ಮೂಲಭೂತ ಹಕ್ಕುಗಳ ಪರಿಕಲ್ಪನೆ ಮತ್ತು ಲಕ್ಷಣಗಳು

“ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಿಗೂ ಮತ್ತು ಅವುಗಳನ್ನು ಪ್ರಜೆಗಳು ವಾಸ್ತವವಾಗಿ ಅನುಭವಿಸುತ್ತಿರುವುದಕ್ಕೂ ಬಹಳಷ್ಟು ಅಂತರವಿದೆ.”  – ನಾರಿಮನ್. ಡಿ. ಪಾಮರ್

ಮೂಲಭೂತ ಹಕ್ಕುಗಳ ಪರಿಕಲ್ಪನೆ:

“ಯಾವ ಹಕ್ಕುಗಳಿಲ್ಲದೆ ಒಬ್ಬ ಪ್ರಜೆಯು ತನ್ನ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲವೋ ಅಂತಹ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗುತ್ತದೆ.ʼ ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಪ್ರಜೆಗಳಿಗೆ ಸಂವಿಧಾನದ ಮೂಲಕವೇ ಮೂಲಭೂತ ಹಕ್ಕುಗಳನ್ನು ನೀಡಿವೆ. ಈ ಮೂಭೂತ ಹಕ್ಕುಗಳು ಎಲ್ಲಾ ಕಾನೂನು, ನ್ಯಾಯಾಂಗದ ತೀರ್ಮಾನ, ಕಾರ್ಯಾಂಗದ ಆದೇಶಗಳಿಗಿಂತ ಶ್ರೇಷ್ಠ ಹಾಗೂ ಉನ್ನತವಾದವುಗಳಾಗಿವೆ. ಈ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳುವುದಾಗಲೀ ಅಥವಾ ಮೊಟುಕುಗೊಳಿಸುವುದಾಗಲೀ ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳು ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆಯೆಂದರೆ ಶಾಸಕಾಂಗವು ಮಾಡುವ ಯಾವುದೇ ಕಾನೂನು ಮೂಲಭೂತ ತತ್ವಗಳಿಗೆ ವಿರುದ್ಧವಾದರೆ ಅಂತಹ ಕಾನೂನನ್ನು ಸಂವಿಧಾನಬಾಹಿರ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೊದಲ ಮಹಾಯುದ್ಧದ ನಂತರ ವಿಶ್ವದ ವಿವಿಧ ದೇಶಗಳು ತಮ್ಮ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ವಿಶ್ವಸಂಸ್ಥೆ ಸಹ ಮಾನವ ಹಕ್ಕುಗಳ ಘೋಷಣೆಯನ್ನು ಡಿಸೆಂಬರ್‌ 10, 1948 ರಂದು ಅಂಗೀಕರಿಸಿತು. ಹಾಗೆಯೇ ಭಾರತದ ಸಂವಿಧಾನವು ಆರಂಭದಲ್ಲಿ 7 ಮೂಲಭೂತ ಹಕ್ಕುಗಳನ್ನು ನೀಡಿತ್ತು. ಆದರೆ 1978ರ 44ನೇ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಯಿತು. ಈಗ ಒಟ್ಟು 6 ಮೂಲಭೂತ ಹಕ್ಕುಗಳು ಚಾಲ್ತಿಯಲ್ಲಿವೆ.

ಮೂಲಭೂತ ಹಕ್ಕುಗಳ ಲಕ್ಷಣಗಳು (Characterstics of fundamental rights)

ಭಾರತೀಯ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ತನ್ನದೇ ಅದ ಗುಣಲಕ್ಷಣಗಳನ್ನು ಹೊಂದಿವೆ. ಈ ಲಕ್ಷಣಗಳ ಆಧಾರದ ಮೇಲೆ ಮೂಲಭೂತ ಸ್ವರೂಪವನ್ನು ಅರಿಯಬಹುದು.

1. ಸಾರ್ವತ್ರಿಕತೆ: (Universal)

ಭಾರತದಲ್ಲಿ ಜನಿಸಿರುವ ಎಲ್ಲಾ ಪ್ರಜೆಗಳಿಗೆ ಅನ್ವಯವಾಗುವ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ಪ್ರದೇಶ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ಮಾಡದೆ ದೇಶದ ಎಲ್ಲಾ ಪೌರರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ.

2. ಪೌರರಿಂದ ವಿದೇಶಿಯರ ಪ್ರತ್ಯೇಕತೆ:

ಭಾರತದ ಗಡಿಯೊಳಗೆ ನೆಲೆಸಿರುವ ವಿದೇಶಿಯರಿಗೆ ಭಾರತೀಯ ಪೌರರ ಹಕ್ಕುಗಳನ್ನು ನೀಡಲಾಗಿಲ್ಲ. ಸಂವಿಧಾನದ 15, 16, 20 ಹಾಗೂ 29ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿರುವ ಹಕ್ಕುಗಳನ್ನು ಭಾರತೀಯ ಪೌರರಿಗೆ ಮಾತ್ರ ನೀಡಲಾಗಿದೆ. ಉಳಿದ ಹಕ್ಕುಗಳನ್ನು ಮಾತ್ರ ವಿದೇಶಿಯರು ಅನುಭವಿಸಲು ಅವಕಾಶ ನೀಡಲಾಗಿದೆ.

3. ಸವಿಸ್ತಾರ:

ಮೂಲಭೂತ ಹಕ್ಕುಗಳ ಕುರಿತು ಭಾರತದ ಸಂವಿಧಾನದಲ್ಲಿ ಸುಧೀರ್ಘವಾಗಿ ವಿವರಣೆ ನೀಡಲಾಗಿದೆ. ಮೂರನೇ ಭಾಗದ 14 ರಿಂದ 35ನೇ ವಿಧಿಯವರೆಗೆ ಅಂದರೆ 24 ವಿಧಿಗಳನ್ನು ಮೂಲಭೂತ ಹಕ್ಕುಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ ಮೂಲಭೂತ ಹಕ್ಕಿನ ವ್ಯಾಪ್ತಿ ಹಾಗೂ ಮಿತಿಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

4. ಅಲ್ಪ ಸಂಖ್ಯಾತ ಹಿತರಕ್ಷಣೆಗೆ ಅನುವು:

ಭಾರತದ ಮೂಲಭೂತ ಹಕ್ಕುಗಳಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅವರಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಹಕ್ಕನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ.

5. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಕೊರತೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನಾಗರಿಕ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಮಾತ್ರ ನೀಡಿ ಆಹಾರ, ಆರೋಗ್ಯ, ಉದ್ಯೋಗ, ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಹಕ್ಕುಗಳಿಗೆ ಅಗತ್ಯ ಆದ್ಯತೆಗಳನ್ನು ನೀಡಲಾಗಿಲ್ಲ.

6. ಮಿತಿಗಳ ಹೇರಿಕೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ನಿರಂಕುಶವಾದವುಗಳಲ್ಲ. ಪ್ರತಿಯೊಂದು ಹಕ್ಕು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಾರ್ವಜನಿಕ ಶಾಂತಿ, ಕಾನೂನು ವ್ಯವಸ್ಥೆ ಹಾಗೂ ದೇಶದ ಅಖಂಡತೆಯ ಕಾರಣಕ್ಕೆ ಸೂಕ್ತವಾದ ನಿರ್ಬಂಧಗಳನ್ನು ಮೂಲಭೂತ ಹಕ್ಕುಗಳ ವಿಷಯದಲ್ಲಿ ಹೇರಲಾಗಿದೆ.

7. ನ್ಯಾಯಾಂಗ ರಕ್ಷಣೆ:

ಭಾರತದ ಪ್ರಜೆಗಳು ಪಡೆದ ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ಬೆಂಬಲವಿದೆ. ಪ್ರಜೆಗಳ ಹಕ್ಕುಗಳಿಗೆ ತೊಂದರೆಗಳು ಉಂಟಾಗುತ್ತವೆ ಎಂದೆನಿಸಿದಾಗ ಪ್ರಜೆಯಾದವನು ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಬಹುದು. ನ್ಯಾಯಾಲಯಗಳ ಮೂಲಕ ವ್ಯಕ್ತಿಯಾದವನು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ನ್ಯಾಯಾಂಗವು ಪ್ರಜೆಗಳ ಹಕ್ಕುಗಳ ರಕ್ಷಣೆಯ ಭರವಸೆಯನ್ನೂ ನೀಡುತ್ತವೆ.

8. ತಿದ್ದುಪಡಿಗೆ ಆಸ್ಪದ:

ಭಾರತದ ಸಂವಿಧಾನದಿಂದ ನೀಡಲ್ಪಟ್ಟ ಮೂಲಭೂತ ಹಕ್ಕುಗಳು ಶಾಶ್ವತವಾದ ರೂಪವನ್ನು ಪಡೆದಿಲ್ಲ. ಅವುಗಳನ್ನು ಸಂದರ್ಭಗಳಿಗನುಗುಣವಾಗಿ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡಲಾಗಿದೆ. ವಿಶೇಷ ಬಹುಮತದೊಂದಿಗೆ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡಬಹುದು. ಉದಾ: ಆಸ್ತಿಯ ಹಕ್ಕನ್ನು ಸಂಸತ್ತು ತಿದ್ದುಪಡಿ ಮಾಡಿ ರದ್ದುಗೊಳಿಸಿತು.

9. ಅಮಾನತಿಗೆ ಅವಕಾಶ:

ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನತ್ತಿನಲ್ಲಿಡಲಾಯಿತು. ಇದರೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹಕ್ಕುಗಳನ್ನು ಸಹ ಸಂಸತ್ತು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ.

10. ಸಂವಿಧಾನಾತ್ಮಕ ಸ್ಥಾನಮಾನ:                 

ಮೂಲಭೂತ ಹಕ್ಕುಗಳು ಭಾರತದ ಸಂವಿಧಾನದ ಅವಿಭಾಜ್ಯ ಅಂಗಗಳಾಗಿವೆ. ಸಾಮಾನ್ಯ ಶಾಸನಗಳು ಇವುಗಳಿಗೆ ವಿರುದ್ಧವಾದ ಅಂಶಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂವಿಧಾನಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಲಾಗುತ್ತದೆ.

ಉಪಸಂಹಾರ

ಒಟ್ಟಿನಲ್ಲಿ, ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿವೆ. ಇವು ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕತ್ವವನ್ನೂ ಕಲಿಸುತ್ತವೆ. ಹಕ್ಕುಗಳೊಂದಿಗೆ ಕರ್ತವ್ಯಗಳ ಅರಿವು ಬೆಳೆಸಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಅದರಿಂದ ಮೂಲಭೂತ ಹಕ್ಕುಗಳ ಜ್ಞಾನವು ಪ್ರತಿಯೊಬ್ಬ ಭಾರತೀಯನಿಗೂ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆ ಮತ್ತು ಅದರ ತಾತ್ವಿಕತೆ

“ಪ್ರಸ್ತಾವನೆ ಸಂವಿಧಾನದ ಸತ್ವ. ಇದು ಸಂವಿಧಾನದ ಯೋಗ್ಯತೆಯನ್ನು ಅಳೆಯಲು ಇರುವ ಒಂದು ಅಳತೆಗೋಲು”

  • ಪಂಡಿತ್‌ ಠಾಕೂರ್‌ ದಾಸ್‌ ಭಾರ್ಗವ

ಪೀಠಿಕೆ: ಸಾಮಾನ್ಯವಾಗಿ ದೇಶಾದ್ಯಂತ ಹಲವಾರು ಲೇಖಕರು ಬರೆದ ಗ್ರಂಥಗಳನ್ನು ಅವಲೋಕಿಸಿದಾಗ ಅವುಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿರುತ್ತವೆ. ಈ ಪೀಠಿಕೆಗಳು ಇಡೀ ಗ್ರಂಥದ ಒಳನೋಟವನ್ನು ಒದಗಿಸುತ್ತದೆ. ಹಾಗೇ ಜಗತ್ತಿನ ಪ್ರತಿಯೊಂದು ಸಂವಿಧಾನಗಳು ಪೂರ್ವ ಪೀಠಿಕೆಗಳನ್ನು ಒಳಗೊಂಡಿವೆ. ಹಾಗೆಯೇ ಭಾರತದ ಸಂವಿಧಾನ ರಚನಾಕಾರರು ಉದಾರವಾದಿ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವನ್ನು ನಿರ್ದೇಶಿಸಲು ಹಾಗೂ ನಿಯಂತ್ರಿಸಲು ತಯಾರಿಸಿದ ಭಾರತ ಸಂವಿಧಾನದಲ್ಲೂ ಪ್ರಸ್ತಾವನೆಯನ್ನು ಅಳವಡಿಸಲು ಮುಂದಾದರು. ಅಮೇರಿಕದ ಸಂವಿಧಾನದ ಪ್ರಸ್ತಾವನೆಯಿಂದ ಪ್ರಭಾವಿತಗೊಂಡ ಭಾರತವೂ ಸಹ ತನ್ನ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಂಡಿತು. ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ರಷ್ಯಾ ಹಾಗೂ ಫ್ರಾನ್ಸ್‌ ಕ್ರಾಂತಿಯ ಮೌಲ್ಯಗಳನ್ನು ಕಾಣಬಹುದಾಗಿದೆ. ಪ್ರಸ್ತಾವನೆಯಲ್ಲಿ ಸಂವಿಧಾನದ ವಿವಿಧ ಅಂಶಗಳು, ಲಕ್ಷಣಗಳು, ಆದರ್ಶಗಳು ಹಾಗೂ ಗುರಿ ಮತ್ತು ಉದ್ದೇಶಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಸಂವಿಧಾನದ ಪೂರ್ವ ಪೀಠಿಕೆಯನ್ನು “ಸಂವಿಧಾನದ ಮುಖಪುಟ” ಎಂದು ಕರೆಯಲಾಗಿದೆ.

1. ಪ್ರಸ್ತಾವನೆಯ ಅರ್ಥ: (Meaning of the preamble)

ಆಕ್ಸ್ ಫರ್ಡ್‌ ಅಡ್ವಾನ್ಸ್‌ ಲರ್ನರ್‌ ಡಿಕ್ಷನರಿ ಪ್ರಕಾರ ಪ್ರಸ್ತಾವನೆ ಎಂದರೆ ಯಾವುದೇ ಗ್ರಂಥ ಅಥವಾ ಬರಹ ರೂಪದ ದಾಖಲೆಯ ಪರಿಚಯಾತ್ಮಕ ಭಾಗವಾಗಿದೆ. ಸಂವಿಧಾನ ಒಳಗೊಂಡಿರುವ ಮೌಲ್ಯ, ತತ್ವಗಳು, ಸಿದ್ಧಾಂತಗಳು, ಗುರಿಗಳು ಹಾಗೂ ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಸಂವಿಧಾನದ ಸರಳವಾದ ಭಾಗವೇ ಪ್ರಸ್ತಾವನೆ ಎಂದು ಹೇಳಬಹುದು. ಸಾಮಾನ್ಯವಾಗಿ ಪ್ರಸ್ತಾವನೆಯು ಸಂವಿಧಾನ ರಚನಾಕಾರರು ಮಹತ್ವ ನೀಡಿದ ಮೌಲ್ಯಗಳು, ಪಾಲಿಸಿದ ಬಹುಮುಖ್ಯ ತತ್ವಗಳು, ಪ್ರಜೆಗಳು ಹೊಂದಿರಬೇಕಾದ ಹಕ್ಕುಗಳು ಹಾಗೂ ರಾಜ್ಯದ ಸ್ವರೂಪವನ್ನು ಪ್ರತಿಫಲಿಸುತ್ತದೆ.

ಪ್ರಸ್ತಾವನೆಯು ಸಂವಿಧಾನದ ಒಂದು ಭಾಗವಲ್ಲದಿದ್ದರೂ ಪೀಠಿಕೆಯಂತಿದ್ದು ಭಾರತದ ರಾಜಕೀಯ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ಪ್ರಸ್ತಾವನೆಯನ್ನು ಕೆಲವರು ʻʻಸಂವಿಧಾನದ ಒಡವೆʻʻ ಎಂದರೆ, ಕೆ.ಎಂ. ಮುನ್ಸಿಯವರು ಇದನ್ನು ʻʻರಾಜಕೀಯ ಜಾತಕʻʻ ಎಂದು ಬಣ್ಣಿಸಿದರು.

ಇದರ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲದಿದ್ದರೂ ಇದರ ಪ್ರಾಮುಖ್ಯತೆ ಮತ್ತು ಉಪಯುಕ್ತತೆಯನ್ನು ಸುಪ್ರೀಂಕೋರ್ಟ್ ಅನೇಕ ತೀರ್ಪುಗಳಲ್ಲಿ ತಿಳಿಸಿದೆ. ಬೆರುಬಾರಿ ಮೊಕದ್ದಮೆಯಲ್ಲಿ ಸುಪ್ರೀಂಕೋರ್ಟ್ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಲಿಲ್ಲ. ಆದರೆ 1973ರ ಕೇಶವಾನಂದ ಭಾರತಿ ಮೊಕದ್ದಮೆಯಲ್ಲಿ ಪ್ರಸ್ತಾವನೆಯನ್ನು ಸಂವಿಧಾನದ ಭಾಗವೆಂದು ಪರಿಗಣಿಸಿತು. ಇದರಲ್ಲಿ ಉಲ್ಲೇಖಿಸಿರುವ ಪದಗಳು ಅರ್ಥಗರ್ಭಿತವಾಗಿದ್ದು ರಚನಾತ್ಮಕ ತತ್ವಗಳನ್ನು ಮತ್ತು ಭಾವನೆಗಳನ್ನು ಒಳಗೊಂಡಿದೆ.

2. ಪ್ರಸ್ತಾವನೆಯ ಹಿನ್ನೆಲೆ: (Background of the preamble)

ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನದಲ್ಲಿ 1946 ಡಿಸೆಂಬರ್ 13 ರಂದು ಜವಾಹರ್ಲಾಲ್ ನೆಹರು ಅವರು ಧ್ಯೇಯಗಳ ನಿರ್ಣಯಗಳನ್ನು ಮಂಡಿಸಿದರು. ಈ ಧ್ಯೇಯಗಳ ನಿರ್ಣಯವು ಸಂವಿಧಾನ ರಚನಾ ಸಭೆಯು ಯಾವ ತತ್ವಗಳು, ಮೌಲ್ಯಗಳು, ಸಿದ್ಧಾಂತಗಳು ಹಾಗೂ ಗುರಿಗಳನ್ನು ಆಧರಿಸಿ ಸಂವಿಧಾನ ರಚಿಸಬೇಕೆಂಬ ಅಂಶಗಳನ್ನು ಒಳಗೊಂಡಿತ್ತು. ಸಾರ್ವಭೌಮತೆ, ಪ್ರಜಾಪ್ರಭುತ್ವ, ಗಣತಂತ್ರ, ಜನತಾ ಪ್ರಾಧಿಕಾರ, ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರ ರಕ್ಷಣೆ ಮುಂತಾದ ನಿರ್ಣಯಗಳನ್ನು ಸಂವಿಧಾನ ರಚನಾ ಸಭೆಯಲ್ಲಿ ಆಳವಾಗಿ ಚರ್ಚಿಸಲಾಯಿತು. ಮುಂದೆ 1947 ಜನವರಿ 22ರಂದು ಈ ಧ್ಯೇಯಗಳ ನಿರ್ಣಯವನ್ನು ಸಂವಿಧಾನ ರಚನಾ ಸಭೆಯು ಅಂಗೀಕರಿಸಿ ಅದರಂತೆ ಕಾರ್ಯರಂಭ ಮಾಡಿತು. 1947 ಅಕ್ಟೋಬರ್ 17ರಂದು ಧ್ಯೇಯಗಳ ನಿರ್ಣಯದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿ ಸಂವಿಧಾನ ರಚನಾ ಸಭೆಯು ಅದನ್ನೇ ಸಂವಿಧಾನ ಪ್ರಸ್ತಾವನೆಯನ್ನಾಗಿ ಅಳವಡಿಸಿಕೊಳ್ಳಲು ತೀರ್ಮಾನಿಸಿತು.

3. ಪ್ರಸ್ತಾವನೆಯ ಪಠ್ಯ: (Text of the preamble) 

ಭಾರತದ ಸಂವಿಧಾನದ ಪ್ರಸ್ತಾವನೆಯು ಸಂವಿಧಾನಕ್ಕೆ 1976ರಲ್ಲಿ ಅಳವಡಿಸಲಾದ 42ನೇ ತಿದ್ದುಪಡಿಯ ನಂತರ ಹೀಗೆ ಆರಂಭವಾಗುತ್ತದೆ.

ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ

ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ವ್ಯವಸ್ಥೆಗೊಳಿಸಲು 

ಮತ್ತು ಅದರ ಎಲ್ಲಾ ಪೌರರಿಗೆ

ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯ,

ವಿಚಾರ, ಅಭಿವ್ಯಕ್ತಿ, ನಂಬಿಕೆ, ಧರ್ಮ ಮತ್ತು ಉಪಾಸನಾ ಸ್ವಾತಂತ್ರ್ಯ

ಸ್ಥಾನಮಾನ ಮತ್ತು ಅವಕಾಶಗಳಲ್ಲಿ ಸಮಾನತೆ

ಎಲ್ಲರಿಗೂ ದೊರೆಯುವಂತೆ ಮಾಡುವುದಕ್ಕೆ

ವ್ಯಕ್ತಿ ಗೌರವ ಮತ್ತು ರಾಷ್ಟ್ರದ ಏಕತೆ ಮತ್ತು ಸಮಗ್ರತೆಯನ್ನು

ರಕ್ಷಿಸಿ, ಭ್ರಾತೃ ಭಾವನೆಯನ್ನು ಎಲ್ಲರಲ್ಲೂ ವೃದ್ಧಿಗೊಳಿಸುವುದಕ್ಕಾಗಿ

ದೃಢಸಂಕಲ್ಪ ಮಾಡಿ

ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ನವೆಂಬರ್ 26 1949 ರಂದು ಈ ಸಂವಿಧಾನವನ್ನು ಅಂಗೀಕರಿಸಿ ಕಾನೂನು ರೂಪದಲ್ಲಿ ಆತ್ಮಾರ್ಪಿತ ಮಾಡಿಕೊಂಡಿದ್ದೇವೆ.

ಮೂಲ ಸಂವಿಧಾನ ಪೀಠಿಕೆಯಲ್ಲಿ ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ ಎಂಬ ಪದಗಳಿದ್ದವು. ಅವನ್ನು 1976ರ 42ನೇ ಸಂವಿಧಾನಿಕ ತಿದ್ದುಪಡಿ ಮೂಲಕ ಸಮಾಜವಾದಿ ಹಾಗೂ ಜಾತ್ಯತೀತ ಎಂಬ ಪದಗಳನ್ನು ಸೇರಿಸಲಾಯಿತು. ಅದೇ ರೀತಿ ದೇಶದ ಏಕತೆ ಎಂಬ ಪದವನ್ನು ಬದಲಿಸಿ ದೇಶದ ಏಕತೆ ಮತ್ತು ಸಮಗ್ರತೆ ಎಂಬ ಪದವನ್ನು ಸೇರಿಸಲಾಗಿದೆ.

ಉಪಸಂಹಾರ

ಒಟ್ಟಾರೆ, ಭಾರತೀಯ ಸಂವಿಧಾನದ ಪ್ರಸ್ತಾವನೆ ಸಂವಿಧಾನದ ತಾತ್ವಿಕ ನೆಲೆಯನ್ನು ಸ್ಪಷ್ಟಪಡಿಸುತ್ತದೆ. ಇದು ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯವನ್ನು ಭರವಸೆ ನೀಡುವ ಮಹತ್ವದ ಘೋಷಣೆಯಾಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಸ್ತಾವನೆ ಪ್ರಮುಖ ಪಾತ್ರ ವಹಿಸುತ್ತದೆ. ಆದುದರಿಂದ, ಸಂವಿಧಾನದ ಆತ್ಮವನ್ನು ಅರ್ಥಮಾಡಿಕೊಳ್ಳಲು ಪ್ರಸ್ತಾವನೆಯ ಅಧ್ಯಯನ ಅನಿವಾರ್ಯವಾಗಿದೆ.

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಸಂವಿಧಾನದ ಪ್ರಸ್ತಾವನೆಯ ಲಕ್ಷಣಗಳು ಅಥವಾ ತಾತ್ವಿಕತೆ

ಭಾರತದ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗಿನಂತೆ ನೋಡೋಣ,

 

1.  ಭಾರತದ ಪ್ರಜೆಗಳಾದ ನಾವು: (We the people of india) 

 ಭಾರತದ ಸಂವಿಧಾನ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಎಂದು ಆರಂಭಗೊಂಡು ನಮ್ಮ ಸಂವಿಧಾನವನ್ನು ನವೆಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ಅಂತ್ಯಗೊಂಡಿದೆ. ಅಂದರೆ ಇದರ ಅರ್ಥ ಭಾರತದ ಸಂವಿಧಾನವು ಭಾರತೀಯರಿಂದಲೇ ರಚಿತಗೊಂಡಿದೆ ಎಂದರ್ಥ. ಸಂವಿಧಾನ ರಚನಾ ಸಭೆಯ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗಿದ್ದರೂ ಪ್ರಜೆಗಳ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಚರ್ಚಿಸಿ ದೇಶಕ್ಕೆ ಸೂಕ್ತವಾದ ಸಂವಿಧಾನವನ್ನು ರಚಿಸಿದರು. ಹೆಚ್ಚು ಕಡಿಮೆ ದೇಶದ ಎಲ್ಲಾ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡಿದ್ದು ಸಂವಿಧಾನ ರಚನಾ ಸಭೆ ಎಲ್ಲರ ಹಿತರಕ್ಷಣೆ ಮತ್ತು ಅಶೋತ್ತರಗಳನ್ನು ಕಾಪಾಡುವಲ್ಲಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಸಂವಿಧಾನ ರಚನಾ ಸಭೆಯ ಸದಸ್ಯರು ಭಾರತದ ಪ್ರಜೆಗಳಾದ ನಾವು ಎಂಬ ಘೋಷಣೆಯ ಮೂಲಕ ಸಂವಿಧಾನವನ್ನು ಅಂಗೀಕರಿಸಿದ್ದನ್ನು ಕೆಲವರು ಟೀಸಿದ್ದಾರೆ. ಏಕೆಂದರೆ ವಾಸ್ತವವಾಗಿ ಭಾರತೀಯರೆಲ್ಲರೂ ಸಂವಿಧಾನದ ರಚನೆಯಲ್ಲಿ ಭಾಗವಹಿಸಲಿಲ್ಲ.

2.  ಸಾರ್ವಭೌಮ ರಾಷ್ಟ್ರ: (Sovereign state)

ಪ್ರಸ್ತಾವನೆ ತಿಳಿಸಿರುವ ಹಾಗೆ ಭಾರತವು ಒಂದು ಸರ್ವತಂತ್ರ ಸ್ವತಂತ್ರವುಳ್ಳ ಸಾರ್ವಭೌಮ ರಾಷ್ಟ್ರ. ಭಾರತವು ವಿಶ್ವದ ಯಾವುದೇ ದೇಶಗಳ ಅದೀನಕ್ಕೊಳಪಟ್ಟ ರಾಷ್ಟ್ರವಲ್ಲ. ಸ್ವಾತಂತ್ರ ನಂತರ ಭಾರತವು ಯಾವುದೇ ವಿದೇಶಿ ಶಕ್ತಿಗೆ ಒಳಗಾಗದೆ ತನ್ನ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳನ್ನು ತಾನೇ ನಿರ್ವಹಿಸುತ್ತಿದೆ. ಸ್ವತಂತ್ರ ರಾಷ್ಟ್ರ ಕಾಮನ್‌ವೆಲ್ತ್ನಲ್ಲಿ ಸದಸ್ಯ ರಾಷ್ಟ್ರವಾಗಿದ್ದರೂ ತನ್ನ ಸ್ವಾತಂತ್ರವನ್ನಾಗಲಿ ಅಥವಾ ಅಲಿಪ್ತ ನೀತಿಯನ್ನಾಗಲಿ ಕಳೆದುಕೊಂಡಿಲ್ಲ. ಬ್ರಿಟಿಷ್ ರಾಣಿ ಮುಖ್ಯಸ್ಥರಾಗಿರುವ ಕಾಮನ್ವೆಲ್ತ್‌ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಹಕಾರವನ್ನುಂಟು ಮಾಡಲು ಸಹಾಯಕವಾಗಿದೆ. ತನಗೆ ಬೇಡವಾದರೆ ಕಾಮನ್ವೆಲ್ತ್ ನಿಂದ ಹೊರಗೆ ಬರುವ ಅಧಿಕಾರ ಭಾರತಕ್ಕೆ ಇದೆ. ಭಾರತವು ಸ್ವ-ಇಚ್ಛೆಯಿಂದ ಕಾಮನ್ವೆಲ್ತನ ಸದಸ್ಯ ರಾಷ್ಟ್ರವಾಗಿರುವುದರಿಂದ ಅದು ಸ್ವ ಇಚ್ಛೆಯಿಂದ ಹೊರಬರುವ ಅಧಿಕಾರವನ್ನು ಹೊಂದಿದೆ. 

3. ಸಮಾಜವಾದಿ ರಾಷ್ಟ್ರ: (Socialist) 

ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಸಮಾನವಾದ ಸಮಾಜಕ್ಕೆ ಅಡಿಗಲ್ಲನ್ನು ಹಾಕುವ ದೃಷ್ಟಿಯಿಂದ ಭಾರತವು ಸಮಾಜವಾದವನ್ನು ಅನುಸರಿಸಿತು. ಪ್ರಸ್ತಾವನೆಯಲ್ಲಿಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಮಾಜವಾದಿ ತತ್ವಗಳನ್ನು ಕಾರ್ಯಗತಗೊಳಿಸುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯವನ್ನು ಪ್ರಜೆಗಳಿಗೆ ಒದಗಿಸಿಕೊಡುವಂತೆ ಕರೆ ನೀಡಿದೆ. ಸಮಾಜವಾದಿ ಎಂಬ ಪದವು ಸಂವಿಧಾನದಲ್ಲಿರಲಿಲ್ಲ. ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಸಮಾಜವಾದಿ ಎಂಬ ಪದವನ್ನು 1976 ಡಿಸೆಂಬರ್ 18ರಂದು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು. ಇನ್ನು ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳು ಎಂಬ ಪ್ರತ್ಯೇಕ ಭಾಗವಿದ್ದು ಇದು ರಾಜ್ಯ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಮಾರ್ಗಸೂಚಿಯಾಗಿದೆ. ಇದರಲ್ಲಿ ಸಮಾಜವಾದ, ಉದಾರವಾದ ಹಾಗೂ ಗಾಂಧಿ ತತ್ವಗಳನ್ನು ಅಳವಡಿಸಲಾಗಿದೆ. ಉದಾಹರಣೆ: ಭೂ ಸುಧಾರಣೆ, ಸಂಪನ್ಮೂಲಗಳ ಸಮರ್ಪಕ ಬಳಕೆ, ಸಂಪತ್ತಿನ ಸಮಾನ ಹಂಚಿಕೆ, ಸಮಾನ ಕೆಲಸಕ್ಕೆ ಸಮಾನವಾದ ವೇತನ, ಕಾರ್ಮಿಕರ ಹಾಗೂ ವೃದ್ಧರ ಯೋಗ ಕ್ಷೇಮ ಇವೆ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಬಯಸುತ್ತಿದೆ. ಇವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ನೈತಿಕ ಕರ್ತವ್ಯಗಳೇ ವಿನಹಃ ಅದು ಕಡ್ಡಾಯವಾದದ್ದು ಅಲ್ಲ.

4. ಜಾತ್ಯತೀತ ರಾಷ್ಟ್ರ: (Secular)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಪ್ರಾಧಾನ್ಯತೆಯನ್ನು ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯತೀತತೆ ಎಂದು ಕರೆಯುವರು. ಭಾರತವು ಸರ್ವಧರ್ಮಗಳ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಯಹೂದಿಗಳು, ಜೈನರು ಹಾಗೂ ಬೌದ್ಧರಿದ್ದಾರೆ. ದೇಶದಲ್ಲಿ ಕೋಮು ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಭಾರತ ಲೌಕಿಕ ಹಾಗೂ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಈ ಅಂಶವನ್ನು ಒತ್ತಿ ಹೇಳಲು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಎಂಬ ಪದವನ್ನು ಪ್ರಸ್ತಾವನೆಗೆ 1976ರಲ್ಲಿ ಕೇಂದ್ರ ಸರ್ಕಾರ ಅಳವಡಿಸಿತು. ಸೆಕ್ಯುಲರ್ ಎಂಬ ಪದಕ್ಕೆ ವಿವಿಧ ಅರ್ಥಗಳಿವೆ. ಜಾತ್ಯತೀತತೆ, ಧರ್ಮಾತೀತತೆ, ಧರ್ಮ ನಿರಪೇಕ್ಷತೆ ಹಾಗೂ ಸರ್ವಧರ್ಮ ಸದ್ಭಾವನೆ ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ತಟಸ್ಥವಾಗಿರುವುದು ಜಾತ್ಯತೀತ ತತ್ವ ಎಂದು ಕೆಲವರು ಹೇಳಿದ್ದಾರೆ.  ಜವಹರಲಾಲ್ ನೆಹರು ಅವರು ಜಾತ್ಯತೀತ ಎಂದರೆ ಲೌಕಿಕವಾದ ಅಲ್ಲ ಅದರಲ್ಲಿ ಆಧ್ಯಾತ್ಮಿಕ ಅಂಶಗಳು ಇರುತ್ತವೆ ಎಂದಿದ್ದಾರೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದ್ದು ವ್ಯಕ್ತಿಗಳು ತಮ್ಮ ಆತ್ಮ ಸಾಕ್ಷಿಗೆ ಅನುಸಾರವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪ್ರಚಾರ ಮಾಡುವ ಹಾಗೂ ನಾಸ್ತಿಕವಾಗಿ ಜೀವನ ಸಾಗಿಸುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

 5. ಪ್ರಜಾಸತ್ತಾತ್ಮಕತೆ: (Democratic) 

ದೇಶದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗಿದೆ. ಈ ಪ್ರಜಾಪ್ರಭುತ್ವ ಎಂಬ ಪದವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸರ್ ಹೆನ್ರಿ ಮೈನ್ ರವರು ಪ್ರಜಾಪ್ರಭುತ್ವ ಒಂದು ಸರ್ಕಾರ ಪದ್ಧತಿ ಎಂದು ಹೇಳಿದ್ದಾರೆ. ಅಬ್ರಹಂ ಲಿಂಕನ್ ರವರು ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವು ಮುಕ್ತತೆ ಹಾಗೂ ಪಾರದರ್ಶಕತೆಯನ್ನು ಅವಲಂಬಿಸಿದ್ದು ಪ್ರಜೆಗಳು ತಮ್ಮ ಸರ್ಕಾರವನ್ನು ತಾವೇ ಪ್ರತಿನಿಧಿಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರದ ಸರಿ ತಪ್ಪುಗಳನ್ನು ತಿಳಿಹೇಳಿ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಸರ್ಕಾರ ಸರಿದಾರಿಗೆ ಬಾರದಿದ್ದಾಗ ಬೇಸರಗೊಂಡು ಪ್ರಜೆಗಳು ಸರ್ಕಾರವನ್ನು ಐದು ವರ್ಷಕ್ಕೊಮ್ಮೆ ಬದಲಿಸುವ ಅಧಿಕಾರವನ್ನು ಹೊಂದಿದ್ದಾರೆ.

6. ಗಣರಾಜ್ಯ: (Republic)

ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತರಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ರಿಪಬ್ಲಿಕ್ ಪದವು ಸಹ ವಿವಿಧ ಅರ್ಥಗಳನ್ನು ಹೊಂದಿದೆ. ರಿಪಬ್ಲಿಕ್ ಸರ್ಕಾರ ರಾಜಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಲೀಕಾಕ್ ಹೇಳಿದರೆ, ಅನೇಕ ವ್ಯಕ್ತಿಗಳಿಂದ  ನಡೆಸುವ ಸರ್ಕಾರ ಪದ್ಧತಿಯಾದರೆ ಅದು ರಿಪಬ್ಲಿಕ್ ಎಂದು ಜೆಲಿನೆಕ್ ಹೇಳಿದ್ದಾರೆ. ಹೊಸ ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ಪರಮಾಧಿಕಾರ ಪ್ರಜೆಗಳಿಂದ ಮತ್ತು ಅವರಿಂದ ಆಯ್ಕೆಯಾದ ಪ್ರತಿನಿಧಿಗಳ ಅಥವಾ‌ ಅಧಿಕಾರಿಗಳ ಕೈಯಲ್ಲಿ ಇರುವುದೇ ಗಣರಾಜ್ಯ. ಒಟ್ಟಿನಲ್ಲಿ ಭಾರತ ಸರ್ಕಾರವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದೇ ಆಗಿದೆ. ರಾಷ್ಟ್ರದ ಮುಖ್ಯಸ್ಥರು ಚುನಾವಣೆಯ ಮೂಲಕ ಆಯ್ಕೆಯಾಗುವ ಪದ್ಧತಿಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಹಾಗೂ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳೆಂದು ಸಹ ನಿಗದಿಪಡಿಸಲಾಗಿದೆ. ಹೀಗೆ ಅಮೆರಿಕಾದ ಹಾಗೆ ಭಾರತವು ಗಣರಾಜ್ಯವಾಗಿದೆ. ಆದರೆ ಇಂಗ್ಲೆಂಡ್ ರಾಜ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ವಿನಹ ಗಣರಾಜ್ಯವಾಗಿಲ್ಲ. ಇಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿರುವ ರಾಣಿ ಅಥವಾ ರಾಜ ಪ್ರಜೆಗಳಿಂದ ಆಯ್ಕೆ ಆಗುವುದಿಲ್ಲ.

7. ನ್ಯಾಯ: (Judiciary) 

 ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಎದ್ದು ಕಾಣುತ್ತಿದ್ದ ಸಾಮಾಜಿಕ ಅಸಮಾನತೆಗಳಾದ ಕರಿಯ-ಬಿಳಿಯ, ಮೇಲು-ಕೀಳು, ಸೃಶ್ಯ- ಅಸ್ಪೃಶ್ಯ, ಮೇಲುಜಾತಿ, ಕೀಳು ಜಾತಿ ಎಂದು ವಿಂಗಡಿಸಿ ಒಂದು ಜಾತಿಯನ್ನಂತೂ ಸಮಾಜದಿಂದ ಹೊರಗಿಡಲಾಗಿತ್ತು. ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಪಡಿಸಲಾಗಿತ್ತು. ಅವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣಲಾಗುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶವನ್ನು ಸಂವಿಧಾನ ಹೊಂದಿದೆ. ಸಾಮಾಜಿಕ ನ್ಯಾಯವೆಂದರೆ ವಿವಿಧ ವರ್ಗಗಳಲ್ಲಿ ಹಾಗೂ ಜಾತಿಗಳಲ್ಲಿ ಏಕತೆ ಮತ್ತು ಸಮಾನತೆಯ  ಭಾವನೆಯನ್ನು ಉಂಟುಮಾಡುವುದು, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಶ್ರಮಜೀವಿಗಳ ಜೀವನ ಮಟ್ಟವನ್ನು ಸುಧಾರಿಸುವುದು, ಹಾಗೆಯೇ ಬಡತನವನ್ನು ತೊಲಗಿಸಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರಲ್ಲೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಸಂವಿಧಾನದ ಗುರಿಯಾಗಿದೆ. ಮುಂದುವರೆದು ಹಿಂದುಳಿದ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗವನ್ನು ರಾಜಕೀಯ ಉನ್ನತಿ ಸಾಧಿಸಲು ಅನುವು ಮಾಡಿಕೊಡುವುದು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂದು ಪ್ರಸ್ತಾವನೆಯಲ್ಲಿ ಹೇಳಿರುವುದು ಮಾನವೀಯತೆಯ ಹಾಗೂ ಏಕತೆಯ ಸಂಕೇತವಾಗಿದೆ. ಆದರೂ ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಂಪೂರ್ಣವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಜನರ ಬದುಕು ಇಂದಿಗೂ ಹಸನವಾಗಿಲ್ಲ. ಬಡವರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನು ಅಸ್ಪೃಶ್ಯರ ಬಾಳಂತೂ ನರಕದ ಬಾಗಿಲು ತಟ್ಟಿ ಬಂದಂತೆ ಅನಿಸುತ್ತಿದೆ.  ಜಾತಿಯತೆ ಇನ್ನಷ್ಟು ವಿರಾಟ ರೂಪವನ್ನು ತಾಳಿ ಕೇಕೆ ಹಾಕುತ್ತಿದೆ. ಹಿಂದೆಂದಿಗಿಂತಲೂ ಅವರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಅನೇಕರು ಇಂದಿಗೂ ಅನ್ನ, ಬಟ್ಟೆ ಹಾಗೂ ವಸತಿ ಇಲ್ಲದೆ ನರಳುತ್ತಿರುವುದು ನಾಚಿಕೇಡಿನ ವಿಷಯವಾಗಿದೆ. ನಿರ್ಗತಿಕರು ರಸ್ತೆ ಬದಿಯಲ್ಲಿ ಸಿಕ್ಕಿದ್ದನ್ನು ತಿಂದು ಅಲ್ಲೇ ಮಲಗಿ ನರಕದ ಜೀವನವನ್ನು ಅನುಭವಿಸುತ್ತಿರುವುದನ್ನು ನೋಡಿದರೆ ಕರುಳು ಕಿವುಚಿದಂತಾಗುತ್ತದೆ. ಸರ್ಕಾರದ ಯಾವ ಯೋಜನೆಗಳು ಈ ಜನರ ಬವಣೆಯನ್ನು ಈವರೆಗೆ ಕಡಿಮೆ ಮಾಡಿಲ್ಲ.

8. ಸ್ವಾತಂತ್ರ: (Independence)

 ಭಾರತದ ಸಂವಿಧಾನದಲ್ಲಿ ಸ್ವಾತಂತ್ರದ ಪರಿಕಲ್ಪನೆ ಇದೆ. ಪ್ರಸ್ತಾವನೆಯಲ್ಲಿ ವಾಕ್ ಸ್ವಾತಂತ್ರ, ಧರ್ಮ ಸ್ವಾತಂತ್ರ್ಯ, ನಂಬಿಕೆ ಹಾಗೂ ಉಪಾಸನ ಸ್ವಾತಂತ್ರ್ಯಗಳಿಗೆ ಅವಕಾಶ ಕಲ್ಪಿಸಿರುವುದು ಪ್ರಜಾಪ್ರಭುತ್ವದ ಸಂಕೇತವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗಳಿಗೆ ತಮ್ಮ ಸ್ವಾತಂತ್ರವನ್ನು ಅನುಭವಿಸಲು ಅವಕಾಶ ಕೊಡಬೇಕು. ಹಾಗೊಂದು ವೇಳೆ ಕೊಡದಿದ್ದರೆ ಪ್ರಜಾಪ್ರಭುತ್ವ ಬಹುಕಾಲ ಬಾಳಲಾರದು. ಸ್ವಾತಂತ್ರ್ಯವಿಲ್ಲದ ವ್ಯಕ್ತಿ ಸಮಾಜದಲ್ಲಿ ಯಾವ ಪ್ರಯೋಜನಕ್ಕೂ ಬಾರದವನಾಗಿ ಸರ್ಕಾರದ ಗುಲಾಮನಾಗಿ ಬದುಕಬೇಕಾಗುತ್ತದೆ. ಸ್ವಾತಂತ್ರ್ಯ ಉಲ್ಲಂಘನೆಯಾಗದಂತೆ ನ್ಯಾಯಾಲಯಗಳು ಆತನ ನೆರವಿಗೆ ಬರಬೇಕು.

 9. ಸಮಾನತೆ: (Equality)

ಮಾನವನಿಗೆ ಸ್ವಾತಂತ್ರ್ಯ ಹೇಗೆ ಅಗತ್ಯವಾಗಿದೆಯೋ ಹಾಗೆ ಸಮಾನತೆಯು ಮುಖ್ಯವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನತೆಯನ್ನು ಹೊರತುಪಡಿಸಿ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಧರ್ಮ, ಜಾತಿ, ಲಿಂಗ, ಬಣ್ಣ ಹಾಗೂ ವಾಸ ಸ್ಥಳದ ಆಧಾರದ ಮೇಲೆ ಅಸಮಾನತೆಯನ್ನು ಮಾಡಬಾರದು. ಅಸಮಾನತೆಯನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಸಮಾನ ಸ್ಥಾನ ಹಾಗೂ ಸಮಾನ ಹಕ್ಕುಗಳು ಎಲ್ಲರಿಗೂ ಸಿಗಬೇಕು.

10. ಭ್ರಾತೃತ್ವ: (Liberty)

ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರು ಎಲ್ಲ ಭಾರತೀಯರು ಒಂದೇ ಎಂದು ಸಾರುವ ಸಹೋದರ ಭಾವನೆಯನ್ನು ಭ್ರಾತೃತ್ವ ಎಂದು ಕರೆದಿದ್ದಾರೆ. ಭಾರತ ವೈವಿಧ್ಯತೆಯುಳ್ಳ ದೇಶ. ವಿವಿಧ ಧರ್ಮ, ಜಾತಿ ಜನರು ತಮ್ಮದೇ ಆದ ಸಂಪ್ರದಾಯ, ಆಚರಣೆ, ಭಾಷೆಗಳನ್ನು ಹೊಂದಿದ್ದಾರೆ. ಕೋಮು ಜಾತಿಯ ಭಾವನೆಯನ್ನು ಅಳಿಸಿ ಪರಸ್ಪರ ಹೊಂದಾಣಿಕೆಯ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಪರಸ್ಪರರು ಸಹೋದರ ಭಾವನೆಯಿಂದ ಬಾಳಬೇಕು.

ಉಪಸಂಹಾರ:

ಒಟ್ಟಿನಲ್ಲಿ, ಸಂವಿಧಾನದ ಪ್ರಸ್ತಾವನೆ ಭಾರತದ ಆತ್ಮ ಮತ್ತು ದಿಕ್ಕುಸೂಚಿಯಾಗಿದೆ. ಇದು ಕೇವಲ ಕಾನೂನು ಪರಿಚಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಘೋಷಣೆಯಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾರ್ಯರೂಪಕ್ಕೆ ತರುವುದೇ ಸಂವಿಧಾನದ ನಿಜವಾದ ಆಶಯ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ.

ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನದ ಲಕ್ಷಣಗಳು

ಭಾರತದ ಸಂವಿಧಾನ ಒಂದು ಸಾಮಾಜಿಕ ದಾಖಲೆ – ಗ್ರಾನ್ ವಿಲ್ಲೆ ಅಸಿಸ್ಟೆಂಟ್

ವಿಶಾಲ ಜನಸಂಖ್ಯೆ, ಭಾಷಾ ವೈವಿಧ್ಯತೆ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ಹೊಂದಿರುವ ಭಾರತದ ಆಡಳಿತಕ್ಕೆ ಸಂವಿಧಾನವೇ ಆಧಾರವಾಗಿದೆ. ಇದು ಕೇಂದ್ರ–ರಾಜ್ಯ ಸಂಬಂಧಗಳನ್ನು ಸಮನ್ವಯಗೊಳಿಸುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಇದು ಬಲವಾದ ಅಡಿಪಾಯವಾಗಿದೆ.

1. ಲಿಖಿತ ಹಾಗೂ ಬೃಹತ್ ಸಂವಿಧಾನ: 

ಭಾರತದ ಸಂವಿಧಾನವು ಪ್ರಪಂಚದಲ್ಲಿ ಅತ್ಯಂತ ವಿಸ್ತಾರವಾದ ಹಾಗೂ ಬೃಹತ್ ಗಾತ್ರದಿಂದ ಕೂಡಿದೆ. ಇದು ಅತಿ ಸೂಕ್ಷ್ಮ ವಿಷಯದಿಂದ ಹಿಡಿದು ಎಲ್ಲಾ ವಿಷಯಗಳನ್ನು ಯಾವುದೇ ಅನುಮಾನ, ಗೊಂದಲ ಹಾಗೂ ಘರ್ಷಣೆಗೆ ಎಡೆ ಮಾಡಿಕೊಡದೆ ಸವಿಸ್ತಾರವಾದ ಬಹುರೂಪದಲ್ಲಿದೆ. ಭಾರತದ ಸಂವಿಧಾನದ ಬೃಹತ್ ಗಾತ್ರವನ್ನು ಆನೆಯ ಗಾತ್ರಕ್ಕೆ ಹೋಲಿಸಿ ಆನೆಯ ಗಾತ್ರದ ಸಂವಿಧಾನ ಎನ್ನುವರು. ಆದರೆ ಭಾರತದ ಶ್ರೀಮಂತ ಚರಿತ್ರೆ ಸಂಸ್ಕೃತಿ ಹಾಗೂ ವಿಭಿನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆಯನ್ನು ಗಮನಿಸಿದಾಗ ಸಂವಿಧಾನದ ಗಾತ್ರ ದೊಡ್ಡದೇನದಲ್ಲ ಎಂದು ಹೇಳಬಹುದು. ಈ ಸಂವಿಧಾನದಲ್ಲಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಲಾಗಿದೆ. ಪೌರತ್ವ, ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳು, ಸಂಯುಕ್ತ ಪದ್ಧತಿ, ತುರ್ತು ಪರಿಸ್ಥಿತಿ ಅಧಿಕಾರಗಳು, ಸ್ವತಂತ್ರ ನ್ಯಾಯಾಂಗ ಪದ್ಧತಿ, ಚುನಾವಣೆಗಳು, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ರಕ್ಷಣೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರಚನೆ ಮತ್ತು ಅವುಗಳ ನಡುವಿನ ಸಂಬಂಧಗಳ ವಿಷಯಗಳನ್ನು ಸಂವಿಧಾನ ಹೊಂದಿದೆ. 1949 ನವೆಂಬರ್ 26ರಂದು ಅಂಗೀಕರಿಸಿದ ಸಂವಿಧಾನದಲ್ಲಿ 395 ವಿಧಿಗಳು 8 ಅನುಸೂಚಿಗಳು ಇದ್ದವು. ಕಾಲಕಾಲಕ್ಕೆ ಸಂವಿಧಾನದಲ್ಲಿ ತಿದ್ದುಪಡಿಗಳ ಆದ ಕಾರಣ ಸಂವಿಧಾನದ ವಿಧಿಗಳಲ್ಲಿ ಏರುಪೇರಾಗಿದೆ. ಕೆಲವು ವಿಧಿಗಳು ರದ್ದಾದರೆ ಇನ್ನು ಕೆಲವು ವಿಧಿಗಳು ಹೊಸದಾಗಿ ಸೇರಿಸಲ್ಪಟ್ಟವುಗಳಾಗಿವೆ. ಹೀಗಾಗಿ ಪ್ರಸ್ತುತ 460ಕ್ಕೂ ಹೆಚ್ಚು ವಿಧಿಗಳು, 25 ಭಾಗಗಳು ಹಾಗೂ 12 ಅಧಿಸೂಚಿಗಳು ಇವೆ. ಆದರೂ ವಿಧಿಗಳ ಮೊದಲ ಕ್ರಮ ಸಂಖ್ಯೆ ಮಾತ್ರ ಬದಲಾವಣೆಯಾಗಿಲ್ಲ. 1950 ರಿಂದ ಈವರೆಗೆ ಒಟ್ಟು 104 ಬಾರಿ ಸಂವಿಧಾನದ ವಿಧಿಗಳು ತಿದ್ದುಪಡಿಗೆ ಒಳಗಾಗಿವೆ.

2.  ಪ್ರಸ್ತಾವನೆ: 

ಸಂವಿಧಾನದ ತತ್ವಗಳು, ಮೌಲ್ಯಗಳು, ಗುರಿ ಹಾಗೂ ಉದ್ದೇಶಗಳನ್ನು ತಿಳಿಸುವ ಸಂವಿಧಾನದ ಭಾಗವನ್ನು ಪ್ರಸ್ತಾವನೆ ಅಥವಾ ಪೂರ್ವ ಪೀಠಿಕೆ ಎಂದು ಕರೆಯಲಾಗಿದೆ. ಅಮೇರಿಕ ಸಂವಿಧಾನದ ಪ್ರಭಾವಕ್ಕೆ ಒಳಗಾಗಿ ಭಾರತೀಯ ಪರಿಸರಕ್ಕೆ ಹೊಂದಿಕೊಳ್ಳುವ ಹಾಗೆ ಸಂವಿಧಾನದಲ್ಲಿ ಪ್ರಸ್ತಾವನೆಯನ್ನು ಅಳವಡಿಸಿಕೊಳ್ಳಲಾಗಿದೆ. ಭಾರತದ ಪ್ರಜೆಗಳಾದ ನಾವು ಎಂದು ಆರಂಭವಾಗುವ ಭಾರತದ ಸಂವಿಧಾನದ ಪ್ರಸ್ತಾವನೆಯೂ ಈ ಸಂವಿಧಾನವನ್ನು ಅಂಗೀಕರಿಸಿ ಅಧಿನಿಯಮಿತಗೊಳಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂಬುದಾಗಿ ಮುಕ್ತಾಯಗೊಳ್ಳುತ್ತದೆ. ಕೆ. ಎಂ. ಮುನ್ಸಿಯವರು ಸಂವಿಧಾನದ ಪೂರ್ವ ಪೀಠಿಕೆಯನ್ನು ಸಂವಿಧಾನದ ಜಾತಕ ಎಂದು ಕರೆದರೆ, ಮತ್ತೊಬ್ಬ ಚಿಂತಕರು ಇದನ್ನು ”ಸಂವಿಧಾನದ ಒಡವೆ” ಎಂದು ಕರೆದಿದ್ದಾರೆ.

3. ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ: 

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ಭಾರತವನ್ನು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವೆಂದು ಘೋಷಿಸಿದೆ. ಹೀಗಾಗಿ ಭಾರತದ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳಲ್ಲಿ ಹೊರಗಿನವರು ತಲೆಹಾಕಲು ಸಾಧ್ಯವಿಲ್ಲ. ಎಲ್ಲಾ ವಿಷಯಗಳಲ್ಲಿ ಭಾರತ ಸಂಪೂರ್ಣ ಸ್ವತಂತ್ರವನ್ನು ಪಡೆದುಕೊಂಡು ಒಂದು ಸಾರ್ವಭೌಮ ದೇಶವಾಗಿದೆ. ಇಲ್ಲಿ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ಪ್ರಜೆಗಳ ಆಶಯದಂತೆ ಪ್ರಜೆಗಳ ಕಲ್ಯಾಣಕ್ಕಾಗಿ ದುಡಿಯಬೇಕು. ಪ್ರತಿನಿಧಿಗಳು ಚುನಾವಣಾ ಪ್ರಕ್ರಿಯೆ ಮೂಲಕ ಆಯ್ಕೆಯಾಗುತ್ತಾರೆ. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಸ್ತ್ರೀ ಪುರುಷರು ಮತದಾನ ಮಾಡುವ ಹಕ್ಕುವನ್ನು ಹೊಂದಿದ್ದಾರೆ. ದೇಶದ ಮುಖ್ಯಸ್ಥರು ಜನರಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಯ್ಕೆಯಾಗುತ್ತಿದ್ದರೆ. ಅದನ್ನು ಗಣರಾಜ್ಯ ಎಂದು ಕರೆಯುತ್ತಾರೆ. ಭಾರತದ ರಾಷ್ಟ್ರಪತಿಯು ರಾಜ್ಯಸಭೆ, ಲೋಕಸಭೆ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭಾ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆಯಾಗುವ ಕಾರಣ ಭಾರತವು ಗಣರಾಜ್ಯವಾಗಿದೆ ಎಂಬುದಕ್ಕೆ ಪುಷ್ಠಿ ನೀಡಿದಂತಾಗಿದೆ.

4. ಭಾಗಶಃ ನಮ್ಯ ಮತ್ತು ಭಾಗಶಃ ಅನಮ್ಯ ಸಂವಿಧಾನ: 

ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸದೆ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು ನಮ್ಯ ಎಂದು, ಯಾವ ಸಂವಿಧಾನವನ್ನು ವಿಶೇಷ ವಿಧಾನವನ್ನು ಅನುಸರಿಸಿ ಸುಲಭವಾಗಿ ತಿದ್ದುಪಡಿ ಮಾಡಬಹುದು ಅದನ್ನು  ಅನಮ್ಯ ಸಂವಿಧಾನ ಎಂದು ಕರೆಯುವರು. ಭಾರತದಲ್ಲಿ ಸಂವಿಧಾನದ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಲು ಸಂಸತ್ತಿನಲ್ಲಿ ಅರ್ಧಕ್ಕಿಂತ ಕಡಿಮೆ ಇಲ್ಲದಂತೆ ರಾಜ್ಯಗಳು ಅನುಮೋದಿಸಬೇಕಾಗುತ್ತದೆ. ಉದಾಹರಣೆ: ರಾಜ್ಯದ ಹೆಸರಿನ ಬದಲಾವಣೆ, ರಾಜ್ಯಗಳ ಗಡಿ ಭಾಗಗಳ ಬದಲಾವಣೆ ಹಾಗೂ ರಾಜ್ಯ ಶಾಸಕಾಂಗದಲ್ಲಿ ಮೇಲ್ಮನೆಯ ರಚನೆ ಅಥವಾ ರದ್ದುಗೊಳಿಸುವುದು ಇತ್ಯಾದಿಗಳನ್ನು ಸರಳ ಬಹುಮತದ ಮೂಲಕ ಬದಲಾಯಿಸಬಹುದು. ಹೀಗಾಗಿ ಭಾರತದ ಸಂವಿಧಾನವು ಇಂಗ್ಲೆಂಡ್ ಸಂವಿಧಾನದಂತೆ ಸುಲಭವೂ ಆಗಿರದೆ ಅಮೆರಿಕಾದ ಸಂವಿಧಾನದಂತೆ ಕಠಿಣವೂ ಆಗಿರದೆ ಇವೆರಡರ ಸಮ್ಮಿಶ್ರದ ಲಕ್ಷಣಗಳಿಂದ ಕೂಡಿದೆ ಎಂದು ಹೇಳಬಹುದು.

5. ಸಂಸದೀಯ ಮಾದರಿ ಸರ್ಕಾರ: 

ನಮ್ಮ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿದೆ. ಯಾವ ದೇಶವು ಸಂಸದೀಯ ಮಾದರಿ ಸರ್ಕಾರವನ್ನು ಹೊಂದಿರುವುದೋ ಆ ದೇಶದ ಮುಖ್ಯಸ್ಥರು ಹೆಸರಿಗೆ ಮಾತ್ರ ಅಧಿಕಾರವನ್ನು ಹೊಂದಿರುತ್ತಾನೆ. ದೇಶದ ಎಲ್ಲಾ ಅಧಿಕಾರವೂ ಸಂಸತ್ತಿ(ಮಂತ್ರಿಮಂಡಲ)ಕ್ಕೆ ಒಳಪಟ್ಟಿರುತ್ತದೆ. ಉದಾಹರಣೆ: ಇಂಗ್ಲೆಂಡ್ ಹಾಗೂ ಭಾರತದಲ್ಲಿ ಅಧ್ಯಕ್ಷ ಹಾಗೂ ರಾಜರುಗಳು ನಾಮ ಮಾತ್ರ ಕಾರ್ಯಾಂಗ ಅಧಿಕಾರಿಗಳಾಗಿದ್ದು ನೈಜ ಅಧಿಕಾರಕ್ಕೆ ಮಂತ್ರಿಮಂಡಲ ಹೊಣೆಯಾಗಿರುತ್ತದೆ. ಸಂವಿಧಾನವು ಅಧ್ಯಕ್ಷರಿಗೆ ಸಾಕಷ್ಟು ಅಧಿಕಾರಗಳನ್ನು ನೀಡಿದೆಯಾದರೂ ಕೇವಲ ಅನಿವಾರ್ಯ ಸಂಬಂಧಗಳಲ್ಲಿ ಮಾತ್ರ ಅವರು ತಮ್ಮ ಅಧಿಕಾರವನ್ನು ಚಲಾಯಿಸಲು ಅವಕಾಶವಿರುತ್ತದೆ. ಸಾಮಾನ್ಯ ಪರಿಸ್ಥಿತಿಯಲ್ಲಿ ರಾಷ್ಟ್ರಪತಿಗಳು ಮಂತ್ರಿಮಂಡಲದ ಆದೇಶದಂತೆ ಎಲ್ಲಾ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ.

6. ಸಂಯುಕ್ತ ಮತ್ತು ಏಕೀಕೃತ ಸಂವಿಧಾನ: 

“ ಕೇಂದ್ರ ಮತ್ತು ಪ್ರಾಂತ್ಯ ಎಂಬ ಎರಡು ರೀತಿಯ ಸರ್ಕಾರಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಗೆ ಸಂಯುಕ್ತ ವ್ಯವಸ್ಥೆ” ಎಂದು, ಕೇಂದ್ರ ಸರ್ಕಾರ ಪ್ರಭಲವಾಗಿದ್ದು ರಾಜ್ಯ ಸರ್ಕಾರಗಳು ಕೇಂದ್ರದ ನಿಯಂತ್ರಣದಲ್ಲಿರುವ ವ್ಯವಸ್ಥೆಯನ್ನು ಏಕಾತ್ಮಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ.

ಭಾರತದ ಸಂವಿಧಾನದ ಮೊದಲನೆಯ ವಿಧಿಯು ಭಾರತವು ರಾಜ್ಯಗಳ ಒಕ್ಕೂಟವಾಗಿದೆ ಎಂದು ವಿವರಿಸಿದೆ. ಆದರೆ ಸಂಯುಕ್ತ ವ್ಯವಸ್ಥೆಯಾಗಿದೆ ಎಂದು ಎಲ್ಲಿಯೂ ತಿಳಿಸಿಲ್ಲ. ಆದರೂ ಸಂಯುಕ್ತ ವ್ಯವಸ್ಥೆಯ ಲಕ್ಷಣಗಳಾದ ಸಂವಿಧಾನದ ಶ್ರೇಷ್ಠತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರ ಹಂಚಿಕೆ, ಸುಪ್ರೀಂಕೋರ್ಟ್ ಇರುವಿಕೆ, ಅನಮ್ಯ ತಿದ್ದುಪಡಿ ಮುಂತಾದವುಗಳನ್ನು ಅಳವಡಿಸಿಕೊಂಡಿದೆ. ಜೊತೆಗೆ ಏಕಾತ್ಮಕ ಅಂಶಗಳಾಗದ ಏಕ ಪೌರತ್ವ, ಏಕ ಸಂವಿಧಾನ, ಪ್ರಬಲ ಕೇಂದ್ರ ಸರ್ಕಾರ, ಅಖಿಲ ಭಾರತೀಯ ಸೇವೆಗಳು ಹಾಗೂ ಸಾಮಾನ್ಯ ಚುನಾವಣಾ ಆಯೋಗ ಮುಂತಾದವುಗಳನ್ನು ಅಳವಡಿಸಿಕೊಳ್ಳಲಾಗಿದೆ. ಆದುದರಿಂದ ಭಾರತವನ್ನು ಅರೆ ಸಂಯುಕ್ತ ಸರ್ಕಾರ ಎಂದು ಕರೆಯಲಾಗಿದೆ. ಕೆ. ಸಿ. ವ್ಹೀರ್ ಅವರು ಭಾರತದ ಸಂವಿಧಾನವು ಭಾವನಾತ್ಮಕ ಸಂಯುಕ್ತ ವ್ಯವಸ್ಥೆಯಾಗಿದ್ದು ಸಂಯುಕ್ತ ಲಕ್ಷಣಗಳನ್ನು ಹೊಂದಿದ ಏಕಾತ್ಮಕ ವ್ಯವಸ್ಥೆ ಎಂದಿದ್ದಾರೆ.

7. ಮೂಲಭೂತ ಹಕ್ಕುಗಳು: 

ಭಾರತದ ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಿ ಪ್ರಜೆಗಳ ಸ್ವಾತಂತ್ರ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಾರತದ ಸಂವಿಧಾನ ರಚನಾಕಾರರು ಸಂವಿಧಾನದ ಮೂರನೇ ಭಾಗದ 12 ರಿಂದ 15 ನೇ ವಿಧಿಯವರೆಗೆ ಏಳು ಮೂಲಭೂತ ಹಕ್ಕುಗಳನ್ನು ನೀಡಿದ್ದರು. ಆದರೆ 1978 ರಲ್ಲಿ 44ನೇ ವಿಧಿಗೆ ತಿದ್ದುಪಡಿ ತಂದು ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ಕೈಬಿಡಲಾಯಿತು. ಪ್ರಸ್ತುತ ಈಗ ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧ ಹಕ್ಕು, ಧಾರ್ಮಿಕ ಹಕ್ಕು, ಸಾಂಸ್ಕೃತಿಕ ಮತ್ತು ವಿದ್ಯಾಭ್ಯಾಸದ ಹಕ್ಕು ಹಾಗೂ ಸಂವಿಧಾನಾತ್ಮಕ ಪರಿಹಾರ ಹಕ್ಕುಗಳು ಇವೆ. ಭಾರತೀಯ ಪೌರರು ಮೂಲಭೂತ ಹಕ್ಕುಗಳನ್ನು ಹೊಂದಿದ್ದರೂ ತುರ್ತುಪರಿಸ್ಥಿತಿಯಲ್ಲಿ ಅವುಗಳನ್ನು ಕಸಿದುಕೊಳ್ಳಬಹುದಾಗಿದೆ. ಹಾಗೂ ಸಾಮಾನ್ಯ ಪರಿಸ್ಥಿತಿಯಲ್ಲಿ ಅವುಗಳನ್ನು ಮಿತಿಗೊಳಿಸಬಹುದಾಗಿದೆ.

8. ರಾಜ್ಯ ನಿರ್ದೇಶಕ ತತ್ವಗಳು :(Directive principles of state policy)

ದೇಶದ ಪ್ರಜೆಗಳ ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸಂವಿಧಾನ ನೀಡಿರುವ ಮಾರ್ಗದರ್ಶಿ ಸೂತ್ರಗಳಿಗೆ ರಾಜ್ಯ ನಿರ್ದೇಶಕ ತತ್ವಗಳು ಎಂದು ಕರೆಯುತ್ತಾರೆ. ಸಂವಿಧಾನದ ನಾಲ್ಕನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದ್ದು ಇವು ಸರ್ಕಾರವು ಅನುಸರಿಸಬೇಕಾದ ನೀತಿ ನಿಯಮಗಳ ಬಗೆಗೆ ನಿರ್ದೇಶನಗಳನ್ನು ನೀಡುತ್ತವೆ. ಒಂದು ವೇಳೆ ಸರ್ಕಾರ ಅವುಗಳನ್ನು ಪಾಲಿಸದೆ ಹೋದರೆ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗುವಂತಿಲ್ಲ. ನ್ಯಾಯಾಲಯಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಸರ್ಕಾರದ ಮೇಲೆ ಬಲವಂತವಾಗಿಯೂ ಹೇರುವಂತಿಲ್ಲ. ದೇಶದ ಸಂವಿಧಾನದ ಹೊರತಾಗಿ ಬೇರೆ ಯಾವುದೇ ದೇಶಗಳ ಸಂವಿಧಾನದಲ್ಲಿ ಇಂತಹ ನಿರ್ದೇಶಕ ತತ್ವಗಳು ಕಂಡುಬರುವುದಿಲ್ಲ. ಆದರೂ ನಿರ್ದೇಶಕ ತತ್ವಗಳನ್ನು ರಾಜ್ಯ ಆಡಳಿತದಲ್ಲಿ ಮೂಲಭೂತವೆಂದು ಪರಿಗಣಿಸಲಾಗಿದ್ದು ಸರ್ಕಾರಗಳು ರಾಜ್ಯ ನಿರ್ದೇಶಕ ತತ್ವಗಳನ್ನು ಜಾರಿಗೆ ತರಬೇಕೆಂದು ಹೇಳಲಾಗಿದೆ. ಇಲ್ಲವಾದರೆ ಡಾಕ್ಟರ್ ಅಂಬೇಡ್ಕರ್ ಹೇಳಿದಂತೆ ಜನರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ರಾಜ್ಯ ನಿರ್ದೇಶಕ ತತ್ವಗಳು ಸರ್ಕಾರದ ದಾರಿ ದೀಪಗಳಾಗಿವೆ. ರಾಜ್ಯ ನಿರ್ದೇಶಕ ತತ್ವಗಳು ಗಾಂಧೀವಾದ, ಸಮಾಜವಾದ ಹಾಗೂ ಉದಾರವಾದ ತತ್ವಗಳಿಂದ ಸ್ಪೂರ್ತಿ ಪಡೆದಿವೆ.

9. ಮೂಲಭೂತ ಕರ್ತವ್ಯಗಳು:  (Fundamental Duties)

ಮೂಲಭೂತ ಕರ್ತವ್ಯಗಳು ದೇಶದ ಪ್ರಜೆಗಳು ದೇಶಕ್ಕಾಗಿ ನಿರ್ವಹಿಸಬೇಕಾದ ಸರಳ ಕಾರ್ಯಗಳಾಗಿವೆ. ಆರಂಭದಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯ ಪ್ರಜೆಗಳು ನಿರ್ವಹಿಸಬಹುದಾದ ಮೂಲಭೂತ ಕರ್ತವ್ಯಗಳ ಪ್ರಸ್ತಾಪವಿರಲಿಲ್ಲ. 1976ರ 42ನೇ ಸಂವಿಧಾನದ ತಿದ್ದುಪಡಿಯ ಮೂಲಕ ಭಾಗ ನಾಲ್ಕು A 51ನೇ ವಿಧಿ ಅಡಿಯಲ್ಲಿ ಸೇರಿಸಲಾಯಿತು. ಪ್ರತಿ ಹಕ್ಕಿಗೂ ಅನುರೂಪವಾದ ಕರ್ತವ್ಯವಿರುವುದರಿಂದ ರಾಜ್ಯದಿಂದ ಹಕ್ಕುಗಳನ್ನು ಪಡೆದು ಅನುಭವಿಸುವ  ಪ್ರಜೆಗಳು ಕೃತಜ್ಞತಾಪೂರ್ವಕವಾಗಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ದೇಶ ಸೇವೆಗೆ ಕರೆ ಬಂದರೆ ದೇಶ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ರಾಷ್ಟ್ರಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು. ದೇಶದ ಏಕತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಕರ್ತವ್ಯವಾಗಿದೆ.

10. ಸ್ವತಂತ್ರ ನ್ಯಾಯಾಂಗ: (Independent judiciary)

ಭಾರತದಲ್ಲಿ ಪ್ರಜೆಗಳಿಗೆ ಸಮಾನವಾಗಿ ನ್ಯಾಯ ವಿತರಣೆ ಮಾಡುವ ಉದ್ದೇಶದಿಂದ ಭಾರತದ ಸಂವಿಧಾನವು ನ್ಯಾಯಾಂಗವನ್ನು ಶಾಸಕಾಂಗ ಹಾಗೂ ಕಾರ್ಯಾಂಗದಿಂದ ಬೇರ್ಪಡಿಸಿದೆ. ಏಕೆಂದರೆ ನ್ಯಾಯಾಂಗವು ಶಾಸಕಾಂಗ ಮತ್ತು ಕಾರ್ಯಾಂಗದ ಅಂಕಿತದಲ್ಲಿದ್ದರೆ ಅವುಗಳು ನ್ಯಾಯಾಂಗವನ್ನು ದುರುಪಯೋಗಪಡಿಸಿಕೊಳ್ಳಬಹುದೆಂಬ ಗುಮಾನಿಯಿಂದ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರ ನಂಬಿಕೆ ಉಳಿಯುವಂತೆ ಮಾಡಲು ಮತ್ತು ನ್ಯಾಯಾಂಗದ ಪಾವಿತ್ರ್ಯತೆಯನ್ನು ಕಾಪಾಡಲು ಸಂವಿಧಾನ ರಚನಾ ಸಮಿತಿಯ ಸದಸ್ಯರು ನ್ಯಾಯಾಂಗವನ್ನು ಉಳಿದ ಎರಡು ಅಂಗಗಳಿಂದ ದೂರವಿರಿಸಿದರು. ಹೀಗಾಗಿ ಇಂದಿಗೂ ನ್ಯಾಯಾಂಗವು ಪ್ರತ್ಯೇಕವಾಗಿದ್ದು ನ್ಯಾಯಾಧೀಶರ ಸಂಬಳವನ್ನು ಸರ್ಕಾರ ನೀಡದೇ ಬದಲಾಗಿ “ಭಾರತದ ಸಂಗ್ರಹ ನಿಧಿಯಿಂದ ಭರಿಸಲಾಗುತ್ತದೆ.” ನ್ಯಾಯಾಧೀಶರ ನೇಮಕಾತಿಯಲ್ಲಿಯೂ ಸಹ ಸರ್ಕಾರದ ಪಾತ್ರವೇನೂ ಇರುವುದಿಲ್ಲ.

11. ನ್ಯಾಯಾಂಗ ವಿಮರ್ಶೆ:

ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಸಂವಿಧಾನದ ನಿಯಮಾವಳಿಗನುಗುಣವಾಗಿ ಕಾನೂನುಗಳನ್ನು ರೂಪಿಸಬೇಕು. ಶಾಸಕಾಂಗಗಳು ರೂಪಿಸುವ ಕಾನೂನುಗಳು ಸಂವಿಧಾನ ವಿರುದ್ಧವಾಗಿದ್ದರೆ ಅವುಗಳನ್ನು ಅಸಿಂಧು ಅಥವಾ ಕಾನೂನುಬಾಹಿರ ಎಂದು ಘೋಷಿಸುವ ಅಧಿಕಾರ ನ್ಯಾಯಾಂಗಕ್ಕೆ ಇದೆ. ಇದನ್ನೇ ನ್ಯಾಯಿಕ ವಿಮರ್ಶೆ ಎಂದು ಕರೆಯುತ್ತಾರೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ವಿರುದ್ಧವಾಗಿ ವರ್ತಿಸುವಂತಿಲ್ಲ. ನ್ಯಾಯಾಂಗ ಒಮ್ಮೆ ಕೊಟ್ಟ ತೀರ್ಪನ್ನು ಯಾರೂ ಪ್ರಶ್ನಿಸುವಂತಿಲ್ಲ. ಸಂವಿಧಾನದ ಅರ್ಥವನ್ನು ಯಾವುದೇ ಪಕ್ಷಪಾತವಿಲ್ಲದೆ ವ್ಯಕ್ತಪಡಿಸಲು ನ್ಯಾಯಾಲಯಗಳಿಗೆ ಈ ಅಧಿಕಾರವನ್ನು ಕೊಡಲಾಗಿಯೇ ವಿನಹಃ ಶಾಸಕಾಂಗಗಳ ಅಧಿಕಾರಗಳನ್ನು ಮೊಟಕುಗೊಳಿಸುವ ಉದ್ದೇಶದಿಂದಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ. ನ್ಯಾಯಾಂಗ ವಿಮರ್ಶೆಯ ಮೂಲಕ ನ್ಯಾಯಾಲಯವು ಸಂವಿಧಾನದ ಸಮತೋಲನ ಚಕ್ರದಂತೆ ಕಾರ್ಯನಿರ್ವಹಿಸುತ್ತದೆ.

12. ಜಾತ್ಯಾತೀತ ರಾಷ್ಟ್ರ: (Secular state)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಮಹತ್ವ ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಂಡರೆ ಅದನ್ನು ಜಾತ್ಯತೀತ ಎಂದು ಕರೆಯಲಾಗುವುದು. ಈ ಜಾತ್ಯತೀತ ಎಂಬ ಪದವು 1950ರ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಇದನ್ನು 1976ರಲ್ಲಿ 42ನೇ ಸಾಂವಿಧಾನಿಕ ತಿದ್ದುಪಡಿಯ ಮೂಲಕ ಸೇರಿಸಲಾಯಿತು. ಜಾತ್ಯತೀತ ಎಂಬ ಪದವು ಇಂಗ್ಲಿಷ್ ಪದವಾದ ಸೆಕ್ಯುಲರಿಸಂ ಎಂಬ ಪದದಿಂದ ಬಂದಿದೆ. ಇದು ಕನ್ನಡದಲ್ಲಿ ನಾಸ್ತಿಕ ಅಥವಾ ದೈವ ವಿರೋಧಿ ಎಂದರ್ಥವಾಗುತ್ತದೆ. ಭಾರತಕ್ಕೆ ಸಂಬಂಧಿಸಿದಂತೆ ಜಾತ್ಯತೀತ ಪದವನ್ನು ಧರ್ಮ ನಿರಪೇಕ್ಷತೆಯನ್ನು ಸೂಚಿಸಲು ಬಳಸಲಾಯಿತು. ಭಾರತದ ಸಂವಿಧಾನದ ಪ್ರಕಾರ ಭಾರತವು ಜಾತ್ಯತೀತ ದೇಶವಾಗಿದ್ದು ಹಿಂದೂ, ಇಸ್ಲಾಂ, ಜೈನ, ಬೌದ್ಧ, ಕ್ರೈಸ್ತ ಹಾಗೂ ಪಾರ್ಶಿಗಳನ್ನು ಸಮಾನವಾಗಿ ಗೌರವಿಸುತ್ತದೆ. ರಾಜ್ಯವು ಯಾವುದೇ ಧರ್ಮದ ಪರ ಅಥವಾ ವಿರೋಧಿಯಾಗಿರಬಾರದು. ಭಾರತೀಯನು ತನಗೆ ಇಷ್ಟ ಬಂದ ಮತವನ್ನು ಇತರರಿಗೆ ತೊಂದರೆ ಆಗದಂತೆ ಅವಲಂಬಿಸಿ ಪ್ರಚಾರ ಮಾಡಬಹುದಾಗಿದೆ. ಅಸ್ಪೃಶ್ಯತೆಯ ನಿವಾರಣೆಯು ಭಾರತದ ಸಂವಿಧಾನದ ಮಹತ್ತರವಾದ ಆಶಯವಾಗಿದೆ.

13. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ: (Universal Audalt Franchies)

ಜಾತಿ, ಲಿಂಗ, ಧರ್ಮ, ಭಾಷೆ, ಬಡತನ, ಸಿರಿತನ, ಬಣ್ಣ, ಅಂತಸ್ತು, ಆಸ್ತಿ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯ ಮಾಡದೆ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಎಲ್ಲಾ ಪ್ರಜೆಗಳಿಗೆ ಮತದಾನದ ಹಕ್ಕನ್ನು ನೀಡುವ ವ್ಯವಸ್ಥೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದು ಕರೆಯುವರು. ದೇಶದಿಂದ ದೇಶಕ್ಕೆ ವಯಸ್ಕ ಮತದಾನ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತವೆ. ಭಾರತದ ಸಂವಿಧಾನ ಪಿತಾಮಹರು ಸಾರ್ವತ್ರಿಕ ವಯಸ್ಕ ಮತದಾನದ ಪದ್ಧತಿಯನ್ನು ಬೆಂಬಲಿಸಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯಾಚರಣೆಗೆ ಅದನ್ನು ಅಳವಡಿಸಿದರು. ಸಂವಿಧಾನದ 15ನೇ ಭಾಗದಲ್ಲಿರುವ 326 ನೇ ವಿಧಿಯಲ್ಲಿ ವಯಸ್ಕ ಮತದಾನ ಪದ್ಧತಿಯನ್ನು ಪರಿಚಯ ಮಾಡಲಾಯಿತು. ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ 18 ವರ್ಷ ತುಂಬಿದ ಎಲ್ಲರಿಗೂ ಮತದಾನ ಮಾಡುವ ಅವಕಾಶವಿದೆ. 1988ರಲ್ಲಿ ಸಂಸತ್ತು 326 ನೇ ವಿಧಿಯನ್ನು ತಿದ್ದುಪಡಿ ಮಾಡಿ ಮತದಾನದ ವಯಸ್ಸನ್ನು 21ರಿಂದ 18 ವರ್ಷಕ್ಕೆ ಇಳಿಸಿತು. ಈ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿಗಳು 1989ರಲ್ಲಿ ಅಂಕಿತವನ್ನು ಹಾಕಿದರು. ಈ ಪದ್ಧತಿಯು ಪ್ರಜೆಗಳ ಪರಮಾಧಿಕಾರದ ಸಂಕೇತವಾಗಿದೆ. ಸಮಾಜದ ವಿವಿಧ ಜನಾಂಗಗಳಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ಬಂದಿದೆ. ಯಾರನ್ನು, ಯಾವಾಗ ಮತ್ತು ಹೇಗೆ ಆಯ್ಕೆ ಮಾಡಬೇಕೆಂಬ ಸಾಮಾನ್ಯ ಜ್ಞಾನ ಇಂದು ಪ್ರಜ್ಞಾವಂತ ನಾಗರಿಕರಿಗೆ ಬಂದಿದೆ. ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿದ್ದಾರೆ. ತಪ್ಪು ಮಾಡಿದ ಪಕ್ಷವನ್ನು ಪದಚ್ಯುತಿಗೊಳಿಸುವುದರಲ್ಲಿ ಭಾರತೀಯ ಪ್ರಜೆಗಳು  ಧೈರ್ಯ ತೋರುತ್ತಿದ್ದಾರೆ.

ತುರ್ತು ಪರಿಸ್ಥಿತಿಗಳು: (Emergency)

ದೇಶ ಎದುರಿಸಬಹುದಾದ ಅಸಹಜ ಸೈನಿಕ ಸಂವಿಧಾನಾತ್ಮಕ ಅಥವಾ ಆರ್ಥಿಕ ಸನ್ನಿವೇಶಗಳನ್ನು ತುರ್ತು ಪರಿಸ್ಥಿತಿ ಎಂದು ಕರೆಯುತ್ತಾರೆ. ಜರ್ಮನಿಯ ವೈಮರ್ ಸಂವಿಧಾನದಿಂದ ಪ್ರಭಾವಿತರಾದ ಸಂವಿಧಾನ ರಚನಾಕಾರರು 18ನೇ ಭಾಗದ 352 ರಿಂದ 360 ನೇ ವಿಧಿಯವರೆಗೆ ಭವಿಷ್ಯದಲ್ಲಿ ಎದುರಾಗಬಲ್ಲ ಮೂರು ಬಗೆಯ ತುರ್ತು ಪರಿಸ್ಥಿತಿಗಳಿಗೆ ಪರಿಹಾರೋಪಾಯಗಳನ್ನು ನಮೂದಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ತಿಳಿಸಲಾದ ಮೂರು ಬಗೆಯ ತುರ್ತು ಪರಿಸ್ಥಿತಿಗಳೆಂದರೆ,

೧)  352ನೇ ವಿಧಿಯಂತೆ ಬಾಹ್ಯ ಆಕ್ರಮಣ ಅಥವಾ ಆಂತರಿಕ ಸಶಸ್ತ್ರ ಬಂಡಾಯಗಳ ಕಾರಣಕ್ಕೆ ಘೋಷಿಸುವ ತುರ್ತು ಪರಿಸ್ಥಿತಿ.

೨) 356ನೇ ವಿಧಿಯಂತೆ ರಾಜ್ಯವೊಂದರ ಸಂವಿಧಾನಾತ್ಮಕ ಯಂತ್ರ ಕುಸಿದಾಗ ರಾಜ್ಯಪಾಲರಿಂದ ವರದಿ ಪಡೆದು ಆ ರಾಜ್ಯದಲ್ಲಿ ಘೋಷಿಸಲಾಗುವ ರಾಜ್ಯ ತುರ್ತು ಪರಿಸ್ಥಿತಿ.

೩)  360ನೇ ವಿಧಿಯಂತೆ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ತಲೆದೂರಿದಾಗ ಘೋಷಿಸಲಾದ ಆರ್ಥಿಕ ತುರ್ತು ಪರಿಸ್ಥಿತಿ. ಸಾಮಾನ್ಯವಾಗಿ ತುರ್ತು ಪರಿಸ್ಥಿತಿ ಜಾರಿಯಾದಾಗ ಕೇಂದ್ರ ಸರ್ಕಾರ ಪ್ರಬಲವಾಗಿ ರಾಜ್ಯ ಸರ್ಕಾರಗಳು ದುರ್ಬಲವಾಗುತ್ತವೆ.

15. ಎರವಲು ಸಂವಿಧಾನ: 

ಭಾರತದ ಸಂವಿಧಾನ ರಚನೆಯಲ್ಲಿ ಸಂವಿಧಾನ ರಚನೆಗಾರರು ಜಗತ್ತಿನ ಬೇರೆಬೇರೆ ದೇಶಗಳ ಸಂವಿಧಾನಗಳ ಉತ್ತಮ ಅಂಶಗಳನ್ನು ಅಳವಡಿಸಿಕೊಂಡರು. ಆದರೆ ಯಥಾವತ್ತಾಗಿ ಬೇರೆ ಸಂವಿಧಾನಗಳ ನಿಯಮಾವಳಿಗಳನ್ನು ಸೇರಿಸದೆ ಭಾರತದ ಪರಿಸ್ಥಿತಿಗೆ ತಕ್ಕ ಹಾಗೆ ಅವುಗಳಲ್ಲಿ ಅಗತ್ಯ ಮಾರ್ಪಾಡಿನೊಂದಿಗೆ ಅಳವಡಿಸಲು ಪ್ರಯತ್ನಿಸಿದ್ದಾರೆ. ಮೂಲಭೂತ ಹಕ್ಕುಗಳು, ಸರ್ವೋಚ್ಚ ನ್ಯಾಯಾಲಯ, ಪ್ರಸ್ತಾವನೆ ಮುಂತಾದವುಗಳ ಮೇಲೆ ಅಮೇರಿಕ ಸಂವಿಧಾನದ ಪ್ರಭಾವವಾಗಿದ್ದರೆ. ಸಂಸತ್ತು, ಮಂತ್ರಿ ಮಂಡಲ, ಶಾಸನ ರಚನೆ ಮುಂತಾದವುಗಳ ಮೇಲೆ ಇಂಗ್ಲೆಂಡ್ ಸಂವಿಧಾನದ ಪ್ರಭಾವ ಹೆಚ್ಚಾಗಿದೆ. ರಾಜ್ಯ ನಿರ್ದೇಶಕ ತತ್ವಗಳು ಐರ್ಲೆಂಡ್ ಸಂವಿಧಾನದಿಂದ ಪ್ರಭಾವಿತವಾಗಿದ್ದರೆ, ತುರ್ತುಪರಿಸ್ಥಿತಿಯು ಜರ್ಮನಿಯ ಸಂವಿಧಾನದಿಂದ ಪ್ರಭಾವಿತವಾಗಿದೆ. ಜೊತೆಗೆ ಕೆನಡಾ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ಸಂವಿಧಾನಗಳು ಹಲವು ವಿಧಗಳಲ್ಲಿ ನೆರವಾಗಿವೆ.

16.  ಏಕ ಪೌರತ್ವ: (One citizenship)

ಭಾರತದಲ್ಲಿ ಏಕ ಪೌರತ್ವ ವ್ಯವಸ್ಥೆ ಇದೆ. ಕಾಶ್ಮೀರಿನಿಂದ ಕನ್ಯಾಕುಮಾರಿಯವರೆಗೆ ಎಲ್ಲಾ ಪ್ರಾಂತ್ಯಗಳ ಜನರು ಸಮಾನ ಹಕ್ಕುಗಳನ್ನು ಹೊಂದಿದ್ದಾರೆ. ಹಾಗೆಯೇ ದೇಶದಾದ್ಯಂತ ಒಂದೇ ಕಾನೂನು ಒಂದೇ ಸಂವಿಧಾನವಿದ್ದು ಎಲ್ಲ ಜನರಿಗೂ ಸಮಾನವಾಗಿ ಅನ್ವಯವಾಗುತ್ತದೆ. ಪ್ರಜೆಗಳು ಯಾವುದೇ ರಾಜ್ಯದಲ್ಲಿ ಜನಿಸಿದರೂ ಎಲ್ಲರೂ ಭಾರತೀಯ ಪ್ರಜೆಗಳೇ ಆಗಿರುತ್ತಾರೆ. ಸಂವಿಧಾನದ 11ನೇ ವಿಧಿ ನೀಡಿರುವ ಅಧಿಕಾರದ ಅನ್ವಯ ಸಂಸತ್ತು ಪೌರತ್ವಕ್ಕೆ ಸಂಬಂಧಿಸಿದಂತೆ 1955ರ ಪೌರತ್ವ ಕಾನೂನನ್ನು ಅಂಗೀಕರಿಸಿತು. ಆ ಪ್ರಕಾರ ಏಕ ಸಂವಿಧಾನ, ಏಕ ಪೌರತ್ವ ಹಾಗೂ ಏಕ ರಾಷ್ಟ್ರ ಭಾಷೆ ಎಂಬುದನ್ನು ತಿಳಿಸಿ ಹೇಳಿದೆ. ಇದರ ಮೂಲ ಉದ್ದೇಶ ದೇಶದ ಐಕ್ಯತೆಯನ್ನು ಸಾಧಿಸುವುದಾಗಿದೆ.

17. ಅಧಿಕಾರ ವಿಕೇಂದ್ರೀಕರಣ: (Decentralization of power)

ಕೇಂದ್ರ ಹಾಗೂ ರಾಜ್ಯಗಳ ನಡುವೆ ಅಧಿಕಾರ ವಿಭಜನೆಯಾಗುವುದನ್ನು ಅಧಿಕಾರ ವಿಕೇಂದ್ರೀಕರಣ ಎಂದು ಕರೆಯಲಾಗುವುದು. ಇಲ್ಲಿ ಮೂರು ವಿಧವಾದ ಅಧಿಕಾರ ಹಂಚಿಕೆಯಾಗುವುದನ್ನು ಕಾಣಬಹುದಾಗಿದೆ. ಕೇಂದ್ರ ಸರ್ಕಾರಕ್ಕೆ 97 ವಿಷಯಗಳನ್ನು, ಕೇಂದ್ರ ಸೂಚಿಯಲ್ಲಿ ರಾಜ್ಯಗಳಿಗೆ 66 ವಿಷಯಗಳನ್ನು ರಾಜ್ಯ ಸೂಚಿಯಲ್ಲಿ ವಿಭಜಿಸುವುದಲ್ಲದೆ, ಸಮವರ್ತಿ ಸೂಚಿಯಲ್ಲಿರುವ ಕೆಲವಾರು ವಿಷಯಗಳ ಮೇಲೆ ಕೇಂದ್ರ ಹಾಗೂ ರಾಜ್ಯಗಳೆರಡೂ ಅಧಿಕಾರವನ್ನು ಹೊಂದಿವೆ. ಈ ಅಧಿಕಾರದ ವಿಭಜನೆಯನ್ನು ನೋಡಿದಾಗ ಕೇಂದ್ರಕ್ಕೆ ರಾಜ್ಯಗಳಿಂದ ಹೆಚ್ಚಿನ ಅಧಿಕಾರಗಳಿರುವುದು ಕಂಡುಬರುತ್ತದೆ.

 18. ಅಖಿಲ ಭಾರತ ಸೇವೆಗಳು: (All indian services)

ಭಾರತದ ಫೆಡರಲ್ ಪದ್ಧತಿಯಲ್ಲಿ ಕೇಂದ್ರ ಹಾಗೂ ರಾಜ್ಯಗಳಿಗೆ ಪ್ರತ್ಯೇಕ ಆಡಳಿತ ಸೇವೆಗಳಿದ್ದರೂ ಸಂವಿಧಾನದ 312ನೇ ವಿಧಿ ಅನ್ವಯ ಅಖಿಲ ಭಾರತ ಸೇವೆಗಳಿಗೆ ಅವಕಾಶ ಮಾಡಲಾಗಿದೆ. ಈ ವಿಧಿಯ ಅನ್ವಯ ರಾಜ್ಯಸಭೆಯ ಶಿಫಾರಸ್ಸಿನ ಆಧಾರದ ಮೇಲೆ ಸಂಸತ್ತು ಅಖಿಲ ಭಾರತ ಸೇವೆಗಳನ್ನು ರಚಿಸಲು ಅಧಿಕಾರ ಪಡೆದಿದೆ. ಕೇಂದ್ರದಲ್ಲಿ ಕೇಂದ್ರ ಲೋಕಸೇವಾ ಆಯೋಗವಿದ್ದು ಅದು ಐಎಎಸ್, ಐಪಿಎಸ್, ಐಎಫ್ಎಸ್, ಐಆರ್‌ಎಸ್ ನಂತಹ  ಪರೀಕ್ಷೆಗಳನ್ನು ನಡೆಸಿ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುತ್ತದೆ. ಇನ್ನು ಪ್ರತಿ ರಾಜ್ಯಗಳಲ್ಲಿ ಒಂದೊಂದು ರಾಜ್ಯ ಲೋಕಸೇವಾ ಆಯೋಗಗಳಿದ್ದು ಕೆಎಎಸ್ ನಂತಹ ಪರೀಕ್ಷೆಗಳನ್ನು ನಡೆಸಿ ಅಧಿಕಾರಿಗಳ ನೇಮಕ ಮಾಡಿ ಆಡಳಿತ ಯಂತ್ರವನ್ನು ಪರಿಣಾಮಕಾರಿಯಾಗಿ ಚುರುಕುಗೊಳಿಸಲಾಗುತ್ತದೆ.

19. ಉಚಿತ ಪ್ರಾಥಮಿಕ ಶಿಕ್ಷಣ: (Free primary education)

ಒಂದು ದೇಶದ ಪ್ರಗತಿಗೆ ಅಲ್ಲಿನ ಜನರೇ ಕಾರಣರಾಗುತ್ತಾರೆ. ಅವರನ್ನು ಪೌರರು ಎಂದು ಕರೆಯಲಾಗುವುದು. ಅವರು ರಾಷ್ಟ್ರದ ಉನ್ನತಿಗಾಗಿ ಹೋರಾಡಬೇಕಾದರೆ ಅಕ್ಷರಸ್ಥರಾಗುವುದು ಬಹಳ ಮುಖ್ಯವಾದುದು. ಅನಕ್ಷರಸ್ಥರಿಂದ ಯಾವ ದೇಶವೂ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗದು. ಆದುದರಿಂದ ಭಾರತದ ಸಂವಿಧಾನದಲ್ಲಿ 14 ವರ್ಷದ ಎಲ್ಲಾ ಮಕ್ಕಳಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡಲು ನಿರ್ದೇಶನ ನೀಡಿದೆ. ಇದರಿಂದ ಅನಕ್ಷರಸ್ಥರ ಸಂಖ್ಯೆ ಕಡಿಮೆಯಾಗಿ ಅಕ್ಷರಸ್ಥರ ಸಂಖ್ಯೆ ಹೆಚ್ಚಾಗಲು ಸಾಧ್ಯವಾಗುತ್ತದೆ.

20. ಸ್ತ್ರೀಯರ ಸ್ಥಾನಮಾನಗಳು: (Position of women)

ಭಾರತದ ಸಂವಿಧಾನದಲ್ಲಿ ಸ್ತ್ರೀಯರಿಗೆ ಪುರುಷನಷ್ಟೇ ಸರಿಸಮಾನವಾದ ಸ್ಥಾನಮಾನಗಳನ್ನು ನೀಡಲಾಗಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವ, ಮತ ಹಾಕುವ ಮತ್ತು ಸರ್ಕಾರಿ ಹುದ್ದೆಗಳನ್ನು ಪಡೆಯುವಾಗ ಮಹಿಳೆಯರಿಗೆ ಶೇಕಡ 33 ರಷ್ಟು ಮೀಸಲಾತಿಯನ್ನು ನೀಡಲಾಗಿದೆ. ಇದರಿಂದ ಮಹಿಳಾ ಸಬಲೀಕರಣ ಸಾಧ್ಯವಾಗಿದೆ. ಪರಿಣಾಮವಾಗಿ ದೇಶದಲ್ಲಿ ಸತತವಾಗಿ 16 ವರ್ಷಗಳವರೆಗೆ ಮಹಿಳೆಯೊಬ್ಬಳು ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿದಳು. 6 ವರ್ಷಗಳ ಕಾಲ ಮಹಿಳೆಯೊಬ್ಬಳು ಕರ್ನಾಟಕ ವಿಧಾನಸಭೆಯ ಅಧ್ಯಕ್ಷಳಾಗಿದ್ದಳು. ಕಿರಣ್‌ ಬೇಡಿ ದೇಶದ ಮೊದಲ ಮಹಿಳಾ ಐ.ಪಿ.ಎಸ್‌ ಅಧಿಕಾರಿಯಾಗಿದ್ದರು. ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುವುದನ್ನು ನೋಡಿದರೆ ಮಹಿಳೆಯರಿಗೆ ಸಂವಿಧಾನದಲ್ಲಿ ನೀಡಿದ ಸಮಾನಾವಕಾಶವೇ ಕಾರಣವಾಗಿದೆ.

ಉಪಸಂಹಾರ

ಭಾರತದ ಸಂವಿಧಾನವು ದೇಶದ ಆಡಳಿತ ವ್ಯವಸ್ಥೆಯ ಹೃದಯವಾಗಿದ್ದು ಪ್ರಜೆಗಳ ಹಕ್ಕುಗಳನ್ನು ಕಾಪಾಡುವ ರಕ್ಷಾಕವಚವಾಗಿದೆ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಬಲಪಡಿಸುತ್ತದೆ. ಕಾಲಾನುಕ್ರಮದಲ್ಲಿ ತಿದ್ದುಪಡಿಗಳ ಮೂಲಕ ಸಮಾಜದ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿರುವುದು ಇದರ ವಿಶೇಷತೆ. ಆದ್ದರಿಂದ ಭಾರತದ ಸಂವಿಧಾನವು ಕೇವಲ ಕಾನೂನು ಪುಸ್ತಕವಲ್ಲ; ಅದು ಭಾರತದ ಆತ್ಮ ಮತ್ತು ದರ್ಶನವಾಗಿದೆ.

ಸಂವಿಧಾನ ರಚನೆಗಾಗಿ ಮಹನೀಯರು ನೀಡಿದ ಕೊಡುಗೆಗಳು

ಸಂವಿಧಾನ ರಚನೆಗಾಗಿ ಮಹನೀಯರು ನೀಡಿದ ಕೊಡುಗೆಗಳು

ಭಾರತದ ಸಂವಿಧಾನದ ರಚನೆಗೆ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೊಡುಗೆಗಳನ್ನು ನೀಡಿದ್ದಾರೆ. ಆ ಪೈಕಿ ಕೆಲವರು ಗಣನೀಯ ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಪ್ರಮುಖ ನಾಯಕರ ಕೊಡುಗೆಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

1. ಜವಾಹರಲಾಲ್ ನೆಹರು ಪಾತ್ರ: 

ಭಾರತದ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜವಹರಲಾಲ್ ನೆಹರು ಅವರು ಸ್ವಾತಂತ್ರದ ಹೊಸ್ತಿಲಲ್ಲಿ ಹಂಗಾಮಿ ಸರ್ಕಾರದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅಲಿಪ್ತ ನೀತಿ, ಪಂಚಶೀಲ ಹಾಗೂ ಪಂಚವಾರ್ಷಿಕ ಯೋಜನೆಗಳಿಗೆ ಅಡಿಪಾಯ ಹಾಕಿ ಪ್ರಜಾಸತ್ತಾತ್ಮಕವಾದ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ಸ್ವಾತಂತ್ರ್ಯ ಚಳುವಳಿಯ ಕಾವು ಅಧಿಕಗೊಂಡ ಕಾಲದಲ್ಲಿ ಅಂದರೆ 1933 ಅಕ್ಟೋಬರ್ 2ರಂದು ಭಾರತದ ಹೊಸ ಸಂವಿಧಾನದ ರಚನೆಗೆ ಅವರು ಪ್ರಥಮ ಬಾರಿ ಬ್ರಿಟಿಷ್ ಸರ್ಕಾರಕ್ಕೆ ಆಗ್ರಹಿಸಿದರು. 1934 ರಲ್ಲಿ ಭಾರತೀಯ ಕಾಂಗ್ರೆಸ್ ಇವರಿಗೆ ಪೂರ್ಣ ಬೆಂಬಲವನ್ನು ನೀಡಿತು. 1938ರಲ್ಲಿ ಹರಿಪುರ ಕಾಂಗ್ರೆಸ್ ಭಾರತಕ್ಕೆ ಹೊಸ ಸಂವಿಧಾನ ರಚಿಸುವಂತೆ ಆಂಗ್ಲರ ಮೇಲೆ ಒತ್ತಡವನ್ನು ಹಾಕುವ ನಿರ್ಣಯವನ್ನು ಅಂಗೀಕರಿಸಿತು

ಆನಂತರ ಜವಾಹರ್ ಲಾಲ್ ನೆಹರು ಅವರು 1946 ಡಿಸೆಂಬರ್ 13ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯೋದ್ದೇಶಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸ್ವಾಯತ್ತ ಪ್ರಾಂತ್ಯಗಳಿಂದ ಕೂಡಿದ ಒಕ್ಕೂಟ, ಜನತಾ ಪರಮಾಧಿಕಾರ, ಭಾರತದ ವಿವಿಧ ಜನಾಂಗಗಳ ಹಕ್ಕುಗಳ ಭರವಸೆ, ಮನುಕುಲದ ಕಲ್ಯಾಣ, ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವ, ಸಂವಿಧಾನ ರಚಿಸುವಾಗ ಮಾಡಬೇಕಾದ ಕಾರ್ಯಗಳು, ಗುರಿಗಳು, ಸಂವಿಧಾನ ಒಳಗೊಳ್ಳಬೇಕಾದ ಆದರ್ಶಗಳು ಹಾಗೂ ಸಂವಿಧಾನ ವ್ಯಾಪ್ತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಂವಿಧಾನ ರಚನಾ ಸಮಿತಿಯು ಪ್ರಮುಖ ವಿಚಾರಗಳ ಚರ್ಚೆಗಾಗಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯ ಅಧ್ಯಕ್ಷೀಯ ಸ್ಥಾನವನ್ನು ನೆಹರೂ ಅವರ ವಹಿಸಿಕೊಂಡಿದ್ದರು. ಈ ಸಮಿತಿಯು ಹಲವಾರು ದಿನಗಳ ಕಾಲ ವಿವಿಧ ರೀತಿಯ ಚರ್ಚೆಗಳನ್ನು ನಡೆಸಿತು. ಆಗ ಜವಾಹರಲಾಲ್ ನೆಹರು ಅವರು ಒಕ್ಕೂಟ ರಚನೆ, ಅಲ್ಪಸಂಖ್ಯಾತರ ಹಕ್ಕುಗಳು, ಭಾಷೆ ಹಾಗೂ ಗಡಿ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಭಾಷಣ ಮಾಡಿದರು. ಇದರ ಜೊತೆಗೆ ಅಂಬೇಡ್ಕರರು ತಾಳುತ್ತಿದ್ದ ನಿಲುವುಗಳಿಗೆ ಬೆಂಬಲವನ್ನು ಸೂಚಿಸುವ ಮೂಲಕ ಸಂವಿಧಾನದ ಬಗ್ಗೆ ಸರ್ವಸಮ್ಮತವಾದ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ನೆಹರು ಪ್ರಯತ್ನಿಸಿದರು.

2. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪಾತ್ರ: (Contribution of Ambedkar)

ಭಾರತದ ಸಂವಿಧಾನ ರಚನಾ ಸಮಿತಿಯು ಕಾರ್ಯ ನಿರ್ವಹಿಸುತ್ತಿರುವ ನಡುವೆಯೇ ಲಾರ್ಡ್ ಮೌಂಟ್ ಬ್ಯಾಟನ್ನರ ಯೋಜನೆಯಂತೆ ದೇಶವನ್ನು ವಿಭಜಿಸಿ ಭಾರತ ಹಾಗೂ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳನ್ನಾಗಿ ಅಸ್ತಿತ್ವಕ್ಕೆ ತರಲಾಯಿತು. ಆಗ ನೂತನವಾಗಿ ವಿಭಜನೆಗೊಂಡ ಪಾಕಿಸ್ತಾನವು ತನ್ನದೇ ಆದ ಹೊಸ ಸಂವಿಧಾನವನ್ನು ಹೊಂದಲು ಅವಕಾಶ ನೀಡಲಾಯಿತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರ್ಪಡೆಯಾದ ಕಾರಣ ಆ ಪ್ರದೇಶದ ಸ್ಥಾನಗಳು ಸಂವಿಧಾನ ರಚನಾ ಸಮಿತಿಯಲ್ಲಿ ಕಡಿತವಾದವು. ಹೀಗಾಗಿ ರಚನಾ ಸಭೆಯ ಸದಸ್ಯರ ಸಂಖ್ಯೆ 389ರಿಂದ 299 ಕ್ಕೆ ಇಳಿಯಿತು. 299 ಸದಸ್ಯರ ಪೈಕಿ ಬ್ರಿಟಿಷ್ ಪ್ರಾಂತ್ಯಗಳಿಂದ 22೯ ಹಾಗೂ ದೇಶಿಯ ಸಂಸ್ಥಾನಗಳಿಂದ 70 ಸದಸ್ಯರು ರಚನಾ ಸಭೆಯಲ್ಲಿ ಉಳಿದುಕೊಂಡರು. ಅಂಬೇಡ್ಕರರು ಮುಸ್ಲಿಂ ಲೀಗ್ ಅಧಿಕಾರದಲ್ಲಿದ್ದ ಪ್ರದೇಶವಾದ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದರು. ಅವರು ಆಯ್ಕೆಗೊಂಡ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ ಕಾರಣ ಅಂಬೇಡ್ಕರ್ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದಲಿತ ಜನಾಂಗ ಭಾರತದಲ್ಲಿಯೇ ಅಧಿಕ ಪ್ರಮಾಣದಲ್ಲಿ ಇರುವಾಗ ಪಾಕಿಸ್ತಾನ ಸಂವಿಧಾನ ರಚನಾ ಸಮಿತಿಯ ಸದಸ್ಯತ್ವವನ್ನು ಪಡೆದುಕೊಂಡು ತಾನೇನು ಸಾಧಿಸಬೇಕಾಗಿದೆ ಎಂಬ ಸ್ಪಷ್ಟ ನಿಲುವು ಅಂಬೇಡ್ಕರರದ್ದಾಗಿತ್ತು. ಬಳಿಕ ಅವರು ಮುಂಬೈ ಪ್ರಾಂತ್ಯದಿಂದ ಆಯ್ಕೆಯಾಗಿ ತಮ್ಮ ಆಳವಾದ ಪಾಂಡಿತ್ಯ, ಸತತ ಅಧ್ಯಯನ, ಹಿತಮಿತವಾದ ಮಾತುಗಾರಿಕೆ, ದೇಶದ ಮುಂದಿನ ದೂರ ದೃಷ್ಟಿ ಮುಂತಾದವುಗಳಿಂದ ಅವರು ದೇಶದ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡರು. 1947 ಆಗಸ್ಟ್ 30 ರಂದು ಡಾ. ಬಿಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಮಿತಿಯಲ್ಲಿ ಅನೇಕರು ಸದಸ್ಯರಾಗಿ ಆಯ್ಕೆಗೊಂಡಿದ್ದರು. ಕರಡು ಸಮಿತಿಯ ಸದಸ್ಯರು ಒಂದಿಲ್ಲ ಒಂದು ಕಾರಣದಿಂದ ಸಭೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಅಂಬೇಡ್ಕರ್ ಒಬ್ಬರೇ ಹಗಲಿರುಳು ಎನ್ನದೆ ನಿರಂತರವಾಗಿ ಸಂವಿಧಾನ ರಚನೆಯಲ್ಲಿ ತೊಡಗಿ ತಮ್ಮ ಇಡೀ ಜೀವನದ ಸರ್ವಸ್ವವನ್ನು ಧಾರೆ ಎರೆದರು.

 ಸತತ ಅಧ್ಯಯನ, ದೂರದೃಷ್ಟಿ ಹಾಗೂ ದೇಹ ಬಾಧೆಯನ್ನು ಲೆಕ್ಕಿಸದೆ ಕರಡು ಪ್ರತಿಯನ್ನು ರಚಿಸಿ ಸಿದ್ಧಗೊಳಿಸಿದರು. ಹೀಗೆ ಸಿದ್ಧಗೊಂಡ ಸಂವಿಧಾನದ ಕರಡು ಪ್ರತಿಯ ಕುರಿತು ದೀರ್ಘಕಾಲದವರೆಗೆ ಚರ್ಚೆಗಳು ನಡೆದವು. ಜನರಿಂದ ಸ್ವೀಕರಿಸಲಾದ ಅಹವಾಲುಗಳು, ಸಲಹೆ ಹಾಗೂ ಸೂಚನೆಗಳನ್ನು ಪರಿಶೀಲಿಸಿ ಅನೇಕ ತಿದ್ದುಪಡಿಗಳನ್ನು ಮಾಡಲಾಯಿತು. ಸಂವಿಧಾನದ ಅಂಗೀಕಾರದ ವೇಳೆ ಸದಸ್ಯರು ಕೇಳುತ್ತಿದ್ದ ಪ್ರಶ್ನೆಗಳು, ವ್ಯಕ್ತಪಡಿಸಿದ ಸಂಶಯ, ಗೊಂದಲಗಳಿಗೆ ಡಾ. ಅಂಬೇಡ್ಕರ್ ನಿರರ್ಗಳವಾಗಿ ಉತ್ತರಿಸಿ ಸದಸ್ಯರುಗಳನ್ನು ಬೆರಗಾಗುವಂತೆ ಮಾಡಿದರು. ದೇಶದ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸುವುದು ಇದೆಯಲ್ಲಾ ಅದು ಒಂದು ಸವಾಲಿನ ಸಂಗತಿ. ಅಂತಹ ಸವಾಲನ್ನು ಎದುರಿಸಿ ನಿಂತ ಧೀಮಂತ ವ್ಯಕ್ತಿ ಡಾಕ್ಟರ್ ಅಂಬೇಡ್ಕರ್. ಹೀಗಾಗಿ ಅವರನ್ನು ಆಧುನಿಕ ಮನು, ಸಂವಿಧಾನ ಶಿಲ್ಪಿ, ಸಂವಿಧಾನ ಪಿತಾಮಹ, ಸಂವಿಧಾನ ಜನಕ ಹಾಗೂ ದಲಿತ ಸೂರ್ಯ ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್‌ ಕೊಡುಗೆಯ ಬಗ್ಗೆ ಭಾರತದ ಮೊದಲ ರಾಷ್ಟ್ರಪತಿ ಡಾ|| ಬಾಬುರಾಜೇಂದ್ರ ಪ್ರಸಾದರು ಹೀಗೆ ಹೇಳಿದ್ದಾರೆ.

ʻʻ ಸಂವಿಧಾನ ಸಭೆಯ ಅಧ್ಯಕ್ಷನಾಗಿ ಪ್ರತಿದಿನ ಚಟುವಟಿಕೆಗಳನ್ನು ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ|| ಬಿ.ಆರ್‌ ಅಂಬೇಡ್ಕರ್‌ ಅವರು ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಾ|| ಬಿ.ಆರ್‌ ಅಂಬೇಡ್ಕರ್‌ರವರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯತ್ತಮ ಕೆಲಸ.

 ಸಂವಿದಾನ ರಚನಾ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಟಿ.ಟಿ. ಕೃಷ್ಣಮಾಚಾರಿ ಹೇಳುತ್ತಾರೆ. ʻʻಸಂವಿಧಾನ ಕರಡು ಸಮಿತಿಗೆ ನೇಮಕವಾದ ೭ ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು. ಆ ಜಾಗಕ್ಕೆ ಬೇರೊಬ್ಬರನ್ನು ನೇಮಕಗೊಳಿಸಲಾಯಿತು. ಆದರೆ ಒಬ್ಬರು ನಿಧನರಾದರು ಅವರ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೇರಿಕಾದಲ್ಲಿಯೇ ಇದ್ದರು. ಅವರ ಜಾಗವನ್ನು ಬೇರೆಯವರು ತುಂಬಲಿಲ್ಲ. ಇನ್ನೊಬ್ಬರು ರಾಜ್ಯದ ಆಡಳಿತದ ಕಾರ್ಯದಲ್ಲಿ ನಿರತರಾಗಿದ್ದರು ಮತ್ತೇ ಇಬ್ಬರು ದೆಹಲಿಯಿಂದ ದೂರವೇ ಉಳಿದರು. ಕಾರಣ ಅವರು ಅನಾರೋಗ್ಯದಿಂದ ನರಳುತ್ತಿದ್ದರು. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ|| ಅಂಬೇಡ್ಕರ್‌ರವರ ಮೇಲೆ ಬಿತ್ತು. ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲಾ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು.

3. ವಲ್ಲಭಭಾಯಿ ಪಟೇಲರ ಕೊಡುಗೆ:(Contribution of Vallabhai Patel)

ಸರ್ದಾರ್ ವಲ್ಲಭಬಾಯಿ ಪಟೇಲರು ಸಹ ಭಾರತ ಸಂವಿಧಾನದ ರಚನೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ಜೊತೆಗೆ ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ನಡುವೆ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಭಾರತೀಯ ಸಂವಿಧಾನ ರಚನೆಯ ಕಾರ್ಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಜನಮನದಲ್ಲಿ ಅಜರಾಮರವಾಗಿ ಉಳಿದರು. ಈ ಕಾರಣದಿಂದ ಪಟೇಲರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ರಚನಾ ಸಭೆಯ ಕೊಡುಗೆಯಲ್ಲಿ ಇವರ ಪಾತ್ರವನ್ನು ಈ ಕೆಳಗಿನಂತೆ ನೋಡಬಹುದು.

೧) ಸುಮಾರು 500ಕ್ಕೂ ಹೆಚ್ಚಿನ ದೇಶಿಯ ಸಂಸ್ಥಾನಗಳನ್ನು ಏಕೀಕರಿಸಿ ಭಾರತದಲ್ಲಿ ಸೇರ್ಪಡೆಗೊಳಿಸಿದ ಅವರ ಕಾರ್ಯ ಪ್ರಪಂಚವೇ ಮೆಚ್ಚುವಂತದ್ದಾಗಿತ್ತು.

೨)  ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಕುರಿತು ಸಂವಿಧಾನ ರಚನಕಾರರ ಗಮನ ಸೆಳೆದು ಭಾರತವನ್ನು ಒಂದು ಒಕ್ಕೂಟ ದೇಶವನ್ನಾಗಿ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.

೩)  ಮೂಲಭೂತ ಹಕ್ಕುಗಳ ಉಪಸಮಿತಿಯ ಮುಖ್ಯಸ್ಥರಾಗಿ ಅವರು ಕೈಗೊಂಡ ಕಾರ್ಯಗಳು ಹೆಚ್ಚು ಜನಪ್ರಿಯಗೊಂಡವು.

೪)  ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಒಕ್ಕೂಟ ವ್ಯವಸ್ಥೆ ರಚನೆಗೆ ತಮ್ಮದೇ ಆದ ಕೊಡುಗೆ ನೀಡಿದರು.

೫)  ಬಹುಸಂಖ್ಯಾತರ ಹಕ್ಕುಗಳೊಂದಿಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಮತೋಲನಗೊಳಿಸಲು ಸಂವಿಧಾನ ರಚನಕಾರರನ್ನು ಒತ್ತಾಯಿಸಿ ಯಶಸ್ವಿಯಾದರು.

೬)  ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯನ್ನು ಪಟೇಲರು ಬೆಂಬಲಿಸಿ ನಾಗರೀಕ ಹಕ್ಕುಗಳು ಜನರಿಗೆ ದೊರೆಯುವಂತೆ ಮಾಡಿದರು.

೭)  ಸಂವಿಧಾನ ರಚನಾ ಸಭೆಯ ವಿವಿಧ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿದರು.

೮)  ಪಟೇಲರು ಅಖಿಲ ಭಾರತದ ಸೇವೆಗಳ ಸೃಷ್ಟಿ ಹಾಗು ರಾಜ್ಯಗಳ ಆಡಳಿತದ ಕುರಿತು ಚರ್ಚಿಸಿ ಜಾರಿಗೊಳಿಸಿದರು. 

ಉಪಸಂಹಾರ

ಭಾರತದ ಸ್ವಾತಂತ್ರ್ಯ ನಂತರ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಿದ ಮಹತ್ವದ ದಾಖಲೆ ಎಂದರೆ ಭಾರತೀಯ ಸಂವಿಧಾನ. ಇದನ್ನು ರೂಪಿಸಲು ಅನೇಕ ಪ್ರಜ್ಞಾವಂತ ನಾಯಕರು ತಮ್ಮ ಬುದ್ಧಿಮತ್ತೆ, ಅನುಭವ ಮತ್ತು ದೂರದೃಷ್ಟಿಯನ್ನು ಸಮರ್ಪಿಸಿದರು. ಅವರಲ್ಲಿಯೇ ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವಲ್ಲಭಭಾಯಿ ಪಟೇಲ ಅವರ ಕೊಡುಗೆಗಳು ಅತ್ಯಂತ ಮಹತ್ವಪೂರ್ಣವಾಗಿವೆ.

ಸಂವಿಧಾನ ಬೇಡಿಕೆಯ ಇತಿಹಾಸ

ಸಂವಿಧಾನ ಬೇಡಿಕೆಯ ಇತಿಹಾಸ

ಸುಮಾರು ೨೦ನೇ ಶತಮಾನದ ದ್ವಿತಿಯಾರ್ಧದಲ್ಲಿ ಭಾರತೀಯರಿಗೆ ಸಂವಿಧಾನದ ಸ್ಪಷ್ಟ ಪರಿಕಲ್ಪನೆಯೇ ಇರಲಿಲ್ಲ. ಇಂತಹ ಸಮಯದಲ್ಲಿಯೇ ಭಾರತೀಯ ರಾಷ್ಟ್ರೀಯತೆಯ ಉದಯ, ಸ್ವದೇಶಿ ಚಳುವಳಿ, ಗಾಂಧಿ ನಾಯಕತ್ವದಲ್ಲಿ ನಡೆದ ಅಸಹಕಾರ ಚಳುವಳಿ, ಖಿಲಾಫತ್‌ ಚಳುವಳಿ ಹಾಗೂ ೧೯೪೨ ಚಲೇಜಾವ್‌ ಚಳುವಳಿಗಳು ಭಾರತೀಯರಲ್ಲಿ ಸಂವಿಧಾನದ ಬಯಕೆಯನ್ನು ಹೆಚ್ಚಿಸುವಂತೆ ಮಾಡಿದವು. ಆರಂಭದಲ್ಲಿ ಸಂವಿಧಾನದ ಕುರಿತು ಭಾರತೀಯರಿಗೆ ಸ್ಪಷ್ಟತೆ ಇರಲಿಲ್ಲ. ಬರಬರುತ್ತಾ ಅದರ ಬಗ್ಗೆ ಕಲ್ಪನೆಗಳು ಮೂಡಲಾರಂಭಿಸಿದವು. ಅಂದಿನಿಂದ ಭಾರತದ ಸಂವಿಧಾನದ ಇತಿಹಾಸ ಪರಿಪೂರ್ಣವಾಗಿ ಸಂವಿಧಾನ ಬೇಡಿಕೆಯ ಇತಿಹಾಸವನ್ನು ಅರಿತುಕೊಳ್ಳುವಂತೆ ಮಾಡಿತು.

  1. ೧೯೧೮ ರ ಡಿಸೆಂಬರ್‌, ೩೩ನೇ ದೆಹಲಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪ್ರಥಮ ಬಾರಿಗೆ ಸಂವಿಧಾನ ರಚನಾ ಬೇಡಿಕೆಯ ನಿರ್ಣಯವನ್ನು ಅಂಗೀಕರಿಸಿತು. ಈ ನಿರ್ಣಯವು ಸ್ವಯಂ ನಿರ್ಧಾರವಾಗಿದ್ದು ಬ್ರಿಟಿಷ್‌ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಥಮ ಪ್ರಯತ್ನ ಇದಾಗಿತ್ತು. ಕಾಲಕಳೆದಂತೆ ಅದೊಂದು ನಿರ್ದಿಷ್ಟ ಬೇಡಿಕೆಯಾಗಿ ರೂಪುಗೊಂಡಿತು.
  2. ೧೯೨೨ ಜನವರಿ ೫ ರಂದು ಮಹಾತ್ಮಾ ಗಾಂಧೀಜಿಯವರು ಯಂಗ್‌ ಇಂಡಿಯಾ ಪತ್ರಿಕೆಗೆ ಬರೆಯುತ್ತಾ ಸ್ವಯಂ ಆಳ್ವಿಕೆಯ ಪರಿಕಲ್ಪನೆಯು ಬ್ರಿಟೀಷ್‌ ಸಂಸತ್ತಿನ ಉಚಿತ ಕೊಡುಗೆಯಾಗಿರದೆ ಭಾರತೀಯರು ತಮ್ಮ ಪ್ರತಿನಿಧಿಗಳ ಮೂಲಕ ತಮ್ಮ ಮನದಾಸೆಯನ್ನು ಅಭಿವ್ಯಕ್ತಗೊಳಿಸುವುದಾಗಿದೆ.
  3. 1924 ಫೆಬ್ರವರಿ 8ರಂದು ಸ್ವರಾಜ್ ಪಕ್ಷದ ಸ್ಥಾಪಕರಾದ ಮೋತಿಲಾಲ್ ನೆಹರು ಅವರು ಕೇಂದ್ರ ಶಾಸಕಾಂಗದಲ್ಲಿ ನಿಯಮಾವಳಿ ಒಂದನ್ನು ಮಂಡಿಸಿ ಭಾರತಕ್ಕೆ ಸಂವಿಧಾನ ರಚನೆಯ ಕುರಿತು ಚರ್ಚಿಸಲು ಇಂಗ್ಲೆಂಡಿನಲ್ಲಿ ದುಂಡು ಮೇಜಿನ ಪರಿಷತ್ತನ್ನು ಆಯೋಜಿಸುವಂತೆ ಬ್ರಿಟಿಷ್ ಸರ್ಕಾರದ ಮೇಲೆ ಒತ್ತಡ ಹಾಕಿದರು. ಆದರೆ ಬ್ರಿಟಿಷ್ ಸರ್ಕಾರ ಅದ್ಯಾವುದಕ್ಕೂ ಜಗ್ಗಲಿಲ್ಲ ಬಗ್ಗಲಿಲ್ಲ ಈ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳಲಿಲ್ಲ.
  4. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನವು 1927 ಮೇ 17ರಂದು ಮುಂಬೈಯಲ್ಲಿ ಜರುಗಿತ್ತು. ಈ ಅಧಿವೇಶನದಲ್ಲಿ ಮೋತಿಲಾಲ್ ನೆಹರು ಅವರು ನಿಳುವಳಿಯೊಂದನ್ನು ಮಂಡಿಸಿ ಕಾಂಗ್ರೆಸ್ ವರ್ಕಿಂಗ್ ಕಮಿಟಿಯು ಕೇಂದ್ರ ಹಾಗೂ ಪ್ರಾಂತ್ಯ ಶಾಸನ ಸಭೆಯ ಸರ್ವ ಪಕ್ಷಗಳ ಪ್ರತಿನಿಧಿಗಳ ಸಮಿತಿಯ ಮೂಲಕ ಭಾರತದ ಸಂವಿಧಾನದ ರಚನೆಗೆ ಮುಂದಾಗಬೇಕೆಂದು ಆಗ್ರಹಿಸಿದರು. ಪರಿಣಾಮವಾಗಿ 1928 ಮೇ 19 ರಂದು ಜರುಗಿದ ಸರ್ವ ಪಕ್ಷ ಸಮ್ಮೇಳನವು ಮೋತಿಲಾಲ್ ನೆಹರು ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿತು. ನೆಹರು ಅವರು 1928 ಆಗಸ್ಟ್ ೧೦ ರಂದು ವರದಿಯೊಂದನ್ನು ತಯಾರಿಸಿ ಬ್ರಿಟಿಷ್ ಸರ್ಕಾರದ ಮುಂದಿಟ್ಟರು. ಈ ವರದಿಯಲ್ಲಿ ಭಾರತಕ್ಕೆ ಪೂರ್ಣ ಜವಾಬ್ದಾರಿಯುಳ್ಳ ಸರ್ಕಾರ ರಚನೆಯ ಸಂವಿಧಾನವನ್ನು ರಚಿಸಬೇಕೆಂಬ ಬೇಡಿಕೆಯನ್ನು ಇಟ್ಟರು.
  5. 1929ರ ಲಾಹೋರ್ ಅಧಿವೇಶನವು ರಾವಿ ನದಿಯ ದಂಡೆಯ ಮೇಲೆ ನಡೆಯಿತು. ಅಂದು ಜವಹರಲಾಲ್ ನೆಹರು ಅವರು ತ್ರಿವರ್ಣ ಧ್ವಜವನ್ನು ಹಾರಿಸಿ ಸಂಪೂರ್ಣ ಸ್ವರಾಜ್ಯದ ರಚನೆಯೇ ನಮ್ಮ ಗುರಿಯಾಗಿದೆ ಎಂದು ಘೋಷಿಸಿದರು.
  6. 1933 ಅಕ್ಟೋಬರ್ 2ರಂದು ಲಕ್ನೋ ಹೆರಾಲ್ಡ್ ಗೆ ನೆಹರು ಅವರು ಬರೆದ ಲೇಖನದಲ್ಲಿ ಭಾರತದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾರತೀಯ ಪ್ರತಿನಿಧಿಗಳಿಂದ ರಚನೆಗೊಂಡ ಸಂವಿಧಾನದ ಜಾರಿಯಿಂದ ಮಾತ್ರ ರಾಜಕೀಯ ಪರಿಹಾರವಾಗಬಲ್ಲದು ಎಂಬ ಅಭಿಪ್ರಾಯವನ್ನು ಜನತೆಯ ಮುಂದಿಟ್ಟರು.
  7. 1935ರ ಕಾಯ್ದೆಗನುಗುಣವಾಗಿ ರಚನೆಯಾದ ಕೇಂದ್ರ ಹಾಗೂ ಪ್ರಾಂತೀಯ ಸರ್ಕಾರಗಳು 1937ರಲ್ಲಿ ಒಂದು ನಿರ್ಣಯಕ್ಕೆ ಬಂದವು. ಈ ನಿರ್ಣಯದಲ್ಲಿ 1935 ರಲ್ಲಿ ಭಾರತ ಸರ್ಕಾರದ ಕಾಯ್ದೆಯು ಭಾರತೀಯರ ಆಶಯಗಳನ್ನು ಪೂರೈಸುವಲ್ಲಿ ವಿಫಲವಾಗಿದ್ದು ಅದನ್ನು ರದ್ದುಪಡಿಸಿ ಭಾರತೀಯರಿಂದ ಕೂಡಿದ ಸಂವಿಧಾನ ರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಲಾಯಿತು.
  8. 1939ರಲ್ಲಿ ಪ್ರಪಂಚದ ದ್ವಿತೀಯ ಮಹಾಯುದ್ಧ ಆರಂಭವಾಯಿತು. ಆಂಗ್ಲರು ಸೋಲಿನ ಭೀತಿಯನ್ನು ಎದುರಿಸಿದರು. ಆಗ ಅವರು ಭಾರತೀಯರ ಸಹಕಾರವನ್ನು ಬಯಸಿದರು. ಆಗ ಕಾಂಗ್ರೆಸ್ ಕಾರ್ಯಕಾರಿ ಮಂಡಳಿಯು ಭಾರತದ ಸ್ವಾತಂತ್ರ್ಯ ಹಾಗೂ ಸಂವಿಧಾನ ರಚಿಸಿಕೊಳ್ಳುವ ಹಕ್ಕನ್ನು ನೀಡುವುದಾದರೆ ಸಹಕಾರದ ಪರಿಶೀಲನೆಯನ್ನು ಮಾಡಬಹುದೆಂಬ ನಿರ್ಣಯವನ್ನು ಕೈಗೊಂಡಿತು.
  9. 1940 ಆಗಸ್ಟ್ 8ರಂದು ಬ್ರಿಟಿಷ್ ಸರ್ಕಾರ ಭಾರತೀಯರ ಸಂವಿಧಾನದ ರಚನಾ ಸಭೆಯ ಬೇಡಿಕೆಯನ್ನು ಪರೋಕ್ಷವಾಗಿ ಅಂಗೀಕರಿಸಿತು. ಯುದ್ಧ ನಂತರ ಸಂವಿಧಾನ ರಚನಾ ಸಭೆಯ ಸ್ಥಾಪನೆ ಮಾಡಲಾಗುವುದೆಂದು ಬ್ರಿಟಿಷ್ ವೈಸರಾಯ್ ಲಿನ್ಲಿತ್ಲೋ ಘೋಷಿಸಿದರು.
  10. 1942ರ ಮಾರ್ಚ್ ಕ್ರಿಪ್ಸ್ ಆಯೋಗವು ಭಾರತೀಯರ ರಚನಾ ಸಭೆಯ ಬೇಡಿಕೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿತು. ಜೊತೆಗೆ ಭಾರತಕ್ಕೆ ಡೊಮಿನಿಯನ್ ಸ್ಥಾನಮಾನ ನೀಡಿ ಭಾರತದ ಆಂತರಿಕ ಮತ್ತು ಬಾಹ್ಯ ಸ್ವಾತಂತ್ರ್ಯದ ಭರವಸೆಯನ್ನು ನೀಡಿತು. ಆದರೆ ಭಾರತೀಯರು ಕ್ರಿಪ್ಸ್ ಆಯೋಗದ ಭರವಸೆಯನ್ನು ನಂಬಲಿಲ್ಲ. ಗಾಂಧೀಜಿಯವರು ಈ ಆಯೋಗವನ್ನು ಮುಳುಗುತ್ತಿರುವ ಬ್ಯಾಂಕಿನ ಮುಂದಿನ ದಿನಾಂಕವನ್ನು ಹೊಂದಿದ ಚೆಕ್ ಎಂದು ಟೀಕಿಸಿದರು. ಅದೇ ವರ್ಷ ಅವರು ಬ್ರಿಟಿಷರ ವಿರುದ್ಧ ಚಲೇ ಜಾವ್‌ ಚಳುವಳಿಯನ್ನು ಆರಂಭಿಸಿದರು.
  11. 1946ರಲ್ಲಿ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಬಂದಿತು. ಆಯೋಗವು ಭಾರತೀಯರ ಸಂವಿಧಾನ ಬೇಡಿಕೆ ಒಪ್ಪಿಕೊಂಡಿತು. 389 ಸದಸ್ಯರುಳ್ಳ ಭಾರತ ಸಂವಿಧಾನ ರಚನಾ ಸಭೆಯು ಸಂವಿಧಾನ ರಚನೆಗೆ ಕ್ಯಾಬಿನೆಟ್ ಆಯೋಗ ಅಂಗೀಕಾರ ಮುದ್ರೆಯೊತ್ತುವ ಮೂಲಕ ಭಾರತೀಯರ ಬಹುದಿನಗಳ ಕನಸನ್ನು ನನಸಾಗಿಸಿತು.

ಉಪಸಂಹಾರ

ಭಾರತೀಯ ಸಂವಿಧಾನ ಬೇಡಿಕೆಯ ಇತಿಹಾಸವು ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗವಾಗಿದೆ. ರಾಷ್ಟ್ರೀಯ ಚಳುವಳಿಗಳು ಭಾರತೀಯರಲ್ಲಿ ರಾಜಕೀಯ ಜಾಗೃತಿಯನ್ನು ಮೂಡಿಸಿದವು. ಮಹಾತ್ಮಾ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರ ನಾಯಕತ್ವದಲ್ಲಿ ಈ ಬೇಡಿಕೆ ಸ್ಪಷ್ಟ ರೂಪ ಪಡೆದಿತು. ಅಂತಿಮವಾಗಿ ಸಂವಿಧಾನ ರಚನಾ ಸಭೆಯ ಸ್ಥಾಪನೆಯೊಂದಿಗೆ ಭಾರತೀಯರ ಬಹುದಿನಗಳ ಕನಸು ನನಸಾಯಿತು.