ಪರಿಸರ ವ್ಯವಸ್ಥೆಯ ರಚನೆ ಹಾಗೂ ಕಾರ್ಯ

ಪರಿಸರ ವ್ಯವಸ್ಥೆಯ ರಚನೆ ಹಾಗೂ ಕಾರ್ಯ

ʻʻಒಂದು ಪ್ರದೇಶದ ಸಸ್ಯ, ಪ್ರಾಣಿ, ಸೂಕ್ಷ್ಮಾಣು ಜೀವಿಗಳು ಮತ್ತು ಅಲ್ಲಿನ ಮಣ್ಣು, ನೀರು, ವಾಯು ಮುಂತಾದ ನಿರ್ಜೀವ ಘಟಕಾಂಶಗಳ ಪರಸ್ಪರ ಅವಲಂಬನೆ ಮತ್ತು ಅಂತರ್ ಕ್ರಿಯೆಗಳ ಮೂಲಕ ರೂಪಗೊಳ್ಳುವ ನಿರ್ದಿಷ್ಟ ಪರಿಸರ ಘಟಕವನ್ನು ಪರಿಸರ ವ್ಯವಸ್ಥೆ ಎಂದು ಕರೆಯಬಹುದು.ʼʼ 

ಪರಿಸರ ವ್ಯವಸ್ಥೆಯ ರಚನೆ:  ಪರಿಸರ ವ್ಯವಸ್ಥೆಯ ರಚನೆಯು ಜೀವ ಜಾತಿಗಳು ಅವುಗಳ ಇತಿಹಾಸ, ಜೀವಿಸಂದಣಿ ಹಾಗೂ ಜೀವಿಗಳ ಹಂಚಿಕೆಯನ್ನು ಒಳಗೊಂಡಿದೆ. ಉದಾ: ಪ್ರಭೇಧ, ಸಂಖ್ಯೆ, ಜೀವರಾಶಿ, ಜೀವಿಯ ಇತಿಹಾಸ, ಅಜೈವಿಕ ವಸ್ತುಗಳ ಪ್ರಮಾಣ ಮತ್ತು ಹಂಚಿಕೆ, ಪೋಷಕಾಂಶಗಳು ಹಾಗೂ ನೀರು. ಪರಿಸರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಎರಡು ಘಟಕಗಳು.

1. ಅಜೈವಿಕ ಘಟಕಗಳು

2. ಜೈವಿಕ ಘಟಕಗಳು 

1. ಅಜೈವಿಕ ಘಟಕಗಳು (Abiotic Componenets)

ಇವು ಭೌತಿಕ ಹಾಗೂ ರಾಸಾಯನಿಕ ಅಂಗ ಭಾಗಗಳನ್ನು ಹೊಂದಿವೆ. ಇದರಲ್ಲಿ ನೆಲ, ಜಲ ಮತ್ತು ಗಾಳಿ ಸೇರಿವೆ. ಇವುಗಳು ಭೌತಿಕ ಪರಿಸರವನ್ನು ಸೃಷ್ಟಿಸುತ್ತವೆ. ಅಜೈವಿಕ ಘಟಕಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.

1. ವಾತಾವರಣದ ಭೌತಿಕ ಅಂಶಗಳು

2. ನಿರವಯವ ಅಥವಾ ಅಕಾರ್ಬನಿಕ್ ವಸ್ತುಗಳು

3. ಸಾವಯವ ಅಥವಾ ಕಾರ್ಬನಿಕ್ ಅಂಶಗಳು

1.  ವಾತಾವರಣದ ಭೌತಿಕ ಅಂಶಗಳು (Climate Physical Factors)

ಒಂದು ಪ್ರದೇಶದ ಮಣ್ಣು, ನೀರು, ಬೆಳಕು, ಶಾಖ ಮುಂತಾದ ತೇವಾಂಶಗಳನ್ನು ಬಳಸಿಕೊಂಡು ಜೀವಿಗಳು ಸಾವಯವ ಸಾಮಗ್ರಿಗಳನ್ನು ತಯಾರಿಸುತ್ತವೆ. ವಾತಾವರಣವು ಪದೇ ಪದೇ ಬದಲಾವಣೆ ಆಗುತ್ತಿರುವುದರಿಂದ ಜೀವಿಗಳ ಅಳಿವು ಉಳಿವು ಈ ಬದಲಾವಣೆಯನ್ನು ಅವಲಂಬಿಸಿರುತ್ತದೆ.

2. ನಿರವಯವ ಅಥವಾ ಆಕಾರ್ಬನಿಕ್ ವಸ್ತುಗಳು (Inorganic Components)

ಆಮ್ಲಜನಕ, ಜಲಜನಕ, ಇಂಗಾಲದ ಡೈ ಆಕ್ಸೈಡ್, ಗಂಧಕ, ರಂಜಕ ಇತ್ಯಾದಿಗಳು ನಿರವಯವ ವಸ್ತುಗಳಾಗಿದ್ದು ಪರಿಸರದಲ್ಲಿ ಪೋಷಕಾಂಶಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

3.  ಸಾವಯವ ಅಥವಾ ಕಾರ್ಬನಿಕ್ ವಸ್ತುಗಳು  (Organic Components)

ಸಾವಯವ ವಸ್ತುಗಳಾದ ಕಾರ್ಬೋಹೈಡ್ರೆಟ್‌ಗಳು, ಪಿಷ್ಟ, ಕೊಬ್ಬು, ಪ್ರೋಟಿನ್ ಮುಂತಾದ ಅಂಶಗಳು ಜೀವಿಗಳ ಜೈವಿಕ ಪ್ರಕ್ರಿಯೆಗೆ  ಸಹಾಯಕವಾಗುತ್ತದೆ.

2. ಜೈವಿಕ ಘಟಕಗಳು: (Biotic components)

ʻʻನಮ್ಮ ಸುತ್ತಲಿನ ಪರಿಸರದಲ್ಲಿ ಕಂಡುಬರುವ ಎಲ್ಲಾ ಬಗೆಯ ಜೀವಿಗಳನ್ನು ಒಳಗೊಂಡ ಘಟಕಗಳನ್ನು ಒಟ್ಟಾಗಿ ಜೈವಿಕ ಘಟಕಗಳು ಎಂದು ಕರೆಯಬಹುದಾಗಿದೆ.ʼʼ ಉದಾ: ಸಸ್ಯಗಳು, ಪ್ರಾಣಿಗಳು ಹಾಗೂ ಸೂಕ್ಷ್ಮಜೀವಿಗಳು. ಈ ಮೂರರಲ್ಲಿ ಸಸ್ಯಗಳು ಅತ್ಯಂತ ಪ್ರಮುಖವಾದ ಪಾತ್ರ ವಹಿಸುತ್ತವೆ. ಜೈವಿಕ ಘಟಕಗಳನ್ನು ಮತ್ತೆ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ.

1. ಸ್ವ ಪೋಷಕ ಘಟಕಗಳು

2. ಭಿನ್ನ ಪೋಷಕ ಘಟಕಗಳು

1)  ಸ್ವಪೋಷಕ ಘಟಕಗಳು:  (Autotrophic components)

ʻʻವಾತಾವರಣದಲ್ಲಿರುವ ಅಜೈವಿಕ ಅಂಶಗಳನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಜೀವಿಗಳನ್ನು ಸ್ವ ಪೋಷಕ ಘಟಕಗಳು ಎಂದು ಕರೆಯುತ್ತಾರೆ.ʼʼ ಇವು ಆಹಾರಕ್ಕಾಗಿ ಬೇರೆ ಯಾವ ಜೀವಿಗಳನ್ನು ಅವಲಂಬಿಸುವುದಿಲ್ಲ. ಬದಲಾಗಿ ಸೂರ್ಯನ ಶಕ್ತಿಯ ಬಳಕೆಯಿಂದಲೇ ಆಹಾರವನ್ನು ತಯಾರಿಸಿ ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ.

2)  ಭಿನ್ನ ಪೋಷಕ ಘಟಕಗಳು: (Heterophic components) 

ʻʻಪರಿಸರ ವ್ಯವಸ್ಥೆಯಲ್ಲಿ ತನ್ನನ್ನು ತಾನು ಕಾಪಾಡಿಕೊಳ್ಳಲು ಮತ್ತೊಂದು ಜೀವಿಯ ಮೇಲೆ ಅವಲಂಬಿತವಾದ ಜೀವಿಗಳನ್ನು ಭಿನ್ನ ಪೋಷಕ ಅಥವಾ ಪರಪೋಷಕ ಘಟಕಗಳು ಎಂದು ಕರೆಯುತ್ತಾರೆ.ʼʼ ಈ ಜೀವಿಗಳು ತಮ್ಮ ಆಹಾರಕ್ಕಾಗಿ ಸಸ್ಯಗಳು ಹಾಗೂ ಇತರೆ ಜೀವಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅವಲಂಬಿಸಿರುತ್ತವೆ. ಜೈವಿಕ ಘಟಕಗಳನ್ನು ಮತ್ತೆ ಮೂರು ವಿಧಗಳಲ್ಲಿ ವಿಂಗಡಿಸಲಾಗಿದೆ.

 1.ಉತ್ಪಾದಕರು

 2.ಉಪಭೋಗಿಗಳು

 3. ವಿಘಟಕರು

1. ಉತ್ಪಾದಕರು: (Producers)

ʻʻಪರಿಸರದಲ್ಲಿ ಅಜೈವಿಕ ಅಂಶಗಳಾದ ನೀರು ಹಾಗೂ ಇಂಗಾಲದ ಡೈ ಆಕ್ಸೈಡ್ ಗಳನ್ನು ಬಳಸಿಕೊಂಡು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಬಲ್ಲ ಜೀವಿಗಳಿಗೆ ಉತ್ಪಾದಕರು ಎಂದು ಕರೆಯುತ್ತಾರೆ.ʼʼ ದ್ಯುತಿ ಸಂಶ್ಲೇಷಣಾ ಕ್ರಿಯೆಯ ಮೂಲಕ ಆಹಾರ ತಯಾರಿಸುವ ಸಾಮರ್ಥ್ಯವುಳ್ಳ ಸಸ್ಯಗಳು, ಪಾಚಿಗಳು ಹಾಗೂ ಬ್ಯಾಕ್ಟೀರಿಯಾಗಳು ಉತ್ಪಾದಕ ವರ್ಗಕ್ಕೆ ಸೇರಿವೆ. ಇವುಗಳು ಉತ್ಪಾದಿಸಿದ ಆಹಾರಗಳು ಕೇವಲ ಅವುಗಳಿಗೆ ಅಷ್ಟೇ ಸೀಮಿತವಾಗಿರುವುದಿಲ್ಲ. ಬದಲಾಗಿ ಇಡೀ ಪರಿಸರ ವ್ಯವಸ್ಥೆಯ  ಎಲ್ಲಾ ಜೀವಿಗಳಿಗೂ ಒದಗಿಸುತ್ತದೆ.

2. ಉಪಭೋಗಿಗಳು ಅಥವಾ ಭಕ್ಷಕರು: (Consumers)

ʻʻತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳಲು ಶಕ್ತವಿಲ್ಲದ ಕಾರಣ ನೇರವಾಗಿ ಇಲ್ಲವೇ ಪರೋಕ್ಷವಾಗಿ ಆಹಾರಕ್ಕಾಗಿ ಉತ್ಪಾದಕ ಜೀವಿಯ ಮೇಲೆ ಅವಲಂಬಿತವಾದ ಜೀವಿಯನ್ನು ಉಪಭೋಗಿಗಳು ಅಥವಾ ಭಕ್ಷಕರು ಎಂದು ಕರೆಯಲಾಗುವುದು.ʼʼ ಪರಿಸರ ವ್ಯವಸ್ಥೆಯ ಇಂತಹ ಪ್ರಾಣಿಗಳನ್ನು ಪರಪೋಷಕ ಎಂದು ಕರೆಯುತ್ತಾರೆ. ಉಪಭೊಗಿಗಳು ಅಥವಾ ಭಕ್ಷಕ ಜೀವಿಗಳನ್ನು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.

1. ಪ್ರಾಥಮಿಕ ಉಪಭೋಗಿಗಳು ಅಥವಾ ಭಕ್ಷಕರು: (Primary consumers)

 ಉತ್ಪಾದಕ ಜೀವಿಗಳನ್ನು ಅಂದರೆ ಸಸ್ಯಗಳು ಹಾಗೂ ಪಾಚಿಗಳನ್ನು ನೇರವಾಗಿ ತಿನ್ನುವ ಮೂಲಕ ತಮ್ಮ ಆಹಾರವನ್ನು ತಾವೇ ಗಳಿಸಿಕೊಳ್ಳುತ್ತವೆ. ಇಂತಹ ಜೀವಿಗಳನ್ನು ಪ್ರಾಥಮಿಕ ಉಪಭೋಗಿಗಳು ಎಂದು ಕರೆಯುತ್ತಾರೆ. ಉದಾ:  ಆಡು, ಹಸು, ಮೊಲ, ಆನೆ, ಜಿಂಕೆ ಇತ್ಯಾದಿ.

2. ದ್ವಿತೀಯ ಉಪಭೋಗಿಗಳು ಅಥವಾ ಭಕ್ಷಕರು: (Secondary consumers)

 ಪ್ರಾಥಮಿಕ ಉಪಭೋಗಿಗಳನ್ನು ತಿಂದು ತಮ್ಮ ಆಹಾರವನ್ನು ಗಳಿಸಿಕೊಳ್ಳುವ ಜೀವಿಗಳನ್ನು (ಮಾಂಸಹಾರಿಗಳು)  ದ್ವಿತೀಯ ಉಪೋಗಿಗಳು ಎನ್ನುವರು. ಉದಾ  ಜಿಂಕೆಯನ್ನು ತಿನ್ನುವ ಹುಲಿ, ಆಡನ್ನು ತಿನ್ನುವ ಹುಲಿ, ಚಿರತೆ, ಸಿಂಹ. ಕೀಟಗಳನ್ನು ತಿನ್ನುವ ಕಪ್ಪೆ, ಕಪ್ಪೆಯನ್ನು ತಿನ್ನುವ ಹಾವು ಮುಂತಾದವುಗಳು.

3. ತೃತೀಯ ಉಪಭೋಗಿಗಳು ಅಥವಾ ಭಕ್ಷಕರು:(Tirtary consumers)

ದ್ವಿತೀಯ ಭಕ್ಷಕರನ್ನು ತಿಂದು ತಮ್ಮ ಆಹಾರವನ್ನು ಗಳಿಸಿಕೊಳ್ಳುವ ಪ್ರಾಣಿಗಳಿಗೆ ತೃತೀಯ ಉಪಪೋಗಿಗಳು ಅಥವಾ ಭಕ್ಷಕರು ಎಂದು ಕರೆಯಲಾಗುವುದು.

ಉದಾ :  ಹದ್ದು, ರಣಹದ್ದುಗಳು, ಸಿಂಹ, ಚಿರತೆ, ಹುಲಿ ಹಾಗೂ ಹಾವು ಇತ್ಯಾದಿಗಳು.

3. ವಿಘಟಕರು: (Decomposers)

ʻʻಉತ್ಪಾದಕ ಮತ್ತು ಉಪಭೋಗಿಗಳು ಸತ್ತ ಮೇಲೆ ಅವುಗಳ ನಿರ್ಜೀವ ದೇಹದ ಮೇಲೆ ಬೆಳೆದು ಅವುಗಳನ್ನು ಕೊಳೆಯುವಂತೆ ಮಾಡುವ ಜೀವಿಗಳನ್ನು ವಿಘಟಕರು ಎಂದು ಹೆಸರು.ʼʼ ಶಿಲೀಂದ್ರಗಳು ಹಾಗೂ ಬ್ಯಾಕ್ಟೀರಿಯಾಗಳು ಈ ರೀತಿಯ ಜೀವಿಗಳಿಗೆ ಉದಾಹರಣೆಗಳು. ಇವುಗಳು ಸತ್ತ ಜೀವಿಗಳ ದೇಹದಲ್ಲಿರುವ ಕಾರ್ಬನಿಕ್ ವಸ್ತುಗಳನ್ನು ವಿಭಜಿಸುವ ಮೂಲಕ ತಮ್ಮ ಆಹಾರವನ್ನು ಪಡೆದುಕೊಳ್ಳುತ್ತವೆ. ವಿಘಟಕ ಜೀವಿಗಳು ನಿರವಯವ ಜೀವಿಗಳನ್ನು ಪರಿಸರದ ಅಜೈವಿಕ ಘಟಕಗಳಿಗೆ ಹಿಂತಿರುಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಜೀವಿಗಳ ಕಳೆಬರವನ್ನು ಕೊಳೆಸಿ ವಿಘಟಿಸುವ ವಿಘಟಕ ಜೀವಿಗಳನ್ನು ಪರಿಸರದ ಜಾಡ ಮಾಲಿಗಳು ಎಂದು ಕರೆಯುತ್ತಾರೆ.

ಉಪಸಂಹಾರ 

ಪರಿಸರ ವ್ಯವಸ್ಥೆಯು ಅಜೈವಿಕ ಮತ್ತು ಜೈವಿಕ ಘಟಕಗಳ ಸಮನ್ವಯದಿಂದ ರೂಪುಗೊಂಡಿರುವ ಅತ್ಯಂತ ಸೂಕ್ಷ್ಮ ಮತ್ತು ಸಮತೋಲನಯುತ ವ್ಯವಸ್ಥೆಯಾಗಿದೆ. ಉತ್ಪಾದಕರು, ಉಪಭೋಗಿಗಳು ಹಾಗೂ ವಿಘಟಕರು ಪರಸ್ಪರ ಅವಲಂಬಿತವಾಗಿ ಕಾರ್ಯನಿರ್ವಹಿಸುವುದರಿಂದಲೇ ಪರಿಸರದ ಚಕ್ರ ನಿರಂತರವಾಗಿ ಸಾಗುತ್ತದೆ. ಈ ಘಟಕಗಳಲ್ಲಿ ಯಾವುದೇ ಒಂದು ಅಂಶಕ್ಕೆ ಹಾನಿಯಾದರೂ ಇಡೀ ಪರಿಸರ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಪರಿಸರವನ್ನು ಸಂರಕ್ಷಿಸುವುದು ಮಾನವನ ಪ್ರಮುಖ ಕರ್ತವ್ಯವಾಗಿದೆ. ಪರಿಸರ ಸಮತೋಲನ ಉಳಿದಾಗಲೇ ಭವಿಷ್ಯದ ಪೀಳಿಗೆಗಳಿಗೆ ಆರೋಗ್ಯಕರ ಭೂಮಿ ಸಾಧ್ಯವಾಗುತ್ತದೆ

ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು

ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು

ನೀರು ಜೀವನದ ಮೂಲ ಸಂಪನ್ಮೂಲವಾಗಿದ್ದು, ಅದರ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಮಳೆ ನೀರಿನ ಕೊಯ್ಲು ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿ ಭವಿಷ್ಯದ ನೀರಿನ ಅಭಾವವನ್ನು ತಡೆಯುವ ಪರಿಣಾಮಕಾರಿ ವಿಧಾನವಾಗಿದೆ.

ʻʻಮಳೆಗಾಲದಲ್ಲಿ ಬಿದ್ದ ನೀರನ್ನು ಸೆರೆಹಿಡಿದು ಸಂಗ್ರಹಿಸಿ ಮಾನವ, ಪಶು, ಪಕ್ಷಿ ಹಾಗೂ ಸಸ್ಯಗಳಿಗೆ ಬಳಕೆ ಮಾಡಿಕೊಳ್ಳುವ ಕ್ರಮವನ್ನು ಮಳೆ ನೀರು ಕೊಯ್ಲು ಎಂದು ಕರೆಯಲಾಗುವುದು.ʼʼ ಮಳೆಗಾಲದಲ್ಲಿ ಬಿದ್ದ ನೀರು ಹಾಗೆ ಹರಿದು ವ್ಯರ್ಥವಾಗಿ ಹೋಗದಂತೆ ಮೇಲ್ಚಾವಣಿ ಅಥವಾ ಮೇಲ್ಮೈಯಿಂದ ಸಂಗ್ರಹಣೆ ಮಾಡಿ ಅಗತ್ಯವಿದ್ದಾಗ ವಿವಿಧ ಉದ್ದೇಶಗಳಿಗಾಗಿ ನೀರನ್ನು ಮರುಬಳಕೆ ಮಾಡಬಹುದು. ಮಳೆ ನೀರು ಕೊಯ್ಲು ಮನೆಗಳಿಗೆ ಸ್ವಯಂ ಸರಬರಾಜಿನ ಸರಳ ಹಾಗೂ ಸುಲಭ ವಿಧಾನವಾಗಿದ್ದು ಇದು ಹೆಚ್ಚು ಖರ್ಚಿನ ವಿಧಾನವಲ್ಲ.  ಈ ರೀತಿಯಾದ ನೀರಿನ ಸಂಗ್ರಹಣೆಯನ್ನು ಮನೆಗಳು, ಶಾಲಾ-ಕಾಲೇಜುಗಳು, ಆಸ್ಪತ್ರೆಗಳು, ಬೃಹತ್ ಕೈಗಾರಿಕೆಗಳಲ್ಲಿ ಇತ್ತೀಚಿಗೆ ಕಡ್ಡಾಯವಾಗಿ ಅಳವಡಿಸಲಾಗಿದೆ. ಮಳೆ ನೀರಿನ ಕೊಯ್ಲಿನ ಪರಿಣಾಮವಾಗಿ ಅಂತರ್ಜಲದ ಗುಣಮಟ್ಟದಲ್ಲಿಯೂ ಸಹ ಸುಧಾರಣೆ ಕಂಡುಬಂದಿದೆ. 

ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು (Benefits of rainwater harvesting)

1.ಇದೊಂದು ಬಹಳ ಸರಳವಾದ ಅಷ್ಟೇ ಸುಲಭವಾದ ವಿಧಾನವಾಗಿದೆ.

2. ಇದಕ್ಕೆ ಹೆಚ್ಚು  ಖರ್ಚು ಆಗುವುದಿಲ್ಲ. ಆದರೆ ಲಾಭ ಮಾತ್ರ ಹೆಚ್ಚು.

3.  ಇದು ಪರಿಸರಸ್ನೇಹಿ ವಿಧಾನವಾಗಿದೆ.

4.  ಮಳೆ ಕೊಯ್ಲಿನಿಂದ ಮಣ್ಣಿನ ಸವಕಳಿಯನ್ನು ತಡೆಗಟ್ಟಿ ಫಲವತ್ತತೆಯನ್ನು ಹೆಚ್ಚಿಸಬಹುದು.

5.  ನೀರಿನ ಸ್ವಾವಲಂಬನೆಯನ್ನು ಸಾಧಿಸಬಹುದಾಗಿದೆ.

6.  ಮಳೆ ನೀರಿನ ಕೊಯ್ಲಿನಿಂದ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ.

7.  ಫ್ಲೋರೈಡ್ ಮುಕ್ತ ಶುದ್ದ ಕುಡಿಯುವ ನೀರಿಗಾಗಿ ಮಳೆ ನೀರಿನ ಕೊಯ್ಲು ಬಹಳ ಪರಿಣಾಮಕಾರಿ.

8.   ಮಳೆ ನೀರು ಕೊಯ್ಲಿನ ಪರಿಣಾಮವಾಗಿ ಕೆರೆಕಟ್ಟೆಗಳನ್ನು ಭರ್ತಿ ಮಾಡಬಹುದು.

9.  ಮಳೆ ನೀರು ಕೊಯ್ಲಿನ ಪರಿಣಾಮದಿಂದ ಬರಗಾಲವನ್ನು ತೊಡೆದು ಹಾಕಬಹುದು.

10.  ಅತಿಯಾದ ನೀರಿನ ಬಳಕೆಯನ್ನು ತಡೆಗಟ್ಟುವುದು ಹಾಗೂ ವಿದ್ಯುತ್ ಶಕ್ತಿಯನ್ನು ಉಳಿತಾಯ ಮಾಡುವುದು.

11.  ಮಳೆ ನೀರು ಕೊಯ್ಲಿನಿಂದ ಕುಡಿಯಲು, ಅಡುಗೆ ಮಾಡಲು, ಸ್ನಾನ ಮಾಡಲು, ಬಟ್ಟೆ, ಪಾತ್ರೆಗಳನ್ನು, ದನ ಕರುಗಳ ಮೈ ತೊಳೆಯಲು, ಶೌಚಾಲಯದ ಉಪಯೋಗಕ್ಕಾಗಿ, ಕೈತೋಟ ಹಾಗೂ ಕೃಷಿ ಕಾರ್ಯಗಳಿಗಾಗಿ ನೀರನ್ನು ಬಳಸಬಹುದು.

ವಿಜಾಪುರ ನಗರದ ಹೊರ ಭಾಗದಲ್ಲಿ ನಿರ್ಮಿತಿ ಕೇಂದ್ರವನ್ನು ಸ್ಥಾಪಿಸಿ ಮಳೆ ನೀರು ಕೊಯ್ಲಿಗೆ ಅನುಕೂಲತೆಯನ್ನು ಒದಗಿಸಿಕೊಡಲಾಗಿದೆ. ಇಲ್ಲಿ ಮಳೆ ನೀರು ಕೊಯ್ಲಿನ ಸಂಗ್ರಹದ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಳೆ ನೀರು ಕೊಯ್ಲಿನಿಂದ ಸ್ವಚ್ಛ ಹಾಗೂ ಸುಸ್ಥಿರ ನಗರಗಳನ್ನು ನಿರ್ಮಿಸಬಹುದಾಗಿದೆ. ಅಂತರ್ಜಲ ಅಭಿವೃದ್ಧಿಗಾಗಿ

1. ತೆರೆದ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು.

2.  ಕೊಳವೆ ಬಾವಿಗಳನ್ನು ಪುನರುಜ್ಜೀವನಗೊಳಿಸುವುದು.

3.  ಕೆರೆಕಟ್ಟೆ, ತೊರೆ, ನದಿಗಳು ಹಾಗೂ ಸರೋವರಗಳ ನೀರನ್ನು ಸಂಗ್ರಹಿಸುವುದು.

ಉಪಸಂಹಾರ

ಮಳೆ ನೀರಿನ ಕೊಯ್ಲು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ನೀಡುವ ಅತ್ಯುತ್ತಮ ಜಲಸಂರಕ್ಷಣಾ ವಿಧಾನವಾಗಿದೆ. ಇದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಪರಿಸರ ಸಮತೋಲನವನ್ನು ಕಾಪಾಡುತ್ತದೆ. ಮನೆಮಟ್ಟದಿಂದ ಹಿಡಿದು ಸಾರ್ವಜನಿಕ ಸಂಸ್ಥೆಗಳವರೆಗೆ ಮಳೆ ನೀರು ಕೊಯ್ಲನ್ನು ಅಳವಡಿಸಿಕೊಂಡರೆ ನೀರಿನ ಸ್ವಾವಲಂಬನೆ ಸಾಧಿಸಬಹುದು. ಭವಿಷ್ಯದ ತಲೆಮಾರಿಗೆ ನೀರನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆದ್ದರಿಂದ ಮಳೆ ನೀರು ಕೊಯ್ಲನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ.

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ʻʻ ಸುಸ್ಥಿರ ಅಭಿವೃದ್ಧಿ ಎಂದರೆ ಪ್ರಸ್ತುತ ಪೀಳಿಗೆಯ ಅಗತ್ಯತೆಯನ್ನು ಪೂರೈಸುವಾಗ ಭವಿಷ್ಯದ ಪೀಳಿಗೆಯ ಅಗತ್ಯತೆಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು.ʼʼ ಇದರ ಅರ್ಥವೆಂದರೆ ಪರಿಸರ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳ ನಡುವೆ  ಸಮತೋಲನ ಕಾಯ್ದುಕೊಂಡು ನಾವು ಇಂದು ಬಳಸುವ ಸಂಪನ್ಮೂಲಗಳು ಮುಂದಿನ ಪೀಳಿಗೆಗೂ ಲಭ್ಯವಿರುವಂತೆ ನೋಡಿಕೊಳ್ಳುವುದು. ಉದಾ:  ನಿಗದಿತ ಪ್ರಮಾಣದಲ್ಲಿ ಆದಾಯ ಬರುವಂತೆ ಕಾರ್ಯನಿರ್ವಹಣೆ ಮಾಡುವುದು. ನಿಗದಿತ ಪ್ರಮಾಣದಲ್ಲಿ ಉತ್ಪಾದನೆ, ನಿಗದಿತ ಪ್ರಮಾಣದಲ್ಲಿ ಮಾಂಸ ದೊರಕುವಂತೆ ಮಾಡುವುದು ಮತ್ತು ನಿಗದಿತ ಪ್ರಮಾಣದಲ್ಲಿ ಸಂಪನ್ಮೂಲಗಳು ದೊರಕುವಂತೆ ಮಾಡುವುದು. ಸುಸ್ಥಿರ ಎಂಬ ಪದವು ಪ್ರಥಮ ಬಾರಿಗೆ 1713 ರಲ್ಲಿ ಜರ್ಮನಿಯ ಫಾರೆಸ್ಟ್ರಿ ಕೈಪಿಡಿಯಲ್ಲಿ ಬಳಕೆಯಾಯಿತು. ನಂತರ 1987ರಲ್ಲಿ ವಿಶ್ವ ಸಂಸ್ಥೆಯಿಂದ ನೇಮಕಗೊಂಡಿದ್ದ ಬ್ರಂಡ್ ಟ್ಲಾಂಡ್‌  ಕಮಿಷನ್ ವರದಿಯಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು. 

ನೈಸರ್ಗಿಕ ಸಂಪನ್ಮೂಲಗಳು ಹಾಳಾಗದಂತೆ ಅವುಗಳನ್ನು ಅಪಾಯಕ್ಕೆ ದೂಡುವುದನ್ನು ತಡೆಗಟ್ಟಿ ಪರಿಸರ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸ್ಥಿರವಾದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೇ ಮೂಲ ಗುರಿಯಾಗಿಬೇಕು. ಅದು ಇಂದಿನ ಮೂಲ ಉದ್ದೇಶವೂ ಆಗಿರಬೇಕು ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಇಂದಿನ ಸಾಮಾಜಿಕ ವ್ಯವಸ್ಥೆಯ ಬಯಕೆಯಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಳು ಸಂಪನ್ಮೂಲಗಳನ್ನು ವಿನಾಶದ ಅಂಚಿಗೆ ತಳ್ಳಿದೆ. ಇವುಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಯು ಅವುಗಳನ್ನು ಅನುಭವಿಸುವಂತೆ ಮಾಡಿ ಸ್ಥಿರತೆಯನ್ನು ಕಾಪಾಡುವುದೇ ಪ್ರಮುಖ ಉದ್ದೇಶವನ್ನು ಸುಸ್ಥಿರತೆಯು ಹೊಂದಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಇಂದಿನ ಮಾನವ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಮಾಡುತ್ತಲೇ ಬಂದಿದ್ದಾನೆ. ಅವನು ನೈಸರ್ಗಿಕ ವ್ಯವಸ್ಥೆಯ ಸಮಗ್ರತೆಯನ್ನು ಹಾಗೂ ಸ್ಥಿರತೆಯನ್ನು ಹಾಳು ಮಾಡದೆ ತನ್ನ ಅಗತ್ಯಗಳನ್ನು ಇದ್ದುದರಲ್ಲಿಯೇ ಪೂರೈಸಿಕೊಳ್ಳಬೇಕು. ಇದೇ ಸುಸ್ಥಿರತೆಯ ಮೂಲ ಮಂತ್ರವಾಗಿದೆ. ಪರಿಸರ ಸಂರಕ್ಷಣೆಯಿಂದಲೇ ಸುಸ್ಥಿರತೆ ಸಾಧ್ಯವಾಗಿದೆ ಎಂಬುದನ್ನು ಮಾನವ ಅರಿತುಕೊಳ್ಳಬೇಕು. ಆಧುನಿಕ ಮಾನವನ ಮೂಲ ಗುರಿ ಎಂದರೆ ಆಧುನಿಕ ಅಭಿವೃದ್ಧಿ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಏಕಕಾಲದಲ್ಲಿ ಸಾಧಿಸುವುದು ಆಗಬೇಕು. ಸುಸ್ಥಿರತೆಯಿಂದ ಭವಿಷ್ಯದ ಪರಿಸರಕ್ಕೆ ಧಕ್ಕೆ ಆಗಬಾರದು ಮತ್ತು ವರ್ತಮಾನ ಕಾಲದ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬೇಕು.

1. ಸುಸ್ಥಿರತೆಯ ಪರಿಕಲ್ಪನೆ (Concept of Sustainable Development)

ʻʻ ನಿಸರ್ಗದತ್ತವಾದ ಸಂಪನ್ಮೂಲಗಳಿಗೆ ಚ್ಯುತಿ ಬರದಂತೆ ಅಥವಾ ಅಂತಹ ಸಂಪನ್ಮೂಲಗಳು ಅಭಿವೃದ್ಧಿಯಾಗುವಂತೆ ಮಾನವನಿಂದ ನಿರ್ವಹಿಸಲ್ಪಟ್ಟ ಉತ್ಪಾದಕತೆಯ ಪ್ರಕ್ರಿಯೆಯನ್ನು ಸುಸ್ಥಿರತೆ ಎಂದು ವ್ಯಾಖ್ಯಾನಿಸಬಹುದುʼʼ.  ಭವಿಷ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಪರಿಸರವನ್ನು ಕಾಪಾಡಿ ಸುಸ್ಥಿರತೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಮಾನವನ ಆದ್ಯ ಕರ್ತವ್ಯವಾಗಿದೆ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿತು. ವಿಶ್ವದ ಹಲವಾರು ಪರಿಸರ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಸುಸ್ಥಿರತೆಯ ಅಗತ್ಯಗಳನ್ನು ಬಿಂಬಿಸಿದವು. ಅಂತಹ ಸಾಮಾಜಿಕ ಬಿಕ್ಕಟ್ಟುಗಳು ಈ ಕೆಳಗಿನಂತಿವೆ.

1. ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡಿದ ಅಧಿಕ ಸಾಲದ ಆಘಾತ

2.  ರಂಗೇಲಾಪ್ ಪರಮಾಣು ದುರಂತ

3.  1950ರ ದಶಕದಲ್ಲಿ ಉಂಟಾದ ಜಪಾನಿನ ಮಿನಾಮಟ ದುರಂತ  

4.  1984ರ ಭೂಪಾಲ ಅನಿಲ ದುರಂತ

5.  ಚೆರ್ನೋಬಿಲ್ ಅಣು ದುರಂತ 1986

6.  1973-1979ರ ನಡುವಿನ ತೈಲ ಅಪಘಾತಗಳು

7.  1923ರ ಅಮೆರಿಕಾದ ಹಣದುಬ್ಬರದ ಏರಿಕೆ.

8. 1907ರ ಅಮೇರಿಕಾದ ಬ್ಯಾಂಕಿಂಗ್ ವ್ಯವಸ್ಥೆ

 ಇದರೊಂದಿಗೆ ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಓಜೋನ್ ಪದರು  ಕ್ಷೀಣ, ಜೀವ ವೈವಿಧ್ಯಗಳ ನಾಶ ಇತ್ಯಾದಿಗಳು.

 ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಹಲವು ಅಂಶಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಈ ಕೆಳಗಿನಂತೆ ನೋಡಬಹುದು.

1. ದಿನೇ ದಿನೇ ಹದಗೆಡುತ್ತಿರುವ ಪರಿಸರ ಮಾಲಿನ್ಯವನ್ನು  ನಿಯಂತ್ರಿಸುವುದು ಮತ್ತು ಪರಿಸರ ಮಾಲಿನ್ಯವಾಗದಂತೆ ತಡೆಯುವುದು.

2.  ಬೆಳೆಯುತ್ತಿರುವ ನಗರಗಳು ಹೆಚ್ಚು ಮಾಲಿನ್ಯಕಾರಕವಾಗಿದ್ದು ಮಾಲಿನ್ಯವನ್ನು ತಡೆಗಟ್ಟಿ ನಗರ ಯೋಜನೆಗಳಿಗೆ ಹೊಸ ಕಾನೂನುಗಳನ್ನು ರೂಪಿಸುವುದು.

3.  ಸಾಮಾಜಿಕ ಅರಣ್ಯವನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು.

4.  ಸಂಪನ್ಮೂಲಗಳನ್ನು ಮಿತಿಯಾಗಿ ಬಳಸುವುದು ಮತ್ತು ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು.

5. ಶಕ್ತಿ ಸಂಪನ್ಮೂಲಗಳನ್ನು ರಕ್ಷಿಸುವುದು.

6.  ಕರಾವಳಿ ಹಾಗೂ ಸಮುದ್ರ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.

7.  ಪರಿಸರವನ್ನು ನಾಶ ಮಾಡುವ ಜನರನ್ನು ಹಿಡಿದು ಶಿಕ್ಷಿಸುವುದು.

8.  ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು.

9.  ಹಸಿರು ಕ್ರಾಂತಿಯನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ಇದರೊಂದಿಗೆ 1972ರಲ್ಲಿ ಮೆಡಿಟೇರಿನಿಯನ್ ಸಮುದ್ರ ತೀರವು ಬಹಳ ಮಲಿನಗೊಂಡಿದೆ ಎಂದು ತಿಳಿದು ಅಂತರಾಷ್ಟ್ರೀಯ ಸ್ಟಾಕ್ ಹೋಂ ಸಮ್ಮೇಳನವನ್ನು ಪ್ರಥಮ ಬಾರಿಗೆ ಕರೆಯಲಾಯಿತು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡುವಂತೆ ಯುರೋಪಿನ ದೇಶಗಳಿಗೆ ಕರೆ ನೀಡಲಾಯಿತು. 1973ರಲ್ಲಿ ʻʻದಿ  ಯುರೋಪಿಯನ್ ಕಮ್ಯುನಿಟಿಸ್‌  ಎನ್ವಿರಾನ್ಮೆಂಟ್ ಪ್ರೊಟೆಕ್ವಿವಿಟಿ  ಪ್ರೋಗ್ರಾಮ್” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯಾರು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತಾರೋ ಅವರು ದಂಡ ಕೊಡಬೇಕಾಗುವುದು ಎಂಬ ತೀರ್ಮಾನವನ್ನು ಅಂಗೀಕರಿಸಲಾಯಿತು. 

 1992 ರಲ್ಲಿ ಬ್ರೆಜಿಲ್ ನ ರಿಯೋಡಿಜನೈರೋದಲ್ಲಿ  ಜರುಗಿದ ಪೃಥ್ವಿ ಸಮ್ಮೇಳನದಲ್ಲಿ ಸುಮಾರು 1500 ವಿಜ್ಞಾನಿಗಳು 99 ನೊಬೆಲ್ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ 21 ಮಾರ್ಗಸೂಚಿ ತತ್ವಗಳನ್ನು ಅಂಗೀಕರಿಸಲಾಯಿತು. ಅದರ ಪ್ರಕಾರ ಮಾಲಿನ್ಯ ಮಾಡಿದವರೇ ದಂಡ ಭರಿಸಬೇಕು. ಜಾಗತಿಕ ಪರಿಸರಕ್ಕೆ ಹಾನಿ ಮಾಡಿದ ದೇಶಗಳೇ ಪರಿಸರವನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಹೋರಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಆದೇಶಗಳೇ ಭರಿಸಬೇಕು.

2. ಸುಸ್ಥಿರ ಅಭಿವೃದ್ಧಿಯ ಗುರಿಗಳು: ( Sustainable development goal )

ಸುಸ್ಥಿರ ಅಭಿವೃದ್ಧಿಯ ಗುರಿಗಳು 2030ರ ವೇಳೆಗೆ ಜನರನ್ನು ಮತ್ತು ನಮ್ಮ ಗ್ರಹವನ್ನು ಉತ್ತಮಪಡಿಸುವ  ವಿಶ್ವ ಸಂಸ್ಥೆಯ 17 ಗುರಿಗಳಾಗಿವೆ. ಈ ಗುರಿಗಳು ಬಡತನವನ್ನು ನಿರ್ಮೂಲನೆ ಮಾಡುವುದು, ಹಸಿವನ್ನು ಕೊನೆಗಾಣಿಸುವುದು, ಆರೋಗ್ಯ ಹಾಗೂ ಶಿಕ್ಷಣವನ್ನು ಸುಧಾರಿಸುವುದು, ಲಿಂಗಸಮಾನತೆಯನ್ನು ಉಂಟುಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸುವುದು ಹಾಗೂ ನ್ಯಾಯ ಸಂಸ್ಥೆಗಳನ್ನು ಬಲಪಡಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಯ 17 ಗುರಿಗಳು ಈ ಕೆಳಗಿನಂತಿವೆ.

೧. ಬಡತನದ ಎಲ್ಲಾ ರೂಪಗಳನ್ನು ನಿರ್ಮೂಲನೆಗೊಳಿಸುವುದು.

೨.  ಆಹಾರ, ಭದ್ರತೆ ಹಾಗೂ ಸುಸ್ಥಿರ ಕೃಷಿಯನ್ನು ಅಭಿವೃದ್ಧಿಪಡಿಸುವುದು.

೩. ಎಲ್ಲರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡುವುದು, ಆರೋಗ್ಯದ ಬಗ್ಗೆ ಖಚಿತಪಡಿಸಿಕೊಳ್ಳುವುದು.

೪.  ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಸಮಾನತೆಯನ್ನು ನೀಡುವುದು.

೫. ಲಿಂಗಸಮಾನತೆಯನ್ನು ಸಾಧಿಸುವುದು ಹಾಗೂ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವುದು.

೬.  ಕುಡಿಯುವ ನೀರು ಹಾಗೂ ನೈರ್ಮಲ್ಯದ ಬಗ್ಗೆ ಗಮನಹರಿಸುವುದು.

೭. ಪ್ರತಿಯೊಬ್ಬರ ವಿಶ್ವಾಸಾರ್ಹ ಸುಸ್ಥಿರ ಹಾಗೂ ಆಧುನಿಕ ಶಕ್ತಿಯನ್ನು ಖಚಿತ ಪಡಿಸಿಕೊಳ್ಳುವುದು.

೮. ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

೯.  ಮೂಲಸೌಕರ್ಯವನ್ನು ನೀಡುವ ಮೂಲಕ ಕೈಗಾರೀಕರಣಕ್ಕೆ ಪ್ರೋತ್ಸಾಹ ಕೊಡುವುದು.

೧೦. ದೇಶ ದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು.

೧೧. ನಗರಗಳು ಮತ್ತು ಮಾನವ ವಸಹಾತು ಪ್ರದೇಶಗಳಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು.

೧೨. ಸುಸ್ಥಿರ ಬಳಕೆ ಹಾಗೂ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.

೧೩. ಹವಾಮಾನ ಬದಲಾವಣೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು.

೧೪. ಸಾಗರ ಹಾಗೂ ಸಾಗರ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪತ್ತಿನ ಸಂರಕ್ಷಣೆಗಾಗಿ ಸತತ ಹೋರಾಡುವುದು.

೧೫. ಪರಿಸರ ಮಾಲಿನ್ಯ, ಅರಣ್ಯ ನಾಶ, ಭೂಮಿಯ ಅವನತಿಯನ್ನು ತಡೆಗಟ್ಟುವುದು ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸುವುದು.

೧೬. ಶಾಂತಿಯುತ ಹಾಗೂ ನ್ಯಾಯಯುತ ಸಮಾಜದ ನಿರ್ಮಾಣ.

೧೭. ಜಾಗತಿಕ ಸಹಭಾಗಿತ್ವವನ್ನು ಪುನರುಜ್ಜೀವನಗೊಳಿಸುವುದು.

ಉಪಸಂಹಾರ

ಸುಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಯು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಇವುಗಳ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ವಿಶ್ವ ಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮಾನವ ಸಮಾಜವನ್ನು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯದತ್ತ ಕೊಂಡೊಯ್ಯುವ ದಿಕ್ಕು ಸೂಚಿಸುತ್ತವೆ. ಈ ಗುರಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಸುಸ್ಥಿರತೆಯನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.

ವಾಯುಮಂಡಲದ ರಚನೆ

ವಾಯುಮಂಡಲದ ರಚನೆ

ವಾಯುಮಂಡಲವು ಭೂಮಿಯಿಂದ ಸುಮಾರು 1600 ಕಿ.ಮೀ ಎತ್ತರವಾಗಿದೆ. ಶೇ 99 % ರಷ್ಟು ವಾಯುವಿನ ಸಾಂದ್ರತೆಯು ಭೂಮಿಯಿಂದ 32 ಕಿ.ಮೀ ಎತ್ತರದೊಳಗೆ ಸಂಗ್ರಹವಾಗಿದೆ. ಇದಕ್ಕೆ ಮೂಲ ಕಾರಣ ಭೂಮಿಯ ಗುರುತ್ವಾಕರ್ಷಣಬಲ. ವಾಯುಮಂಡಲವನ್ನು ಒಟ್ಟು ಐದು ಪದರಗಳನ್ನಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ

1. ಪರಿವರ್ತನಾ ಮಂಡಲ

2. ಸಮೋಷ್ಣ ಮಂಡಲ

3. ಮಧ್ಯಂತರ ಮಂಡಲ

4. ಉಷ್ಣತಾ ಮಂಡಲ ಹಾಗೂ

5. ಬಾಹ್ಯ ಮಂಡಲ

1. ಪರಿವರ್ತನ ಮಂಡಲ (Troposphere)

ʻʻಪರಿವರ್ತನಾ ಮಂಡಲಕ್ಕೆ ಮಿಶ್ರವಲಯ ಎಂದು ಕರೆಯುತ್ತಾರೆ.ʼʼ ಟ್ರೋಪೋಸ್‌ ಎಂಬ ಪದವು ಗ್ರೀಕ್‌ ಭಾಷೆಯಿಂದ ಬಂದಿದೆ. ಇದರ ಅರ್ಥ ಮಿಶ್ರಣ ಅಥವಾ ಟರ್ಬುಲೆನ್ಸ್.‌ ಇದು ವಾಯುಮಂಡಲದ ಅತ್ಯಂತ ಕೆಳಸ್ತರವಾಗಿದೆ. ಈ ವಲಯದ ಎತ್ತರ ಧ್ರುವಗಳಲ್ಲಿ 8 ಕೀ.ಮಿ, ಸಮಭಾಜಕ ವೃತ್ತ ಪ್ರದೇಶದಲ್ಲಿ 18 ಕೀ.ಮಿ ಹಾಗೂ ಸರಾಸರಿ ಎತ್ತರ 12 ಕಿ.ಮೀ ಆಗಿರುತ್ತದೆ. ಈ ವಲಯದಲ್ಲಿ ಎತ್ತರವು ಹೆಚ್ಚಿದಂತೆ ಉಷ್ಣಾಂಶದಲ್ಲಿ ಇಳಿಕೆ ಕಂಡುಬರುತ್ತದೆ.  ಈ ಪ್ರದೇಶದಲ್ಲಿನ ಸರಾಸರಿ ತಾಪಮಾನವು ಪ್ರತಿ 165 ಮೀಟರ್ ಎತ್ತರಕ್ಕೆ 1 ಡಿಗ್ರಿ ಸೆ. ಅಥವಾ 100 ಮೀ ಎತ್ತರಕ್ಕೆ 6.4 ಡಿಗ್ರಿ ಸೆ. ಕಡಿಮೆಯಾಗುತ್ತದೆ.  ವಾಯುಮಂಡಲದ 99%  ನೀರಿನ ಆವಿ, ವಾಯುಧೃವ ಕಣಗಳು ಈ ವಲಯದಲ್ಲಿ ಕಂಡುಬರುವ ಕಾರಣದಿಂದ ಇದಕ್ಕೆ ʻʻ ಬದಲಾವಣೆ ಮಂಡಲʼʼ  ಎಂದು ಕರೆಯುತ್ತಾರೆ.  ಪರಿವರ್ತನಾ ಮಂಡಲದಲ್ಲಿ ಮೋಡಗಳ ಜನನ, ಮಿಂಚು, ಗುಡುಗು, ಕಾಮನಬಿಲ್ಲು, ಮಂಜು, ಮಳೆ ಕಂಡುಬರುತ್ತದೆ. ಹಾಗಾಗಿ ಇದನ್ನು ʻʻ ಹವಾಮಾನ ಉತ್ಪಾದಕ ಮಂಡಲʼʼ  ಎಂದು ಕರೆಯಲಾಗುವುದು.  ಪ್ರಚಲನ ಪ್ರವಾಹಗಳು ಇಲ್ಲಿಯೇ ಕೊನೆಯಾಗುತ್ತವೆ. ಆದುದರಿಂದ ಇದನ್ನು ಪ್ರಚಲನ ಹೊಲಿಗೆ ಎಂದು ಕರೆಯಲಾಗಿದೆ. ಪರಿವರ್ತನಾ ಮಂಡಲ ಹಾಗೂ ಸಮೋಷ್ಣ ಮಂಡಲದ ನಡುವಿನ ಗಡಿ ರೇಖೆಯನ್ನು ಪರಿವರ್ತನಾ ವಿರಾಮ ಎಂದು ಕರೆಯಲಾಗಿದೆ.

2.  ಸಮೋಷ್ಣ ಮಂಡಲ (Stratosphere)

 ಇದು ವಾಯುಮಂಡಲದ ಎರಡನೇ ಸ್ಥರವಾಗಿದೆ.  ಈ ವಲಯವು ಭೂಮಿಯ ಮೇಲ್ಮೈಯಿಂದ ಸುಮಾರು 50 ಕಿ.ಮೀ ಎತ್ತರದಲ್ಲಿದೆ. ಈ ವಲಯವು ನೀರಾವಿ ಹಾಗೂ ಧೂಳಿನ ಕಣಗಳಿಂದ ಮುಕ್ತವಾಗಿರುವ ಕಾರಣದಿಂದ ಇಲ್ಲಿ ಯಾವುದೇ ಮೋಡಗಳು ಇರುವುದಿಲ್ಲ. ಹಾಗಾಗಿ ವಿಮಾನಗಳು ಹಾರಾಟ ಮಾಡಲು ಇಲ್ಲಿ ಸಮಸ್ಯೆಗಳು ಉದ್ಭವಿಸುವುದಿಲ್ಲ. ಇದರ ಇನ್ನೊಂದು ವೈಶಿಷ್ಟವೆಂದರೆ ಇಲ್ಲಿ ಓಝೋನ್ ಪದರು ಇದ್ದು ಅದು ಸೂರ್ಯನ ಅಪಾಯಕಾರಿಯಾದ ನೇರಳಾತೀತ ಕಿರಣಗಳನ್ನು ಹೀರಿಕೊಂಡು ಭೂಮಿಯ ಮೇಲಿನ ಜೀವಿಗಳ ಉಳಿವಿಗೆ ಕಾರಣವಾಗಿದೆ.  ಓಝೋನ್ ಪದರವು ಸುಮಾರು 20ರಿಂದ 30 ಕಿ.ಮೀ ಮಧ್ಯದಲ್ಲಿದೆ. ಇಲ್ಲಿ ವಾಯು ವಿರಳವಾಗಿದ್ದು ಉಷ್ಣತೆಯು ಸ್ಥಿರವಾಗಿರುತ್ತದೆ. ಸಮೋಷ್ಣ ವಿರಾಮವು ಸಮೋಷ್ಣ ಮಂಡಲ ಹಾಗೂ ಮಧ್ಯಂತರದ ಮಂಡಲದ ನಡುವೆ ಇದೆ.

 3. ಮಧ್ಯಂತರ ಮಂಡಲ (Mesosphere) 

 ಇದು ವಾಯುಮಂಡಲದ ಮೂರನೇ ಸ್ತರವಾಗಿದೆ ಈ ಪದರು ಭೂಮಿಯ ಮೇಲ್ಮೈಯಿಂದ ಸುಮಾರು 80 ಕಿಮೀ ಎತ್ತರದಲ್ಲಿದೆ. ವಾಯುಮಂಡಲದ ಶೀತವಲಯ ಇದಾಗಿದ್ದು ಇಲ್ಲಿ ಸೂರ್ಯನ ಕಿರಣಗಳನ್ನು ಹೀರಲಾರದಷ್ಟು ವಾಯು ವಿರಳವಾಗಿದೆ. ಈ ಮಂಡಲದಿಂದ ತಾಪಮಾನದ ಇಳಿಕೆ ಆರಂಭವಾಗುತ್ತದೆ. ಈ ಪದರಿನಲ್ಲಿ ನಾವು ಎತ್ತರಕ್ಕೆ ಹೋದಂತೆ ಉಷ್ಣಾಂಶ ತೀವ್ರಗತಿಯಲ್ಲಿ ಇಳಿಕೆಯಾಗುತ್ತಾ ಸುಮಾರು 80 ಕಿಮೀ ಎತ್ತರದಲ್ಲಿ -100 ಡಿಗ್ರಿ ಸೆಲ್ಸಿಯಸ್ ಇರುವುದು ಕಂಡುಬರುತ್ತದೆ.

4.  ಉಷ್ಣತಾ ಮಂಡಲ (Thermosphere) 

ಉಷ್ಣತಾ ಮಂಡಲವು ಸುಮಾರು 80 ರಿಂದ 400 ಕಿ.ಮೀ ಎತ್ತರದವರೆಗೆ ವ್ಯಾಪಿಸಿದೆ. ಇಲ್ಲಿ ಅಧಿಕ ಉಷ್ಣಾಂಶವಿದ್ದು ಅದು ಅನಿಲಕಣಗಳು, ಸೂಕ್ಷ್ಮ ತರಂಗ, ಆವೆಗೆಂಪು ತರಂಗಗಳು ಹಾಗೂ ಕ್ಷ-ಕಿರಣಗಳನ್ನು ಹೀರಿಕೊಂಡು ಅಯಾನಿಕರಣ ಗೊಳ್ಳುವುದರಿಂದ ಉಷ್ಣಾಂಶವು ಹೆಚ್ಚಾಗಿರುತ್ತದೆ. ಇಲ್ಲಿ ಅಯಾನುಗಳು ಒಡೆದು ಧನ ಮತ್ತು ಋಣಕಣಗಳಾಗಿ ಪ್ರಭಾವಿತಗೊಳ್ಳುತ್ತವೆ. ನಂತರ ಅನಿಲಕಣಗಳು ವಿದ್ಯುತ್ ವಾಹಕ ಗುಣಗಳನ್ನು ಪಡೆದುಕೊಳ್ಳುತ್ತವೆ. ಇವುಗಳನ್ನು ಅಯಾನುಗಳೆಂದು ಕರೆಯುತ್ತಾರೆ. ಈ ಸ್ತರವು ವಿವಿಧ ರೀತಿಯ ದ್ವನಿ ತರಂಗಗಳನ್ನು ಪ್ರತಿಫಲಿಸುವುದರಿಂದ ರೇಡಿಯೋ ಹಾಗೂ ಮೊಬೈಲ್ ಇತ್ಯಾದಿಗಳ ಸಂಪರ್ಕ ಸುಲಭವಾಗಿದೆ. ಇದು ರಾಡರ್ ಮತ್ತು ನಾವಿಕರನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಉಲ್ಕಾ ಶಿಲೆಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ. ಇದಲ್ಲದೆ ಬೋರಿಯಾಲಿಸ್ ಮತ್ತು ಅರೋರ ಆಸ್ಟ್ರೇಲಿಸ್ ಎಂಬ ಧ್ರುವಜೋತಿಗಳನ್ನು  ರಕ್ಷಿಸುತ್ತದೆ.

5. ಬಾಹ್ಯಮಂಡಲ (Exosphere)

ಉಷ್ಣ ಮಂಡಲದ ಆಚೆಗಿರುವ ಮಂಡಲವನ್ನು ಬಾಹ್ಯ ಮಂಡಲ ಎಂದು ಕರೆಯುತ್ತಾರೆ. ಇದು 400 ರಿಂದ 1000 ಕಿ.ಮೀ ವಿಸ್ತಾರವನ್ನು ಹೊಂದಿದೆ. ಭೂಮಿಯ ಗುರುತ್ವ ಮಂಡಲವು ಈ ವಲಯದಲ್ಲಿ ಅತ್ಯಂತ ಕಡಿಮೆ ಇರುತ್ತದೆ. ಈ ವಲಯದ ನಂತರದಲ್ಲಿ ಕಾಂತತ್ವ ವಲಯವು ಕಂಡುಬರುತ್ತದೆ. ಇದರ ಜೊತೆಗೆ ಹೈಡ್ರೋಜನ್ ಹಾಗೂ ಹೀಲಿಯಂ ಅನಿಲಗಳು ಕಂಡುಬರುತ್ತವೆ.

ಉಪಸಂಹಾರ

ವಾಯುಮಂಡಲವು ಭೂಮಿಯ ಮೇಲಿನ ಜೀವಸಂಕುಲದ ಅಸ್ತಿತ್ವಕ್ಕೆ ಅವಿಭಾಜ್ಯ ಅಂಗವಾಗಿದೆ. ಪರಿವರ್ತನಾ ಮಂಡಲದಿಂದ ಆರಂಭಿಸಿ ಬಾಹ್ಯ ಮಂಡಲದವರೆಗೆ ಪ್ರತಿಯೊಂದು ಪದರಕ್ಕೂ ತನ್ನದೇ ಆದ ವಿಶಿಷ್ಟ ಗುಣಲಕ್ಷಣಗಳು ಮತ್ತು ಮಹತ್ವವಿದೆ. ಹವಾಮಾನ ಉತ್ಪತ್ತಿ, ಸೂರ್ಯನ ಹಾನಿಕಾರಕ ಕಿರಣಗಳಿಂದ ರಕ್ಷಣೆ, ಸಂವಹನ ವ್ಯವಸ್ಥೆಗಳ ಸಹಕಾರ ಹಾಗೂ ಉಲ್ಕಾಶಿಲೆಗಳಿಂದ ಭೂಮಿಯ ರಕ್ಷಣೆಯು ವಾಯುಮಂಡಲದ ವಿವಿಧ ಪದರಗಳ ಕಾರ್ಯಗಳೇ ಆಗಿವೆ. ಈ ಪದರಗಳ ಸಮತೋಲನವೇ ಭೂಮಿಯಲ್ಲಿ ಜೀವನ ನಿರಂತರವಾಗಿ ಸಾಗಲು ಕಾರಣವಾಗಿದೆ

ಪರಿಸರ ರಚನೆ

ಪರಿಸರ ರಚನೆ

ಪರಿಸರವೆಂದರೆ ಭೂಮಿಯ ಮೇಲೆ ಜೀವಿಸುವ ಎಲ್ಲಾ ಜೀವಿಗಳಿಗೆ ಅಗತ್ಯವಾದ ನೈಸರ್ಗಿಕ ಅಂಶಗಳ ಸಮಗ್ರ ವ್ಯವಸ್ಥೆ. ಈ ಪರಿಸರವು ವಿವಿಧ ಗೋಳಗಳ ಸಮನ್ವಯದಿಂದ ರೂಪುಗೊಂಡಿದ್ದು ಜೀವನದ ಅಸ್ತಿತ್ವಕ್ಕೆ ಆಧಾರವಾಗಿದೆ.

ಪರಿಸರವನ್ನು ಪ್ರಮುಖವಾಗಿ ನಾಲ್ಕು ಗೋಳಗಳನ್ನಾಗಿ ವಿಂಗಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ:

1. ವಾಯುಗೋಳ

2. ಶಿಲಾಗೋಳ

3. ಜಲಗೋಳ

4. ಜೀವಗೋಳ

1.  ವಾಯುಗೋಳ ( Atmosphere) 

ʻʻವಿವಿಧ ಅನಿಲಗಳು, ನೀರಾವಿ ಹಾಗೂ ದೂಳಿನ ಕಣಗಳ ಮಿಶ್ರಣವೇ ವಾಯುಗೋಳ ಎಂದು ಕರೆಯಲಾಗಿದೆ.ʼʼ  ಈ ಮಿಶ್ರಣವು ಕಾಲದಿಂದ ಕಾಲಕ್ಕೆ ಹಾಗೂ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಅಟ್ಮೋಸ್‌ಪೇರ್ ಎಂಬ ಆಂಗ್ಲ ಪದವು ಅಟ್ಮೋಸ್(ವಾಯು) +  ಸ್ಪೇರ್ ( ಮಂಡಲ)  ಎಂಬ ಎರಡು ಗ್ರೀಕ್ ಪದದಿಂದ ಬಂದಿದೆ.

2.  ಶಿಲಾಗೋಳ (Lithosphere) ́

ʻʻಭೂಮಿಯ ಹೊರಭಾಗ ಅಥವಾ ಗಟ್ಟಿಯಾದ ಭೂಮಿಯ ಹೊರ ಕವಚವನ್ನು ಶಿಲಾಗೋಳ ಎಂದು ಕರೆಯಲಾಗಿದೆ.ʼʼ ಈ ಗೋಳವು ಕಲ್ಲು ಬಂಡೆಗಳು, ಭೂಮಿ, ಮಣ್ಣುಗಳು, ಜೈವಿಕ, ಅಜೈವಿಕ ಅಂಶಗಳು ಹಾಗೂ ನೀರನ್ನು ಒಳಗೊಂಡಿದೆ. ಹಲವು ಬಗೆಯ ಖನಿಜಗಳು ಸಹ ಇಲ್ಲಿ ಕಂಡುಬರುತ್ತವೆ. ಶಿಲಾಗೋಳದ ಒಟ್ಟು ದಪ್ಪ 40 ಕಿ.ಮೀ ನಷ್ಟು ಆಗಿರುವುದು. ಉಳಿದಂತೆ 10 ರಿಂದ 12 ಕೀ.ಮಿನಷ್ಟು ಸಾಗರದ ಪ್ರದೇಶದಲ್ಲಿ ಕಂಡು ಬರುತ್ತದೆ.

3.  ಜಲಗೋಳ (Hydrosphere) 

ʻʻಸಮುದ್ರ, ಸಾಗರ, ಸರೋವರ, ಹಳ್ಳಕೊಳ್ಳ, ಕೆರೆ, ಖಾರಿ, ಕೊಲ್ಲಿ, ಹಿಮ ಪರ್ವತ, ಅಂತರ್ಜಲ ಜಲರಾಶಿಯನ್ನು ಒಳಗೊಂಡ ಭೂಪ್ರದೇಶವನ್ನು ಜಲಗೋಳ ಎಂದು ಕರೆಯಲಾಗಿದೆ.ʼʼ  ಭೂಮಿಯ ಮೇಲೆ ನೀರು ಉಂಟಾಗುವ ಪ್ರಕ್ರಿಯೆಯನ್ನು ಜಲಚಕ್ರ ಎಂದು ಕರೆಯುತ್ತೇವೆ. ಭೂಮಿಯ ಮೇಲಿನ ಜಲ ಭಾಗಗಳು ದ್ರವ ಹಾಗೂ ಘನ ರೂಪದಲ್ಲಿ ಕಂಡುಬರುತ್ತಿದ್ದು ಶೇಕಡಾ 71% ರಷ್ಟು  ಅಥವಾ 361 ಮಿಲಿಯನ್ ಚ.ಕಿ.ಮೀಗಳಷ್ಟು ಹೊಂದಿದೆ. ಇದರಲ್ಲಿ 97.3ರಷ್ಟು ನೀರು ಉಪ್ಪು ನೀರಾಗಿದ್ದು ಮಾನವನ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ ಕೇವಲ 2.7 ರಷ್ಟು ಭೂಭಾಗ ಸಿಹಿ ನೀರಿನಿಂದ ಕೂಡಿದ್ದು ಮಾನವನ ಬಳಕೆಗೆ ಯೋಗ್ಯವಾಗಿದೆ. ಸಿಹಿ ನೀರಿನ ಶೇಕಡ 68.7 ರಷ್ಟು ನೀರು ಹಿಮನದಿ ಹಾಗೂ ಹಿಮಗಡ್ಡೆ, ಇನ್ನುಳಿದ 30ರಷ್ಟು ನೀರು ಅಂತರ್ಜಲ ರೂಪದಲ್ಲಿದೆ. ಇನ್ನುಳಿದ ಸಿಹಿ ನೀರು ಸರೋವರ ಹಾಗೂ ನದಿಗಳ ರೂಪದಲ್ಲಿ ಕಂಡು ಬರುತ್ತದೆ. ಅಂತರ್ಜಲ ನೀರಾವರಿ ವ್ಯವಸ್ಥೆಯನ್ನು ಹೊಂದಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದ್ದರೆ ಮೂರನೇ ಸ್ಥಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವಿದೆ.  ಇನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.

4. ಜೀವಗೋಳ (Biosphere)

ʻʻಭೂಮಿಯು ವಿವಿಧ ರೀತಿಯ ಜೀವರಾಶಿಯನ್ನು ಹೊಂದಿರುವುದರಿಂದ ಇದನ್ನು ಜೀವ ಗೋಳ ಅಥವಾ ಜೀವ ಗ್ರಹ ಎಂದು ಕರೆಯಲಾಗಿದೆ.ʼʼ ಜೀವಗೋಳವು ಸಮುದ್ರದಿಂದ ಸುಮಾರು 10 ಸಾವಿರ ಕಿ.ಮೀ ಆಳದವರೆಗೆ ಇದೆ. ಸುಮಾರು 6 ಸಾವಿರ ಮೀಟರ್ ಎತ್ತರದಿಂದ ಕೂಡಿದೆ. ಜೀವಗೋಳವು ವಾಯುಗೋಳ, ಶಿಲಾಗೋಳ ಹಾಗೂ ಜಲಗೋಳಗಳ ಜೊತೆಗೆ ಅಂತರ್ ಸಂಪರ್ಕವನ್ನು ಹೊಂದಿದೆ.

ಉಪಸಂಹಾರ:
ಪರಿಸರದ ರಚನೆ ವಾಯುಗೋಳ, ಶಿಲಾಗೋಳ, ಜಲಗೋಳ ಮತ್ತು ಜೀವಗೋಳ ಎಂಬ ನಾಲ್ಕು ಪ್ರಮುಖ ಗೋಳಗಳಿಂದ ರೂಪುಗೊಂಡಿದೆ. ಈ ಗೋಳಗಳು ಪರಸ್ಪರ ಅವಿಭಾಜ್ಯವಾಗಿ ಸಂಪರ್ಕ ಹೊಂದಿದ್ದು ಭೂಮಿಯ ಮೇಲಿನ ಜೀವನಕ್ಕೆ ಅಗತ್ಯವಾದ ಸಮತೋಲನವನ್ನು ಕಾಪಾಡುತ್ತವೆ. ವಾಯು, ನೀರು, ಮಣ್ಣು ಹಾಗೂ ಜೀವಜಗತ್ತು ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಪರಿಸರದ ಈ ಸಮನ್ವಯವನ್ನು ಅರಿತುಕೊಳ್ಳುವುದು ಮಾನವನ ಜವಾಬ್ದಾರಿಯುತ ಜೀವನಕ್ಕೆ ಅತೀ ಅವಶ್ಯಕವಾಗಿದೆ. ಪರಿಸರ ಸಂರಕ್ಷಣೆಯ ಮೂಲಕವೇ ಭವಿಷ್ಯದ ತಲೆಮಾರಿಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.

ಪರಿಸರದ ವಿಧಗಳು

ಪರಿಸರದ ವಿಧಗಳು

ಪರಿಸರ ಎಂಬ ಪದವು ಬಹು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಪರಿಸರವು ನಿಸರ್ಗ ಹಾಗೂ ಮಾನವ ನಿರ್ಮಿತವಾಗಿದೆ. ಪರಿಸರವನ್ನು

1. ನೈಸರ್ಗಿಕ ಪರಿಸರ 

2. ಮಾನವ ನಿರ್ಮಿತ ಪರಿಸರ  ಎಂಬ ಎರಡು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ.

1. ನೈಸರ್ಗಿಕ ಪರಿಸರ(Natural Environment)

 ನಿಸರ್ಗದತ್ತವಾಗಿ ಜೀವಂತ ಅಥವಾ ಜೀವಂತವಾಗಿರದ ಪರಿಸರವನ್ನು ನೈಸರ್ಗಿಕ ಪರಿಸರ ಎಂದು ಕರೆಯಲಾಗಿದೆ. ಇದನ್ನು ಮತ್ತೆ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಭೌತಿಕ ಪರಿಸರ ಹಾಗೂ ಜೈವಿಕ ಪರಿಸರ.

ಭೌತಿಕ ಪರಿಸರ (Physical Environment)

ʻʻಇದನ್ನು ಭೌಗೋಳಿಕ ಪರಿಸರ ಎಂದು ಕರೆಯುತ್ತಾರೆ.ʼʼ ಇದು ಸಾಗರ, ನೆಲ, ಹಳ್ಳ, ಸರೋವರ, ಗಾಳಿ, ನದಿ, ಸಮುದ್ರ, ಅರಣ್ಯ, ಖನಿಜ ಸಂಪತ್ತು, ಬೆಟ್ಟಗುಡ್ಡ, ಪರ್ವತ, ಗ್ರಹ, ನಕ್ಷತ್ರ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈ ಭೌಗೋಳಿಕ ಪರಿಸರವು ಭೂಮಿಯ ಮೇಲೆ ವಾಸಿಸುವ ಜನರ ಹಾಗೂ ಸಮುದಾಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಉದಾ: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳ ಜನರ ಜೀವನಕ್ಕೂ ಹಾಗೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರ ಜೀವನಗಳ ನಡುವೆ ಸಾಕಷ್ಟು ಭೇದಗಳು ಕಂಡುಬರುತ್ತವೆ. ಮರುಭೂಮಿಯಲ್ಲಿ ವಾಸಿಸುವ ಜನರ ಹಾಗೂ ಸಮುದ್ರ ತೀರದಲ್ಲಿ ವಾಸಿಸುವ ಜನರ ನಡುವಿನ ಜೀವನ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಆದಿವಾಸಿಗಳ ಆಹಾರ, ಉಡುಗೆ ತೊಡುಗೆ, ಲೋಕರೂಢಿ, ಆಚಾರ ವಿಚಾರಗಳು, ಹಬ್ಬ, ಹರಿದಿನಗಳು ಹಾಗೂ ಜಾತ್ರೆಗಳ ಪದ್ಧತಿಯು ನಗರ ಜೀವನದ ಜನರ ಆಹಾರ ಪದ್ಧತಿ, ಆಚಾರ, ವಿಚಾರ, ಉಡುಗೆತೊಡುಗೆ, ಜಾತ್ರೆ ಹಾಗೂ ಸಂಪ್ರದಾಯಗಳು ಬೇರೆ ಬೇರೆಯಾಗಿರುತ್ತದೆ. ಕಾಡಿನ ಜನರು ಕಾಡು ಉತ್ಪನ್ನಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸಿದರೆ, ಸಮುದ್ರ ತೀರದ ಜನರು ಮೀನು, ಸೀಗಡಿ, ಏಡಿ ಮುಂತಾದವುಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸುತ್ತಾರೆ. ಹೀಗಾಗಿ ಮಾನವನ ಜೀವನಕ್ಕೂ ಹಾಗೂ ಅವರು ವಾಸಿಸುವ ಪರಿಸರಕ್ಕೂ ಬಹಳ ಸಂಬಂಧ ಇರುವುದನ್ನು ಇದರಿಂದ ಗಮನಿಸಬಹುದು.

 ಜೈವಿಕ ಪರಿಸರ (Biological Environment)

ʻʻ ಸಸ್ಯಸಂಕುಲ, ಪ್ರಾಣಿಸಂಕುಲ, ಪಕ್ಷಿ ಹಾಗೂ ಮಾನವನನ್ನು ಒಳಗೊಂಡಿರುವ ಪರಿಸರವನ್ನು ಜೈವಿಕ ಪರಿಸರ ಎಂದು ಕರೆಯಬಹುದಾಗಿದೆ.ʼʼ ಇದರಲ್ಲಿ ಕೋಟಿ ಕೋಟಿ ಜೀವ ಪ್ರಬೇಧಗಳನ್ನು ಕಾಣಬಹುದಾಗಿದೆ. ಈ ಜೀವರಾಶಿಗಳ ಜೀವನ ಶೈಲಿಯ ಪೂರಕ ಪರಿಸರವನ್ನು ಗುರುತಿಸಬಹುದಾಗಿದೆ. ಜೈವಿಕ ಪರಿಸರದ ಮೇಲೆ  ಭೌತಿಕ ಪರಿಸರದ ಪ್ರಭಾವ ಹೆಚ್ಚಾಗಿರುತ್ತದೆ. ಈ ಎರಡು ಪರಿಸರಗಳು ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ಈ ಕಾರಣದಿಂದಾಗಿಯೇ ಪರಿಸರದಲ್ಲಿ ಸಮತೋಲನ ಕಂಡುಬರುತ್ತದೆ.

2. ಮಾನವ ನಿರ್ಮಿತ ಪರಿಸರ (Man Made Environment) 

ʻʻ ಮಾನವನು ತನ್ನ ಜೀವನವನ್ನು ನಡೆಸುವುದಕ್ಕಾಗಿ ಕೃತಕವಾಗಿ ನಿರ್ಮಿಸಿಕೊಂಡ ಪರಿಸರವನ್ನು ಮಾನವ ನಿರ್ಮಿತ ಪರಿಸರ ಎಂದು ಕರೆಯಲಾಗಿದೆ.ʼʼ ಮಾನವನ ಆಧುನಿಕ ಜೀವನ ವಿಧಾನ ಬಹಳ ಕೃತಕವಾಗಿದೆ. ತನ್ನ ದಿನನಿತ್ಯದ ಚಟುವಟಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಾನವನು ನೈಸರ್ಗಿಕ ಪರಿಸರವನ್ನು ತನಗೆ ಮನಸ್ಸಿಗೆ ಬಂದ ಹಾಗೆ ಪರಿವರ್ತಿಸಿಕೊಳ್ಳುತ್ತಿದ್ದಾನೆ.  ಉದಾ: ನಗರೀಕರಣ, ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವುದು,  ಅಣೆಕಟ್ಟುಗಳು,  ಸೇತುವೆಗಳು,  ರಸ್ತೆಗಳ ನಿರ್ಮಾಣ ಹಾಗೂ ರೈಲು ಹಳಿ ನಿರ್ಮಾಣದಂತಹ ಕಾರ್ಯಗಳನ್ನು ಮಾಡುತ್ತಿದ್ದಾನೆ.  ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಿ ಇಂದಿನ ಹಾಗೂ ಮುಂದಿನ ಪೀಳಿಗೆಯು ಸಂಕಷ್ಟದಲ್ಲಿ ಸಿಲುಕುವುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣನಾಗುತ್ತಿದ್ದಾನೆ. ಮಾನವ ನಿರ್ಮಿತ ಪರಿಸರವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ.

ಸಾಮಾಜಿಕ ಪರಿಸರ (Social Environment)

ಆರ್ಥಿಕ ಪರಿಸರ(Econamic Environment)

ಸಾಮಾಜಿಕ ಪರಿಸರ (Social Environment)

ಮಾನವ ಸಾಮಾಜಿಕ ಜೀವಿ. ಸಮಾಜವನ್ನು ಹೊರತುಪಡಿಸಿ ಅವನೆಂದೂ ಬದುಕಲಾರ. ಹೀಗಾಗಿ ಆತ ತನ್ನ ಸುತ್ತಲೂ ಒಂದು ಸಾಮಾಜಿಕ ಕ್ಷೇತ್ರವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಸಮಾಜದಲ್ಲಿನ ಆಚಾರ-ವಿಚಾರ, ಲೋಕರೂಢಿ, ರೀತಿ-ನೀತಿಗಳು, ಸಾಮಾಜಿಕ ಕಟ್ಟುಪಾಡುಗಳು, ಆಧುನಿಕ ಜೀವನ ರೂಪ, ಕಲೆ, ಶಿಕ್ಷಣ ಹಾಗೂ ತಾಂತ್ರಿಕತೆ ತನ್ನದೇ ಆದ ರೀತಿಯಲ್ಲಿ ಮಾನವನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಹೀಗಾಗಿ ಆತ ಸಾಮಾಜಿಕ ಬಲೆಯೊಳಗೆ ಸಿಲುಕಿಕೊಂಡಿದ್ದಾನೆ. ಉದಾ:  ಒಬ್ಬ ವ್ಯಕ್ತಿ ಬೇರೊಬ್ಬ ವ್ಯಕ್ತಿಯ ಜೊತೆ ಹೊಂದಿರಬಹುದಾದ ಸಂಬಂಧದ ಸ್ವರೂಪವೇ ಒಂದು ರೀತಿಯದ್ದಾಗಿದ್ದರೆ, ಅದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜೊತೆಗೆ ಇಟ್ಟುಕೊಂಡ ಸಂಬಂಧದ ಸ್ವರೂಪವೇ ಇನ್ನೊಂದು ರೀತಿಯಲ್ಲಿರುತ್ತದೆ. ವ್ಯಕ್ತಿಯೊಬ್ಬನು ತನ್ನ ತಂದೆ ತಾಯಿಗಳ ಜೊತೆ ಹೊಂದಿದ ಸಂಬಂಧಕ್ಕೂ, ಮಗ ಹಾಗೂ ಮಗಳ ಜೊತೆ ಹೊಂದಿರುವ ಸಂಬಂಧಕ್ಕೂ ಹಾಗೆ ಹೆಂಡತಿಯ ಜೊತೆ ಹೊಂದಿದ ಸಂಬಂಧಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಸಹೋದರ, ಸಹೋದರಿ, ವ್ಯಾಪಾರಿ, ಗಿರಾಕಿ ಹಾಗೂ ಉಮೇದುವಾರ ಮುಂತಾದವರ ಜೊತೆ ನಡೆದುಕೊಳ್ಳುವ ರೀತಿ ಬಹಳ ವಿಶಿಷ್ಟವಾಗಿರುತ್ತದೆ.  ಭಾರತೀಯ ಸಮಾಜ ಅನೇಕ ಪಿಡುಗುಗಳಿಂದ ಕೂಡಿದೆ. ಇಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಸಹಗಮನ, ದೇವದಾಸಿ ಪದ್ಧತಿ ಮುಂತಾದ ಸಮಾಜ ಬಾಹಿರ ಆಚರಣೆಗಳಿದ್ದು ಆಧುನಿಕ ಸಮಾಜ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ. ಮನೆಯಲ್ಲಿನ ಸದಸ್ಯರ ಬೆಳವಣಿಗೆಗೆ ಕುಟುಂಬ ಹಲವಾರು ಕಟ್ಟುಪಾಡುಗಳನ್ನು ಹಾಕುತ್ತದೆ. ಕುಟುಂಬದ ಹಿರಿಯರು ಕಿರಿಯರ ಮೇಲೆ ದಿನನಿತ್ಯ ಪ್ರಭಾವವನ್ನು ಬೀರುತ್ತಾರೆ. ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚಾರಗಳು ಕಟ್ಟುನಿಟ್ಟಿನಿಂದ ಕೂಡಿರುತ್ತವೆ. ಇದರ ಜೊತೆಗೆ ಪುಸ್ತಕಗಳು,  ಪತ್ರಿಕೆಗಳು, ಬಾನುಲಿಗಳು, ಧ್ವನಿ ಮುದ್ರಿಕೆಗಳು, ಸಿನಿಮಾಗಳು ಹಾಗೂ ದೂರದರ್ಶನಗಳು ವ್ಯಕ್ತಿಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ.  ವ್ಯಕ್ತಿಯು ಹೇಗೆ ಬೆಳೆಯಬೇಕು ಮತ್ತು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಮೊದಲ ಸಂಸ್ಥೆಯೆಂದರೆ ಅದು ಸಾಮಾಜಿಕ ಪರಿಸರ.

ಆರ್ಥಿಕ ಪರಿಸರ (Econamic Environment)

ಆರ್ಥಿಕ ಪರಿಸರವು ಮಾನವನ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ. ಮಾನವನ ಅಳಿವು ಉಳಿವು ಆರ್ಥಿಕ ಕ್ಷೇತ್ರವನ್ನು ಅವಲಂಬಿಸಿದೆ. ಒಂದು ದೇಶದ ಆರ್ಥಿಕ ಪ್ರಗತಿಯು ಆ ದೇಶದ ಮಾನವನ ಆರ್ಥಿಕ ಸ್ಥಿತಿಗತಿಗಳನ್ನು ಒಳಗೊಂಡಿರುತ್ತದೆ.  ಅಂದರೆ ಉತ್ಪಾದನೆ, ವಿತರಣೆ, ಸರಕು ಸಾಗಾಣಿಕೆ, ಬೇಡಿಕೆ, ಸರಬರಾಜು, ಉಪಯೋಗ, ವಿತರಣೆ ಮುಂತಾದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರ್ಥಿಕ ಪರಿಸರ ಎಂದು ಕರೆಯಬಹುದು. ಉದಾ:  ಆದಿವಾಸಿ ಜೀವನ, ಕಾಡು ಜನರ ಜೀವನ, ಗ್ರಾಮೀಣ ಜೀವನ, ನಗರ ಜೀವನ ಕ್ರಮಗಳು ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ.

ಉಪಸಂಹಾರ

ಪರಿಸರವು ಮಾನವನ ಜೀವನದ ಪ್ರತಿಯೊಂದು ಅಂಶಕ್ಕೂ ನೇರವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ನೈಸರ್ಗಿಕ ಪರಿಸರವು ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿದ್ದರೆ, ಮಾನವ ನಿರ್ಮಿತ ಪರಿಸರವು ಮಾನವನ ಸಾಮಾಜಿಕ ಹಾಗೂ ಆರ್ಥಿಕ ಬದುಕನ್ನು ರೂಪಿಸುತ್ತದೆ. ಭೌತಿಕ ಮತ್ತು ಜೈವಿಕ ಪರಿಸರಗಳು ಪರಸ್ಪರ ಅವಲಂಬಿತವಾಗಿರುವಂತೆ, ಸಾಮಾಜಿಕ ಮತ್ತು ಆರ್ಥಿಕ ಪರಿಸರಗಳು ಮಾನವನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಆದರೆ ಮಾನವನು ನೈಸರ್ಗಿಕ ಪರಿಸರವನ್ನು ಅತಿಯಾಗಿ ದುರುಪಯೋಗಪಡಿಸಿಕೊಂಡರೆ ಪರಿಸರ ಸಮತೋಲನ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು ಇಂದಿನ ಅತ್ಯಂತ ಅಗತ್ಯವಾಗಿದೆ. ಪರಿಸರದ ಮಹತ್ವವನ್ನು ಅರಿತು ಜವಾಬ್ದಾರಿಯುತವಾಗಿ ವರ್ತಿಸುವುದೇ ಭವಿಷ್ಯದ ಸುರಕ್ಷತೆಗೆ ದಾರಿ ಮಾಡಿಕೊಡುತ್ತದೆ.