ಗುಪ್ತರ ಅವನತಿಗೆ ಕಾರಣಗಳು
ಎರಡನೆಯ ಚಂದ್ರಗುಪ್ತನ ನಂತರ ಕುಮಾರಗುಪ್ತ, ಸ್ಕಂದಗುಪ್ತ ಕ್ರಮವಾಗಿ ರಾಜ್ಯವಾಳಿದರು. ಸ್ಕಂದಗುಪ್ತನ ನಂತರ ಗುಪ್ತರಾಜ್ಯ ಅವನತಿಯ ಹಾದಿಯನ್ನು ಹಿಡಿಯಿತು. ಈ ವಂಶದ ಕೊನೆಯ ದೊರೆ ವಿಷ್ಣುಗುಪ್ತ ಕ್ರಿ.ಶ. 570ರವರೆಗೆ ಆಳಿದನು. ಅನಂತರ ಹೂಣರ ದಾಳಿಗೆ ಸಿಕ್ಕ ಗುಪ್ತರಾಜ್ಯ ನಲುಗಿತು. ಹೂಣರ ನಾಯಕರಾದ ತೋರಮಾನ ಹಾಗೂ ಮಿಹಿರಗುಲರು ಗುಪ್ತರ ವಂಶವನ್ನು ನಿರ್ನಾಮಗೊಳಿಸಿದರು. ಗುಪ್ತರ ಅವನತಿಗೆ ಕಾರಣವಾದ ಅಂಶಗಳನ್ನು ಈ ಕೆಳಗಿನಂತೆ ಪಟ್ಟಿಮಾಡಬಹುದು.
1) ಅಸಮರ್ಥ ಉತ್ತರಾಧಿಕಾರಿಗಳು : ಸ್ಕಂದಗುಪ್ತನ ನಂತರ ಬಂದ ಅವನ ಉತ್ತರಾಧಿಕಾರಿಗಳು ವಿಶಾಲವಾದ ಗುಪ್ತ ಸಾಮ್ರಾಜ್ಯವನ್ನು ರಕ್ಷಿಸುವ ಸಾಮರ್ಥ್ಯವುಳ್ಳವರಾಗಿರಲಿಲ್ಲ. ಪುರಗುಪ್ತ, ನರಸಿಂಹಗುಪ್ತ, ಕುಮಾರಗುಪ್ತ ಹಾಗೂ ಬುದ್ಧಗುಪ್ತರು ದುರ್ಬಲ ದೊರೆಗಳಾಗಿದ್ದು ಗುಪ್ತ ಸಾಮ್ರಾಜ್ಯದ ವರ್ಚಸ್ಸಿಗೆ ಧಕ್ಕೆ ತಂದರಲ್ಲದೆ ಹಿಂದಿನ ಅರಸರಂತೆ ಕ್ಷಾತ್ರತೇಜಸ್ಸು, ಆಕರ್ಷಕ ವ್ಯಕ್ತಿತ್ವ ಹಾಗೂ ಶಕ್ತಿಯನ್ನು ಹೊಂದಿರಲಿಲ್ಲ. ಇಂತಹ ಗುಣಲಕ್ಷಣಗಳಿಲ್ಲದ ರಾಜರು ಅಧಿಕಾರಕ್ಕೆ ಬಂದದ್ದೇ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.
2) ಉತ್ತರಾಧಿಕಾರದ ಸ್ಪರ್ಧೆ: ರಾಜತ್ವ ವಂತಪಾರಂಪರ್ಯವಾಗಿದ್ದರೂ ಗುಪ್ತರ ಕಾಲದಲ್ಲಿ ಅದು ನಿರ್ದಿಷ್ಟ ನೀತಿ ನಿಯಮಗಳನ್ನು ಹೊಂದಿರಲಿಲ್ಲ. ರಾಜ ಸತ್ತ ನಂತರ ಅವನ ಮಕ್ಕಳಲ್ಲಿ ಉತ್ತರಾಧಿಕಾರಕ್ಕಾಗಿ ಅಂತಃಕಲಹಗಳು ಆರಂಭವಾಗುತ್ತಿದ್ದವು. ಖಡ್ಗಬಲವೇ ಸಿಂಹಾಸನದ ಹಕ್ಕನ್ನು ಪ್ರತಿಪಾದಿಸುತ್ತಿದ್ದುದರಿಂದ ಅಲ್ಲಿ ರಾಜತ್ವಕ್ಕೆ ಬೆಲೆ ಇರಲಿಲ್ಲ. ಈ ರೀತಿಯ ಆಂತರಿಕ ಹೋರಾಟಗಳು ಗುಪ್ತ ಸಾಮ್ರಾಜ್ಯವನ್ನು ಬಲಹೀನಗೊಳಿಸಿದವಲ್ಲದೆ ಅನ್ಯರಿಗೆ ದಾರಿಮಾಡಿಕೊಟ್ಟವು.
3) ಬೌದ್ಧ ಧರ್ಮದ ಪ್ರಭಾವ : ಗುಪ್ತ ಸಾಮ್ರಾಟರಾದ ಬಲಾದಿತ್ಯ ಹಾಗೂ ಬುದ್ಧ ಗುಪ್ತರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದರಿಂದ ಅವರ ಸೈನಿಕರು ಅಹಿಂಸಾ ಧರ್ಮವನ್ನು ಪಾಲಿಸಿದರು. ಪರಿಣಾಮವಾಗಿ ಯುದ್ಧದ ಸಮಯದಲ್ಲಿ ಸೈನಿಕರ ಮೇಲೆ ಈ ಅಹಿಂಸಾ ನೀತಿ ನಕಾರಾತ್ಮಕ ಪರಿಣಾಮವನ್ನು ಬೀರಿತು. ಹೂಣರು ಗುಪ್ತ ಸಾಮ್ರಾಜ್ಯದ ವಿರುದ್ಧ ಯುದ್ಧ ಘೋಷಿಸಿದಾಗ ಅಲ್ಲಿನ ಸೈನಿಕರು ಸಮರ್ಥವಾಗಿ ವೈರಿಗಳನ್ನು ಎದುರಿಸಲಿಲ್ಲವಾದ್ದರಿಂದ ಸಾಮ್ರಾಜ್ಯ ಅವನತಿಯನ್ನು ಹೊಂದಿತು.
4) ಗಡಿಭಾಗಗಳ ನಿರ್ಲಕ್ಷತೆ : ಸ್ಕಂದಗುಪ್ತನ ನಂತರ ಬಂದ ದೊರೆಗಳು ತಮ್ಮ ರಾಜ್ಯದ ಗಡಿಭಾಗಗಳ ರಕ್ಷಣೆಯನ್ನು ನಿರ್ಲಕ್ಷಿಸಿದರು. ಹೀಗಾಗಿ ವಿದೇಶಿ ದಾಳಿಕಾರರು ಅದರಲ್ಲೂ ಹೂಣರು ಯಾರ ಹೆದರಿಕೆಯಿಲ್ಲದೆ ಗುಪ್ತ ಸಾಮ್ರಾಜ್ಯದ ಮಧ್ಯಭಾಗದವರೆಗೂ ದಾಳಿ ಮಾಡಿ ದೇಶದೊಳಗೆ ಸುಲಭವಾಗಿ ಪ್ರವೇಶಿಸಿದರು. ಇದರಿಂದ ಪ್ರೇರಿತರಾದ ಇನ್ನಿತರ ದಾಳಿಕಾರರೂ ಸಹ ಗುಪ್ತಸಾಮ್ರಾಜ್ಯದ ಗಡಿಭಾಗ ಸುರಕ್ಷಿತವಲ್ಲ ಎಂಬುದನ್ನು ಗಮನಿಸಿ ತಾವು ರಾಜ್ಯದೊಳಗೆ ನುಸುಳಿದರು. ಹೀಗೆ ಒಬ್ಬರ ನಂತರ ಒಬ್ಬರಂತೆ ಬಂದ ವಿದೇಶಿ ದಾಳಿಕಾರರನ್ನು ಗುಪ್ತರು ಎದುರಿಸದ ಕಾರಣ ಸಾಮ್ರಾಜ್ಯ ಪತನಗೊಂಡಿತು.
5) ಸೈನಿಕ ಅಸಾಮರ್ಥ್ಯ : ಆರಂಭದ ಗುಪ್ತ ಅರಸರು ಸದಾ ಯುದ್ಧ ಚಟುವಟಿಕೆಗಳಲ್ಲಿ ತೊಡಗುತ್ತಿದ್ದುದರಿಂದ ಅವರ ಸೈನ್ಯ ಅತ್ಯಂತ ಬಲಿಷ್ಠವಾಗಿದ್ದಿತು. ಹೀಗಾಗಿ ಅವರು ಕೈಗೊಳ್ಳುತ್ತಿದ್ದ ಎಲ್ಲಾ ಯುದ್ಧಗಳಲ್ಲಿ ಜಯವನ್ನು ಸಾಧಿಸುತ್ತಿದ್ದರು. ಸ್ಕಂದಗುಪ್ತನ ನಂತರ ಅಧಿಕಾರಕ್ಕೆ ಬಂದ ದೊರೆಗಳ ಕಾಲದಲ್ಲಿ ರಾಜ್ಯವು ಶಾಂತಿ, ಸುಭಿಕ್ಷೆಯಿಂದಿದ್ದುದರಿಂದ ಜನರು ಆರ್ಥಿಕವಾಗಿ ಶ್ರೀಮಂತರಾಗಿ ವಿಲಾಸ ಜೀವನವನ್ನು ನಡೆಸಲಾರಂಭಿಸಿದರು. ಸೈನಿಕರು ಸಹ ದೀರ್ಘಾವಧಿಯವರೆಗೆ ಯುದ್ಧಗಳಲ್ಲಿ ಭಾಗವಹಿಸದಿದ್ದುದರಿಂದ ಅವರಲ್ಲಿ ಜಡತ್ವ ಉಂಟಾಗಿ ತರಬೇತಿಯಿಲ್ಲದೆ ಸಾಮರ್ಥ್ಯ ಕುಸಿಯಿತು. ಇಂತಹ ಸಂದರ್ಭದಲ್ಲಿ ಹೂಣರು ಗುಪ್ತ ಸಾಮ್ರಾಜ್ಯದ ಮೇಲೆ ದಾಳಿ ಮಾಡಿದಾಗ ಸೈನಿಕರು ಅಸಾಮರ್ಥ್ಯವನ್ನು ಪ್ರದರ್ಶಿಸಿದರು. ಇದು ವೈರಿಗಳ ವಿಜಯಕ್ಕೆ ಕಾರಣವಾಯಿತು.
6) ವಿಶಾಲ ಸಾಮ್ರಾಜ್ಯ : ಸಮುದ್ರಗುಪ್ತನ ಅಧಿಕಾರಾವಧಿಯಲ್ಲಿ ಗುಪ್ತ ಸಾಮ್ರಾಜ್ಯ ಬಹಳ ವಿಶಾಲವಾಗಿದ್ದಿತು. ಆದರೂ ಅವನು ವಿಶಾಲ ಸಾಮ್ರಾಜ್ಯವನ್ನು ದಕ್ಷತೆಯಿಂದ ಆಳಿದ ನಿದರ್ಶನವು ಉಂಟು. ಈತನ ನಂತರ ಬಂದ ರಾಜಕುಮಾರರಿಗೆ ವಿಶಾಲ ಸಾಮ್ರಾಜ್ಯವನ್ನು ಆಳುವ ಶಕ್ತಿ ಇರಲಿಲ್ಲ. ಸಾರಿಗೆ ಸಂಪರ್ಕಗಳಿಲ್ಲದ ಆ ಕಾಲದಲ್ಲಿ ಬೃಹತ್ ಸಾಮ್ರಾಜ್ಯವನ್ನು ಕೇಂದ್ರದ ಹಿಡಿತಕ್ಕೆ ತರುವುದು ಬಹಳ ಕಷ್ಟವಾಯಿತು. ದೂರದ ಗಡಿಭಾಗದ ಅರಸರು ದಂಗೆಯೆದ್ದಾಗ ಗುಪ್ತ ಸೈನ್ಯವು ಆ ಪ್ರದೇಶವನ್ನು ತಲುಪುವಷ್ಟರಲ್ಲೇ ಅವರು ಸ್ವಾತಂತ್ರ್ಯವನ್ನು ಘೋಷಿಸಿಕೊಳ್ಳುತ್ತಿದ್ದರು. ಹೀಗಾಗಿ ಸಾಮ್ರಾಜ್ಯದ ವಿಶಾಲತೆಯು ಸಹ ಗುಪ್ತರ ಅವನತಿಗೆ ಕಾರಣವಾಯಿತು.
7) ಆರ್ಥಿಕ ದುಸ್ಥಿತಿ : ಸ್ಕಂದಗುಪ್ತ ಹಾಗೂ ಕುಮಾರಗುಪ್ತರ ಕಾಲದಲ್ಲಿ ಹೂಣರು ಪದೇ ಪದೇ ಗುಪ್ತರ ವಿರುದ್ಧ ದಂಡಯಾತ್ರೆ ಕೈಗೊಳ್ಳುತ್ತಿದ್ದುದರಿಂದಾಗಿ ಅವರ ಖಜಾನೆ ಪೂರ್ತಿ ಖಾಲಿಯಾಯಿತು. ಇದನ್ನು ಸ್ಕಂದಗುಪ್ತ ಹೊರಡಿಸಿದ ಚಿನ್ನದ ನಾಣ್ಯಗಳಲ್ಲಿ ಚಿನ್ನದ ಅಂಶ ಕಡಿಮೆಯಾಗಿರುವುದು ಹಾಗೂ ಚಿನ್ನದ ನಾಣ್ಯಗಳಲ್ಲಿ ವಿವಿಧ ಲೋಹಗಳನ್ನು ಮಿಶ್ರಣ ಮಾಡಿರುವುದರಿಂದ ತಿಳಿದುಕೊಳ್ಳಬಹುದು. ಹೀಗೆ ಸಾಮ್ರಾಜ್ಯದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟು ರಾಜ್ಯದ ದೈನಂದಿನ ಆಡಳಿತಕ್ಕೆ ತಡೆನ್ನೊಡ್ಡಿತು.
8) ಹೂಣರ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಹೂಣರ ದಾಳಿಯೇ ಕಾರಣವಾಯಿತು ಎಂದು ಅನೇಕ ವಿದ್ವಾಂಸರು ಹೇಳಿದ್ದಾರೆ. ಸ್ಕಂದಗುಪ್ತನ ಮರಣದ ನಂತರ ಗುಪ್ತ ದೊರೆಗಳಲ್ಲಿ ಆಂತರಿಕ ಕಲಹ ಉಂಟಾಯಿತು. ಇಂತಹ ಸಂದರ್ಭದಲ್ಲಿ ಹೂಣರ ನಾಯಕರಾದ ತೋರಮಾನ ಮತ್ತು ಮಿಹಿರಕುಲರು ಗುಪ್ತರ ಮೇಲೆ ದಾಳಿ ಮಾಡಿ ಅವರನ್ನು ಸೋಲಿಸುವ ಮೂಲಕ ತಮ್ಮ ಪ್ರಾಬಲ್ಯವನ್ನು ಮೆರೆದರು. ಇದು ಗುಪ್ತ ಸಾಮ್ರಾಜ್ಯದ ದುರ್ಬಲತೆಗೆ ಕಾರಣವಾಯಿತು.
9) ಯಶೋವರ್ಮನ ದಾಳಿ : ಗುಪ್ತ ಸಾಮ್ರಾಜ್ಯದ ಅವನತಿಗೆ ಯಶೋವರ್ಮನಂತಹ ಮಹತ್ವಾಕಾಂಕ್ಷಿ ದೊರೆ ಕಾರಣನಾದನು. ಈತ ಗುಪ್ತ ಸಾಮ್ರಾಜ್ಯದ ಸಾರ್ವಭೌಮತ್ವವನ್ನು ಲೆಕ್ಕಿಸದೆ ಸ್ವತಂತ್ರರಾಜನಾಗಿ ತನ್ನ ಸಾಮ್ರಾಜ್ಯವನ್ನು ವಿಸ್ತಾರಗೊಳಿಸಲು ಮುಂದಾದನು. ಹೀಗೆ ಯಶೋವರ್ಮನಿಂದ ಉಂಟಾದ ದಾಳಿಯಿಂದ ಗುಪ್ತ ಸಾಮ್ರಾಜ್ಯ ಅವನತಿಯನ್ನು ಕಂಡಿತು.
10) ಪುಷ್ಯಮಿತ್ರರ ನಡುವಣ ಹೋರಾಟ : ಚಂದ್ರಗುಪ್ತನು ಪುಷ್ಯಮಿತ್ರರೊಡನೆ ಸ್ನೇಹಪೂರ್ವಕವಾದ ಸಂಬಂಧವನ್ನು ಹೊಂದಿದ್ದನು. ಆದರೆ ಕುಮಾರ ಗುಪ್ತನ ಕಾಲದಲ್ಲಿ ಈ ಸಂಬಂಧ ಹದಗೆಟ್ಟಿತು. ಹೀಗಾಗಿ ಪುಷ್ಯಮಿತ್ರರು ಕುಮಾರ ಗುಪ್ತನ ಮಗನನ್ನೇ ಸೆರೆಹಿಡಿದು ಅವನ ಮೇಲಿನ ಸೇಡು ತೀರಿಸಿಕೊಂಡರು. ಈ ರೀತಿಯ ವೈರತ್ವ ಗುಪ್ತ ಸಾಮ್ರಾಜ್ಯದ ಅವನತಿಗೆ ಕಾರಣವಾಯಿತು.
11) ವಾಕಟಾಕರ ಬಗೆಗಿನ ನೀತಿ :
ತಮ್ಮ ಪಕ್ಷದಲ್ಲಿಯೇ ವಾಕಟಾಕರು ಪ್ರಬಲ್ಯಕ್ಕೆ ಬರುತ್ತಿರುವುದನ್ನು ಗುಪ್ತರು ಗಮನಿಸದೇ ಹೋದುದು ಅವರ ಅವನತಿಗೆ ಮತ್ತೊಂದು ಕಾರಣವಾಯಿತು. ಗುಪ್ತರು ವಾಕಟಾಕರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿ ಅವರ ಪ್ರಾಬಲ್ಯಕ್ಕೆ ಗುಪ್ತರು ಕಾರಣರಾದರು. ಗುಪ್ತರು ಇವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ. ಹೀಗಾಗಿ ನರೇಂದ್ರಸೇನ ಹಾಗೂ ಹರಿಸೇನರು ಗುಪ್ತರ ಮೇಲೆ ದಾಳಿ ಮಾಡಿ ಗುಪ್ತರ ಅವನತಿಗೆ ಕಾರಣರಾದರು.
12) ಊಳಿಗ ಮಾನ್ಯ ಪದ್ಧತಿ :
ಗುಪ್ತರು ಜಾರಿಗೆ ತಂದಿದ್ದ ಊಳಿಗಮಾನ್ಯ ಪದ್ಧತಿಯ ಪರಿಣಾಮವಾಗಿ ಜಮೀನುದಾರ ವರ್ಗವೊಂದು ತಲೆ ಎತ್ತಿತು. ಅದು ಅವರ ಸ್ವತಂತ್ರ ಪ್ರವೃತ್ತಿಗೆ ಕಾರಣವಾಗಿ ಗುಪ್ತ ಸಂತತಿ ಕ್ರಮೇಣ ಅವನತಿ ಹೊಂದಲಾರಂಭಿಸಿತು. ಬ್ರಾಹ್ಮಣರಿಗೆ ಶಾಶ್ವತವಾದ ಭೂಮಿಗಳನ್ನು ನೀಡಿದ್ದು, ತೆರಿಗೆರಹಿತ ಭೂ ಹಿಡುವಳಿ ದಯಪಾಲಿಸಿದ್ದು ಹಾಗೂ ಅಧಿಕಾರವನ್ನು ಶಾಶ್ವತವಾಗಿ ನೀಡುದುದರಿಂದ ಗುಪ್ತ ಸಾಮ್ರಜ್ಯ ತನ್ನ ಹಿಡಿತವನ್ನು ಕಳೆದುಕೊಂಡಿತು. ಈ ಪದ್ಧತಿ ಹರ್ಷನ ಕಾಲದವರೆಗೆ ಮುಂದುವರೆಯಿತು. ಸರ್ಕಾರಿ ಅಧಿಕಾರಿಗಳ ಖರ್ಚು ವೆಚ್ಚಗಳಿಗಾಗಿ 1/4 ಭಾಗದಷ್ಟು ರಾಜ್ಯಾದಾಯವನ್ನು ಮೀಸಲಾಗಿಡಲಾಯಿತು. ರಾಜ್ಯಪಾಲರು, ದಂಡಾಧಿಕಾರಿಗಳು, ಭೂ ಮಾಲಿಕರು ಹಾಗೂ ಮಂತ್ರಿಗಳು ಭೂಮಿಗಳನ್ನು ಪಡೆದು ಸರ್ಕಾರಕ್ಕೆ ಮೋಸ ಮಾಡುತ್ತಿದ್ದುದು ಗುಪ್ತರ ಅವನತಿಗೆ ಕಾರಣವಾಯಿತು.
13) ವಿದೇಶಾಂಗ ನೀತಿ
ಗುಪ್ತರ ಆರಂಭದಲ್ಲಿ ತಮ್ಮ ದೂರದೃಷ್ಟಿ ನೀತಿಯಿಂದಾಗಿ ನೆರೆಹೊರೆ ರಾಜ್ಯಗಳೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದ್ದರು. ಪರಿಣಾಮವಾಗಿ ಅವುಗಳ ನಡುವಿನ ಸಂಬಂಧ ಗಟ್ಟಿಯಾಗಿದ್ದಿತು. ದಿನಗಳೆದಂತೆ ಗುಪ್ತರು ವೈವಾಹಿಕ ಸಂಬಂಧವನ್ನು ನಿಲ್ಲಿಸಿಬಿಟ್ಟರು. ಇದರಿಂದ ಗುಪ್ತರ ಪ್ರಾಬಲ್ಯಕ್ಷೀಣಿಸಲಾರಂಭಿಸಿತು.
14) ಗೌರ್ನರುಗಳ ಮಹಾತ್ವಾಕಾಂಕ್ಷೆ
ಗುಪ್ತರು ತಮ್ಮ ವಿಶಾಲ ಸಾಮ್ರಾಜ್ಯವನ್ನು ಆಡಳಿತದ ಅನುಕೂಲಕ್ಕಾಗಿ ಹಲವಾರು ಪ್ರಾಂತಗಳನ್ನಾಗಿ ವಿಂಗಡಿಸಿ ಅವುಗಳನ್ನು ಗೌರ್ನರುಗಳ ಕೈಗೆ ನೀಡಿದರು. ಆಸೆಬುರುಕ ಗೌರರುಗಳು ತಮ್ಮ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿ ಇಡೀ ಸಾಮ್ರಾಜ್ಯವನ್ನು ಅವನತಿಯತ್ತ ಕೊಂಡೊಯ್ದರು.
15) ಸಾಂಸ್ಕೃತಿಕ ಪ್ರಗತಿ
ಕಲೆ ಸಾಹಿತ್ಯದಲ್ಲಿ ಪ್ರಗತಿಯಾದಂತೆ ಗುಪ್ತರ ಕಾಲದ ಪ್ರಜೆಗಳು ಹಾಗೂ ಯುವರಾಜರು ವಿಲಾಸ ಜೀವನದಲ್ಲಿ ಮಗ್ನರಾದರು. ಅಸಮರ್ಥ ದೊರೆಗಳ ಕಾಲದಲ್ಲಿಯೂ ಈ ವಿಲಾಸ ಜೀವನ ಮುಂದುವರೆಯಿತು. ಜನ ಸೋಮಾರಿಗಳಾಗಿ ತಮ್ಮ ಕ್ಷಾತ್ರಗುಣಗಳನ್ನು ಕಳೆದುಕೊಂಡು ಯುದ್ಧ ಸಮಯದಲ್ಲಿ ಉದ್ದೇಶಪೂರಕವಾಗಿ ಸೋಲನುಭವಿಸಲಾರಂಭಿಸಿದರು. ಇದು ಗುಪ್ತ ಸಾಮ್ರಾಜ್ಯದ ಏಳಿಗೆಗೆ ಹೊಡೆತಕೊಟ್ಟಿತು.






