ಲೋಕಸಭೆಯ ರಚನೆ

ಲೋಕಸಭೆಯ ರಚನೆ

ʻʻಭಾರತದ ಕೇಂದ್ರ ಶಾಸಕಾಂಗವಾದ ಸಂಸತ್ತಿನ ಕೆಳಮನೆಯನ್ನು ಲೋಕಸಭೆ ಎನ್ನಲಾಗುತ್ತದೆ.ʼʼ ಲೋಕಸಭೆಯು ಭಾರತದ ಪ್ರಜೆಗಳನ್ನು ಪ್ರತಿನಿಧಿಸುತ್ತಿರುವುದರಿಂದ ಇದನ್ನು ʻಕೆಳಮನೆʼ ʻಪ್ರತಿನಿಧಿಸಭೆʼ ಜನತಾ ಸದನ ಹಾಗೂ ಪ್ರಜಾಸದನ ಎಂದು ಸಹ ಕರೆಯಲಾಗುತ್ತದೆ. ಲೋಕಸಭೆಯು ಇಂಗ್ಲೆಂಡಿನ ಹೌಸ್‌ ಆಫ್‌ ಕಾಮನ್ಸ್‌ ಮತ್ತು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್‌ಗೆ ಸಮನಾಗಿದೆ.

1. ಲೋಕಸಭೆಯ ಗಾತ್ರ: (Size of Loksabha)

ಭಾರತದ ಸಂವಿಧಾನದಲ್ಲಿ ಲೋಕಸಭೆಯ ಗರಿಷ್ಠ ಸದಸ್ಯರ ಸಂಖ್ಯೆಯನ್ನು 552 ಕ್ಕೆ ನಿಗದಿಪಡಿಸಲಾಗಿದೆ. ಈ ೫೫೨ ಸ್ಥಾನಗಳಲ್ಲಿ ರಾಷ್ಟ್ರಪತಿಗಳು ಇಬ್ಬರು ಆಂಗ್ಲೋ ಇಂಡಿಯನ್ನರನ್ನು ನಾಮಕರಣಗೊಳಿಸುತ್ತಾರೆ. ಉಳಿದ 550 ಸ್ಥಾನಗಳು ಪ್ರಜೆಗಳಿಂದ ಚುನಾವಣೆಯಲ್ಲಿ ಆಯ್ಕೆಗೊಂಡ ಪ್ರತಿನಿಧಿಗಳಿಗೆ ಮೀಸಲಾಗಿದ್ದವು. 2019ರ ವೇಳೆಗೆ ಲೋಕಸಭೆಯ ಸದಸ್ಯರ ಸಂಖ್ಯೆ 545ಕ್ಕೆ ಸೀಮಿತಗೊಂಡಿದೆ. ಅದರಲ್ಲಿ ಇಬ್ಬರು ಆಂಗ್ಲೋ ಇಂಡಿಯನ್ನರು ನೇಮಕವಾದರೆ ಉಳಿದ 543 ಸ್ಥಾನಗಳು ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಮೀಸಲು. 2019 ರಲ್ಲಿ ಸಂವಿಧಾನದ 104ನೇ ತಿದ್ದುಪಡಿಯನ್ವಯ ಆಂಗ್ಲೋ ಇಂಡಿಯನ್ ಸದಸ್ಯರುಗಳ ನೇಮಕಾತಿಯನ್ನು ರದ್ದುಗೊಳಿಸಲಾಗಿದೆ. ಪರಿಣಾಮವಾಗಿ ಇಂದು 543 ಸ್ಥಾನಗಳು ಮಾತ್ರ ಉಳಿದಿವೆ. 543 ಸ್ಥಾನಗಳ ಪೈಕಿ 20 ಸ್ಥಾನಗಳನ್ನು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಿಡಲಾಗಿದೆ.

2.  ಚುನಾವಣಾ ವಿಧಾನ: (Election Method)

ಲೋಕಸಭೆಯ 543 ಮತ ಕ್ಷೇತ್ರಗಳ ಅಭ್ಯರ್ಥಿಗಳು ನೇರವಾಗಿ ಪ್ರಜೆಗಳಿಂದ ಸಾರ್ವತ್ರಿಕ ಮತದಾನದ ಮೂಲಕ ಆಯ್ಕೆಯಾಗುತ್ತಾರೆ. ಉಳಿದ ಎರಡು ಸ್ಥಾನಗಳನ್ನು ರಾಷ್ಟ್ರಪತಿಗಳು ನಾಮಕರಣಗೊಳಿಸುತ್ತಾರೆ. ಭಾರತದ ಜನಸಂಖ್ಯೆಗನುಗುಣವಾಗಿ ಭಾರತದ ಪ್ರತಿಯೊಂದು ರಾಜ್ಯಗಳ ಮತಕ್ಷೇತ್ರಗಳಿಂದ ಲೋಕಸಭೆಗೆ ಆಯ್ಕೆಗೊಳ್ಳಬೇಕಾದ ಸ್ಥಾನಮಾನಗಳನ್ನು ಸಂವಿಧಾನದಲ್ಲಿ ನಿಗದಿಪಡಿಸಲಾಗಿದೆ. ಅದರಂತೆ ಕರ್ನಾಟಕವು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. ಚುನಾವಣಾ ಆಯೋಗವು ಭಾರತದ ಭೂ ಭಾಗವನ್ನು 543 ಲೋಕಸಭಾ ಮತಕ್ಷೇತ್ರಗಳನ್ನಾಗಿ ವಿಂಗಡಿಸಿ ಆಯಾ ಸಮುದಾಯಗಳಿಗೆ ಸಮಾನವಾಗಿ ಸೀಟುಗಳನ್ನು ಹಂಚಿಕೆ ಮಾಡುತ್ತದೆ. ಪರಿಶಿಷ್ಟ ಜಾತಿಗಳಿಗೆ 87 ಹಾಗೂ ಪರಿಶಿಷ್ಟ ಪಂಗಡಗಳಿಗೆ 44 ಸೀಟುಗಳನ್ನು ಒಟ್ಟು 132 ಮತಕ್ಷೇತ್ರಗಳನ್ನು ಮೀಸಲಿಡಲಾಗುತ್ತದೆ. ಈ ಕ್ಷೇತ್ರಗಳ ಚುನಾವಣೆಯನ್ನು ವಯಸ್ಕ ಮತದಾನ ಪದ್ದತಿಯಂತೆ ನಡೆಸಲಾಗುತ್ತದೆ.

3.  ಅರ್ಹತೆಗಳು: (Qualification)

 ಲೋಕಸಭಾ ಸದಸ್ಯನಾಗಬಯಸುವ ವ್ಯಕ್ತಿಯು ಈ ಕೆಳಕಂಡ ಅರ್ಹತೆಗಳನ್ನು ಹೊಂದಿರಬೇಕು.

  1.  ಆತ ಭಾರತದ ಪ್ರಜೆಯಾಗಿರಬೇಕು.
  2.  ಆತನಿಗೆ ಕನಿಷ್ಠ 25 ವರ್ಷ ವಯಸ್ಸಾಗಿರಬೇಕು.
  3.  ಆತ ಯಾವುದಾದರೂ ಲೋಕಸಭಾ ಕ್ಷೇತ್ರದ ಮತದಾರನಾಗಿಬೇಕು.
  4.  ಲೋಕಸಭಾ ಸದಸ್ಯನಿಗಿರಬೇಕಾದ ಎಲ್ಲಾ ಅರ್ಹತೆಗಳು ಇರಬೇಕು.
  5.  ಕೇಂದ್ರ ರಾಜ್ಯ ಅಥವಾ ಯಾವುದೇ ಸರ್ಕಾರಿ ಹುದ್ದೆಯಲ್ಲಿರಬಾರದು.
  6. ಆತ ಹುಚ್ಚ, ದಿವಾಳಿ ಅಥವಾ ಮತಿವಿಕಲನಾಗಿರಬಾರದು

 4. ಅಧಿಕಾರ ಅವಧಿ: (Term of Power)

ಲೋಕಸಭಾ ಸದಸ್ಯರ ಅಧಿಕಾರಾವಧಿ ಸಾಮಾನ್ಯವಾಗಿ ಐದು ವರ್ಷಗಳು. ಚುನಾವಣೆಗಳು ನಡೆದು ಮೊದಲನೇ ಅಧಿವೇಶನವು ಸೇರುವ ದಿನದಿಂದ ಐದು ವರ್ಷಗಳ ಕಾಲದವರೆಗೆ ಅಧಿಕಾರದಲ್ಲಿರುವುದು. ಆದರೆ ರಾಷ್ಟ್ರಪತಿಗಳು ಲೋಕಸಭಾ ಅಧಿಕಾರಾವಧಿ ಮುಗಿಯುವ ಮುಂಚಿತವಾಗಿ ವಿಸರ್ಜನೆಗೊಳಿಸಬಹುದು. ಈ ರೀತಿಯ ವಿಸರ್ಜನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಹಲವು ಬಾರಿ ರಾಷ್ಟ್ರಪತಿಗಳು ಲೋಕಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದಾರೆ. ಉದಾಹರಣೆ 1998ರ 12ನೇ ಲೋಕಸಭೆಯನ್ನು 1999 ರಲ್ಲಿ ವಿಸರ್ಜಿಸಲಾಯಿತು. ಇದರೊಂದಿಗೆ ತುರ್ತುಪರಿಸ್ಥಿತಿಯೇನಾದರೂ ಸಂಭವಿಸಿದರೆ ಲೋಕಸಭೆಯ ಅವಧಿಯನ್ನು ಒಂದು ವರ್ಷ ಮುಂದೂಡಬಹುದು. ಅದಕ್ಕೆ ಸಂಸತ್ತಿನ ಅನುಮತಿ ಬೇಕು, ತುರ್ತುಪರಿಸ್ಥಿತಿ ಮುಗಿದ ಆರು ತಿಂಗಳೊಳಗೆ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ರಾಷ್ಟ್ರಪತಿಗಳು ಲೋಕಸಭೆಯ ಅಧಿವೇಶನವನ್ನು ಕರೆಯುವ ಅಥವಾ ಮುಂದೂಡುವ ಅಧಿಕಾರವನ್ನು ಹೊಂದಿದ್ದಾರೆ ಲೋಕಸಭೆಯು ಸಾಮಾನ್ಯವಾಗಿ ಮೂರು ಬಾರಿ ಅಧಿವೇಶನವನ್ನು ಕರೆಯುತ್ತದೆ. ಬಜೆಟ್ ಅಧಿವೇಶನ( ಫೆಬ್ರವರಿ- ಮೇ)  ಮುಂಗಾರು ಅಧಿವೇಶನ (ಜುಲೈ-ಸೆಪ್ಟೆಂಬರ್) ಹಾಗೂ ಚಳಿಗಾಲದ ಅಧಿವೇಶನ (ನವೆಂಬರ್-ಡಿಸೆಂಬರ್) ಸಂವಿಧಾನದ ಪ್ರಕಾರ ಲೋಕಸಭೆಯ ಎರಡು ಅಧಿವೇಶನಗಳ ನಡುವಿನ ಅಂತರ ಆರು ತಿಂಗಳು ಮೀರುವಂತಿಲ್ಲ. ಆದರೆ ಪ್ರತಿವರ್ಷ ಎರಡು ಅಧಿವೇಶನಗಳು ನಡೆಯಲೇಬೇಕು.

6. ಕೋರಂ: (Quoram)

ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ಕಲಾಪಗಳು ಜರುಗಲು ಹಾಜರಿರಬೇಕಾದ ಕನಿಷ್ಠ ಸದಸ್ಯರ ಸಂಖ್ಯೆಯನ್ನು ಕೋರಂ ಎಂದು ಕರೆಯಲಾಗುತ್ತದೆ. ಲೋಕಸಭೆಯ ಕೋರಂ ಸಂಖ್ಯೆ ಒಟ್ಟು ಸದಸ್ಯರ ೧/೧೦ ಷ್ಟು ಬಹುಮತ ಇರಬೇಕು. ಲೋಕಸಭಾ ಅಧಿವೇಶನದಲ್ಲಿ ಬಹುಮತದ ಸಂಖ್ಯೆಯಷ್ಟು ಸದಸ್ಯರು ಹಾಜರಾಗದಿದ್ದರೆ ಸ್ಪೀಕರ್ ಅಧಿವೇಶನವನ್ನು ಮುಂದೂಡುತ್ತಾರೆ.

7. ಅಧ್ಯಕ್ಷ ಮತ್ತು ಉಪಾಧ್ಯಕ್ಷ: (Speaker and Deputy Speaker)

ʻʻ ಲೋಕಸಭೆಯ ಅಧ್ಯಕ್ಷನನ್ನು ಸ್ಪೀಕರ್ ಎಂದು ಕರೆಯಲಾಗಿದೆʼʼ. ಲೋಕಸಭೆಯ ಸದಸ್ಯರು ತನ್ನಲ್ಲಿಯೇ ಒಬ್ಬ ಅಧ್ಯಕ್ಷ ಮತ್ತು ಉಪಾಧ್ಯಕ್ಷನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆಯ ಕಾರ್ಯಕಲಾಪಗಳು ಲೋಕಸಭಾ ಸ್ಪೀಕರ್ ನೇತೃತ್ವದಲ್ಲಿಯೇ ನಡೆಯುತ್ತವೆ. ಅಧ್ಯಕ್ಷರ ಅನುಪಸ್ಥಿಯಲ್ಲಿ ಉಪಾಧ್ಯಕ್ಷರು ಸಭೆಯ ಕಾರ್ಯಕಲಾಪಗಳನ್ನು ನಿರ್ವಹಿಸಿಕೊಂಡು ಹೋಗುತ್ತಾರೆ.

8. ವೇತನ ಹಾಗೂ ವಿನಾಯಿತಿಗಳು: 

ಲೋಕಸಭಾ ಸದಸ್ಯರಿಗೆ ೧ ಲಕ್ಷ ರೂ ವೇತನ ೭೦ ಸಾವಿರ ಕ್ಷೇತ್ರ ಭತ್ಯೆಯೇ ಹಾಗೂ 60,000 ಕಚೇರಿ ವೆಚ್ಚರವನ್ನು ಪ್ರತಿ ತಿಂಗಳು ನೀಡಲಾಗುತ್ತದೆ. ಜೊತೆಗೆ ಅಧಿವೇಶನಕ್ಕೆ ಹಾಜರಾಗಿ ಸಹಿ ಮಾಡಿದರೆ ಪ್ರತಿದಿನ 2,000ರೂ ಭತ್ಯೆಯನ್ನು ನೀಡಲಾಗುತ್ತದೆ. ಇದರೊಂದಿಗೆ ಉಚಿತ ರೈಲು ಹಾಗೂ ವಿಮಾನ ಪ್ರಯಾಣ ಸೌಲಭ್ಯಗಳನ್ನು ಸಹ ನೀಡಲಾಗುತ್ತದೆ. ಅದು ಅಲ್ಲದೆ ಉಚಿತ ನಿವೇಶನ, ದೂರವಾಣಿ ಕರೆಗಳು, ವಿದ್ಯುತ್, ಆರೋಗ್ಯ ಹಾಗೂ ನೀರಿನ ಸೌಲಭ್ಯಗಳನ್ನು ಸಹ ಕಲ್ಪಿಸಿಕೊಡಲಾಗುತ್ತದೆ. ಲೋಕಸಭಾ ಸದಸ್ಯರು ಅಧಿವೇಶನದ ಸಂದರ್ಭದಲ್ಲಿ ಅನಿರ್ಬಂದಿತವಾಗಿ ಮಾತನಾಡುವ ಹಕ್ಕನ್ನು ಪಡೆದಿರುತ್ತಾರೆ. ಅಧಿವೇಶನದ ವೇಳೆ ಮಾತನಾಡುವ ಮಾತುಗಳಿಗೆ ಶಿಕ್ಷೆ ನೀಡುವಂತಿಲ್ಲ. ಅಧಿವೇಶನ ನಡೆಯುವ ಮುನ್ನ ಹಾಗೂ ಅಧಿವೇಶನದ ಸಂದರ್ಭಗಳಲ್ಲಿ ಹಾಗೂ ನಂತರ 40 ದಿನಗಳವರೆಗೆ ಲೋಕಸಭಾ ಸದಸ್ಯನನ್ನು ನಾಗರಿಕ ಮೊಕದ್ದಮೆಯಡಿಯಲ್ಲಿ ಬಂಧಿಸುವಂತಿಲ್ಲ. ಒಂದು ವೇಳೆ ಬಂಧಿಸುವ ಸಂದರ್ಭಗಳು ಬಂದರೆ ಸ್ಪೀಕರ್ ಅವರ ಅನುಮತಿ ಬೇಕೇ ಬೇಕು.

ಉಪಸಂಹಾರ

ಒಟ್ಟಾರೆ, ಲೋಕಸಭೆಯ ರಚನೆ ಮತ್ತು ಕಾರ್ಯವಿಧಾನಗಳು ಭಾರತದ ಪ್ರಜಾಪ್ರಭುತ್ವವನ್ನು ಸ್ಥಿರಗೊಳಿಸುತ್ತವೆ. ಸದಸ್ಯರ ಅರ್ಹತೆ, ಅವಧಿ, ಅಧಿವೇಶನಗಳು ಮತ್ತು ಹಕ್ಕುಗಳು ವ್ಯವಸ್ಥಿತ ಆಡಳಿತಕ್ಕೆ ನೆರವಾಗುತ್ತವೆ. ಜನರಿಂದ ಆಯ್ಕೆಯಾದ ಪ್ರತಿನಿಧಿಗಳ ಮೂಲಕ ಜನಾಭಿಪ್ರಾಯವನ್ನು ಕಾನೂನಾಗಿಸುವ ಶಕ್ತಿ ಲೋಕಸಭೆಗೆ ಇದೆ. ಆದ್ದರಿಂದಲೇ ಲೋಕಸಭೆ ಭಾರತೀಯ ಪ್ರಜಾಪ್ರಭುತ್ವದ ಜೀವಾಳವೆಂದು ಕರೆಯಲ್ಪಡುತ್ತದೆ.

ರಾಜ್ಯಸಭೆಯ ಕೆಲಸ ಕಾರ್ಯಗಳು

ಭಾರತದ ಶಾಸಕಾಂಗವು ವರ್ಷದಲ್ಲಿ ಎರಡು ಬಾರಿ ಸಭೆ ಸೇರಬೇಕು ಮತ್ತು ಎರಡು ಸಮಾವೇಶಗಳ ನಡುವಿನ ಅಂತರ ೬ ತಿಂಗಳ ಹೆಚ್ಚಾಗಿರಬಾರದೆಂದು ಭಾರತ ಸಂವಿಧಾನದ 85 ನೇ ವಿಧಿಯು ಸ್ಪಷ್ಟಪಡಿಸುತ್ತದೆ. ಅಧಿಕಾರ ಮತ್ತು ಕಾರ್ಯಗಳು ಈ ಎರಡು ಪದಗಳನ್ನು ಸಾಮಾನ್ಯವಾಗಿ ಸಮಾನಾರ್ಥ ಪದಗಳಾಗಿ ಬಳಕೆಗೆ ತರಲಾಗಿದೆ. ಇದಕ್ಕೆ ಕಾರಣವೆಂದರೆ ಒಬ್ಬ ಅಧಿಕಾರಿಯು ಕೆಲವು ಕಾರ್ಯಗಳನ್ನು ನಿರ್ವಹಿಸಬೇಕಾದರೆ ಅದಕ್ಕೆ ಅಗತ್ಯವಿರುವ ಅಧಿಕಾರವಿರಬೇಕು. ರಾಜ್ಯಸಭೆಯ ಕಾರ್ಯಗಳು ಈ ಕೆಳಗಿನಂತಿವೆ.

1. ಶಾಸನೀಯ ಕೆಲಸ ಕಾರ್ಯಗಳು: (Legislative Functions)

ಹಣಕಾಸಿನ ಮಸೂದೆಯನ್ನು ಹೊರತುಪಡಿಸಿ ಉಳಿದೆಲ್ಲಾ ಶಾಸನೀಯ ಅಧಿಕಾರದಲ್ಲಿ ರಾಜ್ಯಸಭೆಯು ಲೋಕಸಭೆಯಷ್ಟೇ ಸಮಾನವಕಾಶವನ್ನು ಹೊಂದಿದೆ. ಹಣಕಾಸಿಗೆ ಸಂಬಂಧಿಸಿದ ಮಸೂದೆಗಳು ರಾಜ್ಯಸಭೆಯಲ್ಲಿ ೨/೩  ಬಹುಮತ ಪಡೆದ ನಂತರವೇ ಮುಂದಿನ ನಿರ್ಧಾರಕ್ಕಾಗಿ ಲೋಕಸಭೆಗೆ ಹೋಗುತ್ತದೆ. ಯಾವುದೇ ಮಸೂದೆಯು ಕಾನೂನು ರೂಪ ತಾಳಲು ಎರಡೂ ಸದನಗಳ ಒಪ್ಪಿಗೆ ಬೇಕು. ಒಂದು ಮಸೂದೆಗೆ ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಭಿನ್ನಾಭಿಪ್ರಾಯ ತಲೆದೋರಿದರೆ ಆಗ ರಾಷ್ಟ್ರಪತಿಗಳು ಉಭಯ ಸದನಗಳ ಜಂಟಿ ಅಧಿವೇಶನಗಳನ್ನು ಕರೆಯಬಹುದು. ಈ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಲೋಕಸಭೆಯ ಸ್ಪೀಕರ್ ನಿರ್ವಹಿಸುತ್ತಾರೆ. ನಂತರ ಎರಡು ಸದನಗಳ ಹಾಜರಿರುವ ಒಟ್ಟು ಸದಸ್ಯರುಗಳ ಸಂಖ್ಯೆಯ ಬಹುಮತದ  ಆಧಾರದ ಮೇಲೆ ನಿರ್ಣಯವನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಲೋಕಸಭೆಯ ಸದಸ್ಯರುಗಳ ಸಂಖ್ಯಾಬಲ ಹೆಚ್ಚಿರುವ ಕಾರಣದಿಂದ ಲೋಕಸಭೆಯ ಅಭಿಪ್ರಾಯಕ್ಕೆ ಮನ್ನಣೆ ಸಿಗುವ ಸಂಭವ ಹೆಚ್ಚು.

ಲೋಕಸಭೆಯಲ್ಲಿ ಅಂಗೀಕರಿಸಿದ ಮಸೂದೆಯನ್ನು ಒಪ್ಪಿಗೆಗಾಗಿ ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ರಾಜ್ಯಸಭೆಯು ಆ ವಸೂದೆಯನ್ನು ಆರು ತಿಂಗಳವರೆಗೆ ತಡೆಹಿಡಿಯಬಹುದೇ ಹೊರತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಮುಂದೂಡಲು ಬರುವುದಿಲ್ಲ. ಆರು ತಿಂಗಳೊಳಗೆ ಮಸೂದೆಗೆ ಅನುಮೋದನೆ ನೀಡಬೇಕು. ಒಂದು ವೇಳೆ ಲೋಕಸಭೆಯಲ್ಲಿ ತೀರ್ಮಾನಿಸಿದ ಮಸೂದೆಗೆ 180 ದಿನಗಳಲ್ಲಿ ಅನುಮೋದನೆ ನೀಡದಿದ್ದಲ್ಲಿ ಆ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರಕಿದೆ ಎಂದು ಪರಿಗಣಿಸಲಾಗುವುದು.

 2.  ಹಣಕಾಸಿನ ಕಾರ್ಯಗಳು: (Financial Functions)

ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಲೋಕಸಭೆಯೇ ಸಾರ್ವಭೌಮತ್ವವನ್ನು ಹೊಂದಿದೆ. ಸಂವಿಧಾನದ 10ನೇ ವಿಧಿಯ ಅನ್ವಯ ಹಣಕಾಸಿನ ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡನೆ ಮಾಡುವ ಅಧಿಕಾರವಿಲ್ಲದಿರುವುದೇ  ಇದಕ್ಕೆ ಕಾರಣ. ಹಾಗಾಗಿ ಹಣಕಾಸಿನ ಮಸೂದೆಯನ್ನು ಮೊದಲು ಲೋಕಸಭೆಯಲ್ಲಿಯೇ ಮಂಡಿಸಬೇಕು. ಲೋಕಸಭೆಯಲ್ಲಿ ಹಣಕಾಸಿನ ಮಸೂದೆಯನ್ನು ಮಂಡಿಸಿ ಅಂಗೀಕರಿಸಿ ನಂತರ ಅದನ್ನು ರಾಜ್ಯಸಭೆಗೆ ಕಳುಹಿಸಿಕೊಡಲಾಗುತ್ತದೆ. ಆಗ ರಾಜ್ಯಸಭೆಯು ಈ ಮಸೂದೆಯ ಬಗ್ಗೆ ಚರ್ಚಿಸಬಹುದು ಅಥವಾ ಕೆಲವಾರು ತಿದ್ದುಪಡಿ ಮಾಡಲು ಸೂಚನೆ ನೀಡಬಹುದು. ಆದರೆ ರಾಜ್ಯಸಭೆಯ ಸೂಚನೆಯನ್ನು ಒಪ್ಪುವುದು ಮತ್ತು ಬಿಡುವುದು ಲೋಕಸಭೆಗೆ ಬಿಟ್ಟ ವಿಚಾರ. ಹಣಕಾಸು ಮಸೂದೆ ಕೈ ಸೇರಿದ 14 ದಿನದೊಳಗೆ ರಾಜ್ಯಸಭೆಯು ತನ್ನ ಒಪ್ಪಿಗೆಯನ್ನು ಸೂಚಿಸಬೇಕು. ಒಂದು ವೇಳೆ 14 ದಿನದೊಳಗೆ ಒಪ್ಪಿಗೆಯನ್ನು ಸೂಚಿಸಿ ಲೋಕಸಭೆಗೆ ಹಿಂತಿರುಗಿಸದಿದ್ದರೆ ಆ ವಸೂದೆಯನ್ನು ಉಭಯ ಸದನಗಳು ಒಪ್ಪಿಕೊಂಡಿವೆ ಎಂದು ಅರ್ಥ. ಹಾಗಾಗಿ ಹಣಕಾಸಿನ ಮಸೂದೆಯ ಮೇಲೆ ರಾಜ್ಯಸಭೆಗೆ ಯಾವ ಅಧಿಕಾರವನ್ನು ಸಂವಿಧಾನ ನೀಡಿಲ್ಲ. ಗ್ರ್ಯಾಂಟುಗಳ ಬೇಡಿಕೆಯನ್ನು ಸಹ ರಾಜ್ಯಸಭೆಯ ಮುಂದಿಡುವ ಅಗತ್ಯತೆ ಇಲ್ಲ.

3. ಕಾರ್ಯಾಂಗದ ಅಧಿಕಾರಗಳು: (Executive Powers)

 ಭಾರತದಲ್ಲಿ ಸಂಸದೀಯ ಪದ್ಧತಿ ಜಾರಿಯಲ್ಲಿರುವುದರಿಂದ ನೈಜಕಾರ್ಯಾಂಗವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆಯೇ ವಿನಹ ರಾಜ್ಯಸಭೆಗೆ ಅಲ್ಲ. ಪ್ರಧಾನಿ ನಾಯಕತ್ವದ ಕೇಂದ್ರ ಮಂತ್ರಿ ಮಂಡಲವು ಲೋಕಸಭೆಗೆ ಜವಾಬ್ದಾರಿಯಾಗಿರುತ್ತದೆ. ಲೋಕಸಭೆ ಅವಿಶ್ವಾಸ ಗೊತ್ತುವಳಿಯ ಮೂಲಕ ಕೇಂದ್ರ ಮಂತ್ರಿ ಮಂಡಳವನ್ನು ಅಧಿಕಾರದಿಂದ ಕಿತ್ತೊಗೆಯುವ ಅಧಿಕಾರವನ್ನು ಹೊಂದಿದೆ. ರಾಜ್ಯಸಭೆಗೆ ಕಾರ್ಯಾಂಗದ ಮೇಲೆ ಅಧಿಕಾರವಿಲ್ಲದಿದ್ದರೂ ಸರ್ಕಾರದ ಕಾರ್ಯಾಚರಣೆಯ ಕುರಿತು ಅವಶ್ಯ ಮಾಹಿತಿಯನ್ನು ಸಮಯದಿಂದ ಸಮಯಕ್ಕೆ ಪಡೆಯಬಹುದಾಗಿದೆ. ಆದರೆ ರಾಜ್ಯಸಭೆಯ ಅನುಮತಿಯನ್ನು ಪಡೆಯದೇ ಯಾವುದೇ ತೆರಿಗೆಯನ್ನು ವಿಧಿಸುವಂತಿಲ್ಲ ಮತ್ತು ವಸೂಲಿ ಮಾಡುವಂತೆಯೂ ಇಲ್ಲ. ರಾಷ್ಟ್ರಪತಿ ಮತ್ತು ಅಂತರಾಷ್ಟ್ರ ಮಟ್ಟದ ವಿಷಯಗಳ ಕುರಿತು ರಾಜ್ಯಸಭೆಯ ಸದಸ್ಯರು ಸರ್ಕಾರವನ್ನು ಪ್ರಶ್ನೆ ವೇಳೆ, ಶೂನ್ಯ ವೇಳೆ, ನಿಲುವಳಿ ಸೂಚನೆ, ಕಡಿತದ ಸೂಚನೆ ಹಾಗೂ ಗಮನಸೆಳೆಯುವ ಸೂಚನೆ ಮುಂತಾದ ಚರ್ಚಾ ಸಮಯಗಳಲ್ಲಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುವ ಮೂಲಕ ನಿಯಂತ್ರಿಸಬಹುದು.

 4.  ನ್ಯಾಯಾಂಗಿಯ ಅಧಿಕಾರಗಳು: (Judicial Power)

ರಾಜ್ಯಸಭೆಯು ನ್ಯಾಯಾಧೀಶನ ಸ್ಥಾನದಲ್ಲಿ ಕುಳಿತು ನ್ಯಾಯ ನಿರ್ಣಯವನ್ನು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಜ್ಯಸಭೆಯು ಲೋಕಸಭೆಯೊಂದಿಗೆ ಸೇರಿ ಸಂವಿಧಾನ ಉಲ್ಲಂಘನೆಗಾಗಿ ಮಹಾಭಿಯೋಗ ನಿರ್ಣಯವನ್ನು ಅಂಗೀಕರಿಸುವುದರ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಅಧಿಕಾರ ಹೊಂದಿದೆ. ಹಾಗೆಯೇ ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರನ್ನು  ಪದಚ್ಯುತಗೊಳಿಸುವ ಅಧಿಕಾರವನ್ನು ಪಡೆದಿದೆ. ಇದಕ್ಕೆ ಸದನದಲ್ಲಿ ೨/೩ ಬಹುಮತದ ನಿರ್ಣಯಬೇಕು. ಆಗ ರಾಷ್ಟ್ರಪತಿಗಳು ಮತ್ತು ನ್ಯಾಯಾಧೀಶರು ಪದತ್ಯಾಗ ಮಾಡುತ್ತಾರೆ. ಇದನ್ನೇ ʻʻವಾಗ್ದಂಡನೆ  ಅಥವಾ ಮಹಾಭಿಯೋಗ ಎಂದು ಕರೆಯುತ್ತಾರೆ. ಆದರೆ ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸಲು ಮಹಾಭಿಯೋಗದ ಅಗತ್ಯ ಇರುವುದಿಲ್ಲ. ರಾಜ್ಯಸಭೆಯ ಹೆಚ್ಚಿನ ಸದಸ್ಯರು ಒಂದು ಮಂಡನೆಯನ್ನು ಹೊರಡಿಸುತ್ತಾರೆ.  ನಂತರ ಅದಕ್ಕೆ ಲೋಕಸಭೆಯ ಒಪ್ಪಿಗೆ ದೊರಕಿದರೆ ಉಪರಾಷ್ಟ್ರಪತಿಗಳು ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಅದೇ ರೀತಿ ಮುಖ್ಯ ಚುನಾವಣಾ ಅಧಿಕಾರಿಗಳು ಮಹಾಲೇಖಪಾಲಕರು, ಕಂಟ್ರೋಲರ್ ಮತ್ತು ಆಡಿಟರ್ ಜನರಲ್‌ಗಳು ಹಾಗೂ ಮುಖ್ಯವಿಜಿಲೆನ್ಸ್ ಅಧಿಕಾರಿಗಳನ್ನು ಪದಚ್ಯುತಿಗೊಳಿಸುವಲ್ಲಿ ರಾಜ್ಯಸಭೆಯ ಪಾತ್ರವಿರುತ್ತದೆ.

5. ಚುನಾವಣಾ ಅಧಿಕಾರಗಳು: (Election Powers)

ರಾಜ್ಯಸಭೆಯ ಸದಸ್ಯರು ವಿಶೇಷ ಮತದಾನದ ಹಕ್ಕನ್ನು ಪಡೆದಿದ್ದಾರೆ. ಉದಾಹರಣೆ ರಾಜ್ಯಸಭೆಯ ಚುನಾಯಿತ ಸದಸ್ಯರು ಲೋಕಸಭೆ ಹಾಗೂ ಎಲ್ಲಾ ವಿಧಾನಸಭಾ ಸದಸ್ಯರೊಂದಿಗೆ ಸೇರಿ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುತ್ತಾರೆ. ಹಾಗೆಯೇ ರಾಜ್ಯಸಭೆಯ ಸದಸ್ಯರು ಹಾಗೂ ಲೋಕಸಭಾಸದಸ್ಯರು ಸೇರಿ ಉಪ ರಾಷ್ಟ್ರಪತಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ರಾಜ್ಯಸಭಾ ಸದಸ್ಯರು ತಮ್ಮೊಳಗೆ ಒಬ್ಬನನ್ನು ರಾಜ್ಯಸಭಾ ಉಪಸಭಾಪತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

6. ಸಂವಿಧಾನ ತಿದ್ದುಪಡಿ ಅಧಿಕಾರ: (Power of Constitutional Amendments)

ಸಂವಿಧಾನ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಯಾವುದೇ ಸದನದಲ್ಲಾದರೂ ಮಂಡಿಸಬಹುದು. ಸಂವಿಧಾನ ತಿದ್ದುಪಡಿ ಮಸೂದೆ ಮೊದಲು ರಾಜ್ಯಸಭೆಯಲ್ಲಿ ಮಂಡನೆಯಾದಾಗ ಅದರ ಅನುಮೋದನೆಗಾಗಿ ಲೋಕಸಭೆಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಆ ಮಸೂದೆಯು ಶಾಸನವಾಗಿ ಹೊರ ಬರಬೇಕಾದರೆ ಸದನದಲ್ಲಿ ಹಾಜರಾಗಿರುವ ೨/೩  ಬಹುಮತದ ಸದಸ್ಯರ ಬೆಂಬಲ ಬೇಕು. ತಿದ್ದುಪಡಿ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆಯೇ ಸಾರ್ವಭೌಮತ್ವವನ್ನು  ಹೊಂದಿದೆ. ಒಂದು ವೇಳೆ ತಿದ್ದುಪಡಿಗೆ ಸಂಬಂಧಿಸಿದಂತೆ ಗೊಂದಲಗಳು ಉಂಟಾದರೆ ಜಂಟಿ ಸಮಾವೇಶದ ಮೂಲಕ ಸಮಸ್ಯೆಯನ್ನು ಬಗೆಹರಿಸುವ ವಿಧಾನ ಭಾರತದ ಸಂವಿಧಾನದಲ್ಲಿ ಇಲ್ಲ. ರಾಜ್ಯಸಭೆಯು ತಿದ್ದುಪಡಿ ಮಸೂದೆಯನ್ನು ಒಂದು ವೇಳೆ ಅಂಗೀಕರಿಸದೆ ಹೋದರೆ ತಿದ್ದುಪಡಿ ಮಸೂದೆಯು ಬಿದ್ದು ಹೋಗುತ್ತದೆ.

7. ತುರ್ತು ಪರಿಸ್ಥಿತಿಯನ್ನು ಅನುಮೋದಿಸುವುದು: (Passing the Emergency)

 ಸಂವಿಧಾನದ 352ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಒಂದು ತಿಂಗಳೊಳಗೆ ಸಂಸತ್ತಿನ ಅನುಮತಿಯನ್ನು ಪಡೆಯಬೇಕಾಗುತ್ತದೆ. ಇಲ್ಲವಾದರೆ ತುರ್ತು ಪರಿಸ್ಥಿತಿ ರದ್ದಾಗುತ್ತದೆ. ಒಂದು ವೇಳೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದಾಗ ಲೋಕಸಭೆ ವಿಸರ್ಜನೆಗೊಂಡಿದ್ದರೆ ರಾಜ್ಯಸಭೆಯ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಆದರೆ ಹೊಸ ಲೋಕಸಭೆಯು ಅಸ್ತಿತ್ವಕ್ಕೆ ಬಂದ ನಂತರ 30 ದಿನದೊಳಗೆ ತುರ್ತು ಪರಿಸ್ಥಿತಿಗೆ ಲೋಕಸಭೆಯು ಅಂಗೀಕಾರ ಪಡೆದುಕೊಳ್ಳಬೇಕು.

 8. ಇತರೆ ಅಧಿಕಾರಗಳು: (Other Powers)

ಸಂವಿಧಾನದ 249ನೇ ವಿಧಿಯ ಪ್ರಕಾರ ರಾಜ್ಯಸಭೆಯಲ್ಲಿ ಹಾಜರಿದ್ದು ಮತ ಚಲಾಯಿಸಿದ ಮೂರನೇ ಎರಡಕ್ಕಿಂತ ಹೆಚ್ಚಿನ ಸದಸ್ಯರ ಬಹುಮತದೊಂದಿಗೆ ರಾಜ್ಯ ಪಟ್ಟಿಯ ವಿಷಯವನ್ನು ರಾಷ್ಟ್ರೀಯ ಮಹತ್ವವುಳ್ಳ ವಿಷಯವೆಂದು ತೀರ್ಮಾನಿಸಲಾಗಿದೆ.

ಸಂವಿಧಾನದ 312ನೇ ವಿಧಿಯಂತೆ ರಾಜ್ಯಸಭೆ ೨/೩  ಹೆಚ್ಚಿನ ಬಹುಮತದೊಂದಿಗೆ ನಿರ್ಣಯವನ್ನು ಅಂಗೀಕರಿಸಿ ಒಂದು ಅಥವಾ ಹೆಚ್ಚಿನ ಅಖಿಲ ಭಾರತೀಯ ಸೇವೆಗಳನ್ನು ರಚಿಸಬಹುದಾಗಿದೆ.

ಉಪಸಂಹಾರ

ಒಟ್ಟಾರೆ ರಾಜ್ಯಸಭೆಯು ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದೆ. ಲೋಕಸಭೆಯ ಮೇಲೆ ಸಮತೋಲನ ಸಾಧಿಸುವುದರ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಾಪಾಡುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತದೆ. ಶಾಸನ, ಸಂವಿಧಾನ ತಿದ್ದುಪಡಿ, ತುರ್ತು ಪರಿಸ್ಥಿತಿ ಹಾಗೂ ಚುನಾವಣಾ ಪ್ರಕ್ರಿಯೆಗಳಲ್ಲಿ ರಾಜ್ಯಸಭೆಯ ಪಾತ್ರ ಅನನ್ಯವಾಗಿದೆ. ಹೀಗಾಗಿ ರಾಜ್ಯಸಭೆಯ ಕಾರ್ಯಗಳು ಭಾರತೀಯ ಸಂಸತ್ತಿನ ಸ್ಥಿರತೆ ಮತ್ತು ಸಮರ್ಥತೆಗೆ ಬಲ ನೀಡುತ್ತವೆ.

42 ನೇ ಸಂವಿಧಾನ ತಿದ್ದುಪಡಿ

42 ನೇ ಸಂವಿಧಾನ ತಿದ್ದುಪಡಿ

ಭಾರತದ ಸಂವಿಧಾನವು ಜಾರಿಗೆಗೊಂಡ 25 ವರ್ಷಗಳ ಸಂವಿಧಾನಾತ್ಮಕ ಸುಧಾರಣೆಗಾಗಿ ಇಂದಿರಾಗಾಂಧಿ ನೇತೃತ್ವದ ಸರ್ಕಾರವು ಸ್ವರ್ಣಸಿಂಗ್‌ ಸಮಿತಿಯನ್ನು ನೇಮಕ ಮಾಡಿತು. ಈ ಸಮಿತಿಯ ಶಿಫಾರಸ್ಸಿನಂತೆ ಸಂವಿಧಾನಕ್ಕೆ 42 ನೇ ತಿದ್ದುಪಡಿ ಮಾಡಿ 1976 ಡಿಸೆಂಬರ್‌ 16 ರಂದು ಆದೇಶ ಹೊರಡಿಸಿತು. ಸಂವಿಧಾನ ಜಾರಿಯ ನಂತರ ತಿದ್ದುಪಡಿಗೊಂಡ 42 ನೇ ವಿಧಿಯು ಉಳಿದೆಲ್ಲಾ ತಿದ್ದುಪಡಿಗಳಿಗಿಂತ ಅತ್ಯಂತ ವಿಶಾಲವಾದ ಮತ್ತು ವಿವಾದಾತ್ಮಕವಾದ ತಿದ್ದುಪಡಿ ಎನಿಸಿಕೊಂಡಿತು. 1950ರ ಮೂಲ ಸಂವಿಧಾನದ ಪ್ರಸ್ತಾವನೆಯ 7ನೇ ಅನುಸೂಚಿ, 53 ವಿಧಿಗಳು ಮತ್ತು ಪ್ರಮುಖ ತತ್ವಗಳಲ್ಲಿ ಬದಲಾವಣೆಗೆ ಕಾರಣವಾದ ತಿದ್ದುಪಡಿಯು ಕಿರು ಸಂವಿಧಾನ ಎನಿಸಿಕೊಂಡಿದೆ. ಈ ತಿದ್ದುಪಡಿಯ ಬದಲಾವಣೆಗಳು ಈ ಕೆಳಗಿನಂತಿವೆ.

a. ಪ್ರಸ್ತಾವನೆ:

ಈ ತಿದ್ದುಪಡಿಯು ಪ್ರಸ್ತಾವನೆಗೆ ಸಮಾಜವಾದಿ, ಜಾತ್ಯಾತೀತ ಹಾಗೂ ಅಖಂಡತೆ ಎಂಬ ಪದಗಳನ್ನು ಸೇರಿಸಿತು.

b. ರಾಜ್ಯನೀತಿ ನಿರ್ದೇಶಕ ತತ್ವಗಳು:

 ಈಗಾಗಲೇ ಸಂವಿಧಾನದ 4ನೇ ಭಾಗದಲ್ಲಿ ಅಸ್ತಿತ್ವದಲ್ಲಿದ್ದ ರಾಜ್ಯ ನಿರ್ದೇಶಕ ತತ್ವಗಳಿಗೆ ಮೂರು ಹೊಸ ನಿರ್ದೇಶನಗಳನ್ನು ಸೇರಿಸಲಾಯಿತು. ಈಗಾಗಲೇ ಜಾರಿಯಲ್ಲಿದ್ದ 39 ನೇ ವಿಧಿಯಲ್ಲಿದ್ದ ಅಂಶಗಳ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಂಬಂಧಿಸಿದ ಅಂಶಗಳನ್ನು ಹೊಸದಾಗಿ ಸೇರಿಸಲಾಯಿತು. ಹಾಗೆಯೇ ಬಡವರಿಗೆ ಉಚಿತ ನ್ಯಾಯ ಮತ್ತು ಸಮಾನ ನ್ಯಾಯವನ್ನು ಬಲಗೊಳಿಸುವ ಕಾನೂನನ್ನು 39(A) ವಿಧಿಯಲ್ಲಿ, ಉದ್ಯಮದಲ್ಲಿ ಕಾರ್ಮಿಕರಿಗೆ ಅವಕಾಶ ಒದಗಿಸುವ 43(A) ವಿಧಿಯನ್ನು ಹಾಗೂ ಪರಿಸರ ರಕ್ಷಣೆ ಹಾಗೂ ವನ್ಯ ಜೀವಿ ರಕ್ಷಣೆ 48(A) ವಿಧಿಯನ್ನು ಸಂವಿಧಾಕ್ಕೆ ಹೊಸದಾಗಿ ತಿದ್ದುಪಡಿ ಮಾಡಿ ಸೇರಿಸಲಾಯಿತು.

c. ಮೂಲಭೂತ ಕರ್ತವ್ಯಗಳು:

ಸಂವಿಧಾನಕ್ಕೆ 4(A) ಭಾಗವನ್ನು ಸೇರಿಸುವ ಮೂಲಕ ಸಂವಿಧಾನದ ತಿದ್ದುಪಡಿ ಮಾಡಲಾಯಿತು. ಈ ಭಾಗದಲ್ಲಿ ಭಾರತೀಯರು ಪಾಲಿಸಬೇಕಾದ 10 ಮೂಲಭೂತ ಕರ್ತವ್ಯಗಳನ್ನು ಸಂವಿಧಾನದ 51(A) ವಿಧಿಯಲ್ಲಿ ಸೇರಿಸಲ್ಪಟ್ಟವು.

d. ಸಂಸತ್ತು:

ಈ ತಿದ್ದುಪಡಿಯ ಮೂಲಕ ಸಂಸತ್ತಿಗೆ ಸಂಬಂಧಿಸಿದ ವಿವಿಧ ನಿಬಂಧನೆಗಳನ್ನು ಬದಲಾಯಿಸಲು ಸಾಧ್ಯವಾಯಿತು. ರಾಜ್ಯ ಶಾಸಕಾಂಗಗಳು ಮತ್ತು ಸಂಸತ್ತಿಗೆ ಕಲಾಪಗಳು ಜರುಗಲು ಕನಿಷ್ಠ 10% ರಷ್ಟು ಸದಸ್ಯರ ಕೋರಂ ಸಂಖ್ಯೆಯನ್ನು ರದ್ದುಗೊಳಿಸಿತು. ಸಂಸತ್ತು ಅಂಗೀಕರಿಸುವ ಶಾಸನಗಳನ್ನು ನ್ಯಾಯಾಂಗದ ವಿಮರ್ಶಾಧಿಕಾರದಿಂದ ಹೊರಗಿಡಲಾಯಿತು. ರಾಷ್ಟ್ರಪತಿಯು ಸಚಿವ ಸಂಪುಟದ ಸಲಹೆಯನ್ನು ತಿರಸ್ಕರಿಸದಂತೆ ಬದಲಾವಣೆ ತರಲಾಯಿತು.

e. ನ್ಯಾಯಾಂಗ:

ಉಚ್ಛನ್ಯಾಯಾಲಯಗಳು ರಿಟ್‌ ಹೊರಡಿಸುವ ಅಧಿಕಾರವನ್ನು ಈ ತಿದ್ದುಪಡಿಯಿಂದ ಮೊಟಕುಗೊಳಿಸಲಾಯಿತು. ಮುಂದುವರೆದು ಸಂವಿಧಾನಕ್ಕೆ 14(A) ಭಾಗವನ್ನು ಸೇರಿಸಿ ಆಡಳಿತಾತ್ಮಕ ನ್ಯಾಯಮಂಡಳಿಯನ್ನು ರಚಿಸಲು ಸಂಸತ್ತಿಗೆ ಅವಕಾಶ ಕಲ್ಪಿಸಲಾಯಿತು.

f. ತುರ್ತು ಪರಿಸ್ಥಿತಿ:

ಭಾರತದ ಭದ್ರತೆಗೆ ಆತಂಕ ಎದುರಾದಾಗ ಭಾರತದ ಯಾವುದೇ ಮೂಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ಇನ್ನುಳಿದ ರಾಜ್ಯಗಳು ನಡೆದುಕೊಳ್ಳಬೇಕೆಂದು ಈ ತಿದ್ದುಪಡಿಯ ಮೂಲಕ ತಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಣೆಯಾದರೆ ಪ್ರಜೆಗಳ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಲು

ಅವಕಾಶ ಕಲ್ಪಿಸಲಾಯಿತು. ಸಂವಿಧಾನದ 356ನೇ ವಿಧಿಯಂತೆ ತುರ್ತು ಪರಿಸ್ಥಿತಿ ಘೋಷಣೆಯಾದರೆ 6 ತಿಂಗಳು ಇದ್ದ ಅವಧಿಯು 1 ವರ್ಷಕ್ಕೆ ವಿಸ್ತಾರಗೊಂಡಿತು.

g. ಏಳನೇ ಅನುಸೂಚಿ:

ಸಂವಿಧಾನ ಜಾರಿಗೊಂಡಾಗಿನಿಂದ ರಾಜ್ಯ ಪಟ್ಟಿಯಲ್ಲಿದ್ದ ಶಿಕ್ಷಣ, ಅರಣ್ಯ, ವನ್ಯಜೀವಿ, ಪಕ್ಷಿರಕ್ಷಣೆ, ತೂಕ ಮತ್ತು ಅಳತೆ, ನ್ಯಾಯಿಕ ಆಡಳಿತ, ಸರ್ವೋಚ್ಛ ಮತ್ತು ಉಚ್ಛನ್ಯಾಯಾಲಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ನ್ಯಾಯಾಲಯಗಳ ಸಂಘಟನೆಯ ವಿಷಯವನ್ನು ಸಮವರ್ತಿ ಪಟ್ಟಿಗೆ ಸೇರಿಸಲಾಯಿತು.

ಉಪಸಂಹಾರ 

ಒಟ್ಟಿನಲ್ಲಿ 42ನೇ ಸಂವಿಧಾನ ತಿದ್ದುಪಡಿ ಭಾರತದ ಸಂವಿಧಾನಾತ್ಮಕ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು. ಇದು ಆಡಳಿತದ ಬಲವರ್ಧನೆ ಜೊತೆಗೆ ನ್ಯಾಯಾಂಗ ಮತ್ತು ಪ್ರಜೆಗಳ ಹಕ್ಕುಗಳ ಮೇಲೆ ಪ್ರಶ್ನೆಗಳನ್ನು ಎಬ್ಬಿಸಿತು. ಅನೇಕ ಅಂಶಗಳು ನಂತರದ ತಿದ್ದುಪಡಿಗಳ ಮೂಲಕ ಪರಿಷ್ಕೃತಗೊಂಡರೂ, ಇದರ ಪ್ರಭಾವ ಅಳಿಸಲಾಗದಂತಿದೆ. ಅದರೊಂದಿಗೆ, 42ನೇ ತಿದ್ದುಪಡಿ ಸಂವಿಧಾನದ ಶಕ್ತಿ ಮತ್ತು ಸವಾಲುಗಳನ್ನು ಅರಿಯಲು ಸಹಾಯಕವಾಗಿದೆ.

ಮೂಲಭೂತ ಕರ್ತವ್ಯಗಳು

ಮೂಲಭೂತ ಕರ್ತವ್ಯಗಳು

“ ಭಾರತೀಯ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶಕ್ಕಾಗಿ ನಿರ್ವಹಿಸಬೇಕಾದ ಕಾರ್ಯಗಳನ್ನು ಮೂಲಭೂತ ಕರ್ತವ್ಯಗಳು ಎಂದು ಕರೆಯಲಾಗುತ್ತದೆ.” ಸಂವಿಧಾನದ ಕರ್ತವ್ಯಗಳು ಮೂಲಭೂತ ಹಕ್ಕುಗಳನ್ನು ಗೊತ್ತುಪಡಿಸಿದ ಹಾಗೆ ಮೂಲಭೂತ ಹಕ್ಕುಗಳನ್ನು ಸಹ ಸಂವಿಧಾನದಲ್ಲಿ ನಿರ್ಧರಿಸುವ ಅಗತ್ಯ ಹಿಂದಿನ ಸಂವಿಧಾನ ರಚನಾಕಾರರಿಗೆ ಕಾಣಲಿಲ್ಲ. ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿಯೇ ಹೋಗುವುದರಿಂದ ಯಾರೂ ಸಹ ಕರ್ತವ್ಯಗಳನ್ನು ನಿರ್ವಹಿಸದೇ ಹಕ್ಕುಗಳನ್ನು ಅನುಭವಿಸಲು ಸಾಧ್ಯವಿಲ್ಲ ಎಂಬ ಭರವಸೆಯ ಮೇಲೆ ಹಾಗೆ ಮಾಡಲಾಯಿತು ಎನ್ನಲಾಗಿದೆ. ಆದರೆ ರಷ್ಯಾ, ಚೈನಾ ಹಾಗೂ ಇತರೆ ಸಮಾಜವಾದಿ ದೇಶಗಳಲ್ಲಿ ಮೂಲಭೂತ ಕರ್ತವ್ಯಗಳಿಗೆ ಹೆಚ್ಚು ಒತ್ತು ಕೊಟ್ಟಿರುವುದನ್ನು ನೋಡಬಹುದಾಗಿದೆ. ಜಪಾನಿನಲ್ಲಿಯೂ ಸಹ ಹಕ್ಕುಗಳ ಜೊತೆಗೆ ಕರ್ತವ್ಯಗಳೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಈ ಕಾರಣದಿಂದಾಗಿ ಹಕ್ಕು ಮತ್ತು ಕರ್ತವ್ಯಗಳನ್ನು ಒಂದು ನಾಣ್ಯದ ಎರಡು ಮುಖಗಳೆಂದು ಹೇಳಬಹುದಾಗಿದೆ. ಇದನ್ನರಿತ ಭಾರತ ಸಂವಿಧಾನದ ರಚನಾಕಾರರು ಪಟ್ಟಿ ಮಾಡಿದ ಕರ್ತವ್ಯಗಳನ್ನು ಪ್ರಜೆಗಳು ಸುಮಾರು ಮೂರು ದಶಕಗಳ ಬಳಿಕವೂ ಉದಾಸೀನ ಮಾಡುತ್ತಲೇ ಬಂದರು. ಇದನ್ನರಿತ ಶ್ರೀಮತಿ ಇಂದಿರಾಗಾಂಧಿ ಸರ್ಕಾರ 1975 ಫೆಬ್ರುವರಿ ತಿಂಗಳಲ್ಲಿ ಸಂವಿಧಾನ ಸುಧಾರಣೆಗಾಗಿ ಸ್ವರ್ಣಸಿಂಗ್‌ ರವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿತು. ಈ ಸಮಿತಿಯು ಅದೇ ವರ್ಷ ಮೇ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಈ ಸಮಿತಿಯು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರಿಸಲು ಶಿಫಾರಸ್ಸು ಮಾಡಿತು. ಸ್ವರ್ಣ ಸಿಂಗ್‌ ಸಮಿತಿಯ ಶಿಫಾರಸ್ಸಿನನ್ವಯ ಸಂಸತ್ತು 1976 ರಲ್ಲಿ 42ನೇ ಸಂವಿಧಾನ ತಿದ್ದುಪಡಿಯ ಮೂಲಕ ಭಾರತೀಯ ಪ್ರಜೆಗಳ ಮೂಲಭೂತ ಕರ್ತವ್ಯಗಳನ್ನು ಸಂವಿಧಾನಕ್ಕೆ ಸೇರಿಸಿತು. ಈ ತಿದ್ದುಪಡಿಯ ಪ್ರಕಾರ ಸಂವಿಧಾಕ್ಕೆ 4(A) ಭಾಗ ಮತ್ತು 51(A) ವಿಧಿಯನ್ನು ಹೊಸದಾಗಿ ಸೇರಿಸಿ 10 ಮೂಲಭೂತ ಕರ್ತವ್ಯಗಳನ್ನು ನಿಗದಿಗೊಳಿಸಿತು. ಮುಂದುವರೆದು 2002 ರಲ್ಲಿ ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಮತ್ತೊಂದು ಕರ್ತವ್ಯವನ್ನು ಸೇರಿಸಿತು. ಪ್ರಸ್ತುತ ಈಗ 11 ಮೂಲಭೂತ ಕರ್ತವ್ಯಗಳಿದ್ದು ಅವುಗಳು ಈ ಕೆಳಗಿನಂತಿವೆ.

1. ರಾಷ್ಟ್ರಗೀತೆ, ರಾಷ್ಟ್ರಧ್ವಜ ಹಾಗೂ ಸಂವಿಧಾನಾತ್ಮಕ ಆದರ್ಶ ಹಾಗೂ ಸಂಸ್ಥೆಗಳನ್ನು ಗೌರವಿಸುವುದು:

ಭಾರತದ ಪ್ರಜೆಗಳಾದ ನಾವು ರಾಷ್ಟ್ರಗೀತೆಯನ್ನು ನಿಗದಿಪಡಿಸಿದ ಸಮಯದಲ್ಲಿಯೇ ಹಾಡಿ ಮುಗಿಸಬೇಕು. ಪ್ರತಿಯೊಬ್ಬರೂ ರಾಷ್ಟ್ರಗೀತೆಯನ್ನು ಹಾಡುವಾಗ ಎದ್ದು ನಿಂತು ಗೌರವ ಸೂಚಿಸಬೇಕು. 2002 ರ ಧ್ವಜ ಸಂಹಿತೆಯ ಪ್ರಕಾರ ಅದನ್ನು ಉಪಯೋಗಿಸುವ ಮೂಲಕ ಗೌರವ ಕೊಡಬೇಕು. ಇದರೊಂದಿಗೆ ಸಂವಿಧಾನದ ಆದರ್ಶಗಳಾದ ಸಮಾಜವಾದ, ಜಾತ್ಯಾತೀತತೆ, ಗಣತಂತ್ರ ವ್ಯವಸ್ಥೆ, ಸಾಮಾಜಿಕ ನ್ಯಾಯ ಮುಂತಾದವುಗಳನ್ನು ಪಾಲಿಸುವ ಮೂಲಕ ಗೌರವಿಸಬೇಕು.ಇದು ಅಲ್ಲದೆ ಸಂಸತ್ತು, ಸರ್ವೋಚ್ಛ ನ್ಯಾಯಾಲಯ, ಚುನಾವಣಾ ಆಯೋಗ ಮುಂತಾದ ಸಂಸ್ಥೆಗಳನ್ನು ಸಹ ಗೌರವಿಸಿ ಅವುಗಳಿಗೆ ವಿಧೇಯತೆಯನ್ನು ತೋರಬೇಕು. ರಾಷ್ಟ್ರ ರಕ್ಷಣೆಗಾಗಿ ದುಡಿಯುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ.

2. ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಉದಾತ್ತ ಮೌಲ್ಯಗಳನ್ನು ಪಾಲಿಸುವುದು:

ಭಾರತವು ಸುಮಾರು 300 ವರ್ಷಗಳಿಗೂ ಅಧಿಕ ವರ್ಷಗಳ ಕಾಲ ಬ್ರಿಟೀಷರ ದಾಸ್ಯಕ್ಕೆ ಒಳಗಾಗಿತ್ತು. ಬ್ರಿಟೀಷರಿಂದ ಭಾರತವನ್ನು ಬಿಡುಗಡೆಗೊಳಿಸಲು ದೇಶದ ಮಹಾನ್‌ ನಾಯಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದರು. ಅನೇಕ ಮಹನೀಯರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದರು. ಬ್ರಿಟೀಷರ ವಿರುದ್ಧ ನಿರಂತರ ಹೋರಾಟ ನಡೆಯಿತು. ಈ ಹೋರಾಟಕ್ಕೆ ಫ್ರಾನ್ಸಿನ ಕ್ರಾಂತಿಯ ತತ್ವಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವಗಳು ಭಾರತೀಯರ ಮೇಲೆ ಪ್ರಭಾವ ಬೀರಿದವು. ಅಂತಿಮವಾಗಿ ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಡುವಲ್ಲಿ ಯಶಸ್ವಿಯಾದರು. ಹಾಗಾಗಿ ನಮ್ಮ ಹೋರಾಟಗಾರರು ಪಾಲಿಸಿಕೊಂಡು ಬಂದಿದ್ದ ತ್ಯಾಗ, ಬಲಿದಾನ ಹಾಗೂ ಅಹಿಂಸೆ ಇತ್ಯಾದಿ ಉದಾತ್ತ ಮೌಲ್ಯಗಳನ್ನು ಇಂದಿನ ನಮ್ಮ ಪ್ರಜೆಗಳು ತಮ್ಮ ನಿತ್ಯ ಜೀವನದಲ್ಲಿ ಪಾಲಿಸುವುದು ಅವರ ಆದ್ಯ ಕರ್ತವ್ಯಗಳಾಗಿವೆ.

3. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:

ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.

4. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:

ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.

5. ಭಾರತದ ಸಾರ್ವಭೌಮತೆ, ಐಕ್ಯತೆ ಹಾಗೂ ಅಖಂಡತೆಯನ್ನು ಎತ್ತಿ ಹಿಡಿಯುವುದು:

ಭಾರತದ ಪರಮಾಧಿಕಾರಕ್ಕೆ ಧಕ್ಕೆ ತರುವಂತಹ ಯಾವುದೇ ಕಾರ್ಯಗಳನ್ನು ಮಾಡದಂತೆ ಪ್ರಜೆಗಳು ಎಚ್ಚರವಹಿಸುವುದು ಬಹಳ ಮುಖ್ಯವಾದ ಕರ್ತವ್ಯ. ಪ್ರಜೆಗಳು ತಮ್ಮ ನಡುವಿನ ಜಾತಿ, ಧರ್ಮ, ಮೇಲು-ಕೀಳು, ಸ್ಪೃಶ್ಯ –ಅಸ್ಪೃಶ್ಯ , ಬಡವ-ಶ್ರೀಮಂತ, ಧರ್ಮ, ಪ್ರದೇಶ, ಸ್ಥಾನಮಾನ ಹಾಗೂ ಭಾಷೆಗಳನ್ನು ಬದಿಗೊತ್ತಿ ನಾವೆಲ್ಲಾ ಭಾರತೀಯರು ಎನ್ನುವ ಭಾವನೆಗಳನ್ನು ಮೂಡಿಸಿಕೊಳ್ಳಬೇಕು. ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದ ದೇಶ ಎಂಬುದನ್ನು ಯಾವ ಪ್ರಜೆಗಳೂ ಮರೆಯಬಾರದು. ಸಹೋದರತೆಯನ್ನು ರೂಢಿಸಿಕೊಂಡು ನಾವೆಲ್ಲಾ ಒಂದೇ ಕುಟುಂಬದ ಸದಸ್ಯರು ಎನ್ನುವ ತತ್ವವನ್ನು ಎಲ್ಲಡೆ ಸಾರಬೇಕು. ಸರ್ವೇಜನ ಸುಖಿನೋಭವಂತು ಮತ್ತು ವಸುದೈವ ಕುಟುಂಬಕಂ ಎನ್ನುವ ಎರಡು ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಅಖಂಡತೆಗೆ ಧಕ್ಕೆ ತರುವ ಯಾವುದೇ ಚಟುವಟಿಕೆಗಳಲ್ಲಿ ತೊಡಗದಿರುವುದೇ ಪ್ರಜೆಗಳ ಮೂಲ ಕರ್ತವ್ಯವಾಗಬೇಕು.

6. ದೇಶದ ರಕ್ಷಣೆಗೆ ಕರೆ ಬಂದಾಗ ದೇಶಸೇವೆಗೆ ಸದಾ ಸಿದ್ಧರಾಗಿರುವುದು:

ಭಯೋತ್ಪಾದನೆ ಹಾಗೂ ಕೋಮುಭಾವನೆಯಿಂದ ಪ್ರತಿಯೊಂದು ದೇಶಗಳು ಇಂದು ಸಂಕಷ್ಟವನ್ನು ಎದುರಿಸುತ್ತಿವೆ. ಅದರಲ್ಲೂ ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ ಇದು ಸರ್ವೇಸಾಮನ್ಯವಾಗಿದೆ. ಆದುದರಿಂದ ದೇಶ ಇಂತಹ ಆಪತ್ತಿಗೆ ಸಿಲುಕಿದಾಗ ಪ್ರಜೆಗಳು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡಬೇಕಾಗುತ್ತದೆ. ಪ್ರಜೆಗಳು ಜೀವ ನೀಡಿದರೆ ದೇಶ ಜೀವಂತವಾಗಿರುತ್ತದೆ. ಮಾತೃಭೂಮಿಗೋಸ್ಕರ ಪೌರನು ಯಾವ ತ್ಯಾಗಕ್ಕೂ ಸಿದ್ಧನಿರಬೇಕು. ಅದು ಆತನ ಕರ್ತವ್ಯವೂ ಹೌದು ಯುದ್ಧದ ಸಂದರ್ಭದಲ್ಲಿ ಅಷ್ಟೇ ಅಲ್ಲದೇ ಪ್ರವಾಹ, ಭೂಕಂಪ, ನೆರೆಹಾವಳಿ, ಪ್ರಕೃತಿ ವಿಕೋಪಗಳು ಮುಂತಾದ ಸಂದರ್ಭದಲ್ಲಿಯೂ ಪ್ರಜೆಗಳು ಧೃತಿಗೆಡದೆ ಸಹಾಯಹಸ್ತ ನೀಡಬೇಕು.

7. ಪ್ರಜೆಗಳ ನಡುವೆ ಸಾಮರಸ್ಯ ಮತ್ತು ಸಹೋದರತೆಯನ್ನು ಬೆಳೆಸುವುದು ಹಾಗೂ ಮಹಿಳೆಯರನ್ನು ಗೌರವಿಸುವುದು:

ಭಾರತವು ವೈವಿಧ್ಯತೆಗಳಿಂದ ಕೂಡಿದ ಏಕತೆಯ ರಾಷ್ಟ್ರವಾಗಿದೆ. ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಪ್ರಾದೇಶಿಕ ಹಾಗೂ ಭಾಷಾ ವೈವಿಧ್ಯತೆ ಇದೆ. ಇವುಗಳ ನಡುವೆ ಸಾಮರಸ್ಯತೆಯನ್ನು ಉಂಟುಮಾಡಿ ಸಮಾಜದಲ್ಲಿ ನಾವೆಲ್ಲಾ ಒಂದೇ ಎಂಬ ಭಾವನಾತ್ಮಕ ಬೆಸುಗೆಯನ್ನು ಹಾಕಬೇಕಾದದ್ದು ಅಗತ್ಯವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಸಹೋದರತೆಯ ಭಾವನೆಯನ್ನು ಮೂಡಿಸಿಕೊಳ್ಳಬೇಕು. ಜೊತೆಗೆ ಸ್ತ್ರೀಯರಿಗೆ ಗೌರವ ಕೊಡಬೇಕು. ಯಾವುದೇ ಸಮಾಜ ಸ್ತ್ರೀಯರನ್ನು ಕಡೆಗಣಿಸಿದರೆ ಆ ಸಮಾಜ ಉದ್ಧಾರವಾಗದು ಎಂಬುದನ್ನೂ ಅರಿತುಕೊಳ್ಳಬೇಕು. ಸ್ತ್ರೀಯರನ್ನು ಗೌರವಿಸುವುದೇ ಪ್ರಜೆಗಳ ಆದ್ಯ ಕರ್ತವ್ಯವಾಗಬೇಕು.

8. ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಗೌರವಿಸುವುದು:

ಪ್ರಾಚೀನ ಕಾಲದಿಂದಲೂ ಭಾರತವು ಶ್ರೀಮಂತ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದೆ. ಇಲ್ಲಿ ಭವ್ಯ ಕಲಾಪರಂಪರೆ, ಭಾರತೀಯ ವಾಸ್ತುಶಿಲ್ಪ, ಸಂಗೀತ, ನೃತ್ಯ, ಚಿತ್ರಕಲೆ ಹಾಗೂ ಲಲಿತ ಕಲೆಗಳು ಒಂದೊಂದು ಕ್ಷೇತ್ರದಲ್ಲಿ ತನ್ನದೇ ಆದ ಸೊಬಗಿನಿಂದ ಕಂಗೊಳಿಸುತ್ತಿದೆ. ಮಹಾರಾಷ್ಟ್ರದ ಅಜಂತಾ, ಎಲ್ಲೋರಾ ಹಾಗೂ ಎಲಿಫೆಂಟಾ, ಕರ್ನಾಟಕದ ಬಾದಾಮಿಯಲ್ಲಿ ಕಂಡುಬರುವ ಭಿತ್ತಿಚಿತ್ರಗಳು ಮಥುರಾದ ದೇವಾಲಯಗಳು, ಅಮರಾವತಿ, ನಾಗಾರ್ಜುನಕೊಂಡ, ಸಾಂಚಿ ಕಾರ್ಲೆಗಳಲ್ಲಿನ ಬೌದ್ಧ ಸ್ತೂಪಗಳು ಮತ್ತು ಮಧುರೈ, ಕಾಂಚಿ ಹಾಗೂ ತಂಜಾವೂರುಗಳಲ್ಲಿನ ದೇವಾಲಯಗಳು, ಹಂಪೆ, ಹಳೇಬೀಡು, ಬೇಲೂರಿನ ಶಿಲ್ಪಗಳು, ಗುಲಬರ್ಗಾ, ಬೀದರ್‌ ಹಾಗೂ ಬಿಜಾಪುರದಲ್ಲಿನ ಮಸೀದಿಗಳು, ಅರಮನೆಗಳು, ಉದ್ಯಾನವನಗಳು ಒಂದೇ ಎರಡೇ ಹಲವಾರು ಸಾಂಸ್ಕೃತಿಕ ಶ್ರೀಮಂತಿಕೆಯ ಅಧ್ಬುತಗಳು. ಇಂತಹ ಶ್ರೀಮಂತಿಕೆಯನ್ನು ಭಾರತೀಯರಾದ ನಾವುಗಳು ಸದಾ ಗೌರವಿಸುತ್ತಾ ಮುಂದಿನ ಪೀಳಿಗೆಯು ಸಹ ಅವುಗಳನ್ನು ಗೌರವಿಸುವಂತೆ ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ.

9. ಪರಿಸರ ಸಂರಕ್ಷಣೆ:

ಭಾರತವು ಒಂದು ಕಡೆ ನೆಲ ಹಾಗೂ ಮೂರುಕಡೆಗಳಲ್ಲಿ ಸಾಗರಗಳನ್ನು ಹೊಂದಿ ಪರ್ಯಾಯ ಪ್ರಸ್ಥಭೂಮಿ ಎಂದು ಹೆಸರಾಗಿದೆ. ದೇಶದಲ್ಲಿ ಅರಣ್ಯ, ಸಸ್ಯಸಂಪತ್ತು, ಪ್ರಾಣಿಸಂಪತ್ತು, ಪಕ್ಷಿಸಂಕುಲ ತುಂಬಿ ತುಳುಕುತ್ತಿದೆ. ಆದರೆ ಇಂದಿನ ಮಿತಿಮೀರಿದ ಜನಸಂಖ್ಯೆಯಿಂದಾಗಿ ಭಾರತದ ಪರಿಸರ ಹಿಂದೆಂದಿಗಿಂತಲೂ ಇಂದು ಕಲುಷಿತಗೊಂಡಿದೆ. ಅರಣ್ಯಗಳು ಕಡಿಮೆಯಾಗುತ್ತಿವೆ. ಜಲಮೂಲಗಳು ಬತ್ತಿಹೋಗುತ್ತಿವೆ. ಜಲಚರಗಳು ನಾಶವಾಗುತ್ತಿವೆ. ವನ್ಯಪ್ರಾಣಿಗಳು ಕಾಣೆಯಾಗಿವೆ. ವಾಯುಮಾಲಿನ್ಯ, ಜಲಮಾಲಿನ್ಯ ಹಾಗೂ ಭೂಮಾಲಿನ್ಯದಿಂದಾಗಿ ರೋಗರುಜಿನಗಳು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿವೆ. ಹಾಗಾಗಿ ಭಾರತೀಯರು ಪರಿಸರವನ್ನು ರಕ್ಷಿಸಿ ದೇಶವನ್ನು ಇಂತಹ ಅಪಾಯಗಳಿಂದ ಪಾರುಮಾಡುವ ಹೊಣೆಗಾರಿಕೆಯನ್ನು ಹೊರಬೇಕಾದುದು ಅನಿವಾರ್ಯವಾಗಿದೆ.

10. ವೈಜ್ಞಾನಿಕ ಮನೋಭಾವವನನ್ನು ಬೆಳಿಸಿಕೊಳ್ಳುವುದು:

ಭಾರತದ ಮನುಕುಲಕ್ಕೆ ಮಾರಕವಾದ ಜಾತೀಯತೆ, ಸಂಕುಚಿತ ಮನೋಭಾವ, ಭಾಷಾ ವೈವಿಧ್ಯತೆ, ಪ್ರಾದೇಶಿಕತೆ, ಕೋಮುವಾದ, ಅಸ್ಪೃಶ್ಯತೆ, ಕಂದಾಚಾರಗಳು, ಪೂರ್ವಾಗ್ರಹ, ಮೌಢ್ಯಗಳು, ರೂಢಿ ಸಂಪ್ರದಾಯಗಳು ಮತ್ತು ಸಾಮಾಜಿಕ ಅನಿಷ್ಟಗಳಾದ ಸತಿ, ದೇವದಾಸಿ ಹಾಗೂ ವೇಶ್ಯಾವೃತ್ತಿ ಮುಂತಾದವುಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಜೊತೆಗೆ ಮಾನವೀಯ ಗುಣಗಳಾದ ದಯೆ, ಕರುಣೆ, ಅನುಕಂಪ, ಸಹಕಾರ, ತ್ಯಾಗ ಮುಂತಾದವುಗಳನ್ನು ಅಳವಡಿಸಿಕೊಳ್ಳಬೇಕು.

12. ಸಾರ್ವಜನಿಕ ಆಸ್ತಿಯನ್ನು ರಕ್ಷಿಸಿ ಗೌರವಿಸುವುದು:

ಸ್ವತಂತ್ರ ಭಾರತದಲ್ಲಿ ನಡೆಯುವ ಸಾರ್ವಜನಿಕ ಪ್ರತಿಭಟನೆ, ಹರತಾಳ ಹಾಗೂ ಹಿಂಸಾಚಾರದಂತಹ ಸಂದರ್ಭಗಳಲ್ಲಿ ಭಾರತೀಯರು ಅದರಲ್ಲೂ ಯುವಕರು ಸಾರ್ವಜನಿಕ ಆಸ್ತಿಗಳನ್ನು ನಾಶಪಡಿಸುವುದು, ಕಟ್ಟಡಗಳಿಗೆ ಕಲ್ಲು ಎಸೆಯುವುದು, ಬಸ್ಸುಗಳಿಗೆ ಬೆಂಕಿ ಹಚ್ಚುವುದು ಮುಂತಾದ ಹಿಂಸಾಕೃತ್ಯಗಳಲ್ಲಿ ತೊಡಗುತ್ತಾರೆ. ಹೀಗೆ ನಾಶಗೊಂಡ ಆಸ್ತಿಗಳ ಪುನರ್‌ ನಿರ್ಮಾಣಕ್ಕೆ ಸಾರ್ವಜನಿಕರ ತೆರಿಗೆ ಹಣದಿಂದಲೇ ಖರ್ಚುವೆಚ್ಚಗಳನ್ನು ಮಾಡಬೇಕಾಗುತ್ತದೆ. ಜೊತೆಗೆ ಹಿಂಸಾಚಾರಕ್ಕೆ ಒಳಗಾದ ವ್ಯಕ್ತಿಗಳಿಗೆ ಅಥವಾ ಆಸ್ತಿ ಪಾಸ್ತಿಗಳ ಹಾನಿಗಳನ್ನು ತುಂಬಿಕೊಡಲು ಸಾರ್ವಜನಿಕರ ಹಣವನ್ನೇ ಸರ್ಕಾರ ನೀಡುತ್ತದೆ. ಹಾಗಾಗಿ ಪ್ರಜೆಗಳು ಇತರರ ಮೇಲೆ ಹಿಂಸಾಚಾರ ನೆಡೆಸುವುದನ್ನು ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಧಕ್ಕೆ ತರುವುದನ್ನು ನಿಲ್ಲಿಸಿ ದೇಶದ ಸಮಗ್ರತೆಗೆ ಪಣತೊಡಬೇಕಾದುದು ಅವರ ಕರ್ತವ್ಯವಾಗಿದೆ.

13. ದೇಶದ ಅಭಿವೃದ್ಧಿಗೆ ಶ್ರಮಿಸುವುದು:

ಯಾವುದೇ ದೇಶದ ಅಭಿವೃದ್ಧಿಯು ಆ ದೇಶದ ಜನರನ್ನು ಅವಲಂಬಿಸಿದೆ. ಒಂದು ದೇಶದ ಸಂಪತ್ತು ಎಂದರೆ ಆ ದೇಶದ ಪ್ರಜೆಗಳೇ ಆಗಿದ್ದಾರೆ. ಅವರು ತಮ್ಮ ಆಸಕ್ತಿದಾಯಕ ಮತ್ತು ಸಾಮರ್ಥ್ಯವಿರುವ ಕ್ಷೇತ್ರದಲ್ಲಿ ಶ್ರದ್ಧೆಯಿಂದ ದುಡಿದು ಪ್ರಗತಿ ಸಾಧಿಸಬೇಕು. ಆಗ ಮಾತ್ರ ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಸರ್ವತೋಮುಖ ಪ್ರಗತಿ ಸಾಧ್ಯವಾಗುತ್ತದೆ.

14. ವರ್ಷ ವಯಸ್ಸಿನ ಒಳಗಿನ ಮಕ್ಕಳಿಗೆ ಶಿಕ್ಷಣ ನೀಡುವುದು:

ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ 2002 ರಲ್ಲಿ ಸಂವಿಧಾನದ ಮೂರನೇ ಭಾಗಕ್ಕೆ 21 ವಿಧಿ ಸೇರಿಸಿ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿತು. ಇದರಿಂದ 14 ವರ್ಷ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ನೀಡುವುದು ಸರ್ಕಾರದ ಕರ್ತವ್ಯವೆಂದು ಪರಿಗಣಿಸಲಾಯಿತು.

ಉಪಸಂಹಾರ  

ಮೂಲಭೂತ ಕರ್ತವ್ಯಗಳು ಜಾಗೃತ ನಾಗರಿಕನ ಲಕ್ಷಣಗಳಾಗಿವೆ. ಪ್ರಜೆಗಳು ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸಿದರೆ ಮಾತ್ರ ಹಕ್ಕುಗಳಿಗೆ ನಿಜವಾದ ಅರ್ಥ ಸಿಗುತ್ತದೆ. ಸಾಮಾಜಿಕ ಸಾಮರಸ್ಯ, ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರಭಕ್ತಿ ಈ ಕರ್ತವ್ಯಗಳ ಮೂಲ ಉದ್ದೇಶವಾಗಿದೆ. ಹೀಗಾಗಿ ಪ್ರತಿಯೊಬ್ಬ ಭಾರತೀಯನು ಮೂಲಭೂತ ಕರ್ತವ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ರಾಜ್ಯ ನಿರ್ದೇಶಕ ತತ್ವಗಳು ಹಾಗೂ ಅದರ ವರ್ಗೀಕರಣ

ರಾಜ್ಯ ನಿರ್ದೇಶಕ ತತ್ವಗಳು ಹಾಗೂ ಅದರ ವರ್ಗೀಕರಣ

“ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯಗಳನ್ನು ದೇಶದ ಪ್ರಜೆಗಳಿಗೆ ದೊರಕಿಸಿಕೊಡುವ ಉದ್ದೇಶದಿಂದ ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದಲ್ಲಿ ಅಳವಡಿಸಲಾಗಿದೆಯಲ್ಲದೇ ಅವುಗಳು ಮೂಲಭೂತ ಹಕ್ಕುಗಳಿಗಿಂತ ಮುಖ್ಯವಾದವೆಂದು ಪರಿಗಣಿಸಲಾಗಿದೆ.” – ಪ್ರೊ. ಕೆ.ಸಿ. ಮರ್ಕಾನಂದನ್

ಭಾರತದ ಸಂವಿಧಾನದ ಪ್ರಸ್ತಾವನೆಯಲ್ಲಿ ದೇಶದ ಎಲ್ಲಾ ಜನರಿಗೂ ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಧಾರ್ಮಿಕ ನ್ಯಾಯವನ್ನು ದೊರಕಿಸಿಕೊಟ್ಟು ಎಲ್ಲಾ ಜನರಿಗೂ ಸಮಾನ ಸ್ಥಾನಮಾನಗಳನ್ನು ನೀಡಿ ಸುಖೀ ರಾಜ್ಯದ ಸ್ಥಾಪನೆಯನ್ನು ಮಾಡುವ ಧ್ಯೇಯವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಧ್ಯೇಯಗಳನ್ನು ಸರ್ಕಾರಗಳು ಕಾರ್ಯಗತಗೊಳಿಸುವಂತೆ ಸರ್ಕಾರಗಳಿಗೆ ಸಂವಿಧಾನವು ಆದೇಶಗಳನ್ನು ನೀಡುತ್ತದೆ. ಈ ಆದೇಶಗಳೇ ರಾಜ್ಯ ನಿರ್ದೇಶಕ ತತ್ವಗಳು ಎಂದು ಹೆಸರಾಗಿವೆ. ಸಂವಿಧಾನದ 4 ನೇ ಭಾಗದಲ್ಲಿ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಈ ತತ್ವಗಳನ್ನು ಸರ್ಕಾರಗಳು ಕಡ್ಡಾಯವಾಗಿ ಪಾಲಿಸಬೇಕೆಂಬ ನಿಯಮವೇನೂ ಇಲ್ಲ. ಒಂದು ವೇಳೆ ಸರ್ಕಾರ ಈ ನಿಯಮವನ್ನು ಪಾಲನೆ ಮಾಡದಿದ್ದರೆ ಪೌರನಾದವನು ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ. ನಮ್ಮ ಸಂವಿಧಾನ ರಚನಾಕಾರರು ರಾಜ್ಯ ನಿರ್ದೇಶಕ ತತ್ವಗಳನ್ನು ಐರಿಷ್‌ ಗಣರಾಜ್ಯದಿಂದ ಎರವಲು ಪಡೆದಿದ್ದಾರೆ. ಐರ್ಲೆಂಡ್‌ ದೇಶವು ಸ್ಪೇನ್‌ ದೇಶದ ಸಂವಿಧಾನದಿಂದ ಎರವಲು ಪಡೆದಿದೆ. ಡಾ. ಬಿ.ಆರ್.‌ ಅಂಬೇಡ್ಕರರು ರಾಜ್ಯ ನಿರ್ದೇಶಕ ತತ್ವಗಳು ನಮ್ಮ ಸಂವಿಧಾನದ ಒಂದು ಪ್ರಮುಖವಾದ ಲಕ್ಷಣ ಎಂದಿದ್ದಾರೆ. ರಾಜ್ಯ ನಿರ್ದೇಶಕ ತತ್ವಗಳು ಕಲ್ಯಾಣ ರಾಜ್ಯ ಸ್ಥಾಪನೆಯ ಗುರಿಯನ್ನು ಹೊಂದಿದೆ ಎಂದು ಡಾ. ಬಾಬು ರಾಜೇಂದ್ರ ಪ್ರಸಾದರು ಹೇಳಿದ್ದಾರೆ.

ಸಂವಿಧಾನದ 4ನೇ ಭಾಗದಲ್ಲಿರುವ ವಿಧಿಗಳು (36 ರಿಂದ 51 ರವರೆಗೆ) ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ ವಿವರಗಳನ್ನು ಒಳಗೊಂಡಿದೆ.

ರಾಜ್ಯ ನೀತಿ ನಿರ್ದೇಶಕ ತತ್ವಗಳ ವರ್ಗೀಕರಣ: (Classification of directive principles of state policy)

ಭಾರತ ಸಂವಿಧಾನದ 4 ನೇ ಅಧ್ಯಾಯದಲ್ಲಿ 35 ರಿಂದ 51 ನೇ ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳನ್ನು ಅಳವಡಿಸಲಾಗಿದೆ. ಇವುಗಳನ್ನು ಯೋಜನಾಬದ್ಧವಾಗಿ ಸೇರಿಸಿಲ್ಲವಾದ ಕಾರಣ ಅವುಗಳನ್ನು ವೈಜ್ಞಾನಿಕ ತಳಹದಿಯ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ರಾಜ್ಯನೀತಿ ನಿರ್ದೇಶಕ ತತ್ವಗಳನ್ನು ಸಮಾಜವಾದಿ, ಗಾಂಧೀವಾದಿ ಹಾಗೂ ಉದಾರ ತತ್ವಗಳು ಎಂಬ 3 ವಿಭಾಗಗಳಾಗಿ ಗುರುತಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ,

1. ಸಮಾಜವಾದಿ ತತ್ವಗಳು ( The socialistic principles)

ಭಾರತದ ಸಂವಿಧಾನದ ಪ್ರಸ್ತಾವನೆಗೆ 1976 ರಲ್ಲಿ ಸಮಾಜವಾದಿ ಪದವನ್ನು ಸೇರಿಸುವ ಮೂಲಕ ಭಾರತವನ್ನು ಸಮಾಜವಾದಿ ರಾಷ್ಟ್ರವೆಂದು ಘೋಷಿಸಲಾಯಿತು. 1976 ಕ್ಕಿಂತ ಮುಂಚೆ ಸಂವಿಧಾನದಲ್ಲಿ ಸಮಾಜವಾದಿ ಅಂಶಗಳನ್ನು ರಾಷ್ಟ್ರನೀತಿ ನಿರ್ದೇಶಕ ತತ್ವಗಳಲ್ಲಿ ಅಳವಡಿಸಿದ್ದರು. ಸಮಾಜವಾದಿ ಸಿದ್ಧಾಂತದ ಉದ್ದೇಶವನ್ನು ಪ್ರತಿನಿಧಿಸುವ ಪ್ರಮುಖ ನಿರ್ದೇಶಕ ತತ್ವಗಳೆಂದರೆ,

a. ಸಂವಿಧಾನದ 38(1)ನೇ ವಿಧಿಯ ಪ್ರಕಾರ ರಾಜ್ಯವು ಪ್ರಜಾಕಲ್ಯಾಣಕ್ಕಾಗಿ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ನ್ಯಾಯವನ್ನು ದೊರಕಿಸಿಕೊಡಬೇಕು.

b.  ಸಂವಿಧಾನದ 38(2)ನೇ ಉಪವಿಧಿಗೆ 44ನೇ ತಿದ್ದುಪಡಿ ತಂದು ಪ್ರಜೆಗಳ ಆದಾಯದ ಅಸಮಾನತೆಯನ್ನು ಕಡಿಮೆಗೊಳಿಸಿ, ವ್ಯಕ್ತಿಗಳ, ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಜನರ ಸೌಲಭ್ಯಗಳ ಮತ್ತು ಅವಕಾಶಗಳ ಅಸಮಾನತೆಯನ್ನು ತೆಗೆದು ಹಾಕಲು ರಾಜ್ಯವು ಪ್ರಯತ್ನಿಸಬೇಕು.

c. ಸಂವಿಧಾನದ 39(A) ವಿಧಿಯಂತೆ ರಾಜ್ಯದ ಪ್ರಜೆಗಳ ಉತ್ತಮ ಜೀವನಕ್ಕೆ ಅನುಕೂಲವಾಗುವಂತಹ ಸಾಧನಗಳನ್ನು ಹೊಂದುವಂತಹ ನೀತಿ ಅಥವಾ ಕಾರ್ಯಗಳನ್ನು ರೂಪಿಸಿ ಜಾರಿಗೆಗೊಳಿಸಬೇಕು.

d. ಸಂವಿಧಾನದ 39(B) ವಿಧಿಯ ಪ್ರಕಾರ ದೇಶದ ಸಂಪನ್ಮೂಲಗಳು ಸರ್ವರಿಗೂ ಹಂಚಿ ಹೋಗುವಂತೆ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ.

e. ಸಂವಿಧಾನದ 39(C) ವಿಧಿಯಂತೆ ರಾಜ್ಯದ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗದಂತೆ ಮತ್ತು ಸಮಾನವಾಗಿ ಹಂಚಿಕೆಯಾಗುವಂತೆ ಕ್ರಮ ಕೈಗೊಳ್ಳಬೇಕು.

f. ಸಂವಿಧಾನದ 39(D) ವಿಧಿಯಂತೆ ರಾಜ್ಯವು ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.

g. ಸಂವಿಧಾನದ 39(E) ವಿಧಿಯಂತೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಸೇರಿದಂತೆ ಪ್ರಜೆಗಳ ಆರೋಗ್ಯವನ್ನು ಕಾಪಾಡುವುದು ಸರ್ಕಾರದ ಹೊಣೆಯಾಗಿದೆ.

h. ಸಂವಿಧಾನದ 39(F) ವಿಧಿಯ ಪ್ರಕಾರ ಮಕ್ಕಳು ಆರೋಗ್ಯವಾಗಿ ಬೆಳೆಯಲು ಅವಕಾಶಗಳು ಹಾಗೂ ಸೌಲಭ್ಯಗಳನ್ನು ನೀಡಿ ಅವರ ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವದ ಬೆಳವಣಿಗೆಗೆ ಅನುಕೂಲ ಮಾಡಿಕೊಡಬೇಕು. ಮಕ್ಕಳು ಮತ್ತು ಯುವಕರು ಶೋಷಣೆಯ ವಿರುದ್ಧ ರಕ್ಷಣೆಯನ್ನು ಪಡೆಯಬೇಕು.

i. ಸಂವಿಧಾನದ 42 ನೇ ತಿದ್ದುಪಡಿಮ ಮೂಲಕ 39(A) ವಿಧಿಯ ಅನ್ವಯ ರಾಜ್ಯವು ಸಮಾನ ಅವಕಾಶದ ಆಧಾರದ ಮೇಲೆ ನ್ಯಾಯವನ್ನು ದೊರಕಿಸಿ ಬಡವರಿಗೆ ಉಚಿತ ಕಾನೂನು ನೆರವನ್ನು ನೀಡಬೇಕು.

j. ಸಂವಿಧಾನದ 40 ನೇ ವಿಧಿಯ ಪ್ರಕಾರ ರಾಜ್ಯವು ಗ್ರಾಮ ಪಂಚಾಯತಿಗಳನ್ನು ಸ್ಥಾಪಿಸಿ ಅವುಗಳು ಸಮರ್ಪಕವಾಗಿ ಕಾರ್ಯಗಳನ್ನು ನಿರ್ವಹಿಸುವಂತೆ ಅಧಿಕಾರವನ್ನು ನೀಡಬೇಕು.

k. ಸಂವಿಧಾನದ 41 ನೇ ವಿಧಿಯಂತೆ ನಿರುದ್ಯೋಗಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ ಹಾಗೂ ಅಂಗವಿಕಲರಿಗೆ ಹಣ ಸಂದಾಯ ಮಾಡಿ ಅವರ ಏಳಿಗೆಗೆ ಶ್ರಮಿಸಬೇಕು.

l. ಸಂವಿಧಾನದ 42 ನೇ ವಿಧಿಯು ಕಾರ್ಮಿಕರು ಉತ್ತಮ ಜೀವನ ನಿರ್ವಹಣೆ ಮಾಡಲು ವಿರಾಮ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಅವಕಾಶಗಳನ್ನು ಅನುಭವಿಸುವಂತಾಗಲು ರಾಜ್ಯವು ಗ್ರಾಮೀಣ ಪ್ರದೇಶಗಳ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕು.

m. ಸಂವಿಧಾನದ 42 ನೇ ತಿದ್ದುಪಡಿಯ 42(A) ವಿಧಿಯ ಅನ್ವಯ ಕಾರ್ಮಿಕರು ಉದ್ಯಮಗಳ ಕಾರ್ಯನಿರ್ವಹಣೆಯಲ್ಲಿ ಭಾಗವಹಿಸುವಂತೆ ರಾಜ್ಯವು ಕ್ರಮ ಕೈಗೊಳ್ಳುವಂತೆ ಮಾಡಲಾಗಿದೆ.  

ಗಾಂಧೀವಾದದ ತತ್ವಗಳು (The gandhian principles)

ಭಾರತದ ಸ್ವಾತಂತ್ರ್ಯ ಹೋರಾಟಗಾರ, ರಾಷ್ಟ್ರಪಿತ, ಬಾಪೂಜಿ ಹಾಗೂ ಭಾರತದ ಪಿತಾಮಹ ಎಂದು ಹೆಸರಾದ ಗಾಂಧೀಜಿಯವರು ಸ್ವಾತಂತ್ರ್ಯದ ಹೋರಾಟದ ಸಮಯದಲ್ಲಿ ಅನೇಕ ಆಚರಣೆಗಳು, ನಂಬಿಕೆ, ಮೌಲ್ಯಗಳನ್ನು ಅಳವಡಿಸಿಕೊಂಡು ಭಾರತೀಯ ನಾಗರಿಕರಿಗೆ ಮಾದರಿಯಾದರು. ಆದ್ದರಿಂದ ಭಾರತದ ಬಲಿಷ್ಠ ನಿರ್ಮಾಣಕ್ಕೆ ಸಾದ್ಯವಾಯಿತು. ಅವರು ನೀಡಿದ ಕೆಲವು ಸಲಹೆಗಳನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಅಳವಡಿಸಲಾಯಿತು.

  1. ಸಂವಿಧಾನದ 40 ನೇ ವಿಧಿಯಂತೆ ರಾಜ್ಯವು ಗ್ರಾಮಪಂಚಾಯತಿಗಳನ್ನು ಸ್ಥಾಪಿಸಿ ಅವುಗಳನ್ನು ಸ್ವಯಂ ಆಡಳಿತ ಸಂಸ್ಥೆಗಳನ್ನಾಗಿ ಮಾಡುವುದು.
  2. ಸಂವಿಧಾನದ 43 ನೇ ವಿಧಿಯ ಪ್ರಕಾರ ಗ್ರಾಮೀಣ ಭಾಗದಲ್ಲಿ ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿ ಅವುಗಳನ್ನು ಸಹಕಾರಿ ಆಧಾರದ ಮೇಲೆ ರೂಪಿಸುವುದು.
  3. ಸಂವಿಧಾನದ 97 ನೇ ತಿದ್ದುಪಡಿಯ ಮೂಲಕ ಸೇರಿಸಲಾದ 43(B) ವಿಧಿಯಂತೆ ರಾಜ್ಯವು ಸಹಕಾರಿ ಸಂಸ್ಥೆಗಳ ರಚನೆ, ಕಾರ್ಯವಿಧಾನ, ಪ್ರಜಾಸತ್ತಾತ್ಮಕ ನಿಯಂತ್ರಣ ಹಾಗೂ ವೃತ್ತಿಪರ ನಿರ್ವಹಣೆಗೆ ಪ್ರೋತಾಹ ನೀಡಬೇಕು.
  4. ಸಂವಿಧಾನದ 46 ನೇ ವಿಧಿಯಂತೆ ರಾಜ್ಯವು ಪರಿಶಿಷ್ಠ ಜಾತಿ ಹಾಗೂ ಪರಿಶಷ್ಠ ವರ್ಗ ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಪ್ರಜೆಗಳ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಬೇಕು.
  5. ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ವೈದ್ಯಕೀಯ ಉದ್ದೇಶ ಹೊರತುಪಡಿಸಿ ಆರೋಗ್ಯಕ್ಕೆ ಮಾರಕವಾದ ಉಳಿದೆಲ್ಲಾ ಮಾದಕ ವಸ್ತುಗಳ ಬಳಕೆಯ ನಿಷೇಧಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.
  6. ಸಂವಿಧಾನದ 48 ನೇ ವಿಧಿಯಲ್ಲಿ ರಾಜ್ಯವು ಗೋಹತ್ಯೆಯನ್ನು ನಿಷೇಧಿಸಲು ಪ್ರಯತ್ನಿಸಬೇಕು.

3. ಉದಾರವಾದಿ ತತ್ವಗಳು ( Liberal principles)

1. ಸಂವಿಧಾನದ 44 ನೇ ವಿಧಿಯಂತೆ ಭಾರತದ ಎಲ್ಲಾ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯ ಭರವಸೆಯನ್ನು ರಾಜ್ಯವು ಒದಗಿಸುವ ಕೆಲಸ ಮಾಡಬೇಕು.

2. ಸಂವಿಧಾನದ 45 ನೇ ವಿಧಿಯ ಪ್ರಕಾರ ರಾಜ್ಯವು 14 ವರ್ಷ ವಯಸ್ಸಿನ ಎಲ್ಲಾ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ನೀಡಬೇಕು.

3. ಸಂವಿಧಾನದ 47 ನೇ ವಿಧಿಯಂತೆ ರಾಜ್ಯವು ಸಾರ್ವಜನಿಕ ಆರೋಗ್ಯಾಭಿವೃದ್ಧಿಗಾಗಿ ಪ್ರಜೆಗಳ ಪೌಷ್ಟಿಕಾಂಶ ಹಾಗೂ ಜೀವನಮಟ್ಟವನ್ನು ಸುಧಾರಿಸಲು ಕ್ರಮ ವಹಿಸಬೇಕು.

4. ಸಂವಿಧಾನದ 50 ನೇ ವಿಧಿಯ ಪ್ರಕಾರ ಸಾರ್ವಜನಿಕ ಸೇವಾ ದೃಷ್ಠಿಯಿಂದ ಕಾರ್ಯಾಂಗ ಹಾಗೂ ನ್ಯಾಯಾಂಗವನ್ನು ಪ್ರತ್ಯೇಕಿಸಬೇಕು.

4. ಸಾಮಾನ್ಯ ತತ್ವಗಳು (Common principles)

  1. ಸಂವಿಧಾನದ 48 ನೇ ವಿಧಿಯಂತೆ ರಾಜ್ಯವು ಕೃಷಿ ಮತ್ತು ಪಶುಸಂಗೋಪನೆಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಲು ಯತ್ನಿಸಬೇಕು.
  2. 1976 ರಲ್ಲಿ ತರಲಾದ 42 ನೇ ತಿದ್ದುಪಡಿಯಂತೆ ಸೇರಿಸಲಾದ 48(A) ವಿಧಿಯಂತೆ ರಾಜ್ಯವು ಪರಿಸರ ರಕ್ಷಣೆ ಹಾಗೂ ಸುಧಾರಣೆಗೆ ಪ್ರಯತ್ನಿಸಬೇಕು. ಅದೇ ರೀತಿ ಅರಣ್ಯ ಹಾಗೂ ಪರಿಸರವನ್ನು ಸಂರಕ್ಷಿಸಬೇಕು.
  3. ಸಂವಿಧಾನದ 49 ನೇ ವಿಧಿಯಂತೆ ಕಲಾತ್ಮಕ ಅಥವಾ ಚಾರಿತ್ರಿಕ ಪ್ರಾಮುಖ್ಯತೆಯನ್ನು ಹೊಂದಿದ ಸ್ಮಾರಕ, ಸ್ಥಳ ಅಥವಾ ವಸ್ತುವನ್ನು ರಕ್ಷಿಸುವುದು ರಾಜ್ಯದ ಕರ್ತವ್ಯವಾಗಿದೆ.
  4. ಸಂವಿಧಾನದ 51(A) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡಬೇಕು.
  5. ಸಂವಿಧಾನದ 51(B) ವಿಧಿಯ ಪ್ರಕಾರ ರಾಜ್ಯವು ಜಗತ್ತಿನ ಇತರೇ ದೇಶಗಳೊಂದಿಗೆ ಗೌರವಯುತವಾದ ಸಂಬಂಧವನ್ನು ಹೊಂದಿರಬೇಕು.
  6. ಸಂವಿಧಾನದ 51(C) ವಿಧಿಯಂತೆ ರಾಜ್ಯವು ಅಂತರಾಷ್ಟ್ರೀಯ ಕಾನೂನು ಹಾಗೂ ಒಪ್ಪಂದಗಳನ್ನು ಗೌರವಿಸಬೇಕು.
  7. ಸಂವಿಧಾನದ 51(D) ವಿಧಿಯ ಪ್ರಕಾರ ರಾಜ್ಯವು ಅಂತರಾಷ್ಟ್ರೀಯ ವಿವಾದಗಳನ್ನು ಶಾಂತಿಯುತ ಮಾತುಕತೆಗಳ ಮೂಲಕ ಬಗೆಹರಿಸಬೇಕು.

ಉಪಸಂಹಾರ

ರಾಜ್ಯ ನಿರ್ದೇಶಕ ತತ್ವಗಳು ಭಾರತೀಯ ಸಂವಿಧಾನದ ಆತ್ಮಸ್ವರೂಪವಾಗಿವೆ. ಇವು ಕಾನೂನಾತ್ಮಕವಾಗಿ ಜಾರಿಗೆ ಬಾರದಿದ್ದರೂ ನೈತಿಕವಾಗಿ ಸರ್ಕಾರಗಳಿಗೆ ಬದ್ಧತೆಯನ್ನು ವಿಧಿಸುತ್ತವೆ. ಸಮಾಜವಾದಿ, ಗಾಂಧೀವಾದಿ ಮತ್ತು ಉದಾರ ತತ್ವಗಳ ಸಮನ್ವಯವೇ ಇವುಗಳ ವೈಶಿಷ್ಟ್ಯ. ಈ ತತ್ವಗಳ ಸಮರ್ಪಕ ಜಾರಿಗೆ ಬಂದಾಗಲೇ ನಿಜವಾದ ಕಲ್ಯಾಣರಾಜ್ಯ ನಿರ್ಮಾಣ ಸಾಧ್ಯ.

ಮೂಲಭೂತ ಹಕ್ಕುಗಳ ವರ್ಗೀಕರಣ

ಮೂಲಭೂತ ಹಕ್ಕುಗಳ ವರ್ಗೀಕರಣ

ಭಾರತೀಯ ಸಂವಿಧಾನವು ಕೇವಲ ಆಡಳಿತ ವ್ಯವಸ್ಥೆಯಲ್ಲ, ಮಾನವೀಯ ಮೌಲ್ಯಗಳ ಪ್ರತಿಬಿಂಬವೂ ಹೌದು. ಪ್ರತಿಯೊಬ್ಬ ನಾಗರಿಕನ ಸಮಾನತೆ, ಸ್ವಾತಂತ್ರ್ಯ ಮತ್ತು ಗೌರವವನ್ನು ಕಾಪಾಡುವ ಉದ್ದೇಶದಿಂದ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಈ ಹಕ್ಕುಗಳು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಭದ್ರತೆಯನ್ನು ಒದಗಿಸುತ್ತವೆ.

ಸಂವಿಧಾನದಲ್ಲಿ ಅಡಕವಾಗಿರುವ 6 ಮೂಲಭೂತ ಹಕ್ಕುಗಳು ಈ ಕೆಳಗಿನಂತಿವೆ.

1. ಸಮಾನತೆಯ ಹಕ್ಕು (Right to equality) (ವಿಧಿಗಳು 14, 15, 16, 17 ಮತ್ತು 18)

ಸಂವಿಧಾನದ 14,15,16,17 ಮತ್ತು 18ನೇ ವಿಧಿಗಳು ಸಮಾನತೆಯ ಹಕ್ಕಿನ ಕುರಿತು ವಿವರಣೆಗಳನ್ನು ಒದಗಿಸುತ್ತವೆ. ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಸಮಾನತೆ ಬೇಕು. ಭಾರತದ ಸಂವಿಧಾನದ ಪಿತೃಗಳು ಸಹ ಭಾರತೀಯರು ಎಲ್ಲರೂ ಸಮಾನರು ಎಂಬ ತತ್ವಕ್ಕೆ ಮಹತ್ವ ನೀಡಿದ್ದಾರೆ. ಸಮಾನತೆ ಹಕ್ಕು ಈ ಕೆಳಕಂಡ ವಿಧಿಗಳನ್ನು ಒಳಗೊಂಡಿದೆ.

a. ಕಾನೂನಿನ ಮುಂದೆ ಸಮಾನತೆ:

ಸಂವಿಧಾನದ 14ನೇ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಕಾನೂನಿನ ದೃಷ್ಟಿಯಲ್ಲಿ ರಾಜ್ಯವು ತಾರತಮ್ಯ ಮಾಡುವಂತಿಲ್ಲ. ಎಲ್ಲಾ ಪ್ರಜೆಗಳಿಗೂ ಸಮಾನತೆಯನ್ನು ಒದಗಿಸಬೇಕು. ಯಾವುದೇ ಜಾತಿ, ಲಿಂಗ, ವರ್ಣ, ಜನಾಂಗ, ಜನ್ಮಸ್ಥಳ, ಪಂಗಡ, ಬುಡಕಟ್ಟು ವರ್ಗ ಇತ್ಯಾದಿಗಳ ಆಧಾರದ ಮೇಲೆ ಭೇಧ-ಭಾವ ಮಾಡುವಂತಿಲ್ಲ. ಕಾನೂನಿನ ರಕ್ಷಣೆ ಎಲ್ಲರಿಗೂ ಇದೆ. ಕಾನೂನು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಿದೆ. ಈ ಹಕ್ಕುಗಳನ್ನು ಸರ್ಕಾರವೇನಾದರೂ ಕಿತ್ತುಕೊಳ್ಳಲು ಯತ್ನಿಸಿದರೆ ಕಾನೂನಿನ ಮೊರೆ ಹೋಗಲು ಅವಕಾಶ ಇದೆ. ಸಂವಿಧಾನದ 361ನೇ ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿ ಅಥವಾ ರಾಜ್ಯಪಾಲರು ಹಾಗೂ ವಿದೇಶಗಳ ಕಾರ್ಯಾಂಗೀಯ ಮುಖ್ಯಸ್ಥರು ಅಥವಾ ರಾಯಭಾರಿಗಳಿಗೆ ಈ ವಿಧಿಯು ವಿನಾಯಿತಿಯನ್ನು ನೀಡಿದೆ.

b. ವಿಧಿ 15 ತಾರತಮ್ಯ ನಿಷೇಧ:

ಸಂವಿಧಾನದ 15ನೇ ವಿಧಿಯ ಪ್ರಕಾರ ಧರ್ಮ, ಕುಲ, ಜಾತಿ, ಲಿಂಗ, ಹಾಗೂ ಜನ್ಮಸ್ಥಳದ ಆಧಾರದ ಮೇಲೆ ರಾಜ್ಯವು ಪಕ್ಷಪಾತ ಮಾಡುವಂತಿಲ್ಲ. ಇವುಗಳ ಆಧಾರದ ಮೇಲೆ ಸಾರ್ವಜನಿಕ ಸ್ಥಳಗಳು, ಅಂಗಡಿಗಳು, ಹೋಟೆಲುಗಳು, ಸಾರ್ವಜನಿಕ ಮನರಂಜನಾ ಪ್ರದೇಶಗಳು, ಸಾರ್ವಜನಿಕ ರೆಸ್ಟೋರೆಂಟುಗಳು, ಕುಡಿಯುವ ನೀರಿನ ಬಾವಿಗಳು, ರಸ್ತೆಗಳು, ದೇವಾಲಯಗಳು ಇವೇ ಮೊದಲಾದವುಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಈ ಎಲ್ಲವುಗಳನ್ನು ಎಲ್ಲರೂ ಸಮಾನವಾಗಿ ಅನುಭವಿಸಲು ಅವಕಾಶವಿದೆ. ಮತ್ತು ವಿಶೇಷ ಕ್ರಮಗಳ ಮೂಲಕ ಮಹಿಳೆಯರ, ಮಕ್ಕಳ, ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ವರ್ಗಗಳ ಜನಾಂಗದವರಿಗೆ ಈ ಮೇಲ್ಕಂಡ ಸ್ಥಳಗಳಿಗೆ ಮುಕ್ತವಾಗಿ ಪ್ರವೇಶವನ್ನು ನೀಡಬೇಕು. ಯಾವುದೇ ನಿರ್ಬಂಧವನ್ನು ಮಾಡಕೂಡದು. ಪರಿಶಿಷ್ಠ ಜಾತಿ ಮತ್ತು ವರ್ಗದವರ ನೇಮಕಾತಿಯಲ್ಲಿಯೂ ಯಾವುದೇ ಅಡೆತಡೆಗಳನ್ನು ಒಡ್ಡಕೂಡದು.

c. ವಿಧಿ 16 ಅವಕಾಶಗಳ ಸಮಾನತೆ:

ಸಂವಿಧಾನದ 16ನೇ ವಿಧಿಯ ಪ್ರಕಾರ ಭಾರತದ ಪ್ರತಿಯೊಬ್ಬ ಪೌರನೂ ಸಹ ಸರ್ಕಾರಿ ಸೇವೆಗೆ ಸೇರಲು ಅರ್ಹನಾಗುತ್ತಾನೆ. ಧರ್ಮ, ಕುಲ, ಜಾತಿ, ವರ್ಣ, ಹುಟ್ಟು, ಸ್ಥಾನಮಾನಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಎಸಗದೇ ನೇಮಕಾತಿಗಳನ್ನು ಮಾಡುವುದು. ಅರ್ಹತೆಯ ಆಧಾರದ ಮೇಲೆ ಅವರಿಗೆ ನೌಕರಿಯನ್ನು ನೀಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ನೇಮಕಾತಿ ಸಂದರ್ಭದಲ್ಲಿ ಜೇಷ್ಠತೆಯನ್ನು ಗಣನೆಗೆ ತೆಗೆದುಕೊಳ್ಳುವ ಭರವಸೆಯನ್ನು ಸಂವಿಧಾನದಲ್ಲಿ ನೀಡಲಾಗಿದೆ. ಆದರೆ ಧಾರ್ಮಿಕ ಸಂಸ್ಥೆಗಳ ನೇಮಕಾತಿಗೆ ಸಂವಿಧಾನದ 16ನೇ ವಿಧಿ ಅನ್ವಯವಾಗುವುದಿಲ್ಲವೆಂಬುದನ್ನು ಗಮನಿಸಬೇಕಾದ ವಿಷಯವಾಗಿದೆ. ಆಯಾ ಜಾತಿಗೆ ನೀಡಿದ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಗಳಾಗದಂತೆ ಕ್ರಮ ಕೈಗೊಳ್ಳಬೇಕು. ಆದರೆ ಅಲ್ಪ ಸಂಖ್ಯಾತರು ನಡೆಸುವ ವಿದ್ಯಾಸಂಸ್ಥೆಗಳಿಗೆ ಇದರಿಂದ ವಿನಾಯಿತಿ ಇದೆ.

d. ವಿಧಿ 17 ಅಸ್ಪೃಶ್ಯತೆ ನಿರ್ಮೂಲನೆ:

ಸಂವಿಧಾನದ 17ನೇ ವಿಧಿಯ ಪ್ರಕಾರ ಭಾರತದಲ್ಲಿ ಅಸ್ಪೃಶ್ಯತೆಯನ್ನು ನಿಷೇಧಿಸಲಾಗಿದೆ. ಅಸ್ಪೃಶ್ಯತೆಯ ಆಚರಣೆಯು ಶಿಕ್ಷಾರ್ಹ ಅಪರಾಧವಾಗಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದ ದಲಿತರನ್ನು ಮೇಲೆತ್ತುವುದೇ ಸಂವಿಧಾನದ ಪ್ರಥಮ ಗುರಿಯಾಗಿದೆ. ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿಯೇ ಮಹಾತ್ಮಾ ಗಾಂಧೀಜಿಯವರು ಅಸ್ಪೃಶ್ಯತಾ ನಿವಾರಣೆಗೆ ಅವಿರತ ಹೋರಾಟ ಮಾಡಿದರು. ಅವರ ಪ್ರಯತ್ನದ ಫಲವಾಗಿ ಸಂವಿಧಾನದ 17ನೇ ವಿಧಿಯಲ್ಲಿ ಅಸ್ಪೃಶ್ಯತಾ ಆಚರಣೆಯನ್ನು ಕಡ್ಡಾಯವಾಗಿ ನಿಷೇಧ ಮಾಡಲಾಯಿತು. ಸಂವಿಧಾನದ ಪ್ರಕಾರ

  1. ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ.
  2. ದೇವಾಲಯಗಳ ಪ್ರವೇಶ ಹಾಗೂ ಪೂಜೆಯನ್ನು ನಿರಾಕರಣೆ ಮಾಡುವ ಹಾಗಿಲ್ಲ.
  3. ಅಂಗಡಿ, ಹೋಟೆಲ್‌, ಸಾರ್ವಜನಿಕ ಮನರಂಜನಾ ಸ್ಥಳ, ಬಾವಿಗಳು, ರಸ್ತೆಗಳು ಹಾಗೂ ಸ್ಮಶಾನ ಮುಂತಾದವುಗಳಿಗೆ ಅಸ್ಪೃಶ್ಯರಿಗೆ ಪ್ರವೇಶ ನೀಡುವುದು.
  4. ನಿಮ್ನ ಜಾತಿಯ ಜನರೆಂದು ಹೀಗಳೆಯುವಂತಿಲ್ಲ ಮತ್ತು ಅಸ್ಪ್ರಶ್ಯತೆಯನ್ನು ಪುರಸ್ಕರಿಸಬಾರದು.
  5. ಅಸ್ಪೃಶ್ಯತೆ ಆಚರಣೆ ಸರಿಯಾಗಿದೆ ಮತ್ತು ಕ್ರಮಬದ್ಧವಾಗಿದೆ ಎಂದು ಹೇಳುವಂತಿಲ್ಲ.

ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ 1955ರ ಕಾಯ್ದೆ ಅನ್ವಯ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ. ಅಸ್ಪೃಶ್ಯತಾ ಆಚರಣೆಗೆ ಬೆಂಬಲ ನೀಡಿದ ಅಪರಾಧಿಯನ್ನು ಸಂಸತ್ತು ಅಥವಾ ರಾಜ್ಯ ಶಾಸಕಾಂಗದ ಚುನಾವಣೆಯಲ್ಲಿ ಆಯ್ಕೆಯಾಗದಂತೆ ತಡೆಹಿಡಿಯಬಹುದು. 1989 ರಲ್ಲಿ ಸಂಸತ್ತಿನಿಂದ ಅಂಗೀಕಾರ ಪಡೆದ ಪರಿಶಿಷ್ಠ ಜಾತಿ ಜನಾಂಗದ ಮೇಲಿನ ದೌರ್ಜನ್ಯಗಳ ನಿಷೇಧ ಕಾಯ್ದೆ ಜನವರಿ 30 1990 ರಿಂದ ಜಾರಿಗೆ ಬಂದಿದೆ.

e. ವಿಧಿ 18 ಬಿರುದುಗಳ ರದ್ಧತಿ:

ಸಂವಿಧಾನದ 18ನೇ ವಿಧಿಯಂತೆ ರಾಜ್ಯವು ಯಾರಿಗೂ ಬಿರುದು ಬಾವಲಿಗಳನ್ನು ನೀಡುವುದಾಗಲೀ, ಭಾರತೀಯ ಪೌರನು ವಿದೇಶಿಗಳಿಂದ ಯಾವುದೇ ಬಿರುದು ಬಾವಲಿಗಳನ್ನು ಪಡೆಯುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ. ಭಾರತ ಸರ್ಕಾರದ ಸೇವೆಯಲ್ಲಿರುವ ವಿದೇಶಿಯನು ಸಹ ಭಾರತ ಸರ್ಕಾರದ ಅನುಮತಿಯನ್ನು ಪಡೆಯದೇ ಬಿರುದುಗಳನ್ನು ಸ್ವೀಕರಿಸುವಂತಿಲ್ಲ. ಆದರೆ ಮಿಲಿಟರಿ ಹಾಗೂ ಶೈಕ್ಷಣಿಕ ಕ್ಷೇತ್ರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಅರ್ಹವಾದವರಿಗೆ ಬಿರುದುಗಳನ್ನು ನೀಡಬಹುದಾಗಿದೆ. ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿದವರಿಗೆ ರಾಷ್ಟ್ರಪತಿಗಳು ಭಾರತರತ್ನ, ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣಗಳನ್ನು ನೀಡಿ ಗೌರವಿಸುತ್ತಾರೆ. ಸೈನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಪರಮವೀರ ಚಕ್ರ, ಮಹಾವೀರ ಚಕ್ರ, ಹಾಗೂ ವೀರಚಕ್ರಗಳನ್ನು ನೀಡಲಾಗುತ್ತದೆ. ಇವೆಲ್ಲವುಗಳು ಬಿರುದುಗಳಲ್ಲ ಗೌರವ ಸೂಚಕವಾಗಿವೆ. 1977 ರಲ್ಲಿ ಮುರಾರ್ಜಿ ದೇಸಾಯಿಯವರು ಈ ಬಿರುದು ನೀಡುವ ಪದ್ಧತಿಯನ್ನು ರದ್ದುಗೊಳಿಸಿದ್ದರು. ಶ್ರೀಮತಿ ಇಂದಿರಾ ಗಾಂಧಿಯವರು 1980 ರಲ್ಲಿ ಮತ್ತೆ ಪ್ರಧಾನಿಯಾದ ನಂತರ ಬಿರುದು ನೀಡುವ ಪದ್ಧತಿಯನ್ನು ಪುನರಾರಂಭಿಸಿದರು.

2. ಸ್ವಾತಂತ್ರ್ಯದ ಹಕ್ಕು (Right to freedom) (ವಿಧಿಗಳು 19, 20, 21 ಮತ್ತು 22)

ವ್ಯಕ್ತಿಯ ವಿಕಾಸಕ್ಕೆ ಸ್ವಾತಂತ್ರ್ಯ ಅಗತ್ಯ. ಸ್ವಾತಂತ್ರ್ಯವಿಲ್ಲದ ವ್ಯಕ್ತಿಯ ಜೀವನ ಅರ್ಥರಹಿತವಾದುದು. ಸಂವಿಧಾನದ 19, 20, 21 ಹಾಗೂ 22ನೇ ವಿಧಿಗಳು ಸ್ವಾತಂತ್ರ್ಯ ಹಕ್ಕಿನ ಬಗ್ಗೆ ವಿವರಗಳನ್ನು ನೀಡುತ್ತವೆ. ಈ ನಾಲ್ಕು ವಿಧಿಗಳು ವೈಯಕ್ತಿಕ ಸ್ವಾತಂತ್ರ್ಯದ ಚಾರ್ಟರನಂತೆ ಇದ್ದು ಮೂಲಭೂತ ಹಕ್ಕುಗಳ ಭಾಗದ ಬೆನ್ನೆಲುಬಿನಂತಿವೆ. ಇವುಗಳಲ್ಲಿ 19ನೇ ವಿಧಿಯು ಅತ್ಯಂತ ಮಹತ್ವವಾಗಿದ್ದು ಇದರಲ್ಲಿ ಸ್ವಾತಂತ್ರ್ಯದ ವಿವಿಧತೆಗಳನ್ನು ವಿವರಿಸಲಾಗಿದೆ. ಇದರಲ್ಲಿ ಒಟ್ಟೂ 6 ಮೂಲಭೂತ ಸ್ವಾತಂತ್ರ್ಯಗಳಿದ್ದು ಇವುಗಳನ್ನು ಈ ಕೆಳಗಿನಂತೆ ನೋಡೋಣ,

a. ವಾಕ್ ಸ್ವಾತಂತ್ರ್ಯ ಅಥವಾ ಅಭಿಪ್ರಾಯ ಸ್ವಾತಂತ್ರ್ಯ: (Freedom of speech and expression)

ಭಾರತದ ಸಂವಿಧಾನದ ಪ್ರಸ್ತಾವನೆಯು ಪ್ರಜೆಗಳಿಗೆ ವಾಕ್‌ ಸ್ವಾತಂತ್ರ್ಯ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ನೀಡಿದೆ. ಇದರ ಪ್ರಕಾರ ವ್ಯಕ್ತಿ ತನ್ನ ವಿಚಾರ, ಅಭಿಪ್ರಾಯ ಹಾಗೂ ನಂಬಿಕೆಗಳನ್ನು ವ್ಯಕ್ತಪಡಿಸಬಹುದು. ಮಾತು, ಬರಹ, ಚಿತ್ರಕಲೆ ಮುಂತಾದ ರೂಪದಲ್ಲಿ ವ್ಯಕ್ತಿಯು ತನ್ನ ಅಭಿಪ್ರಾಯವನ್ನು ತಿಳಿಯಪಡಿಸುತ್ತಾನೆ. ಇದರ ಜೊತೆಗೆ ಪತ್ರಿಕಾ ಸ್ವಾತಂತ್ರ್ಯ ಹಾಗೂ ವಾಣಿಜ್ಯ ಜಾಹಿರಾತು ಸ್ವಾತಂತ್ರ್ಯ ಸಹ ಈ ವಿಧಿಯ ಮೂಲಕ ಪ್ರಜೆಗಳಿಗೆ ಸಿಗುತ್ತವೆ.

b. ಶಾಂತವಾಗಿ ಮತ್ತು ಶಸ್ತ್ರರಹಿತ ಸಭೆ ಸೇರುವ ಸ್ವಾತಂತ್ರ್ಯ: ( Freedom to assemble peacefully and without arms)

ಭಾರತದ ಪ್ರಜೆಗಳಿಗೆ ಶಾಂತಿಯುತವಾಗಿ ಮತ್ತು ಶಸ್ತ್ರರಹಿತವಾಗಿ ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಈ ವಿಧಿಯು ಅವಕಾಶ ನೀಡುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಅಥವಾ ಸಾರ್ವಜನಿಕ ಹಿತಾಸಕ್ತಿಯ ಹಿತದೃಷ್ಟಿಯಿಂದ ಇದು ಅಗತ್ಯವಾಗಿದೆ. ಮೆರವಣಿಗೆ ಹಮ್ಮಿಕೊಳ್ಳಲು ಮತ್ತು ಸಾರ್ವಜನಿಕ ಪ್ರದರ್ಶನ ಏರ್ಪಡಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಪ್ರತಿಭಟನೆಗೋಸ್ಕರ ಸಭೆ ಸೇರುವುದನ್ನು ನಿರ್ಬಂಧಿಸಲಾಗಿದೆ.

c. ಸಂಘಗಳನ್ನು ಸ್ಥಾಪಿಸುವ ಸ್ವಾತಂತ್ರ್ಯ: (Freedom to form associations)

ಭಾರತದ ಪ್ರಜೆಗಳು ತಮ್ಮ ಸ್ವಹಿತಾಸಕ್ತಿಯನ್ನು ಕಾಪಾಡಿಕೊಳ್ಳಲೋಸುಗ ವಿವಿಧ ಸಂಘಗಳು ಮತ್ತು ಸಹಕಾರಿ ಸಂಘಗಳನ್ನು ಸ್ಥಾಪಿಸಿಕೊಂಡು ತನ್ಮೂಲಕ ಅಭಿವೃದ್ಧಿಯನ್ನು ಹೊಂದಲು ಈ ಸ್ವಾತಂತ್ರ್ಯ ಅವಕಾಶ ನೀಡುತ್ತದೆ. ಉದಾ: ರಾಜಕೀಯ ಕ್ಲಬ್‌, ಕಂಪನಿಗಳು, ಶೇರುದಾರರ ಸಂಸ್ಥೆ, ಕಾರ್ಮಿಕ ಸಂಘಗಳನ್ನು ಸ್ಥಾಪಿಸಿಕೊಂಡು ಅವುಗಳನ್ನು ನಿರ್ವಹಿಸಿಕೊಂಡು ಹೋಗಲು ಅವಕಾಶವಿದೆ. ಕಾನೂನಾತ್ಮಕವಾದ ಗುರಿ ಮತ್ತು ಉದ್ದೇಶಗಳಿಗಾಗಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿಕೊಳ್ಳಲು ಸಂವಿಧಾನದಲ್ಲಿ ಅವಕಾಶವಿದ್ದು, ದೇಶದ ಸಾರ್ವಭೌಮತೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಸಂಘಗಳನ್ನು ರದ್ದುಗೊಳಿಸುವ ಅಧಿಕಾರ ಸರ್ಕಾರಕ್ಕಿದೆ.

d. ಸಂಚರಿಸುವ ಸ್ವಾತಂತ್ರ್ಯ (Freedom to move)

ಭಾರತೀಯ ಪ್ರಜೆಗಳು ದೇಶದ ಯಾವುದೇ ಮೂಲೆಗಳಲ್ಲಿ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಈ ಸ್ವಾತಂತ್ರ್ಯವು ನೀಡಿದೆ. ಪ್ರಜೆಯೊಬ್ಬನು ಭಾರತ ಒಕ್ಕೂಟದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚರಿಸುವ ಸ್ವಾತಂತ್ರ್ಯವನ್ನು ಪಡೆದಿದ್ದಾನೆ. ಆದರೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಜನಾಂಗಗಳ ವಿಶಿಷ್ಠ ಸಂಸ್ಕೃತಿಯ ರಕ್ಷಣೆಗಾಗಿ ಸಂಚರಿಸುವ ಸ್ವಾತಂತ್ರ್ಯದ ಮೇಲೆ ಸರ್ಕಾರ ನಿರ್ಬಂಧ ಹೇರಿದೆ.

e. ವಾಸದ ಸ್ವಾತಂತ್ರ್ಯ: (Freedom to reside)

ಭಾರತೀಯ ಪ್ರಜೆಗಳು ದೇಶದ ಯಾವುದೇ ಭಾಗಗಳಲ್ಲಾದರೂ ವಾಸಿಸುವ ಹಕ್ಕನ್ನು ಪಡೆದಿದ್ದಾರೆ. ಕೆಲವರು ಖಾಯಂ ಆಗಿ ವಾಸಿಸುತ್ತಿದ್ದರೆ ಇನ್ನೂ ಕೆಲವೊಬ್ಬರು ತಾತ್ಕಾಲಿಕ ವಾಸಸ್ಥಳದಲ್ಲಿ ನೆಲೆಸಿದ್ದಾರೆ. ಹೀಗಾಗಿ ದೇಶದ ಏಕತೆ ಮತ್ತು ಭಾಷಾ ಪ್ರೇಮವನ್ನು ಬೆಳೆಸಲು ಈ ಸ್ವಾತಂತ್ರ್ಯ ನೆರವಾಗುತ್ತದೆ. ಆದರೆ ಸರ್ಕಾರವು ಸಾರ್ವಜನಿಕ ಹಿತಾಸಕ್ತಿ ಹಾಗೂ ಬುಡಕಟ್ಟು ಹಿತಾಸಕ್ತಿ ದೃಷ್ಟಿಯಿಂದ ವಾಸಮಾಡುವ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಿದೆ.

f. ವೃತ್ತಿ ಮತ್ತು ಉದ್ಯೋಗದ ಸ್ವಾತಂತ್ರ್ಯ: (Freedeom of employment)

ದೇಶದ ಪ್ರಜೆಗಳು ತಮಗೆ ಸರಿಕಂಡ ಉದ್ಯೋಗವನ್ನು ಪಡೆಯುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ವೃತ್ತಿ ಸ್ವಾತಂತ್ರ್ಯವು ಬಹು ವಿಶಾಲವಾಗಿದ್ದು ಪ್ರಜೆಗಳು ತಮಗಿಷ್ಟವಾದ ಯಾವುದೇ ಕಸುಬು, ವ್ಯಾಪಾರ ಅಥವಾ ಚಟುವಟಿಕೆಗಳನ್ನು ಹೊಂದಿ ತನ್ಮೂಲಕ ಉತ್ತಮ ಜೀವನ ನಿರ್ವಹಿಸಲು ಅನುವು ಮಾಡಿ ಕೊಡುತ್ತದೆ. ಮಕ್ಕಳ ಮಾರಾಟ, ಮಾದಕ ವಸ್ತುಗಳ ಮಾರಾಟ, ಸ್ಫೋಟಕ ವಸ್ತುಗಳ ಮಾರಾಟ ಮುಂತಾದ ಸಾರ್ವಜನಿಕ ಹಿತಾಸಕ್ತಿಗೆ ಮಾರಕವಾದ ವೃತ್ತಿಗಳನ್ನು ಸರ್ಕಾರವು ನಿರ್ಬಂಧಿಸುತ್ತದೆ.

3. ಶೋಷಣೆಯ ವಿರುದ್ಧ ಹಕ್ಕು (Right against exploitation)

ಸಾವಿರಾರು ವರ್ಷಗಳಿಂದಲೂ ಸಾಮ್ರಾಜ್ಯಶಾಹಿ ಹಾಗೂ ಊಳಿಗಮಾನ್ಯ ಪದ್ಧತಿಗಳನ್ನು ಅನುಭವಿಸಿಕೊಂಡು ಬಂದಿರುವ ಭಾರತದಲ್ಲಿ ಶೋಷಣೆಯೆನ್ನುವುದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇಂತಹ ಪಿಡುಗನ್ನು ನಿರ್ಮೂಲನೆಗೊಳಿಸಲು ಸಂವಿಧಾನದಲ್ಲಿ ಶೋಷಣೆಯ ವಿರುದ್ಧದ ಹಕ್ಕನ್ನು ಅಳವಡಿಸಿರುವುದು ಅತ್ಯಂತ ಸಂತೋಷಕರವಾದ ಸಂಗತಿಯಾಗಿದೆ. ತಾರತಮ್ಯವನ್ನು ಹೋಗಲಾಡಿಸಿ ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಈ ಕಾಯಿದೆ ತುಂಬಾ ಸಹಾಯಕವಾಗಿದೆ. ಸಂವಿಧಾನದ 23 ಹಾಗೂ 24 ನೇ ವಿಧಿಗಳು ಈ ಹಕ್ಕಿನ ಬಗ್ಗೆ ವಿವರಣೆಗಳನ್ನು ಒಳಗೊಂಡಿವೆ.

1. ಅನೈತಿಕ ವ್ಯವಹಾರ ತಡೆ ಕಾಯಿದೆ: (Immortal traffic prevention act 1956 )

1956 ರಲ್ಲಿ ಸಂಸತ್ತು ಅನೈತಿಕ ತಡೆ ಕಾಯಿದೆಯನ್ನು ಅಂಗೀಕರಿಸಿ ವೇಶ್ಯಾವೃತ್ತಿಯನ್ನು ನಿಷೇಧಿಸಿದೆ. ಇದನ್ನು ಮತ್ತೆ 1978 ಹಾಗೂ 1986 ರಲ್ಲಿ ತಿದ್ದುಪಡಿ ಮಾಡಿ ಹೊಸದಾಗಿ ಮೇಲಿನ ಹೆಸರನ್ನು ನೀಡಲಾಯಿತು. ವೇಶ್ಯಾವೃತ್ತಿಗಾಗಿ ಮಕ್ಕಳನ್ನು ಬಳಸುವ ವ್ಯಕ್ತಿಗೆ ಜೀವಾವಧಿ ಶಿಕ್ಷೆಯನ್ನು ಅಥವಾ ಏಳು ವರ್ಷಗಳ ಕನಿಷ್ಠ ಜೈಲುವಾಸ ವಿಧಿಸಲಾಗುವುದು. ಇಂಡಿಯನ್‌ ಪೀನಲ್‌ ಕೋಡ್‌ ನ ಪ್ರಕಾರ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹೆಣ್ಣು ಮಕ್ಕಳನ್ನು ಅನೈತಿಕ ವ್ಯವಹಾರಗಳಿಗೆ ಮಾರಾಟ ಮಾಡಿದರೆ ಅದು ಅಕ್ಷಮ್ಯ ಅಪರಾಧವಾಗುತ್ತದೆ.

2. ವರದಕ್ಷಿಣೆ ನಿಷೇಧ ಕಾಯಿದೆ: (Anti dowry act 1961)

1961 ರ ವರದಕ್ಷಿಣೆ ನಿಷೇಧ ಕಾಯಿದೆಯನ್ನು ಭಾರತ ಸಂಸತ್ತು 1984, 1985 ಹಾಗೂ 1986 ರಲ್ಲಿ ತಿದ್ದುಪಡಿಗೊಳಿಸಿ ವರದಕ್ಷಿಣೆಗಾಗಿ ಸಾವು ಉಂಟಾದರೆ ಇಂಡಿಯನ್‌ ಪೀನಲ್‌ ಕೋಡ್‌ ನ ಸೆಕ್ಷನ್‌ 304 ಬಿ ಪ್ರಕಾರ ಅಕ್ಷಮ್ಯ ಅಪರಾಧವಾಗುತ್ತದೆ. ಈ ಸೆಕ್ಷನ್‌ ಪ್ರಕಾರ ವರದಕ್ಷಿಣೆ ಸಾವಿಗೆ ಕಾರಣರಾದವರು ಕನಿಷ್ಟ 7 ವರ್ಷಗಳ ಕಾಲ ಕಠಿಣವಾದ ಶಿಕ್ಷೆಯನ್ನು ಅನುಭವಿಸಬೇಕು.

3. ಮಹಿಳೆಯರ ಅಶ್ಲೀಲ ಚಿತ್ರ ನಿಷೇಧ ಕಾಯಿದೆ: (The indecent representation of women prohibition act)

ಈ ಕಾಯಿದೆಯ ಪ್ರಕಾರ ಬಲವಂತವಾಗಿ ಮಹಿಳೆಯರ ಅಶ್ಲೀಲ ಚಿತ್ರಗಳನ್ನು ಪ್ರಕಟಿಸುವುದು ಅಪರಾಧವಾಗುತ್ತದೆ.

4. ಸತಿ ನಿಷೇಧ ಕಾಯಿದೆ (Sati prevention act 1987)

1987 ಸೆಪ್ಟೆಂಬರ್‌ 4 ರಂದು 18 ವರ್ಷ ವಯಸ್ಸಿನ ರೂಪ ಕನ್ವರ್‌ ಎಂಬುವವರನ್ನು ಬಲವಂತವಾಗಿ ರಾಜಸ್ಥಾನದ ಸಿಕಾರ ಜಿಲ್ಲೆಯ ದಿಯೊರಾಲಾ ಗ್ರಾಮದಲ್ಲಿ ಸತಿ ಸಹಗಮನಕ್ಕೆ ದೂಡಲಾಯಿತು. ಇದು ದೇಶದಾದ್ಯಂತ ಸಾಮಾಜಿಕ ಕ್ರಾಂತಿಯನ್ನೇ ಎಬ್ಬಿಸಿತು. ಈ ಘಟನೆಯಿಂದ ದಿಗ್ಭ್ರಮೆಗೊಂಡ ರಾಜಸ್ಥಾನ ಸರ್ಕಾರ ಸತಿ ತಡೆ ಸುಗ್ರೀವಾಜ್ಞೆಯನ್ನು ಹೊರಡಿಸಿತು. ನಂತರ ಕೇಂದ್ರ ಸಂಸತ್ತು 1987 ರ ಡಿಸೆಂಬರ್‌ ನಲ್ಲಿ ಮಸೂದೆಯನ್ನು ಅಂಗೀಕರಿಸಿ ಸತಿ ಪದ್ದತಿಯ ನಿಷೇಧಕ್ಕೆ ಕಠಿಣ ಕ್ರಮ ಕೈಗೊಂಡಿತು. ಈ ಕಾಯಿದೆಯ ಪ್ರಕಾರ ಸತಿ ಪದ್ದತಿಯನ್ನು ಪ್ರೇರೇಪಿಸುವವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಲು ಅವಕಾಶವಿದೆ.

5. ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯಿದೆ (Domestic violence prevention act 2005 ) : 2005 ರಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆ ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೆ ಬಂದಿತು. ಈ ಕಾಯಿದೆಯ ಪ್ರಕಾರ ದೈಹಿಕ ಅಥವಾ ಮಾನಸಿಕ ಹಿಂಸೆ ಮತ್ತು ವರದಕ್ಷಿಣೆ ಅಥವಾ ಆಸ್ತಿಗಾಗಿ ಕಿರುಕುಳ ಕೊಡುವುದು ಕೌಟುಂಬಿಕ ದೌರ್ಜನ್ಯವಾಗುತ್ತದೆ. 

4. ಧಾರ್ಮಿಕ ಸ್ವಾತಂತ್ರ್ಯದ ಹಕ್ಕು: (Right to freedom religion)

ಸಂವಿಧಾನದ 25 ರಿಂದ 28 ನೇ ವಿಧಿಗಳು ಪೌರರ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಸಂವಿಧಾನದಲ್ಲಿ ಘೋಷಿಸಲಾದ ಜಾತ್ಯಾತೀತತೆಯ ಉದ್ದೇಶಗಳನ್ನು ಈ ವಿಧಿಗಳು ಈಡೇರಿಸಿವೆ ಎಂದು ಹೇಳಬಹುದು. ಭಾರತವೊಂದು ಜಾತ್ಯಾತೀತ ದೇಶ. ರಾಜ್ಯಕ್ಕೆ ತನ್ನದೇ ಆದ ಯಾವ ಧರ್ಮವೂ ಇಲ್ಲ. ಸರ್ಕಾರ ಯಾವ ಧರ್ಮವನ್ನೂ ಪ್ರೋತ್ಸಾಹಿಸುವುದಿಲ್ಲ. ಜನರು ತಮಗೆ ಸರಿಕಂಡ ಧರ್ಮವನ್ನು ಪಾಲಿಸುವ ಹಾಗೂ ತಮಗಿಷ್ಟವಾದ ದೇವರನ್ನು ಪೂಜಿಸುವ ಹಕ್ಕನ್ನು ಹೊಂದಿದ್ದಾರೆ. ಸಾರ್ವಜನಿಕ ಶಿಸ್ತು, ನೀತಿ, ಆರೋಗ್ಯ ಹಾಗೂ ಸಂವಿಧಾನದ ಮೂರನೇ ಭಾಗದಲ್ಲಿರುವ ನಿಯಮಗಳಿಗೆ ಧಕ್ಕೆಯಾಗದಂತೆ ತಮಗೆ ಸರಿ ತೋರಿದ ಧರ್ಮವನ್ನು ಪಾಲಿಸಿ ಪ್ರಚಾರ ಮಾಡಲು ಸ್ವಾತಂತ್ರ್ಯವಿದೆ.

a. ವಿಧಿ 25 ಧಾರ್ಮಿಕ ಶ್ರದ್ಧೆಪಾಲನೆ ಮತ್ತು ಪ್ರಚಾರದ ಸ್ವಾತಂತ್ರ್ಯ:

ಈ ವಿಧಿಯ ಅನ್ವಯ ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಮನಸ್ಸಿಗೆ ಸರಿಯೆನಿಸಿದ ಯಾವುದೇ ಧರ್ಮವನ್ನು ಸ್ವೀಕರಿಸುವ, ಪಾಲಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದಾನೆ. ಆದರೆ ಸಾರ್ವಜನಿಕ ಶಿಸ್ತು, ಶಾಂತಿ, ಹಾಗೂ ನೈರ್ಮಲ್ಯಕ್ಕೆ ಧಕ್ಕೆ ತರುವುದಾಗಲೀ ಅಥವಾ ಮತಾಂತರಕ್ಕೆ ಒತ್ತಾಯಿಸುವುದಾಗಲೀ ಹಾಗೂ ಮತಾಂತರಕ್ಕೆ ಹಣಕಾಸಿನ ಅಥವಾ ಇನ್ನಿತರ ಯಾವುದೇ ಆಮಿಷ ಒಡ್ಡುವುದಾಗಲೀ ಮಾಡುವಂತಿಲ್ಲ.

b. ವಿಧಿ 26 ಧಾರ್ಮಿಕ ವ್ಯವಹಾರಗಳನ್ನು ನಿರ್ವಹಿಸುವ ಸ್ವಾತಂತ್ರ್ಯ:

ಸಂವಿಧಾನದ 26ನೇ ವಿಧಿಯ ಪ್ರಕಾರ ಸಾರ್ವಜನಿಕ ಶಿಸ್ತು, ನೀತಿ ಹಾಗೂ ನೈರ್ಮಲ್ಯಕ್ಕೆ ಒಳಪಟ್ಟು ಪ್ರತಿಯೊಂದು ಧಾರ್ಮಿಕ ಸಂಸ್ಥೆ ಧಾರ್ಮಿಕ ಮತ್ತು ಚಾರಿಟೇಬಲ್‌ ಉದ್ದೇಶಗಳಿಗೆ ಸಂಸ್ಥೆಗಳನ್ನು ಸ್ಥಾಪಿಸಿ ನಿರ್ವಹಿಸಬಹುದು. ಅದು ತನ್ನ ಧರ್ಮದ ವಿಷಯದ ಕುರಿತು ಮೇಲ್ವಿಚಾರಣೆ ಮಾಡಬಹುದು. ಸ್ಥಿರ ಹಾಗೂ ಚರಾಸ್ಥಿಗಳನ್ನೂ ರಕ್ಷಿಸಬಹುದು ಮತ್ತು ಸಂಪಾದಿಸಬಹುದು. ಇವೆಲ್ಲವುಗಳನ್ನೂ ಕಾನೂನಿಗೆ ಅನುಸಾರವಾಗಿ ನಿರ್ವಹಿಸಬೇಕು. ಆದರೆ ಸಾರ್ವಜನಿಕ ಶಿಸ್ತಿಗೆ ಭಂಗ ತರುವಂತೆ ಇರಬಾರದು.

c. ವಿಧಿ 27 ಧಾರ್ಮಿಕ ತೆರಿಗೆ ನೀಡುವ ಸ್ವಾತಂತ್ರ್ಯ:

ಈ ವಿಧಿಯ ಪ್ರಕಾರ ಧರ್ಮಪ್ರಚಾರಕ್ಕೆ, ಧರ್ಮರಕ್ಷಣೆಗೆ, ಧಾರ್ಮಿಕ ಸಂಸ್ಥೆಯನ್ನು ಪೋಷಿಸಲು ತೆರಿಗೆ ಅಥವಾ ವಂತಿಕೆ ನೀಡಬೇಕೆಂದು ಯಾವುದೇ ವ್ಯಕ್ತಿಯನ್ನು ಒತ್ತಾಯಪೂರ್ವಕವಾಗಿ ಪೀಡಿಸುವಂತಿಲ್ಲ.

d. ವಿಧಿ 28 ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಬೋಧನೆಯ ಸ್ವಾತಂತ್ರ್ಯ:

ಸಂವಿಧಾನದ 28ನೇ ವಿಧಿಯ ಅನ್ವಯ ಧಾರ್ಮಿಕ ಬೋಧನೆಯನ್ನು ರಾಜ್ಯ ನಿಯಂತ್ರಿತ ಶಿಕ್ಷಣ ಸಂಸ್ಥೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಾಗೆಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಾಯಧನ ಪಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಪೂರ್ವಾನುಮತಿಯನ್ನು ಪಡೆಯದೆ ಧಾರ್ಮಿಕ ಬೋಧನೆಯನ್ನೂ ಕಡ್ಡಾಯವಾಗಿ ನಿಷೇಧಿಸಿದೆ.

5. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕು: (ವಿಧಿ 29 ಮತ್ತು 30)

a. ವಿಧಿ 29 ಅಲ್ಪಸಂಖ್ಯಾತರ ಹಿತಾಸಕ್ತಿಗಳ ರಕ್ಷಣೆ:

ಸಂವಿಧಾನದ ಈ ವಿಧಿಯು ಭಾರತದ ಯಾವುದೇ ಮೂಲೆಯಲ್ಲಿ ವಾಸಿಸುವ ಯಾವುದೇ ವರ್ಗದ ಪ್ರಜೆಗಳು ತಮ್ಮದೇ ಆದ ಭಾಷೆ, ಲಿಪಿ, ಸಂಸ್ಕೃತಿಯನ್ನು ಹೊಂದಿದ್ದರೆ ಅವುಗಳನ್ನು ರಕ್ಷಿಸಿಕೊಳ್ಳುವ ಹಾಗೂ ಅಭಿವೃದ್ಧಿಪಡಿಸುವ ಹಕ್ಕನ್ನು ಹೊಂದಿದ್ದಾರೆ. ಇದರಿಂದ ಧಾರ್ಮಿಕ ಅಥವಾ ಭಾಷಾ ಅಲ್ಪಸಂಖ್ಯಾತ ಪ್ರಜೆಗಳ ಸಮುದಾಯದ ರಕ್ಷಣೆಗೆ ಭರವಸೆ ದೊರಕಿದೆ. ಮುಂದುವರೆದು ರಾಜ್ಯ ನಿಯಂತ್ರಿತ ಅಥವಾ ರಾಜ್ಯದಿಂದ ಅನುದಾನ ಪಡೆಯುತ್ತಿರುವ ಶಾಲಾ-ಕಾಲೇಜುಗಳಲ್ಲಿ ಭಾಷೆ, ಜನಾಂಗ, ಜಾತಿ, ಧರ್ಮಗಳ ಆಧಾರದ ಮೇಲೆ ಪ್ರವೇಶ ನಿರಾಕರಿಸಕೂಡದು ಎಂದು ತಿಳಿಸಿದೆ.

b. ವಿಧಿ 30 ಅಲ್ಪಸಂಖ್ಯಾತರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಹಾಗೂ ನಿರ್ವಹಿಸುವ ಹಕ್ಕು:

ಈ ವಿಧಿಯು ಹೇಳುವಂತೆ ಭಾರತದಲ್ಲಿ ಭಾಷಾ ಅಲ್ಪಸಂಖ್ಯಾತರು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ತಾವು ಬಯಸುವ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಣೆಗೆ ಮಾಡುವ ಅಧಿಕಾರವನ್ನು ಹೊಂದಿದ್ದಾರೆ. ಅನುದಾನ ಹಂಚಿಕೆಯ ಸಮಯದಲ್ಲಿ ಸರ್ಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ವಿಷಯದಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿಲ್ಲ. ಮತ್ತು ಆ ಸಂಸ್ಥೆಗಳ ಸ್ವರೂಪಕ್ಕೆ ಘಾಸಿ ಮಾಡುವಂತಿಲ್ಲ. ಅಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಬೋಧನಾ ಮಾಧ್ಯಮದ ಆಯ್ಕೆಗೆ ಸ್ವಾತಂತ್ರ್ಯವನ್ನು ನೀಡಬೇಕು. 2007 ರಲ್ಲಿ ನಡೆದ ಮೊಕದ್ದಮೆಯೊಂದರ ತೀರ್ಪಿನಲ್ಲಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು, ಆಡಳಿತ ಮಂಡಳಿಯನ್ನು ಹೊಂದಲು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲು ಹಾಗೂ ಸಂಸ್ಥೆಯ ಹಿತದೃಷ್ಠಿಯಯಿಂದ ಆಸ್ತಿಯನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ.

6. ಸಂವಿಧಾನಾತ್ಮಕ ಪರಿಹಾರ ಹಕ್ಕು (Right to constitutional remedies) ( ವಿಧಿ 32)

ಒಬ್ಬ ವ್ಯಕ್ತಿ ಮೂಲಭೂತ ಹಕ್ಕುಗಳನ್ನು ಪರಿಣಾಮಕಾರಿಯಾಗಿ ಅನುಭವಿಸಬೇಕಾದರೆ ಅವನಿಗೆ ನ್ಯಾಯಾಲಯದ ರಕ್ಷಣೆ ಬೇಕು. ನಮ್ಮ ಸಂವಿಧಾನ ಮೂಲಭೂತ ಹಕ್ಕುಗಳನ್ನು ನೀಡಿರುವುದು ಮಾತ್ರವಲ್ಲದೆ ಅವುಗಳಿಗೆ ಧಕ್ಕೆ ಆಗದ ರೀತಿಯಲ್ಲಿ 32 ನೇ ವಿಧಿಯಲ್ಲಿ ಪರಿಹಾರಗಳನ್ನು ಸೂಚಿಸಿದೆ. ಈ ಹಕ್ಕಿನ ಪ್ರಕಾರ ಜನರು ತಮ್ಮ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟಾದರೆ ನ್ಯಾಯಾಲಯಗಳಿಗೆ ಮೊರೆ ಹೋಗಬಹುದು. ಹಕ್ಕುಗಳ ರಕ್ಷಣೆಗಾಗಿ ನ್ಯಾಯಾಲಯಕ್ಕೆ ಹೋಗಲು ಇರುವ ಅವಕಾಶವನ್ನೇ ಸಂವಿಧಾನಾತ್ಮಕ ಪರಿಹಾರದ ಹಕ್ಕು ಎಂದು ಕರೆಯಲಾಗಿದೆ. 32ನೇ ವಿಧಿಯನ್ನು ಬಿ. ಆರ್.‌ ಅಂಬೇಡ್ಕರ್‌ ಬಹುವಾಗಿ ಮೆಚ್ಚಿ ಈ ರೀತಿ ಹೇಳಿದರು “ ಸಂವಿಧಾನದ ಅತ್ಯಂತ ಪ್ರಮುಖವಾದ ವಿಧಿ ಯಾವುದೆಂದು ನನ್ನನ್ನು ಕೇಳಿದರೆ ನಾನು 32 ನೇ ವಿಧಿಯೆಂದು ಹೇಳುತ್ತೇನೆ. ಅದು ಸಂವಿಧಾನದ ಆತ್ಮ ಮತ್ತು ಹೃದಯವಿದ್ದಂತೆ.” ಈ ವಿಧಿಯನ್ನು 3 ನೇ ಭಾಗದಲ್ಲಿ ಸೇರಿಸಿರುವುದರಿಂದ ಪರಿಹಾರದ ಹಕ್ಕು ಮೂಲಭೂತ ಹಕ್ಕಾಗಿದೆಯೆಂದು ಸುಪ್ರೀಂಕೋರ್ಟ್‌ 1950, 1959, 1963 ರಲ್ಲಿ ತಿಳಿಸಿತು. ಈ ವಿಧಿಯ ಅನ್ವಯ ಸುಪ್ರೀಂಕೋರ್ಟ್‌ ಮೂಲಭೂತ ಹಕ್ಕುಗಳ ರಕ್ಷಣೆಗೆ ಈ ಕೆಳಗಿನ ರಿಟ್‌ ಅರ್ಜಿಗಳನ್ನು ಸ್ವೀಕರಿಸಬೇಕು ಅವುಗಳೆಂದರೆ,

a. ಹೇಬಿಯಸ್‌ ಕಾರ್ಪಸ್‌ (ಬಂಧಿ ಪ್ರತ್ಯಕ್ಷೀಕರಣ) (Habeas corpus)

ಬಂಧಿತನಾಗಿರುವ ವ್ಯಕ್ತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಂಬಂಧಿಸಿದ ವ್ಯಕ್ತಿಗೆ ನ್ಯಾಯಾಲಯವು ಕೊಡುವ ಆಜ್ಞೆಯನ್ನು ಹೇಬಿಯಸ್‌ ಕಾರ್ಪಸ್‌ ಅಥವಾ ಬಂಧಿ ಪ್ರತ್ಯಕ್ಷೀಕರಣ ಎಂದು ಕರೆಯಲಾಗುತ್ತದೆ. ಬಂಧಿತನಾದ ವ್ಯಕ್ತಿ ಯಾವುದೇ ತಪ್ಪು ಮಾಡದಿದ್ದಲ್ಲಿ ಅವನನ್ನು ಬಿಡುಗಡೆಗೊಳಿಸುವಂತೆ ಆದೇಶಿಸುತ್ತದೆ. ಆದರೆ ಕ್ರಿಮಿನಲ್‌ ಅಪರಾಧಕ್ಕೆ ಸಂಬಂಧಿಸಿದಂತೆ ಬಂಧಿತನಾದ ವ್ಯಕ್ತಿಯನ್ನು ಬಿಡುಗಡೆಗೆ ಈ ಮೇಲಿನ ರಿಟ್‌ ಆದೇಶವನ್ನು ಹೊರಡಿಸುವಂತಿಲ್ಲ.

b. ಮ್ಯಾಂಡಮಸ್‌ (ಪರಮಾದೇಶ) (Mandamus)

ಒಬ್ಬ ಸರ್ಕಾರಿ ಅಧಿಕಾರಿಯು ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುವಂತಿದ್ದರೆ ತೊಂದರೆಗೆ ಒಳಗಾದ ವ್ಯಕ್ತಿಗಳು ಆತನ ವಿರುದ್ಧ ನ್ಯಾಯಾಲಯದ ಮೊರೆ ಹೋಗಬಹುದು. ಆಗ ನ್ಯಾಯಾಲಯವು ಕರ್ತವ್ಯ ಚ್ಯುತಿಯನ್ನುಂಟು ಮಾಡಿದ ಅಧಿಕಾರಿಗೆ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಆದೇಶವನ್ನು ನೀಡುತ್ತದೆ. “ ಇದನ್ನೇ ಮ್ಯಾಂಡಮಸ್‌ ಅಥವಾ ಪರಮಾದೇಶ ಎಂದು ಕರೆಯಲಾಗಿದೆ.”  

c. ಪ್ರೊಹಿಬಿಷನ್‌ (ಪ್ರತಿಬಂಧಕಾಜ್ಞೆ) ( prohibition)

ಕೆಳ ನ್ಯಾಯಾಲಯವು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸದಂತೆ ತಡೆಯಲು ಮೇಲಿನ ನ್ಯಾಯಾಲಯವು ಹೊರಡಿಸುವ ತಡೆಯಾಜ್ಞೆಯನ್ನು ಪ್ರೊಹಿಬಿಷನ್‌ ಎಂದು ಕರೆಯಲಾಗುತ್ತದೆ.

d. ಸರ್ಪಿಯೊರರಿ (ಉತ್ಪ್ರೇಕ್ಷಣಾ) (Cerfiorari)

ಕೆಳಗಿನ ನ್ಯಾಯಾಲಯವು ಅಧಿಕಾರ ವ್ಯಾಪ್ತಿ ಮೀರಿ ತೀರ್ಪು ನೀಡಿದ್ದಾದರೆ ಅಂತಹ ತೀರ್ಪನ್ನು ರದ್ದುಪಡಿಸಿ ಸಂಬಂಧಿಸಿದ ಮೊಕದ್ದಮೆಯನ್ನು ಕಳುಹಿಸಬೇಕೆಂದು ಅಥವಾ ವರ್ಗಾಯಿಸಬೇಕೆಂದು ಸುಪ್ರೀಂಕೋರ್ಟ್‌ ಕೆಳ ನ್ಯಾಯಾಲಯಕ್ಕೆ ಕೊಡುವ ಆದೇಶವಾಗಿದೆ.

e. ಕೋ ವಾರಂಟೋ (ಅಧಿಕಾರ ಪುಬ್ಲಾ) (Quo warranto)

ಕಾನೂನು ಬಾಹಿರವಾಗಿ ಅಥವಾ ಅಕ್ರಮವಾಗಿ ಯಾವುದೇ ಒಬ್ಬ ವ್ಯಕ್ತಿ ಸಾರ್ವಜನಿಕ ಅಧಿಕಾರ ಸ್ಥಾನವನ್ನು ವಶಪಡಿಸಿಕೊಂಡರೆ ಆ ವ್ಯಕ್ತಿಯ ವಿರುದ್ಧ ಈ ಅರ್ಜಿಯನ್ನು ಸಲ್ಲಿಸಬಹುದು. ಅದರಂತೆ ಆ ವ್ಯಕ್ತಿ ಯಾವ ಆಧಾರದ ಮೇಲೆ ಅಧಿಕಾರವನ್ನು ಅಪಹರಿಸಿಕೊಂಡಿದ್ದನೆಂದು ಕರೆ ನೀಡುವ ಆಜ್ಞೆಯೇ ಇದಾಗಿದೆ.

  • ಸಂವಿಧಾನದ 33 ನೇ ವಿಧಿಯನ್ವಯ ಸಂಸತ್ತು ಕಾಯಿದೆ ರಚಿಸುವ ಮೂಲಕ ಸೈನಿಕ ದಳಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುವ ಅಥವಾ ನಿರ್ಬಂಧಿಸುವ ಅಧಿಕಾರವನ್ನು ಪಡೆದಿದೆ. ಅದರಂತೆ 1950 ರಲ್ಲಿ ವಾಯುದಳ ಹಾಗೂ ಭೂದಳ ಕಾನೂನು, 1957 ರ ನೌಕಾದಳ ಕಾನೂನುಗಳು ಸಂವಿಧಾನದ 3 ನೇ ಭಾಗದ ಮೂಲಭೂತ ಹಕ್ಕುಗಳು ರಾಷ್ಟ್ರದ ಮಿಲಿಟರಿ ಹಾಗೂ ಪೋಲಿಸ್‌ ಸೇವೆಯಲ್ಲಿರುವವರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಅವರುಗಳು ಸಂಘ ಸಂಸ್ಥೆಗಳನ್ನು ಕಟ್ಟುವ ಅಥವಾ ಅವುಗಳಲ್ಲಿ ಸದಸ್ಯರಾಗುವ, ಸಭೆಯಲ್ಲಿ ಭಾಷಣ ಮಾಡುವ ಹಾಗೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಕಾರ್ಯಗಳಲ್ಲಿ ನಿರತರಾಗುವಂತಿಲ್ಲ.
  • ಸಂವಿಧಾನದ 34 ನೇ ವಿಧಿಯ ಅನ್ವಯ ಮಾರ್ಷಲ್‌ ಕಾಯಿದೆ ಜಾರಿಯಲ್ಲಿರುವ ಭಾರತದ ಯಾವುದೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸಲು ಅವಕಾಶವಿದೆ.
  • ಸಂವಿಧಾನದ 35 ನೇ ವಿಧಿಯ ಪ್ರಕಾರ ಸಂಸತ್ತು ಮೂಲಭೂತ ಹಕ್ಕುಗಳ ಅನುಭವಿಸುವಿಕೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಹಾಗೂ ಮಿಲಿಟರಿಯವರು ಹೊಂದಬೇಕೆ? ಅಥವಾ ಬೇಡವೇ ಎಂಬುದರ ಬಗ್ಗೆ ಶಾಸನ ಮಾಡುವ ಅಧಿಕಾರ ಪಡೆದಿದೆ.

ಉಪಸಂಹಾರ

ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಜೀವಾಳವಾಗಿವೆ. ಇವು ನಾಗರಿಕರಿಗೆ ಕೇವಲ ಸ್ವಾತಂತ್ರ್ಯವನ್ನಷ್ಟೇ ಅಲ್ಲ, ಕಾನೂನಾತ್ಮಕ ರಕ್ಷಣೆಯನ್ನೂ ಒದಗಿಸುತ್ತವೆ. ಹಕ್ಕುಗಳ ಅರಿವು ಪ್ರಜ್ಞಾವಂತ ನಾಗರಿಕನ ಲಕ್ಷಣವಾಗಿದ್ದು, ಅವುಗಳ ಸರಿಯಾದ ಬಳಕೆ ಸಮಾಜದ ಸಮತೋಲನಕ್ಕೆ ಅಗತ್ಯವಾಗಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನೂ ಅರಿತು ನಡೆದುಕೊಳ್ಳಬೇಕು.