ಉತ್ತರ ವೈದಿಕ ಕಾಲವನ್ನು ಕೊನೆಯ ವೇದಗಳ ಕಾಲದ ನಾಗರೀಕತೆ ಎಂದು ಸಹ ಹೆಸರಿಸಲಾಗಿದೆ. ಉತ್ತರ ವೈದಿಕಕಾಲದ ಕಾಲಮಾನ ಕ್ರಿ.ಪೂ 1200 ರಿಂದ ಕ್ರಿ.ಪೂ 600, ಋಗ್ವೇದದ ಕಾಲದಲ್ಲಿ ಸಪ್ತಸಿಂಧು ಪ್ರಾಂತ್ಯಕ್ಕೆ ಸೀಮಿತವಾಗಿದ್ದ ಆರ್ಯರ ಸಂಸ್ಕೃತಿ ಕ್ರಮೇಣ ಋಗ್ವೇದದ ಕಾಲದಲ್ಲಿ ವಿಸ್ತರಣೆಗೊಂಡಿತು. ಉತ್ತರ ವೈದಿಕಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ಜನಜೀವನ ಕಂಡುಬಂದಿತು.
ಆಧಾರಗಳು : ಉತ್ತರ ವೈದಿಕಕಾಲದ ಆರ್ಯರ ಸಂಸ್ಕೃತಿಯ ಬಗ್ಗೆ ತಿಳಿಯಲು ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ, ಬ್ರಾಹ್ಮಣಗಳು, ಅರಣ್ಯಕಗಳು ಹಾಗೂ ಉಪನಿಷತ್ತುಗಳು ಸಹಕಾರಿಯಾಗಿವೆ.
ಆರ್ಯರ ಜನಜೀವನ : ಉತ್ತರ ವೈದಿಕಕಾಲದ ಆರ್ಯರ ಜನಜೀವನವು ರಾಜಕೀಯ ವ್ಯವಸ್ಥೆ, ಸಾಮಾಜಿಕ ಸ್ಥಿತಿ, ಆರ್ಥಿಕ ಜೀವನ, ಧಾರ್ಮಿಕ ವ್ಯವಸ್ಥೆ, ಶಿಕ್ಷಣ ಮತ್ತು ಸಾಹಿತ್ಯ ಹಾಗೂ ತತ್ವಜ್ಞಾನದ ಬೆಳವಣಿಗೆಯನ್ನು ಅವಲಂಭಿಸಿತ್ತು.
ಎ. ರಾಜಕೀಯ ವ್ಯವಸ್ಥೆ :
ಪೂರ್ವವೈದಿಕ ಕಾಲದ ರಾಜಕೀಯ ವ್ಯವಸ್ಥೆಯಲ್ಲಿ ಋಗ್ವೇದ ಕಾಲಕ್ಕಿಂತ ಭಿನ್ನವಾದ ಲಕ್ಷಣಗಳು ಕಂಡುಬಂದವು. ಅಂತಹ ಲಕ್ಷಣಗಳಲ್ಲಿ ಪ್ರಮುಖವಾದವುಗಳೆಂದರೆ :
ರಾಜ್ಯಗಳ ಏಳಿಗೆ :
ಪೂರ್ವವೈದಿಕ ಕಾಲದಲ್ಲಿದ್ದ ಬಣರಾಜ್ಯಗಳು ನಶಿಸಿ ಚಿಕ್ಕಪುಟ್ಟ ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಅಂತಹ ರಾಜ್ಯಗಳಲ್ಲಿ ಪ್ರಮುಖವಾದವು ಕಾಶಿ, ಕೋಸಲ, ವಿದೇಹ, ಮಗಧ ಹಾಗೂ ಅಂಗರಾಜ್ಯಗಳು,
ಎ) ಕಾಶಿ : ಕಾಶಿಯು ಒಂದು ರಾಜ್ಯವಾಗಿತ್ತು. ಬ್ರಹ್ಮದತ್ತ ಸಂತತಿಯವರು ಕಾಶಿ ರಾಜ್ಯವಾಳುತ್ತಿದ್ದರು. ಕಾಶಿಯ ಪ್ರಖ್ಯಾತ ಅರಸರಲ್ಲಿ ಅಜಾತಶತ್ರು ಪ್ರಮುಖನಾಗಿದ್ದನು. ಅಜಾತಶತ್ರುವು ದಕ್ಷ ಅರಸನಾಗಿದ್ದುದಲ್ಲದೆ ವಿದ್ವಾಂಸರಿಗೆ ಅಪಾರ ಪ್ರೋತ್ಸಾಹ ನೀಡಿದ್ದನು. ಕ್ರಿ.ಪೂ 700 ರವೇಳೆಗೆ ಕಾಶಿಯು ತನ್ನ ಪ್ರಾಮುಖ್ಯತೆ ಕಳೆದುಕೊಂಡಿತು. ಕ್ರಮೇಣ ಕಾಶಿಯು ಆಧ್ಯಾತ್ಮಿಕ ಮತ್ತು ಧಾರ್ಮಿಕ ಕೇಂದ್ರವಾಗಿ ಮಾರ್ಪಟ್ಟಿತ್ತು.
ಬಿ) ಕೋಸಲ: ಕೋಸಲ ಸಹ ಒಂದು ಪ್ರಮುಖ ರಾಜ್ಯವಾಗಿತ್ತು. ಆದರೆ ಅಯೋದ್ಯ ಅವರ ಆರಂಭದ ರಾಜಧಾನಿಯಾಗಿದ್ದು ಸಾಕೇತ ಮತ್ತು ಶ್ರಾವಸ್ಥಿ ಆನಂತರದ ರಾಜದಾನಿಗಳು. ಪುರಾಣಗಳು 31 ಇಕ್ಷಾಕು ಅರಸರು ಆಳ್ವಿಕೆ ನಡೆಸಿದರೆಂದು ತಿಳಿಸುತ್ತವೆ. ಶುದ್ಧೋದನ, ಸಿದ್ದಾರ್ಥ, ರಾಹುಲ ಪ್ರಮುಖರಾಗಿದ್ದರು. ಕಾಶಿ ಮತ್ತು ಕೋಸಲದ ಮಧ್ಯ ರಾಜಕೀಯ ಪ್ರಭುತ್ವ ಸ್ಥಾಪನೆಗಾಗಿ ಹೋರಾಟ ನಡೆದು ಕೋಸಲ ಪ್ರಬಲವಾಯಿತು.
ಸಿ) ವಿದೇಹ : ಕೋಸಲದ ಪೂರ್ವಕ್ಕೆ ವಿದೇಹ ರಾಜ್ಯವಿದ್ದು, ಮಿಥೆಲೆಯು ಕೋಸಲದ ರಾಜಧಾನಿಯಾಗಿತ್ತು. ವಿದೇಹದ ಅರಸ ಜನಕ ಕ್ಷತ್ರಿಯನಾಗಿದ್ದರೂ ಬ್ರಹ್ಮ ವಿದ್ಯೆಯ ಪ್ರವೀಣವೆನಿಸಿದ್ದನು. ಅವನನ್ನು ಜನಕ ಮಹರ್ಷಿ ಎಂದೇ ಕರೆಯಲಾಗುತ್ತಿತ್ತು. ಕೋಸಲ ಮತ್ತು ವಿದೇಹ ರಾಜ್ಯಗಳ ಮಧ್ಯೆ ವೈವಾಹಿಕ ಬಾಂಧವ್ಯವಿತ್ತು.
ಡಿ) ಮಗಧ : ಕೋಸಲ ಮತ್ತು ವಿದೇಹ ರಾಜ್ಯಗಳ ಪೂರ್ವಕ್ಕೆ ಮಗಧರಾಜ್ಯವಿತ್ತು. ವೈದಿಕ ಸಾಹಿತ್ಯ ಕೃತಿಗಳು ಮಗಧರು ದಕ್ಷಿಣ ಬಿಹಾರದಲ್ಲಿ ಪ್ರಾಬಲ್ಯಕ್ಕೆ ಬಂದರೆಂದು ತಿಳಿಸುತ್ತವೆ. ಯಜುರ್ವೇದ ಮತ್ತು ಅಥರ್ವಣ ವೇದಗಳಲ್ಲಿ ಉಲ್ಲೇಖಿಸಲ್ಪಟ್ಟಂತೆ ಮಗಧ ದೊರೆಗಳು ಕ್ಷತ್ರಿಯ ಮತ್ತು ವೈಶ್ಯ ಮಿಶ್ರಜಾತಿಗೆ ಸೇರಿದವರಾಗಿದ್ದರು. ಇವರು ವೈದಿಕ ಸಂಸ್ಕೃತಿಯನ್ನು ಅನುಸರಿಸುತ್ತಿರಲಿಲ್ಲ.
ರಾಜನ ಆಡಳಿತ ಮತ್ತು ಅಧಿಕಾರಗಳು :
ರಾಜನು ಅಪರಿಮಿತವಾದ ಆಡಳಿತಾಧಿಕಾರವನ್ನು ಪಡೆದಿದ್ದನು. ಸಾಮಾನ್ಯ ಆಡಳಿತನಿರ್ವಹಣೆ ಮತ್ತು ನ್ಯಾಯಿಕ ಅಧಿಕಾರಗಳು ರಾಜನಿಗಿದ್ದವು. ರಾಜನ ಆಡಳಿತಾತ್ಮಕ ಅಧಿಕಾರಗಳನ್ನು ಪ್ರಶ್ನಿಸುವಂತಿರಲಿಲ್ಲ.
ಎ) ಅಧಿಕಾರಿಗಳು:-ರಾಜನ ರಾಜ್ಯಾಡಳಿತದಲ್ಲಿ ಸಹಕರಿಸಲು ಪುರೋಹಿತ, ಗ್ರಾಮಿಣಿ ಮತ್ತು ಸೇನಾನಿ ಗಳಿದ್ದರು ಅಲ್ಲದೆ ಭಾಗದುಗ(ಕರವಸೂಲಿಗಾರ) ಸಾರಥಿಸಮ್ ಗ್ರಹಿತ್ತಿ (ಕೋಶಾಧಿಕಾರಿ) ಪಲಗಲ(ಆಸ್ಥಾನಿಕ) ಎಂಬ ಅಧಿಕಾರಿಗಳ ವಿವರಗಳು ದೊರೆತಿವೆ.
ಬಿ) ಸಭಾ ಮತ್ತು ಸಮಿತಿಗಳು : ಪೂರ್ವ ವೈದಿಕ ಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿಯೂ ಸಭಾ ಮತ್ತು ಸಮಿತಿಗಳು ಅಸ್ತಿತ್ವದಲ್ಲಿದ್ದವು. ಎ.ಎಲ್.ಬಾಷಂ ʻಎ ವಂಡರ್ ದಟ್ ವಾಸ್ ಇಂಡಿಯಾ’ ದಲ್ಲಿ ಅಭಿಪ್ರಾಯಪಡುವಂತೆ ʻಸಭಾ ಮತ್ತು ಸಮಿತಿಗಳು ರಾಜ್ಯಾಡಳಿತದಲ್ಲಿ ಸಹಕರಿಸುತ್ತಿದ್ದವು’.
ಸಿ) ಅಶ್ವಮೇಧಯಾಗ, ರಾಜಸೂಯ ಯಾಗಗಳು:- ರಾಜರುಗಳು ವಿಶಾಲ ರಾಜ್ಯವನ್ನು ಸ್ಥಾಪಿಸಿದ್ದರಿಂದ ಅದರ ಜ್ಞಾಪಕಾರ್ಥವಾಗಿ ರಾಜಸೂಯಯಾಗ
ಬಿ. ಸಾಮಾಜಿಕ ಸ್ಥಿತಿಗತಿ :
ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡುಬರುತ್ತವೆ. ಅಂತಹ ಪ್ರಮುಖ ಲಕ್ಷಣಗಳೆಂದರೆ.
ಎ) ಅವಿಭಕ್ತಕುಟುಂಬ ಪದ್ಧತಿ : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲೂ ಅವಿಭಕ್ತ ಕುಟುಂಬ ಪದ್ಧತಿಯು ಮುಂದುವರೆಯಿತು.
ಬಿ) ಸ್ತ್ರೀಯರ ಸ್ಥಾನ : ಉತ್ತರ ವೈದಿಕಕಾಲದಲ್ಲಿ ಸ್ತ್ರೀಯರ ಸ್ಥಾನವು ಗೌಣವಾದುದಾಗಿರಲಿಲ್ಲ. ಕೌಟುಂಬಿಕ ವ್ಯವಹಾರಗಳಲ್ಲಿ ಸ್ತ್ರೀಯರು ಪಾಲ್ಗೊಳ್ಳುತ್ತಿದ್ದರು.
ಸಿ) ಉಡುಪು ಮತ್ತು ಆಭರಣಗಳು : ಪೂರ್ವ ವೈದಿಕಕಾಲದಲ್ಲಿದ್ದಂತೆಯೇ ಉತ್ತರ ವೈದಿಕಕಾಲದಲ್ಲಿ ಸ್ತ್ರೀ-ಪುರುಷರು ಹತ್ತಿ ಮತ್ತು ಉಣ್ಣೆಯ ಉಡುಪುಗಳನ್ನು ಧರಿಸುತ್ತಿದ್ದರು. ಈ ಕಾಲದಲ್ಲಿಯೂ ಸ್ತ್ರೀ-ಪುರುಷರು ಆಭರಣಪ್ರಿಯರಾಗಿದ್ದರು.
ಡಿ) ಆಹಾರ, ಪಾನೀಯಗಳು : ಮಿಶ್ರ ಆಹಾರ ಪದ್ಧತಿ ಅಸ್ತಿತ್ವದಲ್ಲಿತ್ತು. ಸಸ್ಯಹಾರ ಮತ್ತು ಮಾಂಸಾಹಾರಗಳು ಬಳಕೆಯಲ್ಲಿದ್ದವು. ʻಸೋಮರಸ ಮತ್ತು ಸುರೆ’ ಎಂಬ ಮತ್ತಿನ ಪಾನೀಯಗಳನ್ನು ಸೇವಿಸುತ್ತಿದ್ದರು.
ಇ) ವಿವಾಹ ಪದ್ಧತಿ : ಉತ್ತರ ವೈದಿಕಕಾಲದಲ್ಲಿ 8 ಬಗೆಯ ವಿವಾಹ ಪದ್ಧತಿಗಳು ಅಸ್ತಿತ್ವದಲ್ಲಿದ್ದವೆಂದು ಧರ್ಮಸೂತ್ರಗಳು ವಿವರನೀಡುತ್ತವೆ. ಅವುಗಳೆಂದರೆ ಬ್ರಹ್ಮ, ದೈವ, ಆರ್ಷ, ಪ್ರಜಾಪತ್ಯ, ಗಾಂಧರ್ವ, ಅಸುರ, ರಾಕ್ಷಸ ಮತ್ತು ಪೈಶಾಚ. ವಿಧವಾ ವಿವಾಹ ಪದ್ಧತಿಯಲ್ಲಿ ನಿರ್ಬಂಧದ ವಿವಾಹ ಅಸ್ತಿತ್ವದಲ್ಲಿತ್ತು.
ಎಫ್) ಜಾತಿ ಪದ್ಧತಿ : ಉತ್ತರ ವೈದಿಕಕಾಲದಲ್ಲಿನ ಸಾಮಾಜಿಕ ವ್ಯವಸ್ಥೆಯ ಒಂದು ಪ್ರಧಾನ ಲಕ್ಷಣವೆಂದರೆ ಜಾತಿ ಪದ್ಧತಿ ಅಸ್ತಿತ್ವಕ್ಕೆ ಬಂದದ್ದು. ಋಗ್ವೇದದ 10ನೇ ಮಂಡಲದಲ್ಲಿ ಜಾತಿ ಪದ್ಧತಿಯ ಉಗಮ ಮತ್ತು ಜಾತಿಗಳ ನಿರ್ದಿಷ್ಟ ಕಸುಬುಗಳ ಬಗ್ಗೆ ವಿವರವಿದೆ. ವರ್ಣಪದ್ಧತಿಯಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ನಾಲ್ಕು ಜಾತಿಗಳಿದ್ದವು. ಬ್ರಾಹ್ಮಣರು ಬ್ರಹ್ಮನ ಮುಖದಿಂದಲೂ, ಕ್ಷತ್ರಿಯರು ಬ್ರಹ್ಮನ ಭುಜಗಳಿಂದಲೂ, ವೈಶ್ಯರು ಬ್ರಹ್ಮನ ತೊಡೆಗಳಿಂದಲೂ ಮತ್ತು ಶೂದ್ರರು ಬ್ರಹ್ಮನ ಪಾದಗಳಿಂದಲೂ ಜನಿಸಿದವರೆಂದು ಉಲ್ಲೇಖಗಳಿವೆ. ಬ್ರಾಹ್ಮಣರು-ವೇದಾಧ್ಯಯನವನ್ನು, ಕ್ಷತ್ರಿಯರು ರಾಜ್ಯರಕ್ಷಣೆಯನ್ನು, ವೈಶ್ಯರು ವ್ಯಾಪಾರ ವಾಣಿಜ್ಯವನ್ನೂ, ಶೂದ್ರರು ಮೇಲಿನ ಮೂರು ವರ್ಗಗಳ ಸೇವೆಯನ್ನು ಮಾಡಬೇಕಾಗಿತ್ತು.
ಜಿ) ಆಶ್ರಮ ವ್ಯವಸ್ಥೆ : ಉತ್ತರ ವೈದಿಕಕಾಲದ ಸಾಮಾಜಿಕ ವ್ಯವಸ್ಥೆಯಲ್ಲಿನ ಒಂದು ಪ್ರಮುಖ ಲಕ್ಷಣವೆಂದರೆ ವರ್ಣಾಶ್ರಮ ವ್ಯವಸ್ಥೆಯ ಅಸ್ತಿತ್ವ, ಅವುಗಳೆಂದರೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸಾಶ್ರಮಗಳು.
ಬ್ರಹ್ಮಚರ್ಯ : ಈ ಆಶ್ರಮವನ್ನು ಅವಲಂಬಿಸಿದ ಬಾಲಕ ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯವಾದ ಗುರುವಿನ ಬಳಿ ಶಿಕ್ಷಣವನ್ನು ಪಡೆಯಬೇಕಾಗಿತ್ತು. ಶಿಕ್ಷಣವನ್ನು ಆಶ್ರಮದಲ್ಲಿ ಪಡೆಯಬೇಕಾಗಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣವನ್ನು ಪಡೆಯಬಹುದಾಗಿತ್ತು. ಶಿಕ್ಷಣದ ಜೊತೆಗೆ ಆಶ್ರಮದ ಕೆಲಸಕಾರ್ಯಗಳನ್ನು ಸಹ ನಿರ್ವಹಿಸಬೇಕಾಗಿತ್ತು. ಸೂಕ್ತ ಶಿಕ್ಷಣ ಪಡೆದ ನಂತರ ಗುರುವಿನ ಆಶೀರ್ವಾದ ಪಡೆದು ಗುರುಕಾಣಿಕೆ ಸಲ್ಲಿಸಿ ಆಶ್ರಮವನ್ನು ತ್ಯಜಿಸಬೇಕಾಗಿತ್ತು.
ಗೃಹಸ್ಥಾಶ್ರಮ : ಗೃಹಸ್ಥಾಶ್ರಮನ್ನು ಅವಲಂಬಿಸಿದ ವ್ಯಕ್ತಿಯ ಶಿಕ್ಷಣದ ನಂತರ ಗೃಹಸ್ಥಾಶ್ರಮ ಪ್ರವೇಶಿಸಬೇಕಾಗಿತ್ತು. ಗೃಹಸ್ಥಾಶ್ರಮದಲ್ಲಿ 40 ಸಂಸ್ಕಾರ ವಿಧಿಗಳನ್ನು ಆಚರಿಸುತ್ತ ಪಿತೃಋಣ, ಸಮಾಜದ ಋಣ ಮತ್ತು ದೇವಋಣ ಗಳನ್ನು ತೀರಿಸಬೇಕಾಗಿತ್ತು. ಗೃಹಸ್ಥಾಶ್ರಮವು ಶಿಸ್ತುಬದ್ಧ ಜೀವನವಾಗಿತ್ತು.
ಸನ್ಯಾಸಾಶ್ರಮ : ಗೃಹಸ್ಥಾಶ್ರಮದ ನಂತರ 50 ವರ್ಷ ದಾಟಿದವರು ಸನ್ಯಾಸಾಶ್ರಮವನ್ನು ಪ್ರವೇಶಿಸಬೇಕಿತ್ತು. ಐಹಿಕ ಭೋಗಗಳನ್ನು ತ್ಯಜಿಸಿ, ಒಂದೆಡೆ ವಾಸಿಸದೆ ಧ್ಯಾನಾಸಕ್ತನಾಗಿ ವೇದಮಂತ್ರಗಳ ಪಠಿಸುತ್ತಾ ಸಂಧ್ಯಾವಿಧಿಗಳನ್ನು ನೆರವೇರಿಸಿಕೊಂಡು ಭಿಕ್ಷಾನ್ನದಿಂದ ಹಸಿವನ್ನು ನೀಗಿಸಿಕೊಳ್ಳಬೇಕಾಗಿತ್ತು.
ವಾನಪ್ರಸ್ಥಾಶ್ರಮ : ಸನ್ಯಾಸಾಶ್ರಮದನಂತರ ಅಂತಿಮವಾಗಿ ವಾನಪ್ರಸ್ಥಾಶ್ರಮವನ್ನು ಅವಲಂಬಿಸಬಹುದಿತ್ತು. ವಾನಪ್ರಸ್ಥಾಶ್ರಮದ ವ್ಯಕ್ತಿಗಳು ಕಾಡುಗಳಲ್ಲಿ ಸಂಚರಿಸುತ್ತ ನಾರುಡಿಗೆಯನ್ನು ಧರಿಸಿ ಹಣ್ಣು-ಗೆಡ್ಡೆ-ಗೆಣಸುಗಳನ್ನು ತಿಂದು ಹಸಿವನ್ನು ನೀಗಿಸಬೇಕಾಗಿತ್ತು. ಅಂತಿಮವಾಗಿ ನಿರಾಹಾರಿಯಾಗಿ ಧ್ಯಾನಾಸಕ್ತನಾಗಿ ಇಹಲೋಕವನ್ನು ತ್ಯಜಿಸಬೇಕಾಗಿತ್ತು.
ಆಶ್ರಮ ವ್ಯವಸ್ಥೆಯು ಕಡ್ಡಾಯವಾಗಿ ಅಸ್ತಿತ್ವದಲ್ಲಿರಲಿಲ್ಲ. ಆಶ್ರಮ ವ್ಯವಸ್ಥೆಯ ಅನುಸರಣೆಯಿಂದ ಐಹಿಕ ಜೀವನದಲ್ಲಿ ಸದ್ಧತಿ ಮತ್ತು ಮೋಕ್ಷ ದೊರೆಯುವುದೆಂಬ ನಂಬಿಕೆ ಇತ್ತು. ಬ್ರಾಹ್ಮಣರು 4 ಆಶ್ರಮಗಳನ್ನೂ ಅವಲಂಬಿಸಿದ್ದರೆ ಉಳಿದ ವರ್ಗಗಳು ಕೇವಲ ಗೃಹಸ್ಥಾಶ್ರಮವನ್ನು ಮಾತ್ರ ಅವಲಂಬಿಸಿದ್ದರು.
ಸಿ. ಆರ್ಥಿಕ ಸ್ಥಿತಿಗತಿ :
ಉತ್ತರ ವೈದಿಕಕಾಲದ ಆರ್ಥಿಕ ಸ್ಥಿತಿಗತಿಯು ಪೂರ್ವವೈದಿಕಕಾಲಕ್ಕಿಂತ ಸ್ವಲ್ಪ ಭಿನ್ನತೆಯಿಂದ ಕೂಡಿತ್ತು. ಪ್ರಮುಖ ಕಸುಬುಗಳು ಮತ್ತು ಉಪಕಸುಬುಗಳು ಕಂಡುಬರುತ್ತಿದ್ದವು.
ಎ) ವ್ಯವಸಾಯ : ಒಂದು ಪ್ರಧಾನ ಕಸುಬಾಗಿತ್ತು. ಗಂಗಾ ನದಿಯ ಬಯಲಿನಲ್ಲಿ ‘ರಾಜಸಾರಿ’ ಎಂಬ ಭತ್ತವನ್ನು ಹೇರಳವಾಗಿ ಬೆಳೆಯುತ್ತಿದ್ದರು. ಭೂಮಿಯನ್ನು ಉಳುಮೆ ಮಾಡಲು, ಭಾರವಾದ ನೇಗಿಲನ್ನು ಎಳೆಯಲು 24 ಎತ್ತುಗಳನ್ನು ಉಪಯೋಗಿಸುತ್ತಿದ್ದರು. ಭತ್ತ, ಗೋದಿ, ಬಾರ್ಲಿ, ಬೀನ್ಸ್, ಎಣ್ಣೆ ಬೀಜಗಳನ್ನು ಬೆಳೆಯುತ್ತಿದ್ದರು
ಬಿ) ವ್ಯಾಪಾರ : ಆಂತರಿಕ ಮತ್ತು ಅಂತರಾಷ್ಟ್ರೀಯ ವ್ಯಾಪಾರಗಳೆರಡು ಅಸ್ತಿತ್ವದಲ್ಲಿದ್ದವು. ಆಂತರಿಕ ವ್ಯಾಪಾರವು ದಕ್ಷಿಣ ಭಾರತದೊಂದಿಗೂ ಅಂತರಾಷ್ಟ್ರೀಯ ವ್ಯಾಪಾರವು ಬ್ಯಾಬಿಲೋನಿಯಾ ಮೊದಲಾದ ದೇಶಗಳೊಡನೆ ನಡೆಯುತ್ತಿತ್ತು. ಸಾಗರೋತ್ತರ ವ್ಯಾಪಾರವು ಅಭಿವೃದ್ಧಿಗೊಂಡಿತ್ತು.
ಸಿ) ಪಶುಪಾಲನೆ : ಪಶುಪಾಲನೆಯು ಮತ್ತೊಂದು ಪ್ರಧಾನ ಕಸುಬಾಗಿತ್ತು. ಹಸುವು ಪವಿತ್ರ ಮತ್ತು ಪೂಜಾರ್ಹ ವಾದುದಾಗಿತ್ತು. ಒಬ್ಬ ವ್ಯಕ್ತಿಯ ಶ್ರೀಮಂತಿಕೆಯನ್ನೂ ಅವನು ಹೊಂದಿರುವ ಹಸುಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತಿತ್ತು. ಕುರಿ, ಮೇಕೆ, ಕುದುರೆ ಮೊದಲಾದ ಪ್ರಾಣಿಗಳನ್ನು ಸಾಕುತ್ತಿದ್ದರು
ಡಿ) ಉಪಕಸುಬುಗಳು : ನೂಲುವುದು, ನೇಯ್ದೆ, ಕುಂಬಾರಿಕೆ, ಮರಗೆಲಸ, ಗಾರೆಕೆಲಸ, ಆಭರಣಗಳ ತಯಾರಿಕೆ, ಕಸೂತಿಕೆಲಸ, ಚಾಪೆ ಮತ್ತು ಬುಟ್ಟಿ ಹೆಣೆಯುವುದು ಮೊದಲಾದ ಹಲವು ಉಪಕಸುಬುಗಳಿದ್ದವು.
ಉತ್ತರ ವೈದಿಕಕಾಲದಲ್ಲಿ ಭಿನ್ನವಾದ ಧಾರ್ಮಿಕ ಜೀವನವು ಕಂಡುಬರುತ್ತಿತ್ತು.
ಡಿ. ಧಾರ್ಮಿಕ ಸ್ಥಿತಿ :
ಎ) ಯಾಗಯಜ್ಞಗಳ ಪ್ರಾಬಲ್ಯ : ಉತ್ತರ ವೈದಿಕಕಾಲದಲ್ಲಿ ಯಾಗ ಯಜ್ಞಗಳು ಹೆಚ್ಚು ಬೆಳವಣಿಗೆಗೊಂಡವು, ಪುರೋಹಿತರ ಸಂಖ್ಯೆ 16ಕ್ಕೇರಿತ್ತು. ಜನಸಾಮಾನ್ಯರು ಯಾಗ ಯಜ್ಞಗಳ ಬಗ್ಗೆ ಒಲವು ತೋರಿಸಿದರು. ಯಾಗ ಯಜ್ಞಗಳ ಆಚರಣೆ ಮತ್ತು ಮಂತ್ರೋಚ್ಛಾರಣೆಯಿಂದಾಗಿ ಪುರೋಹಿತರ ಸ್ಥಾನಮಾನವು ಮೇಲಕ್ಕೇರಿತ್ತು. ವೈದಿಕ ಯುಗದ ಕೊನೆಯ ವೇಳೆಗೆ ಜನಸಾಮಾನ್ಯರು ಯಾಗ ಯಜ್ಞಗಳು ಆರ್ಥಿಕವಾಗಿ ಹೊರೆಯಾದವುಗಳೆಂದು ನಿರ್ಧರಿಸಿದ್ದರು.
ಬಿ) ಏಕದೇವತಾ ಆರಾಧನಾ ಪದ್ಧತಿ : ಉತ್ತರ ವೈದಿಕಕಾಲದಲ್ಲಿ ಬಹುದೇವತಾ ಆರಾಧನಾ ಪದ್ಧತಿಯು ಅಂತ್ಯಗೊಂಡು ಏಕದೇವತಾ ಆರಾಧನಾ ಪದ್ಧತಿಯು ಅಸ್ತಿತ್ವಕ್ಕೆ ಬಂದಿತ್ತು. ಜೀವಾತ್ಮನೂ, ಸಕಲ ಚರಾಚರವಸ್ತುಗಳ ನಿಯಂತ್ರಕನೂ ಆದ ‘ದೇವನೊಬ್ಬನೇ’ ಎಂಬ ಭಾವನೆ ಮೂಡಿಬಂದಿತು. ಹೀಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಅವರ ಪತ್ನಿಯರಾದ ಸರಸ್ವತಿ, ಲಕ್ಷ್ಮೀ, ಪಾರ್ವತಿಯರ ಆರಾಧನೆಯೂ ಕಂಡುಬಂದಿತ್ತು. ಹೀಗಾಗಿ ವೈದಿಕ ಯುಗದ ಅಂತ್ಯದ ವೇಳೆಗೆ ವೈದಿಕ ಧರ್ಮಕ್ಕೆ ಬದಲು ಹೊಸ ಮತಗಳ ಉದಯಕ್ಕೆ ಪ್ರೋತ್ಸಾಹ ದೊರಕಿತು.
ಇ. ಶಿಕ್ಷಣ ಮತ್ತು ಸಾಹಿತ್ಯ :
ವೈದಿಕ ಯುಗದ ಕೊನೆಯ ವೇಳೆಗೆ ಗುರುಕುಲಾಶ್ರಮದ ಶಿಕ್ಷಣವು ಪ್ರಧಾನವಾಗಿ ಕಂಡುಬಂದಿತು. ಉಪನಯನ ಸಂಸ್ಕಾರವಾದ ಮೇಲೆ ಯೋಗ್ಯ ಗುರುಗಳ ಬಳಿ ಆಶ್ರಮದಲ್ಲಿ ಶಿಕ್ಷಣವನ್ನು ಪಡೆಯಬೇಕಿತ್ತು. 8 ರಿಂದ 25 ವರ್ಷಗಳವರೆಗೆ ಶಿಕ್ಷಣ ಪಡೆಯಬಹುದಾಗಿತ್ತು. ಶಿಕ್ಷಣಾರ್ಥಿಯು ಶಿಕ್ಷಣದ ಜೊತೆಗೆ ಆಶ್ರಮದ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿತ್ತು. ಪುರಾಣಗಳು, ಧರ್ಮಶಾಸ್ತ್ರಗಳು, ವೇದಗಳು, ವೇದಾಂಗಗಳು, ಚರಿತ್ರೆ, ವೈದ್ಯಶಾಸ್ತ್ರ ಮೊದಲಾದ ವಿಭಿನ್ನ ವಿಷಯಗಳ ಬಗ್ಗೆ ಶಿಕ್ಷಣ ನೀಡಲಾಗುತ್ತಿತ್ತು. ಪೂರ್ಣ ಶಿಕ್ಷಣ ಪಡೆದ ವಿದ್ಯಾರ್ಥಿ ಗುರುವಿನ ಆಶೀರ್ವಾದ ಪಡೆದು ಆಶ್ರಮ ತ್ಯಜಿಸಬೇಕಾಗಿತ್ತು.
ಸಾಹಿತ್ಯದಲ್ಲಿ ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದಗಳು, ಬ್ರಾಹ್ಮಣಗಳು, ಅರಣ್ಯಕಗಳು ಉಪನಿಷತ್ಗಳು ಹಾಗೂ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ರಚನೆಗೊಂಡವು. [ಸೂಚನೆ: ಉತ್ತರ ವೈದಿಕ ಕಾಲದ ಸಾಹಿತ್ಯದ ಬಗ್ಗೆ ಹಿಂದೆಯೇ ವಿವರಿಸಲಾಗಿದೆ. ‘ಆರ್ಯ ಸಂಸ್ಕೃತಿಯ ರಚನೆಗಿರುವ ಮೂಲಾಧಾರಗಳು’ ಎಂಬ ಪ್ರಾರಂಭಿಕ ಭಾಗವನ್ನು ಗಮನಿಸಿ]
ಎಫ್. ತತ್ವಜ್ಞಾನ :
ಉತ್ತರ ವೈದಿಕಕಾಲದಲ್ಲಿ ತತ್ವಜ್ಞಾನವು ಬೆಳವಣಿಗೆ ಹೊಂದಿತ್ತು. ಜನಕ ಮಹರ್ಷಿ ರಾಜನಾಗಿದ್ದನಲ್ಲದೆ ಪ್ರಖ್ಯಾತ ತತ್ವಜ್ಞಾನಿಯೂ ಆಗಿದ್ದನು. ಆಗಾಗ್ಗೆ ತನ್ನ ರಾಜ್ಯದಲ್ಲಿ ತತ್ವಜ್ಞಾನದ ಸಭೆಗಳನ್ನು ನಡೆಸುತ್ತಿದ್ದನು. ವಿಶ್ವಾವರ, ಮೈತ್ರೇಯಿ ಮತ್ತು ಗಾರ್ಗಿ ಎಂಬ ಖ್ಯಾತ ಮಹಿಳಾ ವಿದ್ವನ್ಮಣಿಗಳು ಈ ಸಭೆಗೆ ಹಾಜರಾಗಿ ತಾತ್ವಿಕ ಚಿಂತನೆ ನಡೆಸುತ್ತಿದ್ದರು. ಇ.ಇ.ಪಾರ್ಗಿಟರ್ ಅಭಿಪ್ರಾಯದಂತೆ ‘ವಿಶ್ವದ ತತ್ವಜ್ಞಾನರಾಶಿಗೆ ಭಾರತದ ಅತ್ಯಮೂಲ್ಯವಾದ ಕೊಡುಗೆಗಳೆಂದರೆ ಉಪನಿಷತ್ಗಳು’.
ಹೀಗೆ ವೈದಿಕಯುಗದ ಉತ್ತರಾರ್ದದ ಜನಜೀವನದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ.