ಗೌತಮ ಬುದ್ಧನಿಂದ ಸಂಸ್ಥಾಪಿಸಲ್ಪಟ್ಟ ಬೌದ್ಧಪಂಥವು ಸಮಗ್ರ ಭಾರತದಾದ್ಯಂತ ಪ್ರಸರಣಗೊಂಡು ಚೀನಾ, ಜಪಾನ್, ಬರ್ಮ, ಮಲಯ, ನೇಪಾಳ, ಭೂತಾನ್, ಟಿಬೆಟ್, ಸಿಂಹಳಗಳಲ್ಲಿ ಪ್ರಚಾರಗೊಂಡಿತು. ಭಾರತದಲ್ಲಿ ಜನ್ಮತಾಳಿದ ಬೌದ್ಧಪಂಥವು ತಾಯ್ಯಾಡಿನಲ್ಲಿ ಕಣ್ಮರೆಯಾದರೂ ಹೊರರಾಷ್ಟ್ರಗಳಲ್ಲಿ ಇಂದಿಗೂ ಪ್ರಧಾನ ಧರ್ಮವಾಗಿಯೇ ಉಳಿದುಕೊಂಡಿದೆ, ಬೌದ್ಧಪಂಥದ ಅಭ್ಯುದಯಕ್ಕೆ ಹಲವಾರು ಪ್ರಮುಖ ಕಾರಣಗಳಿದ್ದವು.

ಎ) ಬುದ್ಧನ ವ್ಯಕ್ತಿತ್ವ : ಬೌದ್ಧಪಂಥದ ಅಭ್ಯುದಯಕ್ಕೆ ಪ್ರಮುಖ ಕಾರಣ ಬುದ್ಧನ ಆಕರ್ಷಕ ವ್ಯಕ್ತಿತ್ವ. ʻವಿಲ್‌ಡೂರೆಂಟ್’ ಅಭಿಪ್ರಾಯದಂತೆ ‘ಬುದ್ಧನು ಏಷ್ಯಾದ ಜ್ಯೋತಿ, ಕಾರುಣ್ಯಮೂರ್ತಿ ಮತ್ತು ಸ್ಥಿತಪ್ರಜ್ಞ’. ಬುದ್ಧನ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಬೌದ್ಧಮತಾವಲಂಬಿಗಳಾದರು.

ಬಿ) ಬೌದ್ಧ ಮಹಾಸಭೆಗಳು : ಬೌದ್ಧಧರ್ಮದ ಅಭ್ಯುದಯಕ್ಕೆ 4 ಬೌದ್ಧ ಮಹಾಸಭೆಗಳು ನಡೆದಿರುವುದು ಕಾರಣವಾಗಿದೆ.

ಬೌದ್ಧ ಸಮ್ಮೇಳನಗಳು

ಕ್ರಸಂ.

ವರ್ಷ

ಅಧ್ಯಕ್ಷತೆ

ಸ್ಥಳ

ಆಶ್ರಯದಾತ

ಉದ್ದೇಶ

1.

ಕ್ರಿ.ಪೂ 487

ಮಹಾಕಶ್ಯಪ

ರಾಜಗೃಹ

ಅಜಾತಶತೃ

ತ್ರಿಪಿಟಕಗಳ ರಚನೆ

2.

ಕ್ರಿ.ಪೂ 387

ಸಬಾಕಾಮಿ

ವೈಶಾಲಿ

ಕಾಲಾಶೋಕ

ಸಂಘ ತೇರವಾದಿ ಮತ್ತು ಮಹಾ ಸಾಂಘಿಕರಾಗಿ ವಿಭಜನೆ

3.

ಕ್ರಿ.ಪೂ 251

ಮೊಗ್ಗಲಿಪುತ್ರ

ಪಾಟಲೀಪುತ್ರ

ಅಶೋಕ

ವಿದೇಶಗಳಿಗೆ ಮಿಷನರಿಗಳ ನೇಮಕ, ಅಭಿಧಮ್ಮ ಪೀಟಕ ರಚನೆ

4.

ಕ್ರಿ.ಪೂ 100

ವಸುಮಿತ್ರ

ಕುಂಡಲಿವನ

ಕಾನಿಷ್ಕ

18 ಪಂಥಿಯರ ನಡುವೆ ಭಿನ್ನತೆ

5.

ಕ್ರಿ.ಪೂ 643

ಹೂಯೆನ್‌ತ್ಸಾಂಗ್

ಕನೂಜ್

ಹರ್ಷವರ್ಧನ

ಮತ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು

ಸಿ) ಬೌದ್ಧಸಂಘದ ಪಾತ್ರ : ಧರ್ಮದ ಪ್ರಾಬಲ್ಯಕ್ಕೆ ಮತ್ತೊಂದು ಪ್ರಮುಖ ಕಾರಣ ಬೌದ್ಧಸಂಘದ ಕ್ರಿಯಾತ್ಮಕ ಕಾರ್ಯ ನಿರ್ವಹಣೆ. ಬೌದ್ಧಸಂಘದ ಸನ್ಯಾಸಿ-ಸನ್ಯಾಸಿನಿಯರು ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹೀಗಾಗಿ ಧರ್ಮವು ಏಳಿಗೆಗೆ ಬಂದಿತು.

ಡಿ) ಧಾರ್ಮಿಕ ತತ್ವಗಳು ಮತ್ತು ಬೋಧನೆಯ ಭಾಷೆ : ಧರ್ಮದ ಪ್ರವರ್ಧಮಾನಸ್ಥಿತಿಗೆ ಮೂಲಕಾರಣ ಧರ್ಮದ ತತ್ವಗಳು, ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗಸಿದ್ಧ ಮಾರ್ಗಗಳು ಜನಸಾಮಾನ್ಯರಿಗೆ ಆಕರ್ಷಿತವಾದವು. ಧಾರ್ಮಿಕ ತತ್ವಗಳನ್ನು ಸರಳ ಮತ್ತು ಸುಲಭ ಭಾಷೆಯಲ್ಲಿ (ಪಾಳಿಭಾಷೆಯಲ್ಲಿ) ಬೋಧಿಸಲಾಯಿತು. ಇದು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಾಗಿತ್ತು.

ಬೌದ್ಧ ಧರ್ಮದ ಅವನತಿ

ಪ್ರಾಚೀನ ವಿಶ್ವದ ಪ್ರಮುಖ ಧರ್ಮವಾಗಿದ್ದ ಬೌದ್ಧಪಂಥವು ಭಾರತದಲ್ಲಿ ಪತನದ ಸ್ಥಿತಿ ತಲುಪಿತ್ತು. ಬೌದ್ಧಧರ್ಮದ ಅವನತಿಗೆ ಹಲವಾರು ಕಾರಣಗಳಿದ್ದವು.

1. ಧಾರ್ಮಿಕ ವಿಂಗಡಣೆ : ಬೌದ್ಧಪಂಥದ ವಿಭಜನೆಯು ಧರ್ಮದ ಅವನತಿಗೆ ಒಂದು ಪ್ರಮುಖ ಕಾರಣವಾಯಿತು. ಕಾನಿಷ್ಕನ ಆಳ್ವಿಕೆಯ ವೇಳೆಗೆ ಬೌದ್ಧಪಂಥವು ಹೀನಯಾನ ಮತ್ತು ಮಹಾಯಾನ ಬೌದ್ಧ ಪಂಥಗಳೆಂದು ವಿಂಗಡಿಸಲ್ಪಟ್ಟಿತು. ಧಾರ್ಮಿಕ ಅನೈಕ್ಯತೆಯು ಧರ್ಮದ ಅವನತಿಗೆ ಒಂದು ಕಾರಣವಾಯಿತು. ಬುದ್ಧನ ತತ್ವಗಳ ಅವಲಂಭಿಸಿ ಮೂರ್ತಿ ಪೂಜೆಯನ್ನು ಅವಲಂಬಿಸಿದವರು ಮಹಾಯಾನ ಪಂಥದವರಾದರು. ಬುದ್ಧನತತ್ವಗಳ ಅವಲಂಭಿಸಿ ಸರಳನಿಯಮ ಪಾಲಿಸಿದವರು ಹೀನಯಾನ ಪಂಥದವರಾದರು.

2. ರಾಜರ ಪ್ರೋತ್ಸಾಹ ದೊರಕದಿದ್ದುದು : ರಾಜರ ಆಶ್ರಯ ಮತ್ತು ಪ್ರೋತ್ಸಾಹ ಪಡೆದು ಪ್ರಾಬಲ್ಯಕ್ಕೆ ಬಂದ ಬೌದ್ಧಧರ್ಮವು ಕ್ರಮೇಣ ರಾಜರ ಆಶ್ರಯವಿಲ್ಲದೆ ಅವನತಿಯತ್ತ ಸಾಗಲು ಕಾರಣವಾಯಿತು.

3. ವೈದಿಕ ಪಂಥದ ಪುನರುಜ್ಜಿವನ : ಚೌದ್ಧಧರ್ಮವು ವಿಂಗಡಣೆಗೊಂಡು ಅವನತಿಯತ್ತ ಸಾಗುತ್ತಿದ್ದಾಗ ಶಂಕರಾಚಾರ್ಯ ಮತ್ತು ಕುಮಾರಿಲಭಟ್ಟರು ವೈದಿಕ ಪಂಥದ ಪುನರುಜ್ಜಿವನ ಕಾರ್ಯ ಕೈಗೊಂಡಿದ್ದರಿಂದ ವೈದಿಕ ಪಂಥವು ಮತ್ತೆ ಪ್ರಾಬಲ್ಯಕ್ಕೆ ಬಂದಿತು.

4. ಮಹಮ್ಮದೀಯರ ಧಾಳಿಗಳು : ಭಾರತವನ್ನು ಪ್ರವೇಶಿಸಿದ ಟರ್ಕೊ-ಅಫ್‌ಘನ್ನರು ದೆಹಲಿ ಸುಲ್ತಾನರು ‘ಜಸಿಯಾ’ ತಲೆಗಂದಾಯ ಜಾರಿಗೆ ತಂದು ಹಿಂದೂಗಳನ್ನು ಇಸ್ಲಾಂ ಪಂಥಕ್ಕೆ ಪರಿವರ್ತಿಸುವ ಕಾರ್ಯ ಕೈಗೊಂಡರು. ಬೌದ್ಧಕಲಾಸ್ಮಾರಕಗಳನ್ನು ಶಿಥಿಲಗೊಳಿಸಿದರು. ಹೀಗೆ ಮಹಮ್ಮದೀಯರ ಧಾಳಿಯೂ ಸಹ ಬೌದ್ಧಧರ್ಮದ ಅವನತಿಗೆ ಕಾರಣವಾಯಿತು.

5. ಸಂಸ್ಕೃತ ಭಾಷೆಯ ಬಳಕೆ : ಬೌದ್ಧ ಪಂಥದ ಅವನತಿಗೆ ಪಾಳಿಭಾಷೆಗೆ ಬದಲು ಸಂಸ್ಕೃತ ಭಾಷೆಯ ಬಳಸಿದ್ದರಿಂದ ಈ ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ. ಅರ್ಥವಾಗದ ಭಾಷೆಯ ಬಳಕೆಯು ಅವನತಿಗೆ ಒಂದು ಕಾರಣವಾಯಿತು.

6. ಬೌದ್ಧಸಂಘದ ನಿಷ್ಕ್ರಿಯತೆ : ಬೌದ್ಧಧರ್ಮದ ಏಳಿಗೆಗೆ ಕಾರಣವಾಗಿದ್ದ ಬೌದ್ಧಸಂಘವು ಧರ್ಮದ ಅವನತಿಗೂ ಕಾರಣವಾಯಿತು. ಬೌದ್ಧ ಸಂಘದ ಸನ್ಯಾಸಿ-ಸನ್ಯಾಸಿನಿಯರು ಧಾರ್ಮಿಕ ನಿಷ್ಠೆಯನ್ನು ಮರೆತರು. ವೈಯುಕ್ತಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರು. ಧರ್ಮದ ಪಾವಿತ್ರತೆಯನ್ನು ಸಂಘವು ನಿರ್ಲಕ್ಷಿಸಿತು. ಬೌದ್ಧ ಸಂಘದ ನಿಷ್ಕ್ರಿಯತೆಯೂ ಧರ್ಮದ ಅವನತಿಗೆ ಪ್ರಮುಖ ಕಾರಣವಾಯಿತು.

ಉಪಸಂಹಾರ:

ಆಧುನಿಕ ಭಾರತದಲ್ಲಿ ಬೌದ್ಧ ಧರ್ಮವು ಮತ್ತೆ ತಲೆ ಎತ್ತುತ್ತಿದ್ದು ಇದಕ್ಕೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರವಾದದ್ದು ಪ್ರಮುಖವಾದ ಕಾರಣವಾಗಿದೆ. ಮುಖ್ಯವಾಗಿ ಬುದ್ಧನ ವ್ಯಕ್ತಿತ್ವದ ಸೂಜಿಗಲ್ಲಿನ ಸೆಳೆತ ಕಾಲಾತೀತವಾದದ್ದು.