ಗೌತಮ ಬುದ್ಧನ ಜೀವನ

ಬಾಲ್ಯ : ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಈತ ಒಬ್ಬ ಮಹಾನ್ ದಾರ್ಶನಿಕ. ಈತನನ್ನು ಶಾಕ್ಯಮುನಿ ಹಾಗೂ ತಥಾಗತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈತ ಕ್ರಿ.ಪೂ. 583 ರಂದು ವೈಶಾಖ ಶುದ್ಧ ಪೂರ್ಣಿಮೆಯಂದು ನೇಪಾಳದ ಲುಂಬಿನಿ ವನದಲ್ಲಿ ಜನಿಸಿದನು.  ತ್ರಿಪೀಟಕಗಳು ಹಾಗೂ ಜಾತಕ ಕಥೆಗಳು ಬುದ್ಧನ ಬಗ್ಗೆ ವಿವರಣೆ ನೀಡುತ್ತವೆ. ಈತನ ತಂದೆ ಶುದ್ಧೋದನ ಹಾಗೂ ತಾಯಿ ಮಾಯಾದೇವಿ, ಬುದ್ಧನ ಮೂಲ ಹೆಸರು ಸಿದ್ದಾರ್ಥ, ಶುದ್ಧೋದನ ಕಪಿಲ ವಸ್ತುವಿನ ಶಾಕ್ಯ ಕುಲಕ್ಕೆ ಸೇರಿದವನು. ಸಿದ್ದಾರ್ಥ ಜನಿಸಿದ ಕೇವಲ 7 ದಿನಗಳಲ್ಲಿ ಮಾಯಾದೇವಿ ತೀರಿಕೊಂಡಳು. ನಂತರ ಬುದ್ಧ ತನ್ನ ಮಲತಾಯಿ ಪ್ರಚಾಪತಿ ಗೌತಮಿಯ ಆಶ್ರಮದಲ್ಲಿ ಬೆಳೆದನು. ಸಂಪ್ರದಾಯದಂತೆ ಸಿದ್ದಾರ್ಥ ಜನಿಸಿದ ತಕ್ಷಣ ಶುದ್ಧೋದನ ಜ್ಯೋತಿಷಿಗಳನ್ನು ಕರೆದು ಮಗನ ಭವಿಷ್ಯವನ್ನು ಕೇಳಿದನು. ಈತ ಮಹಾರಾಜನಾಗುತ್ತಾನೆ ಇಲ್ಲವೆ ಜಗತ್ತನ್ನು ಉದ್ಧರಿಸುವ ಸನ್ಯಾಸಿಯಾಗುತ್ತಾನೆ ಎಂದು ಜ್ಯೋತಿಷಿ ಹೇಳಿದನು. ಈ ಮಾತನ್ನು ಕೇಳಿ ದಿಗ್ಬ್ರಮೆಗೊಂಡ ಶುದ್ಧೋದನ ತನ್ನ ಮಗ ಸನ್ಯಾಸಿಯಾಗದಿರಲಿ ಎಂದು ಬಯಸಿ ಅರಮನೆಯಲ್ಲಿಯೇ ಅವನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದನು. ಅವನಿಗಾಗಿ ಅರಮನೆಗಳನ್ನು ನಿರ್ಮಿಸಿದನು. ಯಾಕೆಂದರೆ ತನ್ನ ಮಗ ಪ್ರಸಿದ್ಧ ಸಾಮ್ರಾಟನಾಗಲು ಬಯಸಿದ್ದನೇ ಹೊರತು ಸನ್ಯಾಸಿಯಾಗಲು ಅಲ್ಲ. ಹೀಗಾಗಿ ತನ್ನ ಮಗನ ಮನಸ್ಸಿಗೆ ಘಾಸಿಯಾಗುವ ಯಾವುದೇ ಘಟನೆ ನಡೆಯದಂತೆ ಎಚ್ಚರಿಕೆವಹಿಸಿದನು.

ವೈವಾಹಿಕ ಜೀವನ : ಬಾಲ್ಯದಿಂದಲೇ ಸಿದ್ದಾರ್ಥನಿಗೆ ಆಧ್ಯಾತ್ಮದ ಕಡೆಗೆ ಒಲವಿತ್ತು. ಹೀಗಾಗಿ ಶುದ್ಧೋದನ ತನ್ನ ಮಗನ ಮನಸ್ಸನ್ನು ಬೇರೆಡೆಗೆ ಸೆಳೆಯಲು ಉತ್ತಮ ಶಿಕ್ಷಣ ನೀಡುವ ಸಕಲ ಏರ್ಪಾಡು ಮಾಡಿದನು. ಸಿದ್ದಾರ್ಥ 16ನೇ ವಯಸ್ಸಿಗೆ ಬಂದಾಗ ಅವನ ಸೋದರ ಮಾವನ ಮಗಳಾದ ಯಶೋಧರಾ, ಭದ್ಧಕಚ್ಛಾನಾ, ಸುಭದ್ರಕಾ, ಬಿಂಬಾ ಅಥವಾ ಗೋಪಾ ಎಂದು ಕರೆಯಲ್ಪಡುವ ರಾಜಕುಮಾರಿಯೊಡನೆ ಮದುವೆ ಮಾಡಲಾಯಿತು. 13 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿ ರಾಹುಲ ಎಂಬ ಮುದ್ದಾದ ಮಗುವನ್ನು ಪಡೆದನು.

1) ನಾಲ್ಕು ಘಟನೆಗಳು : ಸಿದ್ದಾರ್ಥ ಅರಮನೆಯ ಸುಖಭೋಗ ಜೀವನದಲ್ಲಿ ಕೆಲಕಾಲ ಕಳೆದ ನಂತರ ಹೊರಪ್ರಪಂಚದ ಕುತೂಹಲವಾಯಿತು. ಒಂದು ದಿನ ಅರಮನೆಯ ಆಚೆ ಹೋಗಬೇಕೆನಿಸಿ ತನ್ನ ಸೇವಕ ಚನ್ನನೊಂದಿಗೆ ಕುದುರೆಯನ್ನು ಏರಿ ವಾಯುವಿಹಾರಕ್ಕೆ ಹೊರಟನು. ಈ ಸಂದರ್ಭದಲ್ಲಿ ಆತ ಕೆಳಕಂಡ ನಾಲ್ಕು ಮಹಾ ಘಟನೆಯನ್ನು ನೋಡಿದನು.

1) ವೃದ್ಧಾಪ್ಯದಿಂದ ನರಳುತ್ತಿದ್ದ ಮನುಷ್ಯ

2) ರೋಗದಿಂದ ಬಳಲುತ್ತಿದ್ದ ವಯೋವೃದ್ಧ

3) ಸನ್ಯಾಸಿ ಹಾಗೂ               

4) ಹೆಣ

ಈ ನಾಲ್ಕು ದೃಶ್ಯಗಳು ಸಿದ್ದಾರ್ಥನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿದವು. ಮುಪ್ಪು, ರೋಗ ಹಾಗೂ ಮರಣಗಳಿಗೆ ತುತ್ತಾಗಬಲ್ಲ ಮಾನವ ದೇಹ ಕ್ಷಣಿಕ ಎಂಬ ಭಾವನೆಯನ್ನುಂಟು ಮಾಡಿದವು. ಇದರಿಂದ ಆತ ಮೋಹವಿಲ್ಲದ ಏಕಾಂತ ಜೀವನವನ್ನು ಬಯಸತೊಡಗಿದನು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದನು

2)ಮಹಾಪರಿತ್ಯಾಗ : ಮುಪ್ಪು, ರೋಗ, ಸಾವು ಇವು ಸಿದ್ದಾರ್ಥನ ಮನಸ್ಸನ್ನು ಕಲಕಿದವು. ಅರಮನೆಯ ವೈಭೋಗ, ದುಃಖಮಯ ಜೀವನ, ಇವುಗಳಿಂದ ಅವನು ಬೇಸರಗೊಂಡಿದ್ದನು. ಮಾನವರೆಲ್ಲರ ಕಷ್ಟಕೋಟಲೆಗಳಿಗೆ ಕಾರಣವಾದ ಕಣ್ಣೀರನ್ನು ಒರೆಸಲು ಯತ್ನಿಸಿ ಸಂಸಾರವನ್ನು ತ್ಯಜಿಸಲು ತೀರ್ಮಾನಿಸಿದನು. ತನ್ನ 29ನೇ ವಯಸ್ಸಿನಲ್ಲಿ ಸಿದ್ದಾರ್ಥ ಒಂದು ರಾತ್ರಿ ತನ್ನ ಮಲತಾಯಿ, ಹೆಂಡತಿ, 6 ದಿನಗಳ ಮಗ ರಾಹುಲ, ಅರಮನೆ, ವೈಭೋಗ ಎಲ್ಲವನ್ನೂ ತೊರೆದು ಸನ್ಯಾಸಿಯಾಗಿ ಕಾಡಿಗೆ ಹೋದನು. ಇದನ್ನೇ ಮಹಾಪರಿತ್ಯಾಗ ಎಂದು ಕರೆಯಲಾಗಿದೆ.

3)ಸತ್ಯಾನ್ವೇಷಣೆ : ಸಿದ್ದಾರ್ಥ ಸನ್ಯಾಸಿಯ ಉಡುಪನ್ನು ಧರಿಸಿ ಕಾಡಿಗೆ ಹೋದನು. ಬದುಕಿನ ಸತ್ಯವನ್ನು ಹಾಗೂ ದುಃಖಕ್ಕೆ ಪರಿಹಾರವನ್ನು ಕಾಣಲು ಏಳು ವರ್ಷಗಳ ಕಾಲ ಗುರುಗಳ ಹತ್ತಿರ ಅಲೆದನು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಸಿದ್ದಾರ್ಥ ವೈಶಾಲಿಯ ಪ್ರಸಿದ್ಧ ದಾರ್ಶನಿಕನಾದ ಆರದ ಕಲಮನ ಬಳಿ ಎರಡು ವರ್ಷ ಶಿಷ್ಯನಾಗಿದ್ದನು. ಅಲ್ಲಿಯೂ ಅವನಿಗೆ ಸಾಧನೆಯ ಮಾರ್ಗ ಸಿಗಲಿಲ್ಲ. ಆನಂತರ ರಾಜಗೃಹಕ್ಕೆ ಹೋಗಿ ಉದ್ರಕಿ ಎಂಬುವವನ ಬಳಿ ಧ್ಯಾನಕ್ಕೆ ಕುಳಿತು ಏಕಾಗ್ರತೆಯನ್ನು ಪಡೆದನು. ಅನಂತರ ಗಯಾ ಕ್ಷೇತ್ರದ ಬಳಿಯಿರುವ ಉರುವಿಲ್ಲದಲ್ಲಿ ಕಠಿಣ ತಪಸ್ಸನ್ನು ಆಚರಿಸಿ ಎಲುಬಿನ ಹಂದರವಾದನು. ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ. ಕೊನೆಗೆ ನಿರಂಜನಾ ನದಿಯಲ್ಲಿ ಸ್ನಾನ ಮಾಡಿ ಸುಜಾತಾ ಎಂಬ ಕನ್ಯೆ ನೀಡಿದ ಮಧುಪಾಯಸವನ್ನು ಸ್ವೀಕರಿಸಿದನು. ಇದರಿಂದ ಅವನು ಜೀವ ಶಕ್ತಿಯನ್ನು ಪಡೆದನು. ನಿರಾಳ ಭಾವನೆಯಿಂದ ಬೋಧಗಯಾ ಬಳಿಯಿರುವ ಉರುವಲ ಎಂಬ ಗ್ರಾಮದ ಬಳಿಯ ಅರಳಿ ಮರದ ಕೆಳಗೆ ಕುಳಿತು ಧ್ಯಾನ ಮಗ್ನನಾದನು. ಕೊನೆಗೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಜ್ಞಾನೋದಯವಾಯಿತು. ಅಂದಿನಿಂದ ಸಿದ್ದಾರ್ಥ ಬುದ್ಧನಾದನು. ಬುದ್ಧ ಎಂದರೆ ಜ್ಞಾನೋದಯ ಅಥವಾ ಪರಮಜ್ಞಾನ ಪಡೆದವನು ಎಂದರ್ಥ, ಬುದ್ಧನು ತಪಸ್ಸು ಮಾಡಿದ ಸ್ಥಳವನ್ನು ಬೋಧಗಯಾ ಎಂದೂ, ಆ ಅರಳಿಮರವನ್ನು ಬೋಧಿವೃಕ್ಷ ಎಂದೂ ಕರೆಯಲಾಯಿತು.

4)ಧರ್ಮಚಕ್ರಪ್ರವರ್ತನ ಕಾಲ : ಬುದ್ಧ ತಾನು ಕಂಡುಕೊಂಡ ಪರಮ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಲು ಅವನು ತನ್ನ ಮೊದಲ ಉಪದೇಶವನ್ನು ವಾರಣಾಸಿ ಸಮೀಪವಿರುವ ಸಾರನಾಥದ ಜಿಂಕೆಯ ವನದಲ್ಲಿ ನೀಡಿದನು. ಈ ಘಟನೆಯನ್ನೇ ಧರ್ಮಚಕ್ರ ಪ್ರವರ್ತನ ಅಥವಾ ಧರ್ಮಚಕ್ರ ತಿರುಗುವಿಕೆ ಎಂದು ಕರೆಯಲಾಗಿದೆ. ಬುದ್ಧನ ಮೊದಲ ಐದು ಜನ ಶಿಷ್ಯಂದಿರೆಂದರೆ ಕೊಂಡಣ್ಣ, ಎಪ್ಪು, ಭವ್ಹಾಜಿ, ಮಹಾನಾಮ ಹಾಗೂ ಅನ್ನಾಜಿ. ನಂತರ ಬುದ್ಧ ಈ ಐವರ ಸಹಾಯದೊಂದಿಗೆ ಬೌದ್ಧ ಸಂಘವನ್ನು ಸ್ಥಾಪಿಸಿದನು. ಅಂದಿನಿಂದ ಬುದ್ಧನ ಧರ್ಮಚಕ್ರ ಉರುಳಲು ಆರಂಭಿಸಿತು.

5)ಬೌದ್ಧ ಧರ್ಮದ ಪ್ರಚಾರ : ಬುದ್ಧನು ತನ್ನ ಉಳಿದ 45 ವರ್ಷಗಳ ಕಾಲ ಊರೂರು ಅಲೆಯುತ್ತಾ ತನ್ನ ಬೋಧನೆಗಳನ್ನು ಮಾಡಿದನು. ಈ ಅವಧಿಯಲ್ಲಿ ಆತ ಕಾಶಿ, ಸಾರನಾಥ, ರಾಜಗೃಹ, ಕೌಶಾಂಬಿ, ಮಗಧ, ಕೋಶಲ, ಅಂಗ, ಮಿಥಿಲ ಹಾಗೂ ಕಪಿಲ ವಸ್ತುಗಳಿಗೆ ಭೇಟಿ ನೀಡಿದನು. ತಾನು ಹೋದಡೆಯಲೆಲ್ಲಾ ಬೆಂಬತ್ತಿ ಬಂದ ಜನರಿಗೆ ಭೇದ ಭಾವವಿಲ್ಲದೆ ಧರ್ಮಬೋಧೆಮಾಡಿದನು. ಆನಂದ ಈತನ ಮೊದಲ ಶಿಷ್ಯನಾಗಿದ್ದನು. ಬುದ್ಧನು ವರ್ಷದಲ್ಲಿ 4 ತಿಂಗಳು ಮಳೆಗಾಲವನ್ನು ಒಂದು ಕಡೆ ಕಳೆದು, ಉಳಿದ ಎಂಟು ತಿಂಗಳ ಕಾಲ ಪ್ರವಾಸದಲ್ಲಿ ತೊಡಗಿರುತ್ತಿದ್ದನು. ಹೀಗಾಗಿ ಆತನ ಧರ್ಮ ಬಹುಬೇಗ ಪಸರಿಸಿತು. ನಂತರ ಬುದ್ಧ ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಕುಶಿನಗರ ಎಂಬಲ್ಲಿ ಕ್ರಿ.ಪೂ. 503ರಲ್ಲಿ ಪರಿನಿರ್ವಾಣ ಹೊಂದಿದನು. ಒಂದು ಆಸಕ್ತಿಕರವಾದ ವಿಷಯವೆಂದರೆ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ವೈಶಾಕ ಶುದ್ಧ ಪೂರ್ಣಿಮೆಯಂದು ಸಂಭವಿಸಿದವು. ಆದುದರಿಂದ ಬೌದ್ಧರು ಅವನ ಜನ್ಮದಿನವನ್ನು ಬೌದ್ಧ ಪೂರ್ಣಿಮೆ ಎಂದು ಆಚರಿಸುತ್ತಾರೆ.

ಗೌತಮ ಬುದ್ಧನ ಬೋಧನೆಗಳು :

ಬುದ್ಧನ ಬೋಧನೆಗಳನ್ನು ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪೀಟಕಗಳಾದ ಸುತ್ತಪಿಟಿಕ, ಅಭಿದಮ್ಮ ಪಿಟಿಕ ಹಾಗೂ ವಿನಯ ಪಿಟಿಕೆಗಳಲ್ಲಿ ಕಾಣಬಹುದು. ಇವುಗಳನ್ನು ಮೂರು ಪವಿತ್ರ ಬುಟ್ಟಿಗಳೆಂದು ಕರೆಯಲಾಗಿದೆ.

1)ನಾಲ್ಕು ಮೂಲ ತತ್ವಗಳು :

ಎ) ಅಹಿಂಸೆ (ಪ್ರಾಣಿ ಹಿಂಸೆ ಮಾಡದಿರುವುದು).  

ಬಿ) ಸತ್ಯ (ಸುಳ್ಳು ಹೇಳದಿರುವುದು),

ಸಿ) ಕಳ್ಳತನ ಮಾಡದಿರುವುದು.      

ಡಿ) ಪಾವಿತ್ರ್ಯತೆಯನ್ನು ಕಾಪಾಡುವುದು/ಬ್ರಹ್ಮಚರ್ಯೆಯನ್ನು ಪಾಲಿಸುವುದು.

2)ನಾಲ್ಕು ಆರ್ಯ ಸತ್ಯಗಳು :

ಎ) ಜೀವನವು ಅತ್ಯಂತ ದುಃಖಮಯವಾಗಿದೆ. (ಜನ್ಮ, ವೃದ್ಧಾಪ್ಯ, ರೋಗ, ಸಾವು ಇವೇ ದುಃಖದ ಮೂಲಗಳು)

ಬಿ) ದುಃಖಕ್ಕೆ ಆಸೆಯೇ ಮೂಲಕಾರಣ.

ಸಿ) ಆಸೆಯನ್ನು ತ್ಯಜಿಸಿದರೆ ದುಃಖದಿಂದ ಮುಕ್ತಿ ಹೊಂದಬಹುದು.

ಡಿ) ದುಃಖದಿಂದ ಪಾರಾಗಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದು.

3) ಅಷ್ಟಾಂಗ ಮಾರ್ಗಗಳು : ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದರಿಂದ ಹುಟ್ಟು- ಸಾವುಗಳಿಂದ ಮುಕ್ತಿ ಹೊಂದಬಹುದು. ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳೆಂದರೆ:

1) ಸಮ್ಯಕ್ ನುಡಿ (ಅಸತ್ಯವನ್ನು ನುಡಿಯದಿರುವುದು ಹಾಗೂ ಪರರ ನಿಂದನೆ ಮಾಡದಿರುವುದು.)

2) ಸಮ್ಯಕ್ ಚಾರಿತ್ರ್ಯ (ಕೊಲೆ, ಕಳ್ಳತನ ಹಾಗೂ ಅನೈತಿಕ ವ್ಯವಹಾರದಿಂದ ದೂರವಿರುವುದು.)

3) ಸಮ್ಯಕ್ ಜೀವ (ಬೇರೆ ಜೀವಿಗಳಿಗೆ ತೊಂದರೆ ಕೊಡದಿರುವುದು)

4) ಸಮ್ಯಕ್ ವಿಚಾರ (ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳುವುದು)

5) ಸಮ್ಯಕ್ ನಂಬಿಕೆ (ಪರರಲ್ಲಿ ನಂಬಿಕೆ ಇಡುವುದು)

6) ಸಮ್ಯಕ್ ಪ್ರಯತ್ನ (ಒಳ್ಳೆಯ ಪ್ರಯತ್ನಗಳನ್ನು ಮಾಡುವುದು)

7) ಸಮ್ಯಕ್ ಧ್ಯಾನ (ಮನಸ್ಸನ್ನು ಹತೋಟಿಗೊಳಪಡಿಸಿಕೊಳ್ಳುವುದು)

8) ಸಮ್ಯಕ್ ನೆನಪು (ಆತ್ಮಜ್ಞಾನ ಹಾಗೂ ಸಂಯಮದಿಂದ ಇರುವುದು)

4) ಬೌದ್ಧ ಧರ್ಮದ ತ್ರಿರತ್ನಗಳು : ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘ ಎಂಬುದು ಮೂರು ತ್ರಿರತ್ನಗಳಾಗಿವೆ.  ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ – ಸಂಘಂ ಶರಣಂ ಗಚ್ಛಾಮಿ

ಬುದ್ಧಂ ಶರಣಂ ಗಚ್ಛಾಮಿ ಧಮ್ಮಂ ಶರಣಂ ಗಚ್ಛಾಮಿ ಸಂಘಂ ಶರಣಂ ಗಚ್ಛಾಮಿಎಂಬುದು ಬೌದ್ಧ ಧರ್ಮದ ತ್ರಿರತ್ನಗಳು ಅಥವಾ ಮೂರು ಶರಣಾಗತಿಗಳು ಎಂದು ಕರೆಯಲ್ಪಡುತ್ತದೆ. ಇದು ಬೌದ್ಧನ ಭಕ್ತಿಯ, ನಂಬಿಕೆಯ ಮತ್ತು ಶರಣಾಗತಿಯ ಘೋಷಣೆಯಾಗಿದೆ. ಇದರ ಅರ್ಥ ಹೀಗಿದೆ –

1. ಬುದ್ಧಂ ಶರಣಂ ಗಚ್ಛಾಮಿ :

ಅಂದರೆ “ನಾನು ಬುದ್ಧನಲ್ಲಿ ಶರಣಾಗುತ್ತೇನೆ” — ಆತನು ಜ್ಞಾನೋದಯವನ್ನು ಹೊಂದಿದ ಗುರು, ಮಾನವಕುಲಕ್ಕೆ ಮುಕ್ತಿಯ ಮಾರ್ಗ ತೋರಿಸಿದ ಪ್ರೇರಕ.

2. ಧಮ್ಮಂ ಶರಣಂ ಗಚ್ಛಾಮಿ :

ಅಂದರೆ “ನಾನು ಧರ್ಮದಲ್ಲಿ ಶರಣಾಗುತ್ತೇನೆ” — ಬುದ್ಧನು ಬೋಧಿಸಿದ ಸತ್ಯ, ಜ್ಞಾನ ಮತ್ತು ದುಃಖ ನಿವಾರಣೆಯ ಮಾರ್ಗವಾದ ಧರ್ಮದಲ್ಲಿ ಶರಣಾಗುವುದು.

3. ಸಂಘಂ ಶರಣಂ ಗಚ್ಛಾಮಿ :

ಅಂದರೆ “ನಾನು ಸಂಘದಲ್ಲಿ ಶರಣಾಗುತ್ತೇನೆ” — ಬುದ್ಧನ ಉಪದೇಶಗಳನ್ನು ಅನುಸರಿಸುವ ಭಿಕ್ಷುಗಳು, ಭಿಕ್ಷುನಿಯರು ಮತ್ತು ನಿಷ್ಠಾವಂತ ಅನುಯಾಯಿಗಳ ಸಮುದಾಯದಲ್ಲಿ ಶರಣಾಗುವುದು.

ಒಟ್ಟಾರೆ: ಇದು ಜ್ಞಾನ (ಬುದ್ಧ), ಸತ್ಯ (ಧಮ್ಮ), ಮತ್ತು ಆಧ್ಯಾತ್ಮಿಕ ಸಹವಾಸ (ಸಂಘ) — ಈ ಮೂರು ಶ್ರೇಷ್ಠ ಶರಣಾಗತಿಗಳಲ್ಲಿ ನಂಬಿಕೆಯನ್ನು ಸೂಚಿಸುವ ಬೌದ್ಧ ಜೀವನದ ಮೂಲ ತತ್ವವಾಗಿದೆ.

5) ಅಹಿಂಸೆ : ಬುದ್ಧ ಹಿಂಸೆಯನ್ನು ಖಂಡಿಸಿದನು. ಅಹಿಂಸಾವಾದಕ್ಕೆ ಹೆಚ್ಚು ಒತ್ತು ನೀಡಿದನು. ಜಗತ್ತಿನ ಪ್ರತಿ ಜೀವಿಯಲ್ಲೂ ಜೀವವಿದೆ ಅದನ್ನು ಹಿಂಸಿಸುವುದು ಮಹಾಪಾಪ ಎಂದು ಬೋಧಿಸಿದನು. ಯಜ್ಞಯಾಗಾದಿಗಳಲ್ಲಿ ಆಗುತ್ತಿದ್ದ ಪ್ರಾಣಿಬಲಿಯನ್ನು ಉಗ್ರವಾಗಿ ಖಂಡಿಸಿದನು. ಹಿಂಸಾತ್ಮಕ ಮಾರ್ಗವನ್ನು ಬಿಟ್ಟು ಸ್ನೇಹ, ಪ್ರೀತಿ, ಶಾಂತಿ, ಅನುಕಂಪ ಹಾಗೂ ಸೌಹಾರ್ಧತೆಯಿಂದ ಬದುಕುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದನು.

6) ಜಾತಿ ಪದ್ಧತಿಯ ಖಂಡನೆ : ಬುದ್ಧ ಜಾತಿ ಪದ್ಧತಿಯನ್ನು ಖಂಡಿಸಿದನು. ಮನುಷ್ಯನ ಯೋಗ್ಯತೆಯನ್ನು ಅವನ ವ್ಯಕ್ತಿತ್ವದಿಂದ ಅಳೆಯಬೇಕೆ ವಿನಃ ಜಾತಿಯಿಂದ ಅಲ್ಲ ಎಂದನು. ಈ ಕಾರಣಕ್ಕಾಗಿ ಬುದ್ಧ ತನ್ನ ಸಂಘದಲ್ಲಿ ಸಾವಿರಾರು ಅಸ್ಪೃಶ್ಯರಿಗೆ ಸದಸ್ಯತ್ವವನ್ನು ನೀಡಿದನು.

7) ಪುನರ್ ಜನ್ಮ ಹಾಗೂ ಕರ್ಮ : ಮಹಾವೀರನಂತೆ ಬುದ್ಧ ಕೂಡಾ ಪುನರ್‌ಜನ್ಮ ಮತ್ತು ಕರ್ಮಗಳಲ್ಲಿ ನಂಬಿಕೆ ಇಟ್ಟಿದ್ದನು. ಮಾನವನ ಇಂದಿನ ಹುಟ್ಟು ಸಾವುಗಳಿಗೆ ಹಿಂದಿನ ನಮ್ಮ ಕರ್ಮಗಳೇ ಕಾರಣವಾಗಿವೆ. ಆದ್ದರಿಂದ ಉತ್ತಮ ಕರ್ಮಗಳನ್ನು ನಾವು ಮಾಡಿದರೆ ಮೋಕ್ಷ ಪಡೆಯಬಹುದು ಎಂದು ಬುದ್ಧ ಬೋಧಿಸಿದನು.

ಉಪಸಂಹಾರ :

ಗೌತಮ ಬುದ್ಧನ ಮಹತ್ವ ಮಾನವತೆಯ ಶಾಂತಿ, ಸಮಾನತೆ ಮತ್ತು ನೈತಿಕತೆಯ ಆಧಾರಶಿಲೆಯಾಗಿದೆ. ಆತ ಅಹಿಂಸೆ, ಸತ್ಯ, ಕರುಣೆ, ಸಹಿಷ್ಣುತೆ ಮತ್ತು ಸ್ವಸಂಯಮದ ಮೂಲಕ ಮಾನವನ ಆತ್ಮೋನ್ನತಿಗೆ ದಾರಿ ತೋರಿಸಿದನು. ಜಾತಿ, ಧರ್ಮ, ಲಿಂಗ ಅಥವಾ ಸಂಪತ್ತಿನ ಆಧಾರದ ಮೇಲೆ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಬೌದ್ಧ ತತ್ವಗಳು ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೂಲ ಆಧಾರಗಳಾಗಿವೆ. ಇಂದಿನ ಅಶಾಂತ, ಹಿಂಸಾತ್ಮಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧನ ಬೋಧನೆಗಳು ಅತಿ ಪ್ರಸ್ತುತವಾಗಿದ್ದು, ಅವು ಮಾನವನಿಗೆ ಆತ್ಮಶಾಂತಿ, ಸಾಮಾಜಿಕ ಸೌಹಾರ್ದತೆ ಹಾಗೂ ಪರಿಸರಸಂರಕ್ಷಣೆಯ ಮಾರ್ಗದರ್ಶನ ನೀಡುತ್ತವೆ. ಬುದ್ಧನ ಅಹಿಂಸೆ ಮತ್ತು ಮಿತಾಭೋಗದ ಸಂದೇಶವು ಇಂದಿನ ಜಾಗತಿಕ ಸಮಾಜಕ್ಕೆ ಮಾನವೀಯತೆ ಮತ್ತು ಶಾಂತಿಯ ದಾರಿ ತೋರಿಸುವ ಶಾಶ್ವತ ಬೆಳಕಾಗಿದೆ.