ಅರಣ್ಯ ನಾಶದ ಪರಿಣಾಮಗಳು

ಅರಣ್ಯ ನಾಶದ ಪರಿಣಾಮಗಳು

ʻʻಕಾಡುಗಳನ್ನು ಬರಿದು ಮಾಡುವ ಪ್ರಕ್ರಿಯೆಯನ್ನು ಅರಣ್ಯ ನಾಶ ಎಂದು ಕರೆಯಲಾಗಿದೆ.ʼʼ ಇಂದು ನಿಸರ್ಗದ ಮೇಲಿನ ಮಾನವನ ದಾಳಿಯಿಂದ ಅರಣ್ಯಗಳು ಬರಿದಾಗುತ್ತ ಹೊರಟಿವೆ. ಕಳೆದ 30 ವರ್ಷಗಳ ಅವಧಿಯಲ್ಲಿ 500 ದಶಲಕ್ಷ ಎಕರೆಗೂ ಅಧಿಕ ಪ್ರಮಾಣದ ಕಾಡು ನಾಶವಾಗಿದೆ ಎಂದರೆ ಊಹೆ ಮಾಡಿಕೊಳ್ಳಿ ಮನುಷ್ಯ ಎಷ್ಟು ದುರಾಸೆಗೆ ಬಿದ್ದಿದ್ದಾನೆ ಎಂದು. ವಸತಿಗಾಗಿ, ಇಂಧನವಾಗಿ, ನೀರಾವರಿ ಹಾಗೂ ಅಣೆಕಟ್ಟುಗಳ ನಿರ್ಮಾಣಕ್ಕಾಗಿ ನಿತ್ಯವೂ ಕಾಡುಗಳು ತಮ್ಮ ಕೊನೆಯ ದಿನಗಳನ್ನು ಎಣಿಸುತ್ತಾ ಬರುತ್ತಿವೆ. ಕಾಡುಗಳು ಬರಿದಾದ ನಂತರ ಅಲ್ಲಿನ ಪ್ರಾಣಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಲಕ್ಷಾಂತರ ಕಾಡು ಪ್ರಾಣಿಗಳು ಕಣ್ಮರೆಯಾಗಿವೆ.

ಅರಣ್ಯ ನಾಶದ ಪರಿಣಾಮಗಳು ಈ ಕೆಳಗಿನಂತಿವೆ

1. ಮಳೆಯ ಪ್ರಮಾಣದಲ್ಲಿ ಇಳಿಕೆ:

ದಿನೇ ದಿನೇ ಕಾಡುಗಳು ನಾಶವಾಗುತ್ತಿರುವ ಪರಿಣಾಮದಿಂದಾಗಿ ವಾರ್ಷಿಕ ಮಳೆಯ ಪ್ರಮಾಣದಲ್ಲಿ ಏರುಪೇರುಗಳು ಆಗುತ್ತಿವೆ. ಒಮ್ಮೆ ಮಳೆ ಅತಿಯಾಗಿ ಬಂದರೆ, ಇನ್ನೊಮ್ಮೆ ಕಡಿಮೆಯಾಗಿ ಬರುತ್ತದೆ. ಈಗಂತೂ ಮಳೆಗಾಲವು ಯಾವಾಗ ಬರುತ್ತದೆ ಎಂಬುದೇ ಗೊತ್ತಾಗದ ರೀತಿಯಲ್ಲಿ ಕಾಲಮಾನಗಳಲ್ಲಿ ಬದಲಾವಣೆಗಳು ಆಗುತ್ತಿವೆ. ಅತಿಯಾದ ಮಳೆ ಬಂದರೆ ಬೆಳೆಗಳೆಲ್ಲ ಕೊಚ್ಚಿಕೊಂಡು ಹೋಗುತ್ತವೆ. ಮಳೆ ಬರದೆ ಬರಗಾಲ ಬಿದ್ದರೆ ಭೂಮಿಯು ಬರಡಾಗಿ ಬೆಳೆಗಳೆಲ್ಲ ಒಣಗಿ ಹೋಗುತ್ತವೆ.

2. ಜೀವಿಗಳ ಆವಾಸಸ್ಥಾನ ಕೊನೆಯಾಗುವುದು:

ಅರಣ್ಯವು ವಿವಿಧ ಪಕ್ಷಿಸಂಕುಲ ಹಾಗೂ ಪ್ರಾಣಿ ಸಂಕುಲಗಳಿಗೆ ಆವಾಸಸ್ಥಾನವಾಗಿದೆ. ಕಾಡು ದಿನೇ ದಿನೇ ಕಡಿಮೆಯಾಗುವ ಕಾರಣಕ್ಕಾಗಿ ಎಣಿಕೆಗೆ ಸಿಗದಷ್ಟು ಜೀವಸಂಕುಲಗಳು ಕಣ್ಮರೆಯಾಗುತ್ತವೆ. ಈಗಾಗಲೇ ಲಕ್ಷಾಂತರ ಪ್ರಾಣಿ, ಪಕ್ಷಿ ಪ್ರಭೇದಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.

3. ಜೈವಿಕ ವೈವಿಧ್ಯತೆಗಳ ನಾಶ:

ಅರಣ್ಯಗಳ ನಾಶದೊಂದಿಗೆ ಪಶು ಪಕ್ಷಿಗಳು ಸಹ ವಿನಾಶದತ್ತ ಸಾಗಿವೆ. ಇದರಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತದೆ.

4. ಸೂರ್ಯನ ಪ್ರಕರತೆ:

ಸೂರ್ಯನ ವಿಪರೀತ ಶಾಖದಿಂದ ಭೂಮಿಯ ಮೇಲಿನ ಮಣ್ಣಿನ ತೇವಾಂಶ ಆವಿಯಾಗುತ್ತದೆ. ಇದರಿಂದ ಮಣ್ಣು ಬಿರುಕು ಬಿಡುತ್ತದೆ. ಹಾಗಾಗಿ ರೈತರು ಬೆಳೆದ ಬೆಳೆಗಳು ಒಣಗಿ ಹೋಗುತ್ತವೆ. ಮರ ಗಿಡಗಳು ಉದುರಿ ಬೀಳುತ್ತವೆ.

5. ಮಣ್ಣಿನ ಸವೆತ:

ಅರಣ್ಯನಾಶದಿಂದ ನಿರಂತರವಾಗಿ ಮಣ್ಣಿನ ಸವಕಳಿ ಉಂಟಾಗುತ್ತದೆ. ಕಾಲ ಕಳೆದಂತೆ ಭೂಮಿಯ ಅವನತಿಯು ಉಂಟಾಗಿ ಮರುಭೂಮೀಕರಣಕ್ಕೆ ಕಾರಣವಾಗುತ್ತದೆ.

6. ಔಷಧಿ ಸಸ್ಯಗಳ ನಾಶ:

ಅರಣ್ಯವು ತನ್ನ ಒಡಲಿನಲ್ಲಿ ಲಕ್ಷಾಂತರ ವಿವಿಧ ಗಿಡಮೂಲಿಕೆ ಔಷಧಿ ಸಸ್ಯಗಳನ್ನು ಹುದುಗಿಸಿಕೊಂಡಿದೆ. ಕಾಡಿನ ನಾಶದಿಂದಾಗಿ ಅಮೂಲ್ಯವಾದ ಗಿಡ ಮೂಲಿಕೆಗಳು ನಮಗೆ ಮುಂದೆ ಸಿಗದೇ ಹೋಗಬಹುದು.

7. ಬುಡಕಟ್ಟು ಜನಾಂಗದ ಜೀವನ ನಾಶ:

ಪ್ರಸ್ತುತ ಅರಣ್ಯವನ್ನೇ ಅವಲಂಬಿಸಿ ಬದುಕುತ್ತಿರುವ ಬುಡಕಟ್ಟು ಜನಾಂಗ ಅರಣ್ಯ ನಾಶದಿಂದಾಗಿ ಬೀದಿಗೆ ಬರುವ ಸ್ಥಿತಿ ಬಂದಿದೆ. ಅವರ ಬದುಕು ಇಂದು ಅತಂತ್ರವಾಗಿದೆ.

8. ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಳ:

ಅರಣ್ಯ ನಾಶದಿಂದಾಗಿ ವಾಯುಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗಿ ಅವುಗಳನ್ನು ನಿಯಂತ್ರಣಕ್ಕೆ ತರಲು ಆಗದ ಸ್ಥಿತಿಗೆ ಬಂದು ತಲುಪಿದೆ. ಇಂದು ವಾತಾವರಣದಲ್ಲಿ ಧೂಳಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

9. ಹವಾಮಾನದ ಮೇಲೆ ಪರಿಣಾಮ:

ಅರಣ್ಯ ನಾಶದಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ಆಮ್ಲಜನಕದ ಆವರ್ತಕ್ರಿಯೆ ಸಾರಾಗವಾಗಿ ಮುಂದುವರೆಯದೆ ವಾತಾವರಣದಲ್ಲಿ ಅಸಮತೋಲನ ಉಂಟಾಗಿದೆ. ಭೂಮಂಡಲದ ತಾಪಮಾನ ಹೆಚ್ಚಾಗಿದೆ. ಹವಾಗುಣ ಮತ್ತು ವಾಯುಗುಣದಲ್ಲಿ  ಬದಲಾವಣೆ ಕಂಡುಬಂದಿದೆ. ಅತಿಯಾದ ಶಾಖದಿಂದ ಮಾನವನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಆಮ್ಲಜನಕದ ಕೊರತೆಯಿಂದ ಈಗಾಗಲೇ ದೆಹಲಿಯ ಜನರು ಹಣ ಪಾವತಿಸಿ ಆಮ್ಲಜನಕವನ್ನು ಮೂಗಿಗೆ ಕಟ್ಟಿಕೊಂಡು ಓಡಾಡುತ್ತಾರೆ

10. ಅರಣ್ಯಗಳ ಸಂರಕ್ಷಣೆ:

ಅರಣ್ಯಗಳನ್ನು ಬೆಳೆಸುವುದು, ಉಳಿಸುವುದು ಹಾಗೂ ಅವುಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವುದನ್ನು ಅರಣ್ಯಗಳ ಸಂರಕ್ಷಣೆ ಎಂದು ಕರೆಯಲಾಗುತ್ತದೆ. ಅರಣ್ಯಗಳನ್ನು ರಕ್ಷಿಸಲು ಈ ಕೆಳಗಿನ ಕ್ರಮಗಳನ್ನು ಕಾರ್ಯಗತಗೊಳಿಸಬೇಕಾಗುತ್ತದೆ. ಅವುಗಳೆಂದರೆ

  1. ಪದೇಪದೇ ಬೆಂಕಿಗೆ ಆಹುತಿಯಾಗುತ್ತಿರುವ ಅರಣ್ಯವನ್ನು ರಕ್ಷಿಸುವುದು ಬಹಳ ಅಗತ್ಯವಾದ ಕೆಲಸವಾಗಿದೆ.
  2. ವೈಜ್ಞಾನಿಕ ರೀತಿಯಲ್ಲಿ ಕ್ರಿಮಿ ಕೀಟಗಳ ಅಂಟು ರೋಗಗಳನ್ನು ತಡೆಗಟ್ಟುವ ಕಾರ್ಯಗಳನ್ನು ಹಮ್ಮಿಕೊಳ್ಳುವುದು.
  3. ಬೆಲೆ ಬಾಳುವ ಮರಗಳನ್ನು ರಕ್ಷಿಸುವುದು ಮತ್ತು ಅವುಗಳ ಬುಡದಲ್ಲಿ ಬೆಳೆದ ಇತರೆ ಸಸ್ಯಗಳು ಮತ್ತು ಗಿಡಗಳನ್ನು ಕಾಪಾಡುವುದು.
  4. ವಯಸ್ಸಾದ ಮರವನ್ನು ಕಡಿಯುವುದು ಮತ್ತು ಅದರ ಸ್ಥಳದಲ್ಲಿ ಮತ್ತೊಂದು ಸಸಿಯನ್ನು ನೆಡುವುದು.
  5. ಮರಗಳನ್ನು ಕಡಿಯುವಾಗ ಮತ್ತು ಅವುಗಳನ್ನು ಸಾಗಿಸುವಾಗ ಇತರೆ ಮರಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸುವುದು.
  6. ಅರಣ್ಯಗಳ ಮರಗಳ ಕಳ್ಳ ಸಾಗಾಣಿಕೆ ಹಾಗೂ ಅತಿಕ್ರಮವನ್ನು ತಡೆಗಟ್ಟಲು ಕಾನೂನುಗಳನ್ನು ಜಾರಿಗೆ ತರುವುದು.
  7. ದನ ಕರುಗಳು ಹುಲ್ಲುಗಾವಲುಗಳಲ್ಲಿ ನಿರಂತರವಾಗಿ ಮೇಯುವುದನ್ನು ನಿಯಂತ್ರಿಸುವುದು.
  8. ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಪಕ್ಷಿಧಾಮ ಮುಂತಾದವುಗಳನ್ನು ಸಮರ್ಪಕವಾಗಿ ನಿರ್ವಹಿಸುವುದು.
  9. ಅರಣ್ಯಗಳನ್ನು ಸಂರಕ್ಷಿಸುವುದು ಹಾಗೂ ನಿರ್ವಹಣೆಯ ಕುರಿತು ಕಾಲ ಕಾಲಕ್ಕೆ ತರಬೇತಿಯನ್ನು ನೀಡುವುದು. ಅದಕ್ಕೆ ಸಂಬಂಧಿಸಿದಂತೆ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳುವುದು.
  10. ಸಾಮಾಜಿಕ ಅರಣ್ಯವನ್ನು ಬೆಳೆಸುವುದನ್ನು ಪ್ರೋತ್ಸಾಹಿಸುವುದು.
  11. ರಸ್ತೆಯ ಅಕ್ಕ ಪಕ್ಕದಲ್ಲಿ, ರೈಲು ಮಾರ್ಗಗಳ ಬದಿಯಲ್ಲಿ, ಕಾಲುವೆಗಳ ದಂಡೆ, ಗೋಮಾಳ, ಕೆರೆಗಳ ದಂಡೆ, ಶಾಲಾ ಕಾಲೇಜುಗಳ ಆವರಣ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಸಸಿಗಳನ್ನು ನೆಡುವುದನ್ನು ಪ್ರೋತ್ಸಾಹಿಸಬೇಕು.
  12. ಅರಣ್ಯಗಳನ್ನು ಬೆಳೆಸುವ ಉಳಿಸುವ ಬಗ್ಗೆ ಸಾರ್ವಜನಿಕರಲ್ಲಿ ಪ್ರಜ್ಞೆ ಮೂಡಿಸುವುದು.
  13. ಅರಣ್ಯ ಸಂರಕ್ಷಣೆಗಾಗಿ ಇತ್ತೀಚಿಗೆ ಚಿಪ್ಕೋ ಚಳುವಳಿ, ಅಪ್ಪಿಕೋ ಚಳುವಳಿಗಳನ್ನು ಹಮ್ಮಿಕೊಂಡಿದ್ದು ಇದೊಂದು ಉತ್ತಮ ಕಾರ್ಯಯೋಜನೆಯಾಗಿದೆ.

ಉಪಸಂಹಾರ

ಅರಣ್ಯನಾಶವು ಮಾನವನ ಜೀವನದ ಮೇಲೆ ಮಾತ್ರವಲ್ಲದೆ ಸಂಪೂರ್ಣ ಜೀವಜಗತ್ತಿನ ಅಸ್ತಿತ್ವದ ಮೇಲೆ ಭಾರಿ ಅಪಾಯವನ್ನುಂಟು ಮಾಡುತ್ತಿದೆ. ಮಳೆಗಾಲದ ಅಸ್ಥಿರತೆ, ಹವಾಮಾನ ಬದಲಾವಣೆ, ಜೀವಜಾಲದ ನಾಶ ಇವೆಲ್ಲವೂ ಅರಣ್ಯ ನಾಶದ ನೇರ ಪರಿಣಾಮಗಳಾಗಿವೆ. ಆದ್ದರಿಂದ ಅರಣ್ಯ ಸಂರಕ್ಷಣೆ ಇಂದಿನ ಅಗತ್ಯವಾಗಿದೆ. ಸರ್ಕಾರ, ಸಮಾಜ ಮತ್ತು ಪ್ರತಿಯೊಬ್ಬ ನಾಗರಿಕರೂ ಕೈಜೋಡಿಸಿ ಅರಣ್ಯಗಳನ್ನು ಉಳಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಹಸಿರು ಭೂಮಿಯೇ ನಮ್ಮ ಭವಿಷ್ಯ ಎಂಬ ಅರಿವಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಪರಿಸರ ಸಮತೋಲನ ಸಾಧ್ಯವಾಗುತ್ತದೆ.

ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು

ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು

ಕನ್ನಡದ ಮಣ್ಣು ಎಂಬ ಶಬ್ದವು ಆಂಗ್ಲ ಭಾಷೆಯ soil ಎಂಬ ಪದದಿಂದ ಬಂದಿದೆ. ಆಂಗ್ಲ ಭಾಷೆಯ soil ಎಂಬ ಪದವು ಲ್ಯಾಟಿನ್ ಭಾಷೆಯ ಸೋಲಮ್ ಎಂಬ ಪದದಿಂದ ಉತ್ಪತ್ತಿಯಾಗಿದೆ. ಇದರ ಅರ್ಥ ಭೂಕವಚದ ಅತ್ಯಂತ ಮೇಲ್ಪದರು ಎಂದಾಗುತ್ತದೆ. ಸಾಮಾನ್ಯವಾಗಿ ಹೇಳುವುದಾದರೆ soil ಎಂದರೆ ಕನ್ನಡದಲ್ಲಿ ಹುಡಿ ಅಥವಾ ಹುಡಿಯಾಗಿರುವ ಶಿಲಾವಸ್ತುಗಳ ತೆಳುವಾದ ಪದರು ಎಂದು ಅರ್ಥ. ಇದನ್ನೇ ಮಣ್ಣು ಎಂದು ಕರೆಯಲಾಗಿದೆ. ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಶಿಲೆಗಳು ಒಡೆದು ಚೂರು ಚೂರಾಗಿ ಚಿಕ್ಕ ಚಿಕ್ಕ ಕಣಗಳಾಗಿ ಹಾಗೂ ನಶಿಸಿ ಹುಡಿಯ ರೂಪದಲ್ಲಿಯೇ ಭೂಮೇಲ್ಮೈಯಲ್ಲಿ ಹರಡಿರುವುದು. ಈ ಭೂಮಿಯ ಮೇಲ್ಪದರಿನಲ್ಲಿ ಹರಡಿರುವ ಹುಡಿ ಪ್ರಾಕೃತಿಕ ಹೊಡೆತದಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಹೊಂದುವ ಪ್ರಕ್ರಿಯೆಯನ್ನು ಮಣ್ಣಿನ ಸವೆತ ಎಂದು ಕರೆಯುವರು. ಆದರೆ ಮಣ್ಣಿನ ಸವೆತ ಹೆಚ್ಚಾದಾಗ ಪರಿಣಾಮ ಗಂಭೀರವಾಗುತ್ತದೆ.

ಮಣ್ಣಿನ ಸವಕಳಿಗೆ ಕಾರಣಗಳು: (Causes for soil erosion)

1. ಗಾಳಿ ರಭಸವಾಗಿ ಬೀಸುವುದು, ಜನರ ಮಿತಿಮೀರಿದ ಓಡಾಟ, ದನಕರುಗಳನ್ನು ಮೇಯಿಸುವುದು, ಬಿರುಗಾಳಿ, ಮಳೆ, ರಸಾಯನಿಕ ಗೊಬ್ಬರಗಳ ಬಳಕೆ, ಬೇಸಾಯ ಹಾಗೂ ಕಾಡು ನಾಶದಿಂದ ಮಣ್ಣಿನ ಮೇಲ್ಪದರು ಜಾರಿ ಹೋಗಿ ಮಣ್ಣಿನ ಸವಕಳಿ ಉಂಟಾಗುತ್ತದೆ.

2. ಪ್ರಸ್ತುತ ದಿನಗಳಲ್ಲಿ ಕಾಡಿನ ನಾಶ ಹೇಳತೀರದಷ್ಟು ಆಗುತ್ತಿದೆ. ಪರಿಣಾಮವಾಗಿ ಮಣ್ಣಿನ ಫಲವತ್ತತೆ ನಾಶವಾಗಿ ಆಹಾರ ಉತ್ಪಾದನೆಯಲ್ಲಿ ತೀವ್ರ ಹಿನ್ನಡೆಯಾಗುತ್ತಿದೆ. ಮಳೆಗಾಲದಲ್ಲಿ ಬಿದ್ದ ನೀರನ್ನು ತಡೆ ಹಿಡಿಯುವಂತಹ ಕಾಡುಗಳು ಇಲ್ಲದಿರುವುದರಿಂದ ಮಣ್ಣಿನ ಸವೆತ ಉಂಟಾಗುತ್ತದೆ.

3. ಕಾಡು ನಾಶದ ಪರಿಣಾಮದಿಂದ ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಹೆಕ್ಟರ್‌ನಷ್ಟು ಮಣ್ಣು ನಾಶವಾಗುತ್ತಿದೆ.

4. ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿ ಜನರು ತಮ್ಮ ತಮ್ಮ ಹೊಲಗಳಲ್ಲಿ ಒಡ್ಡುಗಳನ್ನು ನಿರ್ಮಿಸಿಲ್ಲ. ಹೀಗಾಗಿ ಇಳಿಜಾರು ಇರುವ ಹೊಲಗಳಲ್ಲಿ ಬಿದ್ದ ಮಳೆ ನೀರಿನಿಂದ ಮಣ್ಣಿನ ಸವಕಳಿ ನಿರಂತರವಾಗಿ ಆಗುತ್ತಿದೆ. ಅದನ್ನು ತಪ್ಪಿಸಲು ರೈತರು ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿರುವುದರಿಂದ ಇಂತಹ ಸಮಸ್ಯೆಗಳು ಕಾಡುತ್ತವೆ.

5. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಮಣ್ಣು ಕೊಚ್ಚಿಕೊಂಡು ಹೋಗಿ ಹತ್ತಿರದ ಕೆರೆ, ಹೊಂಡ ಹಾಗೂ ಸರೋವರಗಳನ್ನು ಸೇರುತ್ತದೆ. ಆಗ ಅವುಗಳು ಹೂಳಿನಿಂದ ತುಂಬಿ ನೀರಿನ ಆಳ ಕಡಿಮೆಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.

  • ಭಾರತದಲ್ಲಿರುವ ಸಾವಿರಾರು ಕೆರೆಗಳು ಮತ್ತು ಜಲಾಶಯಗಳಿಗೆ ಮಳೆಗಾಲದಲ್ಲಿ ಮಣ್ಣು ಬಂದು ಸೇರುವುದರಿಂದ ಕೆರೆಗಳಲ್ಲಿ ಹೂಳು ತುಂಬಿಕೊಳ್ಳುತ್ತದೆ. ಆಗ ಕೆರೆಗಳ ಆಯುಷ್ಯವು ಕಡಿಮೆಯಾಗುತ್ತದೆ.
  • ಕಾಡಿನ ನಡುವೆ ವರ್ಗಾವಣೆ ಬೇಸಾಯಕ್ಕಾಗಿ ಗಿಡಮರಗಳನ್ನು ಕಡಿಯುವುದರಿಂದ ಕಾಡುಗಳು ಹಾಳಾಗಿ ಮಣ್ಣಿನ ಸವೆತ ಕಂಡು ಬರುತ್ತದೆ.
  • ಹೆಂಚು, ಇಟ್ಟಿಗೆ ತಯಾರಿಕೆ ಹಾಗೂ ಮಡಿಕೆ ಮುಂತಾದ ವಸ್ತುಗಳ ತಯಾರಿಕೆಗಾಗಿ ಫಲವತ್ತಾದ ಮಣ್ಣಿನ ಮೇಲ್ಭಾಗವನ್ನು ತೆಗೆಯುವುದು ಸಹ ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ.
  • ಕೈಗಾರಿಕರಣ, ಅಣೆಕಟ್ಟು, ರಸ್ತೆ, ರೈಲು ಮಾರ್ಗ ಹಾಗೂ ವಸತಿ ನಿರ್ಮಾಣ ಮುಂತಾದ ಉದ್ದೇಶಗಳಿಗಾಗಿ ಅರಣ್ಯವನ್ನು ಕಡಿದು ನಾಶ ಮಾಡುವುದರಿಂದ ಮಣ್ಣಿನ ಸವೆತ ಕಂಡುಬರುತ್ತದೆ.

ಮಣ್ಣಿನ ಸವೆತವನ್ನು ನಿಯಂತ್ರಿಸುವ ಕ್ರಮಗಳು: (Control soil erosion)

  1. ಇಳಿಜಾರಿಗೆ ಅಡ್ಡಲಾಗಿ ಕೃಷಿ ಕಾರ್ಯಗಳನ್ನು ಮಾಡುವುದರಿಂದ ಮಣ್ಣಿನ ಸವಕಳಿಯನ್ನು ತಪ್ಪಿಸುವುದು.
  2. ಇಳಿಜಾರು ಪ್ರದೇಶಗಳ ಹೊಲಗಳಿಗೆ ಅಡ್ಡಲಾಗಿ ಒಡ್ಡುಗಳನ್ನು ನಿರ್ಮಿಸುವುದು.
  3. ಕಾಡುಗಳನ್ನು ಕಡಿಯದಂತೆ ಕ್ರಮಕೈಗೊಳ್ಳುವುದು ಮತ್ತು ಅರಣ್ಯವನ್ನು ಬೆಳೆಸುವುದು.
  4. ದನಕರುಗಳನ್ನು ಹುಲ್ಲುಗಾವಲು ಪ್ರದೇಶಗಳಲ್ಲಿ ಮೇಯಿಸುವುದನ್ನು ನಿಯಂತ್ರಿಸುವುದು.
  5. ನೀರಾವರಿ ಪ್ರದೇಶಗಳಲ್ಲಿ ಪ್ರವಾಹಗಳುಂಟಾಗದಂತೆ ಎಚ್ಚರಿಕೆ ವಹಿಸುವುದು.
  6. ಅಂತರ ಬೇಸಾಯಕ್ಕೆ ಆದ್ಯತೆ ನೀಡುವುದು.
  7. ಎಲ್ಲಿ ಮಣ್ಣಿನ ಸವೆತ ಹೆಚ್ಚಾಗಿದೆಯೋ ಅಲ್ಲಿ ಹುಲ್ಲನ್ನು ಬೆಳೆಸುವುದು.
  8. ಇಳಿಜಾರಿಗೆ ಅಡ್ಡಲಾಗಿ ಚಿಕ್ಕ ಚಿಕ್ಕ ಹಳ್ಳಗಳನ್ನು ತೋಡಿ ಗಿಡಗಳನ್ನು ಬೆಳೆಸುವುದು.
  9. ವೇಗವಾಗಿ ಗಾಳಿ ಬೀಸುವ ಕಡೆಗಳಲ್ಲಿ ಮರಗಳನ್ನು ಬೆಳೆಸುವುದು.
  10. ಭತ್ತ, ಗೋಧಿಯ ಹುಲ್ಲು, ಭತ್ತದ ಹೊಟ್ಟು ಹಾಗೂ ಎಲೆಗಳಂತಹ ಕೊಳೆತ ವಸ್ತುಗಳನ್ನು ಮಣ್ಣಿನ ಮೇಲ್ಭಾಗದಲ್ಲಿ ಹಾಕುವುದರಿಂದ ಮಣ್ಣಿನ ಸವೆತವನ್ನು ತಡೆಯಬಹುದು.
  11. ಮಣ್ಣಿನ ಸವೆತದಿಂದಾಗುವ ಪರಿಣಾಮಗಳ ಕುರಿತು ರೈತರಿಗೆ ಮನವರಿಕೆ ಮಾಡಿಕೊಡುವುದು.
  12. ಗ್ರಾಮೀಣ ಪ್ರದೇಶಗಳಲ್ಲಿ ಮಣ್ಣಿನ ಸವಕಳಿಯಿಂದ ಆಗುವ ತೊಂದರೆಗಳ ಬಗ್ಗೆ ತಿಳುವಳಿಕೆ ನೀಡುವಂತಹ ಸಾಕ್ಷ್ಯ ಚಿತ್ರಗಳನ್ನು ತೋರಿಸುವುದು.

ಉಪಸಂಹಾರ

ಮಣ್ಣಿನ ಸವೆತವು ಕೃಷಿ ಉತ್ಪಾದನೆ, ಜಲಾಶಯಗಳ ಆಯುಷ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಲು ವೈಜ್ಞಾನಿಕ ಕೃಷಿ ಪದ್ಧತಿಗಳು, ಅರಣ್ಯ ಸಂರಕ್ಷಣೆ ಮತ್ತು ಜನಜಾಗೃತಿ ಅತ್ಯಂತ ಅಗತ್ಯವಾಗಿದೆ. ರೈತರು ಮತ್ತು ಸಾರ್ವಜನಿಕರು ಮಣ್ಣಿನ ಮಹತ್ವವನ್ನು ಅರಿತು ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಮಣ್ಣಿನ ಸವೆತವನ್ನು ಪರಿಣಾಮಕಾರಿಯಾಗಿ ತಡೆಹಿಡಿಯಲು ಸಾಧ್ಯ. ಮಣ್ಣನ್ನು ಉಳಿಸುವುದು ಭವಿಷ್ಯ ಪೀಳಿಗೆಗೆ ನಮ್ಮ ಜವಾಬ್ದಾರಿಯಾಗಿದೆ.

ಪರಿಸರ ಸಂಖ್ಯಾ ಪಿರಾಮಿಡ್

ಪರಿಸರ ಸಂಖ್ಯಾ ಪಿರಾಮಿಡ್

ʻʻಪ್ರತಿ ಪೋಷಣಾಸ್ತರಗಳಲ್ಲೂ ಎಷ್ಟು ಜೀವಗಳಿರುತ್ತವೆ ಎಂಬುದನ್ನು ಲೆಕ್ಕ ಹಾಕುವ ರೇಖಾಚಿತ್ರವನ್ನು ಸಂಖ್ಯಾ ಪಿರಾಮಿಡ್ ಎಂದು ಕರೆಯುತ್ತೇವೆʼʼ. ಒಂದು ಪರಿಸರ ವ್ಯವಸ್ಥೆಯ ನಿರ್ದಿಷ್ಟ ಪ್ರದೇಶವೊಂದರಲ್ಲಿ ನಿರ್ದಿಷ್ಟ ಸಮಯದಲ್ಲಿ ಪ್ರತಿ ಪೋಷಣಾಸ್ತರಗಳಲ್ಲಿ ಕಂಡುಬರುವ ಜೀವಿಗಳ ಒಟ್ಟು ಸಂಖ್ಯೆಯ ಆಧಾರದ ಮೇಲೆ ಸಂಖ್ಯಾ ಪಿರಾಮಿಡ್‌ನ್ನು ರಚಿಸಲಾಗುತ್ತದೆ. ಪಿರಾಮಿಡ್ ಅಡಿಯಲ್ಲಿ ಉತ್ಪಾದಕ ಜೀವಿಗಳಿದ್ದು ಅವುಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಅಲ್ಲಿಂದ ಹಂತ ಹಂತವಾಗಿ ಮೇಲಕ್ಕೆ ಹೋದಂತೆ ಉಪಯೋಜತ ಜೀವಿಗಳಿದ್ದು ಅವುಗಳ ಸಂಖ್ಯೆ ಇಳಿಮುಖವಾಗುತ್ತಾ ಹೋಗುತ್ತದೆ. ಹೀಗಾಗಿ ಈ ಚಿತ್ರವು ಪಿರಾಮಿಡ್ ಆಕಾರದಲ್ಲಿ ಗೋಚರಿಸುತ್ತದೆ. ಸಂಖ್ಯಾ ಪಿರಾಮಿಡ್‌ಗಳಲ್ಲಿ ಎರಡು ಪ್ರಕಾರಗಳಿವೆ  ಅವುಗಳೆಂದರೆ:

  1. ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್:
  2. ಕೆಳಮುಖವಾಗಿರುವ ಸಂಖ್ಯಾ ಪಿರಾಮಿಡ್

1. ಮೇಲ್ಮುಖವಾಗಿರುವ ಸಂಖ್ಯಾ ಪಿರಾಮಿಡ್: (Upright Pyramid of Number)

ಮೇಲ್ಮುಖವಾದ ಪಿರಾಮಿಡ್‌ನಲ್ಲಿ ಜೀವಿಗಳ ಸಂಖ್ಯೆಯು ಕೆಳಭಾಗದಿಂದ ಮೇಲ್ಭಾಗದ ಕಡೆಗೆ ಹೋದ ಹಾಗೆ ಕಡಿಮೆಗೊಳ್ಳುತ್ತಾ ಸಾಗುತ್ತದೆ. ಇಲ್ಲಿ ಪ್ರಥಮ ಉಪಭೋಗಿಗಳ ಸಂಖ್ಯೆಯು ದ್ವಿತೀಯ ಉಪಯೋಗಿಗಳ ಸಂಖ್ಯೆಗಿಂತ ಹೆಚ್ಚಿನದಾಗಿರುತ್ತದೆ. ಹಾಗೂ ಪ್ರಥಮ ಉಪಪಯೋಗಿಗಳ ಸಂಖ್ಯೆಯು ಉತ್ಪಾದಕ ಜೀವಿಗಳಿಗಿಂತ ಕಡಿಮೆಯಾಗುತ್ತದೆ. ಈ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಹಂತವು ಹೆಚ್ಚಿದಂತೆ ಜೀವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ.

2. ಕೆಳಮುಖ ಸಂಖ್ಯಾ ಪಿರಾಮಿಡ್‌ಗಳು:  (Inverted Pyramid of Number)

ಈ ರೀತಿಯ ಪಿರಾಮಿಡ್‌ನಲ್ಲಿ ಪೋಷಣಾಸ್ತರಗಳಿಂದ ಮೇಲೆ ಹೋದ ಹಾಗೆ ಜೀವಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಕೆಳಮುಖ ಸಂಖ್ಯಾಪಿರಾಮಿಡ್‌ನಲ್ಲಿ ಪೋಷಣಾಸ್ತರಗಳ ಮೇಲೆ ಪರಾವಲಂಬಿಗಳು ಇವೆ. ನಂತರ ಮೇಲಿನ ಹಂತಕ್ಕೆ ತಲುಪಿದಾಗ ಪರಾವಲಂಬಿಗಳ ಮೇಲೆ ಅವಲಂಬಿತ ಪರಾವಲಂಬಿಗಳು ಕಂಡುಬರುತ್ತವೆ. ಹಾಗಾಗಿ ಇದನ್ನು ಕೆಳಮುಖ ಸಂಖ್ಯಾಪಿರಾಮಿಡ್ ಎಂದು ಕರೆಯಲಾಗುತ್ತದೆ.

ಉಪಸಂಹಾರ:

ಸಂಖ್ಯಾ ಪಿರಾಮಿಡ್‌ಗಳು ಪರಿಸರ ವ್ಯವಸ್ಥೆಯಲ್ಲಿನ ಜೀವಿಗಳ ಸಂಖ್ಯಾತ್ಮಕ ಸಮತೋಲನವನ್ನು ವಿವರಿಸುತ್ತವೆ. ಮೇಲ್ಮುಖ ಮತ್ತು ಕೆಳಮುಖ ಸಂಖ್ಯಾ ಪಿರಾಮಿಡ್‌ಗಳ ಮೂಲಕ ವಿಭಿನ್ನ ಪರಿಸರ ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳಬಹುದು. ಇವು ಪೋಷಣಾಸ್ತರಗಳ ನಡುವಿನ ಅವಲಂಬನೆ ಮತ್ತು ಜೀವಿಗಳ ಪಾತ್ರವನ್ನು ಸ್ಪಷ್ಟಪಡಿಸುತ್ತವೆ. ಪರಿಸರ ಸಂರಕ್ಷಣೆ ಮತ್ತು ಸಮತೋಲನದ ಅರಿವಿಗೆ ಸಂಖ್ಯಾ ಪಿರಾಮಿಡ್‌ಗಳ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ಇದರಿಂದ ಜೀವಜಾಲದ ಸ್ಥಿರತೆಯನ್ನು ಕಾಪಾಡುವ ಮಹತ್ವ ತಿಳಿಯುತ್ತದೆ.

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರದ ನೀರು ಲವಣಾಂಶಗಳಿಂದ ಕೂಡಿದ ಕಾರಣ ಆ ನೀರನ್ನು ಕೃಷಿ ಹಾಗೂ ಕುಡಿಯುವ ನೀರಿಗಾಗಿ ಬಳಕೆ ಮಾಡಲಾಗುವುದಿಲ್ಲ. ಸಾಗರಗಳು ಭೂಮಿಯ ಶೇಕಡ 71 ಭಾಗವನ್ನು ಹೊಂದಿವೆ. ಇವುಗಳ ಆಳ ಅಂದಾಜು 3800 ಕಿ.ಮೀಗೂ ಹೆಚ್ಚಿದೆ. ನದಿ ಹಾಗೂ ತೊರೆಗಳಿಂದ ಹರಿಯುವ ನೀರು, ಸಮುದ್ರವನ್ನು ಸೇರುತ್ತದೆ. ಅಲ್ಲಿ ಹೆಚ್ಚು ಬೆಳಕು ಹಾಗೂ ಆಳ ಕಡಿಮೆ ಇರುವುದರಿಂದ ಸಾಗರ ಪ್ರದೇಶದಲ್ಲಿ ಹಲವು ಬಗೆಯ ಸಸ್ಯಗಳು ಕಂಡುಬರುತ್ತವೆ ಕ್ರಿಮಿಕೀಟ, ಮೀನು, ತಿಮಿಂಗಿಲಗಳು, ಬಹುತೇಕ ಸಾಗರದ ಎಲ್ಲಾ ಕಡೆಗಳಲ್ಲಿ ಲಭ್ಯವಿರುತ್ತದೆ. ಸಾಗರದಲ್ಲಿ ಹವಳದ ದ್ವೀಪಗಳು ಇವೆ. ಮನ್ನಾರ್ ಗಲ್ಫ್‌ನಲ್ಲಿ 3600 ವಿವಿಧ ಪ್ರಭೇದ ಪ್ರಾಣಿಗಳು ಇವೆ. ಸಮುದ್ರದ ಹಸು, ಕಡಲು ಕುದುರೆಗಳು ಇಲ್ಲಿ ವಾಸಿಸುತ್ತವೆ.

ಸಾಗರದಲ್ಲಿರುವ ಆಳ, ಉಷ್ಣತೆ, ಬೆಳಕು ಮುಂತಾದ ಭೌತಿಕ ಅಂಶಗಳಿಗೆ ಅನುಸಾರವಾಗಿ ಸಮುದ್ರವನ್ನು 3 ವಲಯಗಳನ್ನಾಗಿ ವಿಂಗಡಿಸಲಾಗಿದೆ.

  1. ತೀರಕ್ಕೆ ಸಮೀಪದ ಪ್ರದೇಶ
  2. ದ್ಯುತಿ ವಲಯ
  3. ಅಂಧಕಾರ ಕೂಪ

1. ತೀರಕ್ಕೆ ಸಮೀಪದ ಪ್ರದೇಶ: (Littoral region)

ಇದು ಸಾಗರಗಳ ಖಂಡಾವರಣ ಪ್ರದೇಶವನ್ನು ಅಂದರೆ ಸುಮಾರು 200 ಮೀ ಆಳದವರೆಗಿನ ಸಾಗರದ ಅಂಚಿನ ಭಾಗವನ್ನು ಒಳಗೊಂಡಿದೆ. ಸುಮಾರು 50 ಮೀ ಆಳದವರೆಗೆ ಸೂರ್ಯನ ಕಿರಣಗಳು ಸುಲಭವಾಗಿ ಒಳಗೆ ಸೇರುವುದರಿಂದ ಮತ್ತು ಅಲೆಗಳಿಂದ ನೀರು ಮಿಶ್ರಣ ಹೊಂದುತ್ತದೆ. ಹಾಗಾಗಿ ಇಲ್ಲಿ ಅತಿ ಹೆಚ್ಚಾಗಿ ಹಸಿರು ಅಲ್ಗೆಗಳು ಎಂಬ ಸಸ್ಯ ಸಮುದಾಯ ಕಂಡುಬರುತ್ತದೆ. ಇಲ್ಲಿ ಶಂಕು ಹುಳುಗಳು, ಕೀಟಗಳು ಹಾಗೂ ಜಲ ಚಿಟ್ಟೆಗಳು ಹೆಚ್ಚಾಗಿ ವಾಸಿಸುತ್ತವೆ. ಈ ವಲಯದಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತದೆ. ಹಾಗಾಗಿ ಈ ಪ್ರದೇಶವನ್ನು ʻʻಅಂಚಿನ ವಲಯʼʼ ಎಂದು ಕರೆಯುತ್ತಾರೆ.

2. ದ್ಯುತಿ ವಲಯ: (Eupothic Region)

ಸಾಗರದಲ್ಲಿ ಸೂರ್ಯನ ಕಿರಣಗಳು ನೀರಿನ ಆಳದಲ್ಲಿ ಎಲ್ಲಿಯವರೆಗೆ ಹೋಗಿ ತಲುಪುತ್ತವೆಯೋ ಆ ಪ್ರದೇಶವನ್ನು ದ್ಯುತಿ ವಲಯ ಎಂದು ಕರೆಯಲಾಗುವುದು. ಈ ಪ್ರದೇಶದಲ್ಲಿ ಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ಹಾಗೂ ವೈವಿಧ್ಯಮಯವಾಗಿ ಕಂಡುಬರುತ್ತದೆ. ಭೂಮಿಯ ಮೇಲೆ ನಡೆಯುವ ದ್ಯುತಿ ಸಂಶ್ಲೇಷಣೆಯ ಶೇ 90ರಷ್ಟು ಭಾಗ ಸಾಗರ ಮತ್ತು ಸಮುದ್ರ ದ್ಯುತಿ ವಲಯದಲ್ಲಿಯೇ ಆಗುತ್ತದೆ. ಇಲ್ಲಿ ಚಿಕ್ಕ ಹಾಗೂ ದೊಡ್ಡ ಮೀನುಗಳು, ತಿಮಿಂಗಲ, ಡಾಲ್ಫಿನ್, ಆಮೆ ಹಾಗೂ ಮತ್ತು ಅಷ್ಟ ಪದಿಗಳು ವಾಸಿಸುತ್ತವೆ.

 3. ಅಂಧಕಾರ ಕೂಪ: (Abbas)

ದ್ಯುತಿ ವಲಯದ ತಳಭಾಗದಲ್ಲಿರುವ ಸೂರ್ಯನ ಬೆಳಕು ಪ್ರವೇಶಮಾಡಲಾಗದ ನೀರಿನ ಭಾಗವನ್ನು ʻʻಅಂಧಕಾರ ಕೂಪ ಅಥವಾ ಅಂಧಕಾರವಲಯʼʼ ಎಂದು ಕರೆಯಲಾಗಿದೆ. ಈ ವಲಯದಲ್ಲಿ ಸಸ್ಯರಾಶಿಗಳ ಸಂಖ್ಯೆ ಬಹಳ ಕಡಿಮೆ. ವಿವಿಧ ಪ್ರಾಣಿಗಳು ಮತ್ತು ವಿಘಟಕ ಜೀವಿಗಳು ಮಾತ್ರ ಕಂಡುಬರುತ್ತವೆ. ಈ ವಲಯದಲ್ಲಿನ ಪ್ರಾಣಿಗಳು ದ್ಯುತಿವಲಯದ ಸತ್ತ ಪ್ರಾಣಿಗಳನ್ನು ತಿಂದು ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತವೆ.

ಸಾಗರದ ಉಪಯೋಗಗಳು:

  1. ಸಿಗಡಿ ಏಡಿ ಹಾಗೂ ಮೀನುಗಳು ಕರಾವಳಿ ತೀರದ ಜನರ ಪ್ರಮುಖ ಆಹಾರ ಪದಾರ್ಥಗಳಾಗಿವೆ.
  2. ಸಾಗರದ ತಳಗಳು ಫಾಸಿಲ್‌ ಇಂಧನ ಹಾಗೂ ಅಮೂಲ್ಯ ಖನಿಜ ಸಂಪತ್ತನ್ನು ಹೊಂದಿದೆ.
  3. ಸಮುದ್ರದ ಪಾಚಿಗಳು, ಐಸ್‌ಕ್ರೀಂ ಹಾಗೂ ಸೌಂದರ್ಯವರ್ಧಕ ವಸ್ತುಗಳ ತಯಾರಿಕೆಗೆ ಅಗತ್ಯವಾದ ʻಅಗಾರ್ʼ ಗಳಿಂದ ಪಡೆಯುತ್ತವೆ. ಸಮುದ್ರದ ಪಾಚಿಗಳಿಗೆ ಜೀವ ರಕ್ಷಕ ಔಷಧಿಗಳ ಗುಣಗಳಿವೆ.
  4. ಸಮುದ್ರ ತೀರ ಪ್ರದೇಶಗಳು ಪ್ರವಾಸಿ ಸ್ಥಳಗಳಾಗಿವೆ

ಉಪಸಂಹಾರ

ಸಾಗರ ಮತ್ತು ಅಳಿವೆ ಪರಿಸರ ವ್ಯವಸ್ಥೆಗಳು ನಮ್ಮ ಆಹಾರ, ಇಂಧನ ಮತ್ತು ಬಯೋಮೂಲಗಳಲ್ಲಿ ಮಹತ್ವವನ್ನು ಹೊಂದಿವೆ. ಇವುಗಳ ವೈವಿಧ್ಯತೆಯು ಜಲಚರ ಜೀವಿಗಳ ಸಮತೋಲನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಸೂರ್ಯನ ಬೆಳಕು, ಉಷ್ಣತೆ, ಆಳ ಮುಂತಾದ ಭೌತಿಕ ಅಂಶಗಳು ಜೀವಿಗಳ ವಾಸಸ್ಥಳವನ್ನು ನಿರ್ಧರಿಸುತ್ತವೆ. ಸಮುದ್ರ ಮತ್ತು ಅಳಿವೆ ಪರಿಸರದ ಸಂರಕ್ಷಣೆಯ ಮೂಲಕ ನಾವು ಈ ಅಮೂಲ್ಯ ಸಂಪತ್ತನ್ನು ಭವಿಷ್ಯಕಾಲಕ್ಕೂ ಉಳಿಸಬಹುದು.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನ ಎಂಬುದು ಮಾನವ ಮತ್ತು ಪ್ರಕೃತಿ ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ವಿಶಾಲ ಹಾಗೂ ಸಮಗ್ರ ವಿಷಯವಾಗಿದೆ. ಮಾಲಿನ್ಯ, ಹವಾಮಾನ ಬದಲಾವಣೆ, ಅರಣ್ಯ ನಾಶ, ಜೀವ ವೈವಿಧ್ಯತೆಯ ಹಾನಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕ್ಷಯದಂತಹ ಪರಿಸರ ಸಮಸ್ಯೆಗಳು ಬಹಳ ಸಂಕೀರ್ಣ ಸ್ವಭಾವದ್ದಾಗಿವೆ. ಇವುಗಳನ್ನು ಒಂದೇ ವಿಷಯದ ಮೂಲಕ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಅಧ್ಯಯನವು ವಿಜ್ಞಾನ, ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಂದ ಜ್ಞಾನವನ್ನು ಒಳಗೊಂಡ ಬಹುಶಾಸ್ತ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಸರ ಸಮಸ್ಯೆಗಳ ಸಮಗ್ರ ಅರಿವು ದೊರೆಯುತ್ತದೆ.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವ

1. ಪರಿಸರ ಅಧ್ಯಯನ ಮತ್ತು ನೈಸರ್ಗಿಕ ವಿಜ್ಞಾನಗಳು

ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ ಮತ್ತು ಪರಿಸರಶಾಸ್ತ್ರದಂತಹ ನೈಸರ್ಗಿಕ ವಿಜ್ಞಾನಗಳು ಪರಿಸರ ಅಧ್ಯಯನದ ಮೂಲಭೂತ ಆಧಾರವಾಗಿವೆ. ಜೀವಶಾಸ್ತ್ರವು ಪರಿಸರ ವ್ಯವಸ್ಥೆಗಳು ಮತ್ತು ಜೀವ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಸಾಯನಶಾಸ್ತ್ರವು ಗಾಳಿ, ನೀರು, ಮಣ್ಣು ಮತ್ತು ಮಾಲಿನ್ಯಕಾರಕಗಳ ರಾಸಾಯನಿಕ ಸ್ವಭಾವವನ್ನು ವಿವರಿಸುತ್ತದೆ. ಭೌತಶಾಸ್ತ್ರವು ಶಕ್ತಿ ಪ್ರವಾಹ ಮತ್ತು ಹವಾಮಾನ ವ್ಯವಸ್ಥೆಗಳ ಅಧ್ಯಯನಕ್ಕೆ ಸಹಕಾರಿ.

2. ಪರಿಸರ ಅಧ್ಯಯನ ಮತ್ತು ಸಾಮಾಜಿಕ ವಿಜ್ಞಾನಗಳು

ಪರಿಸರ ಸಮಸ್ಯೆಗಳು ಮಾನವ ಚಟುವಟಿಕೆಗಳೊಂದಿಗೆ ನಿಕಟವಾಗಿ ಸಂಬಂಧಿಸಿದ್ದಾಗಿವೆ. ಸಮಾಜಶಾಸ್ತ್ರ, ಮಾನವಶಾಸ್ತ್ರ, ರಾಜಕೀಯ ಶಾಸ್ತ್ರ ಮತ್ತು ಭೂಗೋಳಶಾಸ್ತ್ರವು ಜನಸಂಖ್ಯೆ ವೃದ್ಧಿ, ನಗರೀಕರಣ, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಅಸಮಾನತೆಗಳು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುತ್ತವೆ. ಇವು ಮಾನವ ಸಮಾಜ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

3. ಪರಿಸರ ಅಧ್ಯಯನ ಮತ್ತು ಅರ್ಥಶಾಸ್ತ್ರ

ಪರಿಸರ ಅಧ್ಯಯನದಲ್ಲಿ ಅರ್ಥಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರ ಅರ್ಥಶಾಸ್ತ್ರವು ನೈಸರ್ಗಿಕ ಸಂಪನ್ಮೂಲಗಳ ಬಳಕೆ, ವೆಚ್ಚ–ಲಾಭ ವಿಶ್ಲೇಷಣೆ, ಪರಿಸರ ಹಾನಿಯ ಆರ್ಥಿಕ ಪರಿಣಾಮಗಳು ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಅಧ್ಯಯನ ಮಾಡುತ್ತದೆ. ಇದು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

4. ಪರಿಸರ ಅಧ್ಯಯನ ಮತ್ತು ಕಾನೂನು

ಪರಿಸರ ಸಂರಕ್ಷಣೆಗೆ ಬಲಿಷ್ಠ ಕಾನೂನು ವ್ಯವಸ್ಥೆಯ ಅಗತ್ಯವಿದೆ. ಪರಿಸರ ಅಧ್ಯಯನವು ಪರಿಸರ ಸಂಬಂಧಿತ ಕಾನೂನುಗಳು, ನೀತಿಗಳು ಮತ್ತು ನಿಯಮಾವಳಿಗಳನ್ನು ಒಳಗೊಂಡಿದೆ. ಇವು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುತ್ತವೆ. ಪರಿಸರ ಕಾನೂನುಗಳ ಜ್ಞಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯಲು ಸಹಾಯಕವಾಗುತ್ತದೆ.

5. ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ

ತಂತ್ರಜ್ಞಾನವು ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಸಾಧನಗಳು, ಜಿಐಎಸ್ (GIS) ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಪರಿಸರ ಅಧ್ಯಯನ ಒಳಗೊಂಡಿದೆ. ಇವು ಪರಿಸರ ಹಾನಿಯನ್ನು ಕಡಿಮೆ ಮಾಡಿ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

6. ಪರಿಸರ ಅಧ್ಯಯನ ಮತ್ತು ಮಾನವಿಕ ಶಾಸ್ತ್ರಗಳು

ನೈತಿಕತೆ, ತತ್ವಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯದಂತಹ ಮಾನವಿಕ ಶಾಸ್ತ್ರಗಳು ಪರಿಸರ ಅಧ್ಯಯನಕ್ಕೆ ಮೌಲ್ಯಾಧಾರಿತ ದೃಷ್ಟಿಕೋನವನ್ನು ನೀಡುತ್ತವೆ. ಪರಿಸರ ನೈತಿಕತೆ ಪ್ರಕೃತಿಯತ್ತ ಮಾನವನ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಇತಿಹಾಸವು ಮಾನವ–ಪರಿಸರ ಸಂಬಂಧಗಳ ಬೆಳವಣಿಗೆಯನ್ನು ತಿಳಿಸುತ್ತದೆ.

7. ಪರಿಸರ ಅಧ್ಯಯನ ಮತ್ತು ಸಾರ್ವಜನಿಕ ಆರೋಗ್ಯ

ಪರಿಸರ ಪರಿಸ್ಥಿತಿಗಳು ಮಾನವ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಮಾಲಿನ್ಯ, ವಿಷಕಾರಿ ಪದಾರ್ಥಗಳು, ಅಶುದ್ಧ ನೀರು ಮತ್ತು ಅಸಮರ್ಪಕ ಸ್ವಚ್ಛತೆ ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಪರಿಸರ ಅಧ್ಯಯನವು ಆರೋಗ್ಯ ವಿಜ್ಞಾನಗಳೊಂದಿಗೆ ಸಂಯೋಜನೆಗೊಂಡು ಆರೋಗ್ಯಕರ ಪರಿಸರದ ಅಗತ್ಯವನ್ನು ವಿವರಿಸುತ್ತದೆ.

ಉಪಸಂಹಾರ

ಪರಿಸರ ಅಧ್ಯಯನವು ನೈಸರ್ಗಿಕ ವಿಜ್ಞಾನಗಳು, ಸಾಮಾಜಿಕ ವಿಜ್ಞಾನಗಳು, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ, ಮಾನವಿಕ ಶಾಸ್ತ್ರಗಳು ಮತ್ತು ಆರೋಗ್ಯ ವಿಜ್ಞಾನಗಳನ್ನು ಒಟ್ಟುಗೂಡಿಸುವ ಬಹುಶಾಸ್ತ್ರೀಯ ವಿಷಯವಾಗಿದೆ. ಈ ಸಮಗ್ರ ದೃಷ್ಟಿಕೋನವು ಪರಿಸರ ಸಮಸ್ಯೆಗಳ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಲು ಅತ್ಯಂತ ಅಗತ್ಯವಾಗಿದೆ. ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವವು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ, ಜಾಗೃತ ಮತ್ತು ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುತ್ತದೆ.