ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಮುಂದೆ ಅದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಸರ್ಕಾರ ಸಂಘ ಸಂಸ್ಥೆಗಳು ನೀತಿ ನಿರೂಪಕರು ಒಟ್ಟಾಗಿ ಸೇರಿ ಜನಸಂಖ್ಯೆಯನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯತ್ನವನ್ನು ಮಾಡಬೇಕು. ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅವುಗಳು ಪರಿಣಾಮಕಾರಿಯಾಗಿಲ್ಲವೆಂದೇ ಹೇಳಬೇಕು. ಕೆಲವು ನಿಯಂತ್ರಣ ಕ್ರಮಗಳು ಹೀಗಿವೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಗರ್ಭನಿರೋಧಕ ಬಳಕೆ, ಲೈಂಗಿಕ ಶಿಕ್ಷಣ, ಜನಿಸುವ ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು, ಸ್ತ್ರೀ ಸಬಲೀಕರಣ, ಆರೋಗ್ಯ ಕೇಂದ್ರಗಳ ಸ್ಥಾಪನೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿಗಳು.

ಕಲ್ಯಾಣ ಸೇವೆಗಳು 

  1. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಹಾಗೂ ಮೂಲಭೂತ ವೈದ್ಯಕೀಯ ಸೇವೆಯನ್ನು ಕಲ್ಪಿಸುವುದು.
  2. ನಗರ ಸಭೆಗಳ ಸಹಯೋಗದೊಂದಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ತಾಜ್ಯ ವಿಲೇವಾರಿ ಕ್ರಮ, ಹಿಂದುಳಿದ ಬೆಟ್ಟ ಗುಡ್ಡಗಾಡು ಪ್ರದೇಶದ ಜನರಲ್ಲಿ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ವೈದ್ಯಕೀಯ ವಾಹನಗಳ ನಿಯೋಜನೆ ಮಾಡುವುದು.
  3.  ವಿವಾಹ ಪೂರ್ವ ಗರ್ಭಿಣಿಯರಾಗುವುದನ್ನು ತಡೆಗಟ್ಟುವುದು, ನಿಧಾನವಾಗಿ ಮದುವೆಯಾಗಲು ಉತ್ತೇಜನ ನೀಡುವುದು ಹಾಗೂ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡುವುದು.
  4.  ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಕುಡಿಯುವ ನೀರು, ಚಿಕ್ಕ ಕುಟುಂಬ, ಶೌಚ, ಗ್ರಾಮೀಣ ರಸ್ತೆ ಸಾರಿಗೆ, ಅರಣ್ಯಾಭಿವೃದ್ಧಿ ಮತ್ತು ಪರಿಸರ ಅಭಿವೃದ್ಧಿ ಮುಂತಾದವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗುತ್ತದೆ.
  5. ಜನನ ಪ್ರಮಾಣವನ್ನು ತಡೆಗಟ್ಟಲು ತಡವಾಗಿ ಮದುವೆಯಾಗುವುದಕ್ಕೆ ಪ್ರೋತ್ಸಾಹಿಸಬೇಕು.
  6.  ಮದುವೆಯ ವಯಸ್ಸನ್ನು ಗಂಡಿಗೆ 30 ಹೆಣ್ಣಿಗೆ 25 ಎಂದು ನಿರ್ಧರಿಸಬೇಕು.

ಕುಟುಂಬ ಯೋಜನಾ ಕಾರ್ಯಕ್ರಮಗಳು:

ಕುಟುಂಬ ಕಲ್ಯಾಣ ಯೋಜನೆಯು ಈ ಕೆಳಕಂಡ ಗುರಿಗಳನ್ನು ಇಟ್ಟುಕೊಂಡು ಕಾರ್ಯಯೋನ್ಮುಖವಾಗಿದೆ.

1.  ಕುಟುಂಬದ ಗಾತ್ರವನ್ನು ತಗ್ಗಿಸುವುದು:  ಸಣ್ಣ ಕುಟುಂಬ ಸುಖಿ ಕುಟುಂಬ, ಸುಖಸಂಸಾರಕ್ಕೆ ಮಕ್ಕಳೆರಡೇ ಇರಲಿ, ನಾವಿಬ್ಬರು ನಮಗಿಬ್ಬರು, ಹತ್ತು ಹಡೆಯುವುದಕ್ಕಿಂತ ಒಂದು ಮುತ್ತು ಹಡಿ, ನೂರು ಇಲಿಗಳಿಗಿಂತ ಒಂದು ಹುಲಿ ಮುಖ್ಯ, ಒಂದು  ಮತ್ತು ಎರಡನೇ ಮಗುವಿನ ನಡುವೆ ಸಾಕಷ್ಟು ಅಂತರವಿರಲಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ನಾಣ್ಣುಡಿಗಳನ್ನು ಸರ್ಕಾರ ಘೋಷಿಸಿದೆ.

2.  ಕುಟುಂಬದ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು:  ಒಂದು ಅಥವಾ ಎರಡು ಮಕ್ಕಳು ಜನಿಸಿದ ನಂತರ ತಂದೆ ತಾಯಿಗಳು ಶಸ್ತ್ರ ಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮಕ್ಕಳಾಗುವುದನ್ನು ತಡೆಗಟ್ಟಬಹುದು.

3. ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು:  ಮೊದಲು ಹಾಗೂ ಎರಡನೇ ಮಗುವಿನ ಜನನದ ನಡುವೆ ಸಾಕಷ್ಟು ಅಂತರವನ್ನು ತಂದೆ-ತಾಯಿಗಳು ಪಾಲಿಸಿದರೆ ಪ್ರತಿ ಮಗುವಿನ ಲಾಲನೆ-ಪಾಲನೆ ಕೂಡ ಸಮರ್ಪಕವಾಗಿ ಆಗುತ್ತದೆ. ಇದರಿಂದ ಶಿಶುಗಳ ಆರೋಗ್ಯ ವೃದ್ಧಿಸಿ ಮರಣದ ಪ್ರಮಾಣ ಇಳಿಕೆಯಾಗುತ್ತದೆ. ಪದೇ ಪದೆ ಮಕ್ಕಳನ್ನು ಹೇರುವುದು ಮತ್ತು ಗರ್ಭಪಾತಕ್ಕೆ ಒಳಗಾಗುವುದರಿಂದ ತಾಯಿಯ ಆರೋಗ್ಯ  ಹದಗೆಟ್ಟು ಅವಳ ಪ್ರಾಣಕ್ಕೂ ಅಪಾಯ ಬರಬಹುದು.

4. ಜನನ ನಿಯಂತ್ರಣ ಸಾಧನಗಳು: ಗಂಡ-ಹೆಂಡತಿಯರಿಬ್ಬರೂ ತಾತ್ಕಾಲಿಕ ಗರ್ಭ ನಿಯಂತ್ರಣ ಸಾಧನೆಗಳನ್ನು ಬಳಸಬಹುದು. ಅವುಗಳ ಬಳಕೆಯ ಮೂಲಕ ಗರ್ಭಧಾರಣೆಯನ್ನು ಮುಂದೂಡಬಹುದು.

5. ಕುಟುಂಬ ಸದಸ್ಯರ ಪಾತ್ರ:  ಕುಟುಂಬದ ಸದಸ್ಯರು ಶಿಶುಗಳ ಮತ್ತು ತಾಯಂದಿರ ಆರೋಗ್ಯ ರಕ್ಷಣೆಯ  ಮಹತ್ವವನ್ನು ಅರಿತುಕೊಂಡು ಅವರ ಹಾರೈಕೆಯನ್ನು ಕ್ರಮಬದ್ಧವಾಗಿ ಮಾಡಬೇಕು. ಇದರೊಂದಿಗೆ ಶಿಶುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳನ್ನು ತೊಡೆದು ಹಾಕುವುದು, ಅದಕ್ಕೆ ಸೂಕ್ತ ಲಸಿಕೆ ನೀಡುವುದು, ಗರ್ಭಿಣಿಯರ ಹಾಗೂ ಮಾತೆಯರ ಆರೋಗ್ಯ ತಪಾಸಣೆ ಮಾಡುವುದು ಮುಂತಾದ ಕಾರ್ಯಗಳನ್ನು ದಾದಿಯರು ಹಾಗೂ ವೈದ್ಯಾಧಿಕಾರಿಗಳು ನಿರ್ವಹಿಸುತ್ತಾರೆ.

6. ನೈತಿಕ ನಿಯಂತ್ರಣವನ್ನು ಅನುಸರಿಸುವುದು:  ಕುಟುಂಬ ಯೋಜನೆಯ ಪ್ರಮುಖ ಕಾರ್ಯಗಳಲ್ಲಿ ಒಂದಾದ ನೈತಿಕ ನಿಯಂತ್ರಣ ವಿಧಾನದಲ್ಲಿ ವಿವಾಹವನ್ನು ಮುಂದೂಡುವುದು, ವಿವಾಹದ ವಯಸ್ಸನ್ನು ಹೆಚ್ಚಿಸುವುದು ಬ್ರಹ್ಮಚರ್ಯೆ ಪಾಲನೆ, ಆತ್ಮಸಂಹಮ  ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ಜನನವನ್ನು ತಡೆಗಟ್ಟುವುದು.

7.  ಗರ್ಭ ನಿರೋಧಕ ಕ್ರಮಗಳು:  ಈ ವಿಧಾನದಲ್ಲಿ ಗರ್ಭನಿರೋಧಕಗಳ ಬಳಕೆ, ವಂಕಿಧಾರಣೆ, ಶಸ್ತ್ರಚಿಕಿತ್ಸೆ ಸುರಕ್ಷಾವಧಿ ಅನುಕರಣೆ, IUDS  , ಇತ್ಯಾದಿಗಳ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು.

8.  ಕುಟುಂಬ ಯೋಜನೆಗಳಿಗೆ ಒಳಪಡುವವರಿಗೆ ಪ್ರೋತ್ಸಾಹ:  ಕುಟುಂಬ ಯೋಜನೆಗೆ ಒಳಪಡುವ ಗ್ರಾಮೀಣ ದಂಪತಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎರಡು ಮಕ್ಕಳಾದ ನಂತರ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ದಂಪತಿಗಳಿಗೆ ಪ್ರೋತ್ಸಾಹ ಧನ, ಸರ್ಕಾರಿ ನೌಕರರಿಗೆ ಭಡ್ತಿ, ಮುಂತಾದವುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಸಣ್ಣ ಕುಟುಂಬವನ್ನು ಪ್ರೋತ್ಸಾಹಿಸುವುದರೊಂದಿಗೆ ದೊಡ್ಡ ಕುಟುಂಬಗಳಿಗೆ ಕೆಲವು ಸರ್ಕಾರಿ ಸೌಲತ್ತುಗಳನ್ನು ಮತ್ತು ಅವಕಾಶಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರಿಗೆ ನಿರುತ್ತೇಜನಗೊಳಿಸುವ ಕಾರ್ಯವನ್ನು ಮಾಡಬೇಕು. ಉದಾ: ಪಡಿತರ ಆಹಾರವನ್ನು ತಡೆಹಿಡಿಯುವುದು, ಚುನಾವಣೆಯಲ್ಲಿ ಭಾಗವಹಿಸಿದಂತೆ ಕ್ರಮ ಜರುಗಿಸುವುದು, ಸರ್ಕಾರಿ ಕೆಲಸಗಳನ್ನು ನೀಡದಿರುವುದು ಮುಂತಾದ ಕ್ರಮಗಳನ್ನು ಜಾರಿಗೆ ತರಬೇಕು.

9. ಭಾರತವು ಬಹುಧರ್ಮಿಯ ಜಾತಿಗಳ ಹಾಗೂ ಭಾಷೆಗಳನ್ನಾಡುವ ದೇಶವಾದ ಕಾರಣ ಎಲ್ಲರಿಗೂ ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು.

10.  ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ದೊರೆಯುವಂತೆ ಮಾಡಬೇಕು.

11. ಶಾಲಾ ಕಾಲೇಜುಗಳ ಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ನೀಡಬೇಕು.

12.  ಕುಟುಂಬ ಯೋಜನೆಗೆ ಒಳಗಾದವರಿಗೆ ಸೂಕ್ತ ವಸತಿಯೋಜನೆ, ಮಕ್ಕಳ ಪೌಷ್ಟಿಕಾಂಶ ಲಸಿಕೆ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರವು ಮಾಡಬೇಕು.

ಉಪಸಂಹಾರ

ಭಾರತದಲ್ಲಿ ಜನಸಂಖ್ಯೆ ನಿಯಂತ್ರಣವು ಸರ್ಕಾರದ ಹೊಣೆಗಾರಿಕೆಯಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಕುಟುಂಬ ಯೋಜನೆ, ಮಹಿಳಾ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾರ್ವಜನಿಕ ಜಾಗೃತಿ ಇವುಗಳ ಸಮನ್ವಯದಿಂದ ಮಾತ್ರ ಜನಸಂಖ್ಯೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಸಣ್ಣ ಕುಟುಂಬದ ಮೂಲಕವೇ ಸುಸ್ಥಿರ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು.

ಜನಸಂಖ್ಯಾ ಬೆಳವಣಿಗೆಯ ಪರಿಣಾಮಗಳು

ಜನಸಂಖ್ಯಾ ಬೆಳವಣಿಗೆಯ ಪರಿಣಾಮಗಳು

ಜನಸಂಖ್ಯೆ ಹೆಚ್ಚಿದಂತೆ ದೇಶದ ಮೇಲೆ ಅದರ ಪರಿಣಾಮಗಳು ಕೂಡ ಹೆಚ್ಚಾಗುತ್ತವೆ. ಆಹಾರ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ಅಗತ್ಯಗಳ ಮೇಲೆ ಜನಸಂಖ್ಯಾ ಬೆಳವಣಿಗೆ ನೇರ ಪರಿಣಾಮ ಬೀರುತ್ತದೆ. ಈ ಬ್ಲಾಗ್‌ನಲ್ಲಿ ಜನಸಂಖ್ಯಾ ಏರಿಕೆಯ ವಿವಿಧ ದುಷ್ಪರಿಣಾಮಗಳನ್ನು ವಿವರಿಸಲಾಗಿದೆ.

1.  ತಲಾ ಆದಾಯ ಕಡಿಮೆ:  ಭಾರತವು ಕೃಷಿ ಪ್ರಧಾನವಾದ ದೇಶ. ಶೇ 80% ಜನ ಕೃಷಿಯನ್ನೇ  ಅವಲಂಬಿಸಿ ಬದುಕುತ್ತಿದ್ದಾರೆ. ಜನಸಂಖ್ಯೆ ಏರಿದಂತೆ ಕೃಷಿ ಭೂಮಿಯಲ್ಲಿ ಭಾಗಗಳಾಗುತ್ತದೆ. ಹೀಗೆ ಆದಾಗ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗುತ್ತದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾದರೆ ತಲಾ ಆದಾಯವೂ ಇಳಿಮುಖವಾಗುತ್ತದೆ. ಯಾವಾಗ ತಲಾ ಆದಾಯವು ಇಳಿಕೆಯಾಗುವುದೋ ರಾಷ್ಟ್ರೀಯ ಆದಾಯವೂ ಸಹ ಕುಸಿಯುತ್ತದೆ.

2. ಬಡತನ:  ಜನಸಂಖ್ಯಾ ಏರಿಕೆ ಮತ್ತು ಬಡತನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚುತ್ತಿರುವ ಜನಸಂಖ್ಯೆ ಬಡತನಕ್ಕೆ ಕಾರಣವಾದರೆ, ಬಡತನವು ಅಧಿಕ ಜನಸಂಖ್ಯೆಗೆ ಕಾರಣವಾಗುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಆಹಾರ, ವಸತಿ, ಬಟ್ಟೆ ಪೌಷ್ಟಿಕ ಆಹಾರದಲ್ಲಿಯೂ ಕೊರತೆ ಎದ್ದುಕಾಣುತ್ತದೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಚಿಕ್ಕ ಮನೆಯಲ್ಲಿ ಗಾಳಿ, ಬೆಳಕಿನ ಸೌಲಭ್ಯಗಳಿಲ್ಲದೆ ಹಲವಾರು ರೋಗಗಳಿಗೆ ಗುರಿಯಾಗಬೇಕಾಗುವುದು. ಬಡತನದಿಂದ ಅರೆಹೊಟ್ಟೆ ಉಂಡು, ಹರುಕು ಬಟ್ಟೆಗಳನ್ನು ಹಾಕಿ, ಮರುಕು ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬರುತ್ತದೆ.

3. ನಿರುದ್ಯೋಗ :  ಮಿತಿಮೀರಿದ ಜನಸಂಖ್ಯೆ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಕೃಷಿಯ ಯಾಂತ್ರೀಕರಣ ಫಲವಾಗಿ ಸಾವಿರಾರು ಗ್ರಾಮೀಣರು ನಿರುದ್ಯೋಗಿಗಳಾಗಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಹೊಸತನ, ವಿಜ್ಞಾನ ತಂತ್ರಜ್ಞಾನ, ಗಣಕ ಯಂತ್ರದ ಉಪಯೋಗ, ಬುಲ್‌ಡೋಜರ್‌ ಬಳಕೆ ಮೊದಲಾದ ವಿಶೇಷ ಸಾಧನೆಗಳಿಂದ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಹೆಚ್ಚುತ್ತಿದೆ.

4. ಮಾನವ ಶಕ್ತಿಯ ಬಳಕೆ:  ಆರ್ಥಿಕವಾಗಿ ಹಿಂದುಳಿಯುವಿಕೆ, ಮಂದಗತಿಯ ವ್ಯಾಪಾರ ಅಭಿವೃದ್ಧಿ ಮತ್ತು ವಿಸ್ತರಣೆ ಚಟುವಟಿಕೆಗಳಿಂದ ಮಾನವ ಶಕ್ತಿಯ ಬಳಕೆ ಕಡಿಮೆಯಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಶಕ್ತಿಯ ಬಳಕೆಯ ಅಭಾವದಿಂದಾಗಿ ನಿರುದ್ಯೋಗ, ಬಡತನ ಹಾಗೂ ಕಡಿಮೆ ಉತ್ಪಾದನೆಯಂತಹ ಸಮಸ್ಯೆಗಳು ಕಾಡುತ್ತಿವೆ.

5. ಕಡಿಮೆ ಉತ್ಪಾದನೆ ಖರ್ಚು ಹೆಚ್ಚು:  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಮತ್ತು ವಿತರಣೆ ಸಾಧ್ಯವಾಗದೇ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರ ಪರಿಣಾಮವೇ ಹಣದುಬ್ಬರ ಎಂದು ಹೇಳಬಹುದು.

6. ಮೂಲಸೌಕರ್ಯಗಳ ಕೊರತೆ: ಮಾನವನ ಮೂಲಸೌಕರ್ಯಗಳಾದ ಆಹಾರ, ನೀರು, ವಸತಿ ಹಾಗೂ ಶಿಕ್ಷಣ ಮೊದಲಾದ ಅಭಿವೃದ್ಧಿಗಳು ಜನಸಂಖ್ಯಾ ಬೆಳವಣಿಗೆ ಅಗತ್ಯಕ್ಕೆ ಸಮಾನಾಗಿ ಆಗುತ್ತಿಲ್ಲ. ಇದರ ಪರಿಣಾಮ ಕುಡಿಯುವ ನೀರು ಆರೋಗ್ಯ ಆಹಾರ ವಸತಿ ಸೌಲಭ್ಯ ಮೊದಲಾದವುಗಳ ಮೇಲೆ ಬೀರುತ್ತದೆ.

7. ಕೆಲಸ ಮಾಡುವವರ ಸಂಖ್ಯೆ ಕಡಿಮೆ:  ಒಬ್ಬ ವ್ಯಕ್ತಿ ದುಡಿಯುವುದು ಹಲವಾರು ಜನರು ಕುಳಿತು ಉಣ್ಣುವುದು ಇದು ಅತಿಯಾದ ಜನಸಂಖ್ಯಾ ಏರಿಕೆಯ ಪ್ರಭಾವ. ಕುಟುಂಬದ ಯಜಮಾನ ಒಬ್ಬನೇ ದುಡಿದು ಹಾಕುವುದು ಮತ್ತು ಐದಾರು ಜನರು ದುಡಿಯದೇ ಹಾಗೆ ಇರುವುದು ಆದಾಯದ ಅಸಮಾನತೆಗೆ ಕಾರಣವಾಗುತ್ತದೆ.

8.  ಕಡಿಮೆ ಉಳಿತಾಯ: ಜನಸಂಖ್ಯಾ ಸ್ಪೋಟದಿಂದ ಉಳಿತಾಯ ಮಾಡುವುದು ಬಹಳ ಕಷ್ಟವಾಗುತ್ತಿದೆ. ಬಂದ ಆದಾಯ ಮಕ್ಕಳ ಆರೋಗ್ಯ, ಬಟ್ಟೆ, ಆಹಾರ, ನೀರು, ಶಿಕ್ಷಣ ಮುಂತಾದವುಗಳಿಗೆ ಖರ್ಚಾಗುತ್ತದೆ. ಇದರಿಂದ ಉಳಿತಾಯ ಮಾಡುವುದು ಕುಟುಂಬದ ಹಿರಿಯರಿಗೆ ತುಂಬಾ ನೋವಿನ ಸಂಗತಿಯಾಗಿದೆ.

9.  ವಸ್ತುಗಳ ಬೆಲೆ ಏರಿಕೆ: . ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ವಸ್ತುಗಳ ಉತ್ಪಾದನೆ ಮಾಡಲು ಸಾಧ್ಯವಾಗದ ಕಾರಣದಿಂದ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಜನರ ಬೇಡಿಕೆಗೆ ತಕ್ಕ ವಸ್ತುಗಳ ಪೂರೈಕೆ ಇರದಿದ್ದರೆ ಬೆಲೆಗಳು ಏರಿ ಸಮಸ್ಯೆಗಳು ಉದ್ಭವವಾಗುತ್ತವೆ.

10. ವೈದ್ಯಕೀಯ ಸೌಲಭ್ಯಗಳ ಅಭಾವ: 2000 ದ ವೇಳೆಗೆ ಪ್ರಪಂಚದ ಎಲ್ಲಾ ಜನರಿಗೂ ಆರೋಗ್ಯ ಎಂಬ ವಿಶ್ವಸಂಸ್ಥೆಯ ಪೋಷಣೆಯು ಹಾಗೆಯೇ ಉಳಿದಿದೆ. ಜನಸಂಖ್ಯೆ ಪ್ರಮಾಣ ಅಧಿಕವಾಗಿ ಬೆಳೆಯುತ್ತಿರುವ ಕಾರಣ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ದಿನೇ ದಿನೇ ಔಷಧಿಗಳ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಜನಸಂಖ್ಯೆಯೇ ಕಾರಣವಾಗಿದೆ.

ಉಪಸಂಹಾರ

ಹೀಗೆ ಜನಸಂಖ್ಯೆಯು ಮಿತಿಮೀರಿ ಏರುತ್ತಿರುವುದರಿಂದ ಸರ್ಕಾರ ರೂಪಿಸುವ ಯಾವುದೇ ಕಲ್ಯಾಣ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಮಹಿಳೆಯರ ಮೇಲಿನ ಶೋಷಣೆ ಹೆಚ್ಚುತ್ತದೆ. ಪರಿಸರ ಹಾಳಾಗಿ ಮಾನವ ಶಕ್ತಿ ನಷ್ಟವಾಗುತ್ತದೆ. ಪ್ರಾದೇಶಿಕ ಅಸಮತೋಲನ ಉಂಟಾಗಿ ಜನರಲ್ಲಿ ಕ್ಷೋಭೆಗಳು ಉಂಟಾಗುತ್ತವೆ. ಇದರಿಂದ ಸಮಾಜದಲ್ಲಿ ಶಾಂತಿ, ಸುರಕ್ಷತೆ, ನೆಮ್ಮದಿಗೆ ಭಂಗಗಳುಂಟಾಗುತ್ತವೆ.

ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಾರಣಗಳು

ಭಾರತದಲ್ಲಿ ಜನಸಂಖ್ಯಾ ಸ್ಫೋಟಕ್ಕೆ ಕಾರಣಗಳು

ವಿಶ್ವದಲ್ಲಿ ಭಾರತದ ಜನಸಂಖ್ಯೆಯ ಪಾಲು 2.4% ರಷ್ಟು ಇದೆ. ಪ್ರತಿವರ್ಷ ಭಾರತದ ಜನಸಂಖ್ಯೆ ಏರಿಕೆ ಆಗುತ್ತದೆ. 2021 ಕ್ಕೆ ಭಾರತದ ಜನಸಂಖ್ಯೆ 140 ಕೋಟಿಯಷ್ಟಾಗಿದೆ. ಇದೇ ರೀತಿ ಭಾರತದ ಜನಸಂಖ್ಯೆ ಏರಿಕೆಯಾದರೆ ಮುಂದೊಂದು ದಿನ ಆಹಾರ ಮತ್ತು ನೀರಿನ ಕೊರತೆಯನ್ನು ಎದುರಿಸುವ ಸಂದರ್ಭಗಳು ಬರಬಹುದು. ಭಾರತದ ಜನಸಂಖ್ಯಾ ಸ್ಫೋಟಕ್ಕೆ ಈ ಕೆಳಗಿನ ಪ್ರಮುಖ ಅಂಶಗಳು ಕಾರಣಗಳಾಗಿವೆ.

1.  ಮರಣ ಪ್ರದೇಶದಲ್ಲಿ ಇಳಿಕೆ:

1921 ರಿಂದ ಇಂದಿನವರೆಗೆ ಭಾರತದ ಜನಸಂಖ್ಯೆಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಆದರೆ ಮರಣ ಪ್ರಮಾಣದಲ್ಲಿ ಮಾತ್ರ ತುಂಬಾ ಇಳಿಕೆ ಕಂಡುಬರುತ್ತದೆ. ಹೆಚ್ಚಿನ ಪ್ರಮಾಣದ ಔಷಧಿಗಳ ಲಭ್ಯತೆಯ ಕಾರಣದಿಂದ ಮರಣ ಪ್ರಮಾಣವು 1000ಕ್ಕೆ 27.4% ರಿಂದ 10.9% ವರೆಗೆ ಇಳಿದಿದೆ. ಹೀಗೆ ಮರಣ ಪ್ರಮಾಣವು ಕಡಿಮೆಯಾಗಿ ಜನನ ಪ್ರಮಾಣವು ಏರಿಕೆಯಾದರೆ ಜನಸಂಖ್ಯಾ ಪ್ರಮಾಣದಲ್ಲಿ ಹೆಚ್ಚಳ ಕಂಡುಬರುತ್ತದೆ.

2. ಕಡ್ಡಾಯ ಮದುವೆ:  ವಿವಾಹವು ಭಾರತೀಯ ಸಮಾಜದಲ್ಲಿ ಸಾರ್ವತ್ರಿಕ ಮತ್ತು ಕಡ್ಡಾಯವಾಗಿದೆ. ಸ್ತ್ರೀ-ಪುರುಷರು ವಯಸ್ಸಿಗೆ ಬಂದನಂತರ ಕಡ್ಡಾಯವಾಗಿ ಮದುವೆಯಾಗಬೇಕೆಂಬ ನಿಬಂಧನೆಗಳಿವೆ. ಇದಕ್ಕೆ ಧಾರ್ಮಿಕ ಬೆಂಬಲವೂ ಬಹಳಷ್ಟಿದೆ.  ಸ್ತ್ರೀ ಪುರುಷರು ಕಡ್ಡಾಯವಾಗಿ ಮತ್ತು ಬಹುಬೇಗನೆ ಮದುವೆಯಾಗುವ ಕಾರಣ ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

3. ಬೇಗನೆ ಮದುವೆ: ಭಾರತೀಯ ಸಮಾಜದಲ್ಲಿ ಸ್ತ್ರೀ ಪುರುಷರಿಗೆ ಬೇಗನೆ ಮದುವೆ ಮಾಡುವ ಸಂಪ್ರದಾಯವಿದೆ. ಹೆಣ್ಣು ಮಕ್ಕಳು ಋತುಮತಿಯಾದ ತಕ್ಷಣವೇ ಮದುವೆ ಮಾಡುವ ಪದ್ಧತಿ ಭಾರತೀಯ ಗ್ರಾಮೀಣ ಸಮುದಾಯದಲ್ಲಿದೆ. ಇಂದಿಗೂ ಭಾರತೀಯ ಅನೇಕ ಗ್ರಾಮಗಳಲ್ಲಿ ಬಾಲ್ಯವಿವಾಹ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಬೇಗನೆ ಮದುವೆಯಾಗುವುದರಿಂದ ಹೆಚ್ಚು ಮಕ್ಕಳನ್ನು ಪಡೆಯುವ ಸಾಧ್ಯತೆ ಇರುತ್ತದೆ. ಸುಮಾರು 20ನೇ ವಯಸ್ಸಿಗೆ ಬರುವುದರೊಳಗಾಗಿ 2-3 ಮಕ್ಕಳ ತಂದೆ ತಾಯಿಗಳಾಗುತ್ತಾರೆ. ಹೀಗಾಗಿ ಜನಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತದೆ. 

4. ಬಡತನ:  ಬಡತನವು ಅತಿ ಹೆಚ್ಚು ಮಕ್ಕಳನ್ನು ಪಡೆಯುವಂತೆ ಮಾಡುತ್ತದೆ. ಹೆಚ್ಚು ಮಕ್ಕಳು ಜನಿಸಿದರೆ ತಮಗೆ ದುಡಿಮೆಯಲ್ಲಿ ಆಸರೆಯಾಗುತ್ತಾರೆ ಮತ್ತು ಆರ್ಥಿಕವಾಗಿ ಮಕ್ಕಳು ದುಡಿದು ತಂದು ಬಡತನವನ್ನು ತೊಲಗಿಸಲು ಸಹಾಯ ಮಾಡುತ್ತಾರೆ ಎಂಬ ನಂಬಿಕೆಯಿಂದ ತಂದೆ-ತಾಯಿಗಳು ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟಪಡುತ್ತಾರೆ. ಬಡತನವು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿದೆ.

5. ಗಂಡು ಸಂತಾನದ ವ್ಯಾಮೋಹ:  ಗಂಡು ಸಂತಾನದ ಅಪೇಕ್ಷೆಯಿಂದ ಸುಮಾರು 8 ಜನ ಹೆಣ್ಣು ಮಕ್ಕಳು ಜನಿಸಿ ಆನಂತರ ಗಂಡು ಮಗುವನ್ನು ಪಡೆದಂತಹ ಕುಟುಂಬಗಳು ಭಾರತೀಯ ಸಮಾಜದಲ್ಲಿ ಸಾಕಷ್ಟು ಕಂಡುಬರುತ್ತವೆ. ಗಂಡು ಸಂತಾನದ ನಿರೀಕ್ಷೆಯಲ್ಲಿದ್ದವರಿಗೆ ಪದೇ ಪದೇ ಹೆಣ್ಣು ಹುಟ್ಟಿದರೆ ಮರಳಿ ಪ್ರಯತ್ನಿಸು ಎಂಬ ಗಾದೆಯಂತೆ ಹಲವಾರು ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾರೆ. ಇದು ಜನಸಂಖ್ಯಾ ಬೆಳವಣಿಗೆಗೆ ಕಾರಣವಾಗುತ್ತದೆ.

6. ಅನಕ್ಷರತೆ ಮತ್ತು ಅಜ್ಞಾನ:  ಭಾರತದೇಶದಲ್ಲಿ ಸುಶಿಕ್ಷಿತರಗಿಂತ ಅನಕ್ಷರಸ್ಥರ ಸಂಖ್ಯೆ ಅಧಿಕವಾಗಿದೆ. ಜನರಲ್ಲಿ ಅಜ್ಞಾನ ತಾಂಡವವಾಡುತ್ತಿದೆ. ತಮಗೆ ಎಷ್ಟು ಜನ ಮಕ್ಕಳಾದರೂ ಚಿಂತಿಸುವುದಿಲ್ಲ. ಹುಟ್ಟಿಸಿದ ದೇವರು ಹುಲ್ಲು ಮೇಯಿಸುತ್ತಾನೆಯೇ ಎಂದು ಪದೇ ಪದೇ ಪ್ರಯತ್ನಿಸುತ್ತಲೇ ಇರುತ್ತಾರೆ. ಇದರಿಂದ ಹುಟ್ಟುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಜನಸಂಖ್ಯೆ ಏರುತ್ತಲೇ ಹೋಗುತ್ತದೆ.

7. ಧಾರ್ಮಿಕ ನಂಬಿಕೆ:  ಗಂಡು ವಂಶೋದ್ಧಾರಕ ಗಂಡು ಇಲ್ಲದೆ ಸದ್ಗತಿ ಇಲ್ಲ. ಮೋಕ್ಷ ಪಡೆಯಲು ಗಂಡು ಮಗುವೇ ಬೇಕು ಎಂಬ ಧಾರ್ಮಿಕ ಭಾವನೆಗಳಿಂದ ಅವರಿಗೆ ಎಷ್ಟೇ ಹೆಣ್ಣು ಮಕ್ಕಳಾದರೂ ಗಂಡು ಸಂತತಿಗಾಗಿ ಹಾತೊರೆಯುತ್ತಾರೆ. ಇದು ಜನಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ.

8. ಅವಿಭಕ್ತ ಕುಟುಂಬ:  ಭಾರತದಲ್ಲಿ ಜನಸಂಖ್ಯೆ ಹೆಚ್ಚಳಕ್ಕೆ ಅವಿಭಕ್ತ ಕುಟುಂಬಗಳು ಕಾರಣವಾಗಿವೆ. ಅವಿಭಕ್ತ ಕುಟುಂಬದಲ್ಲಿ ಭೂ ಹಿಡುವಳಿ ಅಧಿಕವಾಗಿರುತ್ತದೆ. ಕೃಷಿ ಅವರ ಮೂಲ  ಉದ್ಯೋಗವಾಗಿರುತ್ತದೆ. ಕೃಷಿ ಕಾರ್ಮಿಕರಿಗೆ ಹೆಚ್ಚಿನ ಸಂಬಳ ನೀಡುವ ಬದಲಾಗಿ ತಾವೇ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ದುಡಿಮೆಗೂ ಸಹಾಯವಾಗುತ್ತದೆ. ಸಂಬಳವೂ ಉಳಿಯುತ್ತದೆ ಎಂಬ ಕಾರಣಗಳಿಂದ ಮಕ್ಕಳ ಜನಸಂಖ್ಯೆಯನ್ನು ಹೆಚ್ಚಿಸುತ್ತಲೇ ಹೋಗುತ್ತಾರೆ. ಇದು ಜನಸಂಖ್ಯಾ ಹೆಚ್ಚಳಕ್ಕೆ ಕಾರಣವಾಗಿ ಪರಿಣಮಿಸುತ್ತದೆ.

9. ಕುಟುಂಬ ಯೋಜನೆ:  ಭಾರತೀಯ ಗ್ರಾಮೀಣ ಪ್ರದೇಶದ ಜನರಿಗೆ ಕುಟುಂಬ ಯೋಜನೆಯ ಬಗ್ಗೆ ಸ್ಪಷ್ಟ ಕಲ್ಪನೆಗಳು ಇಲ್ಲ. ಅವರು ಕುಟುಂಬ ಯೋಜನೆಯನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಏರುತ್ತಲೆ ಇರುತ್ತದೆ.

10. ಹವಾಮಾನ:  ಭಾರತದ ಹವಾಮಾನ ಜನಸಂಖ್ಯಾ ಸ್ಪೋಟಕ್ಕೆ ಕಾರಣವಾಗುತ್ತದೆ. ಭಾರತದಲ್ಲಿ 12 ರಿಂದ 14 ವರ್ಷದ ಹುಡುಗಿಯರು ಋತುಮತಿಯಾಗುತ್ತಾರೆ. ಹೀಗೆ ಋತುಮತಿಯಾದ ಹುಡುಗಿಯರನ್ನು ಬೇಗನೆ ಮದುವೆ ಮಾಡುತ್ತಾರೆ. ಹೀಗಾಗಿ ಅವರು 15 ರಿಂದ 45 ವರ್ಷಗಳವರೆಗೆ ಮಕ್ಕಳನ್ನು ಪಡೆಯುವ ಸಾಮರ್ಥ್ಯವನ್ನು ಪಡೆಯುತ್ತಾರೆ. ಈ ಕಾರಣದಿಂದ ಜನಸಂಖ್ಯೆ ಏರಿಕೆಯು ಕಂಡುಬರುತ್ತದೆ.

ಉಪಸಂಹಾರ

ಭಾರತದಲ್ಲಿ ಜನಸಂಖ್ಯಾ ಸ್ಫೋಟವು ಒಂದೇ ಒಂದು ಕಾರಣದಿಂದ ಉಂಟಾಗಿಲ್ಲ; ಬದಲಾಗಿ ಅನೇಕ ಸಾಮಾಜಿಕ ಹಾಗೂ ಆರ್ಥಿಕ ಅಂಶಗಳ ಸಮೂಹ ಫಲಿತಾಂಶವಾಗಿದೆ. ಅನಕ್ಷರತೆ, ಬಡತನ, ಬಾಲ್ಯವಿವಾಹ, ಗಂಡು ಸಂತಾನದ ವ್ಯಾಮೋಹ ಮತ್ತು ಕುಟುಂಬ ಯೋಜನೆಯ ಅರಿವಿನ ಕೊರತೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಜನಸಂಖ್ಯೆ ನಿಯಂತ್ರಣಕ್ಕೆ ಶಿಕ್ಷಣದ ವಿಸ್ತರಣೆ, ಮಹಿಳಾ ಸಬಲೀಕರಣ ಮತ್ತು ಪರಿಣಾಮಕಾರಿ ಕುಟುಂಬ ಯೋಜನಾ ಕಾರ್ಯಕ್ರಮಗಳು ಅಗತ್ಯವಾಗಿವೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಜಾಗೃತಿ ಮೂಡಿಸಿದರೆ ಮಾತ್ರ ಭವಿಷ್ಯದಲ್ಲಿ ಜನಸಂಖ್ಯಾ ಸಮಸ್ಯೆಯನ್ನು ಸಮರ್ಥವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಪರಿಸರ ಮಾಲಿನ್ಯ

ಪರಿಸರ ಮಾಲಿನ್ಯ

ಮಾಲಿನ್ಯ ಎಂದರೆ ಮಲೀನತೆ, ಕೊಳೆ, ಕಲ್ಮಶ, ತ್ಯಾಜ್ಯ ಹಾಗೂ ದೋಷ ಎಂದರ್ಥ. ಇನ್ನೊಂದು ಅರ್ಥದಲ್ಲಿ ಮಲಿನತೆಯನ್ನು ಕಳೆದುಕೊಂಡಿರುವುದು, aಪವಿತ್ರವಾದದು ಹಾಗೂ ಪರಿಶುದ್ಧತೆಯನ್ನು ಕಳೆದುಕೊಂಡಿರುವುದು ಎಂದಾಗುತ್ತದೆ. ಒಟ್ಟಿನಲ್ಲಿ ಮಲೀನಗೊಂಡ ಪರಿಸರವನ್ನು ಪರಿಸರ ಮಾಲಿನ್ಯ ಎಂದು ಕರೆಯುವರು. Pollution  ಎಂಬ ಇಂಗ್ಲಿಷ್ ಪದವು Pollutionem  ಎಂಬ ಪದದಿಂದ ಉತ್ಪತ್ತಿಯಾಗಿದೆ. ಪೊಲಿಷಿಯಂ ಎಂದರೆ ಹಾಳು ಮಾಡುವುದು ಅಥವಾ ಕೊಳಕು ಮಾಡುವುದು ಎಂದಾಗುತ್ತದೆ. ಪರಿಸರ ಮಾಲಿನ್ಯದ ಕುರಿತು ಈ ಕೆಳಗಿನ ವ್ಯಾಖ್ಯೆಗಳನ್ನು ಗಮನಿಸಬಹುದು

ಮಾಲಿನ್ಯಕ್ಕೆ ಕಾರಣವಾದ ಅಂಶಗಳು:

ಮಸಿ ಅಥವಾ ಕಾಡಿಗೆ, ಹೊಗೆ, ಡಾಮರು ಧೂಳು, ಇಂಗಾಲದ ಡೈ ಆಕ್ಸೈಡ್, ಬೂದಿ ಧೂಳಿನ ಕಣಗಳು ಪ್ರವಾಹ, ಚಂಡಮಾರುತ, ಕೈಗಾರಿಕಾತ್ಯಾಜ್ಯಗಳು ನಗರದ ಕೊಳಚೆ ವಸ್ತುಗಳು, ಜನಸಂಖ್ಯಾ ಸ್ಪೋಟದಿಂದ ಉಂಟಾದ ಮಲಿನಕಾರಕಗಳು ವಾಹನಗಳ ಕೊಳೆ, ಅಣುಬಾಂಬ್ ಸ್ಪೋಟನೆ, ಗಂಧಕದ ಆಕ್ಸೈಡ್, ಕ್ಲೋರಿನ್ ಅಯೋಡಿನ್, ಪಾದರಸ, ಸೀಸ್, ಸತು, ಕಬ್ಬಿಣ, ನಿಕ್ಕಲ್, ಕಾಡ್ಮಿಯಂ, ರಸಾಯನಿಕ ಗೊಬ್ಬರಗಳು, ಕ್ರಿಮಿನಾಶಕಗಳು, ಕಳೆನಾಶಕಗಳು, ಶಿಲೀಂಧ್ರಗಳು, ನೀರಿನಲ್ಲಿ ಕರಗುವ ಹಾಗೂ ಕರಗಬಲ್ಲ ವಸ್ತುಗಳು, ವ್ಯರ್ಥ ನೀರು, ಮುಂತಾದವುಗಳು ಮಾಲಿನ್ಯಕ್ಕೆ ಕಾರಣವಾದ ಅಂಶಗಳಾಗಿವೆ.

 ಪ್ಲಾಸ್ಟಿಕ್ ಪರಿಸರ ಮಾಲಿನ್ಯಕ್ಕೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಬಾಲ್‌ ಪೆನ್ನುಗಳು, ವಿಮಾನದ ಬಿಡಿ ಭಾಗಗಳು ಹಾಗೂ ಹಾಲಿನ ಪ್ಯಾಕೆಟ್‌ಗಳು ಇಂದು ರಾಶಿ ರಾಶಿ ಆಗಿ ಬೀಳುತ್ತಿವೆ. ಇವುಗಳು ಮಣ್ಣಿನಲ್ಲಿ ಕೊಳೆಯದೇ ಪರಿಸರ ಹಾನಿಗೆ ತಮ್ಮ ಕೊಡುಗೆಯನ್ನು ನೀಡುತ್ತಿವೆ. ಆಸ್ಪತ್ರೆಯಿಂದ ಹೊರ ಹಾಕುವ ಸಿರಿಂಜ್‌ಗಳು, ಔಷಧಿ ಬಾಟಲಿಗಳು, ಗ್ಲೌಸ್‌ಗಳು, ತ್ಯಾಜ್ಯಗಳು ದೊಡ್ಡ ಪರ್ವತದ ಹಾಗೆ ಬೀಳುತ್ತಿರುವುದು ಬಹಳ ಆತಂಕದ ವಿಷಯವಾಗಿದೆ. ಹಾಳಾದ ಪ್ಲಾಸ್ಟಿಕ್ ಪೆನ್ನುಗಳು  ಟಿ.ವಿಯ ಬಿಡಿ ಭಾಗಗಳು ಹಲ್ಲುಜ್ಜುವ ಬ್ರೆಸ್‌ಗಳು, ಟೂತ್‌ಪೇಸ್ಟ್‌ ಖಾಲಿ ಕವಚಗಳು, ಹಾಳಾದ ಚಪ್ಪಲಿಗಳು, ಮನೆಯ ಕಸಕಡ್ಡಿಗಳು ಪರಿಸರ ಮಾಲಿನ್ಯಕ್ಕೆ ಪ್ರತ್ಯಕ್ಷವಾದ ಕಾರಣಗಳಾಗಿವೆ. ವಿಷಕಾರಿಯಾದ ಡಿಡಿಟಿ, Co2 ಚರಂಡಿ ನೀರು , ಗಾಜು, ಕಾಗದ, ಮುಂತಾದವುಗಳು ಸಹ ಪರಿಸರವನ್ನು ದೊಡ್ಡ ಪ್ರಮಾಣದಲ್ಲಿ ಹಾಳುಮಾಡುತ್ತವೆ. ಥರ್ಮಲ್‌ ವಿದ್ಯುತ್‌ ಸ್ಥಾವರಗಳಿಂದ ಹೊರಸೂಸುವ ವಿಷಪೂರಿತವಾದ ಬೂದಿ ಮಾನವನ ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡುವುದಲ್ಲದೆ ಕಣ್ಣುಉರಿ, ಆಸ್ತಮಾ, ಹೃದಯ ಖಾಯಿಲೆ, ಕಾಲುಬೇನೆ, ಅಜೀರ್ಣಸಮಸ್ಯೆ ಮುಂತಾದ ರೋಗಗಳಿಗೆ ಕಾರಣವಾಗುತ್ತದೆ. ದೇಶಧ 75 ಉಷ್ಣಸ್ಥಾವರಗಳು ಪರಿಸರ ಮಾಲಿನ್ಯಕ್ಕೆ ಅಪಾರ ಕೊಡುಗೆಯನ್ನು ನೀಡುತ್ತವೆ. ದೆಹಲಿ ಒಂದರಲ್ಲಿಯೇ ಬಂದರ್‌ಪುರ ಹಾಗೂ ಇಂದ್ರಪ್ರಸ್ತ ಉಷ್ಣಸ್ಥಾವರಗಳಿಂದ ದಿನವೊಂದಕ್ಕೆ 180 ಟನ್‌ ಗಂಧಕದ ಸುಟ್ಟ ಕಲ್ಲಿದ್ದಲು ದೂಳು, 70 ಟನ್‌ ಗಂಧಕದ ಡೈ ಆಕ್ಸೈಡ್‌ SO2 ನ್ನು ವಾಯುಮಂಡಲಕ್ಕೆ ಬಿಡುಗಡೆಗೊಳಿಸುತ್ತದೆ. ಈ ಸ್ಥಾವರಗಳ ದಟ್ಟ ಹೊಗೆ ಆ ಪ್ರದೇಶದ ಸ್ಮಾರಕಗಳಿಗೆ ಕಪ್ಪು ಮಸಿಯನ್ನು ಬಳಿದಂತೆ ಅಂಟಿಕೊಂಡಿದೆ. 

ಮಾಲಿನ್ಯದ ಅಂಶಗಳು

ಮೂಲ

ಪರಿಣಾಮಗಳು

1.

ಗಂಧಕದ ಆಕ್ಸೈಡ್‌ಗಳು

ಪಳಿಯುಳಿಕೆ ಇಂಧನ ಸುಡುವುದು ಕಬ್ಬಿಣದ ಅದಿರನ್ನು ಕರಗಿಸುವುದು ತೈಲ ಸಂಕ್ಷರಣಾ ಘಟಕ

ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ

2. 

ನೈಟ್ರೋಜನ್‌ ಆಕ್ಸೈಡ್‌ 

ಅಟೋಮೊಬೈ̧ಲ್‌ ವಿದ್ಯುತ್‌ ಸ್ಥಾವರಗಳಲ್ಲಿನ ನೈಟ್ರೋಜನ್‌ ಫೆರಾಕ್ಸೆಡ್‌ ಬಿಡುಗಡೆ ವಾಹನಗಳ ಹೊಗೆ

ಉಸಿರಾಟದ ತೊಂದರೆಗಳು

3. 

ಹೈಡ್ರೋ ಕಾರ್ಬನ್‌ಗಳು

ಪಳಿಯುಳಿಕೆ ಇಂಧನ ದಹನ ಸಿಗರೇಟ್‌ ಹೊಗೆ

ಶ್ವಾಸಕೋಶದ ಕ್ಯಾನ್ಸರ್‌

4. 

ಕಾಡ್ಮಿಯಂ

ಕೈಗಾರಿಕೆಗಳ ಇ-ತ್ಯಾಜ್ಯ

ಹೃದಯ ಸಂಬಂಧಿ ಕಾಯಿಲೆ 

5. 

ಪಾದರಸ 

ಕೈಗಾರಿಕೆಗಳ ತ್ಯಾಜ್ಯ ವಸ್ತುಗಳು

ನರಸಂಬಂಧಿ ಕಾಯಿಲೆ

6. 

ಕಾರ್ಬನ್‌ ಡೈ ಆಕ್ಸೈಡ್‌ 

ಪಳಿಯುಳಿಕೆ ಇಂಧನ ದಹಿಕೆ

ತಲೆನೋವು, ಹೃದಯ ಕಾಯಿಲೆ 

7.

ಕಲ್ನಾರು

ಗಣಿ ಮತ್ತು ಯಂತ್ರಾಗಾರಗಳು

ಶ್ವಾಸಕೋಶದ ಕ್ಯಾನ್ಸರ್‌

8.

ಸೀಸ

ಪೆಟ್ರೋಲ್‌ ಇ-ತ್ಯಾಜ್ಯ

ನರಸಂಬಂಧಿ ಕಾಯಿಲೆ

9. 

ಓಜೋನ್‌ (O3)

ವಾಹನಗಳ ಹೊಗೆ ಓಜೋನ್‌ ಉತ್ಪಾದಕಾ ಘಟಕಗಳು ವಿಮಾನ ಕ್ಯಾಬಿನ್‌ಗಳು.

ಉಸಿರಾಟದ ತೊಂದರೆಗಳು

ಉಪಸಂಹಾರ

ಪರಿಸರ ಮಾಲಿನ್ಯವು ಕೇವಲ ಪ್ರಕೃತಿಗೆ ಮಾತ್ರವಲ್ಲ, ಮಾನವನ ಜೀವನಕ್ಕೂ ಗಂಭೀರ ಬೆದರಿಕೆಯಾಗುತ್ತಿದೆ. ವಾಯು, ನೀರು ಮತ್ತು ಮಣ್ಣಿನ ಮಾಲಿನ್ಯದಿಂದ ಅನೇಕ ರೋಗಗಳು ಹೆಚ್ಚಾಗುತ್ತಿರುವುದು ಸ್ಪಷ್ಟವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಮತ್ತು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸುವುದು ಅತ್ಯಾವಶ್ಯಕ. ಸರ್ಕಾರದೊಂದಿಗೆ ನಾಗರಿಕರೂ ಸಹ ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಶುದ್ಧ ಪರಿಸರವೇ ಆರೋಗ್ಯಕರ ಭವಿಷ್ಯಕ್ಕೆ ಆಧಾರ ಎಂಬುದನ್ನು ನಾವು ಮರೆಯಬಾರದು.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳು

ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳು

ನಾಗರಿಕತೆ ಬೆಳೆದಂತೆಲ್ಲಾ ಹಾಗೂ ಜನಸಂಖ್ಯೆ ಹೆಚ್ಚಳದಿಂದ ಮಾನವನ ಬೇಕು ಬೇಡಗಳು ಹೆಚ್ಚುತ್ತವೆ. ಈ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಆತ ಅರಣ್ಯನಾಶದಂತಹ ಕೃತ್ಯವನ್ನು ಎಸೆಗುತ್ತಾನೆ. ಈ ಕಾರಣದಿಂದ ಪ್ರಾಣಿ ಪಕ್ಷಿಗಳಿಗೆ ತಮಗೆ ಬೇಕಾದ ಆಹಾರ ಸಿಗದಿದ್ದಾಗ ನಗರಗಳಿಗೆ ಲಗ್ಗೆ ಇಡುತ್ತವೆ. ಈ ಕ್ರಿಯೆ ನಿರಂತರವಾಗಿ ನಡೆಯುತ್ತದೆ ಇದನ್ನೇ ಮಾನವ-ವನ್ಯಜೀವಿ ಸಂಘರ್ಷ ಎಂದು ಕರೆಯಲಾಗಿದೆ. ಇದೊಂದು ವಿಚಿತ್ರವಾದ ಘಟನೆ ಎಂದು ಅನಿಸಿದರು ವಾಸ್ತವ ಸಂಗತಿಯೂ ಹೌದು. ವ್ಯವಸಾಯ ಬೆಳೆ ನಾಶ, ಸಾಕುಪ್ರಾಣಿ ಹಾಗೂ ಮಾನವನ ಮೇಲೆ ವನ್ಯಜೀವಿಗಳಿಂದ ಆಕ್ರಮಣ ಸಾಕಷ್ಟು ಪ್ರಮಾಣದಲ್ಲಿ ಸಾವು ನೋವು ಮುಂತಾದ ಘಟನೆಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗುತ್ತಲೇ ಇರುತ್ತವೆ. ಅದನ್ನು ನಾವು ನೋಡುತ್ತೇವೆ ಹಾಗೂ ಪತ್ರಿಕೆಗಳಲ್ಲಿ ವರದಿಯಾಗುವುದನ್ನು ಓದುತ್ತೇವೆ. ಎಷ್ಟೋ ಸಂದರ್ಭದಲ್ಲಿ ವನ್ಯ ಪ್ರಾಣಿಗಳಿಂದ ಮಾನವನಿಗೆ ಹಾಗೂ ಆತನ ಆಸ್ತಿಪಾಸ್ತಿಗಳಿಗೆ ಹಾನಿ ಉಂಟಾಗುತ್ತದೆ. ಆಗ ಮಾನವ- ವನ್ಯಜೀವಿಗಳ ನಡುವೆ ಒಂದು ರೀತಿ ಸಂಘರ್ಷ ಆರಂಭವಾಗುತ್ತದೆ.

ಮಾನವ-ವನ್ಯಜೀವಿ ಸಂಘರ್ಷಕ್ಕೆ ಕಾರಣಗಳು:

  1. ಏರುತ್ತಿರುವ ಜನಸಂಖ್ಯೆಯಿಂದ ಅರಣ್ಯ ನಾಶದ ಪ್ರಮಾಣ ಹೆಚ್ಚಾಗಿದೆ. ಹೀಗೆ ಅರಣ್ಯನಾಶದಿಂದ ಅರಣ್ಯವನ್ನೇ ನಂಬಿ ಬದುಕುತ್ತಿದ್ದ ವನ್ಯಜೀವಿಗಳು ಕಂಗಾಲಾಗಿವೆ. ಬೇರೆ ದಾರಿ ಇಲ್ಲದೆ ಅವುಗಳು ಕಾಡನ್ನು ಬಿಟ್ಟು ನಗರಗಳಿಗೆ ಪ್ರವೇಶ ಮಾಡುತ್ತವೆ. ಆಹಾರಕ್ಕಾಗಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಆಗ ಮಾನವ ಮತ್ತು ವನ್ಯಜೀವಿಗಳ ನಡುವೆ ಸಂಘರ್ಷ ಏರ್ಪಡುತ್ತದೆ.
  2. ಬರ, ಕ್ಷಾಮ, ಕಾಡಿಗೆಬೆಂಕಿ ಮುಂತಾದ ಸಂದರ್ಭಗಳಲ್ಲಿ ಕಾಡಿನಲ್ಲಿ ಆಹಾರದ ಕೊರತೆ ಕಂಡುಬಂದಾಗ ಬೇರೆ ಗತಿ ಇಲ್ಲದೆ ವನ್ಯಜೀವಿಗಳು ಹತ್ತಿರದ ಕೃಷಿ ಭೂಮಿಗೆ ದಾಳಿ ಮಾಡಿ ಬೆಳೆಯನ್ನು ಹಾನಿಮಾಡುತ್ತವೆ. ಇದರಿಂದ ನೊಂದ ರೈತನು ಪ್ರಾಣಿಗಳ ಮೇಲೆ ದಾಳಿ ಮಾಡಿ ಅವುಗಳನ್ನು ಸಾಯಿಸುತ್ತಾನೆ.
  3. ಕಾಡಿನ ಮೂಲಕ ಹಾಯ್ದು ಹೋಗುವ ರಸ್ತೆ, ರೈಲು ಮಾರ್ಗ ಹಾಗೂ ವಿದ್ಯುತ್ ಲೈನುಗಳು ಮುಂತಾದವುಗಳು ಅರಣ್ಯವನ್ನು ವಿಭಜಿಸಿವೆ. ಆಗ ವನ್ಯಜೀವಿಗಳು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಆಹಾರ ಮತ್ತು ನೀರಿಗಾಗಿ ವಲಸೆ ಹೋಗುವ ಸಂದರ್ಭಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷ ಏರ್ಪಡುತ್ತದೆ.
  4. ಮಾನವ ವನ್ಯ ಪ್ರಾಣಿಗಳನ್ನು ಕೀಟಲೆ ಮಾಡುವುದು ಮತ್ತು ಅವುಗಳನ್ನು ಕಲ್ಲಿನಿಂದ ಹೊಡೆದು ಗಾಯಗೊಳಿಸುವುದು ಮುಂತಾದ ಸಾಹಸಕ್ಕೆ ಕೈ ಹಾಕಿದಾಗ ರೊಚ್ಚಿಗೆದ್ದ ವನ್ಯ ಜೀವಿಗಳು ಮಾನವನ ಮೇಲೆ ದಾಳಿ ಮಾಡುತ್ತವೆ.
  5. ಕೃಷಿಕರು ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ತಮ್ಮ ಗದ್ದೆಗಳ ಸುತ್ತಲೂ ವಿದ್ಯುತ್ ತಂತಿ ಬೇಲಿಯನ್ನು ಹಾಕುವುದು, ಬಲೆಗಳನ್ನು ಅಳವಡಿಸುವುದು ಹಾಗೂ ಸ್ಫೋಟಗಳನ್ನು ಬಳಸುವುದರಿಂದ ಕಾಡು ಪ್ರಾಣಿಗಳು ಸಾಯುತ್ತವೆ.
  6. ಕಾಡಿನಲ್ಲಿ ಹಲವಾರು ಬಗೆಯ ಕಳೆ ವ್ಯಾಪಕವಾಗಿ ಬೆಳೆದಿದೆ. ಇದರಿಂದ ಹುಲ್ಲಿನ ದೊರೆಯುವಿಕೆ ಕಡಿಮೆಯಾಗಿ ಸಸ್ಯಹಾರಿ ಪ್ರಾಣಿಗಳು ಹತ್ತಿರದ ವ್ಯವಸಾಯ ಪ್ರದೇಶಗಳಿಗೆ ದಾಳಿ ಮಾಡಿ ಬೆಳೆಗಳನ್ನು ನಾಶಗೊಳಿಸುತ್ತವೆ.
  7. ಜನಸಂಖ್ಯೆಯ ಬೆಳವಣಿಗೆಯಿಂದಾಗಿ ಮಾನವನ ವಸತಿ ನಿಲಯಗಳು ಹಾಗೂ ವ್ಯವಸಾಯ ಕ್ಷೇತ್ರಗಳು ಕಾಡಿನ ಅಂಚಿನವರೆಗೆ ವಿಸ್ತರಿಸಿವೆ. ಇದರಿಂದ ವನ್ಯಜೀವಿಗಳು ವ್ಯವಸಾಯ ಪ್ರದೇಶಗಳಿಗೆ ದಾಳಿ ಮಾಡುವುದು ಸಹಜಕ್ರಿಯೆಯಾಗಿದೆ.
  8. ಮೇವಿನ ಕೊರತೆಯ ಜೊತೆಗೆ ನೀರಿನ ಕೊರತೆಯೂ ಸಹ ಇಂದು ಕಂಡುಬರುತ್ತಿದೆ. ಕಾಡಿನಲ್ಲಿನ ಜಲ ಮೂಲಗಳೆಲ್ಲ ಬತ್ತಿ ಹೋಗುತ್ತಿವೆ. ಇದರಿಂದ ವನ್ಯಜೀವಿಗಳು ನೀರಿಗಾಗಿ ನಗರ ಪ್ರದೇಶಗಳ ಕಡೆಗೆ ಬರುವುದು ಸಾಮಾನ್ಯವಾಗಿದೆ.
  9. ಸಾಕು ಪ್ರಾಣಿಗಳಾದ ಹಸು, ನಾಯಿ, ಕುರಿ ಮುಂತಾದವುಗಳು ಹಲವು ಬಾರಿ ವನ್ಯಜೀವಿಗಳ ಆಹಾರವಾಗಿ ಸಾಕಿದವರಿಗೆ ನಷ್ಟವಾಗುವುದರಿಂದ ಕೋಪಗೊಂಡು ರೈತರು ಕಾಡು ಪ್ರಾಣಿಗಳನ್ನು ಕೊಲ್ಲುತ್ತಾರೆ.
  10. ಮಾನವ-ವನ್ಯಜೀವಿ ಸಂಘರ್ಷಗಳಿಂದ ವನ್ಯಜೀವಿಗಳು ನಾಶವಾಗಬಹುದು ಇಲ್ಲವೇ ಅವುಗಳು ಸಾಯಬಹುದು.

ಪರಿಹಾರೋಪಾಯಗಳು: 

  1. ವನ್ಯ ಪ್ರಾಣಿಗಳ ನೀರಿನ ಕೊರತೆಯನ್ನು ಹೋಗಲಾಡಿಸಲು ಸಂಬಂಧಿಸಿದ ಅರಣ್ಯ ಇಲಾಖೆಯವರು ಕಾಡಿನ ನಡುವೆ ಪರ್ಯಾಯವಾಗಿ ಆಹಾರ ಮತ್ತು ನೀರಿನ ಸೌಲಭ್ಯಗಳನ್ನು ಒದಗಿಸಬೇಕು.
  2. ಕಾಡಿನ ಅಂಚಿನಲ್ಲಿ ರೈತರು ವನ್ಯ ಪ್ರಾಣಿಗಳಿಗೆ ಬೇಡವಾದ ಆಹಾರ ಪದಾರ್ಥಗಳನ್ನು ಬೆಳೆಸುವುದು.
  3. ವಿದ್ಯುತ್ ತಂತಿ ಬೇಲಿಯ ಬದಲಾಗಿ ಸೌರವಿದ್ಯುತ್ ತಂತಿ ಬೇಲಿಯನ್ನು ಅಳವಡಿಸುವುದು.
  4. ಮಾನವ ವನ್ಯಜೀವಿ ಸಂಘರ್ಷಗಳನ್ನು ತಡೆಯುವುದಕ್ಕಾಗಿ ಅರಣ್ಯ ಸಿಬ್ಬಂದಿಗೆ ಸುಸಜ್ಜಿತವಾದ ಉಪಕರಣಗಳು ಹಾಗೂ ವಾಹನ ಸೌಲಭ್ಯಗಳನ್ನು ನೀಡಬೇಕು.
  5. ರೈತನಬೆಳೆ ನಾಶವಾದಾಗ ಸರ್ಕಾರ ಬೆಳೆನಾಶ ಪರಿಹಾರವನ್ನು ನೀಡಬೇಕು.
  6. ವಲಸೆ ಹೋಗುವ ಪ್ರಾಣಿಗಳಿಗೆ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು.
  7. ಕಾಡು ಪ್ರಾಣಿಗಳು ಕೃಷಿ ಭೂಮಿಗಳಿಗೆ ಕಾಲಿಡದಂತೆ ತಡೆಯಲು ಮದ್ಯ ಕಂದಕವನ್ನು ನಿರ್ಮಿಸಬೇಕು.
  8. ಸಾಮಾನ್ಯವಾಗಿ ಸೂರ್ಯ ಮುಳುಗುವ ಸಮಯದಲ್ಲಿ ಕಾಡುಪ್ರಾಣಿಗಳು ಬೇಟೆಯಾಡುತ್ತವೆ.  ಆ ಸಮಯದಲ್ಲಿ ಸಾಕು ಪ್ರಾಣಿಗಳನ್ನು ಹೊರಗಡೆ ಬಿಡದಂತೆ ಕ್ರಮ ಕೈಗೊಳ್ಳಬೇಕು.

ಉಪಸಂಹಾರ

ಮಾನವ–ವನ್ಯಜೀವಿ ಸಂಘರ್ಷವು ಇಂದಿನ ಗಂಭೀರ ಪರಿಸರ ಸಮಸ್ಯೆಯಾಗಿದೆ. ಇದಕ್ಕೆ ಮಾನವನ ಅಜಾಗರೂಕತೆ, ಅರಣ್ಯ ನಾಶ ಹಾಗೂ ಪ್ರಕೃತಿ ಸಂಪನ್ಮೂಲಗಳ ಅತಿಯಾದ ದುರುಪಯೋಗವೇ ಪ್ರಮುಖ ಕಾರಣಗಳಾಗಿವೆ. ವನ್ಯಜೀವಿ ಸಂರಕ್ಷಣೆ ಹಾಗೂ ಮಾನವನ ಸುರಕ್ಷತೆ ಎರಡನ್ನೂ ಸಮತೋಲನದಲ್ಲಿ ಕಾಯ್ದುಕೊಳ್ಳುವುದು ಅತ್ಯಗತ್ಯವಾಗಿದೆ. ಸರ್ಕಾರ, ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಒಟ್ಟಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಪ್ರಕೃತಿಯನ್ನು ಉಳಿಸುವುದೇ ಮಾನವ ಬದುಕನ್ನು ಉಳಿಸುವ ಮಾರ್ಗವಾಗಿದೆ.

ಅಂತರಾಷ್ಟ್ರೀಯ ಒಪ್ಪಂದಗಳು

ಅಂತರಾಷ್ಟ್ರೀಯ ಒಪ್ಪಂದಗಳು

ಇಡೀ ಭೂಮಂಡಲವನ್ನು ಆವರಿಸಿರುವ ಪರಿಸರವು ಅಂತರಾಷ್ಟ್ರೀಯ ಸಂಪನ್ಮೂಲವಾಗಿದೆ. ಪರಿಸರವು ಯಾವುದೇ ಭಾಗದಲ್ಲಿ ಮಲಿನಗೊಂಡರೂ ಅದರ ಪರಿಣಾಮ ಪ್ರಪಂಚದ ಎಲ್ಲಾ ದೇಶಗಳ ಮೇಲೆ ಉಂಟಾಗುತ್ತದೆ. ಸಾಗರ, ಸಮುದ್ರ, ಅಂತರಾಷ್ಟ್ರೀಯ ನದಿಗಳು, ಗಾಳಿ ಮೊದಲಾದವುಗಳು ಇಡೀ ವಿಶ್ವಕ್ಕೆ ಸಂಬಂಧಿಸಿವೆ. ಹೀಗಾಗಿ ಪರಿಸರ ಮಾಲಿನ್ಯ ಎಲ್ಲಾ ದೇಶಗಳ ವ್ಯಾಪ್ತಿಗೆ ಒಳಪಡುವುದರಿಂದ ಜಗತ್ತಿನ ಎಲ್ಲಾ ದೇಶಗಳು ಪರಿಸರ ರಕ್ಷಣೆಗಾಗಿ ಟೊಂಕ ಕಟ್ಟಿನಿಂತಿವೆ. ಇದಕ್ಕೆ ಎಲ್ಲಾ ದೇಶಗಳ ಒಪ್ಪಿಗೆಯು ಇದೆ. ಪರಿಸರ ರಕ್ಷಣೆಗಾಗಿ ವಿಶ್ವದ ವಿವಿಧ ದೇಶಗಳು ಹಲವಾರು ಒಪ್ಪಂದಗಳನ್ನು ಸಹ ಮಾಡಿಕೊಂಡಿವೆ. ಅವುಗಳಲ್ಲಿ ಪ್ರಮುಖವಾದವುಗಳು ಈ ಕೆಳಗಿನಂತಿವೆ.

1.  ಮಾಂಟ್ರಿಯಲ್ ಶಿಷ್ಟಾಚಾರ: 

ದಿನೇ ದಿನೇ ಓಜೋನ್ ಪದರು ನಾಶಗೊಳ್ಳುತ್ತಿರುವುದರಿಂದ ಆತಂಕಗೊಂಡ ವಿಶ್ವದ ಅನೇಕ ದೇಶಗಳು 1987ರಲ್ಲಿ ಪರಿಸರವನ್ನು ರಕ್ಷಿಸುವ ಸಲುವಾಗಿ ಜಾಗತಿಕ ಸಮಾವೇಶವನ್ನು ಕೆನಡಾದ ಮಾಂಟ್ರಿಯಲ್‌ನಲ್ಲಿ ಹಮ್ಮಿಕೊಂಡವು. ಈ ಸಮಾವೇಶದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳು ಓಜೋನ್‌ ವಿನಾಶಕ ವಸ್ತುಗಳನ್ನು ಕ್ರಮೇಣವಾಗಿ ಕಿತ್ತು ಹಾಕಲು ನಿರ್ಣಯವನ್ನು ತೆಗೆದುಕೊಂಡವು. ವೈದ್ಯಕೀಯ ಅಥವಾ ಸಂಶೋಧನಾ ಕ್ಷೇತ್ರವನ್ನು ಹೊರತುಪಡಿಸಿ ಅವುಗಳ ಬಳಕೆಯನ್ನು ಕಡಿಮೆಗೊಳಿಸಲಾಯಿತು. ಹೀಗಾಗಿ ಇದನ್ನು ʻʻಮಾಂಟ್ರಿಯಲ್ ಶಿಷ್ಟಾಚಾರʼʼ ಎಂದು ಕರೆಯುತ್ತಾರೆ. ಮಾಂಟ್ರಿಯಲ್ ಶಿಷ್ಟಾಚಾರವೆಂದರೆ ಓಝೋನ್ ಪದರಿಗೆ ಹಾನಿಯನ್ನು ಉಂಟುಮಾಡುವಂತಹ ಯಾವುದೇ ಮಲಿನಕಾರಕ ವಸ್ತುಗಳನ್ನು ಉಪಯೋಗಿಸುವುದಿಲ್ಲ ಎಂಬ ಪ್ರತಿಜ್ಞೆ ಮಾಡುವುದು ಎಂದರ್ಥ. ಇದು 1989 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಜಗತ್ತಿನ ಬಹುತೇಕ ದೇಶಗಳು ಮಾಂಟ್ರಿಯಲ್ ಶಿಷ್ಟಾಚಾರವನ್ನು ಒಪ್ಪಿಕೊಂಡಿವೆ. 1990ರ ಲಂಡನ್ ಸಮಾವೇಶದಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ತಿದ್ದುಪಡಿ ಮಾಡಲಾಯಿತು. ಇದರ ಪ್ರಕಾರ ಅಭಿವೃದ್ಧಿಯನ್ನು ಹೊಂದಿದ ದೇಶಗಳು ನೀಡಿದ ಕೊಡುಗೆಯಿಂದ ಬಹುಪಕ್ಷಿಯ ನಿಧಿಯನ್ನು ಆರಂಭಿಸಲಾಯಿತು. ಈ ನಿಧಿಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಓಜೋನ್‌ ಪದರು ವಿನಾಶದ ವಸ್ತುಗಳ ಬದಲಾಗಿ ಪರ್ಯಾಯ ರಸಾಯನಿಕಗಳನ್ನು ಉತ್ಪಾದಿಸುವ ತಂತ್ರಜ್ಞಾನಕ್ಕೆ ಬಳಕೆ ಮಾಡಬಹುದುದಾಗಿದೆ.

ಭಾರತವು 1992 ರಲ್ಲಿ ಮಾಂಟ್ರಿಯಲ್ ಶಿಷ್ಟಾಚಾರಕ್ಕೆ ಸಹಿ ಹಾಕಿತು. ತದನಂತರ 1998ರ ಅರಣ್ಯ ಸಚಿವಾಲಯದ ನಿಬಂಧನೆಗಳ ಪ್ರಕಾರ 2003 ಫೆಬ್ರವರಿ ಹೊತ್ತಿಗೆ ವಿನಾಶಗಳ ಬಳಕೆಯನ್ನು ನಿಲ್ಲಿಸಬೇಕಿತ್ತು. ಆ ಪ್ರಕಾರ ಹ್ಯಾಲೋಜೀನ್ ಬಳಕೆಯನ್ನು ಸ್ಥಗಿತಗೊಳಿಸಿ ಸಿ. ಎಫ್. ಸಿ. ಗಳನ್ನು ಕಡಿಮೆಗೊಳಿಸಿದೆ. ಮಾಂಟ್ರಿಯಲ್ ಶಿಷ್ಟಾಚಾರವು ಈಗಾಗಲೇ ಎಂಟು ಬಾರಿ ತಿದ್ದುಪಡಿಗೆ ಒಳಪಟ್ಟಿರುವುದರಿಂದ ಈ ಶಿಷ್ಟಾಚಾರ ಯಶಸ್ವಿಯಾಗಿದೆ. ಈ ಒಪ್ಪಂದವು 2050 ರ ವೇಳೆಗೆ ಓಝೋನ್ ಪದರದ ಮೂಲಸ್ಥಿತಿಯನ್ನು ಮರುಸ್ಥಾಪಿಸುವಲ್ಲಿ ಸಫಲತೆಯನ್ನು ಕಾಣುವತ್ತ ಹೆಜ್ಜೆ ಹಾಕಿದೆ.

2. ಕ್ಯೂಟೋ ಶಿಷ್ಟಾಚಾರ 

 ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡುವುದರ ಬಗ್ಗೆ ಹಲವು ದೇಶಗಳ ನಡುವಿನ ಪ್ರಮುಖ ಅಂತರಾಷ್ಟ್ರೀಯ ಒಪ್ಪಂದವೇ ಕ್ಯೂಟೊ ಶಿಷ್ಟಾಚಾರ. ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆಯ ಚೌಕಟ್ಟು  ಸಮಾವೇಶದ ಅಡಿಯಲ್ಲಿ ಕ್ಯೂಟೊ ಶಿಷ್ಟಾಚಾರವು 1997 ಡಿಸೆಂಬರ್ 11ರಂದು ಅಂಗೀಕಾರವಾಯಿತು. ವಿಶ್ವದ 192 ದೇಶಗಳು ಈ ಒಪ್ಪಂದಕ್ಕೆ 2005 ಫೆಬ್ರವರಿ 16ರಂದು ಸಹಿಹಾಕಿದವು. ಈ ಒಪ್ಪಂದದ ಮೂಲ ಗುರಿ ಎಂದರೆ ವಾಯುಮಂಡಲದಲ್ಲಿನ ಹಸಿರು ಮನೆ ಅನಿಲಗಳ ಪ್ರಮಾಣವನ್ನು ಕಡಿಮೆಗೊಳಿಸಿ ವಿಶ್ವ ತಾಪಮಾನ ಹೆಚ್ಚಳ ಹಾಗೂ ಅದರಿಂದ ಉಂಟಾಗುವ ಬದಲಾವಣೆಗಳನ್ನು ತಡೆಗಟ್ಟುವುದಾಗಿದೆ. ಇದಕ್ಕೆ ಕಾರಣವಾಗಿರುವಂತಹ ಪ್ರಮುಖ ಹಸಿರು ಮನೆ ಅನಿಲಗಳೆಂದರೆ ಇಂಗಾಲದ ಡೈಆಕ್ಸೈಡ್‌ CO2, ಮೀಥೇನ್ CH4, ನೈಟ್ರಸ್ ಆಕ್ಸೈಡ್ NO2, ಹೈಡ್ರೋ ಫ್ಲೋರೋ ಕಾರ್ಬನ್‌ಗಳು CFCs, ಫರ್ ಫ್ಲೋರೋ ಕಾರ್ಬನ್ PFCs, ಸಲ್ಫರ್ ಹೆಕ್ಸಾ ಫ್ಲೋರೈಡ್ SF6 ಇವುಗಳು ಹೊರ ಸೂಸುವ ಅನಿಲಗಳನ್ನು ತಗ್ಗಿಸುವ ತೀರ್ಮಾನ ಕೈಗೊಳ್ಳಲಾಯಿತು. ಈ ಒಪ್ಪಂದದಲ್ಲಿ 2012ರ ವೇಳೆಗೆ 1990ರ ಇಂಗಾಲಾಮ್ಲ ಬಿಡುಗಡೆಗಿಂತ ಶೇ 8 ರಿಂದ 10ರಷ್ಟು ಪ್ರಮಾಣವನ್ನು ಮಿತಿಗೊಳಿಸುವಂತೆ ಸೂಚಿಸಲಾಯಿತು. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಅರಣ್ಯ ಬೆಳೆಸುವಂತೆ ಸೂಚಿಸಲಾಯಿತು. ಈ ವಿಷಯದಲ್ಲಿ ಅಭಿವೃದ್ಧಿ ಹೊಂದಿದ ಹಾಗೂ ಹೊಂದುತ್ತಿರುವ ದೇಶಗಳ ನಡುವೆ ಒಮ್ಮತದ ನಿರ್ಧಾರದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬಂದವು. ಆದರೂ 2050ರ ವೇಳೆಗೆ ಹಸಿರು ಮನೆ ಅನಿಲಗಳ ಹರಡುವಿಕೆಯ ಪ್ರಮಾಣವನ್ನು ತಗ್ಗಿಸಲು ಬಹುಪಾಲು ದೇಶಗಳು ಒಪ್ಪಿಕೊಂಡವು.

3. ಜೀವ ವೈವಿಧ್ಯತೆ ಸಮ್ಮೇಳನ: 

ಇದೊಂದು ಅಂತರಾಷ್ಟ್ರೀಯ ಸಮಾವೇಶವಾಗಿದ್ದು ಜೈವಿಕ ವೈವಿಧ್ಯತೆಯನ್ನು ಕಾಪಾಡುವುದು ಇದರ ಗುರಿಯಾಗಿದೆ. ಜೀವವೈವಿಧ್ಯತೆ ಸಮಾವೇಶ ಬ್ರೆಜಿಲ್‌ನ ರೆಯೋಡಿ ಜನೈರೋ ನಗರದಲ್ಲಿ ವಿಶ್ವಸಂಸ್ಥೆಯ ಎನ್‌ವಿರಾನ್‌ಮೆಂಟ್ ಪ್ರೋಗ್ರಾಮ್ (UNEP) ಆಯೋಜನೆ ಮಾಡಿದ್ದು ರಯೋ ಸಮಿತಿನಲ್ಲಿ ವಿಶ್ವದ ಬಹುತೇಕ ದೇಶಗಳು ಸಹಿ ಹಾಕಿದ ಅತಿ ಮುಖ್ಯ ಒಡಂಬಡಿಕೆಯಾಗಿದೆ. ಇದು 1993ರಲ್ಲಿ ಜಾರಿಗೆ ಬಂದಿದ್ದು ಈ ಒಪ್ಪಂದಕ್ಕೆ ಪೂರಕವಾಗಿ ಕಾರ್ಟಿಜೀನಾ ಹಾಗೂ ನಗೋಯ ಪ್ರೋಟೋಕಾಲ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಈ ಒಪ್ಪಂದದ ಉದ್ದೇಶಗಳೆಂದರೆ ಜೀವ ವೈವಿಧ್ಯ ಘಟಕಗಳ ಸುಸ್ಥಿರ ಬಳಕೆ. ಜೈವಿಕ ಸಂಪನ್ಮೂಲಗಳ ನ್ಯಾಯಯುತ ಹಾಗೂ ಸಮಾನ ಹಂಚಿಕೆ ನಂತರ 1994ರಲ್ಲಿ ಜೀವವೈವಿಧ್ಯತೆಯ ಪ್ರಥಮ ಸಮಾವೇಶ ಬಹುಮಾಸದಲ್ಲಿ ಜರುಗಿತು.

4. ಕಾರ್ಟೀಜಿನಾ ಶಿಷ್ಟಾಚಾರ:

ಕಾರ್ಟಿಜಿನಾ ಶಿಷ್ಟಾಚಾರ ಜೀವ ವೈವಿಧ್ಯತೆಯ ಪೂರಕವಾಗಿ ಜಾರಿಗೆ ಬಂದಿತು. ಇದು ಜೈವಿಕ ಒಪ್ಪಂದದ ಮೇಲಿನ ಸಮಾವೇಶವಾಗಿದೆ. ಜೀವಿಗಳಿಗೆ ಒದಗಬಹುದಾದ ಅಪಾಯವನ್ನು ತಪ್ಪಿಸಲು 2003 ಸೆಪ್ಟೆಂಬರ್ 11ರಂದು ಕಾರ್ಟಿಜಿನಾ ಶಿಷ್ಟಾಚಾರ ಜಾರಿಗೆ ಬಂದಿತು. ಇದು ಕುಲಾಂತರಿ ಜೀವಿಗಳನ್ನು ಆಮದು ಮಾಡಿಕೊಳ್ಳುವ ಜೀವಿಗಳಿಗೆ ಎಲ್ಲಾ ರೀತಿಯ ಉಚಿತ ಮಾಹಿತಿಯನ್ನು ಒದಗಿಸುತ್ತದೆ.

5. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟ: 

ದೈಹಿಕ ಹೋರಾಟದ ಬದಲು ರಸಾಯನಿಕ ವಸ್ತುಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರಿಕರ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ, ಹಾಗೂ ಆರೋಗ್ಯ ಹಾನಿ ಉಂಟು ಮಾಡುವುದನ್ನು ರಸಾಯನಿಕ ಅಸ್ತ್ರ ಎಂದು ಕರೆಯುವರು. ವಿಷಪೂರಿತ ರಸಾಯನಿಕಗಳನ್ನು ಇದಕ್ಕಾಗಿಯೇ ಬಳಕೆ ಮಾಡಲಾಗುತ್ತದೆ. ಈ ಒಕ್ಕೂಟವು 1993 ಸಮಾವೇಶಗೊಂಡಿತು. ಇದರಲ್ಲಿ 165 ದೇಶಗಳು ಭಾಗವಹಿಸಿದ್ದವು ಹಾಗೂ ತಮ್ಮ ಒಪ್ಪಿಗೆಯನ್ನು ಸೂಚಿಸಿದವು. ಇದು 1997ರಲ್ಲಿ ಜಾರಿಗೆ ಬಂದಿತು. ಈ ಒಪ್ಪಂದದ ಪ್ರಕಾರ.

  1.  ಪ್ರಪಂಚದ ಯಾವುದೇ ರಾಷ್ಟ್ರವು ಅಣ್ವಸ್ತ್ರ ಅಭಿವೃದ್ಧಿ, ಉತ್ಪಾದನೆ, ಸಂಗ್ರಹಣೆ, ಅಣ್ವಸ್ತ್ರಗಳನ್ನು ಇರಿಸಿಕೊಳ್ಳುವಂತಿಲ್ಲ.
  2.  ರಸಾಯನಿಕ ಅಸ್ತ್ರಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದನ್ನು ನಿರ್ಬಂಧಿಸಿದೆ.
  3.  ರಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡುವುದನ್ನು ತಡೆಗಟ್ಟಲಾಗಿದೆ.
  4.  ಒಕ್ಕೂಟ ನಿರ್ಬಂಧಿತ ವಸ್ತುಗಳನ್ನು ಬಳಸುವಂತಿಲ್ಲ.

ಇದರ ಕೇಂದ್ರ ಕಚೇರಿ ನೆದರ್ಲ್ಯಾಂಡ್‌ನ ಹೇಗ್‌ ಎಂಬಲ್ಲಿದೆ. ಈ ಕಚೇರಿಯ ಕಾರ್ಯವೈಖರಿಯನ್ನು ಕಂಡು 2013ರಲ್ಲಿ ಅದಕ್ಕೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಭಾರತ ಈ ಒಕ್ಕೂಟದ ಸದಸ್ಯ ದೇಶವಾಗಿದೆ. 2000 ದಲ್ಲಿ ಭಾರತವು ʻʻದಿ ಕೆಮಿಕಲ್ ವೆಪೆನ್ಸ್‌ ಕನ್ವೆನ್ಸನಲ್ ಆಕ್ಟ್‌ನ್ನು ಜಾರಿಗೆ ತಂದಿದೆ.

ಉಪಸಂಹಾರ

ಅಂತರಾಷ್ಟ್ರೀಯ ಒಪ್ಪಂದಗಳು ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಮಾಂಟ್ರಿಯಲ್ ಮತ್ತು ಕ್ಯೂಟೋ ಶಿಷ್ಟಾಚಾರಗಳಂತಹ ಒಪ್ಪಂದಗಳು ಜಾಗತಿಕ ಪರಿಸರ ಸಮಸ್ಯೆಗಳನ್ನು ತಗ್ಗಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮಗಳನ್ನು ಸೂಚಿಸಿವೆ. ಜೀವ ವೈವಿಧ್ಯತೆ ಸಮ್ಮೇಳನ ಹಾಗೂ ಕಾರ್ಟಿಜಿನಾ ಶಿಷ್ಟಾಚಾರಗಳು ಪ್ರಕೃತಿ ಸಂಪತ್ತಿನ ಸುಸ್ಥಿರ ಬಳಕೆಗೆ ಮಾರ್ಗದರ್ಶನ ನೀಡುತ್ತವೆ. ರಸಾಯನಿಕ ಅಸ್ತ್ರ ನಿರ್ಬಂಧನ ಒಕ್ಕೂಟವು ಮಾನವ ಜೀವ ರಕ್ಷಣೆಗೆ ಸಹಕಾರಿಯಾಗಿದೆ. ಈ ಒಪ್ಪಂದಗಳನ್ನು ಯಶಸ್ವಿಯಾಗಿ ಜಾರಿಗೆ ತರುವುದು ಪ್ರತಿಯೊಂದು ರಾಷ್ಟ್ರದ ಜವಾಬ್ದಾರಿಯಾಗಿದೆ.