ಸುಸ್ಥಿರ ಪ್ರವಾಸೋದ್ಯಮಕ್ಕಾಗಿ WTO ಸಮ್ಮೇಳನ

ಸುಸ್ಥಿರ ಪ್ರವಾಸೋದ್ಯಮಕ್ಕಾಗಿ WTO ಸಮ್ಮೇಳನ

ಸುಸ್ಥಿರ ಪ್ರವಾಸೋದ್ಯಮದ ಈ 18 ಮಾರ್ಗದರ್ಶಿ ಸೂತ್ರಗಳನ್ನು 1995ರ ಏಪ್ರಿಲ್ 27-28 ರಂದು ಸ್ಪೇನ್ ದೇಶದ ಕ್ಯಾನರಿ ದ್ವೀಪಗಳ ಲ್ಯಾಂಜಾರೋಟೆ (Lanzarote) ಎಂಬಲ್ಲಿ ನಡೆದ ‘ಸುಸ್ಥಿರ ಪ್ರವಾಸೋದ್ಯಮದ ವಿಶ್ವ ಸಮ್ಮೇಳನ’ದಲ್ಲಿ ರೂಪಿಸಲಾಯಿತು. ಇದನ್ನು ‘ಲ್ಯಾಂಜಾರೋಟೆ ಚಾರ್ಟರ್’ ಎಂದೂ ಕರೆಯುತ್ತಾರೆ. ಯುನೆಸ್ಕೋ (UNESCO) ಮತ್ತು ವಿಶ್ವ ಪ್ರವಾಸೋದ್ಯಮ ಸಂಸ್ಥೆ (UNWTO) ಈ ಸಮ್ಮೇಳನವನ್ನು ಆಯೋಜಿಸಿದ್ದವು.

ಸುಸ್ಥಿರ ಪ್ರವಾಸೋದ್ಯಮದ ಪ್ರಾಮುಖ್ಯತೆ

ಈ ಸೂತ್ರಗಳು ಪ್ರವಾಸೋದ್ಯಮದ ಮೂರು ಪ್ರಮುಖ ಅಂಶಗಳಾದ—ಜನರು (People), ಭೂಮಿ (Planet), ಮತ್ತು ಲಾಭ (Profit)—ನಡುವೆ ಸಮತೋಲನ ಕಾಯ್ದುಕೊಳ್ಳಲು ಮುಖ್ಯವಾಗಿವೆ.

* ಪರಿಸರ ರಕ್ಷಣೆ: ಪ್ರವಾಸಿಗರನ್ನು ಆಕರ್ಷಿಸುವ ನೈಸರ್ಗಿಕ ಸೌಂದರ್ಯವು ಮಾಲಿನ್ಯದಿಂದ ನಾಶವಾಗದಂತೆ ಇದು ನೋಡಿಕೊಳ್ಳುತ್ತದೆ.

* ಸಾಂಸ್ಕೃತಿಕ ಸಂರಕ್ಷಣೆ: ಸ್ಥಳೀಯ ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಕೇವಲ ಪ್ರದರ್ಶನದ ವಸ್ತುಗಳನ್ನಾಗಿ ಮಾಡದೆ, ಅವುಗಳಿಗೆ ಗೌರವ ನೀಡುವಂತೆ ಮಾಡುತ್ತದೆ.

* ಆರ್ಥಿಕ ಸ್ವಾವಲಂಬನೆ: ಪ್ರವಾಸಿಗರು ಖರ್ಚು ಮಾಡುವ ಹಣವು ಸ್ಥಳೀಯ ಆರ್ಥಿಕತೆಗೆ ಸೇರುವಂತೆ ಮಾಡುತ್ತದೆ, ಇದರಿಂದ ಸ್ಥಳೀಯರ ಆದಾಯ ಹೆಚ್ಚುತ್ತದೆ.

* ಹವಾಮಾನ ಬದಲಾವಣೆ ತಡೆ: ಕಡಿಮೆ ಇಂಧನ ಬಳಕೆ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುತ್ತದೆ.

* ದೀರ್ಘಕಾಲದ ಉಳಿವು: ಈ ನಿಯಮಗಳಿಲ್ಲದಿದ್ದರೆ, ಪ್ರವಾಸಿ ತಾಣಗಳು ಅತಿಯಾದ ಬಳಕೆಯಿಂದ ಹಾಳಾಗಿ, ಭವಿಷ್ಯದಲ್ಲಿ ಪ್ರವಾಸಿಗರಿಲ್ಲದೆ ಆರ್ಥಿಕ ಕುಸಿತಕ್ಕೆ ಕಾರಣವಾಗಬಹುದು.

ಸುಸ್ಥಿರ ಪ್ರವಾಸೋದ್ಯಮದ 18 ಮಾರ್ಗದರ್ಶಿ ಸೂತ್ರಗಳು

ಈ ಸೂತ್ರಗಳು ಪ್ರವಾಸೋದ್ಯಮವು ಪರಿಸರ ಅಥವಾ ಸ್ಥಳೀಯ ಸಂಸ್ಕೃತಿಗೆ ಧಕ್ಕೆ ತರದಂತೆ ದೀರ್ಘಕಾಲದವರೆಗೆ ಸಾಗಲು ಸಹಾಯ ಮಾಡುತ್ತವೆ:

1. ಸುಸ್ಥಿರತೆಗೆ ಆದ್ಯತೆ: ಪ್ರವಾಸೋದ್ಯಮವು ಪರಿಸರಕ್ಕೆ ಪೂರಕವಾಗಿ, ಆರ್ಥಿಕವಾಗಿ ಲಾಭದಾಯಕವಾಗಿ ಮತ್ತು ಸಾಮಾಜಿಕವಾಗಿ ಸಮಾನತೆಯಿಂದ ಇರಬೇಕು.

2. ಬಹುಶಿಸ್ತೀಯ ವಿಧಾನ: ಸರ್ಕಾರ, ಖಾಸಗಿ ವಲಯ ಮತ್ತು ಸ್ಥಳೀಯ ಸಮುದಾಯಗಳು ಒಟ್ಟಾಗಿ ಕೆಲಸ ಮಾಡಬೇಕು.

3. ಪರಿಸರ ಸಂರಕ್ಷಣೆ: ಪ್ರವಾಸೋದ್ಯಮವು ನೈಸರ್ಗಿಕ ಸಂಪನ್ಮೂಲಗಳು ಮತ್ತು ಜೀವವೈವಿಧ್ಯದ ರಕ್ಷಣೆಗೆ ಕೊಡುಗೆ ನೀಡಬೇಕು.

4. ಅಭಿವೃದ್ಧಿ ಮತ್ತು ಪರಿಸರದ ಸಮನ್ವಯ: ಪರಿಸರ ರಕ್ಷಣೆಯು ಪ್ರವಾಸೋದ್ಯಮ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಬೇಕು.

5. ಜೀವನ ಮಟ್ಟದ ಸುಧಾರಣೆ: ಪ್ರವಾಸೋದ್ಯಮವು ಸ್ಥಳೀಯ ನಿವಾಸಿಗಳ ಜೀವನದ ಗುಣಮಟ್ಟವನ್ನು ಹೆಚ್ಚಿಸಬೇಕು.

6. ಒಗ್ಗಟ್ಟು ಮತ್ತು ಶಾಂತಿ: ಇದು ವಿವಿಧ ರಾಷ್ಟ್ರಗಳ ನಡುವೆ ಶಾಂತಿ ಮತ್ತು ತಿಳುವಳಿಕೆಯನ್ನು ಉತ್ತೇಜಿಸಬೇಕು.

7. ನ್ಯಾಯೋಚಿತ ಹಂಚಿಕೆ: ಪ್ರವಾಸೋದ್ಯಮದ ಲಾಭ ಮತ್ತು ಜವಾಬ್ದಾರಿಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು.

8. ಸಾಂಸ್ಕೃತಿಕ ಪರಂಪರೆಯ ರಕ್ಷಣೆ: ಐತಿಹಾಸಿಕ ಕಟ್ಟಡಗಳು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ರಕ್ಷಿಸಬೇಕು.

9. ಸ್ಥಳೀಯ ಸಮುದಾಯದ ಭಾಗಿತ್ವ: ಪ್ರವಾಸೋದ್ಯಮ ಯೋಜನೆಗಳಲ್ಲಿ ಸ್ಥಳೀಯ ಜನರನ್ನು ಒಳಗೊಳ್ಳಬೇಕು.

10. ಸಂಪನ್ಮೂಲಗಳ ಸಮರ್ಥ ಬಳಕೆ: ವಿದ್ಯುತ್, ನೀರು ಮತ್ತು ಇತರ ವಸ್ತುಗಳ ಬಳಕೆಯಲ್ಲಿ ಮಿತವ್ಯಯ ಇರಬೇಕು.

11. ತ್ಯಾಜ್ಯ ನಿರ್ವಹಣೆ: ಪರಿಸರದ ಮೇಲಿನ ಹಾನಿಯನ್ನು ಕಡಿಮೆ ಮಾಡಲು ಕಸದ ಪ್ರಮಾಣ ತಗ್ಗಿಸಬೇಕು ಮತ್ತು ಮರುಬಳಕೆಗೆ ಆದ್ಯತೆ ನೀಡಬೇಕು.

12. ಸೂಕ್ಷ್ಮ ಪರಿಸರ ವ್ಯವಸ್ಥೆಗಳ ನಿರ್ವಹಣೆ: ಕರಾವಳಿ, ಪರ್ವತ ಮತ್ತು ದ್ವೀಪಗಳಂತಹ ಸೂಕ್ಷ್ಮ ಪ್ರದೇಶಗಳಿಗೆ ವಿಶೇಷ ಗಮನ ನೀಡಬೇಕು.

13. ಶಿಕ್ಷಣ ಮತ್ತು ತರಬೇತಿ: ಸುಸ್ಥಿರ ಪದ್ಧತಿಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು.

14. ಯೋಜನೆ ಮತ್ತು ನಿಯಂತ್ರಣ: ಸರ್ಕಾರಗಳು ಕಟ್ಟುನಿಟ್ಟಾದ ಭೂ-ಬಳಕೆ ನಿಯಮಗಳನ್ನು ಜಾರಿಗೆ ತರಬೇಕು.

15. ಗ್ರಾಹಕರಲ್ಲಿ ಅರಿವು: ಪ್ರವಾಸಿಗರು ಜವಾಬ್ದಾರಿಯುತವಾಗಿ ವರ್ತಿಸುವಂತೆ ಪ್ರೇರೇಪಿಸಬೇಕು.

16. ಕಾನೂನು ಚೌಕಟ್ಟು: ಸುಸ್ಥಿರ ಪ್ರವಾಸೋದ್ಯಮವನ್ನು ಬೆಂಬಲಿಸುವ ಕಾನೂನುಗಳನ್ನು ರಾಜ್ಯಗಳು ರೂಪಿಸಬೇಕು.

17. ನೈತಿಕ ಸಂಹಿತೆ: ಪ್ರವಾಸಿಗರು ಮತ್ತು ಸೇವೆ ನೀಡುವವರು ನೈತಿಕ ನಡವಳಿಕೆಗಳನ್ನು ಪಾಲಿಸಬೇಕು.

18. ಅಂತರರಾಷ್ಟ್ರೀಯ ಸಹಕಾರ: ಜಾಗತಿಕ ಸಮಸ್ಯೆಗಳಾದ ಹವಾಮಾನ ಬದಲಾವಣೆ ಎದುರಿಸಲು ದೇಶಗಳ ನಡುವೆ ಸಹಕಾರ ಇರಬೇಕು.

ಉಪಸಂಹಾರ : 18 ಮಾರ್ಗದರ್ಶಿ ತತ್ವಗಳು ಸುಸ್ಥಿರ ಪ್ರವಾಸೋದ್ಯಮದಲ್ಲಿ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ಹೊಂದಿರುವ ನೀತಿಗಳಿಗೆ ಒಂದು ಚೌಕಟ್ಟನ್ನು ರಚಿಸುತ್ತವೆ. ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (SDG ಗಳು) ಹೊಂದಿಕೆಯಾಗುವ ಜವಾಬ್ದಾರಿಯುತ ಹೂಡಿಕೆಗಳನ್ನು ಆಕರ್ಷಿಸುವ ನೀತಿಗಳನ್ನು ತತ್ವಗಳು ಪ್ರತಿಪಾದಿಸುತ್ತವೆ.

ಸುಸ್ಥಿರ ಪ್ರವಾಸೋದ್ಯಮದ ನೀತಿ ಸಂಹಿತೆ (Code of conduct for Sustained Tourism)

ಸುಸ್ಥಿರ ಪ್ರವಾಸೋದ್ಯಮದ ನೀತಿ ಸಂಹಿತೆ (Code of conduct for Sustained Tourism)

ಸುಸ್ಥಿರ ಪ್ರವಾಸೋದ್ಯಮವನ್ನು ಆಂಗ್ಲ ಭಾಷೆಯಲ್ಲಿ Sustainable ಎಂದು ಕರೆಯುತ್ತಾರೆ Sustainable   ಎಂಬ ಆಂಗ್ಲ ಪದವು Subinene ಎಂಬ ಫ್ರೆಂಚ್ ಪದದಿಂದ ಹುಟ್ಟಿಕೊಂಡಿದೆ. Sustaine ಎಂದರೆ ಬೆಂಬಲಿಸು, ಪೋಷಿಸು, ಎತ್ತಿ ನಿಲ್ಲಿಸು, ಸಂರಕ್ಷಿಸು ಅಥವಾ ತಾಳಿಕೊಳ್ಳು ಎಂದರ್ಥ. ಆದರೆ ಪ್ರವಾಸೋದ್ಯಮವು ಕುಂಠಿತಗೊಳ್ಳಲು ಕಾರಣಗಳನ್ನು ಹುಡುಕಿ ಅವುಗಳಿಗೆ ಪರಿಹಾರ ನೀಡಿ ಬೆಳೆಸುವುದು ಎಂದರ್ಥ. ಇನ್ನೊಂದು ಅರ್ಥದಲ್ಲಿ ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ರಕ್ಷಿಸಿ ಅವುಗಳನ್ನು ಮುಂದಿನ ತಲೆಮಾರಿಗೆ ನಿರಂತರವಾಗಿ ಬಳಸುವಂತೆ ಮಾಡಿ ಉಳಿಸಿ, ಬೆಳೆಸಿ ಹಾಗೂ ಸಂರಕ್ಷಿಸುವುದೇ ಸುಸ್ಥಿರ ಪ್ರವಾಸೋದ್ಯಮ ಎಂದು ಕರೆಯಲಾಗಿದೆ. ಏಕೆಂದರೆ ನೈಸರ್ಗಿಕ ಸಂಪನ್ಮೂಲಗಳು ಬಹುಬೇಗನೆ ಅವನತಿಯನ್ನು ಹೊಂದುತ್ತವೆ. ಹೀಗಾಗಿ ಅವುಗಳನ್ನು ರಕ್ಷಿಸುವ ಹೊಣೆ ಪ್ರವಾಸೋದ್ಯಮದ ಮೇಲಿದೆ. ಮಾನವನ ದುರಾಸೆಯಿಂದ ದಿನೇ ದಿನೇ ಕ್ಷೀಣಿಸುತ್ತಿರುವ ನಿಸರ್ಗವನ್ನು ಭದ್ರಪಡಿಸಬೇಕಿದೆ.

ಜಾಗತಿಕ ಪ್ರವಾಸೋದ್ಯಮ ಸಂಸ್ಥೆಯು ಸುಸ್ಥಿರ ಪ್ರವಾಸೋದ್ಯಮವನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಿದೆ. ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಇತರೆ ಪ್ರವಾಸೋದ್ಯಮ ಸಂಪನ್ಮೂಲಗಳನ್ನು ಪ್ರಸಕ್ತ ಸಮಾಜದ ಹಿತ, ಲಾಭ ಹಾಗೂ ಅಗತ್ಯಗಳನ್ನು ಈಡೇರಿಸುವುದರೊಂದಿಗೆ ಭವಿಷ್ಯದವರ ಉಪಯೋಗಕ್ಕಾಗಿ ರಕ್ಷಿಸುವುದು ಎಂದರ್ಥ. ಇಂದಿನವರ ಬೇಡಿಕೆಗಳನ್ನು ಅಪಾಯವಾಗದಂತೆ ಈಡೇರಿಸಿ ಮುಂದಿನವರ ಬೇಡಿಕೆಗಳಿಗೆ ಸ್ಪಂದಿಸುವುದು ಸುಸ್ಥಿರ ಪ್ರವಾಸೋದ್ಯಮದ  ಗುರಿಯಾಗಿದೆ.

ಸುಸ್ಥಿರ ಪ್ರವಾಸೋದ್ಯಮವನ್ನು “ಸಂರಕ್ಷಣಾ ಪ್ರವಾಸೋದ್ಯಮ” ಎಂದು ಕರೆಯುತ್ತಾರೆ. ಅಂದರೆ ಈ ಪ್ರವಾಸೋದ್ಯಮ ಸ್ಥಳಿಯರ ರೂಢಿ ಸಂಪ್ರದಾಯಗಳನ್ನು ಗೌರವಿಸುತ್ತಾ ಪರಿಸರದ ಕಾಳಜಿಯನ್ನು ಹೊಂದುವುದಾಗಿದೆ. ನೈಸರ್ಗಿಕ ಪ್ರದೇಶದಲ್ಲಿ ಜವಾಬ್ದಾರಿತವಾದ ಪ್ರವಾಸ ಕೈಗೊಳ್ಳುವುದನ್ನು ಸುಸ್ಥಿರ ಪ್ರವಾಸೋದ್ಯಮ ಎಂದು ಕರೆಯಬಹುದಾಗಿದೆ.

ಭಾರತದ ಪ್ರವಾಸೋದ್ಯಮ ಉದ್ಯಮವು ಹಣದ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿ ದೊಡ್ಡ ದೇಶವಾಗಿದೆ. ಇದು 2022ರಲ್ಲಿ ಜಾಗತಿಕ GDPಗೆ ಸರಿಸುಮಾರು 7.6% ಕೊಡುಗೆ ನೀಡಿದೆ. 2030ರ ವೇಳೆಗೆ ಜಾಗತಿಕ GDPಯಲ್ಲಿ ಸರಿಸುಮಾರು 11.3% ರಷ್ಟು ಬೆಳವಣಿಗೆಯೊಂದಿಗೆ 1.8 ಶತಕೋಟಿ ಪ್ರವಾಸಿಗರನ್ನು ನಿರೀಕ್ಷಿಸುವುದಾಗಿದೆ.

 ಈ ಸುಸ್ಥಿರ ಎಂಬ ಪದವು 1980 ರಿಂದ ಈಚೆಗೆ ಬಳಕೆಯಲ್ಲಿ ಬಂದಿತು. ದೇಶದ ಸ್ಮಾರಕಗಳ ನಾಶ ಹಾಗೂ ಪರಿಸರಕ್ಕೆ ಉಂಟಾಗುತ್ತಿದ್ದ ಹಾನಿಯನ್ನು ಮನಗಂಡು 1987ರಲ್ಲಿ ವಿಶ್ವಸಂಸ್ಥೆಯ ಪರಿಸರ ಹಾಗೂ ಅಭಿವೃದ್ಧಿ ಸಮಾವೇಶವು ಬ್ರಂಟ್‌ಲ್ಯಾಂಡ್‌ ವರದಿಯ ಮೂಲಕ ಸುಸ್ಥಿರ ಅಭಿವೃದ್ಧಿ ಮಾರ್ಗವನ್ನು ಜನಪ್ರಿಯಗೊಳಿಸಿತು.

ಸುಸ್ಥಿರ ಪ್ರವಾಸೋದ್ಯಮದ ನೀತಿ ಸಂಹಿತೆ/ ಸುಸ್ಥಿರ ಪ್ರವಾಸೋದ್ಯಮದ ಅಭಿವೃದ್ಧಿಯ ವಿಧಾನಗಳು

(Methods of Sustainable Tourism Development)

ಪ್ರವಾಸೋದ್ಯಮವು 20ನೇ ಶತಮಾನದ ಅಂತ್ಯದ ವೇಳೆಗೆ ಯೋಜನಾರಹಿತವಾಗಿ, ಅನಿಮಿತವಾಗಿ ಹಾಗೂ ಯಾವುದೇ ಮುಂದಾಲೋಚನೆ ಇಲ್ಲದೆ ಬೆಳೆದು ಬಂದು ಅನೇಕ ಸಮಸ್ಯೆಗಳನ್ನು ತಂದೊಡ್ಡಿದೆ. ಇದರಿಂದ ಪರಿಸರದ ಮೇಲೆ ಪ್ರವಾಸೋದ್ಯಮ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಪರಿಸರವಾದಿಗಳು ಇದನ್ನು ʻʻಸೃಜನಾತ್ಮಕ ವಿನಾಶ” ಎಂದು ಕರೆದರು. ಹೀಗಾಗಿ ಪ್ರವಾಸೋದ್ಯಮಕ್ಕೆ ಯೋಜನಾಬದ್ಧವಾದ ಮಾರ್ಗವನ್ನು ಅಳವಡಿಸಲಾಯಿತು. ಪ್ರವಾಸೋದ್ಯಮದ ಅಭಿವೃದ್ಧಿಯ ಕೆಲವು ವಿಧಾನಗಳು ಹೀಗಿವೆ.

    1. ಸಾಕಷ್ಟು ಪ್ರಮಾಣದಲ್ಲಿ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರು ಭೇಟಿನೀಡುವುದರಿಂದ ಪರಿಸರದ ಮೇಲೆ ಯಾವ ಪರಿಣಾಮಗಳು ಉಂಟಾಗುತ್ತವೆ ಎಂಬುದರ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವುದು.

     2. ಪ್ರವಾಸೋದ್ಯಮದ ಮೂಲ ಆಕರ್ಷಣೆಯೆಂದರೆ ಅದು ಪರಿಸರ. ಪರಿಸರವೇ ಇಲ್ಲವೆಂದಾದರೆ ಪ್ರವಾಸೋದ್ಯಮ ಎಲ್ಲಿದೆ?. ಹಾಗಾಗಿ ಪ್ರವಾಸಿಗರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡಿಸಬೇಕು. ಜೀವವೈವಿಧ್ಯತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂಬುದನ್ನು ಶಿಕ್ಷಣದ ಮೂಲಕ ಜಾಗೃತಿ ಮೂಡಿಸಬೇಕು.

     3. ಸ್ಟಾಕ್ ಹೋಂನಲ್ಲಿ ವಿಶ್ವಸಂಸ್ಥೆಯ ಮಾನವ ಪರಿಸರ ಕುರಿತ ಸಮ್ಮೇಳನವು ನಡೆಯಿತು. ಈ ಸಮ್ಮೇಳನದಲ್ಲಿ ಮಾನವ ಜೀವನ ಹಾಗೂ ಪರಿಸರ ಗುಣಮಟ್ಟವನ್ನು ಹೆಚ್ಚಿಸಲು ವಿಶ್ವ ಸಾಂಸ್ಕೃತಿಕ ಪರಂಪರೆಯ ಅಗತ್ಯತೆಯನ್ನು ಗುರುತಿಸಲಾಯಿತು. ಅಂದರೆ ಪ್ರವಾಸಿ ತಾಣಗಳಿಗೆ ಅವು ಒದಗಿಸುವ ಮೂಲಸೌಕರ್ಯ ಹಾಗೂ ಅದರ ಸಾಮರ್ಥ್ಯ ಅನುಸಾರ ಗರಿಷ್ಟ ಬೇಟಿ/ಸಂದರ್ಶನ ನಿಗದಿಗೊಳಿಸುವುದು. ಉದಾ: ವಿಜಾಪುರದ ಗೋಲಗುಂಬಜ್ ಒಂದು ದಿನಕ್ಕೆ 5000 ಪ್ರವಾಸಿಗಳಿಗೆ ಸಂದರ್ಶನ ಹಾಗೂ ಆತಿಥ್ಯ ನೀಡುವ ಸಾಮರ್ಥ್ಯ ಹೊಂದಿದ್ದರೆ 5,000 ಪ್ರವಾಸಿಗರನ್ನು ಮಾತ್ರ ದಿನವೊಂದಕ್ಕೆ ಸಂದರ್ಶನ ನೀಡಲು ಅವಕಾಶ ನೀಡಬೇಕೆ ಹೊರತು, 10,000 ಪ್ರವಾಸಿಗರಿಗೆ ಅಲ್ಲ. ಪ್ರವಾಸಿ ತಾಣಗಳಲ್ಲಿ ಈ ಕ್ರಮಗಳನ್ನು ಅನುಸರಿಸುವುದು ಸೂಕ್ತವಾದದ್ದು.

     4. ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರ ಪ್ರದೇಶಗಳವರೆಗೆ ಹೆಚ್ಚು ಹೆಚ್ಚು ಕಾಡುಗಳನ್ನು ಬೆಳೆಸಬೇಕು, ವನಮಹೋತ್ಸವವನ್ನು ಆಚರಿಸುವ ಮೂಲಕ ಪರಿಸರದ ಬಗ್ಗೆ ಕಾಳಜಿ ವಹಿಸುವುದು.

     5. ಪ್ರವಾಸಿ ತಾಣಗಳ ಜನದಟ್ಟಣೆಯನ್ನು ಕಡಿಮೆ ಮಾಡಲು ಏಕಕಾಲದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಸ್ಥಾಪಿಸಿ ಅಲ್ಲಿ ಮೂಲಸೌಕರ್ಯವನ್ನು ಕಲ್ಪಿಸಿ ಪ್ರವಾಸಿಗರು ಚದುರಿ ಹೋಗುವಂತೆ ಮಾಡಬೇಕು. ಅಂದರೆ ಪ್ರತಿಯೊಂದು ಪ್ರವಾಸಿ ತಾಣಗಳು ತಮ್ಮ ಮೂಲಸೌಕರ್ಯಗಳಿಂದ ಕಂಗೊಳಿಸುವಂತೆ ಮಾಡಿ ಪರಿಸರದ ಮೇಲೆ ಒಂದೇ ಕಡೆಗೆ ಒತ್ತಡ ಬೀಳದಂತೆ ತಡೆಯಬೇಕು.

     6. ಉದ್ಯಾನವನಗಳಲ್ಲಿ ಪ್ರವಾಸಿಗರು ಅಡ್ಡಾದಿಡ್ಡಿಯಾಗಿ ಓಡಾಡುವುದರಿಂದ ಪ್ರಾಕೃತಿಕ ಸೌಂದರ್ಯ ಮಾಸಿಹೋಗುತ್ತದೆ. ಇದನ್ನು ತಡೆಯಲು ಪ್ರವಾಸೋದ್ಯಮ ಇಲಾಖೆಯು ಕಾಲುದಾರಿಗಳನ್ನು ನಿರ್ಮಿಸಿ ಪಾದಾಚಾರಿಗಳು ಅದೇ ಮಾರ್ಗಗಳಲ್ಲಿ ಸಂಚರಿಸುವಂತೆ ಮಾರ್ಗದರ್ಶನ ನೀಡಬೇಕು. ಕೆಲವು ಪ್ರವಾಸಿ ಸ್ಥಳಗಳಲ್ಲಿ ಗುರುತು ಕಂಬಗಳನ್ನು ನೆಡಲಾಗುತ್ತದೆ. ಆ ಪ್ರಕಾರವಾಗಿಯೇ ಪ್ರವಾಸಿಗರು ಸಂಚರಿಸಬೇಕು. ಸೂಚನಾ ಫಲಕಗಳನ್ನು ಅಲ್ಲಲ್ಲಿ ಹಾಕುವ ಮೂಲಕ ಪ್ರವಾಸಿಗರ ಅತಿರೇಕವನ್ನು ತಡೆಯಬೇಕು.

     7. ಕೆಲವು ಪ್ರವಾಸಿ ತಾಣಗಳಿಗೆ ಋತುಮಾನಗಳಿಗೆ ಅನುಗುಣವಾಗಿ ಪ್ರವೇಶಾವಕಾಶವನ್ನು ನೀಡಬೇಕು. ಏಕೆಂದರೆ ಸರ್ವಋತುಗಳಲ್ಲಿ ಪ್ರವಾಸಿಗರಿಗೆ ಅವಕಾಶ ನೀಡಿದರೆ ಪ್ರವಾಸಿ ಕೇಂದ್ರಗಳು ತಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತವೆ. ಪ್ರವೇಶ ಸ್ಥಳಗಳಲ್ಲಿ ಗರಿಷ್ಠ ಮಟ್ಟದ ದರಗಳನ್ನು ನಿಗದಿಪಡಿಸಬೇಕು.

     8. ಪ್ರವಾಸೋದ್ಯಮದ ಯೋಜನೆಯನ್ನು ಜಾರಿಗೊಳಿಸುವಾಗ ಹಸಿರು ಪರಿಸರವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು.

     9. ಅತಿಯಾದ ವಾಹನಗಳ ದಟ್ಟಣೆಯನ್ನು ತಡೆಯಲು ವಾಹನಗಳು ಸರದಿ ಸಾಲಿನಲ್ಲಿ ಬರುವಂತೆ ಕ್ರಮ ವಹಿಸಬೇಕು.

     10. ಐತಿಹಾಸಿಕ ಹೆಸರು ಪಡೆದ ಬೀಚ್‌ಗಳು, ಜಲಪಾತಗಳು, ಗಿರಿಧಾಮಗಳು ಹಾಗೂ ನೈಸರ್ಗಿಕ ತಾಣಗಳಲ್ಲಿ ಅಕ್ರಮ ಕಟ್ಟಡಗಳನ್ನು ನಿರ್ಮಿಸಿದಂತೆ ತಡೆಯೊಡ್ಡಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು.

     11. ಪ್ರವಾಸಿಗರು ಪ್ರವಾಸಿ ಕೇಂದ್ರಗಳಿಗೆ ಬರುವಾಗ ಪ್ಲಾಸ್ಟಿಕ್ ಚೀಲ, ಆಹಾರ ಪಟ್ಟಣ, ನೀರಿನ ಬಾಟಲ್, ಟೀ ಕಪ್ಪುಗಳು, ಚಾಕೋಲೇಟ್ ಹಾಗೂ ಐಸ್ ಕ್ರೀಂಗಳನ್ನು ತರದಂತೆ ನಿರ್ಬಂಧ ಇರಬೇಕು.

    12. ಪ್ರವಾಸಿ ಕೇಂದ್ರಗಳಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು.

     13. ಪ್ರವಾಸಿ ಕೇಂದ್ರಗಳಲ್ಲಿ ನಿರುಪಯುಕ್ತ ವಸ್ತುಗಳನ್ನು ಬೇಗನೆ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಕಡಿಮೆ ಪ್ರಮಾಣದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಬೇಕು.

     14. ಪ್ರವಾಸೋದ್ಯಮದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರು ಸೂಕ್ತ ತರಬೇತಿಯನ್ನು ಪಡೆದವರು ಆಗಿರಬೇಕು.

     15. ಪ್ರವಾಸಿಗರು ತಾವು ಹೋಗುವ ಸ್ಥಳದ ರೂಢಿ, ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಗೌರವಿಸಬೇಕು.

     16. ಪ್ರವೇಶ ದ್ವಾರಗಳಲ್ಲಿ ವಾಹನಗಳನ್ನು ತಡೆಯುವ ತಡೆಗಳನ್ನು ನಿರ್ಮಿಸುವುದು.

     17. ಪ್ರವಾಸಿ ಕೇಂದ್ರಗಳಲ್ಲಿ ಪ್ರಾಣಿ-ಪಕ್ಷಿಗಳು ಹೆಚ್ಚಿರುವಂತೆ ಹಾಗೂ ವನಸ್ಪತಿ ಹೂಗಳು ಹೆಚ್ಚಿರುವ ಹಾಗೆ ಕ್ರಮ ಕೈಗೊಳ್ಳಬೇಕು.

     18. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿಯಾಗಿ ಪರಿಸರ ರಕ್ಷಣೆಗೆ ಮುಂದಾಗಬೇಕು.

     19. ಸ್ಥಳೀಯರು ಪರಿಸರ ರಕ್ಷಣೆಗೆ ಮುಂದಾಗಬೇಕು.

    ಉಪಸಂಹಾರ :

    ಸಾರಾಂಶವಾಗಿ, ಸ್ಥಿರ ಪ್ರವಾಸೋದ್ಯಮಕ್ಕಾಗಿ ನೀತಿಸಂಹಿತೆಯು (Code of Conduct for Sustainable Tourism) ಸರ್ಕಾರಗಳು, ಪ್ರವಾಸೋದ್ಯಮ ಉದ್ಯಮಗಳು, ಸ್ಥಳೀಯ ಸಮುದಾಯಗಳು ಮತ್ತು ಪ್ರವಾಸಿಗರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಜವಾಬ್ದಾರಿಯುತ ವರ್ತನೆಗೆ ಮಾರ್ಗದರ್ಶನ ನೀಡುವ ಪ್ರಮುಖ ನೈತಿಕ ಮತ್ತು ಪ್ರಾಯೋಗಿಕ ಚೌಕಟ್ಟಾಗಿದೆ. ಇದು ಆರ್ಥಿಕ ಲಾಭಗಳನ್ನು ಪರಿಸರ ಸಂರಕ್ಷಣೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆಯೊಂದಿಗೆ ಸಮತೋಲನಗೊಳಿಸುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಸ್ಥಳೀಯ ಸಂಪ್ರದಾಯಗಳಿಗೆ ಗೌರವ, ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ಸಮಾವೇಶಿತ ಅಭಿವೃದ್ಧಿಯನ್ನು ಉತ್ತೇಜಿಸುವ ಮೂಲಕ, ಪ್ರವಾಸೋದ್ಯಮವು ಪ್ರಕೃತಿ ಮತ್ತು ಸಂಸ್ಕೃತಿಯ ಆಸ್ತಿಗಳನ್ನು ಹಾನಿಗೊಳಿಸದೆ ಸಮಾಜಕ್ಕೆ ಹಿತಕರವಾಗಿ ಕೊಡುಗೆ ನೀಡುವುದನ್ನು ಇದು ಖಚಿತಪಡಿಸುತ್ತದೆ. ಅಂತಿಮವಾಗಿ, ಇದರ ಪರಿಣಾಮಕಾರಿ ಅನುಷ್ಠಾನವು ದೀರ್ಘಕಾಲಿಕ ಸ್ಥಿರತೆಯನ್ನು ಸಾಧಿಸಲು, ಆತಿಥೇಯ ಸಮುದಾಯಗಳ ಜೀವನಮಟ್ಟವನ್ನು ಉತ್ತಮಗೊಳಿಸಲು ಮತ್ತು ಭವಿಷ್ಯದ ಪೀಳಿಗೆಗಳಿಗೆ ಅರ್ಥಪೂರ್ಣ ಹಾಗೂ ಜವಾಬ್ದಾರಿಯುತ ಪ್ರವಾಸ ಅನುಭವಗಳನ್ನು ಒದಗಿಸಲು ಅತ್ಯಂತ ಅಗತ್ಯವಾಗಿದೆ.

    ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರವಾಸೋದ್ಯಮ

    ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರವಾಸೋದ್ಯಮ

    ಭಾರತದ ಆರ್ಥಿಕ ಬೆಳವಣಿಗೆ ಉದ್ಯೋಗ ಸೃಷ್ಟಿ, ನೀರಾವರಿ, ವಿದ್ಯುತ್ ಹಾಗೂ ಕೃಷಿ ಅಭಿವೃದ್ಧಿಗಾಗಿ ಭಾರತ ಸರ್ಕಾರವು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿತು. ಈ ಯೋಜನೆಯು 1951ರಲ್ಲಿ ಆರಂಭವಾಯಿತು. ಅಂದಿನಿಂದ ಪ್ರವಾಸೋದ್ಯಮಕ್ಕೂ ಸಹ ಸೂಕ್ತ ಗಮನವನ್ನು ಸರ್ಕಾರ ನೀಡಿತು.

     1. ಮೊದಲನೇ ಪಂಚವಾರ್ಷಿಕ ಯೋಜನೆ (1951-1956)

    1951ರಲ್ಲಿ ಜಾರಿಗೆ ಬಂದ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮವು ಸಾರಿಗೆ ಸಚಿವಾಲಯದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು ಅದರಡಿಯಲ್ಲಿ ಪ್ರವಾಸೋದ್ಯಮ ವಿಭಾಗವನ್ನು ಸ್ಥಾಪಿಸಲಾಯಿತು. ಈ ಯೋಜನೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪ್ರವಾಸಿ ಸೌಲಭ್ಯಗಳ ಸೀಮಿತ ಕಲ್ಪನೆಗೆ ಒತ್ತು ನೀಡಲಾಯಿತು.

    2. ಎರಡನೇ ಪಂಚವಾರ್ಷಿಕ ಯೋಜನೆ (1956-1961)

    ಈ ಯೋಜನೆಯಲ್ಲಿ ದೇಶದ ವಿವಿಧ ಇಲಾಖೆಗಳಿಗೆ ಮೀಸಲಾಗಿಟ್ಟ ಹಣದ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 3,36,00,000 ರೂಗಳನ್ನು ಮೀಸಲಾಗಿಡಲಾಯಿತು. ಈ ಹಣದಿಂದ ವಿದೇಶಿ ಪ್ರವಾಸಿಗರ ವಸತಿಗಾಗಿ ತಂಗುದಾಣಗಳು, ಪ್ರವಾಸಿ ಕೇಂದ್ರಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಸ್ಥಳಿಯ ಪ್ರವಾಸಿಗರಿಗಾಗಿ ಯಾತ್ರಿ ನಿವಾಸಗಳನ್ನು ಸ್ಥಾಪಿಸುವುದು ಮುಂತಾದ ಗುರಿಗಳನ್ನು ಹೊಂದಲಾಗಿತ್ತು. ಅದರಂತೆ ಔರಂಗಬಾದ್, ಆಗ್ರಾ, ವಾರಣಾಸಿ, ಜಮ್ಮು ಹಾಗೂ ಕಾಶ್ಮೀರದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲಾಯಿತು.

     3. ಮೂರನೇ ಪಂಚವಾರ್ಷಿಕ ಯೋಜನೆ (1961-1966)

    ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ಸರ್ಕಾರವು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ 510.45 ಲಕ್ಷ ರೂಗಳನ್ನು ಖರ್ಚು ಮಾಡಿತು. ಗಯಾ, ಖಜುರಾಹೋ, ಭುವನೇಶ್ವರ, ಕೊನಾರ್ಕ್‌, ಕಂಚಿ, ಮಧುರೈ, ಸಾಂಚಿ, ತಿರುಚನಾಪಲ್ಲಿ ಹಾಗೂ ಮಹಾಬಲಿಪುರಂಗಳನ್ನು ಅಭಿವೃದ್ಧಿಪಡಿಸಲಾಯಿತು. 1966 ರಿಂದ 1969ರ ವರೆಗೆ 3 ವಾರ್ಷಿಕ ಯೋಜನೆಗಳು ಜಾರಿಯಲ್ಲಿದ್ದವು.

    ಈ ಅವಧಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕ್ರಮವಾಗಿ 28.41 ಲಕ್ಷ (1966), 42.66 ಲಕ್ಷ (1968), 67.06 ಲಕ್ಷ (1969) ರೂಗಳನ್ನು ಖರ್ಚು ಮಾಡಲಾಯಿತು. ಈ ಅವಧಿಯಲ್ಲಿ ಕಾಜೀರಂಗ, ಬಂಡಿಪುರ, ಘಿರ್‌, ಮಧುಮಾಲ, ಪೆರಿಯಾರ್ ಹಾಗೂ ತೊಡಬಾ ವನ್ಯಜೀವಿಧಾಮಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಯಿತು.

    ದೆಹಲಿ, ಆಗ್ರಾ, ಗಂಗಾ ಕಣಿವೆ, ಅಜಂತ ಗುಹೆಗಳು, ತಮಿಳುನಾಡಿನ ದೇವಾಲಯಗಳು, ಹೈದ್ರಾಬಾದ್ ಸ್ಮಾರಕಗಳು, ಒರಿಸ್ಸಾ ದೇವಾಲಯಗಳು, ಹೈದ್ರಾಬಾದ್ ಸ್ಮಾರಕಗಳು, ಓರಿಸ್ಸಾ ದೇವಾಲಯಗಳು, ಮೈಸೂರು, ಮಧ್ಯಪ್ರದೇಶ, ರಾಜಸ್ತಾನ್, ಇಂಡಸ್ ಕಣಿವೆಗಳು, ಗೋವಾ ಹಾಗೂ ಕೇರಳ ಸ್ಮಾರಕಗಳ ವೈವಿಧ್ಯತೆಯನ್ನು ಗುರುತಿಸಲಾಯಿತು.

    4. ನಾಲ್ಕನೇ ಪಂಚವಾರ್ಷಿಕ ಯೋಜನೆ (1969-1974)

    ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯಗಳಿಗೆ ಹಾಗೂ ಬೀಚ್, ರೆಸಾರ್ಟ್, ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಸ ಪ್ರವಾಸ ಉದ್ಯಮಕ್ಕೆ ಒತ್ತು ನೀಡಲಾಯಿತು. ಇದರೊಂದಿಗೆ ನಲಂದಾ, ಅಜಂತಾ, ಎಲ್ಲೋರ ಹಾಗೂ ಸಾಂಚಿಗಳಲ್ಲಿ ವಸತಿ, ಪ್ರವಾಸಿ ಬಂಗಲೆಗಳ ದುರಸ್ತಿ, ತೆರಿಗೆ ರಹಿತ ಅಂಗಡಿಗಳ ಅಭಿವೃದ್ಧಿಗೆ ಆದ್ಯತೆ ಕಲ್ಪಿಸಲಾಯಿತು. ಸುಮಾರು 25 ಕೋಟಿ ರೂಗಳನ್ನು ಖರ್ಚು ಮಾಡಿ ಹೋಟೆಲ್‌ಗಳನ್ನು ನಿರ್ಮಿಸಲಾಯಿತು. ಸಮುದ್ರ ತೀರ ಪ್ರದೇಶಗಳಲ್ಲಿ 17 ಯೂತ್‌ ಹಾಸ್ಟೆಲ್‌ಗಳು, ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ 360 ಲಕ್ಷರೂಪಾಯಿಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ಇದೇ ಸಮಯದಲ್ಲಿ ಕೇರಳದ ಕೋವಲಂ ಬೀಚ್‌ನ್ನು ಅಭಿವೃದ್ಧಿಗೊಳಿಸಲಾಯಿತು.

    5. ಐದನೇ ಪಂಚವಾರ್ಷಿಕ ಯೋಜನೆ (1974-1979)

    ಭಾರತ ಸರ್ಕಾರವು ಪ್ರವಾಸೋದ್ಯಮ ಇಲಾಖೆಗೆ 44 ಕೋಟಿ ಹಾಗೂ ITDC ಗೆ 34 ಕೋಟಿ ಒಟ್ಟು 78 ಕೋಟಿ ರೂಪಾಯಿಗಳನ್ನು ಒದಗಿಸಿತು. ಈ ವೇಳೆಯಲ್ಲಿ ಮಹಾಬಲಿಪುರಂ, ಕೋವಲಂ ಬೀಚ್‌, ರೆಸಾರ್ಟ್ ವಿಂಟರ್ ಸ್ಟೋರ್ಟ್‌ ರೆಸಾರ್ಟ್ (ಶ್ರೀನಗರ) ಗೋವಾ ಬೀಚ್, ಕುಲು-ಮನಾಲಿ ರೆಸಾರ್ಟ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ವಿಶ್ವಸಂಸ್ಥೆಯ ಅಧ್ಯಯನ ತಂಡದ ಶಿಫಾರಸ್ಸಿನಂತೆ ಕೋವಲಂ ಬೀಚ್‌ನಲ್ಲಿ 1700 ಕೊಠಡಿಗಳ ಒಂದು ವಸತಿಗೃಹವನ್ನು ನಿರ್ಮಾಣ ಮಾಡಲಾಯಿತು. ಅದೇ ರೀತಿ ಭಾರತದ ವಿವಿಧ ಪ್ರದೇಶಗಳಲ್ಲಿ ಯೂತ್ ಹಾಸ್ಟೆಲ್‌ಗಳು ಹಾಗೂ ಪ್ರವಾಸಿ ಬಂಗಲೆಗಳನ್ನು ನಿರ್ಮಿಸಲಾಯಿತು. ಇದರೊಂದಿಗೆ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೋನಾರ್ಕ್‌, ಖಜರಾಹೋ, ಆಗ್ರಾ, ಬೋಧಗಯಾ, ಫತೇಪುರ ಸಿಕ್ರಿ, ಹಂಪಿ, ರಾಜಗೃಹ, ಕುಸಿನಗರ, ಸಾರನಾಥ ಹಾಗೂ ಶ್ರಾವಸ್ತಿಗಳನ್ನು ಅಭಿವೃದ್ಧಿಪಡಿಸಲಾಯಿತು.

    6. 6ನೇ ಪಂಚ ವಾರ್ಷಿಕ ಯೋಜನೆ (1980 1985)

    ಆರನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಕೇವಲ 187 ಕೋಟಿ ರೂಗಳ ಅಲ್ಪಮೊತ್ತವನ್ನು ಮೀಸಲಿಡಲಾಯಿತು. ಈ ಅವಧಿಯಲ್ಲಿ ವಿದೇಶಿ ಪ್ರವಾಸಿಗರು ಸುಮಾರು 35 ಲಕ್ಷದಷ್ಟು ಬರಬಹುದು ಎಂದು ಅಂದಾಜಿಸಲಾಗಿತ್ತು. 1980- 85 ಅವಧಿಯಲ್ಲಿ 441 ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು 61 ಪ್ರವಾಸಿ ವೃತ್ತಗಳಾಗಿ ವಿಭಜಿಸಲಾಯಿತು. ಅವುಗಳಲ್ಲಿ 40ನ್ನು ಅಭಿವೃದ್ದಿಪಡಿಸಲಾಯಿತು.  1985ರಲ್ಲಿ ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಲಾಯಿತು. 1982ರಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಲಾಯಿತು. ಈ ಸಂದರ್ಭದಲ್ಲಿ ಟೂರಿಸ್ಟ್ ಲಾಡ್ಜ್‌ ಹಾಗೂ ಯಾತ್ರಿ ನಿವಾಸಗಳನ್ನು ಸ್ಥಾಪಿಸಲಾಯಿತು.

    7. 7ನೇ ಪಂಚವಾರ್ಷಿಕ ಯೋಜನೆ (1985-1990)

    7ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮವು ಒಂದು ಉದ್ದಿಮೆ ಎಂದು ಪರಿಗಣಿಸಲಾಯಿತು. ಅಂದಿನ ಪ್ರಧಾನಿ ರಾಜೀವ್‌ಗಾಂಧಿಯವರು 125 ಕೋಟಿ ರೂಗಳನ್ನು ಪ್ರವಾಸೋದ್ಯಮ ಬೆಳವಣಿಗೆಗೆ ಮೀಸಲಾಗಿರಿಸಿದರು. ಈ ಅವಧಿಯಲ್ಲಿ ದೇಶದ 15 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ಒಂದು ಉದ್ದಿಮೆ ಎಂದು ಸಾರಿದವು.

    8. ಎಂಟನೇ ಪಂಚವಾರ್ಷಿಕ ಯೋಜನೆ (1990-1995)

    ಈ ಯೋಜನೆಯಲ್ಲಿ ಭಾರತ ಸರ್ಕಾರವು ಪ್ರವಾಸೋದ್ಯಮ ಇಲಾಖೆಗೆ 272 ಕೋಟಿ ರೂಗಳನ್ನು ಮೀಸಲಾಗಿರಿಸಿತು. ಇದರಲ್ಲಿ ಬೌದ್ಧಯಾತ್ರ ಸ್ಥಳಗಳ ಅಭಿವೃದ್ಧಿಗಾಗಿ 100 ಕೋಟಿ ರೂಗಳನ್ನು ನೀಡಲಾಯಿತು. 1991ರಲ್ಲಿ ಬೀಚುಗಳ ಪರಿಸರ ರಕ್ಷಣೆಗೆ ZONE  ಮಾಡಲಾಯಿತು. 1992ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಯಿತು. ಇದೇ ಸಂದರ್ಭದಲ್ಲಿ 37 ಸಾವಿರ ಹೋಟೆಲ್ ಕೊಠಡಿಗಳು ನಿರ್ಮಾಣವಾದವು. 1991ರಲ್ಲಿ ಭಾರತಕ್ಕೆ 1.78 ಮಿಲಿಯನ್ ವಿದೇಶಿ ಪ್ರವಾಸಿಗರು ಆಗಮಿಸಿದರೆ 1992ರಲ್ಲಿ ಅದು 2.35 ಮಿಲಿಯನ್‌ಗೆ ಏರಿತು. 1992ರ ಅವಧಿಯಲ್ಲಿ ವಿದೇಶಿ ವಿನಿಮಯಗಳಿಕೆ 4093 ಕೋಟಿ ಆದರೆ 1997 ಅದು 10,117 ಕೋಟಿಗೆ ಏರಿತು. ಗೋವಾದಲ್ಲಿ ಸುಮಾರು 5 ಕೋಟಿ ರೂ ವೆಚ್ಚದ ವಾಟರ್ ಸ್ಪೋರ್ಟ್ಸ್‌ನ್ನು ನಿರ್ಮಿಸಲಾಯಿತು. 1995 ರಿಂದ 96ರ ವೇಳೆಗೆ ಪ್ರವಾಸೋದ್ಯಮವು 8.5 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡಿತು.

    9. 9ನೇ ಪಂಚವಾರ್ಷಿಕ ಯೋಜನೆ (1997-2002)

    ಪ್ರವಾಸೋದ್ಯಮದ ಬೆಳವಣಿಗೆಗಾಗಿ ಈ ಯೋಜನೆಯಲ್ಲಿ ಸುಮಾರು 1000 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಯಿತು. ಈ ಹಣವನ್ನು ವಿಮಾನ, ರೈಲು ಹಾಗೂ ರಸ್ತೆಗಳ ನಿರ್ಮಾಣಕ್ಕಾಗಿ ಖರ್ಚು ಮಾಡಲಾಯಿತು. ಹೋಟೆಲ್ ಸಿಬ್ಬಂದಿ, ಪ್ರವಾಸಿ ನಿರ್ವಾಹಕರು ಹಾಗೂ ಮಾರ್ಗದರ್ಶಿ ತರಬೇತಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಲಾಯಿತು. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರವಾಸಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಖಾಸಗಿ ಕಾಲೇಜುಗಳಿಗೆ ತರಬೇತಿ ಕೋರ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಯಿತು.

    10. 10ನೇ ಪಂಚವಾರ್ಷಿಕ ಯೋಜನೆ (2002-2007)

    ಈ ಯೋಜನೆಯಲ್ಲಿ ಪ್ರವಾಸೋದ್ಯಮಕ್ಕೆ 830 ಕೋಟಿ ರೂಗಳನ್ನು ಖರ್ಚು ಮಾಡಲು ತೀರ್ಮಾನಿಸಲಾಯಿತು. ಈ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆಯ ಮೂಲವಾಗಿ ಪ್ರೋತ್ಸಾಹಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೆಚ್ಚಿನ ತಾಣವಾಗಿ ಬಿಂಬಿಸಲು ಮಾರ್ಕೆಟಿಂಗ್ ತಂತ್ರವನ್ನು ಅಳವಡಿಸಲಾಯಿತು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸಲಾಯಿತು. ಇಂಟರ್ನೆಟ್ ಹಾಗೂ ಹೊಸ ತಂತ್ರಜ್ಞಾನಗಳನ್ನು ಬಳಸಿ ವಿವಿಧ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಯಿತು.

    11. 11ನೇ ಪಂಚವಾರ್ಷಿಕ ಯೋಜನೆ (2007-2012)

    ಈ ಯೋಜನೆಯಲ್ಲಿ ಪ್ರವಾಸಿ ತಾಣಗಳು ಮೂಲಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಗಮನಹರಿಸಿತು. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹಣ ತೊಡಗಿಸಲು ಪ್ರೋತ್ಸಾಹ ನೀಡಲಾಯಿತು. ಪ್ರವಾಸೋದ್ಯಮವನ್ನು ಉದ್ಯೋಗ ಸೃಷ್ಟಿಯ ಮೂಲ ಎಂದು ಪರಿಗಣಿಸಲಾಯಿತು. ಹಂಪಿ, ಬಾದಾಮಿ, ಮೈಸೂರು ಸುತ್ತಮುತ್ತ ಐತಿಹಾಸಿಕ ತಾಣಗಳ ಮೂಲ ಸೌಕರ್ಯವನ್ನು ಹೆಚ್ಚಿಸಲಾಯಿತು. ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಯಿತು.

    12. 12ನೇ ಪಂಚ ವಾರ್ಷಿಕ ಯೋಜನೆ (2012-2017)

    ಈ ಯೋಜನೆಯಲ್ಲಿ ಪ್ರವಾಸೋದ್ಯಮಕ್ಕೆ 16,000 ಕೋಟಿ ಹಣವನ್ನು ಮೀಸಲಿಡಲಾಯಿತು. ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯವನ್ನು ಒದಗಿಸುವುದು ಮತ್ತು ಸುಸ್ಥಿರ ಪ್ರವಾಸ ಉದ್ಯಮವನ್ನು ಉತ್ತೇಜಿಸುವುದು, ಬೌದ್ಧ-ಜೈನ-ಸಿಕ್ ಹಾಗೂ ಸೂಫಿ ಪ್ರವಾಸೋದ್ಯಮದಂತಹ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಗಮನಹರಿಸುವುದು ಗ್ರಾಮೀಣ ಪ್ರವಾಸೋದ್ಯಮವನ್ನು ಬೆಳೆಸುವುದು ಹಾಗೂ ಹೊಸ ಮಾರುಕಟ್ಟೆಗಳನ್ನು ತೆರೆಯುವುದು ಈ ಯೋಜನೆಯ ಮೂಲ ಗುರಿಯಾಗಿತ್ತು.

    13. ನೀತಿ ಆಯೋಗ (2015 ರಿಂದ)

    12ನೇ ಪಂಚವಾರ್ಷಿಕ ಯೋಜನೆಯೇ ಕೊನೆಯದಾಗಿದ್ದು ಅದರ ಬದಲಿಗೆ 2015ರಿಂದ ನೀತಿ ಆಯೋಗ ಜಾರಿಯಲ್ಲಿದೆ.  ಬದಲಾಗಿ ಕೇಂದ್ರ ಸರ್ಕಾರ ದೀರ್ಘಕಾಲಿಕ ಅಭಿವೃದ್ಧಿ ತಂತ್ರಗಳು 3 ವರ್ಷ ಕ್ರಿಯಾಯೋಜನೆ ಹಾಗೂ 7 ವರ್ಷಗಳ ಕಾರ್ಯತಂತ್ರದ ದಾಖಲೆಯನ್ನು ಬಳಸುತ್ತಿದೆ. 2017ರ ನಂತರ 5 ವರ್ಷಗಳ ಯೋಜನೆಯ ಬದಲಿಗೆ 15 ವರ್ಷಗಳ ದೃಷ್ಟಿಕೋನ ದಾಖಲೆ ಹಾಗೂ ನೀತಿ ಆಯೋಗದ ಮೂಲಕ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದರಲ್ಲಿ ಭಾರತದ ಪ್ರವಾಸೋದ್ಯಮದ ಬೆಳವಣಿಗೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ಸ್ಮಾರಕಗಳ ರಕ್ಷಣೆಯ ಹೊಣೆಯನ್ನು ಹೊಂದಲಾಗಿದೆ.

    ಭಾರತದಲ್ಲಿ ಪ್ರವಾಸೋದ್ಯಮ ಯೋಜನೆ ಮತ್ತು ನೀತಿ

    ಭಾರತದಲ್ಲಿ ಪ್ರವಾಸೋದ್ಯಮ ಯೋಜನೆ ಮತ್ತು ನೀತಿ

    ಪೀಠಿಕೆ:

    ಪ್ರವಾಸೋದ್ಯಮ ಅಭಿವೃದ್ಧಿಗೆ ಮಾರ್ಗದರ್ಶಿ ಸೂತ್ರಗಳನ್ನು ಒದಗಿಸಲು ಭಾರತ ಸರ್ಕಾರವು 1945ರಲ್ಲಿ ಸರ್‌.ಜಾನ್ ಸಾರ್ಜೆಂಟ್ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ನೇಮಿಸಿತು. ಸಾರ್ಜೆಂಟ್ ಸಮಿತಿ ಸಲ್ಲಿಸಿದ ವರದಿಯ ಆಧಾರದ ಮೇಲೆ 1958 ರಲ್ಲಿ ಸಾರಿಗೆ ಸಚಿವಾಲಯವು ಪ್ರತ್ಯೇಕ ಪ್ರವಾಸ ಉದ್ಯಮ ಇಲಾಖೆಯನ್ನು ರಚಿಸಿತು. ಈ ಪ್ರವಾಸೋದ್ಯಮ ಇಲಾಖೆಯು ಕಾಲಕಾಲಕ್ಕೆ ಪ್ರವಾಸೋದ್ಯಮದ ಬೆಳವಣಿಗೆಯ ಕುರಿತು ಅನೇಕ ಕಾನೂನುಗಳು, ನೀತಿ ನಿಯಮಗಳು ಹಾಗೂ ಸಲಹೆ ಸೂಚನೆಗಳನ್ನು ಪಾಸು ಮಾಡಿತು. ಪರಿಣಾಮವಾಗಿ ಪ್ರವಾಸೋದ್ಯಮ ಇಲಾಖೆಯು ದೆಹಲಿ, ಕಲ್ಕತ್ತಾ, ಮುಂಬೈ ಹಾಗೂ ಮದ್ರಾಸ್‌ಗಳಲ್ಲಿ ತನ್ನ ಪ್ರಾದೇಶಿಕ ಕಚೇರಿಗಳನ್ನು ಸ್ಥಾಪಿಸಿತು. ಈ ಕೇಂದ್ರಗಳಲ್ಲಿ ಪ್ರವಾಸೋದ್ಯಮದ ಕುರಿತು ಪ್ರಚಾರ ಕೈಗೊಳ್ಳಲಾಯಿತು. ಮುಂದೆ 1963ರಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಎಲ್‌.ಕೆ.ಜಾ ಸಮಿತಿ ನೇಮಕವಾಯಿತು. ಈ ಸಮಿತಿ ಸಲ್ಲಿಸಿದ ವರದಿಯನ್ನು ಇಟ್ಟುಕೊಂಡು 1966ರಲ್ಲಿ ಭಾರತದ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ITDC) ಯನ್ನು   ಸ್ಥಾಪಿಸಲಾಯಿತು. ITDC ಯು ಭಾರತೀಯ ರೈಲ್ವೆ ಇಲಾಖೆಯ ಸಹಭಾಗಿತ್ವದೊಂದಿಗೆ ಋತುಮಾನದ ಪ್ರವಾಸಗಳು, ಪ್ಯಾಕೇಜ್ ಪ್ರವಾಸ, ಕ್ರೀಡೆ ಹಾಗೂ ಜಾತ್ರಾ ವಿಶೇಷ ಪ್ರವಾಸವನ್ನು ಹಮ್ಮಿಕೊಂಡಿತು. ಈ ನಿಟ್ಟಿನಲ್ಲಿ ಅಶೋಕ ಗ್ರೂಪ್‌ ಆಫ್‌ ಹೋಟೆಲ್‌ನ ಪ್ರಯತ್ನ ಶ್ಲಾಘನೀವಾದುದು. ಅದು ಪ್ರವಾಸಿಗರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತ ಪ್ರವಾಸಿಗರನ್ನು ತನ್ನ ಕಡೆಗೆ ಆಕರ್ಷಿಸುತ್ತದೆ. ಈ ಹಿಂದೆ ಇದ್ದ ಪ್ರವಾಸೋದ್ಯಮ ಇಲಾಖೆಯ ಸಾರಿಗೆ ಸಚಿವಾಲಯದ ಸಹಭಾಗಿತ್ವವನ್ನು ರದ್ದುಗೊಳಿಸಿ 1967ರಲ್ಲಿ ಪ್ರತ್ಯೇಕವಾದ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವನ್ನು ಸೃಷ್ಟಿಸಲಾಯಿತು. ಭಾರತದ ಪ್ರವಾಸೋದ್ಯಮವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ. ಅವುಗಳೆಂದರೆ 1982ರ ಪ್ರವಾಸೋದ್ಯಮ ನೀತಿ ಹಾಗೂ ರಾಷ್ಟ್ರೀಯ ಪ್ರವಾಸ ಉದ್ಯಮ ಸಮಿತಿ-1986.

    1. 1982ರ ಪ್ರವಾಸೋದ್ಯಮ ನೀತಿ (Tourism Policy of 1982)

    1982 ರಲ್ಲಿ ಭಾರತೀಯ ಪ್ರವಾಸೋದ್ಯಮ ನೀತಿಯು ದೇಶದ ಶ್ರೀಮಂತ ಪರಂಪರೆ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ, ಉತ್ತೇಜಿಸುವ ಹಾಗೂ ಪ್ರದರ್ಶಿಸುವ ಗುರಿಯನ್ನು ಹೊಂದಿದ್ದ ಪ್ರಥಮ ಸಮಗ್ರ ನೀತಿಯಾಗಿದೆ. ಈ ನೀತಿಯು ಸಾಮಾಜಿಕ- ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಪ್ರವಾಸಿಗರಿಗೆ ಮೂಲ ಸೌಕರ್ಯ, ಸುರಕ್ಷತೆ ಹಾಗೂ ಸಹಕಾರದ ಮೇಲೆ ಕೇಂದ್ರಿಕರಿಸಿತು. ಈ ನೀತಿಯನ್ನು ಪ್ರಥಮ ಬಾರಿಗೆ ದೇಶದಲ್ಲಿ ಪರಿಚಯಿಸಿದವರು ಅಂದಿನ ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು. ಈ ನೀತಿಯ ಪ್ರಮುಖ ಅಂಶಗಳು ಹೀಗಿವೆ.

    1. ಪ್ರವಾಸೋದ್ಯಮದ ಮುಖಾಂತರ ಭಾರತದ ಐತಿಹಾಸಿಕ ಸ್ಥಳಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವುದು ಮತ್ತು ಅವುಗಳು ಹಾಳಾಗದಂತೆ ಉಳಿಸಿಕೊಂಡು ಬರುವುದು.
    2. ಪ್ರವಾಸೋದ್ಯಮವು ಒಂದು ಉದ್ಯಮವಾಗಿದ್ದು ಅದನ್ನು ಆರ್ಥಿಕ ಅಭಿವೃದ್ಧಿ, ಆದಾಯ, ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಯ ಸಾಧನವನ್ನಾಗಿ ಬಳಸಿಕೊಳ್ಳುವುದು.
    3. ಪ್ರವಾಸಿ ತಾಣಗಳಿಗೆ ಬಂದ ಪ್ರವಾಸಿಗರಿಗೆ ಉತ್ತಮ ಸ್ವಾಗತ, ಪ್ರವಾಸೋದ್ಯಮದ ಕುರಿತು ಮಾಹಿತಿ, ತಾವು ಪ್ರವಾಸಿಗರಿಗೆ ನೀಡುವ ಸುರಕ್ಷತೆ ಹಾಗೂ ಪ್ರವಾಸೋದ್ಯಮ ನೀಡುವ ಮೂಲ ಸೌಕರ್ಯಗಳ ಕುರಿತು ಮಾಹಿತಿ ನೀಡುವುದು.
    4. ಸುರಕ್ಷತೆ ಹಾಗೂ ಅಭಿವೃದ್ಧಿಯ ನಡುವೆ ಸಮತೋಲನವನ್ನು ಸಾಧಿಸುವುದು.
    5. ಪ್ರವಾಸೋದ್ಯಮದ ಮೂಲಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ತಿಳುವಳಿಕೆಯನ್ನು ನೀಡುವುದು.
    6. ಉದ್ಯೋಗದ ಜೊತೆಗೆ ಪರಿಸರ ರಕ್ಷಣೆ ಮಾಡುವುದು.
    7. ಧಾರ್ಮಿಕ ಪ್ರವಾಸವನ್ನು ಏರ್ಪಡಿಸುವ ಮೂಲಕ ಗ್ರಾಮೀಣ ಜನರಲ್ಲಿ ಐಕ್ಯತೆಯನ್ನು ತರುವುದು.

    2. ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 1986 (National Tourism Committee)

    ಭಾರತದಲ್ಲಿ ಪ್ರವಾಸೋದ್ಯಮ ನೀತಿ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಯು 1986ರ ದಶಕದಲ್ಲಿ ಮಹತ್ವದ ಬದಲಾವಣೆಯನ್ನು ಕಂಡಿತು. ಈ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಕೈಗಾರಿಕೆಯಾಗಿ ಗುರುತಿಸಿತು. ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗು ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಸಲುವಾಗಿ ಪ್ರವಾಸೋದ್ಯಮವನ್ನು ಬಂಡವಾಳ ಹೂಡಿಕೆಗೆ ಅಗ್ರ ವಲಯವಾಗಿ ಘೋಷಿಸುವಂತೆ ಸೂಚಿಸಲಾಯಿತು. ಹೀಗಾಗಿ ಅಂದಿನ ಭಾರತದ ಪ್ರಧಾನಿ ರಾಜೀವಗಾಂಧಿ ಸರ್ಕಾರ ಹಾಗೂ 15 ರಾಜ್ಯ ಸರ್ಕಾರಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಘೋಷಿಸಿದವು. ಇದಕ್ಕಾಗಿ 1989ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಣಕಾಸು ನಿಗಮವನ್ನು ಸ್ಥಾಪಿಸಲಾಯಿತು. ಸ್ವತಃ ಪ್ರವಾಸೋದ್ಯಮ ಸಚಿವರಾಗಿದ್ದ ರಾಜೀವಗಾಂಧಿ ಅವರು “ಟ್ರೇಡ್ ಫೇರ್ ಅಥಾರಿಟಿ ಆಫ್ ಇಂಡಿಯಾ” ಅಧ್ಯಕ್ಷರಾಗಿದ್ದ ಮೊಹಮ್ಮದ್ ಯೂನಿಸ್‌ರವರ ನೇತೃತ್ವದಲ್ಲಿ ನ್ಯಾಷನಲ್ ಟೂರಿಸಂ ಕೌನ್ಸಿಲ್‌ನ್ನು ನೇಮಿಸಿದರು. ಇವರು 1987 ನವೆಂಬರ್‌ನಲ್ಲಿ ತಮ್ಮ ವರದಿಯನ್ನು ಸಲ್ಲಿಸಿದರು. ಅದರ ಮುಖ್ಯಾಂಶಗಳು ಹೀಗಿವೆ.

    1. ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಆ ಮೂಲಕ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದು ಮತ್ತು ಉದ್ಯೋಗವನ್ನು ಸೃಷ್ಟಿಸುವುದು.
    2. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಸೂಕ್ತ ಭದ್ರತೆ ನೀಡುವುದು ಮತ್ತು ಪ್ರವಾಸಿ ಸ್ಥಳಗಳ ಬಗ್ಗೆ ಅವರಿಗೆ ಮಾಹಿತಿ ಒದಗಿಸುವುದು.
    3. ಪ್ರವಾಸೋದ್ಯಮವನ್ನು ವಿದೇಶಿ ವಿನಿಮಯ ಗಳಿಕೆಯ ಸಾಧನವಾಗಿ ಬಳಸಿಕೊಳ್ಳುವುದು.
    4. ಕ್ರಿ.ಶ 2000ದ ವೇಳೆಗೆ ಪ್ರವಾಸೋದ್ಯಮವು 5000 ಕೋಟಿ ಆದಾಯ ಗಳಿಕೆಯ ಉದ್ಯಮವನ್ನಾಗಿ ರೂಪಿಸುವುದು.
    5. ವಿದೇಶಗಳಿಂದ ಭಾರತಕ್ಕೆ ಬರುವ ಪ್ರವಾಸಿಗರಿಗೆ ಹೋಟೆಲ್‌ಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಮೂಲಕ ಉತ್ತಮ ಗುಣಮಟ್ಟದ ವಸತಿ ಹಾಗೂ ಆಹಾರ ಪೂರೈಕೆ ಮಾಡುವುದು.
    6. ಭಾರತೀಯ ವಸ್ತುಗಳನ್ನು ವಿದೇಶಿಯರು ಖರೀದಿ ಮಾಡುವ ಹಾಗೆ ಪ್ರಚಾರ ಮಾಡುವುದು.
    7. ವಿದೇಶಿ ಪ್ರವಾಸಿಗರ ಸಂಚಾರ ಸೌಲಭ್ಯಗಳನ್ನು ದ್ವಿಗುಣಗೊಳಿಸುವುದು.
    8. ಇಂಡಿಯನ್‌ ಏರ್‌ಲೈನ್ಸ್‌ನ್ನು ಖಾಸಗೀಕರಣಗೊಳಿಸಿ ಹೊಸ ವಿಮಾನಯಾನ ಕಂಪನಿಗಳನ್ನು ಆರಂಭಿಸುವುದು.
    9. ರಾಷ್ಟ್ರೀಯ ಪ್ರವಾಸೋದ್ಯಮ ಮಂಡಲಿಯ ಕಾರ್ಯಕ್ಷೇತ್ರದ ವಿಸ್ತರಣೆ.
    10. ಪ್ರವಾಸೋದ್ಯಮಕ್ಕೆ ನೇಮಕ ಮಾಡುವ ನೌಕರರಿಗೆ ತರಬೇತಿ ನೀಡಲು ತರಬೇತಿ ಸಂಸ್ಥೆಗಳನ್ನು ಆರಂಭಿಸುವುದು.

    1985ರ ವೇಳೆಗೆ ಭಾರತ ಸರ್ಕಾರವು ಪ್ರವಾಸೋದ್ಯಮವನ್ನು ಒಂದು ಉದ್ದಿಮೆ ಎಂದು ಪರಿಗಣಿಸಿತು. ಆಗ ಪ್ರವಾಸೋದ್ಯಮದಲ್ಲಿ ಬಂಡವಾಳವನ್ನು ತೊಡಗಿಸುವವರಿಗೆ ತೆರಿಗೆ ವಿನಾಯಿತಿ ಸಹಾಯಧನ ಸೌಲಭ್ಯಗಳನ್ನು ನೀಡಲಾಯಿತು. 1991ರಲ್ಲಿ ಪ್ರವಾಸೋದ್ಯವನ್ನು ವಿದೇಶಿ ಬಂಡವಾಳ ಹೂಡಿಕೆಯ ಅಗ್ರವಲಯ ಎಂದು ಘೋಷಣೆ ಮಾಡಲಾಯಿತು.

    3. CRZ: ಕರಾವಳಿ ನಿಯಂತ್ರಣ ವಲಯ:

     ಕರಾವಳಿ ತೀರಗಳು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಹೆಸರಾಗಿವೆ. ಇಲ್ಲಿ ಸಮುದ್ರ ಕ್ರೀಡೆಗಳಾದ ಸರ್ಪಿಂಗ್‌, ಸೇಲಿಂಗ್, ವಿಂಡ್ ಸರ್ಫಿಂಗ್ ಹಾಗೂ ಈಜುವುದು ಮೊದಲಾದ ಕ್ರೀಡೆಗಳು ನಡೆಯುತ್ತಿವೆ. 1986ರಲ್ಲಿ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯನ್ನು ಹೊರಡಿಸಲಾಯಿತು. CRZ  ನಿಯಮಗಳು ಭಾರತದ ಸೂಕ್ಷ್ಮ ಕರಾವಳಿ ಪರಿಸರ ವ್ಯವಸ್ಥೆಯನ್ನು ರಕ್ಷಿಸುವುದರೊಂದಿಗೆ ಅಭಿವೃದ್ಧಿ ಅಗತ್ಯಗಳನ್ನು ಸಮತೋಲನಗೊಳಿಸುವ ಗುರಿಯನ್ನು ಹೊಂದಿದೆ. 1986ರ ಕಾಯಿದೆ ಪ್ರಕಾರ ಕರಾವಳಿ ತೀರವನ್ನು ಈ ಕೆಳಗಿನಂತೆ ವರ್ಗೀಕರಿಸಲಾಗಿದೆ.

    1. CRZ-1 ಇವು ಕರಾವಳಿ ಪರಿಸರ ವ್ಯವಸ್ಥೆಯ ಸಂರಕ್ಷಣೆಗೆ ನಿರ್ಣಾಯಕವಾದ ಪರಿಸರ ಸೂಕ್ಷ್ಮ ಸ್ಥಳಗಳಾಗಿವೆ.
    2. CRZ-2ಕರಾವಳಿಯಿಂದ ಕರಾವಳಿಯವರೆಗೆ ಈಗಾಗಲೇ ಅಭಿವೃದ್ಧಿ ಹೊಂದಿದ ಎಲ್ಲಾ ಸ್ಥಳಗಳನ್ನು ಒಳಗೊಂಡಿದೆ.
    3. CRZ-3ಈ ವಲಯವುಗ್ರಾಮೀಣ ಹಾಗೂ ನಗರ ಪ್ರದೇಶಗಳನ್ನು ಒಳಗೊಂಡಿದೆ.
    4. CRZ-4 ಈ ಪ್ರದೇಶಗಳು ಲಕ್ಷ ದ್ವೀಪ ಅಂಡಮಾನ್, ನಿಕೋಬಾರ್ ದ್ವೀಪಗಳು ಹಾಗೂ ಕೆಲವು ಚಿಕ್ಕ ದ್ವೀಪಗಳನ್ನು ಒಳಗೊಂಡಿದೆ.

    CRZ ನ ನಿಯಮಗಳು:

    1. ಕರಾವಳಿಯ ಸಮೀಪ ಮಾನವ ಚಟುವಟಿಕೆ ಜೊತೆಗೆ ಕೈಗಾರಿಕಾ ಚಟುವಟಿಕೆಯನ್ನು ನಿಯಂತ್ರಿಸುವುದು.
    2. ಕರಾವಳಿಯಿಂದ ನಿರ್ದಿಷ್ಟ ಅಂತರದಲ್ಲಿ ಕೆಲವು ಕಾರ್ಯಾಚರಣೆಗಳನ್ನು ಮಿತಿಗೊಳಿಸುವುದು. ಉದಾಹರಣೆಗೆ ಹೊಸ ವ್ಯವಹಾರ ಸ್ಥಾಪನೆ, ಅಪಾಯಕಾರಿ ವಸ್ತುಗಳ ಸಂಗ್ರಹಣೆ, ಗಣಿಗಾರಿಕೆ ಹಾಗೂ ಬದು ನಿರ್ಮಾಣ.
    3. CRZನ2011ರ ತಿದ್ದುಪಡಿಯಂತೆ ನವೀ ಮುಂಬೈ ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪರಮಾಣು ಇಂಧನ ಇಲಾಖೆಯ ಯೋಜನೆಗಳ ಅಭಿವೃದ್ಧಿಗಾಗಿ ಹೊರಗಿಡಲಾಗಿದೆ.
    4. ಇತ್ತೀಚಿನ 2018-19ರ CRZಅಧಿನಿಯಮದ ಪ್ರಕಾರ ಕೆಲವು ಅಭಿವೃದ್ಧಿ ನೀತಿಗಳನ್ನು ತೆಗೆದುಹಾಕಲಾಗಿದೆ.
    5. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಮುದ್ರ ಹಿನ್ನೀರಿನ 400 ಮೀಟರ್ ಪ್ರದೇಶವನ್ನು ರಕ್ಷಿತ ವಲಯ ಎಂದು ಘೋಷಿಸಿ ಅಲ್ಲಿ ಯಾವುದೇ ಕಟ್ಟಡಗಳನ್ನು ನಿರ್ಮಿಸದಂತೆ ನಿರ್ಬಂಧ ಏರುವುದು.

    4. ರಾಷ್ಟ್ರೀಯ ಕಾರ್ಯಯೋಜನೆ 1992 (National Action Plan) 

    1992ರಲ್ಲಿ ಆಗಿನ ಪ್ರವಾಸೋದ್ಯಮ ಸಚಿವರಾದ ಮಾಧವರಾವ್ ಸಿಂಧಿಯಾರವರು ರಾಷ್ಟ್ರೀಯ ಕ್ರಿಯಾಯೋಜನೆಯನ್ನು ರಚಿಸಿದರು. ಇದರ ಮೂಲ ಗುರಿ ಭಾರತದಲ್ಲಿ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿತ್ತು. ಇದು ವಿಶೇಷ ಪ್ರವಾಸೋದ್ಯಮ ವಲಯಗಳನ್ನು ಗುರುತಿಸುವುದು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ಮೂಲಕ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದೇ ಆಗಿದೆ. ಇದರ ಇತರೆ ಉದ್ದೇಶಗಳು ಹೀಗಿವೆ.

    1. ಪ್ರವಾಸೋದ್ಯಮದ ಮೂಲಕ ದೇಶದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
    2. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ವಿದೇಶಿ ವಿನಿಮಯವನ್ನು ಹೆಚ್ಚಿಸುವುದು.
    3. ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ನಿರ್ದಿಷ್ಟ ಸ್ಥಳಗಳನ್ನು ಗುರುತಿಸುವುದು.
    4. ಖಾಸಗಿ ಹೂಡಿಕೆಯನ್ನು ಉತ್ತೇಜಿಸುವ ಮೂಲಕ ಪ್ರವಾಸಿ ಸೌಲಭ್ಯಗಳನ್ನು ಹೆಚ್ಚಿಸುವುದು.
    5. ಸ್ಥಳೀಯ ಹಾಗೂ ವಿದೇಶಿ ಪ್ರವಾಸಿಗರಿಗೆ ಕೈಗೆಟುಕುವ ದರಗಳಲ್ಲಿ ವಸತಿ ಸೌಕರ್ಯಗಳನ್ನು ಕಲ್ಪಿಸುವುದು.
    6. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮತ್ತು ನವೀಕರಣ.
    7. ಟ್ರೇನಿಂಗ್ ಟ್ರಕ್ಕಿಂಗ್ ಹಾಗೂ ಬೀಚ್ ರೆಸಾರ್ಟ್‌ಗಳಂತಹ ವಿಶೇಷ ಪ್ರವಾಸೋದ್ಯಮ ಪ್ರಕಾರಗಳನ್ನು ಅಭಿವೃದ್ಧಿಪಡಿಸುವುದು.
    8. ಹೋಟೆಲ್ ವಸತಿಯನ್ನು ಮುಂದಿನ 3 ವರ್ಷಗಳಲ್ಲಿ 44,000 ಕೊಠಡಿಗಳಿಂದ 1,20,000 ಕೊಠಡಿಗಳಿಗೆ ಹೆಚ್ಚಿಸುವುದು.

    5. 1998ರ ನೂತನ ನೀತಿ (New Tourism Planning Policy of 1998)

    ಭಾರತ ಸರ್ಕಾರವು 1998ರಲ್ಲಿ ನೂತನ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಿತು. ಅದರ ಪ್ರಕಾರ ರಾಷ್ಟ್ರೀಯತೆ, ಸಮಗ್ರತೆ ಹಾಗೂ ಐಕ್ಯತೆಯನ್ನು ಕಾಪಾಡುವುದು ಮತ್ತು ಯುವಕರಿಗೆ ಉದ್ಯೋಗಾವಕಾಶವನ್ನು ನೀಡುವ ಉದ್ದಿಮೆಯಾಗಿ ಪ್ರವಾಸೋದ್ಯಮವನ್ನು ರೂಪಿಸುವುದು ಈ ನೀತಿಯ ಉದ್ದೇಶವಾಗಿದೆ. ಇದರೊಂದಿಗೆ ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಪರಿಸರ ಸಂರಕ್ಷಣೆಯ ಸಾಧನವಾಗಿ ಪ್ರವಾಸೋದ್ಯಮವನ್ನು ಗುರುತಿಸಲಾಯಿತು.

    1999 ಮತ್ತು 2000ರ ನೂತನ ಸಹಸ್ರಮಾನದ ನೆನಪಿಗಾಗಿ ಭಾರತದ ಪ್ರವಾಸೋದ್ಯಮವನ್ನು “ಎಕ್ಸ್‌ಪ್ಲೋರ್‌ ಇಂಡಿಯಾ” ಎಂಬ ವರ್ಷಾಚರಣೆಯನ್ನಾಗಿ ಘೋಷಿಸಿ ಹಲವಾರು ಪ್ರವಾಸಿ ಚಟುವಟಿಕೆಗಳನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಹಬ್ಬಗಳು, ಜಾತ್ರೆ, ಸಂಗೀತ, ನೃತ್ಯ, ಕರಕುಶಲತೆ, ವಾಣಿಜ್ಯ ಉತ್ಸವ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಪ್ರವಾಸಿಗರನ್ನು ಆಕರ್ಷಿಸಲಾಯಿತು.

    ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನ ಕಾರ್ಯವಿಧಾನ

    ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನ ಕಾರ್ಯವಿಧಾನ

    ಪೀಠಿಕೆ

    ಪ್ರವಾಸೋದ್ಯಮ ಬೆಳವಣಿಗೆ ಯೋಜನಾಕಾರ್ಯ ವಿಧಾನವು ಅರ್ಥಪೂರ್ಣವಾದ ಸಂಬಂಧವನ್ನು ಸಾಧಿಸಿದಾಗ ನಿರ್ದಿಷ್ಟ ಅಥವಾ ಉನ್ನತವಾದ ಸಾಧನೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಒಂದು ದೇಶ ಅಥವಾ ಪ್ರದೇಶವು ಪ್ರವಾಸಿಗರನ್ನು ಆಕರ್ಷಿಸಬೇಕಾದರೆ ಆ ಪ್ರದೇಶದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವ ಎಲ್ಲ ಸೌಲಭ್ಯಗಳು ದೊರಕುವಂತಿರಬೇಕು. ಅಲ್ಲಿರುವ ಪ್ರವಾಸೋದ್ಯಮದ ನೌಕರರು ಪ್ರವಾಸಿಗರಿಗೆ ಆತಿಥ್ಯವನ್ನು ನೀಡುವಲ್ಲಿ ಹಿಂದೆ ಬೀಳಬಾರದು. ಆಗ ಮಾತ್ರ ಪ್ರವಾಸಿಗರು ಆ ಪ್ರದೇಶವನ್ನು ಇಷ್ಟಪಡುತ್ತಾರೆ. ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆಯು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಅವುಗಳೆಂದರೆ

    1. ಪ್ರವಾಸೋದ್ಯಮ ಬೇಡಿಕೆ ಮತ್ತು ಪೂರೈಕೆಗಳನ್ನು ಅಳೆಯುವುದು:

    ಆರಂಭದಲ್ಲಿ ಒಂದು ದೇಶದ ಪ್ರಾದೇಶಿಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಇರುವ ಪ್ರವಾಸಿ ತಾಣಗಳ ಕುರಿತು ಕಲೆಹಾಕಬೇಕು. ಪ್ರವಾಸಿ ತಾಣಗಳನ್ನು ಗುರುತಿಸುವಿಕೆ. ಅಂದರೆ ಪ್ರವಾಸೋದ್ಯಮದ ಬೇಡಿಕೆ ಹಾಗೂ ಪೂರೈಕೆಗಳನ್ನು ಅಂದಾಜು ಮಾಡುವುದು ಎಂದರ್ಥ. ಪ್ರವಾಸೋದ್ಯಮ ಯೋಜನೆಯಲ್ಲಿ ಅಲ್ಲಿನ ವಸ್ತು ಸ್ಥಿತಿಯನ್ನು ಮೊದಲು ಅರಿತುಕೊಳ್ಳಬೇಕು. ಹಾಗೆ ನಿರ್ದಿಷ್ಟ ಪ್ರಗತಿಯನ್ನು ಸಾಧಿಸಲು ಮಾಹಿತಿ ಪಡೆದುಕೊಳ್ಳಬೇಕು. ಇದು ಪ್ರವಾಸೋದ್ಯಮದ ಪ್ರಥಮ ಪ್ರಯತ್ನವೂ ಹೌದು. ಪ್ರವಾಸಿ ಆಕರ್ಷಣೆಗಳು ಅನುಕೂಲತೆಗಳು ಹಾಗೂ ಸೇವೆಗಳು ಪ್ರವಾಸೋದ್ಯಮದ ಪೂರೈಕೆ ಅಂಶಗಳಾದರೆ ಪ್ರವಾಸಿಗಳು ಬೇಡಿಕೆಯ ಅಂಶಗಳಾಗಿವೆ. ಬೇಡಿಕೆ ಮತ್ತು ಪೂರೈಕೆ ಅಂದಾಜು ಮಾಡುವಿಕೆಯ ಮೂಲಕ ಭವಿಷ್ಯದ ಯೋಜನೆಯನ್ನು ರೂಪಿಸಲು ಸಾಧ್ಯವಾಗುತ್ತದೆ. ಪೂರೈಕೆ ಅಂಶಗಳು ಸದಾಕಾಲ ದೊರೆಯುವಂತಾದರೆ ಅಂತಹ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಆಕರ್ಷಿತರಾಗುತ್ತಾರೆ. ಮೈಕಲ್ ಪೀಟರ್ಸ್‌ರವರು ಪ್ರವಾಸಿ ಆಕರ್ಷಣೆಗಳನ್ನು ಅಂದಾಜು ಮಾಡುವಾಗ ಅನುಸರಿಸಬೇಕಾದ ನಿಯಮಗಳನ್ನು ತನ್ನ ಗ್ರಂಥ ಒಂದರಲ್ಲಿ ತಿಳಿಸಿದ್ದಾರೆ. ಅವು ಹೀಗಿವೆ.

    1. ಒಂದು ಪ್ರದೇಶದ ಪ್ರವಾಸಿ ಸ್ಥಳಗಳನ್ನು ನಿರಂತರವಾಗಿ ಅಭಿವೃದ್ಧಿಗೊಳಿಸಬೇಕು. ಇದರಿಂದ ಪ್ರವಾಸೋದ್ಯಮವು ದೇಶದಾದ್ಯಂತ ವ್ಯಾಪಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ಆರ್ಥಿಕ ಲಾಭವು ಸಿಗುತ್ತದೆ.
    2. ಪ್ರವಾಸಿ ತಾಣಗಳು ವರ್ಷವಿಡೀ ಪ್ರವಾಸಿಗರಿಗೆ ದೊರಕುವಂತಿರಬೇಕು ಈ ಸೂತ್ರವನ್ನು ಅನುಸರಿಸಿದರೆ ನಿರ್ದಿಷ್ಟ ಋತುಮಾನವನ್ನು ಪ್ರವಾಸಕ್ಕಾಗಿ ಮೀಸಲಿಡುವುದು ತಪ್ಪುತ್ತದೆ. ಇದರಿಂದ ಪ್ರವಾಸೋದ್ಯಮವು ಸರ್ವಋತುಗಳಲ್ಲಿ ಬೆಳವಣಿಗೆ ಆದರೆ ಪ್ರವಾಸಿಗರಿಗೆ ಅನುಕೂಲವಾಗುತ್ತದೆ.
    3. ಸುಲಭವಾಗಿ ಮತ್ತು ತೀವ್ರವಾಗಿ ಅಭಿವೃದ್ಧಿಯನ್ನು ಸಾಧಿಸುವ ಪ್ರವಾಸಿ ತಾಣಗಳಿಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ಪ್ರಸ್ತುತ ಲಭ್ಯವಿರುವ ಮೂಲಸೌಕರ್ಯಗಳನ್ನು ಉಪಯೋಗಿಸಿಕೊಂಡು ಕಡಿಮೆ ವೆಚ್ಚದಲ್ಲಿ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು.
    4. ದೇಶದ ಎಲ್ಲಾ ಪ್ರವಾಸಿ ತಾಣಗಳನ್ನು ಏಕಕಾಲದಲ್ಲಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರದೇಶಗಳನ್ನು ಮಾತ್ರ ಅಭಿವೃದ್ಧಿಗೊಳಿಸಬೇಕು.
    5. ಸಾಮಾನ್ಯವಾಗಿ ಪ್ರವಾಸಿಗರು ಹೊಸ ಹೊಸ ಅನುಭವಗಳನ್ನು ಪಡೆಯಲು ಪ್ರವಾಸಿ ತಾಣಗಳಿಗೆ ಬರುತ್ತಾರೆ. ಯಾವ ಪ್ರವಾಸಿ ತಾಣಗಳ ಕುರಿತು ಅವರು ಅನುಭವ ಪಡೆಯಲು ಹಾತೊರೆಯುತ್ತಾರೋ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಂತಹ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಗಮನ ಹರಿಸಬೇಕು.

    2. ಉದ್ದೇಶ ನಿರೂಪಿಸುವಿಕೆ ( Framing Objectives)

    ಪ್ರವಾಸಿ ತಾಣದ ಬಗ್ಗೆ ಸಂಗ್ರಹಿಸಿದ ಪ್ರಥಮ ಮಾಹಿತಿಯಿಂದ ಅದರ ಬಗ್ಗೆ ಸಂಯುಕ್ತ ಚಿತ್ರಣವನ್ನು ರೂಪಿಸಬಹುದು. ಇದಾದ ನಂತರ ಪ್ರವಾಸದ ಉದ್ದೇಶವನ್ನು ನಿರೂಪಿಸಬೇಕು ಎಂಬುದನ್ನು ನಿರ್ಧರಿಸಬೇಕು. ಈ ಉದ್ದೇಶ ನಿರೂಪಣೆಯಲ್ಲಿ ಆಡಳಿತಾತ್ಮಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಅಂಶಗಳು ಸೇರಿವೆ. ಆಡಳಿತಾತ್ಮಕ ವಿಷಯಗಳು ರಾಜಕೀಯ ಸಂಬಂಧಗಳ ಸ್ಥಾಪನೆ ಸೇರಿದ್ದರೆ, ಆದಾಯ, ಉದ್ಯೋಗ, ನಿರ್ಮಾಣ, ವಿದೇಶಿ ವಿನಿಮಯ ಗಳಿಕೆ ಮುಂತಾದವುಗಳು ಆರ್ಥಿಕ ಅಂಶದಲ್ಲಿ ಬರುತ್ತದೆ. ಹಾಗೆಯೇ ಮನರಂಜನೆ, ಅಂತರಾಷ್ಟ್ರೀಯ ಒಡಂಬಡಿಕೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ, ಜನಾಂಗ ಸಮಸ್ಯೆ, ಶಿಕ್ಷಣ, ಸಂಶೋಧನೆ, ಸಾಂಸ್ಕೃತಿಕ ಉದ್ದೇಶಗಳು ಸಾಂಸ್ಕೃತಿಕ ಅಂಶಗಳಲ್ಲಿ ಸೇರಿವೆ.

     ಪ್ರವಾಸೋದ್ಯಮದ ಉದ್ದೇಶಗಳಿಂದ ಅದರ ಅಭಿವೃದ್ಧಿಯ ದೃಷ್ಟಿಯಿಂದ ಹೊಸ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಇದನ್ನೇ ಪರಿಕಲ್ಪನಾತ್ಮಕ ಯೋಜನೆ ಎಂದು ಕರೆಯಬಹುದು. ಪ್ರವಾಸೋದ್ಯಮದ ಬೆಳವಣಿಗೆಗಾಗಿ ನೂತನ ಮಾರುಕಟ್ಟೆ ವ್ಯವಸ್ಥೆಯನ್ನು ಸ್ಥಾಪಿಸಬೇಕು. ಈ ಮಾರುಕಟ್ಟೆ ವ್ಯವಸ್ಥೆಯು ಪರಿಕಲ್ಪನಾತ್ಮಕ ಯೋಜನೆಗೆ ತಳಹದಿಯನ್ನು ಒದಗಿಸುತ್ತದೆ.

    3. ಆರ್ಥಿಕ ಅಥವಾ ಹಣಕಾಸಿನ ಯೋಜನೆ ( Financial Planning)

    ಪ್ರವಾಸೋದ್ಯಮವು ಇಂದು ಒಂದು ಬೃಹತ್ ಉದ್ದಿಮೆಯಾಗಿ ಬೆಳವಣಿಗೆಯನ್ನು ಹೊಂದುತ್ತಿದೆ. ಹೀಗಾಗಿ ಇದನ್ನು ಅಭಿವೃದ್ಧಿ ಚಟುವಟಿಕೆ ಎಂದು ಕರೆಯಬಹುದಾಗಿದೆ. ಈ ಅಭಿವೃದ್ಧಿಯ ಚಟುವಟಿಕೆಯು ಯಶಸ್ಸನ್ನು ಕಾಣಬೇಕಾದರೆ ಆರ್ಥಿಕ ಯೋಜನೆ ಅಗತ್ಯವಾಗಿದೆ. ಯಾವುದಾದರೂ ಒಂದು ಪ್ರವಾಸಿ ಕೇಂದ್ರವು ಪ್ರವಾಸಿಗರನ್ನು ಆಕರ್ಷಿಸಬೇಕಾದರೆ. ಆ ಪ್ರವಾಸಿ ಕೇಂದ್ರದಲ್ಲಿ ಮೂಲ ಸೌಕರ್ಯಗಳನ್ನು ಸ್ಥಾಪಿಸಲು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಇತರ ಉದ್ದಮೆಗಳಂತೆ ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಅವಶ್ಯಕತೆ ಇರುತ್ತದೆ. ಸರ್ಕಾರ ಮೊದಲು ಬಂಡವಾಳವನ್ನು ಹೂಡಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ತದನಂತರ ಖಾಸಗಿ ಕಂಪನಿಗಳಿಗೆ ಆಹ್ವಾನ ನೀಡಬೇಕಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮವು ಹೆಚ್ಚು ಬೆಳವಣಿಗೆಯನ್ನು ಕಾಣಬಹುದು. ಕೇಂದ್ರೀಯ ಅರ್ಥ ವ್ಯವಸ್ಥೆ ಇರುವ ಪೋಲ್ಯಾಂಡ್, ಯುಗ್ಲೋಸೋಮಿಯ ಮುಂತಾದ ದೇಶಗಳಲ್ಲಿ ಪ್ರವಾಸೋದ್ಯಮದ ಇಂತಹ ವ್ಯವಸ್ಥೆಗೆ ಅವಕಾಶವಿಲ್ಲ. ಆದರೆ ಮಿಶ್ರ ಆರ್ಥಿಕ ವ್ಯವಸ್ಥೆ ಇರುವ ಇಟಲಿ, ಇಂಗ್ಲೆಂಡ್, ಫ್ರಾನ್ಸ್, ಗ್ರೀಸ್ ಹಾಗೂ ಭಾರತದಂತಹ ದೇಶಗಳಲ್ಲಿ ಇದಕ್ಕೆ ಅನುಕೂಲವಿರುವುದನ್ನು ಕಾಣಬಹುದು. ಪ್ರವಾಸೋದ್ಯಮದ ಪ್ರಯೋಜಿತ ಕಾರ್ಯಗಳ ಅಭಿವೃದ್ಧಿಯನ್ನು ಸರ್ಕಾರ ಕಾರ್ಯಾರಂಭವನ್ನು ಮಾಡಿ ಖಾಸಗಿ ಹೂಡಿಕೆದಾರರಿಗೆ ಅವಕಾಶವನ್ನು ನೀಡುತ್ತದೆ. ಇದರಿಂದ ಖಾಸಗಿಯವರು ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಅವರಿಗೆ ಸಹಾಯಧನ, ತೆರಿಗೆ ವಿನಾಯಿತಿ, ಕಡಿಮೆ ಬಡ್ಡಿಗೆ ಸಾಲ ಹಾಗೂ ಭೂಮಿಯನ್ನು ಕೊಂಡುಕೊಳ್ಳಲು ಹೊಸ ಕಾನೂನುಗಳನ್ನು ಮಾಡಿದರೆ ಅವರು ಸರ್ಕಾರದೊಂದಿಗೆ ಕೈಜೋಡಿಸುತ್ತಾರೆ. ಇದರಿಂದ ಪ್ರವಾಸೋದ್ಯಮಕ್ಕೆ ಅಪಾರ ಪ್ರಮಾಣದಲ್ಲಿ ಬಂಡವಾಳ ಹರಿದು ಬರುತ್ತದೆ. ಪರಿಣಾಮವಾಗಿ ದೇಶದ ಸಮಗ್ರ ಆರ್ಥಿಕ ಪ್ರಗತಿ ಉಂಟಾಗುತ್ತದೆ.

    4. ಪ್ರಾದೇಶಿಕ ಯೋಜನೆ (Territorial Planning)

    ಪ್ರವಾಸೋದ್ಯಮ ಯೋಜನೆಯನ್ನು ರೂಪಿಸುವಾಗ ಪ್ರಮುಖವಾಗಿ ಪ್ರಾದೇಶಿಕ ಯೋಜನೆಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು. ಅಭಿವೃದ್ಧಿಯಿಂದ ವಂಚಿತವಾದ ಪ್ರವಾಸಿ ಗಮ್ಯಸ್ಥಾನವನ್ನು ಆಯ್ಕೆ ಮಾಡಿಕೊಂಡು ಅದನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಆಗ ಪ್ರಾದೇಶಿಕ ಅಸಮತೋಲನ ಕಡಿಮೆಯಾಗಿ ಅಲ್ಲಿ ಸಮತೋಲನ ಕಂಡುಬರುತ್ತದೆ. ಇದರಿಂದ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಗಮ್ಯಸ್ಥಾನಗಳ ಜನದಟ್ಟಣೆ ಕಡಿಮೆಯಾಗುತ್ತದೆ. ನಗರೀಕರಣ ಹಾಗೂ ಕೈಗಾರಿಕರಣವನ್ನು ಸ್ವಲ್ಪ ಮಟ್ಟಿಗಾದರು ಕಡಿಮೆ ಮಾಡಬಹುದು. ಪ್ರಾದೇಶಿಕ ಯೋಜನೆಗಳಿಂದ ಸ್ಥಳೀಯ ಯುವಕರಿಗೆ ಉದ್ಯೋಗ ದೊರೆಯುತ್ತದೆ. ಪರಿಸರ ರಕ್ಷಣೆಯನ್ನು ಮಾಡಲು ಅನುಕೂಲವಾಗುತ್ತದೆ. ಆದರೆ ಪ್ರಾದೇಶಿಕ ಯೋಜನೆಯನ್ನು ಹಮ್ಮಿಕೊಳ್ಳುವಾಗ ಪರಿಸರ ನಾಶ, ಸಾಂಸ್ಕೃತಿಕ ಪರಂಪರೆಗೆ ಧಕ್ಕೆ ಹಾಗೂ ಸ್ಥಳೀಯ ಸಂಪನ್ಮೂಲಗಳಿಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳುವುದು ಒಳಿತು.

    5. ಮೂಲಸೌಕರ್ಯಗಳು (Basic Infrastructure)

    ಇಂದು ದೇಶದ ಎಲ್ಲಾ ಭಾಗಗಳಲ್ಲಿ ಪ್ರವಾಸಿ ತಾಣಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆದರೆ ಅವುಗಳು ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಮೂಲಸೌಕರ್ಯಗಳು ಬೇಕು. ಉದಾ: ವಸತಿ, ಸಾರಿಗೆ, ಆಹಾರ, ಉತ್ತಮ ರಸ್ತೆ, ಕುಡಿಯುವ ನೀರು, ಶೌಚಾಲಯ, ಒಳ ಚರಂಡಿ, ಸಿನಿಮಾ, ಮನೋರಂಜನೆ, ಉತ್ತಮ ಮಾರ್ಗದರ್ಶಿಗಳು, ಕಾರು ಬಾಡಿಗೆ, ವಿಮೆ, ವಿದ್ಯುತ್ ಪೂರೈಕೆ, ಹೆದ್ದಾರಿಗಳ ಸಂಪರ್ಕ ಮುಂತಾದ ಸೌಲಭ್ಯಗಳನ್ನು ಕಲ್ಪಿಸಬೇಕು. ಇದರಿಂದ ಪ್ರವಾಸಿಗರು ಹೆಚ್ಚು ಆಕರ್ಷಿತರಾಗಿ ಪ್ರವಾಸೋದ್ಯಮದ ಬೆಳವಣಿಗೆಗೆ ಕಾರಣರಾಗುತ್ತಾರೆ. ಮೂಲಸೌಕರ್ಯಗಳು ಇಲ್ಲದೆ ಹೋದರೆ ಪ್ರವಾಸಿಗರು ಆಕರ್ಷಣೆಗೆ ಒಳಗಾಗುವುದಿಲ್ಲ ಎಂಬ ಸತ್ಯವನ್ನು ಎಲ್ಲರೂ ಮನಗಾಣಬೇಕು.

    6. ಸಮನ್ವಯ ಯೋಜನೆ (Co-ordinal Planning)

    ಪ್ರವಾಸೋದ್ಯಮವು ಏಕಮುಖವಾದ ಉದ್ದಿಮೆಯಾಗಿಲ್ಲ. ಅದು ಹಲವು ಉದ್ಯಮಿಗಳ ಒಂದು ಉದ್ದಿಮೆಯಾಗಿದೆ. ಪ್ರವಾಸ ಉದ್ಯಮವು ಹಲವು ಉದ್ಯಮಗಳೊಂದಿಗೆ ಸಹಕಾರದಿಂದ ನಡೆಯುವ ಉದ್ದಿಮೆಯಾಗಿದೆ. ಇದರ ಬೆಳವಣಿಗೆಗೆ ಹಲವು ಪೂರಕ ಉದ್ದಿಮೆಗಳು ಸಮನ್ವಯ ಸಾಧಿಸಬೇಕು. ಉದಾಹರಣೆಗೆ ಸಾರಿಗೆ, ಹೋಟೆಲ್, ಬ್ಯಾಂಕುಗಳು ಹಾಗೂ ವಾಣಿಜ್ಯ ಸಂಘ ಸಂಸ್ಥೆಗಳು ಪ್ರವಾಸೋದ್ಯಮ ಇಲಾಖೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದರಿಂದ ಆದಾಯ ದ್ವಿಗುಣಗೊಳ್ಳುತ್ತದೆ.

    7. ಸಾರಿಗೆ ಸಂಪರ್ಕಗಳು (Road and Transport)

    ಪ್ರವಾಸಿಗರು ತಾವು ಪ್ರವಾಸ ಕೈಗೊಳ್ಳುವ ಪ್ರದೇಶಗಳಿಗೆ ಬಸ್ಸು, ರೈಲು, ವಿಮಾನ ಹಾಗೂ ಹಡಗುಗಳ ಮೂಲಕ ಬರುತ್ತಾರೆ. ಪ್ರವಾಸೋದ್ಯಮವು ಬಸ್ಸು, ರೈಲು, ವಿಮಾನ ಹಾಗೂ ಹಡಗುಗಳ ವೇಳಾಪಟ್ಟಿಗಳು ಪ್ರವಾಸಿಗರಿಗೆ ದೊರಕುವಂತಹ ವ್ಯವಸ್ಥೆಯನ್ನು ಮಾಡಬೇಕು.

    8. ಮಾನವ ಸಂಪನ್ಮೂಲಗಳು (Human Resources Planning)

    ಪ್ರವಾಸೋದ್ಯಮವು ಒಂದು ಅಭಿವೃದ್ಧಿಶೀಲ ಉದ್ಯಮವಾಗಿದೆ. ಈ ಉದ್ದಿಮೆ ಅತ್ಯಂತ ದಕ್ಷತೆಯಿಂದ ಕೂಡಿರಬೇಕಾದರೆ ಅಲ್ಲಿ ಪ್ರಾಮಾಣಿಕ ಹಾಗೂ ಸೇವಾ ನಿರತ ನೌಕರರು ಇರಬೇಕು. ಈ ನೌಕರರು ಸೂಕ್ತ ತರಬೇತಿಯನ್ನು ಪಡೆಯಲು ಅರ್ಹತೆಯನ್ನು ಹೊಂದಿರುವವರಾಗಿರಬೇಕು. ಅವರು ವೃತ್ತಿ ನೈಪುಣ್ಯತೆಯನ್ನು ಪಡೆದಿರಬೇಕು. ಉದಾಹರಣೆಗೆ ಪ್ರವಾಸಿ ಏಜೆಂಟರು ನಿರ್ವಾಹಕರು, ಹೋಟೆಲ್ ಸಿಬ್ಬಂದಿಗಳು, ಬಾಣಸಿಗರು, ವೃತ್ತಿಪರ ತರಬೇತಿ ಪಡೆದವರಾಗಿರಬೇಕು. ಚಾಲಕರು ಪ್ರವಾಸಿ ತಾಣದ ಸಂಪೂರ್ಣ ಪರಿಚಯ ಹೊಂದಿರಬೇಕು. ಹೋಟೆಲ್ ನೌಕರರು ಅತಿಥಿ ಸತ್ಕಾರಕ್ಕೆ ಹೆಸರಾಗಿರಬೇಕು. ಅಡುಗೆಯವರು ಆಹಾರ ತಯಾರಿಕೆಯಲ್ಲಿ ನುರಿತವರಾಗಿರಬೇಕು. ಶುಚಿತ್ವವನ್ನು ಕಾಪಾಡಬೇಕು, ರುಚಿತ್ವವನ್ನು ನೀಡಬೇಕು. ಸೌಜನ್ಯ ಗುಣವನ್ನು ಹೊಂದಿರಬೇಕು.

    9. ಮಾರಾಟ ಪ್ರವರ್ತನೆ ಮತ್ತು ಪ್ರಚಾರ ವ್ಯವಸ್ಥೆ (Marketing Promotion and Publicity) 

    ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದ ನಂತರ ಪ್ರವಾಸೋದ್ಯಮದ ಕುರಿತು ಪ್ರಚಾರವನ್ನು ಮಾಡಬೇಕು. ಆಗ ಮಾತ್ರ ಪ್ರವಾಸಿ ಸ್ಥಳದ ಬಗ್ಗೆ ಪ್ರವಾಸಿಗರಿಂದ ಬೇಡಿಕೆ ಹೆಚ್ಚುತ್ತದೆ. ಪ್ರವಾಸಿತಾಣಗಳು ಪ್ರವಾಸಿಗರಿಂದ ಆಕರ್ಷಣೆಗೊಳಗಾಗಬೇಕೆಂದರೆ ಪ್ರವಾಸೋದ್ಯಮ ಇಲಾಖೆಯು ಅವುಗಳ ಕುರಿತು ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಬೇಕು. ಈ ಉದ್ದೇಶಕ್ಕಾಗಿ ಪ್ರಾದೇಶಿಕ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ಕಚೇರಿಗಳನ್ನು ಸ್ಥಾಪಿಸಬೇಕು. ವೃತ್ತಪತ್ರಿಕೆ, ರೇಡಿಯೋ, ಟೆಲಿವಿಜನ್‌, ಯುಟ್ಯೂಬ್‌, ಜಾಹೀರಾತು, ಪ್ರವಾಸಿ ಮಾರ್ಗದರ್ಶಿಕೆಗಳು, ಪೋಸ್ಟರ್‌ಗಳು, ಪ್ರವಾಸಿ ಕೈಪಿಡಿ, ಕಿರು ಹೊತ್ತಿಗೆ ಹಾಗೂ ಸಾಹಿತ್ಯ ಪುಸ್ತಕಗಳ ಮೂಲಕ ಪ್ರಚಾರ ಮಾಡಬೇಕು. ಖರೀದಿ ವ್ಯವಸ್ಥೆ ಹಾಗೂ ಪ್ರವಾಸಿ ತಾಣಗಳಲ್ಲಿ ಸಿಗುವ ಸವಲತ್ತುಗಳ ಕುರಿತು ಚಿಕ್ಕ-ಚಿಕ್ಕ ಪುಸ್ತಕಗಳನ್ನು ಪ್ರಕಟಿಸಬೇಕು.

    10. ಮೇಲ್ವಿಚಾರಣಾ ಪ್ರಗತಿ:

    ಪ್ರವಾಸೋದ್ಯಮದ ಬಗ್ಗೆ ತೆಗೆದುಕೊಂಡ ತೀರ್ಮಾನಗಳು ಹಾಗೂ ಅವುಗಳನ್ನು ಪ್ರವಾಸಿಗರಿಗೆ ತಲುಪಿಸಲು ತೆಗೆದುಕೊಂಡ ಮಾರುಕಟ್ಟೆ ತೀರ್ಮಾನಗಳ ಕಾರ್ಯವೈಖರಿಯನ್ನು ನಿಯಮಿತವಾಗಿ ಗಮನಿಸಬೇಕು. ಇದನ್ನೇ ಮೇಲ್ವಿಚಾರಣ ಪ್ರಗತಿ ಎಂದು ಕರೆಯುತ್ತಾರೆ. ಯೋಜನೆಯಂತೆ ವಾರ್ಷಿಕವಾಗಿ ಅಥವಾ ಮೂರು ಅಥವಾ ಐದು ವರ್ಷಗಳ ಕಾಲಾವಧಿಯಲ್ಲಿ ಸಾಧನೆ ಮಾಡಬೇಕೆಂದಿರುವ ಗುರಿಯ ಮೇಲ್ವಿಚಾರಣೆ ನಡೆಯಬೇಕು. ಅವುಗಳನ್ನು ಆಗಾಗ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಹಾಗೆ ಮಾಡುವಾಗ ಬದಲಾದ ಸನ್ನಿವೇಶ ಸಂಪನ್ಮೂಲಗಳು ಅನುಭವದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಯೋಜನೆಗಳನ್ನು ಪರಿಷ್ಕರಣೆ ಮಾಡಬೇಕು.

    ಉಪಸಂಹಾರ :

    ಮೇಲೆ ವಿವರಿಸಲಾದ ಅಂಶಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯವಾದ ಯೋಜನಾ ವಿಧಾನಗಳು ಮತ್ತು ಅವುಗಳ ಮಹತ್ವವನ್ನು ವಿವರಿಸಲಾಗಿದೆ. ಪ್ರವಾಸೋದ್ಯಮವು ಯಶಸ್ವಿಯಾಗಲು ಬೇಡಿಕೆ–ಪೂರೈಕೆ ವಿಶ್ಲೇಷಣೆ, ಸ್ಪಷ್ಟ ಉದ್ದೇಶ ನಿರೂಪಣೆ, ಸಮರ್ಪಕ ಹಣಕಾಸಿನ ಯೋಜನೆ, ಪ್ರಾದೇಶಿಕ ಸಮತೋಲನ, ಮೂಲಸೌಕರ್ಯಗಳ ಅಭಿವೃದ್ಧಿ, ವಿವಿಧ ಕ್ಷೇತ್ರಗಳ ಸಮನ್ವಯ, ಉತ್ತಮ ಸಾರಿಗೆ ಸಂಪರ್ಕಗಳು, ದಕ್ಷ ಮಾನವ ಸಂಪನ್ಮೂಲ ಹಾಗೂ ಪರಿಣಾಮಕಾರಿ ಪ್ರಚಾರ ಕ್ರಮಗಳು ಅತ್ಯಾವಶ್ಯಕವಾಗಿವೆ. ಇವುಗಳೊಂದಿಗೆ ನಿರಂತರ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನವನ್ನು ಕೈಗೊಳ್ಳುವುದರಿಂದ ಪ್ರವಾಸೋದ್ಯಮ ಕ್ಷೇತ್ರವು ಸ್ಥಿರವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಹೀಗಾಗಿ ಸರಿಯಾದ ಯೋಜನೆ, ಕಾರ್ಯನಿರ್ವಹಣೆ ಮತ್ತು ಸಹಕಾರದ ಮೂಲಕ ಪ್ರವಾಸೋದ್ಯಮವು ದೇಶದ ಆರ್ಥಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡುವ ಶಕ್ತಿಯುತ ಕ್ಷೇತ್ರವಾಗುತ್ತದೆ.