ಸ್ವಾಭಾವಿಕವಾಗಿ ಮಾನವ ಹಾಗೂ ಪರಿಸರದ ನಡುವೆ ಅತ್ಯಂತ ನಿಕಟವಾದ ಸಂಬಂಧವಿದೆ. ಮಾನವನು ಪರಿಸರದ ಒಂದು ಭಾಗವಾಗಿರುವುದರಿಂದ ಅದನ್ನು ಶುಚಿಯಾಗಿ ಹಾಗೂ ಅಚ್ಚು ಕಟ್ಟುತನದಿಂದ ಕಾಪಾಡಬೇಕು. ಶುದ್ಧ ಪರಿಸರವಿಲ್ಲದೆ ಆರೋಗ್ಯವಂತ ಜೀವನ ನಡೆಸುವುದು ಅಸಾಧ್ಯ. ಆದರೆ ಮಾನವ ತನ್ನ ದುರಾಸೆಯಿಂದಾಗಿ ಪರಿಸರವನ್ನು ಶೋಷಿಸುತ್ತಿದ್ದಾನೆ. ಹೀಗಾಗಿ ಪರಿಸರ ನಾಶ, ಪರಿಸರ ಮಾಲಿನ್ಯ ಹಾಗೂ ಪ್ರಕೃತಿ ವಿಕೋಪಗಳಿಂದ ಸಾಕಷ್ಟು ತೊಂದರೆಗಳು ಕಂಡುಬರುತ್ತವೆ. ನಗರೀಕರಣದಿಂದ ಉಂಟಾದ ತ್ಯಾಜ್ಯ ವಸ್ತುಗಳು ಇವುಗಳಿಂದ ಮಾನವನ ದಿನನಿತ್ಯದ ಸಹಜ ಜೀವನಕ್ಕೆ ನಷ್ಟ ಉಂಟಾಗುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇದರ ನಿರ್ವಹಣೆಯಲ್ಲಿ ಉಂಟಾಗುವ ವಿಳಂಬದಿಂದ ನೊಂದ ಜನರು ಹಾಗೂ ಪರಿಸರವಾದಿಗಳು ಚಳುವಳಿಯಲ್ಲಿ ತೊಡಗಿದರು. ಅಂತಹ ಹಲವಾರು ಚಳುವಳಿಗಳಲ್ಲಿ ಕೆಲವೊಂದು ಈ ಕೆಳಗಿನಂತೆ ವಿವರಿಸಲಾಗಿದೆ.

1. ಬಿಷ್ಣೊಯಿ ಚಳುವಳಿ: (Bishnoi movement)

ಸುಮಾರು 18ನೇ ಶತಮಾನದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಭಾರತದ ಪ್ರಥಮ ಹೋರಾಟ ಇದಾಗಿದೆ. ಈ ಕಾರಣದಿಂದ ಬಿಷ್ಣೊಯಿ ಸಮುದಾಯವನ್ನು ಭಾರತದ ಮೊದಲ ಪರಿಸರವಾದಿಗಳೆಂದು ಕರೆಯಲಾಗಿದೆ. ಈ ಹೋರಾಟದ ನಾಯಕತ್ವವನ್ನು ಅಮೃತದೇವಿ ವಹಿಸಿಕೊಂಡಿದ್ದರು. ಇದರಲ್ಲಿ ರಾಜಸ್ಥಾನದ ಖೇಜರ್ಲಿ ಮತ್ತು ಮಾರವಾರ ಪ್ರದೇಶದ ಸುಮಾರು 84 ಗ್ರಾಮಗಳ ಜನರು ಭಾಗವಹಿಸಿದ್ದರು. ಜೋದಪುರದ ರಾಜ ಅಭಯ್ ಸಿಂಗ್ 1730ರ ದಶಕದಲ್ಲಿ ತನಗೊಂದು ನೂತನ ಅರಮನೆಯನ್ನು ನಿರ್ಮಿಸಬೇಕೆಂದು ಯೋಚಿಸಿ ಖೇಜರ್ಲಿ ಎಂಬ ಗ್ರಾಮದಲ್ಲಿನ ಮರಗಳನ್ನು ಕಡಿದು ಅರಮನೆಗಾಗಿ ಪ್ರದೇಶವನ್ನು ಸ್ವಚ್ಛಗೊಳಿಸಲು ತನ್ನ ಸೈನಿಕರಿಗೆ ಆಜ್ಞೆ ಹೊರಡಿಸಿದನು. ತಮ್ಮ ಪೂರ್ವಜರು ಅನಾದಿಕಾಲದಿಂದಲೂ ರಕ್ಷಿಸಿ ಕೊಂಡು ಬಂದಿದ್ದ ದೈವಿ ಬನವನ್ನು ನಾಶ ಮಾಡುವುದನ್ನು ಸಹಿಸಲಾಗದೆ ಅಮೃತ ದೇವಿ ಎಂಬ ಹೆಣ್ಣು ಮಗಳು ಈ ರಾಜಾಜ್ಞೆಯನ್ನು ವಿರೋಧಿಸಿ ಚಳುವಳಿಯನ್ನು ಆರಂಭಿಸಿದಳು. ಆದರೆ ರಾಜನ ಸೈನಿಕರು ಅಮೃತ ದೇವಿಯವರ ವಿರೋಧವನ್ನು ಲೆಕ್ಕಿಸದೆ ಆಕೆಯನ್ನು ಹಾಗೂ ಆಕೆಯ ಸಹಚರರಾದ 363 ಜನರನ್ನು ಕೊಂದು ಹಾಕಿದರು. ಈ ಘಟನೆಯ ಮಾಹಿತಿಯನ್ನು ಪಡೆದ ರಾಜನು ಸ್ಥಳಕ್ಕೆ ಧಾವಿಸಿ ಬಂದು ಬಿಷ್ಣೊಯಿ ಜನಾಂಗಕ್ಕೆ ಕ್ಷಮೆಯಾಚಿಸಿ ಮರ ಕಡಿಯುವುದನ್ನು ನಿಲ್ಲಿಸುವಂತೆ ತನ್ನ ಸೈನಿಕರಿಗೆ ಅಜ್ಞಾಪಿಸಿದನು. ಬಿಷ್ಣೊಯಿ ಚಳುವಳಿಯಲ್ಲಿ ಸಾಕಷ್ಟು ಜನರ ಮಾರಣಹೋಮವಾಯಿತು. ಆದರೆ ಚಳುವಳಿ ಮಾತ್ರ ವಿಫಲವಾಗಲಿಲ್ಲ. ಸಾವಿರಾರು ಮರಗಳ ರಕ್ಷಣೆ ಆಯ್ತು, ನಂತರ ರಾಜನು ಬಿಷ್ಣೊಯಿ ರಾಜ್ಯವನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಿದನು. ಈಗಲೂ ಈ ಕಾನೂನು ಆ ಪ್ರದೇಶದಲ್ಲಿ ಜಾರಿಯಲ್ಲಿದೆ. ಈ ಚಳುವಳಿಯ ಮುಂದುವರಿಕೆಯೇ ಚಿಪ್ಕೋ ಚಳುವಳಿಯಾಗಿದೆ. ಭಾರತದ ಸರ್ಕಾರವು ಅಮೃತದೇವಿ ಬಿಷ್ಣೊಯಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿ ಹಾಗೂ ರಾಜಸ್ಥಾನ ಸರ್ಕಾರವು ಅಮೃತದೇವಿ ಸ್ಮೃತಿ ಪರ್ಯಾಯ ಪ್ರಶಸ್ತಿ ರೂಪದಲ್ಲಿ ಈ ಚಳುವಳಿಯ ಯಶಸ್ಸನ್ನು ಇಂದಿಗೂ ಗೌರವಿಸುತ್ತಿದೆ.

2. ಸೈಲೆಂಟ್ ವ್ಯಾಲಿ ಚಳುವಳಿ ಮೌನ ಕಣಿವೆ ಚಳುವಳಿ (Silent valley movement)

ಕೇರಳದ ಸೈಲೆಂಟ್ ವ್ಯಾಲಿ 89 ಚದರ ಕಿಲೋಮೀಟರ್ ಪ್ರದೇಶ ಅತ್ಯಂತ ಸುಂದರ ತಾಜಾ ಹಾಗೂ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿದ ಅರಣ್ಯ ಪ್ರದೇಶವಾಗಿದೆ. ಇದು ವೈವಿಧ್ಯಮಯವಾದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಸುಂದರ ಜಲಚರಗಳಿಂದ ಕೂಡಿದ ಕಣಜವಾಗಿದೆ. ಈ ಕಣಿವೆಯ ಮೂಲಕ ಕುಂತಿ ಪೂಜಾ ನದಿಯು ಹರಿಯುತ್ತಿದ್ದು ಈ ನದಿಗೆ 200 ಮೆಗಾ ವ್ಯಾಟ್ ವಿದ್ಯುತ್ ಯೋಜನೆಯನ್ನು ನಿರ್ಮಿಸಲು 1980 ರಲ್ಲಿ ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಈ ಪರಿಶುದ್ಧವಾದ ಅರಣ್ಯವನ್ನು ರಕ್ಷಿಸುವ ಸಲುವಾಗಿ ನಡೆದ ಮಹತ್ವಪೂರ್ಣವಾದ ಹೋರಾಟವನ್ನು ಸೈಲೆಂಟ್ ವ್ಯಾಲಿ ಚಳುವಳಿ ಎಂದು ಕರೆಯಲಾಗಿದೆ. ಈ ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಜನರನ್ನು ಪ್ರೇರೇಪಿಸುವಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಯಶಸ್ವಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಧ್ಯಾಪಕರು, ಸ್ಥಳೀಯ ನಾಗರಿಕರು ಹಾಗೂ ಪರಿಸರವಾದಿಗಳು ಈ ಚಳುವಳಿಯಲ್ಲಿ ಭಾಗವಹಿಸಿದರು. ಅಲ್ಲಿ ಜಲಾಶಯ ನಿರ್ಮಿಸುವುದರಿಂದ ಆಗುವ ನಷ್ಟಗಳು ಹಾಗೂ ಒಂದು ವೇಳೆ ಜಲಾಶಯ ನಿರ್ಮಾಣವಾದರೆ ಅದರಿಂದ ತಯಾರಿಸುವ ವಿದ್ಯುತ್ತು ಜನಸಾಮಾನ್ಯರಿಗೆ ದೊರಕದೆ ಕೇವಲ ಕೈಗಾರಿಕಾ ವಲಯಗಳಿಗೆ ಮಾತ್ರ ಸರಬರಾಜು ಆಗುತ್ತದೆ ಎಂಬುದನ್ನು ಜನರಿಗೆ ತಿಳಿ ಹೇಳಲಾಯಿತು. ಹಾಗೂ ಈ ಯೋಜನೆಯಿಂದ ಜೈವಿಕ ವೈವಿಧ್ಯತೆಯ ಮರಣಹೋಮದ ಬಗ್ಗೆಯೂ ತಿಳಿಸಲಾಯಿತು. ಇವೆಲ್ಲ ಕಾರಣಗಳನ್ನು ಮುಂದೆ ಇಟ್ಟುಕೊಂಡು ಚಳುವಳಿಯನ್ನು ಶಾಂತಿಯುತವಾಗಿ ನಡೆಸಲಾಯಿತು. ಅರಣ್ಯ ನಾಶವನ್ನು ತಡೆಯುವಂತೆ ಹೋರಾಡಲಾಯಿತು. ಪರಿಣಾಮವಾಗಿ ಕೇಂದ್ರ ಸರ್ಕಾರ ಎಂ ಜಿ ಕೆ ಮೆನನ್ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. 1983 ರಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸ್ಸು ಮಾಡಿತು. ಸಮಿತಿಯ ಶಿಫಾರಸಿನ ಮೇರೆಗೆ 1985ರಲ್ಲಿ ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೈ ಬಿಡಲಾಯಿತು.

3. ಚಿಪ್ಕೋ ಚಳುವಳಿ:(Chipko movement)

ಭಾರತದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಹಲವಾರು ಚಳುವಳಿಗಳಲ್ಲಿ 1970ರಲ್ಲಿ ನಡೆದ ಚಿಪ್ಕೋ ಚಳುವಳಿಯು ಅತ್ಯಂತ ಪ್ರಮುಖವಾದದ್ದು ಆಗಿದೆ. ಪರಿಸರ ಸಂರಕ್ಷಣೆಯಲ್ಲಿ ನಡೆದ ಚಳುವಳಿಗಳಲ್ಲಿ ಇದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಇದು ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೇ ಹಿಮಾಲಯದ ಪರಿಸರದ ಬಗ್ಗೆ ಕಾಳಜಿ ವಹಿಸುವುದರ ಕುರಿತು ಜನಜಾಗೃತಿಯನ್ನು ಮೂಡಿಸಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಿಮಾಲಯವನ್ನು ರಕ್ಷಿಸುವ ಹಲವಾರು ಚಿಕ್ಕಪುಟ್ಟ ಹೋರಾಟಗಳು ನಡೆದಿದ್ದವು. ಹಿಮಾಲಯದಲ್ಲಿ ದೊರಕುವ ಅಮೂಲ್ಯವಾದ ಗಿಡ ಮೂಲಿಕೆಗಳ ಕುರಿತು ಮಾಹಿತಿ ಹಿಮಾಲಯವು ಶತ್ರುಗಳಿಂದ ಭಾರತವನ್ನು ರಕ್ಷಿಸಿ, ಭಾರತಕ್ಕೆ ಬಿಸಿ ಗಾಳಿಯ ಬದಲಾಗಿ ತಂಪುಗಾಳಿಯನ್ನು ನೀಡುತ್ತದೆ. ಹಿಮಾಲಯವು ಸಿಂಧು ಗಂಗಾ ಬ್ರಹ್ಮಪುತ್ರ ನದಿಗಳ ಹುಟ್ಟಿಗೆ ಕಾರಣವಾಗಿದೆ. ಇಲ್ಲಿರುವ ಅರಣ್ಯ ಅತ್ಯಂತ ಪವಿತ್ರವಾಗಿದೆ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಯಿತು. ಇದರ ಜೊತೆಗೆ ಹಿಮಾಲಯದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಪಾರ ಮರಗಳನ್ನು ಕಡೆಯಲಾಯಿತು. ಇದರಿಂದ ಮೇಲ್ಮಣ್ಣು ಸಡಿಲಗೊಂಡು ಪ್ರವಾಹಗಳು ಸಂಭವಿಸಿ ಸ್ಥಳೀಯರಿಗೆ ಕಿರಿಕಿರಿ ಆಯ್ತು. 1970ರ ದಶಕದಲ್ಲಿ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಉಂಟಾಯಿತು. ಅಲ್ಲಿಯೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಾಸೋಲಿ ಗ್ರಾಮ ಸ್ವರಾಜ್ಯ ಮಂಡಲದ ಕಾರ್ಯಕರ್ತರು ಅಲ್ಲಿನ ಅರಣ್ಯ ಭೂಮಿ ಜನರು ಪರಸ್ಪರ ಅವಲಂಬನೆಯ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು. ಕಾಡಿದ್ದರೆ ಮಾತ್ರ ನಾವು ಎಂಬುದನ್ನು ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರವು ಹಳ್ಳಿಯ ಜನರಿಗೆ ಕೃಷಿ ಉಪಕರಣಗಳನ್ನು ತಯಾರಿಸಲು ಅಗತ್ಯವಿರುವ ಕಡಿಮೆ ಸಂಖ್ಯೆಯ ಮರಗಳನ್ನು ಕಡಿಯಲು ನಿರಾಕರಿಸಿತು. ಬೃಹತ್ ಕ್ರೀಡಾ ಉತ್ಪಾದನಾ ಕಂಪನಿಗೆ ಅರಣ್ಯವನ್ನು ಕಡಿಯಲು ಅನುಮತಿ ನೀಡಿತು. ಇದು ಗ್ರಾಮಸ್ಥರ ಆ ಆಕ್ರೋಶಕ್ಕೆ ಕಾರಣವಾಯಿತು. 1973 ರಲ್ಲಿ ಮೊದಲ ಬಾರಿಗೆ ಚಿಪ್ಕೋ ಚಳುವಳಿ, ಆರಂಭವಾಯಿತು. ಜನರು ಮರಗಳ ಕಾಂಡಗಳಿಗೆ ಪವಿತ್ರವಾದ ದಾರಗಳನ್ನು ಕಟ್ಟಿ ಅವುಗಳನ್ನು ಅಪ್ಪಿಕೊಳ್ಳುವ ಮೂಲಕ ಈ ಚಳುವಳಿಗೆ ಚಾಲನೆ ನೀಡಿದರು. ಅರಣ್ಯ ಉತ್ಪನ್ನಗಳನ್ನು ಉಪಯೋಗಿಸುವ ಹಕ್ಕು ಮಾತ್ರ ಇಲ್ಲಿನ ಗ್ರಾಮೀಣರಿಗೆ ಇದೆ ಎಂಬುದು ಈ ಚಳುವಳಿಯ ಗುರಿಯಾಗಿತ್ತು. ಮಹಿಳೆಯರು ಈ ಚಳುವಳಿ ಭಾಗವಹಿಸಿದ್ದರು. 1978 ರಲ್ಲಿ ಮಹಿಳೆಯರ ಮೇಲೆ ಗುಂಡು ಹಾರಿಸುವ ಮೂಲಕ ಚಳುವಳಿ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತು. ನಂತರ ಚಂಡಿ ಪ್ರಸಾದ್ ಭಟ್ಟ ನೇತೃತ್ವದಲ್ಲಿ ಚಳುವಳಿ ಉಗ್ರವಾಯಿತು.

ಆಗ ಉತ್ತರಖಾಂಡ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣರವರು ಘಟನಾ ಪರಿಶೀಲನೆಗೆ ಸಮಿತಿಯನ್ನು ನೇಮಿಸಿದರು. ಈ ಸಮಿತಿ ಸ್ಥಳೀಯರ ಪರವಾಗಿ ವರದಿ ಸಲ್ಲಿಸಿತು. ಸ್ತ್ರೀಯರು ಉತ್ತರ ಕಾಶಿಯಿಂದ ಕಸೌಲಿಯವರೆಗೆ ಗುಡ್ಡಗಾಡು ಪ್ರದೇಶದಲ್ಲಿ 75 ಕಿ.ಮೀ ವರೆಗೆ ಪಾದಯಾತ್ರೆ ನಡೆಸಿದ್ದಕ್ಕೂ ಸಾರ್ಥಕವಾಯಿತು. ಈ ಚಳುವಳಿಯನ್ನು ಸುಂದರ್ಲಾಲ್ ಬಹುಗುಣ, ಘನ ಶ್ಯಾಮ್‌ ಶಾತೂರಿ, ಹಿಂದೂ ಟೀಕೇಕಾರ್ ಹಾಗೂ ಧೂಮಸಿಂಗ್ ನೇಗಿ ಮತ್ತಿತರು ಬೆಂಬಲಿಸಿದ್ದರು.

4. ಅಪ್ಪಿಕೋ ಚಳುವಳಿ: (Appiko movement)

ಉತ್ತರ ಭಾರತದಲ್ಲಿ ನಡೆದ ಚಿಪ್ಕೋ ಚಳುವಳಿಯಿಂದ ಪ್ರೇರಿತರಾದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಪಾಂಡುರಂಗ ಹೆಗಡೆ ನೇತೃತ್ವದಲ್ಲಿ ಚಳುವಳಿಯನ್ನು ಆರಂಭಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಕಾಂಟ್ರಾಕ್ಟರ್‌ಗಳಿಗೆ ಮರಕಡಿಯಲು ಅನುಮತಿ ನೀಡಿದ ಸರ್ಕಾರದ ವಿರುದ್ಧ ಚಳುವಳಿಗಾರರು ಹೋರಾಟ ಆರಂಭ ಮಾಡಿದರು. ಮರ ಕಡಿಯುವುದನ್ನು ತಡೆಯಲು ಮರಗಳನ್ನೇ ಅಪ್ಪಿಕೊಂಡರು. ಮರಗಳನ್ನು ಕಡಿಯುವುದರಿಂದ ಮುಂದೆ ಆಗಬಹುದಾದ ಸಮಸ್ಯೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಲಾಯಿತು. ಜನಪದ ನೃತ್ಯ, ಬೀದಿ ನಾಟಕ ಇತ್ಯಾದಿ ಅಭಿನಯಗಳ ಮುಖಾಂತರ ಅರಿವು ಮೂಡಿಸಲಾಯಿತು. ಜೀವವನ್ನಾದರೂ ತೊರೆದೆವು ಆದರೆ ಮರಗಳನ್ನು ಕಡೆಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ಎಲ್ಲಾ ಕಡೆಗೂ ಸಾರಲಾಯಿತು. ಹಿಂದಿಯಲ್ಲಿ ಚಿಪ್ಕೋ ಎಂದರೆ ಕನ್ನಡದಲ್ಲಿ ಅಪ್ಪಿಕೋ ಅಥವಾ ತಬ್ಬಿಕೋ ಎಂದರ್ಥ. ಈ ಚಳುವಳಿಯಲ್ಲಿ ಚಂಡಿ ಪ್ರಸಾದ್ ಭಟ್ಟ ಹಾಗೂ ಸುಂದರಲಾಲ್ ಬಹುಗುಣರು ಭಾಗವಹಿಸಿದ್ದರು.

5. ಜಂಗಲ್ ಬಚಾವೋ ಆಂದೋಲನ: (Jungle bachao andolana)

ಭಾರತ ಸರ್ಕಾರವು ಬಿಹಾರಿನ ಸಿಂಗ್ಬೂಂ ಜಿಲ್ಲೆಯ ನೈಸರ್ಗಿಕ ಸಾಲ್ ಅರಣ್ಯದ ಪ್ರದೇಶದಲ್ಲಿ ವಾಣಿಜ್ಯ ತೇಗದ ಮರಗಳನ್ನು ನೆಡಲು ಪ್ರಸ್ತಾಪವನ್ನು ಮಾಡಿತು. ಈ ಯೋಜನೆಯನ್ನು ಸ್ಥಳೀಯ ಸಮುದಾಯಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿ 1982 ರಲ್ಲಿ ಜಂಗಲ್ ಬಚಾವೋ ಚಳುವಳಿಯನ್ನು ಆರಂಭಿಸಿದರು. ಅದರ ಪರಿಣಾಮವಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟಿತು.

6. ನರ್ಮದಾ ಬಚಾವೋ ಆಂದೋಲನ:

ಗುಜರಾತಿನ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧ ಮಣಿ ವೇಲಿ ಗ್ರಾಮದ ನೌಕರರು, ಗ್ರಾಮಸ್ಥರು, ಬುಡಕಟ್ಟು ಜನಾಂಗದವರು, ಪರಿಸರವಾದಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಚಳುವಳಿ ಆರಂಭಿಸಿದರು. ಈ ಚಳುವಳಿಯ ನಾಯಕತ್ವವನ್ನು ಮೇಧಾ ಪಾಟ್ಕರ್ ಹಾಗೂ ಬಾಬಾ ಅಮ್ಟೆ ವಹಿಸಿದ್ದರು. ಈ ಜಲಾಶಯದಿಂದ ಸಾವಿರಾರು ಜನರು ತಮ್ಮ ಆಸ್ತಿ ಹಾಗೂ ಮನೆಗಳನ್ನು ಕಳೆದುಕೊಂಡರು. ಆದರೆ ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಲಿಲ್ಲ. ನಂತರ ಜಲಾಶಯದ ಎತ್ತರವನ್ನು 130 ರಿಂದ 90 ಮೀಟರ್‌ಗೆ ಇಳಿಸಬೇಕೆಂದು ಬೇಡಿಕೆ ಇಡಲಾಯಿತು. 2018 ನಿರ್ದೇಶನದಂತೆ ಇದರ ಎತ್ತರವನ್ನು 90 ಮೀಟರ್ ಇಳಿಸಲಾಯಿತು.

7. ಪಶ್ಚಿಮ ಘಟ್ಟ ಉಳಿಸಿ ಚಳುವಳಿ:

1970ರಲ್ಲಿ ಕುದುರೆಮುಖ ಯೋಜನೆಯ ಕುರಿತಾದ ಚಳುವಳಿ ಆರಂಭವಾಯಿತು. ಕುದುರೆಮುಖದಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಗಣಿಗಾರಿಕೆಗೆ ಸ್ವಾದೀನ ಪಡಿಸಿಕೊಂಡು ತೊಂದರೆಗೆ ಒಳಗಾದ 4000 ಕುಟುಂಬಗಳಿಗೆ ಯಾವುದೇ ಪುನರ್ವಸತಿ ಕಲ್ಪಿಸಲಿಲ್ಲ. ಇದರಿಂದ ಜಾಗೃತರಾದ ಪರಿಸರವಾದಿಗಳು ಶಿವಮೊಗ್ಗ, ಕಳಸ, ಶೃಂಗೇರಿಗಳಲ್ಲಿ ಸೈಕಲ್ ಜಾತಾವನ್ನು ಪ್ರಾರಂಭಿಸಿ ತುಂಗಾ ಮೂಲವನ್ನು ಉಳಿಸಿ ಗಣಿಗಾರಿಕೆಯನ್ನು ಅಳಿಸಿ ಎಂಬ ಘೋಷಣೆಯೊಂದಿಗೆ ಚಳುವಳಿಯನ್ನು ತೀವ್ರಗೊಳಿಸಿದರು. ಇದೇ ಸಮಯದಲ್ಲಿ ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ಇರುವ ಪಶ್ಚಿಮ ಘಟ್ಟ ಪ್ರದೇಶವನ್ನು ಉಳಿಸಿ ಎಂಬ ಆಂದೋಲನವನ್ನು ಕೈಲಾಸ ಮಲ್ಹೊತ್ರಾ ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಸುಮಾರು 100 ದಿನಗಳ ಕಾಲ ನಡಿಗೆಯಿಂದ ಗೋವಾ ತಲುಪಿ ಅಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಿದರು.

 8. ತೆಹ್ರಿ ಅಣೆಕಟ್ಟು ವಿವಾದ: (Tehri dam conflict)

1960ರಲ್ಲಿ ಉತ್ತರಖಾಂಡದ ತೆಹ್ರಿ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಿಸಲಾಯಿತು. ಇದು ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಹ ನಿಯಂತ್ರಣದ ಉದ್ದೇಶವನ್ನು ಹೊಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ಸ್ಥಳಾಂತರವಾದವು ಮತ್ತು ಹಲವಾರು ಗ್ರಾಮಗಳು ಮುಳುಗಡೆಯಾದವು. ಸ್ಥಳೀಯರು ಇದನ್ನು ವಿರೋಧಿಸಿದರು ಜೊತೆಗೆ ಪುನರ್ವಸತಿಗೆ ಬೇಡಿಕೆ, ಜೀವ ವೈವಿಧ್ಯದ ರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಸಂದರ್ಭ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾಯಿತು.

ಉಪಸಂಹಾರ

ಪರಿಸರ ಚಳುವಳಿಗಳು ಮಾನವ ಮತ್ತು ಪ್ರಕೃತಿಯ ಸಹಜ ಸಹವಾಸವನ್ನು ಉಳಿಸುವ ಮಹತ್ವದ ಪ್ರಯತ್ನಗಳಾಗಿವೆ. ಬಿಷ್ಣೊಯಿ, ಚಿಪ್ಕೋ, ಅಪ್ಪಿಕೋ, ನರ್ಮದಾ ಬಚಾವೋ ಮುಂತಾದ ಚಳುವಳಿಗಳು ಜನಶಕ್ತಿಯ ಮಹತ್ವವನ್ನು ತೋರಿಸಿವೆ. ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರಿ ಪರಿಸರ ಸ್ನೇಹಿ ನಿರ್ಧಾರಗಳಿಗೆ ದಾರಿ ಮಾಡಿಕೊಟ್ಟಿವೆ. ಇಂತಹ ಚಳುವಳಿಗಳಿಂದ ನಮಗೆ ಪ್ರಕೃತಿಯ ಮೌಲ್ಯ ಅರಿಯುವ ಪಾಠ ಸಿಕ್ಕಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೆಂಬ ಸಂದೇಶವನ್ನು ಇವುಗಳು ಬಲವಾಗಿ ಸಾರುತ್ತವೆ.