ಶಾಸನಶಾಸ್ತ್ರದ ಅರ್ಥ

ಪುರಾತತ್ವ ಶಾಸ್ತ್ರದ ಬಹುಮುಖ್ಯ ಶಾಖೆಯೆಂದರೆ ಶಾಸನಶಾಸ್ತ್ರ. ಇದನ್ನು ಇಂಗ್ಲೀಷಿನಲ್ಲಿ ಎಪಿಗ್ರಫಿ ಎಂದು ಕರೆಯಲಾಗುತ್ತದೆ.“Epigraphy” ಎಂಬ ಪದವು ಗ್ರೀಕ್ ಭಾಷೆಯಿಂದ ಬಂದದ್ದು.

  • “Epi” (ἐπί) = ಮೇಲೆ
  • “Graphein” (γράφειν) = ಬರೆಯುವುದು

ಅದರ ಅರ್ಥ: ಮೇಲೆ ಬರೆಯುವುದು ಅಥವಾ “ಮೇಲ್ಮೈಯ ಮೇಲೆ ಬರಹ”.

ಈ ಪದವು ನಂತರ ಲ್ಯಾಟಿನ್ ಭಾಷೆಯ ಮೂಲಕ ಇಂಗ್ಲಿಷ್‌ಗೆ ಸೇರಿ, 18ನೇ ಮತ್ತು 19ನೇ ಶತಮಾನಗಳಲ್ಲಿ ವಿದ್ಯಾಶಾಖೆಯಾಗಿ ಬಳಕೆಗೆ ಬಂದಿದೆ.

ಶಾಸನಶಾಸ್ತ್ರ (Epigraphy) ಎಂದರೆ ಕಲ್ಲು, ಲೋಹ, ಮಣ್ಣು, ಗೋಡೆ, ತಂಬೆ, ನಾಣ್ಯಗಳು ಮುಂತಾದ ಗಟ್ಟಿಯಾದ ವಸ್ತುಗಳ ಮೇಲೆ ಕೆತ್ತಿದ ಅಥವಾ ಕೆತ್ತನೆ ಮಾಡಿದ ಲಿಪಿ-ಲೇಖನಗಳ ಅಧ್ಯಯನ.

ಇದರಲ್ಲಿ ಮುಖ್ಯವಾಗಿ:

  • ಪ್ರಾಚೀನ ಲಿಪಿಗಳನ್ನು ಓದುವುದು
  • ಅವುಗಳನ್ನು ವಿವರಣೆ ಮಾಡಿ ಭಾಷಾಂತರಿಸುವುದು
  • ಇತಿಹಾಸ, ರಾಜಕೀಯ, ಸಮಾಜ, ಧರ್ಮ ಹಾಗೂ ಆರ್ಥಿಕ ಸ್ಥಿತಿಗಳ ಬಗ್ಗೆ ಮಾಹಿತಿಯನ್ನು ವಿಶ್ಲೇಷಿಸುವುದು

ಸರಳವಾಗಿ ಹೇಳುವುದಾದರೆ, ಗಟ್ಟಿಯಾದ ಮೇಲ್ಮೈಗಳ ಮೇಲೆ ಕೆತ್ತಿದ ಬರಹಗಳ ಅಧ್ಯಯನವೇ ಶಾಸನಶಾಸ್ತ್ರ.ಬರಹಗಳ ಅಧ್ಯಯನಶಾಸ್ತ್ರ ಎಂಬ ಅರ್ಥದಲ್ಲಿಯೂ ಇದನ್ನು ಬಳಸಲಾಗುತ್ತದೆ.

ಶಾಸನಶಾಸ್ತ್ರವು ಅಕ್ಷರಗಳ (graphemes) ಗುರುತಿಸುವಿಕೆ, ಅವುಗಳ ಅರ್ಥ ಸ್ಪಷ್ಟೀಕರಣ, ಅವುಗಳ ದಿನಾಂಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯ ಆಧಾರದ ಮೇಲೆ ವರ್ಗೀಕರಣ, ಹಾಗೂ ಆ ಬರಹವನ್ನು ರಚಿಸಿದ ವ್ಯಕ್ತಿಗಳ ಮತ್ತು ಸಮಾಜದ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಒಳಗೊಂಡಿದೆ. ಶಾಸನಗಳನ್ನು ಅಧ್ಯಯನ ಮಾಡುವ ವ್ಯಕ್ತಿಯನ್ನು ಶಾಸನಶಾಸ್ತ್ರಜ್ಞ (Epigraphist) ಎಂದು ಕರೆಯುತ್ತಾರೆ.

ಇದು ಮುಖ್ಯವಾಗಿ ಬರಹದ ರೂಪ, ಲಿಪಿ, ಭಾಷೆ ಮತ್ತು ಶೈಲಿಯ ಅಧ್ಯಯನ ಮಾಡುತ್ತದೆ. ಶಾಸನದಲ್ಲಿರುವ ಇತಿಹಾಸದ ಘಟನೆಗಳ ವಿವರಣೆ ಮಾಡುವುದು ಇತಿಹಾಸಕಾರರ ಕೆಲಸವಾಗಿದ್ದರೆ, ಶಾಸನವನ್ನು ಓದಿ, ಪುನರ್‌ರಚಿಸಿ, ದಿನಾಂಕ ನಿಗದಿಪಡಿಸುವುದು ಶಾಸನಶಾಸ್ತ್ರಜ್ಞರ ಕಾರ್ಯವಾಗಿದೆ.

ಶಾಸನಶಾಸ್ತ್ರದ ಅಭಿವೃದ್ಧಿ

ಯೂರೋಪಿನಲ್ಲಿ 16ನೇ ಶತಮಾನದಿಂದ ಶಾಸನಶಾಸ್ತ್ರವು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಲು ಆರಂಭವಾಯಿತು. ವಿಶೇಷವಾಗಿ ಲ್ಯಾಟಿನ್ ಮತ್ತು ಗ್ರೀಕ್ ಶಾಸನಗಳನ್ನು ಸಂಗ್ರಹಿಸಿ ಅಧ್ಯಯನ ಮಾಡುವ ಕಾರ್ಯ ನಡೆಯಿತು.

ಈ ಕ್ಷೇತ್ರದ ಮಹತ್ವದ ಸಾಧನೆಯಿಂದಾಗಿ ಈಜಿಪ್ಟ್‌ನ ಹೈರೋಗ್ಲಿಫ್ ಲಿಪಿಯನ್ನು ರೋಸೆಟ್ಟಾ ಶಿಲಾಶಾಸನದ ಸಹಾಯದಿಂದ ಓದುವುದು ಗಮನಾರ್ಹವಾಗಿದೆ. ಈ ಶಿಲಾಶಾಸನದಲ್ಲಿ ಗ್ರೀಕ್, ಡೆಮೋಟಿಕ್ ಮತ್ತು ಹೈರೋಗ್ಲಿಫ್ ಲಿಪಿಗಳಲ್ಲಿ ಬರಹವಿದ್ದು, ಅದನ್ನು ಜೀನ್-ಫ್ರಾಂಸ್ವಾ ಶಾಂಪೊಲಿಯನ್ ಮತ್ತು ಥಾಮಸ್ ಯಂಗ್ ಅವರು ವಿವೇಚಿಸಿದರು.

ಭಾರತದಲ್ಲಿ ಶಾಸನಶಾಸ್ತ್ರ

ಭಾರತವು ಶಾಸನ ಸಂಪತ್ತಿನಲ್ಲಿ ಅತ್ಯಂತ ಶ್ರೀಮಂತ ದೇಶವಾಗಿದೆ. ಇಂದಿನವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಶಾಸನಗಳು ಪತ್ತೆಯಾಗಿವೆ. ಮೌರ್ಯ ಸಾಮ್ರಾಟ ಅಶೋಕ (ಕ್ರಿ.ಪೂ. 3ನೇ ಶತಮಾನ) ಕಾಲದಿಂದ ಹಿಡಿದು ಮಧ್ಯಯುಗದ ಅಂತ್ಯದವರೆಗೆ ಭಾರತೀಯ ಇತಿಹಾಸ ತಿಳಿಯಲು ಶಾಸನಗಳು ಮಹತ್ವದ ಮೂಲಗಳಾಗಿವೆ.

1886ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ (Archaeological Survey of India) ಶಾಸನ ಶಾಖೆ ಸ್ಥಾಪಿಸಲಾಯಿತು. ನಂತರ ಅದು ಊಟಿ ಮತ್ತು ಬಳಿಕ ಮೈಸೂರು ನಗರಕ್ಕೆ ಸ್ಥಳಾಂತರಗೊಂಡಿತು. ಇ. ಹುಲ್ಟ್ಷ್, ವಿ. ವೆಂಕಯ್ಯ, ಹಚ್. ಕೃಷ್ಣ ಶಾಸ್ತ್ರಿ, ಡಿ. ಸಿ. ಸರ್ಕಾರ್ ಮುಂತಾದ ಪಂಡಿತರು ಭಾರತೀಯ ಶಾಸನ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.

ಭಾರತದಲ್ಲಿ ಬರವಣಿಗೆಯ ಪ್ರಾಚೀನತೆ

ನಮ್ಮ ದೇಶದ ಅತ್ಯಂತ ಪ್ರಾಚೀನ ಬರವಣಿಗೆಯು ಕ್ರಿ.ಪೂ. ೨೫೦೦- ಕ್ರಿ.ಪೂ. ೧೫೦೦ರ ಕಾಲದ ಸಿಂಧೂ ಸಂಸ್ಕೃತಿಯ ಮಣ್ಣಿನ ಮುದ್ರೆಗಳ ಮೇಲೆ ದೊರೆತಿದೆ. ಆದರೆ ಈ ಲಿಪಿಯನ್ನಿನ್ನೂ ಸುಸಂಬದ್ಧವಾಗಿ ಅರ್ಥೈಸಲು ಸಾಧ್ಯವಾಗಿಲ್ಲ. ಅಶೋಕನ ಶಾಸನಗಳನ್ನು ಜನಸಾಮಾನ್ಯರು ಓದಿ ತಿಳಿದುಕೊಳ್ಳಬೇಕೆಂಬ ಉದ್ದೇಶಕ್ಕಾಗಿ ಬರೆಸಲಾಗಿತ್ತೆಂಬುದನ್ನು ಪರಿಗಣಿಸಿದರೆ ಆ ಕಾಲಕ್ಕಿಂತ ಮೊದಲೇ ಕೆಲವು ಜನರಿಗಾದರೂ ಓದು ಬರಹ ತಿಳಿದಿತ್ತೆಂಬುದನ್ನು ಅಲ್ಲಗಳೆಯುವಂತಿಲ್ಲ.

ಶಾಸನಾಧ್ಯಯನದ ಆದ್ಯ ಪ್ರವರ್ತಕರು

ವಿಲಿಯಂ ಜೋನ್ಸ್, ಲ್ಯಾನ್ಸನ್ ಮೊದಲಾದ ಪಾಶ್ಚಾತ್ಯ ಪಂಡಿತರು ಬ್ರಾಹ್ಮಲಿಪಿಯನ್ನು ಓದಿ ತಿಳಿದುಕೊಳ್ಳಲು ಬಹಳ ಶ್ರಮಿಸಿದರು. ಕೊನೆಗೆ ೧೮೩೭ರಲ್ಲಿ ಜೇಮ್ಸ್ ಪ್ರಿನ್ಸೆಪ್ ಎಂಬ ವಿದ್ವಾಂಸನು ಬ್ರಾಹ್ಮಲಿಪಿಯ ಒಗಟನ್ನೊಡೆಯಲು ಸಮರ್ಥನಾದನು. ಆದಾಗ್ಯೂ ಬ್ರಾಹ್ಮಲಿಪಿಯ ವೈಜ್ಞಾನಿಕವಾದ ಅಕ್ಷರಮಾಲಿಕೆಯನ್ನು ವ್ಯವಸ್ಥೆಗೊಳಿಸಿದ ಕೀರ್ತಿ ಬ್ಯುಹ್ವಲರ್ ನೆಂಬ ಜರ್ಮನ್ ಪಂಡಿತನಿಗೆ ಸಲ್ಲುತ್ತದೆ. ಅಂತೆಯೆ, ಮ್ಯಾಸ್ಸನ್, ಲ್ಯಾನ್ಸನ್, ಕನ್ನಿಂಗ್‌ಹ್ಯಾಮ್ ಮೊದಲಾದ ವಿದ್ವಾಂಸರ ಕೊಡುಗೆ ಗಣನೀಯವಾದುದು.

ಶಾಸನದ ಉದ್ದೇಶ:

1. ಶಾಸನವನ್ನು ಹಾಕಿಸಿದಂತಹ ಅಥವಾ ಅದಕ್ಕೆ ಕಾರಣನಾದ ವ್ಯಕ್ತಿಯು ಉದ್ದೇಶವನ್ನು ಇಟ್ಟುಕೊಂಡೇ ಬರೆಸಿರುತ್ತಾನೆ.

2. ಅವನು ನಾಯಕ/ಅರಸನಾಗಿದ್ದರೆ ತನ್ನ ಯಶೋಗಾಥೆಯನ್ನು, ದಿಗ್ವಿಜಯವನ್ನು ಸಾರುವ ಉದ್ದೇಶ ಹೊಂದಿರುತ್ತಾನೆ.

3. ತನ್ನ ಕಾನೂನು ಶಾಸನವಾಗಿರುವಾಗ ಅಂತಹ ಶಾಸನವನ್ನು ಜನಸಾಮಾನ್ಯರಿಗೂ ಜಾಹೀರುಮಾಡುವ ಇರಾದೆ ಅವನದಾಗಿರುತ್ತದೆ.

4. ತಾನು ಕಟ್ಟಿಸಿದ ದೇವಾಲಯದ ಮಾಹಿತಿಯು ಅಚಂದ್ರಾಕರವಾಗಿ ಶಾಶ್ವತವಾಗಿರಲಿ ಎಂಬ ಉದ್ದೇಶದಿಂದ ಶಾಸನವನ್ನು ಅದರ ಮಾಹಿತಿಯನ್ನು ಕೆತ್ತಿಸಿರುತ್ತಾನೆ.

5. ತಾನು ನೀಡಿದ ದಾನವನ್ನು ಮುಂದೆ ಬರಲಿರುವ ಜನರು ಯಾರೂ ಉಲ್ಲಂಘನೆ ಮಾಡದಿರಲಿ ಎಂಬ ಶಾಪಭೀತಿಯನ್ನು ತುಂಬಿ ಶಾಸನವನ್ನು ಹೊರಡಿಸಿರುತ್ತಾರೆ.

6. ತಮ್ಮ ಕಾಲದ ಗ್ರಾಮಾಡಳಿತ ಯಾವ ರೀತಿ ಇದೆ, ಅದನ್ನು ಮುಂದೆಯೂ ಅನುಚಾನವಾಗಿ ನಡೆದುಕೊಂಡು ಹೋಗಲಿ ಎಂಬ ಉದ್ದೇಶದಿಂದ ಶಾಸನವನ್ನು ಮಾಹಿತಿ ಹಂಚುವ ಸಲುವಾಗಿ ಶಾಸನ ಹಾಕಿಸಿರುವುದು ಕಂಡುಬರುತ್ತದೆ.

7. ಭೂಮಿಯ ಹಕ್ಕುದಾರಿಕೆಯ ವ್ಯಾಪ್ತಿಯನ್ನು ತಿಳಿಸಲು ಅದರ ಮೂಲೆ-ಮೂಲೆಗೂ ಗಡಿಗಲ್ಲು ಶಾಸನವಾಗಿರಬಹುದು.

8. ತನ್ನ ದೇಶ,ಅರಸ,ಸ್ತ್ರೀಯರ ಅಥವಾ ದನ,ಕರುಗಳ ಸಲುವಾಗಿ ಹೋರಾಡಿ ಬಲಿದಾನಗೈದ ವೀರರ ನೆನಪಿನಲ್ಲಿ ಶಾಸನವನ್ನು ನೆಟ್ಟಿರುವುದು ಕಂಡುಬರುತ್ತದೆ.

ಹೀಗೆ ಶಾಸನವು ಅನೇಕ ಉದ್ದೇಶಗಳನ್ನು ಹೊಂದಿರುವುದನ್ನು ಕಾಣಬಹುದು.

ಶಾಸನದ ಸ್ವರೂಪ

ಶಾಸನವನ್ನು ಕೆಳಕಂಡಂತೆ ವರ್ಗೀಕರಿಸಬಹುದಾಗಿದ್ದು ಅದೇ ಅದರ ಸ್ವರೂಪವಾಗಿದೆ.

೧. ರಾಜಶಾಸನ : ರಾಜನ ಆಜ್ಞೆಯನ್ನು ಸಾರುವ ಲೇಖನ.

೨. ತಾಮ್ರಶಾಸನ : ಅರಸನೇ ಮೊದಲಾದವರು ಕೊಟ್ಟ ಭೂದಾನ ಮುಂತಾದವುಗಳನ್ನು ದಾಖಲಿಸುವ ತಾಮ್ರ ಪಟ್ಟಿಕೆಗಳ ಮೇಲಿನ ಬರಹ.

೩. ದಾನಶಾಸನ : ವಿವಿಧ ರೀತಿಯ ದಾನಗಳನ್ನು ದಾಖಲಿಸುವ, ತಾಮ್ರಶಾಸನದಿಂದ ಭಿನ್ನವಾದ, ಬರಹ.

೪. ಜಯಪತ್ರ : ವಿವಾದವೊಂದರಲ್ಲಿ ಯಾವುದೊಂದು ಪಕ್ಷದ ಗೆಲುವನ್ನು ಸಾರುವ ಬರಹ.

೫. ಯೂಪಶಾಸನ : ಯಜ್ಞಯಾಗಾದಿಗಳಲ್ಲಿ ಬಳಸುವ ಯೂಪ-ಸ್ತಂಭದ ಮೇಲಣ ಬರಹ.

೬. ಸ್ತಂಭ ಶಾಸನ : ದೇವಾಲಯ ಮುಂತಾದ ವಾಸ್ತುವಿನ ಭಾಗವಾದ ಸ್ತಂಭ ಅಥವಾ ಸ್ಮಾರಕಸ್ತಂಭದ ಮೇಲಿನ ಬರಹ.

೭. ಪ್ರತಿಮಾಶಾಸನ : ಕಲ್ಲಿನ ದೇವತಾ ವಿಗ್ರಹಗಳ ಪೀಠದ ಮೇಲೆ ಅಥವಾ ಧಾತುನಿರ್ಮಿತ ಮೂರ್ತಿಗಳ ಹಿಂಭಾಗದಲ್ಲಿ ಕೆತ್ತಿದ ಬರಹ.

೮. ವಿಜಯಶಾಸನ : ಯುದ್ಧದಲ್ಲಿ ರಾಜನ ಗೆಲುವಿನ ಘೋಷಣೆಯನ್ನು ಹೊಂದಿದ ಬರಹ.

೯. ವೀರಗಲ್ಲು: ನಾಡಿಗಾಗಿ ಮಡಿದ ವೀರನನ್ನು ಸ್ಮರಿಸುವ ಬರಹ. ಈ ಬರಹವು ಕೆಲವೊಮ್ಮೆ ಮೃತನ ಪರಿವಾರಕ್ಕೆ ಕೊಡಮಾಡಿದ ದೇಣಿಗೆಯ ವಿವರಗಳನ್ನು ಹೊಂದಿರುತ್ತದೆ.

೧೦. ಮಾಸ್ತಿಕಲ್ಲು : ಯುದ್ಧದಲ್ಲಿ ಮಡಿದ ವೀರನ ಹೆಂಡತಿ ಅವನ ಚಿತೆಯನ್ನು ಪ್ರವೇಶಿಸಿ ಪ್ರಾಣಾರ್ಪಣೆ ಮಾಡುವ ‘ಸಹಗಮನ’ ವನ್ನು ದಾಖಲಿಸುವ ಬರಹ.

೧೧. ತುಜುಗೋಳ್ : ಪ್ರಾಚೀನ ಭಾರತೀಯರಿಗೆ ಗೋವು ಪೂಜ್ಯನೀಯವಾಗಿತ್ತು. ವಿನಿಮಯದ ವಸ್ತುಗಳಲ್ಲೊಂದಾಗಿದ್ದು ಸುವರ್ಣಕ್ಕೆ ಸಮಾನವಾಗಿತ್ತು. ಅವುಗಳನ್ನು ಸೆರೆಹಿಡಿದು ಯುದ್ಧ ಸಾರಿದ ಸಂಕೇತವಾಗಿ ಬಳಸಲಾಗುತ್ತಿತ್ತು. ಈ ರೀತಿ ಸೆರೆ ಸಿಕ್ಕ ಗೋವುಗಳನ್ನು ಸಂರಕ್ಷಿಸಲು ಹೋಗಿ ಹೋರಾಡಿ ಮಡಿದ ವೀರರಿಗೆ ಸಂಬಂಧಿಸಿದ ವೀರಗಲ್ಲುಗಳೇ ತುರುಗೋಳ್‌ಗಳು.

೧೨. ಪೆಣ್ಣುಯ್ಯಲ್ : ಪೆಣ್ಣುಯ್ಯಲ್ ಎಂದರೆ ಹೆಣ್ಣಿನ ಆರ್ತಧ್ವನಿ. ನೆರೆರಾಜ್ಯದ ವೈರಿಗಳು ಕದನಕ್ಕೆ ಬಂದು ಹೆಣ್ಣುಮಕ್ಕಳ ಮಾನಭಂಗಕ್ಕೆ ಪ್ರಯತ್ನಿಸುತ್ತಿದ್ದರು. ಇಂತಹ ಪ್ರಸಂಗಗಳಲ್ಲಿ ವೀರನಾದವನು ಸ್ತ್ರೀಯರ ಮಾನರಕ್ಷಣೆಗಾಗಿ ಹೋರಾಡುತ್ತಿದ್ದನು. ಏರಿಬಂದ ವೈರಿಗಳು ಹೆಂಡಿರ ಮಾನಹರಣಕ್ಕೆ ಪ್ರಯತ್ನಿಸುತ್ತಿದ್ದುದನ್ನು ವೀರಗಲ್ಲು “ಪೆಂಡಿರ ಉಡೆಯರ್ಚುವಲ್ಲಿ” ಎಂಬ ಶಬ್ದದಿಂದ ಸೂಚಿಸುತ್ತದೆ. ಈ ರೀತಿಯ ಶಾಸನಗಳು ಅನೇಕ ಕಡೆ ಕಾಣಸಿಗುತ್ತವೆ.

೧೩. ಎಳಿವೆಸ : ಎಳವೆಸ ಎಂದರೆ ಒಡೆಯನ ಅಪ್ಪಣೆ ಎಂದರ್ಥ. ಆತನ ಉಪ್ಪಿನ ಋಣಕ್ಕಾಗಿ ಹೋರಾಡುವುದು ಇಲ್ಲಿಯ ಮುಖ್ಯ ಧೈಯವಾಗಿದೆ. ಎಳವೆಸ ಯುದ್ಧವಾಗಿದ್ದು ತರಬೇತು ಪಡೆದ ಸೈನ್ಯ ನಿರ್ವಹಿಸುವ ಈ ಸಂಘರ್ಷಣೆ ರಾಜ್ಯದ ಹಣೆಬರಹವನ್ನು ನಿರ್ಧರಿಸುತ್ತಿತ್ತು. ಇಂತಹ ಯುದ್ಧಗಳಲ್ಲಿ ಹೋರಾಡಿ ಮಡಿದವರ ನೆನಪಿಗೆ ನೆಟ್ಟ ವೀರಗಲ್ಲುಗಳೇ ‘ಎಜವೆಸ’ಗಳು. ಉದಾಹರಣೆಗೆ ಮಾವಳಿಯ ಶಾಸನ.

೧೪. ನಿಸಿದಿಗಲ್ಲು: ಸಮಾಧಿ ಮರಣ ಮತ್ತು ನಿಸಿದಿ ಹೊಂದುವ ಪದ್ಧತಿ ಪ್ರಾಚೀನ ಕಾಲದಿಂದಲೂ ಬೆಳದು ಬಂದ ಸಂಪ್ರದಾಯವಾಗಿದೆ. ಜೈನ ಸನ್ಯಾಸಿಗಳು ಮತ್ತು ಗೃಹಸ್ಥರು ಸನ್ಯಾಸನ ವಿಧಿಯಿಂದ ಅಥವಾ ಸಲ್ಲೇಖನ ವ್ರತದಿಂದ ಮರಣವನ್ನಪ್ಪಿದ್ದನ್ನು ಈ ನಿಸಿದಿಗಲ್ಲುಗಳು ತಿಳಿಸುತ್ತವೆ. ನಿಸಿದಿ ಅಥವಾ ನಿಷತ್ ಎಂದರೆ ಕುಳಿತಿರುವುದು ಎಂದರ್ಥ.

೧೫. ಯೂಪಶಾಸನ : ಯಾಗದ ಸಂದರ್ಭದಲ್ಲಿ ಬಲಿ ಕೊಡಲಿರುವ ಪಶುಗಳನ್ನು ಕಟ್ಟಿಹಾಕಲೆಂದು ನೆಟ್ಟಿರುವ ಕಂಬಗಳೇ ಯೂಪಸ್ತಂಭ ಅಥವಾ ಶಾಸನಗಳು.

೧೬. ಕೂಟಶಾಸನ : ಸ್ವಹಿತಾಸಕ್ತಿಗೆ ಹಾಕಿಸಿದ ಶಾಸನಗಳನ್ನು ಕೂಟಶಾಸನ ಎಂದು ಹೇಳಬಹುದು. ಕೂಟಶಾಸನದಲ್ಲಿ ಸುಳ್ಳು ದಾಖಲೆಗಳಿರುತ್ತವೆ. ಆದುದರಿಂದಲೇ ಇವುಗಳನ್ನು ಕೃತಕ ಶಾಸನಗಳೆಂದು ಕರೆಯುತ್ತಾರೆ. ಈ ಕೃತಕತೆಯನ್ನು ತಾಮ್ರಶಾಸನಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಯಾರದೋ ಆಸ್ತಿಯನ್ನು ಕಬಳಿಸುವ ಸಲುವಾಗಿ ಅಥವಾ ಅಧಿಕಾರ, ಅಂತಸ್ತನ್ನು ಗಳಿಸುವ ಸಲುವಾಗಿ ವಂಚನೆಯ ಉದ್ದೇಶವನ್ನು ಇವು ಹೊಂದಿರುತ್ತವೆ.

ಶಾಸನಶಾಸ್ತ್ರದ ವ್ಯಾಪ್ತಿ

ಪೀಠಿಕೆ : ಶಾಸನಶಾಸ್ತ್ರವು ಇತಿಹಾಸ ಮತ್ತು ಪುರಾತತ್ವಶಾಸ್ತ್ರದ ಪ್ರಮುಖ ಅಂಗವಾಗಿದ್ದು, ಕಲ್ಲು, ತಾಮ್ರಪತ್ರ, ಲೋಹ, ದೇವಾಲಯದ ಗೋಡೆಗಳು, ನಾಣ್ಯಗಳು ಮುಂತಾದ ದೀರ್ಘಕಾಲ ಉಳಿಯುವ ವಸ್ತುಗಳ ಮೇಲೆ ಕೆತ್ತಿದ ಅಥವಾ ಬರೆಯಲಾದ ಶಾಸನಗಳ ಅಧ್ಯಯನವನ್ನು ಒಳಗೊಂಡಿದೆ. ಶಾಸನಗಳು ಪ್ರಾಚೀನ ಕಾಲದ ನೇರ ಸಾಕ್ಷಿಗಳಾಗಿರುವುದರಿಂದ ಇತಿಹಾಸವನ್ನು ನಿಖರವಾಗಿ ಪುನರ್‌ನಿರ್ಮಿಸಲು ಅವು ಅತ್ಯಂತ ಮಹತ್ವದ್ದಾಗಿವೆ. ಶಾಸನಶಾಸ್ತ್ರದ ವ್ಯಾಪ್ತಿ ಕೇವಲ ಲಿಪಿ ಓದುವುದರಲ್ಲಿಯೇ ಸೀಮಿತವಾಗಿಲ್ಲ; ಅದು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಎಲ್ಲಾ ಆಯಾಮಗಳನ್ನು ಒಳಗೊಂಡಿದೆ.

1. ಲಿಪಿ ಮತ್ತು ಪಾಠ ಸಂಶೋಧನೆ(Script and Textual Criticism)

೧.ಲಿಪಿ ಶಾಸ್ತ್ರೀಯ ವಿಶ್ಲೇಷಣೆ:     ಶಾಸನಶಾಸ್ತ್ರದ ಪ್ರಾಥಮಿಕ ವ್ಯಾಪ್ತಿ ಲಿಪಿಗಳ ವೈಜ್ಞಾನಿಕ ಅಧ್ಯಯನವಾಗಿದೆ.ಬ್ರಾಹ್ಮಿ,ಖರೋಷ್ಟಿ ಮೊದಲಾದ ಲಿಪಿಗಳ ರೂಪವಿಕಾಸ, ಅಕ್ಷರಗಳ ಶೈಲಿ, ವೈಶಿಷ್ಟ್ಯ ಮತ್ತು ಪ್ರಾದೇಶಿಕ ಬದಲಾವಣೆಗಳನ್ನು ಅಧ್ಯಯನ ಮಾಡುವುದರಿಂದ ಕಾಲನಿರ್ಣಯ ಮತ್ತು ಸಾಂಸ್ಕೃತಿಕ ಸಂಪರ್ಕಗಳನ್ನು ಗುರುತಿಸಲಾಗುತ್ತದೆ. ಲಿಪಿಯ ರೂಪಾಂತರಗಳು ಕೇವಲ ಬರವಣಿಗೆಯ ಬದಲಾವಣೆಗಳಲ್ಲ; ಅವು ರಾಜಕೀಯ ಪ್ರಭಾವ, ವ್ಯಾಪಾರ ಸಂಪರ್ಕ ಮತ್ತು ಧಾರ್ಮಿಕ ಚಳವಳಿಗಳ ಸೂಚಕಗಳಾಗಿವೆ.

೨. ಪಾಠ ಸಂಶೋಧನೆ ಮತ್ತು ವಿಮರ್ಶೆ :   ಶಾಸನಗಳು ಬಹುಪಾಲು ಹಾನಿಗೊಳಗಾದ ಸ್ಥಿತಿಯಲ್ಲಿ ದೊರೆಯುತ್ತವೆ. ಅಕ್ಷರಗಳ ಕೊರತೆ, ಮಸಕಾದ ಭಾಗಗಳು ಅಥವಾ ಮುರಿದ ಭಾಗಗಳನ್ನು ವೈಜ್ಞಾನಿಕ ವಿಧಾನಗಳಿಂದ ಪುನರ್‌ನಿರ್ಮಿಸಿ ಮರು ಸ್ಥಾಪಿಸುವುದು ಶಾಸನಶಾಸ್ತ್ರದ ಪ್ರಮುಖ ಕಾರ್ಯವಾಗಿದೆ. ಇದರಲ್ಲಿ ಪಾಠಸಂಶೋಧನೆ (Textual Criticism), ಪಠ್ಯತೂಲನೆ ಮತ್ತು ಭಾಷಾಶಾಸ್ತ್ರೀಯ ವಿಶ್ಲೇಷಣೆ ಒಳಗೊಂಡಿವೆ.

2. ರಾಜಕೀಯ ರಚನೆ ಮತ್ತು ರಾಜ್ಯತತ್ವ

೧. ಅಧಿಕಾರ ಮತ್ತು ಧರ್ಮದ ಸಂಬಂಧ     

ಶಾಸನಗಳು ರಾಜಕೀಯ ಪ್ರಚಾರದ ಸಾಧನಗಳಾಗಿಯೂ ಕಾರ್ಯನಿರ್ವಹಿಸುತ್ತವೆ. ಉದಾಹರಣೆಗೆ ಅಶೋಕನ ಧಮ್ಮಶಾಸನಗಳು ರಾಜಕೀಯ ಆಡಳಿತ ಮತ್ತು ನೈತಿಕ ತತ್ವಗಳನ್ನು ಒಟ್ಟುಗೂಡಿಸುತ್ತವೆ. ಇದರಿಂದ ರಾಜ್ಯ ಮತ್ತು ಧರ್ಮದ ಸಂಬಂಧದ ಬಗ್ಗೆ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

೨. ಸಾಮ್ರಾಜ್ಯ ಮತ್ತು ಪ್ರಾದೇಶಿಕತೆ:  ಸಮುದ್ರಗುಪ್ತನ ಪ್ರಶಸ್ತಿ ಶಾಸನವು ಸಾಮ್ರಾಜ್ಯ ವಿಸ್ತರಣೆ ಮತ್ತು ರಾಜಕೀಯ ಮಾನ್ಯತೆಯ ಸ್ಥಾಪನೆಯ ಉದಾಹರಣೆಯಾಗಿದೆ. ಇಂತಹ ಶಾಸನಗಳು ಕೇಂದ್ರ ಮತ್ತು ಪ್ರಾಂತೀಯ ಆಡಳಿತದ ಸಂಬಂಧವನ್ನು ವಿಶ್ಲೇಷಿಸಲು ಸಹಕಾರಿ. ಅವು ರಾಜಕೀಯ ಪ್ರಭುತ್ವದ ಭಾಷೆಯನ್ನು ಅನಾವರಣಗೊಳಿಸುತ್ತವೆ.

3. ಸಾಮಾಜಿಕ ಇತಿಹಾಸ ಮತ್ತು ರಚನೆ

೧. ಸಾಮಾಜಿಕ ವರ್ಗೀಕರಣ : ಶಾಸನಗಳು ವರ್ಣ, ಜಾತಿ, ವೃತ್ತಿ ಮತ್ತು ಸಮುದಾಯಗಳ ವಿವರಗಳನ್ನು ನೀಡುತ್ತವೆ. ಇವುಗಳಿಂದ ಸಮಾಜದ ರಚನೆ, ಅಧಿಕಾರದ ಹಂಚಿಕೆ ಮತ್ತು ಸಾಮಾಜಿಕ ಚಲನೆಗಳ ವಿಶ್ಲೇಷಣೆ ಸಾಧ್ಯವಾಗುತ್ತದೆ. ಶಾಸನಗಳು ಸಮಾಜದ ವಾಸ್ತವಿಕ ಸ್ಥಿತಿಯನ್ನು ಪ್ರತಿಬಿಂಬಿಸುವ ಮೂಲಗಳಾಗಿವೆ.

೨. ಮಹಿಳಾ ಸ್ಥಾನಮಾನದ ಅಧ್ಯಯನ : ಮಹಿಳೆಯರು ದಾನಿಗಳಾಗಿ ಅಥವಾ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ ಉದಾಹರಣೆಗಳು ಶಾಸನಗಳಲ್ಲಿ ಕಂಡುಬರುತ್ತವೆ. ಇದರಿಂದ ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಸ್ವಾಯತ್ತತೆ ಕುರಿತು ವಿಶ್ಲೇಷಣಾತ್ಮಕ ಅಧ್ಯಯನ ನಡೆಸಬಹುದು.

4. ಆರ್ಥಿಕ ವ್ಯವಸ್ಥೆ ಮತ್ತು ಉತ್ಪಾದನಾ ಸಂಬಂಧಗಳು

 ೧. ಭೂಸ್ವಾಮ್ಯ ಮತ್ತು ದಾನಪದ್ಧತಿ : ತಾಮ್ರಪತ್ರ ಶಾಸನಗಳು ಭೂದಾನ ಮತ್ತು ತೆರಿಗೆ ವಿನಾಯಿತಿಗಳ ಕುರಿತು ವಿವರಗಳನ್ನು ಒದಗಿಸುತ್ತವೆ. ಇದರಿಂದ ಭೂಸ್ವಾಮ್ಯ, ಕೃಷಿ ಉತ್ಪಾದನೆ ಮತ್ತು ರಾಜಸ್ವ ವ್ಯವಸ್ಥೆಯ ಸ್ವರೂಪವನ್ನು ಅಧ್ಯಯನ ಮಾಡಬಹುದು. ಭೂದಾನವು ರಾಜಕೀಯ ಅಧಿಕಾರದ ಮಾನ್ಯತೆಯ ಸಾಧನವಾಗಿಯೂ ಕಾರ್ಯನಿರ್ವಹಿಸಿದೆ.

೨.ವ್ಯಾಪಾರ ಮತ್ತು ನಾಣ್ಯಚಲಾವಣೆ :  ಶಾಸನಗಳಲ್ಲಿ ವ್ಯಾಪಾರ ಸಂಘಗಳು, ಮಾರ್ಗಗಳು ಮತ್ತು ನಾಣ್ಯಗಳ ಉಲ್ಲೇಖಗಳು ದೊರೆಯುತ್ತವೆ. ಇವುಗಳಿಂದ ಆಂತರಿಕ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಜಾಲವನ್ನು ವಿಶ್ಲೇಷಿಸಲು ಸಾಧ್ಯವಾಗುತ್ತದೆ. ಆರ್ಥಿಕ ಇತಿಹಾಸದ ಪುನರ್‌ನಿರ್ಮಾಣದಲ್ಲಿ ಶಾಸನಗಳು ಪ್ರಮುಖ ಪಾತ್ರವಹಿಸುತ್ತವೆ.

5. ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಿವರ್ತನೆ

೧. ಧಾರ್ಮಿಕ ಬಹುಮುಖತೆ : ಬೌದ್ಧ, ಜೈನ ಮತ್ತು ವೈದಿಕ ಪರಂಪರೆಗಳ ವಿಸ್ತಾರವನ್ನು ಶಾಸನಗಳು ದಾಖಲಿಸುತ್ತವೆ. ಧಾರ್ಮಿಕ ದಾನಗಳು ಮತ್ತು ಮಠಗಳ ಸ್ಥಾಪನೆಗಳು ಧಾರ್ಮಿಕ ಸಹಿಷ್ಣುತೆ ಮತ್ತು ಸಂಸ್ಕೃತಿಯ ವಿನಿಮಯದ ಸೂಚಕಗಳಾಗಿವೆ.

೨. ಕಲಾ ಮತ್ತು ವಾಸ್ತುಶಿಲ್ಪ:     ದೇವಾಲಯ ನಿರ್ಮಾಣ, ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಆಚರಣೆಗಳ ಕುರಿತು ಶಾಸನಗಳು ಮಾಹಿತಿಯನ್ನು ನೀಡುತ್ತವೆ. ಇವುಗಳಿಂದ ಸಾಂಸ್ಕೃತಿಕ ಇತಿಹಾಸದ ಆಳವಾದ ಅಧ್ಯಯನ ಸಾಧ್ಯವಾಗುತ್ತದೆ.

6. ಭೂಗೋಳ ಮತ್ತು ಕಾಲಸಂರಚನೆ

೧. ಐತಿಹಾಸಿಕ ಭೂಗೋಳ : ಶಾಸನಗಳಲ್ಲಿ ಉಲ್ಲೇಖಿತವಾದ ಸ್ಥಳನಾಮಗಳು, ನದಿಗಳು ಮತ್ತು ಪ್ರದೇಶಗಳ ಆಧಾರದ ಮೇಲೆ ಪ್ರಾಚೀನ ಭೂಗೋಳವನ್ನು ಪುನರ್‌ನಿರ್ಮಿಸಲು ಸಾಧ್ಯವಾಗುತ್ತದೆ. ಇದು ಇತಿಹಾಸ ಮತ್ತು ಭೂಗೋಳಶಾಸ್ತ್ರದ ಸಂಯೋಜಿತ ಅಧ್ಯಯನಕ್ಕೆ ದಾರಿ ಮಾಡಿಕೊಡುತ್ತದೆ.

೨. ಕಾಲನಿ‌ರ್ಣಯ ಮತ್ತು ಇತಿಹಾಸ ನಿರ್ಮಾಣ :  ಶಾಸನಗಳಲ್ಲಿ ನೀಡಿರುವ ಸಂವತ್ಸರ, ತಿಥಿ ಮತ್ತು ರಾಜರ ಆಡಳಿತ ವರ್ಷಗಳ ಆಧಾರದ ಮೇಲೆ ಘಟನೆಗಳ ಕಾಲವನ್ನು ನಿಖರವಾಗಿ ನಿರ್ಧರಿಸಲಾಗುತ್ತದೆ. ಕಾಲಸಂರಚನೆ ಇತಿಹಾಸದ ವೈಜ್ಞಾನಿಕ ಅಧ್ಯಯನಕ್ಕೆ ಅತ್ಯಾವಶ್ಯಕವಾಗಿದೆ.

ಉಪಸಂಹಾರ :       ಶಾಸನಶಾಸ್ತ್ರವು ಕೇವಲ ಸಹಾಯಕ ಶಾಸ್ತ್ರವಲ್ಲ; ಅದು ಇತಿಹಾಸದ ಮೂಲಾಧಾರವಾಗಿದೆ. ಶಾಸನಗಳು ಸಮಕಾಲೀನ ದಾಖಲೆಗಳಾಗಿರುವುದರಿಂದ ಅವು ಇತಿಹಾಸದ ವೈಜ್ಞಾನಿಕ ಪುನರ್‌ನಿರ್ಮಾಣಕ್ಕೆ ನಂಬಲರ್ಹ ಮೂಲಗಳಾಗಿವೆ. ಲಿಪಿ, ಭಾಷೆ, ರಾಜಕೀಯ, ಸಮಾಜ, ಆರ್ಥಿಕತೆ ಮತ್ತು ಸಂಸ್ಕೃತಿಯ ಎಲ್ಲಾ ಆಯಾಮಗಳನ್ನು ಒಳಗೊಂಡಿರುವ ಶಾಸನಶಾಸ್ತ್ರವು ಇತಿಹಾಸಶಾಸ್ತ್ರದ ಬಹುಮುಖ ಮತ್ತು ವಿಶ್ಲೇಷಣಾತ್ಮಕ ಕ್ಷೇತ್ರವಾಗಿದೆ.

ಭಾರತದ ಪ್ರಮುಖ ಶಾಸನಗಳು

1. ಅಶೋಕನ ಮಸ್ಕಿ,ಸನ್ನತಿ,ಗಿರ್‌ನಾರ್ ಶಾಸನಗಳು

2. ಸೋಹಗೌರ ಶಾಸನ,ಉತ್ತರ ಪ್ರದೇಶ

3. ಪರಾಂತಕನ ಉತ್ತರ ಮೆರೂರು ಶಾಸನ

4.ಕ್ಷತ್ರಪ ನಹಪಾನನ ನಾಸಿಕ್‌ ಶಾಸನ

5.ಮಥುರಾದ ಹುವಿಷ್ಕನ ಶಾಸನ

6. ಬನವಾಸಿಯ ಚುಟು ಅರಸರ ಶಾಸನ

7. ಸಮುದ್ರಗುಪ್ತನ ಅಲಹಾಬಾದ್‌ ಶಾಸನ

8.ಶ್ರವಣಬೆಳಗೊಳದ ಶಾಸನಗಳು

9. ಕಾಕುತ್ಸವರ್ಮನ ಹಲ್ಮಿಡಿಯ ಶಾಸನ

10.ಗುಡ್ನಾಪುರದ ಕದಂಬ ರವಿವರ್ಮನ ಸ್ತಂಭ ಶಾಸನ

11.ಬೋರ್ನಿಯೋದ ಪೂರ್ಣವರ್ಮನ ಶಾಸನ

12.ಹೊಯ್ಸಳರ ದ್ವಾರಸಮುದ್ರದ ಶಾಸನಗಳು

13. ವಿಜಯನಗರದ ಹಂಪಿಯ ಶಾಸನಗಳು

ಶಾಸನಾಧ್ಯಯನದ ಮಹತ್ವ 

1. ರಾಜಕೀಯ ಇತಿಹಾಸದ ಪ್ರಾಮಾಣಿಕ ಮೂಲಗಳು

  • ಶಾಸನಗಳು ಭಾರತದ ರಾಜರು, ಯುದ್ಧಗಳು, ಜಯಗಳಿಸಿದ ರಾಜ್ಯಗಳು ಮತ್ತು ಆಡಳಿತ ಕ್ರಮಗಳ ಬಗ್ಗೆ ನೇರವಾದ ಮಾಹಿತಿಯನ್ನು ನೀಡುತ್ತವೆ.
  • ಸಮುದ್ರಗುಪ್ತನ ಅಲಹಾಬಾದ್ ಪ್ರಶಸ್ತಿ ಶಾಸನವಿಲ್ಲದಿದ್ದರೆ ಆ ಕಾಲದ ರಾಜಕೀಯ ಸ್ಥಿತಿಯನ್ನು ತಿಳಿಯಲು ಸಾಧ್ಯವಿರಲಿಲ್ಲ.
  • ರುದ್ರದಾಮನನ ಜುನಾಗಢ ಶಾಸನವು ಆ ಕಾಲದ ರಾಜಕೀಯ ಮತ್ತು ಸಾರ್ವಜನಿಕ ಕಾಮಗಾರಿಗಳನ್ನು ವಿವರಿಸುತ್ತದೆ.
  • ಶಾಸನಗಳು ರಾಜವಂಶಗಳ ವಂಶಾವಳಿ ಹಾಗೂ ಆಡಳಿತ ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ.

2. ಸಾಮಾಜಿಕ ಜೀವನದ ಪ್ರತಿಬಿಂಬ

  • ವಿವಾಹ ಪದ್ಧತಿ, ಕನ್ಯಾಶುಲ್ಕ–ವರದಕ್ಷಿಣೆ ನಿಷೇಧ, ಧಾರ್ಮಿಕ ವಿವಾದಗಳ ಪರಿಹಾರ ಮುಂತಾದ ವಿಷಯಗಳು ಶಾಸನಗಳಲ್ಲಿ ದೊರೆಯುತ್ತವೆ.
  • ರಾಜರು ಸಾಮಾಜಿಕ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಕೈಗೊಂಡಿದ್ದಾರೆಂಬುದು ತಿಳಿದುಬರುತ್ತದೆ.
  • ಸಹಗಮನ (ಸತಿ), ಮೆರವಣಿಗೆ ಸವಾರಿ ಮುಂತಾದ ಆಚಾರ–ವಿಚಾರಗಳ ಮಾಹಿತಿಯೂ ಲಭ್ಯವಾಗುತ್ತದೆ.
  • ವಿವಿಧ ಪ್ರಾಂತಗಳ ಜನರು ಪರಸ್ಪರ ವಿವಾಹ ಸಂಬಂಧ ಬೆಳೆಸಿಕೊಂಡಿದ್ದ ಉದಾಹರಣೆಗಳು ರಾಷ್ಟ್ರೀಯ ಏಕತೆಯನ್ನು ತೋರಿಸುತ್ತವೆ.

3. ಆರ್ಥಿಕ ಸ್ಥಿತಿಗತಿಗಳ ಮಾಹಿತಿ

  • ಕೃಷಿಯೇ ಮುಖ್ಯ ಜೀವನೋಪಾಯವಾಗಿದ್ದುದನ್ನು ಶಾಸನಗಳು ದೃಢಪಡಿಸುತ್ತವೆ.
  • ನೀರಾವರಿ ವ್ಯವಸ್ಥೆಗೆ ಮಹತ್ವ ನೀಡಲಾಗಿದೆ (ಉದಾ: ಸುದರ್ಶನ ಕೆರೆ).
  • ತೆರಿಗೆ ಪದ್ಧತಿ – ಇರೈ, ಕಡಮೆ, ವೆಟ್ಟಿ ಮುಂತಾದ ತೆರಿಗೆಗಳ ಉಲ್ಲೇಖ.
  • ವ್ಯಾಪಾರ ಸಂಘಗಳು – ಅಯ್ಯಾವೋಳೆ ಐನೂರ್ವರು ಮುಂತಾದ ವಣಿಕಸಂಘಗಳ ಚಟುವಟಿಕೆ.
  • ತೂಕ ಮತ್ತು ಅಳತೆ ವ್ಯವಸ್ಥೆಗಳ ವಿವರ.

4. ಧಾರ್ಮಿಕ ಬೆಳವಣಿಗೆಗಳ ಸಾಕ್ಷ್ಯ

  • ಹೆಲಿಯೋಡೋರಸ್‌ನ ಬೆಸ್‌ನಗರ ಗರುಡಸ್ತಂಭ ಶಾಸನವು ಭಾಗವತ ಧರ್ಮದ ಪ್ರಸಾರವನ್ನು ತೋರಿಸುತ್ತದೆ.
  • ಸೂರ್ಯೋಪಾಸನೆ, ವೈದಿಕ ಆಚರಣೆಗಳು ಮತ್ತು ದೇವಾಲಯ ಜೀರ್ಣೋದ್ಧಾರಗಳ ಉಲ್ಲೇಖ.
  • ವಿವಿಧ ಧರ್ಮಗಳು ಸಹಬಾಳ್ವೆಯಿಂದ ಇದ್ದುದಕ್ಕೆ ಸಾಕ್ಷ್ಯ.

5. ಆಡಳಿತ ವ್ಯವಸ್ಥೆಯ ವಿವರಗಳು

  • ಒಂದನೇ ಪರಾಂತಕನ ಕಾಲದ ಉತ್ತರಮೇರೂರಿನ ಶಾಸನದಲ್ಲಿ ಗ್ರಾಮಸಭೆಯ ಚುನಾವಣಾ ವಿಧಾನಗಳ ವಿವರಗಳಿವೆ.
  • ಪ್ರಕೃತಿ ವಿಕೋಪಗಳ ಸಮಯದಲ್ಲಿ ಜನರಿಗೆ ನೆರವು ನೀಡಿದ ವಿವರಗಳು (ಮಹಾಸ್ಥಾನ ಶಾಸನ).
  • ಶಾಸನಗಳು ಸ್ಥಳೀಯ ಆಡಳಿತ ವ್ಯವಸ್ಥೆಯ ಪ್ರಾಚೀನತೆಯನ್ನು ತೋರಿಸುತ್ತವೆ.

6. ಶಿಕ್ಷಣದ ಬೆಳವಣಿಗೆ

  • ತಿರುಮುಕೂಡಲ್, ಎಣ್ಣಾಯರಂ ಮುಂತಾದ ಸ್ಥಳಗಳ ಶಾಸನಗಳಲ್ಲಿ ವಿದ್ಯಾಲಯಗಳ ಉಲ್ಲೇಖ.
  • ಶಿಕ್ಷಕರ ವೇತನ, ಪಠ್ಯ ವಿಷಯಗಳು ಮತ್ತು ವಿದ್ಯಾರ್ಥಿಗಳ ಮಾಹಿತಿ ದೊರೆಯುತ್ತದೆ.
  • ಶಿಕ್ಷಣವು ಸಂಘಟಿತ ಹಾಗೂ ಪ್ರೋತ್ಸಾಹಿತ ವ್ಯವಸ್ಥೆಯಾಗಿತ್ತು ಎಂಬುದು ತಿಳಿಯುತ್ತದೆ.

7. ಕಲೆ ಮತ್ತು ಸಾಹಿತ್ಯದ ಸಾಕ್ಷ್ಯ

  • ಜೋಗಿಮಾರಾ ಗುಹಾ ಶಾಸನದಲ್ಲಿ ನರ್ತಕಿಯ ಉಲ್ಲೇಖ – ನೃತ್ಯಕಲೆಯ ಪ್ರಾಚೀನತೆ.
  • ಕುಡಿಮಿಯಾಮಲೈ ಶಾಸನದಲ್ಲಿ ಸಂಗೀತದ ಉಲ್ಲೇಖ.
  • ಸಂಸ್ಕೃತ ಕಾವ್ಯಶೈಲಿಯ ಬೆಳವಣಿಗೆ (ಉದಾ: ಜುನಾಗಢ ಶಾಸನ).
  • ಶಾಸನಗಳಲ್ಲಿ ಛಂದಸ್ಸು, ಅಲಂಕಾರ ಶೈಲಿ ಕಂಡುಬರುತ್ತದೆ.

8. ಭೌಗೋಳಿಕ ಮತ್ತು ಸಾಂಸ್ಕೃತಿಕ ವ್ಯಾಪ್ತಿ

  • ಕರ್ನಾಟಕದ ಹೆರಗು ಶಾಸನದಲ್ಲಿ ಕಾಶ್ಮೀರ ಮೂಲದ ಕುಟುಂಬದ ವಲಸೆ ಉಲ್ಲೇಖ.
  • ಜಾವಾ, ಸುಮಾತ್ರಾ, ಬೋರ್ನಿಯೋ ಪ್ರದೇಶಗಳಲ್ಲಿ ದೊರೆತ ಭಾರತೀಯ ಪ್ರಭಾವದ ಶಾಸನಗಳು ಭಾರತೀಯ ಸಂಸ್ಕೃತಿಯ ವಿಸ್ತಾರವನ್ನು ತೋರಿಸುತ್ತವೆ.
  • ವಿದೇಶಗಳೊಂದಿಗೆ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಪರ್ಕದ ಸಾಕ್ಷ್ಯ.

ಉಪಸಂಹಾರ

ಶಾಸನಗಳು ಭಾರತೀಯ ಇತಿಹಾಸದ ಅತ್ಯಂತ ವಿಶ್ವಾಸಾರ್ಹ ಮತ್ತು ಪ್ರಾಥಮಿಕ ಮೂಲಗಳಾಗಿವೆ. ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶಿಕ್ಷಣ, ಕಲೆ ಮತ್ತು ಆಡಳಿತ ಕ್ಷೇತ್ರಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡುವ ಮೂಲಕ ಅವು ನಮ್ಮ ಭೂತಕಾಲದ ನಿಖರ ಚಿತ್ರಣವನ್ನು ಕೊಡುತ್ತವೆ..