ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಪ್ರಾಕ್ತನಶಾಸ್ತ್ರಾಧಾರಗಳಂತೆಯೇ ಸಾಹಿತ್ಯಾಧಾರಗಳು ಸಹ ಭಿನ್ನವಾದ ಐತಿಹಾಸಿಕ ವಿಚಾರಗಳ ಸಂಗ್ರಹಣೆಗೆ ಅನುಕೂಲಕರವಾಗಿದೆ. ಸಾಹಿತ್ಯಾಧಾರಗನ್ನು ಅವುಗಳ ಲಭ್ಯತೆಗೆ ಅನುಸಾರವಾಗಿ 2 ವಿಭಾಗಗಳಲ್ಲಿ ವರ್ಗೀಕರಿಸಿ ನೋಡಬಹುದಾಗಿದೆ.

  1. ದೇಶೀಯ ಸಾಹಿತ್ಯಾಧಾರಗಳು 2. ವಿದೇಶಿಯ ಸಾಹಿತ್ಯಾಧಾರಗಳು.
  1. ದೇಶೀಯ ಸಾಹಿತ್ಯಾಧಾರಗಳು : ದೇಶೀಯ ಸಾಹಿತ್ಯಾಧಾರಗಳೆಂದರೆ ಆಸ್ಥಾನದ ಕವಿಗಳು ಮತ್ತು ಚರಿತ್ರಾಕಾರರಿಂದ ರಚಿಸಲ್ಪಟ್ಟ ಬರವಣಿಗೆಗಳು. ದೇಶೀಯ ಆಕರಗಳು ಚರಿತ್ರೆಯನ್ನು ಹೆಚ್ಚು ಸ್ಪಷ್ಟವಾಗಿ ನಿಖರವಾಗಿ ನಿರೂಪಿಸಲು ಸಹಕಾರಿಯಾಗಿವೆ. ಅಂತಹ ಆಧಾರಗಳೆಂದರೆ,

(ಅ) ಧಾರ್ಮಿಕ ಗ್ರಂಥಗಳು: ದೀಪವಂಶ ಮತ್ತು ಮಹಾವಂಶ ಕೃತಿಗಳು ತ್ರಿಪಿಠಕಗಳು, ಜೈನ ಆಗಮ ಸಿದ್ದಾಂತಗಳು, ಅಂಗಗಳು, ಉಪಾಂಗಗಳು ಬೌದ್ಧ ಮತ್ತು ಜೈನ ಧರ್ಮದ ಇತಿಹಾಸ ರಚನೆಗೆ ಹೆಚ್ಚು ಸಹಕಾರಿಯಾಗಿವೆ.

ವೇದವಾಙ್ಮಯ : ವೈದಿಕ ಸಂಸ್ಕೃತಿಯನ್ನು ಅರಿಯಲು ವೇದವಾಙ್ಮಯವೇ ಮೂಲಾಧಾರ. ವೇದವಾಙ್ಮಯದಲ್ಲಿ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು ಮತ್ತು ಉಪನಿಷತ್ಗಳು ಅಡಕವಾಗಿವೆ.

(ಆ) ಮಹಾಕಾವ್ಯಗಳು, ಪುರಾಣಗಳು: ಭಾರತೀಯರ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ಆರ್ಯರು ಮತ್ತು ಗಂಗಾ ನದಿಯ ಬಯಲಿನ ರಾಜರ ಸಂತತಿಯ ಬಗ್ಗೆ ವಿವರ ನೀಡುತ್ತವೆ. ಪ್ರಾಚೀನ ಇತಿಹಾಸದ ರಚನೆಯಲ್ಲಿ ಪುರಾಣಗಳು ಮತ್ತು ಸ್ಮೃತಿಗಳಪಾತ್ರವು ಕಂಡುಬರುತ್ತದೆ.

(ಇ) ಚಾರಿತ್ರಿಕ ಗ್ರಂಥಗಳು: ಕೌಟಿಲ್ಯನ ಅರ್ಥಶಾಸ್ತ್ರ, ಕಲ್ಹಣನ ರಾಜತರಂಗಿಣಿ, ಚರಕನ ಚರಕ ಸಂಹಿತೆ, ಸುಶೃತನ ಸುಶೃತಸಂಹಿತೆ, ಸಮುದ್ರಗುಪ್ತನ ಕೃಷ್ಣಚರಿತ, ಮಹೇಂದ್ರವರ್ಮನ ಮತ್ತವಿಲಾಸ ಪ್ರಹಸನ, ಇಳಂಗೋಅಡಿಗಳ್ ರವರ ತಿಲಪ್ಪದಿಕಾರಂ, ಸಾತ್ತನಾರ್‌ನ ಮಣಿಮೇಖಲೈ, ತಿರುತಕ್ಕದೇವರ್‌ನ ಜೀವಿಕ ಚಿಂತಾಮಣಿ, ಚಾವುಂಡರಾಯನ ಚಾವುಂಡರಾಯಪುರಾಣ, ಪಂಪನ ಆದಿಪುರಾಣ, ವಿಕ್ರಮಾರ್ಜುನ ವಿಜಯ, ಶಿವಮಾರನ ಗಜಶತಕ, 3ನೇ ಸೋಮೇಶ್ವರನ ಮಾನಸೋಲ್ಲಾಸ, ನಾಗವರ್ಮನ ಛಂದೋಂಬುದಿ ಮೊದಲಾದ ಗ್ರಂಥಗಳಲ್ಲಿ ಹೆಚ್ಚು ಚಾರಿತ್ರಿಕ ವಿಷಯಗಳು ಮೂಡಿಬಂದಿವೆ. ಅಶ್ವಘೋಶನ ಬುದ್ಧ ಚರಿತ, ಬಾಣಭಟ್ಟನ ಹರ್ಷಚರಿತೆ, ಹೇಮಚಂದ್ರನ ಕುಮಾರಪಾಲಚರಿತೆ, ಚಾಂದ್ ಬರ್ದಾಯಿಯ ಪೃಥ್ವಿರಾಜ ರಾಸೋ, ಬಿಲ್ಲಣನ ವಿಕ್ರಮಾಂಕ ದೇವಚರಿತೆ, ರನ್ನನ ಗದಾಯುದ್ಧ – ಈ ಕೃತಿಗಳು ರಾಜರ ಆಸ್ಥಾನದಲ್ಲಿದ್ದ ಚರಿತ್ರಾಕಾರರಿಂದ ರಚನೆಗೊಂಡಿದ್ದು ಹೆಚ್ಚು ಐತಿಹಾಸಿಕ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತವೆ.

ಈ) ನಾಟಕಗಳು: ಕಾಳಿದಾಸನ ರಘುವಂಶ, ಮಾಳವಿಕಾಗ್ನಿಮಿತ್ರ, ವಿಶಾಖದತ್ತನ ಮುದ್ರಾರಾಕ್ಷಸ, ಶೂದ್ರಕನ ಮೃಚ್ಚಕಟಿಕ ಮೊದಲಾದ ನಾಟಕರೂಪದ ಕೃತಿಗಳಲ್ಲಿ ಅಲ್ಪ ಸ್ವಲ್ಪ ಚಾರಿತ್ರಿಕ ಮಾಹಿತಿ ಲಭ್ಯವಾಗುತ್ತದೆ.

  1. ವಿದೇಶಿಯ ಸಾಹಿತ್ಯಾಧಾರಗಳು (ವಿದೇಶಿಯರ ಬರವಣಿಗೆಗಳು):

ಭಾರತವು ಪ್ರಾಚೀನ ಕಾಲದಿಂದ ನಾಗರೀಕತೆ ಸಂಸ್ಕೃತಿಯ ಆವಾಸಸ್ಥಾನ ರಾಷ್ಟ್ರವಾದುದರಿಂದ ಅನೇಕ ವಿದೇಶಿ ಪ್ರವಾಸಿಗರು, ಮತಪ್ರಚಾರಕರು, ವ್ಯಾಪಾರ ವಾಣಿಜ್ಯೋದ್ಯಮಿಗಳು ಭಾರತಕ್ಕೆ ಭೇಟಿನೀಡಿದ್ದರು. ಹಾಗೆ ಬಂದ ವಿದೇಶಿಯರು ತಾವು ಕಂಡು ಕೇಳಿದ ವಿಚಾರಗಳನ್ನು ತಮ್ಮ ಬರವಣಿಗೆಗಳಲ್ಲಿ, ಪ್ರವಾಸ ಕಥನಗಳಲ್ಲಿ ನಮೂದಿಸಿದ್ದಾರೆ. ಅಂತಹ ಬರವಣಿಗೆಗಳು ಭಾರತೀಯ ಚರಿತ್ರೆಯ ಹಲವು ಹತ್ತು ವಿಚಾರಗಳು ಪ್ರಸ್ತಾಪಿಸಲ್ಪಟ್ಟಿವೆ.

1. ಗ್ರೀಕ್ ರೋಮನ್ನರ ಬರವಣಿಗೆಗಳು:

  1. ಹೆರೋಡಾಟಸ್‌ನ ಬರವಣಿಗೆಗಳಲ್ಲಿ ಪರ್ಷಿಯನ್ನರ ಆಕ್ರಮಣದ ವಿವರಗಳಿವೆ.
  2. ಪ್ಲಿನಿ ಮತ್ತು ಟಾಲಮಿಯ ಪ್ರಾಕೃತಿಕ ಚರಿತ್ರೆ ಮತ್ತು ಭೂಗೋಳಶಾಸ್ತ್ರ ಕೃತಿಗಳಲ್ಲಿ ಭಾರತವು ಪ್ರಾಚೀನ ಕಾಲದಲ್ಲಿ ಹೊಂದಿದ್ದ ವ್ಯಾಪಾರ ವಾಣಿಜ್ಯದ ವಿವರಗಳು, ತೀರಪ್ರದೇಶದ ಬಂದರುಗಳ ಪಾತ್ರ ವಿವರಿಸಲ್ಪಟ್ಟಿದೆ.
  3. ಮೆಗಾಸ್ಥನೀಸನ ಇಂಡಿಕಾ ಮೌರ್ಯರ ಇತಿಹಾಸ ಬಗ್ಗೆ ಬೆಳಕು ಚೆಲ್ಲುತ್ತದೆ.
  4. ಗ್ರೀಕ್ ಅನಾಮಧೇಯನಿಂದ ರಚನೆಗೊಂಡ ʻದಿ ಪರಿಪ್ಲಸ್ ಆಫ್ ದಿ ಎರಿತ್ರಿಯನ್‌’ ಕ್ರಿಶ 1ನೇಶತಮಾನದ ವ್ಯಾಪಾರ ವಹಿವಾಟಿನ ವಿವರಗಳನ್ನೊಳಗೊಂಡಿದೆ.