ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು

ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು

ಪೀಠಿಕೆ : ಕ್ರಿ.ಪೂ.6ನೇ ಶತಮಾನವನ್ನು ಮಾನವ ಚರಿತ್ರೆಯಲ್ಲಿನ ʻಕಾಲ ವಿಭಾಗಸ್ಥಾನ’ವೆಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬಂದವು. ಕ್ರಿ.ಪೂ.6ನೇ ಶತಮಾನವು ಚರಿತ್ರೆಯಲ್ಲಿ ಗುರುತಿಸಬಹುದಾದ ಕಾಲವೆನಿಸಿದೆ. ಇದಕ್ಕೆ ಕಾರಣವೆಂದರೆ:-

1. ಮಗಧಾ ರಾಜ್ಯದ ಏಳಿಗೆಯಾಯಿತು.

2. ರಾಜಕೀಯ ರಂಗಭೂಮಿಯ ಮೇಲೆ 16 ಮಹಾ ಜನಪದಗಳು ಬೆಳೆದವು.

3. ಭಾರತದ ಮೇಲೆ ಪರಕೀಯರ ಆಕ್ರಮಣಗಳಾದವು.

4. ಕ್ರಿ.ಪೂ.6ನೇ ಶತಮಾನದಲ್ಲಿ ವಾಯುವ್ಯ ಭಾರತದಲ್ಲಿ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರ್ಷಿಯನ್ನರ ಪ್ರಭಾವ ದಟ್ಟವಾಯಿತು.

5. ವಿಶ್ವದ ಪ್ರಮುಖ ಧರ್ಮಗಳ ಸಾಲಿನಲ್ಲಿ ಜೈನ ಮತ್ತು ಬೌದ್ಧ ಮತಗಳು ಏಳಿಗೆಗೆ ಬಂದವು.

6. ಭಾರತ ಮತ್ತು ಗ್ರೀಕ್ ಪರ್ಷಿಯನ್ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧವೇರ್ಪಟ್ಟಿತು.

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

1. ಯಾಗ ಯಜ್ಞಗಳ ಪ್ರಾಬಲ್ಯ : ವೈದಿಕ ಯುಗದ ಅಂತ್ಯದವೇಳೆಗೆ ಯಾಗಯಜ್ಞಗಳು ಹೆಚ್ಚು ಪ್ರಬಲಗೊಂಡವು. ವೈದಿಕ ಧರ್ಮದಲ್ಲಿನ ಈ ಕಠಿಣ ಯಾಗಯಜ್ಞಗಳು ಜನಸಾಮಾನ್ಯರಿಗೆ ತುಂಬಾ ಆರ್ಥಿಕ ಹೊರೆಯಾಗಿದ್ದವು. ಪುರೋಹಿತರು ಪ್ರಬಲರಾದರು. ಅಧಿಕ ಖರ್ಚಿನ ಯಾಗಯಜ್ಞಗಳ ವೈದಿಕ ಪಂಥಕ್ಕೆ ಬದಲು ಹೊಸಮತಗಳು ಏಳಿಗೆಗೆ ಬಂದರೆ ಅದಕ್ಕೆ ತಮ್ಮ ಬೆಂಬಲ ಸೂಚಿಸಲು ಜನಸಾಮಾನ್ಯರು ನಿರ್ಧರಿಸಿದ್ದರು.

2. ಜಾತಿಪದ್ಧತಿಯ ಜಟಿಲತೆ : ವೈದಿಕ ಸಮಾಜದಲ್ಲಿ ಜಾತಿಪದ್ಧತಿಯು ಹೆಚ್ಚು ಜಠಿಲತೆಯಿಂದ ಕೂಡಿತ್ತು. ಬ್ರಾಹ್ಮಣರು ವೇದಾದ್ಯಯನ ಮತ್ತು ಪೌರೋಹಿತ್ಯದ ಕಾರ್ಯನಿರ್ವಹಿಸುತ್ತಿದ್ದು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಹೊಂದಿದ್ದರು. ತೆರಿಗೆಯಿಂದ ವಿನಾಯ್ತಿಪಡೆದಿದ್ದು, ಕ್ಷತ್ರಿಯರಿಗೆ ಈ ತರಹದ ಸವಲತ್ತುಗಳಿರಲಿಲ್ಲ. ಹೀಗೆ ಅಸಮಾಧಾನಗೊಂಡ ಕ್ಷತ್ರಿಯ ವರ್ಗಗಳಿಂದ ಹೊಸ ಧರ್ಮಗಳ ಸ್ಥಾಪನೆಯಾಯಿತು.

3. ಮೋಕ್ಷ ಮಾರ್ಗದ ಕಲ್ಪನೆ : ವ್ಯಕ್ತಿಯು ಮೋಕ್ಷವನ್ನು ಪಡೆಯಬೇಕಾದರೆ ಯಾವ ಮಾರ್ಗವನ್ನು ಅನುಸರಿಸಬೇಕೆಂಬುದು ಜನಸಾಮಾನ್ಯರಿಗೆ ಜಠಿಲ ಸಮಸ್ಯೆಯಾಯಿತು. ತಪಸ್ಸಾಚರಣೆ, ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳೆಂಬ ವಿವಿಧ ಮಾರ್ಗಗಳು ಹುಟ್ಟಿಕೊಂಡವು. ಈ ವಿವಿಧ ಮಾರ್ಗಗಳಲ್ಲಿ ಯಾವುದನ್ನು ಅವಲಂಬಿಸಿದರೆ ಮುಕ್ತಿ ದೊರೆಯುತ್ತದೆ ಎಂಬುದು ದ್ವಂದ್ವವಾಯಿತು. ಹೊಸ ಧರ್ಮಗಳು ಸರಳ ಮತ್ತು ಸುಲಭ ತತ್ವಗಳನ್ನು ಒಳಗೊಂಡಿದ್ದರಿಂದ ಜನಸಾಮಾನ್ಯರು ಹೊಸಪಂಥಗಳ ಸ್ಥಾಪನೆಗೆ ಬೆಂಬಲ ನೀಡಿದರು.

4. ಉಪನಿಷತ್ತುಗಳು : ಉಪನಿಷತ್ತುಗಳು ಹೊಸಪಂಥಗಳ ಉದಯಕ್ಕೆ ಪ್ರೇರಣೆ ನೀಡಿದವು. ವೈದಿಕ ಪಂಥದಲ್ಲಿದ್ದ ಮತಾಚರಣೆಯ ಅಂಶಗಳನ್ನು ಉಪನಿಷತ್ತುಗಳು ಖಂಡಿಸಿ, ಮೋಕ್ಷಗಳಿಕೆಗೆ ಜ್ಞಾನಮಾರ್ಗವೇ ಅತ್ಯುತ್ತಮ ಮಾರ್ಗವೆಂದು ಉಪನಿಷತ್ತುಗಳು ವ್ಯಾಖ್ಯಾನಿಸಿದವು.

5. ಜನಸಾಮಾನ್ಯರ ಭಾಷೆಯ ಬಳಕೆ : ವೈದಿಕ ಪಂಥದಲ್ಲಿ ಧರ್ಮಭೋಧನೆಗಾಗಿ ಸಂಸ್ಕೃತ ಭಾಷೆಯನ್ನು ಬಳಸಲಾಯಿತು. ಸಂಸ್ಕೃತ ಭಾಷೆಯು ಜನಸಾಮಾನ್ಯರ ಭಾಷೆಯಾಗಿರದೆ ಕಠಿಣವಾದ ಭಾಷೆಯಾಗಿತ್ತು. ಧಾರ್ಮಿಕ ಕೃತಿಗಳನ್ನು ಅರ್ಥೈಸಿಕೊಳ್ಳಲು ಬ್ರಾಹ್ಮಣಪಂಡಿತರನ್ನೇ ಅವಲಂಬಿಸಬೇಕಾಗಿತ್ತು. ಇದೇ ವೇಳೆಗೆ ಜನಸಾಮಾನ್ಯರ ಭಾಷೆಯನ್ನು ಬಳಸಿದ್ದರಿಂದ ಅದರ ಪ್ರಭಾವ ಹೊಸಧರ್ಮಗಳ ಉದಯಕ್ಕೆ ಕಾರಣವಾಯಿತು.

6. ಹೊಸ ಪಂಥಗಳ ಉದಯ : ವೈದಿಕ ಧರ್ಮವನ್ನು ವಿರೋಧಿಸಿ ಚಾರ್ವಾಕ, ನಾಸ್ತಿಕ, ಪರಿವ್ರಾಜಕ ಮುಂತಾದ ಹೊಸ ಪಂಥಗಳು ಹುಟ್ಟಿಕೊಂಡವು. ಈ ಬೆಳವಣಿಗೆಯು ಸಹ ಹೊಸ ಧರ್ಮಗಳ ಉದಯಕ್ಕೆ ಕಾರಣವಾಯಿತು.

7. ಪ್ರಾಣಿಬಲಿ : ವೈದಿಕ ಧರ್ಮದಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದು ಒಂದು ಸಂಪ್ರದಾಯವಾಗಿ ಬೆಳೆದಿತ್ತು. ಹೀಗಾಗಿ ಅಹಿಂಸೆಯನ್ನು ಬೋಧಿಸುವ ಧರ್ಮದ ಕಡೆ ಜನರು ಆಕರ್ಷಿತರಾದರು.

ಹೀಗೆ ಹೊಸಮತಗಳ ಉದಯಕ್ಕೆ ಅನೇಕ ಪೂರಕವಾದ ಅಂಶಗಳಿದ್ದವು.

ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಹೋಲಿಕೆಗಳು (ಸಮಾನ ಅಂಶಗಳು)

  1. ಇವೆರಡೂ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಪಾಳಿ ಭಾಷೆಯನ್ನು ಬಳಸಿಕೊಂಡವು.
  2. ಇವೆರಡೂ ವೈದಿಕ ಧರ್ಮದ ವಿರುದ್ಧ ಬಿರುಗಾಳಿಯನ್ನು ಎಬ್ಬಿಸಿದವು. ಅಂದರೆ ಹಿಂದೂಧರ್ಮ ಸುಧಾರಣೆಗಾಗಿ ಹುಟ್ಟಿಕೊಂಡ ಧರ್ಮಗಳು.
  3. ಇವೆರಡೂ ಸರಳವಾದ, ಪರಿಶುದ್ಧವಾದ, ಆಚಾರಯುತ ಜೀವನಕ್ಕೆ ಮಹತ್ವ ಕೊಟ್ಟಿದೆ.
  4. ಇವೆರಡೂ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿವೆ
  5. ಇವೆರಡೂ ಬ್ರಾಹ್ಮಣರಿಂದ ಹೊರತಾದ ಕ್ಷತ್ರಿಯರಿಂದ ಸ್ಥಾಪನೆಯಾದ ಧರ್ಮಗಳು,
  6. ಅಹಿಂಸೆ ಉತ್ತಮ ನಡತೆ, ಉತ್ತಮ ಜ್ಞಾನಕ್ಕೆ ಮಹತ್ವ, ಜಾತಿಪದ್ಧತಿ, ಧಾರ್ಮಿಕ ವಿಧಿ, ವೇದ, ಬ್ರಾಹ್ಮಣತ್ವ, ಯಜ್ಞಯಾಗಗಳನ್ನು ಖಂಡಿಸಿ ಸಮಾನತೆಯನ್ನು ಪ್ರತಿಪಾದಿಸಿದವು.
  7. ಕಲೆ, ಸಾಹಿತ್ಯಕ್ಕೆ ಎರಡೂ ಅಪೂರ್ವ ಕೊಡುಗೆ ನೀಡಿದವು.
  8. ಇವೆರಡೂ ಪ್ರಜಾಪ್ರಭುತ್ವ ಸಂಘ ಮಾದರಿಯಲ್ಲಿ ರಚಿಸಲ್ಪಟ್ಟಿವೆ.
  9. ಎರಡೂ ಶ್ರಮಜೀವನವನ್ನು ಒತ್ತಿ ಹೇಳಿವೆ.
  10. ಧಾರ್ಮಿಕ ಸಹಿಷ್ಣುತೆಯಲ್ಲಿ ನಂಬಿಕೆ ಹೊಂದಿವೆ.
  11. ಇವೆರಡೂ ಪ್ರಾಣಿಬಲಿಯನ್ನು ಖಂಡಿಸಿದವು. ಅಹಿಂಸೆಯನ್ನು ಒತ್ತಿ ಹೇಳಿದವು.
  12. ಇವೆರಡೂ ಮತ ಪ್ರಚಾರಕ (ಮಿಷನರಿ) ಧರ್ಮಗಳು.
  13. ಎರಡೂ ಜನಸಾಮಾನ್ಯರ ಆಡುಭಾಷೆಯಲ್ಲಿ ಬೋಧಿಸಿದವು.
  14. ಇವೆರಡೂ ಭಾರತದಲ್ಲಿ ಹುಟ್ಟಿದ ಧರ್ಮಗಳಾಗಿವೆ.
  15. ಎರಡೂ ವೇದ ಮತ್ತು ಬ್ರಾಹ್ಮಣರ ಶ್ರೇಷ್ಠತೆಯನ್ನು ಖಂಡಿಸಿದವು.
  16. ಇವೆರಡೂ ದೇವರು ಇರುವಿಕೆಯನ್ನು ನಂಬಲಿಲ್ಲ.
  17. ಎರಡೂ ಸನ್ಯಾಸತ್ವವನ್ನು ಒತ್ತಿ ಹೇಳಿದವು.
ವ್ಯತ್ಯಾಸಗಳು
ಜೈನಧರ್ಮ ಬೌದ್ಧ ಧರ್ಮ
1. ಅಹಿಂಸೆಗೆ ಹೆಚ್ಚಿನ ಮಹತ್ವ ಕೊಟ್ಟಿದೆ 1. ಅಹಿಂಸೆಗೆ ಅಷ್ಟಾಗಿ ಮಹತ್ವ ಕೊಟ್ಟಿಲ್ಲ.
2. ತಪಸ್ಸು, ದೇಹ ದಂಡನೆಗೆ ಮಹತ್ವ ಕೊಟ್ಟಿದೆ. 2. ಇಂದ್ರಿಯಗಳ ನಿಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಿದೆ.
3 ಭಾರತದೊಳಗೆ ಮಾತ್ರ ಜನಪ್ರಿಯವಾಯಿತು. 3 ಭಾರತವಲ್ಲದೆ ಹೊರದೇಶಗಳಲ್ಲೂ ಪ್ರಖ್ಯಾತಿ ಪಡೆಯಿತು.
4. ಮೋಕ್ಷ ಸಾಧನೆಗೆ ಉಪವಾಸವ್ರತ, ಸಲ್ಲೇಖನ ವ್ರತ ಆಚರಣೆಯನ್ನು ನಂಬುತ್ತದೆ. ದೇಹನಗ್ನತೆಯಲ್ಲಿ ನಂಬಿಕೆ 4.

ಮೋಕ್ಷ ಸಾಧನೆಗೆ ಅಷ್ಟಾಂಗ ಮಾರ್ಗವನ್ನು ಒತ್ತಿ ಹೇಳಿದೆ. ನಗ್ನತೆಯಲ್ಲಿ ನಂಬಿಕೆ ಹೊಂದಿಲ್ಲ.

5. ಜೈನ ತೀರ್ಥಂಕರ ಪೂಜೆ 5. ಬೋಧಿಸತ್ವರ ಪೂಜೆ
6. ಹಿಂದೂ ಧರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ 6. ಹಿಂದೂ ಧರ್ಮದಿಂದ ಸ್ವಲ್ಪ ಪ್ರತ್ಯೇಕ
7. ಪವಿತ್ರ ಗ್ರಂಥಗಳು – ಜೈನ ಅಂಗಗಳು 7. ಪವಿತ್ರ ಗ್ರಂಥಗಳು – ತ್ರಿಪಿಟಕಗಳು
8. ಸಂಘ ಜನಪ್ರಿಯವಾಗಿ ಸಂಘಟಿತವಾಗಿಲ್ಲ. 8. ಸಂಘ ಬಲಿಷ್ಠವಾಗಿ ಸಂಘಟನೆಗೊಂಡಿತ್ತು.
9. ನಿರ್ವಾಣ ಮತ್ತು ತ್ರಿರತ್ನಗಳಲ್ಲಿ ನಂಬಿಕೆ 9. ಅಷ್ಟಾಂಗ ಮಾರ್ಗದಲ್ಲಿ ನಂಬಿಕೆ
10. ಸ್ತ್ರೀಯರು, ಸಂಸಾರಿಗಳಿಗೆ ಮೋಕ್ಷ ಪಡೆಯಲು ಅರ್ಹರಲ್ಲ. 10. ಇದರಲ್ಲಿ ಅರ್ಹರಾಗಿರುತ್ತಾರೆ.
11. ಮುಕ್ತಿಯು ಮರಣದ ನಂತರ ಲಭಿಸುತ್ತದೆ. 11. ಮುಕ್ತಿ ಮರಣ ಮುನ್ನವೇ ಸಿಗುತ್ತದೆ.

ಹೀಗೆ ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳಿದ್ದರೂ, ಇವೆರೆಡೂ ಮಾನವ ಕುಲಕೋಟಿಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿವೆ.

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಗೌತಮ ಬುದ್ಧನಿಂದ ಸಂಸ್ಥಾಪಿಸಲ್ಪಟ್ಟ ಬೌದ್ಧಪಂಥವು ಸಮಗ್ರ ಭಾರತದಾದ್ಯಂತ ಪ್ರಸರಣಗೊಂಡು ಚೀನಾ, ಜಪಾನ್, ಬರ್ಮ, ಮಲಯ, ನೇಪಾಳ, ಭೂತಾನ್, ಟಿಬೆಟ್, ಸಿಂಹಳಗಳಲ್ಲಿ ಪ್ರಚಾರಗೊಂಡಿತು. ಭಾರತದಲ್ಲಿ ಜನ್ಮತಾಳಿದ ಬೌದ್ಧಪಂಥವು ತಾಯ್ಯಾಡಿನಲ್ಲಿ ಕಣ್ಮರೆಯಾದರೂ ಹೊರರಾಷ್ಟ್ರಗಳಲ್ಲಿ ಇಂದಿಗೂ ಪ್ರಧಾನ ಧರ್ಮವಾಗಿಯೇ ಉಳಿದುಕೊಂಡಿದೆ, ಬೌದ್ಧಪಂಥದ ಅಭ್ಯುದಯಕ್ಕೆ ಹಲವಾರು ಪ್ರಮುಖ ಕಾರಣಗಳಿದ್ದವು.

ಎ) ಬುದ್ಧನ ವ್ಯಕ್ತಿತ್ವ : ಬೌದ್ಧಪಂಥದ ಅಭ್ಯುದಯಕ್ಕೆ ಪ್ರಮುಖ ಕಾರಣ ಬುದ್ಧನ ಆಕರ್ಷಕ ವ್ಯಕ್ತಿತ್ವ. ʻವಿಲ್‌ಡೂರೆಂಟ್’ ಅಭಿಪ್ರಾಯದಂತೆ ‘ಬುದ್ಧನು ಏಷ್ಯಾದ ಜ್ಯೋತಿ, ಕಾರುಣ್ಯಮೂರ್ತಿ ಮತ್ತು ಸ್ಥಿತಪ್ರಜ್ಞ’. ಬುದ್ಧನ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಬೌದ್ಧಮತಾವಲಂಬಿಗಳಾದರು.

ಬಿ) ಬೌದ್ಧ ಮಹಾಸಭೆಗಳು : ಬೌದ್ಧಧರ್ಮದ ಅಭ್ಯುದಯಕ್ಕೆ 4 ಬೌದ್ಧ ಮಹಾಸಭೆಗಳು ನಡೆದಿರುವುದು ಕಾರಣವಾಗಿದೆ.

ಬೌದ್ಧ ಸಮ್ಮೇಳನಗಳು

ಕ್ರಸಂ.

ವರ್ಷ

ಅಧ್ಯಕ್ಷತೆ

ಸ್ಥಳ

ಆಶ್ರಯದಾತ

ಉದ್ದೇಶ

1.

ಕ್ರಿ.ಪೂ 487

ಮಹಾಕಶ್ಯಪ

ರಾಜಗೃಹ

ಅಜಾತಶತೃ

ತ್ರಿಪಿಟಕಗಳ ರಚನೆ

2.

ಕ್ರಿ.ಪೂ 387

ಸಬಾಕಾಮಿ

ವೈಶಾಲಿ

ಕಾಲಾಶೋಕ

ಸಂಘ ತೇರವಾದಿ ಮತ್ತು ಮಹಾ ಸಾಂಘಿಕರಾಗಿ ವಿಭಜನೆ

3.

ಕ್ರಿ.ಪೂ 251

ಮೊಗ್ಗಲಿಪುತ್ರ

ಪಾಟಲೀಪುತ್ರ

ಅಶೋಕ

ವಿದೇಶಗಳಿಗೆ ಮಿಷನರಿಗಳ ನೇಮಕ, ಅಭಿಧಮ್ಮ ಪೀಟಕ ರಚನೆ

4.

ಕ್ರಿ.ಪೂ 100

ವಸುಮಿತ್ರ

ಕುಂಡಲಿವನ

ಕಾನಿಷ್ಕ

18 ಪಂಥಿಯರ ನಡುವೆ ಭಿನ್ನತೆ

5.

ಕ್ರಿ.ಪೂ 643

ಹೂಯೆನ್‌ತ್ಸಾಂಗ್

ಕನೂಜ್

ಹರ್ಷವರ್ಧನ

ಮತ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು

ಸಿ) ಬೌದ್ಧಸಂಘದ ಪಾತ್ರ : ಧರ್ಮದ ಪ್ರಾಬಲ್ಯಕ್ಕೆ ಮತ್ತೊಂದು ಪ್ರಮುಖ ಕಾರಣ ಬೌದ್ಧಸಂಘದ ಕ್ರಿಯಾತ್ಮಕ ಕಾರ್ಯ ನಿರ್ವಹಣೆ. ಬೌದ್ಧಸಂಘದ ಸನ್ಯಾಸಿ-ಸನ್ಯಾಸಿನಿಯರು ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹೀಗಾಗಿ ಧರ್ಮವು ಏಳಿಗೆಗೆ ಬಂದಿತು.

ಡಿ) ಧಾರ್ಮಿಕ ತತ್ವಗಳು ಮತ್ತು ಬೋಧನೆಯ ಭಾಷೆ : ಧರ್ಮದ ಪ್ರವರ್ಧಮಾನಸ್ಥಿತಿಗೆ ಮೂಲಕಾರಣ ಧರ್ಮದ ತತ್ವಗಳು, ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗಸಿದ್ಧ ಮಾರ್ಗಗಳು ಜನಸಾಮಾನ್ಯರಿಗೆ ಆಕರ್ಷಿತವಾದವು. ಧಾರ್ಮಿಕ ತತ್ವಗಳನ್ನು ಸರಳ ಮತ್ತು ಸುಲಭ ಭಾಷೆಯಲ್ಲಿ (ಪಾಳಿಭಾಷೆಯಲ್ಲಿ) ಬೋಧಿಸಲಾಯಿತು. ಇದು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಾಗಿತ್ತು.

ಬೌದ್ಧ ಧರ್ಮದ ಅವನತಿ

ಪ್ರಾಚೀನ ವಿಶ್ವದ ಪ್ರಮುಖ ಧರ್ಮವಾಗಿದ್ದ ಬೌದ್ಧಪಂಥವು ಭಾರತದಲ್ಲಿ ಪತನದ ಸ್ಥಿತಿ ತಲುಪಿತ್ತು. ಬೌದ್ಧಧರ್ಮದ ಅವನತಿಗೆ ಹಲವಾರು ಕಾರಣಗಳಿದ್ದವು.

1. ಧಾರ್ಮಿಕ ವಿಂಗಡಣೆ : ಬೌದ್ಧಪಂಥದ ವಿಭಜನೆಯು ಧರ್ಮದ ಅವನತಿಗೆ ಒಂದು ಪ್ರಮುಖ ಕಾರಣವಾಯಿತು. ಕಾನಿಷ್ಕನ ಆಳ್ವಿಕೆಯ ವೇಳೆಗೆ ಬೌದ್ಧಪಂಥವು ಹೀನಯಾನ ಮತ್ತು ಮಹಾಯಾನ ಬೌದ್ಧ ಪಂಥಗಳೆಂದು ವಿಂಗಡಿಸಲ್ಪಟ್ಟಿತು. ಧಾರ್ಮಿಕ ಅನೈಕ್ಯತೆಯು ಧರ್ಮದ ಅವನತಿಗೆ ಒಂದು ಕಾರಣವಾಯಿತು. ಬುದ್ಧನ ತತ್ವಗಳ ಅವಲಂಭಿಸಿ ಮೂರ್ತಿ ಪೂಜೆಯನ್ನು ಅವಲಂಬಿಸಿದವರು ಮಹಾಯಾನ ಪಂಥದವರಾದರು. ಬುದ್ಧನತತ್ವಗಳ ಅವಲಂಭಿಸಿ ಸರಳನಿಯಮ ಪಾಲಿಸಿದವರು ಹೀನಯಾನ ಪಂಥದವರಾದರು.

2. ರಾಜರ ಪ್ರೋತ್ಸಾಹ ದೊರಕದಿದ್ದುದು : ರಾಜರ ಆಶ್ರಯ ಮತ್ತು ಪ್ರೋತ್ಸಾಹ ಪಡೆದು ಪ್ರಾಬಲ್ಯಕ್ಕೆ ಬಂದ ಬೌದ್ಧಧರ್ಮವು ಕ್ರಮೇಣ ರಾಜರ ಆಶ್ರಯವಿಲ್ಲದೆ ಅವನತಿಯತ್ತ ಸಾಗಲು ಕಾರಣವಾಯಿತು.

3. ವೈದಿಕ ಪಂಥದ ಪುನರುಜ್ಜಿವನ : ಚೌದ್ಧಧರ್ಮವು ವಿಂಗಡಣೆಗೊಂಡು ಅವನತಿಯತ್ತ ಸಾಗುತ್ತಿದ್ದಾಗ ಶಂಕರಾಚಾರ್ಯ ಮತ್ತು ಕುಮಾರಿಲಭಟ್ಟರು ವೈದಿಕ ಪಂಥದ ಪುನರುಜ್ಜಿವನ ಕಾರ್ಯ ಕೈಗೊಂಡಿದ್ದರಿಂದ ವೈದಿಕ ಪಂಥವು ಮತ್ತೆ ಪ್ರಾಬಲ್ಯಕ್ಕೆ ಬಂದಿತು.

4. ಮಹಮ್ಮದೀಯರ ಧಾಳಿಗಳು : ಭಾರತವನ್ನು ಪ್ರವೇಶಿಸಿದ ಟರ್ಕೊ-ಅಫ್‌ಘನ್ನರು ದೆಹಲಿ ಸುಲ್ತಾನರು ‘ಜಸಿಯಾ’ ತಲೆಗಂದಾಯ ಜಾರಿಗೆ ತಂದು ಹಿಂದೂಗಳನ್ನು ಇಸ್ಲಾಂ ಪಂಥಕ್ಕೆ ಪರಿವರ್ತಿಸುವ ಕಾರ್ಯ ಕೈಗೊಂಡರು. ಬೌದ್ಧಕಲಾಸ್ಮಾರಕಗಳನ್ನು ಶಿಥಿಲಗೊಳಿಸಿದರು. ಹೀಗೆ ಮಹಮ್ಮದೀಯರ ಧಾಳಿಯೂ ಸಹ ಬೌದ್ಧಧರ್ಮದ ಅವನತಿಗೆ ಕಾರಣವಾಯಿತು.

5. ಸಂಸ್ಕೃತ ಭಾಷೆಯ ಬಳಕೆ : ಬೌದ್ಧ ಪಂಥದ ಅವನತಿಗೆ ಪಾಳಿಭಾಷೆಗೆ ಬದಲು ಸಂಸ್ಕೃತ ಭಾಷೆಯ ಬಳಸಿದ್ದರಿಂದ ಈ ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ. ಅರ್ಥವಾಗದ ಭಾಷೆಯ ಬಳಕೆಯು ಅವನತಿಗೆ ಒಂದು ಕಾರಣವಾಯಿತು.

6. ಬೌದ್ಧಸಂಘದ ನಿಷ್ಕ್ರಿಯತೆ : ಬೌದ್ಧಧರ್ಮದ ಏಳಿಗೆಗೆ ಕಾರಣವಾಗಿದ್ದ ಬೌದ್ಧಸಂಘವು ಧರ್ಮದ ಅವನತಿಗೂ ಕಾರಣವಾಯಿತು. ಬೌದ್ಧ ಸಂಘದ ಸನ್ಯಾಸಿ-ಸನ್ಯಾಸಿನಿಯರು ಧಾರ್ಮಿಕ ನಿಷ್ಠೆಯನ್ನು ಮರೆತರು. ವೈಯುಕ್ತಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರು. ಧರ್ಮದ ಪಾವಿತ್ರತೆಯನ್ನು ಸಂಘವು ನಿರ್ಲಕ್ಷಿಸಿತು. ಬೌದ್ಧ ಸಂಘದ ನಿಷ್ಕ್ರಿಯತೆಯೂ ಧರ್ಮದ ಅವನತಿಗೆ ಪ್ರಮುಖ ಕಾರಣವಾಯಿತು.

ಉಪಸಂಹಾರ:

ಆಧುನಿಕ ಭಾರತದಲ್ಲಿ ಬೌದ್ಧ ಧರ್ಮವು ಮತ್ತೆ ತಲೆ ಎತ್ತುತ್ತಿದ್ದು ಇದಕ್ಕೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರವಾದದ್ದು ಪ್ರಮುಖವಾದ ಕಾರಣವಾಗಿದೆ. ಮುಖ್ಯವಾಗಿ ಬುದ್ಧನ ವ್ಯಕ್ತಿತ್ವದ ಸೂಜಿಗಲ್ಲಿನ ಸೆಳೆತ ಕಾಲಾತೀತವಾದದ್ದು.

ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ ಹಾಗೂ ಬೋಧನೆ

ಗೌತಮ ಬುದ್ಧನ ಜೀವನ

ಬಾಲ್ಯ : ಏಷ್ಯಾದ ಬೆಳಕು ಎಂದು ಹೆಸರಾದ ಗೌತಮಬುದ್ಧ ಬೌದ್ಧ ಧರ್ಮದ ಸ್ಥಾಪಕ. ಈತ ಒಬ್ಬ ಮಹಾನ್ ದಾರ್ಶನಿಕ. ಈತನನ್ನು ಶಾಕ್ಯಮುನಿ ಹಾಗೂ ತಥಾಗತ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಈತ ಕ್ರಿ.ಪೂ. 583 ರಂದು ವೈಶಾಖ ಶುದ್ಧ ಪೂರ್ಣಿಮೆಯಂದು ನೇಪಾಳದ ಲುಂಬಿನಿ ವನದಲ್ಲಿ ಜನಿಸಿದನು.  ತ್ರಿಪೀಟಕಗಳು ಹಾಗೂ ಜಾತಕ ಕಥೆಗಳು ಬುದ್ಧನ ಬಗ್ಗೆ ವಿವರಣೆ ನೀಡುತ್ತವೆ. ಈತನ ತಂದೆ ಶುದ್ಧೋದನ ಹಾಗೂ ತಾಯಿ ಮಾಯಾದೇವಿ, ಬುದ್ಧನ ಮೂಲ ಹೆಸರು ಸಿದ್ದಾರ್ಥ, ಶುದ್ಧೋದನ ಕಪಿಲ ವಸ್ತುವಿನ ಶಾಕ್ಯ ಕುಲಕ್ಕೆ ಸೇರಿದವನು. ಸಿದ್ದಾರ್ಥ ಜನಿಸಿದ ಕೇವಲ 7 ದಿನಗಳಲ್ಲಿ ಮಾಯಾದೇವಿ ತೀರಿಕೊಂಡಳು. ನಂತರ ಬುದ್ಧ ತನ್ನ ಮಲತಾಯಿ ಪ್ರಚಾಪತಿ ಗೌತಮಿಯ ಆಶ್ರಮದಲ್ಲಿ ಬೆಳೆದನು. ಸಂಪ್ರದಾಯದಂತೆ ಸಿದ್ದಾರ್ಥ ಜನಿಸಿದ ತಕ್ಷಣ ಶುದ್ಧೋದನ ಜ್ಯೋತಿಷಿಗಳನ್ನು ಕರೆದು ಮಗನ ಭವಿಷ್ಯವನ್ನು ಕೇಳಿದನು. ಈತ ಮಹಾರಾಜನಾಗುತ್ತಾನೆ ಇಲ್ಲವೆ ಜಗತ್ತನ್ನು ಉದ್ಧರಿಸುವ ಸನ್ಯಾಸಿಯಾಗುತ್ತಾನೆ ಎಂದು ಜ್ಯೋತಿಷಿ ಹೇಳಿದನು. ಈ ಮಾತನ್ನು ಕೇಳಿ ದಿಗ್ಬ್ರಮೆಗೊಂಡ ಶುದ್ಧೋದನ ತನ್ನ ಮಗ ಸನ್ಯಾಸಿಯಾಗದಿರಲಿ ಎಂದು ಬಯಸಿ ಅರಮನೆಯಲ್ಲಿಯೇ ಅವನಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದನು. ಅವನಿಗಾಗಿ ಅರಮನೆಗಳನ್ನು ನಿರ್ಮಿಸಿದನು. ಯಾಕೆಂದರೆ ತನ್ನ ಮಗ ಪ್ರಸಿದ್ಧ ಸಾಮ್ರಾಟನಾಗಲು ಬಯಸಿದ್ದನೇ ಹೊರತು ಸನ್ಯಾಸಿಯಾಗಲು ಅಲ್ಲ. ಹೀಗಾಗಿ ತನ್ನ ಮಗನ ಮನಸ್ಸಿಗೆ ಘಾಸಿಯಾಗುವ ಯಾವುದೇ ಘಟನೆ ನಡೆಯದಂತೆ ಎಚ್ಚರಿಕೆವಹಿಸಿದನು.

ವೈವಾಹಿಕ ಜೀವನ : ಬಾಲ್ಯದಿಂದಲೇ ಸಿದ್ದಾರ್ಥನಿಗೆ ಆಧ್ಯಾತ್ಮದ ಕಡೆಗೆ ಒಲವಿತ್ತು. ಹೀಗಾಗಿ ಶುದ್ಧೋದನ ತನ್ನ ಮಗನ ಮನಸ್ಸನ್ನು ಬೇರೆಡೆಗೆ ಸೆಳೆಯಲು ಉತ್ತಮ ಶಿಕ್ಷಣ ನೀಡುವ ಸಕಲ ಏರ್ಪಾಡು ಮಾಡಿದನು. ಸಿದ್ದಾರ್ಥ 16ನೇ ವಯಸ್ಸಿಗೆ ಬಂದಾಗ ಅವನ ಸೋದರ ಮಾವನ ಮಗಳಾದ ಯಶೋಧರಾ, ಭದ್ಧಕಚ್ಛಾನಾ, ಸುಭದ್ರಕಾ, ಬಿಂಬಾ ಅಥವಾ ಗೋಪಾ ಎಂದು ಕರೆಯಲ್ಪಡುವ ರಾಜಕುಮಾರಿಯೊಡನೆ ಮದುವೆ ಮಾಡಲಾಯಿತು. 13 ವರ್ಷಗಳ ಕಾಲ ಸಾಂಸಾರಿಕ ಜೀವನ ನಡೆಸಿ ರಾಹುಲ ಎಂಬ ಮುದ್ದಾದ ಮಗುವನ್ನು ಪಡೆದನು.

1) ನಾಲ್ಕು ಘಟನೆಗಳು : ಸಿದ್ದಾರ್ಥ ಅರಮನೆಯ ಸುಖಭೋಗ ಜೀವನದಲ್ಲಿ ಕೆಲಕಾಲ ಕಳೆದ ನಂತರ ಹೊರಪ್ರಪಂಚದ ಕುತೂಹಲವಾಯಿತು. ಒಂದು ದಿನ ಅರಮನೆಯ ಆಚೆ ಹೋಗಬೇಕೆನಿಸಿ ತನ್ನ ಸೇವಕ ಚನ್ನನೊಂದಿಗೆ ಕುದುರೆಯನ್ನು ಏರಿ ವಾಯುವಿಹಾರಕ್ಕೆ ಹೊರಟನು. ಈ ಸಂದರ್ಭದಲ್ಲಿ ಆತ ಕೆಳಕಂಡ ನಾಲ್ಕು ಮಹಾ ಘಟನೆಯನ್ನು ನೋಡಿದನು.

1) ವೃದ್ಧಾಪ್ಯದಿಂದ ನರಳುತ್ತಿದ್ದ ಮನುಷ್ಯ

2) ರೋಗದಿಂದ ಬಳಲುತ್ತಿದ್ದ ವಯೋವೃದ್ಧ

3) ಸನ್ಯಾಸಿ ಹಾಗೂ

4) ಹೆಣ

ಈ ನಾಲ್ಕು ದೃಶ್ಯಗಳು ಸಿದ್ದಾರ್ಥನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಉಂಟು ಮಾಡಿದವು. ಮುಪ್ಪು, ರೋಗ ಹಾಗೂ ಮರಣಗಳಿಗೆ ತುತ್ತಾಗಬಲ್ಲ ಮಾನವ ದೇಹ ಕ್ಷಣಿಕ ಎಂಬ ಭಾವನೆಯನ್ನುಂಟು ಮಾಡಿದವು. ಇದರಿಂದ ಆತ ಮೋಹವಿಲ್ಲದ ಏಕಾಂತ ಜೀವನವನ್ನು ಬಯಸತೊಡಗಿದನು. ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸಿದನು

2)ಮಹಾಪರಿತ್ಯಾಗ : ಮುಪ್ಪು, ರೋಗ, ಸಾವು ಇವು ಸಿದ್ದಾರ್ಥನ ಮನಸ್ಸನ್ನು ಕಲಕಿದವು. ಅರಮನೆಯ ವೈಭೋಗ, ದುಃಖಮಯ ಜೀವನ, ಇವುಗಳಿಂದ ಅವನು ಬೇಸರಗೊಂಡಿದ್ದನು. ಮಾನವರೆಲ್ಲರ ಕಷ್ಟಕೋಟಲೆಗಳಿಗೆ ಕಾರಣವಾದ ಕಣ್ಣೀರನ್ನು ಒರೆಸಲು ಯತ್ನಿಸಿ ಸಂಸಾರವನ್ನು ತ್ಯಜಿಸಲು ತೀರ್ಮಾನಿಸಿದನು. ತನ್ನ 29ನೇ ವಯಸ್ಸಿನಲ್ಲಿ ಸಿದ್ದಾರ್ಥ ಒಂದು ರಾತ್ರಿ ತನ್ನ ಮಲತಾಯಿ, ಹೆಂಡತಿ, 6 ದಿನಗಳ ಮಗ ರಾಹುಲ, ಅರಮನೆ, ವೈಭೋಗ ಎಲ್ಲವನ್ನೂ ತೊರೆದು ಸನ್ಯಾಸಿಯಾಗಿ ಕಾಡಿಗೆ ಹೋದನು. ಇದನ್ನೇ ಮಹಾಪರಿತ್ಯಾಗ ಎಂದು ಕರೆಯಲಾಗಿದೆ.

3)ಸತ್ಯಾನ್ವೇಷಣೆ : ಸಿದ್ದಾರ್ಥ ಸನ್ಯಾಸಿಯ ಉಡುಪನ್ನು ಧರಿಸಿ ಕಾಡಿಗೆ ಹೋದನು. ಬದುಕಿನ ಸತ್ಯವನ್ನು ಹಾಗೂ ದುಃಖಕ್ಕೆ ಪರಿಹಾರವನ್ನು ಕಾಣಲು ಏಳು ವರ್ಷಗಳ ಕಾಲ ಗುರುಗಳ ಹತ್ತಿರ ಅಲೆದನು. ಇದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಸಿದ್ದಾರ್ಥ ವೈಶಾಲಿಯ ಪ್ರಸಿದ್ಧ ದಾರ್ಶನಿಕನಾದ ಆರದ ಕಲಮನ ಬಳಿ ಎರಡು ವರ್ಷ ಶಿಷ್ಯನಾಗಿದ್ದನು. ಅಲ್ಲಿಯೂ ಅವನಿಗೆ ಸಾಧನೆಯ ಮಾರ್ಗ ಸಿಗಲಿಲ್ಲ. ಆನಂತರ ರಾಜಗೃಹಕ್ಕೆ ಹೋಗಿ ಉದ್ರಕಿ ಎಂಬುವವನ ಬಳಿ ಧ್ಯಾನಕ್ಕೆ ಕುಳಿತು ಏಕಾಗ್ರತೆಯನ್ನು ಪಡೆದನು. ಅನಂತರ ಗಯಾ ಕ್ಷೇತ್ರದ ಬಳಿಯಿರುವ ಉರುವಿಲ್ಲದಲ್ಲಿ ಕಠಿಣ ತಪಸ್ಸನ್ನು ಆಚರಿಸಿ ಎಲುಬಿನ ಹಂದರವಾದನು. ಆದರೂ ಆತನಿಗೆ ಜ್ಞಾನೋದಯವಾಗಲಿಲ್ಲ. ಕೊನೆಗೆ ನಿರಂಜನಾ ನದಿಯಲ್ಲಿ ಸ್ನಾನ ಮಾಡಿ ಸುಜಾತಾ ಎಂಬ ಕನ್ಯೆ ನೀಡಿದ ಮಧುಪಾಯಸವನ್ನು ಸ್ವೀಕರಿಸಿದನು. ಇದರಿಂದ ಅವನು ಜೀವ ಶಕ್ತಿಯನ್ನು ಪಡೆದನು. ನಿರಾಳ ಭಾವನೆಯಿಂದ ಬೋಧಗಯಾ ಬಳಿಯಿರುವ ಉರುವಲ ಎಂಬ ಗ್ರಾಮದ ಬಳಿಯ ಅರಳಿ ಮರದ ಕೆಳಗೆ ಕುಳಿತು ಧ್ಯಾನ ಮಗ್ನನಾದನು. ಕೊನೆಗೆ ವೈಶಾಖ ಶುದ್ಧ ಪೂರ್ಣಿಮೆಯ ದಿನ ಜ್ಞಾನೋದಯವಾಯಿತು. ಅಂದಿನಿಂದ ಸಿದ್ದಾರ್ಥ ಬುದ್ಧನಾದನು. ಬುದ್ಧ ಎಂದರೆ ಜ್ಞಾನೋದಯ ಅಥವಾ ಪರಮಜ್ಞಾನ ಪಡೆದವನು ಎಂದರ್ಥ, ಬುದ್ಧನು ತಪಸ್ಸು ಮಾಡಿದ ಸ್ಥಳವನ್ನು ಬೋಧಗಯಾ ಎಂದೂ, ಆ ಅರಳಿಮರವನ್ನು ಬೋಧಿವೃಕ್ಷ ಎಂದೂ ಕರೆಯಲಾಯಿತು.

4)ಧರ್ಮಚಕ್ರಪ್ರವರ್ತನ ಕಾಲ : ಬುದ್ಧ ತಾನು ಕಂಡುಕೊಂಡ ಪರಮ ಸತ್ಯವನ್ನು ಜನಸಾಮಾನ್ಯರಿಗೆ ತಿಳಿಸಲು ಅವನು ತನ್ನ ಮೊದಲ ಉಪದೇಶವನ್ನು ವಾರಣಾಸಿ ಸಮೀಪವಿರುವ ಸಾರನಾಥದ ಜಿಂಕೆಯ ವನದಲ್ಲಿ ನೀಡಿದನು. ಈ ಘಟನೆಯನ್ನೇ ಧರ್ಮಚಕ್ರ ಪ್ರವರ್ತನ ಅಥವಾ ಧರ್ಮಚಕ್ರ ತಿರುಗುವಿಕೆ ಎಂದು ಕರೆಯಲಾಗಿದೆ. ಬುದ್ಧನ ಮೊದಲ ಐದು ಜನ ಶಿಷ್ಯಂದಿರೆಂದರೆ ಕೊಂಡಣ್ಣ, ಎಪ್ಪು, ಭವ್ಹಾಜಿ, ಮಹಾನಾಮ ಹಾಗೂ ಅನ್ನಾಜಿ. ನಂತರ ಬುದ್ಧ ಈ ಐವರ ಸಹಾಯದೊಂದಿಗೆ ಬೌದ್ಧ ಸಂಘವನ್ನು ಸ್ಥಾಪಿಸಿದನು. ಅಂದಿನಿಂದ ಬುದ್ಧನ ಧರ್ಮಚಕ್ರ ಉರುಳಲು ಆರಂಭಿಸಿತು.

5)ಬೌದ್ಧ ಧರ್ಮದ ಪ್ರಚಾರ : ಬುದ್ಧನು ತನ್ನ ಉಳಿದ 45 ವರ್ಷಗಳ ಕಾಲ ಊರೂರು ಅಲೆಯುತ್ತಾ ತನ್ನ ಬೋಧನೆಗಳನ್ನು ಮಾಡಿದನು. ಈ ಅವಧಿಯಲ್ಲಿ ಆತ ಕಾಶಿ, ಸಾರನಾಥ, ರಾಜಗೃಹ, ಕೌಶಾಂಬಿ, ಮಗಧ, ಕೋಶಲ, ಅಂಗ, ಮಿಥಿಲ ಹಾಗೂ ಕಪಿಲ ವಸ್ತುಗಳಿಗೆ ಭೇಟಿ ನೀಡಿದನು. ತಾನು ಹೋದಡೆಯಲೆಲ್ಲಾ ಬೆಂಬತ್ತಿ ಬಂದ ಜನರಿಗೆ ಭೇದ ಭಾವವಿಲ್ಲದೆ ಧರ್ಮಬೋಧೆಮಾಡಿದನು. ಆನಂದ ಈತನ ಮೊದಲ ಶಿಷ್ಯನಾಗಿದ್ದನು. ಬುದ್ಧನು ವರ್ಷದಲ್ಲಿ 4 ತಿಂಗಳು ಮಳೆಗಾಲವನ್ನು ಒಂದು ಕಡೆ ಕಳೆದು, ಉಳಿದ ಎಂಟು ತಿಂಗಳ ಕಾಲ ಪ್ರವಾಸದಲ್ಲಿ ತೊಡಗಿರುತ್ತಿದ್ದನು. ಹೀಗಾಗಿ ಆತನ ಧರ್ಮ ಬಹುಬೇಗ ಪಸರಿಸಿತು. ನಂತರ ಬುದ್ಧ ತನ್ನ 80ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಗೋರಕ್‌ಪುರ ಜಿಲ್ಲೆಯ ಕುಶಿನಗರ ಎಂಬಲ್ಲಿ ಕ್ರಿ.ಪೂ. 503ರಲ್ಲಿ ಪರಿನಿರ್ವಾಣ ಹೊಂದಿದನು. ಒಂದು ಆಸಕ್ತಿಕರವಾದ ವಿಷಯವೆಂದರೆ ಬುದ್ಧನ ಜನನ, ಜ್ಞಾನೋದಯ ಮತ್ತು ಮರಣ ವೈಶಾಕ ಶುದ್ಧ ಪೂರ್ಣಿಮೆಯಂದು ಸಂಭವಿಸಿದವು. ಆದುದರಿಂದ ಬೌದ್ಧರು ಅವನ ಜನ್ಮದಿನವನ್ನು ಬೌದ್ಧ ಪೂರ್ಣಿಮೆ ಎಂದು ಆಚರಿಸುತ್ತಾರೆ.

ಗೌತಮ ಬುದ್ಧನ ಬೋಧನೆಗಳು :

ಬುದ್ಧನ ಬೋಧನೆಗಳನ್ನು ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪೀಟಕಗಳಾದ ಸುತ್ತಪಿಟಿಕ, ಅಭಿದಮ್ಮ ಪಿಟಿಕ ಹಾಗೂ ವಿನಯ ಪಿಟಿಕೆಗಳಲ್ಲಿ ಕಾಣಬಹುದು. ಇವುಗಳನ್ನು ಮೂರು ಪವಿತ್ರ ಬುಟ್ಟಿಗಳೆಂದು ಕರೆಯಲಾಗಿದೆ.

1)ನಾಲ್ಕು ಮೂಲ ತತ್ವಗಳು :

ಎ) ಅಹಿಂಸೆ (ಪ್ರಾಣಿ ಹಿಂಸೆ ಮಾಡದಿರುವುದು).

ಬಿ) ಸತ್ಯ (ಸುಳ್ಳು ಹೇಳದಿರುವುದು),

ಸಿ) ಕಳ್ಳತನ ಮಾಡದಿರುವುದು.

ಡಿ) ಪಾವಿತ್ರ್ಯತೆಯನ್ನು ಕಾಪಾಡುವುದು/ಬ್ರಹ್ಮಚರ್ಯೆಯನ್ನು ಪಾಲಿಸುವುದು.

2)ನಾಲ್ಕು ಆರ್ಯ ಸತ್ಯಗಳು :

ಎ) ಜೀವನವು ಅತ್ಯಂತ ದುಃಖಮಯವಾಗಿದೆ. (ಜನ್ಮ, ವೃದ್ಧಾಪ್ಯ, ರೋಗ, ಸಾವು ಇವೇ ದುಃಖದ ಮೂಲಗಳು)

ಬಿ) ದುಃಖಕ್ಕೆ ಆಸೆಯೇ ಮೂಲಕಾರಣ.

ಸಿ) ಆಸೆಯನ್ನು ತ್ಯಜಿಸಿದರೆ ದುಃಖದಿಂದ ಮುಕ್ತಿ ಹೊಂದಬಹುದು.

ಡಿ) ದುಃಖದಿಂದ ಪಾರಾಗಲು ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದು.

3) ಅಷ್ಟಾಂಗ ಮಾರ್ಗಗಳು : ಅಷ್ಟಾಂಗ ಮಾರ್ಗಗಳನ್ನು ಅನುಸರಿಸುವುದರಿಂದ ಹುಟ್ಟು- ಸಾವುಗಳಿಂದ ಮುಕ್ತಿ ಹೊಂದಬಹುದು. ಬುದ್ಧ ಹೇಳಿದ ಅಷ್ಟಾಂಗ ಮಾರ್ಗಗಳೆಂದರೆ:

1) ಸಮ್ಯಕ್ ನುಡಿ    –          ಅಸತ್ಯವನ್ನು ನುಡಿಯದಿರುವುದು ಹಾಗೂ ಪರರ ನಿಂದನೆ ಮಾಡದಿರುವುದು.)

2) ಸಮ್ಯಕ್ ಚಾರಿತ್ರ್ಯ   –     ಕೊಲೆ, ಕಳ್ಳತನ ಹಾಗೂ ಅನೈತಿಕ ವ್ಯವಹಾರದಿಂದ ದೂರವಿರುವುದು.

3) ಸಮ್ಯಕ್ ಜೀವ     –        ಬೇರೆ ಜೀವಿಗಳಿಗೆ ತೊಂದರೆ ಕೊಡದಿರುವುದು

4) ಸಮ್ಯಕ್ ವಿಚಾರ   –        ಮನಸ್ಸಿನಲ್ಲಿ ಒಳ್ಳೆಯ ವಿಚಾರಗಳನ್ನು ಇಟ್ಟುಕೊಳ್ಳುವುದು

5) ಸಮ್ಯಕ್ ನಂಬಿಕೆ    –       ಪರರಲ್ಲಿ ನಂಬಿಕೆ ಇಡುವುದು

6) ಸಮ್ಯಕ್ ಪ್ರಯತ್ನ   –       ಒಳ್ಳೆಯ ಪ್ರಯತ್ನಗಳನ್ನು ಮಾಡುವುದು

7) ಸಮ್ಯಕ್ ಧ್ಯಾನ      –        ಮನಸ್ಸನ್ನು ಹತೋಟಿಗೊಳಪಡಿಸಿಕೊಳ್ಳುವುದು

8) ಸಮ್ಯಕ್ ನೆನಪು     –        ಆತ್ಮಜ್ಞಾನ ಹಾಗೂ ಸಂಯಮದಿಂದ ಇರುವುದು

4) ಬೌದ್ಧ ಧರ್ಮದ ತ್ರಿರತ್ನಗಳು : ಬೌದ್ಧ ಧರ್ಮದಲ್ಲಿ ಬುದ್ಧ, ಧರ್ಮ ಮತ್ತು ಸಂಘ ಎಂಬುದು ಮೂರು ತ್ರಿರತ್ನಗಳಾಗಿವೆ.  ಬುದ್ಧಂ ಶರಣಂ ಗಚ್ಛಾಮಿ ಧರ್ಮಂ ಶರಣಂ ಗಚ್ಛಾಮಿ – ಸಂಘಂ ಶರಣಂ ಗಚ್ಛಾಮಿ

1. ಬುದ್ಧಂ ಶರಣಂ ಗಚ್ಛಾಮಿ :

ಅಂದರೆ “ನಾನು ಬುದ್ಧನಲ್ಲಿ ಶರಣಾಗುತ್ತೇನೆ” — ಆತನು ಜ್ಞಾನೋದಯವನ್ನು ಹೊಂದಿದ ಗುರು, ಮಾನವಕುಲಕ್ಕೆ ಮುಕ್ತಿಯ ಮಾರ್ಗ ತೋರಿಸಿದ ಪ್ರೇರಕ.

2. ಧಮ್ಮಂ ಶರಣಂ ಗಚ್ಛಾಮಿ :

ಅಂದರೆ “ನಾನು ಧರ್ಮದಲ್ಲಿ ಶರಣಾಗುತ್ತೇನೆ” — ಬುದ್ಧನು ಬೋಧಿಸಿದ ಸತ್ಯ, ಜ್ಞಾನ ಮತ್ತು ದುಃಖ ನಿವಾರಣೆಯ ಮಾರ್ಗವಾದ ಧರ್ಮದಲ್ಲಿ ಶರಣಾಗುವುದು.

3. ಸಂಘಂ ಶರಣಂ ಗಚ್ಛಾಮಿ :

ಅಂದರೆ “ನಾನು ಸಂಘದಲ್ಲಿ ಶರಣಾಗುತ್ತೇನೆ” — ಬುದ್ಧನ ಉಪದೇಶಗಳನ್ನು ಅನುಸರಿಸುವ ಭಿಕ್ಷುಗಳು, ಭಿಕ್ಷುನಿಯರು ಮತ್ತು ನಿಷ್ಠಾವಂತ ಅನುಯಾಯಿಗಳ ಸಮುದಾಯದಲ್ಲಿ ಶರಣಾಗುವುದು.

ಒಟ್ಟಾರೆ: ಇದು ಜ್ಞಾನ (ಬುದ್ಧ), ಸತ್ಯ (ಧಮ್ಮ), ಮತ್ತು ಆಧ್ಯಾತ್ಮಿಕ ಸಹವಾಸ (ಸಂಘ) — ಈ ಮೂರು ಶ್ರೇಷ್ಠ ಶರಣಾಗತಿಗಳಲ್ಲಿ ನಂಬಿಕೆಯನ್ನು ಸೂಚಿಸುವ ಬೌದ್ಧ ಜೀವನದ ಮೂಲ ತತ್ವವಾಗಿದೆ.

5) ಅಹಿಂಸೆ : ಬುದ್ಧ ಹಿಂಸೆಯನ್ನು ಖಂಡಿಸಿದನು. ಅಹಿಂಸಾವಾದಕ್ಕೆ ಹೆಚ್ಚು ಒತ್ತು ನೀಡಿದನು. ಜಗತ್ತಿನ ಪ್ರತಿ ಜೀವಿಯಲ್ಲೂ ಜೀವವಿದೆ ಅದನ್ನು ಹಿಂಸಿಸುವುದು ಮಹಾಪಾಪ ಎಂದು ಬೋಧಿಸಿದನು. ಯಜ್ಞಯಾಗಾದಿಗಳಲ್ಲಿ ಆಗುತ್ತಿದ್ದ ಪ್ರಾಣಿಬಲಿಯನ್ನು ಉಗ್ರವಾಗಿ ಖಂಡಿಸಿದನು. ಹಿಂಸಾತ್ಮಕ ಮಾರ್ಗವನ್ನು ಬಿಟ್ಟು ಸ್ನೇಹ, ಪ್ರೀತಿ, ಶಾಂತಿ, ಅನುಕಂಪ ಹಾಗೂ ಸೌಹಾರ್ಧತೆಯಿಂದ ಬದುಕುವಂತೆ ತನ್ನ ಅನುಯಾಯಿಗಳಿಗೆ ಕರೆನೀಡಿದನು.

6) ಜಾತಿ ಪದ್ಧತಿಯ ಖಂಡನೆ : ಬುದ್ಧ ಜಾತಿ ಪದ್ಧತಿಯನ್ನು ಖಂಡಿಸಿದನು. ಮನುಷ್ಯನ ಯೋಗ್ಯತೆಯನ್ನು ಅವನ ವ್ಯಕ್ತಿತ್ವದಿಂದ ಅಳೆಯಬೇಕೆ ವಿನಃ ಜಾತಿಯಿಂದ ಅಲ್ಲ ಎಂದನು. ಈ ಕಾರಣಕ್ಕಾಗಿ ಬುದ್ಧ ತನ್ನ ಸಂಘದಲ್ಲಿ ಸಾವಿರಾರು ಅಸ್ಪೃಶ್ಯರಿಗೆ ಸದಸ್ಯತ್ವವನ್ನು ನೀಡಿದನು.

7) ಪುನರ್ ಜನ್ಮ ಹಾಗೂ ಕರ್ಮ : ಮಹಾವೀರನಂತೆ ಬುದ್ಧ ಕೂಡಾ ಪುನರ್‌ಜನ್ಮ ಮತ್ತು ಕರ್ಮಗಳಲ್ಲಿ ನಂಬಿಕೆ ಇಟ್ಟಿದ್ದನು. ಮಾನವನ ಇಂದಿನ ಹುಟ್ಟು ಸಾವುಗಳಿಗೆ ಹಿಂದಿನ ನಮ್ಮ ಕರ್ಮಗಳೇ ಕಾರಣವಾಗಿವೆ. ಆದ್ದರಿಂದ ಉತ್ತಮ ಕರ್ಮಗಳನ್ನು ನಾವು ಮಾಡಿದರೆ ಮೋಕ್ಷ ಪಡೆಯಬಹುದು ಎಂದು ಬುದ್ಧ ಬೋಧಿಸಿದನು.

ಉಪಸಂಹಾರ :

ಗೌತಮ ಬುದ್ಧನ ಮಹತ್ವ ಮಾನವತೆಯ ಶಾಂತಿ, ಸಮಾನತೆ ಮತ್ತು ನೈತಿಕತೆಯ ಆಧಾರಶಿಲೆಯಾಗಿದೆ. ಆತ ಅಹಿಂಸೆ, ಸತ್ಯ, ಕರುಣೆ, ಸಹಿಷ್ಣುತೆ ಮತ್ತು ಸ್ವಸಂಯಮದ ಮೂಲಕ ಮಾನವನ ಆತ್ಮೋನ್ನತಿಗೆ ದಾರಿ ತೋರಿಸಿದನು. ಜಾತಿ, ಧರ್ಮ, ಲಿಂಗ ಅಥವಾ ಸಂಪತ್ತಿನ ಆಧಾರದ ಮೇಲೆ ಬೇಧವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಬೌದ್ಧ ತತ್ವಗಳು ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳ ಮೂಲ ಆಧಾರಗಳಾಗಿವೆ. ಇಂದಿನ ಅಶಾಂತ, ಹಿಂಸಾತ್ಮಕ ಮತ್ತು ಸ್ಪರ್ಧಾತ್ಮಕ ಯುಗದಲ್ಲಿ ಬುದ್ಧನ ಬೋಧನೆಗಳು ಅತಿ ಪ್ರಸ್ತುತವಾಗಿದ್ದು, ಅವು ಮಾನವನಿಗೆ ಆತ್ಮಶಾಂತಿ, ಸಾಮಾಜಿಕ ಸೌಹಾರ್ದತೆ ಹಾಗೂ ಪರಿಸರಸಂರಕ್ಷಣೆಯ ಮಾರ್ಗದರ್ಶನ ನೀಡುತ್ತವೆ. ಬುದ್ಧನ ಅಹಿಂಸೆ ಮತ್ತು ಮಿತಾಭೋಗದ ಸಂದೇಶವು ಇಂದಿನ ಜಾಗತಿಕ ಸಮಾಜಕ್ಕೆ ಮಾನವೀಯತೆ ಮತ್ತು ಶಾಂತಿಯ ದಾರಿ ತೋರಿಸುವ ಶಾಶ್ವತ ಬೆಳಕಾಗಿದೆ.

ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ

ಮಹಾವೀರನ ಜೀವನ ಮತ್ತು ಬೋಧನೆಗಳು: ಜೈನ ಧರ್ಮದ 24 ನೇತೀರ್ಥಂಕರ

ಪೀಠಿಕೆ:

ವರ್ಧಮಾನ ಎಂದೂ ಕರೆಯಲ್ಪಡುವ ಮಹಾವೀರ, ಜೈನ ಧರ್ಮದ 24 ನೇ ಮತ್ತು ಕೊನೆಯ ತೀರ್ಥಂಕರ, ಧರ್ಮವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಆಧ್ಯಾತ್ಮಿಕ ನಾಯಕ.

ಮಹಾವೀರನ ಪ್ರಮುಖ ಬೋಧನೆಗಳು ಅಹಿಂಸೆ, ಸತ್ಯ, ಬಾಂಧವ್ಯ ಮತ್ತು ಸ್ವಯಂ-ಶಿಸ್ತುಗಳಿಗೆ ಒತ್ತು ನೀಡಿವೆ. ಜೈನ ತತ್ತ್ವಶಾಸ್ತ್ರದ ಮೇಲೆ ಅವರ ಆಳವಾದ ಪ್ರಭಾವವು ಲಕ್ಷಾಂತರ ಜನರಿಗೆ ನೈತಿಕ ಮತ್ತು ಆಧ್ಯಾತ್ಮಿಕ ಜೀವನದ ಅನ್ವೇಷಣೆಯಲ್ಲಿ ಮಾರ್ಗದರ್ಶನ ನೀಡುತ್ತಲೇ ಇದೆ.

ಬಾಲ್ಯ

ಜೈನ ಧರ್ಮದ 24 ನೇ ತೀರ್ಥಂಕರರಾದ ವರ್ಧಮಾನ ಮಹಾವೀರರು ಕ್ರಿ.ಪೂ.599 ರಲ್ಲಿ  ಶುಕ್ಲ ತ್ರಯೋದಶಿಯ ಶುಭ ದಿನದಂದು ಇಂದಿನ ಬಿಹಾರದ ಪಾಟ್ನಾದಿಂದ ಸುಮಾರು 27 ಮೈಲಿ ದೂರದಲ್ಲಿರುವ ವೈಶಾಲಿ ಬಳಿಯ ಕುಂದಗ್ರಾಮದಲ್ಲಿ ಜನಿಸಿದರು. ಅವರು ಪ್ರಾಚೀನ ವೈಶಾಲಿ ಗಣರಾಜ್ಯದ ರಾಜಕುಮಾರರಾಗಿದ್ದ ಸಿದ್ಧಾರ್ಥ ಮತ್ತು ತ್ರಿಶಾಲಾದೇವಿಯವರಿಗೆ ಜನಿಸಿದರು. ಪಾರ್ಶ್ವನಾಥನ ಬೋಧನೆಗಳನ್ನು ಅನುಸರಿಸಿದ ಕುಟುಂಬದಲ್ಲಿ ಬೆಳೆದ ಮಹಾವೀರನು ಚಿಕ್ಕ ವಯಸ್ಸಿನಿಂದಲೇ ಜೈನ ಧರ್ಮದ ತತ್ವಗಳಿಗೆ ತೆರೆದುಕೊಂಡನು. ಅವರ ಶಿಕ್ಷಣವು ಸಂಪೂರ್ಣವಾಗಿತ್ತು ಮತ್ತು ಅವರಿಗೆ ಸಮೃದ್ಧ ಜೀವನಕ್ಕಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಯಿತು.

ವಿವಾಹಿತ ಜೀವನ

16 ನೇ ವಯಸ್ಸಿನಲ್ಲಿ, ವರ್ಧಮಾನನು ಯಶೋಧರ ಎಂಬ ಸುಂದರ ಮಹಿಳೆಯನ್ನು ಮದುವೆಯಾದನು ಮತ್ತು ಅವರಿಗೆ ಅನೋಜಾ (ಅಥವಾ ಪ್ರಿಯದರ್ಶಿನಿ) ಎಂಬ ಮಗಳು ಇದ್ದಳು. ಕೌಟುಂಬಿಕ ಜೀವನದ ಸೌಕರ್ಯಗಳ ಹೊರತಾಗಿಯೂ, ವರ್ಧಮಾನನು ಆಳವಾದ ಅಸಮಾಧಾನವನ್ನು ಅನುಭವಿಸಿದನು, ಅದು ಅವನನ್ನು ಧ್ಯಾನ ಮತ್ತು ಆಧ್ಯಾತ್ಮಿಕ ಜ್ಞಾನೋದಯವನ್ನು ಅನುಸರಿಸಲು ಕಾರಣವಾಯಿತು. ಅವರ ಹೆತ್ತವರ ಮರಣದ ನಂತರ, ಅವರು ತಮ್ಮ ಸಹೋದರನ ಅನುಮತಿಯನ್ನು ಪಡೆದು ಮತ್ತು 30 ನೇ ವಯಸ್ಸಿನಲ್ಲಿ ತಮ್ಮ ಕುಟುಂಬವನ್ನು ತೊರೆದರು.

ಕಠೋರ ತಪಸ್ಸು

13 ವರ್ಷಗಳ ಕಾಲ ವರ್ಧಮಾನನು ತಪಸ್ವಿಯಾಗಿ ಭಾರತದಾದ್ಯಂತ ಅಲೆದಾಡಿದನು. ಈ ಅವಧಿಯಲ್ಲಿ, ಅವರು ಕಟ್ಟುನಿಟ್ಟಾದ ಕಟ್ಟುಪಾಡುಗಳಿಗೆ ಬದ್ಧರಾಗಿದ್ದರು, ಒಂದೇ ಸ್ಥಳದಲ್ಲಿ ಒಂದು ದಿನಕ್ಕಿಂತ ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಐದು ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಪಟ್ಟಣದಲ್ಲಿ  ಇರುತ್ತಿರಲಿಲ್ಲ. ಸಂಪೂರ್ಣ ಪರಿತ್ಯಾಗವನ್ನು ಸ್ವೀಕರಿಸುವ ಮೂಲಕ ಅವರು ಬೆತ್ತಲೆಯಾಗಿ ಅಲೆದಾಡಲು ಆಯ್ಕೆ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಈ ಜೀವನಶೈಲಿಯು ಅನೇಕರಿಂದ ಅಪಹಾಸ್ಯ ಮತ್ತು ಹಗೆತನವನ್ನು ಆಹ್ವಾನಿಸಿತು, ಜನರು ಕಲ್ಲುಗಳನ್ನು ಎಸೆಯುತ್ತಾರೆ ಮತ್ತು ಅವನನ್ನು ಹೆದರಿಸುತ್ತಾರೆ. ಆದರೂ ವರ್ಧಮಾನನು ಸತ್ಯದ ಅನ್ವೇಷಣೆಯಲ್ಲಿ ಹಿಂಜರಿಯಲಿಲ್ಲ.

ಅವರ ಪ್ರಯಾಣದಲ್ಲಿ ಗೋಶಾಲಾ ಎಂಬ ವ್ಯಕ್ತಿಯೊಂದಿಗೆ ಒಡನಾಟವನ್ನು ಹೊಂದಿದ್ದರು. ಅವರು ನಂತರ ಅಜೀವಿಕ ಪಂಥವನ್ನು ಮುನ್ನಡೆಸಲು ಹೊರಟರು. 42 ನೇ ವಯಸ್ಸಿನಲ್ಲಿ, ವರ್ಷಗಳ ತಪಸ್ವಿ ಅಭ್ಯಾಸಗಳ ನಂತರ, ವರ್ಧಮಾನನು ವೈಶಾಖ ಮಾಸದಲ್ಲಿ ಜೃಂಭಿಕಾ ಗ್ರಾಮದ ಬಳಿ ರಿಜುಪಾಲಿಕಾ ನದಿಯ ದಡದಲ್ಲಿ ಜ್ಞಾನೋದಯವನ್ನು ಪಡೆದನು. ಈ ಆಳವಾದ ಅನುಭವವನ್ನು ಅನುಸರಿಸಿ, ಅವರು ಕೆವಲಿನ್ ಅಥವಾ ಜಿನಾ ಎಂದು ಕರೆಯಲ್ಪಟ್ಟರು, ಅಂದರೆ “ವಿಜಯಶಾಲಿ”, ಇದು ಐದು ಇಂದ್ರಿಯಗಳ ಮೇಲೆ ಅವರ ಪಾಂಡಿತ್ಯವನ್ನು ಪ್ರತಿಬಿಂಬಿಸುವ ಶೀರ್ಷಿಕೆಯಾಗಿದೆ. ಹೀಗಾಗಿಯೇ ಅವರಿಗೆ ಮಹಾವೀರ ಎಂಬ ಹೆಸರು ಬಂದಿದೆ. ಅವರ ಅನುಯಾಯಿಗಳನ್ನು ಜೈನರೆಂದು ಕರೆಯಲು ಆರಂಭಿಸಿದರು.

ಧರ್ಮ ಪ್ರಚಾರ

ಮಹಾವೀರನು ತನ್ನ ಉಳಿದ ಜೀವನವನ್ನು ರಾಜಗೃಹ, ಚಂಪಾ, ಅಂಗ, ಮಗಧ, ಮಿಥಿಲಾ ಮತ್ತು ಕೋಸಲ ಪ್ರದೇಶಗಳಲ್ಲಿ ತನ್ನ ಜ್ಞಾನೋದಯದ ದೈವಿಕ ಸಂದೇಶವನ್ನು ಹರಡಲು ಮೀಸಲಿಟ್ಟನು. ಅವರ ಬೋಧನೆಗಳು ನೈತಿಕ ಜೀವನ ಮತ್ತು ಆಧ್ಯಾತ್ಮಿಕ ಶಿಸ್ತನ್ನು ಒತ್ತಿಹೇಳಿದವು.

ನಿರ್ವಾಣ

ಸುದೀರ್ಘ ಮತ್ತು ಪ್ರಭಾವಶಾಲಿ ಜೀವನದ ನಂತರ, ಮಹಾವೀರ ಕ್ರಿ.ಪೂ. 527 ರಲ್ಲಿ ರಾಜಗೃಹದ ಬಳಿಯ ಪಾವಾದಲ್ಲಿ 72 ನೇ ವಯಸ್ಸಿನಲ್ಲಿ ನಿರ್ವಾಣವನ್ನು ಪಡೆದರು.

ಮಹಾವೀರನ ಬೋಧನೆಗಳು

ಮಹಾವೀರನ ಬೋಧನೆಗಳ ತಿರುಳನ್ನು ಆಗಮ ಸಿದ್ಧಾಂತ, ಜೈನ ಪವಿತ್ರ ಗ್ರಂಥಗಳಲ್ಲಿ ಕಾಣಬಹುದು. ಅವರ ತತ್ವಗಳನ್ನು 12 ಜೈನ ಅಂಗಗಳಲ್ಲಿ ಅಚರಾಂಗ, ಉಪಾಂಗ, ದವಲ, ಮತ್ತು ಜಯದವಲ ಸೇರಿದಂತೆ ಪ್ರಮುಖ ಪಠ್ಯಗಳಲ್ಲಿ ಕಾಣಬಹುದು.

1. ಮೂರು ರತ್ನಗಳು

1. ಸಮ್ಯಕ್ ಜ್ಞಾನ (ಸರಿಯಾದ ಜ್ಞಾನ)

2. ಸಮ್ಯಕ್ ಚಿಂತನ (ಸರಿಯಾದ ಚಿಂತನೆ)

3. ಸಮ್ಯಕ್ ಚಾರಿತ್ರ್ಯ (ಸರಿಯಾದ ನಡತೆ)

2. ಐದು ಮಹಾ ತತ್ವಗಳು

ಮಹಾವೀರರು ನೈತಿಕ ಜೀವನಕ್ಕಾಗಿ ಐದು ಪ್ರಮುಖ ತತ್ವಗಳನ್ನು ಒತ್ತಿ ಹೇಳಿದರು:

1. ಅಹಿಂಸಾ (ಎಲ್ಲಾ ಜೀವಿಗಳಿಗೆ ಅಹಿಂಸೆ)

2. ಸತ್ಯ (ಸತ್ಯತೆ)

3. ಅಸ್ತೇಯ (ಕಳ್ಳತನ ಮಾಡದ)

4. ಅಪರಿಗ್ರಹ (ಭೌತಿಕ ಆಸ್ತಿಗಳಿಗೆ ಅಂಟಿಕೊಳ್ಳದಿರುವುದು)

5. ಬ್ರಹ್ಮಚರ್ಯ (ಇಂದ್ರಿಯ ಬಯಕೆಗಳ ಮೇಲಿನ ನಿಯಂತ್ರಣ)

ಪಾರ್ಶ್ವನಾಥ ಮೊದಲ ನಾಲ್ಕನ್ನು ಬೋಧಿಸಿದರೆ, ಮಹಾವೀರನು ಬ್ರಹ್ಮಚರ್ಯದ ಮಹತ್ವವನ್ನು ಎತ್ತಿ ತೋರಿಸುವ ಬ್ರಹ್ಮಚರ್ಯದ ತತ್ವವನ್ನು ಸೇರಿಸಿದನು.

3. ಅಹಿಂಸೆ

ಮಹಾವೀರನ ಬೋಧನೆಗಳ ಕೇಂದ್ರವು ಅಹಿಂಸಾ ಅಥವಾ ಅಹಿಂಸೆಯ ಪರಿಕಲ್ಪನೆಯಾಗಿದೆ, ಇದನ್ನು ಅವರು ಅತ್ಯುನ್ನತ ಧಾರ್ಮಿಕ ತತ್ವವೆಂದು ಘೋಷಿಸಿದರು. ಅವರು ಪ್ರಾಣಿ ಹಿಂಸೆಯನ್ನು ಬಲವಾಗಿ ಖಂಡಿಸಿದರು ಮತ್ತು ಎಲ್ಲಾ ಜೀವ ರೂಪಗಳ ರಕ್ಷಣೆಯನ್ನು ಪ್ರತಿಪಾದಿಸಿದರು. ಮಹಾವೀರನ ಪ್ರಕಾರ, ಎಲ್ಲಾ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು, ಮರಗಳು, ಕಲ್ಲುಗಳು, ಮಣ್ಣು, ನೀರು ಮತ್ತು ಬೆಂಕಿ-ಜೀವನವನ್ನು ಹೊಂದಿವೆ ಮತ್ತು ಅವು ಬಳಲಬಾರದು. ಅಹಿಂಸೆಯ ಈ ಆಳವಾದ ಬದ್ಧತೆಯು ಅನೇಕ ಜೈನರು ಕೃಷಿಯನ್ನು ತ್ಯಜಿಸಲು ಕಾರಣವಾಯಿತು, ಕೃಷಿ ಪದ್ಧತಿಯಲ್ಲಿ ಕೀಟಗಳು ಮತ್ತು ಸಸ್ಯಗಳಿಗೆ ನೋವನ್ನುಂಟುಮಾಡುತ್ತವೆ ಎಂದು ನಂಬಿದ್ದರು.

4. ಕರ್ಮ ಮತ್ತು ಪುನರ್ಜನ್ಮ

ಜೈನರು ಕರ್ಮ ಮತ್ತು ಪುನರ್ಜನ್ಮದ ನಂಬಿಕೆಗಳಿಗೆ ಬದ್ಧರಾಗಿರುತ್ತಾರೆ, ಕರ್ಮವನ್ನು ಆತ್ಮಕ್ಕೆ ಅಂಟಿಕೊಳ್ಳುವ ಶೇಷವಾಗಿ ನೋಡುತ್ತಾರೆ. ಒಬ್ಬರ ಕ್ರಿಯೆಗಳು (ಕರ್ಮಗಳು) ಭವಿಷ್ಯದ ಪುನರ್ಜನ್ಮದ ಸಂದರ್ಭಗಳನ್ನು ನಿರ್ದೇಶಿಸುತ್ತವೆ ಎಂದು ಮಹಾವೀರರು ಕಲಿಸಿದರು. ನೀತಿವಂತ ಕ್ರಿಯೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ, ವ್ಯಕ್ತಿಗಳು ತಮ್ಮ ಆತ್ಮಗಳನ್ನು ಶುದ್ಧೀಕರಿಸಬಹುದು ಮತ್ತು ಪುನರ್ಜನ್ಮದ ಚಕ್ರವನ್ನು ಮುರಿಯಬಹುದು. 

ಉಪಸಂಹಾರ

ಮಹಾವೀರರ ಜೀವನ ಮತ್ತು ಬೋಧನೆಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಲೇ ಇವೆ. ಅಹಿಂಸೆ, ಸತ್ಯ ಮತ್ತು ನೈತಿಕ ಜೀವನಕ್ಕೆ ಅವರ ಒತ್ತು ಆಧ್ಯಾತ್ಮಿಕ ವಿಮೋಚನೆ ಮತ್ತು ಸಾಮರಸ್ಯದ ಅಸ್ತಿತ್ವವನ್ನು ಸಾಧಿಸಲು ಸಮಯರಹಿತ ಚೌಕಟ್ಟನ್ನು ಒದಗಿಸುತ್ತದೆ. ಕೊನೆಯ ತೀರ್ಥಂಕರನಾಗಿ ಶಾಂತಿ ಮತ್ತು ಸದಾಚಾರದ ನಾಯಕರಾಗಿ ಮಹಾವೀರನ ಪರಂಪರೆಯು ಜೈನ ತತ್ತ್ವಶಾಸ್ತ್ರದೊಳಗೆ ಮತ್ತು ಅದರಾಚೆಗೆ ಆಳವಾಗಿ ಪ್ರತಿಧ್ವನಿಸುತ್ತದೆ.