ವಿಶ್ವದಲ್ಲಿ ಭಾರತದ ಜನಸಂಖ್ಯೆಯ ಪಾಲು 2.4% ರಷ್ಟು ಇದೆ. ಪ್ರತಿವರ್ಷ ಭಾರತದ ಜನಸಂಖ್ಯೆ ಏರಿಕೆ ಆಗುತ್ತದೆ. 2021 ಕ್ಕೆ ಭಾರತದ ಜನಸಂಖ್ಯೆ 140 ಕೋಟಿಯಷ್ಟಾಗಿದೆ. ಇದೇ ರೀತಿ ಭಾರತದ ಜನಸಂಖ್ಯೆ ಏರಿಕೆಯಾದರೆ ಮುಂದೊಂದು ದಿನ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುವ ಸಂದರ್ಭಗಳು ಬರಬಹುದು. ಭಾರತದ ಜನಸಂಖ್ಯಾ ಸ್ಫೋಟಕ್ಕೆ ಈ ಕೆಳಗಿನ ಪ್ರಮುಖ ಅಂಶಗಳು ಕಾರಣಗಳಾಗಿವೆ.

1.  ಮರಣ ಪ್ರದೇಶದಲ್ಲಿ ಇಳಿಕೆ:

1921 ರಿಂದ ಇಂದಿನವರೆಗೆ ಭಾರತದ ಜನಸಂಖ್ಯೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಮರಣ ಪ್ರಮಾಣದಲ್ಲಿ ಮಾತ್ರ ತುಂಬಾ ಇಳಿಕೆ ಕಂಡುಬರುತ್ತದೆ. ಹೆಚ್ಚಿನ ಪ್ರಮಾಣದ ಔಷಧಿಗಳ ಲಭ್ಯತೆಯ ಕಾರಣದಿಂದ ಮರಣ ಪ್ರಮಾಣವು 1000ಕ್ಕೆ 27.4% ರಿಂದ 10.9% ವರೆಗೆ ಇಳಿದಿದೆ. ಹೀಗೆ ಮರಣ ಪ್ರಮಾಣವು ಕಡಿಮೆಯಾಗಿ ಜನನ ಪ್ರಮಾಣವು ಏರಿಕೆಯಾದರೆ ಜನಸಂಖ್ಯಾ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತದೆ.

2. ಕಡ್ಡಾಯ ಮದುವೆ:  ವಿವಾಹವು ಭಾರತೀಯ ಸಮಾಜದಲ್ಲಿ ಸಾರ್ವತ್ರಿಕ ಮತ್ತು ಕಡ್ಡಾಯವಾಗಿದೆ. ಸ್ತ್ರೀ-ಪುರುಷರು ವಯಸ್ಸಿಗೆ ಬಂದನಂತರ ಕಡ್ಡಾಯವಾಗಿ ಮದುವೆಯಾಗಬೇಕೆಂಬ ನಿಬಂಧನೆಗಳಿವೆ. ಇದಕ್ಕೆ ಧಾರ್ಮಿಕ ಬೆಂಬಲವೂ ಬಹಳಷ್ಟಿದೆ.  ಸ್ತ್ರೀ ಪುರುಷರು ಕಡ್ಡಾಯವಾಗಿ ಮತ್ತು ಬಹುಬೇಗನೆ ಮದುವೆಯಾಗುವ ಕಾರಣ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

3. ಬೇಗನೆ ಮದುವೆ: ಭಾರತೀಯ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಬೇಗನೆ ಮದುವೆ ಮಾಡುವ ಸಂಪ್ರದಾಯವಿದೆ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣವೇ ಮದುವೆ ಮಾಡುವ ಪದ್ಧತಿ ಭಾರತೀಯ ಗ್ರಾಮೀಣ ಸಮುದಾಯದಲ್ಲಿದೆ. ಇಂದಿಗೂ ಭಾರತೀಯ ಅನೇಕ ಗ್ರಾಮಗಳಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬೇಗನೆ ಮದುವೆಯಾಗುವುದರಿಂದ ಹೆಚ್ಚು ಮಕ್ಕಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಸುಮಾರು 20ನೇ ವಯಸ್ಸಿಗೆ ಬರುವುದರೊಳಗಾಗಿ 2-3 ಮಕ್ಕಳ ತಂದೆ ತಾಯಿಗಳಾಗುತ್ತಾರೆ. ಹೀಗಾಗಿ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. 

4. ಬಡತನ:  ಬಡತನವು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂತೆ ಮಾಡುತ್ತದೆ. ಹೆಚ್ಚು ಮಕ್ಕಳು ಜನಿಸಿದರೆ ತಮಗೆ ದುಡಿಮೆಯಲ್ಲಿ ಆಸರೆಯಾಗುತ್ತಾರೆ ಮತ್ತು ಆರ್ಥಿಕವಾಗಿ ಮಕ್ಕಳು ದುಡಿದು ತಂದು ಬಡತನವನ್ನು ತೊಲಗಿಸಲು ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ತಂದೆ-ತಾಯಿಗಳು ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟಪಡುತ್ತಾರೆ. ಬಡತನವು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ.

5. ಗಂಡು ಸಂತಾನದ ವ್ಯಾಮೋಹ:  ಗಂಡು ಸಂತಾನದ ಅಪೇಕ್ಷೆಯಿಂದ ಸುಮಾರು 8 ಜನ ಹೆಣ್ಣು ಮಕ್ಕಳು ಜನಿಸಿ ಆನಂತರ ಗಂಡು ಮಗುವನ್ನು ಪಡೆದಂತಹ ಕುಟುಂಬಗಳು ಭಾರತೀಯ ಸಮಾಜದಲ್ಲಿ ಸಾಕಷ್ಟು ಕಂಡುಬರುತ್ತವೆ. ಗಂಡು ಸಂತಾನದ ನಿರೀಕ್ಷೆಯಲ್ಲಿದ್ದವರಿಗೆ ಪದೇ ಪದೇ ಹೆಣ್ಣು ಹುಟ್ಟಿದರೆ ಮರಳಿ ಪ್ರಯತ್ನಿಸು ಎಂಬ ಗಾದೆಯಂತೆ ಹಲವಾರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಇದು ಜನಸಂಖ್ಯಾ ಬೆಳವಣಿಗೆಗೆ ಕಾರಣವಾಗುತ್ತದೆ.

6. ಅನಕ್ಷರತೆ ಮತ್ತು ಅಜ್ಞಾನ:  ಭಾರತದೇಶದಲ್ಲಿ ಸುಶಿಕ್ಷಿತರಗಿಂತ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿದೆ. ಜನರಲ್ಲಿ ಅಜ್ಞಾನ ತಾಂಡವವಾಡುತ್ತಿದೆ. ತಮಗೆ ಎಷ್ಟು ಜನ ಮಕ್ಕಳಾದರೂ ಚಿಂತಿಸುವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂದು ಪದೇ ಪದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಇದರಿಂದ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಜನಸಂಖ್ಯೆ ಏರುತ್ತಲೇ ಹೋಗುತ್ತದೆ.

7. ಧಾರ್ಮಿಕ ನಂಬಿಕೆ:  ಗಂಡು ವಂಶೋದ್ಧಾರಕ ಗಂಡು ಇಲ್ಲದೆ ಸದ್ಗತಿ ಇಲ್ಲ. ಮೋಕ್ಷ ಪಡೆಯಲು ಗಂಡು ಮಗುವೇ ಬೇಕು ಎಂಬ ಧಾರ್ಮಿಕ ಭಾವನೆಗಳಿಂದ ಅವರಿಗೆ ಎಷ್ಟೇ ಹೆಣ್ಣು ಮಕ್ಕಳಾದರೂ ಗಂಡು ಸಂತತಿಗಾಗಿ ಹಾತೊರೆಯುತ್ತಾರೆ. ಇದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

8. ಅವಿಭಕ್ತ ಕುಟುಂಬ:  ಭಾರತದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅವಿಭಕ್ತ ಕುಟುಂಬಗಳು ಕಾರಣವಾಗಿವೆ. ಅವಿಭಕ್ತ ಕುಟುಂಬದಲ್ಲಿ ಭೂ ಹಿಡುವಳಿ ಅಧಿಕವಾಗಿರುತ್ತದೆ. ಕೃಷಿ ಅವರ ಮೂಲ  ಉದ್ಯೋಗವಾಗಿರುತ್ತದೆ. ಕೃಷಿ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಬದಲಾಗಿ ತಾವೇ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ದುಡಿಮೆಗೂ ಸಹಾಯವಾಗುತ್ತದೆ. ಸಂಬಳವೂ ಉಳಿಯುತ್ತದೆ ಎಂಬ ಕಾರಣಗಳಿಂದ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತಾರೆ. ಇದು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

9. ಕುಟುಂಬ ಯೋಜನೆ:  ಭಾರತೀಯ ಗ್ರಾಮೀಣ ಪ್ರದೇಶದ ಜನರಿಗೆ ಕುಟುಂಬ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆಗಳು ಇಲ್ಲ. ಅವರು ಕುಟುಂಬ ಯೋಜನೆಯನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಲೆ ಇರುತ್ತದೆ.

10. ಹವಾಮಾನ:  ಭಾರತದ ಹವಾಮಾನ ಜನಸಂಖ್ಯಾ ಸ್ಪೋಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ 12 ರಿಂದ 14 ವರ್ಷದ ಹುಡುಗಿಯರು ಋತುಮತಿಯಾಗುತ್ತಾರೆ. ಹೀಗೆ ಋತುಮತಿಯಾದ ಹುಡುಗಿಯರನ್ನು ಬೇಗನೆ ಮದುವೆ ಮಾಡುತ್ತಾರೆ. ಹೀಗಾಗಿ ಅವರು 15 ರಿಂದ 45 ವರ್ಷಗಳವರೆಗೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಈ ಕಾರಣದಿಂದ ಜನಸಂಖ್ಯೆ ಏರಿಕೆಯು ಕಂಡುಬರುತ್ತದೆ.

ಉಪಸಂಹಾರ

ಭಾರತದಲ್ಲಿ ಜನಸಂಖ್ಯಾ ಸ್ಫೋಟವು ಒಂದೇ ಒಂದು ಕಾರಣದಿಂದ ಉಂಟಾಗಿಲ್ಲ; ಬದಲಾಗಿ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳ ಸಮೂಹ ಫಲಿತಾಂಶವಾಗಿದೆ. ಅನಕ್ಷರತೆ, ಬಡತನ, ಬಾಲ್ಯವಿವಾಹ, ಗಂಡು ಸಂತಾನದ ವ್ಯಾಮೋಹ ಮತ್ತು ಕುಟುಂಬ ಯೋಜನೆಯ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣದ ವಿಸ್ತರಣೆ, ಮಹಿಳಾ ಸಬಲೀಕರಣ ಮತ್ತು ಪರಿಣಾಮಕಾರಿ ಕುಟುಂಬ ಯೋಜನಾ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಜಾಗೃತಿ ಮೂಡಿಸಿದರೆ ಮಾತ್ರ ಭವಿಷ್ಯದಲ್ಲಿ ಜನಸಂಖ್ಯಾ ಸಮಸ್ಯೆಯನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.