ಪರಿಸರ ರಚನೆ

ಪರಿಸರ ರಚನೆ

ಪರಿಸರವೆಂದರೆ ಭೂಮಿಯ ಮೇಲೆ ಜೀವಿಸುವ ಎಲ್ಲಾ ಜೀವಿಗಳಿಗೆ ಅಗತ್ಯವಾದ ನೈಸರ್ಗಿಕ ಅಂಶಗಳ ಸಮಗ್ರ ವ್ಯವಸ್ಥೆ. ಈ ಪರಿಸರವು ವಿವಿಧ ಗೋಳಗಳ ಸಮನ್ವಯದಿಂದ ರೂಪುಗೊಂಡಿದ್ದು ಜೀವನದ ಅಸ್ತಿತ್ವಕ್ಕೆ ಆಧಾರವಾಗಿದೆ.

ಪರಿಸರವನ್ನು ಪ್ರಮುಖವಾಗಿ ನಾಲ್ಕು ಗೋಳಗಳನ್ನಾಗಿ ವಿಂಗಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ:

1. ವಾಯುಗೋಳ

2. ಶಿಲಾಗೋಳ

3. ಜಲಗೋಳ

4. ಜೀವಗೋಳ

1.  ವಾಯುಗೋಳ ( Atmosphere) 

ʻʻವಿವಿಧ ಅನಿಲಗಳು, ನೀರಾವಿ ಹಾಗೂ ದೂಳಿನ ಕಣಗಳ ಮಿಶ್ರಣವೇ ವಾಯುಗೋಳ ಎಂದು ಕರೆಯಲಾಗಿದೆ.ʼʼ  ಈ ಮಿಶ್ರಣವು ಕಾಲದಿಂದ ಕಾಲಕ್ಕೆ ಹಾಗೂ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದುತ್ತದೆ. ಅಟ್ಮೋಸ್‌ಪೇರ್ ಎಂಬ ಆಂಗ್ಲ ಪದವು ಅಟ್ಮೋಸ್(ವಾಯು) +  ಸ್ಪೇರ್ ( ಮಂಡಲ)  ಎಂಬ ಎರಡು ಗ್ರೀಕ್ ಪದದಿಂದ ಬಂದಿದೆ.

2.  ಶಿಲಾಗೋಳ (Lithosphere) ́

ʻʻಭೂಮಿಯ ಹೊರಭಾಗ ಅಥವಾ ಗಟ್ಟಿಯಾದ ಭೂಮಿಯ ಹೊರ ಕವಚವನ್ನು ಶಿಲಾಗೋಳ ಎಂದು ಕರೆಯಲಾಗಿದೆ.ʼʼ ಈ ಗೋಳವು ಕಲ್ಲು ಬಂಡೆಗಳು, ಭೂಮಿ, ಮಣ್ಣುಗಳು, ಜೈವಿಕ, ಅಜೈವಿಕ ಅಂಶಗಳು ಹಾಗೂ ನೀರನ್ನು ಒಳಗೊಂಡಿದೆ. ಹಲವು ಬಗೆಯ ಖನಿಜಗಳು ಸಹ ಇಲ್ಲಿ ಕಂಡುಬರುತ್ತವೆ. ಶಿಲಾಗೋಳದ ಒಟ್ಟು ದಪ್ಪ 40 ಕಿ.ಮೀ ನಷ್ಟು ಆಗಿರುವುದು. ಉಳಿದಂತೆ 10 ರಿಂದ 12 ಕೀ.ಮಿನಷ್ಟು ಸಾಗರದ ಪ್ರದೇಶದಲ್ಲಿ ಕಂಡು ಬರುತ್ತದೆ.

3.  ಜಲಗೋಳ (Hydrosphere) 

ʻʻಸಮುದ್ರ, ಸಾಗರ, ಸರೋವರ, ಹಳ್ಳಕೊಳ್ಳ, ಕೆರೆ, ಖಾರಿ, ಕೊಲ್ಲಿ, ಹಿಮ ಪರ್ವತ, ಅಂತರ್ಜಲ ಜಲರಾಶಿಯನ್ನು ಒಳಗೊಂಡ ಭೂಪ್ರದೇಶವನ್ನು ಜಲಗೋಳ ಎಂದು ಕರೆಯಲಾಗಿದೆ.ʼʼ  ಭೂಮಿಯ ಮೇಲೆ ನೀರು ಉಂಟಾಗುವ ಪ್ರಕ್ರಿಯೆಯನ್ನು ಜಲಚಕ್ರ ಎಂದು ಕರೆಯುತ್ತೇವೆ. ಭೂಮಿಯ ಮೇಲಿನ ಜಲ ಭಾಗಗಳು ದ್ರವ ಹಾಗೂ ಘನ ರೂಪದಲ್ಲಿ ಕಂಡುಬರುತ್ತಿದ್ದು ಶೇಕಡಾ 71% ರಷ್ಟು  ಅಥವಾ 361 ಮಿಲಿಯನ್ ಚ.ಕಿ.ಮೀಗಳಷ್ಟು ಹೊಂದಿದೆ. ಇದರಲ್ಲಿ 97.3ರಷ್ಟು ನೀರು ಉಪ್ಪು ನೀರಾಗಿದ್ದು ಮಾನವನ ಬಳಕೆಗೆ ಯೋಗ್ಯವಾಗಿಲ್ಲ. ಉಳಿದ ಕೇವಲ 2.7 ರಷ್ಟು ಭೂಭಾಗ ಸಿಹಿ ನೀರಿನಿಂದ ಕೂಡಿದ್ದು ಮಾನವನ ಬಳಕೆಗೆ ಯೋಗ್ಯವಾಗಿದೆ. ಸಿಹಿ ನೀರಿನ ಶೇಕಡ 68.7 ರಷ್ಟು ನೀರು ಹಿಮನದಿ ಹಾಗೂ ಹಿಮಗಡ್ಡೆ, ಇನ್ನುಳಿದ 30ರಷ್ಟು ನೀರು ಅಂತರ್ಜಲ ರೂಪದಲ್ಲಿದೆ. ಇನ್ನುಳಿದ ಸಿಹಿ ನೀರು ಸರೋವರ ಹಾಗೂ ನದಿಗಳ ರೂಪದಲ್ಲಿ ಕಂಡು ಬರುತ್ತದೆ. ಅಂತರ್ಜಲ ನೀರಾವರಿ ವ್ಯವಸ್ಥೆಯನ್ನು ಹೊಂದಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ಎರಡನೇ ಸ್ಥಾನದಲ್ಲಿ ಚೀನಾ ಇದ್ದರೆ ಮೂರನೇ ಸ್ಥಾನದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನವಿದೆ.  ಇನ್ನು ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.

4. ಜೀವಗೋಳ (Biosphere)

ʻʻಭೂಮಿಯು ವಿವಿಧ ರೀತಿಯ ಜೀವರಾಶಿಯನ್ನು ಹೊಂದಿರುವುದರಿಂದ ಇದನ್ನು ಜೀವ ಗೋಳ ಅಥವಾ ಜೀವ ಗ್ರಹ ಎಂದು ಕರೆಯಲಾಗಿದೆ.ʼʼ ಜೀವಗೋಳವು ಸಮುದ್ರದಿಂದ ಸುಮಾರು 10 ಸಾವಿರ ಕಿ.ಮೀ ಆಳದವರೆಗೆ ಇದೆ. ಸುಮಾರು 6 ಸಾವಿರ ಮೀಟರ್ ಎತ್ತರದಿಂದ ಕೂಡಿದೆ. ಜೀವಗೋಳವು ವಾಯುಗೋಳ, ಶಿಲಾಗೋಳ ಹಾಗೂ ಜಲಗೋಳಗಳ ಜೊತೆಗೆ ಅಂತರ್ ಸಂಪರ್ಕವನ್ನು ಹೊಂದಿದೆ.

ಉಪಸಂಹಾರ:
ಪರಿಸರದ ರಚನೆ ವಾಯುಗೋಳ, ಶಿಲಾಗೋಳ, ಜಲಗೋಳ ಮತ್ತು ಜೀವಗೋಳ ಎಂಬ ನಾಲ್ಕು ಪ್ರಮುಖ ಗೋಳಗಳಿಂದ ರೂಪುಗೊಂಡಿದೆ. ಈ ಗೋಳಗಳು ಪರಸ್ಪರ ಅವಿಭಾಜ್ಯವಾಗಿ ಸಂಪರ್ಕ ಹೊಂದಿದ್ದು ಭೂಮಿಯ ಮೇಲಿನ ಜೀವನಕ್ಕೆ ಅಗತ್ಯವಾದ ಸಮತೋಲನವನ್ನು ಕಾಪಾಡುತ್ತವೆ. ವಾಯು, ನೀರು, ಮಣ್ಣು ಹಾಗೂ ಜೀವಜಗತ್ತು ಒಂದರ ಮೇಲೆ ಮತ್ತೊಂದು ಅವಲಂಬಿತವಾಗಿವೆ. ಪರಿಸರದ ಈ ಸಮನ್ವಯವನ್ನು ಅರಿತುಕೊಳ್ಳುವುದು ಮಾನವನ ಜವಾಬ್ದಾರಿಯುತ ಜೀವನಕ್ಕೆ ಅತೀ ಅವಶ್ಯಕವಾಗಿದೆ. ಪರಿಸರ ಸಂರಕ್ಷಣೆಯ ಮೂಲಕವೇ ಭವಿಷ್ಯದ ತಲೆಮಾರಿಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.

ಪರಿಸರದ ವಿಧಗಳು

ಪರಿಸರದ ವಿಧಗಳು

ಪರಿಸರ ಎಂಬ ಪದವು ಬಹು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಪರಿಸರವು ನಿಸರ್ಗ ಹಾಗೂ ಮಾನವ ನಿರ್ಮಿತವಾಗಿದೆ. ಪರಿಸರವನ್ನು

1. ನೈಸರ್ಗಿಕ ಪರಿಸರ 

2. ಮಾನವ ನಿರ್ಮಿತ ಪರಿಸರ  ಎಂಬ ಎರಡು ಪ್ರಕಾರಗಳಲ್ಲಿ ವಿಂಗಡಿಸಲಾಗಿದೆ.

1. ನೈಸರ್ಗಿಕ ಪರಿಸರ(Natural Environment)

 ನಿಸರ್ಗದತ್ತವಾಗಿ ಜೀವಂತ ಅಥವಾ ಜೀವಂತವಾಗಿರದ ಪರಿಸರವನ್ನು ನೈಸರ್ಗಿಕ ಪರಿಸರ ಎಂದು ಕರೆಯಲಾಗಿದೆ. ಇದನ್ನು ಮತ್ತೆ ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಭೌತಿಕ ಪರಿಸರ ಹಾಗೂ ಜೈವಿಕ ಪರಿಸರ.

ಭೌತಿಕ ಪರಿಸರ (Physical Environment)

ʻʻಇದನ್ನು ಭೌಗೋಳಿಕ ಪರಿಸರ ಎಂದು ಕರೆಯುತ್ತಾರೆ.ʼʼ ಇದು ಸಾಗರ, ನೆಲ, ಹಳ್ಳ, ಸರೋವರ, ಗಾಳಿ, ನದಿ, ಸಮುದ್ರ, ಅರಣ್ಯ, ಖನಿಜ ಸಂಪತ್ತು, ಬೆಟ್ಟಗುಡ್ಡ, ಪರ್ವತ, ಗ್ರಹ, ನಕ್ಷತ್ರ ಮುಂತಾದವುಗಳನ್ನು ಒಳಗೊಂಡಿರುತ್ತದೆ. ಈ ಭೌಗೋಳಿಕ ಪರಿಸರವು ಭೂಮಿಯ ಮೇಲೆ ವಾಸಿಸುವ ಜನರ ಹಾಗೂ ಸಮುದಾಯದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ. ಉದಾ: ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳ ಜನರ ಜೀವನಕ್ಕೂ ಹಾಗೂ ನಗರ ಮತ್ತು ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರ ಜೀವನಗಳ ನಡುವೆ ಸಾಕಷ್ಟು ಭೇದಗಳು ಕಂಡುಬರುತ್ತವೆ. ಮರುಭೂಮಿಯಲ್ಲಿ ವಾಸಿಸುವ ಜನರ ಹಾಗೂ ಸಮುದ್ರ ತೀರದಲ್ಲಿ ವಾಸಿಸುವ ಜನರ ನಡುವಿನ ಜೀವನ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಆದಿವಾಸಿಗಳ ಆಹಾರ, ಉಡುಗೆ ತೊಡುಗೆ, ಲೋಕರೂಢಿ, ಆಚಾರ ವಿಚಾರಗಳು, ಹಬ್ಬ, ಹರಿದಿನಗಳು ಹಾಗೂ ಜಾತ್ರೆಗಳ ಪದ್ಧತಿಯು ನಗರ ಜೀವನದ ಜನರ ಆಹಾರ ಪದ್ಧತಿ, ಆಚಾರ, ವಿಚಾರ, ಉಡುಗೆತೊಡುಗೆ, ಜಾತ್ರೆ ಹಾಗೂ ಸಂಪ್ರದಾಯಗಳು ಬೇರೆ ಬೇರೆಯಾಗಿರುತ್ತದೆ. ಕಾಡಿನ ಜನರು ಕಾಡು ಉತ್ಪನ್ನಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸಿದರೆ, ಸಮುದ್ರ ತೀರದ ಜನರು ಮೀನು, ಸೀಗಡಿ, ಏಡಿ ಮುಂತಾದವುಗಳನ್ನು ತಮ್ಮ ಆಹಾರವನ್ನಾಗಿ ಉಪಯೋಗಿಸುತ್ತಾರೆ. ಹೀಗಾಗಿ ಮಾನವನ ಜೀವನಕ್ಕೂ ಹಾಗೂ ಅವರು ವಾಸಿಸುವ ಪರಿಸರಕ್ಕೂ ಬಹಳ ಸಂಬಂಧ ಇರುವುದನ್ನು ಇದರಿಂದ ಗಮನಿಸಬಹುದು.

 ಜೈವಿಕ ಪರಿಸರ (Biological Environment)

ʻʻ ಸಸ್ಯಸಂಕುಲ, ಪ್ರಾಣಿಸಂಕುಲ, ಪಕ್ಷಿ ಹಾಗೂ ಮಾನವನನ್ನು ಒಳಗೊಂಡಿರುವ ಪರಿಸರವನ್ನು ಜೈವಿಕ ಪರಿಸರ ಎಂದು ಕರೆಯಬಹುದಾಗಿದೆ.ʼʼ ಇದರಲ್ಲಿ ಕೋಟಿ ಕೋಟಿ ಜೀವ ಪ್ರಬೇಧಗಳನ್ನು ಕಾಣಬಹುದಾಗಿದೆ. ಈ ಜೀವರಾಶಿಗಳ ಜೀವನ ಶೈಲಿಯ ಪೂರಕ ಪರಿಸರವನ್ನು ಗುರುತಿಸಬಹುದಾಗಿದೆ. ಜೈವಿಕ ಪರಿಸರದ ಮೇಲೆ  ಭೌತಿಕ ಪರಿಸರದ ಪ್ರಭಾವ ಹೆಚ್ಚಾಗಿರುತ್ತದೆ. ಈ ಎರಡು ಪರಿಸರಗಳು ಪರಸ್ಪರ ಅವಲಂಬಿತವಾಗಿವೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು. ಈ ಕಾರಣದಿಂದಾಗಿಯೇ ಪರಿಸರದಲ್ಲಿ ಸಮತೋಲನ ಕಂಡುಬರುತ್ತದೆ.

2. ಮಾನವ ನಿರ್ಮಿತ ಪರಿಸರ (Man Made Environment) 

ʻʻ ಮಾನವನು ತನ್ನ ಜೀವನವನ್ನು ನಡೆಸುವುದಕ್ಕಾಗಿ ಕೃತಕವಾಗಿ ನಿರ್ಮಿಸಿಕೊಂಡ ಪರಿಸರವನ್ನು ಮಾನವ ನಿರ್ಮಿತ ಪರಿಸರ ಎಂದು ಕರೆಯಲಾಗಿದೆ.ʼʼ ಮಾನವನ ಆಧುನಿಕ ಜೀವನ ವಿಧಾನ ಬಹಳ ಕೃತಕವಾಗಿದೆ. ತನ್ನ ದಿನನಿತ್ಯದ ಚಟುವಟಿಕೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಮಾನವನು ನೈಸರ್ಗಿಕ ಪರಿಸರವನ್ನು ತನಗೆ ಮನಸ್ಸಿಗೆ ಬಂದ ಹಾಗೆ ಪರಿವರ್ತಿಸಿಕೊಳ್ಳುತ್ತಿದ್ದಾನೆ.  ಉದಾ: ನಗರೀಕರಣ, ಕಾಡುಗಳನ್ನು ಕಡಿದು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿಕೊಳ್ಳುವುದು,  ಅಣೆಕಟ್ಟುಗಳು,  ಸೇತುವೆಗಳು,  ರಸ್ತೆಗಳ ನಿರ್ಮಾಣ ಹಾಗೂ ರೈಲು ಹಳಿ ನಿರ್ಮಾಣದಂತಹ ಕಾರ್ಯಗಳನ್ನು ಮಾಡುತ್ತಿದ್ದಾನೆ.  ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮಗಳು ಉಂಟಾಗಿ ಇಂದಿನ ಹಾಗೂ ಮುಂದಿನ ಪೀಳಿಗೆಯು ಸಂಕಷ್ಟದಲ್ಲಿ ಸಿಲುಕುವುದಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣನಾಗುತ್ತಿದ್ದಾನೆ. ಮಾನವ ನಿರ್ಮಿತ ಪರಿಸರವನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ.

ಸಾಮಾಜಿಕ ಪರಿಸರ (Social Environment)

ಆರ್ಥಿಕ ಪರಿಸರ(Econamic Environment)

ಸಾಮಾಜಿಕ ಪರಿಸರ (Social Environment)

ಮಾನವ ಸಾಮಾಜಿಕ ಜೀವಿ. ಸಮಾಜವನ್ನು ಹೊರತುಪಡಿಸಿ ಅವನೆಂದೂ ಬದುಕಲಾರ. ಹೀಗಾಗಿ ಆತ ತನ್ನ ಸುತ್ತಲೂ ಒಂದು ಸಾಮಾಜಿಕ ಕ್ಷೇತ್ರವನ್ನು ನಿರ್ಮಾಣ ಮಾಡಿಕೊಂಡಿದ್ದಾನೆ. ಸಮಾಜದಲ್ಲಿನ ಆಚಾರ-ವಿಚಾರ, ಲೋಕರೂಢಿ, ರೀತಿ-ನೀತಿಗಳು, ಸಾಮಾಜಿಕ ಕಟ್ಟುಪಾಡುಗಳು, ಆಧುನಿಕ ಜೀವನ ರೂಪ, ಕಲೆ, ಶಿಕ್ಷಣ ಹಾಗೂ ತಾಂತ್ರಿಕತೆ ತನ್ನದೇ ಆದ ರೀತಿಯಲ್ಲಿ ಮಾನವನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ. ಹೀಗಾಗಿ ಆತ ಸಾಮಾಜಿಕ ಬಲೆಯೊಳಗೆ ಸಿಲುಕಿಕೊಂಡಿದ್ದಾನೆ. ಉದಾ:  ಒಬ್ಬ ವ್ಯಕ್ತಿ ಬೇರೊಬ್ಬ ವ್ಯಕ್ತಿಯ ಜೊತೆ ಹೊಂದಿರಬಹುದಾದ ಸಂಬಂಧದ ಸ್ವರೂಪವೇ ಒಂದು ರೀತಿಯದ್ದಾಗಿದ್ದರೆ, ಅದೇ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ಜೊತೆಗೆ ಇಟ್ಟುಕೊಂಡ ಸಂಬಂಧದ ಸ್ವರೂಪವೇ ಇನ್ನೊಂದು ರೀತಿಯಲ್ಲಿರುತ್ತದೆ. ವ್ಯಕ್ತಿಯೊಬ್ಬನು ತನ್ನ ತಂದೆ ತಾಯಿಗಳ ಜೊತೆ ಹೊಂದಿದ ಸಂಬಂಧಕ್ಕೂ, ಮಗ ಹಾಗೂ ಮಗಳ ಜೊತೆ ಹೊಂದಿರುವ ಸಂಬಂಧಕ್ಕೂ ಹಾಗೆ ಹೆಂಡತಿಯ ಜೊತೆ ಹೊಂದಿದ ಸಂಬಂಧಕ್ಕೂ ಬಹಳ ವ್ಯತ್ಯಾಸವಿರುತ್ತದೆ. ಸಹೋದರ, ಸಹೋದರಿ, ವ್ಯಾಪಾರಿ, ಗಿರಾಕಿ ಹಾಗೂ ಉಮೇದುವಾರ ಮುಂತಾದವರ ಜೊತೆ ನಡೆದುಕೊಳ್ಳುವ ರೀತಿ ಬಹಳ ವಿಶಿಷ್ಟವಾಗಿರುತ್ತದೆ.  ಭಾರತೀಯ ಸಮಾಜ ಅನೇಕ ಪಿಡುಗುಗಳಿಂದ ಕೂಡಿದೆ. ಇಲ್ಲಿ ಜಾತಿ ಪದ್ಧತಿ, ಅಸ್ಪೃಶ್ಯತೆ, ಸತಿ ಸಹಗಮನ, ದೇವದಾಸಿ ಪದ್ಧತಿ ಮುಂತಾದ ಸಮಾಜ ಬಾಹಿರ ಆಚರಣೆಗಳಿದ್ದು ಆಧುನಿಕ ಸಮಾಜ ಕಲುಷಿತ ವಾತಾವರಣವನ್ನು ಸೃಷ್ಟಿಸಿದೆ. ಮನೆಯಲ್ಲಿನ ಸದಸ್ಯರ ಬೆಳವಣಿಗೆಗೆ ಕುಟುಂಬ ಹಲವಾರು ಕಟ್ಟುಪಾಡುಗಳನ್ನು ಹಾಕುತ್ತದೆ. ಕುಟುಂಬದ ಹಿರಿಯರು ಕಿರಿಯರ ಮೇಲೆ ದಿನನಿತ್ಯ ಪ್ರಭಾವವನ್ನು ಬೀರುತ್ತಾರೆ. ಇಲ್ಲಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚಾರಗಳು ಕಟ್ಟುನಿಟ್ಟಿನಿಂದ ಕೂಡಿರುತ್ತವೆ. ಇದರ ಜೊತೆಗೆ ಪುಸ್ತಕಗಳು,  ಪತ್ರಿಕೆಗಳು, ಬಾನುಲಿಗಳು, ಧ್ವನಿ ಮುದ್ರಿಕೆಗಳು, ಸಿನಿಮಾಗಳು ಹಾಗೂ ದೂರದರ್ಶನಗಳು ವ್ಯಕ್ತಿಯ ಮೇಲೆ ಸಾಕಷ್ಟು ಪ್ರಭಾವವನ್ನು ಬೀರುತ್ತವೆ.  ವ್ಯಕ್ತಿಯು ಹೇಗೆ ಬೆಳೆಯಬೇಕು ಮತ್ತು ತನ್ನ ವ್ಯಕ್ತಿತ್ವವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುವ ಮೊದಲ ಸಂಸ್ಥೆಯೆಂದರೆ ಅದು ಸಾಮಾಜಿಕ ಪರಿಸರ.

ಆರ್ಥಿಕ ಪರಿಸರ (Econamic Environment)

ಆರ್ಥಿಕ ಪರಿಸರವು ಮಾನವನ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ. ಮಾನವನ ಅಳಿವು ಉಳಿವು ಆರ್ಥಿಕ ಕ್ಷೇತ್ರವನ್ನು ಅವಲಂಬಿಸಿದೆ. ಒಂದು ದೇಶದ ಆರ್ಥಿಕ ಪ್ರಗತಿಯು ಆ ದೇಶದ ಮಾನವನ ಆರ್ಥಿಕ ಸ್ಥಿತಿಗತಿಗಳನ್ನು ಒಳಗೊಂಡಿರುತ್ತದೆ.  ಅಂದರೆ ಉತ್ಪಾದನೆ, ವಿತರಣೆ, ಸರಕು ಸಾಗಾಣಿಕೆ, ಬೇಡಿಕೆ, ಸರಬರಾಜು, ಉಪಯೋಗ, ವಿತರಣೆ ಮುಂತಾದ ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆರ್ಥಿಕ ಪರಿಸರ ಎಂದು ಕರೆಯಬಹುದು. ಉದಾ:  ಆದಿವಾಸಿ ಜೀವನ, ಕಾಡು ಜನರ ಜೀವನ, ಗ್ರಾಮೀಣ ಜೀವನ, ನಗರ ಜೀವನ ಕ್ರಮಗಳು ಆರ್ಥಿಕತೆಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಪರಿಣಾಮ ಬೀರುತ್ತವೆ.

ಉಪಸಂಹಾರ

ಪರಿಸರವು ಮಾನವನ ಜೀವನದ ಪ್ರತಿಯೊಂದು ಅಂಶಕ್ಕೂ ನೇರವಾಗಿ ಹಾಗೂ ಪರೋಕ್ಷವಾಗಿ ಪ್ರಭಾವ ಬೀರುತ್ತದೆ. ನೈಸರ್ಗಿಕ ಪರಿಸರವು ಜೀವಿಗಳ ಅಸ್ತಿತ್ವಕ್ಕೆ ಆಧಾರವಾಗಿದ್ದರೆ, ಮಾನವ ನಿರ್ಮಿತ ಪರಿಸರವು ಮಾನವನ ಸಾಮಾಜಿಕ ಹಾಗೂ ಆರ್ಥಿಕ ಬದುಕನ್ನು ರೂಪಿಸುತ್ತದೆ. ಭೌತಿಕ ಮತ್ತು ಜೈವಿಕ ಪರಿಸರಗಳು ಪರಸ್ಪರ ಅವಲಂಬಿತವಾಗಿರುವಂತೆ, ಸಾಮಾಜಿಕ ಮತ್ತು ಆರ್ಥಿಕ ಪರಿಸರಗಳು ಮಾನವನ ವ್ಯಕ್ತಿತ್ವವನ್ನು ನಿರ್ಧರಿಸುತ್ತವೆ. ಆದರೆ ಮಾನವನು ನೈಸರ್ಗಿಕ ಪರಿಸರವನ್ನು ಅತಿಯಾಗಿ ದುರುಪಯೋಗಪಡಿಸಿಕೊಂಡರೆ ಪರಿಸರ ಸಮತೋಲನ ಹದಗೆಡುವ ಸಾಧ್ಯತೆ ಇದೆ. ಆದ್ದರಿಂದ ಪರಿಸರ ಸಂರಕ್ಷಣೆಯೊಂದಿಗೆ ಅಭಿವೃದ್ಧಿಯನ್ನು ಸಮತೋಲನಗೊಳಿಸುವುದು ಇಂದಿನ ಅತ್ಯಂತ ಅಗತ್ಯವಾಗಿದೆ. ಪರಿಸರದ ಮಹತ್ವವನ್ನು ಅರಿತು ಜವಾಬ್ದಾರಿಯುತವಾಗಿ ವರ್ತಿಸುವುದೇ ಭವಿಷ್ಯದ ಸುರಕ್ಷತೆಗೆ ದಾರಿ ಮಾಡಿಕೊಡುತ್ತದೆ.

ಆರ್ಯರ ಕಾಲದ ಸಾಹಿತ್ಯ

ಆರ್ಯರ ಕಾಲದ ಸಾಹಿತ್ಯ

ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಆರಣ್ಯಕಗಳು, ಉಪನಿಷತ್ ಗಳು. ಇವುಗಳನ್ನು ಒಟ್ಟಾರೆ ಹೆಸರಿಸಿರುವುದು ʻವೇದವಾಜ್ಯಯ’ ಎಂಬುದಾಗಿ. ಅಲ್ಲದೆ ರಾಮಾಯಣ ಮತ್ತು ಮಹಾಭಾರತ ಎರಡು ಪ್ರಮುಖ ಮಹಾಕಾವ್ಯಗಳಿವೆ.

ಎ) ಚತುರ್ವೇದಗಳು : ʻವೇದ’ ಎಂಬುದು ಸಂಸ್ಕೃತ ಭಾಷೆಯ ‘ವಿದ್’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಜ್ಞಾನ’ ಎಂಬುದಾಗಿ ಚತುರ್ವೇದಗಳು ಜ್ಞಾನಕಾಂಡದ ಅಂಗಗಳು. ಆರ್ಯರು ತಮ್ಮ ಪೂರ್ವಿಕರಿಂದ ಪಡೆದ ಮಂತ್ರಗಳನ್ನು ಸ್ವರಬದ್ಧವಾಗಿ ಪಠಿಸುತ್ತಿದ್ದರು. ಅವುಗಳೇ ಋಕ್ಕುಗಳು ಅಥವಾ ಸೂಕ್ತಗಳು, ಚತುರ್ವೇದಗಳು ಇಂತಹ ಸೂಕ್ತಗಳಿಂದ ಕೂಡಿವೆ.

ವೇದಗಳು ನಾಲ್ಕು 1) ಋಗ್ವೇದ, 2) ಯಜುರ್ವೇದ, 3) ಸಾಮವೇದ 4) ಅಥರ್ವಣವೇದ.

1) ಋಗ್ವೇದ : ವೇದಗಳಲ್ಲಿ ಅತ್ಯಂತ ಪ್ರಾಚೀನವಾದುದು ಋಗ್ವೇದ , ಋಗ್ವೇದದಲ್ಲಿ 1028 ಸೂಕ್ತಗಳಿವೆ. ಇದನ್ನು 10 ಮಂಡಲಗಳಾಗಿ ವಿಂಗಡಿಸಲಾಗಿದೆ.’ ಋಗ್ವೇದದ ಕಾಲಮಾನ ಕ್ರಿ.ಪೂ 2000 ದಿಂದ 1500. ಆರ್ಯರ ನಾಗರೀಕತೆಯ ಆರಂಭದ ಚಾರಿತ್ರಿಕ ವಿಚಾರಗಳ ಬಗ್ಗೆ ಋಗ್ವೇದವು ಹೆಚ್ಚು ವಿವರ ನೀಡುತ್ತದೆ. ಹಾಗಾಗಿ ಋಗ್ವೇದವು ಒಂದು ಚಾರಿತ್ರಿಕ ಆಧಾರ.

2) ಯಜುರ್ವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹವೇ ಯಜುರ್ವೇದವಾಗಿದೆ. ಯಜುರ್ವೇದವನ್ನು ಶುಕ್ಲಯಜುರ್ವೇದ ಮತ್ತು ಕೃಷ್ಣ ಯಜುರ್ವೇದವೆಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಯಜುರ್ವೇದವು ಉತ್ತರ ವೈದಿಕ ಕಾಲದಲ್ಲಿ ರಚನೆಯಾಗಿದೆ.

3) ಸಾಮವೇದ : ಋಗ್ವೇದದ ಕೆಲವು ಸೂಕ್ತಗಳ ಸಂಗ್ರಹಣೆಯೇ ಸಾಮವೇದ. ಇವುಗಳನ್ನು ಗಾನಮಯವಾಗಿ ರಚಿಸಲಾಗಿದೆ. ಇದರಲ್ಲಿ 78 ಮಂತ್ರಗಳು ಮಾತ್ರ ಹೊಸದಾಗಿ ಸೇರ್ಪಡೆಯಾಗಿವೆ. ಸಾಮವೇದದ ಸೂಕ್ತಗಳನ್ನು ಪಠಿಸುವಾಗ ಗಾನಮಯವಾಗಿಯೇ ಪಠಿಸಬೇಕಾಗಿತ್ತು. ಇದರಲ್ಲಿ ಭಾರತೀಯ ಸಂಗೀತ ಶಾಸ್ತ್ರದ ಸಪ್ತಸ್ವರಗಳು ಪ್ರಯೋಗಿಸಲ್ಪಟ್ಟಿವೆ ಎಂಬುದು ಕೆಲವರ ಅನಿಸಿಕೆ, ಆರ್ಯರ ಸಂಗೀತ ಜ್ಞಾನದ ಬಗ್ಗೆ ಇದು ವಿವರ ನೀಡುತ್ತದೆ.

4) ಅಥರ್ವಣವೇದ : ವೇದಗಳಲ್ಲಿ ಕೊನೆಯದು ಅಥರ್ವಣವೇದ, ಅಥರ್ವಣವೇದವು ಪದ್ಯ ಮತ್ತು ಗದ್ಯ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ಇದರಲ್ಲಿ ʻ6000′ ಮಂತ್ರಗಳಿವೆ.

ಇದರಲ್ಲಿರುವ ವಿಷಯ ಮತ್ತು ವಿಚಾರಗಳೆಂದರೆ:- ವಿವಾಹ ಪದ್ಧತಿ, ಶವಸಂಸ್ಕಾರ, ರಾಜನ ಆಯ್ಕೆ, ಗೃಹನಿರ್ಮಾಣ, ಮಾಯ, ಮಾಟ, ಮಂತ್ರ ಮತ್ತು ದುಷ್ಟಶಕ್ತಿಗಳನ್ನು ದೂರವಿಡುವ ತಂತ್ರಗಳು, ದೀರ್ಘಾಯುಕ್ರಮ, ಆರೋಗ್ಯಕ್ರಮ, ಸತ್ಯವ್ರತ, ಶ್ರೇಯಸ್ಸು, ರೋಗಗಳ ನಿವಾರಣೆ, ಔಷಧಿಗಳ ವಿವರ ಇನ್ನೂ ಅನೇಕ ವಿಷಯಗಳಿಂದ ಕೂಡಿರುವುದರಿಂದ ಇದಕ್ಕೆ ʻಬ್ರಹ್ಮವೇದ’ ಎಂದು ಕರೆಯಲಾಗುತ್ತಿತ್ತು.

ಬಿ) ವೇದಾಂಗಗಳು ಮತ್ತು ಉಪವೇದಗಳು : ವೇದಾಂಗಗಳು ಮತ್ತು ಉಪವೇದಗಳು ವೈದಿಕ ಸಾಹಿತ್ಯದ ಅನುಬಂಧ ಭಾಗಗಳಾಗಿವೆ. ವೇದಾಂಗಗಳು ಆರು. ಅವುಗಳೆಂದರೆ:- ಶಿಕ್ಷ, ಛಂದಸ್ಸು, ವ್ಯಾಕರಣ, ನಿರುಕ್ತ, ಕಲ್ಪ, ಜ್ಯೋತಿಷ್ಯ. ವೇದಾಂಗಗಳು ಧರ್ಮಸೂತ್ರ, ಧಾರ್ಮಿಕ ರೀತಿ ನಿಬಂಧನೆ, ಲೌಕಿಕ ಮತ್ತು ವ್ಯಾಪಾರ ಜೀವನಕ್ಕೆ ಸಂಬಂಧಿಸಿದ ನೀತಿ ನಿಯಮಗಳ ಬಗ್ಗೆ ತಿಳಿಸುತ್ತವೆ. ಉಪವೇದಗಳಾದ ಆಯುರ್ವೇದ, ಧನುರ್ವೇದ, ಶಿಲ್ಪ ಮತ್ತು ಗಂಧರ್ವ ವೇದಗಳು ಲೌಕಿಕ ವಿಷಯಗಳನ್ನು ಒಳಗೊಂಡಿವೆ.

ಸಿ) ಬ್ರಾಹ್ಮಣಗಳು : ವೇದಗಳ ಕಾಲದ ಕೆಲವು ಸೂಕ್ತಗಳನ್ನು ಗದ್ಯದ ರೂಪದಲ್ಲಿ ಸಂಗ್ರಹಿಸಿಲಾಗಿದೆ. ಅವುಗಳೇ ಬ್ರಾಹ್ಮಣಗಳು. ಐತ್ತರೇಯ ಬ್ರಾಹ್ಮಣ, ತೈತ್ತರೇಯ ಬ್ರಾಹ್ಮಣ, ಗೋಪಥ ಬ್ರಾಹ್ಮಣ ಮತ್ತು ಛಾಂದೋಗ್ಯ ಬ್ರಾಹ್ಮಣಗಳು ಪ್ರಮುಖವಾಗಿದೆ. ಇವುಗಳು ಉತ್ತರ ವೈದಿಕ ಕಾಲದಲ್ಲಿ ರಚಿಸಲ್ಪಟ್ಟಿದ್ದು ಆ ಕಾಲದ ಜನಜೀವನದ ಬಗ್ಗೆ ವಿವರ ನೀಡುತ್ತವೆ.

ಡಿ) ಅರಣ್ಯಕಗಳು : ಉತ್ತರ ವೈದಿಕಕಾಲದಲ್ಲಿ ಋಷಿಮುನಿಗಳು ಪ್ರಶಾಂತವಾದ ಅರಣ್ಯಗಳಲ್ಲಿ ಕುಳಿತು ರಚಿಸಿದ ಸೂಕ್ತಗಳೇ ಅರಣ್ಯಕಗಳು.

ಇ) ಉಪನಿಷತ್ತುಗಳು : ಅರಣ್ಯಕಗಳನ್ನು ಕಾಲಾನಂತರ ಉಪನಿಷತ್ತುಗಳೆಂದು ಹೆಸರಿಸಲಾಯಿತು. ಒಟ್ಟು ಹನ್ನೆರಡು ಉಪನಿಷತ್ತುಗಳಿವೆ. ಈಶ, ಕೇನ, ಕಠ, ಪ್ರಶ್ನೆ, ಮುಂಡಕ, ಮಾಂಡೂಕ್ಯ, ಐತ್ತರೇಯ, ತೈತ್ತರೀಯ, ಛಾಂದೋಗ್ಯ, ಬೃಹದಾರಣ್ಯಕ, ಕೌಷೀತಕಿ, ಶ್ವೇತಾಶ್ವತರ, ಉಪನಿಷತ್ತುಗಳಲ್ಲಿ ಹಿಂದೂ ಧರ್ಮದ ಪರಮಸತ್ಯದ ಸ್ವರೂಪವು ವಿವರವಾಗಿ ನಿರೂಪಿತವಾಗಿದೆ. ಇ.ಇ.ಪಾರ್ಗಿಟರ್‌ರವರ ಪ್ರಕಾರ ‘ವಿಶ್ವದ ತತ್ವಜ್ಞಾನ ರಾಶಿಗೆ ಭಾರತ ಅರ್ಪಿಸಿರುವ ಅಮೂಲ್ಯವಾದ ಕೊಡುಗೆಗಳೇ ಉಪನಿಷತ್ತುಗಳು’.

ಆರ್ಯರ ಮೂಲ

ಆರ್ಯರ ಮೂಲ

ಪ್ರಾಚೀನ ಭಾರತದಲ್ಲಿನ ಎರಡು ಪ್ರಮುಖ ಸಂಸ್ಕೃತಿಗಳಲ್ಲಿ ವೈದಿಕ ಸಂಸ್ಕೃತಿಯು ಒಂದು ಸಿಂಧೂ ಸಂಸ್ಕೃತಿಯ ಪತನಾ ನಂತರ ಆರ್ಯರ ಸಂಸ್ಕೃತಿಯು ರೂಪುಗೊಂಡಿತು. ವೈದಿಕ ಸಂಸ್ಕೃತಿಯು ಕ್ರಿ.ಪೂ 2000 ದ ವೇಳೆಗೆ ಅಸ್ತಿತ್ವದಲ್ಲಿದ್ದಿರಬೇಕೆಂದು ಚರಿತ್ರಾಕಾರರು ಅಭಿಪ್ರಾಯಪಟ್ಟಿದ್ದಾರೆ.

ನಿರ್ಮಾತೃಗಳು : ವೈದಿಕ ಸಂಸ್ಕೃತಿಯ ನಿರ್ಮಾತೃಗಳು ಆರ್ಯರಾಗಿದ್ದರೆಂದು ತಿಳಿದುಬಂದಿದೆ. ಆದರೆ ಆರ್ಯರ ಮೂಲ ತುಂಬ ವಿವಾದಗ್ರಸ್ಥ ವಿಷಯವಾಗಿದೆ.

ಆರ್ಯರ ಮೂಲ ತೀವ್ರ ಭಿನ್ನಾಭಿಪ್ರಾಯಗಳಿಂದ ಕೂಡಿದೆ. ಮೂಲದ ಬಗ್ಗೆ ಕೆಳಕಂಡ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.

1. ಮಧ್ಯ ಏಷ್ಯಾ ಆರ್ಯರ ಮೂಲಸ್ಥಾನ :

ಜರ್ಮನಿಯ ಖ್ಯಾತ ಭಾಷಾಶಾಸ್ತ್ರಜ್ಞ ‘ಪ್ರೊ|| ಮ್ಯಾಕ್ಸ್ ಮುಲ್ಲರ್’ ಈ ಅಭಿಪ್ರಾಯವನ್ನು ನೀಡಿದ್ದಾರೆ. ಇವರು ವೇದಗಳ ಭಾಷೆಗೂ ಮತ್ತು ಝಂಡ್ ಅವೆಸ್ತಾಗಳ ಭಾಷೆಗೂ ಹೋಲಿಕೆ ಇರುವುದರಿಂದ ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಪರಸ್ಪರ ಭಾಷೆಗಳ ಶಬ್ದಗಳನ್ನು ಅದಲು-ಬದಲು ಮಾಡಿ ಶಬ್ದಾರ್ಥರೂಪವನ್ನು ಕಂಡುಹಿಡಿಯಬಹುದಾಗಿದೆ. ಏಷ್ಯಾಮೈನರ್‌ನ ಬೋಗಝ್ ಕಾಯ್ ಶಾಸನದಿಂದ ಇಂಡೋ-ಇರಾನಿಯನ್ ಗುಂಪು ಮದ್ಯವಿಷ್ಯಾದಲ್ಲಿ ಮೊದಲೇ ನೆಲೆಸಿತ್ತೆಂದು ತಿಳಿದುಬರುತ್ತದೆ.

* 16ನೇ ಶತಮಾನದಲ್ಲಿ ಭಾರತಕ್ಕೆ ಬಂದು ಗೋವಾದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದ ಪ್ಲಾರೈಂಟೈನಿನ ವ್ಯಾಪಾರಿ ಫಿಲಿಫೊ ಸಸೆಟ್ಟಿ ಎಂಬುವನು ಸಂಸ್ಕೃತ ಮತ್ತು ಯೂರೋಪಿನ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಉದಾ: ತಂದೆ, ತಾಯಿ, ಸಹೋದರ, ಗೋವು ಎಂಬ ಪದ ತೆಗೆದುಕೊಂಡಾಗ;

ಸಂಸ್ಕೃತ

ಪರ್ಶಿಯನ್

ಲ್ಯಾಟಿನ್

ಇಂಗ್ಲೀಷ್

ಗ್ರೀಕ್

ಪಿತೃ

ಪಿದರ್

ಪಾಟರ್

ಫಾದರ್

ಪೇಟರ್

ಮಾತೃ

ಮಾದರ್

ಮಾಟರ್

ಮದರ್

ಮೆಟರ್

ಭ್ರಾತೃ

ಭ್ರಾತರ್

ಪ್ರೆಟರ್

ಬ್ರದರ್

ಪ್ರೇಟರ್

ಗೋ

ಗೋಸ

ವಾಸ

ಕೌ

ವೋಸ

2. ಯೂರೋಪ್ ಆರ್ಯರ ಮೂಲಸ್ಥಾನ :

* ಜೋನ್ಸ್ ಮೊದಲಾದ ವಿದ್ವಾಂಸರು ಆರ್ಯರ ಮೂಲಸ್ಥಾನ ಆಗ್ನೆಯ ಯೂರೋಪ್ ಎಂದಿದ್ದಾರೆ.

* ಸರ್ ವಿರಿಯಂ ಜೋನ್ಸ್‌ರವರು 1786 ರಲ್ಲಿ ಗ್ರೀಕ್, ಲ್ಯಾಟನ್, ಗಾಥಿಕ್, ಕೆಲ್ಟಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗಳ ನಡುವೆ ಸಾಮೀಪ್ಯವಿದೆಯೆಂದು ತಿಳಿಸಿದ್ದಾರೆ. ಅದೇ ರೀತಿ ಸರ್ ವಿಲಿಯಂ ಜೋನ್ಸ್ ರವರು ಗ್ರೀಕ್, ಲ್ಯಾಟಿನ್, ಗಾಥಿಕ್, ಕೆಲ್ವಿಕ್ ಮತ್ತು ಪರ್ಷಿಯನ್ ಭಾಷೆಗಳಿಗೂ ಹಾಗೂ ಸಂಸ್ಕೃತ ಭಾಷೆಗೂ ಸಾಮೀಪ್ಯವಿದ್ದು ಈ ಎಲ್ಲಾ ಭಾಷೆಗಳೂ ಒಂದೇ ಮೂಲದಿಂದ ಬಂದಿದೆಯೆಂದು ಪ್ರತಿಪಾದಿಸಿದ್ದಾರೆ.

ಇವರುಗಳ ಪ್ರಕಾರ ಈ ಭಾಷೆಗಳನ್ನಾಡುವ ಜನರು ಪ್ರಾರಂಭದಲ್ಲಿ ಒಂದೇ ಪ್ರದೇಶದಲ್ಲಿ ವಾಸವಾಗಿದ್ದು ಆನಂತರ ಯೂರೋಪ್ ಏಷ್ಯಾ ಮತ್ತಿತರ ಪ್ರದೇಶಗಳಿಗೆ ವಲಸೆ ಹೋದರು. ಇವರು ತಮ್ಮ ವಾದಕ್ಕೆ ಆಧಾರವಾಗಿ ಭಾಷೆಗಳಲ್ಲಿನ ಸಾಹಿತ್ಯದಲ್ಲಿ ಹವಾಗುಣ, ಋತುಗಳು ಪ್ರಾಣಿ, ಸಸ್ಯವರ್ಗ, ಮತ್ತು ಭೌಗೋಳಿಕಾಂಶಗಳ ವಿವರಣೆಯಲ್ಲಿ ಒಂದೇ ವಿಧವಾದ ಹೆಸರುಗಳನ್ನು ಬಳಸಿರುವುದನ್ನು ಪತ್ತೆ ಹಚ್ಚಿದ್ದಾರೆ, ಹೊಂಗೆಮರ, ಎಲ್ಲೊ, ಓಕ್ ಮರಗಳು ಮತ್ತು ಹಸು ಆರ್ಯರಿಗೆ ಚಿರಪರಿಚಿತವಾಗಿತ್ತು. ಆರ್ಯರಿಗೆ ಪರಿಚಿತವಾದ ಗಿಡಮರ ಪ್ರಾಣಿಗಳು ಆಗ್ನೆಯ ಯೂರೋಪಿನಲ್ಲಿ ವಿಪುಲವಾಗಿದ್ದುದು ಅಲ್ಲಿನ ಪಳೆಯುಳಿಕೆಗಳಿಂದ ದೃಡಪಟ್ಟಿದೆ.

3. ಹಂಗೇರಿ ಆರ್ಯರ ಮೂಲಸ್ಥಾನ :

ಡಾ|| ಪಿ.ಗೈಲ್ಸ್ ಮತ್ತು ಪ್ರೊ|| ಮ್ಯಾಕ್ ಡೊನೆಲ್ ರವರು ಸಹಭಾಷೆಯ ಸಾಮ್ಯತೆಯ ಆಧಾರದ ಮೇಲೆ ಆರ್ಯರ ಮೂಲಸ್ಥಾನವು ಹಂಗೇರಿ ಎಂದು ಪ್ರತಿಪಾದಿಸಿದ್ದಾರೆ. ಭಾಷೆಗಳ ಸಾಹಿತ್ಯದಲ್ಲಿ ಸಸ್ಯ, ಪ್ರಾಣಿ, ಹವಾಗುಣ, ಋತುಗಳನ್ನು ಒಂದೇ ಹೆಸರಿನಲ್ಲಿ ಗುರುತಿಸಿರುವುದನ್ನು ಇವರು ತಮ್ಮ ವಾದಕ್ಕೆ ಬಳಸಿಕೊಂಡಿದ್ದಾರೆ.

4. ದಕ್ಷಿಣ ರಷ್ಯಾ ಮೂಲಸ್ಥಾನ :

ಬ್ರಾಂಡನ್‌ ಸ್ಟೈನ್, ಪೂಕೊರನೆ, ನೆಹರಿಂಗ್, ವೊಲ್ಗಾರ್ ಹಾಗೂ ಇತ್ತೀಚಿಗೆ ಡಾ|| ಬಿ.ಕೆ.ಘೋಷ್ ರವರು ಭಾಷೆಗಳ ಆಧಾರದ ಮೇಲೆ ಮತ್ತು ಕೆಲವು ಪುರಾತನ ಅವಶೇಷಗಳ ಆಧಾರದ ಮೇಲೆ ರಷ್ಯಾದ ದಕ್ಷಿಣದ ಸೈಫಿ ಹುಲ್ಲುಗಾವಲು ಪ್ರದೇಶ ಆರ್ಯರ ಮೂಲ ನೆಲೆಯೆಂದು ಅಭಿಪ್ರಾಯಪಟ್ಟಿದ್ದಾರೆ.

5. ಆರ್ಕ್ಟಿಕ್ ಪ್ರದೇಶ ಮೂಲಸ್ಥಾನ :

ಬಾಲಗಂಗಾಧರ ತಿಲಕ್‌ ರವರು ತಮ್ಮ ʻಆರ್ಕ್ಟಿಕ್ ಹೋಂ ಆಫ್ ದಿ ವೇದಾಸ್’ ಎಂಬ ಕೃತಿಯಲ್ಲಿ ಆರ್ಕ್ಟಿಕ್ ಪ್ರದೇಶ ಅಥವಾ ಉತ್ತರ ದೈವಪ್ರದೇಶವು ಆರ್ಯರ ಮೂಲಸ್ಥಾನ ವೆಂದಿದ್ದಾರೆ. ಇದಕ್ಕೆ ಅವರು ನೀಡುವ ಆಧಾರಗಳೆಂದರೆ ವೈದಿಕ ಕೃತಿಗಳಲ್ಲಿನ ನಿಸರ್ಗ, ಸಸ್ಯ, ಗಿಡಮರಗಳ ಮೇಲಿನ ವಿವರಣೆಯು ಆರ್ಕ್ಟಿಕ್ ಪ್ರದೇಶಕ್ಕೆ ಹೋಲಿಕೆಯಾಗುತ್ತದೆ. ತಿಲಕ್‌ ರವರು ಋಗ್ವೇದ ಮತ್ತು ಜೆಂಡ್ ಅವೆಸ್ತಾಗಳನ್ನು ದೀರ್ಘವಾಗಿ ಅಧ್ಯಯನಮಾಡಿ ಈ ನಿರ್ಧಾರಕ್ಕೆ ಬಂದಿದ್ದಾರೆ.

6. ಟಿಬೆಟ್ ಮೂಲಸ್ಥಾನ :

ಸ್ವಾಮಿ ದಯಾನಂದ ಸರಸ್ವತಿಯವರು ತಮ್ಮ ʻಸತ್ಯಾರ್ಥಪ್ರಕಾಶ’ ಕೃತಿಯಲ್ಲಿ ಆರ್ಯರ ಮೂಲಸ್ಥಾನ ಟಿಬೆಟ್ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಫ್.ಇ. ಪಾರ್ಗಿಟರ್ ರವರು ತಮ್ಮ ʻಏನ್ಸಿಯಂಟ್ ಇಂಡಿಯನ್ ಹಿಸ್ಟಾರಿಕಲ್ ಟ್ರಡಿಷನ್ಸ್’ ಎಂಬ ಕೃತಿಯಲ್ಲಿ ದಯಾನಂದ ಸರಸ್ವತಿಯವರ ವಾದವನ್ನು ಬೆಂಬಲಿಸಿದ್ದಾನೆ. ಏಕೆಂದರೆ ಟಿಬೆಟಿಯನ್ ರ ಆಚರಣೆಗೂ ಮತ್ತು ಆರ್ಯರ ಆಚರಣೆಗಳ ನಡುವೆ ಹೋಲಿಕೆ ಇದೆ. ಹೀಗೆ ಆರ್ಯರ ಮೂಲದ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಮೇಲಿನ ಅಭಿಪ್ರಾಯಗಳನ್ನು ಅವಲೋಕಿಸಿದ ನಂತರ ಆರ್ಯರ ಮೂಲ ವಿದೇಶವೆಂದು ತಿಳಿದುಬರುತ್ತದೆ. ಆದರೆ ಆರ್ಯರು ಭಾರತ ದೇಶೀಯರು ಎಂಬ ವಾದವೂ ಸಹ ಇದೆ.

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲವನ್ನು ಕೊನೆಯ ವೇದಗಳ ಕಾಲದ ನಾಗರೀಕತೆ ಎಂದು ಸಹ ಹೆಸರಿಸಲಾಗಿದೆ. ಉತ್ತರ ವೈದಿಕಕಾಲದ ಕಾಲಮಾನ ಕ್ರಿ.ಪೂ 1200 ರಿಂದ ಕ್ರಿ.ಪೂ 600, ಋಗ್ವೇದದ ಕಾಲದಲ್ಲಿ ಸಪ್ತಸಿಂಧು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಆರ್ಯರ ಸಂಸ್ಕೃತಿ ಕ್ರಮೇಣ ಋಗ್ವೇದದ ಕಾಲದಲ್ಲಿ ವಿಸ್ತರಣೆಗೊಂಡಿತು. ಉತ್ತರ ವೈದಿಕಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ಜನಜೀವನ ಕಂಡುಬಂದಿತು.

ಆಧಾರಗಳು : ಉತ್ತರ ವೈದಿಕಕಾಲದ ಆರ್ಯರ ಸಂಸ್ಕೃತಿಯ ಬಗ್ಗೆ ತಿಳಿಯಲು ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ, ಬ್ರಾಹ್ಮಣಗಳು, ಅರಣ್ಯಕಗಳು ಹಾಗೂ ಉಪನಿಷತ್ತುಗಳು ಸಹಕಾರಿಯಾಗಿವೆ.

ಆರ್ಯರ ಜನಜೀವನ : ಉತ್ತರ ವೈದಿಕಕಾಲದ ಆರ್ಯರ ಜನಜೀವನವು ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಿ, ಆರ್ಥಿಕ ಜೀವನ, ಧಾರ್ಮಿಕ ವ್ಯವಸ್ಥೆ, ಶಿಕ್ಷಣ ಮತ್ತು ಸಾಹಿತ್ಯ ಹಾಗೂ ತತ್ವಜ್ಞಾನದ ಬೆಳವಣಿಗೆಯನ್ನು ಅವಲಂಭಿಸಿತ್ತು.

ಎ. ರಾಜಕೀಯ ವ್ಯವಸ್ಥೆ :

ಪೂರ್ವವೈದಿಕ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ಋಗ್ವೇದ ಕಾಲಕ್ಕಿಂತ ಭಿನ್ನವಾದ ಲಕ್ಷಣಗಳು ಕಂಡುಬಂದವು. ಅಂತಹ ಲಕ್ಷಣಗಳಲ್ಲಿ ಪ್ರಮುಖವಾದವುಗಳೆಂದರೆ :

ರಾಜ್ಯಗಳ ಏಳಿಗೆ :

ಪೂರ್ವವೈದಿಕ ಕಾಲದಲ್ಲಿದ್ದ ಬಣರಾಜ್ಯಗಳು ನಶಿಸಿ ಚಿಕ್ಕಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಂತಹ ರಾಜ್ಯಗಳಲ್ಲಿ ಪ್ರಮುಖವಾದವು ಕಾಶಿ, ಕೋಸಲ, ವಿದೇಹ, ಮಗಧ ಹಾಗೂ ಅಂಗರಾಜ್ಯಗಳು,

ಎ) ಕಾಶಿ : ಕಾಶಿಯು ಒಂದು ರಾಜ್ಯವಾಗಿತ್ತು. ಬ್ರಹ್ಮದತ್ತ ಸಂತತಿಯವರು ಕಾಶಿ ರಾಜ್ಯವಾಳುತ್ತಿದ್ದರು. ಕಾಶಿಯ ಪ್ರಖ್ಯಾತ ಅರಸರಲ್ಲಿ ಅಜಾತಶತ್ರು ಪ್ರಮುಖನಾಗಿದ್ದನು. ಅಜಾತಶತ್ರುವು ದಕ್ಷ ಅರಸನಾಗಿದ್ದುದಲ್ಲದೆ ವಿದ್ವಾಂಸರಿಗೆ ಅಪಾರ ಪ್ರೋತ್ಸಾಹ ನೀಡಿದ್ದನು. ಕ್ರಿ.ಪೂ 700 ರವೇಳೆಗೆ ಕಾಶಿಯು ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಕ್ರಮೇಣ ಕಾಶಿಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.

ಬಿ) ಕೋಸಲ: ಕೋಸಲ ಸಹ ಒಂದು ಪ್ರಮುಖ ರಾಜ್ಯವಾಗಿತ್ತು. ಆದರೆ ಅಯೋದ್ಯ ಅವರ ಆರಂಭದ ರಾಜಧಾನಿಯಾಗಿದ್ದು ಸಾಕೇತ ಮತ್ತು ಶ್ರಾವಸ್ಥಿ ಆನಂತರದ ರಾಜದಾನಿಗಳು. ಪುರಾಣಗಳು 31 ಇಕ್ಷಾಕು ಅರಸರು ಆಳ್ವಿಕೆ ನಡೆಸಿದರೆಂದು ತಿಳಿಸುತ್ತವೆ. ಶುದ್ಧೋದನ, ಸಿದ್ದಾರ್ಥ, ರಾಹುಲ ಪ್ರಮುಖರಾಗಿದ್ದರು. ಕಾಶಿ ಮತ್ತು ಕೋಸಲದ ಮಧ್ಯ ರಾಜಕೀಯ ಪ್ರಭುತ್ವ ಸ್ಥಾಪನೆಗಾಗಿ ಹೋರಾಟ ನಡೆದು ಕೋಸಲ ಪ್ರಬಲವಾಯಿತು.

ಸಿ) ವಿದೇಹ : ಕೋಸಲದ ಪೂರ್ವಕ್ಕೆ ವಿದೇಹ ರಾಜ್ಯವಿದ್ದು, ಮಿಥೆಲೆಯು ಕೋಸಲದ ರಾಜಧಾನಿಯಾಗಿತ್ತು. ವಿದೇಹದ ಅರಸ ಜನಕ ಕ್ಷತ್ರಿಯನಾಗಿದ್ದರೂ ಬ್ರಹ್ಮ ವಿದ್ಯೆಯ ಪ್ರವೀಣವೆನಿಸಿದ್ದನು. ಅವನನ್ನು ಜನಕ ಮಹರ್ಷಿ ಎಂದೇ ಕರೆಯಲಾಗುತ್ತಿತ್ತು. ಕೋಸಲ ಮತ್ತು ವಿದೇಹ ರಾಜ್ಯಗಳ ಮಧ್ಯೆ ವೈವಾಹಿಕ ಬಾಂಧವ್ಯವಿತ್ತು.

ಡಿ) ಮಗಧ : ಕೋಸಲ ಮತ್ತು ವಿದೇಹ ರಾಜ್ಯಗಳ ಪೂರ್ವಕ್ಕೆ ಮಗಧರಾಜ್ಯವಿತ್ತು. ವೈದಿಕ ಸಾಹಿತ್ಯ ಕೃತಿಗಳು ಮಗಧರು ದಕ್ಷಿಣ ಬಿಹಾರದಲ್ಲಿ ಪ್ರಾಬಲ್ಯಕ್ಕೆ ಬಂದರೆಂದು ತಿಳಿಸುತ್ತವೆ. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ ಮಗಧ ದೊರೆಗಳು ಕ್ಷತ್ರಿಯ ಮತ್ತು ವೈಶ್ಯ ಮಿಶ್ರಜಾತಿಗೆ ಸೇರಿದವರಾಗಿದ್ದರು. ಇವರು ವೈದಿಕ ಸಂಸ್ಕೃತಿಯನ್ನು ಅನುಸರಿಸುತ್ತಿರಲಿಲ್ಲ.

ರಾಜನ ಆಡಳಿತ ಮತ್ತು ಅಧಿಕಾರಗಳು :

ರಾಜನು ಅಪರಿಮಿತವಾದ ಆಡಳಿತಾಧಿಕಾರವನ್ನು ಪಡೆದಿದ್ದನು. ಸಾಮಾನ್ಯ ಆಡಳಿತನಿರ್ವಹಣೆ ಮತ್ತು ನ್ಯಾಯಿಕ ಅಧಿಕಾರಗಳು ರಾಜನಿಗಿದ್ದವು. ರಾಜನ ಆಡಳಿತಾತ್ಮಕ ಅಧಿಕಾರಗಳನ್ನು ಪ್ರಶ್ನಿಸುವಂತಿರಲಿಲ್ಲ.

ಎ) ಅಧಿಕಾರಿಗಳು:-ರಾಜನ ರಾಜ್ಯಾಡಳಿತದಲ್ಲಿ ಸಹಕರಿಸಲು ಪುರೋಹಿತ, ಗ್ರಾಮಿಣಿ ಮತ್ತು ಸೇನಾನಿ ಗಳಿದ್ದರು ಅಲ್ಲದೆ ಭಾಗದುಗ(ಕರವಸೂಲಿಗಾರ) ಸಾರಥಿಸಮ್‌ ಗ್ರಹಿತ್ತಿ (ಕೋಶಾಧಿಕಾರಿ) ಪಲಗಲ(ಆಸ್ಥಾನಿಕ) ಎಂಬ ಅಧಿಕಾರಿಗಳ ವಿವರಗಳು ದೊರೆತಿವೆ.

ಬಿ) ಸಭಾ ಮತ್ತು ಸಮಿತಿಗಳು : ಪೂರ್ವ ವೈದಿಕ ಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿಯೂ ಸಭಾ ಮತ್ತು ಸಮಿತಿಗಳು ಅಸ್ತಿತ್ವದಲ್ಲಿದ್ದವು. ಎ.ಎಲ್.ಬಾಷಂ ʻಎ ವಂಡರ್ ದಟ್ ವಾಸ್ ಇಂಡಿಯಾ’ ದಲ್ಲಿ ಅಭಿಪ್ರಾಯಪಡುವಂತೆ ʻಸಭಾ ಮತ್ತು ಸಮಿತಿಗಳು ರಾಜ್ಯಾಡಳಿತದಲ್ಲಿ ಸಹಕರಿಸುತ್ತಿದ್ದವು’.

ಸಿ) ಅಶ್ವಮೇಧಯಾಗ, ರಾಜಸೂಯ ಯಾಗಗಳು:- ರಾಜರುಗಳು ವಿಶಾಲ ರಾಜ್ಯವನ್ನು ಸ್ಥಾಪಿಸಿದ್ದರಿಂದ ಅದರ ಜ್ಞಾಪಕಾರ್ಥವಾಗಿ ರಾಜಸೂಯಯಾಗ

ಬಿ. ಸಾಮಾಜಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ.

ಎ) ಅವಿಭಕ್ತಕುಟುಂಬ ಪದ್ಧತಿ : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲೂ ಅವಿಭಕ್ತ ಕುಟುಂಬ ಪದ್ಧತಿಯು ಮುಂದುವರೆಯಿತು.

ಬಿ) ಸ್ತ್ರೀಯರ ಸ್ಥಾನ : ಉತ್ತರ ವೈದಿಕಕಾಲದಲ್ಲಿ ಸ್ತ್ರೀಯರ ಸ್ಥಾನವು ಗೌಣವಾದುದಾಗಿರಲಿಲ್ಲ. ಕೌಟುಂಬಿಕ ವ್ಯವಹಾರಗಳಲ್ಲಿ ಸ್ತ್ರೀಯರು ಪಾಲ್ಗೊಳ್ಳುತ್ತಿದ್ದರು.

ಸಿ) ಉಡುಪು ಮತ್ತು ಆಭರಣಗಳು : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿ ಸ್ತ್ರೀ-ಪುರುಷರು ಹತ್ತಿ ಮತ್ತು ಉಣ್ಣೆಯ ಉಡುಪುಗಳನ್ನು ಧರಿಸುತ್ತಿದ್ದರು. ಈ ಕಾಲದಲ್ಲಿಯೂ ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು.

ಡಿ) ಆಹಾರ, ಪಾನೀಯಗಳು : ಮಿಶ್ರ ಆಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಸಸ್ಯಹಾರ ಮತ್ತು ಮಾಂಸಾಹಾರಗಳು ಬಳಕೆಯಲ್ಲಿದ್ದವು. ʻಸೋಮರಸ ಮತ್ತು ಸುರೆ’ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.

ಇ) ವಿವಾಹ ಪದ್ಧತಿ : ಉತ್ತರ ವೈದಿಕಕಾಲದಲ್ಲಿ 8 ಬಗೆಯ ವಿವಾಹ ಪದ್ಧತಿಗಳು ಅಸ್ತಿತ್ವದಲ್ಲಿದ್ದವೆಂದು ಧರ್ಮಸೂತ್ರಗಳು ವಿವರನೀಡುತ್ತವೆ. ಅವುಗಳೆಂದರೆ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಾಂಧರ್ವ, ಅಸುರ, ರಾಕ್ಷಸ ಮತ್ತು ಪೈಶಾಚ. ವಿಧವಾ ವಿವಾಹ ಪದ್ಧತಿಯಲ್ಲಿ ನಿರ್ಬಂಧದ ವಿವಾಹ ಅಸ್ತಿತ್ವದಲ್ಲಿತ್ತು.

ಎಫ್) ಜಾತಿ ಪದ್ಧತಿ : ಉತ್ತರ ವೈದಿಕಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯ ಒಂದು ಪ್ರಧಾನ ಲಕ್ಷಣವೆಂದರೆ ಜಾತಿ ಪದ್ಧತಿ ಅಸ್ತಿತ್ವಕ್ಕೆ ಬಂದದ್ದು. ಋಗ್ವೇದದ 10ನೇ ಮಂಡಲದಲ್ಲಿ ಜಾತಿ ಪದ್ಧತಿಯ ಉಗಮ ಮತ್ತು ಜಾತಿಗಳ ನಿರ್ದಿಷ್ಟ ಕಸುಬುಗಳ ಬಗ್ಗೆ ವಿವರವಿದೆ. ವರ್ಣಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿದ್ದವು. ಬ್ರಾಹ್ಮಣರು ಬ್ರಹ್ಮನ ಮುಖದಿಂದಲೂ, ಕ್ಷತ್ರಿಯರು ಬ್ರಹ್ಮನ ಭುಜಗಳಿಂದಲೂ, ವೈಶ್ಯರು ಬ್ರಹ್ಮನ ತೊಡೆಗಳಿಂದಲೂ ಮತ್ತು ಶೂದ್ರರು ಬ್ರಹ್ಮನ ಪಾದಗಳಿಂದಲೂ ಜನಿಸಿದವರೆಂದು ಉಲ್ಲೇಖಗಳಿವೆ. ಬ್ರಾಹ್ಮಣರು-ವೇದಾಧ್ಯಯನವನ್ನು, ಕ್ಷತ್ರಿಯರು ರಾಜ್ಯರಕ್ಷಣೆಯನ್ನು, ವೈಶ್ಯರು ವ್ಯಾಪಾರ ವಾಣಿಜ್ಯವನ್ನೂ, ಶೂದ್ರರು ಮೇಲಿನ ಮೂರು ವರ್ಗಗಳ ಸೇವೆಯನ್ನು ಮಾಡಬೇಕಾಗಿತ್ತು.

ಜಿ) ಆಶ್ರಮ ವ್ಯವಸ್ಥೆ : ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಲಕ್ಷಣವೆಂದರೆ ವರ್ಣಾಶ್ರಮ ವ್ಯವಸ್ಥೆಯ ಅಸ್ತಿತ್ವ, ಅವುಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳು.

ಬ್ರಹ್ಮಚರ್ಯ : ಈ ಆಶ್ರಮವನ್ನು ಅವಲಂಬಿಸಿದ ಬಾಲಕ ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯವಾದ ಗುರುವಿನ ಬಳಿ ಶಿಕ್ಷಣವನ್ನು ಪಡೆಯಬೇಕಾಗಿತ್ತು. ಶಿಕ್ಷಣವನ್ನು ಆಶ್ರಮದಲ್ಲಿ ಪಡೆಯಬೇಕಾಗಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣವನ್ನು ಪಡೆಯಬಹುದಾಗಿತ್ತು. ಶಿಕ್ಷಣದ ಜೊತೆಗೆ ಆಶ್ರಮದ ಕೆಲಸಕಾರ್ಯಗಳನ್ನು ಸಹ ನಿರ್ವಹಿಸಬೇಕಾಗಿತ್ತು. ಸೂಕ್ತ ಶಿಕ್ಷಣ ಪಡೆದ ನಂತರ ಗುರುವಿನ ಆಶೀರ್ವಾದ ಪಡೆದು ಗುರುಕಾಣಿಕೆ ಸಲ್ಲಿಸಿ ಆಶ್ರಮವನ್ನು ತ್ಯಜಿಸಬೇಕಾಗಿತ್ತು.

ಗೃಹಸ್ಥಾಶ್ರಮ : ಗೃಹಸ್ಥಾಶ್ರಮನ್ನು ಅವಲಂಬಿಸಿದ ವ್ಯಕ್ತಿಯ ಶಿಕ್ಷಣದ ನಂತರ ಗೃಹಸ್ಥಾಶ್ರಮ ಪ್ರವೇಶಿಸಬೇಕಾಗಿತ್ತು. ಗೃಹಸ್ಥಾಶ್ರಮದಲ್ಲಿ 40 ಸಂಸ್ಕಾರ ವಿಧಿಗಳನ್ನು ಆಚರಿಸುತ್ತ ಪಿತೃಋಣ, ಸಮಾಜದ ಋಣ ಮತ್ತು ದೇವಋಣ ಗಳನ್ನು ತೀರಿಸಬೇಕಾಗಿತ್ತು. ಗೃಹಸ್ಥಾಶ್ರಮವು ಶಿಸ್ತುಬದ್ಧ ಜೀವನವಾಗಿತ್ತು.

ಸನ್ಯಾಸಾಶ್ರಮ : ಗೃಹಸ್ಥಾಶ್ರಮದ ನಂತರ 50 ವರ್ಷ ದಾಟಿದವರು ಸನ್ಯಾಸಾಶ್ರಮವನ್ನು ಪ್ರವೇಶಿಸಬೇಕಿತ್ತು. ಐಹಿಕ ಭೋಗಗಳನ್ನು ತ್ಯಜಿಸಿ, ಒಂದೆಡೆ ವಾಸಿಸದೆ ಧ್ಯಾನಾಸಕ್ತನಾಗಿ ವೇದಮಂತ್ರಗಳ ಪಠಿಸುತ್ತಾ ಸಂಧ್ಯಾವಿಧಿಗಳನ್ನು ನೆರವೇರಿಸಿಕೊಂಡು ಭಿಕ್ಷಾನ್ನದಿಂದ ಹಸಿವನ್ನು ನೀಗಿಸಿಕೊಳ್ಳಬೇಕಾಗಿತ್ತು.

ವಾನಪ್ರಸ್ಥಾಶ್ರಮ : ಸನ್ಯಾಸಾಶ್ರಮದನಂತರ ಅಂತಿಮವಾಗಿ ವಾನಪ್ರಸ್ಥಾಶ್ರಮವನ್ನು ಅವಲಂಬಿಸಬಹುದಿತ್ತು. ವಾನಪ್ರಸ್ಥಾಶ್ರಮದ ವ್ಯಕ್ತಿಗಳು ಕಾಡುಗಳಲ್ಲಿ ಸಂಚರಿಸುತ್ತ ನಾರುಡಿಗೆಯನ್ನು ಧರಿಸಿ ಹಣ್ಣು-ಗೆಡ್ಡೆ-ಗೆಣಸುಗಳನ್ನು ತಿಂದು ಹಸಿವನ್ನು ನೀಗಿಸಬೇಕಾಗಿತ್ತು. ಅಂತಿಮವಾಗಿ ನಿರಾಹಾರಿಯಾಗಿ ಧ್ಯಾನಾಸಕ್ತನಾಗಿ ಇಹಲೋಕವನ್ನು ತ್ಯಜಿಸಬೇಕಾಗಿತ್ತು.

ಆಶ್ರಮ ವ್ಯವಸ್ಥೆಯು ಕಡ್ಡಾಯವಾಗಿ ಅಸ್ತಿತ್ವದಲ್ಲಿರಲಿಲ್ಲ. ಆಶ್ರಮ ವ್ಯವಸ್ಥೆಯ ಅನುಸರಣೆಯಿಂದ ಐಹಿಕ ಜೀವನದಲ್ಲಿ ಸದ್ಧತಿ ಮತ್ತು ಮೋಕ್ಷ ದೊರೆಯುವುದೆಂಬ ನಂಬಿಕೆ ಇತ್ತು. ಬ್ರಾಹ್ಮಣರು 4 ಆಶ್ರಮಗಳನ್ನೂ ಅವಲಂಬಿಸಿದ್ದರೆ ಉಳಿದ ವರ್ಗಗಳು ಕೇವಲ ಗೃಹಸ್ಥಾಶ್ರಮವನ್ನು ಮಾತ್ರ ಅವಲಂಬಿಸಿದ್ದರು.

ಸಿ. ಆರ್ಥಿಕ ಸ್ಥಿತಿಗತಿ :

ಉತ್ತರ ವೈದಿಕಕಾಲದ ಆರ್ಥಿಕ ಸ್ಥಿತಿಗತಿಯು ಪೂರ್ವವೈದಿಕಕಾಲಕ್ಕಿಂತ ಸ್ವಲ್ಪ ಭಿನ್ನತೆಯಿಂದ ಕೂಡಿತ್ತು. ಪ್ರಮುಖ ಕಸುಬುಗಳು ಮತ್ತು ಉಪಕಸುಬುಗಳು ಕಂಡುಬರುತ್ತಿದ್ದವು.

ಎ) ವ್ಯವಸಾಯ : ಒಂದು ಪ್ರಧಾನ ಕಸುಬಾಗಿತ್ತು. ಗಂಗಾ ನದಿಯ ಬಯಲಿನಲ್ಲಿ ‘ರಾಜಸಾರಿ’ ಎಂಬ ಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಲು, ಭಾರವಾದ ನೇಗಿಲನ್ನು ಎಳೆಯಲು 24 ಎತ್ತುಗಳನ್ನು ಉಪಯೋಗಿಸುತ್ತಿದ್ದರು. ಭತ್ತ, ಗೋದಿ, ಬಾರ್ಲಿ, ಬೀನ್ಸ್, ಎಣ್ಣೆ ಬೀಜಗಳನ್ನು ಬೆಳೆಯುತ್ತಿದ್ದರು

ಬಿ) ವ್ಯಾಪಾರ : ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರಗಳೆರಡು ಅಸ್ತಿತ್ವದಲ್ಲಿದ್ದವು. ಆಂತರಿಕ ವ್ಯಾಪಾರವು ದಕ್ಷಿಣ ಭಾರತದೊಂದಿಗೂ ಅಂತರಾಷ್ಟ್ರೀಯ ವ್ಯಾಪಾರವು ಬ್ಯಾಬಿಲೋನಿಯಾ ಮೊದಲಾದ ದೇಶಗಳೊಡನೆ ನಡೆಯುತ್ತಿತ್ತು. ಸಾಗರೋತ್ತರ ವ್ಯಾಪಾರವು ಅಭಿವೃದ್ಧಿಗೊಂಡಿತ್ತು.

ಸಿ) ಪಶುಪಾಲನೆ : ಪಶುಪಾಲನೆಯು ಮತ್ತೊಂದು ಪ್ರಧಾನ ಕಸುಬಾಗಿತ್ತು. ಹಸುವು ಪವಿತ್ರ ಮತ್ತು ಪೂಜಾರ್ಹ ವಾದುದಾಗಿತ್ತು. ಒಬ್ಬ ವ್ಯಕ್ತಿಯ ಶ್ರೀಮಂತಿಕೆಯನ್ನೂ ಅವನು ಹೊಂದಿರುವ ಹಸುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಕುರಿ, ಮೇಕೆ, ಕುದುರೆ ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು

ಡಿ) ಉಪಕಸುಬುಗಳು : ನೂಲುವುದು, ನೇಯ್ದೆ, ಕುಂಬಾರಿಕೆ, ಮರಗೆಲಸ, ಗಾರೆಕೆಲಸ, ಆಭರಣಗಳ ತಯಾರಿಕೆ, ಕಸೂತಿಕೆಲಸ, ಚಾಪೆ ಮತ್ತು ಬುಟ್ಟಿ ಹೆಣೆಯುವುದು ಮೊದಲಾದ ಹಲವು ಉಪಕಸುಬುಗಳಿದ್ದವು.

ಉತ್ತರ ವೈದಿಕಕಾಲದಲ್ಲಿ ಭಿನ್ನವಾದ ಧಾರ್ಮಿಕ ಜೀವನವು ಕಂಡುಬರುತ್ತಿತ್ತು.

ಡಿ. ಧಾರ್ಮಿಕ ಸ್ಥಿತಿ :

ಎ) ಯಾಗಯಜ್ಞಗಳ ಪ್ರಾಬಲ್ಯ : ಉತ್ತರ ವೈದಿಕಕಾಲದಲ್ಲಿ ಯಾಗ ಯಜ್ಞಗಳು ಹೆಚ್ಚು ಬೆಳವಣಿಗೆಗೊಂಡವು, ಪುರೋಹಿತರ ಸಂಖ್ಯೆ 16ಕ್ಕೇರಿತ್ತು. ಜನಸಾಮಾನ್ಯರು ಯಾಗ ಯಜ್ಞಗಳ ಬಗ್ಗೆ ಒಲವು ತೋರಿಸಿದರು. ಯಾಗ ಯಜ್ಞಗಳ ಆಚರಣೆ ಮತ್ತು ಮಂತ್ರೋಚ್ಛಾರಣೆಯಿಂದಾಗಿ ಪುರೋಹಿತರ ಸ್ಥಾನಮಾನವು ಮೇಲಕ್ಕೇರಿತ್ತು. ವೈದಿಕ ಯುಗದ ಕೊನೆಯ ವೇಳೆಗೆ ಜನಸಾಮಾನ್ಯರು ಯಾಗ ಯಜ್ಞಗಳು ಆರ್ಥಿಕವಾಗಿ ಹೊರೆಯಾದವುಗಳೆಂದು ನಿರ್ಧರಿಸಿದ್ದರು.

ಬಿ) ಏಕದೇವತಾ ಆರಾಧನಾ ಪದ್ಧತಿ : ಉತ್ತರ ವೈದಿಕಕಾಲದಲ್ಲಿ ಬಹುದೇವತಾ ಆರಾಧನಾ ಪದ್ಧತಿಯು ಅಂತ್ಯಗೊಂಡು ಏಕದೇವತಾ ಆರಾಧನಾ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಜೀವಾತ್ಮನೂ, ಸಕಲ ಚರಾಚರವಸ್ತುಗಳ ನಿಯಂತ್ರಕನೂ ಆದ ‘ದೇವನೊಬ್ಬನೇ’ ಎಂಬ ಭಾವನೆ ಮೂಡಿಬಂದಿತು. ಹೀಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮೀ, ಪಾರ್ವತಿಯರ ಆರಾಧನೆಯೂ ಕಂಡುಬಂದಿತ್ತು. ಹೀಗಾಗಿ ವೈದಿಕ ಯುಗದ ಅಂತ್ಯದ ವೇಳೆಗೆ ವೈದಿಕ ಧರ್ಮಕ್ಕೆ ಬದಲು ಹೊಸ ಮತಗಳ ಉದಯಕ್ಕೆ ಪ್ರೋತ್ಸಾಹ ದೊರಕಿತು.

ಇ. ಶಿಕ್ಷಣ ಮತ್ತು ಸಾಹಿತ್ಯ :

ವೈದಿಕ ಯುಗದ ಕೊನೆಯ ವೇಳೆಗೆ ಗುರುಕುಲಾಶ್ರಮದ ಶಿಕ್ಷಣವು ಪ್ರಧಾನವಾಗಿ ಕಂಡುಬಂದಿತು. ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯ ಗುರುಗಳ ಬಳಿ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣ ಪಡೆಯಬಹುದಾಗಿತ್ತು. ಶಿಕ್ಷಣಾರ್ಥಿಯು ಶಿಕ್ಷಣದ ಜೊತೆಗೆ ಆಶ್ರಮದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣಗಳು, ಧರ್ಮಶಾಸ್ತ್ರಗಳು, ವೇದಗಳು, ವೇದಾಂಗಗಳು, ಚರಿತ್ರೆ, ವೈದ್ಯಶಾಸ್ತ್ರ ಮೊದಲಾದ ವಿಭಿನ್ನ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಪೂರ್ಣ ಶಿಕ್ಷಣ ಪಡೆದ ವಿದ್ಯಾರ್ಥಿ ಗುರುವಿನ ಆಶೀರ್ವಾದ ಪಡೆದು ಆಶ್ರಮ ತ್ಯಜಿಸಬೇಕಾಗಿತ್ತು.

ಸಾಹಿತ್ಯದಲ್ಲಿ ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳು, ಬ್ರಾಹ್ಮಣಗಳು, ಅರಣ್ಯಕಗಳು ಉಪನಿಷತ್‌ಗಳು ಹಾಗೂ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಗೊಂಡವು. [ಸೂಚನೆ: ಉತ್ತರ ವೈದಿಕ ಕಾಲದ ಸಾಹಿತ್ಯದ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಪ್ರಾರಂಭಿಕ ಭಾಗವನ್ನು ಗಮನಿಸಿ]

ಎಫ್. ತತ್ವಜ್ಞಾನ :

ಉತ್ತರ ವೈದಿಕಕಾಲದಲ್ಲಿ ತತ್ವಜ್ಞಾನವು ಬೆಳವಣಿಗೆ ಹೊಂದಿತ್ತು. ಜನಕ ಮಹರ್ಷಿ ರಾಜನಾಗಿದ್ದನಲ್ಲದೆ ಪ್ರಖ್ಯಾತ ತತ್ವಜ್ಞಾನಿಯೂ ಆಗಿದ್ದನು. ಆಗಾಗ್ಗೆ ತನ್ನ ರಾಜ್ಯದಲ್ಲಿ ತತ್ವಜ್ಞಾನದ ಸಭೆಗಳನ್ನು ನಡೆಸುತ್ತಿದ್ದನು. ವಿಶ್ವಾವರ, ಮೈತ್ರೇಯಿ ಮತ್ತು ಗಾರ್ಗಿ ಎಂಬ ಖ್ಯಾತ ಮಹಿಳಾ ವಿದ್ವನ್ಮಣಿಗಳು ಈ ಸಭೆಗೆ ಹಾಜರಾಗಿ ತಾತ್ವಿಕ ಚಿಂತನೆ ನಡೆಸುತ್ತಿದ್ದರು. ಇ.ಇ.ಪಾರ್ಗಿಟರ್ ಅಭಿಪ್ರಾಯದಂತೆ ‘ವಿಶ್ವದ ತತ್ವಜ್ಞಾನರಾಶಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಗಳೆಂದರೆ ಉಪನಿಷತ್‌ಗಳು’.

ಹೀಗೆ ವೈದಿಕಯುಗದ ಉತ್ತರಾರ್ದದ ಜನಜೀವನದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ.