ಉತ್ಖನನದ ವಿಧಾನಗಳು

  1. ನಿರಂಕುಶ ಉತ್ಖನನ (Arbitrary Excavation)
  2. ಸ್ತರವಿಂಗಡನಾತ್ಮಕ ಉತ್ಖನನ:

                1.  ವಸತಿ ನಿವೇಶನ ಉತ್ಖನನದ ವಿಧಾನಗಳು:

                                  ಎ. ಲಂಬ ಉತ್ಖನನ(Vertical Excavation )

                                  ಬಿ. ಆಯತಾಕಾರದ ಉತ್ಖನನ

                                  ಸಿ.  ಟ್ರೆಂಚಿಂಗ್ ಉತ್ಖನನ

                                  ಡಿ. ಜಾಲಂದರ ಉತ್ಖನನ                       

                 2.   ಸ್ಮಶಾನ ನಿವೇಶನ ಉತ್ಖನನ ಚತುರ್ಭಾಗ ಪದ್ಧತಿ

 ಉತ್ಖನನದ ವಿಧಾನಗಳಲ್ಲಿ ಎರಡು ಪ್ರಕಾರಗಳಿವೆ. ಅವುಗಳೆಂದರೆ ನಿರಂಕುಶ ಉತ್ಖನನ ಹಾಗೂ ಸ್ತರ ವಿಂಗಡನಾತ್ಮಕ ಉತ್ಖನನ. 

  1. ನಿರಂಕುಶ ಉತ್ಖನನ (Arbitrary Excavation): ಈ ವಿಧಾನದಲ್ಲಿ ವೈಜ್ಞಾನಿಕ ಸ್ತರವಿನ್ಯಾಸವನ್ನು ಅನುಸರಿಸುವ ಬದಲಾಗಿ ಒಂದು ನಿರ್ದಿಷ್ಟ ಆಳದ ಆಧಾರದ ಮೇಲೆ ಮಣ್ಣನ್ನು ಅಗೆಯುವುದಾಗಿದೆ. ಈ ವಿಧಾನದಲ್ಲಿ ನೈಸರ್ಗಿಕ ಮಣ್ಣಿನ ಪದರುಗಳನ್ನು ಲೆಕ್ಕಿಸದೇ ಮೊದಲೇ ನಿರ್ಧಾರ ಮಾಡಿದಂತೆ. (ಉದಾ 10 ಅಥವಾ 20 ಸೆಂಟಿ ಮೀಟರ್) ಸಮತಟ್ಟಾಗಿ ಅಗೆಯುತ್ತಾ ಹೋಗುವುದು. ಹೀಗೆ ಅಗೆಯುವಾಗ ಪ್ರತಿ ಹಂತಗಳಲ್ಲಿ ಸಿಗುವ ಅವಶೇಷಗಳನ್ನು ಆಯಾ ಆಳದ ಆಧಾರದ ಮೇಲೆ ದಾಖಲು ಮಾಡಿಕೊಳ್ಳುವುದು. ಉತ್ಖನನದ ಸಮಯದಲ್ಲಿ ಮಣ್ಣಿನ ಪದರುಗಳು ಸ್ಪಷ್ಟವಾಗಿ ಗೋಚರವಾಗದಿದ್ದಾಗ ಅಥವಾ ಆರಂಭಿಕ ಹಂತದ ಶೋಧದಲ್ಲಿ ಈ ರೀತಿಯ ಉತ್ಖನನ ಮಾಡುತ್ತಾರೆ. ಆದರೆ ಅವಶೇಷಗಳು ದೊರೆತಾಗಲೂ ಕೇವಲ ಆಳದ ಆಧಾರದ ಮೇಲೆ ಅಗೆಯುವ ಈ ಕ್ರಮವು ಪುರಾತತ್ವಶಾಸ್ತ್ರಕ್ಕೆ ಬಗೆದ ಅನ್ಯಾಯವಾಗುತ್ತದೆ.  
  1. ಸ್ತರವಿಂಗಡನಾತ್ಮಕ ಉತ್ಖನನ: ಇದು ಅವಶೇಷಗಳ ಕಾಲಾನುಕ್ರಮಕ್ಕೆ ಅನುಗುಣವಾಗಿ ವೈಜ್ಞಾನಿಕವಾಗಿ ಅಗೆಯುವ ವಿಧಾನವಾಗಿದೆ. ನೆಲದ ಅಡಿಯಲ್ಲಿ ದೊರೆಯುವ ವಿವಿಧ ಮಣ್ಣಿನ ಪದರಿನ ಆಧಾರದ ಮೇಲೆ ಪುರಾತನ ನಾಗರಿಕತೆಯ ಕಾಲ ಹಾಗೂ ಸಂಸ್ಕೃತಿಯನ್ನು ಗುರುತಿಸುವುದು ಇದರ ಮುಖ್ಯ ಗುರಿಯಾಗಿದೆ. ಉತ್ಖನನ ಮಾಡುವಾಗ ನಿವೇಶನದ ಸ್ವರೂಪವನ್ನು ಅಧ್ಯಯನ ಮಾಡಲಾಗುತ್ತದೆ. ಸ್ತರವಿಂಗಡನಾತ್ಮಕ ಉತ್ಖನನದ ವಿಧಾನವನ್ನು ವಿಭಾಗಿಸಿ ಮತ್ತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ 1. ವಸತಿ ನಿವೇಶನ 2. ಸ್ಮಶಾನ ನಿವೇಶನ. 
  1. ವಸತಿ ನಿವೇಶನ ಉತ್ಖನನದವಿಧಾನಗಳು: ವಸತಿ ನಿವೇಶನ ಉತ್ಖನನದ ಸ್ವರೂಪಕ್ಕೆ ಅನುಗುಣವಾಗಿ ಅವುಗಳನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

                             ಎ. ಲಂಬ ಉತ್ಖನನ (Vertical Excavation)

                            ಬಿ. ಆಯತಾಕಾರದ ಉತ್ಖನನ (Horizontal Excavation)

                            ಸಿ. ಟ್ರೆಂಚಿಂಗ್ ಉತ್ಖನನ

                           ಡಿ. ಜಾಲಂದರ ಉತ್ಖನನ (Grid Excavation)

ಎ. ಲಂಬ ಉತ್ಖನನ (Vertical Excavation)

 ಇದನ್ನು ಇಂಗ್ಲೀಷಿನಲ್ಲಿ Vertical Excavation ಎಂದು ಕರೆಯುತ್ತಾರೆ.

* ಉತ್ಖನನ ಮಾಡಲು ಸ್ಥಳವನ್ನು ಆಯ್ಕೆ ಮಾಡಿಕೊಂಡು ಒಂದು ಅಥವಾ ಸೀಮಿತ ಚೌಕ ಅಥವಾ     ಆಯತಾಕಾರದ ಗುಂಡಿಗಳನ್ನು ಬಾವಿಯನ್ನು ತೋಡಿದಂತೆ ಮೇಲಿನಿಂದ ಕೆಳಗೆ ಲಂಬವಾಗಿ ಅಗಿಯಬೇಕು.

* ಉತ್ಖನನದ ವೇಳೆಯಲ್ಲಿ ನಿವೇಶನದಲ್ಲಿಯ ಅವಶೇಷ ಹಾಗೂ ಅದು ಯಾವ ಸಂಸ್ಕೃತಿಗೆ ಸಂಬಂಧಿಸಿದ್ದು ಎಂಬುದನ್ನು ಅರಿತುಕೊಳ್ಳಬೇಕು. ಅಂದರೆ ನಿವೇಶನದಲ್ಲಿದ್ದ ಸಂಸ್ಕೃತಿಗಳ ಕಾಲಾನುಕ್ರಮವನ್ನು ಅರ್ಥೈಸಿಕೊಳ್ಳಲು ಈ ಉತ್ಖನನ ನಡೆಸಲಾಗುವುದು.

* ಈ ವಿಧಾನದ ಪ್ರಕಾರ ಉತ್ಖನನವನ್ನು ನಿವೇಶನದ ಮೇಲಿನಿಂದ ಅಡಿಯವರೆಗೂ ಮಾಡುವುದರಿಂದ ನಿವೇಶನದಲ್ಲಿ ಹುದುಗಿರುವ ಸಾಂಸ್ಕೃತಿಕ ಅವಶೇಷಗಳ ಸ್ಪಷ್ಟ ಕಾಲಾನುಕ್ರಮ ದೊರೆಯುತ್ತದೆ.

ಉತ್ಖನನದ ಸ್ಪಷ್ಟ ಫಲಿತಾಂಶಕ್ಕಾಗಿ ಈ ರೀತಿಯ ವಿಧಾನವನ್ನು ಅನುಸರಿಸಲಾಗುತ್ತದೆ. ನಿವೇಶನದಲ್ಲಿ ಯಾವ ಸಂಸ್ಕೃತಿಯ ಜನರ ಅವಶೇಷಗಳು ಹೂತುಹೋಗಿವೆ ಎಂಬ ಮಾಹಿತಿ ದೊರಕುತ್ತದೆ. ಇತಿಹಾಸ ಪೂರ್ವಕಾಲದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಲಂಬ ಉತ್ಖನನ ಸಹಕಾರಿಯಾಗಿದೆ. ಇತಿಹಾಸ ಪೂರ್ವ ಕಾಲದಲ್ಲಿ ಜನರು ಮನೆಗಳನ್ನು ಕಲ್ಲಿನ ಚಪ್ಪಡಿ, ಬಿದಿರು ಹಾಗೂ ಮಣ್ಣಿನಿಂದ ನಿರ್ಮಿಸುತ್ತಿದ್ದರು. ಹೀಗಾಗಿ ಅವುಗಳು ಬೇಗನೆ ಕ್ಷಯಿಸಿ ಹೋಗುತ್ತಿದ್ದವು. ಇದರಲ್ಲಿ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ಅವಶೇಷಗಳು ಕಂಡುಬರುವುದಿಲ್ಲ. ಇಲ್ಲಿ ಸಾಮಾನ್ಯವಾಗಿ ಮಡಿಕೆ, ಆಭರಣ, ಕಲ್ಲಿನ ಆಯುಧ ಹಾಗೂ ಉಪಕರಣಗಳು ಕಂಡುಬರುತ್ತವೆ. ಲಂಬ ಉತ್ಖನನದಿಂದ ಹುದುಗಿ ಹೋಗಿರುವ ಬೃಹತ್ ಕಟ್ಟಡಗಳ, ಕೋಟೆಗಳ ರೂಪರೇಷೆಗಳನ್ನು ಪುನರ್‌ರಚಿಸಲು ಸಾಧ್ಯವಾಗುತ್ತದೆ. ಆದರೆ ಅವಶೇಷಗಳನ್ನು ಪೂರ್ಣ ಅನಾವರಣಗೊಳಿಸಲು ಬೇಕಾಗುವ ಸಮಯ ಹಾಗೂ ಅದಕ್ಕೆ ಬೇಕಾಗುವ ವೆಚ್ಚ ಬಹಳ ದುಬಾರಿಯಾಗುತ್ತದೆ. ಗುಜರಾತಿನ ಸರ್ಕೋತದ, ರಾಜಸ್ಥಾನದ ಕಾಲಿಬಂಗನ್ ಮುಂತಾದ ಸಿಂಧೂ ಸಂಸ್ಕೃತಿಯ ಕೆಲವು ನಿವೇಶನಗಳ ಸಂಶೋಧನೆಯಲ್ಲಿ  ಲಂಬ ಉತ್ಖನನವನ್ನು ಅಳವಡಿಸಿಕೊಳ್ಳಲಾಗಿದೆ.

 ಲಂಬ ಉತ್ಖನನದ ಉಪಯುಕ್ತತೆ: ಲಂಬ ಉತ್ಖನನದ ಉಪಯುಕ್ತತೆಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

  1. ಲಂಬ ಉತ್ಖನನದಿಂದ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ.
  2. ಲಂಬ ಉತ್ಖನನಕ್ಕೆ ಹೆಚ್ಚಿನ ಪ್ರಮಾಣದ ಕೂಲಿ ಕಾರ್ಮಿಕರು ಹಾಗೂ ವೀಕ್ಷಕರ ಅಗತ್ಯವಿರುವುದಿಲ್ಲ.
  3. ಲಂಬ ಉತ್ಖನನದಿಂದ ನಿರ್ದಿಷ್ಟ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
  4. ಯಾವುದೇ ನಿವೇಶನದ ಸಾಂಸ್ಕೃತಿಕ ಕಾಲಾನುಕ್ರಮವನ್ನು ನಿರ್ಧರಿಸಲು ಲಂಬ ಉತ್ಖನನವು ಸಹಕಾರಿಯಾಗಿದೆ.
  5. ವಿಸ್ತೃತ ಉತ್ಖನನವನ್ನು ಕೈಗೊಳ್ಳುವ ಮೊದಲು ಲಂಬ ಉತ್ಖನನವನ್ನು ನಡೆಸಿ ಸಾಂಸ್ಕೃತಿಕ ಕಾಲಾನುಕ್ರಮವನ್ನು ಕಂಡುಹಿಡಿಬಹುದು.
  6. ಲಂಬ ಉತ್ಖನನವು ವಿಸ್ತೃತ ಉತ್ಖನನಕ್ಕೆ ಪೂರ್ವಭಾವಿಯಾಗಿದೆ.

  ಲಂಬ ಉತ್ಖನನದ ಕೊರತೆಗಳು(ಅನಾನುಕೂಲಗಳು)

  1. ಲಂಬ ಉತ್ಖನನದ ಪರಿಮಿತಿ ಉದ್ದಗಲ ಇಲ್ಲದೆ ಹೋದರೆ ಗುಂಡಿಯನ್ನು ಆಳವಾಗಿ ತೋಡಿದರೂ ಯಾವುದೇ ಪ್ರಯೋಜನವಾಗದು. ತೋಡಿದ ಮಣ್ಣನ್ನು ಹೊರಗೆ ಹಾಕುವುದು ಬಹಳ ಮಟ್ಟಿಗೆ ಕಷ್ಟವಾಗುತ್ತದೆ.
  2. ಗುಂಡಿಯ ಆಳ ಹೆಚ್ಚಾದಂತೆ ಗುಂಡಿಯ ಒಳಗೆ ಸರಿಯಾದ ಬೆಳಕು ಬೀಳದೇ ಇರುವುದರಿಂದ ಸಂಸ್ತರಣದ ಸ್ವರೂಪ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹೀಗಾಗಿ ಲಂಬ ಉತ್ಖನನದಲ್ಲಿ ಸ್ತರವಿಂಗಡಣೆಯ ಸಮಸ್ಯೆ ಕಾಡಬಹುದು. ಆಗ ಪ್ರಾಚ್ಯವಸ್ತುಗಳು ಯಾವ ಸ್ಥಳದಲ್ಲಿ ದೊರಕಿತು ಎಂಬುದನ್ನು ನಿರ್ಧರಿಸುವುದು ತುಸು ಕಷ್ಟವಾಗಬಹುದು. ಒಂದು ವೇಳೆ ಲಂಬ ಉತ್ಖನನದಲ್ಲಿ ಇಟ್ಟಿಗೆಯಿಂದ ನಿರ್ಮಿಸಿದ ಕಟ್ಟಡಗಳು ದೊರಕಿದರೆ ಅವುಗಳ ತಳ ವಿನ್ಯಾಸ ರೂಪರೇಷೆ, ಸಂದರ್ಭ ಮೊದಲಾದ ಅಂಶಗಳನ್ನು ದಾಖಲು ಮಾಡಿಕೊಳ್ಳದ ಹೊರತು ಉತ್ಖನನ ಮುಂದುವರೆಯುವುದಿಲ್ಲ. ಇದರಿಂದ ಉತ್ಖನನದ ಕಾಲಾವಧಿಯನ್ನು ಮುಂದೂಡಬೇಕಾಗುತ್ತದೆ. ಉತ್ಖನನದ ಅವಧಿಯನ್ನು ವಿಸ್ತರಿಸಿದಂತೆ ದಾಖಲೆಗಳು ನಾಶವಾಗುವ ಸಂಭವ ಹೆಚ್ಚಿರುತ್ತದೆ. ಒಂದು ನಿವೇಶನದಲ್ಲಿ ಲಂಬ ಉತ್ಖನನವನ್ನು ಮಾಡಿದಾಗ ಎಲ್ಲಾ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಸಿಗದೇ ಇರಬಹುದು. ಉದಾ: 1947ರಲ್ಲಿ ಬ್ರಹ್ಮಗಿರಿಯಲ್ಲಿ ನಡೆಸಿದ ಉತ್ಖನನದಿಂದ 21ನೇ ಗುಂಡಿಯಲ್ಲಿ ನೂತನ ಶಿಲಾಯುಗದ ಸಂಸ್ಕೃತಿ ಬೃಹತ್‌ಶಿಲಾಯುಗದ ಸಂಸ್ಕೃತಿ ಹಾಗೂ ಇತಿಹಾಸ ಆರಂಭ ಕಾಲದ ಸಂಸ್ಕೃತಿ ಅವಶೇಷಗಳು ದೊರಕಿದವು. ಆದರೆ ಹತ್ತಿರದಲ್ಲಿಯೇ 20ನೇ ಗುಂಡಿಯಲ್ಲಿ ಕೇವಲ ನವಶಿಲಾಯುಗದ ಸಂಸ್ಕೃತಿ ಹಾಗೂ ಇತಿಹಾಸಕಾಲದ ಸಂಸ್ಕೃತಿಗೆ ಸಂಬಂಧಿಸಿದ ಅವಶೇಷಗಳು ಮತ್ತು 18ನೇ ಗುಂಡಿಯಲ್ಲಿ ಕೇವಲ ಇತಿಹಾಸ ಆಧಾರದ ಸಂಸ್ಕೃತಿ ಅವಶೇಷಗಳು ಸಿಕ್ಕವು. ಇದರಿಂದ ನಮಗೆ ಅರ್ಥವಾಗುವುದೇನೆಂದರೆ ಲಂಬ ಉತ್ಖನನದಲ್ಲಿ ಅದೃಷ್ಟದ ಪಾತ್ರ ಹೆಚ್ಚಿನದಾಗಿರುತ್ತದೆ.

ಬಿ. ಆಯತಾಕಾರದ ವಿನ್ಯಾಸ ಉತ್ಖನನ

ಲಂಬ ಉತ್ಖನನದಿಂದ ಕೆಲವು ಮಾಹಿತಿ ಲಭ್ಯವಾದರೆ ಆಗ ಅದನ್ನು ಆಯತಾಕಾರದ ಉತ್ಖನನಕ್ಕೆ ವಿಸ್ತರಿಸಬಹುದು. ಈ ರೀತಿಯ ಉತ್ಖನನದಲ್ಲಿ ಉತ್ಖನನ ಮಾಡಬೇಕಾದ ಸ್ಥಳದ ಮೇಲೆ ಆಯತಾಕಾರದ ನಕ್ಷೆಯ ಗುರುತನ್ನು ಹಾಕಿಕೊಳ್ಳಲಾಗುತ್ತದೆ. ಈ ಬಗೆಯ ಉತ್ಖನನ ಗುಂಡಿಗಳನ್ನು ಪರೀಕ್ಷಾ ಉದ್ದೇಶಗಳಿಗಾಗಿ ತೋಡದೆ ದಾಖಲೆಗಳನ್ನು ಇಡುವುದಕ್ಕೆ ಮಾತ್ರ ತೋಡಲಾಗುತ್ತದೆ. ಹೀಗಾಗಿ ಸರ್ ಮಾರ್ಟಿಮರ್ ವೀಲರ್ ಅವರು ಈ ವಿಧಾನಕ್ಕೆ ʻʻSubstantive Diggingʼʼ ಎಂದು ಹೆಸರಿಸಿದ್ದಾರೆ. ಕೋಟೆಯ ಗೋಡೆಗಳಿಗೆ ಅಡ್ಡಗುಂಡಿ ತೋಡುವುದು ಇದಕ್ಕೆ ಒಂದು ಉದಾಹರಣೆಯಾಗಿದೆ. ಒಂದು ಸಮಸ್ಯೆಯನ್ನು ಮುಂದಿಟ್ಟುಕೊಂಡು ಉದ್ದವಾದ ಗುಂಡಿಯನ್ನು ತೋಡಲಾಗುತ್ತದೆ. ಅಗತ್ಯ ಬಿದ್ದರೆ ಗುಂಡಿಯನ್ನು ಮತ್ತೆ ವಿಸ್ತರಿಸಿ ಉದ್ದುದ್ದವಾಗಿ ತೋಡುತ್ತಾ ಹೋಗಲಾಗುತ್ತದೆ. ಉತ್ಖನನದ ಗುಂಡಿಯ ಎರಡೂ ಅಂಚುಗಳು ಸರಿಯಾಗಿ 0.5 ಮೀಟರ್  ಅಂತರವಾಗಿರಬೇಕು.

 ಆಯತ ವಿನ್ಯಾಸ ವಿಧಾನದ ಉತ್ಖನನದ ಸಮಯದಲ್ಲಿ ಸಿಗಬಹುದಾದ ಪ್ರಾಚ್ಯ ವಸ್ತು ಅವಶೇಷಗಳನ್ನು ಅಳತೆಯ ವಿಧಾನದಿಂದ ದಾಖಲು ಮಾಡಿಕೊಳ್ಳಲಾಗುತ್ತದೆ. ಉತ್ಖನನದ ಸಂದರ್ಭದಲ್ಲಿ ಪ್ರಾಚ್ಯವಸ್ತು ದೊರಕಿದರೆ ಅದು ಸಿಕ್ಕ ಸಮಯ, ಸಂದರ್ಭ, ಸ್ಥಿತಿ ಹಾಗೂ ಸ್ಥಳ ಮೊದಲಾದವುಗಳನ್ನು ನಿರ್ಧರಿಸಬೇಕಾದರೆ ಅದರ ಉದ್ದ, ಅಗಲ, ಎತ್ತರ ಅಥವಾ ಆಳಗಳನ್ನೊಳಗೊಂಡ ಮೂರು ಬಗೆಯ ಅಳತೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಆದುದರಿಂದ ಇಂತಹ ವಿಧಾನವು ಅಳತೆಯ ದಾಖಲೆಯ ವಿಧಾನ ಎಂದು ಹೆಸರಾಗಿದೆ. ಈ ರೀತಿಯ ಉದ್ದಳತೆಯನ್ನು ಮಾಡಲು 900 ಕೋನವುಳ್ಳ ದ್ವಿಭುಜ ಅಳತೆಯ ಮಾಪಕವನ್ನು ಬಳಸಲಾಗುತ್ತದೆ. ಈ ಅಳತೆಯ ಮಾಪಕದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಲಂಬವು ನಿಲ್ಲುವಂತೆ ಹಿಡಿಯಲಾಗುತ್ತದೆ. ಅಳತೆಯ ಮಾಪಕದ ಒಳಭುಜವು ಪ್ರಾಚ್ಯವಸ್ತು ಇರುವ ಬಿಂದುವಿಗೆ ಲಂಬವಾಗಿದೆ ಎಂಬುದನ್ನು ಸ್ಪಿರಿಟ್ ಲೆವೆಲ್‌ನ್ನು ಬಳಸಿ ಕಂಡುಹಿಡಿಯಬಹುದು. ಆಗ ಲಂಬ ಅಳತೆಯು ಆಳದ ಅಳತೆಯನ್ನು ಸೂಚಿಸುತ್ತದೆ. ಆಗ ಉತ್ಖನನಕಾರನು ಇವುಗಳನ್ನು ಸರಿಯಾಗಿ ದಾಖಲು ಮಾಡಿಕೊಳ್ಳಬೇಕು..

 ಆಯತ ವಿನ್ಯಾಸ ವ್ಯವಸ್ಥೆಯ ಸಮಸ್ಯೆಗಳು:

  1. ಆಯತ ವಿನ್ಯಾಸ ವ್ಯವಸ್ಥೆಯು ವಿಸ್ತೃತ ಉತ್ಖನನಕ್ಕಿಂತ ಲಂಬ ಉತ್ಖನನಕ್ಕೆ ಹೆಚ್ಚು ಸೂಕ್ತವಾಗಿದೆ. ಇದರ ಪ್ರಕಾರ ಗುಂಡಿಯನ್ನು ಅಡ್ಡಲಾಗಿ ತೋಡುವ ಬದಲಾಗಿ ಉದ್ದುದ್ದವಾಗಿ ಮಾತ್ರ ವಿಸ್ತಾರ ಮಾಡಬಹುದು.
  2. ಈ ಉತ್ಖನನದಿಂದ ನಿವೇಶನದಲ್ಲಿ ದೊರಕಿದ ಪ್ರಾಚ್ಯವಸ್ತುಗಳ ಸಂಸ್ಕೃತಿಯ ನಿಖರ ಮಾಹಿತಿ ದೊರಕದಿರುವುದು.

ಆಯತ ವಿನ್ಯಾಸ ಬಳಸಿ ಉತ್ಖನನ:

ಆಯತ ವಿನ್ಯಾಸವನ್ನು ಬಳಸಿ ಈ ಕೆಳಗಿನ ಪ್ರದೇಶಗಳಲ್ಲಿ ಉತ್ಖನನವನ್ನು ಮಾಡಲಾಯಿತು.

  1. ತಕ್ಷಶಿಲೆಯ ಸಿರ್ಕಪ್‌ ದಿಬ್ಬದಲ್ಲಿ ಸರ್ ಮಾರ್ಟಿಮರ್ ವೀಲರ್ ಅವರು 1944-45ರ ಅವಧಿಯಲ್ಲಿ ಆಯತ ವಿನ್ಯಾಸ ವ್ಯವಸ್ಥೆಯ ಉತ್ಖನನ ಮಾಡಿ ಅರಮನೆಗೆ ಸಂಬಂಧಿಸಿದ ಅವಶೇಷಗಳು ಹಾಗೂ ಕೋಟೆಯ ಗೋಡೆಯ ನಡುವಿನ ಕಾಲ ಸಂಬಂಧವನ್ನು ಕಂಡುಹಿಡಿದು ಆ ನಿವೇಶನದ ಕಾಲಮಾನದ ಬಗ್ಗೆ ಬೆಳಕು ಚೆಲ್ಲಿದರು. 
  1. ಹರಪ್ಪ ನಿವೇಶನದಲ್ಲಿದ್ದ ಸ್ಮಶಾನ R-37 ಹಾಗೂ ಸ್ಮಶಾನ –H ಇವುಗಳ ನಡುವಿನ ಕಾಲಾನುಕ್ರಮವನ್ನು ಅಧ್ಯಯನ ಮಾಡಲು 1946ರಲ್ಲಿ ಈ ವಿಧಾನವನ್ನು ಬಳಸಿದನು. ಇದಕ್ಕಾಗಿ ಅವನು ಅವೆರಡೂ ಸ್ಮಶಾನಗಳನ್ನು ಸೇರಿಸುವ ಹಾಗೆ 450 ಅಡಿ ಉದ್ದದ ಗುಂಡಿಯನ್ನು ಬಹು ದಕ್ಷತೆಯಿಂದ ತೋಡಿಸಿದನು. ಇದರಿಂದ ಸ್ಮಶಾನ R-37 ಸ್ಮಶಾನ –H ಕಾಲಾನುಕ್ರಮದಲ್ಲಿ ನಂತರದ್ದು ಎಂಬುದು ಮಾರ್ಟಿಮರವರ ಉತ್ಖನನದಿಂದ ಗೊತ್ತಾಯ್ತು. ಕರ್ನಾಟಕದ ಮಸ್ಕಿಯಲ್ಲಿ ಬಿ.ಕೆ ಥಾಪರ್ ನಡೆಸಿದ ಉತ್ಕನನದಲ್ಲೂ ಸಹ ಇದೇ ಮಾದರಿಯನ್ನು ಬಳಸಲಾಗಿತ್ತು.

ಸಿ. ಟ್ರೆಂಚಿಂಗ್ ಉತ್ಖನನ (Trenching Excavation)

ಪುರಾತತ್ತ್ವ ಶಾಸ್ತ್ರದಲ್ಲಿ, ಟ್ರೆಂಚಿಂಗ್ ಉತ್ಖನನ (ಇದನ್ನು ಹೆಚ್ಚಾಗಿ ಪ್ರಾಯೋಗಿಕ ಅಥವಾ ಟ್ರಯಲ್ ಟ್ರೆಂಚಿಂಗ್ ಎಂದು ಕರೆಯಲಾಗುತ್ತದೆ) ಎಂದರೆ ಭೂಮಿಯೊಳಗೆ ಉದ್ದವಾದ, ಕಿರಿದಾದ, ಆಯತಾಕಾರದ ಗುಂಡಿಗಳನ್ನು (ಕಂದಕಗಳನ್ನು) ಅಗೆಯುವ ವಿಧಾನವಾಗಿದೆ. ಒಮ್ಮೆಲೇ ದೊಡ್ಡ ಸಮತಲ ಪ್ರದೇಶವನ್ನು ಅನಾವರಣಗೊಳಿಸುವ ಬದಲು, ಪುರಾತತ್ತ್ವಜ್ಞರು ಒಂದು ನಿವೇಶನದ ಇತಿಹಾಸದ ಆಳವಾದ, ಲಂಬವಾದ “ಸೀಳಿಕೆ” (slice) ಅಥವಾ ಅಡ್ಡ-ವಿಭಾಗವನ್ನು ಪಡೆಯಲು ಟ್ರೆಂಚ್‌ಗಳನ್ನು ಬಳಸುತ್ತಾರೆ.

ಟ್ರೆಂಚಿಂಗ್‌ನ ಪ್ರಾಥಮಿಕ ಉದ್ದೇಶಗಳು

ಸ್ತರವಿಜ್ಞಾನವನ್ನು (Stratigraphy) ಅರ್ಥಮಾಡಿಕೊಳ್ಳುವುದು: ಟ್ರೆಂಚ್‌ನ ಅತ್ಯಂತ ಬೆಲೆಬಾಳುವ ಆಸ್ತಿಯೆಂದರೆ ಅದರ ಗೋಡೆಗಳು (ಇವುಗಳನ್ನು “ಪ್ರೊಫೈಲ್‌ಗಳು” ಅಥವಾ “ಸೆಕ್ಷನ್‌ಗಳು” ಎಂದು ಕರೆಯಲಾಗುತ್ತದೆ). ಈ ಲಂಬವಾದ ಮುಖಗಳು ಕಾಲಾನಂತರದಲ್ಲಿ ಮಣ್ಣು, ಅವಶೇಷಗಳು ಮತ್ತು ಮಾನವ ಚಟುವಟಿಕೆಯ ವಿಭಿನ್ನ ಪದರಗಳನ್ನು ಬಹಿರಂಗಪಡಿಸುತ್ತವೆ. ಇದು ಪುರಾತತ್ತ್ವಜ್ಞರಿಗೆ ನಿವೇಶನದ ಸಾಪೇಕ್ಷ ಕಾಲಾನುಕ್ರಮವನ್ನು (chronological timeline) ನಿರ್ಮಿಸಲು ಅನುವು ಮಾಡಿಕೊಡುತ್ತದೆ.

ನಿವೇಶನ ಪರೀಕ್ಷೆ ಮತ್ತು ಮಾದರಿ ಸಂಗ್ರಹ (Site Testing and Sampling): ಸಂಪೂರ್ಣ ಮುಕ್ತ-ಪ್ರದೇಶದ ಉತ್ಖನನಕ್ಕೆ ಅಗತ್ಯವಿರುವ ಅಪಾರ ಸಮಯ ಮತ್ತು ಹಣವನ್ನು ವಿನಿಯೋಗಿಸುವ ಮೊದಲು, ಟ್ರೆಂಚ್‌ಗಳು ಪರಿಶೋಧನಾ ಶೋಧಕಗಳಾಗಿ (exploratory probes) ಕಾರ್ಯನಿರ್ವಹಿಸುತ್ತವೆ. ನಿವೇಶನದ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಮತ್ತು ರಚನೆಗಳು ಅಥವಾ ಕಲಾಕೃತಿಗಳು (artifacts) ಎಲ್ಲಿ ಹೆಚ್ಚು ಕೇಂದ್ರೀಕೃತವಾಗಿವೆ ಎಂಬುದನ್ನು ಲೆಕ್ಕಾಚಾರ ಮಾಡಲು ಅವು ಪುರಾತತ್ತ್ವಜ್ಞರಿಗೆ ಸಹಾಯ ಮಾಡುತ್ತವೆ.

ಗಡಿಗಳು ಮತ್ತು ರೇಖಾತ್ಮಕ ಲಕ್ಷಣಗಳನ್ನು ಪತ್ತೆಹಚ್ಚುವುದು: ಪುರಾತತ್ತ್ವ ಶಾಸ್ತ್ರದ ನಿವೇಶನದ ಭೌತಿಕ ಅಂಚುಗಳನ್ನು ನಿರ್ಧರಿಸಲು ಟ್ರೆಂಚಿಂಗ್ ಹೆಚ್ಚು ಪರಿಣಾಮಕಾರಿಯಾಗಿದೆ. ಪುರಾತನ ಗೋಡೆಗಳು, ರಸ್ತೆಗಳು, ಜಲಮಾರ್ಗಗಳು (aqueducts) ಅಥವಾ ರಕ್ಷಣಾತ್ಮಕ ಕಂದಕಗಳಂತಹ ರೇಖಾತ್ಮಕ ಲಕ್ಷಣಗಳನ್ನು ಛೇದಿಸಲು ಮತ್ತು ಪತ್ತೆಹಚ್ಚಲು ಇದು ಆದ್ಯತೆಯ ವಿಧಾನವಾಗಿದೆ.

ಅನುಕೂಲಗಳು ಮತ್ತು ಅನಾನುಕೂಲಗಳು

ಟ್ರೆಂಚಿಂಗ್ ಕಾಲಾನಂತರದ ಆಳವಾದ ಲಂಬ ನೋಟವನ್ನು ಒದಗಿಸುತ್ತದೆಯಾದರೂ, ಇದನ್ನು ಸಾಮಾನ್ಯವಾಗಿ ಇತರ ಉತ್ಖನನ ವಿಧಾನಗಳ ಜೊತೆಯಲ್ಲಿ ಅಥವಾ ಅವುಗಳಿಗಿಂತ ಪೂರ್ವಭಾವಿಯಾಗಿ ಬಳಸಲಾಗುತ್ತದೆ.

ಅನುಕೂಲಗಳು : ಇಡೀ ನಿವೇಶನವನ್ನು ತೆರವುಗೊಳಿಸುವುದಕ್ಕಿಂತ ಹೆಚ್ಚು ವೆಚ್ಚ-ದಕ್ಷ ಮತ್ತು ವೇಗವಾಗಿದೆ; ಮಣ್ಣಿನ ಪ್ರೊಫೈಲ್‌ಗಳ ಮೂಲಕ ಅತ್ಯುತ್ತಮ ಕಾಲಾನುಕ್ರಮದ ಡೇಟಾವನ್ನು ಒದಗಿಸುತ್ತದೆ; ಒಟ್ಟಾರೆ ನಿವೇಶನದ ಮೇಲಿನ ವಿನಾಶಕಾರಿ ಪರಿಣಾಮವನ್ನು ಕಡಿಮೆ ಮಾಡುತ್ತದೆ.

 ಅನಾನುಕೂಲಗಳು: ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಜನರು ಹೇಗೆ ಬದುಕುತ್ತಿದ್ದರು ಎಂಬುದರ ಸೀಮಿತ ಸಮತಲ (horizontal) ನೋಟವನ್ನು ಮಾತ್ರ ನೀಡುತ್ತದೆ; ಟ್ರೆಂಚ್‌ಗಳ ನಡುವಿನ ಅಗೆಯದ ಸ್ಥಳಗಳಲ್ಲಿ (gaps) ಅಡಗಿರಬಹುದಾದ ಪ್ರಮುಖ ರಚನೆಗಳು, ಕೊಠಡಿಗಳು ಅಥವಾ ಕಲಾಕೃತಿಗಳನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಪಾಯವನ್ನು ಹೊಂದಿರುತ್ತದೆ.

ಡಿ. ಜಾಲಂದರ ಉತ್ಖನನ (Grid Excavation)

ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿವರವಾಗಿ ತಿಳಿದುಕೊಳ್ಳುವ ದೃಷ್ಟಿಯಿಂದ ನಿವೇಶನದಲ್ಲಿ ವಿಸ್ತಾರವಾದ ಪ್ರದೇಶವನ್ನು ಉತ್ಖನನ ಮಾಡುವುದನ್ನು ವಿಸ್ತೃತ ಅಥವಾ ಸಮತಲ ಉತ್ಖನನ ಎಂದು ಕರೆಯಲಾಗಿದೆ. ಲಂಬ ಉತ್ಖನನ ವಿಧಾನದಿಂದ ಒಂದು ನಿವೇಶನದಲ್ಲಿನ ಸಾಂಸ್ಕೃತಿಕ ಕಾಲಾನುಕ್ರಮವನ್ನು ಮಾತ್ರ ತಿಳಿಯಬಹುದು. ಆದರೆ ಆ ಸಂಸ್ಕೃತಿಗಳ ಬಗ್ಗೆ ಸಮಗ್ರವಾಗಿ ಮತ್ತು ವಿವರವಾಗಿ ಅಧ್ಯಯನ ಮಾಡಲು ಸಮತಲ ಉತ್ಖನನ ಬಹಳ ಅಗತ್ಯವಾಗಿದೆ.

ಈ ಉತ್ಖನನದ ಮೂಲ ಗುರಿಯೆಂದರೆ ಒಂದು ನಿರ್ದಿಷ್ಟ ಕಾಲದ ಜನರ ಜೀವನ ಶೈಲಿ, ಧಾರ್ಮಿಕ ನಂಬಿಕೆಗಳು, ಆರ್ಥಿಕ ಸ್ಥಿತಿಗತಿ ಹಾಗೂ ಸಾಮಾಜಿಕ ವ್ಯವಸ್ಥೆಯನ್ನು ವಿವರವಾಗಿ ತಿಳಿದುಕೊಳ್ಳುವುದಾಗಿದೆ. ಇಲ್ಲಿ ನಿವೇಶನದ ಒಂದು ವಿಶಾಲವಾದ ಪ್ರದೇಶವನ್ನು ಅಗೆಯಲಾಗುತ್ತದೆ. ಇದರಿಂದ ಅಂದಿನ ಕಾಲದ ಕಟ್ಟಡಗಳ ವಿನ್ಯಾಸ, ರಸ್ತೆಗಳು ಹಾಗೂ ಇಡೀ ನಗರ ಯೋಜನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.

 ಈ ಚಿತ್ರದಲ್ಲಿ ಕಾಣುವಂತೆ ಉತ್ಖನನ ಪ್ರದೇಶವನ್ನು ಚೌಕಗಳ ಜಾಲ (Grid) ರೂಪದಲ್ಲಿ ವಿಭಜಿಸಲಾಗಿದೆ.

1. ಚೌಕಗಳ ವಿನ್ಯಾಸ

  • ಎಲ್ಲಾ ಪ್ರದೇಶವನ್ನು ಸಮಾನ ಗಾತ್ರದ ಚೌಕಗಳಾಗಿ ಹಂಚಲಾಗಿದೆ
  • ಉದಾಹರಣೆ: A1, B1, C1, A2, B2, C2 ಇತ್ಯಾದಿ

ಪ್ರತಿ ಚೌಕವು ಒಂದು ಉತ್ಖನನ ಗುಂಡಿ (Pit)

2. ಅಡ್ಡಗೋಡೆಗಳು (Baulks)

  • ಚೌಕಗಳ ನಡುವೆ ಬಿಡಲಾಗಿರುವ ಜಾಗಗಳನ್ನು ಅಡ್ಡಗೋಡೆಗಳು ಎಂದು ಕರೆಯುತ್ತಾರೆ
  • ಇವು ಮಣ್ಣಿನ ಗೋಡೆಗಳಾಗಿ ಉಳಿಯುತ್ತವೆ

ಉಪಯೋಗ:

  • ಪದರಗಳನ್ನು (layers) ಗಮನಿಸಲು ಸಹಾಯ
  • ಭೂಮಿಯ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಉಪಯುಕ್ತ

3. ಗೂಟಗಳು ಮತ್ತು ಬಿಂದುಗಳು

  • ಚಿತ್ರದಲ್ಲಿ ಕಾಣುವ ಕಪ್ಪು ಬಿಂದುಗಳು ಗೂಟಗಳನ್ನು (pegs) ಸೂಚಿಸುತ್ತವೆ
  • ಇವು ಜಾಲವನ್ನು ಸರಿಯಾಗಿ ಗುರುತಿಸಲು ಬಳಸಲಾಗುತ್ತದೆ

4. ಹೆಸರೀಕರಣ (Labeling System)

  • ಅಡ್ಡ ದಿಕ್ಕಿನಲ್ಲಿ → A, B, C, D
  • ಲಂಬ ದಿಕ್ಕಿನಲ್ಲಿ → 1, 2, 3

ಆದ್ದರಿಂದ:

  • A1, B1, C1 → ಮೊದಲ ಸಾಲು
  • A2, B2, C2 → ಎರಡನೇ ಸಾಲು

5. ಗುಂಡಿಗಳು (Pits)

  • ಕೆಲವು ಚೌಕಗಳಲ್ಲಿ ಹಚ್ಚಿದ (shaded) ಭಾಗಗಳು ಉತ್ಖನನಗೊಂಡ ಗುಂಡಿಗಳನ್ನು ಸೂಚಿಸುತ್ತವೆ
  • “Pit” ಎಂದು ಗುರುತಿಸಲಾಗಿದೆ

ಈ ರೀತಿಯ ಜಾಲ ವಿನ್ಯಾಸದಿಂದ:

  • ಪ್ರತಿ ಗುಂಡಿಯನ್ನು ಸರಿಯಾಗಿ ಗುರುತಿಸಲು ಸಾಧ್ಯ
  • ಸಿಕ್ಕ ಅವಶೇಷಗಳನ್ನು ನಿಖರವಾಗಿ ದಾಖಲಿಸಬಹುದು
  • ಉತ್ಖನನ ವೈಜ್ಞಾನಿಕ ಮತ್ತು ಕ್ರಮಬದ್ಧವಾಗುತ್ತದೆ 

ಈ ವಿಧಾನದಲ್ಲಿ ಉತ್ಖನನ ಮಾಡುವಾಗ ಸಿಗುವ ಅವಶೇಷಗಳನ್ನು ಸರಿಯಾಗಿ ದಾಖಲಿಸಲು ಮತ್ತು ಅವುಗಳನ್ನು ವರ್ಗೀಕರಿಸಲು ಬಳಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಉತ್ಖನನ ಮಾಡಬೇಕಾದ ಪ್ರದೇಶವನ್ನು ಸಮಾನ ಅಳತೆಯ ಚಿಕ್ಕ ಚಿಕ್ಕ ಚೌಕಗಳನ್ನಾಗಿ ವಿಭಜಿಸಲಾಗುತ್ತದೆ. ಪ್ರತಿ ಎರಡು ಚೌಕಗಳ ನಡುವೆ ನಿಗದಿತ ಅಂತರದಲ್ಲಿ ಮಣ್ಣಿನ ಗೋಡೆಗಳನ್ನು ಬಿಡಲಾಗುತ್ತದೆ ಇವುಗಳನ್ನು ಅಡ್ಡ ಗೋಡೆಗಳು ಎಂದು ಕರೆಯಲಾಗುತ್ತದೆ. ಹೀಗೆ ವಿಂಗಡಿಸಿದ ಚೌಕಗಳ ವಿನ್ಯಾಸ ಜಾಲಂದರ ವಿನ್ಯಾಸದಂತೆ ಕಾಣುವುದರಿಂದ ಇದಕ್ಕೆ ಜಾಲಂದರ ವಿನ್ಯಾಸ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಆರಂಭದಲ್ಲಿ ಉತ್ಖನನ ಮಾಡುವಾಗ ಎಷ್ಟು ಆಳದವರೆಗೆ ಹೋಗಬಹುದು ಎಂಬುದನ್ನು ಮೊದಲೇ ನಿರ್ಧರಿಸಲಾಗುತ್ತದೆ. ಹೀಗೆ ನಿರ್ಧರಿಸಲಾದ ಪ್ರಮಾಣಕ್ಕಿಂತ ಒಂದು ಅಡಿ ಅಥವಾ ಮೀಟರ್ ಉದ್ದದ ಚೌಕವನ್ನು ಕೊರೆಯಬೇಕಾಗುತ್ತದೆ. ಉದಾ: ಉತ್ಖನನವು 5 ಮೀಟರ್‌ಗಳಷ್ಟು ಆಳದವರೆಗೆ ಹೋಗಬಹುದು ಎಂದು ನಿರ್ಧಾರ ಮಾಡಿದರೆ ಉತ್ಖನನಗೊಳ್ಳುವ ಚೌಕದ ಗುಂಡಿಯ ಉದ್ದಗಲ 5X5 ಮೀಟರ್ ಹಾಗೂ ಇದಕ್ಕಾಗಿ ನಿರ್ಮಿಸಲಾದ ಜಾಲಂದರದ ವಿನ್ಯಾಸ ಚೌಕದ ಉದ್ದಗಲಗಳು 6X6  ಮೀ ಇರಬೇಕು. ಆಗ ಸುಮಾರು 1 ಮೀ ಅಳತೆಯ ಅಡ್ಡಗೋಡೆಗಳಾಗಿ ಬಿಡಬೇಕಾಗುತ್ತದೆ. ಆದರೆ ಉತ್ಖನನಕ್ಕಾಗಿ ಕಾಯ್ದಿರಿಸಲಾದ ಚೌಕದ ಕನಿಷ್ಠ ಉದ್ದಗಲಗಳು 3X3 ಮೀಟರ್ ಇರಲೇಬೇಕು.

ಉತ್ಖನನಕ್ಕೆ ಹೋಗುವ ಮೊದಲು ನಿವೇಶನದ ಮೇಲ್ಮೈಯನ್ನು ಸ್ವಚ್ಛಗೊಳಿಸಬೇಕು. ಅದಕ್ಕೆ ಪೂರಕವಾದ ನಕ್ಷೆಯನ್ನು ತಯಾರಿಸಬೇಕು. ಆಗ ಮಾತ್ರ ಉತ್ಖನನದ ಕ್ರಿಯೆ ಸುಲಭವಾಗುತ್ತದೆ. ಉತ್ಖನನದ ವೇಳೆಯಲ್ಲಿ ದಿಕ್ಕುಗಳನ್ನು ಗಮನದಲ್ಲಿ ಇರಿಸಿಕೊಂಡು ನೆಲೆಯಲ್ಲಿ ಒಂದು ಸೂತ್ರ ರೇಖೆಯನ್ನು ಸ್ಥಾಪಿಸಬೇಕು. ಮೂಲಸೂತ್ರ ರೇಖೆಯ ಆರಂಭಿಕ ಬಿಂದುವಿನಲ್ಲಿ ಸುಮಾರು 4X4 ಸೆಂ.ಮೀ ಬದಿಗಳುಳ್ಳ 40 ಸೆಂ.ಮಿ ಉದ್ದದ ಚೂಪಾದ ಒಳ್ಳೆಯ ಮರದ ಗೂಟವನ್ನು ನೆಡಬೇಕು. ಇದರ ನಡುವಿನ ಬಿಂದುವಿಗೆ ದಾರವನ್ನು ಕಟ್ಟಲು ಒಂದು ಮೊಳೆಯನ್ನು ಹೊಡೆಯಬೇಕು. ಇದು ಜಾಲಂದರ ವಿನ್ಯಾಸ ವ್ಯವಸ್ಥೆಯ ಮೂಲ ಬಿಂದು ಎಂದು ನಿರ್ಧರಿಸಬೇಕು. ಈ ಮೂಲ ಬಿಂದುವಿನಿಂದ ಪೂರ್ವ ಹಾಗೂ ದಕ್ಷಿಣಕ್ಕೆ ಅಷ್ಟಷ್ಟೇ ನಿರ್ಧರಿಸಿದ ಪ್ರಮಾಣಕ ಅನುಗುಣವಾಗಿ ಗೂಟಗಳನ್ನು ನೆಡಬೇಕು.

ಒಂದು ಬದಿಯ ಗೂಟಗಳಿಗೆ ರೋಮನ್ ಅಕ್ಷರಗಳಿಂದ ಇನ್ನೊಂದು ಬದಿಯ ಗೂಟಗಳಿಗೆ ಅರಾಬಿಕ್ ಸಂಖ್ಯೆಗಳನ್ನು ಇಟ್ಟು ಹೆಸರಿಸಬೇಕು. ನಂತರ ಇನ್ನುಳಿದ ಗೂಟಗಳನ್ನು ಮೇಲಿನ ಗೂಟಗಳಿಗೆ ಸಮಾನಾಂತರವಾಗಿ ನೆಡಬೇಕು. ಇದರಿಂದ ಜಾಲಂದರ ವಿನ್ಯಾಸ ನಿರ್ಮಾಣವಾಗುತ್ತದೆ. ಹೀಗೆ ನಿರ್ಮಾಣವಾದ ಪ್ರತಿಯೊಂದು ಚೌಕವು ಉತ್ಖನನ ಮಾಡುವ ಗುಂಡಿಗಳಾಗುತ್ತವೆ. ಪ್ರತಿ ಗೂಟಕ್ಕೂ ಹೆಸರನ್ನು ನೀಡಿದ್ದರಿಂದ ಆಯಾ ಗೂಟಗಳ ಹೆಸರೇ ಗುಂಡಿಯ ಹೆಸರುಗಳಾಗಿರುತ್ತವೆ. ಇದರಿಂದ ಉತ್ಖನನ ಮಾಡಿದ ಅವಶೇಷಗಳನ್ನು ಸುಲಭವಾಗಿ ದಾಖಲು ಮಾಡಿಕೊಳ್ಳಬಹುದು..

ಜಾಲಂದರ ವಿನ್ಯಾಸದ ಉಪಯುಕ್ತತೆಗಳು:   ಜಾಲಂದರ ವಿನ್ಯಾಸ ವ್ಯವಸ್ಥೆಯ ಪ್ರಯೋಜನಗಳು ಈ ಕೆಳಗಿನಂತಿವೆ.

  1. ಉತ್ಖನನ ಪ್ರದೇಶದ ನಕ್ಷೆ ಹಾಗೂ ಛಾಯಾಚಿತ್ರಗಳನ್ನು ತೆಗೆಯಲು ಈ ಚೌಕುಗಳು ಚೌಕಟ್ಟಿನಂತೆ ಸಹಾಯ ಮಾಡುತ್ತವೆ.
  2. ಒಂದೇ ಬಾರಿಗೆ ವಿಶಾಲವಾದ ಪ್ರದೇಶದಲ್ಲಿ ಕ್ರಮಬದ್ಧವಾದ ಕೆಲಸ ಮಾಡಲು ಇದು ಅನುಕೂಲವಾಗಿದೆ.
  3. ಅವಶೇಷಗಳು ದೊರೆತ ನಿಖರವಾದ ಸ್ಥಳಗಳನ್ನು ಗುರುತಿಸಲು ಈ ಗ್ರಿಡ್ ಸಹಾಯ ಮಾಡುತ್ತದೆ.
  4. ಇದು ಸಾಮಾನ್ಯವಾಗಿ ವಿಶಾಲವಾದ ಅಥವಾ ಸಮತಲ ಉತ್ಖನನ ವಿಧಾನಗಳಲ್ಲಿ ಬಳಸುವ ಒಂದು ತಾಂತ್ರಿಕ ಕ್ರಮವಾಗಿದೆ.
  5. ಇತಿಹಾಸದ ವಿವಿಧ ಕಾಲಘಟ್ಟಗಳ ಸಂಸ್ಕೃತಿಯನ್ನು ವಿಸ್ತಾರವಾಗಿ ಅರಿತುಕೊಳ್ಳಲು ಇದೊಂದು ಉತ್ತಮ ಮಾರ್ಗವಾಗಿದೆ.
  6. ಮೂಲ ಸೂತ್ರರೇಖೆಗೆ ತೊಂದರೆಯಾಗದಂತೆ ಅಗತ್ಯಕ್ಕೆ ತಕ್ಕಂತೆ ಒಂದು ಚೌಕ ಗುಂಡಿಯನ್ನು ತೋಡಬಹುದು.
  7. ಜಾಲಂದರ ವಿನ್ಯಾಸ ವ್ಯವಸ್ಥೆಯ ಉತ್ಖನನವು ಯಾವುದಾದರೂ ಒಂದು ನಿವೇಶನವು ಬಹಿರಂಗಗೊಳಿಸುವ ಪ್ರಾದೇಶಿಕ ಉತ್ಖನನವಾಗಿದೆ.
  8. ಬೇರೆ ಬೇರೆ ಗುಂಡಿಗಳ ಅಡ್ಡಗೋಡೆಗಳಲ್ಲಿ ಕಾಣುವ ಸ್ತರ ವಿಂಗಡೆಯನ್ನು ಒಂದಕ್ಕೊಂದು ಹೋಲಿಕೆ ಮಾಡಿ ನೋಡಬಹುದು.
  9. ಉತ್ಖನನ ಸಮಯದಲ್ಲಿ ಗುಂಡಿಗಳನ್ನು ತೋಡಿದಾಗ ಸಿಗುವ ಮಣ್ಣನ್ನು ದೂರದವರೆಗೆ ಸಾಗಿಸಲು ಅಡ್ಡಗೋಡೆಗಳು ದಾರಿಯಂತಾಗುತ್ತವೆ.
  10. ಗುಂಡಿಗಳು ಸಾಕಷ್ಟು ಅಗಲವಾಗಿರುವುದರಿಂದ ಗುಂಡಿಯ ಅಡ್ಡಗೋಡೆಗಳ ಮೇಲೆ ಸಾಕಷ್ಟು ಬೆಳಕು ಬೀಳುತ್ತದೆ.
  11. ಪ್ರತಿ ಚೌಕಗುಂಡಿಯ ಒಂದು ಮೂಲೆಯಲ್ಲಿ ಚಿಕ್ಕ ನಿಯಂತ್ರಣ ಗುಂಡಿಯನ್ನು ತೋಡಿ ಮುಂಬರಲಿರುವ ಸ್ತರದ ಸ್ವರೂಪ, ಗಾತ್ರ ಹಾಗೂ ಅದರಲ್ಲಿರುವ ಪ್ರಾಚ್ಯ ಅವಶೇಷಗಳ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಬಹುದು.

ಸ್ಮಶಾನ ನಿವೇಶನ ಉತ್ಖನನ:

ಸ್ಮಶಾನಗಳ ಉತ್ಖನನಗಳಿಗೆ ಜಾಲಂದರ ವಿನ್ಯಾಸ ವ್ಯವಸ್ಥೆ ಬಳಸಬಹುದಾದರೂ ಕೆಲವು ವಿಶೇಷ ಬಗೆಯ ದಫನ ದಿನ್ನೆಗಳು ಹಾಗೂ ಬೃಹತ್ ಶಿಲಾಗೋರಿಗಳ ಉತ್ಖನನಕ್ಕೆ ಚತುರ್ಭಾಗ ಪದ್ದತಿಯನ್ನು ಬಳಸಲಾಗುತ್ತದೆ. “ದಫನ ದಿನ್ನೆಗಳೆಂದರೆ ಶವವನ್ನು ಹೂಳಿದ ಸ್ಥಳವನ್ನು ಉದ್ದೇಶಪೂರ್ವಕವಾಗಿ ಕಲ್ಲು ಮಣ್ಣುಗಳಿಂದ ಮುಚ್ಚಿ ನಿರ್ಮಿಸಲಾದ ವೃತ್ತಾಕಾರದ ಅಥವಾ ಉದ್ದನೆಯ ದಿನ್ನೆಗಳು ಎಂದರ್ಥ. ಬೃಹತ್‌ ಶಿಲಾಗೋರಿಗಳಲ್ಲಿ ಎರಡು ವಿಧಗಳಿದ್ದು ಅವುಗಳಲ್ಲಿ ಕೋಣೆಯ ರೀತಿಯ ಗೋರಿಗಳು ಮತ್ತು ಕುಣಿಯಲ್ಲಿರುವ ದಫನಗಳು. ಇವುಗಳನ್ನು ಕಲ್ಲು ಹಾಗೂ ಮಣ್ಣಿನಿಂದ ಮುಚ್ಚಲಾಗಿರುತ್ತದೆ. ವೃತ್ತಾಕಾರದ ದಫನ ದಿನ್ನೆ ಹಾಗೂ ಕುಣಿಯಲ್ಲಿಯ ದಫನ ದಿನ್ನೆಗಳ ಸ್ಥಳಗಳನ್ನು ಚತುರ್ಭಾಗ ಉತ್ಖನನ ಪದ್ಧತಿಯಂತೆ ಅಗೆದು ತೆಗೆಯಲಾಗುತ್ತದೆ. ಕುಣಿಯಲ್ಲಿರುವ ದಫನ ಸ್ಥಳಗಳು ಸಾಮಾನ್ಯವಾಗಿ ಮೇಲ್ಮೈಯಲ್ಲಿ ಕಲ್ಲಿನ ಕಟ್ಟೆಯಿಂದ ದುಂಡಾಗಿ ಸುತ್ತುವರೆಯಲ್ಪಟ್ಟಿರುತ್ತವೆ.

ಈ ಹಂತದಲ್ಲಿ ಸಮಾಧಿ ಗುಡ್ಡವನ್ನು ಉತ್ತರ–ದಕ್ಷಿಣ ಮತ್ತು ಪೂರ್ವ–ಪಶ್ಚಿಮ ರೇಖೆಗಳ ಮೂಲಕ ನಾಲ್ಕು ಭಾಗಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಭಾಗವನ್ನು ಕ್ರಮಬದ್ಧವಾಗಿ ಉತ್ಖನನ ಮಾಡಲಾಗುತ್ತದೆ. ಮಧ್ಯದಲ್ಲಿ ಕ್ರಾಸ್ ಆಕಾರದ Baulk ಅನ್ನು ಬಿಡಲಾಗುತ್ತದೆ, ಇದು ಮಣ್ಣಿನ ಪದರಗಳನ್ನು (Stratigraphy) ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಈ ವಿಧಾನದಿಂದ ಪ್ರತಿ ಭಾಗದ ಫಲಿತಾಂಶಗಳನ್ನು ಹೋಲಿಕೆ ಮಾಡಿ ಸಮಾಧಿಯ ರಚನೆಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು.

ಚತುರ್ಭಾಗ ಪದ್ಧತಿ:  ಈ ವಿಧಾನವನ್ನು ಸಾಮಾನ್ಯವಾಗಿ ಬೃಹತ್ ಶಿಲಾಯುಗದ ಗೋರಿಗಳು ಅಥವಾ ದಿಬ್ಬಗಳಂತ ವೃತ್ತಾಕಾರದ ರಚನೆಗಳನ್ನು ಅಧ್ಯಯನ ಮಾಡಲು ಬಳಸಲಾಗುತ್ತದೆ. ಉತ್ಖನನಕ್ಕೆ ಒಳಪಡುವ ದಿಬ್ಬ ಅಥವಾ ವೃತ್ತಾಕಾರದ ಸ್ಥಳವನ್ನು ಉತ್ತರ-ದಕ್ಷಿಣ ಹಾಗೂ ಪೂರ್ವ-ಪಶ್ಚಿಮ ರೇಖೆಗಳ ಮೂಲಕ ಪರಸ್ಪರ 90° ಕೋನದಲ್ಲಿ ಛೇದಿಸುವಂತೆ ನಾಲ್ಕು ಸಮಾನ ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಈ ನಾಲ್ಕು ಭಾಗಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿರುವ ಎರಡು ಭಾಗಗಳನ್ನು (ಉದಾ: 1 ಮತ್ತು 3 ನೇ ಭಾಗ) ಮೊದಲು ಉತ್ಖನನ ಮಾಡಬೇಕು. ಹೀಗೆ ಮಾಡುವುದರಿಂದ ಉತ್ಖನನ ಮಾಡಿದ ಭಾಗಗಳಲ್ಲಿ ಮಣ್ಣಿನ ಪದರುಗಳ ವಿನ್ಯಾಸ ಮತ್ತು ಒಳಗಿನ ರಚನೆಗಳನ್ನು ಸ್ಪಷ್ಟವಾಗಿ ಗಮನಿಸಲು ಸಾಧ್ಯವಾಗುತ್ತದೆ ಉಳಿದ ಎರಡು ಭಾಗಗಳನ್ನು ನಂತರದ ಹಂತದಲ್ಲಿ ಪರೀಕ್ಷಿಸಬೇಕು.

ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ 1947ರಲ್ಲಿ ಪುರಾತತ್ವ ಸರ್ವೇಕ್ಷಣ ಇಲಾಖೆಯವರು ಬಹಳ ಜತನದಿಂದ ಶಿಲಾಗೋರಿಗಳನ್ನು ಉತ್ಖನನ ಮಾಡಿದ್ದಾರೆ. ಇದರಿಂದ ಕುಣಿಯಲ್ಲಿನ ದಫನಗಳಲ್ಲಿ ಕುಣಿಯ ಪೂರ್ವ ಭಾಗದ ಬದಿಯಲ್ಲಿ ಕುಣಿಯೊಳಗೆ ಇಳಿಯಲು ಅನುಕೂಲವಾಗುವಂತೆ ಮೇಲಿನಿಂದ ಇಳಿಜಾರು ಮಾಡಿರುವುದು ಕಂಡುಬಂದಿದೆ. ಇದು ಅಲ್ಲದೆ ಶವಸಂಸ್ಕಾರ ಮಾಡಿ ಜನರು ಯಾವ ದಿಕ್ಕಿನಿಂದ ಹೇಗೆ ಕುಣಿಯೊಳಗೆ ಇಳಿದು ವಸ್ತುಗಳನ್ನು ಇಟ್ಟರು ಎಂಬುದು ಸಹ ಸ್ಪಷ್ಟವಾಯಿತು. ಶವದ ಕುಣಿಗಳ ದಲ್ಲಿ ಕೂಲಿ ಕಾರ್ಮಿಕರಿಂದ ಕೆಲಸ ಮಾಡಿಸುವ ಬದಲಾಗಿ ಸಾಕಷ್ಟು ಅನುಭವಿ ಕೂಲಿ ಕಾರ್ಮಿಕರಿಂದ ಉತ್ಖನನ ಮಾಡಬೇಕು. ಅಂದಾಗ ಮಾತ್ರ ಸ್ತರವಿಂಗಡಣೆಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ.

ಬೃಹತ್ ಶಿಲೆಗಳನ್ನು ಉಪಯೋಗಿಸಿ ನಿರ್ಮಿಸಿರುವ ಕೊಠಡಿಯಂತಹ ಗೋರಿಗಳನ್ನು ಉತ್ಖನನ ಮಾಡುವ ಮುಂಚೆ ಕೊಠಡಿಯ ಹೊರಭಾಗಗಳು ಸ್ಪಷ್ಟವಾಗಿ ಕಾಣುವಂತೆ ಮಾಡಬೇಕು. ತದನಂತರ ಕೊಠಡಿಯ ಒಳಭಾಗವನ್ನು ಉತ್ಖನನ ಮಾಡುವಾಗ ಮೊದಲು ಅರ್ಧ ಭಾಗ ಕೊನೆಗೆ ಇನ್ನರ್ಧ ಭಾಗವನ್ನು ದಕ್ಷತೆಯಿಂದ ಸಾವಕಾಶವಾಗಿ ಅಗೆಯಬೇಕು. ಹೀಗೆ ಅಗೆದಾಗ ದೊರಕಿದ ಎಲ್ಲಾ ವಸ್ತುಗಳನ್ನು ಸಚಿತ್ರ ವಿವರದೊಂದಿಗೆ ದಾಖಲು ಮಾಡಿಕೊಳ್ಳಬೇಕು. ಕೊಠಡಿಯಂತಹ ಗೋರಿಯ ರಚನೆಯು ಹಾಳಾಗದಂತೆ ನೋಡಿಕೊಳ್ಳಬೇಕು. ಉತ್ಖನನ ಮುಗಿದ ನಂತರ ಕಲ್ಲು ಚಪ್ಪಡಿಯನ್ನು ಹಾಗೆ ಜೋಡಿಸಬೇಕು. ಎಲ್ಲಾ ವಿಧಾನಗಳಲ್ಲಿಯೂ ಒಂದಿಲ್ಲ ಒಂದು ಕಡೆ ಕೊರತೆ ಎದ್ದು ಕಾಣುತ್ತದೆ. ತಾಳ್ಮೆ ಹಾಗೂ ಅನುಭವದಿಂದ ಉತ್ಖನನದ ವಿಧಾನವನ್ನು ಹೆಚ್ಚು ಹೆಚ್ಚು ಸಮಗ್ರವಾಗಿಸುವ ಪ್ರಯತ್ನ ಸಾಗುತ್ತಲೇ ಇದೆ.