ಅರ್ಥಶಾಸ್ತ್ರದ ವ್ಯಾಖ್ಯೆಗಳು

ಅರ್ಥಶಾಸ್ತ್ರದ ವ್ಯಾಖ್ಯೆಗಳು

ಅರ್ಥಶಾಸ್ತ್ರವು ಸಾಮಾಜಿಕ ವಿಜ್ಞಾನಗಳಲ್ಲೇ ಅತ್ಯಂತ ಪ್ರಮುಖ ವಿಜ್ಞಾನವಾಗಿ ಸಾಮಾಜಿಕ ವಿಜ್ಞಾನಗಳ ರಾಣಿ ಎಂದು ಕರೆಸಿಕೊಂಡಿದೆ. ಶ್ರೀಮತಿ ಬಾರ್ಬರಾ ವ್ಯೂಟನ್ ಎಂಬ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರದ ಪ್ರಾಮುಖ್ಯತೆಯನ್ನು ವಿವರಿಸುತ್ತಾ ನಿಮಗೆ ಸ್ವಲ್ಪವೇ ಸ್ವಲ್ಪವಾದರೂ ಅರ್ಥಶಾಸ್ತ್ರದ ಜ್ಞಾನ ಇರದೇ ಹೋದರೆ ನೀವು ನಿಜವಾದ ನಾಗರೀಕರಾಗಲಾರಿರಿ ಎಂದು ಹೇಳಿದ್ದಾರೆ. ಅರ್ಥಶಾಸ್ತ್ರದ ಅಧ್ಯಯನವು ಕೇವಲ ಜ್ಞಾನದಾಯಕವಲ್ಲದೆ ಫಲದಾಯಕವೂ ಆಗಿದೆ ಎಂದು ಪ್ರೊ.ಎ.ಸಿ.ಪಿಗು ಎಂಬ ಅರ್ಥಶಾಸ್ತ್ರಜ್ಞರು ಹೇಳಿದ್ದಾರೆ.

ಅರ್ಥಶಾಸ್ತ್ರದ ಹುಟ್ಟು

“ಎಕನಾಮಿಕ್ಸ್‌” ಎಂಬ ಪದವನ್ನು ಗ್ರೀಕ್ ಭಾಷೆಯ ʻʻಇಕೋಸ್” ಮತ್ತು “ನೋಮಸ್” ಎಂಬ ಎರಡು ಪದಗಳಿಂದ ಪಡೆಯಲಾಗಿದೆ. ಗ್ರೀಕ್ ಭಾಷೆಯಲ್ಲಿ ʻʻಇಕೋಸ್” ಎಂದರೆ ಮನೆ ಎಂತಲೂ, “ನೋಮಸ್” ಎಂದರೆ ನಿರ್ವಹಣೆ ಎಂಬ ಅರ್ಥವುಂಟು. ಆದ್ದರಿಂದ ಗ್ರೀಕ್ ಮೂಲದ ಪ್ರಕಾರ ಏಕನಾಮಿಕ್ಸ್‌ ಅಥವಾ ಎಕೋನೋಮಿಯಾ ಎಂದರೆ “ಗೃಹ ಕೃತ್ಯ ನಿರ್ವಹಣೆ” ಅಥವಾ ಲಭ್ಯವಿರುವ ಮಿತವಾದ ಸಂಪನ್ಮೂಲಗಳನ್ನು ದಕ್ಷವಾಗಿ ಬಳಸಿಕೊಂಡು ಕುಟುಂಬವನ್ನು ನಿರ್ವಹಿಸುವುದು ಎನ್ನುವ ಅರ್ಥ ಬರುತ್ತದೆ. ಕ್ರಿಸ್ತ ಪೂರ್ವದಲ್ಲಿ ಗ್ರೀಕರ ಕಾಲದಿಂದ ತೀರ ಇತ್ತೀಚಿನವರೆಗೆ ಅಂದರೆ ಕ್ರಿ.ಶ. 1890ರ ವರೆಗೂ ಅರ್ಥಶಾಸ್ತ್ರವು ರಾಜನೀತಿ ಶಾಸ್ತ್ರದ ಭಾಗವಾಗಿ ʻʻರಾಜನೀತಿ ಅರ್ಥಶಾಸ್ತ್ರ” ಎಂದು ಕರೆಯಿಸಿಕೊಂಡಿತ್ತು.

ಕ್ರಿ.ಶ. 1890 ರಲ್ಲಿ ಪ್ರೋ. ಆಲ್ ಫ್ರೆಡ್ ಮಾರ್ಷಲ್ ರವರು ತಮ್ಮ “ಪ್ರಿನ್ಸಿಪಲ್ಸ್ ಆಫ್ ಎಕನಾಮಿಕ್ಸ್” ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರ ಎಂಬ ಪದನಾಮವನ್ನು ಸ್ವತಂತ್ರವಾಗಿ ಬಳಸಿದರು. ಅರ್ಥಶಾಸ್ತ್ರವನ್ನು ಬೇರೆಲ್ಲ ಸಾಮಾಜಿಕ ವಿಜ್ಞಾನಗಳಿಂದ ಬೇರ್ಪಡಿಸಿ ಒಂದು ಸ್ವತಂತ್ರ ಶಾಖೆಯನ್ನಾಗಿ ಮಾಡಿದ ಕೀರ್ತಿಯು ಮಾರ್ಷಲ್ ಅವರಿಗೆ ಸಲ್ಲುತ್ತದೆ.

ಅರ್ಥಶಾಸ್ತ್ರದ ವ್ಯಾಖ್ಯೆಗಳು.

ಅರ್ಥಶಾಸ್ತ್ರಕ್ಕೆ ಹಲವಾರು ಶತಮಾನಗಳ ಇತಿಹಾಸವಿದ್ದು ಒಂದು ಪ್ರಮುಖ ಸಾಮಾಜಿಕ ವಿಜ್ಞಾನವಾಗಿದ್ದರೂ, ಇದಕ್ಕೆ ಒಂದು ಖಚಿತವಾದ ವ್ಯಾಖ್ಯೆ ಲಭ್ಯವಿಲ್ಲವೆಂದೇ ಹೇಳಬಹುದು. ಇಂತಹ ಪರಿಸ್ಥಿತಿಗೆ ಅರ್ಥಶಾಸ್ತ್ರದ ಸ್ವರೂಪ ಮತ್ತು ವ್ಯಾಪ್ತಿ ಹಾಗೂ ಅರ್ಥಶಾಸ್ತ್ರಜ್ಞರಲ್ಲಿರುವ ಭಿನ್ನಾಭಿಪ್ರಾಯಗಳೇ ಕಾರಣವೆಂದು ಹೇಳಬಹುದು. ಶ್ರೀಮತಿ ಬಾರ್ಬರ್ ವ್ಯೂಟನ್ ಎಂಬ ಅರ್ಥಶಾಸ್ತ್ರಜ್ಞರು ʻʻಆರು ಜನ ಅರ್ಥಶಾಸ್ತ್ರಜ್ಞರು ಒಂದು ಕಡೆ ಕುಳಿತು ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯನ್ನು ಹುಡುಕಿದರೆ ಆಗ ಏಳು ವ್ಯಾಖ್ಯೆಗಳು ಹೊರಹೊಮ್ಮುತ್ತವೆ ” ಎಂದು ಹೇಳಿದ್ದಾರೆ. ಜೆ.ಎಂ.ಕೇನ್ಸ್‌ರವರ ಪ್ರಕಾರ “ಅರ್ಥಶಾಸ್ತ್ರವು ಅಸಂಖ್ಯ ವ್ಯಾಖ್ಯೆಗಳಿಂದ ಕತ್ತು ಹಿಸುಕಲ್ಪಟ್ಟಿದೆ”. ಅರ್ಥಶಾಸ್ತ್ರದ ಕುರಿತಾದ ವ್ಯಾಖ್ಯೆಗಳನ್ನು ಒಟ್ಟು ನಾಲ್ಕು ವಿಭಾಗಗಳಾಗಿ ವರ್ಗೀಕರಿಸಬಹುದು. ಅವುಗಳೆಂದರೆ,

1. ಸಂಪತ್ತಿನ ವ್ಯಾಖ್ಯೆ

2. ಯೋಗಕ್ಷೇಮ ವ್ಯಾಖ್ಯೆ

3. ವಿರಳತೆಯ ವ್ಯಾಖ್ಯೆ

4. ಅಭಿವೃದ್ಧಿಪರ ವ್ಯಾಖ್ಯೆ

1. ಸಂಪತ್ತಿನ ವ್ಯಾಖ್ಯೆ :

ಅರ್ಥಶಾಸ್ತ್ರದ ಪಿತಾಮಹ ಆಡಂಸ್ಮಿತ್ ಮತ್ತು ಅವನ ಅನುಯಾಯಿಗಳು ಸಂಪತ್ತಿನ ವ್ಯಾಖ್ಯೆಯನ್ನು ನೀಡಿದರು. ಇದು ಅರ್ಥಶಾಸ್ತ್ರದ ಮೊದಲ ವ್ಯಾಖ್ಯಾನವಾಗಿರುವುದಲ್ಲದೆ ಸಂಪ್ರದಾಯ ವ್ಯಾಖ್ಯಾನವೆಂದೂ ಕರೆಸಿಕೊಂಡಿದೆ. 1776 ರಲ್ಲಿ ಪ್ರಕಟವಾದ ಆಡಂಸ್ಮಿತ್ ರವರ ಮೇರು ಕೃತಿ ‘ರಾಷ್ಟ್ರಗಳ ಸಂಪತ್ತಿನ ಸ್ವರೂಪ ಮತ್ತು ಕಾರಣಗಳ ಪರಿಶೀಲನೆʼ (An enquiry into the nature and causes of wealth of nations) ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರವು ಸಂಪತ್ತಿನ ವಿಜ್ಞಾನವಾಗಿದೆ ಎಂದು ವ್ಯಾಖ್ಯಾನಿಸಿದರು. ಮಾನವನು ಸಂಪತ್ತನ್ನು ಹೇಗೆ ಗಳಿಸುತ್ತಾನೆ ಮತ್ತು ಅದನ್ನು ಹೇಗೆ ಅನುಭೋಗಿಸುತ್ತಾನೆ ಎಂಬುದನ್ನು ಅಭ್ಯಸಿಸುವುದೇ ಅರ್ಥಶಾಸ್ತ್ರದ ಗುರಿ ಎಂದು ಆಡಂಸ್ಮಿತ್ ರವರು ಅಭಿಪ್ರಾಯಪಡುತ್ತಾರೆ.

ಆಡಂಸ್ಮಿತ್‌ರ ಈ ಅಭಿಪ್ರಾಯವನ್ನು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರಾದ ಜೆ.ಬಿ.ಸೇ, ಡೇವಿಡ್ ರಿಕಾರ್ಡೊ, ಜೆ.ಎಸ್.ಮಿಲ್, ಎಫ್.ಎ.ವಾಕರ್, ಸೀನಿಯರ್ ಮೊದಲಾದವರು ಬೆಂಬಲಿಸಿದರು. ಫ್ರೆಂಚ್ ಅರ್ಥಶಾಸ್ತ್ರಜ್ಞ ಜೆ.ಬಿ.ಸೇ. ಅವರು, ‘ಅರ್ಥಶಾಸ್ತ್ರ ಸಂಪತ್ತನ್ನು ಪರಿಗಣಿಸುವ ವಿಜ್ಞಾನʼ ಎಂದು ವ್ಯಾಖ್ಯಾನಿಸಿ ಸ್ಮಿತ್ ಅಭಿಪ್ರಾಯವನ್ನು ಅನುಮೋದಿಸಿದರು. ಅದೇ ರೀತಿ ಜೆ.ಎಸ್.ಮಿಲ್ ಅವರು “ಅರ್ಥಶಾಸ್ತ್ರವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆಯ ಪ್ರಾಯೋಗಿಕ ವಿಜ್ಞಾನ” ಎಂದು ವ್ಯಾಖ್ಯಾನಿಸಿದರು. ಅರ್ಥಶಾಸ್ತ್ರವು ಸಂಪತ್ತಿನ ಉತ್ಪಾದನೆ ಮತ್ತು ವಿತರಣೆ ಮತ್ತು ವಿನಿಮಯದ ಪ್ರಾಯೋಗಿಕ ವಿಜ್ಞಾನ ಎಂದು ಸಂಪ್ರದಾಯ ಪಂಥದ ಅರ್ಥಶಾಸ್ತ್ರಜ್ಞರು ಪರಿಗಣಿಸಿದ್ದರು

ಸಂಪತ್ತಿನ ವ್ಯಾಖ್ಯಾನದ ಪ್ರಮುಖ ಅಂಶಗಳು ಇಂತಿವೆ.

1. ಅರ್ಥಶಾಸ್ತ್ರ ಸಂಪತ್ತಿನ ಅಧ್ಯಯನ ಮಾಡುತ್ತದೆ.

2. ಸಂಪತ್ತಿನ ಉತ್ಪಾದನೆ, ಅನುಭೋಗ, ವಿತರಣೆಯನ್ನು ಕುರಿತಾಗಿ ಅಭ್ಯಸಿಸುತ್ತದೆ.

3. ಸಂಪತ್ತಿನ ಗಳಿಕೆ ಮತ್ತು ಬಳಕೆ ಅರ್ಥಶಾಸ್ತ್ರದ ಮೊದಲ ಆದ್ಯತೆಯ ಅಂಶಗಳು.

ವಿಮರ್ಶೆ: ಈ ವ್ಯಾಖ್ಯಾನವು ಸಂಪತ್ತಿಗೆ ಅತಿಯಾದ ಪ್ರಾಮುಖ್ಯತೆಯನ್ನು ನೀಡಿದ್ದರಿಂದ ಉಗ್ರ ಟೀಕೆಗೆ ಗುರಿಯಾಯಿತು. ರೆಸ್ಕಿನ್, ಕಾರ್ಲೈಲ್, ಡಿಕಿನ್ಸ್, ಮ್ಯಾಥ್ ಆರ್ನಾಲ್ಡ್ ಮುಂತಾದವರು ಈ ವ್ಯಾಖ್ಯೆಯನ್ನು ಟೀಕಿಸಿದ್ದಾರೆ. ಸಂಪತ್ತು ಎಂದರೆ ಹಣ, ಕೇವಲ ಹಣವನ್ನು ಕುರಿತು ಅಭ್ಯಸಿಸುವುದಾದರೆ ಅದೊಂದು ಕೀಳು ದರ್ಜೆಯ ಶಾಸ್ತ್ರ ಮತ್ತು ಗೌರವಿಸಲು ಅನರ್ಹವಾದ “ಘೋರಶಾಸ್ತ್ರ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸಂಪತ್ತಿನ ವ್ಯಾಖ್ಯಾನದ ಪ್ರಮುಖ ದೋಷಗಳೆಂದರೆ :

1. ಸಂಪತ್ತಿಗೆ ಮಿತಿ ಮೀರಿದ ಪ್ರಾಶಸ್ತ್ಯವನ್ನು ನೀಡಿದೆ. ತನ್ಮೂಲಕ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ.

2. ಮಾನವನ ಯೋಗಕ್ಷೇಮವನ್ನು ಕಡೆಗಣಿಸಿದೆ.

3. ಈ ವ್ಯಾಖ್ಯಾನ ಕೇವಲ ಭೌತಿಕ ವಸ್ತುಗಳನ್ನು ಮಾತ್ರ ಪರಿಗಣಿಸಿ, ಅಭೌತಿಕ ವಸ್ತುಗಳ ಉತ್ಪಾದನೆ ಮತ್ತು ಅನುಭೋಗಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳನ್ನು ಅರ್ಥಶಾಸ್ತ್ರದ ಪರಿಧಿಯಿಂದ ಹೊರಗಿರಿಸಿದೆ.

4. ಸಂಪತ್ತಿನ ವ್ಯಾಖ್ಯಾನವು ವಿವಾದಾತ್ಮಕವೂ ಮತ್ತು ಆವೈಜ್ಞಾನಿಕವೂ ಆಗಿದೆ.

5. ಸಂಪತ್ತಿನ ವ್ಯಾಖ್ಯಾನವು ಅರ್ಥಶಾಸ್ತ್ರ ಸಂಪತ್ತಿನ ವಿಜ್ಞಾನ ಎಂದು ಪರಿಗಣಿಸುವುದರ ಮೂಲಕ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ.

2. ಯೋಗಕ್ಷೇಮ ವ್ಯಾಖ್ಯಾನ

ಆಲ್‌ ಫ್ರೆಡ್ ಮಾರ್ಷಲ್, ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಜ್ ಮುಂತಾದ ಅರ್ಥಶಾಸ್ತ್ರಜ್ಞರು ಈ ಯೋಗಕ್ಷೇಮ ವ್ಯಾಖ್ಯಾನದ ಪ್ರತಿಪಾದಕರಾಗಿದ್ದಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರು ನವ ಸಂಪ್ರದಾಯ ಪಂಥಕ್ಕೆ ಸೇರಿದವರಾಗಿರುವುದರಿಂದ 

ಈ ವ್ಯಾಖ್ಯೆಯನ್ನು “ನವ ಸಂಪ್ರದಾಯ ಪಂಥದ ವ್ಯಾಖ್ಯೆ” ಎಂದೂ ಕರೆಯಲಾಗಿದೆ. ಮಾರ್ಷಲ್ ಮತ್ತು ಅವರ ಅನುಯಾಯಿಗಳು ಸಂಪತ್ತಿಗಿಂತಲೂ ಮಾನವನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದುದರಿಂದ ಈ ವ್ಯಾಖ್ಯಾನವನ್ನು ಯೋಗಕ್ಷೇಮ ವ್ಯಾಖ್ಯೆ ಎಂದು ಕರೆಯಲಾಗಿದೆ.

ಮಾರ್ಷಲ್‌ ರವರು 1890 ರಲ್ಲಿ ಪ್ರಕಟಿಸಿದ “ದಿ ಪಿನ್ಸಿಪಲ್ಸ್ ಆಫ್ ಎಕನಾಮಿಕ್ಸ್” ಎಂಬ ಗ್ರಂಥದಲ್ಲಿ ಅರ್ಥಶಾಸ್ತ್ರವು ಮಾನವನ ದೈನಂದಿನ ವ್ಯವಹಾರಗಳನ್ನು ಕುರಿತು ಅಭ್ಯಸಿಸುತ್ತದೆ. ಮಾನವನ ಯೋಗಕ್ಷೇಮಕ್ಕೆ ಅಗತ್ಯವಿರುವ ಭೌತಿಕ ವಸ್ತುಗಳ ಗಳಿಕೆ ಮತ್ತು ಅವುಗಳ ಉಪಯೋಗದ ವಿಷಯದಲ್ಲಿ ವ್ಯಕ್ತಿ ಮತ್ತು ಸಮಾಜ ನಿರ್ವಹಿಸುವ ಕ್ರಿಯೆಗಳನ್ನು ಅದು ಪರಿಶೀಲಿಸುತ್ತದೆ. ಈ ರೀತಿಯಾಗಿ ಅರ್ಥಶಾಸ್ತ್ರ ಒಂದು ಕಡೆ ಸಂಪತ್ತನ್ನು ಕುರಿತು ಅಭ್ಯಸಿಸಿದರೆ ಮತ್ತೊಂದು ಕಡೆ ಮಾನವನನ್ನೇ ಕುರಿತು ಅಭ್ಯಸಿಸುತ್ತದೆ.

ಮಾರ್ಷಲ್ ಅವರ ವ್ಯಾಖ್ಯಾನ ಅರ್ಥಶಾಸ್ತ್ರದ ಅಭ್ಯಾಸ ವಸ್ತುವನ್ನು ಸಂಪತ್ತಿನಿಂದ ಯೋಗಕ್ಷೇಮಕ್ಕೆ ವರ್ಗಾಯಿಸಿತು. ಮಾರ್ಷಲರ ವ್ಯಾಖ್ಯಾನವು ಮುಖ್ಯವಾಗಿ ನಾಲ್ಕು ಅಂಶಗಳನ್ನು ಒಳಗೊಂಡಿದೆ. ಅವುಗಳು ಈ ಕೆಳಗಿನಂತಿದೆ.

) ಅರ್ಥಶಾಸ್ತ್ರ ಸಂಪತ್ತನ್ನು ಗಳಿಸುವುದನ್ನೇ ಆರ್ಥಿಕ ಚಟುವಟಿಕೆಗಳ ಪರಮ ಉದ್ದೇಶವನ್ನಾಗಿ ಪರಿಗಣಿಸುವುದಿಲ್ಲ. ಮಾರ್ಷಲರ ಪ್ರಕಾರ ಸಂಪತ್ತು ಮಾನವನ ಕಲ್ಯಾಣಕ್ಕೋಸ್ಕರ ಇದೆಯೇ ಹೊರತು ಮಾನವನು ಸಂಪತ್ತಿಗಲ್ಲ, ಸಂಪತ್ತು ಕೇವಲ ಸಾಧನ ಮಾತ್ರ: ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದು ಸಂಪತ್ತು ಗಳಿಕೆಯ ಗುರಿ, ಆದ್ದರಿಂದ ಮಾರ್ಷಲರು ಸಂಪತ್ತನ್ನು ಎರಡನೇ ಸ್ಥಾನಕ್ಕೆ ತಳ್ಳಿದರು.

) ಅರ್ಥಶಾಸ್ತ್ರ ಪ್ರೀತಿ ಮತ್ತು ವಿಶ್ವಾಸ ಹೊಂದಿ ಸಹಬಾಳ್ವೆಯನ್ನು ಇಷ್ಟಪಡುವ ಜನ ಸಾಮಾನ್ಯರನ್ನು ಕುರಿತು ಅಭ್ಯಸಿಸುತ್ತದೆಯೇ ಹೊರತು, ಸಂಪತ್ತಿಗಾಗಿಯೇ ವರ್ತಿಸುವ ಅರ್ಥವನ್ನು ಹೊಂದಿಲ್ಲ.

) ಅರ್ಥಶಾಸ್ತ್ರ ಒಂದು ಸಮಾಜ ವಿಜ್ಞಾನವಾಗಿದ್ದು ಅದು ಸಮಾಜದಲ್ಲಿ ಜೀವಿಸುವ, ಸಮಾಜದ ಮೇಲೆ ಪ್ರಭಾವ ಬೀರುವ ಮತ್ತು ಪ್ರಭಾವಿತನಾಗುವ ವ್ಯಕ್ತಿಯನ್ನು ಕುರಿತು ಅಭ್ಯಸಿಸುತ್ತದೆ. ಅರ್ಥಶಾಸ್ತ್ರ ಮಾನವನನ್ನು ಸಮಾಜದಿಂದ ಪ್ರತ್ಯೇಕಿಸಿ ಅಭ್ಯಸಿಸುವುದಿಲ್ಲ.

) ಅರ್ಥಶಾಸ್ತ್ರ ಕೇವಲ ಭೌತಿಕ ಯೋಗಕ್ಷೇಮವನ್ನು ಕುರಿತು ಅಭ್ಯಸಿಸುತ್ತದೆ ಹಾಗು ಅಭೌತಿಕ ಅಂಶಗಳನ್ನು ನಿರ್ಲಕ್ಷಿಸುತ್ತದೆ. ಮಾರ್ಷಲ್ ಅವರ ಈ ಅಭಿಪ್ರಾಯವನ್ನು ಪ್ರೊ.ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಚ್ ಮುಂತಾದವರು ಸಮರ್ಥಿಸಿದರು. ಪ್ರೊ.ಪಿಗು ಅವರ ಪ್ರಕಾರ, ‘ಆರ್ಥಶಾಸ್ತ್ರವು ಆರ್ಥಿಕ ಯೋಗಕ್ಷೇಮದ ಪರಿಶೀಲನೆಯ ಶಾಸ್ತ್ರ, ಆರ್ಥಿಕ ಯೋಗಕ್ಷೇಮವೆಂದರೆ ಹಣದ ಮಾನದಂಡದಿಂದ ಪ್ರತ್ಯಕ್ಷವಾಗಿಯೋ ಅಥವಾ ಪರೋಕ್ಷವಾಗಿಯೋ ಅಳೆಯಲು ಸಾಧ್ಯವಾಗುವಂತಹುದು’. ಎಡ್ರಿನ್ ಕ್ಯಾನನ್ ರವರ ಪ್ರಕಾರ ‘ಮಾನವನ ಭೌತಿಕ ಯೋಗಕ್ಷೇಮಕ್ಕೆ ಕಾರಣವಾಗುವ ಅಂಶಗಳನ್ನು ಪರಿಶೀಲಿಸುವ ಶಾಸ್ತ್ರವೇ ಅರ್ಥಶಾಸ್ತ್ರ’.

ಟೀಕೆಗಳು : ಮಾರ್ಷಲ್‌ರ ಯೋಗಕ್ಷೇಮ ವ್ಯಾಖ್ಯಾನವು ಸಂಪತ್ತಿನ ವ್ಯಾಖ್ಯಾನದಿಂದ ಅರ್ಥಶಾಸ್ತ್ರಕ್ಕೆ ಅಂಟಿಕೊಂಡಿದ್ದ ಅಪಖ್ಯಾತಿಯನ್ನು ನಿವಾರಿಸಿ ಅದರ ಮಹತ್ವ ಮತ್ತು ವ್ಯಾಪ್ತಿಯನ್ನು ಹಿಗ್ಗಿಸುವಲ್ಲಿ ಯಶಸ್ವಿಯಾದರೂ ಕೂಡ ಅನೇಕ ಕಾರಣಗಳಿಂದ ಟೀಕಿಸಲ್ಪಟ್ಟಿದೆ. ಪ್ರೊ.ಲಿಯೋನೆಲ್ ರಾಬಿನ್ಸ್‌ರವರು ಯೋಗಕ್ಷೇಮ ವ್ಯಾಖ್ಯಾನದ ಪ್ರಮುಖ ಟೀಕಾಕಾರರಾಗಿದ್ದಾರೆ. ಅವರ ಪ್ರಮುಖ ಟೀಕೆಗಳು ಇಂತಿವೆ.

1. ಮಾರ್ಷಲರ ವ್ಯಾಖ್ಯಾನದ ಪ್ರಕಾರ ಕೇವಲ ಭೌತಿಕ ಸರಕುಗಳು ಮಾತ್ರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಆದರೆ ವಾಸ್ತವದಲ್ಲಿ ವೈದ್ಯರು, ಉಪಾಧ್ಯಾಯರು, ವಕೀಲರು, ವಿಜ್ಞಾನಿಗಳು ಮುಂತಾದವರ ಸೇವೆಗಳು ಕೂಡ ಮಾನವನ ಯೋಗಕ್ಷೇಮವನ್ನು ಹೆಚ್ಚಿಸಬಲ್ಲವು. ಆದುದರಿಂದ ಮಾರ್ಷಲ್‌ರವರ ವ್ಯಾಖ್ಯಾನವು ಸಂಕುಚಿತ ಮತ್ತು ಅವೈಜ್ಞಾನಿಕವಾದುದಾಗಿದೆ ಎಂದು ರಾಬಿನ್ಸ್‌ರವರು ಟೀಕಿಸುತ್ತಾರೆ.

2. ಮಾರ್ಷಲ್ ಪ್ರಕಾರ ಭೌತಿಕ ಸರಕುಗಳು ಮಾನವನ ಕಲ್ಯಾಣ ಅಥವಾ ಯೋಗಕ್ಷೇಮವನ್ನು ಹೆಚ್ಚಿಸುತ್ತವೆ. ಆದರೆ ವಾಸ್ತವವಾಗಿ ಎಲ್ಲಾ ಭೌತಿಕ ಸರಕುಗಳು ಮಾನವನ ಯೋಗಕ್ಷೇಮವನ್ನು ಹೆಚ್ಚಿಸುವುದಿಲ್ಲ ಉದಾಹರಣೆಗೆ: ಭೌತಿಕ ಸರಕುಗಳಾದ ತಂಬಾಕು, ಅಫೀಮು, ಮದ್ಯ, ಮುಂತಾದವು ಮಾನವನ ಕಲ್ಯಾಣವನ್ನು ಹೆಚ್ಚಿಸುವುದರ ಬದಲು ಕಡಿಮೆಗೊಳಿಸುತ್ತವೆ.

3. ಪ್ರೊ. ರಾಬಿನ್ಸ್‌ರವರ ಪ್ರಕಾರ ‘ಯೋಗಕ್ಷೇಮ ಎಂಬ ಪದವು ನೈತಿಕ ಮೌಲ್ಯಗಳನ್ನು ಒಳಗೊಂಡಿರುವುದರಿಂದ ಅರ್ಥಶಾಸ್ತ್ರ ಎಂಬ ಪರಿಶುದ್ಧ ವಿಜ್ಞಾನದಲ್ಲಿ ಅಂತಹ ಪದಗಳನ್ನು ಬಳಸಲೇಬಾರದು’.

4. ಮಾನವನ ಯೋಗಕ್ಷೇಮವನ್ನು ಹಣದ ಅಳತೆಗೋಲಿನಿಂದ ಅಳೆಯುವುದು ಸಾಧ್ಯವಿದೆ ಎಂದು ಯೋಗಕ್ಷೇಮ ವ್ಯಾಖ್ಯಾನ ಅಭಿಪ್ರಾಯ ತಾಳುತ್ತದೆ ಆದರೆ ವಾಸ್ತವವಾಗಿ ಯೋಗಕ್ಷೇಮದ ನೇರ ಮಾಪನ ಅಸಾಧ್ಯ. ಏಕೆಂದರೆ ಯೋಗಕ್ಷೇಮ ವ್ಯಕ್ತಿಯಿಂದ ವ್ಯಕ್ತಿಗೆ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ ಹಾಗು ಅದು ಮಾನಸಿಕವಾದುದಾಗಿದೆ.

5. ಮಾರ್ಷಲರ ವ್ಯಾಖ್ಯಾನವು ಅರ್ಥಶಾಸ್ತ್ರದ ಮೂಲ ಸಮಸ್ಯೆಗಳಾದ ಮಿತವಾದ ಸಂಪನ್ಮೂಲಗಳು, ಅಪರಿಮಿತ ಬಯಕೆಗಳು, ಆಯ್ಕೆಯ ಸಮಸ್ಯೆ ಮುಂತಾದವುಗಳನ್ನು ಪರಿಗಣಿಸುವುದಿಲ್ಲ. ಇಷ್ಟೇ ಅಲ್ಲದೆ ಆಧುನಿಕ ಆರ್ಥಿಕ ವ್ಯವಸ್ಥೆಗಳ ಜಟಿಲ ಸಮಸ್ಯೆಗಳಾದ ಬಡತನ, ನಿರುದ್ಯೋಗ, ಆರ್ಥಿಕ ಆವರ್ತಗಳು, ಅನಭಿವೃದ್ಧಿ ಮುಂತಾದವುಗಳನ್ನು ಪರಿಗಣಿಸುವುದಿಲ್ಲ.

ಈ ಮೇಲಿನ ಟೀಕೆಗಳಿದ್ದರೂ ಕೂಡ ಯೋಗಕ್ಷೇಮ ವ್ಯಾಖ್ಯಾನವು ಸಾಕಷ್ಟು ಜನಪ್ರಿಯವಾಗಿದೆ.

3. ಕೊರತೆಯ ವ್ಯಾಖ್ಯಾನ (ವಿರಳತೆಯ ವ್ಯಾಖ್ಯೆ)

ಮಾರ್ಷಲರ ಯೋಗಕ್ಷೇಮ ವ್ಯಾಖ್ಯಾನವು ಬಹು ಕಾಲದವರೆಗೆ ಸ್ವೀಕೃತವಾದಂತಹ ಸಿದ್ಧಾಂತವಾಗಿತ್ತು. ಆದರೆ 1932 ರಲ್ಲಿ ಪ್ರಕಟಗೊಂಡ ಪ್ರೊ.ಲಿಯೋನೆಲ್ ರಾಬಿನ್ಸ್‌ರವರ ಗ್ರಂಥ ‘ನೇಚರ್ ಅಂಡ್ ಸಿಗ್ನಿಫಿಕೆನ್ಸ್ ಆಫ್ ಎಕನಾಮಿಕ್ ಸೈನ್ಸ್’ ಅರ್ಥಶಾಸ್ತ್ರದ ವ್ಯಾಖ್ಯಾನದ ಬಗ್ಗೆ ಪುನಃ ಚರ್ಚೆಯನ್ನು ಹುಟ್ಟು ಹಾಕಿತು. ಪ್ರೊ. ರಾಬಿನ್ಸ್‌ರವರು ಮಾರ್ಷಲ್‌ ರ ಯೋಗಕ್ಷೇಮ ವ್ಯಾಖ್ಯಾನವನ್ನು ಸಂಪೂರ್ಣವಾಗಿ ತಿರಸ್ಕರಿಸಿ ತಮ್ಮದೇ ಆದಂತಹ ಕೊರತೆಯ ಅಥವಾ ವಿರಳತೆಯ ವ್ಯಾಖ್ಯಾನವನ್ನು ನೀಡಿದರು. ರಾಬಿನ್ಸ್‌ರವರ ಅಭಿಪ್ರಾಯದಲ್ಲಿ ‘ಅರ್ಥಶಾಸ್ತ್ರವು ಮಾನವನ ಅಪರಿಮಿತ ಬಯಕೆಗಳು ಮತ್ತು ಈ ಬಯಕೆಗಳನ್ನು ಈಡೇರಿಸಿಕೊಳ್ಳಲು ಅಗತ್ಯವಿರುವ ವಿವಿಧ ಉಪಯೋಗಗಳನ್ನು ಹೊಂದಿರುವ ಕೊರತೆಯ ಸಾಧನಗಳಿಗೂ ಇರುವ ಸಂಬಂಧವನ್ನು ಅಧ್ಯಯನ ಮಾಡುತ್ತದೆʼ.

ರಾಬಿನ್ಸ್‌ರವರ ವ್ಯಾಖ್ಯಾನದ ಪ್ರಮುಖ ಅಂಶಗಳೆಂದರೆ,

1. ಮಾನವನ ಬಯಕೆಗಳು ಅಪರಿಮಿತವಾಗಿದೆ.

2. ಮಾನವನ ಬಯಕೆಗಳನ್ನು ತೃಪ್ತಿ ಪಡಿಸಲು ಲಭ್ಯವಿರುವ ಸಂಪನ್ಮೂಲಗಳು ಕೊರತೆಯಲ್ಲಿದೆ ಅಥವಾ ವಿರಳವಾಗಿದೆ.

3. ಮಿತ ಪ್ರಮಾಣದಲ್ಲಿರುವ ಸಂಪನ್ಮೂಲಗಳನ್ನು ಪರ್ಯಾಯ ಬಳಕೆಗಳಲ್ಲಿ ಬಳಸಲು ಸಾಧ್ಯವಿದೆ. ಈ ರೀತಿ ಬಳಸಿಕೊಳ್ಳುವಾಗ ದಕ್ಷವಾಗಿ ಅಂದರೆ ಹೆಚ್ಚು ಪ್ರತಿಫಲ ದೊರೆಯುವ ಉಪಯೋಗದಲ್ಲಿ ಬಳಸಬೇಕಾಗುತ್ತದೆ.

4. ಬಯಕೆಗಳು ಅಪರಿಮಿತವಾಗಿರುವುದರಿಂದ ಮತ್ತು ಸಂಪನ್ಮೂಲಗಳು ಮಿತವಾಗಿರುವುದರಿಂದ ಆಯ್ಕೆಯ ಸಮಸ್ಯೆಯು ಉದ್ಭವಿಸುತ್ತವೆ.

ಉದಾಹರಣೆಗೆ ಕಲ್ಲಿದ್ದಲನ್ನು ಕಬ್ಬಿಣ ತಯಾರಿಸಲು, ರೈಲುಗಳನ್ನು ಓಡಿಸಲು, ವಿದ್ಯುತ್ ಶಕ್ತಿ ಉತ್ಪಾದಿಸಲು, ಕೈಗಾರಿಕಾ ಉತ್ಪನ್ನಗಳನ್ನು ತಯಾರಿಸಲು ಇನ್ನು ಮುಂತಾದ ಉಪಯೋಗಗಳಲ್ಲಿ ಬಳಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಹೆಚ್ಚು ಅಗತ್ಯವಿರುವ ಹಾಗೂ ಜರೂರಾಗಿರುವ ಬಳಕೆಯಲ್ಲಿ ಕಲ್ಲಿದ್ದಲನ್ನು ಬಳಸಬೇಕಾಗುತ್ತದೆ.

ರಾಬಿನ್ಸ್‌ರವರ ವಿರಳತೆಯ ವ್ಯಾಖ್ಯೆಯನ್ನು ಅರ್ಥಶಾಸ್ತ್ರಜ್ಞರಾದ ಜಾರ್ಜ್‌ ಸ್ಟಿಗ್ಲರ್, ಎರಿಕ್‌ರಾಲ್, ಎ.ಪಿ.ಲರ್ನರ್, ವಿಕ್‌ಸ್ಪೀಡ್ ಮುಂತಾದವರು ಸಮರ್ಥಿಸಿದ್ದಾರೆ. ‘ಗರಿಷ್ಠ ಸಂಖ್ಯೆಯ ಬಯಕೆಗಳ ತೃಪ್ತಿಯೇ ಕೊರತೆಯ ಸಾಧನಗಳ ಹಂಚಿಕೆಯ ಉದ್ದೇಶ ʼ ಎಂದು ಜಾರ್ಜ್ ಸ್ಟಿಗ್ಲರ್ ರವರು ಅಭಿಪ್ರಾಯ ಪಟ್ಟಿದ್ದಾರೆ.

ರಾಬಿನ್ಸ್‌ರವರ ದೃಷ್ಟಿಯಲ್ಲಿ ಅರ್ಥಶಾಸ್ತ್ರವು ಒಂದು ʻತಟಸ್ಥ ಹಾಗೂ ಪರಿಶುದ್ಧ’ ವಿಜ್ಞಾನವಾಗಿದೆ. ಅಂದರೆ ಅರ್ಥಶಾಸ್ತ್ರವು ಯಾವುದೇ ವಿಷಯದ ಬಗ್ಗೆ ʻಹೇಗಿದೆ ಎಂದು ತಿಳಿಸುತ್ತದೆಯೇ ಹೊರತು ಹೇಗಿರಬೇಕು’ ಎಂದು ತಿಳಿಸುವುದಿಲ್ಲ. ಆದ್ದರಿಂದ ಅರ್ಥಶಾಸ್ತ್ರವು ಬಯಕೆಗಳ ನಡುವಿನ ಆಯ್ಕೆಯ ವಿಷಯದಲ್ಲಿ ತಟಸ್ಥವಾಗಿರುತ್ತದೆ ಎಂಬುದು ರಾಬಿನ್ಸ್‌ನ ಅಭಿಮತವಾಗಿದೆ.

ವಿರಳತೆಯ ವ್ಯಾಖ್ಯೆಯ ಶ್ರೇಷ್ಟತೆ :

ವಿರಳತೆಯ ವ್ಯಾಖ್ಯೆಯು ಈ ಹಿಂದಿನ ವ್ಯಾಖ್ಯೆಗಳಿಗಿಂತ ಈ ಕೆಳಗಿನ ಕಾರಣಗಳಿಂದಾಗಿ ಶ್ರೇಷ್ಟವಾಗಿದೆ.

1. ರಾಬಿನ್ಸ್ ವ್ಯಾಖ್ಯಾನವು ಭೌತಿಕ ಮತ್ತು ಅಭೌತಿಕ ಅಂಶಗಳೆರಡನ್ನೂ ಪರಿಗಣಿಸುವುದರಿಂದ ಅದು ಮಾರ್ಷಲ್ ರ ವ್ಯಾಖ್ಯಾನಕ್ಕಿಂತ ಶ್ರೇಷ್ಟವಾಗಿದೆ.

2. ಅರ್ಥಶಾಸ್ತ್ರ ಎಲ್ಲ ನೈತಿಕ ಅಂಶಗಳಿಂದ ಮುಕ್ತವಾಗಿದೆ. ಅದೊಂದು ಪರಿಶುದ್ಧ ವಿಜ್ಞಾನ ಎಂದು ತಿಳಿಸಿ ರಾಬಿನ್ಸ್ ಅರ್ಥಶಾಸ್ತ್ರವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ನಿಲ್ಲಿಸಲು ಯತ್ನಿಸಿದನು.

3. ರಾಬಿನ್ಸ್ ವ್ಯಾಖ್ಯಾನವು ಹೆಚ್ಚು ವಿವರಣಾತ್ಮಕವೂ, ವಿಶ್ಲೇಷಣಾತ್ಮಕವೂ ಹಾಗು ಸಾರ್ವತ್ರಿಕವೂ ಆಗಿದೆ.

4. ರಾಬಿನ್ಸ್‌ನನ್ನು ಅರ್ಥಶಾಸ್ತ್ರವು ಬಯಕೆಗಳ ನಡುವೆ ತಟಸ್ಥವಾಗಿದೆ ಎಂದು ಹೇಳಿ ಅರ್ಥಶಾಸ್ತ್ರ ಕೇವಲ ಕೊರತೆಯ ಸಂಪನ್ಮೂಲಗಳ ಉಪಯೋಗಕ್ಕೆ ಸಂಬಂಧಿಸಿದೆ ಎಂದು ತಿಳಿಸಿದರು.

5. ಆರ್ಥಿಕ ವಿಶ್ಲೇಷಣೆಯ ಮಹತ್ವದ ಪರಿಕಲ್ಪನೆಗಳಾಗಿರುವ ‘ಅವಕಾಶವೆಚ್ಚ’ ಮತ್ತು ‘ಆಯ್ಕೆಯ ಪರಧಿ’ಗಳು ರಾಬಿನ್ಸ್ ವ್ಯಾಖ್ಯಾನದಿಂದ ಹೊರಹೊಮ್ಮಿವೆ.

6. ರಾಬಿನ್ಸ್ ವ್ಯಾಖ್ಯಾನವು ಆರ್ಥಿಕ ಯೋಜನೆಗಳ ತಯಾರಿಕೆಗೆ ತಳಹದಿಯಾಗಿದೆ. ಏಕೆಂದರೆ ಅದು ಕೊರತೆಯ ಸಂಪನ್ಮೂಲಗಳ ಹಂಚಿಕೆ ಮತ್ತು ಉಪಯೋಗದ ವಿಷಯಕ್ಕೆ ಹೆಚ್ಚು ಒತ್ತು ನೀಡಿದೆ.

ವಿಮರ್ಶೆ: ರಾಬಿನ್ಸ್‌ರವರ ವ್ಯಾಖ್ಯಾನವು ಎಷ್ಟೆಲ್ಲಾ ವೈಜ್ಞಾನಿಕವಾಗಿದ್ದರೂ ಸಹ ಅನೇಕ ಅರ್ಥಶಾಸ್ತ್ರಜ್ಞರಿಂದ ಟೀಕಿಸಲ್ಪಟ್ಟಿದೆ. ಬಾರ್ಬರಾ ವೋಟನ್, ಬೆವರಿಜ್‌, ಪ್ರೇಸರ್, ಡರ್ಬನ್ ಮೊದಲಾದ ಅರ್ಥಶಾಸ್ತ್ರಜ್ಞರು ರಾಬಿನ್ಸ್ ವ್ಯಾಖ್ಯಾನವನ್ನು ಕಟುವಾಗಿ ಟೀಕಿಸಿದರು. ಅವರ ಟೀಕೆಗಳು ಈ ಕೆಳಗಿನಂತಿವೆ.

1. ರಾಬಿನ್ಸ್ ಅವರ ವ್ಯಾಖ್ಯಾನ ತುಂಬಾ ಸಂಕುಚಿತವಾದುದು. ಅದು ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸಿದೆ ಎಂದು ಟೀಕಿಸಲಾಗಿದೆ. ಕೊರತೆಯ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನೇ ಪ್ರಮುಖ ಅಂಶವನ್ನಾಗಿ ಪರಿಗಣಿಸಿ ರಾಬಿನ್ಸ್ ಅರ್ಥಶಾಸ್ತ್ರವನ್ನು ಕೇವಲ ಮೌಲ್ಯ ಸಿದ್ಧಾಂತದ ಮಟ್ಟಕ್ಕಿಳಿಸಿದ್ದಾನೆ ಎಂದು ದೂರಲಾಗಿದೆ.

2. ಆಧುನಿಕ ಆರ್ಥಿಕ ವ್ಯವಸ್ಥೆಗಳು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಾದ ಬಡತನ, ದಾರಿದ್ರ್ಯ, ನಿರುದ್ಯೋಗ, ಆದಾಯ ಅಸಮಾನತೆ, ಆರ್ಥಿಕ ಆವರ್ತಗಳು ಮುಂತಾದ ಸಮಸ್ಯೆಗಳನ್ನು ರಾಬಿನ್ಸ್ ವ್ಯಾಖ್ಯಾನ ಪರಿಗಣಿಸುವುದೇ ಇಲ್ಲ.

3. ರಾಬಿನ್ಸ್ ವ್ಯಾಖ್ಯೆಯಲ್ಲಿ ಮಾನವೀಯ ಅಂಶ ನಿರ್ಲಕ್ಷಕ್ಕೊಳಗಾಗಿದೆಯೆಂದು ಟೀಕಿಸಲಾಗಿದೆ. ರಾಬಿನ್ಸ್ ಪ್ರಕಾರ ಬಯಕೆಗಳ ನಡುವೆ ಅರ್ಥಶಾಸ್ತ್ರ ತಟಸ್ಥವಾಗಿರುತ್ತದೆ. ಒಳಿತು ಕೆಡಕುಗಳ ಬಗ್ಗೆ ನಿರ್ಣಯ ಕೈಗೊಳ್ಳುವುದು ಅರ್ಥಶಾಸ್ತ್ರದ ಕೆಲಸವಲ್ಲ ಎಂದು ತಿಳಿಸುತ್ತಾರೆ. ಆದರೆ ಅರ್ಥಶಾಸ್ತ್ರ ಸಾಮಾಜಿಕ ಉದ್ದೇಶಗಳನ್ನು ಈಡೇರಿಸಬೇಕೆಂದರೆ ಅದು ನೈತಿಕ ನೆಲೆಗಟ್ಟಿನ ಮೇಲೆ ಕಾರ್ಯನಿರ್ವಹಿಸಬೇಕಾಗುತ್ತದೆ. ಏಕೆಂದರೆ ಒಳಿತು ಕೆಡಕುಗಳ ತೀರ್ಮಾನ ಕೈಗೊಂಡು ನಿರ್ಣಯ ನೀಡಿದಾಗಲೇ ಮಾನವ ಕಲ್ಯಾಣ ಸಾಧ್ಯವಾಗುವುದು.

4. ಕೆಲ ವಿಮರ್ಶಕರ ಪ್ರಕಾರ ರಾಬಿನ್ಸ್, ಮಾರ್ಷಲನ ವ್ಯಾಖ್ಯೆಯನ್ನು ಎಷ್ಟೇ ಟೀಕಿಸಿದರೂ ಸಹ ಮಾರ್ಷಲನ ಪ್ರಭಾವವನ್ನು ರಾಬಿನ್ಸ್‌ನ ವ್ಯಾಖ್ಯೆಯಲ್ಲಿ ಕಾಣಬಹುದೆನ್ನುತ್ತಾರೆ. ವಿರಳ ಸಂಪನ್ಮೂಲಗಳನ್ನು ಅಪರಿಮಿತ ಬಯಕೆಗಳ ನಡುವೆ ಹಂಚುವ ಮತ್ತು ಹೊಂದಾಣಿಕೆ ಮಾಡುವ ವೇಳೆಯಲ್ಲಿ ಗರಿಷ್ಟ ತೃಪ್ತಿ ಸಿಗುವ ಬಯಕೆಗೆ ಸಂಪನ್ಮೂಲ ಲಭ್ಯವಾಗಬೇಕು ಎಂದು ರಾಬಿನ್ಸ್ ಹೇಳುತ್ತಾರೆ. ಇದರಿಂದಾಗಿ ನೈತಿಕ ಅಂಶ ಹಿಂಬಾಗಿಲಿನಿಂದ ಪ್ರವೇಶ ಮಾಡಿದಂತಾಗಿದೆ.

5. ರಾಬಿನ್ಸ್ ವ್ಯಾಖ್ಯಾನ ಆರ್ಥಿಕ ಪ್ರಗತಿ ಮತ್ತು ಬೆಳವಣಿಗೆಯ ಅಂಶಗಳನ್ನು ನಿರ್ಲಕ್ಷಿಸುತ್ತದೆ. ಆಧುನಿಕ ಯುಗದಲ್ಲಿ ಎಲ್ಲಾ ಚಟುವಟಿಕೆಗಳಿಗಿಂತ ಅತ್ಯಂತ ಮುಖ್ಯವಾದುದೆಂದರೆ ಬೆಳವಣಿಗೆಯ ವಿಷಯವಾಗಿದೆ. ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಯಾವ ಮಾರ್ಗ ಸೂಕ್ತವಾದುದು. ಯಾವ ಧೋರಣೆಯನ್ನು ಪಾಲಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬುವುದುಬಹುಮುಖ್ಯ ಪ್ರಶ್ನೆಗಳಾಗಿವೆ. ಆದರೆ ರಾಬಿನ್ಸ್ ವ್ಯಾಖ್ಯಾನ ಈ ಸಮಸ್ಯೆಗಳತ್ತ ಗಮನಹರಿಸುವುದಿಲ್ಲ.

6. ರಾಬಿನ್ಸ್ ಪ್ರಕಾರ ಅಪರಿಮಿತ ಬಯಕೆಗಳು ಮತ್ತು ಮಿತ ಸಾಧನಗಳಿಂದ ಆರ್ಥಿಕ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ. ಆದರೆ ವಾಸ್ತವವಾಗಿ ಸಾಧನ ಸಂಪತ್ತುಗಳು ಹೇರಳವಾಗಿದ್ದಾಗಲೂ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದನ್ನು ಮರೆಯುವಂತಿಲ್ಲ. ಉದಾಹರಣೆಗೆ ಜನಸಂಖ್ಯಾ ಸಮಸ್ಯೆ.

7. ರಾಬಿನ್ಸ್ ವ್ಯಾಖ್ಯಾನ ಸ್ಥಿರಾತ್ಮಕವಾದುದೆಂದೂ ಸಹ ಟೀಕಿಸಲಾಗಿದೆ. ಈ ವ್ಯಾಖ್ಯಾನವು ಕೇವಲ ಕೆಲವು ಸೀಮಿತ ಸನ್ನಿವೇಶಗಳಿಗೆ ಮಾತ್ರ ಸರಿಹೊಂದುವಂತಹುದು ಎಂದು ದೂರಲಾಗಿದೆ.

4. ಅಭಿವೃದ್ಧಿ ಪರ ವ್ಯಾಖ್ಯಾನ

1930ರ ದಶಕದವರೆಗೆ ರಾಬಿನ್ಸ್‌ರವರ ವ್ಯಾಖ್ಯಾನವನ್ನು ವೈಜ್ಞಾನಿಕ ಮತ್ತು ಸಮಂಜಸವಾದುದು ಎಂದೇ ತಿಳಿಯಲಾಗಿತ್ತು. ಆದರೆ ನಂತರದಲ್ಲಿ ಸಂಭವಿಸಿದ ಅನೇಕ ವಿದ್ಯಮಾನಗಳು ಅರ್ಥಶಾಸ್ತ್ರಕ್ಕೆ ಹೊಸ ವ್ಯಾಖ್ಯಾನವನ್ನು ಹುಡುಕುವ ಅಗತ್ಯವನ್ನು ಸೃಷ್ಟಿ ಮಾಡಿದವು. ಏಕೆಂದರೆ ಅರ್ಥಶಾಸ್ತ್ರವು ಕೇವಲ ಸಂಪನ್ಮೂಲ ಹಂಚಿಕೆಯ ಶಾಸ್ತ್ರವಾಗಿ ಉಳಿಯದೆ ತನ್ನ ಸ್ವರೂಪ, ವ್ಯಾಪ್ತಿ ಮತ್ತು ಮಹತ್ವವನ್ನು ವಿಸ್ತಾರಗೊಳಿಸಿಕೊಂಡಿತ್ತು. ಆದ್ದರಿಂದ ಲಾರ್ಡ್ ಕೇನ್ಸ್, ಪಾಲ್ ಎ.ಸ್ಯಾಮ್ಯುಯೆಲ್ಸನ್, ಬೆನ್ ಹ್ಯಾಮ್ ಮುಂತಾದ ಆಧುನಿಕ ಅರ್ಥಶಾಸ್ತ್ರಜ್ಞರು ಅರ್ಥಶಾಸ್ತ್ರಕ್ಕೆ ಒಂದು ಹೊಸ ವ್ಯಾಖ್ಯೆಯನ್ನು ನೀಡಲು ಪ್ರಯತ್ನಿಸಿದರು.

ಪ್ರೊ.ಪಾಲ್.ಎ. ಸ್ಯಾಮ್ಯುಯೆಲ್‌ಸನ್ ಅವರ ಪ್ರಕಾರ, ಅರ್ಥಶಾಸ್ತ್ರವು ಜನರು ಮತ್ತು ಸಮಾಜ ವಿರಳವಾಗಿರುವ ಮತ್ತು ವಿವಿಧ ಉಪಯೋಗ ಹೊಂದಿರುವ ಸಂಪನ್ಮೂಲಗಳನ್ನು ವಿವಿಧ ಸರಕುಗಳ ಉತ್ಪಾದನೆಗೆ ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ ಹಾಗು ಉತ್ಪಾದಿತ ಸರಕುಗಳನ್ನು ಸಮಾಜದ ವಿವಿಧ ಜನರ ನಡುವೆ ಅನುಭೋಗಕ್ಕಾಗಿ ಈಗ ಹಾಗು ಭವಿಷ್ಯದಲ್ಲಿ ಹೇಗೆ ವಿತರಿಸುತ್ತಾರೆ ಎಂಬುದನ್ನು ಕುರಿತು ಅಭ್ಯಸಿಸುತ್ತದೆ’.

ಲಾರ್ಡ್ ಕೇನ್ಸ್ ಅವರ ಪ್ರಕಾರ ‘ಅರ್ಥಶಾಸ್ತ್ರವು ಸಮಾಜದಲ್ಲಿ ಉದ್ಯೋಗ ಮತ್ತು ವರದಾನಗಳು ಹೇಗೆ ನಿರ್ಧಾರವಾಗುತ್ತವೆ ಹಾಗು ರಾಷ್ಟ್ರೀಯ ವರಮಾನ ಕಾಲಾನಂತರದಲ್ಲಿ ಹೇಗೆ ಬೆಳೆಯುತ್ತದೆ ಎಂಬುದನ್ನು ಅಭ್ಯಸಿಸುತ್ತದೆ’.

ಪ್ರೊ.ಬೆನ್ ಹ್ಯಾಮ್ ಅವರ ಮೇರೆಗೆ ಅರ್ಥಶಾಸ್ತ್ರವು ʻರಾಷ್ಟ್ರದ ರಾಷ್ಟ್ರೀಯ ಆದಾಯದ ಗಾತ್ರ, ಹಂಚಿಕೆ ಮತ್ತು ಸ್ಥಿರತೆಯ ಅಂಶಗಳನ್ನು ನಿರ್ಧರಿಸುವ ಸಂಗತಿಗಳನ್ನು ಕುರಿತು ಅಭ್ಯಸಿಸುತ್ತದೆ’.

ಪ್ರೊ. ಹೆನ್ರಿ ಸ್ಮಿತ್, ಬೌಲ್ಡಿಂಗ್ ಮೊದಲಾದ ಆಧುನಿಕ ಅರ್ಥಶಾಸ್ತ್ರಜ್ಞರೂ ಕೂಡ ಇದೇ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರ ಪ್ರಕಾರ ಅರ್ಥಶಾಸ್ತ್ರವು ಪೂರ್ಣ ಉದ್ಯೋಗ, ರಾಷ್ಟ್ರೀಯ ವರಮಾನ, ಬಂಡವಾಳ ಸಂಚಯನ, ಆರ್ಥಿಕ ಪ್ರಗತಿ ಮುಂತಾದ ವಿಷಯಗಳನ್ನು ಕುರಿತು ಅಭ್ಯಸಿಸುತ್ತದೆ.

ಅಭಿವೃದ್ಧಿಪರ ವ್ಯಾಖ್ಯಾನದ ಶ್ರೇಷ್ಟತೆ

ಅಭಿವೃದ್ಧಿಪರ ವ್ಯಾಖ್ಯಾನ ಅಥವಾ ಆಧುನಿಕ ವ್ಯಾಖ್ಯಾನವು ಪ್ರೊ.ರಾಬಿನ್ಸ್ ಅವರ ವ್ಯಾಖ್ಯಾನಕ್ಕಿಂತಲೂ ಈ ಕೆಳಗಿನ ಅಂಶಗಳ ಕಾರಣದಿಂದಾಗಿ ಶ್ರೇಷ್ಠವೆಂದು ಪರಿಗಣಿಸಲ್ಪಟ್ಟಿದೆ.

1. ಅಭಿವೃದ್ಧಿಪರ ವ್ಯಾಖ್ಯಾನವು ಹೆಚ್ಚು ಸಮಂಜಸ ಮತ್ತು ಚಲನಾತ್ಮಕವಾದುದೆಂದು ಪರಿಗಣಿಸಲ್ಪಟ್ಟಿದೆ. ಏಕೆಂದರೆ ಈ ವ್ಯಾಖ್ಯಾನ ವಿರಳವಾದ ಸಂಪನ್ಮೂಲಗಳನ್ನು ಬಯಕೆಗಳ ಈಡೇರಿಕೆಗಾಗಿ ಬಳಸುವ ವಿಧಾನ ಮತ್ತು ಆ ಮೂಲಕ ಅಭಿವೃದ್ಧಿ ಸಾಧನೆಯ ಸತ್ಯಸಂಗತಿಯನ್ನು ಹೊರಗೆಡವಿದೆ. ರಾಬಿನ್ಸ್ ವ್ಯಾಖ್ಯಾನದಲ್ಲಿದ್ದ ಸ್ಥಿರಾತ್ಮಕ ಮುಸುಕನ್ನು ಕಿತ್ತೊಗೆಯುವಲ್ಲಿ ಅಭಿವೃದ್ಧಿ ಪರ ವ್ಯಾಖ್ಯಾನ ಯಶಸ್ವಿಯಾಗಿದೆ.

2. ಅಭಿವೃದ್ಧಿ ಪರ ವ್ಯಾಖ್ಯಾನ ಮಿತ ಸಂಪನ್ಮೂಲಗಳ ಹಂಚಿಕೆಯ ಅಂಶದ ಜೊತೆಗೆ ಉದ್ಯೋಗ, ವರಮಾನ, ಉತ್ಪಾದನೆ ಮತ್ತು ರಾಷ್ಟ್ರೀಯ ಆದಾಯದ ವಿಚಾರಗಳನ್ನೂ ಪರಿಗಣಿಸಿ ಅರ್ಥಶಾಸ್ತ್ರದ ವ್ಯಾಪ್ತಿಯನ್ನು ವಿಸ್ತರಿಸಿದೆ. ಅಭಿವೃದ್ಧಿ ಕಾರ್ಯಕ್ಕೆ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಅದು ಪರಿಗಣಿಸಿದೆ.

3. ಅಭಿವೃದ್ಧಿ ಪರ ವ್ಯಾಖ್ಯಾನವು ಹಣ ಸಹಿತ ಮತ್ತು ಹಣ ರಹಿತ ಆರ್ಥಿಕತೆಗಳನ್ನು ಪರಿಗಣಿಸುವುದರ ಮೂಲಕ ವ್ಯಾಪಕ ಮನ್ನಣೆಗಳಿಸಿದೆ. ಈ ಎರಡೂ ರೀತಿಯ ಆರ್ಥಿಕತೆಯ ಸಮಸ್ಯೆಗಳ ಕೂಲಂಕುಷ ಅಧ್ಯಯನಕ್ಕೆ ಈ ವ್ಯಾಖ್ಯೆ ಮನ್ನಣೆ ನೀಡಿದೆ.

4. ಆಧುನಿಕ ವ್ಯಾಖ್ಯಾನವು ಮೂಲಭೂತ ಸಮಸ್ಯೆಗಳತ್ತ ಗಮನಹರಿಸಿ ವಾಸ್ತವ ಸ್ಥಿತಿಗೆ ಹತ್ತಿರವೆನ್ನಿಸಿದೆ. ಕೊರತೆಯ ಸಂಪನ್ಮೂಲಗಳು, ಅವುಗಳ ವಿವಿಧ ಉಪಯೋಗಗಳು ಮತ್ತು ಆಯ್ಕೆಯ ಸಮಸ್ಯೆ ಮುಂತಾದ ಅಂಶಗಳ ಜೊತೆಗೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೊರತೆಯ ಸಂಪನ್ಮೂಲಗಳ ಪಾತ್ರವನ್ನು ಕುರಿತು ಚರ್ಚಿಸಿದೆ. ಇದರಿಂದಾಗಿ ಮೂಲಭೂತ ಆರ್ಥಿಕ ಸಮಸ್ಯೆಗಳ ವಿಶ್ಲೇಷಣೆ ಮತ್ತು ಅವುಗಳ ಪರಿಹಾರದ ಒಳನೋಟ ಈ ವ್ಯಾಖ್ಯೆಯಲ್ಲಿ ಲಭ್ಯವಾಗುತ್ತದೆ.

5. ಈ ವ್ಯಾಖ್ಯಾನವು ಕೊರತೆಯಿಂದಿರುವ ಸಂಪನ್ಮೂಲಗಳನ್ನು ವಿವಿಧ ಉಪಯೋಗಗಳ ನಡುವೆ ಹಂಚಿ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ವಿಧಾನವನ್ನು ತಿಳಿಯಪಡಿಸುತ್ತದೆ. ಅಲ್ಲದೆ ರಾಷ್ಟ್ರೀಯ ಆದಾಯ ಮತ್ತು ಉದ್ಯೋಗ ಪ್ರಮಾಣಗಳ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಅದು ಪರಿಗಣಿಸುತ್ತದೆ. ಆದ್ದರಿಂದ ಈ ವ್ಯಾಖ್ಯಾನ ಹೆಚ್ಚು ಸಮಂಜಸ ಮತ್ತು ವೈಜ್ಞಾನಿಕವೆಂದು ಹೇಳಬಹುದಾಗಿದೆ.

ವ್ಯಾಖ್ಯೆ ರಹಿತ ಪಂಥ

ಅರ್ಥಶಾಸ್ತ್ರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಒಂದು ಸಾಮಾಜಿಕ ವಿಜ್ಞಾನವಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವಂತಹ ವಿಷಯಗಳು ಆಸಂಖ್ಯವಾಗಿದೆ ಮತ್ತು ಕ್ಲಿಷ್ಟಕರವಾಗಿದೆ. ಹೀಗೆ ವಿಶಾಲ ಮತ್ತು ಪ್ರಬುದ್ಧಮಾನವಾಗಿ ಬೆಳೆಯುತ್ತಿರುವ ಅರ್ಥಶಾಸ್ತ್ರಕ್ಕೆ ಸಮರ್ಪಕವಾದ ಮತ್ತು ಸರ್ವಸಮ್ಮತವಾದಂತಹ ವ್ಯಾಖ್ಯೆಯನ್ನು ನೀಡುವುದು ಅತ್ಯಂತ ಜಟಿಲ ವಿಷಯವಾಗಿದೆ. ಒಂದು ವೇಳೆ ವ್ಯಾಖ್ಯೆ ನೀಡಿದರೂ ಕೂಡ ಅದು ಅರ್ಥಶಾಸ್ತ್ರದ ವ್ಯಾಪ್ತಿಯನ್ನು ಸಂಕುಚಿತಗೊಳಿಸುವ ಸಂಭವವೇ ಹೆಚ್ಚು. ಆದ್ದರಿಂದ ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯನ್ನು ಕೊಡುವ ಅಗತ್ಯವೇ ಇಲ್ಲ ಎಂದು ಕೆಲ ಅರ್ಥಶಾಸ್ತ್ರಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಗುಂಪಿಗೆ ಸೇರಿದ ಅರ್ಥಶಾಸ್ತ್ರಜ್ಞರನ್ನು ವ್ಯಾಖ್ಯೆ ರಹಿತ ಪಂಥವೆಂದು ಪರಿಗಣಿಸಲಾಗಿದೆ.

ಸ್ವೀಡನ್ನಿನ ಅರ್ಥಶಾಸ್ತ್ರಜ್ಞರಾದ ಗುನ್ನಾರ್ ಮಿರ್ಡಾಲ್ ಮೇರೆಗೆ “ಅರ್ಥಶಾಸ್ತ್ರಕ್ಕೆ ವ್ಯಾಖ್ಯೆಯೊಂದನ್ನು ಹುಡುಕುವುದು ತೀರ ಅನಗತ್ಯ ಮತ್ತು ಅನಪೇಕ್ಷಣೀಯ. ಅರ್ಥಶಾಸ್ತ್ರಕ್ಕೆ ಸಮಂಜಸ ವ್ಯಾಖ್ಯಾನವನ್ನು ಹುಡುಕುವ ಬಗ್ಗೆ ಅರ್ಥಶಾಸ್ತ್ರಜ್ಞರು ಕಾಳಜಿ ವಹಿಸಬೇಕಾದ ಅಗತ್ಯವೇ ಇಲ್ಲ”.

ಮಾರಿಸ್ ಡಾಬ್ ಅವರ ಪ್ರಕಾರ ʻʻಈಗಾಗಲೇ ಜನಪ್ರಿಯವಾಗಿರುವ ಅರ್ಥಶಾಸ್ತ್ರಕ್ಕೆ ಒಂದು ತರ್ಕಬದ್ದವಾದ ವ್ಯಾಖ್ಯೆಯನ್ನು ಹುಡುಕುವುದು ನಿರರ್ಥಕವಾದ ಕೆಲಸ”.

ಪ್ರೊ.ಪ್ಯಾರಟೋ ಅವರ ಪ್ರಕಾರ “ಅರ್ಥಶಾಸ್ತ್ರಕ್ಕೆ ಒಂದು ಯೋಗ್ಯವಾದ ವ್ಯಾಖ್ಯೆಯನ್ನು ಹುಡುಕುವ ಕಾರ್ಯ ಸಮಯದ ಅಪವ್ಯಯಕ್ಕೆ ಕಾರಣವಾಗುತ್ತದೆ”.

ಆರ್ಥಿಕ ಚಟುವಟಿಕೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಇಂತಹ ಬದಲಾವಣೆ ಮತ್ತು ಹೊಸ ಬೆಳವಣಿಗೆಗಳನ್ನು ಅರ್ಥಶಾಸ್ತ್ರದ ವ್ಯಾಪ್ತಿಯೊಳಗೆ ತರುವ ಪ್ರಯತ್ನವು ನಿರಂತರವಾಗಿ ನಡೆಯುತ್ತಿರಬೇಕಾಗುತ್ತದೆ. ಇಲ್ಲವಾದಲ್ಲಿ ಹಳೆಯ ವ್ಯಾಖ್ಯೆಗಳು ತಮ್ಮ ಸತ್ವವನ್ನು ಕಳೆದುಕೊಳ್ಳುತ್ತವೆ. ಆದ್ದರಿಂದ ಯಾವುದೇ ಒಂದು ಕಾಲದಲ್ಲಿ ನೀಡಲಾದ ವ್ಯಾಖ್ಯೆ ಆ ಕಾಲಕ್ಕೆ ಮಾತ್ರ ಸರಿ ಹೊಂದುತ್ತದೆ. ಅದು ಸರ್ವಕಾಲಕ್ಕೂ ಪ್ರಾಯೋಗಿಕವಾಗಿರುವುದು ಸಾಧ್ಯವೇ ಇಲ್ಲದ ಮಾತು. ಈ ಹಿನ್ನೆಲೆಯಲ್ಲಿ ಅರ್ಥಶಾಸ್ತ್ರಕ್ಕೆ ಸರ್ವಸಮ್ಮತವಾದ ಮತ್ತು ಸರ್ವಕಾಲಿಕವಾದ ವ್ಯಾಖ್ಯೆ ನೀಡುವುದು ಕಷ್ಟಸಾಧ್ಯದ ಮಾತು. ಈ ಕಾರಣದಿಂದಾಗಿ ಪ್ರೊ.ಜೇಕಬ್ ವೈನರ್ ಅವರು “ಅರ್ಥಶಾಸ್ತ್ರಜ್ಞರು ಏನನ್ನು ಮಾಡುತ್ತಾರೋ ಅದೇ ಅರ್ಥಶಾಸ್ತ್ರವಾಗಿದೆ” ಎಂದು ಹೇಳಿದ್ದಾರೆ.

ಅರ್ಥಶಾಸ್ತ್ರದ ವ್ಯಾಖ್ಯೆಗಳು

The Definitions of Economics

Economics, as a discipline, has evolved over centuries and stands as a cornerstone of social sciences. Despite its profound significance, economics lacks a universally accepted definition. This ambiguity arises from its dynamic nature, broad scope, and the diverse perspectives of economists. The renowned economist Mrs. Barbara Wootton once remarked, “If six economists sat down together and searched for a definition of economics, seven definitions would emerge.” Similarly, J.M. Keynes observed that “Economics is strangled by countless definitions”. These remarks highlight the challenges in defining this ever-evolving field.

Economists have classified definitions of economics into four primary categories, each reflecting a distinct approach and focus. Let’s delve into these categories to understand the multifaceted nature of economics.

1. Definition of Wealth

The earliest definitions of economics were centered around wealth. Economists like Adam Smith, often referred to as the “Father of Economics,” emphasized the production, accumulation, and distribution of wealth. In his seminal work, The Wealth of Nations, Smith defined economics as an inquiry into the nature and causes of the wealth of nations. This perspective treated economics as a science of wealth, focusing on material prosperity and the factors contributing to it. However, this approach faced criticism for neglecting social welfare and ethical considerations.

2. Definition of Well-being

The well-being perspective shifted the focus of economics from wealth to human welfare. Alfred Marshall, a leading economist of the late 19th century, played a pivotal role in this transition. In his book, Principles of Economics, Marshall defined economics as “a study of mankind in the ordinary business of life.” This definition emphasizes how individuals and societies achieve well-being through the management of scarce resources. The well-being approach considers economics as a tool to enhance quality of life, encompassing both material and non-material aspects.

3. Definition of Scarcity

The scarcity-based definition, introduced by Lionel Robbins in his influential essay, An Essay on the Nature and Significance of Economic Science, revolutionized economic thought. Robbins defined economics as “the science which studies human behavior as a relationship between ends and scarce means which have alternative uses.” This approach highlights the problem of choice and resource allocation in the face of limited availability. It underscores the universality of economic principles, extending beyond wealth and well-being to include any situation involving scarcity and decision-making.

4. Definition of Development

The development-oriented definitions of economics focus on growth, progress, and the improvement of living standards. This perspective is particularly relevant in the context of emerging economies and global challenges such as poverty, inequality, and sustainability. Economists in this category view economics as a study of how societies transform and achieve progress over time. It integrates elements of wealth, well-being, and scarcity while emphasizing long-term goals and strategies for development.

Conclusion

Economics, with its rich history and diverse perspectives, defies a singular definition. The wealth, well-being, scarcity, and development approaches each provide unique insights into the field. Together, they illustrate the complexity and breadth of economics as a discipline. As the world evolves, so too will the interpretations and applications of economics, ensuring its continued relevance in addressing the challenges and opportunities of humanity.