ಪೀಠಿಕೆ : ಕ್ರಿ.ಪೂ.6ನೇ ಶತಮಾನವನ್ನು ಮಾನವ ಚರಿತ್ರೆಯಲ್ಲಿನ ʻಕಾಲ ವಿಭಾಗಸ್ಥಾನ’ವೆಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬಂದವು. ಕ್ರಿ.ಪೂ.6ನೇ ಶತಮಾನವು ಚರಿತ್ರೆಯಲ್ಲಿ ಗುರುತಿಸಬಹುದಾದ ಕಾಲವೆನಿಸಿದೆ. ಇದಕ್ಕೆ ಕಾರಣವೆಂದರೆ:-

1. ಮಗಧಾ ರಾಜ್ಯದ ಏಳಿಗೆಯಾಯಿತು.

2. ರಾಜಕೀಯ ರಂಗಭೂಮಿಯ ಮೇಲೆ 16 ಮಹಾ ಜನಪದಗಳು ಬೆಳೆದವು.

3. ಭಾರತದ ಮೇಲೆ ಪರಕೀಯರ ಆಕ್ರಮಣಗಳಾದವು.

4. ಕ್ರಿ.ಪೂ.6ನೇ ಶತಮಾನದಲ್ಲಿ ವಾಯುವ್ಯ ಭಾರತದಲ್ಲಿ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರ್ಷಿಯನ್ನರ ಪ್ರಭಾವ ದಟ್ಟವಾಯಿತು.

5. ವಿಶ್ವದ ಪ್ರಮುಖ ಧರ್ಮಗಳ ಸಾಲಿನಲ್ಲಿ ಜೈನ ಮತ್ತು ಬೌದ್ಧ ಮತಗಳು ಏಳಿಗೆಗೆ ಬಂದವು.

6. ಭಾರತ ಮತ್ತು ಗ್ರೀಕ್ ಪರ್ಷಿಯನ್ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧವೇರ್ಪಟ್ಟಿತು.

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

1. ಯಾಗ ಯಜ್ಞಗಳ ಪ್ರಾಬಲ್ಯ : ವೈದಿಕ ಯುಗದ ಅಂತ್ಯದವೇಳೆಗೆ ಯಾಗಯಜ್ಞಗಳು ಹೆಚ್ಚು ಪ್ರಬಲಗೊಂಡವು. ವೈದಿಕ ಧರ್ಮದಲ್ಲಿನ ಈ ಕಠಿಣ ಯಾಗಯಜ್ಞಗಳು ಜನಸಾಮಾನ್ಯರಿಗೆ ತುಂಬಾ ಆರ್ಥಿಕ ಹೊರೆಯಾಗಿದ್ದವು. ಪುರೋಹಿತರು ಪ್ರಬಲರಾದರು. ಅಧಿಕ ಖರ್ಚಿನ ಯಾಗಯಜ್ಞಗಳ ವೈದಿಕ ಪಂಥಕ್ಕೆ ಬದಲು ಹೊಸಮತಗಳು ಏಳಿಗೆಗೆ ಬಂದರೆ ಅದಕ್ಕೆ ತಮ್ಮ ಬೆಂಬಲ ಸೂಚಿಸಲು ಜನಸಾಮಾನ್ಯರು ನಿರ್ಧರಿಸಿದ್ದರು.

2. ಜಾತಿಪದ್ಧತಿಯ ಜಟಿಲತೆ : ವೈದಿಕ ಸಮಾಜದಲ್ಲಿ ಜಾತಿಪದ್ಧತಿಯು ಹೆಚ್ಚು ಜಠಿಲತೆಯಿಂದ ಕೂಡಿತ್ತು. ಬ್ರಾಹ್ಮಣರು ವೇದಾದ್ಯಯನ ಮತ್ತು ಪೌರೋಹಿತ್ಯದ ಕಾರ್ಯನಿರ್ವಹಿಸುತ್ತಿದ್ದು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಹೊಂದಿದ್ದರು. ತೆರಿಗೆಯಿಂದ ವಿನಾಯ್ತಿಪಡೆದಿದ್ದು, ಕ್ಷತ್ರಿಯರಿಗೆ ಈ ತರಹದ ಸವಲತ್ತುಗಳಿರಲಿಲ್ಲ. ಹೀಗೆ ಅಸಮಾಧಾನಗೊಂಡ ಕ್ಷತ್ರಿಯ ವರ್ಗಗಳಿಂದ ಹೊಸ ಧರ್ಮಗಳ ಸ್ಥಾಪನೆಯಾಯಿತು.

3. ಮೋಕ್ಷ ಮಾರ್ಗದ ಕಲ್ಪನೆ : ವ್ಯಕ್ತಿಯು ಮೋಕ್ಷವನ್ನು ಪಡೆಯಬೇಕಾದರೆ ಯಾವ ಮಾರ್ಗವನ್ನು ಅನುಸರಿಸಬೇಕೆಂಬುದು ಜನಸಾಮಾನ್ಯರಿಗೆ ಜಠಿಲ ಸಮಸ್ಯೆಯಾಯಿತು. ತಪಸ್ಸಾಚರಣೆ, ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳೆಂಬ ವಿವಿಧ ಮಾರ್ಗಗಳು ಹುಟ್ಟಿಕೊಂಡವು. ಈ ವಿವಿಧ ಮಾರ್ಗಗಳಲ್ಲಿ ಯಾವುದನ್ನು ಅವಲಂಬಿಸಿದರೆ ಮುಕ್ತಿ ದೊರೆಯುತ್ತದೆ ಎಂಬುದು ದ್ವಂದ್ವವಾಯಿತು. ಹೊಸ ಧರ್ಮಗಳು ಸರಳ ಮತ್ತು ಸುಲಭ ತತ್ವಗಳನ್ನು ಒಳಗೊಂಡಿದ್ದರಿಂದ ಜನಸಾಮಾನ್ಯರು ಹೊಸಪಂಥಗಳ ಸ್ಥಾಪನೆಗೆ ಬೆಂಬಲ ನೀಡಿದರು.

4. ಉಪನಿಷತ್ತುಗಳು : ಉಪನಿಷತ್ತುಗಳು ಹೊಸಪಂಥಗಳ ಉದಯಕ್ಕೆ ಪ್ರೇರಣೆ ನೀಡಿದವು. ವೈದಿಕ ಪಂಥದಲ್ಲಿದ್ದ ಮತಾಚರಣೆಯ ಅಂಶಗಳನ್ನು ಉಪನಿಷತ್ತುಗಳು ಖಂಡಿಸಿ, ಮೋಕ್ಷಗಳಿಕೆಗೆ ಜ್ಞಾನಮಾರ್ಗವೇ ಅತ್ಯುತ್ತಮ ಮಾರ್ಗವೆಂದು ಉಪನಿಷತ್ತುಗಳು ವ್ಯಾಖ್ಯಾನಿಸಿದವು.

5. ಜನಸಾಮಾನ್ಯರ ಭಾಷೆಯ ಬಳಕೆ : ವೈದಿಕ ಪಂಥದಲ್ಲಿ ಧರ್ಮಭೋಧನೆಗಾಗಿ ಸಂಸ್ಕೃತ ಭಾಷೆಯನ್ನು ಬಳಸಲಾಯಿತು. ಸಂಸ್ಕೃತ ಭಾಷೆಯು ಜನಸಾಮಾನ್ಯರ ಭಾಷೆಯಾಗಿರದೆ ಕಠಿಣವಾದ ಭಾಷೆಯಾಗಿತ್ತು. ಧಾರ್ಮಿಕ ಕೃತಿಗಳನ್ನು ಅರ್ಥೈಸಿಕೊಳ್ಳಲು ಬ್ರಾಹ್ಮಣಪಂಡಿತರನ್ನೇ ಅವಲಂಬಿಸಬೇಕಾಗಿತ್ತು. ಇದೇ ವೇಳೆಗೆ ಜನಸಾಮಾನ್ಯರ ಭಾಷೆಯನ್ನು ಬಳಸಿದ್ದರಿಂದ ಅದರ ಪ್ರಭಾವ ಹೊಸಧರ್ಮಗಳ ಉದಯಕ್ಕೆ ಕಾರಣವಾಯಿತು.

6. ಹೊಸ ಪಂಥಗಳ ಉದಯ : ವೈದಿಕ ಧರ್ಮವನ್ನು ವಿರೋಧಿಸಿ ಚಾರ್ವಾಕ, ನಾಸ್ತಿಕ, ಪರಿವ್ರಾಜಕ ಮುಂತಾದ ಹೊಸ ಪಂಥಗಳು ಹುಟ್ಟಿಕೊಂಡವು. ಈ ಬೆಳವಣಿಗೆಯು ಸಹ ಹೊಸ ಧರ್ಮಗಳ ಉದಯಕ್ಕೆ ಕಾರಣವಾಯಿತು.

7. ಪ್ರಾಣಿಬಲಿ : ವೈದಿಕ ಧರ್ಮದಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದು ಒಂದು ಸಂಪ್ರದಾಯವಾಗಿ ಬೆಳೆದಿತ್ತು. ಹೀಗಾಗಿ ಅಹಿಂಸೆಯನ್ನು ಬೋಧಿಸುವ ಧರ್ಮದ ಕಡೆ ಜನರು ಆಕರ್ಷಿತರಾದರು.

ಹೀಗೆ ಹೊಸಮತಗಳ ಉದಯಕ್ಕೆ ಅನೇಕ ಪೂರಕವಾದ ಅಂಶಗಳಿದ್ದವು.