ಹರ್ಷವರ್ಧನ (ಕ್ರಿ.ಶ 606-646)

ಹರ್ಷವರ್ಧನ (ಕ್ರಿ.ಶ 606-646)

ರಾಜ್ಯವರ್ಧನನ ಮರಣದ ನಂತರ ಹರ್ಷವರ್ಧನ ಕ್ರಿ.ಶ. 606ರಲ್ಲಿ ಥಾನೇಶ್ವರದ ಸಿಂಹಾಸನಾಧೀಶ್ವರನಾದನು. ಆಗ ಹರ್ಷನಿಗೆ ಕೇವಲ 16 ವರ್ಷ ವಯಸ್ಸು. ದಕ್ಷ ಹಾಗೂ ಪ್ರತಿಭಾವಂತನಾಗಿದ್ದ ಹರ್ಷವರ್ಧನನು ತಾನು ಅಧಿಕಾರವಹಿಸಿಕೊಂಡ ನೆನಪಿಗಾಗಿ ಹರ್ಷಶಕೆ ಎಂಬ ಹೊಸ ಶಕೆಯನ್ನು ಆರಂಭಿಸಿದನು. ಇವನು ಅಧಿಕಾರಕ್ಕೆ ಬಂದಾಗ ಈತನ ಮುಂದೆ ಹಲವಾರು ಸಮಸ್ಯೆಗಳಿದ್ದವು. ಹೀಗಾಗಿ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ನಡುವೆ ತನ್ನ ಅಣ್ಣ ಹಾಗೂ ಭಾವನನ್ನು ಕೊಂದವರ ವಿರುದ್ಧ ಸೇಡು ತೀರಿಸಿಕೊಳ್ಳುವುದು ಮತ್ತು ತಂಗಿಯಾದ ರಾಜಪ್ರಿಯನ್ನು ಬಂಧನದಿಂದ ಬಿಡುಗಡೆಗೊಳಿಸುವಂತಹ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಬೇಕಿತ್ತು. ರಾಜತ್ರಿಯನ್ನು ಬಿಡುಗಡೆಗೊಳಿಸಬೇಕೆಂಬ ಚಿಂತೆಯಲ್ಲಿರುವಾಗಲೇ ರಾಜಶ್ರೀ ಬಂಧನದಿಂದ ತಪ್ಪಿಸಿಕೊಂಡು ವಿಂಧ್ಯ ಪರ್ವತದ ಕಡೆಗೆ ಹೋದಳು. ಬೌದ್ಧ ಆಶ್ರಮವನ್ನು ಸೇರಿದ ಇವಳಿಗೆ ಅಲ್ಲಿಯೂ ನೆಮ್ಮದಿ ದೊರೆಯದಿದ್ದಾಗ ಅವಳು ಇನ್ನೇನು ಅನುಮರಣ ಮಾಡಬೇಕೆನ್ನುವಷ್ಟರಲ್ಲಿ ಅವಳ ಮನಸ್ಸನ್ನು ಬದಲಿಸಿ ರಾಜಧಾನಿಗೆ ಕರೆತಂದನು. ಅದೊಂದು ಕರುಣಾಜನಕ ಪ್ರಸಂಗ. ಈ ಸನ್ನಿವೇಶವನ್ನು ಬಾಣ ಅತ್ಯಂತ ಕಾವ್ಯಮಯವಾಗಿ ಹಾಗೂ ಹೃದಯಂಗಮಯವಾಗಿ ಚಿತ್ರಿಸಿದ್ದಾನೆ. ಕನೌಜಿನ ರಾಜ್ಯದಲ್ಲಿ ಗೃಹವರ್ಮನ ಉತ್ತರಾಧಿಕಾರಿಗಳು ಯಾರು ಇರದಿದ್ದುದರಿಂದಾಗಿ ಅದರ ಆಡಳಿತವನ್ನು ನೋಡಿಕೊಳ್ಳುವ ಹೊಣೆ ಸಹ ಈತನ ಹೆಗಲಮೇಲೆ ಬಿತ್ತು. ಹೀಗಾಗಿ ಹರ್ಷವರ್ಧನ ಅಧಿಕಾರವಹಿಸಿಕೊಂಡ ತಕ್ಷಣ ರಾಜಧಾನಿಯನ್ನು ಥಾನೇಶ್ವರದಿಂದ ಕನೌಜಿಗೆ ವರ್ಗಾಯಿಸಿದನು.

ಹರ್ಷವರ್ಧನನ ದಿಗ್ವಿಜಯಗಳು : ಹರ್ಷನ ದಿಗ್ವಿಜಯಗಳೇನೂ ಇತಿಹಾಸದಲ್ಲಿ ಮಹಾನ್ ಸಾಧನೆಯನ್ನು ಮಾಡಲಿಲ್ಲ. ಈತನ ಪ್ರಮುಖ ಯುದ್ಧಗಳು ಈ ಕೆಳಗಿನಂತಿವೆ.

1) ಶಶಾಂಕನ ವಿರುದ್ಧ ದಂಡಯಾತ್ರೆ :

ತನ್ನ ಅಣ್ಣನಾದ ರಾಜ್ಯವರ್ಧನನ್ನು ಹತ್ಯೆಗೈದ ಶಶಾಂಕನ ವಿರುದ್ಧ ಹರ್ಷವರ್ಧನ ತನ್ನ ಸೇನಾಪತಿಯಾದ ಬಂಡಿಯನನ್ನು ಕನೌಜವನ್ನು ಆಕ್ರಮಿಸಲು ಕಳುಹಿಸಿದನು. ಆದರೆ ಶಶಾಂಕನು ಕನೌಜವನ್ನು ಬಿಟ್ಟು ಮಾಳವಕ್ಕೆ ಹಿಂತಿರುಗಿದನು. ಇಷ್ಟೇ ವಿನಹ ಶಶಾಂಕನ ವಿರುದ್ಧ ಹರ್ಷ ಇನ್ನೇನು ಸಾಧಿಸಲಿಲ್ಲ, ಕ್ರಿ.ಶ. 637ರವರೆಗೂ ಶಶಾಂಕ ಬಂಗಾಳದಲ್ಲಿ ನಿರಂತರವಾಗಿ ಆಳ್ವಿಕೆ ನಡೆಸಿದನು. ಆತನ ಮರಣದ ನಂತರವೇ ಹರ್ಷನು ಪೂರ್ವ ಭಾರತದ ಪ್ರದೇಶದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಿದನು.

2) ಗುಜರಾತ ಮೇಲೆ ದಾಳಿ :

ಹರ್ಷನು ವಲ್ಲಭಿಯ ದೊರೆ ಗೂರ್ಜರ ಎರಡನೆಯ ಧ್ರುವಸೇನನನ್ನು ಸೋಲಿಸಿದನು ಎಂದು ಬಾಣಭಟ್ಟ ತನ್ನ ಕೃತಿಯಾದ ಹರ್ಷಚರಿತದಲ್ಲಿ ಬರೆದಿದ್ದಾನೆ. ಆದರೆ ಧ್ರುವಸೇನನು ಕ್ಷಿಪ್ರದಲ್ಲಿಯೇ ಚೇತರಿಸಿಕೊಂಡು ಹರ್ಷನ ವಿರುದ್ಧ ಯುದ್ಧ ಸಾರಿದನು. ಈ ಯುದ್ಧವನ್ನು ಎದುರಿಸಲಾಗದ ಹರ್ಷ ಧ್ರುವಸೇನನಿಗೆ ತನ್ನ ಮಗಳನ್ನು ಕೊಟ್ಟು ಸಂಬಂಧ ಬೆಳೆಸಿದನು ಎಂದು ಹೂಯೆನ್‌ತ್ಸಾಂಗ್ ಹೇಳಿದ್ದಾನೆ.

3) ಹಿಮಾಲಯ ಪರ್ವತ ಪ್ರದೇಶಗಳನ್ನು ವಶಪಡಿಸಿಕೊಂಡಿದ್ದು :

ಹರ್ಷವರ್ಧನ ಹಿಮಾಲಯ ಪರ್ವತ ಪ್ರದೇಶವಾದ ಕಾಶ್ಮೀರ, ಸಿಂಥ್ ಪ್ರಾಂತ್ಯ ಹಾಗೂ ನೇಪಾಳವನ್ನು ಗೆದ್ದು ತನ್ನ ಅಧಿಕಾರವನ್ನು ಸ್ಥಾಪಿಸಿದನು ಎಂದು ಬಾಣಭಟ್ಟ ಹೇಳುತ್ತಾನೆ.

4) ಪುಲಕೇಶಿಯೊಂದಿಗೆ ಯುದ್ಧ (ಕ್ರಿ.ಶ. 630)

ಪಶ್ಚಿಮ ಭಾರತವನ್ನು ಗೆದ್ದ ಹರ್ಷವರ್ಧನನ ಗಮನ ದಕ್ಷಿಣ ಭಾರತದ ಕಡೆಗೆ ಹರಿಯಿತು. ಸಕಲಉತ್ತರಾಧಿಪಥೇಶ್ವರ ಎಂಬ ಬಿರುದನ್ನು ಪಡೆದಿದ್ದ ಹರ್ಷವರ್ಧನ ಸಕಲ ದಕ್ಷಿಣಾಧಿಪಥೇಶ್ವರ ಎಂಬ ಬಿರುದನ್ನು ಗಳಿಸಿದ್ದ ಎರಡನೆಯ ಪುಲಕೇಶಿಯ ವಿರುದ್ಧ ಯುದ್ಧ ಸಾರಿದನು. ಶಕ್ತಿಯಲ್ಲಿ ಇವರಿಬ್ಬರೂ ಸರಿಸಮಾನರು, ಹರ್ಷನು ವಲ್ಲಭಿ ವ್ಯವಹಾರದಲ್ಲಿ ತಲೆಹಾಕಿ ಅದರ ಅರಸ ಧ್ರುವಸೇನನಿಗೆ ರಾಜ್ಯವನ್ನು ಮರಳಿ ಕೊಡಬೇಕೆಂದು ಹಾಗೂ ಆತನೊಂದಿಗೆ ಸ್ನೇಹದಿಂದ ಇರಬೇಕೆಂದು ಪುಲಕೇಶಿಯ ಬಳಿಗೆ ರಾಯಭಾರಿಯನ್ನು ಕಳುಹಿಸಿದನು. ಇದರಿಂದ ಕುಪಿತಗೊಂಡ ಪುಲಕೇಶಿಗೆ ಕೋಪನೆತ್ತಿಗೇರಿತು. ಹೀಗಾಗಿ ಆತ ಇದನ್ನು ಯುದ್ಧವೇ ತೀರ್ಮಾನಿಸಲಿ ಎಂದು ಹೇಳಿ ಕಳುಹಿಸಿದನು. ಹರ್ಷವರ್ಧನ ಸುಮಾರು 6000 ಆನೆಗಳನ್ನು ಹೊಂದಿದ್ದನು. ಇವರಿಬ್ಬರ ನಡುವೆ ನರ್ಮದಾ ನದಿಯ ದಡದ ಮೇಲೆ ಕ್ರಿ.ಶ. 630ರಲ್ಲಿ ಯುದ್ಧ ನಡೆಯಿತು. ಈ ಯುದ್ಧದಲ್ಲಿ ಹರ್ಷವರ್ಧನನು ಸೋಲುವ ಮೂಲಕ ಆತನ ಹರ್ಷ ಸಂಪೂರ್ಣವಾಗಿ ಅಡಗಿ ಹೋಯಿತು ಎಂದೂ ಪುಲಕೇಶಿ ವಿಜಯಶಾಲಿಯಾದನೆಂದು ಐಹೊಳೆ ಶಾಸನವು ಹೇಳುತ್ತದೆ. ಈ ಯುದ್ಧಾನಂತರ ಎರಡನೆಯ ಪುಲಕೇಶಿ ಪರಮೇಶ್ವರ ಎಂಬ ಬಿರುದನ್ನು ಧರಿಸಿದನು. ಸೋತ ಹರ್ಷನೊಂದಿಗೆ ಸ್ನೇಹ ಹಸ್ತ ನೀಡಿದ ಪುಲಕೇಶಿ ಅವನಿಗೆ ಕಾಣಿಕೆ ನೀಡಿ ಕಲಾವಿದರನ್ನು ವಿನಿಮಯ ಮಾಡಿಕೊಂಡರು. ನರ್ಮದಾ ನದಿಯು ಇವರಿಬ್ಬರ ನಡುವಿನ ಗಡಿಯಾಯಿತು.

5) ವಿದೇಶಿ ಸಂಬಂಧ :

ಹರ್ಷನು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದನು. ಕ್ರಿಶ. 641ರಲ್ಲಿ ಟಾಂಗ್ ವಂಶದ ಚಕ್ರವರ್ತಿ ಟಾಯ್‌ತುಂಗನ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದನು. ಚೀನಾದ ರಾಯಭಾರ ನಿಯೋಗವು ಕ್ರಿ.ಶ. 643ರಲ್ಲಿ ಹರ್ಷನ ಆಸ್ಥಾನಕ್ಕೆ ಭೇಟಿ ನೀಡಿತು. ಕ್ರಿ.ಶ. 647ರಲ್ಲಿ ಹರ್ಷವರ್ಧನ ನಿಧನನಾದನು.

6) ಸಾಮ್ರಾಜ್ಯದ ವ್ಯಾಪ್ತಿ :

ಹರ್ಷನ ಸಾಮ್ರಾಜ್ಯವು ಪೂರ್ವಪಂಜಾಬ್, ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ ಹಾಗೂ ಓರಿಸ್ಸಾಗಳನ್ನು ಒಳಗೊಂಡಿತ್ತು. ರಜಪೂತಾನ್, ಸಿಂದ್ ಹಾಗೂ ಪಂಜಾಬಿನ ಬಹುಭಾಗ ಅವನ ಸಾಮ್ರಾಜ್ಯಕ್ಕೆ ಸೇರಿರಲಿಲ್ಲ.

1) ಹರ್ಷನ ಧಾರ್ಮಿಕ ನೀತಿ :

ಪುಷ್ಯಭೂತಿ ಶೈವನಾಗಿದ್ದು, ಪ್ರಭಾಕರವರ್ಧನನೂ ಸಹ ಶಿವನ ಆರಾಧಕನಾಗಿದ್ದನು. ಆದರೆ ಹರ್ಷವರ್ಧನ ಆರಂಭದಲ್ಲಿ ನಿಷ್ಟಾವಂತ ಶೈವನಾಗಿದ್ದರೂ ಹೂಯೆನ್‌ತ್ಸಾಂಗನ ಭೇಟಿಯ ನಂತರ ಹರ್ಷನು ಬೌದ್ಧ ಧರ್ಮದ ಉತ್ಕಟ ಅಭಿಮಾನಿಯಾದನು. ಬೌದ್ಧ ಧರ್ಮವನ್ನು ಸ್ವೀಕರಿಸಿದ ಹರ್ಷವರ್ಧನನು

1) ರಾಜ್ಯದಲ್ಲಿ ಪ್ರಾಣಿವಧೆಯನ್ನು ನಿಲ್ಲಿಸಿದನು.

2) ಸಾವಿರಾರು ಸ್ತೂಪಗಳು, ವಿಹಾರಗಳು ಹಾಗೂ ಚೈತ್ಯಗಳನ್ನು ನಿರ್ಮಿಸಿದನು.

3) ಪ್ರಯಾಣಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ಹಾಗೂ ಅರವಟ್ಟಿಗೆಗಳನ್ನು ಸ್ಥಾಪಿಸಿದನು.

4) ಬೌದ್ಧ ಭಿಕ್ಷುಕರಿಗಾಗಿ ಮಠಗಳನ್ನು ಸ್ಥಾಪಿಸಿದನು.

5) ಪ್ರತಿ ಐದು ವರ್ಷಗಳಿಗೊಮ್ಮೆ ಎಲ್ಲಾ ಧರ್ಮದ ಪ್ರತಿನಿಧಿಗಳನ್ನು ಸಮಾವೇಶಗೊಳಿಸಿ ತಾನು ಗಳಿಸಿದ ಸಂಪತ್ತನ್ನು ದಾನವಾಗಿ ನೀಡುತ್ತಿದ್ದನು.ಅ

6) ಬೌದ್ಧ ಭಿಕ್ಷುಕರ ಸಮಾವೇಶಗಳನ್ನು ಏರ್ಪಡಿಸಿ ಬೌದ್ಧ ಧರ್ಮದ ಕುರಿತು ಚರ್ಚೆಯನ್ನು ಏರ್ಪಡಿಸುತ್ತಿದ್ದನು.

ವರ್ಧನರು ಧಾರ್ಮಿಕ ವಿಷಯದಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಧಾನ್ಯತೆ ನೀಡುತ್ತಿದ್ದರು. ಪ್ರಭಾಕರವರ್ಧನನು ಸೂರ್ಯನ ಆರಾಧಕನಾಗಿದ್ದರೆ, ರಾಜ್ಯವರ್ಧನನು ಬೌದ್ಧ ಮತಾವಲಂಭಿಯಾಗಿದ್ದನು. ಹರ್ಷವರ್ಧನನು ಶಿವ, ಸೂರ್ಯ ಮತ್ತು ಬುದ್ಧನ ಆರಾಧಕನಾಗಿದ್ದನು. ತನ್ನ ಆಳ್ವಿಕೆಯ ಕೊನೆಯ ದಿನಗಳಲ್ಲಿ ರಾಜ್ಯಶ್ರೀ ಮತ್ತು ಡ್ಯೂಯನ್‌ ತ್ಸಾಂಗ್‌ ಪ್ರಭಾವಕ್ಕೊಳಗಾಗಿ ಬೌದ್ಧಧರ್ಮಕ್ಕೆ ಮತಾಂತರವಾದನು. ಬೌದ್ಧಧರ್ಮದ ಮಹಾಯಾನ ಪಂಥಕ್ಕೆ ತನ್ನ ಒಲವು ತೋರಿಸತೊಡಗಿದನು. ಹಲವಾರು ಧಾರ್ಮಿಕ ಗೋಷ್ಠಿಗಳನ್ನು ನಡೆಸಿದನು. ವಿದ್ವಾಂಸ ರೊಂದಿಗೆ ಧಾರ್ಮಿಕ ಚರ್ಚೆಯಲ್ಲಿ ಪಾಲ್ಗೊಂಡನು. ಇದರಲ್ಲಿ ಪ್ರಸಿದ್ಧವಾದವುಗಳೆಂದರೆ ಕನೌಜ್ ಸಮ್ಮೇಳನ ಮತ್ತು ಪ್ರಯಾಗ ಸಮ್ಮೇಳನ.

ಕನೌಜ್ ಸಮ್ಮೇಳನ-ಕ್ರಿ.ಶ 643 : ಹರ್ಷವರ್ಧನನು ಕ್ರಿಶ 643 ರಲ್ಲಿ ಕನೌಜ್ ಸಮ್ಮೇಳನವನ್ನು ನಡೆಸಿದನು. ಇದರ ಉದ್ದೇಶ

  1. ಹೂಯನ್‌ ತ್ಸಾಂಗ್‌ಗೆ ಗೌರವ ಸಲ್ಲಿಸುವುದು.
  2. ಮಹಾಯಾನ ಪಂಥವನ್ನು ಮೆರೆಸುವುದು.
  3. ತನ್ನ ಧಾರ್ಮಿಕ ಧೋರಣೆಯನ್ನು ಸ್ಪಷ್ಟಪಡಿಸುವುದು.

ಹೂಯನ್ ತ್ಸಾಂಗ್‌ನು ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರು ಆಗಮಿಸಿದ್ದರು. 3000 ಬೌದ್ಧ ಸನ್ಯಾಸಿಗಳು, 3000 ಬ್ರಾಹ್ಮಣರು ಮತ್ತು ನಳಂದ ವಿಶ್ವವಿದ್ಯಾಲಯವೊಂದರಿಂದಲೇ 1000 ವಿದ್ಯಾರ್ಥಿಗಳು ಬಂದಿದ್ದರು. ವಿವಿಧ ರಾಜ್ಯಗಳ ಸುಮಾರು 20 ಅರಸರು ಪಾಲ್ಗೊಂಡಿದ್ದರು. ಅಲ್ಲದೆ ವಿವಿಧ ಮತಗಳ, ಪಂಗಡಗಳ ಪ್ರತಿನಿಧಿಗಳೂ ಆಗಮಿಸಿದ್ದರು, ಗಂಗಾನದಿಯ ದಡದಲ್ಲಿ ವಿಶೇಷವಾಗಿ ರಚಿಸಲಾದ ಮಂಟಪದಲ್ಲಿ 23 ದಿನಗಳ ಕಾಲ ಸಮ್ಮೇಳನ ನಡೆಯಿತು. ಭಗವಾನ್ ಬುದ್ಧನ ಚಿನ್ನದ ವಿಗ್ರಹವನ್ನು ಮಂಟಪದಲ್ಲಿ ಇಡಲಾಗಿತ್ತು. ಮೂರಡಿ ಎತ್ತರದ ಉತ್ಸವ ಮೂರ್ತಿಯೊಂದನ್ನು ಪ್ರತಿದಿನವೂ ಮೆರವಣಿಗೆ ಮಾಡುತ್ತಿದ್ದರು. ಅಧ್ಯಕ್ಷತೆ ವಹಿಸಿದ್ದ ಡ್ಯೂಯನ್ ತ್ಸಾಂಗ್‌ನು ಪಾಂಡಿತ್ಯಪೂರ್ಣ ಭಾಷಣಮಾಡಿದನು. ನಂತರ ಸಭಿಕರ ಪ್ರಶ್ನೆಗಳಿಗೆ ಮತ್ತು ಸಂದೇಹಗಳಿಗೆ ಉತ್ತರಿಸಿದನು. ಬಹಳ ಉದಾರಿಯಾದ ಹರ್ಷವರ್ಧನನು ಜನರಿಗೆ ಉದಾರ ದಾನ ಧರ್ಮಗಳನ್ನು ಮಾಡಿದನು. ಹರ್ಷನು ಈ ಸಮ್ಮೇಳನಕ್ಕೆ ವಿವಿಧ ಧರ್ಮೀಯರನ್ನು ಆಹ್ವಾನಿಸಿದ್ದರೂ ಬೌದ್ಧಧರ್ಮದ ಪ್ರಚಾರಕ್ಕೆ ಹಮ್ಮಿಕೊಂಡಿದ್ದ ಧರ್ಮಸಮ್ಮೇಳನದಂತೆ ಪರಿವರ್ತಿತವಾಯಿತು. ಇದನ್ನು ಸಹಿಸದ ಕೆಲವು ವಿರೋಧಿಗಳು ಸಮ್ಮೇಳನದ ಮಂಟಪಕ್ಕೆ ಬೆಂಕಿ ಇಟ್ಟು ಕೊಲ್ಲಲು ಪ್ರಯತ್ನಿಸಿದರು. ಆದರೆ ಹರ್ಷವರ್ಧನನು ದುಷ್ಕರ್ಮಿಗಳನ್ನು ಸೆರೆಹಿಡಿದು ತನಗೆ ರಕ್ಷಣೆ ಕೊಟ್ಟನೆಂದು ಹೂಯನ್‌ ತ್ಸಾಂಗ್ ಹೇಳಿ ಕೊಂಡಿದ್ದಾನೆ.

ಪ್ರಯಾಗ ಸಮ್ಮೇಳನ-ಕ್ರಿ.ಶ 643 : ಕನೌಜ್ ಸಮ್ಮೇಳನ ನಡೆದ ವರ್ಷವೇ ಹರ್ಷನು ಪ್ರಯಾಗದಲ್ಲಿ ಸಮ್ಮೇಳನವೊಂದನ್ನು ನಡೆಸಿದನು. ಇದು ಐದು ವರ್ಷಕ್ಕೊಮ್ಮೆ ನಡೆಸುತ್ತಿದ್ದ ‘ಮಹಾಮೋಕ್ಷ ಪರಿಷತ್’ ಆಗಿತ್ತು. ಗಂಗಾ ಮತ್ತು ಯಮುನೆಯರ ಸಂಗಮ ಸ್ಥಳದಲ್ಲಿ ನಡೆದ ಈ ಸಮ್ಮೇಳನದ ಉದ್ದೇಶ:

  1. ಧಾನ ಧರ್ಮಗಳನ್ನು ಮಾಡುವುದು.
  2. ಧಾರ್ಮಿಕ ಆಸಕ್ತಿಯನ್ನು ತೋರಿಸುವುದು.
  3. ಬೌದ್ಧಮತದ ಮಹಾಯಾನ ಪಂಥದ ಮಹತ್ವವನ್ನು ಸಾರುವುದು.

ಈ ಸಮ್ಮೇಳನವು 75 ದಿನಗಳ ಕಾಲ ನಡೆಯುತು. 5 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಿದ್ದರು. ಈ ಸಮ್ಮೇಳನಕ್ಕೆ ವಿವಿಧ ರಾಜ್ಯಗಳ 18 ಅರಸರು, ವಿದ್ವಾಂಸರು, ಧಾರ್ಮಿಕ ಮುಖಂಡರು, ಸನ್ಯಾಸಿಗಳು, ಬ್ರಾಹ್ಮಣರು ಮತ್ತು ಜೈನರು ಭಾಗವಹಿಸಿದ್ದರು. ಪ್ರತಿ ದಿನವೂ ಭಗವಾನ್ ಬುದ್ಧನ ಚಿನ್ನದ ವಿಗ್ರಹದ ಪೂಜೆ ಯೊಂದಿಗೆ ಶಿವ ಮತ್ತು ಸೂರ್ಯರ ಆರಾಧನೆಯನ್ನು ಮಾಡಲಾಗುತ್ತಿತ್ತು.

ಕೊಡುಗೈ ದೊರೆಯಾದ ಹರ್ಷವರ್ಧನನು ಬೌದ್ಧ ಬಿಕ್ಷುಗಳಿಗೆ, ಬ್ರಾಹ್ಮಣರಿಗೆ, ಜೈನರಿಗೆ ದಾನಧರ್ಮ ಗಳನ್ನು ಮಾಡಿದನು. ಅಲ್ಲದೆ ದೂರದ ಊರುಗಳಿಂದ ಬಂದ ಯಾತ್ರಿಕರಿಗೂ ದಾನ ನೀಡಿದನು. ಒಂದು ತಿಂಗಳ ಕಾಲ ಬಡವರು, ಅನಾಥರು, ಮತ್ತು ನಿರ್ಗತಿಕರಿಗೂ ಸಹಾಯ ಮಾಡಿದನು. ಹೂಯನ್‌ ತ್ಸಾಂಗ್‌ನ ವರದಿಯ ಪ್ರಕಾರ ಪ್ರಯಾಗ ಸಮ್ಮೇಳನದಲ್ಲಿ ಸಕಲವನ್ನೂ ದಾನಮಾಡಿದ ಹರ್ಷನು ಖಜಾನೆಯನ್ನೆಲ್ಲಾ ಖಾಲಿಮಾಡಿ ಕೊಂಡನು. ಅಲ್ಲದೆ ತಾನು ಧರಿಸಿದ್ದ ಅಮೂಲ್ಯ ಪೋಷಾಕು, ದೇಹದ ಆಭರಣವನ್ನೆಲ್ಲ ದಾನಮಾಡಿ ಸೋದರಿಯಿಂದ ಒಂದು ಸಾಮಾನ್ಯ ಬಟ್ಟೆಯನ್ನು ಪಡೆದುಕೊಂಡು ಅದನ್ನು ಧರಿಸಿ ದಶದಿಕ್ಕುಗಳ ಬುದ್ಧರನ್ನು ಆರಾಧಿಸಿದನು. ಆಗಷ್ಟೆ ಸಾರ್ಥಕ್ಯದ ಮನೋಭಾವನೆ ಹರ್ಷನಿಗಾಯಿತು ಎಂದು ಬರೆದಿದ್ದಾನೆ.

ಉಪಸಂಹಾರ : ಹರ್ಷವರ್ಧನನು ಅಶೋಕ ಚಕ್ರವರ್ತಿಯಂತೆ ಧರ್ಮ ಛತ್ರಗಳನ್ನು, ಆಸ್ಪತ್ರೆಗಳನ್ನು, ಸಾಲುಮರಗಳನ್ನು, ರಸ್ತೆಗಳನ್ನು ಮತ್ತು ವಿಶ್ರಾಂತಿ ಗೃಹಗಳನ್ನು ನಿರ್ಮಿಸಿದನು. ಬೌದ್ಧ ಧರ್ಮದ ಏಳೆಗಾಗಿ ಶ್ರಮಿಸಿದನು. ಆದ್ದರಿಂದ ಹರ್ಷನನ್ನು ಎರಡನೆಯ ಅಶೋಕನೆಂದು ಕರೆಯಲಾಗುತ್ತದೆ. ಹರ್ಷನು ಬೌದ್ಧಧರ್ಮದ ಅನುಯಾಯಿಯಾದರೂ, ಶಿವ ಮತ್ತು ಸೂರ್ಯನ ಆರಾಧಕನೂ ಆಗಿದ್ದನು. ಕನೌಜ್ ಮತ್ತು ಪ್ರಯಾಗ ಸಮ್ಮೇಳನದಲ್ಲಿ ಈ ಮೂರು ದೇವರ ಪೂಜೆ ಹಾಗೂ ವಿವಿಧ ಮತ ಪಂಥಿಯರಿಗೆ ನೀಡಿದ ದಾನ ಹರ್ಷನ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾಗಿದೆ. ಯಾವುದೇ ಧರ್ಮವನ್ನು ಕಡೆಗಣಿಸದೆ ಬಹುಮುಖ್ಯವಾಗಿ ಎಲ್ಲರ ಔದಾರ್ಯವನ್ನು ಗಳಿಸುವ ಗುಟ್ಟು ಇದರಲ್ಲಡಗಿತ್ತು.

ಶಾಸನಗಳ ಮಹತ್ವ

ಶಾಸನಗಳ ಮಹತ್ವ

ಶಾಸನಗಳು ಚರಿತ್ರೆಯ ರಚನೆಯಲ್ಲಿ ಸಿಂಹಪಾಲು ಪಾತ್ರವನ್ನು ಹೊಂದಿವೆ. ಶಾಸನಗಳು ಇತಿಹಾಸ ರಚನೆಗೆ ಬಹು ಉಪಯುಕ್ತ ಆಕರಗಳು, ಶಾಸನಗಳ ರಚನಾಕಾರ್ಯ ಅಶೋಕ ಮಹಾಶಯನ ಕಾಲದಿಂದ ಆರಂಭಗೊಂಡಿತು. ಹೀಗಾಗಿ ಅಶೋಕನನ್ನು ಶಾಸನಗಳ ಆದ್ಯ ಪ್ರವರ್ತಕನೆಂದು ಹೆಸರಿಸಲಾಗಿದೆ. ಅಶೋಕನ ಶಾಸನಗಳನ್ನು ಶಿಲಾಶಾಸನಗಳು, ಗೌಣಶಿಲಾಶಾಸನಗಳು, ಸ್ತಂಭಶಾಸನಗಳು, ಬಂಡೆಕಲ್ಲು ಶಾಸನಗಳೆಂದು ವಿಂಗಡಿಸಲಾಗಿದೆ. ಅಶೋಕನ ಶಾಸನಗಳು  ಬ್ರಾಹ್ಮಿ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಅನೇಕ ಶಾಸನಗಳು ಕಂಡು ಬರುತ್ತವೆ.

 ಈ ಶಾಸನಗಳಿಂದ ರಾಜರ ದಿಗ್ವಿಜಯಗಳು, ಸಾಮ್ರಾಜ್ಯ ವಿಸ್ತರಣೆ, ಆಡಳಿತ ಕ್ರಮ, ರಾಜರು ನೀಡಿದ ದಾನದತ್ತಿಗಳು, ಮೊದಲಾದ ಹಲವು ಹತ್ತು ವಿಷಯಗಳು ತಿಳಿದುಬರುತ್ತವೆ. ಶಾಸನಗಳಲ್ಲಿ ಕೆಲವು ಕೂಟ ಶಾಸನಗಳಿರುತ್ತವೆ. ಅಧ್ಯಯನ ಮಾಡುವಾಗ ಸೂಕ್ಷ್ಮವಾಗಿ ಗಮನಿಸಿ ಅವುಗಳನ್ನು ಪ್ರತ್ಯೇಕಿಸಿ ಮಹತ್ವವನ್ನು ಅರಿಯಬಹುದು.

ಇತಿಹಾಸ ಅಧ್ಯಯನಕ್ಕೆ ಶಾಸನಗಳ ಪ್ರಯೋಜನಗಳು :

  1. ನಮ್ಮ ಪ್ರಾಚೀನರಲ್ಲಿ ಐತಿಹಾಸಿಕ ಪ್ರಜ್ಞೆ ಇತ್ತು ಎಂಬುದಕ್ಕೆ ಶಾಸನಗಳು ಸಾಕ್ಷಿ ಒದಗಿಸುತ್ತದೆ.
  2. ಶಾಸನಗಳಿಂದ ರಾಜರ ಸೈನಿಕ ಸಾಧನೆಯನ್ನು ತಿಳಿಯಬಹುದು.
  3. ಶಾಸನಗಳು ದೊರೆತ ಸ್ಥಳದ ಆಧಾರದ ಮೇಲೆ ಸಾಮ್ರಾಜ್ಯದ ವ್ಯಾಪ್ತಿಯನ್ನು ಗುರುತಿಸಬಹುದು.
  4. ಶಾಸನಗಳಿಂದ ಖಚಿತ ಕಾಲ ಗಣನೆ ಮಾಡಲು ಸಾಧ್ಯವಾಗುತ್ತದೆ.
  5. ಶಾಸನಗಳಿಂದ ಅರಸರ ಬಿರುದು ಬಾವಲಿಗಳು ಮತ್ತು ಅವರ ವಂಶಾವಳಿ ತಿಳಿಯುತ್ತದೆ.
  6. ಶಾಸನಗಳ ಸಹಾಯದಿಂದ ಭಾಷೆ ಮತ್ತು ಲಿಪಿ ಬೆಳೆದು ಬಂದ ಬಗೆಯನ್ನು ಗುರುತಿಸಬಹುದು.
  7. ಶಾಸನಗಳು ಹಿಂದಿನವರ ಸಂಪ್ರದಾಯ, ಆಚರಣೆ, ನಂಬಿಕೆ ಮತ್ತು ಆರಾಧನೆಯ ಮೇಲೆ ಬೆಳಕು ಚೆಲ್ಲುತ್ತದೆ.
  8. ಮೆಹರೂಲಿ ಕಬ್ಬಿಣ ಸ್ತಂಭ ಶಾಸನದಿಂದ ಲೋಹಶಾಸ್ತ್ರದ ಪ್ರಗತಿಯನ್ನು ತಿಳಿಯಬಹುದು.
  9. ಶಾಸನಗಳು ದೇವಾಲಯ, ಬಸದಿ, ಚೈತ್ಯಾಲಯಗಳ ನಿರ್ಮಾತೃಗಳು ಯಾರೆಂಬುದನ್ನು ತಿಳಿಸುತ್ತದೆ.
  10. ಭಾರತದ ಹೆಚ್ಚಿನ ಶಾಸನಗಳು ದಾನ ದತ್ತಿಗೆ ಸಂಬಂಧ ಪಟ್ಟಿರುವುದರಿಂದ ಅವುಗಳ ವಿವರಗಳು ಶಾಸನ ಮುಖೇನ ತಿಳಿಯುತ್ತದೆ. ದತ್ತಿ ನೀಡಿ ಜಮೀನಿನ ಮೇರೆಯೂ ಲಭ್ಯವಾಗುತ್ತದೆ.

ಕೆಲವು ಪ್ರಮುಖ ಶಾಸನಗಳು

ಶಾಸನದ ಹೆಸರು

ಶಾಸನದ ಕತೃ

ಒದಗಿಸುವ ಐತಿಹಾಸಿಕ ಮಾಹಿತಿ

ರುಮ್ಮಿಂಡೈ ಶಾಸನ

ಅಶೋಕ

ಅಶೋಕನ ಬೌದ್ಧಧರ್ಮಕ್ಕೆ ಮತಾಂತರನಾದ ಸಂಗತಿ ಇದೆ.

ಹಾಥಿಗುಂಪ ಶಾಸನ

ಖಾರವೇಲ

ಕಳಿಂಗ ಅರಸ ಖಾರವೇಲನ ಸಾಧನೆಗಳು

ಗಿರ್ನಾರ್ ಶಾಸನ

ರುದ್ರದಾಮ

ಮೌರ್ಯ ಮತ್ತು ಗುಪ್ತಾರ ನೀರಾವರಿ ಕಾರ್ಯಗಳನ್ನು ಕುರಿತು ಮಾಹಿತಿ ನೀಡುತ್ತದೆ.

ಅಲಹಾಬಾದ್ ಸ್ಥಂಭ ಶಾಸನ

ಹರಿಷೇಣ

ಸಮುದ್ರಗುಪ್ತನ ದಿಗ್ವಿಜಯಗಳು, ಇದು ಪ್ರಶಸ್ತಿ ಶಾಸನ

ಮಹ್ರೌಲಿ ಕಬ್ಬಿಣ ಸ್ಥಂಬ ಶಾಸನ

2ನೇ ಚಂದ್ರಗುಪ್ತ

2ನೇ ಚಂದ್ರಗುಪ್ತನ ಸಾಧನೆಗಳು

ಮಂದಸಾರ ಶಾಸನ

2ನೇ ಕುಮಾರಗುಪ್ತ

2ನೇ ಕುಮಾರಗುಪ್ತನ ಸಾಧನೆಗಳು

ಬಿತೈರಿ ಶಾಸನ

ಸ್ಕಂದ ಗುಪ್ತ

ಸ್ಕಂದಗುಪ್ತನ ಸಾಧನೆಗಳು

ಜುನಾಗಡ ಶಾಸನ

ಸ್ಕಂದ ಗುಪ್ತ

ಸ್ಕಂದ ಗುಪ್ತನ ಸಾಧನೆಗಳು

ಮಧುಬಾನ್ ಶಾಸನ

ಹರ್ಷವರ್ಧನ

ಹರ್ಷನ ಸಾಧನೆಗಳು

ಉತ್ತರಮೇರೂರು ಶಾಸನ

1ನೇ ಪಾರಂತಕಚೋಳ

ಚೋಳರ ಗ್ರಾಮಾಡಳಿತ ವಿವರಣೆ

ನಾಸಿಕ್ ಶಾಸನ

ಗೌತಮಿ ಬಾಳಶ್ರೀ

ಗೌತಮಿಪುತ್ರನ ಸಾಧನೆಗಳು ಗುಪ್ತರ ಆಡಳಿತ

ಉದಯಗಿರಿ ಮಲೈ ಶಾಸನ

1ನೇಮಹೇಂದ್ರವರ್ಮ

1ನೇ ಮಹೇಂದ್ರವರ್ಮನ ಸಾಧನೆಗಳು

ತಾಳಗುಂದ ಶಾಸನ

ಶಾಂತಿವರ್ಮ

ಕದಂಬರ ಮೂಲ ಪ್ರಸ್ತಾಪ

ಚಂದ್ರವಳ್ಳಿ ಶಾಸನ

ಮಯೂರವರ್ಮ

ಮಯೂರವರ್ಮನ ಸಾಧನೆಗಳು

ಐಹೊಳೆ ಶಾಸನ

ರವಿಕೀರ್ತಿ

ಇಮ್ಮಡಿ ಪುಲಿಕೇಶಿಯ ದಿಗ್ವಿಜಯಗಳು

ಗ್ವಾಲಿಯಾರ್ ಶಾಸನ

ಭೋಜರಾಜ

ಪ್ರತಿಹಾರ ರಾಜ ಭೋಜರಾಜನ ಸಾಧನೆಗಳು

ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು

ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು

ಪೀಠಿಕೆ : ಕ್ರಿ.ಪೂ.6ನೇ ಶತಮಾನವನ್ನು ಮಾನವ ಚರಿತ್ರೆಯಲ್ಲಿನ ʻಕಾಲ ವಿಭಾಗಸ್ಥಾನ’ವೆಂದು ಗುರುತಿಸಲಾಗಿದೆ. ಈ ಶತಮಾನದಲ್ಲಿ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬಂದವು. ಕ್ರಿ.ಪೂ.6ನೇ ಶತಮಾನವು ಚರಿತ್ರೆಯಲ್ಲಿ ಗುರುತಿಸಬಹುದಾದ ಕಾಲವೆನಿಸಿದೆ. ಇದಕ್ಕೆ ಕಾರಣವೆಂದರೆ:-

1. ಮಗಧಾ ರಾಜ್ಯದ ಏಳಿಗೆಯಾಯಿತು.

2. ರಾಜಕೀಯ ರಂಗಭೂಮಿಯ ಮೇಲೆ 16 ಮಹಾ ಜನಪದಗಳು ಬೆಳೆದವು.

3. ಭಾರತದ ಮೇಲೆ ಪರಕೀಯರ ಆಕ್ರಮಣಗಳಾದವು.

4. ಕ್ರಿ.ಪೂ.6ನೇ ಶತಮಾನದಲ್ಲಿ ವಾಯುವ್ಯ ಭಾರತದಲ್ಲಿ ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಪರ್ಷಿಯನ್ನರ ಪ್ರಭಾವ ದಟ್ಟವಾಯಿತು.

5. ವಿಶ್ವದ ಪ್ರಮುಖ ಧರ್ಮಗಳ ಸಾಲಿನಲ್ಲಿ ಜೈನ ಮತ್ತು ಬೌದ್ಧ ಮತಗಳು ಏಳಿಗೆಗೆ ಬಂದವು.

6. ಭಾರತ ಮತ್ತು ಗ್ರೀಕ್ ಪರ್ಷಿಯನ್ ರಾಷ್ಟ್ರಗಳ ನಡುವೆ ಸಾಂಸ್ಕೃತಿಕ ಸಂಬಂಧವೇರ್ಪಟ್ಟಿತು.

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

ಹೊಸಮತಗಳ ಉದಯಕ್ಕೆ ಪೂರಕವಾದ ಅಂಶಗಳು ಅಥವಾ ಕಾರಣಗಳು

1. ಯಾಗ ಯಜ್ಞಗಳ ಪ್ರಾಬಲ್ಯ : ವೈದಿಕ ಯುಗದ ಅಂತ್ಯದವೇಳೆಗೆ ಯಾಗಯಜ್ಞಗಳು ಹೆಚ್ಚು ಪ್ರಬಲಗೊಂಡವು. ವೈದಿಕ ಧರ್ಮದಲ್ಲಿನ ಈ ಕಠಿಣ ಯಾಗಯಜ್ಞಗಳು ಜನಸಾಮಾನ್ಯರಿಗೆ ತುಂಬಾ ಆರ್ಥಿಕ ಹೊರೆಯಾಗಿದ್ದವು. ಪುರೋಹಿತರು ಪ್ರಬಲರಾದರು. ಅಧಿಕ ಖರ್ಚಿನ ಯಾಗಯಜ್ಞಗಳ ವೈದಿಕ ಪಂಥಕ್ಕೆ ಬದಲು ಹೊಸಮತಗಳು ಏಳಿಗೆಗೆ ಬಂದರೆ ಅದಕ್ಕೆ ತಮ್ಮ ಬೆಂಬಲ ಸೂಚಿಸಲು ಜನಸಾಮಾನ್ಯರು ನಿರ್ಧರಿಸಿದ್ದರು.

2. ಜಾತಿಪದ್ಧತಿಯ ಜಟಿಲತೆ : ವೈದಿಕ ಸಮಾಜದಲ್ಲಿ ಜಾತಿಪದ್ಧತಿಯು ಹೆಚ್ಚು ಜಠಿಲತೆಯಿಂದ ಕೂಡಿತ್ತು. ಬ್ರಾಹ್ಮಣರು ವೇದಾದ್ಯಯನ ಮತ್ತು ಪೌರೋಹಿತ್ಯದ ಕಾರ್ಯನಿರ್ವಹಿಸುತ್ತಿದ್ದು ಸಮಾಜದಲ್ಲಿ ಅತ್ಯುನ್ನತ ಸ್ಥಾನ ಹೊಂದಿದ್ದರು. ತೆರಿಗೆಯಿಂದ ವಿನಾಯ್ತಿಪಡೆದಿದ್ದು, ಕ್ಷತ್ರಿಯರಿಗೆ ಈ ತರಹದ ಸವಲತ್ತುಗಳಿರಲಿಲ್ಲ. ಹೀಗೆ ಅಸಮಾಧಾನಗೊಂಡ ಕ್ಷತ್ರಿಯ ವರ್ಗಗಳಿಂದ ಹೊಸ ಧರ್ಮಗಳ ಸ್ಥಾಪನೆಯಾಯಿತು.

3. ಮೋಕ್ಷ ಮಾರ್ಗದ ಕಲ್ಪನೆ : ವ್ಯಕ್ತಿಯು ಮೋಕ್ಷವನ್ನು ಪಡೆಯಬೇಕಾದರೆ ಯಾವ ಮಾರ್ಗವನ್ನು ಅನುಸರಿಸಬೇಕೆಂಬುದು ಜನಸಾಮಾನ್ಯರಿಗೆ ಜಠಿಲ ಸಮಸ್ಯೆಯಾಯಿತು. ತಪಸ್ಸಾಚರಣೆ, ಜ್ಞಾನಮಾರ್ಗ ಮತ್ತು ಕರ್ಮಮಾರ್ಗಗಳೆಂಬ ವಿವಿಧ ಮಾರ್ಗಗಳು ಹುಟ್ಟಿಕೊಂಡವು. ಈ ವಿವಿಧ ಮಾರ್ಗಗಳಲ್ಲಿ ಯಾವುದನ್ನು ಅವಲಂಬಿಸಿದರೆ ಮುಕ್ತಿ ದೊರೆಯುತ್ತದೆ ಎಂಬುದು ದ್ವಂದ್ವವಾಯಿತು. ಹೊಸ ಧರ್ಮಗಳು ಸರಳ ಮತ್ತು ಸುಲಭ ತತ್ವಗಳನ್ನು ಒಳಗೊಂಡಿದ್ದರಿಂದ ಜನಸಾಮಾನ್ಯರು ಹೊಸಪಂಥಗಳ ಸ್ಥಾಪನೆಗೆ ಬೆಂಬಲ ನೀಡಿದರು.

4. ಉಪನಿಷತ್ತುಗಳು : ಉಪನಿಷತ್ತುಗಳು ಹೊಸಪಂಥಗಳ ಉದಯಕ್ಕೆ ಪ್ರೇರಣೆ ನೀಡಿದವು. ವೈದಿಕ ಪಂಥದಲ್ಲಿದ್ದ ಮತಾಚರಣೆಯ ಅಂಶಗಳನ್ನು ಉಪನಿಷತ್ತುಗಳು ಖಂಡಿಸಿ, ಮೋಕ್ಷಗಳಿಕೆಗೆ ಜ್ಞಾನಮಾರ್ಗವೇ ಅತ್ಯುತ್ತಮ ಮಾರ್ಗವೆಂದು ಉಪನಿಷತ್ತುಗಳು ವ್ಯಾಖ್ಯಾನಿಸಿದವು.

5. ಜನಸಾಮಾನ್ಯರ ಭಾಷೆಯ ಬಳಕೆ : ವೈದಿಕ ಪಂಥದಲ್ಲಿ ಧರ್ಮಭೋಧನೆಗಾಗಿ ಸಂಸ್ಕೃತ ಭಾಷೆಯನ್ನು ಬಳಸಲಾಯಿತು. ಸಂಸ್ಕೃತ ಭಾಷೆಯು ಜನಸಾಮಾನ್ಯರ ಭಾಷೆಯಾಗಿರದೆ ಕಠಿಣವಾದ ಭಾಷೆಯಾಗಿತ್ತು. ಧಾರ್ಮಿಕ ಕೃತಿಗಳನ್ನು ಅರ್ಥೈಸಿಕೊಳ್ಳಲು ಬ್ರಾಹ್ಮಣಪಂಡಿತರನ್ನೇ ಅವಲಂಬಿಸಬೇಕಾಗಿತ್ತು. ಇದೇ ವೇಳೆಗೆ ಜನಸಾಮಾನ್ಯರ ಭಾಷೆಯನ್ನು ಬಳಸಿದ್ದರಿಂದ ಅದರ ಪ್ರಭಾವ ಹೊಸಧರ್ಮಗಳ ಉದಯಕ್ಕೆ ಕಾರಣವಾಯಿತು.

6. ಹೊಸ ಪಂಥಗಳ ಉದಯ : ವೈದಿಕ ಧರ್ಮವನ್ನು ವಿರೋಧಿಸಿ ಚಾರ್ವಾಕ, ನಾಸ್ತಿಕ, ಪರಿವ್ರಾಜಕ ಮುಂತಾದ ಹೊಸ ಪಂಥಗಳು ಹುಟ್ಟಿಕೊಂಡವು. ಈ ಬೆಳವಣಿಗೆಯು ಸಹ ಹೊಸ ಧರ್ಮಗಳ ಉದಯಕ್ಕೆ ಕಾರಣವಾಯಿತು.

7. ಪ್ರಾಣಿಬಲಿ : ವೈದಿಕ ಧರ್ಮದಲ್ಲಿ ಮುಗ್ಧ ಪ್ರಾಣಿಗಳನ್ನು ಬಲಿ ಕೊಡುವುದು ಒಂದು ಸಂಪ್ರದಾಯವಾಗಿ ಬೆಳೆದಿತ್ತು. ಹೀಗಾಗಿ ಅಹಿಂಸೆಯನ್ನು ಬೋಧಿಸುವ ಧರ್ಮದ ಕಡೆ ಜನರು ಆಕರ್ಷಿತರಾದರು.

ಹೀಗೆ ಹೊಸಮತಗಳ ಉದಯಕ್ಕೆ ಅನೇಕ ಪೂರಕವಾದ ಅಂಶಗಳಿದ್ದವು.

ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ತುಲನೆ

ಹೋಲಿಕೆಗಳು (ಸಮಾನ ಅಂಶಗಳು)

  1. ಇವೆರಡೂ ಸಂಸ್ಕೃತ ಭಾಷೆಯನ್ನು ತಿರಸ್ಕರಿಸಿ ಪಾಳಿ ಭಾಷೆಯನ್ನು ಬಳಸಿಕೊಂಡವು.
  2. ಇವೆರಡೂ ವೈದಿಕ ಧರ್ಮದ ವಿರುದ್ಧ ಬಿರುಗಾಳಿಯನ್ನು ಎಬ್ಬಿಸಿದವು. ಅಂದರೆ ಹಿಂದೂಧರ್ಮ ಸುಧಾರಣೆಗಾಗಿ ಹುಟ್ಟಿಕೊಂಡ ಧರ್ಮಗಳು.
  3. ಇವೆರಡೂ ಸರಳವಾದ, ಪರಿಶುದ್ಧವಾದ, ಆಚಾರಯುತ ಜೀವನಕ್ಕೆ ಮಹತ್ವ ಕೊಟ್ಟಿದೆ.
  4. ಇವೆರಡೂ ಕರ್ಮಸಿದ್ಧಾಂತದಲ್ಲಿ ನಂಬಿಕೆ ಇಟ್ಟಿವೆ
  5. ಇವೆರಡೂ ಬ್ರಾಹ್ಮಣರಿಂದ ಹೊರತಾದ ಕ್ಷತ್ರಿಯರಿಂದ ಸ್ಥಾಪನೆಯಾದ ಧರ್ಮಗಳು,
  6. ಅಹಿಂಸೆ ಉತ್ತಮ ನಡತೆ, ಉತ್ತಮ ಜ್ಞಾನಕ್ಕೆ ಮಹತ್ವ, ಜಾತಿಪದ್ಧತಿ, ಧಾರ್ಮಿಕ ವಿಧಿ, ವೇದ, ಬ್ರಾಹ್ಮಣತ್ವ, ಯಜ್ಞಯಾಗಗಳನ್ನು ಖಂಡಿಸಿ ಸಮಾನತೆಯನ್ನು ಪ್ರತಿಪಾದಿಸಿದವು.
  7. ಕಲೆ, ಸಾಹಿತ್ಯಕ್ಕೆ ಎರಡೂ ಅಪೂರ್ವ ಕೊಡುಗೆ ನೀಡಿದವು.
  8. ಇವೆರಡೂ ಪ್ರಜಾಪ್ರಭುತ್ವ ಸಂಘ ಮಾದರಿಯಲ್ಲಿ ರಚಿಸಲ್ಪಟ್ಟಿವೆ.
  9. ಎರಡೂ ಶ್ರಮಜೀವನವನ್ನು ಒತ್ತಿ ಹೇಳಿವೆ.
  10. ಧಾರ್ಮಿಕ ಸಹಿಷ್ಣುತೆಯಲ್ಲಿ ನಂಬಿಕೆ ಹೊಂದಿವೆ.
  11. ಇವೆರಡೂ ಪ್ರಾಣಿಬಲಿಯನ್ನು ಖಂಡಿಸಿದವು. ಅಹಿಂಸೆಯನ್ನು ಒತ್ತಿ ಹೇಳಿದವು.
  12. ಇವೆರಡೂ ಮತ ಪ್ರಚಾರಕ (ಮಿಷನರಿ) ಧರ್ಮಗಳು.
  13. ಎರಡೂ ಜನಸಾಮಾನ್ಯರ ಆಡುಭಾಷೆಯಲ್ಲಿ ಬೋಧಿಸಿದವು.
  14. ಇವೆರಡೂ ಭಾರತದಲ್ಲಿ ಹುಟ್ಟಿದ ಧರ್ಮಗಳಾಗಿವೆ.
  15. ಎರಡೂ ವೇದ ಮತ್ತು ಬ್ರಾಹ್ಮಣರ ಶ್ರೇಷ್ಠತೆಯನ್ನು ಖಂಡಿಸಿದವು.
  16. ಇವೆರಡೂ ದೇವರು ಇರುವಿಕೆಯನ್ನು ನಂಬಲಿಲ್ಲ.
  17. ಎರಡೂ ಸನ್ಯಾಸತ್ವವನ್ನು ಒತ್ತಿ ಹೇಳಿದವು.
ವ್ಯತ್ಯಾಸಗಳು
ಜೈನಧರ್ಮ ಬೌದ್ಧ ಧರ್ಮ
1. ಅಹಿಂಸೆಗೆ ಹೆಚ್ಚಿನ ಮಹತ್ವ ಕೊಟ್ಟಿದೆ 1. ಅಹಿಂಸೆಗೆ ಅಷ್ಟಾಗಿ ಮಹತ್ವ ಕೊಟ್ಟಿಲ್ಲ.
2. ತಪಸ್ಸು, ದೇಹ ದಂಡನೆಗೆ ಮಹತ್ವ ಕೊಟ್ಟಿದೆ. 2. ಇಂದ್ರಿಯಗಳ ನಿಗ್ರಹಕ್ಕೆ ಹೆಚ್ಚಿನ ಮಹತ್ವ ನೀಡಿದೆ.
3 ಭಾರತದೊಳಗೆ ಮಾತ್ರ ಜನಪ್ರಿಯವಾಯಿತು. 3 ಭಾರತವಲ್ಲದೆ ಹೊರದೇಶಗಳಲ್ಲೂ ಪ್ರಖ್ಯಾತಿ ಪಡೆಯಿತು.
4. ಮೋಕ್ಷ ಸಾಧನೆಗೆ ಉಪವಾಸವ್ರತ, ಸಲ್ಲೇಖನ ವ್ರತ ಆಚರಣೆಯನ್ನು ನಂಬುತ್ತದೆ. ದೇಹನಗ್ನತೆಯಲ್ಲಿ ನಂಬಿಕೆ 4.

ಮೋಕ್ಷ ಸಾಧನೆಗೆ ಅಷ್ಟಾಂಗ ಮಾರ್ಗವನ್ನು ಒತ್ತಿ ಹೇಳಿದೆ. ನಗ್ನತೆಯಲ್ಲಿ ನಂಬಿಕೆ ಹೊಂದಿಲ್ಲ.

5. ಜೈನ ತೀರ್ಥಂಕರ ಪೂಜೆ 5. ಬೋಧಿಸತ್ವರ ಪೂಜೆ
6. ಹಿಂದೂ ಧರ್ಮದೊಂದಿಗೆ ನಿಕಟ ಸಂಬಂಧ ಹೊಂದಿದೆ 6. ಹಿಂದೂ ಧರ್ಮದಿಂದ ಸ್ವಲ್ಪ ಪ್ರತ್ಯೇಕ
7. ಪವಿತ್ರ ಗ್ರಂಥಗಳು – ಜೈನ ಅಂಗಗಳು 7. ಪವಿತ್ರ ಗ್ರಂಥಗಳು – ತ್ರಿಪಿಟಕಗಳು
8. ಸಂಘ ಜನಪ್ರಿಯವಾಗಿ ಸಂಘಟಿತವಾಗಿಲ್ಲ. 8. ಸಂಘ ಬಲಿಷ್ಠವಾಗಿ ಸಂಘಟನೆಗೊಂಡಿತ್ತು.
9. ನಿರ್ವಾಣ ಮತ್ತು ತ್ರಿರತ್ನಗಳಲ್ಲಿ ನಂಬಿಕೆ 9. ಅಷ್ಟಾಂಗ ಮಾರ್ಗದಲ್ಲಿ ನಂಬಿಕೆ
10. ಸ್ತ್ರೀಯರು, ಸಂಸಾರಿಗಳಿಗೆ ಮೋಕ್ಷ ಪಡೆಯಲು ಅರ್ಹರಲ್ಲ. 10. ಇದರಲ್ಲಿ ಅರ್ಹರಾಗಿರುತ್ತಾರೆ.
11. ಮುಕ್ತಿಯು ಮರಣದ ನಂತರ ಲಭಿಸುತ್ತದೆ. 11. ಮುಕ್ತಿ ಮರಣ ಮುನ್ನವೇ ಸಿಗುತ್ತದೆ.

ಹೀಗೆ ಜೈನ ಮತ್ತು ಬೌದ್ಧ ಧರ್ಮಗಳ ನಡುವೆ ಪರಸ್ಪರ ಹೋಲಿಕೆ ಮತ್ತು ವ್ಯತ್ಯಾಸಗಳಿದ್ದರೂ, ಇವೆರೆಡೂ ಮಾನವ ಕುಲಕೋಟಿಯ ಮೇಲೆ ತಮ್ಮದೇ ಆದ ಪ್ರಭಾವವನ್ನು ಬೀರಿವೆ.

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಬೌದ್ಧಧರ್ಮದ ಅಭ್ಯುದಯ ಮತ್ತು ಅವನತಿ

ಗೌತಮ ಬುದ್ಧನಿಂದ ಸಂಸ್ಥಾಪಿಸಲ್ಪಟ್ಟ ಬೌದ್ಧಪಂಥವು ಸಮಗ್ರ ಭಾರತದಾದ್ಯಂತ ಪ್ರಸರಣಗೊಂಡು ಚೀನಾ, ಜಪಾನ್, ಬರ್ಮ, ಮಲಯ, ನೇಪಾಳ, ಭೂತಾನ್, ಟಿಬೆಟ್, ಸಿಂಹಳಗಳಲ್ಲಿ ಪ್ರಚಾರಗೊಂಡಿತು. ಭಾರತದಲ್ಲಿ ಜನ್ಮತಾಳಿದ ಬೌದ್ಧಪಂಥವು ತಾಯ್ಯಾಡಿನಲ್ಲಿ ಕಣ್ಮರೆಯಾದರೂ ಹೊರರಾಷ್ಟ್ರಗಳಲ್ಲಿ ಇಂದಿಗೂ ಪ್ರಧಾನ ಧರ್ಮವಾಗಿಯೇ ಉಳಿದುಕೊಂಡಿದೆ, ಬೌದ್ಧಪಂಥದ ಅಭ್ಯುದಯಕ್ಕೆ ಹಲವಾರು ಪ್ರಮುಖ ಕಾರಣಗಳಿದ್ದವು.

ಎ) ಬುದ್ಧನ ವ್ಯಕ್ತಿತ್ವ : ಬೌದ್ಧಪಂಥದ ಅಭ್ಯುದಯಕ್ಕೆ ಪ್ರಮುಖ ಕಾರಣ ಬುದ್ಧನ ಆಕರ್ಷಕ ವ್ಯಕ್ತಿತ್ವ. ʻವಿಲ್‌ಡೂರೆಂಟ್’ ಅಭಿಪ್ರಾಯದಂತೆ ‘ಬುದ್ಧನು ಏಷ್ಯಾದ ಜ್ಯೋತಿ, ಕಾರುಣ್ಯಮೂರ್ತಿ ಮತ್ತು ಸ್ಥಿತಪ್ರಜ್ಞ’. ಬುದ್ಧನ ಆಕರ್ಷಕ ವ್ಯಕ್ತಿತ್ವಕ್ಕೆ ಮಾರುಹೋಗಿ ಬೌದ್ಧಮತಾವಲಂಬಿಗಳಾದರು.

ಬಿ) ಬೌದ್ಧ ಮಹಾಸಭೆಗಳು : ಬೌದ್ಧಧರ್ಮದ ಅಭ್ಯುದಯಕ್ಕೆ 4 ಬೌದ್ಧ ಮಹಾಸಭೆಗಳು ನಡೆದಿರುವುದು ಕಾರಣವಾಗಿದೆ.

ಬೌದ್ಧ ಸಮ್ಮೇಳನಗಳು

ಕ್ರಸಂ.

ವರ್ಷ

ಅಧ್ಯಕ್ಷತೆ

ಸ್ಥಳ

ಆಶ್ರಯದಾತ

ಉದ್ದೇಶ

1.

ಕ್ರಿ.ಪೂ 487

ಮಹಾಕಶ್ಯಪ

ರಾಜಗೃಹ

ಅಜಾತಶತೃ

ತ್ರಿಪಿಟಕಗಳ ರಚನೆ

2.

ಕ್ರಿ.ಪೂ 387

ಸಬಾಕಾಮಿ

ವೈಶಾಲಿ

ಕಾಲಾಶೋಕ

ಸಂಘ ತೇರವಾದಿ ಮತ್ತು ಮಹಾ ಸಾಂಘಿಕರಾಗಿ ವಿಭಜನೆ

3.

ಕ್ರಿ.ಪೂ 251

ಮೊಗ್ಗಲಿಪುತ್ರ

ಪಾಟಲೀಪುತ್ರ

ಅಶೋಕ

ವಿದೇಶಗಳಿಗೆ ಮಿಷನರಿಗಳ ನೇಮಕ, ಅಭಿಧಮ್ಮ ಪೀಟಕ ರಚನೆ

4.

ಕ್ರಿ.ಪೂ 100

ವಸುಮಿತ್ರ

ಕುಂಡಲಿವನ

ಕಾನಿಷ್ಕ

18 ಪಂಥಿಯರ ನಡುವೆ ಭಿನ್ನತೆ

5.

ಕ್ರಿ.ಪೂ 643

ಹೂಯೆನ್‌ತ್ಸಾಂಗ್

ಕನೂಜ್

ಹರ್ಷವರ್ಧನ

ಮತ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವುದು

ಸಿ) ಬೌದ್ಧಸಂಘದ ಪಾತ್ರ : ಧರ್ಮದ ಪ್ರಾಬಲ್ಯಕ್ಕೆ ಮತ್ತೊಂದು ಪ್ರಮುಖ ಕಾರಣ ಬೌದ್ಧಸಂಘದ ಕ್ರಿಯಾತ್ಮಕ ಕಾರ್ಯ ನಿರ್ವಹಣೆ. ಬೌದ್ಧಸಂಘದ ಸನ್ಯಾಸಿ-ಸನ್ಯಾಸಿನಿಯರು ಧರ್ಮದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದರು. ಹೀಗಾಗಿ ಧರ್ಮವು ಏಳಿಗೆಗೆ ಬಂದಿತು.

ಡಿ) ಧಾರ್ಮಿಕ ತತ್ವಗಳು ಮತ್ತು ಬೋಧನೆಯ ಭಾಷೆ : ಧರ್ಮದ ಪ್ರವರ್ಧಮಾನಸ್ಥಿತಿಗೆ ಮೂಲಕಾರಣ ಧರ್ಮದ ತತ್ವಗಳು, ನಾಲ್ಕು ಆರ್ಯಸತ್ಯಗಳು ಮತ್ತು ಅಷ್ಟಾಂಗಸಿದ್ಧ ಮಾರ್ಗಗಳು ಜನಸಾಮಾನ್ಯರಿಗೆ ಆಕರ್ಷಿತವಾದವು. ಧಾರ್ಮಿಕ ತತ್ವಗಳನ್ನು ಸರಳ ಮತ್ತು ಸುಲಭ ಭಾಷೆಯಲ್ಲಿ (ಪಾಳಿಭಾಷೆಯಲ್ಲಿ) ಬೋಧಿಸಲಾಯಿತು. ಇದು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಾಗಿತ್ತು.

ಬೌದ್ಧ ಧರ್ಮದ ಅವನತಿ

ಪ್ರಾಚೀನ ವಿಶ್ವದ ಪ್ರಮುಖ ಧರ್ಮವಾಗಿದ್ದ ಬೌದ್ಧಪಂಥವು ಭಾರತದಲ್ಲಿ ಪತನದ ಸ್ಥಿತಿ ತಲುಪಿತ್ತು. ಬೌದ್ಧಧರ್ಮದ ಅವನತಿಗೆ ಹಲವಾರು ಕಾರಣಗಳಿದ್ದವು.

1. ಧಾರ್ಮಿಕ ವಿಂಗಡಣೆ : ಬೌದ್ಧಪಂಥದ ವಿಭಜನೆಯು ಧರ್ಮದ ಅವನತಿಗೆ ಒಂದು ಪ್ರಮುಖ ಕಾರಣವಾಯಿತು. ಕಾನಿಷ್ಕನ ಆಳ್ವಿಕೆಯ ವೇಳೆಗೆ ಬೌದ್ಧಪಂಥವು ಹೀನಯಾನ ಮತ್ತು ಮಹಾಯಾನ ಬೌದ್ಧ ಪಂಥಗಳೆಂದು ವಿಂಗಡಿಸಲ್ಪಟ್ಟಿತು. ಧಾರ್ಮಿಕ ಅನೈಕ್ಯತೆಯು ಧರ್ಮದ ಅವನತಿಗೆ ಒಂದು ಕಾರಣವಾಯಿತು. ಬುದ್ಧನ ತತ್ವಗಳ ಅವಲಂಭಿಸಿ ಮೂರ್ತಿ ಪೂಜೆಯನ್ನು ಅವಲಂಬಿಸಿದವರು ಮಹಾಯಾನ ಪಂಥದವರಾದರು. ಬುದ್ಧನತತ್ವಗಳ ಅವಲಂಭಿಸಿ ಸರಳನಿಯಮ ಪಾಲಿಸಿದವರು ಹೀನಯಾನ ಪಂಥದವರಾದರು.

2. ರಾಜರ ಪ್ರೋತ್ಸಾಹ ದೊರಕದಿದ್ದುದು : ರಾಜರ ಆಶ್ರಯ ಮತ್ತು ಪ್ರೋತ್ಸಾಹ ಪಡೆದು ಪ್ರಾಬಲ್ಯಕ್ಕೆ ಬಂದ ಬೌದ್ಧಧರ್ಮವು ಕ್ರಮೇಣ ರಾಜರ ಆಶ್ರಯವಿಲ್ಲದೆ ಅವನತಿಯತ್ತ ಸಾಗಲು ಕಾರಣವಾಯಿತು.

3. ವೈದಿಕ ಪಂಥದ ಪುನರುಜ್ಜಿವನ : ಚೌದ್ಧಧರ್ಮವು ವಿಂಗಡಣೆಗೊಂಡು ಅವನತಿಯತ್ತ ಸಾಗುತ್ತಿದ್ದಾಗ ಶಂಕರಾಚಾರ್ಯ ಮತ್ತು ಕುಮಾರಿಲಭಟ್ಟರು ವೈದಿಕ ಪಂಥದ ಪುನರುಜ್ಜಿವನ ಕಾರ್ಯ ಕೈಗೊಂಡಿದ್ದರಿಂದ ವೈದಿಕ ಪಂಥವು ಮತ್ತೆ ಪ್ರಾಬಲ್ಯಕ್ಕೆ ಬಂದಿತು.

4. ಮಹಮ್ಮದೀಯರ ಧಾಳಿಗಳು : ಭಾರತವನ್ನು ಪ್ರವೇಶಿಸಿದ ಟರ್ಕೊ-ಅಫ್‌ಘನ್ನರು ದೆಹಲಿ ಸುಲ್ತಾನರು ‘ಜಸಿಯಾ’ ತಲೆಗಂದಾಯ ಜಾರಿಗೆ ತಂದು ಹಿಂದೂಗಳನ್ನು ಇಸ್ಲಾಂ ಪಂಥಕ್ಕೆ ಪರಿವರ್ತಿಸುವ ಕಾರ್ಯ ಕೈಗೊಂಡರು. ಬೌದ್ಧಕಲಾಸ್ಮಾರಕಗಳನ್ನು ಶಿಥಿಲಗೊಳಿಸಿದರು. ಹೀಗೆ ಮಹಮ್ಮದೀಯರ ಧಾಳಿಯೂ ಸಹ ಬೌದ್ಧಧರ್ಮದ ಅವನತಿಗೆ ಕಾರಣವಾಯಿತು.

5. ಸಂಸ್ಕೃತ ಭಾಷೆಯ ಬಳಕೆ : ಬೌದ್ಧ ಪಂಥದ ಅವನತಿಗೆ ಪಾಳಿಭಾಷೆಗೆ ಬದಲು ಸಂಸ್ಕೃತ ಭಾಷೆಯ ಬಳಸಿದ್ದರಿಂದ ಈ ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗಲಿಲ್ಲ. ಅರ್ಥವಾಗದ ಭಾಷೆಯ ಬಳಕೆಯು ಅವನತಿಗೆ ಒಂದು ಕಾರಣವಾಯಿತು.

6. ಬೌದ್ಧಸಂಘದ ನಿಷ್ಕ್ರಿಯತೆ : ಬೌದ್ಧಧರ್ಮದ ಏಳಿಗೆಗೆ ಕಾರಣವಾಗಿದ್ದ ಬೌದ್ಧಸಂಘವು ಧರ್ಮದ ಅವನತಿಗೂ ಕಾರಣವಾಯಿತು. ಬೌದ್ಧ ಸಂಘದ ಸನ್ಯಾಸಿ-ಸನ್ಯಾಸಿನಿಯರು ಧಾರ್ಮಿಕ ನಿಷ್ಠೆಯನ್ನು ಮರೆತರು. ವೈಯುಕ್ತಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿದರು. ಧರ್ಮದ ಪಾವಿತ್ರತೆಯನ್ನು ಸಂಘವು ನಿರ್ಲಕ್ಷಿಸಿತು. ಬೌದ್ಧ ಸಂಘದ ನಿಷ್ಕ್ರಿಯತೆಯೂ ಧರ್ಮದ ಅವನತಿಗೆ ಪ್ರಮುಖ ಕಾರಣವಾಯಿತು.

ಉಪಸಂಹಾರ:

ಆಧುನಿಕ ಭಾರತದಲ್ಲಿ ಬೌದ್ಧ ಧರ್ಮವು ಮತ್ತೆ ತಲೆ ಎತ್ತುತ್ತಿದ್ದು ಇದಕ್ಕೆ ಸಂವಿಧಾನ ಶಿಲ್ಪಿಯಾದ ಡಾ.ಬಿ.ಆರ್‌.ಅಂಬೇಡ್ಕರ್‌ ಬೌದ್ಧ ಧರ್ಮಕ್ಕೆ ಮತಾಂತರವಾದದ್ದು ಪ್ರಮುಖವಾದ ಕಾರಣವಾಗಿದೆ. ಮುಖ್ಯವಾಗಿ ಬುದ್ಧನ ವ್ಯಕ್ತಿತ್ವದ ಸೂಜಿಗಲ್ಲಿನ ಸೆಳೆತ ಕಾಲಾತೀತವಾದದ್ದು.

ಮೌರ್ಯರ ಆಡಳಿತ ವ್ಯವಸ್ಥೆ

ಮೌರ್ಯರ ಆಡಳಿತ ವ್ಯವಸ್ಥೆ

ಪೀಠಿಕೆ:

ಪ್ರಾಚೀನ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಅಖಂಡ ಮತ್ತು ಐತಿಹಾಸಿಕ ಸಾಮ್ರಾಜ್ಯ ನಿರ್ಮಿಸಿದ ಮೌರ್ಯರು ಸುಭದ್ರ ಮತ್ತು ಸುವ್ಯವಸ್ಥಿತ ಆಡಳಿತವನ್ನು ಸಂಸ್ಥಾಪಿಸಿದ್ದರು. ಇಂತಹ ಆಡಳಿತವು ಮಾದರಿಯಾದ ಒಂದು ಆಡಳಿತವೆಂದು ತಿಳಿದುಬರುತ್ತದೆ. ಮೌರ್ಯರ ಆಡಳಿತ ವ್ಯವಸ್ಥೆಯನ್ನು ಸಮಗ್ರವಾಗಿ ತಿಳಿದುಕೊಳ್ಳಲು ಸಹಾಯಕವಾಗಿರುವ ಆಧಾರಗಳೆಂದರೆ ಕೌಟಿಲ್ಯನ ಅರ್ಥಶಾಸ್ತ್ರ, ಮೆಗಾಸ್ಥನೀಸನ ಇಂಡಿಕಾ ಮತ್ತು ಅಶೋಕನ ಶಾಸನಗಳು ಹಾಗು ವಿದೇಶಿಯರ ಬರಹಗಳು ಮೊದಲಾದ ಆಕರಗಳು ಮೌರ್ಯರ ಆಡಳಿತದ ಸ್ಪಷ್ಟ ಚಿತ್ರಣ ನೀಡುತ್ತವೆ. ಉತ್ತುಂಗ ಸ್ಥಿತಿಯಲ್ಲಿ ಮೌರ್ಯರ ಪ್ರಭುತ್ವವು ಉತ್ತರದಲ್ಲಿ ಪರ್ಶಿಯಾದಿಂದ ದಕ್ಷಿಣದಲ್ಲಿ ಕರ್ನಾಟಕ ದವರೆಗೂ ವಿಸ್ತರಿಸಿತ್ತು. ಇಂತಹ ಮೌರ್ಯ ಪ್ರಭುತ್ವದ ಆಡಳಿತದಲ್ಲಿ ಕೆಲವು ಪ್ರಮುಖ ಲಕ್ಷಣಗಳು ಕಂಡು ಬರುತ್ತವೆ. ಅವುಗಳೆಂದರೆ

  1. ಪ್ರಬಲ ಕೇಂದ್ರೀಕೃತ ಆಡಳಿತ : ಮೌರ್ಯರ ಆಡಳಿತವು ಭಾಗಶಃ ಕೇಂದ್ರೀಕೃತವೂ ಮತ್ತು ಭಾಗಶಃ ವಿಕೇಂದ್ರೀಕೃತವೂ ಆದ ಲಕ್ಷಣಗಳನ್ನು ಒಳಗೊಂಡಿತ್ತು. ಹರಿದು ಹಂಚಿಹೋಗಿದ್ದ ಭಾರತವನ್ನು ಏಕಚಕ್ರಾಧಿಪತ್ಯಕ್ಕೆ ತರುವ ಮೂಲಕ ಭಾರತದಲ್ಲಿ ರಾಜಕೀಯ ಸ್ಥಿರತೆಯನ್ನು ಸ್ಥಾಪಿಸಿದ್ದರು. ರಾಜ ಮತ್ತು ಮಂತ್ರಿಪರಿಷತ್ ಮೂಲಕ ಕೇಂದ್ರಾಡಳಿತವು ಪ್ರಬಲವಾಗಿ ಬೆಳೆದದ್ದು ಕಂಡುಬರುತ್ತದೆ.
  2. ಸಾಂಕುಶ ಪ್ರಜಾಪ್ರಭುತ್ವ : ಮೌರ್ಯರ ಆಡಳಿತ ವ್ಯವಸ್ಥೆಯ ಒಂದು ಗುಣಾತ್ಮಕ ಲಕ್ಷಣವೆಂದರೆ ಸಾಂಕುಶ ಪ್ರಭುತ್ವದ ಸ್ಥಾಪನೆ. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದರಿಂದ ಅದು ನಿರಂಕುಶ ಆಡಳಿತಾಧಿಕಾರವೆಂದು ಗುರುತಿಸಿದ್ದರೂ, ಆಡಳಿತ ಮಾತ್ರ ಸಾಂಕುಶ ರೀತಿಯದಾಗಿತ್ತು. ರಾಜನು ಪ್ರಜಾ ಅಭ್ಯುದಯಕ್ಕಾಗಿ ಆಡಳಿತವನ್ನು ಬಳಸಿದ್ದು ಪ್ರಧಾನವಾಗಿ ಕಂಡುಬರುತ್ತದೆ.
  3. ವಿಕೇಂದ್ರೀಕೃತ ಆಡಳಿತ: ಮೌರ್ಯರ ಆಡಳಿತ ವ್ಯವಸ್ಥೆಯ ಮತ್ತೊಂದು ಪ್ರಧಾನ ಲಕ್ಷಣವೆಂದರೆ ವಿಕೇಂದ್ರೀಕೃತ ಆಡಳಿತದ ಸ್ಥಾಪನೆ. ವಿಶಾಲ ಸಾಮ್ರಾಜ್ಯವನ್ನು ಏಕವ್ಯಕ್ತಿಯ, ಅರಸೊತ್ತಿಗೆಯ ಆಡಳಿತಕ್ಕೊಳಪಡಿಸುವುದು ಕಠಿಣವೆಂಬ ದೃಷ್ಟಿಯಿಂದ ವಿಕೇಂದ್ರೀಕರಣಕ್ಕೆ ಹೆಚ್ಚು ಮಹತ್ವ ನೀಡಲಾಗಿತ್ತು. ವಿಕೇಂದ್ರೀಕೃತ ಆಡಳಿತದಲ್ಲಿ ಪ್ರಾಂತ್ಯಾಡಳಿತ, ಜಿಲ್ಲೆಯ ಆಡಳಿತ ಮತ್ತು ನಗರಾಡಳಿತಗಳು ಕಂಡುಬರುತ್ತಿದ್ದವು.

1. ಕೇಂದ್ರಾಡಳಿತ.

ಕೇಂದ್ರಾಡಳಿತವು ರಾಜ ಮತ್ತು ಮಂತ್ರಿ ಪರಿಷತ್ ಮೂಲಕ ನಡೆಯುತ್ತಿತ್ತು.

ಅರಸ : ಕೇಂದ್ರಾಡಳಿತದ ಕೇಂದ್ರಬಿಂದು ರಾಜನಾಗಿದ್ದನು. ರಾಜನ ಆಯ್ಕೆಯು ಸಾಮಾನ್ಯವಾಗಿ ವಂಶಪಾರಂಪರ್ಯವಾಗಿತ್ತು. ಅಲ್ಲದೆ ದಕ್ಷತೆ ಮತ್ತು ಅರ್ಹತೆಯ ಆಧಾರದ ಮೇಲೂ ರಾಜನ ಆಯ್ಕೆಯಾಗುತ್ತಿತ್ತು. ಉದಾ:-ಅಶೋಕ ಮಹಾಶಯ ದಕ್ಷತೆಯ ಆಧಾರದ ಮೇಲೆ ಅರಸನಾಗಿದ್ದನು. ರಾಜನಿಗೆ ಅಪರಿಮಿತ ಅಧಿಕಾರಗಳಿದ್ದವು. ಸಾಮಾನ್ಯ ಆಡಳಿತಗಾರನಾಗಿ, ಅತ್ಯುಚ್ಛ ನ್ಯಾಯಾದೀಶನಾಗಿ, ಶ್ರೇಷ್ಠ ದಂಡನಾಯಕನಾಗಿ ರಾಜನು ಕಾರ್ಯ ನಿರ್ವಹಿಸುತ್ತಿದ್ದನು. ರಾಜನಿಗೆ ಅಧಿಕಾರಗಳ ದೃಷ್ಟಿಯಿಂದ ನಿರಂಕುಶಾಧಿಕಾರಿಯಾದರೂ ಆಡಳಿತ ಮಾತ್ರ ಪ್ರಜಾಹಿತಕಾರಿಯಾಗಿತ್ತು. ಪ್ರಜಾ ಅಭ್ಯುದಯವೇ ರಾಜನ ಅಭ್ಯುದಯವೆಂಬ ದೃಷ್ಠಿಯಿಂದ ರಾಜನು ಆಡಳಿತ ನಡೆಸುತ್ತಿದ್ದನು. ಕೌಟಿಲ್ಯನ ಅರ್ಥಶಾಸ್ತ್ರ, ಮೌರ್ಯರ ಆಡಳಿತಕ್ಕೆ ಮಾರ್ಗದರ್ಶಕವಾಗಿತ್ತು.

ಮಂತ್ರಿ ಪರಿಷತ್ : ರಾಜನು ಆಡಳಿತ ನಿರ್ವಹಣೆಯಲ್ಲಿ ಮಂತ್ರಿಪರಿಷತ್‌ನ್ನು ಸ್ಥಾಪಿಸಿಕೊಂಡಿದ್ದನು. ಒಂದು ಗಾಡಿ ಉರುಳಲು ಎರಡು ಚಕ್ರಗಳ ಸಹಾಯದಂತೆ ರಾಜ್ಯಾಡಳಿತ ನಡೆಸಲು ರಾಜ ಮತ್ತು ಮಂತ್ರಿಪರಿಷತ್ ಪರಸ್ಪರ ಸಹಕರಿಸಿ ಆಡಳಿತ ನಡೆಸಬೇಕಾಗಿತ್ತು. ರಾಜನು ರಾಜ್ಯದ ಸಪ್ತಾಂಗಗಳಲ್ಲಿ ಒಂದು ಅಂಗ ಮಾತ್ರ ಉಳಿದವು ಗಳೆಂದರೆ ಅಮಾತ್ಯ, ಕೋಶ(ಖಜಾನೆ), ಬಲ(ಸೇನೆ), ಜನಪದ(ಪ್ರಾಂತ್ಯ), ದುರ್ಗ(ಕೋಟೆ) ಮತ್ತು ಮಿತ್ರ(ನೆರೆರಾಜ್ಯ). ಮಂತ್ರಿಗಳನ್ನು ಆಯ್ಕೆಮಾಡುವಾಗ ದಕ್ಷತೆ, ಅರ್ಹತೆ, ವಿದ್ಯೆ ಮತ್ತು ಕಾನೂನಿನ ಪರಿಜ್ಞಾನ ಹೊಂದಿರುವವರನ್ನು ಮಾತ್ರ ಆರಿಸಲಾಗುತ್ತಿತ್ತು. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲ್ಪಟ್ಟಿರುವಂತೆ ಮಂತ್ರಿಪರಿಷತ್ ರಚನೆ ಮತ್ತು ಕಾರ್ಯನಿರ್ವಹಣೆಯ ವಿವರಗಳು ಸ್ಪಷ್ಟವಾಗಿ ತಿಳಿದುಬರುತ್ತವೆ. ಮಂತ್ರಿಪರಿಷತ್‌ ಸದಸ್ಯರ ಸಂಖ್ಯೆಯು ಅವಶ್ಯಕತೆಯನ್ನು ಆಧರಿಸಿತ್ತು. ವರ್ಷಕ್ಕೆ 12,000 ಪಣಗಳನ್ನು ಸಂಭಾವನೆಯಾಗಿ ಮಂತ್ರಿಗಳಿಗೆ ನೀಡಲಾಗುತ್ತಿತ್ತು. ಮಂತ್ರಿಪರಿಷತ್ ಸಭೆಯನ್ನು ಅರಸನ ಅಧ್ಯಕ್ಷತೆಯಲ್ಲಿ ನಡೆಸಲಾಗುತ್ತಿತ್ತು. ಮಂತ್ರಿ ಪರಿಷತ್‌ನ ಕಾರ್ಯಚಟುವಟಿಕೆಗಳ ವಿವರಗಳನ್ನು ಗುಪ್ತವಾಗಿ ಇಡಲಾಗುತ್ತಿತ್ತು.

ಮೌರ್ಯರು ತಮ್ಮ ಆಡಳಿತವನ್ನು 18 ವಿವಿಧ ಇಲಾಖೆಗಳಲ್ಲಿ ವಿಭಾಗಿಸಿದ್ದರು. ಪ್ರತಿಯೊಂದು ಇಲಾಖೆಯನ್ನು ಮೇಲ್ವಿಚಾರಕನ ಅಧೀನಕ್ಕೊಳಪಡಿಸಲಾಗಿತ್ತು. ಅಂತಹ ಇಲಾಖೆಗಳೆಂದರೆ ಖಜಾನೆ, ಗಣಿ, ವಿದೇಶಾಂಗ, ಅರಣ್ಯ, ತೂಕ ಅಳತೆ, ಶಸ್ತ್ರಾಗಾರ, ಸುಂಕ, ನೇಯ್ದೆ, ಕೃಷಿ, ಅಬಕಾರಿ, ವೇಶೈಯರು, ಬಂದೀಖಾನೆ, ರಸ್ತೆ, ಬಂದರು. ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ ಮೊದಲಾದವು

2. ಪ್ರಾಂತೀಯ ಆಡಳಿತ :

ವಿಶಾಲವಾದ ಮೌರ್ಯಚಕ್ರಾಧಿಪತ್ಯವನ್ನು ಆಡಳಿತದ ಅನುಕೂಲತೆಯ ದೃಷ್ಟಿಯಿಂದ ಪ್ರಾಂತೀಯ ಆಡಳಿತದಲ್ಲಿ ಸಂಘಟಿಸಲಾಗಿತ್ತು. ಪ್ರಾಂತ್ಯಗಳು ವಿಭಜನೆಯ ದೃಷ್ಟಿಯಿಂದ ಏಕರೂಪವಾಗಿರಲಿಲ್ಲ. ಕೆಲವು ದೊಡ್ಡ ಪ್ರಾಂತ್ಯಗಳಿದ್ದರೆ ಹಲವು ಚಿಕ್ಕ ಪ್ರಾಂತ್ಯಗಳಿದ್ದವು. ಚಂದ್ರಗುಪ್ತನ ಕಾಲಾವಧಿಯಲ್ಲಿನ ಪ್ರಾಂತೀಯ ಆಡಳಿತದ ಸ್ಪಷ್ಟ ಚಿತ್ರಣ ದೊರಕುವುದಿಲ್ಲ. ಆದರೆ ಅಶೋಕ, ಮೌರ್ಯನ ಕಾಲದಲ್ಲಿ ಕಳಿಂಗ, ತಕ್ಷಶಿಲೆ, ಉಜ್ಜಯನಿ ಮತ್ತು ಸುವರ್ಣಗಿರಿ ಎಂಬ ನಾಲ್ಕು ಪ್ರಾಂತ್ಯಗಳಿದ್ದವೆಂದು ತಿಳಿದು ಬರುತ್ತದೆ.

ರಾಜಪ್ರತಿನಿಧಿ : ಪ್ರಾಂತ್ಯಾಡಳಿತದ ಮುಖ್ಯಸ್ಥನನ್ನು ರಾಜಪ್ರತಿನಿಧಿ ಅಥವಾ ಗೌರ್ನರ್ ಎಂದು ಹೆಸರಿಸ ಲಾಗಿತ್ತು. ಯುವರಾಜ ಅಥವಾ ರಾಜನ ಸಂಬಂಧಿಗಳು ಪ್ರಾಂತ್ಯಾಡಳಿತವನ್ನು ನೋಡಿಕೊಳ್ಳುತ್ತಿದ್ದರು. ಪ್ರಾಂತೀಯ ಆಡಳಿತವು ಸಹ ಕೇಂದ್ರಾಡಳಿತದಂತೆಯೇ ಸುವ್ಯವಸ್ಥಿತ ಆಡಳಿತವಾಗಿತ್ತು. ಪ್ರಾಂತ್ಯಗಳ ಸಾಮಾನ್ಯ ಆಡಳಿತ ನೋಡಿಕೊಳ್ಳುವುದು, ನ್ಯಾಯಪರಿಪಾಲನೆ ಮತ್ತು ಶಿಸ್ತು ಸ್ಥಾಪನೆಯು ಗೌರ್ನರ್‌ನ ಕರ್ತವ್ಯವಾಗಿತ್ತು. ಪ್ರಾಂತ್ಯಗಳಲ್ಲಿನ ಸುಂಕವನ್ನು ವಸೂಲಿಮಾಡಿ ಖಜಾನೆಗೆ ಸಲ್ಲಿಸಬೇಕಾಗಿತ್ತು. ಅಲ್ಲದೆ ಪ್ರಾಂತ್ಯದ ಪರಿಸ್ಥಿತಿಯ ಬಗ್ಗೆ ವರದಿಯನ್ನು ಸಹ ಸಲ್ಲಿಸಬೇಕಾಗಿತ್ತು.

ಪ್ರಾಂತ್ಯಗಳಲ್ಲಿ ಸುವ್ಯವಸ್ಥಿತ ಆಡಳಿತಕ್ಕಾಗಿ ಹಲವು ಅಧಿಕಾರಿಗಳನ್ನು ನೇಮಿಸಲಾಗಿತ್ತು. ಅವರೆಂದರೆ, ರಾಜುಕರು, ಯುಕ್ತರು, ಪ್ರಾದೇಶಿಕರು ಮತ್ತು ಪುರುಷರು. ಆದರೆ ಇವರುಗಳ ಕಾರ್ಯನಿರ್ವಹಣೆಯ ಬಗ್ಗೆ ಏಕಾಭಿಪ್ರಾಯವಿಲ್ಲ ಪ್ರಾಂತ್ಯಗಳನ್ನು ಆಹರ, ವಿಷಯ ಹಾಗೂ ಪ್ರದೇಶಗಳೆಂದು ಸಹ ವಿಭಾಗಿಸಲಾಗಿತ್ತು.

3. ಜಿಲ್ಲೆಯ ಆಡಳಿತ:

ಪ್ರಾಂತ್ಯದ ಆಡಳಿತದ ಕೆಳಹಂತದಲ್ಲಿ ಜಿಲ್ಲೆಯ ಆಡಳಿತವಿದ್ದಿತು. ಪ್ರತಿಯೊಂದು ಜಿಲ್ಲೆ ಯಲ್ಲಿಯೂ ‘ಸ್ಥಾನಿಕರು’ ಆಡಳಿತ ನೋಡಿಕೊಳ್ಳುತ್ತಿದ್ದರು. ಜಿಲ್ಲೆಯ ಕಂದಾಯ ವಸೂಲಾತಿ, ನ್ಯಾಯಪರಿಪಾಲನೆ ಮತ್ತು ಶಿಸ್ತಿನ ಸ್ಥಾಪನೆ, ಸ್ಥಾನಿಕ ಆಡಳಿತಗಾರನ ಆದ್ಯ ಕರ್ತವ್ಯವಾಗಿತ್ತು. ಸ್ಥಾನಿಕನ ಸಹಾಯಕ್ಕೆ ಗೋಪ ಎಂಬ ಅಧಿಕಾರಿಯಿದ್ದನು. ಸ್ಥಾನಿಕನ ಆಡಳಿತವನ್ನು ಇಂದಿನ ಜಿಲ್ಲಾಧಿಕಾರಿಗಳ ಆಡಳಿತಕ್ಕೆ ಹೋಲಿಸಬಹುದು.

4. ನಗರಾಡಳಿತ (ಪಾಟಲೀಪುತ್ರದ ಆಡಳಿತ ವ್ಯವಸ್ಥೆ)

ಮೆಗಾಸ್ಥನೀಸನ ಇಂಡಿಕಾ ಕೃತಿಯು ಮೌರ್ಯರ ನಗರಾಡಳಿತದ ಬಗ್ಗೆ ಸ್ಪಷ್ಟ ವಿವರ ನೀಡುತ್ತದೆ. ಮೌರ್ಯರ ಕಾಲದ ನಗರಾಡಳಿತಕ್ಕೆ ಪಾಟಲೀಪುತ್ರವು ಸ್ಪಷ್ಟ ಉದಾಹರಣೆಯಾಗಿತ್ತು. ಪಾಟಲೀಪುತ್ರದ ಆಡಳಿತವು ಮಾದರಿಯಾದ ನಗರಾಡಳಿತಕ್ಕೆ ಸ್ಪಷ್ಟ ನಿದರ್ಶನವೆನಿಸಿದೆ. ನಗರಾಡಳಿತವನ್ನು ನೋಡಿಕೊಳ್ಳಲು 30 ಅಧಿಕಾರಿಗಳಿದ್ದರು. ಆರು ಸಮಿತಿಗಳಿದ್ದು(ಮಂಡಳಿ) ಪ್ರತಿ ಸಮಿತಿಯಲ್ಲೂ ಐದು ಜನ ಸದಸ್ಯರಿದ್ದರು. ಪ್ರತಿ ಸಮಿತಿಯು ಒಂದೊಂದು ನಿರ್ದಿಷ್ಟ ಕಾರ್ಯವನ್ನು ನಿರ್ವಹಿಸಬೇಕಾಗಿತ್ತು.

  1. ಕೈಗಾರಿಕಾ ಸಮಿತಿ : ಈ ಸಮಿತಿಯು ಕೈಗಾರಿಕೆ ಮತ್ತು ಕರಕುಶಲತೆಯನ್ನು ನೋಡಿಕೊಳ್ಳುತ್ತಿತ್ತು. ಅಂದರೆ ಸರಕುಗಳ ಉತ್ಪಾದನೆಯಲ್ಲಿ ಉತ್ತಮ ಕಚ್ಚಾಸರಕುಗಳನ್ನು ಬಳಸಲಾಗಿದೆಯೇ ಅಥವಾ ಇಲ್ಲವೆ ಎಂಬ ಬಗ್ಗೆ.
  2. ವಿದೇಶಿಯರ ಚಲನ ವಲನ ಸಮಿತಿ : ಈ ಸಮಿತಿಯು ವಿದೇಶಿಯರ ಯೋಗಕ್ಷೇಮವನ್ನು ನೋಡಿಕೊಳ್ಳುತಿತ್ತು. ವಿದೇಶಿಯರ ವಸತಿ, ವೈದ್ಯಕೀಯ ಮತ್ತು ಸಂರಕ್ಷಣೆಯ ಜವಾಬ್ದಾರಿ, ಪ್ರವಾಸದ ಸಂದರ್ಭದಲ್ಲಿ ಮರಣ ಹೊಂದಿದ ವಿದೇಶಿಯರ ಸರಕುಗಳನ್ನು ಅವರ ಸಂಬಂಧಿಗಳಿಗೆ ತಲುಪಿಸುವುದು.
  3. ಜನಗಣತಿ ಸಮಿತಿ : ಈ ಸಮಿತಿಯ ಜವಾಬ್ದಾರಿ ಜನನ-ಮರಣಗಳ ದಾಖಲೆಯ-ಸಂಗ್ರಹಣೆ ಮತ್ತು ವರದಿ ನೀಡಿಕೆ.
  4. ವ್ಯಾಪಾರ ಮತ್ತು ವಾಣಿಜ್ಯ ಸಮಿತಿ : ಈ ಸಮಿತಿಯು ವ್ಯಾಪಾರ ಮತ್ತು ವಾಣಿಜ್ಯವನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಹೊಂದಿತ್ತು.
  5. ಸರಕು ಮೇಲ್ವಿಚಾರಣ ಸಮಿತಿ : ಸರಕುಗಳ ಮೇಲ್ವಿಚಾರಣೆಯನ್ನು ಮಾಡುತಿತ್ತು. ಸರಕುಗಳ ವಿಕ್ರಯಕಾರ್ಯ ಮತ್ತು ಸರಕುಗಳ ಕಲಬೆರೆಕೆಯನ್ನು ತಡೆಯುವುದು ಈ ಸಮಿತಿಯ ಕಾರ್ಯವಾಗಿತ್ತು.
  6. ತೆರಿಗೆ ವಸೂಲಿ ಸಮಿತಿ : ಈ ಸಮಿತಿಯು ಮಾರಾಟವಾಗುತ್ತಿದ್ದ ಸರಕುಗಳ ಮೇಲೆ 1/10 ರಷ್ಟು ಕರವನ್ನು ವಸೂಲಿ ಮಾಡುವ ಜವಾಬ್ದಾರಿಯನ್ನು ಹೊಂದಿತ್ತು. ಹೀಗೆ ವಿವಿಧ ಸಮಿತಿಗಳು ವಿಭಿನ್ನ ಆಡಳಿತ ಸಂಘಟನೆಯನ್ನು ನೋಡಿಕೊಳ್ಳುತ್ತಿದ್ದವು.

ನೌಕಾ ಸಮಿತಿ, ರಥ ಸಮಿತಿ,

ಕಾಲ್ಗಳ ಸಮಿತಿ, ಗಜದಳ ಸಮಿತಿ,

ಸಾರಿಗೆ ಮತ್ತು ಸರಬರಾಜು ಸಮಿತಿ. ಅಶ್ವದಳ ಸಮಿತಿ,

ಮೌರ್ಯರು ವ್ಯವಸ್ಥಿತ ಸೈನಾಡಳಿತ ಹೊಂದಿದ್ದರಿಂದ ವಿಶಾಲಸಾಮ್ರಾಜ್ಯ ನಿರ್ಮಿಸಿ ದಕ್ಷ ಆಡಳಿತ ನಡೆಸಿದರು.

5. ಗೂಢಾಚಾರ ವ್ಯವಸ್ಥೆ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ಗುಪ್ತ ಗೂಢಾಚಾರ ಪದ್ಧತಿಯನ್ನು ಹೊಂದಿದ್ದರು. ಗೂಢಾಚಾರರನ್ನು ರಾಜನ ಕಣ್ಣುಗಳು ಹಾಗೂ ಕಿವಿಗಳು ಎಂದೇ ಭಾವಿಸಲಾಗಿತ್ತು. ಗೂಢಾಚಾರರು ಸಾಮ್ರಾಜ್ಯದ ದೈನಂದಿನ ಚಟುವಟಿಕೆಗಳಲ್ಲದೆ, ಮುಖ್ಯವಾದ ರಹಸ್ಯ ವಿಚಾರಗಳನ್ನು ಸಂಗ್ರಹಿಸಿ ಅರಸನಿಗೆ ವರದಿ ಒಪ್ಪಿಸುತ್ತಿದ್ದರು. ಗೂಢಾಚಾರರು ಮಂತ್ರಿಗಳು ಮತ್ತು ರಾಣಿಯರ ಚಟುವಟಿಕೆಗಳ ಮೇಲೂ ಗಮನ ಹರಿಸಬೇಕಾಗಿತ್ತು. ಗೂಢಾಚಾರರು ತಪ್ಪು ವರದಿಯನ್ನು ಸಲ್ಲಿಸಿದರೆ ಅಂತಹವರಿಗೆ ಕಠಿಣ ಶಿಕ್ಷೆ ನೀಡಲಾಗುತಿತ್ತು.

6. ಕಂದಾಯ ಆಡಳಿತ

ಮೌರ್ಯರು ತಮ್ಮ ಆಡಳಿತದ ಅವಧಿಯಲ್ಲಿ ವ್ಯವಸ್ಥಿತವಾದ ಕಂದಾಯದ ಆಡಳಿತವನ್ನು ಜಾರಿಗೆ ತಂದಿದ್ದರು. ವಿವಿಧ ಆದಾಯದ ಮೂಲಗಳಿಂದ ಆದಾಯವನ್ನು ಸಂಗ್ರಹಿಸಿ ಖಜಾನೆಯನ್ನು ಸುಸ್ಥಿತಿಯಲ್ಲಿಡಲು ಪ್ರಯತ್ನಿಸಿದರು. ಆರ್ಥಿಕ ದುಸ್ಥಿತಿ ಉಂಟಾಗದಂತೆ ಗಮನ ಹರಿಸುತ್ತಿದ್ದರು. ಮೌರ್ಯರು ತಾತ್ವಿಕ ನೆಲೆಗಟ್ಟಿನ ಆಧಾರದ ಮೇಲೆ ತೆರಿಗೆಯನ್ನು ವಸೂಲಿ ಮಾಡುತ್ತಿದ್ದರು. ತೆರಿಗೆ ನಿಗದಿಗೊಳಿಸುವಾಗ ಉದಾರ ನೀತಿಯನ್ನು ಅನುಸರಿಸಲಾಗುತಿತ್ತು.

  • ಭೂಕಂದಾಯವು ಸಾಮ್ರಾಜ್ಯದ ಆದಾಯದ ಮೂಲಗಳಲ್ಲಿ ಪ್ರಮುಖವಾಗಿತ್ತು. ಭೂಮಿಯ ಗುಣಮಟ್ಟವನ್ನು ಆಧರಿಸಿ ಉತ್ಪಾದನೆಯ 1/6 ರಿಂದ 1/4ರಷ್ಟು ಭೂಕಂದಯವನ್ನು ವಸೂಲಿಮಾಡಲಾಗುತಿತ್ತು.
  • ಪ್ರಾಣಿಗಳ ಮೇಲೆ ತೆರಿಗೆಯನ್ನು ಹಾಕುವ ಕ್ರಮ ಅನುಸರಣೆಯಲ್ಲಿತ್ತು. ಕುರಿಗಳು ಮತ್ತು ಹಸುಗಳ ಮೇಲೆ ತೆರಿಗೆಯನ್ನು ಹಾಕಲಾಗುತಿತ್ತು.
  • ವ್ಯಾಪಾರ ವಾಣಿಜ್ಯದ ಮೇಲೆ ತೆರಿಗೆ ಹಾಕಲಾಗುತಿತ್ತು. 1/5ಭಾಗವನ್ನು ಸುಂಕದ ವಸೂಲಿಯಾಗಿ ಸಂಗ್ರಹಿಸಲಾಗುತಿತ್ತು.
  • ಗಣಿಗಳು ಮತ್ತು ಕಾಡಿನ ವಸ್ತುಗಳ ಮೇಲೆ ಸಾಮ್ರಾಜ್ಯವು ಒಡೆತನ ಹೊಂದಿತ್ತು.

ಹೀಗೆ ವಿವಿಧ ಮೂಲಗಳಿಂದ ಸಂಗ್ರಹಣೆಗೊಂಡ ಆದಾಯವನ್ನು ಸಾಮ್ರಾಜ್ಯದ ವಿವಿಧ ವೆಚ್ಚಕ್ಕಾಗಿ ಬಳಸಲಾಗುತ್ತಿತ್ತು. ಹುಟ್ಟುವಳಿಯ ಅಧಿಕ ಭಾಗವನ್ನು ಸೇನೆಯ ವೆಚ್ಚಕ್ಕಾಗಿ ಬಳಸಲಾಗುತಿತ್ತು.

ಮೌರ್ಯರ ಆಡಳಿತ ವ್ಯವಸ್ಥೆಯ ದೋಷಗಳು

  1. ಕ್ರಿಮಿನಲ್ ಕಾಯಿದೆ ಕಠಿಣವಾಗಿತ್ತು. ಮರಣ ದಂಡನೆ ಸಾಮಾನ್ಯವಾಗಿತ್ತು.
  2. ರಾಜ್ಯದ ಒಳಗಡೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಪ್ರಯಾಣ ಮಾಡಲು ರಹದಾರಿ ಪತ್ರ ಬೇಕಾಗಿತ್ತು. ಇದರಿಂದ ವ್ಯಾಪಾರಿಗಳಿಗೂ ಮತ್ತು ಸಾಮಾನ್ಯ ಜನರಿಗೂ ತೊಂದರೆಯಾಗಿತ್ತು.
  3. ಗೂಢಾಚಾರ ವ್ಯವಸ್ಥೆ ಪ್ರಬಲವಾಗಿದ್ದು ಜನರು ಮಾತನಾಡಲು ಹೆದರಿಕೊಳ್ಳುತ್ತಿದ್ದರು. ವಾಕ್ ಸ್ವಾತಂತ್ರ್ಯಕ್ಕೆ ಚ್ಯುತಿಯಾಗಿತ್ತು.

ಒಟ್ಟಾರೆ ಮೌರ್ಯರ ಆಡಳಿತ ವ್ಯವಸ್ಥೆಯಲ್ಲಿ ದೋಷಗಳಿದ್ದರೂ ಅತ್ಯಧಿಕ ಸಂಖ್ಯೆಯಲ್ಲಿ ಗುಣಗಳೇ ಕಂಡುಬರುತ್ತವೆ. ಮೆಗಾಸ್ಥನೀಸನ ಇಂಡಿಕಾ ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಕೃತಿಗಳು ಮೌರ್ಯರ ಆಡಳಿತ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲುತ್ತವೆ. ಪ್ರಾಚೀನಕಾಲದಲ್ಲಿ ಮೌರ್ಯರು ಭಾರತೀಯ ಆಡಳಿತ ವ್ಯವಸ್ಥೆಗೆ ಉತ್ತಮ ಅಡಿಪಾಯ ಹಾಕಿದರು. ಸ್ವತಂತ್ರ ಭಾರತದ ಆಡಳಿತ ವ್ಯವಸ್ಥೆಯ ಮೂಲ ಬೇರುಗಳನ್ನು ಮೌರ್ಯರ ಆಡಳಿತದಲ್ಲಿಯೇ ಗುರುತಿಸಬೇಕಾಗುತ್ತದೆ.