ಭಾರತದ ಸಂವಿಧಾನಾತ್ಮಕ ಇತಿಹಾಸ

ಭಾರತದ ಸಂವಿಧಾನಾತ್ಮಕ ಇತಿಹಾಸ

ಪೀಠಿಕೆ:  ಜಗತ್ತಿನ ಪ್ರತಿಯೊಂದು ದೇಶಗಳೂ ತಮ್ಮದೇ ಆದ ಸಂವಿಧಾನವನ್ನು ಹೊಂದಿವೆ. ಈ ಸಂವಿಧಾನವು ತನ್ನದೇ ಆದ ಇತಿಹಾಸವನ್ನು ಸಹ ಹೊಂದಿದೆ. ಹಾಗೆಯೇ ಭಾರತದ ಸಂವಿಧಾನವು ಸಹ ವಿಶ್ವದ ಇತರೆ ಸಂವಿಧಾನಗಳಿಗಿಂತ ವಿಶೇಷವಾದ ಇತಿಹಾಸವನ್ನು ಹೊಂದಿದೆ. ಇದಕ್ಕೆ ಮೂಲ ಕಾರಣ ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆ. ಆರಂಭದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಗೆ ಒಳಪಟ್ಟ ಭಾರತದಲ್ಲಿ ಏಕಪಕ್ಷಿಯ ಆಡಳಿತ, ಕಂಪನಿಯ ಸರ್ವಾಧಿಕಾರ ಹಾಗೂ ಜನ ವಿರೋಧಿ ನೀತಿಗಳು ಜಾರಿಯಲ್ಲಿದ್ದವು. 1857ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತೀಯರಿಗೆ ಸ್ವಾತಂತ್ರ್ಯದ ಕನಸು ಚಿಗುರೊಡೆಯಲು ಬುನಾದಿಯನ್ನು ಹಾಕಿತು. ತದನಂತರ 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಕ್ರಮೇಣ ಭಾರತೀಯರು ಸ್ವಾತಂತ್ರ್ಯ ಹೊಂದಬೇಕೆಂಬ ಪ್ರಯತ್ನಗಳು ಗರಿಗೆದರಿದಾಗ ಸಂವಿಧಾನಾತ್ಮಕ ನಿಲುವುಗಳು ಸ್ಪಷ್ಟವಾದವು. ಈ ಸಂವಿಧಾನಾತ್ಮಕ ಇತಿಹಾಸವನ್ನು ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ ಮತ್ತು ಸಂವಿಧಾನಾತ್ಮಕ ಬೇಡಿಕೆ ಇತಿಹಾಸ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ.

ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸ: (History and development of constitution)

ಆರಂಭದಲ್ಲಿ ವ್ಯಾಪಾರದ ಉದ್ದೇಶದಿಂದ ಭಾರತಕ್ಕೆ ಆಗಮಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಕಾಲಕ್ರಮೇಣ ಭಾರತೀಯ ರಾಜಕೀಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಯಿತು. ಕಂಪನಿಯ ನೌಕರರು ಸ್ವಾರ್ಥ, ಪಕ್ಷಪಾತ, ಅಧಿಕಾರ ದುರುಪಯೋಗ ಮತ್ತು ಲಂಚಗುಳಿತನದಲ್ಲಿ ಭಾಗಿಗಳಾಗಿ ಕಂಪನಿಗೆ ಕೆಟ್ಟ ಹೆಸರು ತಂದರು. ಆಗ ಕಂಪನಿಯನ್ನು ನಿಯಂತ್ರಿಸಿ ಆಡಳಿತಾತ್ಮಕ ಚೌಕಟ್ಟನ್ನು ರೂಪಿಸಲು ಬ್ರಿಟಿಷ್ ಸಂಸತ್ತು ಕಾಲ ಕಾಲಕ್ಕೆ ಕೆಲವು ಕಾನೂನುಗಳನ್ನು ಜಾರಿಗೆ ತಂದಿತು. ಈ ಕಾನೂನುಗಳು ಅಂದಿನ ಸಂವಿಧಾನದ ಸ್ವರೂಪವನ್ನು ಪಡೆದಿದ್ದವಲ್ಲದೆ ಪ್ರಸ್ತುತ ಭಾರತದ ಸಂವಿಧಾನಕ್ಕೆ ಆಧಾರಗಳೆನಿಸಿದವು. ಹೀಗೆ ಆಂಗ್ಲ ಸರ್ಕಾರ ಆಗಾಗ ಕಾನೂನುಗಳನ್ನು ಜಾರಿಗೊಳಿಸಿದುದು ಭಾರತದ ಸಂವಿಧಾನಾತ್ಮಕ ಬೆಳವಣಿಗೆಯ ಇತಿಹಾಸವನ್ನು ಸ್ಪಷ್ಟ ಪಡಿಸುತ್ತದೆ. ಅಂತಹ ಕಾನೂನುಗಳು ಈ ಕೆಳಗಿನಂತಿವೆ,

1. ರೆಗ್ಯುಲೇಟಿಂಗ್ ಆಕ್ಟ್: 1773: ಇದು ಭಾರತದಲ್ಲಿನ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯನ್ನು ನಿಯಂತ್ರಣದಲ್ಲಿ ಇಡಲು ಬ್ರಿಟಿಷ್ ಸಂಸತ್ತು ರಚಿಸಿದ ಮೊದಲ ಕಾಯಿದೆಯಾಗಿತ್ತು. ರೆಗ್ಯುಲೇಟಿಂಗ್ ಆಕ್ಟ್ ಪ್ರಕಾರ ಬಂಗಾಳದ ಗವರ್ನರ್‌ನನ್ನು ಭಾರತದ ಗವರ್ನರ್ ಜನರಲ್ ಆಗಿ ನೇಮಕ ಮಾಡಲಾಯಿತು. ಮುಂಬೈ ಮತ್ತು ಮದ್ರಾಸ್ ಪ್ರಾಂತ್ಯಗಳು ಈತನ ಅಧೀನಕ್ಕೊಳಪಟ್ಟವು. ಗವರ್ನರ್ ಜನರಲ್ ನ ಸಲಹಾ ಸಮಿತಿಗೆ ನಾಲ್ಕು ಜನ ಸದಸ್ಯರುಗಳನ್ನು ನೇಮಕ ಮಾಡಲಾಯಿತು. ಮೂರು ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಕಲ್ಕತ್ತಾದಲ್ಲಿ ಸರ್ವೋಚ್ಚ ನ್ಯಾಯಾಲಯವನ್ನು ೧೭೭೪ ರಲ್ಲಿ ಸ್ಥಾಪಿಸಲಾಯಿತು. ಕಂಪನಿಯ ನೌಕರರು ಲಂಚ ಪಡೆಯದಂತೆ ಮತ್ತು ಖಾಸಗಿ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳದಂತೆ ನಿರ್ಬಂಧ ಹೇರಲಾಯಿತು. ಇನ್ನು ಮುಂದೆ ಕಂಪನಿಯ ಆಡಳಿತ ಮಂಡಳಿಯು ಭಾರತದ ಕಂದಾಯ, ನಾಗರಿಕ ಹಾಗೂ ಸೈನಿಕ ಆಡಳಿತದ ಕುರಿತಂತೆ ಕಾಲಕಾಲಕ್ಕೆ ಬ್ರಿಟಿಷ್ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಲಾಯಿತು.

2.  ಪಿಟ್ಸ್ ಇಂಡಿಯಾ ಕಾಯ್ದೆ 1784: ಬ್ರಿಟಿಷರು ಜಾರಿಗೆ ತಂದ ಭಾರತದಲ್ಲಿನ ಎರಡನೇ ಅತಿ ಮುಖ್ಯ ಕಾಯಿದೆಯಾಗಿದೆ. ಪಿಟ್ಸ್ ಇಂಡಿಯಾ ಕಾಯ್ದೆಯ ಪ್ರಕಾರ ಭಾರತದ ಈಸ್ಟ್ ಇಂಡಿಯಾ ಕಂಪನಿಯ ವ್ಯವಹಾರವನ್ನು ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಭಾರತದ ಆಡಳಿತದ ವ್ಯವಹಾರಗಳನ್ನು ಕೋರ್ಟ್ ಆಫ್ ಡೈರೆಕ್ಟರ್ಗಳಿಗೆ ವಹಿಸಿಕೊಡಲಾಯಿತು. ಗೌರ್ನರ್ ಜನರಲ್‌ನ ಸಲಹಾ ಸಮಿತಿಯ ಸದಸ್ಯರ ಸಂಖ್ಯೆಯನ್ನು ನಾಲ್ಕರಿಂದ ಮೂರಕ್ಕೆ ಇಳಿಸಲಾಯಿತು. ಈ ಕಾಯ್ದೆಯು ಮದ್ರಾಸ್‌ ಹಾಗೂ ಮುಂಬೈ ಪ್ರಾಂತ್ಯಗಳ ಗವರ್ನರ್ ಗಳನ್ನು ಭಾರತದ ಗವರ್ನರ್ ಜನರಲ್ ನ ಹತೋಟಿಗೆ ಒಳಪಡಿಸಲಾಯಿತು. ಭಾರತದ ಗವರ್ನರ್ ಜನರಲ್ ಇಂಗ್ಲೆಂಡ್ ಪಾರ್ಲಿಮೆಂಟಿನ ಅನುಮತಿಯನ್ನು ಪಡೆಯದ ಹೊರತು ಯುದ್ಧ ಹೂಡುವುದು ಮತ್ತು ಶಾಂತಿ ಒಪ್ಪಂದ ಮಾಡಿಕೊಳ್ಳುವುದನ್ನು ನಿರ್ಬಂಧಿಸಿತು. ಕಂಪನಿಯ ನೌಕರರ ಅಕ್ರಮವನ್ನು ತಡೆಯಲು ವಿಶೇಷವಾದ ನ್ಯಾಯಾಲಯವನ್ನು ಸ್ಥಾಪಿಸಿತು. ಗವರ್ನರ್ ಜನರಲ್ ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳ ಆದೇಶವನ್ನು ಪಾಲಿಸಬೇಕಿತ್ತು.

3.  ಚಾರ್ಟರ್ ಕಾಯ್ದೆಗಳು: 1773ರ ರೆಗ್ಯೂಲೇಟಿಂಗ್ ಕಾಯ್ದೆಯನ್ನು ಪುನರ್ ನವೀಕರಿಸಲು 20 ವರ್ಷಗಳಿಗೊಮ್ಮೆ ಚಾರ್ಟರ್ ಕಾಯ್ದೆಗಳನ್ನು ಜಾರಿಗೊಳಿಸಲಾಯಿತು. ಬ್ರಿಟಿಷ್ ಪಾರ್ಲಿಮೆಂಟಿನಿಂದ ಅನುಮೋದನೆ ಪಡೆದ ನಂತರ ಚಾರ್ಟರ್ ಕಾಯ್ದೆಗಳನ್ನು 1793, ೧813, 1833 ಹಾಗೂ ೧೮೫೩ ರಲ್ಲಿ ಕಾರ್ಯರೂಪಕ್ಕೆ ತರಲಾಯಿತು.

  1. ಚಾರ್ಟರ್ಕಾಯಿದೆ 1793: 1793ರಲ್ಲಿ ಜಾರಿಗೆ ಬಂದ ಚಾರ್ಟರ್ ಕಾಯ್ದೆಯ ಪ್ರಕಾರ ಕಂಪನಿಯ ವ್ಯಾಪಾರದ ಏಕಸ್ವಾಮ್ಯ ಮತ್ತು ವಿಶೇಷ ಸವಲತ್ತುಗಳನ್ನು ಮುಂದಿನ 20 ವರ್ಷಗಳವರೆಗೆ ಅಂದರೆ 1813ರ ವರೆಗೆ ನವೀಕರಿಸಲಾಯಿತು.  ಕಂಪನಿಗೆ ಭಾರತದ ಪ್ರದೇಶಗಳಿಂದ ಬರುವ ಕಂದಾಯದಿಂದ ಕಂಪನಿಯ ಸಿಬ್ಬಂದಿಗಳಿಗೆ ವೇತನ ನೀಡುವಂತೆ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಯಿತು.
  2. ಚಾರ್ಟರ್ ಕಾಯ್ದೆ 1813: 1813ರ ಚಾರ್ಟರ್ ಕಾಯ್ದೆಯು ಕಂಪನಿಯ ವ್ಯಾಪಾರದ ಏಕಸ್ವಾಮ್ಯವನ್ನು ರದ್ದುಪಡಿಸಿ ಕಂಪನಿಯ ಪ್ರದೇಶಗಳನ್ನು ಬ್ರಿಟಿಷ್ ಇಂಡಿಯಾ ಪ್ರದೇಶಗಳೆಂದು ಹೆಸರಿಸಲಾಯಿತು. ಜೊತೆಗೆ ಇಂಗ್ಲೆಂಡಿನ ಪ್ರಜೆಗಳು ಭಾರತದಲ್ಲಿ ಮುಕ್ತವಾಗಿ ವ್ಯಾಪಾರ ಮಾಡಲು ಅನುಮತಿ ನೀಡಲಾಯಿತು.  ಈ ಕಾಯ್ದೆಯ ಪ್ರಕಾರ ಭಾರತದಲ್ಲಿ ಶಿಕ್ಷಣ ಅಭಿವೃದ್ಧಿಗಾಗಿ ಪ್ರತಿ ವರ್ಷ ಒಂದು ಲಕ್ಷ ರೂಗಳನ್ನು ವಿನಿಯೋಗಿಸಲು ಅವಕಾಶ ಕಲ್ಪಿಸಲಾಯಿತು.
  3. ಚಾರ್ಟರ್ ಕಾಯ್ದೆ 1833: 1833ರ ಕಾಯಿದೆಯು ಉದಾರವಾದಿ ಸಿದ್ಧಾಂತವನ್ನು ಜಾರಿಗೊಳಿಸಿತು. ಈ ಕಾಯ್ದೆಯ ಪ್ರಕಾರ ಈಗಾಗಲೇ ಇದ್ದ ಮೂರು ಜನರಿಂದ ಕೂಡಿದ ಗವರ್ನರ್ ಜನರಲ್ ಕೌನ್ಸಿಲ್ ಗೆ ನಾಲ್ಕನೆಯದಾಗಿ ಕಾನೂನು ಸದಸ್ಯನನ್ನು ನೇಮಕ ಮಾಡಲಾಯಿತು. ಭಾರತೀಯ ಕಾನೂನುಗಳ ಕ್ರೋಢೀಕರಣಕ್ಕಾಗಿ ಟಿ.ಬಿ ಮೆಕಾಲೆಯವರ ಅಧ್ಯಕ್ಷತೆಯಲ್ಲಿ ಒಂದು ಕಾನೂನು ಆಯೋಗವನ್ನು ರಚಿಸಲಾಯಿತು. ಕಂಪನಿಯ ಆಡಳಿತಾತ್ಮಕವಾದ ವಾಣಿಜ್ಯ ಸೌಲಭ್ಯಗಳನ್ನು ರದ್ದುಪಡಿಸಿ ಕೇವಲ ಆಡಳಿತದ ಕಡೆಗೆ ಗಮನಹರಿಸುವಂತೆ ಮಾಡಲಾಯಿತು.
  4. ಚಾರ್ಟರ್ ಕಾಯ್ದೆ 1853: ಈ ಕಾಯ್ದೆಯ ಪ್ರಕಾರ ಗವರ್ನರ್ ಜನರಲ್ ನ ಶಾಸನೀಯ ಮತ್ತು ಕಾರ್ಯಾಂಗೀಯ ಅಧಿಕಾರಿಗಳು ಬೇರ್ಪಟ್ಟವು. ಜೊತೆಗೆ ಆರು ಜನ ಸದಸ್ಯರನ್ನು ಒಳಗೊಂಡ ಕೇಂದ್ರ ಶಾಸನ ಪರಿಷತ್ತನ್ನು ರಚಿಸಲಾಯಿತು. ಭಾರತದಲ್ಲಿ ಪ್ರಥಮ ಬಾರಿಗೆ ನಾಗರಿಕ ಸೇವಾ ಹುದ್ದೆಗಳ ನೇಮಕಕ್ಕಾಗಿ ಭಾರತೀಯರ ಮುಕ್ತ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಯಿತು.

4. ಭಾರತ ಸರ್ಕಾರ ಕಾಯ್ದೆ 1858 : 1857ರ ಭಾರತದ ಸಿಪಾಯಿ ದಂಗೆಯ ನಂತರ ಜಾರಿಗೊಂಡ ಮೊದಲ ಕಾಯಿದೆಯಾಗಿದೆ. ಈ ಕಾಯ್ದೆಯು ಭಾರತದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಆಡಳಿತವನ್ನು ಕೊನೆಗೊಳಿಸಿತು. ನಂತರ ಕಂಪನಿಯ ಆಡಳಿತವು ನೇರವಾಗಿ ಬ್ರಿಟನ್ ರಾಣಿಯ ಕೈಗೆ ಹಸ್ತಾಂತರಗೊಂಡಿತು. ರಾಣಿಯ ಪರವಾಗಿ ಭಾರತದ ಆಡಳಿತವನ್ನು ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಯು ನೋಡಿಕೊಳ್ಳಲು ಅನುಮತಿಸಲಾಯಿತು. ಭಾರತದ ಗವರ್ನರ್ ಜನರಲ್ ಈಗ ಭಾರತದ ವೈಸರಾಯ್ ಆದನು. ಬೋರ್ಡ್ ಆಫ್ ಕಂಟ್ರೋಲ್ ಹಾಗೂ ಕೋರ್ಟ್ ಆಫ್ ಡೈರೆಕ್ಟರ್ ಗಳು ರದ್ದಾದವು. ಭಾರತದ ವ್ಯವಹಾರಗಳ ರಾಜ್ಯ ಕಾರ್ಯದರ್ಶಿಗೆ ಸಲಹೆ ನೀಡಲು ಹದಿನೈದು ಸದಸ್ಯರುಗಳನ್ನೊಳಗೊಂಡ ಭಾರತೀಯ ಪರಿಷತ್ತು ನೇಮಕವಾಯಿತು. ಭಾರತದಲ್ಲಿ ಜಾರಿಯಾಗುವ ಕಾಯಿದೆಗಳನ್ನು ಈ ಪರಿಷತ್ತು ವಿಮರ್ಶೆ ಮಾಡುವ ಅಧಿಕಾರವನ್ನು ಹೊಂದಿತ್ತು.

5. ಭಾರತ ಸರ್ಕಾರ ಕಾಯ್ದೆ 1861:  ವೈಸರಾಯ ಕಾರ್ಯಕಾರಿ ಮಂಡಳಿ ಹಾಗೂ ಶಾಸನೀಯ ಮಂಡಳಿಗಳಲ್ಲಿ ಭಾರತೀಯರಿಗೆ ಪ್ರಾತಿನಿಧ್ಯವನ್ನು ನೀಡಲಾಯಿತು. ಜೊತೆಗೆ ಕೇಂದ್ರ ಹಾಗೂ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸಲು ಅನುಮತಿ ನೀಡಲಾಯಿತು.  ಪ್ರಥಮ ಬಾರಿಗೆ ಮುಂಬೈ ಹಾಗೂ ಮದ್ರಾಸ್ ಪ್ರಾಂತ್ಯಗಳಲ್ಲಿ ಶಾಸನಸಭೆಗಳನ್ನು ಸ್ಥಾಪಿಸುವ ಮೂಲಕ ಅಧಿಕಾರ ವಿಕೇಂದ್ರೀಕರಣಕ್ಕೆ ಚಾಲನೆ ನೀಡಲಾಯಿತು.

6. ಭಾರತದ ಕಾಯ್ದೆ 1892:  ಈ ಕಾಯ್ದೆಯು ಪರೋಕ್ಷ ಚುನಾವಣೆಗೆ ಅವಕಾಶ ಕಲ್ಪಿಸಿತು. ಮುಂದುವರೆದು ಶಾಸನಸಭೆಗಳ ಗಾತ್ರವನ್ನು ಹೆಚ್ಚಿಸಿತ್ತು. ಮುಂಗಡಪತ್ರದ ಕುರಿತು ಚರ್ಚಿಸುವ ಮತ್ತು ಕಾರ್ಯಕಾರಿ ನಡುವಳಿಕೆಗಳನ್ನು ಪ್ರಶ್ನಿಸುವ ಅಧಿಕಾರಗಳನ್ನು ಶಾಸನ ಸಭೆಗೆ ನೀಡಲಾಯಿತು.

7. ಭಾರತೀಯ ಸರ್ಕಾರದ ಕಾಯಿದೆ 1909:  ಈ ಕಾಯ್ದೆಯನ್ನು ಮಾರ್ಲೆ-ಮಿಂಟೋ ಸುಧಾರಣೆ ಎಂದು ಕರೆಯುತ್ತಾರೆ. ಇದು ಶಾಸನಸಭೆಗಳಿಗೆ ಪ್ರತ್ಯೇಕ ಚುನಾವಣೆಯನ್ನು ಜಾರಿಗೊಳಿಸಿ ಜನತಾ ಪ್ರಾತಿನಿಧ್ಯಕ್ಕೆ ಸೀಮಿತವಾದ ಅವಕಾಶ ಕಲ್ಪಿಸಿತು. ಕೇಂದ್ರ ಶಾಸನಸಭೆಯನ್ನು ಇಂಪೀರಿಯಲ್ ಕೌನ್ಸಿಲ್ ಎಂದು ಬದಲಾಯಿಸಿತು. ಈ ಕಾಯ್ದೆಯಿಂದ ಕೇಂದ್ರ ಶಾಸಕಾಂಗದ ಸದಸ್ಯತ್ವವನ್ನು 16 ರಿಂದ 60 ಕ್ಕೆ ಏರಿಸಲಾಯಿತು. ಇದು ಮುಸಲ್ಮಾನರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ಮೀಸಲಾಗಿರಿಸಿತು. ಪರೋಕ್ಷವಾಗಿ ಈ ಕಾಯ್ದೆಯು ಕೋಮುವಾರು ಚುನಾವಣಾ ಪದ್ಧತಿಯನ್ನು ಜಾರಿಗೆ ತಂದಿತು.

8.  ಮಾಂಟೆಗ್ಯೂ-ಚೇಮ್ಸ್ ಫರ್ಡ್ ಕಾಯ್ದೆ 1919:  1909ರ ಕಾಯ್ದೆಯು ಭಾರತೀಯರ ಆಶೋತ್ತರಗಳನ್ನು ಈಡೇರಿಸಲು ವಿಫಲವಾದ ಕಾರಣ ಭಾರತೀಯರು ಬಾಲಗಂಗಾಧರ ತಿಲಕರ ಅಧ್ಯಕ್ಷತೆಯಲ್ಲಿ ಹೋಂ ರೂಲ್ ಚಳುವಳಿಯನ್ನು ಆರಂಭಿಸಿದರು. ಈ ಮಧ್ಯ ಸೂರತ್ ಅದಿವೇಶನದಲ್ಲಿ ಇಬ್ಬಾಗವಾಗಿದ್ದ ಮಂದಗಾಮಿಗಳು ಹಾಗೂ ತೀವ್ರಗಾಮಿಗಳು 1916ರಲ್ಲಿ ಮತ್ತೆ ಒಂದಾಗಿ ಸ್ವರಾಜ್ಯ ಹೋರಾಟವನ್ನು ಮುಂದುವರಿಸಿದರು. ಇವರೊಂದಿಗೆ ಮುಸ್ಲಿಂ ಲೀಗ್ ಸಹ ಕೈಜೋಡಿಸಿತು. ಆಗ ಭಾರತೀಯರನ್ನು ಸಮಾಧಾನಗೊಳಿಸಲು ಭಾರತದ ವ್ಯವಹಾರಗಳ ಕಾರ್ಯದರ್ಶಿ ಮಾಂಟೆಗ್ಯೂ ಹಾಗೂ ಭಾರತದ ಗವರ್ನರ್ ಜನರಲ್ ಜೇಮ್ಸ್ ಫರ್ಡ್ ಭಾರತೀಯರಿಗೆ ಆಡಳಿತದಲ್ಲಿ ಪ್ರಾತಿನಿಧ್ಯ ನೀಡುವ ವರದಿಯೊಂದನ್ನು ತಯಾರಿಸಿದರು. ಈ ವರದಿಯನ್ನೇ 1919ರ ಭಾರತ ಸರ್ಕಾರದ ಕಾಯ್ದೆ ಎಂದು ಕರೆಯುತ್ತಾರೆ. ಈ ಕಾಯ್ದೆಯ ಪ್ರಕಾರ ಆಡಳಿತ ವಿಷಯಗಳನ್ನು ಕೇಂದ್ರ ಹಾಗೂ ಪ್ರಾಂತ್ಯ ವಿಷಯಗಳು ಎಂದು ವಿಭಾಗಿಸಿ ಮುಂದುವರೆದು ಪ್ರಾಂತ್ಯ ವಿಷಯಗಳನ್ನು ಮೀಸಲು ಹಾಗೂ ವರ್ಗಾಯಿಸಿದ ವಿಷಯಗಳು ಎಂಬುದಾಗಿ ವಿಂಗಡಿಸಲಾಯಿತು.

9. ಭಾರತ ಸರ್ಕಾರ ಕಾಯ್ದೆ 1935: 1919ರ ಮಾಂಟೆಗೋ ಚೇಮ್ಸ್ ಫರ್ಡ್ ಸುಧಾರಣೆಯು ಭಾರತೀಯರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಯಿತು. ಶಾಸನಸಭೆಯಲ್ಲಿ ಈ ಕಾಯ್ದೆಯ ಕುರಿತು ವ್ಯಾಪಕವಾಗಿ ಅಸಮಾಧಾನವನ್ನು ವ್ಯಕ್ತಪಡಿಸಲಾಯಿತು. ಭಾರತದಲ್ಲಿ ಎಲ್ಲಾ ಪಕ್ಷಗಳು ಮೋತಿಲಾಲ್ ನೆಹರು ನೇತೃತ್ವದಲ್ಲಿ ಸಮಿತಿ ಒಂದನ್ನು ರಚಿಸಿದವು. ಈ ನೆಹರು ಸಮಿತಿ ತನ್ನ ವರದಿಯಲ್ಲಿ ಸಂಯುಕ್ತ ಪದ್ಧತಿಯನ್ನು ಮತ್ತು ಪೂರ್ಣ ಸ್ವರಾಜ್ಯವನ್ನು ಶಿಫಾರಸ್ಸು ಮಾಡಿತು. ನೆಹರು ವರದಿಯ ಬೆನ್ನಲ್ಲೇ ಲಂಡನ್ ನಲ್ಲಿ ಮೂರು ದುಂಡು ಮೇಜಿನ ಪರಿಷತ್ತುಗಳು ನಡೆದವು. ಕಾಂಗ್ರೆಸ್ ಈ ಪರಿಷತ್ತನ್ನು ಬಹಿಷ್ಕರಿಸಿದರೆ, ಡಾ. ಬಿಆರ್ ಅಂಬೇಡ್ಕರ್ ಈ ಸಮ್ಮೇಳನದಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಭಾರತದ ಗುರಿ ಎಂದು ಘೋಷಿಸಿದರು. ಆಗ ಭಾರತದ ಸುಧಾರಣೆಗಳ ಕುರಿತು ಬ್ರಿಟಿಷ್ ಸರ್ಕಾರ 1933ರಲ್ಲಿ ಒಂದು ಶ್ವೇತಪತ್ರವನ್ನು ಹೊರಡಿಸಿ ಅಂತಿಮವಾಗಿ ಪಾರ್ಲಿಮೆಂಟಿನಲ್ಲಿ ಮಸೂದೆ ಅಂಗೀಕರಿಸಲ್ಪಟ್ಟಿತ್ತು. ಇದು ಆಗಸ್ಟ್ 2 1935 ರಂದು ಬ್ರಿಟಿಷ್ ರಾಣಿಯ ಒಪ್ಪಿಗೆ ಪಡೆದು ಕಾಯ್ದೆಯಾಯಿತು.

ಈ ಕಾಯ್ದೆಯ ಪ್ರಕಾರ ಬ್ರಿಟಿಷರಿಂದ ನೇರವಾಗಿ ಆಳಲ್ಪಡುತ್ತಿದ್ದ ಬ್ರಿಟಿಷ್ ಪ್ರಾಂತ್ಯಗಳು ಹಾಗೂ ದೇಶಿಯ ರಾಜ ಮಹಾರಾಜರಿಂದ ಆಳಲ್ಪಡುತ್ತಿದ್ದ ದೇಶಿಯ ಸಂಸ್ಥಾನಗಳು ಎಂಬ ಎರಡು ಬಗೆಯ ಆಡಳಿತಾತ್ಮಕ ಘಟಕಗಳುಳ್ಳ ಸಂಯುಕ್ತ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸಿತು.

10. ಭಾರತದ ಸ್ವತಂತ್ರ ಕಾಯ್ದೆ 1947:  1935 ರ ಭಾರತ ಸರ್ಕಾರದ ಕಾಯ್ದೆಯೂ ಸಹ ಭಾರತೀಯರ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿತು. ಈ ನಡುವೆ 1939ರಲ್ಲಿ ದ್ವಿತೀಯ ಪ್ರಪಂಚದ ಮಹಾಯುದ್ಧ ನಡೆಯಿತು. ಆಂಗ್ಲರು ಭಾರತೀಯರಿಂದ ಯುದ್ಧದಲ್ಲಿ ಸಹಾಯಬೇಡಿ 1940ರಲ್ಲಿ ಆಗಸ್ಟ್ ಕೊಡುಗೆ ಮತ್ತು 1942 ರಲ್ಲಿ ಕ್ರಿಪ್ಸ್ ಆಯೋಗದ ಮೂಲಕ ಭಾರತೀಯರನ್ನು ಸಮಾಧಾನಗೊಳಿಸಿ ತನ್ನತ್ತ ಸೆಳೆಯಲು ಪ್ರಯತ್ನಿಸಿತು. ಈ ನಡುವೆ ಮಹಾತ್ಮ ಗಾಂಧೀಜಿಯವರು 1942 ರಲ್ಲಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯೊಂದಿಗೆ ಪ್ರತಿಭಟನೆಯನ್ನು ಆರಂಭಿಸಿದರು. 1945ರಲ್ಲಿ ಯುದ್ಧ ಮುಕ್ತಾಯವಾಯಿತು. 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಆಗಮಿಸಿ ಮಧ್ಯಂತರ ಸರ್ಕಾರವನ್ನು ರಚಿಸುವುದು ಮತ್ತು ದೇಶ ವಿಭಜನೆಯ ನಿರಾಕರಣೆಯ ಸಲಹೆಗಳನ್ನು ಪ್ರಸ್ತಾಪಿಸಿತು. ದೇಶ ವಿಭಜನೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಹೋಯಿತು. ಅಂತಿಮವಾಗಿ ಲಾರ್ಡ್ ಮೌಂಟ್ ಬ್ಯಾಟನ್ ರ ಯೋಜನೆಯಂತೆ ದೇಶವನ್ನು ವಿಭಜಿಸಲಾಯಿತು. ಮತ್ತು ಬ್ರಿಟಿಷ್ ಸರ್ಕಾರ ಸ್ವತಂತ್ರ ಕಾಯ್ದೆಯನ್ನು 1947ರಲ್ಲಿ ಅಂಗೀಕರಿಸಿತು. ಈ ಕಾಯ್ದೆಯ ಮುಖ್ಯ ಅಂಶಗಳೆಂದರೆ.

೧) 1947ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ನೀಡುವುದು ಮತ್ತು ಭಾರತವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ಡೊಮಿನಿಯನ್ ರಾಷ್ಟ್ರಗಳಾಗಿ ವಿಭಜಿಸುವುದು.

೨)  1947 ಆಗಸ್ಟ್ 15ಕ್ಕೆ ಭಾರತ ಮೇಲಿನ ಬ್ರಿಟಿಷ್ ಸಾರ್ವಭೌಮತ್ವ ಅಂತ್ಯಗೊಳ್ಳುವುದು ನಂತರ ಬ್ರಿಟಿಷ್ ಸರ್ಕಾರಕ್ಕೆ ಸ್ವತಂತ್ರ ರಾಷ್ಟ್ರಗಳ ಮೇಲೆ ಯಾವುದೇ ಆಡಳಿತಾತ್ಮಕವಾದ ಅಧಿಕಾರ ಇರುವುದಿಲ್ಲ.

೩)  ದೇಶಿಯ ಸಂಸ್ಥಾನಗಳು ಭಾರತಕ್ಕಾದರೂ ಸೇರಬಹುದು ಇಲ್ಲವೇ ಪಾಕಿಸ್ತಾನಕ್ಕಾದರೂ ಸೇರಬಹುದು.

೪)  ಪೂರ್ವ ಬಂಗಾಳ, ಪಶ್ಚಿಮ ಪಂಜಾಬ್, ಸಿಂಧ್ ಮತ್ತು ಬಲೂಚಿಸ್ಥಾನ್ ಪ್ರಾಂತ್ಯಗಳ ಹಾಗೂ ಅಸ್ಸಾಂನ ಸಿಲ್ಹೆಟ್ ಪ್ರಾಂತ್ಯಗಳು ಪಾಕಿಸ್ತಾನಕ್ಕೆ ಸೇರುವುದು. ಉಳಿದಂತೆ ಎಲ್ಲಾ ಪ್ರದೇಶಗಳು ಭಾರತದಲ್ಲಿಯೇ ಉಳಿಯುವುದು.

೫)  ಎರಡು ದೇಶಗಳ ನಡುವೆ ಉದ್ಭವವಾಗುವ ವಿವಾದಗಳನ್ನು ಬಗೆಹರಿಸಲು ಒಂದು ನ್ಯಾಯಮಂಡಳಿಯನ್ನು ರಚಿಸುವುದು.

೬)  ಭಾರತದ ಚಕ್ರವರ್ತಿ ಎಂಬ ಬ್ರಿಟನ್ ಚಕ್ರವರ್ತಿಯ ಬಿರುದು ರದ್ದುಪಡಿಸಲಾಯಿತು.

೭)  ಭಾರತದ ರಾಜ್ಯ ಕಾರ್ಯದರ್ಶಿಯ ಹುದ್ದೆ ಹಾಗೂ ಇಂಡಿಯನ್ ಆಫೀಸ್ ರದ್ದಾಯಿತು.

೮)  ಬ್ರಿಟನ್ ಚಕ್ರವರ್ತಿಯಿಂದ ಆದ ನೇಮಕಗಳು ಹಾಗೂ ರಾಜರೊಂದಿಗೆ ಮಾಡಿಕೊಂಡ ಬ್ರಿಟನ್ ಒಪ್ಪಂದಗಳು 1947 ಆಗಸ್ಟ್ 15ಕ್ಕೆ ಅಂತ್ಯಗೊಳ್ಳುವುದು.

ಉಪಸಂಹಾರ

ಬ್ರಿಟಿಷ್ ಆಡಳಿತದಲ್ಲಿ ಜಾರಿಗೊಂಡ ವಿವಿಧ ಕಾಯ್ದೆಗಳು ಭಾರತದ ಆಡಳಿತ ವ್ಯವಸ್ಥೆಯನ್ನು ಕ್ರಮೇಣ ರೂಪಿಸಿದವು. ಈ ಕಾಯ್ದೆಗಳು ಜನಪ್ರಾತಿನಿಧ್ಯ, ಅಧಿಕಾರ ವಿಕೇಂದ್ರೀಕರಣ ಮತ್ತು ಸಂಯುಕ್ತ ಪದ್ಧತಿಯ ಕಲ್ಪನೆಯನ್ನು ಪರಿಚಯಿಸಿದವು. Government of India Act 1935 ಭಾರತದ ಸಂವಿಧಾನಕ್ಕೆ ನೇರವಾದ ಆಧಾರವಾಗಿತ್ತು. ಈ ಇತಿಹಾಸವನ್ನು ಅರಿಯುವುದು ಭಾರತದ ಸಂವಿಧಾನಾತ್ಮಕ ಮೌಲ್ಯಗಳನ್ನು ತಿಳಿಯಲು ಅತ್ಯಂತ ಅಗತ್ಯವಾಗಿದೆ.

ಸಂವಿಧಾನದ ವಿಧಗಳು

ಸಂವಿಧಾನದ ವಿಧಗಳು

ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಸಾಂಸ್ಕೃತಿಕ, ಭೌಗೋಳಿಕ, ರಾಜಕೀಯ ಹಾಗೂ ಧಾರ್ಮಿಕ ನೆಲೆಯಲ್ಲಿ ಸಂವಿಧಾನವನ್ನು ರಚಿಸಿ ಅಳವಡಿಸಿಕೊಂಡಿವೆ. ಈ ಕಾರಣದಿಂದ ಪ್ರಪಂಚದಾದ್ಯಂತ ಏಕರೂಪದ ಸಂವಿಧಾನವನ್ನು ನಾವು ನೋಡಲು ಸಾಧ್ಯವಾಗುವುದಿಲ್ಲ. ಹೀಗೆ ವೈವಿಧ್ಯಮಯವಾದ ಸಂವಿಧಾನವನ್ನು ಆಧರಿಸಿ ರಾಜಕೀಯ ಚಿಂತಕರು ನಾಲ್ಕು ರೀತಿಯ ಸಂವಿಧಾನವನ್ನು ಗುರುತಿಸಿದ್ದಾರೆ ಅವುಗಳು ಈ ಕೆಳಕಂಡಂತಿವೆ.

A. ಲಿಖಿತ ಸಂವಿಧಾನ: ಸಂವಿಧಾನವು ಬರಹ ರೂಪದಲ್ಲಿರುವ ನಿಯಮಾವಳಿಗಳನ್ನು ಹೊಂದಿದ್ದರೆ ಅದನ್ನು ಲಿಖಿತ ಸಂವಿಧಾನ ಎಂದು ಕರೆಯುಲಾಗಿದೆ ಭಾರತವು ಲಿಖಿತ ಸಂವಿಧಾನವನ್ನು ಹೊಂದಿದ ಬೃಹತ್ ಪ್ರಜಾಪ್ರಭುತ್ವ ದೇಶವಾಗಿದೆ ಅಮೆರಿಕ ಸಂವಿಧಾನವು ಕೂಡ ಲಿಖಿತ ಸಂವಿಧಾನವನ್ನು ಹೊಂದಿದ್ದು ಇದನ್ನು ಫಿಲಿಡೆಲ್ವಿಯಾ ಸಭೆಯು ರಚಿಸಿದಂತೆ ಭಾರತದ ಸಂವಿಧಾನವನ್ನು ಸಂವಿಧಾನದ ರಚನಾ ಸಭೆಯಿಂದ ರಚಿಸಲಾಯಿತು. ಭಾರತದ ಸಂವಿಧಾನವನ್ನು ರಚಿಸಲು ಸರಿಸುಮಾರು ಮೂರು ವರ್ಷಗಳ ಕಾಲ ತೆಗೆದುಕೊಂಡು ಕೊನೆಗೆ ಭಾರತ ಸರ್ಕಾರದಿಂದ ಅಂಗೀಕಾರಗೊಂಡಿತು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಕರ್ತವ್ಯಗಳು, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ದತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ, ಸಾರ್ವತ್ರಿಕ ಚುನಾವಣೆಗಳು, ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳ ರಚನೆ ಹಾಗೂ ಅವುಗಳ ನಡುವಿನ ಸಂಬಂಧಗಳು ಮುಂತಾದ ವಿಷಯಗಳ ಬಗ್ಗೆ ಸಮಗ್ರವಾದ ವಿವರಣೆಗಳನ್ನು ಒಳಗೊಂಡಿದೆ 1949ರ ನವೆಂಬರ್ 26ರಂದು ಅಂಗೀಕರಿಸಲ್ಪಟ್ಟ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಅನೇಕ ಸಂವಿಧಾನ ತಿದ್ದುಪಡಿಗಳ ಪರಿಣಾಮವಾಗಿ ವಿಧಿಗಳ ಸಂಖ್ಯೆಯಲ್ಲಿ ಏರುಪೇರು ಕಂಡು ಬಂದಿದೆ.  ಕೆಲವು ವಿಧಿಗಳು ರದ್ದಾಗಿ ಮತ್ತೆ ಕೆಲವು ವಿಧಿಗಳು ಸಂವಿಧಾನಕ್ಕೆ ಸೇರ್ಪಡೆಗೊಂಡಿದ್ದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾಗಿಲ್ಲ ಭಾರತದ ಸಂವಿಧಾನವು ಲಿಖಿತ ಸಂವಿಧಾನವಾಗಿದ್ದರೂ ಅದು ಸಂಪ್ರದಾಯಗಳ ರೂಪದ ಕೆಲವು ಅಲಿಖಿತ ಅಂಶಗಳನ್ನು ಕೂಡ ಹೊಂದಿದೆ ಈ ಎಲ್ಲಾ ಅಂಶಗಳು ಸಹ ಸಂವಿಧಾನದ ಪ್ರಮುಖ ಭಾಗಗಳಾಗಿವೆ. ಅಲಿಖಿತ ಅಂಶಗಳು ಲಿಖಿತ ಅಂಶಗಳಿಗೆ ಪೂರಕವಾಗಿದ್ದು ಅವುಗಳ ಕೆಲವು ಉದಾಹರಣೆಗಳನ್ನು ಈ ಕೆಳಕಂಡಂತೆ ನೋಡಬಹುದು. 

1. ಪ್ರಧಾನಮಂತ್ರಿಯು ಬಹುಮತ ಪಡೆಯದಿದ್ದು ಒಂದು ವೇಳೆ ರಾಷ್ಟ್ರಪತಿಗಳೇನಾದರೂ ಅವರನ್ನು ಪ್ರಧಾನಮಂತ್ರಿಯಾಗಿ ನೇಮಕ ಮಾಡಿದರೆ ಅಂತಹ ಪ್ರಧಾನ ಮಂತ್ರಿಯು ಒಂದು ತಿಂಗಳಲ್ಲಿ ವಿಶ್ವಾಸ ಮತವನ್ನು ಗಳಿಸಬೇಕು.

2.  ಜೇಷ್ಠತೆಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ನೇಮಿಸಬೇಕು.

3.  ಸಾರ್ವಜನಿಕ ಲೆಕ್ಕ ಸಮಿತಿಯ ಅಧ್ಯಕ್ಷರು ಯಾವುದೇ ವಿರೋಧ ಪಕ್ಷದವರಾಗಿರಬಹುದು.

B. ಅಲಿಖಿತ ಸಂವಿಧಾನ: “ಸಂವಿಧಾನದ ಬಹುತೇಕ ನಿಯಮಾವಳಿಗಳು ಬರಹ ರೂಪದಲ್ಲಿರದೆ ರೂಡಿ ಮತ್ತು ಸಂಪ್ರದಾಯಗಳ ರೂಪದಲ್ಲಿ ಇದ್ದರೆ ಅದನ್ನು ಅಲಿಖಿತ ಸಂವಿಧಾನ ಎಂದು ಕರೆಯಲಾಗುತ್ತದೆ.” ಅಲಿಖಿತ ಸಂವಿಧಾನವಿರುವಲ್ಲಿ ಸರ್ಕಾರದ ಅಧಿಕಾರ ಹಂಚಿಕೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ನಿಯಮಾವಳಿಗಳು ಬರಹ ರೂಪದಲ್ಲಿರದೆ ಅಲಿಖಿತ ರೂಪದಲ್ಲಿರುತ್ತವೆ.

ಅಲಿಖಿತ ಸಂವಿಧಾನದ ಬಹುತೇಕ ತತ್ವಗಳು ಕಾಲಾನುಕ್ರಮದಲ್ಲಿನ ಅನುಭವಗಳಿಂದ ಅಸ್ತಿತ್ವದಲ್ಲಿ ಇರುತ್ತವೆ. ಮುಂದುವರೆದು ಸಂವಿಧಾನ ರಚನಾ ಸಭೆಯಿಂದ ಉದ್ದೇಶಪೂರ್ವಕವಾಗಿ ರಚನೆಗೊಂಡ ಕೃತಕ ನಿಯಮಗಳನ್ನು ಅಲಿಖಿತ ಸಂವಿಧಾನವು ಒಳಗೊಂಡಿರುವುದಿಲ್ಲ. ಅಧಿಕ ಅಲಿಖಿತ ನಿಯಮಗಳನ್ನು ಹೊಂದಿರುವ ಬ್ರಿಟಿಷ್ ಸಂವಿಧಾನವನ್ನು ಅಲಿಖಿತ ಸಂವಿಧಾನವೆಂದು ಪರಿಗಣಿಸಲಾಗಿದೆ.

C. ಭಾಗಶಃ ನಮ್ಯ ಹಾಗೂ ಭಾಗಶಃ ಅನಮ್ಯ:

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಅಥವಾ ಸುಲಭ ಸಂವಿಧಾನವೆಂದು ಮತ್ತು ಯಾವ ಸಂವಿಧಾನವನ್ನು ತಿದ್ದುಪಡಿ ಮಾಡಲು ವಿಶೇಷ ವಿಧಾನವನ್ನು ಅನುಸರಿಸಬೇಕು ಅದನ್ನು ಅನಮ್ಯ ಅಥವಾ ಕಠಿಣ ಸಂವಿಧಾನವೆಂದು ಕರೆಯಲಾಗಿದೆ. ಭಾರತದ ಸಂವಿಧಾನವು ಬ್ರಿಟಿಷ್ ಸಂವಿಧಾನದಂತೆ ನಮ್ಮಯವೂ ಅಲ್ಲ ಅಥವಾ ಅಮೆರಿಕಾದ ಸಂವಿಧಾನದಂತೆ ಅನಮ್ಯವೂ ಅಲ್ಲ. ಹೆಚ್ಚು ಕಠಿಣ ಮಾರ್ಗವನ್ನು ಅನುಸರಿಸಿ ಭಾರತದ ಸಂವಿಧಾನವನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ. 

ಸಂವಿಧಾನದಂತೆ ಸಂಸತ್ತು ಪರಮೋಚ್ಚ ಅಧಿಕಾರವನ್ನು ಹೊಂದಿದ್ದು ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಪಡೆದಿದೆ. ಪರಿಣಾಮವಾಗಿ ಬ್ರಿಟಿಷ್ ಸಂಸತ್ತು ಸಾಮಾನ್ಯ ಕಾನೂನನ್ನು ಬದಲಾಯಿಸುವಂತೆ ಸಂವಿಧಾನದ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಅನುಮತಿಯನ್ನು ಪಡೆದಿದೆ.  ಈ ಕಾರಣದಿಂದ ಬ್ರಿಟಿಷ್‌ ಸಂವಿಧಾನವನ್ನು ನಮ್ಯ ಸಂವಿಧಾನ ಎಂದು ಕರೆಯಲಾಗಿದೆ ಈ ರೀತಿಯ ತಿದ್ದುಪಡಿಯಿಂದಾಗಿ ಆಗಾಗ ಆಗುತ್ತಿರುವ ಬದಲಾವಣೆಗಳನ್ನು ತ್ವರಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಅನಮ್ಯ ಸಂವಿಧಾನ ಹೊಂದಿದ ದೇಶಗಳಲ್ಲಿ ತ್ವರಿತ ಬದಲಾವಣೆಗೆ ಹಿನ್ನಡೆ ಉಂಟಾಗುತ್ತದೆ. ಉದಾಹರಣೆ ಅಮೇರಿಕಾದ ಸಂವಿಧಾನವು ಜಗತ್ತಿನ ಅತಿ ಕಠಿಣವಾದ ಸಂವಿಧಾನವೆನಿಸಿದ್ದು ಜಾರಿಗೊಂಡು ಎರಡು ಶತಮಾನಗಳು ಕಳೆದರೂ ಈವರೆಗೆ ಕೇವಲ 27 ತಿದ್ದುಪಡಿಗಳನ್ನು ಮಾತ್ರ ಮಾಡಲಾಗಿದೆ.

ಉಪಸಂಹಾರ

ಸಂವಿಧಾನವು ದೇಶದ ಆಡಳಿತ, ಹಕ್ಕುಗಳು ಮತ್ತು ಕರ್ತವ್ಯಗಳಿಗೆ ದಿಕ್ಕು ನೀಡುವ ಪ್ರಮುಖ ದಾಖಲೆ ಆಗಿದೆ. ಲಿಖಿತ ಹಾಗೂ ಅಲಿಖಿತ ಸಂವಿಧಾನಗಳು ತಮ್ಮದೇ ಆದ ಲಾಭ–ಮಿತಿಗಳನ್ನು ಹೊಂದಿವೆ. ನಮ್ಯ ಮತ್ತು ಅನಮ್ಯ ಸಂವಿಧಾನಗಳ ಸಂಯೋಜನೆಯೇ ಸ್ಥಿರ ಹಾಗೂ ಚುರುಕಾದ ಆಡಳಿತಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಭಾರತ ಸಂವಿಧಾನವು ಜಗತ್ತಿನ ಅತ್ಯಂತ ಸಮಗ್ರ ಮತ್ತು ಸಮತೋಲನದ ಸಂವಿಧಾನಗಳಲ್ಲಿ ಒಂದಾಗಿದೆ.

ಸಂವಿಧಾನದ ಅರ್ಥ ಮತ್ತು ಮಹತ್ವ

ಸಂವಿಧಾನದ ಅರ್ಥ ಮತ್ತು ಮಹತ್ವ

ಮನುಷ್ಯನ ದೇಹಕ್ಕೆ ಶಿರ ಹೇಗೆ ಮುಖ್ಯವಾಗಿದೆಯೋ ಹಾಗೆ ರಾಜ್ಯಕ್ಕೆ ಸಂವಿಧಾನ ಅಷ್ಟೇ ಮುಖ್ಯವಾದದ್ದು ಮನುಷ್ಯ ಎಷ್ಟೇ ಶಕ್ತಿಶಾಲಿ ಸಮರ್ಥ ಹಾಗೂ ಬುದ್ಧಿವಂತನಾದರೂ ಅವನ ಚಟುವಟಿಕೆಗಳನ್ನು ನಿಯಂತ್ರಿಸಿ ನಿರ್ದೇಶಿಸಿ ಹಾಗೂ ಹೊಂದಿಸುವ ಬುದ್ದಿ ಇಲ್ಲದಿದ್ದರೆ ಅವನಿಂದ ಯಾವ ಲಾಭವೂ ಇಲ್ಲ ಹಾಗೆಯೇ ಒಂದು ರಾಜ್ಯವು ಎಷ್ಟೇ ಪ್ರಭಾವಶಾಲಿಯಾದರೂ ತನ್ನದೇ ಆದ ನಿರ್ದಿಷ್ಟ ಗುರಿ ಅಥವಾ ಉದ್ದೇಶ ಇಲ್ಲದೆ ಹೋದರೆ ಅದರಿಂದ ಯಾವ ಪ್ರಯೋಜನವು ಇಲ್ಲ ಆಗ ಸಂವಿಧಾನವು ರಾಜ್ಯ ಹಾಗೂ ವ್ಯಕ್ತಿಯ ಗುರಿ ಅಥವಾ ಉದ್ದೇಶಗಳನ್ನು ತಿಳಿಸಿ ತನಗಿರುವ ಅಲ್ಪಸಂಪನ್ಮೂಲಗಳನ್ನು ಬಳಸಿಕೊಂಡು ಹೇಗೆ ಗುರಿ ತಲುಪಬೇಕು ಎಂಬ ತತ್ವಗಳನ್ನು ತಿಳಿ ಹೇಳುವ ಕಾರ್ಯವನ್ನು ಮಾಡುತ್ತದೆ ಈ ಕೆಳಗಿನ ಅಂಶಗಳು  ಸಂವಿಧಾನದ ಪ್ರಾಮುಖ್ಯತೆಯನ್ನು ಸಂಕ್ಷಿಪ್ತವಾಗಿ ಮನವರಿಕೆ ಮಾಡುತ್ತದೆ.

ಜನರ ಹಕ್ಕುಗಳ ರಕ್ಷಣೆ: ಪ್ರಪಂಚದ ಪ್ರತಿಯೊಂದು ದೇಶಗಳ ಸಂವಿಧಾನಗಳು ತನ್ನ ದೇಶದ ಪ್ರಜೆಗಳ ಜೀವನಕ್ಕೆ ಬೇಕಾಗುವ ವಯಕ್ತಿಕ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಒದಗಿಸಿಕೊಡುತ್ತವೆ. ಯಾವುದೇ ಜಾತಿ, ಜನಾಂಗ, ಲಿಂಗ, ಧರ್ಮ, ಭಾಷೆ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ತೋರದೆ ಪ್ರತಿಯೊಬ್ಬ ಪ್ರಜೆಗಳಿಗೆ ಸರಿ ಸಮಾನವಾದ ನ್ಯಾಯವನ್ನು ಒದಗಿಸಿಕೊಡುವ ಕಾರ್ಯವನ್ನು ಮಾಡುತ್ತದೆ. ಸರ್ಕಾರವಾಗಲಿ ಅಥವಾ ಬೇರೆ ಯಾವುದೇ ವ್ಯಕ್ತಿಯಾಗಲಿ ಪ್ರಜೆಗಳ ಹಕ್ಕುಗಳಿಗೆ ಧಕ್ಕೆಯಾಗುವಂತೆ ನಡೆದುಕೊಂಡರೆ ಸಂವಿಧಾನವು ಸೂಕ್ತ ರಕ್ಷಣೆಯನ್ನು ಒದಗಿಸುತ್ತದೆ. ಪ್ರಜೆಗಳ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ರಾಜ್ಯವಾಗಲಿ ಅಥವಾ ವ್ಯಕ್ತಿಯಾಗಲಿ ಕಸಿದುಕೊಳ್ಳಲು ಪ್ರಯತ್ನಿಸಿದರೆ ನ್ಯಾಯಾಂಗದ ಮೂಲಕ ಅವುಗಳನ್ನು ರಕ್ಷಿಸಲು ಸಂವಿಧಾನಗಳು ಸಾಮಾನ್ಯವಾಗಿ ಅವಕಾಶ ಕಲ್ಪಿಸುತ್ತವೆ. ಉದಾಹರಣೆ ಭಾರತವು ಜಾತ್ಯತೀತ ದೇಶವಾಗಿದ್ದು ತನ್ನ ಎಲ್ಲಾ ಪ್ರಜೆಗಳಿಗೆ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ, ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಭಾರತ ಸಂವಿಧಾನದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಕಾನೂನಿನ ಸ್ಥಿರತೆ ಮತ್ತು ಸುರಕ್ಷತೆ: ದೇಶದ ಕಾನೂನನ್ನು ಯಾರು ಹೇಗೆ ಮತ್ತು ಯಾವಾಗ ರಚಿಸಬೇಕೆಂಬ ನಿರ್ಧಾರವನ್ನು ತೆಗೆದುಕೊಳ್ಳುವ ಹೊಣೆಗಾರಿಕೆ ಸಂವಿಧಾನಕ್ಕೆ ಇದೆ. ಒಂದು ದೇಶದ ಸರ್ಕಾರ, ಸಂಸ್ಥೆಗಳು ಹಾಗೂ ಪ್ರಜೆಗಳು ಯಾವ ರೀತಿಯ ಕಾನೂನನ್ನು ಅನುಸರಿಸಬೇಕು ಎಂಬ ಸ್ಪಷ್ಟ ನಿಯಮವನ್ನು ಒದಗಿಸುವ ಕಾರ್ಯವನ್ನು ಸಂವಿಧಾನ ಮಾಡುತ್ತದೆ. ಹಾಗೆಯೇ ಮುಂದುವರೆದು ಕಾನೂನುಗಳನ್ನು ಅರ್ಥೈಸಿಕೊಂಡು ಬಂದೋದಾಗಬಹುದಾದ ವಿವಾದಗಳನ್ನು ಹೇಗೆ ಪರಿಹರಿಸಿಕೊಳ್ಳಬೇಕೆಂಬ  ಮಾಹಿತಿಯನ್ನು ದೇಶದ ನ್ಯಾಯಾಂಗಕ್ಕೆ ಅಗತ್ಯ ಮಾರ್ಗದರ್ಶನ ಮಾಡುವ ಕಾರ್ಯದ ಜವಾಬ್ದಾರಿಯು ಸಂವಿಧಾನದ ಮೇಲಿದೆ. ಸಂದರ್ಭ ಬಂದಾಗ ಕಾನೂನುಗಳ ತಿದ್ದುಪಡಿಗೆ ಸಂವಿಧಾನವೇ ಅವಕಾಶ ಕಲ್ಪಿಸುತ್ತದೆ. ಹೀಗೆ ದೇಶವೊಂದರ ನಿರ್ದಿಷ್ಟ ಹಾಗೂ ಸುವ್ಯವಸ್ಥಿತವಾದ ಕಾನೂನನ್ನು ಹೊಂದುವಲ್ಲಿ ಸಂವಿಧಾನವು ನೆರವಾಗುವ ಮೂಲಕ ತನ್ನ ಪ್ರಾಮುಖ್ಯತೆಯನ್ನು ತೋರ್ಪಡಿ.

ಪ್ರಜಾಪ್ರಭುತ್ವದ ಆಳ್ವಿಕೆಗೆ ಸಹಕಾರಿ: ಒಂದು ದೇಶದ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುನ್ನುಗ್ಗುವಂತಾಗಲು ಅದಕ್ಕೆ ಲಿಖಿತ ಸಂವಿಧಾನದ ಅವಶ್ಯಕತೆ ಇದೆ. ಸಂವಿಧಾನವು ದೇಶದ ಚುನಾವಣಾ ಪ್ರಕ್ರಿಯೆಗಳು ಪ್ರತಿನಿಧಿ ಸರ್ಕಾರದ ರಚನೆ, ಸರ್ಕಾರದ ಕಾರ್ಯಗಳು, ಪ್ರಜಾಪ್ರತಿನಿಧಿಗಳ ಆಯ್ಕೆಯಾದ ಪ್ರತಿನಿಧಿಗಳು, ಪ್ರಜೆಗಳ ವಿರುದ್ಧವಾಗಿ ನಡೆದುಕೊಳ್ಳದೆ ಜನರಿಗೆ ಜವಾಬ್ದಾರರಾಗಿ ನಡೆದುಕೊಳ್ಳುವುದು ಮುಂತಾದ ಮಹತ್ವದ ಸಂಗತಿಗಳನ್ನು ಸಂವಿಧಾನವು ಒಳಗೊಂಡಿರುತ್ತದೆ.  ಸರ್ಕಾರಗಳು ಜನರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಳ್ಳದೆ ಅಧಿಕಾರವನ್ನು ಚಲಾಯಿಸುವುದನ್ನು ಖಾತ್ರಿಪಡಿಸಿಕೊಂಡು ಸಂವಿಧಾನವು ಪ್ರಜೆಗಳು ಸರ್ಕಾರದಲ್ಲಿ ಸಕ್ರೀಯವಾಗಿ ಭಾಗವಹಿಸುವಂತೆ ಪ್ರಚೋದಿಸುವ ಕಾರ್ಯವನ್ನು ಮಾಡುತ್ತದೆ. ಉದಾಹರಣೆ ಚುನಾವಣೆಯಲ್ಲಿ ಮತ ಚಲಾಯಿಸುವ ಸೂಕ್ತವಾದ ಅಭ್ಯರ್ಥಿಗಳನ್ನು ಆಯ್ಕೆಮಾಡುವ, ಸರ್ಕಾರಿ ಉದ್ಯೋಗ ಪಡೆಯುವ, ಸರ್ಕಾರವನ್ನು ಟೀಕಿಸುವ ಮತ್ತು ಸರ್ಕಾರದ ಆಡಳಿತದಲ್ಲಿ ಪಾಲ್ಗೊಳ್ಳುವ ಗುರುತರ ಜವಾಬ್ದಾರಿಯನ್ನು ಪ್ರಜೆಗಳು ನಿರ್ವಹಿಸುವಂತೆ ಸಂವಿಧಾನವು ಪ್ರೋತ್ಸಾಹಿಸುತ್ತದೆ.

ಹೊಣೆಗಾರಿಕೆಗಳ ಬಲವರ್ಧನೆಯ ಸಾಧನ: ಪ್ರಪಂಚದ ಯಾವುದೇ ದೇಶವೊಂದರ ಸಂವಿಧಾನವು ಅಲ್ಲಿನ ಪ್ರಜೆಗಳ ಹೊಣೆಗಾರಿಕೆಯನ್ನು ತಿಳಿಯಪಡಿಸುತ್ತದೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಸಂವಿಧಾನವು ಮನವರಿಕೆ ಮಾಡಿಕೊಡುತ್ತದೆ. ಒಂದು ವೇಳೆ ಸರ್ಕಾರ ಏನಾದರೂ ಜನ ವಿರೋಧಿ ಕ್ರಮಗಳನ್ನು ಕೈಗೊಂಡರೆ ಮತ್ತು ಸಂವಿಧಾನಿಕ ಸತತ್ವಗಳನ್ನು ಉಲ್ಲಂಘಿಸಿದರೆ, ಅದನ್ನು ಪ್ರಶ್ನಿಸುವ ಕಾರ್ಯಗಳನ್ನು ಮಾಡುವಲ್ಲಿ ಪ್ರಜೆಗಳಿಗೆ ಸಂವಿಧಾನವು ಸಹಾಯ ಮಾಡುತ್ತದೆ. ಹೀಗೆ ಆಳುವ ವರ್ಗ ಮತ್ತು ಆಳಿಸಿಕೊಳ್ಳುವ ವರ್ಗಗಳ ನಡುವೆ ಸಾಮರಸ್ಯವನ್ನು ಉಂಟು ಮಾಡಿ ಅವರವರ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವಂತೆ ಸಂವಿಧಾನವು ಮಾರ್ಗದರ್ಶನ ನೀಡುತ್ತದೆ.

ರಾಷ್ಟ್ರೀಯ ಏಕತೆಗೆ ನೆರವು:  ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಮೆರೆದ ದೇಶ. ಇಲ್ಲಿ ವಿವಿಧ ಜಾತಿ, ಜನಾಂಗ, ಧರ್ಮ, ಲಿಂಗ, ಭಾಷೆ ಹಾಗೂ ಸ್ಥಾನಮಾನಗಳನ್ನು ಹೊಂದಿದ ಜನಾಂಗವಿದೆ. ಇಂತಹ ವೈವಿಧ್ಯಮಯವಾದ ಜನರ ಮೌಲ್ಯಗಳು ಹಾಗೂ ಆಕಾಂಕ್ಷೆಗಳನ್ನು ಅರಿತುಕೊಂಡು ಸಂವಿಧಾನ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ಗಳಿಸಿಕೊಳ್ಳಲು ನೆರವಾಗುತ್ತದೆ. ಇದರಿಂದ ಸಾರ್ವಜನಿಕ ಆಡಳಿತ ಮತ್ತು ಜೀವನಕ್ಕೆ ಏಕರೂಪದ ಅಡಿಪಾಯ ಒದಗಿಸುತ್ತದೆ. ಸಂವಿಧಾನವು ಪ್ರಜೆಗಳಿಗೆ ಏಕರೂಪದ ಕಾನೂನು ಹಾಗೂ ಸಮಾನುಪಾತಗಳನ್ನು ಒದಗಿಸುವುದರಿಂದ ಅವರಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಮೊಳಕೆಯೊಡೆಯುತ್ತದೆ. ಸರ್ವಜನೇ ಸುಖಿನೋ ಭವಂತು ಎಂಬುದು ಸಂವಿಧಾನದ ಧ್ಯೇಯ ವಾಕ್ಯವಾಗಿದೆ. ವಸುದೈವಕಂ ಕುಟುಂಬಕಂ ಎಂಬ ತತ್ವವನ್ನು ಪ್ರಜೆಗಳು ಅರಿತು ನಡೆದರೆ ಅದಕ್ಕಿಂತ ಸಂತೋಷ ಇನ್ನೆಲ್ಲಿದೆ ಇವೆಲ್ಲವುಗಳಿಗೆ ತಳಪಾಯವನ್ನು ಹಾಕುವ ಕಾರ್ಯವನ್ನು ಸಂವಿಧಾನ ಮಾಡುತ್ತದೆ.

ವಿವಾದಗಳಿಂದ ದೂರವಿದ್ದು ಶಾಂತಿಯುತ ಪರಿಹಾರಕ್ಕೆ ಆಸ್ಪದ: ಸರ್ಕಾರ ಹಾಗೂ ಪ್ರಜೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ದೇಶದ ಶ್ರೇಯೋಭಿವೃದ್ಧಿಯಲ್ಲಿ ಪ್ರಜೆಗಳ ಮತ್ತು ಸರ್ಕಾರದ ನಡುವಿನ ಸಹಕಾರದ ಪಾತ್ರ ದೊಡ್ಡದಾಗಿದೆ. ಪರಸ್ಪರರಲ್ಲಿ ವಿಶ್ವಾಸವಿರಬೇಕು. ಪ್ರಜೆಗಳ ಸರ್ವಾಂಗಿಣ ಅಭಿವೃದ್ಧಿಗಾಗಿ ಸಂವಿಧಾನವು ಹಲವು ಮೂಲಭೂತ ಹಕ್ಕುಗಳನ್ನು ನೀಡಿದೆ. ಪರಿಸ್ಪರ ವಿವಾದಗಳಿಂದ ದೂರವಿದ್ದು ಶಾಂತಿಯುತ ಬಾಳ್ವೆ ಮಾಡಬೇಕಾದದ್ದು ಪ್ರಜೆಗಳ ಮತ್ತು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಸರ್ಕಾರ ಕೂಡ ನಾನು ಯಾವಾಗಲೂ ಸರಿ ಎಂಬ ಧೋರಣೆಯಿಂದ ವರ್ತಿಸಬಾರದು. ಹಾಗೇನಾದರೂ ಸರ್ಕಾರ ವರ್ತಿಸಿದ ಸಂವಿಧಾನ ಅದಕ್ಕೆ ನಿರ್ಬಂಧವನ್ನು ಹಾಕುತ್ತದೆ. ಸರ್ಕಾರ ಮತ್ತು ಪ್ರಜೆಗಳ ನಡುವಿನ ಘರ್ಷಣೆಯನ್ನು ತಪ್ಪಿಸುವ ಜವಾಬ್ದಾರಿ ಸಂವಿಧಾನದ ಮೇಲಿದೆ.

ಉಪಸಂಹಾರ

ಸಂವಿಧಾನವು ಕೇವಲ ಕಾನೂನುಗಳ ಸಂಕಲನವಲ್ಲ, ಅದು ಒಂದು ದೇಶದ ಆತ್ಮವಾಗಿದೆ. ರಾಜ್ಯ ಮತ್ತು ಪ್ರಜೆಗಳ ನಡುವಿನ ಸಂಬಂಧವನ್ನು ನಿಯಂತ್ರಿಸುವ ಶಕ್ತಿಶಾಲಿ ಮಾರ್ಗದರ್ಶಿಯಾಗಿದೆ. ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಸ್ಥಾಪಿಸುವುದೇ ಇದರ ಮೂಲ ಉದ್ದೇಶ.

ಪರಿಸರ ಸಂವಹನ ಹಾಗೂ ಸಾರ್ವಜನಿಕ ಜಾಗೃತಿ

ಪರಿಸರ ಸಂವಹನ ಹಾಗೂ ಸಾರ್ವಜನಿಕ ಜಾಗೃತಿ

ಪರಿಸರ ಸಂವಹನವು ವ್ಯಕ್ತಿಗಳು, ಸಂಘ, ಸಂಸ್ಥೆಗಳು, ಸಮಾಜಗಳು, ಸಂಸ್ಕೃತಿಗಳು, ಶಾಲಾ-ಕಾಲೇಜುಗಳು, ಸಮೂಹ ಮಾಧ್ಯಮಗಳು, ವೃತ್ತ ಪತ್ರಿಕೆಗಳು, ಸಿನಿಮಾಗಳು, ವಯಸ್ಕ ಶಿಕ್ಷಣ ಹಾಗೂ ಪರಿಸರ ಕ್ಲಬ್ ಗಳನ್ನು ಒಳಗೊಂಡಿದೆ. ಸಂವಹನ ಮತ್ತು ಪರಿಸರ ಪರಸ್ಪರ ಅಂತರ ಸಂಬಂಧವನ್ನು ಹೊಂದಿವೆ. ಸಂವಹನವು ಸಮುದಾಯಗಳು ಪರಸ್ಪರ ಭಾಗವಹಿಸುವಿಕೆಯನ್ನು ಅವಲಂಬಿಸಿರುತ್ತದೆ.

 ಶಿಕ್ಷಣ ಕ್ಷೇತ್ರವು ಸಂವಹನದ ಮಾಧ್ಯಮವಾಗಿ ಇಂದು ಬಹಳ ಪ್ರಚಲಿತವಾಗಿದೆ. ಇದೊಂದು ಅಗತ್ಯ ವಿಷಯವಾಗಿದ್ದು ಪರಿಸರ ಅಧ್ಯಯನಗಳು, ಪರಿಸರ ವಿಜ್ಞಾನ, ಅಪಾಯ ಹಾಗೂ ವಿಪತ್ತಿನ ವಿಶ್ಲೇಷಣೆ ಹಾಗೂ ನಿರ್ವಹಣೆಯನ್ನು ಮಾಡುತ್ತದೆ. ಸಂವಹನದ ಮೂಲಕ ಶಿಕ್ಷಣ ಕ್ಷೇತ್ರವು ಪರಿಸರದ ಮೇಲೆ ಎಲ್ಲಾ ಕ್ಷೇತ್ರಗಳನ್ನು ಅಧ್ಯಯನ ಮಾಡಿ ಪರಿಸರ ಸಂರಕ್ಷಣೆ ಬೆಳವಣಿಗೆಗೆ ಕಾರಣವಾಗುತ್ತದೆ. ಸಾಮಾಜಿಕ ಪರಿಸರ ಶಾಸ್ತ್ರ, ಪರಿಸರ ವಿಜ್ಞಾನ, ಆರ್ಥಿಕ ಪರಿಸರ ಅಧ್ಯಯನ ಮುಂತಾದ ಶಿಕ್ಷಣ ಕ್ಷೇತ್ರಗಳ ಕಾರ್ಯಗಳಿಂದ ಪರಿಸರ ಸಂವಹನ ಹೊರಹೊಮ್ಮಿದೆ. ಹವಾಮಾನ ಬದಲಾವಣೆಯಂತಹ ಸಮಸ್ಯೆಗಳನ್ನು ಸಾರ್ವಜನಿಕರಿಗೆ ಶೈಕ್ಷಣಿಕ ಕ್ಷೇತ್ರದ ಮೂಲಕ ತಲುಪಿಸುವ ಗುರಿಯನ್ನು ಸಂವಹನ ಹೊಂದಿದೆ.

ಸಾರ್ವಜನಿಕ ಜಾಗೃತಿ:

ಪರಿಸರ ಅಮೂಲ್ಯವಾದ ವಸ್ತು. ಅದನ್ನು ಹಾಳು ಮಾಡಬಾರದು. ಹಾಳು ಮಾಡಿದರೆ ಮಾನವನಿಗೆ ಕುತ್ತು ಬರುತ್ತದೆ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಆದರೂ ಪ್ರಸ್ತುತ ಸಮಾಜಿಕ ಜೀವಿ ಎನಿಸಿಕೊಂಡ ಮಾನವ ದಿನೇ ದಿನೇ ತನ್ನ ಅವಿವೇಕತನದಿಂದ ಪರಿಸರವನ್ನು ಮಲಿನಗೊಳಿಸುತ್ತಿದ್ದಾನೆ. ಆ ಮೂಲಕ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದ್ದಾನೆ. ಆದುದರಿಂದ ಇಂದು ಪರಿಸರ ರಕ್ಷಣೆಗಾಗಿ ಜನಜಾಗೃತಿಯನ್ನು ಉಂಟುಮಾಡಬೇಕಾದದ್ದು ಅಗತ್ಯವಾಗಿದೆ.

  1. ಪರಿಸರದ ಕಾಳಜಿಗಾಗಿ ಮನೆಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು ಹಾಗೂ ಕಾರ್ಖಾನೆಗಳ ಸುತ್ತ ಗಿಡ ಮರಗಳನ್ನು ನೆಡುವಂತೆ ಜಾಗೃತಿ ಮೂಡಿಸುವುದು.
  2. ಶಾಲಾ-ಕಾಲೇಜು, ಗ್ರಾಮ, ನಗರ, ಮಹಾನಗರ ಪಾಲಿಕೆಗಳಂತಹ ಪ್ರದೇಶಗಳಲ್ಲಿ ಪರಿಸರ ಪ್ರಜ್ಞೆಯನ್ನು ಬೆಳೆಸಲು ಅನುವು ಮಾಡಿಕೊಡುವಂತಹ ಪರಿಸರ ಶಿಬಿರ ಕಾರ್ಯಕ್ರಮ ಮೊದಲಾದವುಗಳನ್ನು ಏರ್ಪಡಿಸಬೇಕು.
  3. ಪರಿಸರ ತಜ್ಞರಿಂದ ಪರಿಸರ ಮಾಲಿನ್ಯಕ್ಕೆ ಕಾರಣ ಮತ್ತು ಅದರ ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  4. ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ಬದಿಯಲ್ಲಿ ಗಿಡಮರಗಳನ್ನು ನೆಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು.
  5. ಪರಿಸರ ಸಂರಕ್ಷಣೆಯ ಕುರಿತು ಹಾಡುಗಳನ್ನು ರಚಿಸಿ ಹಾಡುವ ಮೂಲಕ ಜನಜಾಗೃತಿಯನ್ನು ಉಂಟುಮಾಡುವುದು.
  6. ಕಾಡಿದ್ದರೆ ನಾವು ನಾವಿದ್ದರೆ ನಾಡು ಎಂಬ ತತ್ವವನ್ನು ಎಲ್ಲೆಡೆ ಪ್ರಚಾರ ಮಾಡಬೇಕು.
  7. ವಿಷಯುಕ್ತ ರಸಾಯನಿಕಗಳನ್ನು ಹೆಚ್ಚು ಬಳಸದಂತೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮತ್ತು ಮಾಲೀಕರಿಗೆ ಮನವರಿಕೆ ಮಾಡಬೇಕು.
  8. ಮನೆಯ ಸುತ್ತಮುತ್ತ ಗಿಡಗಳನ್ನು ನೆಡುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮನವೊಲಿಸಬೇಕು.
  9. ವ್ಯರ್ಥ ಪದಾರ್ಥಗಳನ್ನು ಬೀದಿಗೆ ಎಸೆಯದಂತೆ ನೋಡಿಕೊಳ್ಳಬೇಕು.
  10. ಕೆರೆಗಳಲ್ಲಿ ಹೂಳು ತುಂಬದಂತೆ ಹಾಗೂ ಮಣ್ಣು ಸವಕಳಿಯನ್ನು  ತಡೆಗಟ್ಟುವಂತೆ ಜನರಿಗೆ ಹೇಳಿಕೊಡಬೇಕು. 
  11. ಗ್ರಾಮೀಣ ಬಯಲು ಶೌಚಾಲಯಗಳನ್ನು ನಿರ್ಬಂಧಿಸಬೇಕು ಹಾಗೂ ನೂತನ ಶೌಚಾಲಯಗಳನ್ನು ನಿರ್ಮಿಸಿ ಕೊಡಬೇಕು.
  12. ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಬದಲಾಗಿ ವಿದ್ಯುತ್ ಚಾಲಿತ ವಾಹನಗಳನ್ನು ಹೆಚ್ಚು ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಬೇಕು.
  13. ಮಕ್ಕಳಿಗೆ ಶರೀರ ನೈರ್ಮಲ್ಯದ ಜೊತೆಗೆ ಪರಿಸರ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸುವಂತೆ ಕಲಿಸಿಕೊಡಬೇಕು.
  14. ಸಸ್ಯ, ಪ್ರಾಣಿ ಹಾಗೂ ಪಕ್ಷಿಗಳನ್ನು ಪ್ರೀತಿಸುವುದನ್ನು ಕಲಿಸಿಕೊಡುವುದು ಬಹಳ ಅಗತ್ಯವಾಗಿದೆ.
  15. ಮಕ್ಕಳನ್ನು ವನ್ಯಜೀವಿಧಾಮಗಳು ಹಾಗೂ ಪಕ್ಷಿಧಾಮಗಳಿಗೆ ಕರೆದುಕೊಂಡು ಹೋಗಿ ಜೀವ ವೈವಿಧ್ಯತೆಯ ಮಹತ್ವದ ಕುರಿತು ಮಾರ್ಗದರ್ಶನ ನೀಡಬೇಕು.

ಸಮೂಹ ಮಾಧ್ಯಮದ ಮೂಲಕ ಜಾಗೃತಿ:

ಪರಿಸರ ಸಂರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಮೂಹ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತವೆ. ಉದಾ:  ಮಾತುಕತೆ, ಸಂದರ್ಶನ, ನಾಟಕಗಳು ಹಾಗೂ ಸಾಕ್ಷ ಚಿತ್ರಗಳನ್ನು ತೋರಿಸುವ ಮೂಲಕ ಜನಜಾಗೃತಿಯನ್ನು ಉಂಟುಮಾಡುತ್ತವೆ. ಮಾಲಿನ್ಯವನ್ನು ನಿಯಂತ್ರಿಸುವ ಹಾಗೂ ಪರಿಸರದ ಗುಣಮಟ್ಟವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಗಮನವನ್ನು ಸೆಳೆಯುವ ಕೆಲಸವನ್ನು ಮಾಡಲು ಮಾಧ್ಯಮಗಳು ಸಜ್ಜುಗೊಂಡಿವೆ. ಪರಿಸರ ಹಾನಿಯನ್ನು ಹೇಗೆ ಮಾಡಲಾಗುತ್ತದೆ, ಅದರಿಂದ ಮಾನವನ ಆರೋಗ್ಯ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಜೀವನದ ಮೇಲೆ ಯಾವ ಯಾವ ಪರಿಣಾಮಗಳು ಕಂಡುಬರುತ್ತದೆ, ಎಂಬುದರ ಕುರಿತು ಸಮೂಹ ಮಾಧ್ಯಮಗಳು ಸಾಕ್ಷಿ ಸಮೇತ ಮಾಹಿತಿಯನ್ನು ಬಿತ್ತರಿಸುವ ಕಾರಣದಿಂದ ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಸಮೂಹ ಮಾಧ್ಯಮದ ಪಾತ್ರ ದೊಡ್ಡದಾಗಿದೆ ಎಂದು ತೋರಿಸಿ ಕೊಡುತ್ತವೆ. 

ವಯಸ್ಕ ಶಿಕ್ಷಣದ ಮೂಲಕ ಜಾಗೃತಿ:

ಗ್ರಾಮೀಣ ಜನರು ಅನಕ್ಷರಸ್ಥರು ಮತ್ತು ಹಗಲಿರುಳು ದುಡಿಮೆಯಲ್ಲಿ ತೊಡಗಿದವರು ಆಗಿರುತ್ತಾರೆ. ಅವರಿಗೆ ಕಲಿಕೆಗೆ ಸಮಯವಿರುವುದಿಲ್ಲ. ಮತ್ತು ಓದು ಬರಹ ಅಂದರೆ ಏನೆಂದು ಗೊತ್ತಿರುವುದಿಲ್ಲ. ಅಂತವರಿಗೆ ರಾತ್ರಿ ಶಾಲೆಗಳನ್ನು ತೆರೆದು ಆ ಮೂಲಕ ಅವರಿಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಇದನ್ನೇ ಔಪಚಾರಿಕ ಅಥವಾ ವಯಸ್ಕ ಶಿಕ್ಷಣ ಪದ್ಧತಿ ಎಂದು ಕರೆಯುತ್ತಾರೆ. ಗ್ರಾಮೀಣ ಜನರಿಗೆ ವೈಯಸ್ಕ ಶಿಕ್ಷಣವನ್ನು ನೀಡುವ ಮೂಲಕ ಅವರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸಬೇಕು. ಪರಿಸರ ಕಾಳಜಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಪರಿಸರ ಎಂದರೆ ದೈವಿಕ ಸ್ವರೂಪ ಎಂಬುದನ್ನು ಅವರಿಗೆ ಅರ್ಥ ಮಾಡಿಸಬೇಕು. ವಯಸ್ಕ ಶಿಕ್ಷಣ ಪದ್ಧತಿಯಲ್ಲಿ ಮಹಿಳೆಯರು ಸಹ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು.

ಪರಿಸರ ಕ್ಲಬ್ ಸ್ಥಾಪನೆ ಮೂಲಕ ಜಾಗೃತಿ:

ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಪಂಚಾಯಿತಿಗಳ ಮಟ್ಟದಲ್ಲಿ, ಜಿಲ್ಲೆಗಳಲ್ಲಿ ಪರಿಸರ ಕ್ಲಬ್ ಗಳನ್ನು ಸ್ಥಾಪಿಸಿ ಆ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿಯನ್ನು ಜನಸಾಮಾನ್ಯರಲ್ಲಿ ಮೂಡಿಸಬೇಕು. ಶೈಕ್ಷಣಿಕ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು ಕಲಿಸಿಕೊಡಬೇಕು. ಪರಿಸರ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಪರಿಸರ ಕಾಳಜಿಯ ಪೋಷಣೆಗಳನ್ನು  ಕೂಗುತ್ತಾ ಜನಸಾಮಾನ್ಯರಲ್ಲಿ ತಿಳುವಳಿಕೆಯನ್ನು ಮೂಡಿಸಬೇಕು. ಸಮೂಹ ಮಾಧ್ಯಮ, ಪತ್ರಿಕೆಗಳು, ಶಾಲಾ-ಕಾಲೇಜುಗಳು ಹಾಗೂ ವಯಸ್ಕ ಶಿಕ್ಷಣ ಸಂಸ್ಥೆಗಳು ಈ ಪರಿಸರ ಕ್ಲಬ್ ಜೊತೆಗೆ ಕೈ ಜೋಡಿಸಬೇಕು. ಇದರೊಂದಿಗೆ ಸರ್ಕಾರ ಹಾಗೂ ಸ್ವಯಂಸೇವಾ ಸಂಘಗಳು ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವಲ್ಲಿ ಪ್ರಯತ್ನಿಸಬೇಕು. ಇದಕ್ಕೆ ಪೂರಕವೆಂಬಂತೆ ಚಿಪ್ಕೋ, ಅಪ್ಪಿಕೋ, ಬಿಷ್ಣೋಯಿ, ನರ್ಮದಾ ಬಚಾವ್, ತೆಹ್ರ ಅಣೆಕಟ್ಟು ಚಳುವಳಿಯ ಕೆಲಸ ಮಾಡುತ್ತಿವೆ.

ದೆಹಲಿಯಲ್ಲಿ CNG ವಾಹನಗಳು:

ಇಂದು ಸರ್ಕಾರಗಳು ಸಾರ್ವಜನಿಕರೊಂದಿಗೆ ಸೇರಿ ಪರಿಸರ ಸಂರಕ್ಷಣೆಗೆ ಹಲವಾರು ಅಗತ್ಯ ಕಾನೂನುಗಳನ್ನು ಜಾರಿಗೆ ತಂದಿವೆ. ಪರಿಸರವು ಸ್ವಚ್ಛವಾಗಿದ್ದರೆ ಮಾನವನ ಆರೋಗ್ಯ ಉತ್ತಮವಾಗಿರುತ್ತದೆ. ಪರಿಸರ ಸುಂದರವಾಗಿದ್ದರೆ ಮಾನವನೂ ಸುಂದರವಾಗಿ ಕಾಣುತ್ತಾನೆ. ಮಾನವ ಪರಿಸರವನ್ನು ಹಾಳು ಮಾಡಿದರೆ ತನ್ನನ್ನು ತಾನೇ ಹಾಳು ಮಾಡಿಕೊಂಡಂತೆ. ಭಾರತವು ಪ್ರಪಂಚದ 5ನೇ ಪರಿಸರ ಮಾಲಿನ್ಯದ ದೊಡ್ಡ ದೇಶವಾಗಿದೆ. ಇಲ್ಲಿ ಅಗಾಧ ಸಂಖ್ಯೆಯಲ್ಲಿ ಜನಸಂಖ್ಯೆ ಇದೆ. ಅಭಿವೃದ್ಧಿಶೀಲ ಆರ್ಥಿಕತೆಯ ಕಾರಣದಿಂದ ಪ್ರಪಂಚದ 100 ವಾಯುಮಾಲಿನ್ಯ ನಗರಗಳಲ್ಲಿ 63 ನಗರಗಳು ಭಾರತದಲ್ಲಿಯೇ ಇವೆ. ದೆಹಲಿ ಪ್ರಪಂಚದ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿದೆ. ವಾಯು ಮಾಲಿನ್ಯದಿಂದ ದೆಹಲಿಯ ಜನರ ಸರಾಸರಿ ಜೀವಿತಾವಧಿ ಐದು ವರ್ಷಗಳಷ್ಟು ಕಡಿಮೆ ಇದೆ.

ದೆಹಲಿ ಸರ್ಕಾರವು ವಾಯುಮಾಲಿನ್ಯವನ್ನು ನಿಯಂತ್ರಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ

  1.  ದೆಹಲಿ ನಗರ ಸಾರಿಗೆ ವಾಹನಗಳಿಗೆ CNG ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ.  ಇತರ ವಾಹನಗಳಿಗೂ CNG ಯನ್ನು ಶಿಫಾರಸು ಮಾಡಿದೆ.
  2.  ಬಾರಿ ವಾಹನಗಳು ಅಥವಾ ಲಾರಿಗಳು ನಗರದ ಒಳಗೆ ಬರುವುದನ್ನು ನಿಷೇಧಿಸಲಾಗಿದೆ.
  3.  ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕೈಗಾರಿಕೆಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಲಾಗಿದೆ.
  4. CNG ವಾಸನೆ ರಹಿತವಾದ ಇಂಧನವಾಗಿದ್ದು ಅಪಾಯಕಾರಿಯಲ್ಲದ ಹಾಗೂ ಕ್ಯಾನ್ಸರ್ ಕಾಯಿಲೆಯನ್ನು ಉಂಟುಮಾಡದ ಗಾಳಿಗಿಂತಲೂ ಹಗುರವಾಗಿರುವ ಕಾರಣದಿಂದ ಇದನ್ನು ಹಸಿರು ಇಂಧನ ಎಂದು ಕರೆಯುವರು.
  5.  ಈ  ಇಂಧನದ ಬಳಕೆಯಿಂದ ಮಾಲಿನ್ಯಕಾರಕ ಅಂಶಗಳು ಬಿಡುಗಡೆಯಾಗುವುದಿಲ್ಲ.
  6.  ನಗರದಲ್ಲಿ ಬೆಸ ಸಂಖ್ಯೆಯ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ.
  7.  ರೈತರು ಕಟಾವಿನ ನಂತರ ಹುಲ್ಲಿಗೆ ಬೆಂಕಿ ಹಾಕುವುದನ್ನು ನಿಷೇಧಿಸಿದೆ.

ಉಪಸಂಹಾರ

ಪರಿಸರವನ್ನು ನಾಶಮಾಡುವುದು ಅಂದರೆ ನಮ್ಮ ಜೀವನವನ್ನೇ ಅಪಾಯಕ್ಕೆ ತಳ್ಳಿದಂತಾಗುತ್ತದೆ. ಸಾರ್ವಜನಿಕ ಜಾಗೃತಿ ಮತ್ತು ಪರಿಸರ ಸಂವಹನದ ಮೂಲಕ ಪರಿಸರ ಪ್ರಜ್ಞೆಯನ್ನು ಬೆಳೆಸುವುದು ಅನಿವಾರ್ಯವಾಗಿದೆ. “ಕಾಡಿದ್ದರೆ ನಾವು, ನಾವಿದ್ದರೆ ನಾಡು” ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ.

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಪ್ರಕೃತಿಯಲ್ಲಿನ ನೆಲೆ, ನೀರು, ವಾಯು, ಕಾಡು, ಸಸ್ಯ, ಪ್ರಾಣಿಗಳಿಗೆ ದೈಹಿಕ ಸ್ಥಾನವನ್ನು ನೀಡಲಾಗುತ್ತಿತ್ತು. ಜನರು ಪ್ರಕೃತಿಗೆ ಹೆದರಿ ಅದರ ನಾಶಕ್ಕೆ ಪ್ರಯತ್ನಿಸುತ್ತಿರಲಿಲ್ಲ. ನಮ್ಮ ಪೂರ್ವಜರು ಪ್ರಕೃತಿಯನ್ನು ಆಧರಣೀಯವಾಗಿ ಪೂಜಿಸುತ್ತಿದ್ದರು. ಈ ಕಾರಣದಿಂದಾಗಿ ಕಾಡು ಸಮೃದ್ಧವಾಗಿ ಬೆಳೆದು ನಿಂತಿತು. 

  1. ಭಾರತೀಯ ಎಲ್ಲಾ ಧರ್ಮಗಳು ಪ್ರಕೃತಿ, ಭೂಮಿ, ಜೀವಿಗಳು ಮುಂತಾದವುಗಳನ್ನು ದೇವರ ಸೃಷ್ಟಿ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿವೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ “ಬಹಾಯಿ” ಮಾನವ ಜೀವನ ಹಾಗೂ ಪ್ರಕೃತಿಗೆ ಅತ್ಯಂತ ನಿಕಟ ಸಂಬಂಧವನ್ನು ಏರ್ಪಡಿಸಿತ್ತು. ಜೇನು, ಹೂ, ಅದರ ಬಣ್ಣ ಸುವಾಸನೆಗೆ ಚ್ಯುತಿ ಬರದಂತೆ ಅದರ ಮಧುವನ್ನು ಹೀರುವಂತೆ ಮಾನವ ಸಹ ಪ್ರಕೃತಿಯಲ್ಲಿ ಇದ್ದು ಇಲ್ಲದಂತೆ ಬದುಕಬೇಕು ಎಂದು ಹೇಳಿದೆ. ಪ್ರತಿಯೊಬ್ಬನು ಬೌದ್ಧಿಕವಾಗಿ ಬೆಳೆದು ಅಹಿಂಸೆಯನ್ನು ಅಳವಡಿಸಿಕೊಂಡು ಹಿಂಸೆಯನ್ನು ತ್ಯಜಿಸಬೇಕೆಂದು ಹೇಳುವ ಮೂಲಕ ಅತಿಯಾದ ಆಸೆಯು ಮನುಷ್ಯನ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.
  2. ಕ್ರೈಸ್ತ ಧರ್ಮದಲ್ಲಿ ಪರಿಸರ ರಕ್ಷಣೆಯನ್ನು ಮಾಡುವ ಹಲವಾರು ಪದ್ಯಗಳು ನಮಗೆ ಗೋಚರಿಸುತ್ತವೆ. ನಾವಿರುವ ಪರಿಸರವನ್ನು ಹಾಳು ಮಾಡಬಾರದು, ನಮ್ಮ ರಕ್ತ ಮಣ್ಣಿನಲ್ಲಿ ಸೇರಿದರೆ ಮಣ್ಣು ಕಲುಷಿತಗೊಳ್ಳುವುದು, ಆಹಾರವನ್ನು ಹಾಳು ಮಾಡುವುದು ಮಹಾ ಪಾಪವಾಗಿದೆ, ಪ್ರತಿಯೊಬ್ಬ ಮಾನವ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಭೂಮಿಯು ನಮಗಾಗಿ ದೇವರಿಂದ ಸೃಷ್ಟಿಯಾಗಿದೆ ಎಂದು ಕ್ರೈಸ್ತ ಧರ್ಮದಲ್ಲಿ ವಿವರಿಸಲಾಗಿದೆ.
  3. ಕನ್‌ಪ್ಯೂಸಿಯಸ್‌ ಧರ್ಮವು ಪ್ರಕೃತಿಯನ್ನು ಪೂಜಿಸುತ್ತಾ ಬಾಳುವುದನ್ನು ಹೇಳಿಕೊಟ್ಟಿದೆ. ಪ್ರಕೃತಿ ಇಲ್ಲದೆ ಮನುಷ್ಯನಿಲ್ಲ ಎಂಬುದು ಕನ್‌ಪ್ಯೂಸಸಿಯಸ್ ಧರ್ಮದ ತಿರುಳಾಗಿದೆ. ತಾನು ಪ್ರಕೃತಿಗೆ ಒಳ್ಳೆಯದನ್ನು ಮಾಡಿದರೆ ಪ್ರಕೃತಿ ತನಗಾಗಿ ಒಳ್ಳೆಯದನ್ನು ಮಾಡುತ್ತದೆ. ಕೊಡು ಮತ್ತು ಪಡೆದುಕೊಳ್ಳು ಎಂಬುದು ಪ್ರಕೃತಿಯ ನೀತಿಯಾಗಿದೆ. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವುದು ಅಂದರೆ ತನ್ನನ್ನು ತಾನು ಹಿಂಸಿಸಿಕೊಂಡಂತೆ ಎಂದು ಕನ್‌ಪ್ಯೂಸಿಯಸ್ ಧರ್ಮ ಸಾರಿದೆ.
  4. ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಪೈಗಂಬರ್ ಹೀರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದುಕೊಂಡನು. ಹಾಗಾಗಿ ಇಸ್ಲಾಂ ಧರ್ಮ ಪರಿಸರ ಸುಸ್ಥಿರ ಬಳಕೆಯ ವಿವರಣೆಯನ್ನು ನೀಡುತ್ತದೆ. ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡಬಾರದು ಸಾಧ್ಯವಾದಷ್ಟು ಪರಿಸರ ರಕ್ಷಣೆ ಆಗಬೇಕು ಎಂಬುದು ಇಸ್ಲಾಂ ಧರ್ಮದ ಕುರಾನಿನ ವಾಕ್ಯವಾಗಿದೆ.
  5. ಭಾರತದಲ್ಲಿಯೇ ಜನಿಸಿದ ಜೈನ ಧರ್ಮವು ಅಹಿಂಸೆಯನ್ನೇ ಪ್ರಧಾನ ಗುರಿಯನ್ನಾಗಿಸಿಕೊಂಡಿದೆ. ಭೂಮಿಯ ಮೇಲಿನ ಜೀವ ಜಂತುಗಳಿಗೆ ಹಾನಿಯಾಗುವಂತಹ ಯಾವುದೇ ಪಾಪಕರ್ಮಗಳನ್ನು ಮಾಡದಂತೆ ಸಂದೇಶ ನೀಡಿದೆ. ಜೈನರು ಹುಳ ಹುಪ್ಪಡಿಗಳು ಬಾಯಿಯೊಳಗೆ ಪ್ರವೇಶಿಸದಂತೆ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಸಾಯಂಕಾಲದೊಳಗೆ ಅವರು ಊಟವನ್ನು ಮುಗಿಸುತ್ತಾರೆ. ಕೃಷಿ ಕಾರ್ಯ ಜೈನರಲ್ಲಿ ನಿಷಿದ್ಧ. ಏಕೆಂದರೆ ಭೂಮಿ ಒಳಗಿನ ಯಾವುದೇ ಜೀವಿಗಳಿಗೆ ಹಾನಿಯಾಗುವುದನ್ನು ಅವರು ಸಹಿಸುವುದಿಲ್ಲ. 
  6. ಇನ್ನೂ ಹಿಂದೂ ಧರ್ಮದ ನಂಬಿಕೆ ಅಪಾರವಾಗಿದ್ದು ಹಲವಾರು ದೇವರುಗಳ ವಾಹನಗಳು ಪಶು ಪಕ್ಷಿಗಳಾಗಿವೆ. ಉದಾ: ಬ್ರಹ್ಮನು ಸೃಷ್ಟಿಕರ್ತ ಆತನ ವಾಹನ ಗರುಡ, ಶಿವನ ವಾಹನ ನಂದಿ, ಸರಸ್ವತಿಯ ವಾಹನ ನವಿಲು, ಪಾರ್ವತಿಯ ವಾಹನ ಹುಲಿ, ಶನಿಯ ವಾಹನ ಕಾಗೆ, ಗಣೇಶನ ವಾಹನ ಇಲಿ, ಯಮನ ವಾಹನ ಕೋಣ. ಇವುಗಳ ಹಿಂದಿನ ಸತ್ಯವೆಂದರೆ ಪ್ರಕೃತಿ ರಕ್ಷಣೆಯೇ ಆಗಿದೆ. ಭಾರತೀಯರು ಕೆಲವು ಹಬ್ಬ ಹರಿದಿನಗಳಲ್ಲಿ ವೃಕ್ಷ ಪೂಜೆ, ಗರಿಕೆ, ತುಳಸಿ, ಬಿಲ್ವ, ಅರಳಿ, ಬೇವು ಮುಂತಾದವುಗಳನ್ನು ಪೂಜಿಸಿ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಿಂದಿನ ಕಾಲದಲ್ಲಿ ಮಾನವರು ಪೃಥ್ವಿ, ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದರು. ಇಂದಿಗೂ ಇವುಗಳ ಪೂಜೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಇದು ಅಲ್ಲದೆ ಪ್ರಾಣಿ-ಪಕ್ಷಿ, ಗಿರಿ, ಶಿಖರ, ಬೆಟ್ಟ, ಗುಡ್ಡಗಳನ್ನು ದೈವಿಕ ದೃಷ್ಟಿಯಿಂದ ಕಾಣಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗಿಡಮರಗಳಿಗೆ ಗೌರವ ನೀಡುವುದು, ಅವುಗಳನ್ನು ದೇವರ ಸಮಾನವೆಂದು ಭಾವಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇದಕ್ಕೆ ಕಾರಣ ಮರಗಳು ನಮಗೆ ತಂಪಾದ ನೆರಳು, ಹಿತವಾದ ಗಾಳಿ, ಸುಂದರವಾದ ಜೀವನವನ್ನು ನೀಡುತ್ತವೆ. ಅದಕ್ಕೆ ಜಾನಪದ ಗೀತೆಯಲ್ಲಿ ಬೇವಿನ ಮರವನ್ನು ಹಾಡಿ ಹೋಗಲಾಗಿದೆ. ಬ್ಯಾಸಿಗೆ ದಿವಸಕ್ಕ ಬೇವಿನ ಮರತಂಪು ಎಂದು ಬಣ್ಣಿಸಲಾಗಿದೆ. ಈ ಮರಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕೆಲವು ಅರಣ್ಯಗಳಂತೂ ದೇವರ ಕಾಡು ಎಂದು ಹೆಸರಾಗಿವೆ. ಅಲ್ಲಲ್ಲಿ ಅರಣ್ಯಗಳ ನಡುವೆ ಮರದ ದೇವರುಗಳನ್ನು ಇಟ್ಟಿರುವುದನ್ನು ಇಂದಿಗೂ ಕಾಣಬಹುದಾಗಿದೆ.
  7. ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು. ಹೀಗಾಗಿ ಬೌದ್ಧ ಧರ್ಮೀಯರಿಗೆ ಬೋಧಿವೃಕ್ಷ ಅತ್ಯಂತ ಪವಿತ್ರವಾದ ಮರವಾಗಿದೆ.
  8. ವೈಷ್ಣವ ಧರ್ಮದಲ್ಲಿ ವಿಷ್ಣು ದಶಾವತಾರದಲ್ಲಿ ಪ್ರಾಣಿಗಳ ರೂಪದಲ್ಲಿ ಅವತರಿಸಿದ್ದಾನೆ. ಮತ್ಸ್ಯಾವತಾರ, ಕೂರ್ಮಾವತಾರ(ಆಮೆ), ವರಾಹಾವತಾರ(ಹಂದಿ) ರೂಪ ತಾಳಿದ್ದಾನೆ.

ಉಪಸಂಹಾರ

ಭಾರತೀಯ ಹಾಗೂ ಇತರ ಧರ್ಮಗಳು ಪರಿಸರ ಸಂರಕ್ಷಣೆಯನ್ನು ಕೇವಲ ಕರ್ತವ್ಯವಲ್ಲದೆ ಧಾರ್ಮಿಕ ಮತ್ತು ನೈತಿಕ ಹೊಣೆಗಾರಿಕೆಯಾಗಿ ಕಂಡಿವೆ. ಪ್ರಕೃತಿಯನ್ನು ಪೂಜ್ಯವಾಗಿ ಕಾಣುವ ಈ ಸಂಸ್ಕೃತಿ ಮಾನವನಲ್ಲಿ ಸಂಯಮ, ಅಹಿಂಸೆ ಮತ್ತು ಜವಾಬ್ದಾರಿಯುತ ಬಳಕೆಯ ಮನೋಭಾವವನ್ನು ಬೆಳೆಸಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿಸರ ಸಮತೋಲನವನ್ನು ಕಾಪಾಡಬಹುದು. ಹೀಗಾಗಿ ಧರ್ಮ ಮತ್ತು ಸಂಸ್ಕೃತಿ ಪರಿಸರ ಸಂರಕ್ಷಣೆಯ ಶಕ್ತಿಯುತ ಆಧಾರಗಳಾಗಿವೆ.

ಪರಿಸರ ನೀತಿ ಶಾಸ್ತ್ರ

ಪರಿಸರ ನೀತಿ ಶಾಸ್ತ್ರ

ಭೂಮಂಡಲದಲ್ಲಿರುವ ಸಮಸ್ತ ಜೀವ ಜಂತುಗಳು ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿವೆ. ಆದರೆ ಮಾನವ ಮಾತ್ರ ಇದಕ್ಕೆ ವಿರುದ್ಧವಾಗಿದ್ದಾನೆ. ಜೀವ ವೈವಿಧ್ಯತೆಗಳು ಪರಿಸರಕ್ಕೆ ಯಾವುದೇ ಹಾನಿಯನ್ನು ಮಾಡದೆ ಕಾಲಮಾನಕ್ಕೆ ಅನುಗುಣವಾಗಿ ಬದುಕು ಸಾಗಿಸಿಕೊಂಡು ಹೋಗುತ್ತವೆ. ಆದರೆ ಮನುಷ್ಯ ಮಾತ್ರ ಪರಿಸರಕ್ಕೆ ಯಾವಾಗಲೂ ಧಕ್ಕೆಯನ್ನು ತರುತ್ತಲೇ ಇರುತ್ತಾನೆ. ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ಎಸೆಗುತ್ತಲೇ ಬಂದಿದ್ದಾನೆ. ಅಭಿವೃದ್ಧಿಯ ನೆಪದಲ್ಲಿ ಮಾಡಬಾರದ ಪಾಪಗಳನ್ನು ಮಾಡುತ್ತಿದ್ದಾನೆ. ಜೀವ ಜಂತುಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದಾನೆ. ಪರಿಸರದ ಸಮತೋಲನವನ್ನು ತಪ್ಪಿಸುತ್ತಿದ್ದಾನೆ. ಇತರೆ ಜೀವಿಗಳ ಪ್ರಾಣಕ್ಕೆ ಸಂಚಕಾರ ತರುತ್ತಾ ತನ್ನ ಪ್ರಾಣವನ್ನು ಕೊನೆಗೊಳಿಸಲೆತ್ನಿಸುತ್ತಾನೆ. ಭವಿಷ್ಯದಲ್ಲಿ ಭರವಸೆ ಮೂಡಿಸುವ ಬದಲು ನಿರಾಶೆ ಮೂಡಿಸುತ್ತಿದ್ದಾನೆ. ಭೂಮಿಗೆ ತಾನೇ ಒಡೆಯನೆಂದು ಬಿಂಬಿಸುತ್ತ ಮೆರೆಯುತ್ತಿದ್ದಾನೆ. ಮಾನವೀಯತೆಯನ್ನು ಮರೆಯುತ್ತಿದ್ದಾನೆ. ತಾನು ಬದುಕಿದರೆ ಸಾಕು ಉಳಿದವರೆಂದೇನು ಆಗಬೇಕಾಗಿದೆ ಎಂಬ ನಿರ್ಲಿಪ್ತ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ನೀತಿ, ನಿಯಮ, ಸಂಸ್ಕಾರ, ಸಂಪ್ರದಾಯಗಳನ್ನು ಕಾಲ ಕಸವನ್ನಾಗಿ ಮಾಡಿಕೊಂಡಿದ್ದಾನೆ. ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸುತ್ತಿದ್ದಾನೆ. ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದಾನೆ. ನೀರನ್ನು ಚರಂಡಿ ಆಗಿಸಿದ್ದಾನೆ. ಭೂಮಿಯ ಮಣ್ಣನ್ನು ಮಲಿನಗೊಳಿಸಿದ್ದಾನೆ. ವಾಯುವನ್ನು ಇನ್ನಿಲ್ಲದಂತೆ ಕುಲಗೆಡಿಸುತ್ತಿದ್ದಾನೆ. ಶಬ್ದ ಮಾಲಿನ್ಯವಂತು ಹೇಳುತಿರದು. ಲಕ್ಷಾಂತರ ಜನರು ಶಬ್ದ ಮಾಲಿನ್ಯದಿಂದ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ತ್ಯಾಜ್ಯಗಳ ಸಂಗ್ರಹಕ್ಕೆ ಪಾರವೇ ಇಲ್ಲ. ಎಲ್ಲೇ ಹೋದರು ಗಬ್ಬು ವಾಸನೆ ಮೂಗಿಗೆ ಅಪ್ಪಳಿಸುತ್ತಿದೆ.  ಹೀಗಾಗಿ ಮಾನವನು ಪರಿಸರದ ಮಾಲಿನ್ಯವನ್ನು ಅರಿತು ಬದುಕಲು ಹಲವು ನೀತಿಯನ್ನು ಅನುಸರಿಸಬೇಕು. ಹಲವು ಸಮಸ್ಯೆಗಳಿಗೆ ತಾನೇ ಪರಿಹಾರ ಕಂಡುಕೊಳ್ಳಬೇಕು. ಬದುಕು ಮತ್ತು ಬದುಕಲು ಬಿಡು ಎಂಬ ನೀತಿಯನ್ನು ಪಾಲಿಸಬೇಕು. ಕೆಲವು ನೀತಿಯುತ ನಿರ್ಧಾರಗಳನ್ನು ಮಾನವ ಮಾಡಬೇಕು. ಅವುಗಳು  ಈ ಕೆಳಗಿನಂತಿವೆ.

1. ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಕಾದಿರಿಸುವುದು:

ನೈಸರ್ಗಿಕ ಸಂಪನ್ಮೂಲಗಳನ್ನು ಕೇವಲ ನಾವು ಮಾತ್ರ ಉಪಯೋಗಿಸಿದರೆ ಸಾಲದು. ಅದು ಮುಂದಿನ ಪೀಳಿಗೆಗೂ ಬೇಕು. ಹೀಗಿರುವಾಗ ಈ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಯಾವ ಪ್ರಯತ್ನವನ್ನು ಮಾಡದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿರುವುದು ನೈತಿಕವಾಗಿ ಒಳ್ಳೆಯದಲ್ಲ. ಪೆಟ್ರೋಲ್, ಕಲ್ಲಿದ್ದಲು, ಅರಣ್ಯ, ವನ್ಯಜೀವಿಗಳು ಮುಂತಾದವುಗಳನ್ನು ನಾವೇ ಹಾಳು ಮಾಡಿದರೆ ಬರಲಿರುವ ಮುಂದಿನ ತಲೆಮಾರುಗಳ ಗತಿ ಏನು. ನೆಲ, ಜಲ, ವಾಯು, ಶಬ್ದ ಮಾಲಿನ್ಯಗಳನ್ನು ನಾವೇ ಮಾಡಿ ಹೋದರೆ ನಾವೇ ಹಲವು ರೋಗಗಳನ್ನು ನಮ್ಮ ಮುಂದಿನವರಿಗೆ ಬಿಟ್ಟು ಹೋದಂತೆಲ್ಲವೆ. ಹೀಗೆ ಮಾಡುವುದು ನೈತಿಕವಾಗಿ ಎಷ್ಟು ಸರಿ. ಅದಕ್ಕಾಗಿ ನಾವು ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಕಾಪಾಡಿ ಅದನ್ನು ಮುಂದಿನವರಿಗೆ ಹಸ್ತಾಂತರಸಬೇಕಲ್ಲವೇ. ಅದು ಮನುಷ್ಯ ಧರ್ಮವಾಗಿದೆ.

2. ಇತರೆ ಜೀವ ವೈವಿಧ್ಯತೆಗಳಿಗೆ ಬದುಕುವ ಹಕ್ಕಿದೆ:

ಮಾನವನ ಹಾಗೆ ಭೂಮಿಯ ಮೇಲೆ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳು ಸಹ ಬದುಕುವ ಹಕ್ಕನ್ನು ಪಡೆದಿವೆ ಎಂಬುದು ಪರಿಸರದ ನೈತಿಕ ನಿಯಮವಾಗಿದೆ. ಈ ಜೀವಿಗಳ ಬದುಕನ್ನು ಕಿತ್ತುಕೊಳ್ಳುವುದು ಹಾಗೂ ಅವುಗಳ ಜೀವಕ್ಕೆ ಹಾನಿಯನ್ನುಂಟು ಮಾಡಿ ವಿನಾಶಕ್ಕೆ ಕಾರಣವಾಗುವ ಮನುಷ್ಯರಿಗೆ ಯಾವುದೇ ಹಕ್ಕಿಲ್ಲ. ನಾವು ಭೂಮಿಯ ಒಡೆಯರು ಇತರರೆಲ್ಲ ನಾಶವಾಗಬಲ್ಲ ವಸ್ತುಗಳು ಎಂಬ ಅಹಂಕಾರವನ್ನು ಮಾನವ ತೊಡೆದು ಹಾಕಬೇಕು. ನಾವು ಬದುಕೋಣ ಇತರರನ್ನು ಬದುಕಲು ಬಿಡೋಣ ಎಂಬ ತತ್ವವನ್ನು ಮಾನವ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

 3. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಾಗೂ ಲಭ್ಯತೆ:

ಇಂದು ನೈಸರ್ಗಿಕ ಲಭ್ಯತೆ ಹಾಗೂ ಬಳಕೆಯಲ್ಲಿ ಸಾಮಾನ್ಯವಾಗಿ ತಾರತಮ್ಯ ಕಂಡುಬರುತ್ತದೆ. ಉದಾ: ಅಭಿವೃದ್ಧಿ ಹೊಂದಿದ ದೇಶಗಳು ಬಹುಪಾಲು ಸಂಪನ್ಮೂಲಗಳನ್ನು ಖಾಲಿ ಮಾಡಿ ಅಭಿವೃದ್ಧಿ ಹೊಂದುತ್ತಿರುವ ಬಡದೇಶಗಳ ಸಂಪನ್ಮೂಲಗಳ ಮೇಲೆ ಕಣ್ಣು ಹಾಕಿವೆ. ಇದು ಬಡ ರಾಷ್ಟ್ರಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಉಪಾಯವಾಗಿದೆ. ಒಂದು ದೇಶದ ಆರ್ಥಿಕವಾಗಿ ಮುಂದುವರೆದ ನಗರಗಳು ಮತ್ತು ಅಲ್ಲಿನ ನಿವಾಸಿಗಳು ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚು ಸಂಪನ್ಮೂಲಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಗರವಾಸಿಗಳ ಅಮಾನವೀಯ ಚಟುವಟಿಕೆಗಳ ದುಷ್ಪರಿಣಾಮಗಳನ್ನು ಗ್ರಾಮೀಣ ಜನರು ಅನುಭವಿಸಬೇಕಾಗುತ್ತದೆ.

ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ನೋವು ಅನುಭವಿಸುತ್ತಾರೆ. ಉದಾ: ಕಾಡು ನಾಶವಾದರೆ ಹೆಣ್ಣು ಮಕ್ಕಳಿಗೆ ಉರುವಲು ಸೌದೆ ಇರಲಾರವು. ಅವರು ದನ, ಕರುಗಳಿಗೆ ಮೇವು ಸಂಗ್ರಹಿಸುವುದು ದುಸ್ತರವಾಗುತ್ತದೆ. ನೀರು ಖಾಲಿಯಾದರೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ನೀರು ತರಬೇಕು.

4. ಭಾರತದ ಸುರಕ್ಷತಾ ಸಂಪ್ರದಾಯದ ಮುಂದುವರಿಕೆ:

ಭಾರತವು ಶ್ರೀಮಂತ ಸಂಪನ್ಮೂಲಗಳಿಂದ ಕೂಡಿದ ಪ್ರಬಲ ರಾಷ್ಟ್ರವಾಗಿದೆ. ಇದು ಬಹು ಸಂಸ್ಕೃತಿಯ ದೇಶವಾಗಿದೆ. ಈ ಸಂಸ್ಕೃತಿಯು ಭಾರತದ ನದಿಗಳು, ಕೆರೆ, ತೊರೆ, ಸರೋವರ, ಸಾಗರ, ಗುಡ್ಡ, ಬೆಟ್ಟ, ಪರ್ವತಗಳು, ಅರಣ್ಯ ಹಾಗೂ ಪ್ರಾಣಿಗಳನ್ನು ದೇವರೆಂದು ಭಾವಿಸಿ ಅವುಗಳನ್ನು ಕಾಪಾಡುವ ಮೂಲಕ ನೈಸರ್ಗಿಕ ಸೃಷ್ಟಿಗೆ ಧಾರ್ಮಿಕ ಸ್ಥಾನಮಾನ ನೀಡುತ್ತಾ ಬಂದಿದೆ. ಪ್ರಾಚೀನ ಕಾಲದ ಎಲ್ಲಾ ದೇವಾಲಯಗಳ ಮುಂದೆ ನೀರಿನ ಪುಷ್ಕರಣಿಗಳು ನಿರ್ಮಾಣವಾಗಿರುವುದನ್ನು ನೋಡಿದರೆ ನಿಸರ್ಗವನ್ನು ದೇವರ ಸ್ಥಾನದಲ್ಲಿಟ್ಟ ಪ್ರಪಂಚದ ಒಂದೇ ಒಂದು ದೇಶವೆಂದರೆ ಅದು ಭಾರತ ಎಂದು ಹೇಳಬಹುದು. ನದಿ ಪರ್ವತಗಳನ್ನು ದೇವರ ಹೆಸರಿನಿಂದ ಕರೆಯಲಾಗಿದೆ. ಆಲದ ಮರ, ಅಶ್ವತ ಮರ ಹಾಗೂ ತುಳಸಿ ಸಸ್ಯಗಳನ್ನು ದೈವಿ ಮಟ್ಟಕ್ಕೆ ಏರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.

 5. ಪರಿಸರಸ್ನೇಹಿ ಜೀವನ ಶೈಲಿ:

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಪರಿಸರದ ಬಗ್ಗೆ ಗೌರವವಾಗಲಿ, ಕಾಳಜಿಯಾಗಲಿ ಇಲ್ಲವೆಂದು ಹೇಳಬಹುದು. ಹಾಗಾಗಿ ಅವರನ್ನು ಪರಿಸರದ ಕಡೆಗೆ ಸೆಳೆಯುವಂತೆ ಮಾಡಿ ಅವರಲ್ಲಿ ನಿಸರ್ಗ ಪ್ರೇಮವನ್ನು ಬೆಳೆಸಬೇಕಾದದ್ದು ದೊಡ್ಡವರ ಕರ್ತವ್ಯವಾಗಿದೆ. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಭವಿಸುವಂತೆ ಮಾಡಬೇಕೆಂದು ವಿದ್ಯಾರ್ಥಿಗಳು ಅಥವಾ ಯುವಕರಿಗೆ ತಿಳಿ ಹೇಳಬೇಕು.

6. ಭೂಮಿಯ ಬಗ್ಗೆ ಪ್ರತಿಯೊಬ್ಬ ಮಾನವನ ಪವಿತ್ರವಾದ ಭಾವನೆಯನ್ನು ಬೆಳೆಸಿಕೊಳ್ಳಬೇಕು.

7. ಪರಿಸರದ ಯಾವುದೋ ಒಂದು ಭಾಗವನ್ನು ಅನುಭವಿಸಿ ಹಾಗೆಯೇ ಬಿಟ್ಟು ಹೋಗದೆ ಅದನ್ನು ಮೊದಲಿನ ಸ್ಥಿತಿಗೆ ತಂದು ನಿಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

8. ಸಮಪಾಲು, ಸಮಾನ ಹಂಚಿಕೆ ಹಾಗೂ ಸಮಬಾಳು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

9. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವುದು ಸಹ ನೈತಿಕ ಜವಾಬ್ದಾರಿಯಾಗಿದೆ.

ಉಪಸಂಹಾರ

ಪರಿಸರವನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಮಾನವನ ನೈತಿಕ ಹೊಣೆಗಾರಿಕೆಯಾಗಿದೆ. ನಿಸರ್ಗದೊಂದಿಗೆ ಸಹಜವಾಗಿ ಬದುಕುವ ಸಂಸ್ಕೃತಿಯನ್ನು ನಾವು ಪುನರುಜ್ಜೀವನಗೊಳಿಸಬೇಕು. ಇತರೆ ಜೀವಿಗಳಿಗೆ ಬದುಕುವ ಹಕ್ಕನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳೇ ನಾಳೆಯ ಭವಿಷ್ಯವನ್ನು ರೂಪಿಸುತ್ತವೆ. ಹೀಗಾಗಿ ಪರಿಸರ ಸ್ನೇಹಿ ಬದುಕೇ ಶಾಶ್ವತ ಬದುಕು ಎಂಬುದನ್ನು ಅರಿಯಬೇಕು.