ಪರಿಸರ ಚಳುವಳಿಗಳು

ಪರಿಸರ ಚಳುವಳಿಗಳು

ಸ್ವಾಭಾವಿಕವಾಗಿ ಮಾನವ ಹಾಗೂ ಪರಿಸರದ ನಡುವೆ ಅತ್ಯಂತ ನಿಕಟವಾದ ಸಂಬಂಧವಿದೆ. ಮಾನವನು ಪರಿಸರದ ಒಂದು ಭಾಗವಾಗಿರುವುದರಿಂದ ಅದನ್ನು ಶುಚಿಯಾಗಿ ಹಾಗೂ ಅಚ್ಚು ಕಟ್ಟುತನದಿಂದ ಕಾಪಾಡಬೇಕು. ಶುದ್ಧ ಪರಿಸರವಿಲ್ಲದೆ ಆರೋಗ್ಯವಂತ ಜೀವನ ನಡೆಸುವುದು ಅಸಾಧ್ಯ. ಆದರೆ ಮಾನವ ತನ್ನ ದುರಾಸೆಯಿಂದಾಗಿ ಪರಿಸರವನ್ನು ಶೋಷಿಸುತ್ತಿದ್ದಾನೆ. ಹೀಗಾಗಿ ಪರಿಸರ ನಾಶ, ಪರಿಸರ ಮಾಲಿನ್ಯ ಹಾಗೂ ಪ್ರಕೃತಿ ವಿಕೋಪಗಳಿಂದ ಸಾಕಷ್ಟು ತೊಂದರೆಗಳು ಕಂಡುಬರುತ್ತವೆ. ನಗರೀಕರಣದಿಂದ ಉಂಟಾದ ತ್ಯಾಜ್ಯ ವಸ್ತುಗಳು ಇವುಗಳಿಂದ ಮಾನವನ ದಿನನಿತ್ಯದ ಸಹಜ ಜೀವನಕ್ಕೆ ನಷ್ಟ ಉಂಟಾಗುತ್ತಿದೆ. ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಇದರ ನಿರ್ವಹಣೆಯಲ್ಲಿ ಉಂಟಾಗುವ ವಿಳಂಬದಿಂದ ನೊಂದ ಜನರು ಹಾಗೂ ಪರಿಸರವಾದಿಗಳು ಚಳುವಳಿಯಲ್ಲಿ ತೊಡಗಿದರು. ಅಂತಹ ಹಲವಾರು ಚಳುವಳಿಗಳಲ್ಲಿ ಕೆಲವೊಂದು ಈ ಕೆಳಗಿನಂತೆ ವಿವರಿಸಲಾಗಿದೆ.

1. ಬಿಷ್ಣೊಯಿ ಚಳುವಳಿ: (Bishnoi movement)

ಸುಮಾರು 18ನೇ ಶತಮಾನದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಭಾರತದ ಪ್ರಥಮ ಹೋರಾಟ ಇದಾಗಿದೆ. ಈ ಕಾರಣದಿಂದ ಬಿಷ್ಣೊಯಿ ಸಮುದಾಯವನ್ನು ಭಾರತದ ಮೊದಲ ಪರಿಸರವಾದಿಗಳೆಂದು ಕರೆಯಲಾಗಿದೆ. ಈ ಹೋರಾಟದ ನಾಯಕತ್ವವನ್ನು ಅಮೃತದೇವಿ ವಹಿಸಿಕೊಂಡಿದ್ದರು. ಇದರಲ್ಲಿ ರಾಜಸ್ಥಾನದ ಖೇಜರ್ಲಿ ಮತ್ತು ಮಾರವಾರ ಪ್ರದೇಶದ ಸುಮಾರು 84 ಗ್ರಾಮಗಳ ಜನರು ಭಾಗವಹಿಸಿದ್ದರು. ಜೋದಪುರದ ರಾಜ ಅಭಯ್ ಸಿಂಗ್ 1730ರ ದಶಕದಲ್ಲಿ ತನಗೊಂದು ನೂತನ ಅರಮನೆಯನ್ನು ನಿರ್ಮಿಸಬೇಕೆಂದು ಯೋಚಿಸಿ ಖೇಜರ್ಲಿ ಎಂಬ ಗ್ರಾಮದಲ್ಲಿನ ಮರಗಳನ್ನು ಕಡಿದು ಅರಮನೆಗಾಗಿ ಪ್ರದೇಶವನ್ನು ಸ್ವಚ್ಛಗೊಳಿಸಲು ತನ್ನ ಸೈನಿಕರಿಗೆ ಆಜ್ಞೆ ಹೊರಡಿಸಿದನು. ತಮ್ಮ ಪೂರ್ವಜರು ಅನಾದಿಕಾಲದಿಂದಲೂ ರಕ್ಷಿಸಿ ಕೊಂಡು ಬಂದಿದ್ದ ದೈವಿ ಬನವನ್ನು ನಾಶ ಮಾಡುವುದನ್ನು ಸಹಿಸಲಾಗದೆ ಅಮೃತ ದೇವಿ ಎಂಬ ಹೆಣ್ಣು ಮಗಳು ಈ ರಾಜಾಜ್ಞೆಯನ್ನು ವಿರೋಧಿಸಿ ಚಳುವಳಿಯನ್ನು ಆರಂಭಿಸಿದಳು. ಆದರೆ ರಾಜನ ಸೈನಿಕರು ಅಮೃತ ದೇವಿಯವರ ವಿರೋಧವನ್ನು ಲೆಕ್ಕಿಸದೆ ಆಕೆಯನ್ನು ಹಾಗೂ ಆಕೆಯ ಸಹಚರರಾದ 363 ಜನರನ್ನು ಕೊಂದು ಹಾಕಿದರು. ಈ ಘಟನೆಯ ಮಾಹಿತಿಯನ್ನು ಪಡೆದ ರಾಜನು ಸ್ಥಳಕ್ಕೆ ಧಾವಿಸಿ ಬಂದು ಬಿಷ್ಣೊಯಿ ಜನಾಂಗಕ್ಕೆ ಕ್ಷಮೆಯಾಚಿಸಿ ಮರ ಕಡಿಯುವುದನ್ನು ನಿಲ್ಲಿಸುವಂತೆ ತನ್ನ ಸೈನಿಕರಿಗೆ ಅಜ್ಞಾಪಿಸಿದನು. ಬಿಷ್ಣೊಯಿ ಚಳುವಳಿಯಲ್ಲಿ ಸಾಕಷ್ಟು ಜನರ ಮಾರಣಹೋಮವಾಯಿತು. ಆದರೆ ಚಳುವಳಿ ಮಾತ್ರ ವಿಫಲವಾಗಲಿಲ್ಲ. ಸಾವಿರಾರು ಮರಗಳ ರಕ್ಷಣೆ ಆಯ್ತು, ನಂತರ ರಾಜನು ಬಿಷ್ಣೊಯಿ ರಾಜ್ಯವನ್ನು ಸುರಕ್ಷಿತ ಪ್ರದೇಶ ಎಂದು ಘೋಷಿಸಿದನು. ಈಗಲೂ ಈ ಕಾನೂನು ಆ ಪ್ರದೇಶದಲ್ಲಿ ಜಾರಿಯಲ್ಲಿದೆ. ಈ ಚಳುವಳಿಯ ಮುಂದುವರಿಕೆಯೇ ಚಿಪ್ಕೋ ಚಳುವಳಿಯಾಗಿದೆ. ಭಾರತದ ಸರ್ಕಾರವು ಅಮೃತದೇವಿ ಬಿಷ್ಣೊಯಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿ ಹಾಗೂ ರಾಜಸ್ಥಾನ ಸರ್ಕಾರವು ಅಮೃತದೇವಿ ಸ್ಮೃತಿ ಪರ್ಯಾಯ ಪ್ರಶಸ್ತಿ ರೂಪದಲ್ಲಿ ಈ ಚಳುವಳಿಯ ಯಶಸ್ಸನ್ನು ಇಂದಿಗೂ ಗೌರವಿಸುತ್ತಿದೆ.

2. ಸೈಲೆಂಟ್ ವ್ಯಾಲಿ ಚಳುವಳಿ ಮೌನ ಕಣಿವೆ ಚಳುವಳಿ (Silent valley movement)

ಕೇರಳದ ಸೈಲೆಂಟ್ ವ್ಯಾಲಿ 89 ಚದರ ಕಿಲೋಮೀಟರ್ ಪ್ರದೇಶ ಅತ್ಯಂತ ಸುಂದರ ತಾಜಾ ಹಾಗೂ ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳಿಂದ ಕೂಡಿದ ಅರಣ್ಯ ಪ್ರದೇಶವಾಗಿದೆ. ಇದು ವೈವಿಧ್ಯಮಯವಾದ ಸಸ್ಯ ಸಂಕುಲ, ಪ್ರಾಣಿ ಸಂಕುಲ ಹಾಗೂ ಸುಂದರ ಜಲಚರಗಳಿಂದ ಕೂಡಿದ ಕಣಜವಾಗಿದೆ. ಈ ಕಣಿವೆಯ ಮೂಲಕ ಕುಂತಿ ಪೂಜಾ ನದಿಯು ಹರಿಯುತ್ತಿದ್ದು ಈ ನದಿಗೆ 200 ಮೆಗಾ ವ್ಯಾಟ್ ವಿದ್ಯುತ್ ಯೋಜನೆಯನ್ನು ನಿರ್ಮಿಸಲು 1980 ರಲ್ಲಿ ಯೋಜನೆಯೊಂದನ್ನು ಹಾಕಿಕೊಳ್ಳಲಾಯಿತು. ಈ ಪರಿಶುದ್ಧವಾದ ಅರಣ್ಯವನ್ನು ರಕ್ಷಿಸುವ ಸಲುವಾಗಿ ನಡೆದ ಮಹತ್ವಪೂರ್ಣವಾದ ಹೋರಾಟವನ್ನು ಸೈಲೆಂಟ್ ವ್ಯಾಲಿ ಚಳುವಳಿ ಎಂದು ಕರೆಯಲಾಗಿದೆ. ಈ ಯೋಜನೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಿ ಜನರನ್ನು ಪ್ರೇರೇಪಿಸುವಲ್ಲಿ ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ ಯಶಸ್ವಿಯಾಯಿತು. ಸಾವಿರಾರು ಸಂಖ್ಯೆಯಲ್ಲಿ ಅಧ್ಯಾಪಕರು, ಸ್ಥಳೀಯ ನಾಗರಿಕರು ಹಾಗೂ ಪರಿಸರವಾದಿಗಳು ಈ ಚಳುವಳಿಯಲ್ಲಿ ಭಾಗವಹಿಸಿದರು. ಅಲ್ಲಿ ಜಲಾಶಯ ನಿರ್ಮಿಸುವುದರಿಂದ ಆಗುವ ನಷ್ಟಗಳು ಹಾಗೂ ಒಂದು ವೇಳೆ ಜಲಾಶಯ ನಿರ್ಮಾಣವಾದರೆ ಅದರಿಂದ ತಯಾರಿಸುವ ವಿದ್ಯುತ್ತು ಜನಸಾಮಾನ್ಯರಿಗೆ ದೊರಕದೆ ಕೇವಲ ಕೈಗಾರಿಕಾ ವಲಯಗಳಿಗೆ ಮಾತ್ರ ಸರಬರಾಜು ಆಗುತ್ತದೆ ಎಂಬುದನ್ನು ಜನರಿಗೆ ತಿಳಿ ಹೇಳಲಾಯಿತು. ಹಾಗೂ ಈ ಯೋಜನೆಯಿಂದ ಜೈವಿಕ ವೈವಿಧ್ಯತೆಯ ಮರಣಹೋಮದ ಬಗ್ಗೆಯೂ ತಿಳಿಸಲಾಯಿತು. ಇವೆಲ್ಲ ಕಾರಣಗಳನ್ನು ಮುಂದೆ ಇಟ್ಟುಕೊಂಡು ಚಳುವಳಿಯನ್ನು ಶಾಂತಿಯುತವಾಗಿ ನಡೆಸಲಾಯಿತು. ಅರಣ್ಯ ನಾಶವನ್ನು ತಡೆಯುವಂತೆ ಹೋರಾಡಲಾಯಿತು. ಪರಿಣಾಮವಾಗಿ ಕೇಂದ್ರ ಸರ್ಕಾರ ಎಂ ಜಿ ಕೆ ಮೆನನ್ ನಾಯಕತ್ವದಲ್ಲಿ ಒಂದು ಸಮಿತಿಯನ್ನು ರಚಿಸಿತು. 1983 ರಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸ್ಸು ಮಾಡಿತು. ಸಮಿತಿಯ ಶಿಫಾರಸಿನ ಮೇರೆಗೆ 1985ರಲ್ಲಿ ಸೈಲೆಂಟ್ ವ್ಯಾಲಿ ಯೋಜನೆಯನ್ನು ಕೈ ಬಿಡಲಾಯಿತು.

3. ಚಿಪ್ಕೋ ಚಳುವಳಿ:(Chipko movement)

ಭಾರತದಲ್ಲಿ ಪರಿಸರ ರಕ್ಷಣೆಗಾಗಿ ನಡೆದ ಹಲವಾರು ಚಳುವಳಿಗಳಲ್ಲಿ 1970ರಲ್ಲಿ ನಡೆದ ಚಿಪ್ಕೋ ಚಳುವಳಿಯು ಅತ್ಯಂತ ಪ್ರಮುಖವಾದದ್ದು ಆಗಿದೆ. ಪರಿಸರ ಸಂರಕ್ಷಣೆಯಲ್ಲಿ ನಡೆದ ಚಳುವಳಿಗಳಲ್ಲಿ ಇದು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಇದು ಭಾರತ ಮಾತ್ರವಲ್ಲದೆ ಜಗತ್ತಿನಲ್ಲಿಯೇ ಹಿಮಾಲಯದ ಪರಿಸರದ ಬಗ್ಗೆ ಕಾಳಜಿ ವಹಿಸುವುದರ ಕುರಿತು ಜನಜಾಗೃತಿಯನ್ನು ಮೂಡಿಸಿತು. ಸ್ವಾತಂತ್ರ್ಯ ಪೂರ್ವದಲ್ಲಿಯೇ ಹಿಮಾಲಯವನ್ನು ರಕ್ಷಿಸುವ ಹಲವಾರು ಚಿಕ್ಕಪುಟ್ಟ ಹೋರಾಟಗಳು ನಡೆದಿದ್ದವು. ಹಿಮಾಲಯದಲ್ಲಿ ದೊರಕುವ ಅಮೂಲ್ಯವಾದ ಗಿಡ ಮೂಲಿಕೆಗಳ ಕುರಿತು ಮಾಹಿತಿ ಹಿಮಾಲಯವು ಶತ್ರುಗಳಿಂದ ಭಾರತವನ್ನು ರಕ್ಷಿಸಿ, ಭಾರತಕ್ಕೆ ಬಿಸಿ ಗಾಳಿಯ ಬದಲಾಗಿ ತಂಪುಗಾಳಿಯನ್ನು ನೀಡುತ್ತದೆ. ಹಿಮಾಲಯವು ಸಿಂಧು ಗಂಗಾ ಬ್ರಹ್ಮಪುತ್ರ ನದಿಗಳ ಹುಟ್ಟಿಗೆ ಕಾರಣವಾಗಿದೆ. ಇಲ್ಲಿರುವ ಅರಣ್ಯ ಅತ್ಯಂತ ಪವಿತ್ರವಾಗಿದೆ ಎಂಬುದರ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಯಿತು. ಇದರ ಜೊತೆಗೆ ಹಿಮಾಲಯದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಅಪಾರ ಮರಗಳನ್ನು ಕಡೆಯಲಾಯಿತು. ಇದರಿಂದ ಮೇಲ್ಮಣ್ಣು ಸಡಿಲಗೊಂಡು ಪ್ರವಾಹಗಳು ಸಂಭವಿಸಿ ಸ್ಥಳೀಯರಿಗೆ ಕಿರಿಕಿರಿ ಆಯ್ತು. 1970ರ ದಶಕದಲ್ಲಿ ಹಿಮಾಲಯ ಪ್ರದೇಶದಲ್ಲಿ ಭೀಕರ ಪ್ರವಾಹ ಉಂಟಾಯಿತು. ಅಲ್ಲಿಯೇ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ದಾಸೋಲಿ ಗ್ರಾಮ ಸ್ವರಾಜ್ಯ ಮಂಡಲದ ಕಾರ್ಯಕರ್ತರು ಅಲ್ಲಿನ ಅರಣ್ಯ ಭೂಮಿ ಜನರು ಪರಸ್ಪರ ಅವಲಂಬನೆಯ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿದರು. ಕಾಡಿದ್ದರೆ ಮಾತ್ರ ನಾವು ಎಂಬುದನ್ನು ತಿಳಿ ಹೇಳಿದರು.

ಇದೇ ಸಂದರ್ಭದಲ್ಲಿ ಸರ್ಕಾರವು ಹಳ್ಳಿಯ ಜನರಿಗೆ ಕೃಷಿ ಉಪಕರಣಗಳನ್ನು ತಯಾರಿಸಲು ಅಗತ್ಯವಿರುವ ಕಡಿಮೆ ಸಂಖ್ಯೆಯ ಮರಗಳನ್ನು ಕಡಿಯಲು ನಿರಾಕರಿಸಿತು. ಬೃಹತ್ ಕ್ರೀಡಾ ಉತ್ಪಾದನಾ ಕಂಪನಿಗೆ ಅರಣ್ಯವನ್ನು ಕಡಿಯಲು ಅನುಮತಿ ನೀಡಿತು. ಇದು ಗ್ರಾಮಸ್ಥರ ಆ ಆಕ್ರೋಶಕ್ಕೆ ಕಾರಣವಾಯಿತು. 1973 ರಲ್ಲಿ ಮೊದಲ ಬಾರಿಗೆ ಚಿಪ್ಕೋ ಚಳುವಳಿ, ಆರಂಭವಾಯಿತು. ಜನರು ಮರಗಳ ಕಾಂಡಗಳಿಗೆ ಪವಿತ್ರವಾದ ದಾರಗಳನ್ನು ಕಟ್ಟಿ ಅವುಗಳನ್ನು ಅಪ್ಪಿಕೊಳ್ಳುವ ಮೂಲಕ ಈ ಚಳುವಳಿಗೆ ಚಾಲನೆ ನೀಡಿದರು. ಅರಣ್ಯ ಉತ್ಪನ್ನಗಳನ್ನು ಉಪಯೋಗಿಸುವ ಹಕ್ಕು ಮಾತ್ರ ಇಲ್ಲಿನ ಗ್ರಾಮೀಣರಿಗೆ ಇದೆ ಎಂಬುದು ಈ ಚಳುವಳಿಯ ಗುರಿಯಾಗಿತ್ತು. ಮಹಿಳೆಯರು ಈ ಚಳುವಳಿ ಭಾಗವಹಿಸಿದ್ದರು. 1978 ರಲ್ಲಿ ಮಹಿಳೆಯರ ಮೇಲೆ ಗುಂಡು ಹಾರಿಸುವ ಮೂಲಕ ಚಳುವಳಿ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿತು. ನಂತರ ಚಂಡಿ ಪ್ರಸಾದ್ ಭಟ್ಟ ನೇತೃತ್ವದಲ್ಲಿ ಚಳುವಳಿ ಉಗ್ರವಾಯಿತು.

ಆಗ ಉತ್ತರಖಾಂಡ ಮುಖ್ಯಮಂತ್ರಿ ಹೇಮಾವತಿ ನಂದನ್ ಬಹುಗುಣರವರು ಘಟನಾ ಪರಿಶೀಲನೆಗೆ ಸಮಿತಿಯನ್ನು ನೇಮಿಸಿದರು. ಈ ಸಮಿತಿ ಸ್ಥಳೀಯರ ಪರವಾಗಿ ವರದಿ ಸಲ್ಲಿಸಿತು. ಸ್ತ್ರೀಯರು ಉತ್ತರ ಕಾಶಿಯಿಂದ ಕಸೌಲಿಯವರೆಗೆ ಗುಡ್ಡಗಾಡು ಪ್ರದೇಶದಲ್ಲಿ 75 ಕಿ.ಮೀ ವರೆಗೆ ಪಾದಯಾತ್ರೆ ನಡೆಸಿದ್ದಕ್ಕೂ ಸಾರ್ಥಕವಾಯಿತು. ಈ ಚಳುವಳಿಯನ್ನು ಸುಂದರ್ಲಾಲ್ ಬಹುಗುಣ, ಘನ ಶ್ಯಾಮ್‌ ಶಾತೂರಿ, ಹಿಂದೂ ಟೀಕೇಕಾರ್ ಹಾಗೂ ಧೂಮಸಿಂಗ್ ನೇಗಿ ಮತ್ತಿತರು ಬೆಂಬಲಿಸಿದ್ದರು.

4. ಅಪ್ಪಿಕೋ ಚಳುವಳಿ: (Appiko movement)

ಉತ್ತರ ಭಾರತದಲ್ಲಿ ನಡೆದ ಚಿಪ್ಕೋ ಚಳುವಳಿಯಿಂದ ಪ್ರೇರಿತರಾದ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಗಳ ಜನರು ಪಾಂಡುರಂಗ ಹೆಗಡೆ ನೇತೃತ್ವದಲ್ಲಿ ಚಳುವಳಿಯನ್ನು ಆರಂಭಿಸಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಸಿದ್ದಾಪುರ ತಾಲೂಕುಗಳಲ್ಲಿ ಕಾಂಟ್ರಾಕ್ಟರ್‌ಗಳಿಗೆ ಮರಕಡಿಯಲು ಅನುಮತಿ ನೀಡಿದ ಸರ್ಕಾರದ ವಿರುದ್ಧ ಚಳುವಳಿಗಾರರು ಹೋರಾಟ ಆರಂಭ ಮಾಡಿದರು. ಮರ ಕಡಿಯುವುದನ್ನು ತಡೆಯಲು ಮರಗಳನ್ನೇ ಅಪ್ಪಿಕೊಂಡರು. ಮರಗಳನ್ನು ಕಡಿಯುವುದರಿಂದ ಮುಂದೆ ಆಗಬಹುದಾದ ಸಮಸ್ಯೆಗಳ ಕುರಿತು ಜನಜಾಗೃತಿಯನ್ನು ಉಂಟು ಮಾಡಲಾಯಿತು. ಜನಪದ ನೃತ್ಯ, ಬೀದಿ ನಾಟಕ ಇತ್ಯಾದಿ ಅಭಿನಯಗಳ ಮುಖಾಂತರ ಅರಿವು ಮೂಡಿಸಲಾಯಿತು. ಜೀವವನ್ನಾದರೂ ತೊರೆದೆವು ಆದರೆ ಮರಗಳನ್ನು ಕಡೆಯಲು ಬಿಡುವುದಿಲ್ಲ ಎಂಬ ಸಂದೇಶವನ್ನು ಎಲ್ಲಾ ಕಡೆಗೂ ಸಾರಲಾಯಿತು. ಹಿಂದಿಯಲ್ಲಿ ಚಿಪ್ಕೋ ಎಂದರೆ ಕನ್ನಡದಲ್ಲಿ ಅಪ್ಪಿಕೋ ಅಥವಾ ತಬ್ಬಿಕೋ ಎಂದರ್ಥ. ಈ ಚಳುವಳಿಯಲ್ಲಿ ಚಂಡಿ ಪ್ರಸಾದ್ ಭಟ್ಟ ಹಾಗೂ ಸುಂದರಲಾಲ್ ಬಹುಗುಣರು ಭಾಗವಹಿಸಿದ್ದರು.

5. ಜಂಗಲ್ ಬಚಾವೋ ಆಂದೋಲನ: (Jungle bachao andolana)

ಭಾರತ ಸರ್ಕಾರವು ಬಿಹಾರಿನ ಸಿಂಗ್ಬೂಂ ಜಿಲ್ಲೆಯ ನೈಸರ್ಗಿಕ ಸಾಲ್ ಅರಣ್ಯದ ಪ್ರದೇಶದಲ್ಲಿ ವಾಣಿಜ್ಯ ತೇಗದ ಮರಗಳನ್ನು ನೆಡಲು ಪ್ರಸ್ತಾಪವನ್ನು ಮಾಡಿತು. ಈ ಯೋಜನೆಯನ್ನು ಸ್ಥಳೀಯ ಸಮುದಾಯಗಳು ತೀವ್ರ ವಿರೋಧವನ್ನು ವ್ಯಕ್ತಪಡಿಸಿ 1982 ರಲ್ಲಿ ಜಂಗಲ್ ಬಚಾವೋ ಚಳುವಳಿಯನ್ನು ಆರಂಭಿಸಿದರು. ಅದರ ಪರಿಣಾಮವಾಗಿ ಸರ್ಕಾರ ತನ್ನ ನಿರ್ಧಾರವನ್ನು ಕೈಬಿಟ್ಟಿತು.

6. ನರ್ಮದಾ ಬಚಾವೋ ಆಂದೋಲನ:

ಗುಜರಾತಿನ ನರ್ಮದಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸರ್ದಾರ್ ಸರೋವರ ಅಣೆಕಟ್ಟಿನ ವಿರುದ್ಧ ಮಣಿ ವೇಲಿ ಗ್ರಾಮದ ನೌಕರರು, ಗ್ರಾಮಸ್ಥರು, ಬುಡಕಟ್ಟು ಜನಾಂಗದವರು, ಪರಿಸರವಾದಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಚಳುವಳಿ ಆರಂಭಿಸಿದರು. ಈ ಚಳುವಳಿಯ ನಾಯಕತ್ವವನ್ನು ಮೇಧಾ ಪಾಟ್ಕರ್ ಹಾಗೂ ಬಾಬಾ ಅಮ್ಟೆ ವಹಿಸಿದ್ದರು. ಈ ಜಲಾಶಯದಿಂದ ಸಾವಿರಾರು ಜನರು ತಮ್ಮ ಆಸ್ತಿ ಹಾಗೂ ಮನೆಗಳನ್ನು ಕಳೆದುಕೊಂಡರು. ಆದರೆ ಅವರಿಗೆ ಸರಿಯಾದ ಪುನರ್ವಸತಿ ಕಲ್ಪಿಸಲಿಲ್ಲ. ನಂತರ ಜಲಾಶಯದ ಎತ್ತರವನ್ನು 130 ರಿಂದ 90 ಮೀಟರ್‌ಗೆ ಇಳಿಸಬೇಕೆಂದು ಬೇಡಿಕೆ ಇಡಲಾಯಿತು. 2018 ನಿರ್ದೇಶನದಂತೆ ಇದರ ಎತ್ತರವನ್ನು 90 ಮೀಟರ್ ಇಳಿಸಲಾಯಿತು.

7. ಪಶ್ಚಿಮ ಘಟ್ಟ ಉಳಿಸಿ ಚಳುವಳಿ:

1970ರಲ್ಲಿ ಕುದುರೆಮುಖ ಯೋಜನೆಯ ಕುರಿತಾದ ಚಳುವಳಿ ಆರಂಭವಾಯಿತು. ಕುದುರೆಮುಖದಲ್ಲಿ 15 ಲಕ್ಷ ಎಕರೆ ಭೂಮಿಯನ್ನು ಗಣಿಗಾರಿಕೆಗೆ ಸ್ವಾದೀನ ಪಡಿಸಿಕೊಂಡು ತೊಂದರೆಗೆ ಒಳಗಾದ 4000 ಕುಟುಂಬಗಳಿಗೆ ಯಾವುದೇ ಪುನರ್ವಸತಿ ಕಲ್ಪಿಸಲಿಲ್ಲ. ಇದರಿಂದ ಜಾಗೃತರಾದ ಪರಿಸರವಾದಿಗಳು ಶಿವಮೊಗ್ಗ, ಕಳಸ, ಶೃಂಗೇರಿಗಳಲ್ಲಿ ಸೈಕಲ್ ಜಾತಾವನ್ನು ಪ್ರಾರಂಭಿಸಿ ತುಂಗಾ ಮೂಲವನ್ನು ಉಳಿಸಿ ಗಣಿಗಾರಿಕೆಯನ್ನು ಅಳಿಸಿ ಎಂಬ ಘೋಷಣೆಯೊಂದಿಗೆ ಚಳುವಳಿಯನ್ನು ತೀವ್ರಗೊಳಿಸಿದರು. ಇದೇ ಸಮಯದಲ್ಲಿ ತಾಪಿ ನದಿಯಿಂದ ಕನ್ಯಾಕುಮಾರಿವರೆಗೆ ಇರುವ ಪಶ್ಚಿಮ ಘಟ್ಟ ಪ್ರದೇಶವನ್ನು ಉಳಿಸಿ ಎಂಬ ಆಂದೋಲನವನ್ನು ಕೈಲಾಸ ಮಲ್ಹೊತ್ರಾ ಅವರ ನೇತೃತ್ವದಲ್ಲಿ ಹೋರಾಟ ಆರಂಭವಾಯಿತು. ಸುಮಾರು 100 ದಿನಗಳ ಕಾಲ ನಡಿಗೆಯಿಂದ ಗೋವಾ ತಲುಪಿ ಅಲ್ಲಿ ಸಮಾವೇಶವನ್ನು ಯಶಸ್ವಿಗೊಳಿಸಿದರು.

 8. ತೆಹ್ರಿ ಅಣೆಕಟ್ಟು ವಿವಾದ: (Tehri dam conflict)

1960ರಲ್ಲಿ ಉತ್ತರಖಾಂಡದ ತೆಹ್ರಿ ನದಿಗೆ ಅಡ್ಡಲಾಗಿ ಜಲಾಶಯವನ್ನು ನಿರ್ಮಿಸಲಾಯಿತು. ಇದು ವಿದ್ಯುತ್ ಉತ್ಪಾದನೆ ಹಾಗೂ ಪ್ರವಾಹ ನಿಯಂತ್ರಣದ ಉದ್ದೇಶವನ್ನು ಹೊಂದಿತ್ತು. ಇದರಿಂದ ಸಾವಿರಾರು ಕುಟುಂಬಗಳು ಸ್ಥಳಾಂತರವಾದವು ಮತ್ತು ಹಲವಾರು ಗ್ರಾಮಗಳು ಮುಳುಗಡೆಯಾದವು. ಸ್ಥಳೀಯರು ಇದನ್ನು ವಿರೋಧಿಸಿದರು ಜೊತೆಗೆ ಪುನರ್ವಸತಿಗೆ ಬೇಡಿಕೆ, ಜೀವ ವೈವಿಧ್ಯದ ರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಸಂದರ್ಭ ಅವರ ನೇತೃತ್ವದಲ್ಲಿ ಚಳುವಳಿ ಆರಂಭವಾಯಿತು.

ಉಪಸಂಹಾರ

ಪರಿಸರ ಚಳುವಳಿಗಳು ಮಾನವ ಮತ್ತು ಪ್ರಕೃತಿಯ ಸಹಜ ಸಹವಾಸವನ್ನು ಉಳಿಸುವ ಮಹತ್ವದ ಪ್ರಯತ್ನಗಳಾಗಿವೆ. ಬಿಷ್ಣೊಯಿ, ಚಿಪ್ಕೋ, ಅಪ್ಪಿಕೋ, ನರ್ಮದಾ ಬಚಾವೋ ಮುಂತಾದ ಚಳುವಳಿಗಳು ಜನಶಕ್ತಿಯ ಮಹತ್ವವನ್ನು ತೋರಿಸಿವೆ. ಸರ್ಕಾರದ ನೀತಿಗಳ ಮೇಲೆ ಪ್ರಭಾವ ಬೀರಿ ಪರಿಸರ ಸ್ನೇಹಿ ನಿರ್ಧಾರಗಳಿಗೆ ದಾರಿ ಮಾಡಿಕೊಟ್ಟಿವೆ. ಇಂತಹ ಚಳುವಳಿಗಳಿಂದ ನಮಗೆ ಪ್ರಕೃತಿಯ ಮೌಲ್ಯ ಅರಿಯುವ ಪಾಠ ಸಿಕ್ಕಿದೆ. ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೆಂಬ ಸಂದೇಶವನ್ನು ಇವುಗಳು ಬಲವಾಗಿ ಸಾರುತ್ತವೆ.

ಭೂಕಂಪದಿಂದಾಗುವ ಪರಿಣಾಮಗಳು ಮತ್ತು ನಿರ್ವಹಣಾ ಕ್ರಮಗಳು

ಭೂಕಂಪದಿಂದಾಗುವ ಪರಿಣಾಮಗಳು ಮತ್ತು ನಿರ್ವಹಣಾ ಕ್ರಮಗಳು

ಭೂಮಿಯ ಒಳಗಿನ ತಟ್ಟೆಗಳ ಚಲನೆಯಿಂದ ಉಂಟಾಗುವ ಭೂಕಂಪವು ಮಾನವ ಜೀವನವನ್ನು ಅಸ್ತವ್ಯಸ್ತಗೊಳಿಸುವ ಶಕ್ತಿಯನ್ನು ಹೊಂದಿದೆ. ಭೂಕಂಪದ ಪರಿಣಾಮಗಳು ಕೇವಲ ಕಟ್ಟಡಗಳಿಗೆ ಮಾತ್ರ ಸೀಮಿತವಾಗದೆ, ಪ್ರಕೃತಿ ಮತ್ತು ಸಮಾಜದ ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ಭೂಕಂಪದ ಬಗ್ಗೆ ಜಾಗೃತಿ ಹೊಂದುವುದು ಅತ್ಯವಶ್ಯಕವಾಗಿದೆ.

ಭೂಕಂಪದಿಂದಾಗುವ ಪರಿಣಾಮಗಳು

  1. ಭೂಕಂಪದಿಂದ ಮಾನವ ನಿರ್ಮಿತ ಕಟ್ಟಡಗಳು, ಗೋಪುರಗಳು, ಜಲಾಶಯಗಳು, ರಸ್ತೆಗಳು, ಸೇತುವೆಗಳು, ಗಗನಚುಂಬಿತ ಇ-ಮಾರುತಗಳು, ಸ್ಮಾರಕಗಳು, ನಗರ-ಪಟ್ಟಣಗಳು, ಕಾರ್ಖಾನೆಗಳು ಹಾಗೂ ವಿಮಾನ ನಿಲ್ದಾಣಗಳು ಮುಂತಾದವುಗಳಿಗೆ ಧಕ್ಕೆಯಾಗುತ್ತದೆ.
  2.  ರಸ್ತೆಗಳು, ರೈಲುಮಾರ್ಗಗಳು, ಟೆಲಿಫೋನ್ ಕಂಬಗಳು, ವಿದ್ಯುತ್ ಕಂಬಗಳು, ಮೊಬೈಲ್ ಟವರ್‌ಗಳು ಹಾಗೂ ಸಂಪರ್ಕ ಸಾಧನಗಳು ಸರ್ವನಾಶವಾಗುತ್ತವೆ.
  3. ಜನ ಜಾನುವಾರುಗಳು, ಜನರ ಆಸ್ತಿಪಾಸ್ತಿಗಳು ಹಾಗೂ ಬೆಳೆಗಳು ಹಾನಿಗೊಳಗಾಗುತ್ತವೆ.
  4. ನೈಸರ್ಗಿಕ ಅನಿಲದ ಸಿಲಿಂಡರ್ ಸ್ಫೋಟ, ಊದು ಕುಲುಮೆ, ಚಿಮಣಿ, ಗಣಿಗಳು ಹಾಗೂ ಕಾರ್ಖಾನೆಗಳು ಹಾಳಾಗುವುದಲ್ಲದೆ ಅಗ್ನಿ ಸರೋವರ ಸೃಷ್ಟಿಯಾಗಬಹುದು.
  5.  ನದಿಗಳಲ್ಲಿ ಪ್ರವಾಹ ಸೃಷ್ಟಿಯಾಗಬಹುದು ಹಾಗೂ ನದಿಗಳು ತಮ್ಮ ದಿಕ್ಕನ್ನು ಬದಲಿಸಬಹುದು.
  6.  ಭೂಕುಸಿತ ಹಾಗೂ ಭೂ ಪಾತಾಳಗಳಿಂದ ಹೆಚ್ಚಿನ ಪ್ರಮಾಣದ ಪ್ರಾಣ  ಹಾಗೂ ಆಸ್ತಿ ಹಾನಿಯಾಗಬಹುದು.
  7.  ಭೂಕಂಪದಿಂದ ಭೂಮಿಯು ಬಿರುಕುಬಿಡುವುದರಿಂದ ಮನೆಗಳು, ಕಟ್ಟಡಗಳು, ಜನಜಾನುವಾರುಗಳು ಮುಳುಗಡೆಯಾಗಬಹುದು.
  8.  ನದಿಗಳು ಹಾಗೂ ಸರೋವರಗಳು ಶಾಶ್ವತವಾಗಿ ಮುಚ್ಚಿ ಹೋಗಬಹುದು.
  9. ಭೂ ಸ್ವರೂಪಗಳು ಹೊಸದಾಗಿ ಸೃಷ್ಟಿಯಾಗಬಹುದು.
  10.  ಸಮುದ್ರದ ಆಳದಲ್ಲಿ ಭೂಕಂಪವಾದರೆ ಸುನಾಮಿ ಅಲೆಗಳು ಎದ್ದು ಕರಾವಳಿಗೆ ಅಪ್ಪಳಿಸಬಹುದು. ಇದರಿಂದ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರ ಜೀವನಕ್ಕೆ ಹಾನಿಯಾಗಬಹುದು.

ಭೂಕಂಪ ನಿರ್ವಹಣಾ ಕ್ರಮಗಳು:

  1. ನೂತನ ತಂತ್ರಜ್ಞಾನವನ್ನು ಅಳವಡಿಸಿ ಭೂಕಂಪಗಳಿಂದ ಹಾನಿಗೊಳಗಾಗದಂತಹ ಮನೆಗಳನ್ನು ನಿರ್ಮಿಸಬೇಕು. ಬಿದಿರು,ಕಟ್ಟಿಗೆ ಹಾಗೂ ತಗಡನ್ನು ಮೇಲು ಹೊದಿಕೆಯಾಗಿ ಬಳಸಿ ನಿರ್ಮಿಸಿದ ಮನೆಗಳಿಂದ ಅಪಾಯ ಕಡಿಮೆ.
  2. ಮನೆಯಲ್ಲಿನ ಸಿಲಿಂಡರ್, ರೆಫ್ರಿಜರೇಟರ್, ವಿದ್ಯುತ್ ಉಪಕರಣಗಳನ್ನು ಸುವ್ಯವಸ್ಥೆಯಿಂದ ಕಾಪಾಡಬೇಕು. ಏಕೆಂದರೆ ಭೂಕಂಪದ ಸಮಯದಲ್ಲಿ ಅಗ್ನಿ ಅನಾಹುತವಾಗುವ ಸಂಭವ ಇರುತ್ತದೆ.
  3.  ಭೂಕಂಪದ ಕುರಿತು ಮುಂಚೆನೆ ಎಚ್ಚರಿಕೆಯನ್ನು ಜನರಿಗೆ ನೀಡುವುದು ಒಳಿತು. ಇದರಿಂದ ಜನರು ಸುರಕ್ಷಿತ ಸ್ಥಳಕ್ಕೆ ಹೋಗಿ ಸೇರಬಹುದು.
  4.  ಹೆಲ್ಮೆಟ್ ಹಾಗೂ ಚಿಕಿತ್ಸಾ ಪೆಟ್ಟಿಗೆಯನ್ನು ಹೊಂದಿದ್ದರೆ ಭೂಕಂಪದ ಸಮಯದಲ್ಲಿ ಸ್ವರಕ್ಷಣೆ ಮಾಡಿಕೊಳ್ಳಬಹುದು.
  5.  ಭೂಕಂಪ ಸಂಭವಿಸಿದಾಗ ವಿದ್ಯುತ್ ಕಂಬಗಳು, ಮೊಬೈಲ್ ಟವರ್‌ಗಳು ಹಾಗೂ ದೊಡ್ಡ ದೊಡ್ಡ ಕಟ್ಟಡಗಳ ಹತ್ತಿರ ನಿಲ್ಲದೆ ದೂರ ಹೋಗಿ ರಕ್ಷಣೆ ಪಡೆಯಬೇಕು.
  6. ಭೂಕಂಪದ ಸಮಯದಲ್ಲಿ ಬೆಂಕಿಗೆ ಸಂಬಂಧಿಸಿದ ಯಾವ ವಸ್ತುಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಕೂಡದು.
  7. ಸಮುದ್ರ ತೀರ ಹಾಗೂ ಬೀಚ್‌ಗಳಿಂದ ದೂರವಾಗಿರುವುದು ಸೂಕ್ತವಾದದ್ದು.
  8.  ಹಳೆಯ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು.
  9.  ಹೊಸ ಹೊಸ ವೈಜ್ಞಾನಿಕ ವಿಧಿ ವಿಧಾನಗಳನ್ನು ಬಳಸಬೇಕು.
ಬರಗಾಲಕ್ಕೆ ಕಾರಣಗಳು ಮತ್ತು ಪರಿಣಾಮಗಳು

ಬರಗಾಲಕ್ಕೆ ಕಾರಣಗಳು ಮತ್ತು ಪರಿಣಾಮಗಳು

ʻʻಸಾಮಾನ್ಯವಾಗಿ ಮಾನವ ಬಯಸಿದ್ದಕ್ಕಿಂತ ಕಡಿಮೆ ಮಳೆ ಬೀಳುವುದು ಅಥವಾ ಪ್ರವಾಹದ ವಿರುದ್ಧವಾದ ಮಳೆಗಾಲದ ಪರಿಸ್ಥಿತಿಯನ್ನು ಬರಗಾಲ ಎಂದು ಕರೆಯಲಾಗಿದೆ.ʼʼ

ʻʻಒಂದು ನಿರ್ದಿಷ್ಟ ಅವಧಿಯಲ್ಲಿ ವಾತಾವರಣದಲ್ಲಿ ಮಳೆಯ ಕೊರತೆ, ಶುಷ್ಕ ವಾತಾವರಣ ಹಾಗೂ ಭೂಮಿಯಲ್ಲಿನ ತೇವಾಂಶ ಕೊರತೆ ಇತ್ಯಾದಿಗಳ ಮಾನದಂಡವನ್ನು ಪರಿಗಣನೆಗೆ ತಗೆದುಕೊಂಡು ಬರಪೀಡಿತ ಪ್ರದೇಶ ಎಂದು ಹೇಳಲಾಗುತ್ತದೆ.ʼʼ

ಬರಗಾಲಕ್ಕೆ ಕಾರಣಗಳು:

ಬರಗಾಲಕ್ಕೆ ಈ ಕೆಳಗಿನ ಅಂಶಗಳು ಕಾರಣವಾಗುತ್ತವೆ.

1. ಜಾಗತಿಕ ತಾಪಮಾನ ಹಾಗೂ ಹವಾಗುಣದ ಬದಲಾವಣೆ:

ಭೂಮಿಯು ಅತಿಯಾಗಿ ಕಾಯುವುದರಿಂದ ಹವಾಗುಣದಲ್ಲಿ ಏರುಪೇರುಗಳು ಕಂಡುಬರುತ್ತದೆ. ಆಗ ಭೂಮಿಯ ಮೇಲೆ ತೇವಾಂಶ ಕಡಿಮೆಯಾಗಿ ಬೆಳೆಗಳು ಒಣಗಿ ಹೋಗಿ ನದಿಗಳು, ಕೆರೆಗಳು, ಹೊಂಡಗಳು ಹಾಗೂ ಸರೋವರದ ನೀರು ಬತ್ತಿಹೋಗುವುದರಿಂದ ಬರಗಾಲ ಕಾಣಿಸಿಕೊಳ್ಳುತ್ತದೆ. ಬರಗಾಲ ಬಂದಿತೆಂದರೆ ಪಶುಪಕ್ಷಿಗಳು, ಗಿಡಮರಗಳು ಹಾಗೂ ಮಾನವ ಕುಲ ನೀರಿಗಾಗಿ ಪರಿತಪಿಸುವಂತಾಗುತ್ತದೆ.

2. ಮಾರುತಗಳು ಹಾಗೂ ಹವಾಮಾನ ಮಾದರಿಗಳು:

ಪ್ರಸ್ತುತ ದಿನಗಳಲ್ಲಿ  ಮಾನ್ಸೂನ್‌ ಮಾರುತಗಳು ಅನಿಶ್ಚಿತ ಹಾಗೂ ಅನರೀಕ್ಷಿತ ಮತ್ತು ವಿಶ್ವಾಸಾರ್ಹವಾದವುಗಳಲ್ಲದಾಗಿದೆ. ಹೀಗಾಗಿ ಮಳೆಗಾಲವು ಸಹ ಅನಿಶ್ಚಿತತೆಯಿಂದ ಕೂಡಿದೆ. ಕೆಲವು ಕಡೆಗಳಲ್ಲಿ ವಿಪರಿತ ಮಳೆ ಬಂದರೆ ಇನ್ನು ಕೆಲವು ಕಡೆ ಮಳೆಯೇ ಇರುವುದಿಲ್ಲ. ಕೆಲಭಾಗಗಳಿಗೆ ಭೇಗ ಮಳೆ ಬಂದರೆ ಕೆಲವು ಕಡೆ ತಡವಾಗಿ ಬರುತ್ತದೆ. ಎಲ್‌ ನಿನೋ ಅಥವಾ ಲಾ ನಿನೋ ಎಂಬ ಘಟನೆಗಳು ಬರಗಾಲಕ್ಕೆ ತಮ್ಮದೇ ಆದ ಕೊಡುಗೆ ನೀಡಿವೆ. ಸಮುದ್ರದಲ್ಲಿ ಬಿಸಿ ನೀರಿನ ಪ್ರವಾಹ ಹಾಗೂ ತಣ್ಣೀರಿನ ಪ್ರವಾಹದಲ್ಲಿ ಸಮುದ್ರದ ಮೇಲೆ ಬೀಸುವ ಮಾರುತಗಳಲ್ಲಿ ಆಗುವ ಏರಿಪೇರಿನಿಂದ ಉಂಟಾಗುವ ಅಸಾಧಾರಣ ವಾತಾವರಣದ ಸ್ಥಿತಿಗಳಿವು. ಸುಮಾರು 15 ನೇ ಶತಮಾನದಲ್ಲಿ ಎಲ್‌ ನಿನಾಗಳು 4-8 ವರ್ಷಗಳಿಗೆ ಒಮ್ಮೆ ಸಂಭವಿಸುತ್ತಿತ್ತು. ಆದರೆ 20 ನೇ ಶತಮಾನದಲ್ಲಿ 2-7 ವರ್ಷಕ್ಕೆ ಕುಸಿದಿದೆ. ಮುಂದಿನ ದಶಕಗಳಲ್ಲಿ ಅದು 1-2 ವರ್ಷಕ್ಕೆ ಕುಸಿಯುವ ಅಪಾಯವಿದೆ. ಹೀಗೆ ವರ್ಷ ವರ್ಷ ಎಲ್‌ ನಿನಾಗಳ ಕುಸಿತವಾಗುತ್ತಾ ಹೋದರೆ ತೀವ್ರ ಬರಗಾಲ ಬರುತ್ತದೆ. 

3. ಮಣ್ಣಿನ ತೇವಾಂಶದ ಮಟ್ಟ:

ಭೂಮಿಯ ಮೇಲೆ ತೇವಾಂಶದ ಪ್ರಮಾಣ ಕಡಿಮೆಯಾದರೆ ಮೊಡಗಳು ಸೃಷ್ಠಿಯಾಗುವುದಿಲ್ಲ. ಆಗ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಆಗ ಭೂಮಿಯ ತಾಪಮಾನ ಅಧಿಕವಾಗುತ್ತದೆ. ನೀರಿನ ಬೇಡಿಕೆ ಹೆಚ್ಚಾದಾಗ ಕಡಿಮೆ ನೀರಿನ ಲಭ್ಯತೆ ಇದ್ದಾಗ ತೀವ್ರ ಬರಗಾಲಕ್ಕೆ ಕಾರಣವಾಗುತ್ತದೆ.

4. ನೀರಿನ ಪೂರೈಕೆ ಸಮಸ್ಯೆಗಳು:

ಕೈಗಾರೀಕರಣದ ಮಿತಿಮೀರಿದ ಬೆಳವಣಿಗೆ, ಅತಿಯಾದ ನೀರಿನ ಬಳಕೆ, ಜನಸಂಖ್ಯಾ ಸ್ಫೋಟ, ಮುಂತಾದವುಗಳ ಕಾರಣದಿಂದ ಅಂತರ್ಜಲ ಹಾಗೂ ಸಿಹಿ ನೀರಿನ ಬೇಡಿಕೆ ಹೆಚ್ಚುತ್ತದೆ. ಆಗ ಬರಗಾಲ ಕಾಣಿಸಿಕೊಳ್ಳುತ್ತದೆ. 

 5. ಶಾಖೋತ್ಪನ್ನ ಘಟಕಗಳು ಹಾಗೂ ಉಷ್ಣ ವಿದ್ಯುತ್‌ ಸ್ಥಾವರಗಳು:

ಶಾಖೋತ್ಪನ್ನ ಘಟಕಗಳು ಹಾಗೂ ಅಣುವಿದ್ಯುತ್‌ ಸ್ಥಾವರಗಳಿಗೆ ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ದಿನೇ ದಿನೇ ನೀರಿನ ಬಳಕೆ ಹೆಚ್ಚಾದಂತೆ ನದಿ, ಸರೋವರ, ಕೆರೆ, ಹೊಂಡಗಳು ಬತ್ತಿಹೋಗಿ ನೀರಿನ ಹಾಹಾಕಾರ ಆರಂಭವಾಗುತ್ತದೆ. ಇದೇ ಬರಗಾಲಕ್ಕೆ ಕಾರಣವಾಗುತ್ತದೆ. 

ಬರಗಾಲದ ಪರಿಣಾಮಗಳು:

ಬರಗಾಲದಿಂದ ಉಂಟಾಗುವ ಪರಿಣಾಮಗಳು ಈ ಕೆಳಗಿನಂತಿವೆ.

  1. ಭೌತಿಕ ಪರಿಣಾಮ(Physical Result) : ಭೂಮಿಯ ಮೇಲಿನ ಮಣ್ಣಿನ ತೇವಾಂಶ, ಭೂ ಮೇಲ್ಮೈ ಹರಿವು ಹಾಗೂ ಅಂತರ್ಜಲಗಳ ಮೇಲೆ ಬರಗಾಲ ತೀವ್ರ ಪರಿಣಾಮಗಳನ್ನು ಬೀರುತ್ತದೆ. 
  2. ಕೃಷಿಯ ಮೇಲಿನ ಪರಿಣಾಮ : ಭಾರತೀಯ ಕೃಷಿಯು ಮಾನ್ಸೂನ್‌ ಮಳೆಯನ್ನು ಅವಲಂಭಿಸಿದೆ. ಆದರೆ ಮಾನ್ಸೂನ್‌ ಅನಿರೀಕ್ಷಿತ ಹಾಗೂ ಅಸಂಭವುಳ್ಳದ್ದಾಗಿರುತ್ತದೆ. ಹೀಗಾಗಿ ಮಳೆಯನ್ನೇ ಅವಲಂಬಿಸಿ ಬದುಕುತ್ತಿದ್ದ ಭಾರತೀಯ ರೈತ ಕುಟುಂಬಗಳು ಬರಗಾಲದಿಂದ ತತ್ತರಿಸಿ ಹೋಗುತ್ತವೆ. 
  3. ಪರಿಸರದ ಮೇಲೆ ಪರಿಣಾಮ: ತೀವ್ರ ಬರಗಾಲ ಕಾಣಿಸಿಕೊಂಡರೆ ವನ್ಯ ಜೀವಿಗಳಿಗೆ ಆಹಾರ ಮತ್ತು ನೀರಿನ ಕೊರತೆಯುಂಟಾಗುತ್ತದೆ. ಜೊತೆಗೆ ವನ್ಯಜೀವಿಗಳ ವಾಸಸ್ಥಾನಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಬರಗಾಲ ಹೆಚ್ಚಾದರೆ ಕಾಡುಗಳು ಒಣಗಿ ಹೋಗುತ್ತವೆ. ಇಲ್ಲವೆ ತಾಪಮಾನದಿಂದ ಕಾಡಿಗೆ ಬೆಂಕಿ ಹತ್ತಬಹುದು. ಆಗ ವನ್ಯಜೀವಿಗಳು ವಲಸೆ ಹೋಗಬಹುದು ಇಲ್ಲವೆ ಕಾಡಿನ ಬೆಂಕಿನ ಆಹುತಿಯಾಬಹುದು. ನೀರಿನ ಗುಣಮಟ್ಟ ಕುಸಿಯುತ್ತಾ ಹೋದರೆ ಜೀವ ವೈವಿಧ್ಯತೆಗಳು ಅಳಿವಿನ ಅಂಚಿಗೆ ತಳ್ಳಪ್ಪಡುತ್ತವೆ.
  4. ಬರಗಾಲದಿಂದ ಕೃಷಿಗಿಂತ ತೀವ್ರವಾಗಿ ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ.
  5. ಕೃಷಿ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳನ್ನು ಕಡಿತಗೊಳಿಸುತ್ತದೆ.
  6.  ಸಾಕು ಪ್ರಾಣಿಗಳಾದ ಎಮ್ಮೆ, ಹಸು, ಕೋಣ, ಕುರಿ, ಮೇಕೆ, ಅಷ್ಟೇ ಏಕೆ ಮಾನವರೂ ಸಹ ಕುಡಿಯುವ ನೀರಿನ ಕೊರತೆಯನ್ನು ಅನುಭವಿಸಬೇಕಾಗುತ್ತದೆ.
  7.  ಬರಗಾಲದಿಂದ ಸಾಕು ಪ್ರಾಣಿಗಳು ಆಹಾರ ಮತ್ತು ನೀರಿಲ್ಲದೆ ಬಡವಾಗುತ್ತವೆ. ಇದರಿಂದ ಪ್ರಾಣಿಗಳ ಕೊಡುಕೊಳ್ಳುವ ವ್ಯವಹಾರ ನಿಂತುಹೋಗುತ್ತದೆ. ಅನಿವಾರ್ಯವಾಗಿ ಸಾಕು ಪ್ರಾಣಿಗಳನ್ನು ಕಸಾಯಿ ಖಾನೆಗಳಿಗೆ ಮಾರಾಟ ಮಾಡಬೇಕಾಗುತ್ತದೆ.
  8.  ಬರಗಾಲದಿಂದ ಆಹಾರದ ಕೊರತೆ ಕಂಡುಬರುತ್ತದೆ. ಪೌಷ್ಟಿಕ ಆಹಾರದ ಕೊರತೆಯಿಂದ ಅತಿಸಾರ ಹಾಗೂ ಕಾಲಾರಾದಂತಹ ರೋಗಗಳು ಕಾಡುತ್ತವೆ.
  9. ಬರಪೀಡಿತ ಪ್ರದೇಶಗಳಿಂದ ತತ್ತರಿಸಿದ ಜನರು ಜೀವನೋಪಾಯಕ್ಕಾಗಿ ಬೇರೆಡೆ ವಲಸೆ ಹೋಗುತ್ತಾರೆ.
  10. ಆಹಾರದ ಕೊರತೆ ಹಾಗೂ ಅಪೌಷ್ಟಿಕತೆಯಿಂದ ಸಾವು ಸಂಭವಿಸುತ್ತದೆ.
  11.  ಪ್ರಾಥಮಿಕ ವಲಯದ ಉತ್ಪಾದನೆ ಕುಸಿತವಾಗುತ್ತದೆ. ಇದು ದ್ವಿತೀಯ ಹಾಗೂ ತೃತೀಯ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ.
  12.  ಕುಟುಂಬದಲ್ಲಿನ ಸದಸ್ಯರ ನಡುವೆ ಕಲಹಗಳುಂಟಾಗುತ್ತವೆ. ಸಾಮಾಜಿಕ ಸ್ವಾಸ್ಥ್ಯ ಕೆಟ್ಟು ಹೋಗುತ್ತದೆ. ಜೊತೆಗೆ ಸಮಾಜದಲ್ಲಿ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ.

ಉಪಸಂಹಾರ

ಬರಗಾಲವು ಕೃಷಿ, ಪರಿಸರ ಮತ್ತು ಮಾನವ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದನ್ನು ತಡೆಗಟ್ಟಲು ನೀರಿನ ಸಂರಕ್ಷಣೆ, ಮಳೆಯ ನೀರು ಸಂಗ್ರಹ, ಅರಣ್ಯ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಅಭಿವೃದ್ಧಿ ಅಗತ್ಯ. ಸರ್ಕಾರ ಹಾಗೂ ಸಾರ್ವಜನಿಕರ ಸಹಕಾರದಿಂದ ಮಾತ್ರ ಬರಗಾಲದ ದುಷ್ಪರಿಣಾಮಗಳನ್ನು ಕಡಿಮೆ ಮಾಡಬಹುದು. ಭವಿಷ್ಯದ ತಲೆಮಾರಿಗೆ ನೀರು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಪ್ರವಾಹಕ್ಕೆ ಕಾರಣಗಳು

ಪ್ರವಾಹಕ್ಕೆ ಕಾರಣಗಳು

ಪ್ರವಾಹವು ಭಾರತದಲ್ಲಿ ಆಗಾಗ ಸಂಭವಿಸುವ ಪ್ರಮುಖ ಪ್ರಾಕೃತಿಕ ವಿಕೋಪಗಳಲ್ಲಿ ಒಂದಾಗಿದೆ. ಹವಾಮಾನ ವೈಪರಿತ್ಯ, ಭೌತಿಕ ಪರಿಸ್ಥಿತಿಗಳು ಮತ್ತು ಮಾನವನ ಕೃತಕ ಚಟುವಟಿಕೆಗಳು ಪ್ರವಾಹಕ್ಕೆ ಮುಖ್ಯ ಕಾರಣಗಳಾಗಿವೆ. ಈ ಲೇಖನದಲ್ಲಿ ಪ್ರವಾಹಕ್ಕೆ ಕಾರಣವಾಗುವ ಅಂಶಗಳನ್ನು ವಿವರವಾಗಿ ತಿಳಿದುಕೊಳ್ಳೋಣ.

ಪ್ರವಾಹದ ಕಾರಣಗಳು ಈ ಕೆಳಗಿನಂತಿವೆ.

  1.  ಹವಾಮಾನ ಅಂಶಗಳು
  2.  ಭೌತಿಕ ಅಂಶಗಳು
  3.  ಕೃತಕ ಅಂಶಗಳು

1. ಹವಾಮಾನ ಅಂಶಗಳು:(Clinatic Factors)

1. ಅತ್ಯಧಿಕ ಮಳೆ (ಅತಿವೃಷ್ಠಿ): ಭಾರತದಲ್ಲಿ ಮಾನ್ಸೂನ್ ಮಳೆಯು ಜುಲೈ ಮಧ್ಯದಲ್ಲಿ ಪ್ರವೇಶಿಸಿ ಸೆಪ್ಟೆಂಬರ್ ಕೊನೆಯವರೆಗೂ ಇರುತ್ತದೆ. ಈ ಸಮಯದಲ್ಲಿ ಅತ್ಯಧಿಕ ಮಳೆಯಾದರೆ ಅತಿವೃಷ್ಟಿ ಸಂಭವಿಸಿ ಮಳೆ ನೀರು ಜಲಾಶಯಗಳನ್ನು ತುಂಬಿಕೊಳ್ಳುತ್ತದೆ. ಜಲಾಶಯಗಳಲ್ಲಿ ಸಂಗ್ರಹಣಾ ಸಾಮರ್ಥ್ಯಕ್ಕಿಂತ ಹೆಚ್ಚುವರಿ ನೀರನ್ನು ಇಟ್ಟುಕೊಳ್ಳಲು ಬರುವುದಿಲ್ಲ. ನೀರು ಸಂಗ್ರಹಣಾ ಸಾಮರ್ಥ್ಯ ಜಲಾಶಯಗಳಲ್ಲಿ ಮಿತಿಮೀರಿದಾಗ ಅದು ಪ್ರವಾಹದಲ್ಲಿ ಕೊನೆಯಾಗುತ್ತದೆ. ಈ ಪ್ರವಾಹ ಪರಿಸ್ಥಿತಿ ಉತ್ತರ ಭಾರತದ ಪಶ್ಚಿಮ ಬಂಗಾಳ, ಹಿಮಾಲಯದ ಪ್ರದೇಶಗಳು, ಸಿಂಧೂ-ಗಂಗಾ ನದಿಯ ಬಯಲುಗಳು, ಪಶ್ಚಿಮ ಘಟ್ಟಗಳು ಹಾಗೂ ಕರಾವಳಿ ತೀರ ಪ್ರದೇಶಗಳಲ್ಲಿ ಸಂಭವಿಸುತ್ತದೆ. ದಾಮೋದರ ನದಿಯ ಬಯಲಿನಲ್ಲಿ ಹೆಚ್ಚಿನ ಪ್ರಮಾಣದ ಪ್ರವಾಹಗಳು ಸಂಭವಿಸುವ ಕಾರಣ ಇದನ್ನು ʻʻಬಂಗಾಳದ ಕಣ್ಣೀರಿನ ನದಿʼʼ ಎಂದೇ ಕರೆಯುತ್ತಾರೆ. ಹಾಗೇ ಕೋಸಿ ನದಿಯು ಸಹ ಬಿಹಾರಿನಲ್ಲಿ ಪ್ರವಾಹಕ್ಕೆ ಕಾರಣವಾಗುವುದರಿಂದ ಇದನ್ನು ʻʻಬಿಹಾರಿನ ಕಣ್ಣೀರಿನ ನದಿʼʼ ಎಂದು ಹಾಗೂ ಮಹಾನದಿಯನ್ನು ʻಒರಿಸ್ಸಾದ ಕಣ್ಣೀರಿನ ನದಿʼ ಎಂದು ಕರೆಯುವರು.

2. ಮೇಘ ಸ್ಫೋಟ: ಹವಾಮಾನದ ವೈಪರಿತ್ಯದಿಂದ ಆಲಿಕಲ್ಲು ಹಾಗೂ ಗುಡುಗುಸಹಿತ ಭಾರೀ ಗಾತ್ರದಲ್ಲಿ ಮಳೆಯು ಬರುವ ಕಾರಣದಿಂದ ಅದಕ್ಕೆ ಮೇಘಸ್ಪೋಟ ಎಂದು ಕರೆಯುತ್ತಾರೆ. 2013ರಲ್ಲಿ ಮೇಘ ಸ್ಪೋಟದಿಂದ ಉತ್ತರಖಾಂಡದ ಕೆಲವು ಪ್ರದೇಶಗಳು ಹಠಾತ್ ಪ್ರವಾಹಕ್ಕೆ ಈಡಾದವು.

3. ಚಂಡಮಾರುತಗಳು: ಚಂಡಮಾರುತಗಳಿಂದ ಪ್ರವಾಹ ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಭೂಮಿಯ ಉತ್ತರ ಗೋಳದಲ್ಲಿ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ಚಂಡಮಾರುತ ಸುತ್ತುವ ಮೂಲಕ ಪ್ರವಾಹದ ಭೀತಿಯನ್ನು ಉಂಟುಮಾಡುತ್ತದೆ.4. 

4. ಜಾಗತಿಕ ತಾಪಮಾನ (World Temperature): ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಭೂಮಿ ಉಷ್ಣಾಂಶ ಹೆಚ್ಚುತ್ತದೆ. ಆಗ ಹಿಮನದಿಗಳು ಕರಗಲು ಆರಂಭಿಸುತ್ತವೆ.  ಅತಿಯಾದ ಹಿಮ ನದಿಯ ಕರುಗುವಿಕೆಯಿಂದ ಪ್ರವಾಹ ಸೃಷ್ಟಿಯಾಗುತ್ತದೆ.

5. ಭೂಕಂಪ ಹಾಗೂ ಭೂಕುಸಿತಗಳು (Earth quake and Land Slide): ಭೂಕಂಪ ಹಾಗೂ ಭೂಕಸಿತಗಳು ಪ್ರವಾಹಕ್ಕೆ ಕಾರಣವಾಗಿ ಪರಿಣಮಿಸುತ್ತವೆ. ಭೂಮಿಯ ಮೇಲಿನ ಬದಲಾವಣೆಯು ನೀರಿನ ಹರಿವಿನ ದಿಕ್ಕುಗಳನ್ನೇ ಬದಲಿಸುತ್ತದೆ. ಇದರಿಂದ ಪದೇ ಪದೇ ಪ್ರವಾಹಗಳು ಸಂಭವಿಸುತ್ತವೆ. ೧೯೫೦ರ ವೇಳೆಗೆ ಭೂಕಂಪವು ಬ್ರಹ್ಮಪುತ್ರ ನದಿಯನ್ನು ಹೆಚ್ಚು ಅಸ್ಥಿರಗೊಳಿಸಿತು. ಈ ಕಾರಣದಿಂದ ನದಿಯ ಹರಿವಿನ ಹಾದಿ ಬದಲಾಯಿತು ಮತ್ತು ಮಣ್ಣಿನ ಸವಕಳಿ ಕಂಡುಬಂದಿತು. ಇದು ಮುಂದಿನ 10 ವರ್ಷಗಳವರೆಗೆ ಕೆಟ್ಟ ಪ್ರವಾಹಗಳಿಗೆ ದಾರಿ ಮಾಡಿಕೊಟ್ಟಿತು. ಇಂದಿಗೂ ಅಂದಿನ ಭೂಕಂಪದ ಪರಿಣಾಮವಾಗಿ ಬ್ರಹ್ಮಪುತ್ರಾ ಕಣಿವೆಯು ಆಗಾಗ ಪ್ರವಾಹಕ್ಕೆ ತುತ್ತಾಗುತ್ತಿದೆ.

2. ಭೌತಿಕ ಅಂಶಗಳು:

1. ಅಸಮರ್ಪಕ ಚರಂಡಿ ನಿರ್ವಹಣೆ: ಕೈಗಾರಿಕರಣ ಹಾಗೂ ನಗರೀಕರಣದ ಭರಾಟೆಯಲ್ಲಿ ಆಧುನಿಕ ಮಾನವರು ಚರಂಡಿಗಳನ್ನು ನಿರ್ಲಕ್ಷಿಸಿದ್ದಾರೆ. ಭಾರೀ ಮಳೆಗಾಲದಲ್ಲಿ ಚರಂಡಿಗಳು ತುಂಬಿಹೋಗುತ್ತವೆ. ಹಾಗೇ ಹೆಚ್ಚುವರಿ ನೀರು ಚರಂಡಿಯ ಮೂಲಕ ಹೋಗಲು ಸಾಧ್ಯವಾಗದೆ ಪ್ರವಾಹಕ್ಕೆ ಕಾರಣವಾಗುತ್ತದೆ.

2. ಜಲಾನಯನ ಪ್ರದೇಶ: ಮಳೆಗಾಲ ಅಥವಾ ಪ್ರವಾಹದ ಸಮಯದಲ್ಲಿ ಜಲಾನಯನ ಪ್ರದೇಶಗಳು ತಮ್ಮ ಹಿಡುವಳಿ ಸಾಮರ್ಥ್ಯದ ಮಿತಿಯನ್ನು ಮೀರಿದಾಗ ಅದು ಪ್ರವಾಹಕ್ಕೆ ಕಾರಣವಾಗುತ್ತದೆ.

3. ಕೃತಕ ಅಂಶಗಳು:

1. ನದಿ, ತೊರೆ, ಹಳ್ಳ, ಸರೋವರ, ಕೆರೆ, ಹೊಂಡಗಳ ತಳಭಾಗದಲ್ಲಿ ವಿಪರೀತ ಪ್ರಮಾಣದಲ್ಲಿ ಹೂಳು ತುಂಬಿಕೊಳ್ಳುವುದರಿಂದ ಪ್ರವಾಹ ಸಂಭವಿಸುತ್ತದೆ.

2. ಅಸಮರ್ಪಕ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ಪ್ರವಾಹ ಕಂಡುಬರುತ್ತದೆ.

3. ಕೃಷಿಕಾರ್ಯಗಳಿಗೆ, ಜಲಾಶಯ ನಿರ್ಮಾಣ, ಸೇತುವೆ ನಿರ್ಮಾಣ, ಕೈಗಾರಿಕಾ ನಿರ್ಮಾಣ, ಆಸ್ಪತ್ರೆಗಳ ನಿರ್ಮಾಣ, ನಗರೀಕರಣದಿಂದ ಇಂದು ಹೆಚ್ಚಿನ ಪ್ರಮಾಣದಲ್ಲಿ ಕಾಡು ನಾಶವಾಗುತ್ತಿದೆ. ಅರಣ್ಯನಾಶದಿಂದ ಪ್ರವಾಹಗಳು ಆಗಾಗ ಸಂಭವಿಸುತ್ತದೆ.

4. ಅಣೆಕಟ್ಟುಗಳು ಇದ್ದಕ್ಕಿದ್ದಂತೆ ಕುಸಿತ ಕಂಡರೆ ಪ್ರವಾಹ ಉಂಟಾಗುತ್ತದೆ.

ಉಪಸಂಹಾರ 

ಪ್ರವಾಹವು ಕೇವಲ ಪ್ರಾಕೃತಿಕ ಕಾರಣಗಳಿಂದ ಮಾತ್ರವಲ್ಲದೆ ಮಾನವನ ಅಸಮರ್ಪಕ ಚಟುವಟಿಕೆಗಳಿಂದಲೂ ಉಂಟಾಗುತ್ತದೆ. ಅರಣ್ಯನಾಶ, ಅಸಮರ್ಪಕ ನಗರ ಯೋಜನೆ ಹಾಗೂ ಜಲಸಂಪನ್ಮೂಲಗಳ ದುರುಪಯೋಗವು ಪ್ರವಾಹದ ಭೀತಿಯನ್ನು ಹೆಚ್ಚಿಸುತ್ತಿವೆ. ಪ್ರವಾಹವನ್ನು ನಿಯಂತ್ರಿಸಲು ವೈಜ್ಞಾನಿಕ ಜಲ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆ ಅತ್ಯಾವಶ್ಯಕ. ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕುವುದೇ ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರವಾಗಿದೆ.

ಮಾನವ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಜನಸಂಖ್ಯಾ ಬೆಳವಣಿಗೆಯ ಪರಿಣಾಮ

ಮಾನವ ಆರೋಗ್ಯ ಮತ್ತು ಕಲ್ಯಾಣದ ಮೇಲೆ ಜನಸಂಖ್ಯಾ ಬೆಳವಣಿಗೆಯ ಪರಿಣಾಮ

ಮಾನವ ಆರೋಗ್ಯ ಹಾಗೂ ಪರಿಸರದ ನಡುವೆ ಅವಿನಾಭಾವ ಸಂಬಂಧ ಇದೆ. ಏಕೆಂದರೆ ಪರಿಸರದಲ್ಲಿ ಆಗುವ ಯಾವುದೇ ಬದಲಾವಣೆಗಳು ಮಾನವನ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ. ಅಂದರೆ ಮಾನವನ ಆರೋಗ್ಯದ ಗುಣಮಟ್ಟ ಹಾಗೂ ಪರಿಸರದ ಗುಣಮಟ್ಟಗಳ ನಡುವೆ ಪ್ರತ್ಯಕ್ಷ ಸಂಬಂಧವಿದೆ. ನಮ್ಮ ಆರೋಗ್ಯವನ್ನು ಹೇಗೆ ಮುತುವರ್ಜಿಯಿಂದ ಕಾಪಾಡಿಕೊಂಡು ಬರುತ್ತೇವೆಯೋ ಹಾಗೇ ಪರಿಸರದ ಗುಣಮಟ್ಟವನ್ನು ಕಾಪಾಡಿಕೊಂಡು ಬರಬೇಕು. ಮಾಲಿನ್ಯರಹಿತ ಪರಿಸರವಿದ್ದರೆ ಮಾನವ ಯಾವ ಆಸ್ಪತ್ರೆಗಳಿಗೂ ಹೋಗುವ ಅಗತ್ಯತೆಗಳು ಇರುವುದಿಲ್ಲ. ಸಾಮಾನ್ಯವಾಗಿ ಆರೋಗ್ಯವೆಂದರೆ ʻʻಒಬ್ಬ ವ್ಯಕ್ತಿ ಯಾವುದೇ ರೋಗವಿಲ್ಲದೆ ದೈಹಿಕವಾಗಿ ಸುಸ್ಥಿಯಲ್ಲಿ ಇರುತ್ತಾನೋ ಅವನನ್ನು ಆರೋಗ್ಯವಂತ ಮನುಷ್ಯ ಎಂದು ಕರೆಯಬಹುದು. ಮಾನವನ ಆರೋಗ್ಯ ನಾವು ಸೇವಿಸುವ ಆಹಾರ, ರಸಾಯನಿಕ ವಸ್ತುಗಳು, ಮಾನಸಿಕ ಸ್ವಸ್ಥತೆ ಹಾಗೂ ಪರಿಸರದ ಪ್ರಭಾವದ ಮೇಲೆ ಅವಲಂಬಿಸಿರುತ್ತದೆ. ಪರಿಸರ ಮಾಲಿನ್ಯದ ವೈಪರಿತ್ಯವು ಮಾನವನಿಗೆ ಹಲವಾರು ರೋಗಗಳನ್ನು ಹರಡಿ ಅವನ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ತಾನು ಪರಿಸರವನ್ನು ಹಾಳು ಮಾಡಿದರೆ ಪರಿಸರ ತನ್ನನ್ನು ಹಾಳುಮಾಡುತ್ತದೆ ಎಂಬುದನ್ನು ಮಾನವನು ಅರಿತುಕೊಳ್ಳಬೇಕಾಗಿದೆ. ಪರಿಸರಕ್ಕೆ ಧಕ್ಕೆ ತಂದರೆ ತನಗೆ ಧಕ್ಕೆಯನ್ನು ತಂದುಕೊಂಡಂತೆ ಪರಿಸರವನ್ನು ಉಳಿಸಿದರೆ ತಾನು ಉಳಿದುಕೊಂಡಂತೆ, ಶುದ್ಧ, ಸ್ವಚ್ಛ ಹಾಗೂ ಸಮತೋಲನಯುಕ್ತ ಪರಿಸರವಿದ್ದರೆ ಮಾನವನಿಗೆ ಯಾವುದೇ ಚಿಕಿತ್ಸೆಯ ಅವಶ್ಯಕತೆ ಬರುವುದಿಲ್ಲ. ಪರಿಸರ ಹಾಗೂ ಮಾನವನ ಆರೋಗ್ಯಕ್ಕೆ ಸಂಬಂಧಪಟ್ಟ ವಿವರಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ. 

1. ವಾಯು ಮಾಲಿನ್ಯ ಮತ್ತು ಆರೋಗ್ಯ: ಭಾರತದಲ್ಲಿ ಹೆಚ್ಚುತ್ತಿರುವ ಕೈಗಾರಿಕೆಗಳು, ನಗರೀಕರಣ, ಅತಿಯಾದ ವಾಹನಗಳ ದಟ್ಟಣೆ, ಗಣಿಗಾರಿಕೆ, ಮೊದಲಾದವುಗಳಿಂದ ಹೊರಬರುವ ಗಂಧಕದ ಆಕ್ಸೈಡ್, ನೈಟ್ರೋಜನ್ ಡೈ ಆಕ್ಸೈಡ್‌ನಂತಹ ಮಾಲಿನ್ಯಕಾರಕಗಳು ಶಾಖೋತ್ಪನ್ನ ಘಟಕಗಳಿಂದ ಹೊರಬರುವ ಧೂಳು ಅಥವಾ ಬೂದಿಯ ಕಣಗಳು ಇತ್ಯಾದಿ ಮಾನವನಿಗೆ ಹಲವಾರು ರೋಗಗಳು ಬರುವಂತೆ ಮಾಡುತ್ತವೆ. ವಾಯುಮಾಲಿನ್ಯ ಸಾಮಾನ್ಯವಾಗಿ ನಗರ ಹಾಗೂ ಕೈಗಾರಿಕಾ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರವಾಸಿಗಳು ಶ್ವಾಸಕೋಶಿ ಸಂಬಂಧಿ ಕಾಯಿಲೆಗಳು, ಅಸ್ತಮಾ, ಅಲರ್ಜಿ, ಕೆಮ್ಮು, ನೆಗಡಿ, ಕ್ಷಯ, ಶ್ವಾಸಕೋಶದ ಕ್ಯಾನ್ಸರ್, ನ್ಯೂಮೋನಿಯಾ ಗಂಟಲು ಬೇನೆ, ಚರ್ಮರೋಗ ರಕ್ತಸ್ರಾವ ಮುಂತಾದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಬೆಂಗಳೂರು ನಗರದಲ್ಲಿ ಕೈಗೊಂಡ ಅಧ್ಯಯನದಿಂದ ವಾಹನ ದಟ್ಟಣೆ ಅಧಿಕವಾದ ಕಾರಣ ಅಲ್ಲಿನ ಶಾಲಾ ಮಕ್ಕಳಲ್ಲಿ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆಗಳ ಪ್ರಕರಣಗಳು ಬೇರೆ ಪ್ರದೇಶದ ಮಕ್ಕಳಿಗಿಂತಲೂ ಹೆಚ್ಚು ಕಂಡು ಬಂದಿವೆ. ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸರು ಉಸಿರಾಟದ ತೊಂದರೆಯಿಂದ ಬಳಲುತ್ತಾರೆ. ಕಾರ್ಬನ್ ಮೊನಾಕ್ಸೈಡ್, ಸೀಸಗಳಂತಹ ವಿಷಕಾರಿ ವಸ್ತುಗಳು ದೇಹವನ್ನು ಸೇರಿದಾಗ ದೇಹದ ಕೆಲವು ಭಾಗಗಳು ಹಾನಿಗೊಳಗಾಗುತ್ತದೆ.  ಬೆಂಜಿನ್ ಎನ್ನುವ ರಸಾಯನಿಕ ಕ್ಯಾನ್ಸರ್ ಕಾಯಿಲೆಗೆ ಕಾರಣವಾಗುತ್ತದೆ.

ಹಳ್ಳಿಗಳ ಕೆಲ ಮಹಿಳೆಯರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಕಾರಣ ಸೌದೆ ಒಲೆ ಹಾಗೂ ಸೀಮೆಎಣ್ಣೆ ಸ್ಟೌ ಇತ್ಯಾದಿಗಳಿಂದ ಹೊರಬರುವ ಹೊಗೆಯ ಸೇವನೆಯೇ ಆಗಿದೆ. ಮನೆಯ ಒಳಗಿನ ಮಲಿನತೆಯಿಂದ ಉಸಿರಾಟದ ತೊಂದರೆ, ತಲೆಸುತ್ತು, ಎಂಪೈಸಿಯಾ, ಉಸಿರುಗಟ್ಟುವಿಕೆ, ಶ್ವಾಸಕೋಶದಂತಹ ಸಮಸ್ಯೆಗಳು ಉಲ್ಬಣಿಸುತ್ತವೆ .

ಬೀಡಿ ಹಾಗೂ ಸಿಗರೇಟ್‌ಗಳಿಂದ ಬಿಡುವ ಹೊಗೆಯು ಅಪಾಯಕಾರಿ ರೋಗಗಳನ್ನು ತರುತ್ತದೆ. ಈ ಹೊಗೆಯ ಸೇವನೆಯಿಂದ ಅಸ್ತಮಾದಿಂದ ಹಿಡಿದು ಕ್ಷಯರೋಗಿನವರೆಗಿನ ತೊಂದರೆಗಳು ಕಾಣಿಸಬಹುದು. ಗರ್ಭಿಣಿಯರು ಈ ಹೊಗೆಯನ್ನು ಸೇವಿಸಿದರೆ ಗರ್ಭದಲ್ಲಿರುವ ಮಗುವಿಗೂ ದುಷ್ಪರಿಣಾಮ ಉಂಟಾಗುತ್ತದೆ.

2. ಜಲಮಾಲಿನ್ಯ ಮತ್ತು ಆರೋಗ್ಯ:

ಕೈಗಾರಿಕೆಗಳ ತ್ಯಾಜ್ಯಗಳು, ರಸಾಯನಿಕಗಳು, ಕೀಟನಾಶಕಗಳು ಕಲುಷಿತ ನೀರು, ರಸ ಗೊಬ್ಬರಗಳಂತಹ ಕೃಷಿ ರಸಾಯನಿಕಗಳು,  ಮಲ-ಮೂತ್ರಗಳಂತಹ ಕೊಳಚೆ ವಸ್ತುಗಳು ಇತ್ಯಾದಿಗಳು ಶುದ್ಧವಾದ ನೀರಿನೊಂದಿಗೆ ಸೇರಿಕೊಂಡರೆ ನೀರು ಮಲಿನವಾಗುತ್ತದೆ. ಈ ಮಲಿನವಾದ ನೀರನ್ನು ಸೇವಿಸಿದಾಗ ಅಪಾಯಕಾರಿಯಾದ ರಸಾಯನಿಕಗಳು ದೇಹದೊಳಗೆ ಸೇರಿಕೊಳ್ಳುತ್ತವೆ. ಇದರಿಂದ ವಿಚಿತ್ರವಾದ ರೋಗಗಳು ಕಾಣಿಸಿಕೊಳ್ಳುತ್ತವೆ. ಉದಾ: ಕರುಳಿನ ಸೋಂಕುಗಳು, ವಾಂತಿಭೇದಿ, ಟೈಪಾಯಿಡ್‌, ಕಾಮಾಲೆ, ಕಾಲರಾ, ಕ್ಯಾನ್ಸರ್, ಅತಿಸಾರ, ವಿಷಮ ಶೀತಜ್ವರ, ಡೆಂಗ್ಯೂ, ಚಿಕನ್ ಗುನ್ಯಾ, ಹೆಪಾಟೈಟಸ್ ʻಬಿʼ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಜೊತೆಗೆ ಕರೋನಾ ಎಂಬ ಹೊಸ ಕಾಯಿಲೆ ಕಾಣಿಸಿಕೊಂಡು ಇಡೀ ಜಗತನ್ನೇ ತಲ್ಲಣಗೊಳಿಸಿತು. ಈ ರೋಗದಿಂದ ಲಕ್ಷಾಂತರ ಜನರು ಸಾವಿಗೀಡಾದರು. ಫ್ಲೋರೈಡ್ ಮಿಶ್ರಿತ ನೀರು ಕುಡಿಯುವುದರಿಂದ ಅಂಗವಿಕಲತೆ ಹಾಗೂ ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ನಿಂತ ನೀರಿನಿಂದ ಮಲೇರಿಯಾ ಹರಡುತ್ತದೆ. ಕೇರಳದ ಕಾಸರಗೋಡು ಜಿಲ್ಲೆಯ ಹಲವು ಭಾಗಗಳಲ್ಲಿ ಗೇರು ಬೆಳೆಗೆ ಸತತ ʻʻಎಂಡೋಸಲ್ಪಾನ್‌ʼʼ ಎಂಬ ಕೀಟನಾಶಕವನ್ನು ಬಳಸುತ್ತಿದ್ದ ಪರಿಣಾಮವಾಗಿ ಅಲ್ಲಿನ ಬಾವಿ, ನದಿ ಹಾಗೂ ಅಂತರ್ಜಲದಲ್ಲಿ ಎಂಡೋಸಲ್ಪಾನ್‌ ಸೇರಿಕೊಂಡಿದ್ದು ಹಲವು ರೀತಿಯ ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟಿವೆ. ಪಂಜಾಬಿನ ಭಟಿಂಡಾ ಮತ್ತು ಇತರೆ ಜಿಲ್ಲೆಗಳಲ್ಲಿ ರೈತರು ತಮ್ಮ ಕೃಷಿ ಭೂಮಿಗೆ ಕೀಟನಾಶಕಗಳ ಪ್ರಮಾಣವನ್ನು ಹೆಚ್ಚು ಬಳಕೆ ಮಾಡಿದ ಕಾರಣ ಅಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.

 3. ಮಣ್ಣು ಮಾಲಿನ್ಯ ಹಾಗೂ ಆರೋಗ್ಯ:

ಇಂದು ವಿವಿಧ ಘನ, ದ್ರವ ಹಾಗೂ ಅನಿಲ ರೂಪದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವುದರಿಂದ ಮಣ್ಣು ಮಲಿನವಾಗುತ್ತದೆ. ಉದಾ:  ಕಸ, ಕೊಳಚೆ ಕಸಗಳು, ನೀರು, ವಿಷಕಾರಿ ರಸಾಯನಿಕ ವಸ್ತುಗಳು, ಪ್ಲಾಸ್ಟಿಕ್ ಲೋಹದ ತುಣುಕುಗಳು ರಬ್ಬರ್ ವಸ್ತುಗಳು, ಟೀ ಕಪ್‌ಗಳು, ಚಾಕಲೇಟ್ ಕವರ್‌ಗಳು, ಐಸ್‌ಕ್ರೀಂ ಕಪ್‌ಗಳು ಮುಂತಾದವುಗಳು ಮಣ್ಣನ್ನು ಮಲಿನಗೊಳಿಸುತ್ತವೆ. ಇದರಿಂದ ಕ್ಯಾನ್ಸರ್, ಹೆಪಾಟೈಟಸ್ ಬಿ, ಕಾಲರಾ, ಆಮಶಂಕೆ ಮುಂತಾದ ರೋಗಗಳು ಹರಡುತ್ತವೆ. ಮಲಿನಗೊಂಡ ಮಣ್ಣಿನಿಂದ ತರಕಾರಿ ಬೆಳೆದರೆ ಅದನ್ನು ಸೇವಿಸುವ ಜನರು ಹಲವಾರು ರೋಗಗಳಿಗೆ ಬಲಿಯಾಗುತ್ತಾರೆ.

4. ಆಸ್ಪತ್ರೆ ತ್ಯಾಜ್ಯ ಹಾಗೂ ಆರೋಗ್ಯ:

ಆಸ್ಪತ್ರೆಗಳಲ್ಲಿ ಉಪಯೋಗಿಸಿದ ಚುಚ್ಚುಮದ್ದು, ಬ್ಯಾಂಡೇಜ್ ಬಟ್ಟೆಗಳು, ಸೋಂಕುಪೂರಿತ ವಾರ್ಡ್‌ಗಳ ತ್ಯಾಜ್ಯ, ಚಿಕಿತ್ಸಾಲಯ ಪ್ರಯೋಗಾಲಯ, ಸಂಶೋಧನಾಲಯ ಪ್ರಸೂತಿ ಕೊಠಡಿಗಳು, ಬ್ಲಡ್ ಬ್ಯಾಂಕ್‌ಗಳು, ಐಸಿಯು, ಫಾರ್ಮಸಿ, ಇಂಜೆಕ್ಷನ್ ಕೊಠಡಿಗಳು, ಡಯಾಲಿಸಿಸ್ ಕೊಠಡಿಗಳು, ವಿಕಿರಣ ಕೊಠಡಿಗಳ ತ್ಯಾಜ್ಯ ವಸ್ತುಗಳು, ಅವಯವಗಳು ಅಂಗಾಂಶಗಳು, ರಕ್ತ, ದೇಹದ ದ್ರವಗಳು, ಡ್ರೆಸ್ಸಿಂಗ್, ಧೂಳಾದ ಹತ್ತಿಗಳು, ಪ್ಲಾಸ್ಟಿಕ್‌ಗಳು, ಸೂಜಿ, ದಾರಗಳು, ಕತ್ತರಿಸಿದ ಎಸೆದ ಮಾನವನ ಅಂಗಾಗಳು, ಹೆರಿಗೆ, ಗರ್ಭಪಾತ ಇತ್ಯಾದಿ ತ್ಯಾಜ್ಯಗಳು ಹಲವು ರೋಗಗಳಿಗೆ ಕಾರಣವಾಗಿವೆ. ಆಸ್ಪತ್ರೆಯ ಸಿಬ್ಬಂದಿ ಹಾಗೂ ನಗರಪಾಲಿಕೆ ನೌಕರರು ಇಂತಹ ಅಪಾಯಗಳಿಗೆ ಸಿಲುಕುತ್ತಾರೆ.

5. ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಆರೋಗ್ಯ:

ನಗರ ತ್ಯಾಜ್ಯ ವಸ್ತುಗಳಲ್ಲಿ ಹೆಚ್ಚು ಅಪಾಯಕಾರಿ ರೋಗಗಳು ಕಂಡುಬರುತ್ತವೆ, ನಗರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳಲ್ಲಿ 6.25% ನಷ್ಟು ಪ್ಲಾಸ್ಟಿಕ್ ಉತ್ಪನ್ನಗಳಿವೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಮಾನ್ಯವಾಗಿ ಸುಡುವ ಮೂಲಕ ನಾಶ ಮಾಡಲಾಗುತ್ತದೆ. ಆದರೆ ಪ್ಲಾಸ್ಟಿಕ್ ಉರಿಯುವಾಗ ಉತ್ಪತ್ತಿಯಾಗುವ ವಿಷಕಾರಿ ಅನಿಲಗಳು ಕಣ್ಣುರಿ ಹಾಗೂ ಲುಕೇಮಿಯಾದಂತಹ ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

6. ಶಬ್ದ ಮಾಲಿನ್ಯ ಹಾಗೂ ಆರೋಗ್ಯ:

ಶಬ್ದ ಮಾಲಿನ್ಯ ಅಧಿಕ ಪ್ರಮಾಣದಲ್ಲಿ ಕಂಡು ಬಂದರೆ ಶ್ರವಣದೋಷ ಉಂಟಾಗುತ್ತದೆ. ಮತ್ತು ರಕ್ತದ ಒತ್ತಡ, ನಿದ್ರಾಹೀನತೆ, ಹೃದಯ ಕಾಯಿಲೆ, ಮಾನಸಿಕ ಕಾಯಿಲೆ, ಜ್ಞಾಪಕ ಶಕ್ತಿ ಕುಂಟಿತ ಹಾಗೂ ಮನೋವ್ಯಾಕುಲತೆ ಮುಂತಾದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಉಭವಿಸುತ್ತವೆ.

7. ವಿಕಿರಣ ಮತ್ತು ಆರೋಗ್ಯ:

ಅತಿ ನೇರಳೆ ಪರಮಾಣು ವಿಕಿರಣಗಳು ಹೊರಹೊಮ್ಮಿ ದೇಹದ ಜೀವಕೋಶಗಳಲ್ಲಿ ಬದಲಾವಣೆಯನ್ನು ಉಂಟು ಮಾಡುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಉದಾ:  ಕ್ಯಾನ್ಸರ್, ಕ್ಷಯರೋಗ, ಶ್ವಾಸಕೋಶ ತೊಂದರೆ, ಚರ್ಮರೋಗ ತಲೆಸುತ್ತುವಿಕೆ ಹಾಗೂ ಕೂದಲು ಉದುರುವಿಕೆ ಮುಂತಾದ ರೋಗಗಳು ಕಂಡುಬರುತ್ತವೆ.

8. ಓಝೋನ್ ಹಾಗೂ ಆರೋಗ್ಯ:

ಓಜೋನ್ ಪದರು ತೆಳುವಾಗುವುದರಿಂದ ಭೂಮಿಯ ಮೇಲೆ ಪ್ರತಿಫಲನಗೊಳ್ಳುವ ಅಪಾಯಕಾರಿ ನೇರಳಾತೀತ ಕಿರಣಗಳು ಚರ್ಮದ ಕ್ಯಾನ್ಸರ್, ತಲೆ ಕೂದಲು ಉದುರುವಿಕೆ, ಚರ್ಮರೋಗ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ.

9. ಅತಿಹೆಚ್ಚಿನ ಜನಸಂಖ್ಯೆಯು ಕಲ್ಯಾಣದ ಮೇಲೆ ಪ್ರಭಾವ:

ಅತಿಹೆಚ್ಚಿನ ಜನಸಂಖ್ಯೆಯು ದೇಶದಲ್ಲಿ ಶಿಕ್ಷಣ ಮಟ್ಟದ ಕುಸಿತಕ್ಕೆ ಕಾರಣವಾಗುತ್ತದೆ. ಅನಕ್ಷರತೆಯಿಂದ ಮಾನವ ಕಲ್ಯಾಣ ಸಾಧ್ಯವಾಗುವುದಿಲ್ಲ ಸ್ತ್ರೀಯರಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಸಮಾಜದಲ್ಲಿ ಅವರ ಸ್ಥಾನಮಾನವನ್ನು ಉತ್ತಮ ಪಡಿಸಿದರೆ ಮಾತ್ರ ಜನಸಂಖ್ಯಾ ಹೆಚ್ಚಳದಲ್ಲಿ ನಿಯಂತ್ರವನ್ನು ಸಾಧಿಸಿ ಆ ಮೂಲಕ ಮಾನವ ಕಲ್ಯಾಣವನ್ನು ಸಾಧಿಸಬಹುದು. ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಬೇಕು. ಇದರಿಂದ ಹೆಣ್ಣು ಭ್ರೂಣ ಹತ್ಯೆ, ಹೆಣ್ಣು ಶಿಶು ಹತ್ಯೆ, ವರದಕ್ಷಿಣೆ ಸಾವು, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.10. ಜನಸಂಖ್ಯಾ ಶಿಕ್ಷಣ:

ಮಾನವ ಆರೋಗ್ಯ ಹಾಗೂ ಕಲ್ಯಾಣಕ್ಕಾಗಿ ಜನಸಂಖ್ಯಾ ನಿಯಂತ್ರಣ ಯೋಜನೆಯಲ್ಲಿ ಮತ್ತೊಂದು ಪ್ರಮುಖ ಅಂಶ ಜನಸಂಖ್ಯಾ ಶಿಕ್ಷಣ ಈ ಶಿಕ್ಷಣದ ಮೂಲಕ.

  1.  ದೇಶದ ಪ್ರಸ್ತುತ ಜನಸಂಖ್ಯೆಯ ಕುರಿತು ಸಮಗ್ರವಾಗಿ ಮಾಹಿತಿ ನೀಡುವುದು.
  2.  ಜನಸಂಖ್ಯೆಯ ಬೆಳವಣಿಗೆಗೆ ಕಾರಣ ಮತ್ತು ಅದರ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು.
  3.  ಪರಿಸರ ಕಾಳಜಿ ಹಾಗೂ ವೈಯಕ್ತಿಕ ಶುಚಿತ್ವದ ಬಗ್ಗೆ ಜ್ಞಾನವನ್ನುಂಟು ಮಾಡುವುದು.
  4.  ಕೌಟುಂಬಿಕ ಜೀವನದ ಮಟ್ಟದಲ್ಲಿ ಸುಧಾರಣೆಯನ್ನು ತರುವುದು.
ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಭಾರತದಲ್ಲಿ ಜನಸಂಖ್ಯೆ ನಿಯಂತ್ರಿಸುವ ಕ್ರಮಗಳು

ಏರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸದಿದ್ದರೆ ಮುಂದೆ ಅದು ದೊಡ್ಡ ಸವಾಲಾಗಿ ಪರಿಣಮಿಸಬಹುದು. ಸರ್ಕಾರ ಸಂಘ ಸಂಸ್ಥೆಗಳು ನೀತಿ ನಿರೂಪಕರು ಒಟ್ಟಾಗಿ ಸೇರಿ ಜನಸಂಖ್ಯೆಯನ್ನು ನಿಯಂತ್ರಿಸಲು ಎಲ್ಲಿಲ್ಲದ ಪ್ರಯತ್ನವನ್ನು ಮಾಡಬೇಕು. ಈಗಾಗಲೇ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಅವುಗಳು ಪರಿಣಾಮಕಾರಿಯಾಗಿಲ್ಲವೆಂದೇ ಹೇಳಬೇಕು. ಕೆಲವು ನಿಯಂತ್ರಣ ಕ್ರಮಗಳು ಹೀಗಿವೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಗರ್ಭನಿರೋಧಕ ಬಳಕೆ, ಲೈಂಗಿಕ ಶಿಕ್ಷಣ, ಜನಿಸುವ ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು, ಸ್ತ್ರೀ ಸಬಲೀಕರಣ, ಆರೋಗ್ಯ ಕೇಂದ್ರಗಳ ಸ್ಥಾಪನೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇತ್ಯಾದಿಗಳು.

ಕಲ್ಯಾಣ ಸೇವೆಗಳು 

  1. ಕೊಳಚೆ ಪ್ರದೇಶದ ನಿವಾಸಿಗಳಿಗೆ ಪ್ರಾಥಮಿಕ ಆರೋಗ್ಯ ಹಾಗೂ ಮೂಲಭೂತ ವೈದ್ಯಕೀಯ ಸೇವೆಯನ್ನು ಕಲ್ಪಿಸುವುದು.
  2. ನಗರ ಸಭೆಗಳ ಸಹಯೋಗದೊಂದಿಗೆ ಕುಡಿಯುವ ನೀರು, ಶೌಚಾಲಯಗಳ ವ್ಯವಸ್ಥೆ, ತಾಜ್ಯ ವಿಲೇವಾರಿ ಕ್ರಮ, ಹಿಂದುಳಿದ ಬೆಟ್ಟ ಗುಡ್ಡಗಾಡು ಪ್ರದೇಶದ ಜನರಲ್ಲಿ ಅರಿವು ಮೂಡಿಸುವುದು. ಗ್ರಾಮೀಣ ಪ್ರದೇಶಗಳಿಗೆ ಸಂಚಾರಿ ವೈದ್ಯಕೀಯ ವಾಹನಗಳ ನಿಯೋಜನೆ ಮಾಡುವುದು.
  3.  ವಿವಾಹ ಪೂರ್ವ ಗರ್ಭಿಣಿಯರಾಗುವುದನ್ನು ತಡೆಗಟ್ಟುವುದು, ನಿಧಾನವಾಗಿ ಮದುವೆಯಾಗಲು ಉತ್ತೇಜನ ನೀಡುವುದು ಹಾಗೂ ಸುರಕ್ಷಿತ ಲೈಂಗಿಕ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡುವುದು.
  4.  ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ, ಕುಡಿಯುವ ನೀರು, ಚಿಕ್ಕ ಕುಟುಂಬ, ಶೌಚ, ಗ್ರಾಮೀಣ ರಸ್ತೆ ಸಾರಿಗೆ, ಅರಣ್ಯಾಭಿವೃದ್ಧಿ ಮತ್ತು ಪರಿಸರ ಅಭಿವೃದ್ಧಿ ಮುಂತಾದವುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣವನ್ನು ಒದಗಿಸಲಾಗುತ್ತದೆ.
  5. ಜನನ ಪ್ರಮಾಣವನ್ನು ತಡೆಗಟ್ಟಲು ತಡವಾಗಿ ಮದುವೆಯಾಗುವುದಕ್ಕೆ ಪ್ರೋತ್ಸಾಹಿಸಬೇಕು.
  6.  ಮದುವೆಯ ವಯಸ್ಸನ್ನು ಗಂಡಿಗೆ 30 ಹೆಣ್ಣಿಗೆ 25 ಎಂದು ನಿರ್ಧರಿಸಬೇಕು.

ಕುಟುಂಬ ಯೋಜನಾ ಕಾರ್ಯಕ್ರಮಗಳು:

ಕುಟುಂಬ ಕಲ್ಯಾಣ ಯೋಜನೆಯು ಈ ಕೆಳಕಂಡ ಗುರಿಗಳನ್ನು ಇಟ್ಟುಕೊಂಡು ಕಾರ್ಯಯೋನ್ಮುಖವಾಗಿದೆ.

1.  ಕುಟುಂಬದ ಗಾತ್ರವನ್ನು ತಗ್ಗಿಸುವುದು:  ಸಣ್ಣ ಕುಟುಂಬ ಸುಖಿ ಕುಟುಂಬ, ಸುಖಸಂಸಾರಕ್ಕೆ ಮಕ್ಕಳೆರಡೇ ಇರಲಿ, ನಾವಿಬ್ಬರು ನಮಗಿಬ್ಬರು, ಹತ್ತು ಹಡೆಯುವುದಕ್ಕಿಂತ ಒಂದು ಮುತ್ತು ಹಡಿ, ನೂರು ಇಲಿಗಳಿಗಿಂತ ಒಂದು ಹುಲಿ ಮುಖ್ಯ, ಒಂದು  ಮತ್ತು ಎರಡನೇ ಮಗುವಿನ ನಡುವೆ ಸಾಕಷ್ಟು ಅಂತರವಿರಲಿ, ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಎಂಬ ನಾಣ್ಣುಡಿಗಳನ್ನು ಸರ್ಕಾರ ಘೋಷಿಸಿದೆ.

2.  ಕುಟುಂಬದ ಮಕ್ಕಳ ಸಂಖ್ಯೆಯನ್ನು ನಿಯಂತ್ರಿಸುವುದು:  ಒಂದು ಅಥವಾ ಎರಡು ಮಕ್ಕಳು ಜನಿಸಿದ ನಂತರ ತಂದೆ ತಾಯಿಗಳು ಶಸ್ತ್ರ ಚಿಕಿತ್ಸೆಯ ಮೂಲಕ ಶಾಶ್ವತವಾಗಿ ಮಕ್ಕಳಾಗುವುದನ್ನು ತಡೆಗಟ್ಟಬಹುದು.

3. ಮಕ್ಕಳ ನಡುವಿನ ಅಂತರ ಹೆಚ್ಚಿಸುವುದು:  ಮೊದಲು ಹಾಗೂ ಎರಡನೇ ಮಗುವಿನ ಜನನದ ನಡುವೆ ಸಾಕಷ್ಟು ಅಂತರವನ್ನು ತಂದೆ-ತಾಯಿಗಳು ಪಾಲಿಸಿದರೆ ಪ್ರತಿ ಮಗುವಿನ ಲಾಲನೆ-ಪಾಲನೆ ಕೂಡ ಸಮರ್ಪಕವಾಗಿ ಆಗುತ್ತದೆ. ಇದರಿಂದ ಶಿಶುಗಳ ಆರೋಗ್ಯ ವೃದ್ಧಿಸಿ ಮರಣದ ಪ್ರಮಾಣ ಇಳಿಕೆಯಾಗುತ್ತದೆ. ಪದೇ ಪದೆ ಮಕ್ಕಳನ್ನು ಹೇರುವುದು ಮತ್ತು ಗರ್ಭಪಾತಕ್ಕೆ ಒಳಗಾಗುವುದರಿಂದ ತಾಯಿಯ ಆರೋಗ್ಯ  ಹದಗೆಟ್ಟು ಅವಳ ಪ್ರಾಣಕ್ಕೂ ಅಪಾಯ ಬರಬಹುದು.

4. ಜನನ ನಿಯಂತ್ರಣ ಸಾಧನಗಳು: ಗಂಡ-ಹೆಂಡತಿಯರಿಬ್ಬರೂ ತಾತ್ಕಾಲಿಕ ಗರ್ಭ ನಿಯಂತ್ರಣ ಸಾಧನೆಗಳನ್ನು ಬಳಸಬಹುದು. ಅವುಗಳ ಬಳಕೆಯ ಮೂಲಕ ಗರ್ಭಧಾರಣೆಯನ್ನು ಮುಂದೂಡಬಹುದು.

5. ಕುಟುಂಬ ಸದಸ್ಯರ ಪಾತ್ರ:  ಕುಟುಂಬದ ಸದಸ್ಯರು ಶಿಶುಗಳ ಮತ್ತು ತಾಯಂದಿರ ಆರೋಗ್ಯ ರಕ್ಷಣೆಯ  ಮಹತ್ವವನ್ನು ಅರಿತುಕೊಂಡು ಅವರ ಹಾರೈಕೆಯನ್ನು ಕ್ರಮಬದ್ಧವಾಗಿ ಮಾಡಬೇಕು. ಇದರೊಂದಿಗೆ ಶಿಶುಗಳನ್ನು ಕಾಡುವ ಸಾಂಕ್ರಾಮಿಕ ರೋಗಗಳನ್ನು ತೊಡೆದು ಹಾಕುವುದು, ಅದಕ್ಕೆ ಸೂಕ್ತ ಲಸಿಕೆ ನೀಡುವುದು, ಗರ್ಭಿಣಿಯರ ಹಾಗೂ ಮಾತೆಯರ ಆರೋಗ್ಯ ತಪಾಸಣೆ ಮಾಡುವುದು ಮುಂತಾದ ಕಾರ್ಯಗಳನ್ನು ದಾದಿಯರು ಹಾಗೂ ವೈದ್ಯಾಧಿಕಾರಿಗಳು ನಿರ್ವಹಿಸುತ್ತಾರೆ.

6. ನೈತಿಕ ನಿಯಂತ್ರಣವನ್ನು ಅನುಸರಿಸುವುದು:  ಕುಟುಂಬ ಯೋಜನೆಯ ಪ್ರಮುಖ ಕಾರ್ಯಗಳಲ್ಲಿ ಒಂದಾದ ನೈತಿಕ ನಿಯಂತ್ರಣ ವಿಧಾನದಲ್ಲಿ ವಿವಾಹವನ್ನು ಮುಂದೂಡುವುದು, ವಿವಾಹದ ವಯಸ್ಸನ್ನು ಹೆಚ್ಚಿಸುವುದು ಬ್ರಹ್ಮಚರ್ಯೆ ಪಾಲನೆ, ಆತ್ಮಸಂಹಮ  ಮುಂತಾದವುಗಳನ್ನು ಅಳವಡಿಸಿಕೊಳ್ಳುವುದರಿಂದ ಮಕ್ಕಳ ಜನನವನ್ನು ತಡೆಗಟ್ಟುವುದು.

7.  ಗರ್ಭ ನಿರೋಧಕ ಕ್ರಮಗಳು:  ಈ ವಿಧಾನದಲ್ಲಿ ಗರ್ಭನಿರೋಧಕಗಳ ಬಳಕೆ, ವಂಕಿಧಾರಣೆ, ಶಸ್ತ್ರಚಿಕಿತ್ಸೆ ಸುರಕ್ಷಾವಧಿ ಅನುಕರಣೆ, IUDS  , ಇತ್ಯಾದಿಗಳ ಮೂಲಕ ಗರ್ಭಧಾರಣೆಯನ್ನು ತಡೆಗಟ್ಟಬಹುದು.

8.  ಕುಟುಂಬ ಯೋಜನೆಗಳಿಗೆ ಒಳಪಡುವವರಿಗೆ ಪ್ರೋತ್ಸಾಹ:  ಕುಟುಂಬ ಯೋಜನೆಗೆ ಒಳಪಡುವ ಗ್ರಾಮೀಣ ದಂಪತಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಎರಡು ಮಕ್ಕಳಾದ ನಂತರ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ದಂಪತಿಗಳಿಗೆ ಪ್ರೋತ್ಸಾಹ ಧನ, ಸರ್ಕಾರಿ ನೌಕರರಿಗೆ ಭಡ್ತಿ, ಮುಂತಾದವುಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಬೇಕು. ಸಣ್ಣ ಕುಟುಂಬವನ್ನು ಪ್ರೋತ್ಸಾಹಿಸುವುದರೊಂದಿಗೆ ದೊಡ್ಡ ಕುಟುಂಬಗಳಿಗೆ ಕೆಲವು ಸರ್ಕಾರಿ ಸೌಲತ್ತುಗಳನ್ನು ಮತ್ತು ಅವಕಾಶಗಳನ್ನು ಹಿಂತೆಗೆದುಕೊಳ್ಳುವ ಮೂಲಕ ಅವರಿಗೆ ನಿರುತ್ತೇಜನಗೊಳಿಸುವ ಕಾರ್ಯವನ್ನು ಮಾಡಬೇಕು. ಉದಾ: ಪಡಿತರ ಆಹಾರವನ್ನು ತಡೆಹಿಡಿಯುವುದು, ಚುನಾವಣೆಯಲ್ಲಿ ಭಾಗವಹಿಸಿದಂತೆ ಕ್ರಮ ಜರುಗಿಸುವುದು, ಸರ್ಕಾರಿ ಕೆಲಸಗಳನ್ನು ನೀಡದಿರುವುದು ಮುಂತಾದ ಕ್ರಮಗಳನ್ನು ಜಾರಿಗೆ ತರಬೇಕು.

9. ಭಾರತವು ಬಹುಧರ್ಮಿಯ ಜಾತಿಗಳ ಹಾಗೂ ಭಾಷೆಗಳನ್ನಾಡುವ ದೇಶವಾದ ಕಾರಣ ಎಲ್ಲರಿಗೂ ಕುಟುಂಬ ಯೋಜನೆಯನ್ನು ಕಡ್ಡಾಯಗೊಳಿಸಬೇಕು.

10.  ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಅವರಿಗೆ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ದೊರೆಯುವಂತೆ ಮಾಡಬೇಕು.

11. ಶಾಲಾ ಕಾಲೇಜುಗಳ ಮಟ್ಟದಲ್ಲಿಯೇ ಲೈಂಗಿಕ ಶಿಕ್ಷಣದ ಕುರಿತು ಮಾಹಿತಿ ನೀಡಬೇಕು.

12.  ಕುಟುಂಬ ಯೋಜನೆಗೆ ಒಳಗಾದವರಿಗೆ ಸೂಕ್ತ ವಸತಿಯೋಜನೆ, ಮಕ್ಕಳ ಪೌಷ್ಟಿಕಾಂಶ ಲಸಿಕೆ ಇತ್ಯಾದಿ ಸೌಲಭ್ಯಗಳನ್ನು ಸರ್ಕಾರವು ಮಾಡಬೇಕು.

ಉಪಸಂಹಾರ

ಭಾರತದಲ್ಲಿ ಜನಸಂಖ್ಯೆ ನಿಯಂತ್ರಣವು ಸರ್ಕಾರದ ಹೊಣೆಗಾರಿಕೆಯಷ್ಟೇ ಅಲ್ಲದೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಹೌದು. ಕುಟುಂಬ ಯೋಜನೆ, ಮಹಿಳಾ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಾರ್ವಜನಿಕ ಜಾಗೃತಿ ಇವುಗಳ ಸಮನ್ವಯದಿಂದ ಮಾತ್ರ ಜನಸಂಖ್ಯೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯ. ಸಣ್ಣ ಕುಟುಂಬದ ಮೂಲಕವೇ ಸುಸ್ಥಿರ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಬಹುದು.