ಕುಶಾನರ ಕಾಲದಲ್ಲಿ ಸಾಹಿತ್ಯ ಕೂಡ ಹೆಚ್ಚು ಅಭಿವೃದ್ಧಿ ಹೊಂದಿತು. ಕುಶಾನ ದೊರೆಗಳು ಸಾಹಿತ್ಯಾಭಿಮಾನಿ ಗಳಾಗಿದ್ದು ಸಾಹಿತ್ಯದ ಬೆಳೆವಣಿಗೆಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ಇದರಿಂದಾಗಿ ಹಲವಾರು ಪ್ರಮುಖ ಕೃತಿಗಳು ರಚನೆಯಾದವು. ಕುಶಾನರ ಕಾಲದ ಪ್ರಮುಖ ಸಾಹಿತ್ಯಕ, ಧಾರ್ಮಿಕ ಕೃತಿಗಳು ಮತ್ತು ಅವುಗಳ ಐತಿಹಾಸಿಕ ಮೌಲ್ಯವನ್ನು ಅವಲೋಕಿಸಬಹುದು.

ಅಶ್ವಘೋಷ : ಕಾನಿಷ್ಕನ ಆಸ್ಥಾನದಲ್ಲಿದ್ದ ‘ಅಶ್ವಘೋಷ’ ಕವಿಯಾಗಿ, ತತ್ವಜ್ಞಾನಿಯಾಗಿ, ನಾಟಕಕಾರನಾಗಿ, ಸಂಗೀತಗಾರನಾಗಿ ಪ್ರಖ್ಯಾತಿ ಹೊಂದಿದ್ದನು. ಇವನ ಪ್ರಮುಖ ಕೃತಿಗಳೆಂದರೆ:

1. ಬುದ್ಧಚರಿತ : ಬುದ್ಧನ ಜೀವನ ಚರಿತ್ರೆಯ ಬಗ್ಗೆ ವಿವರಣೆ ನೀಡುತ್ತದೆ.

2. ಸೌಂದರಾನಂದ : ಬುದ್ಧನ ಜೀವನದ ಪ್ರಮುಖ ಘಟನೆಗಳ ಬಗ್ಗೆ ವಿಶ್ಲೇಷಿಸುತ್ತದೆ.

3. ವಜ್ರಸೂಚಿ : ಸಮಕಾಲೀನವಾಗಿದ್ದ ಜಾತಿಪದ್ಧತಿಯನ್ನು ಖಂಡಿಸುತ್ತದೆ.

4. ಸರಿಪುತ್ರಪ್ರಕರಣ : ಇದು ನಾಟಕ ರೂಪದಲ್ಲಿದ್ದು ಸರಿಪುತ್ರ ಮತ್ತು ಮೊಗ್ಗಲ್ಲನರ ಮತಾಂತರದ ಬಗ್ಗೆ ವಿವರ ನೀಡುತ್ತದೆ. ಫ್ರೆಂಚ್ ವಿದ್ವಾಂಸ ‘ಸೆಲ್ವನ್‌ವಿ’ ಅಭಿಪ್ರಾಯಪಡುವಂತೆ ‘ಅಶ್ವಘೋಷನ ಸಾಹಿತ್ಯದ ಶ್ರೀಮಂತಿಕೆ ಮತ್ತು ವೈವಿಧ್ಯತೆಯು ನಮಗೆ ಮಿಲ್ಟನ್, ಗಯಟೆ, ಕಾಂಟ್, ವಾಲ್ವೇರ್’ ಮೊದಲಾದವರ ನೆನಪನ್ನು ಗಮನಕ್ಕೆ ತರುತ್ತದೆ. ಅಶ್ವಘೋಷನು ಕಾಳಿದಾಸ ಮತ್ತು ಭಾಸಕವಿಯಿಂದ ಪ್ರಭಾವಿತನಾಗಿರ ಬೇಕೆಂದು ಕೆಲವು ವಿದ್ವಾಂಸರ ಅಭಿಪ್ರಾಯ.

ನಾಗಾರ್ಜುನ : ಇವನ ಕೃತಿಗಳು: 1. ಶತಸಾಹಸಿಕ ಪ್ರಜ್ಞಾಪರಿಮಿತ 2. ಮಾಧ್ಯಮಿಕ ಸೂತ್ರ 3. ಸಹೃಲೇಖ

ನಾಗಾರ್ಜುನ ಕಾನಿಷ್ಕನ ಆಸ್ಥಾನದ ಮತ್ತೋರ್ವ ಪ್ರಖ್ಯಾತ ಕವಿ. ಮಹಾಯಾನ ಪಂಥದ ಪ್ರತಿಪಾದಕನಾದ ನಾಗಾರ್ಜುನ ಮಾದ್ಯಮಿಕ ಸೂತ್ರದಲ್ಲಿ ಸಾಪೇಕ್ಷ ಸಿದ್ಧಾಂತವನ್ನು ಪ್ರತಿಪಾದಿಸಿದ್ದಾನೆ. ಪ್ರಜ್ಞಾಪರಿಮಿತ ವೇದಾಂತದ ಕೃತಿಯಾಗಿದೆ.

‘ಸಹೃಲೇಖ’ ಕೃತಿಯು ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗ ಸಿದ್ದಮಾರ್ಗಗಳನ್ನು ಕುರಿತು ವಿಶ್ಲೇಷಿಸುತ್ತದೆ. ಈ ಕೃತಿಯ ಸರ್ವೋತ್ಕೃಷ್ಟ ಅಂಶವೆಂದರೆ ಮಿತ್ರರು ಮತ್ತು ವೈರಿಗಳಲ್ಲಿ ಯಾವುದೇ ಭೇದಭಾವವನ್ನು ಮಾಡಬಾರದೆಂಬುದು. ನಾಗಾರ್ಜುನನ್ನು ಭಾರತದ ಮಾರ್ಟಿನ್ ಲೂಥರ್ ಮತ್ತು ಭಾರತದ ಐನ್ ಸ್ಟೈನ್ ಎಂದೇ ಕರೆಯಲಾಗಿದೆ. ನಾಗಾರ್ಜುನನ ವಿದ್ವತ್ತನ್ನು ಗಮನಿಸಿದ ಚೀನಿ ಯಾತ್ರಿಕ ಹ್ಯುಯನ್ ತ್ಸಾಂಗ್ ಹೇಳುವಂತೆ ‘ಜಗತ್ತಿನ ನಾಲ್ಲು ಜ್ಯೋತಿಗಳಲ್ಲಿ ನಾಗಾರ್ಜುನನು ಕೂಡ ಒಬ್ಬನಾಗಿದ್ದಾನೆ’.

ಚರಕ : ಕುಶಾನರ ಕಾಲದಲ್ಲಿದ್ದ ಚರಕನು ಆಯುರ್ವೇದ ಔಷಧ ಶಾಸ್ತ್ರದ ಮಹಾನ್ ಪಂಡಿತನೆನಿಸಿದ್ದನು. ಇವನು ಕಾನಿಷ್ಕನ ಆಸ್ಥಾನದ ಪ್ರಖ್ಯಾತ ವೈದ್ಯನಾಗಿದ್ದನು. ಇವನು ‘ಚರಕಸಂಹಿತೆ’ ಯೆಂಬ ವೈದ್ಯಕೀಯ ಕೃತಿಯನ್ನು ರಚಿಸಿದ್ದಾನೆ. ಇದು ಕ್ರಿ.ಶ 7ನೇಶತಮಾನದಲ್ಲಿ ಪರ್ಶಿಯನ್ ಭಾಷೆಗೂ ಕ್ರಿಶ ೫ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೂ ಭಾಷಾಂತರವಾಯಿತು.ಕಾನಿಷ್ಕನ ಕಾಲಾವಧಿಯಲ್ಲಿ ವಸುಮಿತ್ರ ಮತ್ತು ಪಾರ್ಶ್ವ ಎಂಬ ವಿದ್ವಾಂಸರುಗಳಿದ್ದರು. ವಸುಮಿತ್ರನು ನಾಲ್ಕನೇ ಬೌದ್ಧ ಮಹಾಸಮ್ಮೇಳನದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದನು. ಕುಶಾನರ ಕಾಲದಲ್ಲಾದ ಸಾಹಿತ್ಯದ ಚಟುವಟಿಕೆಗಳ ನ್ನು ಗಮನಿಸಿ ಡಾ|ಹೆಚ್.ಜಿ.ರಾಲಿಸನ್ ರವರು ‘ಕುಶಾನರ ಕಾಲವು ಗುಪ್ತರ ಯುಗಕ್ಕೆ ಅತ್ಯುತ್ತಮ ಪೂರ್ವಭಾವಿ ಪೀಠಿಕೆಯಾಗಿದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.