ಭಾರತದ ಸಂವಿಧಾನವು ಜಾರಿಗೆಗೊಂಡ 25 ವರ್ಷಗಳ ಸಂವಿಧಾನಾತ್ಮಕ ಸುಧಾರಣೆಗಾಗಿ ಇಂದಿರಾಗಾಂಧಿ ನೇತೃತ್ವದ ಸರ್ಕಾರವು ಸ್ವರ್ಣಸಿಂಗ್‌ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ಶಿಫಾರಸ್ಸಿನಂತೆ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ 1976 ಡಿಸೆಂಬರ್‌ 16 ರಂದು ಆದೇಶ ಹೊರಡಿಸಿತು. ಸಂವಿಧಾನ ಜಾರಿಯ ನಂತರ ತಿದ್ದುಪಡಿಗೊಂಡ 42 ನೇ ವಿಧಿಯು ಉಳಿದೆಲ್ಲಾ ತಿದ್ದುಪಡಿಗಳಿಗಿಂತ ಅತ್ಯಂತ ವಿಶಾಲವಾದ ಮತ್ತು ವಿವಾದಾತ್ಮಕವಾದ ತಿದ್ದುಪಡಿ ಎನಿಸಿಕೊಂಡಿತು. 1950ರ ಮೂಲ ಸಂವಿಧಾನದ ಪ್ರಸ್ತಾವನೆಯ 7ನೇ ಅನುಸೂಚಿ, 53 ವಿಧಿಗಳು ಮತ್ತು ಪ್ರಮುಖ ತತ್ವಗಳಲ್ಲಿ ಬದಲಾವಣೆಗೆ ಕಾರಣವಾದ ತಿದ್ದುಪಡಿಯು ಕಿರು ಸಂವಿಧಾನ ಎನಿಸಿಕೊಂಡಿದೆ. ಈ ತಿದ್ದುಪಡಿಯ ಬದಲಾವಣೆಗಳು ಈ ಕೆಳಗಿನಂತಿವೆ.

a. ಪ್ರಸ್ತಾವನೆ:

ಈ ತಿದ್ದುಪಡಿಯು ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಹಾಗೂ ಅಖಂಡತೆ ಎಂಬ ಪದಗಳನ್ನು ಸೇರಿಸಿತು.

b. ರಾಜ್ಯನೀತಿ ನಿರ್ದೇಶಕ ತತ್ವಗಳು:

 ಈಗಾಗಲೇ ಸಂವಿಧಾನದ 4ನೇ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯ ನಿರ್ದೇಶಕ ತತ್ವಗಳಿಗೆ ಮೂರು ಹೊಸ ನಿರ್ದೇಶನಗಳನ್ನು ಸೇರಿಸಲಾಯಿತು. ಈಗಾಗಲೇ ಜಾರಿಯಲ್ಲಿದ್ದ 39 ನೇ ವಿಧಿಯಲ್ಲಿದ್ದ ಅಂಶಗಳ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳನ್ನು ಹೊಸದಾಗಿ ಸೇರಿಸಲಾಯಿತು. ಹಾಗೆಯೇ ಬಡವರಿಗೆ ಉಚಿತ ನ್ಯಾಯ ಮತ್ತು ಸಮಾನ ನ್ಯಾಯವನ್ನು ಬಲಗೊಳಿಸುವ ಕಾನೂನನ್ನು 39(A) ವಿಧಿಯಲ್ಲಿ, ಉದ್ಯಮದಲ್ಲಿ ಕಾರ್ಮಿಕರಿಗೆ ಅವಕಾಶ ಒದಗಿಸುವ 43(A) ವಿಧಿಯನ್ನು ಹಾಗೂ ಪರಿಸರ ರಕ್ಷಣೆ ಹಾಗೂ ವನ್ಯ ಜೀವಿ ರಕ್ಷಣೆ 48(A) ವಿಧಿಯನ್ನು ಸಂವಿಧಾಕ್ಕೆ ಹೊಸದಾಗಿ ತಿದ್ದುಪಡಿ ಮಾಡಿ ಸೇರಿಸಲಾಯಿತು.

c. ಮೂಲಭೂತ ಕರ್ತವ್ಯಗಳು:

ಸಂವಿಧಾನಕ್ಕೆ 4(A) ಭಾಗವನ್ನು ಸೇರಿಸುವ ಮೂಲಕ ಸಂವಿಧಾನದ ತಿದ್ದುಪಡಿ ಮಾಡಲಾಯಿತು. ಈ ಭಾಗದಲ್ಲಿ ಭಾರತೀಯರು ಪಾಲಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 51(A) ವಿಧಿಯಲ್ಲಿ ಸೇರಿಸಲ್ಪಟ್ಟವು.

d. ಸಂಸತ್ತು:

ಈ ತಿದ್ದುಪಡಿಯ ಮೂಲಕ ಸಂಸತ್ತಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಬದಲಾಯಿಸಲು ಸಾಧ್ಯವಾಯಿತು. ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತಿಗೆ ಕಲಾಪಗಳು ಜರುಗಲು ಕನಿಷ್ಠ 10% ರಷ್ಟು ಸದಸ್ಯರ ಕೋರಂ ಸಂಖ್ಯೆಯನ್ನು ರದ್ದುಗೊಳಿಸಿತು. ಸಂಸತ್ತು ಅಂಗೀಕರಿಸುವ ಶಾಸನಗಳನ್ನು ನ್ಯಾಯಾಂಗದ ವಿಮರ್ಶಾಧಿಕಾರದಿಂದ ಹೊರಗಿಡಲಾಯಿತು. ರಾಷ್ಟ್ರಪತಿಯು ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸದಂತೆ ಬದಲಾವಣೆ ತರಲಾಯಿತು.

e. ನ್ಯಾಯಾಂಗ:

ಉಚ್ಛನ್ಯಾಯಾಲಯಗಳು ರಿಟ್‌ ಹೊರಡಿಸುವ ಅಧಿಕಾರವನ್ನು ಈ ತಿದ್ದುಪಡಿಯಿಂದ ಮೊಟಕುಗೊಳಿಸಲಾಯಿತು. ಮುಂದುವರೆದು ಸಂವಿಧಾನಕ್ಕೆ 14(A) ಭಾಗವನ್ನು ಸೇರಿಸಿ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ರಚಿಸಲು ಸಂಸತ್ತಿಗೆ ಅವಕಾಶ ಕಲ್ಪಿಸಲಾಯಿತು.

f. ತುರ್ತು ಪರಿಸ್ಥಿತಿ:

ಭಾರತದ ಭದ್ರತೆಗೆ ಆತಂಕ ಎದುರಾದಾಗ ಭಾರತದ ಯಾವುದೇ ಮೂಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಇನ್ನುಳಿದ ರಾಜ್ಯಗಳು ನಡೆದುಕೊಳ್ಳಬೇಕೆಂದು ಈ ತಿದ್ದುಪಡಿಯ ಮೂಲಕ ತಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯಾದರೆ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲು

ಅವಕಾಶ ಕಲ್ಪಿಸಲಾಯಿತು. ಸಂವಿಧಾನದ 356ನೇ ವಿಧಿಯಂತೆ ತುರ್ತು ಪರಿಸ್ಥಿತಿ ಘೋಷಣೆಯಾದರೆ 6 ತಿಂಗಳು ಇದ್ದ ಅವಧಿಯು 1 ವರ್ಷಕ್ಕೆ ವಿಸ್ತಾರಗೊಂಡಿತು.

g. ಏಳನೇ ಅನುಸೂಚಿ:

ಸಂವಿಧಾನ ಜಾರಿಗೊಂಡಾಗಿನಿಂದ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಷಣ, ಅರಣ್ಯ, ವನ್ಯಜೀವಿ, ಪಕ್ಷಿರಕ್ಷಣೆ, ತೂಕ ಮತ್ತು ಅಳತೆ, ನ್ಯಾಯಿಕ ಆಡಳಿತ, ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಲಯಗಳ ಸಂಘಟನೆಯ ವಿಷಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಉಪಸಂಹಾರ 

ಒಟ್ಟಿನಲ್ಲಿ 42ನೇ ಸಂವಿಧಾನ ತಿದ್ದುಪಡಿ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇದು ಆಡಳಿತದ ಬಲವರ್ಧನೆ ಜೊತೆಗೆ ನ್ಯಾಯಾಂಗ ಮತ್ತು ಪ್ರಜೆಗಳ ಹಕ್ಕುಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿತು. ಅನೇಕ ಅಂಶಗಳು ನಂತರದ ತಿದ್ದುಪಡಿಗಳ ಮೂಲಕ ಪರಿಷ್ಕೃತಗೊಂಡರೂ, ಇದರ ಪ್ರಭಾವ ಅಳಿಸಲಾಗದಂತಿದೆ. ಅದರೊಂದಿಗೆ, 42ನೇ ತಿದ್ದುಪಡಿ ಸಂವಿಧಾನದ ಶಕ್ತಿ ಮತ್ತು ಸವಾಲುಗಳನ್ನು ಅರಿಯಲು ಸಹಾಯಕವಾಗಿದೆ.