ಪೀಠಿಕೆ :

ವಿಶ್ವದ ಅತ್ಯಂತ ಪ್ರಾಚೀನ ಮತ್ತು ಪ್ರಮುಖ ನಾಗರೀಕತೆಗಳಲ್ಲಿ ಹರಪ್ಪದ ನಾಗರೀಕತೆಯು ಒಂದು. ಭೂಮಿಯ ಗರ್ಭದಲ್ಲಿ ಹುದುಗಿಕೊಂಡಿದ್ದ ಈ ನಾಗರೀಕತೆಯು 1921-22ರಲ್ಲಿ ಸಂಶೋಧಿಸಲ್ಪಟ್ಟಿತು. ಇದರಿಂದಾಗಿ ಭಾರತವು ನಾಗರೀಕತೆಯ ತೊಟ್ಟಿಲು ರಾಷ್ಟ್ರವಾಗಿತ್ತು ಎಂಬುದು ತಿಳಿದುಬರುತ್ತದೆ. ಹರಪ್ಪ ಸಂಸ್ಕೃತಿಯು ಬೆಳಕಿಗೆ ಬಂದದ್ದರಿಂದ ಭಾರತವು ಅನಾಗರೀಕ ರಾಷ್ಟ್ರವೆಂಬ ವಿದೇಶಿಯರ ಅಭಿಪ್ರಾಯ ಹುಸಿಗೊಂಡಿತು. ಹರಪ್ಪ ಸಂಸ್ಕೃತಿಯ ವಿಶಿಷ್ಟವಾದ ಒಂದು ಸಂಸ್ಕೃತಿಯಾಗಿದ್ದು ಸಮಕಾಲೀನ ನಾಗರೀಕತೆಗಳಿಗಿಂತ ವಿಶಿಷ್ಟವಾದ ಲಕ್ಷಣಗಳನ್ನು ಒಳಗೊಂಡಿದೆ. ಹರಪ್ಪ ಸಂಸ್ಕೃತಿಯ ಸಂಶೋಧನೆಯೊಂದಿಗೆ ಸುಮಾರು 3000 ವರ್ಷಗಳಿಗೂ ಹಿಂದೆಯೇ ಭಾರತವು ವ್ಯವಸ್ಥಿತವಾದ ಜನಜೀವನವನ್ನು ಹೊಂದಿದ್ದ ನಾಡಾಗಿತ್ತೆಂದು ತಿಳಿದುಬರುತ್ತದೆ.

ಹರಪ್ಪ ಸಂಸ್ಕೃತಿಯ ಸಂಶೋಧನೆ :

ಹರಪ್ಪಾ ಸಂಸ್ಕೃತಿಯು ಬೆಳಕಿಗೆ ಬಂದದ್ದು ಒಂದು ಆಶ್ಚರ್ಯಕರ ಸಂಗತಿಯಾಗಿದೆ. ಭಾರತದಲ್ಲಿನ ಆಂಗ್ಲ ಸರ್ಕಾರವು 1856ರಲ್ಲಿ ರೈಲ್ವೆ ರಸ್ತೆಯ ನಿರ್ಮಾಣ ಕಾರ್ಯದಲ್ಲಿ ನಿರತವಾಗಿದ್ದಾಗ ಸುಟ್ಟ ಇಟ್ಟಿಗೆಗಳು ಸಿಂದ್ ಪ್ರದೇಶದಲ್ಲಿ ದೊರೆತವು. ಕ್ರಿ.ಶ 1862 ರಲ್ಲಿ ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್ ಹರಪ್ಪದ ಬಳಿ ಕೆಲವು ಮುದ್ರೆಗಳನ್ನು ಪತ್ತೆ ಹಚ್ಚಿದರು. ಇದೇ ವೇಳೆಯಲ್ಲಿ ಬ್ರಿಟೀಷ್ ಸರ್ಕಾರವು ಸಂಶೋಧನೆಗಾಗಿ 2.5ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿತು. ಇದು ಸಂಶೋಧನಾ ಕಾರ್ಯ ಚುರುಕುಗೊಳ್ಳಲು ಕಾರಣವಾಯಿತು. ಇದೇ ವೇಳೆಯಲ್ಲಿ ದಯಾರಾಂ ಸಹನಿ 1921-22ರಲ್ಲಿ ಹರಪ್ಪದಲ್ಲಿ, ಆ‌ರ್.ಡಿ. ಬ್ಯಾನರ್ಜಿ 1922-23ರಲ್ಲಿ ಮೆಹೆಂಜೋದಾರೋವಿನಲ್ಲಿ ನಡೆಸಿದ ಉತ್ಖನನದ ಫಲವಾಗಿ ಸಂಶೋಧನಾ ಕಾರ್ಯಕ್ಕೆ ಹೆಚ್ಚು ಚಾಲನೆ ದೊರೆಯಿತು.

ಹರಪ್ಪ ಸಂಸ್ಕೃತಿಯ ಕಾಲಮಾನ :

ಸರ್‌ಜಾನ್ ಮಾರ್ಷಲ್ ರವರ ಪ್ರಕಾರ – ಕ್ರಿ.ಪೂ 3250-2750,

ಮಾರ್ಟಿಮರ್ ವೀಲರ್ ಕ್ರಿ.ಪೂ – 2500-1500,

ವತ್ಸರ ಪ್ರಕಾರ ಕ್ರಿ.ಪೂ  – 3500 ಕ್ಕೂ ಮುಂಚಿತವಾಗಿ ಈ ನಾಗರೀಕತೆ ಬೆಳೆದಿದೆ.

ಹರಪ್ಪ ಸಂಸ್ಕೃತಿಯ ವಿಭಿನ್ನ ಹೆಸರುಗಳು :

ಹರಪ್ಪ ನಾಗರೀಕತೆಯನ್ನು ವಿವಿಧ ಹೆಸರುಗಳಿಂದ ಕರೆಯುತ್ತಾರೆ. ಅವುಗಳೆಂದರೆ : ಸಿಂಧೂಬಯಲಿನ ನಾಗರೀಕತೆ

ಇಂಡೋ-ಸುಮೇರಿಯನ್ ನಾಗರೀಕತೆ

ಚಾಲ್ಕೋಲಿಥಿಕ್ ಸಂಸ್ಕೃತಿ

ಪ್ರಾಗ್ಭಾರತೀಯ ಸಂಸ್ಕೃತಿ-ಹೀಗೆ ವಿಭಿನ್ನ ಹೆಸರುಗಳಿವೆ.

ನಾಗರೀಕತೆಯ ಜನಾಂಗ :

ಹರಪ್ಪ ಸಂಸ್ಕೃತಿಯ ನಿರ್ಮಾತೃಗಳು ಯಾರು ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ದಸ್ಯುಗಳು ಅಥವಾ ದ್ರಾವಿಡರು ಈ ನಾಗರೀಕತೆಯ ನಿರ್ಮಾತೃಗಳೆಂದು ಅಭಿಪ್ರಾಯ ಪಡಲಾಗಿದೆ. ಆದರೆ ಸಂಶೋಧನೆಯ ಕಾಲದಲ್ಲಿ ಆಸ್ಟ್ರೋಲಾಯ್ಡ್-ಮಂಗೋಲಿಯನ್ ಮೊದಲಾದ ಬುಡಕಟ್ಟಿನ ಜನಾಂಗಗಳ ಅವಶೇಷಗಳು ದೊರೆತಿವೆ.

ಪ್ರಮುಖ ನಿವೇಶನಗಳು

ಸಿಂಧೂ ಸಂಸ್ಕೃತಿಯ ಸಂಶೋಧನೆಯಿಂದ ಇದುವರೆಗೆ ಸುಮಾರು 300 ನಿವೇಶನಗಳ ಸ್ಥಳಗಳನ್ನು ಪತ್ತೆ ಹಚ್ಚಲಾಗಿದೆ. ಹಲವು ಪ್ರಮುಖ ನಗರಗಳು ಬೆಳಕಿಗೆ ಬಂದಿವೆ. ಅಂತಹ ನಗರಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ಅರಿಯುವುದು ಅಗತ್ಯವೆನಿಸುತ್ತದೆ.

1) ಹರಪ್ಪ : ಇದು ಹರಪ್ಪ ನಾಗರೀಕತೆಯ ಕಾಲದ ಒಂದು ಪ್ರಮುಖ ನಿವೇಶನ ಪ್ರಾರಂಭದಲ್ಲಿ ಪತ್ತೆ ಹಚ್ಚಿದ ವಿಶಾಲವಾದ ನಿವೇಶನವೂ ಇದೇ ಆಗಿದೆ. ಈ ನಿವೇಶನವು ಪಂಜಾಬಿನ ಮಾಂಟೆಗೋಮರಿ ಜಿಲ್ಲೆಯಲ್ಲಿದೆ. 1921 ರಲ್ಲಿ ಡಾ|| ದಯಾರಾಂ ಸಹನಿಯವರು ಪ್ರಥಮ ಉತ್ಖನನ ನಡೆಸಿದರು. ಆನಂತರ ಹೆಚ್ಚಿನ ಸಂಶೋಧನೆಯನ್ನು ಎಂ.ಎಸ್ ವತ್ಸ 1923 ರಿಂದ 34 ರ ಅವಧಿಯಲ್ಲು, ಕೆ.ಎನ್ ದೀಕ್ಷಿತ್ 1940ರಲ್ಲು, ಸರ್‌ಮಾರ್ಟಿಮರ್ ವೀಲರ್ 1962ರಲ್ಲು ಕೈ ಗೊಂಡರು. ಇದೊಂದು ಪ್ರಮುಖ ನಗರವಾಗಿದ್ದು, ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಹರಪ್ಪ ಸಂಸ್ಕೃತಿಯೆಂದೇ ಹೆಸರಿಸಲಾಗಿದೆ.

2) ಮೆಹೆಂಜೋದಾರೋ (ಮಡಿದವರ ದಿಬ್ಬ) : ಸಂಶೋಧನೆಯ ಕಾಲದಲ್ಲಿ ದೊರೆತ ಮತ್ತೊಂದು ಪ್ರಮುಖ ನಿವೇಶನ ಮೆಹೆಂಜೋದಾರೋ. ಇದು ಇಂದು ಪಾಕಿಸ್ಥಾನದ ಸಿಂದ್ ಪ್ರಾಂತ್ಯದ ಲರ್ಕಾನ ಜಿಲ್ಲೆಯಲ್ಲಿದೆ. ಹರಪ್ಪ ಮತ್ತು ಮೆಹೆಂಜೋದಾರೋಗಳ ಮಧ್ಯ 640 ಕಿ.ಮೀ ಅಂತರವಿದೆ. ಮೆಹೆಂಜೋದಾರೋ ಎಂಬ ಪದದ ಅರ್ಥ- ʻಮಡಿದವರ ದಿಬ್ಬ’, ಮೆಹೆಂಜೋದಾರೋವನ್ನು ಉತ್ಖನನ ಮಾಡಿದವರು ಸರ್‌ಜಾನ್‌ ಮಾರ್ಷಲ್ ಮತ್ತು ಮೆಕೆರವರು. 1927 ರಿಂದ 31ರ ಅವಧಿಯಲ್ಲಿ ಮಹೆಂಜೋದಾರೋವಿನಲ್ಲಿ ಹೆಚ್ಚಿನ ಸಂಶೋಧನಾ ಕಾರ್ಯ ನಡೆಸಿದ ಕೀರ್ತಿ ಸರ್‌ಮಾರ್ಟಿಮರ್ ವೀಲರ್ ಮತ್ತು ಜಾರ್ಜ ಎಫ್ ಡೇಲ್ಸ್‌ ರವರಿಗೆ ಸಲ್ಲುತ್ತದೆ.

3) ಲೋಥಾಲ್ : ಹರಪ್ಪ ಸಂಸ್ಕೃತಿಯ ಕಾಲದ ಮತ್ತೊಂದು ಪ್ರಮುಖ ನಿವೇಶನ ಲೋಥಾಲ್. ಇದು ಸಾಬರಮತಿಯ ಉಪನದಿಯ ತಗ್ಗು ಪ್ರದೇಶದಲ್ಲಿದೆ. ಆಹ್ಮದಾಬಾದಿನ ನೈರುತ್ಯಕ್ಕೆ 80 ಕಿ.ಮೀ ದೂರವಿರುವ ಲೋಥಾಲ್ ಒಂದು ತೀರ ಪ್ರದೇಶದ ನಗರವಾಗಿದೆ. ಎಸ್.ಆರ್.ರಾವ್‌ ರವರು ಪ್ರಾಕ್ತನಾಶಾಸ್ತ್ರ ಇಲಾಖೆಯ ತಂಡದೊಂದಿಗೆ 1959 ರಿಂದ 1962 ರವರೆಗೆ ಸಂಶೋಧನಾಕಾರ್ಯ ಕೈಗೊಂಡಿದ್ದರು. ಲೋಥಾಲ್ ಸಿಂದೂಕೊಳ್ಳದ ಸಂಸ್ಕೃತಿಯ ಹಡಗುಕಟ್ಟೆಯ ಪ್ರಮುಖ ಕೇಂದ್ರವಾಗಿತ್ತು. ತೀರಪ್ರದೇಶವಾದ ಕಾರಣ ನಗರದ ರಕ್ಷಣೆಗಾಗಿ ಸುತ್ತಲೂ ಇಟ್ಟಿಗೆಯ ಗೋಡೆಯನ್ನು ನಿರ್ಮಿಸಲಾಗಿದೆ. ಲೋಥಾಲ್ ಹೆಸರಾಂತ ಬಂದರಾಗಿದ್ದು ಮಣಿಗಳ ತಯಾರಿಕೆಯ ಕೇಂದ್ರವೂ ಆಗಿತ್ತು.

4) ಕಾಲಿಬಂಗನ್ : ಸರಸ್ವತಿ ನದಿಯ ಬಲದಂಡೆಯ ಮೇಲಿರುವ ನಿವೇಶನವಾಗಿದೆ. ರಾಜಸ್ಥಾನದ ಗಂಗಾನಗರ ಜಿಲ್ಲೆಯಲ್ಲಿ ಬರುವ ಈ ನಿವೇಶನವನ್ನು ಘೋಷ್‌ ರವರು 1953ರಲ್ಲಿ ಪತ್ತೆಹಚ್ಚಿದರು. 1961 ರಿಂದ 1969ರ ಅವಧಿಯಲ್ಲಿ ಬಿ.ಬಿ.ಲಾಲ್ ಮತ್ತು ಥಾಪರ್‌ರವರು ಹೆಚ್ಚಿನ ಸಂಶೋಧನೆ ಮಾಡಿದ್ದಾರೆ. ಈ ನಗರದಲ್ಲಿ ದೊರೆತ ಅವಶೇಷಗಳ ಆಧಾರದ ಮೇಲೆ ನಗರದ ಸುತ್ತಲೂ ಕೋಟೆಯನ್ನು ನಿರ್ಮಿಸಲಾಗಿತ್ತೆಂದು ಮತ್ತು ಪ್ರಕೃತಿಯ ವಿಕೋಪಕ್ಕೆ ತುತ್ತಾಗಿರುವ ನಗರವಾಗಿತ್ತೆಂದು ಪತ್ತೆಹಚ್ಚಲಾಗಿದೆ.

5) ಬನವಲಿ : ಹರ್ಯಾಣದ ಹಿಸ್ಸಾರ್ ಜಿಲ್ಲೆಯಲ್ಲಿರುವ ಈ ನಿವೇಶನವನ್ನು ಆರ್.ಎಸ್.ಬಿಸ್ ಪತ್ತೆಹಚ್ಚಿದರು. ಸರಸ್ವತಿ ನದಿಯ ದಂಡೆಯ ಮೇಲಿರುವ ಬನವಲಿಯಲ್ಲಿ ಮಡಿಕೆಗಳು ಹೆಚ್ಚಾಗಿ ದೊರೆತಿವೆ. ಮಡಿಕೆಗಳ ತಯಾರಿಕೆಯ ಕೇಂದ್ರವಾಗಿದ್ದು ಇದರ ಮೇಲೆ ಚಿತ್ರಕಲೆಯು ಕಂಡುಬರುತ್ತದೆ.

6) ಚಾನ್ಹುದಾರೊ : ಈ ನಿವೇಶನವನ್ನು 1931ರಲ್ಲಿ ಎನ್.ಜಿ.ಮಜುಂದಾರ್ ರವರು ಕಂಡುಹಿಡಿದರು.1935ರಲ್ಲಿ ಮ್ಯಾಕೆಯವರು ವ್ಯಾಪಕ ಉತ್ಖನನ ಕೈಗೊಂಡರು.ಈ ನಗರವು ಮಹೆಂಜೊದಾರೊದಿಂದ 129 ಕಿ.ಮೀ.ದೂರದಲ್ಲಿದೆ.

ಕಲೆ

ಹರಪ್ಪ ಸಂಸ್ಕೃತಿಯ ಜನರು ಕಲಾಭಿರುಚಿಯುಳ್ಳವರಾಗಿದ್ದರು. ತಮ್ಮ ಕಲಾ ಪ್ರತಿಭೆಯನ್ನು ಮುದ್ರೆಗಳು ಸ್ತ್ರೀ-ಪುರುಷರ ಆಕೃತಿಗಳಲ್ಲಿ ಪ್ರತಿಬಿಂಬಿಸಿದ್ದಾರೆ. ಅವರ ಮಡಿಕೆಗಳ ಮೇಲಿನ ಚಿತ್ರಗಳು ಕಲಾ ಕೌಶಲ್ಯತೆಯನ್ನು ಸೂಚಿಸುತ್ತದೆ, ಮುದ್ರೆಗಳ ಮೇಲೆ ಚಿತ್ರಿಸಿರುವ ಡುಬ್ಬದ ಗೂಳಿ, ಎಮ್ಮೆ, ಕಾಡುಕೋಣ, ಹಸುಗಳ ಚಿತ್ರಗಳು ಕಲೆಯ ಪ್ರತೀಕವಾಗಿವೆ. ಸೂಕ್ಷ್ಮಮಣಿಗಳ ತಯಾರಿಕೆ. ಮಣಿಯ ಮೇಲೆ ಕೆತ್ತಲ್ಪಟ್ಟ ಮಂಗಗಳ ಚಿತ್ರಗಳು ಕಲಾ ಶ್ರೇಷ್ಟತೆಗೆ ನಿದರ್ಶನವಾಗಿದೆ. ಹರಪ್ಪ ಸಂಸ್ಕೃತಿಯ ಕಲಾ ಶ್ರೀಮಂತಿಕೆಯನ್ನು ವ್ಯಕ್ತಪಡಿಸುವ ಶಿವನ ತಾಂಡವ ನೃತ್ಯದ ದಾರ್ಶನಿಕ ಭಾವದ ಮೂರ್ತಿ, ನಟರಾಜನ ಮೂರ್ತಿ, ಮೆಹೆಂಜೋದಾರೋವಿನಲ್ಲಿ ದೊರೆತಿರುವ ನೃತ್ಯ ಭಂಗಿಯ ಸ್ತ್ರೀ ಪ್ರತಿಮೆಗಳು ನಿಜಕ್ಕು ಕಲಾಪ್ರತಿಭೆಯನ್ನು ಪ್ರತಿಬಿಂಬಿಸಿದ್ದಾರೆ. ಇವುಗಳನ್ನು ಅವಲೋಕಿಸಿದ ಸರ್.ಜಾನ್ ಮಾರ್ಷಲ್ ಗ್ರೀಕರ ಕಲೆಯನ್ನು ನಾಚಿಸುವಂತಹ ಕಲಾಭಿವೃದ್ಧಿ ಹರಪ್ಪ ಸಂಸ್ಕೃತಿಯಲ್ಲಿ ಇತ್ತೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಡಿಕೆಗಳ ಮೇಲೆ ಬಿಡಿಸಿರುವ ರೇಖೆಯುಳ್ಳ ಚಿತ್ರಗಳು ಮನುಷ್ಯಾಕೃತಿ, ಪ್ರಾಣಿ, ಗಿಡ ಮರಗಳು ಮತ್ತು ಹಕ್ಕಿ ಪಕ್ಷಿಗಳ ಚಿತ್ರಗಳು ನೋಡಲು ನಯನ ಮನೋಹರವಾಗಿವೆ.

ಮುದ್ರೆಗಳು : ಹರಪ್ಪ ಸಂಸ್ಕೃತಿಯ ಕಾಲದಲ್ಲಿನ ಸುಮಾರು 2500ಕ್ಕೂ ಹೆಚ್ಚು ಮುದ್ರೆಗಳು ದೊರೆತಿವೆ. ಮುದ್ರೆಗಳು ಕಲೆಯ ಪ್ರತೀಕವೂ ಆಗಿವೆ. ಚದುರಾಕಾರದ ಮುದ್ರೆಗಳಲ್ಲಿ ಲಿಪಿ ಮತ್ತು ಆಕೃತಿಗಳೆರಡು ಇವೆ. ಆಯತಾಕಾರದ ಮುದ್ರೆಗಳು ಕೇವಲ ಲಿಪಿಯನ್ನೊಳಗೊಂಡಿರುತ್ತವೆ. ಮುದ್ರೆಗಳ ಮೇಲೆ ಇಳಿ ಕೆತ್ತನೆಯಾಗಿ ಕೊರೆದ ಚಿತ್ರಗಳು, ಮಾನವರ, ಪ್ರಾಣಿಗಳ, ದೇವರ ಆಕೃತಿಗಳು, ಲೌಕಿಕ ಮತ್ತು ಪೌರಾಣಿಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳಿವೆ. ಮುದ್ರೆಯ ಮೇಲಿರುವ ಗೂಳಿಯ ಚಿತ್ರ ಎಮ್ಮೆಯ ಮೇಲೆ ಈಟಿಯಿಂದ ಆಕ್ರಮಣ ಮಾಡುತ್ತಿರುವ ಮನುಷ್ಯನ ಚಿತ್ರವಿದೆ. ಮಹೆಂಜೋದಾರೋದ ಮುದ್ರೆಯೊಂದರಲ್ಲಿ ಗೂಳಿಯಾಕಾರದ ಮುನುಷ್ಯ ಕೊಂಬುಳ್ಳ ಹುಲಿಯ ಮೇಲೆ ಆಕ್ರಮಣ ಮಾಡುತ್ತಿರುವ ದೃಶ್ಯವಿದೆ. ಮುದ್ರೆಗಳು ಹರಪ್ಪ ಸಂಸ್ಕೃತಿಯ ಕಲೆಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತವೆ.

ಲಿಪಿ : ಹರಪ್ಪ ಸಂಸ್ಕೃತಿಯ ಲಿಪಿಯನ್ನು ಸಂಶೋಧನೆಯ ಕಾಲದಲ್ಲಿ ದೊರೆತ ಮುದ್ರೆಗಳ ಸಹಾಯದಿಂದ ಅರಿಯುವ ಪ್ರಯತ್ನ ಮಾಡಲಾಗಿದೆ. ಸಿಂಧೂ ಸಂಸ್ಕೃತಿಯ ಭಾಷೆ ಮತ್ತು ಲಿಪಿಯ ಬಗ್ಗೆ ಸ್ಪಷ್ಟವಾದ ಅಭಿಪ್ರಾಯಕ್ಕೆ ಬರುವುದು ಕಷ್ಟಸಾಧ್ಯವಾಗಿದೆ. ಈ ಸಂಸ್ಕೃತಿಯ ಕಾಲದ ಭಾಷೆಯ ಬಗ್ಗೆ ವಿಭಿನ್ನ ಅಭಿಪ್ರಾಯಗಳಿವೆ. ಪರ್ಪೋಲ ಮೊದಲಾದ ಸ್ಕ್ಯಾಂಡಿನೇವಿಯನ್ನರ ಸಂಶೋಧನೆಯಿಂದ ಭಾಷೆಯು ದ್ರಾವಿಡ ಗುಂಪಿಗೆ ಹತ್ತಿರವಾದುದೆಂದು ತಿಳಿಸಿದ್ದಾರೆ. ಪ್ರಸಿದ್ಧ ವಿದ್ವಾಂಸ ಸಹಾದೇವನ್‌ರವರು ಸಿಂಧೂ ಲಿಪಿಯನ್ನು ಕಂಪ್ಯೂಟರ್ ಸಹಾಯದಿಂದ ಅಧ್ಯಯನ ಮಾಡಿ ಭಾಷೆಯು ದ್ರಾವಿಡ ಗುಂಪಿನದು ಎಂದಿದ್ದಾರೆ. ಎಸ್.ಆರ್.ರಾವ್‌ರವರು ಮುದ್ರೆಗಳ ಮೇಲಿನ ಬರಹಗಳನ್ನು ಅಧ್ಯಯನಮಾಡಿ ಇಂಡೋ-ಆರ್ಯನ್ ಅಥವಾ ಇಂಡೋ-ಯುರೋಪಿಯನ್ ಭಾಷೆಯ ವರ್ಗಕ್ಕೆ ಸೇರಿದ್ದು ವೇದ ಪೂರ್ವದ ಭಾಷೆಯಾಗಿದೆಯೆಂದಿದ್ದಾರೆ. ಲ್ಯಾಂಡ್ನ್‌ರವರು ಬ್ರಾಹ್ಮಿ ಲಿಪಿಯ ಮೂಲವಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯ ಬರವಣಿಗೆಯು ಬಲದಿಂದ ಎಡಕ್ಕೆ ಕೆತ್ತಲ್ಪಟ್ಟಿದ್ದು ವರ್ಣಮಾಲೆಯಾಗಿರದೆ ಚಿತ್ರಗಳನ್ನಾದರಿಸಿದ ಲಿಪಿಯಾಗಿದೆ. 250 ರಿಂದ 400 ಚಿತ್ರಗಳನ್ನು ಒಳಗೊಂಡಿದೆ. 26 ಚಿತ್ರಗಳಿದ್ದು ಪ್ರತಿಯೊಂದು ಚಿತ್ರವು ಒಂದೊಂದು ಶಬ್ದವನ್ನೊಳಗೊಂಡಿದೆ. ಎಸ್.ಆರ್.ರಾವ್‌ರವರು ಮನುಷ್ಯ ಮತ್ತು ಮೀನಿನ ಚಿತ್ರಗಳನ್ನು ರೇಖಾರೂಪದಲ್ಲಿ ಬಿಡಿಸಲಾಗಿದೆ ಎಂದಿದ್ದಾರೆ. ಸಿಂಧೂ ಲಿಪಿಯನ್ನು ಓದಲು ಇತ್ತೀಚಿಗೆ ಹೆಚ್ಚಿನ ಪ್ರಯತ್ನಗಳು ನಡೆದಿವೆ. ಆದರೆ ಸಿಂಧೂಲಿಪಿಯು ಇದುವರೆವಿಗೂ ನಿಗೂಢವಾಗಿಯೇ ಉಳಿದಿದೆ.

ಹರಪ್ಪ ಸಂಸ್ಕೃತಿಯ ಅವನತಿ

ಪ್ರಾಚೀನ ಹರಪ್ಪ ಸಂಸ್ಕೃತಿಯು ನೂರಾರು ವರ್ಷಗಳ ಕಾಲ ಬಾಳಿ ಬದುಕಿ ಕ್ರಿಪೂ 2000 ದ ವೇಳೆಗೆ ಅವನತಿ ಹೊಂದಿರಬೇಕೆಂದು ಮಾರ್ಟಿಮರ್ ವೀಲರ್ ಅಭಿಪ್ರಾಯಪಟ್ಟಿದ್ದಾರೆ. ನಾಗರೀಕತೆಯ ಅವನತಿಗೆ ಇತಿಹಾಸಕಾರರು ಅನೇಕ ಕಾರಣಗಳನ್ನು ನೀಡಿದ್ದಾರೆ. ಅಂತಹ ಪ್ರಮುಖ ಕಾರಣಗಳೆಂದರೆ.

1. ಭೌಗೋಳಿಕ ಬದಲಾವಣೆಗಳು :

ಹರಪ್ಪ ಸಂಸ್ಕೃತಿಯ ಕಾಲದಲ್ಲಿ ಹವಾಮಾನದಲ್ಲಿ ಅನೇಕ ಬದಲಾವಣೆಗಳು ಆದವು. ಇಟ್ಟಿಗೆ ಸುಡಲು ಮರಗಳನ್ನು ಕಡಿದಿದ್ದರಿಂದ ಉಷ್ಣತೆಯ ಪ್ರಮಾಣ ಹೆಚ್ಚಿ ಮಳೆ ಕಡಿಮೆಯಾಯಿತೆಂದು ಇದರಿಂದ ಕೃಷಿ ಭೂಮಿಯ ಫಲವತ್ತತೆ ಕಡಿಮೆಯಾಗಿ ಮರುಭೂಮಿಯಾಗಿ ಮಾರ್ಪಟ್ಟಿತೆಂದು ಅಮಲಾನಂದ ಘೋಷ್ ಅಭಿಪ್ರಾಯ ಪಡುತ್ತಾರೆ. ಇದರಿಂದಾಗಿಯೇ ಹರಪ್ಪ ಸಂಸ್ಕೃತಿ ಅವನತಿಯಾಯಿತೆಂದು ಅವರ ನಿಲುವಾಗಿದೆ.

2. ಪ್ರವಾಹ :

ಹರಪ್ಪ ಸಂಸ್ಕೃತಿಯು ಸಿಂಧೂನದಿಯ ದಂಡೆಯ ಮೇಲೆ ಬೆಳವಣಿಗೆ ಹೊಂದಿದ್ದರಿಂದ ಸಿಂಧೂನದಿಯು ಉಕ್ಕಿ- ಹರಿದು ಪ್ರವಾಹಕ್ಕೆ ತುತ್ತಾಗಿ ನಾಗರೀಕತೆ ನಾಶವಾಗಿದೆಯೆಂದು ಸರಜಾನ್ ಮಾರ್ಷಲ್ ಮತ್ತು ಮೆಕೆ ಅಭಿಪ್ರಾಯಪಟ್ಟಿದ್ದಾರೆ.

3. ಆರ್ಯನ್ನರ ದಾಳಿ :

ಹರಪ್ಪ ನಾಗರೀಕತೆಯು ಆರ್ಯನ್ನರ ದಾಳಿಯಿಂದ ನಾಶಗೊಂಡಿದೆಯೆಂದು ಮಾರ್ಟಿಮರ್ ವ್ಹೀಲರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾಗಿ ಸಂಶೋಧನೆಯ ಕಾಲದಲ್ಲಿ ಅಸ್ತವ್ಯಸ್ತವಾಗಿ, ಅಂಗಾಂಗಳು ಕತ್ತರಿಸಲ್ಪಟ್ಟ ಅಸ್ಥಿಪಂಜರಗಳು ದೊರೆತಿವೆ. ಅಸ್ಥಿಪಂಜರಗಳ ಅಧ್ಯಯನದಿಂದ ಅವು ಒಮ್ಮೆಲೆ ಮರಣಹೊಂದಿದ ಶವಗಳೆಂದು ಶಿರಕ್ಕೆ ಕತ್ತಿಯಿಂದ ಗಾಯವಾದಂತಹ ಗುರುತಿದೆ. ಸಂಶೋದನೆಯ ಕಾಲದಲ್ಲಿ ಆರ್ಮೆನಾಯ್ಡ್ ಜನಾಂಗಕ್ಕೆ ಸೇರಿದ ತಲೆಬುರುಡೆ ದೊರೆತಿದ್ದು ಆ ಜನಾಂಗದವರೇ ದಾಳಿ ಮಾಡಿರಬಹುದೆಂದು ಶಂಕಿಸಲಾಗಿದೆ.

4. ಪೂರಕ ಅಂಶಗಳೇ ಕಾರಣವಾಗಿರುವುದು :

ಬಿ.ಕೆ. ಥಾಪರ್ ಅಭಿಪ್ರಾಯಪಡುವಂತೆ ಹವಾಯಣ, ನದಿಯ ಪಾತ್ರದ ಪ್ರಭಾವ, ನೈಸರ್ಗಿಕ ಸಂಪನ್ಮೂಲಗಳು ಬೆಳವಣಿಗೆಗೆ ಪೂರಕವಾಗಿದ್ದಂತೆ ಅವನತಿಗೂ ಕಾರಣವಾಗಿರಬೇಕೆಂದು ತಿಳಿಸಿದ್ದಾರೆ.

5. ಸ್ಥಳೀಯ ಹವಾಮಾನ :

ಆರ್.ಎಲ್. ಸ್ಟೀನ್ ಪ್ರಕಾರ ಬೆಲ್ಕೋಲಿಥಿಕ್ ಯುಗದಿಂದ ಸ್ಥಳೀಯ ಹವಾಮಾನವು ಬದಲಾವಣೆಗೊಂಡಿತು. ಇದು ಸಿಂಧೂ ಕೃಷಿ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿತು. ಆ ಕಾರಣ ಮಳೆಯು ಕಡಿಮೆಯಾಗುತ್ತಾ ಹೋಗಿ ಶಾಖ ಹೆಚ್ಚಾಗಿ ಮಣ್ಣಿನ ತೇವಾಂಶ ಕಡಿಮೆಯಾಗಿ, ಕೃಷಿಯು ಆಸಾಧ್ಯವೆನಿಸಿ ಅವನತಿಯತ್ತ ನಾಗರೀಕತೆ ಸಾಗಿರಬೇಕು.

6. ಭೂಕಂಪ, ಬರಗಾಲ, ಸಾಂಕ್ರಮಿಕ ಕಾಯಿಲೆ :

ಭೂಕಂಪ, ಬರಗಾಲಗಳಿಂದಲೂ ಹರಪ್ಪ ಸಂಸ್ಕೃತಿ ನಾಶವಾಗಿರಬಹುದು ಅಥವಾ ಯಾವುದೋ ಸಾಂಕ್ರಮಿಕ ಕಾಯಿಲೆಗೆ ತುತ್ತಾಗಿರಬಹುದಾದ ಸಾಧ್ಯತೆಯೂ ಇದೆ.

7. ಮರುಭೂಮಿಯ ವಿಸ್ತಾರ :

ಹರಪ್ಪ ನಾಗರೀಕತೆಯ ಸುತ್ತಲೂ ಮರುಭೂಮಿ ವಿಸ್ತಾರಗೊಂಡು ಲವಣಾಂಶ ಅಧಿಕವಾಗಿರಬೇಕು. ಇದು ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡಿ ಒಂದು ಮಹಾನ್ ನಾಗರೀಕತೆಯ ಅಂತ್ಯಕ್ಕೆ ಕಾರಣವಾಗಿರಬೇಕು.