ಪ್ರವಾಹವು ಭಾರತದಲ್ಲಿ ಆಗಾಗ ಸಂಭವಿಸುವ ಪ್ರಮುಖ ಪ್ರಾಕೃತಿಕ ವಿಕೋಪಗಳಲ್ಲಿ ಒಂದಾಗಿದೆ. ಹವಾಮಾನ ವೈಪರಿತ್ಯ, ಭೌತಿಕ ಪರಿಸ್ಥಿತಿಗಳು ಮತ್ತು ಮಾನವನ ಕೃತಕ ಚಟುವಟಿಕೆಗಳು ಪ್ರವಾಹಕ್ಕೆ ಮುಖ್ಯ ಕಾರಣಗಳಾಗಿವೆ. ಈ ಲೇಖನದಲ್ಲಿ ಪ್ರವಾಹಕ್ಕೆ ಕಾರಣವಾಗುವ ಅಂಶಗಳನ್ನು ವಿವರವಾಗಿ ತಿಳಿದುಕೊಳ್ಳೋಣ.
ಪ್ರವಾಹದ ಕಾರಣಗಳು ಈ ಕೆಳಗಿನಂತಿವೆ.
- ಹವಾಮಾನ ಅಂಶಗಳು
- ಭೌತಿಕ ಅಂಶಗಳು
- ಕೃತಕ ಅಂಶಗಳು
1. ಹವಾಮಾನ ಅಂಶಗಳು:(Clinatic Factors)
1. ಅತ್ಯಧಿಕ ಮಳೆ (ಅತಿವೃಷ್ಠಿ): ಭಾರತದಲ್ಲಿ ಮಾನ್ಸೂನ್ ಮಳೆಯು ಜುಲೈ ಮಧ್ಯದಲ್ಲಿ ಪ್ರವೇಶಿಸಿ ಸೆಪ್ಟೆಂಬರ್ ಕೊನೆಯವರೆಗೂ ಇರುತ್ತದೆ. ಈ ಸಮಯದಲ್ಲಿ ಅತ್ಯಧಿಕ ಮಳೆಯಾದರೆ ಅತಿವೃಷ್ಟಿ ಸಂಭವಿಸಿ ಮಳೆ ನೀರು ಜಲಾಶಯಗಳನ್ನು ತುಂಬಿಕೊಳ್ಳುತ್ತದೆ. ಜಲಾಶಯಗಳಲ್ಲಿ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚುವರಿ ನೀರನ್ನು ಇಟ್ಟುಕೊಳ್ಳಲು ಬರುವುದಿಲ್ಲ. ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಗಳಲ್ಲಿ ಮಿತಿಮೀರಿದಾಗ ಅದು ಪ್ರವಾಹದಲ್ಲಿ ಕೊನೆಯಾಗುತ್ತದೆ. ಈ ಪ್ರವಾಹ ಪರಿಸ್ಥಿತಿ ಉತ್ತರ ಭಾರತದ ಪಶ್ಚಿಮ ಬಂಗಾಳ, ಹಿಮಾಲಯದ ಪ್ರದೇಶಗಳು, ಸಿಂಧೂ-ಗಂಗಾ ನದಿಯ ಬಯಲುಗಳು, ಪಶ್ಚಿಮ ಘಟ್ಟಗಳು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಸಂಭವಿಸುತ್ತದೆ. ದಾಮೋದರ ನದಿಯ ಬಯಲಿನಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಹಗಳು ಸಂಭವಿಸುವ ಕಾರಣ ಇದನ್ನು ʻʻಬಂಗಾಳದ ಕಣ್ಣೀರಿನ ನದಿʼʼ ಎಂದೇ ಕರೆಯುತ್ತಾರೆ. ಹಾಗೇ ಕೋಸಿ ನದಿಯು ಸಹ ಬಿಹಾರಿನಲ್ಲಿ ಪ್ರವಾಹಕ್ಕೆ ಕಾರಣವಾಗುವುದರಿಂದ ಇದನ್ನು ʻʻಬಿಹಾರಿನ ಕಣ್ಣೀರಿನ ನದಿʼʼ ಎಂದು ಹಾಗೂ ಮಹಾನದಿಯನ್ನು ʻಒರಿಸ್ಸಾದ ಕಣ್ಣೀರಿನ ನದಿʼ ಎಂದು ಕರೆಯುವರು.
2. ಮೇಘ ಸ್ಫೋಟ: ಹವಾಮಾನದ ವೈಪರಿತ್ಯದಿಂದ ಆಲಿಕಲ್ಲು ಹಾಗೂ ಗುಡುಗುಸಹಿತ ಭಾರೀ ಗಾತ್ರದಲ್ಲಿ ಮಳೆಯು ಬರುವ ಕಾರಣದಿಂದ ಅದಕ್ಕೆ ಮೇಘಸ್ಪೋಟ ಎಂದು ಕರೆಯುತ್ತಾರೆ. 2013ರಲ್ಲಿ ಮೇಘ ಸ್ಪೋಟದಿಂದ ಉತ್ತರಖಾಂಡದ ಕೆಲವು ಪ್ರದೇಶಗಳು ಹಠಾತ್ ಪ್ರವಾಹಕ್ಕೆ ಈಡಾದವು.
3. ಚಂಡಮಾರುತಗಳು: ಚಂಡಮಾರುತಗಳಿಂದ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುವ ಮೂಲಕ ಪ್ರವಾಹದ ಭೀತಿಯನ್ನು ಉಂಟುಮಾಡುತ್ತದೆ.4.
4. ಜಾಗತಿಕ ತಾಪಮಾನ (World Temperature): ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಭೂಮಿ ಉಷ್ಣಾಂಶ ಹೆಚ್ಚುತ್ತದೆ. ಆಗ ಹಿಮನದಿಗಳು ಕರಗಲು ಆರಂಭಿಸುತ್ತವೆ. ಅತಿಯಾದ ಹಿಮ ನದಿಯ ಕರುಗುವಿಕೆಯಿಂದ ಪ್ರವಾಹ ಸೃಷ್ಟಿಯಾಗುತ್ತದೆ.
5. ಭೂಕಂಪ ಹಾಗೂ ಭೂಕುಸಿತಗಳು (Earth quake and Land Slide): ಭೂಕಂಪ ಹಾಗೂ ಭೂಕಸಿತಗಳು ಪ್ರವಾಹಕ್ಕೆ ಕಾರಣವಾಗಿ ಪರಿಣಮಿಸುತ್ತವೆ. ಭೂಮಿಯ ಮೇಲಿನ ಬದಲಾವಣೆಯು ನೀರಿನ ಹರಿವಿನ ದಿಕ್ಕುಗಳನ್ನೇ ಬದಲಿಸುತ್ತದೆ. ಇದರಿಂದ ಪದೇ ಪದೇ ಪ್ರವಾಹಗಳು ಸಂಭವಿಸುತ್ತವೆ. ೧೯೫೦ರ ವೇಳೆಗೆ ಭೂಕಂಪವು ಬ್ರಹ್ಮಪುತ್ರ ನದಿಯನ್ನು ಹೆಚ್ಚು ಅಸ್ಥಿರಗೊಳಿಸಿತು. ಈ ಕಾರಣದಿಂದ ನದಿಯ ಹರಿವಿನ ಹಾದಿ ಬದಲಾಯಿತು ಮತ್ತು ಮಣ್ಣಿನ ಸವಕಳಿ ಕಂಡುಬಂದಿತು. ಇದು ಮುಂದಿನ 10 ವರ್ಷಗಳವರೆಗೆ ಕೆಟ್ಟ ಪ್ರವಾಹಗಳಿಗೆ ದಾರಿ ಮಾಡಿಕೊಟ್ಟಿತು. ಇಂದಿಗೂ ಅಂದಿನ ಭೂಕಂಪದ ಪರಿಣಾಮವಾಗಿ ಬ್ರಹ್ಮಪುತ್ರಾ ಕಣಿವೆಯು ಆಗಾಗ ಪ್ರವಾಹಕ್ಕೆ ತುತ್ತಾಗುತ್ತಿದೆ.
2. ಭೌತಿಕ ಅಂಶಗಳು:
1. ಅಸಮರ್ಪಕ ಚರಂಡಿ ನಿರ್ವಹಣೆ: ಕೈಗಾರಿಕರಣ ಹಾಗೂ ನಗರೀಕರಣದ ಭರಾಟೆಯಲ್ಲಿ ಆಧುನಿಕ ಮಾನವರು ಚರಂಡಿಗಳನ್ನು ನಿರ್ಲಕ್ಷಿಸಿದ್ದಾರೆ. ಭಾರೀ ಮಳೆಗಾಲದಲ್ಲಿ ಚರಂಡಿಗಳು ತುಂಬಿಹೋಗುತ್ತವೆ. ಹಾಗೇ ಹೆಚ್ಚುವರಿ ನೀರು ಚರಂಡಿಯ ಮೂಲಕ ಹೋಗಲು ಸಾಧ್ಯವಾಗದೆ ಪ್ರವಾಹಕ್ಕೆ ಕಾರಣವಾಗುತ್ತದೆ.
2. ಜಲಾನಯನ ಪ್ರದೇಶ: ಮಳೆಗಾಲ ಅಥವಾ ಪ್ರವಾಹದ ಸಮಯದಲ್ಲಿ ಜಲಾನಯನ ಪ್ರದೇಶಗಳು ತಮ್ಮ ಹಿಡುವಳಿ ಸಾಮರ್ಥ್ಯದ ಮಿತಿಯನ್ನು ಮೀರಿದಾಗ ಅದು ಪ್ರವಾಹಕ್ಕೆ ಕಾರಣವಾಗುತ್ತದೆ.
3. ಕೃತಕ ಅಂಶಗಳು:
1. ನದಿ, ತೊರೆ, ಹಳ್ಳ, ಸರೋವರ, ಕೆರೆ, ಹೊಂಡಗಳ ತಳಭಾಗದಲ್ಲಿ ವಿಪರೀತ ಪ್ರಮಾಣದಲ್ಲಿ ಹೂಳು ತುಂಬಿಕೊಳ್ಳುವುದರಿಂದ ಪ್ರವಾಹ ಸಂಭವಿಸುತ್ತದೆ.
2. ಅಸಮರ್ಪಕ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಪ್ರವಾಹ ಕಂಡುಬರುತ್ತದೆ.
3. ಕೃಷಿಕಾರ್ಯಗಳಿಗೆ, ಜಲಾಶಯ ನಿರ್ಮಾಣ, ಸೇತುವೆ ನಿರ್ಮಾಣ, ಕೈಗಾರಿಕಾ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ, ನಗರೀಕರಣದಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ. ಅರಣ್ಯನಾಶದಿಂದ ಪ್ರವಾಹಗಳು ಆಗಾಗ ಸಂಭವಿಸುತ್ತದೆ.
4. ಅಣೆಕಟ್ಟುಗಳು ಇದ್ದಕ್ಕಿದ್ದಂತೆ ಕುಸಿತ ಕಂಡರೆ ಪ್ರವಾಹ ಉಂಟಾಗುತ್ತದೆ.
ಉಪಸಂಹಾರ
ಪ್ರವಾಹವು ಕೇವಲ ಪ್ರಾಕೃತಿಕ ಕಾರಣಗಳಿಂದ ಮಾತ್ರವಲ್ಲದೆ ಮಾನವನ ಅಸಮರ್ಪಕ ಚಟುವಟಿಕೆಗಳಿಂದಲೂ ಉಂಟಾಗುತ್ತದೆ. ಅರಣ್ಯನಾಶ, ಅಸಮರ್ಪಕ ನಗರ ಯೋಜನೆ ಹಾಗೂ ಜಲಸಂಪನ್ಮೂಲಗಳ ದುರುಪಯೋಗವು ಪ್ರವಾಹದ ಭೀತಿಯನ್ನು ಹೆಚ್ಚಿಸುತ್ತಿವೆ. ಪ್ರವಾಹವನ್ನು ನಿಯಂತ್ರಿಸಲು ವೈಜ್ಞಾನಿಕ ಜಲ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಅತ್ಯಾವಶ್ಯಕ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದೇ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.