ಪೀಠಿಕೆ:

ಪ್ರಾಚೀನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಖಂಡ ಮತ್ತು ಐತಿಹಾಸಿಕ ಸಾಮ್ರಾಜ್ಯ ನಿರ್ಮಿಸಿದ ಮೌರ್ಯರು ಸುಭದ್ರ ಮತ್ತು ಸುವ್ಯವಸ್ಥಿತ ಆಡಳಿತವನ್ನು ಸಂಸ್ಥಾಪಿಸಿದ್ದರು. ಇಂತಹ ಆಡಳಿತವು ಮಾದರಿಯಾದ ಒಂದು ಆಡಳಿತವೆಂದು ತಿಳಿದುಬರುತ್ತದೆ. ಮೌರ್ಯರ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಹಾಯಕವಾಗಿರುವ ಆಧಾರಗಳೆಂದರೆ ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ಥನೀಸನ ಇಂಡಿಕಾ ಮತ್ತು ಅಶೋಕನ ಶಾಸನಗಳು ಹಾಗು ವಿದೇಶಿಯರ ಬರಹಗಳು ಮೊದಲಾದ ಆಕರಗಳು ಮೌರ್ಯರ ಆಡಳಿತದ ಸ್ಪಷ್ಟ ಚಿತ್ರಣ ನೀಡುತ್ತವೆ. ಉತ್ತುಂಗ ಸ್ಥಿತಿಯಲ್ಲಿ ಮೌರ್ಯರ ಪ್ರಭುತ್ವವು ಉತ್ತರದಲ್ಲಿ ಪರ್ಶಿಯಾದಿಂದ ದಕ್ಷಿಣದಲ್ಲಿ ಕರ್ನಾಟಕ ದವರೆಗೂ ವಿಸ್ತರಿಸಿತ್ತು. ಇಂತಹ ಮೌರ್ಯ ಪ್ರಭುತ್ವದ ಆಡಳಿತದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ. ಅವುಗಳೆಂದರೆ

  1. ಪ್ರಬಲ ಕೇಂದ್ರೀಕೃತ ಆಡಳಿತ : ಮೌರ್ಯರ ಆಡಳಿತವು ಭಾಗಶಃ ಕೇಂದ್ರೀಕೃತವೂ ಮತ್ತು ಭಾಗಶಃ ವಿಕೇಂದ್ರೀಕೃತವೂ ಆದ ಲಕ್ಷಣಗಳನ್ನು ಒಳಗೊಂಡಿತ್ತು. ಹರಿದು ಹಂಚಿಹೋಗಿದ್ದ ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರುವ ಮೂಲಕ ಭಾರತದಲ್ಲಿ ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದ್ದರು. ರಾಜ ಮತ್ತು ಮಂತ್ರಿಪರಿಷತ್ ಮೂಲಕ ಕೇಂದ್ರಾಡಳಿತವು ಪ್ರಬಲವಾಗಿ ಬೆಳೆದದ್ದು ಕಂಡುಬರುತ್ತದೆ.
  2. ಸಾಂಕುಶ ಪ್ರಜಾಪ್ರಭುತ್ವ : ಮೌರ್ಯರ ಆಡಳಿತ ವ್ಯವಸ್ಥೆಯ ಒಂದು ಗುಣಾತ್ಮಕ ಲಕ್ಷಣವೆಂದರೆ ಸಾಂಕುಶ ಪ್ರಭುತ್ವದ ಸ್ಥಾಪನೆ. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದರಿಂದ ಅದು ನಿರಂಕುಶ ಆಡಳಿತಾಧಿಕಾರವೆಂದು ಗುರುತಿಸಿದ್ದರೂ, ಆಡಳಿತ ಮಾತ್ರ ಸಾಂಕುಶ ರೀತಿಯದಾಗಿತ್ತು. ರಾಜನು ಪ್ರಜಾ ಅಭ್ಯುದಯಕ್ಕಾಗಿ ಆಡಳಿತವನ್ನು ಬಳಸಿದ್ದು ಪ್ರಧಾನವಾಗಿ ಕಂಡುಬರುತ್ತದೆ.
  3. ವಿಕೇಂದ್ರೀಕೃತ ಆಡಳಿತ: ಮೌರ್ಯರ ಆಡಳಿತ ವ್ಯವಸ್ಥೆಯ ಮತ್ತೊಂದು ಪ್ರಧಾನ ಲಕ್ಷಣವೆಂದರೆ ವಿಕೇಂದ್ರೀಕೃತ ಆಡಳಿತದ ಸ್ಥಾಪನೆ. ವಿಶಾಲ ಸಾಮ್ರಾಜ್ಯವನ್ನು ಏಕವ್ಯಕ್ತಿಯ, ಅರಸೊತ್ತಿಗೆಯ ಆಡಳಿತಕ್ಕೊಳಪಡಿಸುವುದು ಕಠಿಣವೆಂಬ ದೃಷ್ಟಿಯಿಂದ ವಿಕೇಂದ್ರೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ವಿಕೇಂದ್ರೀಕೃತ ಆಡಳಿತದಲ್ಲಿ ಪ್ರಾಂತ್ಯಾಡಳಿತ, ಜಿಲ್ಲೆಯ ಆಡಳಿತ ಮತ್ತು ನಗರಾಡಳಿತಗಳು ಕಂಡುಬರುತ್ತಿದ್ದವು.

1. ಕೇಂದ್ರಾಡಳಿತ.

ಕೇಂದ್ರಾಡಳಿತವು ರಾಜ ಮತ್ತು ಮಂತ್ರಿ ಪರಿಷತ್ ಮೂಲಕ ನಡೆಯುತ್ತಿತ್ತು.

ಅರಸ : ಕೇಂದ್ರಾಡಳಿತದ ಕೇಂದ್ರಬಿಂದು ರಾಜನಾಗಿದ್ದನು. ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಅಲ್ಲದೆ ದಕ್ಷತೆ ಮತ್ತು ಅರ್ಹತೆಯ ಆಧಾರದ ಮೇಲೂ ರಾಜನ ಆಯ್ಕೆಯಾಗುತ್ತಿತ್ತು. ಉದಾ:-ಅಶೋಕ ಮಹಾಶಯ ದಕ್ಷತೆಯ ಆಧಾರದ ಮೇಲೆ ಅರಸನಾಗಿದ್ದನು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾದೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ರಾಜನು ಕಾರ್ಯ ನಿರ್ವಹಿಸುತ್ತಿದ್ದನು. ರಾಜನಿಗೆ ಅಧಿಕಾರಗಳ ದೃಷ್ಟಿಯಿಂದ ನಿರಂಕುಶಾಧಿಕಾರಿಯಾದರೂ ಆಡಳಿತ ಮಾತ್ರ ಪ್ರಜಾಹಿತಕಾರಿಯಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವೆಂಬ ದೃಷ್ಠಿಯಿಂದ ರಾಜನು ಆಡಳಿತ ನಡೆಸುತ್ತಿದ್ದನು. ಕೌಟಿಲ್ಯನ ಅರ್ಥಶಾಸ್ತ್ರ, ಮೌರ್ಯರ ಆಡಳಿತಕ್ಕೆ ಮಾರ್ಗದರ್ಶಕವಾಗಿತ್ತು.

ಮಂತ್ರಿ ಪರಿಷತ್ : ರಾಜನು ಆಡಳಿತ ನಿರ್ವಹಣೆಯಲ್ಲಿ ಮಂತ್ರಿಪರಿಷತ್‌ನ್ನು ಸ್ಥಾಪಿಸಿಕೊಂಡಿದ್ದನು. ಒಂದು ಗಾಡಿ ಉರುಳಲು ಎರಡು ಚಕ್ರಗಳ ಸಹಾಯದಂತೆ ರಾಜ್ಯಾಡಳಿತ ನಡೆಸಲು ರಾಜ ಮತ್ತು ಮಂತ್ರಿಪರಿಷತ್ ಪರಸ್ಪರ ಸಹಕರಿಸಿ ಆಡಳಿತ ನಡೆಸಬೇಕಾಗಿತ್ತು. ರಾಜನು ರಾಜ್ಯದ ಸಪ್ತಾಂಗಗಳಲ್ಲಿ ಒಂದು ಅಂಗ ಮಾತ್ರ ಉಳಿದವು ಗಳೆಂದರೆ ಅಮಾತ್ಯ, ಕೋಶ(ಖಜಾನೆ), ಬಲ(ಸೇನೆ), ಜನಪದ(ಪ್ರಾಂತ್ಯ), ದುರ್ಗ(ಕೋಟೆ) ಮತ್ತು ಮಿತ್ರ(ನೆರೆರಾಜ್ಯ). ಮಂತ್ರಿಗಳನ್ನು ಆಯ್ಕೆಮಾಡುವಾಗ ದಕ್ಷತೆ, ಅರ್ಹತೆ, ವಿದ್ಯೆ ಮತ್ತು ಕಾನೂನಿನ ಪರಿಜ್ಞಾನ ಹೊಂದಿರುವವರನ್ನು ಮಾತ್ರ ಆರಿಸಲಾಗುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಮಂತ್ರಿಪರಿಷತ್ ರಚನೆ ಮತ್ತು ಕಾರ್ಯನಿರ್ವಹಣೆಯ ವಿವರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಮಂತ್ರಿಪರಿಷತ್‌ ಸದಸ್ಯರ ಸಂಖ್ಯೆಯು ಅವಶ್ಯಕತೆಯನ್ನು ಆಧರಿಸಿತ್ತು. ವರ್ಷಕ್ಕೆ 12,000 ಪಣಗಳನ್ನು ಸಂಭಾವನೆಯಾಗಿ ಮಂತ್ರಿಗಳಿಗೆ ನೀಡಲಾಗುತ್ತಿತ್ತು. ಮಂತ್ರಿಪರಿಷತ್ ಸಭೆಯನ್ನು ಅರಸನ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿತ್ತು. ಮಂತ್ರಿ ಪರಿಷತ್‌ನ ಕಾರ್ಯಚಟುವಟಿಕೆಗಳ ವಿವರಗಳನ್ನು ಗುಪ್ತವಾಗಿ ಇಡಲಾಗುತ್ತಿತ್ತು.

ಮೌರ್ಯರು ತಮ್ಮ ಆಡಳಿತವನ್ನು 18 ವಿವಿಧ ಇಲಾಖೆಗಳಲ್ಲಿ ವಿಭಾಗಿಸಿದ್ದರು. ಪ್ರತಿಯೊಂದು ಇಲಾಖೆಯನ್ನು ಮೇಲ್ವಿಚಾರಕನ ಅಧೀನಕ್ಕೊಳಪಡಿಸಲಾಗಿತ್ತು. ಅಂತಹ ಇಲಾಖೆಗಳೆಂದರೆ ಖಜಾನೆ, ಗಣಿ, ವಿದೇಶಾಂಗ, ಅರಣ್ಯ, ತೂಕ ಅಳತೆ, ಶಸ್ತ್ರಾಗಾರ, ಸುಂಕ, ನೇಯ್ದೆ, ಕೃಷಿ, ಅಬಕಾರಿ, ವೇಶೈಯರು, ಬಂದೀಖಾನೆ, ರಸ್ತೆ, ಬಂದರು. ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಮೊದಲಾದವು

2. ಪ್ರಾಂತೀಯ ಆಡಳಿತ :

ವಿಶಾಲವಾದ ಮೌರ್ಯಚಕ್ರಾಧಿಪತ್ಯವನ್ನು ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಪ್ರಾಂತೀಯ ಆಡಳಿತದಲ್ಲಿ ಸಂಘಟಿಸಲಾಗಿತ್ತು. ಪ್ರಾಂತ್ಯಗಳು ವಿಭಜನೆಯ ದೃಷ್ಟಿಯಿಂದ ಏಕರೂಪವಾಗಿರಲಿಲ್ಲ. ಕೆಲವು ದೊಡ್ಡ ಪ್ರಾಂತ್ಯಗಳಿದ್ದರೆ ಹಲವು ಚಿಕ್ಕ ಪ್ರಾಂತ್ಯಗಳಿದ್ದವು. ಚಂದ್ರಗುಪ್ತನ ಕಾಲಾವಧಿಯಲ್ಲಿನ ಪ್ರಾಂತೀಯ ಆಡಳಿತದ ಸ್ಪಷ್ಟ ಚಿತ್ರಣ ದೊರಕುವುದಿಲ್ಲ. ಆದರೆ ಅಶೋಕ, ಮೌರ್ಯನ ಕಾಲದಲ್ಲಿ ಕಳಿಂಗ, ತಕ್ಷಶಿಲೆ, ಉಜ್ಜಯನಿ ಮತ್ತು ಸುವರ್ಣಗಿರಿ ಎಂಬ ನಾಲ್ಕು ಪ್ರಾಂತ್ಯಗಳಿದ್ದವೆಂದು ತಿಳಿದು ಬರುತ್ತದೆ.

ರಾಜಪ್ರತಿನಿಧಿ : ಪ್ರಾಂತ್ಯಾಡಳಿತದ ಮುಖ್ಯಸ್ಥನನ್ನು ರಾಜಪ್ರತಿನಿಧಿ ಅಥವಾ ಗೌರ್ನರ್ ಎಂದು ಹೆಸರಿಸ ಲಾಗಿತ್ತು. ಯುವರಾಜ ಅಥವಾ ರಾಜನ ಸಂಬಂಧಿಗಳು ಪ್ರಾಂತ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪ್ರಾಂತೀಯ ಆಡಳಿತವು ಸಹ ಕೇಂದ್ರಾಡಳಿತದಂತೆಯೇ ಸುವ್ಯವಸ್ಥಿತ ಆಡಳಿತವಾಗಿತ್ತು. ಪ್ರಾಂತ್ಯಗಳ ಸಾಮಾನ್ಯ ಆಡಳಿತ ನೋಡಿಕೊಳ್ಳುವುದು, ನ್ಯಾಯಪರಿಪಾಲನೆ ಮತ್ತು ಶಿಸ್ತು ಸ್ಥಾಪನೆಯು ಗೌರ್ನರ್‌ನ ಕರ್ತವ್ಯವಾಗಿತ್ತು. ಪ್ರಾಂತ್ಯಗಳಲ್ಲಿನ ಸುಂಕವನ್ನು ವಸೂಲಿಮಾಡಿ ಖಜಾನೆಗೆ ಸಲ್ಲಿಸಬೇಕಾಗಿತ್ತು. ಅಲ್ಲದೆ ಪ್ರಾಂತ್ಯದ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕಾಗಿತ್ತು.

ಪ್ರಾಂತ್ಯಗಳಲ್ಲಿ ಸುವ್ಯವಸ್ಥಿತ ಆಡಳಿತಕ್ಕಾಗಿ ಹಲವು ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರೆಂದರೆ, ರಾಜುಕರು, ಯುಕ್ತರು, ಪ್ರಾದೇಶಿಕರು ಮತ್ತು ಪುರುಷರು. ಆದರೆ ಇವರುಗಳ ಕಾರ್ಯನಿರ್ವಹಣೆಯ ಬಗ್ಗೆ ಏಕಾಭಿಪ್ರಾಯವಿಲ್ಲ ಪ್ರಾಂತ್ಯಗಳನ್ನು ಆಹರ, ವಿಷಯ ಹಾಗೂ ಪ್ರದೇಶಗಳೆಂದು ಸಹ ವಿಭಾಗಿಸಲಾಗಿತ್ತು.

3. ಜಿಲ್ಲೆಯ ಆಡಳಿತ:

ಪ್ರಾಂತ್ಯದ ಆಡಳಿತದ ಕೆಳಹಂತದಲ್ಲಿ ಜಿಲ್ಲೆಯ ಆಡಳಿತವಿದ್ದಿತು. ಪ್ರತಿಯೊಂದು ಜಿಲ್ಲೆ ಯಲ್ಲಿಯೂ ‘ಸ್ಥಾನಿಕರು’ ಆಡಳಿತ ನೋಡಿಕೊಳ್ಳುತ್ತಿದ್ದರು. ಜಿಲ್ಲೆಯ ಕಂದಾಯ ವಸೂಲಾತಿ, ನ್ಯಾಯಪರಿಪಾಲನೆ ಮತ್ತು ಶಿಸ್ತಿನ ಸ್ಥಾಪನೆ, ಸ್ಥಾನಿಕ ಆಡಳಿತಗಾರನ ಆದ್ಯ ಕರ್ತವ್ಯವಾಗಿತ್ತು. ಸ್ಥಾನಿಕನ ಸಹಾಯಕ್ಕೆ ಗೋಪ ಎಂಬ ಅಧಿಕಾರಿಯಿದ್ದನು. ಸ್ಥಾನಿಕನ ಆಡಳಿತವನ್ನು ಇಂದಿನ ಜಿಲ್ಲಾಧಿಕಾರಿಗಳ ಆಡಳಿತಕ್ಕೆ ಹೋಲಿಸಬಹುದು.

4. ನಗರಾಡಳಿತ (ಪಾಟಲೀಪುತ್ರದ ಆಡಳಿತ ವ್ಯವಸ್ಥೆ)

ಮೆಗಾಸ್ಥನೀಸನ ಇಂಡಿಕಾ ಕೃತಿಯು ಮೌರ್ಯರ ನಗರಾಡಳಿತದ ಬಗ್ಗೆ ಸ್ಪಷ್ಟ ವಿವರ ನೀಡುತ್ತದೆ. ಮೌರ್ಯರ ಕಾಲದ ನಗರಾಡಳಿತಕ್ಕೆ ಪಾಟಲೀಪುತ್ರವು ಸ್ಪಷ್ಟ ಉದಾಹರಣೆಯಾಗಿತ್ತು. ಪಾಟಲೀಪುತ್ರದ ಆಡಳಿತವು ಮಾದರಿಯಾದ ನಗರಾಡಳಿತಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ನಗರಾಡಳಿತವನ್ನು ನೋಡಿಕೊಳ್ಳಲು 30 ಅಧಿಕಾರಿಗಳಿದ್ದರು. ಆರು ಸಮಿತಿಗಳಿದ್ದು(ಮಂಡಳಿ) ಪ್ರತಿ ಸಮಿತಿಯಲ್ಲೂ ಐದು ಜನ ಸದಸ್ಯರಿದ್ದರು. ಪ್ರತಿ ಸಮಿತಿಯು ಒಂದೊಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು.

  1. ಕೈಗಾರಿಕಾ ಸಮಿತಿ : ಈ ಸಮಿತಿಯು ಕೈಗಾರಿಕೆ ಮತ್ತು ಕರಕುಶಲತೆಯನ್ನು ನೋಡಿಕೊಳ್ಳುತ್ತಿತ್ತು. ಅಂದರೆ ಸರಕುಗಳ ಉತ್ಪಾದನೆಯಲ್ಲಿ ಉತ್ತಮ ಕಚ್ಚಾಸರಕುಗಳನ್ನು ಬಳಸಲಾಗಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ.
  2. ವಿದೇಶಿಯರ ಚಲನ ವಲನ ಸಮಿತಿ : ಈ ಸಮಿತಿಯು ವಿದೇಶಿಯರ ಯೋಗಕ್ಷೇಮವನ್ನು ನೋಡಿಕೊಳ್ಳುತಿತ್ತು. ವಿದೇಶಿಯರ ವಸತಿ, ವೈದ್ಯಕೀಯ ಮತ್ತು ಸಂರಕ್ಷಣೆಯ ಜವಾಬ್ದಾರಿ, ಪ್ರವಾಸದ ಸಂದರ್ಭದಲ್ಲಿ ಮರಣ ಹೊಂದಿದ ವಿದೇಶಿಯರ ಸರಕುಗಳನ್ನು ಅವರ ಸಂಬಂಧಿಗಳಿಗೆ ತಲುಪಿಸುವುದು.
  3. ಜನಗಣತಿ ಸಮಿತಿ : ಈ ಸಮಿತಿಯ ಜವಾಬ್ದಾರಿ ಜನನ-ಮರಣಗಳ ದಾಖಲೆಯ-ಸಂಗ್ರಹಣೆ ಮತ್ತು ವರದಿ ನೀಡಿಕೆ.
  4. ವ್ಯಾಪಾರ ಮತ್ತು ವಾಣಿಜ್ಯ ಸಮಿತಿ : ಈ ಸಮಿತಿಯು ವ್ಯಾಪಾರ ಮತ್ತು ವಾಣಿಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿತ್ತು.
  5. ಸರಕು ಮೇಲ್ವಿಚಾರಣ ಸಮಿತಿ : ಸರಕುಗಳ ಮೇಲ್ವಿಚಾರಣೆಯನ್ನು ಮಾಡುತಿತ್ತು. ಸರಕುಗಳ ವಿಕ್ರಯಕಾರ್ಯ ಮತ್ತು ಸರಕುಗಳ ಕಲಬೆರೆಕೆಯನ್ನು ತಡೆಯುವುದು ಈ ಸಮಿತಿಯ ಕಾರ್ಯವಾಗಿತ್ತು.
  6. ತೆರಿಗೆ ವಸೂಲಿ ಸಮಿತಿ : ಈ ಸಮಿತಿಯು ಮಾರಾಟವಾಗುತ್ತಿದ್ದ ಸರಕುಗಳ ಮೇಲೆ 1/10 ರಷ್ಟು ಕರವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು. ಹೀಗೆ ವಿವಿಧ ಸಮಿತಿಗಳು ವಿಭಿನ್ನ ಆಡಳಿತ ಸಂಘಟನೆಯನ್ನು ನೋಡಿಕೊಳ್ಳುತ್ತಿದ್ದವು.

ನೌಕಾ ಸಮಿತಿ, ರಥ ಸಮಿತಿ,

ಕಾಲ್ಗಳ ಸಮಿತಿ, ಗಜದಳ ಸಮಿತಿ,

ಸಾರಿಗೆ ಮತ್ತು ಸರಬರಾಜು ಸಮಿತಿ. ಅಶ್ವದಳ ಸಮಿತಿ,

ಮೌರ್ಯರು ವ್ಯವಸ್ಥಿತ ಸೈನಾಡಳಿತ ಹೊಂದಿದ್ದರಿಂದ ವಿಶಾಲಸಾಮ್ರಾಜ್ಯ ನಿರ್ಮಿಸಿ ದಕ್ಷ ಆಡಳಿತ ನಡೆಸಿದರು.

5. ಗೂಢಾಚಾರ ವ್ಯವಸ್ಥೆ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ಗುಪ್ತ ಗೂಢಾಚಾರ ಪದ್ಧತಿಯನ್ನು ಹೊಂದಿದ್ದರು. ಗೂಢಾಚಾರರನ್ನು ರಾಜನ ಕಣ್ಣುಗಳು ಹಾಗೂ ಕಿವಿಗಳು ಎಂದೇ ಭಾವಿಸಲಾಗಿತ್ತು. ಗೂಢಾಚಾರರು ಸಾಮ್ರಾಜ್ಯದ ದೈನಂದಿನ ಚಟುವಟಿಕೆಗಳಲ್ಲದೆ, ಮುಖ್ಯವಾದ ರಹಸ್ಯ ವಿಚಾರಗಳನ್ನು ಸಂಗ್ರಹಿಸಿ ಅರಸನಿಗೆ ವರದಿ ಒಪ್ಪಿಸುತ್ತಿದ್ದರು. ಗೂಢಾಚಾರರು ಮಂತ್ರಿಗಳು ಮತ್ತು ರಾಣಿಯರ ಚಟುವಟಿಕೆಗಳ ಮೇಲೂ ಗಮನ ಹರಿಸಬೇಕಾಗಿತ್ತು. ಗೂಢಾಚಾರರು ತಪ್ಪು ವರದಿಯನ್ನು ಸಲ್ಲಿಸಿದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುತಿತ್ತು.

6. ಕಂದಾಯ ಆಡಳಿತ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ವ್ಯವಸ್ಥಿತವಾದ ಕಂದಾಯದ ಆಡಳಿತವನ್ನು ಜಾರಿಗೆ ತಂದಿದ್ದರು. ವಿವಿಧ ಆದಾಯದ ಮೂಲಗಳಿಂದ ಆದಾಯವನ್ನು ಸಂಗ್ರಹಿಸಿ ಖಜಾನೆಯನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಿದರು. ಆರ್ಥಿಕ ದುಸ್ಥಿತಿ ಉಂಟಾಗದಂತೆ ಗಮನ ಹರಿಸುತ್ತಿದ್ದರು. ಮೌರ್ಯರು ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ತೆರಿಗೆ ನಿಗದಿಗೊಳಿಸುವಾಗ ಉದಾರ ನೀತಿಯನ್ನು ಅನುಸರಿಸಲಾಗುತಿತ್ತು.

  • ಭೂಕಂದಾಯವು ಸಾಮ್ರಾಜ್ಯದ ಆದಾಯದ ಮೂಲಗಳಲ್ಲಿ ಪ್ರಮುಖವಾಗಿತ್ತು. ಭೂಮಿಯ ಗುಣಮಟ್ಟವನ್ನು ಆಧರಿಸಿ ಉತ್ಪಾದನೆಯ 1/6 ರಿಂದ 1/4ರಷ್ಟು ಭೂಕಂದಯವನ್ನು ವಸೂಲಿಮಾಡಲಾಗುತಿತ್ತು.
  • ಪ್ರಾಣಿಗಳ ಮೇಲೆ ತೆರಿಗೆಯನ್ನು ಹಾಕುವ ಕ್ರಮ ಅನುಸರಣೆಯಲ್ಲಿತ್ತು. ಕುರಿಗಳು ಮತ್ತು ಹಸುಗಳ ಮೇಲೆ ತೆರಿಗೆಯನ್ನು ಹಾಕಲಾಗುತಿತ್ತು.
  • ವ್ಯಾಪಾರ ವಾಣಿಜ್ಯದ ಮೇಲೆ ತೆರಿಗೆ ಹಾಕಲಾಗುತಿತ್ತು. 1/5ಭಾಗವನ್ನು ಸುಂಕದ ವಸೂಲಿಯಾಗಿ ಸಂಗ್ರಹಿಸಲಾಗುತಿತ್ತು.
  • ಗಣಿಗಳು ಮತ್ತು ಕಾಡಿನ ವಸ್ತುಗಳ ಮೇಲೆ ಸಾಮ್ರಾಜ್ಯವು ಒಡೆತನ ಹೊಂದಿತ್ತು.

ಹೀಗೆ ವಿವಿಧ ಮೂಲಗಳಿಂದ ಸಂಗ್ರಹಣೆಗೊಂಡ ಆದಾಯವನ್ನು ಸಾಮ್ರಾಜ್ಯದ ವಿವಿಧ ವೆಚ್ಚಕ್ಕಾಗಿ ಬಳಸಲಾಗುತ್ತಿತ್ತು. ಹುಟ್ಟುವಳಿಯ ಅಧಿಕ ಭಾಗವನ್ನು ಸೇನೆಯ ವೆಚ್ಚಕ್ಕಾಗಿ ಬಳಸಲಾಗುತಿತ್ತು.

ಮೌರ್ಯರ ಆಡಳಿತ ವ್ಯವಸ್ಥೆಯ ದೋಷಗಳು

  1. ಕ್ರಿಮಿನಲ್ ಕಾಯಿದೆ ಕಠಿಣವಾಗಿತ್ತು. ಮರಣ ದಂಡನೆ ಸಾಮಾನ್ಯವಾಗಿತ್ತು.
  2. ರಾಜ್ಯದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ರಹದಾರಿ ಪತ್ರ ಬೇಕಾಗಿತ್ತು. ಇದರಿಂದ ವ್ಯಾಪಾರಿಗಳಿಗೂ ಮತ್ತು ಸಾಮಾನ್ಯ ಜನರಿಗೂ ತೊಂದರೆಯಾಗಿತ್ತು.
  3. ಗೂಢಾಚಾರ ವ್ಯವಸ್ಥೆ ಪ್ರಬಲವಾಗಿದ್ದು ಜನರು ಮಾತನಾಡಲು ಹೆದರಿಕೊಳ್ಳುತ್ತಿದ್ದರು. ವಾಕ್ ಸ್ವಾತಂತ್ರ್ಯಕ್ಕೆ ಚ್ಯುತಿಯಾಗಿತ್ತು.

ಒಟ್ಟಾರೆ ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ದೋಷಗಳಿದ್ದರೂ ಅತ್ಯಧಿಕ ಸಂಖ್ಯೆಯಲ್ಲಿ ಗುಣಗಳೇ ಕಂಡುಬರುತ್ತವೆ. ಮೆಗಾಸ್ಥನೀಸನ ಇಂಡಿಕಾ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಕೃತಿಗಳು ಮೌರ್ಯರ ಆಡಳಿತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಪ್ರಾಚೀನಕಾಲದಲ್ಲಿ ಮೌರ್ಯರು ಭಾರತೀಯ ಆಡಳಿತ ವ್ಯವಸ್ಥೆಗೆ ಉತ್ತಮ ಅಡಿಪಾಯ ಹಾಕಿದರು. ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯ ಮೂಲ ಬೇರುಗಳನ್ನು ಮೌರ್ಯರ ಆಡಳಿತದಲ್ಲಿಯೇ ಗುರುತಿಸಬೇಕಾಗುತ್ತದೆ.