ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು

(Methods of Exploration)

1. ನಕ್ಷೆಗಳ ಅಧ್ಯಯನ

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ       

               A. ಬೆಟ್ಟಗಳು

             B. ಕಣಿವೆ ಮಾರ್ಗಗಳು

             C. ನದಿಗಳು

             D. ಸರೋವರಗಳು ಮತ್ತು ಕೆರೆಗಳು

              E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು

3. ಜನಾಂಗ ವಿವರಣೆ

4. ಐತಿಹಾಸಿಕ ಸಾಹಿತ್ಯ

5. ಪ್ರಕಟಿತ ವರದಿಗಳು

6. ಸ್ಥಳ ಪುರಾಣಗಳು, ದಂತ ಕಥೆಗಳು

7. ಸ್ಥಳ ನಾಮಗಳು

ಕ್ಷೇತ್ರ ಕಾರ್ಯವನ್ನು ಮಾಡುವಾಗ ಅನುಸರಿಸುವ ತಂತ್ರ, ವಿಧಾನ ಮತ್ತು ಅದಕ್ಕೆ ಬೇಕಾಗುವ ಸಿಬ್ಬಂದಿಗಳನ್ನು ಸರ್ವೇಕ್ಷಣೆ ಅವಲಂಬಿಸಿದೆ. ಸಂಶೋಧಕರು ಪ್ರಮುಖವಾಗಿ ನದಿ ಮುಖಗಳು, ಮರಳು, ಶೇಖರಣೆಯ ಸ್ತರಗಳು, ಶಿಲೆಗಳು ಹಾಗೂ ಮಣ್ಣಿನ ಸ್ವರೂಪ, ಪಳೆಯುಳಿಕೆಗಳು, ಕಲ್ಲಿನ ಉಪಕರಣಗಳು ಮುಂತಾದವುಗಳ ಕುರಿತು ಅಧ್ಯಯನ ಮಾಡಬೇಕು. ಸರ್ವೇಕ್ಷಣ ಮಾಡುವಾಗ ತಾವು ಮಾಡುವ ಸರ್ವೆಯ ಭೂಮಿಯ ಸ್ವರೂಪ ಹಾಗೂ ಭೂವಿಜ್ಞಾನದ ಸ್ಪಷ್ಟ ಕಲ್ಪನೆಯನ್ನು ಹೊಂದಿರಬೇಕು. ಇತಿಹಾಸ ಪೂರ್ವಕಾಲದ ಸರ್ವೆ ಕಾರ್ಯದಲ್ಲಿ ಸ್ಥಳ ಪುರಾಣಗಳಾಗಲಿ ಅಥವಾ ಸ್ಥಳೀಯ ಮಾರ್ಗದರ್ಶಕರಿಂದಾಗಲೀ ಯಾವುದೇ ಮಾಹಿತಿಗಳು ಸಿಗದೇ ಹೋಗಬಹುದು. ಆದರೆ ಕೆಲವು ಕಡೆಗಳಲ್ಲಿ ದನ ಮೇಯಿಸುವವರು, ಬೇಟೆಗಾರರು ಗುಹಾಂತರ ದೇವಾಲಯಗಳನ್ನು ಶೋಧಿಸಲು ಸಹಾಯ ನೀಡಬಹುದು.

 ಆದರೆ ಇತಿಹಾಸ ಕಾಲದ ಸ್ಥಳಗಳನ್ನು ಸರ್ವೆ ಮಾಡುವಾಗ ಸಾಹಿತ್ಯ, ಶಾಸನ ಹಾಗೂ ಸಾಂಪ್ರದಾಯಿಕ ಸಾಮಗ್ರಿಗಳನ್ನು ಉಪಯೋಗಿಸಬಹುದು. ಅನ್ವೇಷಕರು ಯಾವ ಪ್ರದೇಶದಲ್ಲಿ ಅನ್ವೇಷಣೆ ಮಾಡಲು ಬಯಸುವರು ಆ ಪ್ರದೇಶದ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದಿರಬೇಕು. ಸರ್ವೆ ಕಾರ್ಯದಲ್ಲಿ ಯಾವ ವಸ್ತುಗಳು ನೆರವಾಗಬಹುದು ಎಂಬುದನ್ನು ಈ ಕೆಳಗಿನಂತೆ ನೋಡಬಹುದು.

1. ನಕ್ಷೆಗಳ ಅಧ್ಯಯನ:

ಭಾರತದಲ್ಲಿ ಪುರಾತತ್ವ ಸ್ಥಳಗಳನ್ನು ಅನ್ವೇಷಣೆ ಮಾಡುವಾಗ ಪುರಾತತ್ವ ಶಾಸ್ತ್ರಜ್ಞನಿಗೆ ಹಲವಾರು ನಮೂನೆಗಳು ನೆರವಾಗಬಲ್ಲವು. ಅವುಗಳಲ್ಲಿ ಅತಿ ಮುಖ್ಯವಾಗಿ ನೆರವಾಗುವ ನಮೂನೆಗಳೆಂದರೆ ನಕ್ಷೆಗಳು. ಈ ನಕ್ಷೆಗಳನ್ನು ಬೇರೆ ಬೇರೆ ರಾಜ್ಯಗಳು, ಜಿಲ್ಲೆಗಳು ತಾಲೂಕುಗಳು ಹಾಗೂ ಗ್ರಾಮಗಳಿಗೆ ಸಂಬಂಧಿಸಿದಂತೆ ಪುರಾತತ್ವ ಇಲಾಖೆ ತಯಾರಿಸಿ ಸಂಶೋಧಕರಿಗೆ ನೀಡುತ್ತದೆ. ಇವುಗಳು ಸರ್ವೇಕ್ಷಣ ಮಾಡುವ ಅಧಿಕಾರಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುತ್ತವೆ. ಅವುಗಳಲ್ಲಿ ಫೋಟೋಶೀಟುಗಳು ಎನ್ನುವ ನಕ್ಷೆಗಳು ಪ್ರಮುಖವಾಗಿವೆ. ಇವುಗಳು 1 ಇಂಚಿಗೆ 4 ಮೈಲಿ ಸ್ಕೇಲನ್ನು ಹೊಂದಿದ್ದು ಇವುಗಳು ನಗರಗಳು, ಗ್ರಾಮಗಳು, ಕೋಟೆ-ಕೊತ್ತಲುಗಳು, ಹೆದ್ದಾರಿಗಳು, ಚಿಕ್ಕ-ಚಿಕ್ಕ ರಸ್ತೆಗಳು, ಬಂಡಿದಾರಿಗಳು, ರೈಲು ದಾರಿಗಳು ಹಾಗೂ ನಿಲ್ದಾಣಗಳ ಕುರಿತು ಮಾಹಿತಿ ನೀಡುತ್ತವೆ. ಹೀಗಾಗಿ ಅನ್ವೇಷಕನು ತಾನು ಸಾಗುವ ದಾರಿಯನ್ನು ಸುಲಭವಾಗಿ ತಿಳಿಸುವ ಕೆಲಸವನ್ನು ಈ ನಕ್ಷೆಗಳು ಮಾಡುತ್ತವೆ. ಇದು ಅಲ್ಲದೆ ವಿಶ್ರಾಂತಿ ಧಾಮಗಳು, ಪ್ರವಾಸಿ ಬಂಗಲೆಗಳು, ಧರ್ಮ ಶಾಲೆಗಳು, ಛತ್ರಗಳು ಸಹ ಫೋಟೋಶೀಟ್‌ಗಳ ಮೂಲಕ ಪತ್ತೆಹಚ್ಚಲು ನೆರವಾಗುತ್ತದೆ. ಹಾಗೆಯೇ ದೇವಾಲಯಗಳು, ಮಸೀದಿಗಳು, ಚರ್ಚುಗಳು ಸಹ ಫೋಟೋಶೀಟ್‌ಗಳಲ್ಲಿ ಸೂಚಿಸಲ್ಪಟ್ಟಿರುತ್ತವೆ.

ನಕ್ಷೆಗಳಲ್ಲಿ ಭೂ ಮೇಲ್ಮೈ ಲಕ್ಷಣಗಳು, ನದಿಗಳು, ಗಿರಿಧಾಮಗಳು, ಸರೋವರಗಳು, ಬುಗ್ಗೆಗಳು ಹಾಗೂ ಅರಣ್ಯಗಳನ್ನು ಸೂಚಿಸಲಾಗಿರುತ್ತದೆ. ನದಿ ಸರೋವರ, ನೀರಿನ ಬುಗ್ಗೆಗಳು ಇರುವ ಪ್ರದೇಶಗಳಲ್ಲಿ ಹಳೆಯ ಶಿಲಾಯುಗದ ಕುರುಹುಗಳು ಇದ್ದ ಬಗ್ಗೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ. ಶತಮಾನಕ್ಕಿಂತ ಹಿಂದಿನ ನಕ್ಷೆಗಳು ಹಾಗೂ ಇಂದಿನ ನಕ್ಷೆಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬರುತ್ತವೆ. ಹಳೆಯ ಕಾಲದ ನಕ್ಷೆಗಳಲ್ಲಿ ಶಿಲಾಯುಗದ ಸಮಾಧಿ ಸ್ಥಳಗಳನ್ನು ಸೂಚಿಸಲಾಗಿರುತ್ತದೆ. ಆದರೆ ಹೊಸ ನಕ್ಷೆಗಳಲ್ಲಿ ವಿಪರೀತವಾದ ಕೃಷಿ ಕಾರ್ಯಗಳ ಪರಿಣಾಮವಾಗಿ ಅಂತಹ ನೆಲೆಗಳು ಅವನತಿ ಹೊಂದಿರುವುದು ಗೊತ್ತಾಗುತ್ತದೆ. ಮೊಗಲರು, ಪೋರ್ಚುಗೀಸರು, ಆದಿಲ್‌ಶಾಹಿ, ಮರಾಠರು ಹಾಗೂ ಆಂಗ್ಲರ ಕಾಲದ ಹಳೆಯ ನಕ್ಷೆಗಳು ನಮಗೆ ದೊರಕಿದ್ದು ಅವುಗಳಲ್ಲಿ ಆಯಾ ರಾಜರುಗಳ ಅವಧಿಯಲ್ಲಿನ ಕೋಟೆಗಳು, ದೇವಾಲಯಗಳು, ಮಸೀದಿಗಳು, ಸ್ಮಶಾನಗಳು, ಬೀದಿಗಳು ರಣರಂಗಗಳು ಹಾಗೂ ಸಮಾಧಿಗಳನ್ನು ಸೂಚಿಸಲಾಗಿರುತ್ತದೆ.

2. ಭೂಮೇಲ್ಮೈ ಲಕ್ಷಣಗಳ ಅಧ್ಯಯನ:

ರಾಜಕೀಯ ಅಥವಾ ಸಾಮಾನ್ಯ ನಕ್ಷೆಗಳನ್ನು ನೋಡಿದಾಗ ಆಯಾ ಪ್ರದೇಶಗಳಲ್ಲಿ ಸಿಗುವ ಖನಿಜಗಳು, ಮಣ್ಣುಗಳು, ಪ್ರಾಣಿಗಳು ಹಾಗೂ ಸಸ್ಯ ರಾಶಿಯ ವಿವರಗಳು ಅಲ್ಲಿರುವುದಿಲ್ಲ. ಬದಲಾಗಿ ಪ್ರಾಕೃತಿಕ ನಕ್ಷೆಗಳಲ್ಲಿ ಮಾತ್ರ ಇಂತಹ ವಿವರಗಳು ಸಾಮಾನ್ಯವಾಗಿ ಕಂಡುಬರುತ್ತದೆ. ಜಿಲ್ಲಾ‌ ಗೆಜೆಟಿಯರ್ ಹಾಗೂ ಇಂಪೀರಿಯಲ್ ಗೆಜೆಟಿಯರ್ ಮೊದಲಾದವುಗಳು ಭೂ ಮೇಲ್ಮೈ ಲಕ್ಷಣಗಳ ಅಧ್ಯಯನಕ್ಕೆ ಆಧಾರ ಗ್ರಂಥಗಳಾಗಿವೆ. ಅದರಲ್ಲೂ ಬ್ರಿಟಿಷ್ ಕಾಲದ ಗೆಜೆಟೀಯರ್ ನಲ್ಲಿ ವಿಫುಲವಾದ ಮಾಹಿತಿಗಳು ಲಭ್ಯವಿರುವ ಕೆಲವು ಭೂಮಿಯ ಮೇಲ್ಮೈಲಕ್ಷಣಗಳು ಈ ಕೆಳಗಿನಂತಿವೆ.

A. ಬೆಟ್ಟಗಳು: ಎತ್ತರವಾದ ಪ್ರದೇಶದಿಂದ ಸುತ್ತುವರೆಯಲಾದ ಬೆಟ್ಟಗುಡ್ಡಗಳು ಹೊರಗಡೆ ಪ್ರಪಂಚದ ಆಗುಹೋಗುಗಳ ಪ್ರಭಾವದಿಂದ ಮುಕ್ತವಾಗಿರುತ್ತದೆ. ಈ ಪ್ರದೇಶಗಳಲ್ಲಿ ಕೇವಲ ಆದಿವಾಸಿ ಹಾಗೂ ಬುಡಕಟ್ಟು ಜನರು ವಾಸಿಸುವುದುಂಟು. ಇವರು ನಗರ ಪ್ರದೇಶದಿಂದ ದೂರವಿದ್ದು ಆಧುನಿಕ ಸಮಾಜದ ಗಂಧಗಾಳಿಯೂ ಇವರಿಗೆ ಬೀಸುವುದಿಲ್ಲ. ಇವರ ಆಚಾರ-ವಿಚಾರ, ರೂಢಿ-ಸಂಪ್ರದಾಯ, ಆಹಾರ-ವಿಹಾರ, ಬಣ್ಣ, ಉಡುಗೆ-ತೊಡುಗೆ, ನಗರ ಪ್ರದೇಶಗಳಿಗಿಂತ ಭಿನ್ನವಾಗಿರುತ್ತವೆ. ಪುಲೈಯಾರ್ ಎಂಬ ಆದಿವಾಸಿ ಜನರು ಅಣ್ಣಾಮಲೈ ಬೆಟ್ಟಗಳಲ್ಲಿ ಹಾಗೂ ತೋಡರು ನೀಲಗಿರಿ ಬೆಟ್ಟಗಳಲ್ಲಿ ವಾಸಿಸುತ್ತಿದ್ದಾರೆ. ಜನಾಂಗ ವಿವರಣ ಅಧ್ಯಯನ ಮಾಡುವಾಗ ಇವುಗಳು ಪ್ರಮುಖ ಮಾಹಿತಿಗಳನ್ನು ಒದಗಿಸುತ್ತವೆ. ಇವರು ಸಾಮಾನ್ಯವಾಗಿ ಬಂಡೆಗಳ ಅಡಿಗಳು ಮತ್ತು ಗುಹೆಗಳಲ್ಲಿ ತಮ್ಮ ಆಶ್ರಯ ಸ್ಥಾನಗಳನ್ನು ನಿರ್ಮಿಸಿಕೊಂಡಿರುತ್ತಾರೆ. ಇವುಗಳೇ ಆದಿಮಾನವನವಾಸಕ್ಕೆ ಯೋಗ್ಯವಾದ ಸ್ಥಳಗಳಾಗಿದ್ದವು. ತಮಿಳುನಾಡಿನ ಅತ್ತಿರಂಪಾಕಂ ಎಂಬ ಗ್ರಾಮದ ಹತ್ತಿರ ಗುಡಿಯಂ ಎಂಬ ನೆಲೆಯು, ಮಧ್ಯಪ್ರದೇಶದ ಹೋಶಂಗಾಬಾದ್ನ ಬಂಡೆಗಳ ಆಶ್ರಯ ತಾಣಗಳು, ಕರ್ನಾಟಕದ ಬಾದಾಮಿಯ ಸಿಡಿಲ ಪಡಿ ಎಂಬ ಗುಹೆ, ಆಂಧ್ರಪ್ರದೇಶದ ಕರ್ನೂಲಿನ ಗುಹೆಗಳು ಮಾನವ ವಸತಿಯ ಯೋಗ್ಯ ಸ್ಥಳಗಳಾಗಿದ್ದವು. ತೆಕ್ಕಲಕೋಟೆಯಲ್ಲಿ ನೂತನ ಶಿಲಾಯುಗದ ವಸತಿ ಸಮುಚ್ಚಯಗಳು ಕಂಡುಬಂದಿವೆ.

B. ಕಣಿವೆ ಮಾರ್ಗಗಳು: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವಲಸೆ ಬರಲು ಮತ್ತು ಒಂದು ದೇಶದ ಸಂಸ್ಕೃತಿಯನ್ನು ಇನ್ನೊಂದು ದೇಶಕ್ಕೆ ಪ್ರಸಾರ ಮಾಡಲು ಪ್ರಾಚೀನಕಾಲದಲ್ಲಿ ಕಣಿವೆ ಮಾರ್ಗಗಳು ಪ್ರಮುಖವಾದ ಪಾತ್ರವನ್ನು ವಹಿಸುತ್ತಿದ್ದವು. ಕಣಿವೆ ಮಾರ್ಗಗಳು ಎರಡು ದೇಶಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತಿದ್ದವು. ಹೀಗಾಗಿಯೇ ಪರ್ಶಿಯನ್ನರು, ಶಕರು, ಹೂಣರು, ಪಾರ್ಥಿಯನ್ನರು, ಗ್ರೀಕರು, ಸಿಥಿಯನ್ನರು, ಕುಷಾನರು, ಹೂಣರು, ಟರ್ಕರು, ಮಂಗೋಲರು, ಅರಬ್ಬರು, ಮುಸ್ಲಿಂರು ಹಾಗೂ ಮೊಘಲರು ಒಬ್ಬರಾದ ನಂತರ ಮತ್ತೊಬ್ಬರಂತೆ ಭಾರತವನ್ನು ಪ್ರವೇಶಿಸಿದರು. ಹೀಗೆ ಅವರು ಭಾರತಕ್ಕೆ ಲಗ್ಗೆ ಇಡಲು ವಾಯುವ್ಯ ದಿಕ್ಕಿನಲ್ಲಿನ ಪ್ರಮುಖವಾದ ಎರಡು ಕಣಿವೆಗಳಾದ ಖೈಬರ್ ಹಾಗೂ ಬೋಲಾನ್‌ಗಳು ಸೂಕ್ತವಾದ ರಸ್ತೆ ಮಾರ್ಗವನ್ನು ಒದಗಿಸಿದವು.

ಪಾಲ್ಗಾಟ್ ಕಣಿವೆ ಕೇರಳ ಹಾಗೂ ತಮಿಳುನಾಡಿನ ನಡುವೆ ಸಂಪರ್ಕವನ್ನು ಏರ್ಪಡಿಸಿದರೆ, ಜೋ-ಜಿಲಾ ಕಣಿವೆಯು ಲಡಾಖ್‌ ಹಾಗೂ ಕಾಶ್ಮೀರಿ ಕಣಿವೆಗಳನ್ನು ಜೋಡಿಸುತ್ತದೆ. ರೋಹ್ಟಾಂಗ್‌ ಕುಲು ಕಣಿವೆಯನ್ನು ಲಾಹೌರ್‌ ಹಾಗೂ ಸ್ಪಿತಿ ಕಣಿವೆಗಳೊಂದಿಗೆ ಸಂಪರ್ಕಿಸುತ್ತದೆ. ನಾಥು-ಲಾ ಭಾರತದ (ಸಿಕ್ಕಿಂ) ಹಾಗೂ ಚೀನಾವನ್ನು (ಟಿಬೆಟ್) ಸಂಪರ್ಕಿಸುವ ಪ್ರಮುಖ ಮಾರ್ಗವಾಗಿದೆ. ಬನಿಹಾಲ್ ಪಾಸ್ ಜಮ್ಮು ಕಾಶ್ಮೀರ್ ಕಣಿವೆಯನ್ನು ಸಂಪರ್ಕಿಸುತ್ತದೆ. ಬಾರಾ-ಲಾಚಾ-ಲಾ ಕಣಿವೆಯು ಲೇಹ್ ಮತ್ತು ಮನಾಲಿಗಳನ್ನು ಜೋಡಿಸುತ್ತದೆ. ಹೀಗೆ ಕಣಿವೆ ಮಾರ್ಗಗಳ ಜ್ಞಾನವು ಪ್ರಾಚೀನ ಸಂಚಾರ ಹಾಗೂ ಸಾಂಸ್ಕೃತಿಕ ಸಂಪರ್ಕ ಜಾಲಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

C. ನದಿಗಳು :  ಮಾನವನಿಗೆ ಅನ್ನ, ವಸತಿ, ಬಟ್ಟೆಗಳಷ್ಟೇ ಅಗತ್ಯವಾದದ್ದು ನೀರು. ನೀರು ಕೃಷಿಗಾಗಿ, ಕುಡಿಯಲು, ದನ ಕರುಗಳಿಗೆ ಕುಡಿಯಲು, ವಿದ್ಯುತ್ ಶಕ್ತಿ ಉತ್ಪಾದನೆಗಾಗಿ, ಮನರಂಜನೆಗಾಗಿ ಹಾಗೂ ಮೀನು ಸಾಕಾಣಿಕೆಗೆ ಬೇಕು. ಎಲ್ಲಿ ನದಿಗಳು ಇರುತ್ತವೆಯೋ ಅಲ್ಲಿ ಹೆಚ್ಚು ಜನವಸತಿ ಕಂಡುಬರುತ್ತದೆ. ನದಿಗಳು ಸದಾಕಾಲ ಜನರಿಗೆ ನೀರನ್ನು ಒದಗಿಸುವುದರಿಂದ ಅವುಗಳು ಜನವಸತಿ ಯೋಗ್ಯ ಪ್ರದೇಶಗಳಾಗಿವೆ. ಪ್ರಾಚೀನ ನೆಲೆಗಳು ಸಾಮಾನ್ಯವಾಗಿ ನದಿಗಳ ದಂಡೆಯ ಮೇಲೆ ಕಂಡುಬಂದಿವೆ. ನದಿ ಮಟ್ಟಗಳನ್ನು ಹಾಗೂ ಅಲ್ಲಿ ದೊರೆಯುವ ವಸ್ತುಗಳನ್ನು ಅನ್ವೇಷಣೆ ಮಾಡುವವರು ಸರಿಯಾಗಿ ಟಿಪ್ಪಣಿ ಮಾಡಿಕೊಳ್ಳಬೇಕು..

ಇತಿಹಾಸ ಕಾಲದಲ್ಲಿಯೂ ಸಹ ನದಿಗಳ ದಂಡೆಯ ಮೇಲೆ ಜನವಸತಿ ಕೇಂದ್ರಗಳು ಸ್ಥಾಪನೆಯಾದವು. ಸಿಂಧೂ ನಾಗರಿಕತೆಯು ಬೆಳೆದು ಬಂದದ್ದು ಸಿಂಧೂ ನದಿಯ ದಂಡೆಯ ಮೇಲೆ. ಹಳೆಯ ಶಿಲಾಯುಗ ಹಾಗೂ ತಾಮ್ರಯುಗಗಳ ವಸತಿ ಕೇಂದ್ರಗಳು ಸಹ ನದಿ ದಂಡೆಯ ಮೇಲೆ ಸ್ಥಾಪನೆಯಾದದ್ದು ಒಂದು ಇತಿಹಾಸ. ಅಲಹಾಬಾದ್, ಅಯೋಧ್ಯೆ, ಪಾಟಲಿಪುತ್ರ, ಬನಾರಸ್, ಪ್ರಯಾಗ್, ಆಗ್ರಾ, ಲಾಹೋರ್ ಹಾಗೂ ಮುಲ್ತಾನ್‌ಗಳು ಜನವಸತಿ ಕೇಂದ್ರಗಳಾಗಿ ಬೆಳೆದು ಬಂದದ್ದು ನದಿಯ ದಡದಲ್ಲಿಯೇ. ಮೌರ್ಯ, ಗುಪ್ತ, ಉಜ್ಜಯಿನಿ, ವರ್ಧನ, ದೆಹಲಿ ಸುಲ್ತಾನರು, ಮೊಘಲರು ಹಾಗೂ ಆಫ್ಘನರು ಆಳ್ವಿಕೆ ಮಾಡಿದುದು ಇದೇ ನದಿಯ ದಡದಲ್ಲಿ. ಕಳಿಂಗ, ಕಣ್ವ, ಕನೌಜ್, ಪಾಣಿಪತ್, ತರೈನ್‌, ಪ್ಲಾಸಿ ಹಾಗೂ ಘೋಗ್ರಾ ಕದನಗಳು ನದಿಯ ದಂಡೆಗಳ ಮೇಲೆ ನಡೆದವು.

ಮಲಪ್ರಭಾ ನದಿಯ ದಂಡೆಯ ಮೇಲೆ ಪಟ್ಟದಕಲ್ಲು ಹಾಗೂ ಐಹೊಳೆ,

ತುಂಗಾಭದ್ರಾ ನದಿಯ ದಂಡೆಯ ಮೇಲೆ ಹಂಪೆ (ವಿಜಯನಗರ ಸಾಮ್ರಾಜ್ಯ),

ಕಾವೇರಿ ನದಿಯ ದಂಡೆಯ ಮೇಲೆ ತಲಕಾಡು (ಗಂಗರ ರಾಜಧಾನಿ), ಊರೈಯೂರು (ಚೋಳರ ರಾಜಧಾನಿ),

ವೈಗೈ ನದಿಯ ತೀರದ ಮಧುರೈ (ಪಾಂಡ್ಯ ರಾಜಧಾನಿ) ಮೊದಲಾದವುಗಳು ನದಿಯ ತೀರದ ನೆಲೆಗಳಾಗಿದ್ದವು.

D. ಸರೋವರಗಳು ಮತ್ತು ಕೆರೆಗಳು: ಸರೋವರಗಳು ಸಹ ಜನವಸತಿಗೆ ಹೆಸರುವಾಸಿಯಾಗಿದ್ದವು. ಅನೇಕ ಕೆರೆಗಳ ದಂಡೆಯ ಮೇಲೆ ಶಿಲಾಯುಗದ ಅವಶೇಷಗಳು ದೊರಕಿರುವುದು ಒಂದು ವಿಶೇಷವಾಗಿದೆ. ಸ್ವಿಜ್ಜರ್‌ಲ್ಯಾಂಡಿನ ಸರೋವರಗಳಲ್ಲಿ ಹಳೆಯ ಶಿಲಾಯುಗದ ಅವಶೇಷಗಳು ದೊರಕಿವೆ. ತಮಿಳುನಾಡಿನ ಸಮುದ್ರದ ದಡದಲ್ಲಿ ಪ್ರಾಚೀನ ಲಾಗೂನುಗಳು ಇದ್ದವು. ಅವುಗಳನ್ನೇ ಟೇರಿ ನಿವೇಶನಗಳೆಂದು ಕರೆಯಲಾಗಿದೆ. ಇವು ಸೂಕ್ಷ್ಮ ಶಿಲಾಯುಗದ ಅವಶೇಷಗಳಾಗಿದ್ದವು. ಇನ್ನು ಡೆಕ್ಕನ್ ಪ್ರದೇಶವು ಕೆರೆಗಳಿಗೆ ಹೆಸರುವಾಸಿಯಾಗಿತ್ತು. ಇಲ್ಲಿ ಕೆರೆ ನೀರಾವರಿಯನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿತ್ತು. ದಕ್ಷಿಣದ ಪ್ರತಿ ಗ್ರಾಮಗಳು ಒಂದೊಂದು ಕೆರೆಗಳನ್ನು ಹೊಂದಿದ್ದವು. ಹೀಗಾಗಿ ಅಂದಿನ ಗ್ರಾಮಗಳಿಗೆ ಕೆರೆಯ ಹೆಸರನ್ನು ಇಡಲಾಗುತ್ತಿತ್ತು.

ಉದಾ:  ಹೂವಿನಕೆರೆ, ಹೊಳಲ್‌ ಕೆರೆ, ಚಳ್ಳಕೆರೆ, ತರೀಕೆರೆ, ಅರಸೀಕೆರೆ, ತುರುವೇಕೆರೆ, ತಾವರೆಕೆರೆ, ಹಳ್ಳೀಕೆರೆ, ಮತ್ತೀಕೆರೆ, ಹೊಸಕೆರೆ, ನೊಣವಿನ ಕೆರೆ, ಅರಕೆರೆ, ಕಂಚೀಕೆರೆ, ಬೆಂಡಿಕೆರೆ, ಹಿರೇಕೆರೆ, ಗುರುವನಕೆರೆ, ಕೆಂಚನಕೆರೆ, ಸೂಳೆಕೆರೆ, ಆನೆಕೆರೆ, ಪಡುಕೆರೆ, ಪಾಂಡುಕೆರೆ, ಕಾಫಿ ಕೆರೆ, ತೋವಿನಕೆರೆ, ಕಡಲ ಕೆರೆ, ತೂಬಿನಕೆರೆ, ಚಿಕ್ಕ ತೊಟ್ಲುಕೆರೆ, ಜೋಗಣ್ಣನಕೆರೆ, ಮೊದಲಾದವುಗಳು. ಹಲವಾರು ಶಿಲಾಗೋರಿಗಳು ಕೆರೆಗಳ ದಂಡೆಯ ಮೇಲಿರುವುದು ಗಮನಾರ್ಹವಾಗಿದೆ.

E. ಶಿಲೆಗಳು, ಖನಿಜಗಳು ಹಾಗೂ ಧಾತುಗಳು:

ಪುರಾತತ್ವ ವಸ್ತುಗಳ ಸರ್ವೇಕ್ಷಣ ಮಾಡುವವರು ಹಳೆಯ ಶಿಲಾಯುಗದ ಮಾನವ ಬೇಟೆಯಾಡಲು, ಮೀನು ಹಿಡಿಯಲು ಹಾಗೂ ಮನೆಬಳಕೆಯ ಉಪಕರಣಗಳನ್ನು ತಯಾರಿಸಲು ಯಾವ ಕಲ್ಲುಗಳನ್ನು ಬಳಕೆ ಮಾಡುತ್ತಿದ್ದನೆಂಬುದನ್ನು ತನ್ನ  ಅಧ್ಯಯನದ ಸಂದರ್ಭದಲ್ಲಿ ಸೂಕ್ತವಾಗಿ ಗಮನಿಸಬೇಕು. ಹಾಗಾಗಿ ಅವನಿಗೆ ತಾನು ಅಧ್ಯಯನ ಮಾಡುವ ಪ್ರದೇಶದ ಭೂ ಮೇಲ್ಮೈ ಲಕ್ಷಣಗಳ ಕುರಿತು ಸಂಪೂರ್ಣ ಜ್ಞಾನವನ್ನು ಹೊಂದಿರಬೇಕು. ಹಳೆಯ ಶಿಲಾಯುಗದ ಮಾನವನು ಪ್ರಾಣಿಗಳ ಹಾಗೆ ಜೀವನವನ್ನು ನಡೆಸುತ್ತಿದ್ದು ಒರಟಾದ ಕಚ್ಚಾ ಆಯುಧಗಳನ್ನು ಬಳಸುತ್ತಿದ್ದನು. ಅವನನ್ನು ʻʻಕ್ವಾರ್ಟಜೈಟ್ ಮಾನವʼʼ ಎಂದು ಕರೆಯುತ್ತಿದ್ದರು. ಮಧ್ಯಶಿಲಾಯುಗದಲ್ಲಿ ಕ್ಯಾಲ್ಸೆಡೆನಿ ಹಾಗೂ ಸಿಲಿಕೇಟ್ ಶಿಲೆಗಳನ್ನು ಬಳಸುತ್ತಿದ್ದನು. ನೂತನ ಶಿಲಾಯುಗದಲ್ಲಿ ಒರಟು ಕಲ್ಲಿನ ಬದಲಾಗಿ ನುಣುಪಾದ ಶಿಲೆಯನ್ನು ಬಳಸಿದನು. ಚಾಲ್ಕೋಲಿಥಿಕ್ ಯುಗದಲ್ಲಿ ಲೋಹದ ಉಪಕರಣಗಳು ಬಳಕೆಗೆ ಬಂದವು. ಅಂದರೆ ತಾಮ್ರ ಹಾಗೂ ಕಲ್ಲುಗಳನ್ನು ಮಿಶ್ರಣ ಮಾಡಿ ಉಪಕರಣ ತಯಾರಿಸಲು ಆರಂಭಿಸಿದರು. ಕಬ್ಬಿಣದ ಯುಗದಲ್ಲಿ ಕಂಚು ಹಾಗೂ ತಾಮ್ರದ ಲೋಹಗಳ ಬದಲಾಗಿ ಕಬ್ಬಿಣವನ್ನು ಉಪಯೋಗ ಮಾಡಲಾಯಿತು. ಆಕ್ರೂಂಜಿಕೇರ್‌ ಎಂಬ ಸ್ಥಳದಲ್ಲಿ ಕಬ್ಬಿಣ ಯುಗದ ಆಭರಣಗಳು ದೊರಕಿವೆ. ಹೀಗಾಗಿ ಅನ್ವೇಷಣೆ ಮಾಡುತ್ತಿರುವ ಸ್ಥಳಗಳಲ್ಲಿ ದೊರೆಯುವ ಶಿಲೆಗಳ ಕುರಿತು ಅನ್ವೇಷಣಾ ಕಾರನಿಗೆ ಅರಿವು ಬಹಳ ಮುಖ್ಯವಾಗಿರುತ್ತದೆ.

3.  ಜನಾಂಗ ವಿವರಣೆ:

ಕಾಡು ಹಾಗೂ ಬೆಟ್ಟಗುಡ್ಡಗಳಲ್ಲಿ ಬೇಟೆಗಾರಿಕೆ, ಆಹಾರ ಸಂಗ್ರಹಣೆ ಮತ್ತು ಕೃಷಿ ಕಾರ್ಯಗಳಲ್ಲಿ ನಿರತರಾಗಿರುವ ಬುಡಕಟ್ಟು ಜನರು ವಾಸಿಸುವ ಪ್ರದೇಶಗಳಿಗೆ ಹೋದ ಪುರಾತತ್ವ ಅನ್ವೇಷಕನು ಈ ಜನರ ಜೀವನದ ಕುರಿತು ಸಂಪೂರ್ಣ ವಿವರಗಳನ್ನು ಸಂಗ್ರಹಿಸಬೇಕು. ಇದು ಶಿಲಾಯುಗದ ಕಾಲದ ನೆಲೆಗಳನ್ನು ಅನ್ವೇಷಣೆ ಮಾಡಿದಾಗ ಸಿಗುವ ಸಾಂಸ್ಕೃತಿಕ ಅವಶೇಷಗಳ ಜೊತೆಗೆ ಹೋಲಿಕೆ ಮಾಡಿ ಒಂದು ತೀರ್ಮಾನಕ್ಕೆ ಬರುವುದು ಸುಲಭವಾಗುತ್ತದೆ.

4. ಐತಿಹಾಸಿಕ ಸಾಹಿತ್ಯ:

ಯಾವುದೇ ಒಂದು ಪ್ರದೇಶದ ಪುರಾತತ್ವ ನಿವೇಶನಗಳನ್ನು ಕಂಡುಹಿಡಿಯಲು ಹೊರಡುವ ಮೊದಲು ಆ ಪ್ರದೇಶದ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು. ಉತ್ಖನನಗಳು, ನಾಣ್ಯಗಳು, ಮಡಿಕೆ ಕುಡಿಕೆಗಳು, ದಿನ ಬಳಕೆಯ ವಸ್ತುಗಳು ಹಾಗೂ ಸಾಹಿತ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕು. ಪ್ರಾಚೀನ ಕೃತಿಗಳಾದ ಮಹಾಕಾವ್ಯಗಳು, ಪ್ರವಾಸಿ ಕಥನಗಳು, ಶಾಸನಗಳು, ನಿಶಧಿಗಲ್ಲುಗಳು, ಸತಿಗಲ್ಲುಗಳು ಮುಂತಾದವುಗಳ ಸರ್ವೆ ಕಾರ್ಯಕ್ಕೆ ಅಗತ್ಯವಿರುವ ಹಿನ್ನೆಲೆಯನ್ನು ಒದಗಿಸುತ್ತವೆ. ಬೌದ್ಧ ಸಾಹಿತ್ಯವು ಬೌದ್ಧ ನೆಲೆಗಳನ್ನು, ಜೈನ ಸಾಹಿತ್ಯವು ಜೈನ ನೆಲೆಗಳನ್ನು ಹಾಗೂ ರಾಮಾಯಣ ಹಾಗೂ ಮಹಾಭಾರತಗಳು ಸಿಂಧೂ-ಗಂಗಾ ಬಯಲಿನ ಶಿಲಾಯುಗದ ಕಾಲದ ನೆಲೆಗಳನ್ನು ಸಂಶೋಧನೆಯನ್ನು ಮಾಡಲು ಸಹಾಯಕವಾಗುತ್ತದೆ. ಪ್ಲಿನಿ, ಸ್ಟ್ರಾಬೋ ಹಾಗೂ ಟಾಲಾಮಿ ಮುಂತಾದವರು ಪ್ರಾಚೀನ ಭೂಗೋಳಶಾಸ್ತ್ರದ ಕುರಿತು ಬರೆದ ಬರಹಗಳು ಕ್ರಿ.ಶ ಆರಂಭದ ಕಾಲದ ನೆಲೆಗಳನ್ನು, ಹಲವಾರು ಪಟ್ಟಣಗಳನ್ನು, ವ್ಯಾಪಾರಿ ಕೇಂದ್ರಗಳನ್ನು ಹಾಗೂ ಬಂದರುಗಳನ್ನು ಪತ್ತೆ ಮಾಡಲು ಸಹಾಯಕವಾಗಿದೆ. ಚೀನಿ ಪ್ರವಾಸಿಗರಾದ ಹ್ಯೂವೆನ್‌ ತ್ಸ್ಯಾಂಗ್‌, ಇತ್ಸಿಂಗ್‌ ಹಾಗೂ ಫಾಹಿಯಾನ್‌ ಅವರ ಬರವಣಿಗೆಗಳು ಉತ್ತರ ಭಾರತದ ಬೌದ್ಧ ನೆಲೆಗಳನ್ನು ಶೋಧಿಸಲು ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮರಿಗೆ ಸಾಧ್ಯವಾಯಿತು. ಚಿತ್ರದುರ್ಗದ ಬ್ರಹ್ಮಗಿರಿ, ಸಿದ್ದಾಪುರ, ಜಟ್ಟಿಂಗ ರಾಮೇಶ್ವರ ಮುಂತಾದವಲ್ಲದೆ ಅಶೋಕನ ಶಾಸನಗಳ ಆಧಾರದ ಮೇಲೆ ʻಇಸಿಲಾʼ ಎಂಬ ನಗರವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಕೊಪ್ಪಳ, ಮಸ್ಕಿಗಳಲ್ಲಿಯೂ ಅಶೋಕನ ಶಾಸನಗಳು ದೊರಕಿದ್ದು ಇಲ್ಲಿಯೂ ಸಹ ಇತಿಹಾಸ ಕಾಲದ ವಸತಿಗಳಿದ್ದವು ಎಂಬುದು ಪುರಾತತ್ವ ಅನ್ವೇಷಣೆಯಿಂದ ಕಂಡುಬಂದಿದೆ.

5. ಪ್ರಕಟಿತ ವರದಿಗಳು:

ಒಂದು ಪ್ರದೇಶದ ಪುರಾತತ್ವ ಸಂಶೋದನೆಯನ್ನು ಕೈಗೊಳ್ಳುವ ಮುನ್ನ ಈಗಾಗಲೇ ನಡೆದಿರುವ ಕ್ಷೇತ್ರ ಸರ್ವೆಕಾರ್ಯಗಳ ಪೂರ್ಣ ಮಾಹಿತಿಯನ್ನು ಓದಿಕೊಂಡು ಮಹತ್ವದ ದಾಖಲೆಗಳನ್ನು ಸಂಗ್ರಹ ಮಾಡಿಕೊಳ್ಳಬೇಕಾದದ್ದು ಅನ್ವೇಷಕರ ಕರ್ತವ್ಯವಾಗಿದೆ. ಈ ಹಿಂದೆ ಪುರಾತತ್ವಶಾಸ್ತ್ರಜ್ಞರು ತಮ್ಮ ಸರ್ವೇ ಸಮಯದಲ್ಲಿ ದಾಖಲು ಮಾಡಿಕೊಂಡಿದ್ದ ವರದಿಗಳು, ಲೇಖನಗಳು, ಟಿಪ್ಪಣಿಗಳು ಹಾಗೂ ಗ್ರಂಥಗಳನ್ನು ಪ್ರಕಟಿಸಿರುತ್ತಾರೆ. ಕಳೆದ ಶತಮಾನದಲ್ಲಿ ರಾಬರ್ಟ್ ಬ್ರೂಸ್‌ಫ್ರೂಟ್ ಪ್ರಕಟಿಸಿದ Pree and Protohistoric Antiquities of Madras Presidency  ರಾಬರ್ಟ್ ಸಿಗಲ್ಲರ ʻʻ Antiquarian Remains in South India ʼʼ ಬಿ.ಎಲ್ ರೈಸ್ ರವರ ಪುರಾತತ್ವ ಅಧ್ಯಯನ, ಬಿಬ್ಲಿಯಾಥಿಕಾ, ʻʻಕರ್ನಾಟಕ ಎಫಿಗ್ರಾಫಿಯ ಕರ್ನಾಟಿಕ ʻʻಮೈಸೂರು ಇನ್ಸ್ಕ್ರಿಪ್ಷನ್ʼʼ ಆರ್ ನರಸಿಂಹಾಚಾರ್ ರವರ Mysore Archaolegical Reportʼʼ, ಆರ್.ಶ್ಯಾಮಶಾಸ್ತ್ರಿಗಳ ʻʻದಿ ಕಾಂತರಾಜ ವಿಜಯʼʼ ಎಂ ಹೆಚ್ ಕೃಷ್ಣ ರವರ ʻʻಹೈದರ್‌ನಾಮ, ಶಕ್ತಿ ಸುದರ್ಶನ, ಮೈಸೂರು ಕೈಪಿಯತ್ತು, ಎಲ್.ನರಸಿಂಹರಾಜರವರ ಎಫಿಗ್ರಾಫಿಯಾ ಕರ್ನಾಟಕʼʼ ಡಾ|| ಎಂ ಶೇಷಾದ್ರಿ ʻʻನವಾಶಿಲಾಯುಗದ ಸಂಸ್ಕೃತಿʼʼ ಡಾ|| ಎಂ.ಎಸ್ ನಾಗರಾಜರವರ MRA ವರದಿ, ಆ ಸುಂದರ ಅವರ ʻʻಪ್ರಬಂಧಗಳುʼʼ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಕಟಿಸಿದ ವಾರ್ಷಿಕ ವರದಿಗಳು, ರಾಜ್ಯ ಸರ್ಕಾರದ ಪ್ರಕಟಣೆಗಳು, ವಾರ್ಷಿಕ ವರದಿಗಳು, ಮೈಸೂರು, ತಿರುವಂಕೂರು, ಕೊಚ್ಚಿನ್ ಹಾಗೂ ಬರೋಡಾ ರಾಜರ ಪುರಾತತ್ವ ವರದಿಗಳು, ಪುರಾತತ್ವ ಸರ್ವೇಕ್ಷಣೆಗೆ ಸಹಾಯಕವಾಗಿವೆ.

ಅದರಂತೆ ರಾಜ್ಯ ಪುರಾತತ್ವ ಇಲಾಖೆಗಳು ಪುರಾತತ್ವ ಸಂಸ್ಥೆಗಳು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ, ವಿಶ್ವವಿದ್ಯಾಲಯಗಳ ಪುರಾತತ್ವ ಇಲಾಖೆಗಳು, ಪುರಾತತ್ವ ಸಂಶೋಧಕರಿಗೆ ಆಕರ ಗ್ರಂಥಗಳನ್ನು ಒದಗಿಸುತ್ತವೆ.

6. ಸ್ಥಳ ಪುರಾಣಗಳು ದಂತ ಕಥೆಗಳು:

ದೇಶದ ಬೇರೆ ಬೇರೆ ಊರುಗಳು, ಸ್ಥಳಗಳು ಹಾಗೂ ನಗರ ಪಟ್ಟಣಗಳಲ್ಲಿ ಅವುಗಳದೇ ಆದ ಸ್ಥಳ ಪುರಾಣಗಳು, ದಂತಕಥೆಗಳು, ಜಾನಪದ ಗೀತೆಗಳು, ಜಾನಪದ ಕಥೆಗಳು, ಲಾವಣಿ ಹಾಡುಗಳು, ಪ್ರಚಲಿತದಲ್ಲಿರುತ್ತವೆ. ಗ್ರಾಮೀಣ ಪ್ರದೇಶದ ವಯೋವೃದ್ಧರು, ಹಿರಿಯರು, ಲಾವಣಿ ಹಾಡುಗಾರರು, ಗರತಿ ಹಾಡುಗಾರರು, ಇಂತಹ ಕಥೆಗಳನ್ನು ಕಟ್ಟಿ ಹಾಡುವುದರಲ್ಲಿ ನುರಿತವರಾಗಿರುತ್ತಾರೆ. ಅನೇಕರು ಕಥೆಯ ಸನ್ನಿವೇಶವು ಇದೇ ಪ್ರದೇಶದಲ್ಲಿ ನಡೆಯಿತು ಎಂದು ತೋರಿಸುವವರು ಇರುತ್ತಾರೆ. ಕೆಲವು ದಂತ ಕಥೆಗಳು ಎಂದುಕೊಂಡರು ಅವುಗಳು ಪರಂಪರೆಯನ್ನು ಸೂಚಿಸುವುದರಿಂದ ತಕ್ಕಮಟ್ಟಿನ ಸತ್ಯಾಂಶವನ್ನು ಹೊರಹಾಕುತ್ತದೆ. ಸರ್ವೇಕ್ಷಣೆಗೆ ಬಂದವರು ಅವರ ಹೇಳಿಕೆಗಳನ್ನು ಟಿಪ್ಪಣಿ ಮಾಡಿಕೊಂಡು ಗ್ರಾಮಸ್ಥರು ತೋರಿಸುವ ಸ್ಥಳಗಳನ್ನು ಸರ್ವೇಕ್ಷಣೆ ಮಾಡಿ ಅಲ್ಲಿ ಏನಾದರೂ ವಸತಿ ಕುರುಹುಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಬಿಹಾರಿನ ಅಗಮ್‌ಕುವಾನ್ 105 ಮೀ ಆಳ ಹಾಗೂ 4.5 ಮೀ ವ್ಯಾಸ ಹೊಂದಿದ ಬಾವಿ ಇದ್ದು ಪಕ್ಕದಲ್ಲಿ ಶಿತಲಾದೇವಿ ದೇವಾಲಯವನ್ನು ಹೊಂದಿದೆ. ದಂತಕಥೆಯ ಪ್ರಕಾರ ಈ ಬಾವಿಯೊಳಗೆ ಸಂಪತ್ತು ತುಂಬಿದೆ. ಅದನ್ನು ತೆಗೆಯಲು ಹೋದವರು ಬಾವಿಗೆ ಬಿದ್ದು ಸತ್ತಿದ್ದಾರೆ ಎಂಬ ನಂಬಿಕೆ ಪ್ರಚಾರವಾಗಿದೆ.

7. ಸ್ಥಳ ನಾಮಗಳು :

ಕೆಲವೊಂದು ಸಲ ಕೆಲವು ಪ್ರದೇಶಗಳ ಹೆಸರುಗಳು ಪುರಾತತ್ವ ಸರ್ವೇಕ್ಷಣಾ ಅಧಿಕಾರಿಗಳಿಗೆ ಆ ಪ್ರದೇಶದ ಪ್ರಾಚ್ಯ ವಸ್ತುಗಳ ಕುರಿತು ಸುಳಿವು ನೀಡಬಹುದು. ಕೆಲವು ಗ್ರಾಮಗಳಲ್ಲಿ ಪಾಂಡವರ ಗುಹೆ ಮತ್ತು ಮೋರಿಯವರ ಮನೆ ಎಂದು ತೋರಿಸಲಾದ ಸ್ಥಳದಲ್ಲಿ ಸಾಮಾನ್ಯವಾಗಿ ಶಿಲಾಯುಗದ ಕಾಲದಲ್ಲಿದ್ದ ಬೃಹತ್ ಶಿಲಾಗೋರಿಗಳು ಇರಬಹುದಾದ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಸರ್ವೇಕ್ಷಣ ಕಾರ್ಯಕ್ಕೆ ಹೋದವರು ಆ ಗ್ರಾಮದಲ್ಲಿ ಅಂತಹ ಸ್ಥಳಗಳು ಇರಬಹುದಾಗಿದ್ದು ಅದರ ಖಚಿತತೆಯನ್ನು ನಿರ್ಧರಿಸಬೇಕು. ಇನ್ನು ಕೆಲವು ಕಡೆಗಳಲ್ಲಿ ನಿಲಿಸುಗಲ್, ಬೂದಿಹಾಳು, ಬೂದಿ ತಿಟ್ಟು ಮುಂತಾದ ಸ್ಥಳಗಳಿರುತ್ತವೆ. ಉದಾ: ಶಿವಮೊಗ್ಗ ಜಿಲ್ಲೆಯಲ್ಲಿ ನಿಲಿಸುಗಲ್ಲುಗಳು ಇರುವ ಸ್ಥಳಗಳು ಕಂಡುಬಂದಿವೆ. ವಿಜಾಪುರದ ಜಿಲ್ಲೆಯಲ್ಲಿ ಬೂದಿಹಾಳು ಎಂಬ ಗ್ರಾಮವಿದೆ. ಅಲ್ಲಿ ಬೂದಿ ಇರುವ ಸ್ಥಳಗಳು ಪತ್ತೆಯಾಗಿವೆ. ಕೆಲವು ಕಡೆ ಬೂದಿತಿಟ್ಟು ಎಂಬ ಗ್ರಾಮವಿದ್ದು ಕಂಡುಬಂದಿದೆ. ಇಲ್ಲಿ ಬೂದಿ ದಿಬ್ಬಗಳು ಇದ್ದ ಕುರುಹುಗಳು ಇವೆ. ಇಂತಹ ಸ್ಥಳ ನಾಮಗಳನ್ನು ಆಧಾರವಾಗಿಟ್ಟುಕೊಂಡು ಸಂಶೋಧಕರು ಅಂತಹ ಪ್ರದೇಶಗಳಲ್ಲಿ ಇನ್ನಷ್ಟು ಪರಿಶೋಧನೆ ಮಾಡಬೇಕು.