ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು ಭೂಮಿಯ ಮೇಲ್ಮೈಯಿಂದ ಪ್ರತಿಫಲನಗೊಳ್ಳುವ ಶಾಖವನ್ನು ಹಿಡಿದು ಇಟ್ಟುಕೊಂಡಾಗ ವಾತಾವರಣದಲ್ಲಿ ಉಷ್ಣತೆ ಅಧಿಕಗೊಳ್ಳುತ್ತದೆ. ಇದನ್ನು ಹಸಿರು ಮನೆ ಪರಿಣಾಮ ಎಂದು ಕರೆಯುವರು. ಭೂಮಂಡಲ ಬಿಸಿಯಾಗಲು ಮುಖ್ಯವಾದ ಕಾರಣವೆಂದರೆ ಇಂಗಾಲದ ಡೈಆಕ್ಸೈಡ್‌, ಮಿಥೇನ್ ಹಾಗೂ ನೀರಾವಿಗಳು. ಇದರೊಂದಿಗೆ ಕ್ಲೋರೋಫ್ಲೋರೋ ಕಾರ್ಬನ್‌ಗಳೆಂಬ ಮಾನವ ಕಂಡುಹಿಡಿದ ಕೃತಕ ಹಸಿರು ಮನೆ ಅನಿಲವೂ ಸೇರಿಕೊಂಡಿದೆ. ಇದರಿಂದಾಗಿ ಹಸಿರು ಮನೆ ಪರಿಣಾಮದ ತೀವ್ರತೆ ಹೆಚ್ಚಿ ಭೂಮಿಯ ವಾಯುಮಂಡಲ ಅಪಾಯಕಾರಿ ಮಟ್ಟದಲ್ಲಿ ಬಿಸಿಯಾಗಿದೆ.

ಇಂದಿನ ವಾಯುಮಂಡಲದ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಇದು ವಾಯುಗುಣದ ಬದಲಾವಣೆಗೆ ಕಾರಣವಾಗಿದೆ. 1970 ರಿಂದ 1999ರ ಅವಧಿಯಲ್ಲಿ ಹೆಚ್ಚಾದ ತಾಪಮಾನದ ಶೇಖರಣೆಯ ಹೊರತಾಗಿ ಸಮುದ್ರ ಹಾಗೂ ಭೂಮಿಯ ಮೇಲ್ಮೈ ಈ ಎರಡರಲ್ಲಿಯೂ ಆದ ಸರಾಸರಿ ಹೆಚ್ಚಳವನ್ನು ದಾಖಲು ಮಾಡಲಾಗಿದೆ.  20ನೇ ಶತಮಾನದಲ್ಲಿ ಜಾಗತಿಕ ಉಷ್ಣತೆಯಲ್ಲಿ 0.8 c (1.4 F) ನಷ್ಟು ಏರಿಕೆಯಾಗಿದೆ. ಇದರಲ್ಲಿ 1980 ನಂತರ 3/2 ಭಾಗದಷ್ಟು ಏರಿಕೆಯನ್ನು ದಾಖಲಿಸಲಾಗಿದೆ.  ಶೇಕಡ 90ರಷ್ಟು ಜಾಗತಿಕ ತಾಪಮಾನ ಹಸಿರು ಮನೆ ಅನಿಲದ ಸಾಂದ್ರತೆಯ ಏರಿಕೆಯ ಪರಿಣಾಮವೆಂದು ವಿಜ್ಞಾನಿಗಳ ಅಭಿಮತವಾಗಿದೆ. 

ನಮ್ಮ ಭೂಮಿಯ ಮೇಲ್ಮೈನ ಸರಾಸರಿ ತಾಪಮಾನ 15° c (59F) ಇದೆ. ಆದರೆ ಕಳೆದ ಶತಮಾನಗಳಲ್ಲಿ ಈ ತಾಪಮಾನದ ಪ್ರಮಾಣ 0.6 c (1F) ನಷ್ಟು ಹೆಚ್ಚಳವಾಗಿದೆ. 2100  ವೇಳೆಗೆ ಅದು 1.4 ರಿಂದ 5.80 c ಅಂದರೆ (2.5 ರಿಂದ 10.4 ಸೆ.) ಹೆಚ್ಚಳವಾಗುವ ಸಾಧ್ಯತೆ ಇದೆ. ತಾಪಮಾನದ ಹೆಚ್ಚಳದಿಂದ ಧ್ರುವ ಪ್ರದೇಶಗಳ ಹಿಮಕರಗಿ ನೀರಾಗುತ್ತದೆ. ಮತ್ತು ಸಾಗರದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತದೆ. ಇದರೊಂದಿಗೆ ತಾಪಮಾನದ ಏರಿಕೆಯಾಗುವ ಸಂಭವವು ಹೆಚ್ಚಾಗಿದೆ. ಭೂಮಿಯು ತನ್ನ 4.65 ಬಿಲಿಯನ್ ವರ್ಷಗಳಲ್ಲಿ  ಹಲವಾರು ಬಾರಿ ಬೆಚ್ಚನೆಯಿಂದ ಕೂಡಿದ್ದು ಹಾಗೂ ಹಲವು ತಂಪಾಗಿದೆ. ಆದರೆ ಇತ್ತೀಚಿಗೆ ತಾಪಮಾನದಲ್ಲಿ ತೀವ್ರತೆಯನ್ನು ಭೂಮಿ ಎದುರಿಸುವಂತಾಗಿದೆ.

ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಕಾರಣಗಳು

  1. ಜೈವಿಕ ಇಂಧನಗಳನ್ನು ಅಳತೆ ಮೀರಿ ಉರಿಸುವುದು ಹಾಗೂ ವಾಹನಗಳು ಬಿಡುವ ಹೊಗೆ ಮತ್ತು ಸೌದೆಯನ್ನು ದಹಿಸುವುದರಿಂದ ಭೂಮಂಡಲದಲ್ಲಿ ಅಧಿಕ ಹೊಗೆ ಹರಡಿಕೊಳ್ಳುತ್ತದೆ. ಇದರಿಂದ ಇಂಗಾಲದ ಡೈಆಕ್ಸೈಡ್‌ ಪ್ರಮಾಣ ಹೆಚ್ಚಾಗುತ್ತದೆ. ಅರಣ್ಯ ನಾಶದಿಂದಾಗಿಯೂ ತಾಪಮಾನ ಏರಿಕೆಯಾಗುತ್ತಿದೆ.
  2. ಭತ್ತದ ಗದ್ದೆಗಳು ಮತ್ತು ಹಸುಗಳ ಸಗಣಿಯಲ್ಲಿರುವ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಯಿಂದ ಮೀಥೇನ್ ಉತ್ಪಾದನೆಯಾಗಿ ವಾತಾವರಣ ಸೇರುತ್ತದೆ. ಹೀಗಾಗಿ ಜಾಗತಿಕ ತಾಪಮಾನದಲ್ಲಿ ಹೆಚ್ಚಳ ಕಂಡುಬರುತ್ತದೆ.
  3. ರಸಾಯನಿಕ ಗೊಬ್ಬರ, ಕ್ರಿಮಿನಾಶಕಗಳನ್ನು ಅತಿಯಾದ ಬಳಕೆ ಮಾಡುವುದು, ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವುದು ಸಹ ಜಾಗತಿಕ ತಾಪಮಾನಕ್ಕೆ ಕಾರಣವಾಗುತ್ತದೆ.
  4.  ಮಿತಿಮೀರಿದ ಕೈಗಾರಿಕೆಗಳ ಸ್ಥಾಪನೆ ಹಾಗೂ ಘನ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುವುದು.
  5.  ವಾಹನಗಳ ಹೊಗೆ, ಪೆಟ್ರೋಲ್‌ ದಹನ ಇತ್ಯಾದಿ ಕಾರಣಗಳಿಂದ ಉಷ್ಣತೆಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಓಜೋನ್ ಪದರದ ಶಿಥಿಲತೆಯಿಂದ ಭೂ ಮಂಡಲ ಕಾವೇರುತ್ತದೆ.
  6.  ಅಣುಸ್ಥಾವರ ಮತ್ತು ಶಾಖೋತ್ಪನ್ನ ಘಟಕಗಳನ್ನು ಅತಿಯಾಗಿ ಸ್ಥಾಪನೆ ಮಾಡುವುದರಿಂದ ಭೂಮಂಡಲ ಅತ್ಯಂತ ಹೆಚ್ಚು ತಾಪಮಾನದಿಂದ ಕೂಡಿರುತ್ತದೆ.
  7.  ಜನಸಂಖ್ಯೆಯ ನಿರಂತರ ಏರಿಕೆಯೂ ಭೂಮಿಯ ತಾಪಮಾನಕ್ಕೆ ಕಾರಣವಾಗಿದೆ.

ಜಾಗತಿಕ ತಾಪಮಾನದ ಪರಿಣಾಮಗಳು

  1.  ಜಾಗತಿಕ ತಾಪಮಾನದಲ್ಲಿ ಉತ್ತರ ಧ್ರುವ ಪ್ರದೇಶಗಳು ಹೆಚ್ಚು ಶಾಕಯುಕ್ತವಾಗುವ ಕಾರಣ ಅಲ್ಲಿನ ಮಂಜುಗಡ್ಡೆಗಳು ಕಡಿಮೆಯಾಗುತ್ತವೆ. ಆಗ ಚಳಿಗಾಲದಲ್ಲಿ ಕೆಲವು ಪ್ರದೇಶಗಳಲ್ಲಿ ಮಂಜು ಬೀಳದೇ ಹೋಗಬಹುದು. ಸಮಶೀತೋಷ್ಣವಲಯದ ಮಂಜು ಅವಧಿಗಿಂತ ಮುಂಚಿತವಾಗಿ ಕರಗಿ ಹೋಗುವುದರಿಂದ ಕಾಲಮಾನಗಳ ಅವಧಿಯಲ್ಲಿ ಹೆಚ್ಚು ಕಡಿಮೆಯಾಗುತ್ತದೆ. ಆಗ ಚಳಿಗಾಲ ಮತ್ತು ರಾತ್ರಿಯ ವೇಳೆ ಉಷ್ಣಾಂಶ ಹೆಚ್ಚಾಗುವುದು.
  2.  ಬೆಚ್ಚನೆಯ ಪ್ರದೇಶಗಳು ಅರ್ದ್ರತೆಯಿಂದ ಕೂಡಿರುವುದರಿಂದ ನೀರಾವಿ ಹೆಚ್ಚಾಗುತ್ತದೆ. ಇದರಿಂದ ಮಳೆಯ ಪ್ರಮಾಣ ಅಧಿಕವಾಗುತ್ತದೆ. ಇದರೊಂದಿಗೆ ಬಿರುಗಾಳಿ ತೀವ್ರವಾಗುತ್ತದೆ. ಆಗ ಮಣ್ಣಿನಲ್ಲಿನ ತೇವಾಂಶ ಶಾಖದಿಂದ ಬೇಗನೆ ಆವಿಯಾಗಿ ಮಣ್ಣು ಬರಡಾಗುತ್ತದೆ.
  3. ಸಾಗರದ ಮೇಲ್ಮೈ ಪದರ ಬಿಸಿಯಾಗುತ್ತಿದ್ದಂತೆ ಸಮುದ್ರದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತದೆ. ಇದರಿಂದ ಮಂಜುಗಡ್ಡೆ ಶೀಘ್ರವಾಗಿ ಕರಗುವುದರಿಂದ ಸಮುದ್ರಕ್ಕೆ ಉಕ್ಕಿ ಹರಿಯುತ್ತದೆ. ಆಗ ತೀರ ಪ್ರದೇಶಗಳು ಮುಳುಗಡೆಯಾಗುವ ಭೀತಿ ಎದುರಾಗುತ್ತದೆ.
  4.  ವಾತಾವರಣ ಬಿಸಿಯಾಗುತ್ತಿದ್ದಂತೆ ಪ್ರಾಣಿ ಪಕ್ಷಿಗಳು ಬದಲಾಗ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದೆ ತುಂಬಾ ವೇದನೆಯನ್ನು ಪಡುತ್ತವೆ. ಸಾವಿರಾರು ಜಾತಿಯ ಸಸ್ಯಗಳು ನಾಶವಾಗುತ್ತದೆ. ಪ್ರಾಣಿಗಳು ತಂಪು ಪ್ರದೇಶಗಳ ಕಡೆಗೆ ಗುಳೇ ಹೋಗುತ್ತವೆ.
  5.  ಜನರು ತುಂಬಾ ಒತ್ತಡಗಳಿಗೆ ಒಳಗಾಗಬಹುದು ಉಷ್ಣವಲಯದ ಸೊಳ್ಳೆ ಹಾಗೂ ಇತರ ಜೀವಿಗಳು ಉಷ್ಣವಲಯದಿಂದ ಶೀತ ವಲಯದ ಕಡೆಗೆ ಪ್ರಯಾಣಿಸಬಹುದು. ಇದರಿಂದ ರೋಗಗಳು ಅಲ್ಲಿ ತೀವ್ರವಾಗಿ ಹರಡಬಹುದು.
  6.  ಜಾಗತಿಕ ತಾಪಮಾನದಿಂದ ಹಿಮನದಿಗಳು ಕರಗುತ್ತವೆ.
  7.  ಕೃಷಿ ಭೂಮಿ ಕಡಿಮೆಯಾಗಿ ಆಹಾರ ಧಾನ್ಯಗಳು ಜನರಿಗೆ ಸಿಗದೇ ಹೋಗಬಹುದು.
  8.  ಹೆಚ್ಚಿನ ಹಿಮಪಾತಗಳು ಅತಿಯಾದ ಮಳೆ ಮತ್ತು ಹೆಚ್ಚಿನ ಪ್ರಮಾಣದ ಚಂಡಮಾರುತಗಳು ಉಂಟಾಗಬಹುದು.
  9.  ಮಳೆಯ ಹಂಚಿಕೆಯು ಬದಲಾವಣೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟವನ್ನು ಅನುಭವಿಸಬಹುದಾಗಬಹುದು.
  10. ಶೀತ ವಲಯಗಳು ಮತ್ತು ತಗ್ಗು ಪ್ರದೇಶಗಳು ಸಾಗರದಲ್ಲಿ ಮುಳುಗಿ ಹೋಗಬಹುದು.

ಉಪಸಂಹಾರ 

ಜಾಗತಿಕ ತಾಪಮಾನವು ಭೂಮಿಯ ಜೀವ ವೈವಿಧ್ಯತೆ, ಹವಾಮಾನ ಹಾಗೂ ಮಾನವ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅರಣ್ಯ ನಾಶ, ಇಂಧನದ ಅತಿಯಾದ ಬಳಕೆ ಮತ್ತು ಮಾಲಿನ್ಯ ಈ ಸಮಸ್ಯೆಯನ್ನು ಇನ್ನಷ್ಟು ಗಂಭೀರಗೊಳಿಸುತ್ತಿವೆ. ಪ್ರಕೃತಿಯನ್ನು ರಕ್ಷಿಸುವುದು ಮತ್ತು ಹಸಿರುಮನೆ ಅನಿಲಗಳ ನಿಯಂತ್ರಣವೇ ಈ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆಯೂ ಮಹತ್ವದ್ದಾಗಿದೆ. ಇಂದು ಎಚ್ಚೆತ್ತುಕೊಂಡರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಭೂಮಿಯನ್ನು ಉಳಿಸಬಹುದು.