈ ಬರಹವು ಕೆಲವೊಮ್ಮೆ ಮೃತನ ಪರಿವಾರಕ್ಕೆ ಕೊಡಮಾಡಿದ ದೇಣಿಗೆಯ ವಿವರಗಳನ್ನು ಹೊಂದಿರುತ್ತದೆ.

೧೦. ಮಾಸ್ತಿಕಲ್ಲು : ಯುದ್ಧದಲ್ಲಿ ಮಡಿದ ವೀರನ ಹೆಂಡತಿ ಅವನ ಚಿತೆಯನ್ನು ಪ್ರವೇಶಿಸಿ ಪ್ರಾಣಾರ್ಪಣೆ ಮಾಡುವ ‘ಸಹಗಮನ’ ವನ್ನು ದಾಖಲಿಸುವ ಬರಹ.

೧೧. ತುಜುಗೋಳ್ : ಪ್ರಾಚೀನ ಭಾರತೀಯರಿಗೆ ಗೋವು ಪೂಜ್ಯನೀಯವಾಗಿತ್ತು. ವಿನಿಮಯದ ವಸ್ತುಗಳಲ್ಲೊಂದಾಗಿದ್ದು ಸುವರ್ಣಕ್ಕೆ ಸಮಾನವಾಗಿತ್ತು. ಅವುಗಳನ್ನು ಸೆರೆಹಿಡಿದು ಯುದ್ಧ ಸಾರಿದ ಸಂಕೇತವಾಗಿ ಬಳಸಲಾಗುತ್ತಿತ್ತು. ಈ ರೀತಿ ಸೆರೆ ಸಿಕ್ಕ ಗೋವುಗಳನ್ನು ಸಂರಕ್ಷಿಸಲು ಹೋಗಿ ಹೋರಾಡಿ ಮಡಿದ ವೀರರಿಗೆ ಸಂಬಂಧಿಸಿದ ವೀರಗಲ್ಲುಗಳೇ ತುರುಗೋಳ್‌ಗಳು.

೧೨. ಪೆಣ್ಣುಯ್ಯಲ್ : ಪೆಣ್ಣುಯ್ಯಲ್ ಎಂದರೆ ಹೆಣ್ಣಿನ ಆರ್ತಧ್ವನಿ. ನೆರೆರಾಜ್ಯದ ವೈರಿಗಳು ಕದನಕ್ಕೆ ಬಂದು ಹೆಣ್ಣುಮಕ್ಕಳ ಮಾನಭಂಗಕ್ಕೆ ಪ್ರಯತ್ನಿಸುತ್ತಿದ್ದರು. ಇಂತಹ ಪ್ರಸಂಗಗಳಲ್ಲಿ ವೀರನಾದವನು ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡುತ್ತಿದ್ದನು. ಏರಿಬಂದ ವೈರಿಗಳು ಹೆಂಡಿರ ಮಾನಹರಣಕ್ಕೆ ಪ್ರಯತ್ನಿಸುತ್ತಿದ್ದುದನ್ನು ವೀರಗಲ್ಲು “ಪೆಂಡಿರ ಉಡೆಯರ್ಚುವಲ್ಲಿ” ಎಂಬ ಶಬ್ದದಿಂದ ಸೂಚಿಸುತ್ತದೆ. ಈ ರೀತಿಯ ಶಾಸನಗಳು ಅನೇಕ ಕಡೆ ಕಾಣಸಿಗುತ್ತವೆ.

೧೩. ಎಳಿವೆಸ : ಎಳವೆಸ ಎಂದರೆ ಒಡೆಯನ ಅಪ್ಪಣೆ ಎಂದರ್ಥ. ಆತನ ಉಪ್ಪಿನ ಋಣಕ್ಕಾಗಿ ಹೋರಾಡುವುದು ಇಲ್ಲಿಯ ಮುಖ್ಯ ಧೈಯವಾಗಿದೆ. ಎಳವೆಸ ಯುದ್ಧವಾಗಿದ್ದು ತರಬೇತು ಪಡೆದ ಸೈನ್ಯ ನಿರ್ವಹಿಸುವ ಈ ಸಂಘರ್ಷಣೆ ರಾಜ್ಯದ ಹಣೆಬರಹವನ್ನು ನಿರ್ಧರಿಸುತ್ತಿತ್ತು. ಇಂತಹ ಯುದ್ಧಗಳಲ್ಲಿ ಹೋರಾಡಿ ಮಡಿದವರ ನೆನಪಿಗೆ ನೆಟ್ಟ ವೀರಗಲ್ಲುಗಳೇ ‘ಎಜವೆಸ’ಗಳು. ಉದಾಹರಣೆಗೆ ಮಾವಳಿಯ ಶಾಸನ.

೧೪. ನಿಸಿದಿಗಲ್ಲು: ಸಮಾಧಿ ಮರಣ ಮತ್ತು ನಿಸಿದಿ ಹೊಂದುವ ಪದ್ಧತಿ ಪ್ರಾಚೀನ ಕಾಲದಿಂದಲೂ ಬೆಳದು ಬಂದ ಸಂಪ್ರದಾಯವಾಗಿದೆ. ಜೈನ ಸನ್ಯಾಸಿಗಳು ಮತ್ತು ಗೃಹಸ್ಥರು ಸನ್ಯಾಸನ ವಿಧಿಯಿಂದ ಅಥವಾ ಸಲ್ಲೇಖನ ವ್ರತದಿಂದ ಮರಣವನ್ನಪ್ಪಿದ್ದನ್ನು ಈ ನಿಸಿದಿಗಲ್ಲುಗಳು ತಿಳಿಸುತ್ತವೆ. ನಿಸಿದಿ ಅಥವಾ ನಿಷತ್ ಎಂದರೆ ಕುಳಿತಿರುವುದು ಎಂದರ್ಥ.

೧೫. ಕೂಟಶಾಸನ : ಸ್ವಹಿತಾಸಕ್ತಿಗೆ ಹಾಕಿಸಿದ ಶಾಸನಗಳನ್ನು ಕೂಟಶಾಸನ ಎಂದು ಹೇಳಬಹುದು. ಕೂಟಶಾಸನದಲ್ಲಿ ಸುಳ್ಳು ದಾಖಲೆಗಳಿರುತ್ತವೆ. ಆದುದರಿಂದಲೇ ಇವುಗಳನ್ನು ಕೃತಕ ಶಾಸನಗಳೆಂದು ಕರೆಯುತ್ತಾರೆ. ಈ ಕೃತಕತೆಯನ್ನು ತಾಮ್ರಶಾಸನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಯಾರದೋ ಆಸ್ತಿಯನ್ನು ಕಬಳಿಸುವ ಸಲುವಾಗಿ ಅಥವಾ ಅಧಿಕಾರ, ಅಂತಸ್ತನ್ನು ಗಳಿಸುವ ಸಲುವಾಗಿ ವಂಚನೆಯ ಉದ್ದೇಶವನ್ನು ಇವು ಹೊಂದಿರುತ್ತವೆ.

ಶಾಸನಶಾಸ್ತ್ರದ ವ್ಯಾಪ್ತಿ

ಪೀಠಿಕೆ : ಶಾಸನಶಾಸ್ತ್ರವು ಇತಿಹಾಸ ಮತ್ತು ಪುರಾತತ್ವಶಾಸ್ತ್ರದ ಪ್ರಮುಖ ಅಂಗವಾಗಿದ್ದು, ಕಲ್ಲು, ತಾಮ್ರಪತ್ರ, ಲೋಹ, ದೇವಾಲಯದ ಗೋಡೆಗಳು, ನಾಣ್ಯಗಳು ಮುಂತಾದ ದೀರ್ಘಕಾಲ ಉಳಿಯುವ ವಸ್ತುಗಳ ಮೇಲೆ ಕೆತ್ತಿದ ಅಥವಾ ಬರೆಯಲಾದ ಶಾಸನಗಳ ಅಧ್ಯಯನವನ್ನು ಒಳಗೊಂಡಿದೆ. ಶಾಸನಗಳು ಪ್ರಾಚೀನ ಕಾಲದ ನೇರ ಸಾಕ್ಷಿಗಳಾಗಿರುವುದರಿಂದ ಇತಿಹಾಸವನ್ನು ನಿಖರವಾಗಿ ಪುನರ್‌ನಿರ್ಮಿಸಲು ಅವು ಅತ್ಯಂತ ಮಹತ್ವದ್ದಾಗಿವೆ. ಶಾಸನಶಾಸ್ತ್ರದ ವ್ಯಾಪ್ತಿ ಕೇವಲ ಲಿಪಿ ಓದುವುದರಲ್ಲಿಯೇ ಸೀಮಿತವಾಗಿಲ್ಲ; ಅದು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಎಲ್ಲಾ ಆಯಾಮಗಳನ್ನು ಒಳಗೊಂಡಿದೆ.

1. ಲಿಪಿ ಮತ್ತು ಪಾಠ ಸಂಶೋಧನೆ(Script and Textual Criticism)

೧.ಲಿಪಿ ಶಾಸ್ತ್ರೀಯ ವಿಶ್ಲೇಷಣೆ:     ಶಾಸನಶಾಸ್ತ್ರದ ಪ್ರಾಥಮಿಕ ವ್ಯಾಪ್ತಿ ಲಿಪಿಗಳ ವೈಜ್ಞಾನಿಕ ಅಧ್ಯಯನವಾಗಿದೆ.ಬ್ರಾಹ್ಮಿ,ಖರೋಷ್ಟಿ ಮೊದಲಾದ ಲಿಪಿಗಳ ರೂಪವಿಕಾಸ, ಅಕ್ಷರಗಳ ಶೈಲಿ, ವೈಶಿಷ್ಟ್ಯ ಮತ್ತು ಪ್ರಾದೇಶಿಕ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ ಕಾಲನಿರ್ಣಯ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಗುರುತಿಸಲಾಗುತ್ತದೆ. ಲಿಪಿಯ ರೂಪಾಂತರಗಳು ಕೇವಲ ಬರವಣಿಗೆಯ ಬದಲಾವಣೆಗಳಲ್ಲ; ಅವು ರಾಜಕೀಯ ಪ್ರಭಾವ, ವ್ಯಾಪಾರ ಸಂಪರ್ಕ ಮತ್ತು ಧಾರ್ಮಿಕ ಚಳವಳಿಗಳ ಸೂಚಕಗಳಾಗಿವೆ.

೨. ಪಾಠ ಸಂಶೋಧನೆ ಮತ್ತು ವಿಮರ್ಶೆ :   ಶಾಸನಗಳು ಬಹುಪಾಲು ಹಾನಿಗೊಳಗಾದ ಸ್ಥಿತಿಯಲ್ಲಿ ದೊರೆಯುತ್ತವೆ. ಅಕ್ಷರಗಳ ಕೊರತೆ, ಮಸಕಾದ ಭಾಗಗಳು ಅಥವಾ ಮುರಿದ ಭಾಗಗಳನ್ನು ವೈಜ್ಞಾನಿಕ ವಿಧಾನಗಳಿಂದ ಪುನರ್‌ನಿರ್ಮಿಸಿ ಮರು ಸ್ಥಾಪಿಸುವುದು ಶಾಸನಶಾಸ್ತ್ರದ ಪ್ರಮುಖ ಕಾರ್ಯವಾಗಿದೆ. ಇದರಲ್ಲಿ ಪಾಠಸಂಶೋಧನೆ (Textual Criticism), ಪಠ್ಯತೂಲನೆ ಮತ್ತು ಭಾಷಾಶಾಸ್ತ್ರೀಯ ವಿಶ್ಲೇಷಣೆ ಒಳಗೊಂಡಿವೆ.

2. ರಾಜಕೀಯ ರಚನೆ ಮತ್ತು ರಾಜ್ಯತತ್ವ

೧. ಅಧಿಕಾರ ಮತ್ತು ಧರ್ಮದ ಸಂಬಂಧ     

ಶಾಸನಗಳು ರಾಜಕೀಯ ಪ್ರಚಾರದ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ಅಶೋಕನ ಧಮ್ಮಶಾಸನಗಳು ರಾಜಕೀಯ ಆಡಳಿತ ಮತ್ತು ನೈತಿಕ ತತ್ವಗಳನ್ನು ಒಟ್ಟುಗೂಡಿಸುತ್ತವೆ. ಇದರಿಂದ ರಾಜ್ಯ ಮತ್ತು ಧರ್ಮದ ಸಂಬಂಧದ ಬಗ್ಗೆ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

೨. ಸಾಮ್ರಾಜ್ಯ ಮತ್ತು ಪ್ರಾದೇಶಿಕತೆ:  ಸಮುದ್ರಗುಪ್ತನ ಪ್ರಶಸ್ತಿ ಶಾಸನವು ಸಾಮ್ರಾಜ್ಯ ವಿಸ್ತರಣೆ ಮತ್ತು ರಾಜಕೀಯ ಮಾನ್ಯತೆಯ ಸ್ಥಾಪನೆಯ ಉದಾಹರಣೆಯಾಗಿದೆ. ಇಂತಹ ಶಾಸನಗಳು ಕೇಂದ್ರ ಮತ್ತು ಪ್ರಾಂತೀಯ ಆಡಳಿತದ ಸಂಬಂಧವನ್ನು ವಿಶ್ಲೇಷಿಸಲು ಸಹಕಾರಿ. ಅವು ರಾಜಕೀಯ ಪ್ರಭುತ್ವದ ಭಾಷೆಯನ್ನು ಅನಾವರಣಗೊಳಿಸುತ್ತವೆ.

3. ಸಾಮಾಜಿಕ ಇತಿಹಾಸ ಮತ್ತು ರಚನೆ

೧. ಸಾಮಾಜಿಕ ವರ್ಗೀಕರಣ : ಶಾಸನಗಳು ವರ್ಣ, ಜಾತಿ, ವೃತ್ತಿ ಮತ್ತು ಸಮುದಾಯಗಳ ವಿವರಗಳನ್ನು ನೀಡುತ್ತವೆ. ಇವುಗಳಿಂದ ಸಮಾಜದ ರಚನೆ, ಅಧಿಕಾರದ ಹಂಚಿಕೆ ಮತ್ತು ಸಾಮಾಜಿಕ ಚಲನೆಗಳ ವಿಶ್ಲೇಷಣೆ ಸಾಧ್ಯವಾಗುತ್ತದೆ. ಶಾಸನಗಳು ಸಮಾಜದ ವಾಸ್ತವಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಮೂಲಗಳಾಗಿವೆ.

೨. ಮಹಿಳಾ ಸ್ಥಾನಮಾನದ ಅಧ್ಯಯನ : ಮಹಿಳೆಯರು ದಾನಿಗಳಾಗಿ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆಗಳು ಶಾಸನಗಳಲ್ಲಿ ಕಂಡುಬರುತ್ತವೆ. ಇದರಿಂದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾಯತ್ತತೆ ಕುರಿತು ವಿಶ್ಲೇಷಣಾತ್ಮಕ ಅಧ್ಯಯನ ನಡೆಸಬಹುದು.

4. ಆರ್ಥಿಕ ವ್ಯವಸ್ಥೆ ಮತ್ತು ಉತ್ಪಾದನಾ ಸಂಬಂಧಗಳು

 ೧. ಭೂಸ್ವಾಮ್ಯ ಮತ್ತು ದಾನಪದ್ಧತಿ : ತಾಮ್ರಪತ್ರ ಶಾಸನಗಳು ಭೂದಾನ ಮತ್ತು ತೆರಿಗೆ ವಿನಾಯಿತಿಗಳ ಕುರಿತು ವಿವರಗಳನ್ನು ಒದಗಿಸುತ್ತವೆ. ಇದರಿಂದ ಭೂಸ್ವಾಮ್ಯ, ಕೃಷಿ ಉತ್ಪಾದನೆ ಮತ್ತು ರಾಜಸ್ವ ವ್ಯವಸ್ಥೆಯ ಸ್ವರೂಪವನ್ನು ಅಧ್ಯಯನ ಮಾಡಬಹುದು. ಭೂದಾನವು ರಾಜಕೀಯ ಅಧಿಕಾರದ ಮಾನ್ಯತೆಯ ಸಾಧನವಾಗಿಯೂ ಕಾರ್ಯನಿರ್ವಹಿಸಿದೆ.

೨.ವ್ಯಾಪಾರ ಮತ್ತು ನಾಣ್ಯಚಲಾವಣೆ :  ಶಾಸನಗಳಲ್ಲಿ ವ್ಯಾಪಾರ ಸಂಘಗಳು, ಮಾರ್ಗಗಳು ಮತ್ತು ನಾಣ್ಯಗಳ ಉಲ್ಲೇಖಗಳು ದೊರೆಯುತ್ತವೆ. ಇವುಗಳಿಂದ ಆಂತರಿಕ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಜಾಲವನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಆರ್ಥಿಕ ಇತಿಹಾಸದ ಪುನರ್‌ನಿರ್ಮಾಣದಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ.

5. ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿವರ್ತನೆ

೧. ಧಾರ್ಮಿಕ ಬಹುಮುಖತೆ : ಬೌದ್ಧ, ಜೈನ ಮತ್ತು ವೈದಿಕ ಪರಂಪರೆಗಳ ವಿಸ್ತಾರವನ್ನು ಶಾಸನಗಳು ದಾಖಲಿಸುತ್ತವೆ. ಧಾರ್ಮಿಕ ದಾನಗಳು ಮತ್ತು ಮಠಗಳ ಸ್ಥಾಪನೆಗಳು ಧಾರ್ಮಿಕ ಸಹಿಷ್ಣುತೆ ಮತ್ತು ಸಂಸ್ಕೃತಿಯ ವಿನಿಮಯದ ಸೂಚಕಗಳಾಗಿವೆ.

೨. ಕಲಾ ಮತ್ತು ವಾಸ್ತುಶಿಲ್ಪ:     ದೇವಾಲಯ ನಿರ್ಮಾಣ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತು ಶಾಸನಗಳು ಮಾಹಿತಿಯನ್ನು ನೀಡುತ್ತವೆ. ಇವುಗಳಿಂದ ಸಾಂಸ್ಕೃತಿಕ ಇತಿಹಾಸದ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

6. ಭೂಗೋಳ ಮತ್ತು ಕಾಲಸಂರಚನೆ

೧. ಐತಿಹಾಸಿಕ ಭೂಗೋಳ : ಶಾಸನಗಳಲ್ಲಿ ಉಲ್ಲೇಖಿತವಾದ ಸ್ಥಳನಾಮಗಳು, ನದಿಗಳು ಮತ್ತು ಪ್ರದೇಶಗಳ ಆಧಾರದ ಮೇಲೆ ಪ್ರಾಚೀನ ಭೂಗೋಳವನ್ನು ಪುನರ್‌ನಿರ್ಮಿಸಲು ಸಾಧ್ಯವಾಗುತ್ತದೆ. ಇದು ಇತಿಹಾಸ ಮತ್ತು ಭೂಗೋಳಶಾಸ್ತ್ರದ ಸಂಯೋಜಿತ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ.

೨. ಕಾಲನಿ‌ರ್ಣಯ ಮತ್ತು ಇತಿಹಾಸ ನಿರ್ಮಾಣ :  ಶಾಸನಗಳಲ್ಲಿ ನೀಡಿರುವ ಸಂವತ್ಸರ, ತಿಥಿ ಮತ್ತು ರಾಜರ ಆಡಳಿತ ವರ್ಷಗಳ ಆಧಾರದ ಮೇಲೆ ಘಟನೆಗಳ ಕಾಲವನ್ನು ನಿಖರವಾಗಿ ನಿರ್ಧರಿಸಲಾಗುತ್ತದೆ. ಕಾಲಸಂರಚನೆ ಇತಿಹಾಸದ ವೈಜ್ಞಾನಿಕ ಅಧ್ಯಯನಕ್ಕೆ ಅತ್ಯಾವಶ್ಯಕವಾಗಿದೆ.

ಉಪಸಂಹಾರ :       ಶಾಸನಶಾಸ್ತ್ರವು ಕೇವಲ ಸಹಾಯಕ ಶಾಸ್ತ್ರವಲ್ಲ; ಅದು ಇತಿಹಾಸದ ಮೂಲಾಧಾರವಾಗಿದೆ. ಶಾಸನಗಳು ಸಮಕಾಲೀನ ದಾಖಲೆಗಳಾಗಿರುವುದರಿಂದ ಅವು ಇತಿಹಾಸದ ವೈಜ್ಞಾನಿಕ ಪುನರ್‌ನಿರ್ಮಾಣಕ್ಕೆ ನಂಬಲರ್ಹ ಮೂಲಗಳಾಗಿವೆ. ಲಿಪಿ, ಭಾಷೆ, ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿಯ ಎಲ್ಲಾ ಆಯಾಮಗಳನ್ನು ಒಳಗೊಂಡಿರುವ ಶಾಸನಶಾಸ್ತ್ರವು ಇತಿಹಾಸಶಾಸ್ತ್ರದ ಬಹುಮುಖ ಮತ್ತು ವಿಶ್ಲೇಷಣಾತ್ಮಕ ಕ್ಷೇತ್ರವಾಗಿದೆ.

ಭಾರತದ ಪ್ರಮುಖ ಶಾಸನಗಳು

1. ಅಶೋಕನ ಮಸ್ಕಿ,ಸನ್ನತಿ,ಗಿರ್‌ನಾರ್ ಶಾಸನಗಳು

2. ಸೋಹಗೌರ ಶಾಸನ,ಉತ್ತರ ಪ್ರದೇಶ

3. ಪರಾಂತಕನ ಉತ್ತರ ಮೆರೂರು ಶಾಸನ

4.ಕ್ಷತ್ರಪ ನಹಪಾನನ ನಾಸಿಕ್‌ ಶಾಸನ

5.ಮಥುರಾದ ಹುವಿಷ್ಕನ ಶಾಸನ

6. ಬನವಾಸಿಯ ಚುಟು ಅರಸರ ಶಾಸನ

7. ಸಮುದ್ರಗುಪ್ತನ ಅಲಹಾಬಾದ್‌ ಶಾಸನ

8.ಶ್ರವಣಬೆಳಗೊಳದ ಶಾಸನಗಳು

9. ಕಾಕುತ್ಸವರ್ಮನ ಹಲ್ಮಿಡಿಯ ಶಾಸನ

10.ಗುಡ್ನಾಪುರದ ಕದಂಬ ರವಿವರ್ಮನ ಸ್ತಂಭ ಶಾಸನ

11.ಬೋರ್ನಿಯೋದ ಪೂರ್ಣವರ್ಮನ ಶಾಸನ

12.ಹೊಯ್ಸಳರ ದ್ವಾರಸಮುದ್ರದ ಶಾಸನಗಳು

13. ವಿಜಯನಗರದ ಹಂಪಿಯ ಶಾಸನಗಳು

ಈಜಿಪ್ಟ್‌ ಪ್ರದೇಶದಲ್ಲಿ ಭಾರತೀಯ ಶಾಸನಗಳು

ಇತ್ತೀಚೆಗೆ ಈಜಿಪ್ಟ್‌ನ ರಾಜರ ಕಣಿವೆ (Valley of the Kings) ಪ್ರದೇಶದಲ್ಲಿ ಆರು ಸಮಾಧಿಗಳಲ್ಲಿ ಸುಮಾರು 30 ಪ್ರಾಚೀನ ಭಾರತೀಯ ಭಾಷೆಗಳ ಶಾಸನಗಳು ಪತ್ತೆಯಾಗಿವೆ. ಇವು ಕ್ರಿ.ಶ. ಮೊದಲನೆ ಶತಮಾನದಿಂದ ಮೂರನೇ ಶತಮಾನಗಳ ನಡುವೆ ಭಾರತೀಯರು ಈಜಿಪ್ಟ್‌ನಲ್ಲಿ ಇದ್ದದ್ದಕ್ಕೆ ಹೊಸ ಸಾಕ್ಷ್ಯಗಳನ್ನು ಒದಗಿಸುತ್ತವೆ. ಈ ಶಾಸನಗಳಲ್ಲಿ ಹೆಚ್ಚಿನವು ತಮಿಳು-ಬ್ರಾಹ್ಮಿ ಲಿಪಿಯಲ್ಲಿ ಕಂಡುಬಂದಿದ್ದು, ಅವು ಆಧುನಿಕ ತಮಿಳು ಭಾಷೆಯೊಂದಿಗೆ ಸಂಬಂಧ ಹೊಂದಿವೆ. ಈ ಸಂಶೋಧನೆಯನ್ನು ಚೆನ್ನೈನಲ್ಲಿ ನಡೆದ ಅಂತರರಾಷ್ಟ್ರೀಯ ತಮಿಳು ಶಾಸನ ಸಮ್ಮೇಳನದಲ್ಲಿ ಚಾರ್ಲೆಟ್ ಶ್ಮಿಡ್ ಮತ್ತು ಇಂಗೋ ಸ್ಟ್ರೌಚ್ ಪ್ರಸ್ತುತಪಡಿಸಿದರು. ಗ್ರೀಕ್, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿರುವ ಬರಹಗಳು ಒಂದೇ ಸಮಾಧಿಯಲ್ಲಿ ಕಂಡುಬಂದಿದ್ದು, ಭಾರತೀಯರು ತಮ್ಮ ಸಾಂಸ್ಕೃತಿಕ ಗುರುತಿನ ಬಗ್ಗೆ ಜಾಗೃತರಾಗಿದ್ದರು ಹಾಗೂ ಗ್ರೀಕ್ ಭಾಷೆಯನ್ನೂ ಓದಲು ಸಾಧ್ಯವಾಗುತ್ತಿತ್ತು ಎಂಬುದನ್ನು ತೋರಿಸುತ್ತದೆ. ಈ ಪತ್ತೆ ಇಂಡೋ-ಈಜಿಪ್ಟ್ ಸಂಪರ್ಕಗಳು ರೋಮನ್ ಕಾಲದಲ್ಲಿ ಗಾಢವಾಗಿದ್ದವು ಎಂಬುದನ್ನು ದೃಢಪಡಿಸುತ್ತದೆ.

ಮುಖ್ಯವಾಗಿ “ಸಿಕೈ ಕೋಪಾನ್ ” ಎಂಬ ತಮಿಳು-ಬ್ರಾಹ್ಮಿ ಹೆಸರು ಐದು ಸಮಾಧಿಗಳಲ್ಲಿ ಎಂಟು ಬಾರಿ ಕಂಡುಬಂದಿದೆ. “ಸಿಕೈ” ಪದವು ಸಂಸ್ಕೃತದ “ಶಿಖಾ” (ಕುಡುಮೆ/ಕಿರೀಟ) ಪದದೊಂದಿಗೆ ಸಂಬಂಧ ಹೊಂದಿರಬಹುದು; “ಕೋಪಾನ್” ಪದವು ವಿಜಯ ಅಥವಾ ಹತ್ಯೆ ಅರ್ಥ ನೀಡುವ ತಮಿಳು ಮೂಲದಿಂದ ಬಂದಿದ್ದು, “ಕೋಪಾನ್ ವರತ ಕಂಡನ್” (ಕೋಪಾನ್ ಬಂದು ನೋಡಿದನು) ಎಂಬ ಶಾಸನವೂ ಪತ್ತೆಯಾಗಿದೆ. ಇದೇ “ಕೋಪಾನ್” ಪದವು ಕೆಂಪು ಸಮುದ್ರ ತೀರದ ಬರೇನಿಕೆ ನಗರದಲ್ಲಿಯೂ ಕಂಡುಬಂದಿದ್ದು, ಸಂಗಂ ಸಾಹಿತ್ಯದಲ್ಲಿಯೂ ಹಾಗೂ ಪ್ರಾಚೀನ ಚೇರರ ರಾಜಧಾನಿಯಾದ ಪುಗಲೂರು ಶಾಸನಗಳಲ್ಲಿ (ಕ್ರಿ.ಶ. 2–3ನೇ ಶತಮಾನ) ಉಲ್ಲೇಖಿತವಾಗಿದೆ. ಈ ಹೊಸ ಪತ್ತೆಗಳು ರೋಮನ್ ಈಜಿಪ್ಟ್ ಸಮಾಜದಲ್ಲಿ ಭಾರತೀಯ ಮೂಲದ ಜನರು ಒಗ್ಗೂಡಿಸಿಕೊಂಡಿದ್ದರೆಂಬುದನ್ನು ಸೂಚಿಸುತ್ತವೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಭಾರತೀಯ ಶಾಸನಗಳು ಅಥವಾ ವಸ್ತುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದು ಪ್ರಾಚೀನ ದಕ್ಷಿಣ ಭಾರತ ಮತ್ತು ಈಜಿಪ್ಟ್ ನಡುವೆ ದೂರ ವ್ಯಾಪಾರದ ಮೂಲಕ ಸಂಪರ್ಕವಿದ್ದಿರಬಹುದು ಎಂಬ ಸೂಚನೆಯನ್ನು ನೀಡುತ್ತದೆ. ಕೆಲವು ಸಂಶೋಧಕರು ತಮಿಳು-ಬ್ರಾಹ್ಮಿ ಲಿಪಿಗೆ ಹೋಲುವ ಗುರುತುಗಳನ್ನು ಗಮನಿಸಿ, ಕ್ರಿ.ಪೂ. 3ನೇ ಶತಮಾನದಿಂದ ಕ್ರಿ.ಶ. ಮೊದಲಿನ ಶತಮಾನಗಳವರೆಗೆ ತಮಿಳು ವ್ಯಾಪಾರಿಗಳು ಅಥವಾ ಪ್ರಯಾಣಿಕರು ಈಜಿಪ್ಟ್ ತಲುಪಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಚೇರ, ಚೋಳ ಮತ್ತು ಪಾಂಡ್ಯರಂತಹ ದಕ್ಷಿಣ ಭಾರತೀಯ ರಾಜ್ಯಗಳು ಕೆಂಪು ಸಮುದ್ರ ಮತ್ತು ಮೆಡಿಟೆರೇನಿಯನ್ ಪ್ರದೇಶಗಳೊಂದಿಗೆ ಸಕ್ರಿಯ ಸಮುದ್ರ ವ್ಯಾಪಾರ ನಡೆಸಿದ್ದವು.

ಶಾಸನಾಧ್ಯಯನದ ಮಹತ್ವ 

1. ರಾಜಕೀಯ ಇತಿಹಾಸದ ಪ್ರಾಮಾಣಿಕ ಮೂಲಗಳು

  • ಶಾಸನಗಳು ಭಾರತದ ರಾಜರು, ಯುದ್ಧಗಳು, ಜಯಗಳಿಸಿದ ರಾಜ್ಯಗಳು ಮತ್ತು ಆಡಳಿತ ಕ್ರಮಗಳ ಬಗ್ಗೆ ನೇರವಾದ ಮಾಹಿತಿಯನ್ನು ನೀಡುತ್ತವೆ.
  • ಸಮುದ್ರಗುಪ್ತನ ಅಲಹಾಬಾದ್ ಪ್ರಶಸ್ತಿ ಶಾಸನವಿಲ್ಲದಿದ್ದರೆ ಆ ಕಾಲದ ರಾಜಕೀಯ ಸ್ಥಿತಿಯನ್ನು ತಿಳಿಯಲು ಸಾಧ್ಯವಿರಲಿಲ್ಲ.
  • ರುದ್ರದಾಮನನ ಜುನಾಗಢ ಶಾಸನವು ಆ ಕಾಲದ ರಾಜಕೀಯ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ವಿವರಿಸುತ್ತದೆ.
  • ಶಾಸನಗಳು ರಾಜವಂಶಗಳ ವಂಶಾವಳಿ ಹಾಗೂ ಆಡಳಿತ ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ.

2. ಸಾಮಾಜಿಕ ಜೀವನದ ಪ್ರತಿಬಿಂಬ

  • ವಿವಾಹ ಪದ್ಧತಿ, ಕನ್ಯಾಶುಲ್ಕ–ವರದಕ್ಷಿಣೆ ನಿಷೇಧ, ಧಾರ್ಮಿಕ ವಿವಾದಗಳ ಪರಿಹಾರ ಮುಂತಾದ ವಿಷಯಗಳು ಶಾಸನಗಳಲ್ಲಿ ದೊರೆಯುತ್ತವೆ.
  • ರಾಜರು ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಂಡಿದ್ದಾರೆಂಬುದು ತಿಳಿದುಬರುತ್ತದೆ.
  • ಸಹಗಮನ (ಸತಿ), ಮೆರವಣಿಗೆ ಸವಾರಿ ಮುಂತಾದ ಆಚಾರ–ವಿಚಾರಗಳ ಮಾಹಿತಿಯೂ ಲಭ್ಯವಾಗುತ್ತದೆ.
  • ವಿವಿಧ ಪ್ರಾಂತಗಳ ಜನರು ಪರಸ್ಪರ ವಿವಾಹ ಸಂಬಂಧ ಬೆಳೆಸಿಕೊಂಡಿದ್ದ ಉದಾಹರಣೆಗಳು ರಾಷ್ಟ್ರೀಯ ಏಕತೆಯನ್ನು ತೋರಿಸುತ್ತವೆ.

3. ಆರ್ಥಿಕ ಸ್ಥಿತಿಗತಿಗಳ ಮಾಹಿತಿ

  • ಕೃಷಿಯೇ ಮುಖ್ಯ ಜೀವನೋಪಾಯವಾಗಿದ್ದುದನ್ನು ಶಾಸನಗಳು ದೃಢಪಡಿಸುತ್ತವೆ.
  • ನೀರಾವರಿ ವ್ಯವಸ್ಥೆಗೆ ಮಹತ್ವ ನೀಡಲಾಗಿದೆ (ಉದಾ: ಸುದರ್ಶನ ಕೆರೆ).
  • ತೆರಿಗೆ ಪದ್ಧತಿ – ಇರೈ, ಕಡಮೆ, ವೆಟ್ಟಿ ಮುಂತಾದ ತೆರಿಗೆಗಳ ಉಲ್ಲೇಖ.
  • ವ್ಯಾಪಾರ ಸಂಘಗಳು – ಅಯ್ಯಾವೋಳೆ ಐನೂರ್ವರು ಮುಂತಾದ ವಣಿಕಸಂಘಗಳ ಚಟುವಟಿಕೆ.
  • ತೂಕ ಮತ್ತು ಅಳತೆ ವ್ಯವಸ್ಥೆಗಳ ವಿವರ.

4. ಧಾರ್ಮಿಕ ಬೆಳವಣಿಗೆಗಳ ಸಾಕ್ಷ್ಯ

  • ಹೆಲಿಯೋಡೋರಸ್‌ನ ಬೆಸ್‌ನಗರ ಗರುಡಸ್ತಂಭ ಶಾಸನವು ಭಾಗವತ ಧರ್ಮದ ಪ್ರಸಾರವನ್ನು ತೋರಿಸುತ್ತದೆ.
  • ಸೂರ್ಯೋಪಾಸನೆ, ವೈದಿಕ ಆಚರಣೆಗಳು ಮತ್ತು ದೇವಾಲಯ ಜೀರ್ಣೋದ್ಧಾರಗಳ ಉಲ್ಲೇಖ.
  • ವಿವಿಧ ಧರ್ಮಗಳು ಸಹಬಾಳ್ವೆಯಿಂದ ಇದ್ದುದಕ್ಕೆ ಸಾಕ್ಷ್ಯ.

5. ಆಡಳಿತ ವ್ಯವಸ್ಥೆಯ ವಿವರಗಳು

  • ಒಂದನೇ ಪರಾಂತಕನ ಕಾಲದ ಉತ್ತರಮೇರೂರಿನ ಶಾಸನದಲ್ಲಿ ಗ್ರಾಮಸಭೆಯ ಚುನಾವಣಾ ವಿಧಾನಗಳ ವಿವರಗಳಿವೆ.
  • ಪ್ರಕೃತಿ ವಿಕೋಪಗಳ ಸಮಯದಲ್ಲಿ ಜನರಿಗೆ ನೆರವು ನೀಡಿದ ವಿವರಗಳು (ಮಹಾಸ್ಥಾನ ಶಾಸನ).
  • ಶಾಸನಗಳು ಸ್ಥಳೀಯ ಆಡಳಿತ ವ್ಯವಸ್ಥೆಯ ಪ್ರಾಚೀನತೆಯನ್ನು ತೋರಿಸುತ್ತವೆ.

6. ಶಿಕ್ಷಣದ ಬೆಳವಣಿಗೆ

  • ತಿರುಮುಕೂಡಲ್, ಎಣ್ಣಾಯರಂ ಮುಂತಾದ ಸ್ಥಳಗಳ ಶಾಸನಗಳಲ್ಲಿ ವಿದ್ಯಾಲಯಗಳ ಉಲ್ಲೇಖ.
  • ಶಿಕ್ಷಕರ ವೇತನ, ಪಠ್ಯ ವಿಷಯಗಳು ಮತ್ತು ವಿದ್ಯಾರ್ಥಿಗಳ ಮಾಹಿತಿ ದೊರೆಯುತ್ತದೆ.
  • ಶಿಕ್ಷಣವು ಸಂಘಟಿತ ಹಾಗೂ ಪ್ರೋತ್ಸಾಹಿತ ವ್ಯವಸ್ಥೆಯಾಗಿತ್ತು ಎಂಬುದು ತಿಳಿಯುತ್ತದೆ.

7. ಕಲೆ ಮತ್ತು ಸಾಹಿತ್ಯದ ಸಾಕ್ಷ್ಯ

  • ಜೋಗಿಮಾರಾ ಗುಹಾ ಶಾಸನದಲ್ಲಿ ನರ್ತಕಿಯ ಉಲ್ಲೇಖ – ನೃತ್ಯಕಲೆಯ ಪ್ರಾಚೀನತೆ.
  • ಕುಡಿಮಿಯಾಮಲೈ ಶಾಸನದಲ್ಲಿ ಸಂಗೀತದ ಉಲ್ಲೇಖ.
  • ಸಂಸ್ಕೃತ ಕಾವ್ಯಶೈಲಿಯ ಬೆಳವಣಿಗೆ (ಉದಾ: ಜುನಾಗಢ ಶಾಸನ).
  • ಶಾಸನಗಳಲ್ಲಿ ಛಂದಸ್ಸು, ಅಲಂಕಾರ ಶೈಲಿ ಕಂಡುಬರುತ್ತದೆ.

8. ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿ

  • ಕರ್ನಾಟಕದ ಹೆರಗು ಶಾಸನದಲ್ಲಿ ಕಾಶ್ಮೀರ ಮೂಲದ ಕುಟುಂಬದ ವಲಸೆ ಉಲ್ಲೇಖ.
  • ಜಾವಾ, ಸುಮಾತ್ರಾ, ಬೋರ್ನಿಯೋ ಪ್ರದೇಶಗಳಲ್ಲಿ ದೊರೆತ ಭಾರತೀಯ ಪ್ರಭಾವದ ಶಾಸನಗಳು ಭಾರತೀಯ ಸಂಸ್ಕೃತಿಯ ವಿಸ್ತಾರವನ್ನು ತೋರಿಸುತ್ತವೆ.
  • ವಿದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕದ ಸಾಕ್ಷ್ಯ.

ಉಪಸಂಹಾರ

ಶಾಸನಗಳು ಭಾರತೀಯ ಇತಿಹಾಸದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಾಥಮಿಕ ಮೂಲಗಳಾಗಿವೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶಿಕ್ಷಣ, ಕಲೆ ಮತ್ತು ಆಡಳಿತ ಕ್ಷೇತ್ರಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಮೂಲಕ ಅವು ನಮ್ಮ ಭೂತಕಾಲದ ನಿಖರ ಚಿತ್ರಣವನ್ನು ಕೊಡುತ್ತವೆ..

ಪುರಾತತ್ವ ಶಾಸ್ತ್ರದ ಅರ್ಥ, ವ್ಯಾಖ್ಯೆ, ಸ್ವರೂಪ, ವ್ಯಾಪ್ತಿ ಮತ್ತು ಮಹತ್ವ

ಪುರಾತತ್ವ ಶಾಸ್ತ್ರದ ಅರ್ಥ, ವ್ಯಾಖ್ಯೆ, ಸ್ವರೂಪ, ವ್ಯಾಪ್ತಿ ಮತ್ತು ಮಹತ್ವ

  1. ಪುರಾತತ್ವ ಶಾಸ್ತ್ರದ ಅರ್ಥ:

ಪುರಾತತ್ವ ಶಾಸ್ತ್ರವೆಂದರೆ ಮಾನವ ಸಮುದಾಯದ ಭೂತಕಾಲದ ಜೀವನವನ್ನು ಬೌದ್ಧಿಕ ಅವಶೇಷಗಳ  ಆಧಾರದಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡುವ ಶಾಸ್ತ್ರ.

ಪುರಾತತ್ವಶಾಸ್ತ್ರವನ್ನು ಇಂಗ್ಲೀಷಿನಲ್ಲಿ ಆರ್ಕಿಯಾಲಜಿ (Archaeology)  ಎಂದು ಕರೆಯುತ್ತಾರೆ. Archaeology ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ.

Archaios (ಆರ್ಕಿಯೋಸ್‌) ಎಂದರೆ ಪ್ರಾಚೀನ ಅಥವಾ ಹಳೆಯ Logos  (ಲೋಗೋಸ್‌)  ಎಂದರೆ ಶಾಸ್ತ್ರ ಅಥವಾ ಅಧ್ಯಯನ.

Archaios ಎಂದರೆ ಪ್ರಾಚೀನ ಎಂದರ್ಥವಿದ್ದರೂ ಪ್ರಾಚೀನ ವಸ್ತು ಅಥವಾ ಅವಶೇಷ ಎಂಬ ಅರ್ಥದಲ್ಲಿ ಉಪಯೋಗಿಸಲಾಗುತ್ತಿದ್ದು ಒಟ್ಟಾರೆಯಾಗಿ ಪ್ರಾಚೀನ ವಸ್ತುಗಳ ಬಗ್ಗೆ ಮಾಡುವ ವೈಜ್ಞಾನಿಕ ಅಧ್ಯಯನವಾಗಿದೆ.

ಶೈಕ್ಷಣಿಕವಾಗಿ ಪುರಾತತ್ವಶಾಸ್ತ್ರವನ್ನು ಈ ರೀತಿ ಅರ್ಥೈಸಿಕೊಳ್ಳಬಹುದು. ಪುರಾತನ ಅವಶೇಷಗಳ ಶಾಸ್ತ್ರೀಯ ಅಧ್ಯಯನದಿಂದ ಮಾನವನ  ಗತಕಾಲದ ಸಂಸ್ಕೃತಿಯ ವಿವಿಧ ಮುಖಗಳನ್ನು ವಿವೇಚಿಸುವ ಶಾಸ್ತ್ರವೇ ಪುರಾತತ್ವಶಾಸ್ತ್ರ.

ಪುರಾತನ ಅಥವಾ ಹಿಂದಿನ ಅವಶೇಷಗಳೆಂದರೆ ಮಾನವನು ತಾನು ಜೀವಂತವಿದ್ದ ಕಾಲದಲ್ಲಿ ಬಳಸುತ್ತಿದ್ದ ಯಾವುದೇ ರೀತಿಯ ವಸ್ತುಗಳಾಗಿರಬಹುದು. ಉದಾಹರಣೆಗೆ ಅವನು ವಾಸವಿದ್ದ ಮನೆ,  ಗುಹೆ, ಅಲ್ಲಿ ಅವನು ರಚಿಸಿದ ಚಿತ್ರಗಳು, ಕಟ್ಟಡಗಳು, ದೇಗುಲಗಳು, ಪ್ರತಿಮೆ, ಮಡಿಕೆ, ಕಲ್ಲಿನ ಆಯುಧ, ಸಲಕರಣೆಗಳು, ಆಟಿಕೆಗಳು, ಶಾಸನಗಳು, ನಾಣ್ಯ, ಮುದ್ರೆ ಮುಂತಾದವು ಪ್ರಾಚ್ಯ ಅವಶೇಷಗಳ ಅಡಿ ಬರುತ್ತದೆ. ಇವುಗಳ ಮೂಲಕ ಆ ಕಾಲದ ಜನಜೀವನ ಮತ್ತು ಸಂಸ್ಕೃತಿಯನ್ನು ತಿಳಿಯಬಹುದು. ಅಂದರೆ ದೊರೆತ ಅವಶೇಷಗಳ ಕ್ರಮಬದ್ಧ ಮತ್ತು ವೈಜ್ಞಾನಿಕ ಅಧ್ಯಯನವೇ ಪುರಾತತ್ವ ಶಾಸ್ತ್ರ.

2.  ಪುರಾತತ್ವ ಶಾಸ್ತ್ರದ ವ್ಯಾಖ್ಯೆಗಳು

ಪುರಾತತ್ವಶಾಸ್ತ್ರಜ್ಞರಾದ ಡಾ. ಹೆನ್ರಿ ಅವರ ಪ್ರಕಾರ

ʻʻ  ಹಿಂದಿನ ಸತ್ಯಗಳನ್ನು ಕಂಡುಕೊಳ್ಳುವುದೇ ಪುರಾತತ್ವಶಾಸ್ತ್ರʼʼ

ಗ್ರಹಮ್‌ ಕ್ಲಾರ್ಕ್‌ ಅವರ ಪ್ರಕಾರ ʻʻಗತಕಾಲದ ಇತಿಹಾಸದ ಪುನರ್ ರಚನೆಗಾಗಿ ಪ್ರಾಚ್ಯ ವಸ್ತುಗಳ ಶಾಸ್ತ್ರೀಯ ಅಧ್ಯಯನವೇ ಪುರಾತತ್ವ ಶಾಸ್ತ್ರ.ʼʼ

ಎಚ್‌.ಡಿ ಸಂಕಾಲಿಯ ಅವರ ಪ್ರಕಾರ ʻʻಮಾನವನು ಭೂಮಿಯ ಮೇಲೆ ಕಾಣಿಸಿಕೊಂಡಾಗಿನಿಂದಲೂ ಅವನು ಕಾಲಾನುಕ್ರಮದಲ್ಲಿ ಬಿಟ್ಟು ಹೋದ ವಸ್ತುಗಳ ಅಧ್ಯಯನದಿಂದ ಮಾನವನ ಇತಿಹಾಸದ ನಿರ್ಮಾಣದ ಯತ್ನವೇ ಪುರಾತತ್ವಶಾಸ್ತ್ರʼʼ.

ಡೇವಿಡ್ ಹರ್ಟ್ಸ್ ಥಾಮಸ್:

ʻʻಪುರಾತತ್ವ ಶಾಸ್ತ್ರವು ನೀವು ಕಂಡುಕೊಳ್ಳುವುದಲ್ಲ ಅದು ನೀವು ಕಂಡುಕೊಳ್ಳುವುದು.ʼʼ

ಕೆತ್ಲಿನ್ ಕೆನ್ಯಾನ್

ಅವರ ಪ್ರಕಾರ ʻʻ ಪುರಾತತ್ವಶಾಸ್ತ್ರವು ಮಾನವ ಜನಾಂಗದ ಭೂತಕಾಲವನ್ನು ಅದರ ಭೌತಿಕ ಅಂಶಗಳಲ್ಲಿ ಕಂಡು ಹಿಡಿಯುವ ಮತ್ತು ಈ ಭೂತಕಾಲದ ಉತ್ಪನ್ನಗಳ ಅಧ್ಯಯನವಾಗಿದೆ.

ಶೈಕ್ಷಣಿಕವಾಗಿ ಪುರಾತತ್ವ ಶಾಸ್ತ್ರವನ್ನು ರೀತಿ ವ್ಯಾಖ್ಯಾನಿಸಬಹುದು

ʻʻ ಹಿಂದಿನ ಮಾನವ ಸಂಸ್ಕೃತಿಗಳು ಬಿಟ್ಟು ಹೋದ ಭೌತಿಕ ಅವಶೇಷಗಳನ್ನು ವ್ಯವಸ್ಥಿತವಾಗಿ ಹೊರತೆಗೆಯುವ ದಾಖಲಿಸುವ ಮತ್ತು ವಿಶ್ಲೇಷಿಸುವ ಮೂಲಕ ಗತಕಾಲದ ಮಾನವ ಜೀವನವನ್ನು ಅಧ್ಯಯನ ಮಾಡುವ ಶಾಸ್ತ್ರವೇ ಪುರಾತತ್ವ ಶಾಸ್ತ್ರʼʼ

3. ಪುರಾತತ್ವ ಶಾಸ್ತ್ರದ ಸ್ವರೂಪ

ಪುರಾತತ್ವಶಾಸ್ತ್ರವು ಮಾನವ ಇತಿಹಾಸದ ಅಧ್ಯಯನವನ್ನು ಭೌತಿಕ ಅವಶೇಷಗಳ ಆಧಾರದಲ್ಲಿ ನಡೆಸುವ ವೈಜ್ಞಾನಿಕ ಹಾಗೂ ಮಾನವೀಯ ಶಾಸ್ತ್ರವಾಗಿದೆ. ಇದು ಮಾನವ ಸಮುದಾಯಗಳ ಪುರಾತನ ಸಂಸ್ಕೃತಿ, ಸಮಾಜ, ಆರ್ಥಿಕ ವ್ಯವಸ್ಥೆ, ಧಾರ್ಮಿಕ ನಂಬಿಕೆಗಳು ಮತ್ತು ತಾಂತ್ರಿಕ ಅಭಿವೃದ್ಧಿಯನ್ನು ಅವಶೇಷಗಳು, ನಿರ್ಮಿತಿಗಳು, ಪರಿಸರ ಸಂಬಂಧಿತ ಸಾಕ್ಷ್ಯಗಳು ಹಾಗೂ ಭೂದೃಶ್ಯಗಳ ಮೂಲಕ ಪುನರ್‌ನಿರ್ಮಿಸಲು ಪ್ರಯತ್ನಿಸುತ್ತದೆ. ಪುರಾತತ್ವಶಾಸ್ತ್ರದ ಸ್ವರೂಪ ಬಹುಮುಖವಾಗಿದ್ದು, ವೈಜ್ಞಾನಿಕ ವಿಧಾನಗಳನ್ನೂ ವಿವರಣಾತ್ಮಕ ದೃಷ್ಟಿಕೋನವನ್ನೂ ಹೊಂದಿದೆ.

1. ಪುರಾತತ್ವಶಾಸ್ತ್ರವು ವೈಜ್ಞಾನಿಕ ಶಾಸ್ತ್ರ

ಪುರಾತತ್ವಶಾಸ್ತ್ರವು ಸಮೀಕ್ಷೆ, ಉತ್ಖನನ, ವರ್ಗೀಕರಣ, ದಿನಾಂಕ ನಿರ್ಧಾರ ಮತ್ತು ಪ್ರಯೋಗಾಲಯ ವಿಶ್ಲೇಷಣೆ ಮೊದಲಾದ ಕ್ರಮಬದ್ಧ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತದೆ. ಪದರಶಾಸ್ತ್ರ (Stratigraphy), ಕಾರ್ಬನ್ ಡೇಟಿಂಗ್‌ (Carbon Dating), GIS ನಕ್ಷೆ ನಿರ್ಮಾಣ ಇತ್ಯಾದಿ ತಂತ್ರಗಳು ಕಾಲಕ್ರಮವನ್ನು ನಿರ್ಧರಿಸಲು ಸಹಾಯಕವಾಗುತ್ತವೆ. ಈ ವೈಜ್ಞಾನಿಕ ವಿಧಾನಗಳು ಅಧ್ಯಯನಕ್ಕೆ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತವೆ.

2. ಪುರಾತತ್ವಶಾಸ್ತ್ರವು ಸಾಮಾಜಿಕ ವಿಜ್ಞಾನ

ಪುರಾತತ್ವಶಾಸ್ತ್ರವು ಮಾನವ ವರ್ತನೆ, ಸಾಮಾಜಿಕ ಸಂಘಟನೆ, ಆರ್ಥಿಕ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ಅಧ್ಯಯನ ಮಾಡುತ್ತದೆ. ಮಾನವರು ತಮ್ಮ ಪರಿಸರದೊಂದಿಗೆ ಹೇಗೆ ಸಂಬಂಧ ಹೊಂದಿದ್ದರು ಮತ್ತು ಸಮಾಜದ ರಚನೆ ಹೇಗೆ ರೂಪುಗೊಂಡಿತು ಎಂಬುದನ್ನು ಇದು ವಿಶ್ಲೇಷಿಸುತ್ತದೆ. ಈ ದೃಷ್ಟಿಯಿಂದ ಇದು ಮಾನವಶಾಸ್ತ್ರ, ಸಮಾಜಶಾಸ್ತ್ರ ಮತ್ತು ಇತಿಹಾಸಶಾಸ್ತ್ರಗಳೊಂದಿಗೆ ಸಂಪರ್ಕ ಹೊಂದಿದೆ.

3. ಪುರಾತತ್ವಶಾಸ್ತ್ರವು ಇತಿಹಾಸಾತ್ಮಕ ಶಾಸ್ತ್ರ

ಲಿಖಿತ ದಾಖಲೆಗಳಿಗಿಂತ ಭಿನ್ನವಾಗಿ, ಪುರಾತತ್ವಶಾಸ್ತ್ರವು ಮುಖ್ಯವಾಗಿ ಭೌತಿಕ ಸಾಕ್ಷ್ಯಗಳ ಮೇಲೆ ಅವಲಂಬಿತವಾಗಿದೆ. ಲಿಖಿತ ದಾಖಲೆಗಳಿಲ್ಲದ ಪೂರ್ವಇತಿಹಾಸದ ಕಾಲಘಟ್ಟಗಳ ಅಧ್ಯಯನದಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಇತಿಹಾಸಕಾಲದಲ್ಲಿಯೂ ಪುರಾತತ್ವ ಸಾಕ್ಷ್ಯಗಳು ಸಾಹಿತ್ಯ ಮೂಲಗಳನ್ನು ಪೂರೈಸುತ್ತವೆ ಅಥವಾ ಕೆಲವೊಮ್ಮೆ ಅವುಗಳನ್ನು ತಿದ್ದುಪಡಿಗೂ ಒಳಪಡಿಸುತ್ತವೆ.

4. ಪುರಾತತ್ವಶಾಸ್ತ್ರದ ಅಂತರ್‌ ಶಾಖೀಯ ಸ್ವಭಾವ

ಪುರಾತತ್ವಶಾಸ್ತ್ರವು ಭೂಗರ್ಭಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಮಾನವಶಾಸ್ತ್ರ, ಪರಿಸರ ವಿಜ್ಞಾನ ಮತ್ತು ಭೌತಶಾಸ್ತ್ರ ಮುಂತಾದ ಹಲವು ಶಾಸ್ತ್ರಗಳ ಜ್ಞಾನವನ್ನು ಒಗ್ಗೂಡಿಸುತ್ತದೆ.

  • ಭೂಗರ್ಭಶಾಸ್ತ್ರವು ಮಣ್ಣಿನ ಪದರಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ರಸಾಯನಶಾಸ್ತ್ರವು ದಿನಾಂಕ ನಿರ್ಧಾರ ತಂತ್ರಗಳಿಗೆ ನೆರವಾಗುತ್ತದೆ.
  • ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರವು ಎಲುಬುಗಳು ಮತ್ತು ಸಸ್ಯಾವಶೇಷಗಳನ್ನು ಗುರುತಿಸಲು ಸಹಾಯಕವಾಗುತ್ತವೆ.

ಹೀಗಾಗಿ ಪುರಾತತ್ವಶಾಸ್ತ್ರವು ಸ್ವಭಾವತಃ ಅಂತರ್ ಶಾಖೀಯವಾಗಿದೆ ಮತ್ತು ವಿವಿಧ ಜ್ಞಾನಶಾಖೆಗಳೊಂದಿಗೆ ಅಂತರ್‌ ಸಂಬಂಧವನ್ನು ಹೊಂದಿದೆ.

5. ಸಾಂಸ್ಕೃತಿಕ ಮತ್ತು ವಿವರಣಾತ್ಮಕ ಸ್ವಭಾವ

ಪುರಾತತ್ವಶಾಸ್ತ್ರವು ವಸ್ತುಗಳ ಪತ್ತೆಗಿಂತಲೂ ಅವುಗಳ ಅರ್ಥವನ್ನು ತಿಳಿಯುವ ಪ್ರಯತ್ನವಾಗಿದೆ. ಪತ್ತೆಯಾದ ಅವಶೇಷಗಳನ್ನು ಅವುಗಳ ಸಂದರ್ಭದೊಂದಿಗೆ ವಿಶ್ಲೇಷಿಸಿ, ಧಾರ್ಮಿಕ ನಂಬಿಕೆಗಳು, ಕಲಾತ್ಮಕ ಅಭಿವ್ಯಕ್ತಿ ಮತ್ತು ತಾಂತ್ರಿಕ ಪ್ರಗತಿಯನ್ನು ಅರ್ಥಮಾಡಿಕೊಳ್ಳಲಾಗುತ್ತದೆ.

6. ಕ್ಷೇತ್ರ ಮತ್ತು ಪ್ರಯೋಗಾಲಯ ಆಧಾರಿತ ಶಾಸ್ತ್ರ

ಪುರಾತತ್ವಶಾಸ್ತ್ರವು ಕ್ಷೇತ್ರಕಾರ್ಯ (ಸಮೀಕ್ಷೆ ಮತ್ತು ಉತ್ಖನನ) ಹಾಗೂ ಪ್ರಯೋಗಾಲಯ ಕಾರ್ಯ (ವಿಶ್ಲೇಷಣೆ, ಸಂರಕ್ಷಣೆ ಮತ್ತು ದಾಖಲೀಕರಣ) ಎರಡನ್ನೂ ಒಳಗೊಂಡಿದೆ. ಸರಿಯಾದ ದಾಖಲಾತಿ ಮತ್ತು ಸಂರಕ್ಷಣೆ ಪುರಾತತ್ವ ಅಧ್ಯಯನದ ಮುಖ್ಯ ಅಂಶಗಳಾಗಿವೆ.

7. ಸಂರಕ್ಷಣಾ ಕೇಂದ್ರೀಕೃತ ಶಾಸ್ತ್ರ

ಆಧುನಿಕ ಪುರಾತತ್ವಶಾಸ್ತ್ರವು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಒತ್ತು ನೀಡುತ್ತದೆ. ಸ್ಮಾರಕಗಳು, ಅವಶೇಷಗಳು ಮತ್ತು ಪುರಾತನ ಸಾಂಸ್ಕೃತಿಕ ಸ್ಥಳಗಳನ್ನು ಮುಂದಿನ ಪೀಳಿಗೆಗಳಿಗಾಗಿ ರಕ್ಷಿಸುವುದು ಇದರ ಪ್ರಮುಖ ಗುರಿಯಾಗಿದೆ.

 ಉಪಸಂಹಾರ:

ಪುರಾತತ್ವಶಾಸ್ತ್ರದ ಸ್ವರೂಪವು ವೈಜ್ಞಾನಿಕ, ಸಾಮಾಜಿಕ, ಇತಿಹಾಸಾತ್ಮಕ, ಅಂತರಶಾಖೀಯ ಮತ್ತು ವಿವರಣಾತ್ಮಕವಾಗಿದೆ. ಇದು ಭೌತಿಕ ಸಾಕ್ಷ್ಯಗಳ ಮೂಲಕ ಭೂತಕಾಲ ಮತ್ತು ವರ್ತಮಾನಗಳ ನಡುವೆ ಸೇತುವೆ ನಿರ್ಮಿಸುತ್ತದೆ. ಮಾನವ ಸಂಸ್ಕೃತಿಯ ನಿರಂತರತೆ ಮತ್ತು ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಪುರಾತತ್ವಶಾಸ್ತ್ರವು ಅತ್ಯಂತ ಪ್ರಮುಖವಾದ ಶಾಸ್ತ್ರವಾಗಿದೆ.

4. ಪುರಾತತ್ವ ಶಾಸ್ತ್ರದ ವ್ಯಾಪ್ತಿ

ಪೀಠಿಕೆ:

ಪುರಾತತ್ವ ಶಾಸ್ತ್ರ (Archaeology) ಎಂದರೆ ಮಾನವ ಇತಿಹಾಸ ಮತ್ತು ಸಂಸ್ಕೃತಿಯ ವಿಕಾಸವನ್ನು ಭೌತಿಕ ಅವಶೇಷಗಳ ಆಧಾರದ ಮೇಲೆ ಅಧ್ಯಯನ ಮಾಡುವ ವೈಜ್ಞಾನಿಕ ವಿದ್ಯಾಶಾಖೆ. “Archaios” (ಪ್ರಾಚೀನ) ಮತ್ತು “Logos” (ಅಧ್ಯಯನ) ಎಂಬ ಗ್ರೀಕ್ ಪದಗಳಿಂದ ಉದ್ಭವಿಸಿದ ಈ ಶಾಸ್ತ್ರವು ಮಾನವ ಜೀವನದ ಮೂಲಗಳಿಂದ ಆಧುನಿಕ ಯುಗದವರೆಗಿನ ಸಾಂಸ್ಕೃತಿಕ ಪರಿವರ್ತನೆಯನ್ನು ವಿಶ್ಲೇಷಿಸುತ್ತದೆ.

ಸಾಹಿತ್ಯ ಮೂಲಗಳು ಲಭ್ಯವಿಲ್ಲದ ಅಥವಾ ಅಪೂರ್ಣವಾಗಿರುವ ಸಂದರ್ಭಗಳಲ್ಲಿ ಪುರಾತತ್ವವೇ ಪ್ರಮುಖ ಇತಿಹಾಸ ಮೂಲವಾಗುತ್ತದೆ.

1. ಪುರಾತನ ಮಾನವ ಜೀವನದ ಅಧ್ಯಯನ : ಲಿಖಿತ ದಾಖಲೆಗಳಿಗಿಂತ ಮುಂಚಿನ ಕಾಲವನ್ನು ಪೂರ್ವ ಇತಿಹಾಸ ಎಂದು ಕರೆಯುತ್ತಾರೆ. ಈ ಅವಧಿಯ ಮಾನವರ ಜೀವನಶೈಲಿ, ಆಹಾರ ಪದ್ಧತಿ, ಉಪಕರಣಗಳ ಬಳಕೆ ಮತ್ತು ವಾಸಸ್ಥಾನಗಳನ್ನು ಪುರಾತತ್ವ ಅವಶೇಷಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ. ಕಲ್ಲು ಯುಗದ ಉಪಕರಣಗಳು, ಗುಹಾಚಿತ್ರಗಳು ಮತ್ತು ಇನ್ನಿತರೆ ಅವಶೇಷಗಳು ಮಾನವ ವಿಕಾಸದ ಹಾದಿಯನ್ನು ಸ್ಪಷ್ಟಪಡಿಸುತ್ತವೆ.

2. ನಾಗರೀಕತೆಗಳ ಉದಯದ ಅಧ್ಯಯನ : ಸಿಂದೂ ಬಯಲಿನ ನಾಗರೀಕತೆ ಮುಂತಾದ ಪ್ರಾಚೀನ ನಾಗರಿಕತೆಗಳು ನಗರ ಯೋಜನೆ, ವಾಣಿಜ್ಯ ಮತ್ತು ಸಾಮಾಜಿಕ ವ್ಯವಸ್ಥೆಗಳ ಅಧ್ಯಯನಕ್ಕೆ ಮೂಲವಾಗಿವೆ. ನಗರ ವಿನ್ಯಾಸ, ನೀರಿನ ನಿರ್ವಹಣೆ ಮತ್ತು ಕೈಗಾರಿಕೆಗಳ ಬೆಳವಣಿಗೆ ಇವುಗಳಿಂದ ತಿಳಿಯುತ್ತದೆ.

3. ಉತ್ಕನನ(Excavation) ಮತ್ತು ಪದರಕ್ರಮದ(Stratigraphy) ಅಧ್ಯಯನ : ಪುರಾತತ್ವದಲ್ಲಿ ಉತ್ಕನನ ಪ್ರಮುಖ ವಿಧಾನವಾಗಿದೆ. ಭೂಮಿಯ ಪದರಗಳನ್ನು ಕ್ರಮಬದ್ಧವಾಗಿ ಅಧ್ಯಯನ ಮಾಡುವುದರಿಂದ ಕಾಲಕ್ರಮ ನಿರ್ಧಾರ ಸಾಧ್ಯವಾಗುತ್ತದೆ. ಪದರಕ್ರಮವು ವಸ್ತುಗಳ ಕಾಲನಿರ್ಣಯಕ್ಕೆ ಮೂಲಾಧಾರವಾಗಿದೆ.

4.  ದಿನಾಂಕ ನಿರ್ಧಾರ ತಂತ್ರಗಳ ಅಧ್ಯಯನ: ಕಾರ್ಬನ್-14 ಪರೀಕ್ಷೆ(Carbon Dating Method), ಥರ್ಮೊಲ್ಯೂಮಿನೆಸೆನ್ಸ್ ಹಾಗೂ ಡೆಂಡ್ರೋಕ್ರೋನಾಲಜಿ ಮುಂತಾದ ವೈಜ್ಞಾನಿಕ ವಿಧಾನಗಳಿಂದ ವಸ್ತುಗಳ ವಯಸ್ಸನ್ನು ನಿರ್ಧರಿಸಲಾಗುತ್ತದೆ.

5. ವಾಸಸ್ಥಾನ ಮತ್ತು ಸಮಾಧಿ ಅಧ್ಯಯನ : ವಾಸಸ್ಥಾನಗಳ ವಿನ್ಯಾಸ, ಸಮಾಧಿ ಪದ್ಧತಿಗಳು ಮತ್ತು ಸಂಸ್ಕಾರಗಳ ವಿಶ್ಲೇಷಣೆ ಸಮಾಜದ ಧಾರ್ಮಿಕ ನಂಬಿಕೆಗಳು ಮತ್ತು ಸಾಮಾಜಿಕ ರಚನೆಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಬೃಹತ್‌ ಶಿಲಾ ಯುಗ ಕಾಲದ ಸಮಾಧಿಗಳು ದಕ್ಷಿಣ ಭಾರತದಲ್ಲಿ ಪ್ರಮುಖ ಅಧ್ಯಯನ ಕ್ಷೇತ್ರವಾಗಿವೆ.

6. ಜೀವನೋಪಾಯ ಮತ್ತು ಆರ್ಥಿಕ ಚಟುವಟಿಕೆಗಳ ಅಧ್ಯಯನ :   ಕೃಷಿ ಉಪಕರಣಗಳು, ಮಣ್ಣಿನ ಪಾತ್ರೆಗಳು ಮತ್ತು ನಾಣ್ಯಗಳು ಆರ್ಥಿಕ ಚಟುವಟಿಕೆಗಳ ಕುರಿತು ತಿಳಿಸುತ್ತವೆ. ಉತ್ಪಾದನೆ, ವಿತರಣಾ ವ್ಯವಸ್ಥೆ ಮತ್ತು ವ್ಯಾಪಾರ ಜಾಲಗಳ ವಿಶ್ಲೇಷಣೆ ಪುರಾತತ್ವದ ವ್ಯಾಪ್ತಿಗೆ ಸೇರಿದೆ.

7.  ಪರಿಸರ ಪುರಾತತ್ವ (Environmental Archaeology)ದ ಅಧ್ಯಯನ : ಪರಿಸರ ಪುರಾತತ್ವವು  ಮಾನವ ಮತ್ತು ಪ್ರಕೃತಿ ನಡುವಿನ ಸಂಬಂಧವನ್ನು ಅಧ್ಯಯನ ಮಾಡುವ ವಿಭಾಗವಾಗಿದೆ. ಹವಾಮಾನ ಬದಲಾವಣೆ, ಮಣ್ಣಿನ ಸಂರಚನೆ ಮತ್ತು ಸಸ್ಯ-ಪ್ರಾಣಿ ಅವಶೇಷಗಳು ಮಾನವ ಜೀವನದ ಮೇಲೆ ಪರಿಸರದ ಪರಿಣಾಮವನ್ನು ತೋರಿಸುತ್ತವೆ.

8.  ಸಮುದ್ರ ಮತ್ತು ಜಲ ಪುರಾತತ್ವ ದ ಅಧ್ಯಯನ :  ಸಮುದ್ರದಡಿಯಲ್ಲಿ ದೊರೆಯುವ ಹಡಗು ಅವಶೇಷಗಳು ಮತ್ತು ಮುಳುಗಿದ ನಗರಗಳು, ವ್ಯಾಪಾರ ಹಾಗೂ ನಾವಿಕ ತಂತ್ರಜ್ಞಾನಗಳ ಅಧ್ಯಯನಕ್ಕೆ ಸಹಕಾರಿ. ಇದು ಪುರಾತತ್ವದ ವಿಸ್ತೃತ ಕ್ಷೇತ್ರವಾಗಿದೆ.

9. ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಅಧ್ಯಯನ :   ದೇವಾಲಯಗಳು, ಅರಮನೆಗಳು ಮತ್ತು ಕೋಟೆಗಳ ಅವಶೇಷಗಳು ವಾಸ್ತುಶಿಲ್ಪದ ಅಭಿವೃದ್ಧಿಯನ್ನು ತೋರಿಸುತ್ತವೆ. ಶಿಲ್ಪಕಲೆ ಮತ್ತು ಚಿತ್ರಕಲೆ ಮಾನವನ ಸೃಜನಶೀಲತೆಯ ಸಾಕ್ಷಿಗಳಾಗಿವೆ.

10. ತಂತ್ರಜ್ಞಾನ ಅಭಿವೃದ್ಧಿಯ ಅಧ್ಯಯನ : ಲೋಹಶಿಲ್ಪ, ಮಣ್ಣಿನ ಪಾತ್ರೆಗಳ ತಯಾರಿ ಮತ್ತು ಕೈಗಾರಿಕಾ ಸಾಧನಗಳ ಅಧ್ಯಯನ ತಂತ್ರಜ್ಞಾನ ವಿಕಾಸವನ್ನು ಸೂಚಿಸುತ್ತದೆ. ಕಂಚು ಯುಗದಿಂದ ಲೋಹ ಯುಗದವರೆಗೆ ತಂತ್ರಜ್ಞಾನ ಬದಲಾವಣೆಗಳು ಪುರಾತತ್ವದ ವ್ಯಾಪ್ತಿಗೆ ಸೇರಿವೆ.

11. ಮಾನವಶಾಸ್ತ್ರ ಮತ್ತು ಭೂವಿಜ್ಞಾನದ ಅಧ್ಯಯನ : ಪುರಾತತ್ವಶಾಸ್ತ್ರವು ಮಾನವಶಾಸ್ತ್ರ, ಭೂವಿಜ್ಞಾನ ಮತ್ತು ರಸಾಯನಶಾಸ್ತ್ರದೊಂದಿಗೆ ಸಂಯೋಜಿತವಾಗಿದೆ. ಈ ಅಂತರಶಾಖಾ ವಿಧಾನವು ಸಮಗ್ರ ಇತಿಹಾಸ ನಿರ್ಮಾಣಕ್ಕೆ ಸಹಕಾರಿ.

12. ಡಿಜಿಟಲ್ ಪುರಾತತ್ವ : GIS ಎಂದರೆ ಭೌಗೋಳಿಕ ಮಾಹಿತಿ ವ್ಯವಸ್ಥೆ. ಇದು ಸ್ಥಳಸಂಬಂಧಿತ (spatial) ಡೇಟಾವನ್ನು ಸಂಗ್ರಹಿಸಿ, ವಿಶ್ಲೇಷಿಸಿ ಮತ್ತು ನಕ್ಷೆ ರೂಪದಲ್ಲಿ ಪ್ರದರ್ಶಿಸುವ ವ್ಯವಸ್ಥೆ. ಪುರಾತತ್ವದಲ್ಲಿ ಸ್ಥಳಗಳ ವಿಸ್ತಾರ, ವಾಸಸ್ಥಾನಗಳ ಹಂಚಿಕೆ, ನದಿ-ಪರ್ವತಗಳ ಸಂಬಂಧ ಮತ್ತು ವ್ಯಾಪಾರ ಮಾರ್ಗಗಳ ವಿಶ್ಲೇಷಣೆಗೆ GIS ಉಪಯೋಗವಾಗುತ್ತದೆ. ಅಲ್ಲದೇ  3D ಮಾದರೀಕರಣ ಮುಂತಾದ ತಂತ್ರಜ್ಞಾನಗಳು ಪುರಾತತ್ವ ಅಧ್ಯಯನವನ್ನು ಆಧುನಿಕಗೊಳಿಸಿವೆ.

13. ರಿಮೋಟ್ ಸೆನ್ಸಿಂಗ್ (Remote Sensing) : ರಿಮೋಟ್ ಸೆನ್ಸಿಂಗ್ ಎಂದರೆ ಭೂಮಿಯ ಮೇಲ್ಮೈಯನ್ನು ಉಪಗ್ರಹಗಳು, ವಿಮಾನಗಳು ಅಥವಾ ಡ್ರೋನ್‌ಗಳ ಮೂಲಕ ದೂರದಿಂದ ಪರಿಶೀಲಿಸುವ ವಿಧಾನ. ಮಣ್ಣಿನ ಬಣ್ಣ, ಸಸ್ಯಾವರಣ ಮತ್ತು ಭೂಪರಿವರ್ತನೆಗಳ ಆಧಾರದ ಮೇಲೆ ಭೂಗರ್ಭದಲ್ಲಿರುವ ಪುರಾತತ್ವ ಸ್ಥಳಗಳನ್ನು ಗುರುತಿಸಲಾಗುತ್ತದೆ. ಇದರಿಂದ ಭೂಗತ ನಗರಗಳ ಗುರುತು, ಕೃಷಿಭೂಮಿಯಡಿಯಲ್ಲಿ ಅವಿತಿರುವ ಕಟ್ಟಡ ಅವಶೇಷಗಳ ಪತ್ತೆ ಮುಂತಾದವು ಪುರಾತತ್ವ ಸಮೀಕ್ಷೆಗೆ ಪೂರ್ವಭಾವಿ ಮಾಹಿತಿ ಒದಗಿಸುತ್ತದೆ. ಡ್ರೋನ್ ತಂತ್ರಜ್ಞಾನವು ಹೆಚ್ಚಿನ ರೆಸಲ್ಯೂಷನ್ ಚಿತ್ರಗಳನ್ನು ಒದಗಿಸಿ ತೋಡುಗೈ ಕಾರ್ಯವನ್ನು ಸುಲಭಗೊಳಿಸಿದೆ.

ಉಪಸಂಹಾರ:  ಪುರಾತತ್ವ ಶಾಸ್ತ್ರದ ವ್ಯಾಪ್ತಿ ಅತ್ಯಂತ ವಿಶಾಲ ಮತ್ತು ಬಹುಮುಖವಾಗಿದೆ. ಇದು ಮಾನವ ನಾಗರಿಕತೆಯ ಮೂಲಗಳನ್ನು ಅನಾವರಣಗೊಳಿಸುವ ವೈಜ್ಞಾನಿಕ ವಿಧಾನವಾಗಿದೆ. ಪೂರ್ವ ಇತಿಹಾಸದಿಂದ ಆಧುನಿಕ ತಂತ್ರಜ್ಞಾನವರೆಗೂ ವ್ಯಾಪಿಸಿರುವ ಪುರಾತತ್ವ ಶಾಸ್ತ್ರವು ಇತಿಹಾಸ ನಿರ್ಮಾಣಕ್ಕೆ ಪ್ರಮುಖ ಆಧಾರವಾಗಿದೆ. ಪುರಾತತ್ವವು ಕೇವಲ ಉತ್ಕನನ ಶಾಸ್ತ್ರವಲ್ಲ; ಅದು ತತ್ವಚಿಂತನೆ, ವಿಧಾನಶಾಸ್ತ್ರ ಮತ್ತು ಅಂತರಶಾಖಾ ಸಂಯೋಜನೆಯ ಸಮಗ್ರ ಕ್ಷೇತ್ರವಾಗಿದೆ.

5.  ಪುರಾತತ್ತ್ವಶಾಸ್ತ್ರದ ಮಹತ್ವ

 1. ಪೂವ್ರೈತಿಹಾಸಿಕ ಕಾಲದ ಏಕೈಕ ಮೂಲ : ಪುರಾತತ್ತ್ವಶಾಸ್ತ್ರವು ಬರವಣಿಗೆಯಿಲ್ಲದ ಕಾಲದ ಬಗ್ಗೆ ತಿಳಿಯಲು ಅತ್ಯಂತ ಮುಖ್ಯವಾದ ಶಾಸ್ತ್ರವಾಗಿದೆ. ಪೂರ್ವೈತಿಹಾಸಿಕ ಮಾನವರು ಯಾವುದೇ ಲಿಖಿತ ದಾಖಲೆಗಳನ್ನು ಬಿಟ್ಟಿರಲಿಲ್ಲ.

ಆದರೆ ಅವರು ಉಪಯೋಗಿಸುತ್ತಿದ್ದ ವಿವಿಧ ಬಗೆಯ

  • ಕಲ್ಲು ಉಪಕರಣಗಳು
  • ಅವರು ಬರೆದ ಗುಹಾ ಚಿತ್ರಗಳು
  • ಅವರ ಎಲುಬುಗಳು
  • ಬೀಜಗಳು ಮತ್ತುಆ ಕಾಲದ ಮಣ್ಣು ಪದರಗಳ

ಅಧ್ಯಯನದಿಂದ ನಾವು ಅವರ ಜೀವನವನ್ನು ಅರ್ಥಮಾಡಿಕೊಳ್ಳುತ್ತೇವೆ.

ಆದ್ದರಿಂದ ಪುರಾತತ್ತ್ವಶಾಸ್ತ್ರವಿಲ್ಲದಿದ್ದರೆ ಮಾನವ ಇತಿಹಾಸದ ಆರಂಭಿಕ ಅಧ್ಯಾಯವು ಸಂಪೂರ್ಣವಾಗಿ ಅಜ್ಞಾತವಾಗಿರುತ್ತಿತ್ತು.

2. ಮಾನವ ವಿಕಾಸ ಮತ್ತು ಸಂಸ್ಕೃತಿಯ ಬೆಳವಣಿಗೆ : ಪುರಾತತ್ತ್ವಶಾಸ್ತ್ರವು ಮಾನವನು

  • ಕಾಡು ಜೀವನದಿಂದ ಕೃಷಿ ಜೀವನಕ್ಕೆ ಮತ್ತು ನಗರ ನಾಗರಿಕತೆಗೆ ಹೇಗೆ ಬದಲಾದನು ಎಂಬುದನ್ನು ತೋರಿಸುತ್ತದೆ. ಇದು ಕೇವಲ ದೈಹಿಕ ವಿಕಾಸವನ್ನಷ್ಟೇ ಅಲ್ಲ,
  • ಭಾಷೆಯ ಬೆಳವಣಿಗೆ
  • ಧರ್ಮದ ಉದ್ಭವ
  • ಕಲೆ ಮತ್ತು ಶಿಲ್ಪದ ಪ್ರಾರಂಭ
    ಇವನ್ನೂ ವಿವರಿಸುತ್ತದೆ.

3. ಭೂತಕಾಲದ ವೈಜ್ಞಾನಿಕ ಅಧ್ಯಯನ : ಪುರಾತತ್ತ್ವಶಾಸ್ತ್ರವು ಕೆಳಕಂಡ ವೈಜ್ಞಾನಿಕ ವಿಧಾನಗಳನ್ನು ಬಳಸುತ್ತದೆ:

  • ಕಾರ್ಬನ್ ದಿನಾಂಕ ನಿರ್ಣಯ(Carbon Dating/Carbon-೧೪)
  • ಮಣ್ಣು ಪದರಗಳ ವಿಶ್ಲೇಷಣೆ
  • DNA ಅಧ್ಯಯನ
  • ಲೋಹ ಮತ್ತು ಮಡಿಕೆಗಳ ರಾಸಾಯನಿಕ ಪರೀಕ್ಷೆ. ಇದರಿಂದ ಇತಿಹಾಸವನ್ನು ಊಹೆಗಳ ಮೇಲೆ ಅಲ್ಲ, ವಸ್ತುನಿಷ್ಠ ಸಾಕ್ಷ್ಯಗಳ ಮೇಲೆ ಆಧರಿಸಿ ಕಟ್ಟಬಹುದು.

4.  ಇತಿಹಾಸದ ಪರಿಶೀಲನೆ ಮತ್ತು ತಿದ್ದುಪಡಿ : ಲಿಖಿತ ಮೂಲಗಳು ಕೆಲವೊಮ್ಮೆ:

  • ರಾಜರನ್ನು ಅತಿಯಾಗಿ ಹೊಗಳುತ್ತವೆ
  • ಯುದ್ಧಗಳನ್ನು ಮಾತ್ರ ವರ್ಣಿಸುತ್ತವೆ
  • ಸಾಮಾನ್ಯ ಜನರನ್ನು ಕಡೆಗಣಿಸುತ್ತವೆ ಆದರೆ ಪುರಾತತ್ತ್ವಶಾಸ್ತ್ರವು:
  • ನಿಜಸ್ಥಿತಿಯನ್ನು ತೋರಿಸುತ್ತದೆ
  • ತಪ್ಪುಗಳನ್ನು ಸರಿಪಡಿಸುತ್ತದೆ
  • ಇತಿಹಾಸವನ್ನು ಸಮತೋಲನಗೊಳಿಸುತ್ತದೆ. ಹೀಗಾಗಿ, ಇದು ಇತಿಹಾಸಕ್ಕೆ ಪೂರಕ ಶಾಸ್ತ್ರವಾಗಿದೆ.

5. ಸಾಮಾಜಿಕ ವ್ಯವಸ್ಥೆಯ ಅರಿವು : ಪುರಾತತ್ತ್ವ ಸಾಕ್ಷ್ಯಗಳಿಂದ ಕೆಳಕಂಡ ವಿಷಯಗಳನ್ನು ತಿಳಿಯುತ್ತೇವೆ.

  • ಮನೆಗಳ ಗಾತ್ರ → ಆರ್ಥಿಕ ಸ್ಥಿತಿ
  • ಸಮಾಧಿಗಳ ವೈವಿಧ್ಯ → ವರ್ಗಭೇದ
  • ಉಪಕರಣಗಳು → ಉದ್ಯೋಗ. ಇದರಿಂದ ಹಳೆಯ ಸಮಾಜದ ರಚನೆ ಮತ್ತು ಜೀವನಮಟ್ಟ ತಿಳಿಯುತ್ತದೆ.

6. ಆರ್ಥಿಕ ಮತ್ತು ವ್ಯಾಪಾರ ಸಂಬಂಧಗಳು : ಪ್ರಾಚೀನ ಕಾಲದಲ್ಲಿ ಅಸ್ತಿತ್ವದಲ್ಲಿದ್ದ ನಾಣ್ಯಗಳು, ಮಡಿಕೆಗಳು ಮತ್ತು ವಸ್ತುಗಳ ಮೂಲಕ:

  • ದೇಶೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ
  • ವಸ್ತು ವಿನಿಮಯ
  • ಕೈಗಾರಿಕಾ ಅಭಿವೃದ್ಧಿಯ ಬಗ್ಗೆ ಮಾಹಿತಿ ದೊರೆಯುತ್ತದೆ.

7. ಧಾರ್ಮಿಕ ಮತ್ತು ಸಾಂಸ್ಕೃತಿಕ ಅರಿವು :  ಮೂರ್ತಿಗಳು, ದೇವಾಲಯಗಳು, ಯಜ್ಞಕುಂಡಗಳು ಮತ್ತು ಸಮಾಧಿಗಳ ಮೂಲಕ:

  • ಧಾರ್ಮಿಕ ನಂಬಿಕೆಗಳು
  • ಪೂಜಾ ಪದ್ಧತಿಗಳು
  • ಸಂಸ್ಕೃತಿಯ ಬಗ್ಗೆ ತಿಳಿಯಬಹುದು.

8. ಪರಿಸರದ ಅರಿವು :  ಪುರಾತತ್ತ್ವಶಾಸ್ತ್ರವು: ಹಳೆಯ ಹವಾಮಾನ

  • ಪ್ರವಾಹ ಮತ್ತು ಬರ
  • ಕೃಷಿ ಪದ್ಧತಿಯ ಬಗ್ಗೆ ಅಧ್ಯಯನ ಮಾಡುತ್ತದೆ. ಇವು ನಾಗರಿಕತೆಗಳ ಏಳಿಗೆ ಮತ್ತು ಪತನಕ್ಕೆ ಹೇಗೆ ಕಾರಣವಾದವು ಎಂಬುದನ್ನು ವಿವರಿಸುತ್ತದೆ. ಇದು ಇಂದಿನ ಪರಿಸರ ಸಮಸ್ಯೆಗಳಿಗೆ ಪಾಠಗಳನ್ನು ನೀಡುತ್ತದೆ.

9. ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ : ಪುರಾತತ್ತ್ವಶಾಸ್ತ್ರವು ಪುರಾತನ ಸ್ಮಾರಕಗಳು ಮತ್ತು ವಸ್ತುಗಳನ್ನು ಗುರುತಿಸಿ ಸಂರಕ್ಷಿಸುತ್ತದೆ.

ಇದು:

  • ಪ್ರವಾಸೋದ್ಯಮ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ.
  • ರಾಷ್ಟ್ರೀಯ ಹೆಮ್ಮೆ ಹಾಗೂ
  • ಸಾಂಸ್ಕೃತಿಕ ಗುರುತಾಗಿದ್ದು ಇವುಗಳನ್ನು ಬಲಪಡಿಸುತ್ತದೆ

10. ಕಲೆ ಮತ್ತು ವಾಸ್ತುಶಿಲ್ಪದ ವೈಜ್ಞಾನಿಕ ಅಧ್ಯಯನ : ಯಾವುದೇ ದೇಶದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ತನ್ನದೇ ಆದ ಉಗಮ ಮತ್ತು ಇತಿಹಾಸ ಇರುತ್ತದೆ. ಅದು ವಿವಿಧ(ದೇಶೀಯ ಅಥವಾ ಪರದೇಶೀಯ) ಕಲೆ ಮತ್ತು ವಾಸ್ತುಶಿಲ್ಪದಿಂದ ಪ್ರಭಾವಿತವೂ ಆಗಿದ್ದು ಕೊಡುಕೊಳ್ಳುವಿಕೆ ನಿರಂತರವಾದ ಪ್ರಕ್ರಿಯೆಯಾಗಿರುತ್ತದೆ. ಇದು ಚಲನಶೀಲತೆಯ ಲಕ್ಷಣವೂ ಹೌದು. ಇವುಗಳ ವೈಜ್ಞಾನಿಕ ಅಧ್ಯಯನವನ್ನು ಪುರಾತತ್ವಶಾಸ್ತ್ರವು ಒಳಗೊಂಡಿದ್ದು ಅದರ ಮಹತ್ವವೂ ಆಗಿದೆ.

 11. ಶೈಕ್ಷಣಿಕ ಮತ್ತು ರಾಷ್ರೀಯ ಮಹತ್ವ : ಪುರಾತತ್ತ್ವಶಾಸ್ತ್ರವು:

  • ವಿದ್ಯಾರ್ಥಿಗಳಿಗೆ ಇತಿಹಾಸದ ಆಳವಾದ ಅರಿವು ನೀಡುತ್ತದೆ
  • ಸಂಶೋಧನೆಗೆ ಪ್ರೇರಣೆ ನೀಡುತ್ತದೆ
  • ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ

ಉಪಸಂಹಾರ : ಪುರಾತತ್ತ್ವಶಾಸ್ತ್ರವು ಮಾನವ ಇತಿಹಾಸದ ಆಧಾರ ಮತ್ತು ಜೀವಂತ ಸಾಕ್ಷಿಯಾಗಿದೆ. ಇದು ಪೂರ್ವೈತಿಹಾಸಿಕ ಕಾಲದಿಂದ ಇಂದಿನ ಕಾಲದವರೆಗೆ ಮಾನವ ಜೀವನದ ಎಲ್ಲಾ ಹಂತಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಇದು ಕೇವಲ ಹಳೆಯ ವಸ್ತುಗಳ ಅಧ್ಯಯನವಲ್ಲ;
ಮಾನವ ಸಮಾಜದ ವಿಕಾಸ, ಸಂಸ್ಕೃತಿ, ಆರ್ಥಿಕತೆ ಮತ್ತು ಪರಿಸರ ಸಂಬಂಧಗಳ ಸಮಗ್ರ ಅಧ್ಯಯನವಾಗಿದೆ.

ಆದ್ದರಿಂದ ಪುರಾತತ್ತ್ವಶಾಸ್ತ್ರವು ಇತಿಹಾಸ ಮತ್ತು ಸಮಾಜವನ್ನು ತಿಳಿಯಲು ಅತ್ಯಂತ ಅಗತ್ಯವಾದ ಶಾಸ್ತ್ರವಾಗಿದೆ.

ಚುನಾವಣಾ ಆಯೋಗದ ಕಾರ್ಯಗಳು

ಚುನಾವಣಾ ಆಯೋಗದ ಕಾರ್ಯಗಳು

ಮುಕ್ತ ಹಾಗೂ ಪಾರದರ್ಶಕತೆಯಿಂದ ಚುನಾವಣೆಗಳನ್ನು ನಡೆಸಲು ಅನುಕೂಲವಾಗುವಂತೆ ಸ್ವತಂತ್ರ ಚುನಾವಣಾ ಆಯೋಗವನ್ನು ಭಾರತದ ಸಂವಿಧಾನ ರಚನಾಕಾರರು ಸಂವಿಧಾನದಲ್ಲಿ ಅಳವಡಿಸಿದರು. ರಾಜಕೀಯದಿಂದ ಚುನಾವಣೆಯನ್ನು ದೂರವಿಡಲು ಅಗತ್ಯವಾದ ಅಧಿಕಾರ ಕಾರ್ಯಗಳನ್ನು ಚುನಾವಣಾ ಆಯೋಗಕ್ಕೆ ನೀಡಿದರು. ಅದರ ಫಲವಾಗಿ ಇಂದು ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆದುಕೊಂಡು ಬರುತ್ತವೆ. ಚುನಾವಣಾ ಅಧಿಕಾರಗಳ ಕಾರ್ಯಗಳು ಈ ಕೆಳಗಿನಂತಿವೆ.

1. ವಿವಿಧ ಚುನಾವಣೆಗಳ ನಿರ್ವಹಣೆ ನಿರ್ದೇಶನ ಹಾಗೂ ನಿಯಂತ್ರಣ ಮಾಡುವುದು:

ಭಾರತದ ಸಂವಿಧಾನದ 324ನೇ ವಿಧಿಯ ಪ್ರಕಾರ ಚುನಾವಣಾ ಪ್ರಕ್ರಿಯೆಯ ಸಂಪೂರ್ಣ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊತ್ತಿದೆ. ʻʻಚುನಾವಣಾ ಆಯೋಗದ ಸಚಿವಾಲಯದ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ. ಅದಕ್ಕೆ ನಿರ್ವಚನ ಸದನ ಎಂದು ಕರೆಯಲಾಗುತ್ತದೆ.ʼʼ ಇಲ್ಲಿ ಒಬ್ಬರು ಮುಖ್ಯ ಮತ್ತು ಇಬ್ಬರು ಉಪಚುನಾವಣಾಧಿಕಾರಿಗಳು ಇರುತ್ತಾರೆ. ಚುನಾವಣಾ ಆಯೋಗವು ಭಾರತದ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಚುನಾವಣೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಪಡೆದಿದೆ. ಇದರೊಂದಿಗೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಹುದ್ದೆಗಳ ನಿರ್ವಹಣೆಯು ಸಹ ಚುನಾವಣಾ ಆಯೋಗದ ಹೆಗಲಮೇಲಿದೆ. ಮತದಾರರ ಪಟ್ಟಿ ತಯಾರಿಕೆ, ಚುನಾವಣಾ ವೇಳಾಪಟ್ಟಿಯ ಸಿದ್ಧತೆ, ಮತಗಳ ಎಣಿಕೆ ಮೊದಲಾದ ಪ್ರಕ್ರಿಯೆಗಳನ್ನು ನಿರ್ದೇಶಿಸುವ ಮತ್ತು ನಿಯಂತ್ರಿಸುವ ಕೆಲಸವನ್ನು ಆಯೋಗ ಮಾಡುತ್ತದೆ.

2. ಚುನಾವಣಾ ಕ್ಷೇತ್ರಗಳ ಗಡಿ ನಿರ್ಧರಿಸುವುದು:

ಸಂಸತ್ತು ಕಾಲ ಕಾಲಕ್ಕೆ ಕಾನೂನುಗಳನ್ನು ಪಾಸು ಮಾಡುತ್ತದೆ. ಆ ಪ್ರಕಾರ ಮತಕ್ಷೇತ್ರಗಳ ಮರು ವಿಂಗಡಣಾ ಆಯೋಗ ಸಿದ್ಧತೆಗಳನ್ನು ಮಾಡಿಕೊಂಡು ಇತ್ತೀಚಿನ ಜನಗಣತಿಯ ಅಂಕಿ ಅಂಶಗಳ ಆಧಾರದ ಮೇಲೆ ದೇಶದ ಪ್ರತಿಯೊಂದು ಲೋಕಸಭಾ ಹಾಗೂ ವಿಧಾನಸಭಾ ಮತಕ್ಷೇತ್ರಗಳ ಗಡಿಗಳನ್ನು ಬದಲಿಸುತ್ತದೆ. ಮತಕ್ಷೇತ್ರಗಳಲ್ಲಿ ಆದ ಜನಸಂಖ್ಯಾ ಬೆಳವಣಿಗೆ ಅಥವಾ ಮತಕ್ಷೇತ್ರಗಳ ವ್ಯತ್ಯಾಸಗಳನ್ನು ಹೋಗಲಾಡಿಸಿ ಸಮಸ್ಯೆಗೆ ಇಂಬು ಕೊಡದ ಹಾಗೆ ಸಮಾನ ಅವಕಾಶವನ್ನು ಕಲ್ಪಿಸಿ ಕೊಡಬೇಕಾದದ್ದು ಚುನಾವಣಾ ಆಯೋಗದ ಕರ್ತವ್ಯವಾಗಿದೆ. ಕ್ಷೇತ್ರ ಪುನರ್ವಿಂಗಡಣಾ ಆಯೋಗದ ಶಿಫಾರಸ್ಸಿನ ಆಧಾರದ ಮೇಲೆಯೇ ಚುನಾವಣಾ ಆಯೋಗ ಗಡಿಗಳನ್ನು ಗುರುತಿಸುತ್ತದೆ.

3. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು:

ದೇಶದ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡ ಮತದಾರರ ಪಟ್ಟಿಯನ್ನು ತಯಾರಿಸುವುದು ಚುನಾವಣಾ ಆಯೋಗದ ಮತ್ತೊಂದು ಹೆಜ್ಜೆಯಾಗಿದೆ. ಈ ಹಂತದಲ್ಲಿ ಅರ್ಹ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿದ್ದಲ್ಲಿ ಅಂತವರನ್ನು ಅರ್ಹ ಮತದಾರ ಎಂದು ಪರಿಗಣಿಸುವುದಿಲ್ಲವಾದ್ದರಿಂದ ಮತದಾನ ಮಾಡಲು ಅವರಿಗೆ ಅವಕಾಶ ನೀಡುವಂತಿಲ್ಲ. ಮತದಾರರ ಪಟ್ಟಿಯನ್ನು ಆಯೋಗವು ಕಾಲಕಾಲಕ್ಕೆ ಪರಿಷ್ಕರಿಸಿ ಪ್ರಕಟಿಸಬೇಕು. ಒಂದು ನಿರ್ದಿಷ್ಟ ಸಮಯದಲ್ಲಿ ಮತದಾರನ ಪಟ್ಟಿಯಲ್ಲಿ ತಮ್ಮ ಹೆಸರು ಬಿಟ್ಟು ಹೋಗಿದ್ದರೆ ಅಥವಾ ಮೃತರಾದವರ ಹೆಸರು ಮತದಾರರ ಪಟ್ಟಿಯಲ್ಲಿಯೇ ಇದ್ದಿದ್ದರೆ ಅದಕ್ಕೆ ವಿರೋಧ ವ್ಯಕ್ತಪಡಿಸಬಹುದು. ಆಗ ಮತದಾರರ ಹೆಸರನ್ನು ಸೇರಿಸುವ ಮತ್ತು ಕೈಬಿಡುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.

4. ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುವುದು:

ಚುನಾವಣಾ ಆಯೋಗವು ರಾಷ್ಟ್ರಪತಿಗಳ ಶಿಫಾರಸಿನ ಮೇಲೆ ಚುನಾವಣೆಗಳನ್ನು ಘೋಷಣೆ ಮಾಡುತ್ತದೆ. ರಾಷ್ಟ್ರಪತಿಗಳು ಆದೇಶ ನೀಡಿದ ನಂತರವೇ ಆಯೋಗವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೊಡನೆ ಸಮಾಲೋಚಿಸಿ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಈ ವೇಳಾಪಟ್ಟಿಯಲ್ಲಿ ನಾಮಪತ್ರವನ್ನು ಸಲ್ಲಿಸುವ ದಿನಾಂಕ ನಾಮಪತ್ರಗಳ ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವ ದಿನಾಂಕಗಳ ವಿವರಗಳಿರುತ್ತವೆ.

5. ಪಕ್ಷಗಳ ನೋಂದಣಿ ಹಾಗು ಚಿನ್ಹೆಗಳ ಹಂಚಿಕೆ:

ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳಲು ಆಯೋಗವು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜೊತೆಗೆ  ನೋಂದಾವಣೆಗೊಂಡ ರಾಜಕೀಯ ಪಕ್ಷಗಳಿಗೆ ಸೂಕ್ತವಾದ ಮತ್ತು ನಿರ್ದಿಷ್ಟವಾದ ಚುನಾವಣಾ ಚಿಹ್ನೆಗಳನ್ನು ನೀಡುತ್ತದೆ. ಭಾರತವು ಅನಕ್ಷರತೆಯನ್ನು ಹೊಂದಿದ ದೇಶವಾಗಿದ್ದು ಇಂದಿಗೂ ಬಹುಪಾಲು ಮತದಾರರು ಓದು ಬರಹ ಬಾರದೆ ಇರುವವರು ಇದ್ದಾರೆ. ಅಂತವರಿಗೆ ಈ ಚಿಹ್ನೆಗಳು ಮತದಾನ ಮಾಡುವಲ್ಲಿ ಸಹಾಯಕವಾಗುತ್ತದೆ. ಈ ಕಾರಣದಿಂದ ದೇಶದ ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಪಕ್ಷಗಳಿಗೆ ಚುನಾವಣಾ ಚಿಹ್ನೆಗಳನ್ನು ನೀಡುವುದು ಅನಿವಾರ್ಯವಾಗಿದೆ. 1951 ರ ಪ್ರಜಾಪ್ರತಿನಿಧಿ ಕಾಯಿದೆ ೫(೧) ನೇ  ವಿಧಿಯ ಅನ್ವಯ ಭಾರತದ ಪ್ರತಿ ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯನ್ನು ವಿತರಿಸುವ ಅಧಿಕಾರವನ್ನು ಚುನಾವಣಾ ಆಯೋಗ ಪಡೆದಿದೆ. ಚುನಾವಣಾ ಚಿಹ್ನೆಗಳ ಹಂಚಿಕೆಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನೆಗಳು ಎದ್ದಾಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಚುನಾವಣಾ ಆಯೋಗಕ್ಕೆ ಅಧಿಕಾರ ಇದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿತು.

6. ಮರು ಚುನಾವಣೆಗೆ ಆದೇಶಿಸುವ ಅಧಿಕಾರ:

ಸಂವಿಧಾನದ 324ನೇ ವಿಧಿಯ ಪ್ರಕಾರ ದೇಶದ ವಿವಿಧ ಚುನಾವಣೆಗಳ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಚುನಾವಣಾ ಆಯೋಗವು ಅಗತ್ಯವಾದರೆ ಮರುಚುನಾವಣೆಯನ್ನು ನಡೆಸಲು ಅಧಿಕಾರವನ್ನು ಪಡೆದಿದೆ. ಚುನಾವಣೆಗಳು ನಡೆದು ಮತಎಣಿಕೆಯಾದ ಮೇಲೆಯೂ ಚುನಾವಣಾ ಪ್ರಕ್ರಿಯೆ ಸಮರ್ಪಕವಾಗಿಲ್ಲವೆಂದು ಪಕ್ಷಗಳು  ಮರುಚುನಾವಣೆಗೆ ಆದೇಶಿಸುವ ಅಧಿಕಾರ ಪಡೆದಿವೆ. ಮತದಾನದ ದಿನದಂದು ವಿಪರೀತ ಮಳೆ ಬಂದು ಪ್ರಕೃತಿ ವಿಕೋಪಗಳುಂಟಾದಾಗ, ನೈಸರ್ಗಿಕ ಕಾರಣದಿಂದ, ಮತಗಟ್ಟೆಯನ್ನು ವಶಪಡಿಸಿಕೊಳ್ಳುವುದು, ಮತದಾರರಿಗೆ ಬೆದರಿಕೆ ಹಾಕುವುದು ಮತ್ತು ಮತದಾರರ ಪಟ್ಟಿಯಲ್ಲಿನ ಗಂಭೀರ ದೋಷಗಳ ಕಾರಣದಿಂದ ಮತ ಚಲಾಯಿಸಲು ಸಾಧ್ಯವಾಗದಿದ್ದರೆ ಆಯೋಗವು ಮರುಚುನಾವಣೆಗೆ ಆದೇಶ ನೀಡಬಹುದು. ಹಾಗೆಯೇ ಮತ ಎಣಿಕೆಯ ಸಮಯದಲ್ಲಿ ಪರಿಸ್ಥಿತಿ ಕೈಮೀರಿ ಹೋದರೆ ಅಥವಾ ಮತಯಂತ್ರಗಳ ನಾಶದಂತಹ ಘಟನೆಗಳು ನಡೆದರೆ ಆಯೋಗ ಮರು ಚುನಾವಣೆಗೆ ಆದೇಶಿಸಬಹುದು. ಅಧಿಕಾರ ಮುಗಿಯುವ ಮುಂಚೆ ಮರಣಹೊಂದುವುದು, ರಾಜೀನಾಮೆ ನೀಡುವುದು ಅಥವಾ ಅನರ್ಹತೆಯ ಕಾರಣಗಳಿಂದ ಆ ಪ್ರದೇಶದ ತೆರವಾದ ಹುದ್ದೆಗೆ ಮರು ಚುನಾವಣೆ ಮಾಡುವುದು ಆಯೋಗದ ಕರ್ತವ್ಯವಾಗಿದೆ. ಈ ರೀತಿಯ ಚುನಾವಣೆಗಳನ್ನು ʻʻಉಪಚುನಾವಣೆ ಎಂದು ಕರೆಯಲಾಗುತ್ತದೆ.ʼʼ

7. ಚುನಾವಣೆಯನ್ನು ಮುಂದೂಡುವ ಅಧಿಕಾರ: 

ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೆ ಒಮ್ಮೆ ಕೇಂದ್ರ ಹಾಗೂ ರಾಜ್ಯ ಚುನಾವಣೆಗಳನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊಂದಿದೆ. ಆದರೆ ಕೇಂದ್ರ ಹಾಗೂ ರಾಜ್ಯಗಳಲ್ಲಿ ಚುನಾವಣೆಗಳನ್ನು ನಡೆಸಲು ಪೂರಕ ವಾತಾವರಣ ಇಲ್ಲದಿದ್ದರೆ ಚುನಾವಣೆಯನ್ನು ಮುಂದೂಡುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಭಯೋತ್ಪಾದಕ ಚಟುವಟಿಕೆಗಳು ಮತ್ತು ಭೂಕಂಪ, ಅತಿವೃಷ್ಟಿಗಳು ಆಯೋಗದ ಚುನಾವಣಾ ಮುಂದೂಡಿಕೆಗೆ ಕಾರಣವಾಗಬಹುದು.

8. ಚುನಾವಣಾ ವೆಚ್ಚದ ಮಾಹಿತಿ ಪಡೆಯುವ ಅಧಿಕಾರ: 

ಪ್ರಜಾಪ್ರಭುತ್ವ ಭಾರತ ದೇಶದಲ್ಲಿ ಚುನಾವಣೆಗಳು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಶುದ್ಧವಾಗಿ ನಡೆಯಬೇಕೆಂಬುದು ಎಲ್ಲರ ಆಶಯವಾಗಿದೆ. ಆದರೆ ಪ್ರಸ್ತುತ ಭಾರತದಲ್ಲಿ ಈ ರೀತಿಯ ಚುನಾವಣೆಗಳು ನಡೆಯದಿರುವುದು ಒಂದು ದುಃಖಕರ ಸಂಗತಿ ಎಂದು ಹೇಳಬಹುದು. ಇಂದು ಅಭ್ಯರ್ಥಿಗಳ ಗೆಲುವು ಹಣದ ಹೊಳೆಯನ್ನು ಹರಿಸುವುದರ ಮೂಲಕ ಅವಲಂಬಿಸಿದೆ ಎನ್ನುವಂತಾಗಿದೆ. ಶ್ರೀಮಂತ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಬೇಕಾ ಬಿಟ್ಟಿ ಹಣವನ್ನು ಚೆಲ್ಲುವುದರ ಮೂಲಕ ತಮ್ಮ ಅಭ್ಯರ್ಥಿಗಳು ಗೆಲ್ಲಿಸುವುದನ್ನು ನಾವಿಂದು ಕಾಣುತ್ತಿದ್ದೇವೆ. ಕೆಲವು ಪಕ್ಷಗಳಂತೂ ಶ್ರೀಮಂತ ಅಭ್ಯರ್ಥಿಗಳನ್ನೇ ಹುಡುಕಿ ಚುನಾವಣಾ ಕಣಕ್ಕೆ ಇಳಿಸುವುದನ್ನು ನೋಡುತ್ತಿದ್ದೇವೆ. ಪ್ರಸ್ತುತ ಚುನಾವಣೆಗಳು ʻʻಹಣವನ್ನು ಚೆಲ್ಲು ಹಣವನ್ನು ಮಾಡಿಕೊಳ್ಳುʼʼ ಎಂಬ ತತ್ವಗಳನ್ನು ಅನುಸರಿಸಿದಂತೆ ಕಾಣುತ್ತದೆ. ಚುನಾವಣೆ ಎನ್ನುವುದು ಒಂದು ಉದ್ಯಮವಾಗಿದೆ ಪರಿಣಮಿಸಿದೆ. ಇನ್ನೂ ಬಡ ರಾಜಕೀಯ ಪಕ್ಷಗಳು ಚುನಾವಣಾ ಕಣದಿಂದ ದೂರವೇ ಉಳಿಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ಚುನಾವಣಾ ಆಯೋಗಕ್ಕೆ ಚುನಾವಣಾ ವೆಚ್ಚಗಳ ಕುರಿತು ಮಾಹಿತಿ ಪಡೆಯುವ ಹಕ್ಕಿದೆ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

9. ಆಯವ್ಯಯವನ್ನು ನಿರ್ಧರಿಸುವ ಅಧಿಕಾರ: 

ಚುನಾವಣಾ ಆಯೋಗವು ಒಂದು ಸಂವಿಧಾನಾತ್ಮಕವಾದ ಸ್ವತಂತ್ರವಾದ ಸಂಸ್ಥೆ. ಈ ಆಯೋಗದಲ್ಲಿ ಒಬ್ಬ ಮುಖ್ಯ ಆಯುಕ್ತರು ಹಾಗೂ ಉಪ ಆಯುಕ್ತರೊಡನೆ ವಿವಿಧ ದರ್ಜೆಯ ನೂರಾರು ಸಿಬ್ಬಂದಿಗಳುಳ್ಳ ಕಾರ್ಯಾಲಯವಿದೆ. ಇದರೊಂದಿಗೆ ಪ್ರಾದೇಶಿಕ ಚುನಾವಣೆ ಆಯೋಗಗಳು ಮುಖ್ಯ ಚುನಾವಣಾ ಅಧಿಕಾರಿಗಳೊಡನೆ ಅಗತ್ಯ ಸಿಬ್ಬಂದಿಯನ್ನು ಹೊಂದಿರುತ್ತವೆ. ಅಲ್ಲದೆ ಚುನಾವಣಾ ಆಯೋಗವು ಚುನಾವಣೆಗಳ ನಿರ್ವಹಣೆಗೆ ಅಪಾರ ಆರ್ಥಿಕ ಸಂಪನ್ಮೂಲಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಚುನಾವಣಾ ಆಯೋಗ ನೀಡುವ ಹಣಕಾಸಿನ ವೆಚ್ಚಗಳಿಗೆ ಕೇಂದ್ರ ಹಣಕಾಸು ಆಯೋಗವು ಅನುಮೋದನೆಯನ್ನು ನೀಡುತ್ತದೆ. ಸಾಮಾನ್ಯವಾಗಿ ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರವು ವೆಚ್ಚವನ್ನು ಭರಿಸಿದರೆ ರಾಜ್ಯ ಚುನಾವಣೆಗಳಿಗೆ ರಾಜ್ಯ ಸರ್ಕಾರವು ಹಣಕಾಸಿನ ವೆಚ್ಚವನ್ನು ಭರಿಸಬೇಕಾಗುತ್ತದೆ.

10. ಅಭ್ಯರ್ಥಿಗಳನ್ನು ಅನರ್ಹಗೊಳಿಸುವ ಅಧಿಕಾರ:

ಚುನಾವಣೆಗಳು ಮುಕ್ತಾಯವಾದ ನಂತರ ಚುನಾಯಿತ ಪ್ರತಿನಿಧಿಯು ಚುನಾವಣಾ ಅಕ್ರಮಗಳ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಬಹುದು. ಆಗ ನ್ಯಾಯಾಲಯಗಳು ನಿರ್ದಿಷ್ಟ ಚುನಾಯಿತ ಪ್ರತಿನಿಧಿಯು ಅನರ್ಹಗೊಳ್ಳಲು ಸೂಕ್ತನೇ ಹಾಗೂ ಯಾವ ಕಾರಣಗಳಿಗಾಗಿ ಎಂಬುದರ ಕುರಿತಂತೆ ಅಭಿಪ್ರಾಯ ನೀಡಲು ಆಯೋಗಕ್ಕೆ ಸೂಚಿಸುತ್ತವೆ. ಆಯೋಗವು ನ್ಯಾಯಾಲಯಗಳಿಗೆ ಕಾರಣ ನೀಡಿದರೆ ಅವನ ಅನರ್ಹತೆಯನ್ನು ನಿರ್ಧರಿಸುತ್ತದೆ.

11.  ರಾಜಕೀಯ ಅಪರಾಧಿಕರಣವನ್ನು ನಿಯಂತ್ರಿಸುವುದು:

ಚುನಾವಣಾ ಆಯೋಗವು ರಾಜಕೀಯದಲ್ಲಿನ ಅಪರಾಧಗಳ ಕುರಿತು ಒಂದು ಹದ್ದಿನ ಕಣ್ಣನ್ನು ಇಟ್ಟಿರುತ್ತದೆ. ರಾಜಕೀಯ ಕ್ಷೇತ್ರದ ಅಪರಾಧಗಳು ಚುನಾವಣಾ ಮುಕ್ತತೆಗೆ ಭಂಗ ತರುತ್ತವೆ ಎಂದು ಗೋಚರಿಸಿದರೆ ತಕ್ಷಣವೇ ಆಯೋಗವು ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದು. ಮಾದರಿ ಚುನಾವಣೆ ನಡೆಸಲು ಚುನಾವಣಾ ವೆಚ್ಚಗಳನ್ನು ನಿರ್ಬಂಧಿಸಲು, ಅಪರಾಧಿಗಳು ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲು ಮತ್ತು ಚುನಾವಣಾ ಸುಧಾರಣೆಗೆ ಕ್ರಮ ಜರುಗಿಸಲು ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯೋಗ ಹೊಂದಿದೆ.

ಉಪಸಂಹಾರ

ಚುನಾವಣಾ ಆಯೋಗವು ಭಾರತದ ಪ್ರಜಾಪ್ರಭುತ್ವದ ಬಲವಾದ ಅಸ್ತಂಭವಾಗಿದೆ. ನಿಷ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದೆ. ಚುನಾವಣಾ ಸುಧಾರಣೆಗಳು ಮತ್ತು ಕಟ್ಟುನಿಟ್ಟಿನ ನಿಯಮಾವಳಿಗಳ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿಕೊಳ್ಳುತ್ತಿದೆ. ಆದ್ದರಿಂದ ಚುನಾವಣಾ ಆಯೋಗದ ಕಾರ್ಯಪಟುತೆಯು ದೇಶದ ಜನತಂತ್ರದ ಯಶಸ್ಸಿಗೆ ಅವಿಭಾಜ್ಯವಾಗಿದೆ.

ಭಾರತದ ಚುನಾವಣಾ ಆಯೋಗ

ಭಾರತದ ಚುನಾವಣಾ ಆಯೋಗ

ಭಾರತವು ಪ್ರಜಾಪ್ರಭುತ್ವ ದೇಶವಾಗಿದ್ದು ಅದರ ಯಶಸ್ಸಿಗೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗಳು ಅಗತ್ಯವಾಗಿವೆ. ಹೀಗಾಗಿ ನಮ್ಮ ಸಂವಿಧಾನದ 15ನೇ ಭಾಗದ 324 ರಿಂದ 329 ರವರೆಗಿನ ವಿಧಿಗಳಲ್ಲಿ ಸ್ವತಂತ್ರ ಚುನಾವಣಾ ಆಯೋಗ ಮತ್ತು ಚುನಾವಣಾ ನಿಯಮಗಳ ಕುರಿತು ಸಂವಿಧಾನ ರಚನಾಕಾರರು ಮಾಹಿತಿಯನ್ನು ಒದಗಿಸಿದ್ದಾರೆ. ಅದರಲ್ಲೂ 324ನೇ ವಿಧಿಯು ವಿಶೇಷವಾಗಿ ಮುಕ್ತ ಹಾಗೂ ಪಾರದರ್ಶಕತೆಯಿಂದ ಕೂಡಿದ ಚುನಾವಣೆಗಳನ್ನು ನಡೆಸುವ, ನಿರ್ದೇಶಸುವ ಹಾಗೂ ನಿಯಂತ್ರಿಸುವ ಸಂವಿಧಾನಾತ್ಮಕ ಸ್ವತಂತ್ರ ಚುನಾವಣಾ ಆಯೋಗದ ರಚನೆಗೆ ಮೀಸಲಿಡಲಾಗಿದೆ. ಇದು ಲೋಕಸಭೆ, ರಾಜ್ಯಸಭೆ, ವಿಧಾನಪರಿಷತ್ತು, ವಿಧಾನಸಭೆ, ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಗಳನ್ನು ನ್ಯಾಯ ಸಮ್ಮತವಾಗಿ ನಡೆಸುತ್ತದೆ. ಭಾರತದ ಸಂವಿಧಾನ ಜಾರಿಗೆ ಬರುವ ಮುನ್ನಾ ದಿನ ಅಂದರೆ 25 ಜನವರಿ 1950 ರಂದು ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು. ಈ ದಿನದ ಸವಿನೆನಪಿಗಾಗಿ ನಾವು 2011 ರಿಂದ ಪ್ರತಿ ವರ್ಷ ಜನವರಿ 25ರಂದು ರಾಷ್ಟ್ರೀಯ ಮತದಾರರ ದಿನವೆಂದು ಆಚರಿಸುತ್ತಿದ್ದೇವೆ.

ಚುನಾವಣಾ ಆಯೋಗದ ರಚನೆ: 

1950ರ ನಂತರ ಬಹಳ ಕಾಲದವರೆಗೆ ಚುನಾವಣಾ ಆಯೋಗವು ಏಕ ಸದಸ್ಯ ಆಯೋಗವಾಗಿತ್ತು. ಸುಕುಮಾರ್ ಸೇನ್ ಆಯೋಗದ ಮೊದಲ ಅಧ್ಯಕ್ಷರಾಗಿದ್ದರು. 1989 ಅಕ್ಟೋಬರ್ 16ರಂದು ಮತದಾರ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿದ ನಂತರ ರಾಷ್ಟ್ರಪತಿಗಳ ಆದೇಶದ ಪ್ರಕಾರ ಚುನಾವಣಾ ಆಯೋಗದಲ್ಲಿ ಒಬ್ಬ ಮುಖ್ಯ ಹಾಗೂ ಇಬ್ಬರು ಉಪ ಆಯುಕ್ತರೊಳಗೊಂಡ ಬಹು ಸದಸ್ಯರನ್ನು ನೇಮಕ ಮಾಡಲಾಯಿತು. ತದನಂತರ ಸ್ವಲ್ಪ ಕಾಲದಲ್ಲಿಯೇ ಇಬ್ಬರು ಉಪ ಆಯುಕ್ತರ ರದ್ದತಿಯೊಂದಿಗೆ 1990 ಜನವರಿ 2ರಂದು ಮತ್ತೆ ಏಕ ಸದಸ್ಯ ಆಯೋಗವನ್ನು ರಚಿಸಲಾಯಿತು. ಆದರೆ ದಿನೇಶ್ ಗೋಸ್ವಾಮಿ ವರದಿಯ ಶಿಫಾರಸ್ಸಿನಂತೆ ಹಾಗೂ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ೧೯೯೩ ಅಕ್ಟೋಬರ್ ಒಂದರಂದು ಪುನಃ ಕೇಂದ್ರ ಚುನಾವಣಾ ಆಯೋಗವು ಬಹು ಸದಸ್ಯ ಆಯೋಗವಾಯಿತು. ಪ್ರಸ್ತುತ ಚುನಾವಣಾ ಆಯೋಗವು ತ್ರೀ ಸದಸ್ಯರಿಂದ ಕೂಡಿದೆ. 

ನೇಮಕ: 

ಸಂವಿಧಾನದ 324 (೨) ನೇ ವಿಧಿಯ ಪ್ರಕಾರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಉಪ ಆಯುಕ್ತರನ್ನು ಕೇಂದ್ರ ಸಚಿವ ಸಂಪುಟದ ಸಲಹೆ ಮೇರೆಗೆ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ.

ಅಧಿಕಾರ ಅವಧಿ: (Tenure)

ಚುನಾವಣಾ ಆಯುಕ್ತರ ಅಧಿಕಾರಾವಧಿಯನ್ನು 1973 ರಲ್ಲಿ 5 ವರ್ಷಕ್ಕೆ ನಿಗದಿಪಡಿಸಲಾಗಿತ್ತು. ನಂತರ 1986 ಜನವರಿ ೧ ರಂದು ಅನ್ವಯವಾಗುವಂತೆ ಸಂಸತ್ತು ಆರು ವರ್ಷಕ್ಕೆ ವಿಸ್ತರಿಸಿತು. ಆಯುಕ್ತರು ಹಾಗೂ ಉಪಆಯುಕ್ತರು 65 ವರ್ಷ ವಯಸ್ಸಾಗುವವರೆಗೆ ಅಧಿಕಾರದಲ್ಲಿ ಇರಬಹುದು ಈ ಎರಡರಲ್ಲಿ ಯಾವುದು ಮೊದಲು ಜರಗುತ್ತದೆಯೋ ಅದನ್ನು ಅವರು ಪಾಲಿಸಬೇಕು. ಇದರ ಅರ್ಥ ಆಯುಕ್ತರೊಬ್ಬ 65 ವರ್ಷ ವಯಸ್ಸಾಗುವ ಮೊದಲೇ ೬ ವರ್ಷಗಳಾದಾಗ ಚುನಾವಣಾ ಆಯೋಗದಿಂದ ನಿವೃತ್ತರಾಗಬೇಕು. ಒಂದು ವೇಳೆ ಆರು ವರ್ಷಗಳ ಮುಂಚೆಯೇ 65 ವರ್ಷ ವಯಸ್ಸಾದರೆ ನಿವೃತ್ತಿಕೊಳ್ಳಬೇಕು ʻʻಅವಧಿಗೆ ಮುನ್ನವೇ ಅವರು ರಾಜೀನಾಮೆಯನ್ನು ನೀಡುವುದಾದರೆ ಸ್ವಂತ ಕೈ ಬರಹದಿಂದ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿ ಅಧಿಕಾರ ತ್ಯಾಗ ಮಾಡಬಹುದು.ʼʼ

ವೇತನ ಮತ್ತು ಭತ್ಯೆಗಳು: (Salary and Allowances)

1991 ಜನವರಿ 8ರಂದು ಲೋಕಸಭೆಯಲ್ಲಿ ಮಸೂದೆಯೊಂದನ್ನು ಪಾಸುಮಾಡಲಾಯಿತು. ಅದರ ಪ್ರಕಾರ ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸ್ಥಾನಮಾನಗಳಿಗೆ ತಕ್ಕ ಹಾಗೆ ವೇತನ ಹಾಗೂ ಇತರೆ ಸೌಲಭ್ಯಗಳನ್ನು ಚುನಾವಣಾ ಆಯೋಗದ ಆಯುಕ್ತರು ಮತ್ತು ಉಪಆಯುಕ್ತರಿಗೆ ನೀಡಬೇಕೆಂದು ನಿರ್ಧರಿಸಲಾಯಿತು. ಇವರ ಸೇವಾ ನಿಯಮಗಳನ್ನು ಕೇಂದ್ರ ಸಂಸತ್ತು ನಿರ್ಧರಿಸುತ್ತದೆ. ಸಂವಿಧಾನದ 324(6) ವಿಧಿಯ ಪ್ರಕಾರ ಚುನಾವಣಾ ಆಯೋಗಕ್ಕೆ ಬೇಕಾದ ಸಿಬ್ಬಂದಿ ವರ್ಗವನ್ನು ನೇಮಿಸಿಕೊಳ್ಳುತ್ತಾರೆ. ʻʻಚುನಾವಣಾ ಆಯುಕ್ತರ ವೇತನವನ್ನು ಭಾರತದ ಸಂಚಿತ ನಿಧಿಯಿಂದ ಭರಿಸಲಾಗುವುದು.ʼʼ

ಚುನಾವಣಾ ಆಯುಕ್ತರ ಪದಚ್ಯುತಿ: (Removal of election Commission)

ಭಾರತದ ಸಂವಿಧಾನದ 324 (೫)ನೇ ಉಪವಿಧಿ ಅನ್ವಯ ಮುಖ್ಯ ಚುನಾವಣಾ ಆಯುಕ್ತರನ್ನು ಪದಚ್ಯುತಗೊಳಿಸಲು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಅನ್ವಯಿಸುವ ವಿಧಾನವನ್ನೇ ಅನುಸರಿಸಲಾಗುವುದು. ಇವರು ತಮ್ಮ ಅಧಿಕಾರಾವಧಿಯಲ್ಲಿ ಸಂವಿಧಾನದ ಪರಿಮಿತಿ ಮೀರಿ ವರ್ತಿಸಿದಾಗ ದೋಷಾರೋಪಣೆ ಪಟ್ಟಿ ಸಲ್ಲಿಸಿ ಕೇಂದ್ರ ಸಂಸತ್ತು ವಿಶೇಷ ಬಹುಮತದಿಂದ ಇವರನ್ನು ಪದಚ್ಯುತಿಗೊಳಿಸಬಹುದು. ಇದೇ ಉಪವಿಧಿಯ ಅನ್ವಯ ಮುಖ್ಯ ಚುನಾವಣಾ ಆಯುಕ್ತರ ಶಿಫಾರಸ್ಸಿನ ಮೇರೆಗೆ ಇತರ ಆಯುಕ್ತರು ಮತ್ತು ಪ್ರಾದೇಶಿಕ ಆಯುಕ್ತರನ್ನು ರಾಷ್ಟ್ರಪತಿಗಳು ಪದಚ್ಯುತಗೊಳಿಸಬಹುದು.

ಚುನಾವಣಾ ಆಯುಕ್ತರ ಕೆಲವೊಂದು ಜವಾಬ್ದಾರಿಗಳು ಈ ಕೆಳಗಿನಂತಿವೆ.

  1. ಚುನಾವಣೆಯನ್ನು ಘೋಷಿಸುವುದು.
  2. ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸುವುದು.
  3. ಚುನಾವಣೆಗಳನ್ನು ನಡೆಸುವುದು ನಿರ್ದೇಶನ ಮಾಡುವುದು ಹಾಗೂ ಮೇಲ್ವಿಚಾರಣೆ.
  4. ರಾಷ್ಟ್ರಪತಿ ಹಾಗೂ ಉಪ ರಾಷ್ಟ್ರಪತಿ ಚುನಾವಣೆ ನಡೆಸುವುದು.
  5. ಕೇಂದ್ರ ಹಾಗೂ ರಾಜ್ಯ ಶಾಸಕಾಂಗಕ್ಕೆ ಚುನಾವಣೆ ನಡೆಸುವುದು.
  6. ಸಂಸತ್ ಸದಸ್ಯರ ಅರ್ಹತೆಯನ್ನು ನಿರ್ಧರಿಸುವುದು.
  7. ಚುನಾವಣಾ ಕ್ಷೇತ್ರಗಳ ಜನಸಂಖ್ಯೆಯನ್ನು ನಿರ್ಧರಿಸುವುದು.

ಉಪಸಂಹಾರ

ಭಾರತದ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ರಕ್ಷಕನಾಗಿ ಕಾರ್ಯನಿರ್ವಹಿಸುತ್ತದೆ. ನ್ಯಾಯಸಮ್ಮತ ಚುನಾವಣೆಗಳ ಮೂಲಕ ಜನರ ಇಚ್ಛೆಯನ್ನು ಪ್ರತಿಬಿಂಬಿಸುವ ವ್ಯವಸ್ಥೆಯನ್ನು ಇದು ಖಚಿತಪಡಿಸುತ್ತದೆ. ಸ್ವತಂತ್ರ ಮತ್ತು ಬಲವಾದ ಚುನಾವಣಾ ಆಯೋಗವು ದೇಶದ ರಾಜಕೀಯ ಸ್ಥಿರತೆ ಮತ್ತು ಜನತಾಂತ್ರಿಕ ಮೌಲ್ಯಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ

ಪರಿಶಿಷ್ಟ ಜಾತಿಗಳ ಜನರ ಹಿತಾಸಕ್ತಿಗಳನ್ನು ಕಾಪಾಡಲು ರಚನೆಗೊಂಡ ಸಂಸ್ಥೆಯಂದರೆ ಅದು ರಾಷ್ಟ್ರೀಯ ಪರಿಶಿಷ್ಟಜಾತಿಗಳ ಆಯೋಗ. ಪರಿಶಿಷ್ಟ ಜಾತಿಗಳ ಜನರು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆ ಶೈಕ್ಷಣಿಕ ಹಿಂದುಳಿಕೆ, ಆರ್ಥಿಕ ದುಸ್ಥಿತಿ ಮತ್ತು ಸಾಂಸ್ಕೃತಿಕ ಹಿನ್ನೆಡೆಗಳನ್ನು ಗಮನದಲ್ಲಿಟ್ಟುಕೊಂಡ ಭಾರತ ಸರ್ಕಾರವು ಸಂವಿಧಾನದ 338 ನೇ ವಿಧಿಯನ್ವಯ ಪರಿಶಿಷ್ಟ ಜಾತಿಗಳ ಆಯೋಗವನ್ನು ರಚನೆ ಮಾಡಿದೆ. ಅದರ ಕಾರ್ಯವನ್ನು ಈ ಕೆಳಗಿನಂತೆ ಪಟ್ಟಿ ಮಾಡಬಹುದು.

ರಚನೆ: (Composition)

ಸಂವಿಧಾನದ 338ನೇ ವಿಧಿಯ ಪ್ರಕಾರ ಪ್ರಾರಂಭದಲ್ಲಿ ಪರಿಶಿಷ್ಟ ಜನರ ಹಿತಾಸಕ್ತಿಗಾಗಿ ವಿಶೇಷ ಅಧಿಕಾರಿಯ ನೇಮಕಕ್ಕೆ ಆಸ್ಪದ ನೀಡಲಾಗಿತ್ತು. ಅವರನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯುಕ್ತರೆಂದು ಕರೆಯಲಾಗುತ್ತಿತ್ತು. 1985ರ ವೇಳೆಗೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಒತ್ತಡದ ಮೇರೆಗೆ ಸಂಸತ್ತು ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡದ ಆಯೋಗವನ್ನು ಏಕಸದಸ್ಯ ಆಯೋಗದಿಂದ ಬಹು ಸದಸ್ಯ ಆಯೋಗವನ್ನಾಗಿ ಮಾಡಲು ಮುಂದಾಯಿತು. ಪರಿಣಾಮವಾಗಿ 1990ರಲ್ಲಿ ಸಂವಿಧಾನದ 65 ತಿದ್ದುಪಡಿಯ ಮೂಲಕ ಬಹು ಸದಸ್ಯರನ್ನೊಳಗೊಂಡ ಆಯೋಗ ಅಸ್ತಿತ್ವಕ್ಕೆ ಬಂದಿತು. ಈ ಆಯೋಗವು ಒಬ್ಬ ಅಧ್ಯಕ್ಷ ಮತ್ತು ಒಬ್ಬ ಉಪಾಧ್ಯಕ್ಷ ಹಾಗೂ ಮೂರು ಜನ ಸದಸ್ಯರನ್ನು ಹೊಂದಿತು. 2003 ರಲ್ಲಿ ಸಂವಿಧಾನದ 89ನೇ ತಿದ್ದುಪಡಿಯ ಪ್ರಕಾರ 2004ರಲ್ಲಿ ಜಾರಿಗೆ ಬರುವಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಮತ್ತು ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಎಂಬುದಾಗಿ ಅವುಗಳನ್ನು ಬೇರ್ಪಡಿಸಲಾಯಿತು. ಪ್ರಸ್ತುತ 2004ರಲ್ಲಿ ಬೇರ್ಪಟ್ಟ ಆಯೋಗ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಕನಿಷ್ಠ ೪ ಮತ್ತು ಗರಿಷ್ಠ 11 ಜನ ಸದಸ್ಯರನ್ನು ಹೊಂದಿದೆ. ಇವರನ್ನು ಭಾರತ ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ. ಆಯೋಗದ ಸದಸ್ಯರಲ್ಲಿ ಕನಿಷ್ಠ ಒಬ್ಬರಾದರೂ ಮಹಿಳಾ ಸದಸ್ಯರಿರಬೇಕೆಂಬ ನಿಯಮವಿದೆ.

ಕಾರ್ಯಗಳು: (Functions) 

 ಪರಿಶಿಷ್ಟ ಆಯೋಗದ ಕಾರ್ಯಗಳು ಈ ಕೆಳಗಿನಂತಿವೆ

  1. ಸಂವಿಧಾನದಡಿಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒದಗಿಸಲಾದ ಎಲ್ಲಾ ಸುರಕ್ಷತಾ ನಿಬಂಧನೆಗಳನ್ನು ತನಿಖೆ ಮಾಡಿ ಮೇಲ್ವಿಚಾರಣೆ ಮಾಡುವುದು.
  2. ಪರಿಶಿಷ್ಟ ಜಾತಿಗಳ ರಕ್ಷಣೆ ಹಾಗೂ ಹಕ್ಕುಗಳನ್ನು ಒದಗಿಸುವಲ್ಲಿ ವಂಚನೆಯಾಗಿದ್ದರೆ ಅದಕ್ಕೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವುದು ಮತ್ತು ವಿಚಾರಣೆ ಮಾಡುವುದು.
  3. ಪರಿಶಿಷ್ಟ ಜಾತಿಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಲು ಶಿಫಾರಸ್ಸು ಮಾಡುತ್ತದೆ. ನಂತರ ಸಮುದಾಯದ ಕಲ್ಯಾಣ, ರಕ್ಷಣೆ ಹಾಗೂ ಪ್ರಗತಿಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಸಹ ಸೂಚಿಸುತ್ತದೆ.
  4. ಈ ಸಮುದಾಯಗಳ ಮೇಲ್ವಿಚಾರಣಾ ಚಟುವಟಿಕೆಗಳನ್ನು ನಿರ್ವಹಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುತ್ತದೆ. ಈ ನ್ಯಾಯಾಲಯಗಳು ತ್ವರಿತ ವಿಚಾರಣೆ ನಡೆಸಿ ಸ್ಥಳದಲ್ಲೇ ಪರಿಹಾರ ನೀಡುತ್ತವೆ.
  5. ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಬಗ್ಗೆ ರಾಷ್ಟ್ರಪತಿಗಳಿಗೆ ನಿಯತಕಾಲಿಕವಾಗಿ ವರದಿ ಸಲ್ಲಿಸುವುದು.
  6. ಈ ಸಮುದಾಯದ ವಿಚಾರಣಾ ನ್ಯಾಯಾಲಯಗಳ ವಿಲೇವಾರಿ ದರಗಳನ್ನು ಸಹ ಆಯೋಗವು ಮೇಲ್ವಿಚಾರಣೆ ಮಾಡುತ್ತದೆ.

ಸಮಸ್ಯೆಗಳು: (Problems)

 ಆಯೋಗದಲ್ಲಿ ಹಲವಾರು ನ್ಯೂನತೆಗಳು ಇವೆ ಅವುಗಳೆಂದರೆ.

  1. ಆಯೋಗವು ತನಿಖೆಯನ್ನು ನಡೆಸುವ ಮತ್ತು ಕ್ರಮಗಳನ್ನು ಶಿಫಾರಸ್ಸು ಮಾಡುವ ಅಧಿಕಾರವನ್ನು ಹೊಂದಿದ್ದರೂ ಈ ಶಿಫಾರಸ್ಸುಗಳು ಬದ್ಧವಾಗಿಲ್ಲ.
  2. ಆಯೋಗವು ಈ ಸಮುದಾಯದ ಗಣ್ಯರಿಗೆ ಆದ್ಯತೆ ನೀಡಿ ಸಮುದಾಯದ ತಳ ವರ್ಗವನ್ನು ನಿರ್ಲಕ್ಷಿಸಿದೆ.
  3. ತೀರ್ಪು ನೀಡುವಲ್ಲಿ ಹಾಗೂ ವಿಚಾರಣೆ ಮಾಡುವಲ್ಲಿ ಆಯೋಗವು ತುಂಬಾ ವಿಳಂಬ ನೀತಿಯನ್ನು ಅನುಸರಿಸುತ್ತದೆ.
  4. ಕ್ರಿಮಿನಲ್ ತನಿಖೆಯ ವಿಷಯದಲ್ಲಿ ಆಯೋಗವು ಆಮೆಗತಿಯ ಕೆಲಸವನ್ನು ಮಾಡುತ್ತದೆ.
  5. ಸಂಸ್ಥೆಗಳ ಪ್ರಸರಣವು ಆಂತರಿಕ ಗೊಂದಲಗಳಿಂದ  ಕೂಡಿದೆ.

ಉಪಸಂಹಾರ

ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗವು ಪರಿಶಿಷ್ಟ ಜಾತಿಗಳ ಹಕ್ಕುಗಳನ್ನು ಕಾಪಾಡಲು ಮತ್ತು ಅವರ ಅಭಿವೃದ್ಧಿಗೆ ಪೂರಕವಾಗಿರುವ ಪ್ರಮುಖ ಸಂಸ್ಥೆಯಾಗಿದೆ. ಆದರೆ ಇದರ ಶಿಫಾರಸ್ಸುಗಳಿಗೆ ಬದ್ಧತೆ ಇಲ್ಲದಿರುವುದು ಹಾಗೂ ವಿಳಂಬ ನೀತಿ ಮುಂತಾದ ಸಮಸ್ಯೆಗಳು ಅದರ ಕಾರ್ಯಕ್ಷಮತೆಯನ್ನು ಕುಂಠಿತಗೊಳಿಸುತ್ತವೆ. ಇವುಗಳನ್ನು ಸರಿಪಡಿಸಿದಲ್ಲಿ ಆಯೋಗವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿ ಸಾಮಾಜಿಕ ನ್ಯಾಯ ಸಾಧನೆಗೆ ಸಹಾಯಕವಾಗಬಹುದು.

ಮಹಿಳಾ ಆಯೋಗ

ಮಹಿಳಾ ಆಯೋಗ

ಪ್ರಾಚೀನ ಭಾರತದಲ್ಲಿ ಮಹಿಳೆಯರಿಗೆ ಸಾಮಾಜಿಕ ನ್ಯಾಯವಾಗಲೀ ಹಾಗೂ ಆರ್ಥಿಕ ಸೌಲಭ್ಯಗಳಾಗಲೀ ಇರಲಿಲ್ಲ. ಅವಳನ್ನು ಪುರುಷನಿಗೆ ಸರಿಸಮಾನಗಳು ಎಂದು ಪರಿಗಣಿಸಿರಲಿಲ್ಲ. ಮತದಾನದ ಹಕ್ಕುಗಳಂತೂ ಇರಲೇ ಇಲ್ಲ ʻʻನ ಸ್ಸ್ತ್ರಿ ಸ್ವಾತಂತ್ಯ್ರಂ ಅರ್ಹತಿʼʼ ಎಂದರೆ ಸ್ತ್ರೀಯು ಸ್ವಾತಂತ್ರ್ಯಕ್ಕೆ ಯೋಗ್ಯಳಲ್ಲ ಎಂಬ ಭಾವನೆಯಿತ್ತು. ಅವಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಭಾಗವಹಿಸುವಂತಿರಲಿಲ್ಲ. ಮನೆಯ ನಾಲ್ಕು ಗೋಡೆಯ ಮಧ್ಯೆ ಇರಬೇಕು. ಚಿಕ್ಕವಳಿರುವಾಗ ತಂದೆಯ, ಮದುವೆಯಾದಾಗ ಗಂಡನ ಹಾಗೂ ವಯಸ್ಸಾದ ನಂತರ ಮಕ್ಕಳ ಆಶ್ರಯದಲ್ಲಿ ಇದ್ದು ದೇವರು ಕರೆದಾಗ ಹೋಗಬೇಕು ಎಂಬ ನಿಯಮವನ್ನು ಹಾಕಿ ಅವಳ ಸ್ವಾತಂತ್ರವನ್ನು ಕಿತ್ತುಕೊಳ್ಳಲಾಗಿತ್ತು. ಸ್ವಾತಂತ್ರ್ಯ ನಂತರ ಭಾರತದ ಮಹಿಳೆಯರ ಚಳುವಳಿಯ ಪರಿಣಾಮವಾಗಿ ಎಚ್ಚೆತ್ತ ಸರ್ಕಾರ ಅವರಿಗಾಗಿ ಕಾನೂನು ಹಾಗೂ ಸಂವಿಧಾನ ತಿದ್ದುಪಡಿ ಮಾಡುವ ಮೂಲಕ ಸಮಾನ ಮತ್ತು ನ್ಯಾಯಯುತ ಜೀವನ ನಡೆಸಲು ಅನುಕೂಲವಾಗುವಂತೆ ಮಾಡಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸಲು ಮುಂದಾಯಿತು. ಮಹಿಳೆಯರ ಮೇಲಿನ ದೌರ್ಜನ್ಯವನ್ನು ರಾಷ್ಟ್ರಗಳು, ಸಮಾಜಗಳು, ಸಂಸ್ಕೃತಿಗಳು ಮತ್ತು ವರ್ಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಂಡುಬಂದಾಗ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯನ್ನು ತಡೆಯಲು ಈ ಆಯೋಗವನ್ನು ರಚಿಸಲಾಯಿತು. 1990ರಲ್ಲಿ ಮಹಿಳಾ ಆಯೋಗದ ಕಾಯಿದೆಯ ಕರಡನ್ನು ತಯಾರಿಸಿ 1991ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಯಿತು.  ಅದು ಅಂತಿಮವಾಗಿ 1992 ಜನವರಿ 31 ರಂದು ಕಾನೂನಾತ್ಮಕವಾಗಿ ಜಾರಿಗೆ ಬಂದಿತು. ʻʻಈ ಆಯೋಗದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಜಯಂತಿ ಪಟ್ನಾಯಕ್ ಅಧಿಕಾರ ವಹಿಸಿಕೊಂಡರು.ʼʼ ಮೊದಲ ಪುರುಷ ಸದಸ್ಯರಾಗಿ ʻʻಅಲೋಕ್ ರಾವತ್ʼʼ ಆಯ್ಕೆಯಾದರು.

ರಚನೆ : (Composition)

ಮಹಿಳಾ ಆಯೋಗವು ಒಬ್ಬ ಅಧ್ಯಕ್ಷರು, ಐವರು ಸದಸ್ಯರು ಹಾಗೂ ಒಬ್ಬ ಸದಸ್ಯ ಕಾರ್ಯದರ್ಶಿಗಳನ್ನು ಒಳಗೊಂಡಿರುತ್ತದೆ.

ʻʻಮಹಿಳಾ ಆಯೋಗದ ಅಧ್ಯಕ್ಷರನ್ನು ಕೇಂದ್ರ ಸರ್ಕಾರವು ನಾಮನಿರ್ದೇಶನ ಮಾಡುತ್ತದೆ. ಉಳಿದ ೫ ಜನ ಸದಸ್ಯರನ್ನು ಅವರ ಸಾಮರ್ಥ್ಯ, ಸಮಗ್ರತೆ ಮತ್ತು ಕರ್ತವ್ಯ ನಿಷ್ಠೆಯನ್ನು ಪರಿಗಣಿಸಿ ನಾಮನಿರ್ದೇಶನ ಮಾಡಬೇಕು. ಅವರು ಕಾನೂನು, ಮಹಿಳಾ ಕೈಗಾರಿಕಾ ಸಾಮರ್ಥ್ಯದ ನಿರ್ವಹಣೆ, ಸ್ವಮಹಿಳಾ ಸಂಘಟನೆ, ಶಿಕ್ಷಣ, ಆಡಳಿತ, ಅಭಿವೃದ್ಧಿ ಹಾಗೂ ಸಾಮಾಜಿಕ ಯೋಗಕ್ಷೇಮದಂತಹ ವಿವಿಧ ಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು. ಸದಸ್ಯ ಕಾರ್ಯದರ್ಶಿಯನ್ನು ಕೇಂದ್ರ ಸರ್ಕಾರವೇ ನಾಮನಿರ್ದೇಶನ ಮಾಡುತ್ತದೆ. ಅವರು ನಿರ್ವಹಣಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರಬೇಕು.

ಕಾರ್ಯಗಳು: (Functions) ಮಹಿಳಾ ಆಯೋಗದ ಕಾರ್ಯಗಳು ಹೀಗಿವೆ.

  1. ಆಯೋಗವು ಮಹಿಳೆಯರ ಮೇಲೆ ಪರಿಣಾಮ ಬೀರುವ ಕಾನೂನುಗಳು ಹಾಗೂ ನೀತಿಗಳನ್ನು ಪರಿಶೀಲಿಸಿ ಅವರ ಕಲ್ಯಾಣಕ್ಕಾಗಿ ತಿದ್ದುಪಡಿಗಳು ಹಾಗೂ ಹೊಸ ಶಾಸನಗಳನ್ನು ರೂಪಿಸುತ್ತದೆ.
  2. ಮಹಿಳೆಯರ ಕೌಟುಂಬಿಕ  ಹಿಂಸಾಚಾರದಿಂದ ಮಹಿಳಾ ರಕ್ಷಣಾ ಕಾನೂನುಗಳನ್ನು ಸರಿಯಾಗಿ ಅನುಸಾರಗೊಳಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಹಿತಿ ನೀಡುತ್ತದೆ.
  3. ಕೌಟುಂಬಿಕ ಹಿಂಸೆ, ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಸಮಸ್ಯೆಗಳು, ಕಳ್ಳ ಸಾಗಾಣಿಕೆಗೆ ಸಂಬಂಧಿಸಿದ ದೂರುಗಳು ಬಂದರೆ ಅವುಗಳನ್ನು ಸ್ವೀಕರಿಸುವ ಹಾಗೂ ವಿಚಾರಣೆ ಮಾಡುವ ಅಧಿಕಾರ ಮಹಿಳಾ ಆಯೋಗಕ್ಕೆ ಇದೆ.
  4. ಭಾರತದಲ್ಲಿ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸಲು ನೀತಿ ಕ್ರಮಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡುವ ಜವಾಬ್ದಾರಿ ಮಹಿಳಾ ಆಯೋಗಕ್ಕೆ ಇದೆ.
  5. ಮಹಿಳೆಯರಿಗೆ ಅವರ ಹಕ್ಕುಗಳ ಕುರಿತು ಮಾಹಿತಿ ನೀಡಲು ಆಯೋಗವು ಕಾರ್ಯಾಗಾರಗಳು ಹಾಗೂ ವಿಚಾರ ಸಂಕೀರ್ಣಗಳನ್ನು ನಡೆಸುತ್ತದೆ.
  6. ಮಹಿಳಾ ಹಕ್ಕುಗಳ ಉಲ್ಲಂಘನೆಯಾದಾಗ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯುತ್ತದೆ.
  7. ಮಹಿಳಾ ಕಲ್ಯಾಣ ಹಾಗೂ ಸಬಲೀಕರಣಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡುತ್ತದೆ.
  8. ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಉದ್ಯೋಗ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಸುಧಾರಿಸಲು ಶಿಫಾರಸ್ಸು ಮಾಡುವುದು.
  9. ಮಹಿಳೆಯರನ್ನು ಬಂಧಿತರಾಗಿ ಇರಿಸಲಾಗಿರುವ ಸೆರೆಮನೆ, ರಿಮ್ಯಾಂಡ್ ಹೋಂ, ಮಹಿಳಾ ಸ್ಥಾಪನೆ ಹಾಗೂ ಇತರ ಸ್ಥಳಗಳನ್ನು ಪರಿಶೀಲಿಸುವುದು.
  10. ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸೂಕ್ತ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳುವ ಮಾರ್ಗಗಳನ್ನು ಪ್ರಸ್ತಾಪಿಸಲು ಪ್ರಚಾರ ಹಾಗೂ ಶೈಕ್ಷಣಿಕ ಸಂಶೋಧನೆಗಳನ್ನು ಕೈಗೊಳ್ಳುವುದು. ವೃತ್ತಿಪರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡಲು ಹಾಗೂ ಅವರ ದಕ್ಷತೆಯನ್ನು ಹೆಚ್ಚಿಸಲು ಬೆಂಬಲ ಸೇವೆಗಳನ್ನು ಗುರುತಿಸುವುದು.

ಉಪಸಂಹಾರ

ಮಹಿಳಾ ಆಯೋಗವು ಮಹಿಳೆಯರ ರಕ್ಷಣೆಗೆ ಮತ್ತು ಸಬಲೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ. ಮಹಿಳೆಯರ ಹಕ್ಕುಗಳ ಅರಿವು ಮೂಡಿಸಿ, ಕಾನೂನು ಸಹಾಯ ಮತ್ತು ಸಲಹೆಗಳನ್ನು ನೀಡುತ್ತದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸಲು ಇದು ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತದೆ. ಹೀಗಾಗಿ ಮಹಿಳಾ ಆಯೋಗವು ಸಮಾನತೆ ಮತ್ತು ನ್ಯಾಯದ ಸಮಾಜ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾದ ಸಂಸ್ಥೆಯಾಗಿದೆ.