73 ಮತ್ತು 74 ನೇ ಸಂವಿಧಾನ ತಿದ್ದುಪಡಿ

73 ಮತ್ತು 74 ನೇ ಸಂವಿಧಾನ ತಿದ್ದುಪಡಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಳಮಟ್ಟಕ್ಕೆ ತಲುಪಿಸಲು 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಪ್ರಮುಖ ಪಾತ್ರವಹಿಸಿವೆ. ಗ್ರಾಮ ಪಂಚಾಯತ್‌ನಿಂದ ಮಹಾನಗರ ಪಾಲಿಕೆಗಳವರೆಗೆ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಿಕ ಮಾನ್ಯತೆ ನೀಡಲಾಯಿತು. ಇವು ರಾಜಕೀಯ ವಿಕೇಂದ್ರೀಕರಣಕ್ಕೆ ಬಲ ನೀಡಿದವು. ಮಹಿಳೆಯರು ಹಾಗೂ ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾತಿ ನೀಡುವ ಮೂಲಕ ಸಮಾನತೆ ಸಾಧಿಸಲಾಯಿತು.

73ನೇ ಸಂವಿಧಾನ ತಿದ್ದುಪಡಿ: (73rd Constitutional Ammendment)

ಸಂವಿಧಾನದ 73ನೇ ತಿದ್ದುಪಡಿ ಭಾರತದ ಇತಿಹಾಸದಲ್ಲೇ ಒಂದು ಮೈಲಿಗಲ್ಲು. ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿದಾಗಲೂ ಸಾಧ್ಯವಾಗದಿದ್ದ  ರಾಜಕೀಯ ವಿಕೇಂದ್ರೀಕರಣವನ್ನು ಜಾರಿಗೆ ತಂದದ್ದು ಈ ತಿದ್ದುಪಡಿಯ ಸಾಧನೆ. ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಎಂಬ ಎರಡು ಹಂತಗಳೊಂದಿಗೆ ಗಾಂಧೀಜಿಯ ಕನಸಿನ ಸ್ಥಳಿಯ ಸರ್ಕಾರವೆಂಬ ಮೂರನೇ ಹಂತದ ಆಡಳಿತ ಘಟಕಗಳಿಗೆ ಮಾನ್ಯತೆ  ಒದಗಿಸಿದಂತಾಯಿತು. ರಾಜೀವಗಾಂಧಿಯವರ ಕನಸನ್ನು ನನಸು ಮಾಡಲು ಪಿ.ವಿ ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ದಿಟ್ಟ ಹೆಜ್ಜೆಯನ್ನಿಟ್ಟಿತು. ಪರಿಣಾಮವಾಗಿ ಸಂವಿಧಾನದ 73ನೇ ತಿದ್ದುಪಡಿಗೆ ಸಂಸತ್ತಿನ ಅಂಗೀಕಾರ 1992 ರಲ್ಲಿ ದೊರಕಿತು. 1993 ಏಪ್ರಿಲ್ 24ರಂದು ಪಂಚಾಯತ್ ರಾಜ್ಯ ಕಾನೂನು ಜಾರಿಗೆ ಬಂದಿತು. ʻʻದಿ ಪಂಚಾಯತ್ಸ್‌ʼʼ  ಶೀರ್ಷಿಕೆಯನ್ನು ಒಳಗೊಂಡ ೯ನೇ ಭಾಗವನ್ನು ಸಂವಿಧಾನದಲ್ಲಿ ಸೇರಿಸಿ 243 ರಿಂದ 243(೦) ವರೆಗೆ  ೧೬ ಹೊಸ ವಿಧಿಗಳನ್ನು ಅಳವಡಿಸಲಾಗಿದೆ. ಸುಮಾರು 29 ಕಾರ್ಯಗಳನ್ನು ಪಂಚಾಯತಿಗಳು ನಿರ್ವಹಿಸಬೇಕೆಂದು ಅದರಲ್ಲಿ ಸೂಚಿಸಲಾಗಿದೆ. 

1. ಸಂವಿಧಾನದ 243 (B)  ವಿಧಿಯ ಪ್ರಕಾರ ಪ್ರತಿ ರಾಜ್ಯದಲ್ಲಿ ಮೂರು ಹಂತದ ಅಂದರೆ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್‌ಗಳನ್ನು ರಚಿಸುವುದು. 20 ಲಕ್ಷಕ್ಕಿಂತ ಕಡಿಮೆ ಇರುವ ರಾಜ್ಯದಲ್ಲಿ ತಾಲೂಕು ಪಂಚಾಯಿತಿಯನ್ನು ರಚಿಸುವಂತಿಲ್ಲ.

2.  ಸಂವಿಧಾನದ 243 (C ) ವಿಧಿಯಂತೆ ನೇರ ಚುನಾವಣೆಗಳ ಮೂಲಕ ಸದಸ್ಯರು ಪ್ರಜೆಗಳಿಂದ ಆಯ್ಕೆಯಾಗಬೇಕು. ಗ್ರಾಮ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರ ಚುನಾವಣೆಯನ್ನು ಪರೋಕ್ಷವಾಗಿ ನಡೆಸಬೇಕು.

3. 243 (D)  ವಿಧಿಯಂತೆ ಪ್ರತಿಯೊಂದು ಹಂತದ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆಗೆ ಅನುಸಾರವಾಗಿ ಕೆಲವು ಸ್ಥಾನಗಳನ್ನು ಮೀಸಲಾಗಿಡಬೇಕು. ಈ ವರ್ಗಗಳಿಗೆ ನಿಗದಿಪಡಿಸಿದ ಒಟ್ಟು ಮೀಸಲು ಕ್ಷೇತ್ರಗಳಲ್ಲಿ ೧/೩ ಕ್ಕೆ  ಕಡಿಮೆ ಇಲ್ಲದಂತೆ ಈ ವರ್ಗಗಳ ಮಹಿಳೆಯರಿಗೆ ಮೀಸಲು ಸ್ಥಾನಗಳ ಅವಕಾಶವಿದೆ.

4.  ಸಂವಿಧಾನದ 243 (E ) ವಿಧಿಯಂತೆ ಪಂಚಾಯಿತಿಗಳ ಅವಧಿ ಮೊದಲ ಸಭೆ ಸೇರುವ ದಿನದಿಂದ ಐದು ವರ್ಷಗಳು ಅವಧಿ  ಮುಗಿಯುವುದರೊಳಗೆ ಚುನಾವಣೆ ನಡೆಯಬೇಕು. ಒಂದು ವೇಳೆ ವಿಸರ್ಜನೆಯಾದರೆ ಆರು ತಿಂಗಳೊಳಗೆ ಚುನಾವಣೆ ನಡೆದು ಪಂಚಾಯಿತಿಯನ್ನು ರಚಿಸಬೇಕು.

5. ಸಂವಿಧಾನದ 243 (G) ವಿಧಿಯ ಪ್ರಕಾರ ಪಂಚಾಯಿತಿಗಳು ಸ್ವಯಂ ಸರ್ಕಾರಗಳಂತೆ ಕೆಲಸ ನಿರ್ವಹಿಸಲು ರಾಜ್ಯ ಶಾಸಕಾಂಗ ಕಾನೂನು ರಚಿಸಿ ಅವುಗಳಿಗೆ ಅಧಿಕಾರದ ಜವಾಬ್ದಾರಿಯನ್ನು ನೀಡಬೇಕು.

6.  ಸಂವಿಧಾನದ 243 (I) ಹೇಳುವಂತೆ ಪಂಚಾಯಿತಿಗಳ ಹಣಕಾಸು ಪರಿಸ್ಥಿತಿಯ ಪರಿಶೀಲನೆಗೆ ಹಾಗೂ ಶಿಫಾರಸ್ಸುಗಳಿಗೆ 73ನೇ ತಿದ್ದುಪಡಿ ಜಾರಿಗೆ ಬಂದ ಒಂದು ವರ್ಷದೊಳಗೆ ಹಾಗೂ ನಂತರ ಪ್ರತಿ ಐದು ವರ್ಷಕ್ಕೊಮ್ಮೆ ರಾಜ್ಯಪಾಲರು ಹಣಕಾಸು ಆಯೋಗವನ್ನು ನೇಮಿಸುವುದು.

7. ಸಂವಿಧಾನದ 243 (K)  ವಿಧಿಯ ಪ್ರಕಾರ ಪಂಚಾಯಿತಿಗಳ ಚುನಾವಣೆಗಾಗಿ ಮತದಾರರ ಪಟ್ಟಿಯನ್ನು  ಸಿದ್ಧಪಡಿಸಿ ಮೇಲ್ವಿಚಾರಣೆ ಮಾಡಲು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

8. ಸಂವಿಧಾನದ 243 (M)  ವಿಧಿಯಂತೆ ಸಂವಿಧಾನದ 9ನೇ ಭಾಗವು ನಾಗಾಲ್ಯಾಂಡ್, ಮೇಘಾಲಯ ಮತ್ತು ಮಿಜೋರಾಂ, ಮಣಿಪುರ ಹಾಗೂ  ದಾರ್ಜಿಲಿಂಗ್‌ಗಳಿಗೆ ಅನ್ವಯಿಸುವುದಿಲ್ಲ.

9.  ಸಂವಿಧಾನದ 243 (O )  ಪಂಚಾಯಿತಿಗಳ  ಸ್ಥಾನ ಗೊತ್ತುಪಡಿಸಿದ್ದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

74ನೇ ಸಂವಿಧಾನ ತಿದ್ದುಪಡಿ: 74th Ammendment of Constitution)

 1993ರಲ್ಲಿ ಜಾರಿಗೆ ಬಂದ ಈ ತಿದ್ದುಪಡಿ ಕಾಯ್ದೆಯು ಸಂವಿಧಾನಕ್ಕೆ 9 (A ) ಭಾಗ ಮತ್ತು 243(P) ಯಿಂದ 243 (ZD) ವರೆಗಿನ ವಿಧಿಗಳನ್ನು ಸೇರಿಸಿತು. ಇಲ್ಲಿ ಸರ್ಕಾರಗಳು ನಿರ್ವಹಿಸಬೇಕಾದ 18 ಕಾರ್ಯಗಳನ್ನು 12ನೇ ಅನುಸೂಚಿಯಲ್ಲಿ ಭಾರತ ಸಂವಿಧಾನಕ್ಕೆ ಸೇರಿಸಿತು.

1.  ಸಂವಿಧಾನದ 243 (P ) ವಿಧಿಯು ನಗರಸಭೆ, ಮಹಾನಗರ ಪಾಲಿಕೆ ಮುಂತಾದ ಪದಗಳ ಅರ್ಥವನ್ನು ತಿಳಿಸುತ್ತದೆ.

2. ಸಂವಿಧಾನದ 243 (G ) ಪ್ರಕಾರ ರಾಜ್ಯದಲ್ಲಿ ನಗರಸಭೆ, ಮುನ್ಸಿಪಲ್ ಕೌನ್ಸಿಲ್ ಹಾಗೂ ಮಹಾನಗರ ಪಾಲಿಕೆ ಆರಂಭವಾಗಬೇಕೆಂದು ತಿಳಿಸಿತು.

3. ಸಂವಿಧಾನದ 243 (R) ವಿಧಿಯು ಪ್ರಕಾರ ವಿವಿಧ  ಹಂತದ ಎಲ್ಲಾ ಸ್ಥಳೀಯ ನಗರ ಸಂಸ್ಥೆಗಳು ತಮ್ಮ ವ್ಯಾಪ್ತಿಗೊಳಪಡುವ ಪ್ರದೇಶದಲ್ಲಿ ನೆಲೆಸಿರುವ ಮತದಾರರಿಂದ ಚುನಾಯಿತಗೊಂಡ ಸದಸ್ಯರಿಂದ ಕೂಡಿರಬೇಕೆಂದು ಸೂಚಿಸಿದೆ.

4.  ಸಂವಿಧಾನದ 243 (T) ವಿಧಿಯ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಮಹಿಳಾ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಮೀಸಲಾತಿ ಒದಗಿಸಬೇಕು ಎಂದು ತಿಳಿಸಿದೆ.

5.  ಸಂವಿಧಾನದ 243 (U ) ವಿಧಿ ಪ್ರಕಾರ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರ ಅವಧಿ ೫ ವರ್ಷಗಳು ಎಂಬುದನ್ನು ಸೂಚಿಸುತ್ತದೆ. ಅವಧಿ ಮುಕ್ತಾಯಗೊಂಡ ಅಥವಾ ಅವಧಿಗೆ ಮುನ್ನ ವಿಸರ್ಜನೆಗೊಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಆರು ತಿಂಗಳ ಒಳಗಾಗಿ ಚುನಾವಣೆಗಳನ್ನು ನಡೆಸಬೇಕು.

6.  ಸಂವಿಧಾನದ 243 (X ) ಶಾಸಕಾಂಗಗಳು ಜಾರಿಗೆ ತರುವ ಕಾನೂನಿನ ಪರಿಮಿತಿಯೊಳಗೆ ನಗರ ಸ್ಥಳೀಯ ಸಂಸ್ಥೆಗಳ ಹಣಕಾಸಿನ ಅಧಿಕಾರಗಳನ್ನು ಅಂದರೆ ತೆರಿಗೆ ಸಂಗ್ರಹದ ಮಾಹಿತಿಯನ್ನು ಒದಗಿಸುತ್ತದೆ.

7. ಸಂವಿಧಾನದ 243(V) ವಿಧಿಯಂತೆ ಸದಸ್ಯರ ಅರ್ಹತೆಯ ಬಗ್ಗೆ ತಿಳಿಸುತ್ತದೆ.

8.  243 (W ) ಸರ್ಕಾರದ ಅಧಿಕಾರಗಳು ಹಾಗೂ ಜವಾಬ್ದಾರಿಯನ್ನು ನಮೂದಿಸಲಾಗಿದೆ.

9. 243 (Y )  ವಿಧಿಯ ಪ್ರಕಾರ ರಾಜ್ಯದ ಹಣಕಾಸು ಆಯೋಗ ಈ ಸ್ಥಳೀಯ ಸರ್ಕಾರ ಹಣಕಾಸು ಪರಿಸ್ಥಿತಿಯನ್ನು ಪರಿಶೀಲಿಸಿ ಬೇಕಾದ ಶಿಫಾರಸ್ಸು ಮಾಡುತ್ತದೆ.

10.  243 (ZA )  ಪ್ರಕಾರ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಹಾಗೂ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ.

11.  243 (ZD )  ವಿಧಿಯ ಪ್ರಕಾರ ಜಿಲ್ಲಾ ಯೋಜನಾ ಸಮಿತಿ ರಚನೆಯ ಬಗ್ಗೆ ತಿಳಿಸುತ್ತದೆ.

ಉಪಸಂಹಾರ

73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಿದ ಮೂಲಭೂತ ಕಾಯ್ದೆಗಳಾಗಿವೆ. ಸ್ಥಳೀಯ ಸ್ವರಾಜ್ಯ ಸಂಸ್ಥೆಗಳು ಜನರ ಸಮಸ್ಯೆಗಳಿಗೆ ಸಮೀಪದಿಂದ ಪರಿಹಾರ ನೀಡುವ ಅವಕಾಶ ಪಡೆದಿವೆ. ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ರಾಜಕೀಯ ಭಾಗವಹಿಸುವಿಕೆ ಹೆಚ್ಚಾಗಿದೆ. ಇವು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿಗೆ ಸಾಕಾರ ರೂಪ ನೀಡಿದಂತಾಗಿದೆ.

ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ ಮತ್ತು ಮಿತಿಗಳು

ಶಾಸಕಾಂಗ ಹಾಗೂ ಕಾರ್ಯಾಂಗ ಹೇಗೆ ಪ್ರಮುಖವಾದವುಗಳೋ ಹಾಗೆಯೇ ನ್ಯಾಯಾಂಗವು ಅಷ್ಟೇ ಪ್ರಾಮುಖ್ಯತೆಯನ್ನು ಪಡೆದಿದೆ. ದೇಶದ ಕಾನೂನು ಹಾಗೂ ಸಂವಿಧಾನವನ್ನು ಅರ್ಥೈಸಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಸರಿಯಾದ ನ್ಯಾಯವನ್ನು ಒದಗಿಸಿಕೊಡುವಲ್ಲಿ ನ್ಯಾಯಾಂಗದ ಪಾತ್ರ ಪ್ರಮುಖವಾದದು. ಭಾರತೀಯ ಸಂವಿಧಾನವು ಲಿಖಿತ ರೂಪದಲ್ಲಿ ಇದ್ದು ಉಳಿದೆರಡು ಅಂಗಗಳನ್ನು ಸರಿದಾರಿಗೆ ತರುವಲ್ಲಿ ನ್ಯಾಯಾಂಗ ಶ್ರಮಿಸುತ್ತದೆ. ಪ್ರಜೆಗಳ ಮೂಲಭೂತ ಹಕ್ಕುಗಳ ರಕ್ಷಣೆಯಲ್ಲಿಯೂ ನ್ಯಾಯಾಂಗದ ಪಾತ್ರ ದೊಡ್ಡದು. ಸಂವಿಧಾನವನ್ನು ಬೆಂಬಲಿಸಿ ಸಾಮಾಜಿಕ ಬದಲಾವಣೆಯನ್ನು ತರುವಲ್ಲಿ ನ್ಯಾಯಾಂಗದ ತೀರ್ಪುಗಳು ಸಹಕಾರಿ. ನ್ಯಾಯಾಂಗದ ವಿಮರ್ಶಾಧಿಕಾರವನ್ನು ಅಮೇರಿಕದಿಂದ ಎರವಲು ಪಡೆಯಲಾಗಿದೆ. 18೦3 ರಲ್ಲಿ ಮಾರ್ಬರಿ ಮತ್ತು ಮ್ಯಾಡಿಸನ್ ಮೊಕದ್ದಮೆಯ ಸಮಯದಲ್ಲಿ ನ್ಯಾಯ ಮೂರ್ತಿ ಜಾನ್ ಮಾರ್ಷಲ್ ಮೊಟ್ಟಮೊದಲು ನ್ಯಾಯಾಂಗ ವಿಮರ್ಶಾಧಿಕಾರವನ್ನು ಪ್ರತಿಪಾದಿಸಿದರು. ಮುಂದೆ ಲಿಖಿತ ಸಂವಿಧಾನದಲ್ಲಿ ಏಕ ಪರಿಕಲ್ಪನೆಯನ್ನು ಅಮೆರಿಕ ಅಳವಡಿಸಿಕೊಂಡಿತು. ಭಾರತದ ಸಂವಿಧಾನದಲ್ಲಿ ಈ ಶಬ್ದವನ್ನು ಬಳಸಿಲ್ಲವಾದರೂ ನ್ಯಾಯಾಧೀಶರು ಸಂವಿಧಾನಿಕ ಅವಕಾಶವನ್ನು ಬಳಸಿಕೊಂಡು ವಿಮರ್ಶಾಧಿಕಾರವನ್ನು ಚಲಾಯಿಸುತ್ತಿದ್ದಾರೆ.

ನ್ಯಾಯಾಂಗ ವಿಮರ್ಶಾಧಿಕಾರದ ಅರ್ಥ: (Meaning of the Power of Judicial Reviws)              

ಶಾಸಕಾಂಗ ಹಾಗೂ ಕಾರ್ಯಾಂಗದ ಶಾಸನಗಳು ಮತ್ತು ಆದೇಶಗಳು ಸಂವಿಧಾನಕ್ಕೆ ಪೂರಕವಾಗಿವೆಯೇ  ಎಂಬುದನ್ನು ಪರಿಶೀಲಿಸಿ ಒಂದು ವೇಳೆ ವಿರುದ್ಧವಾಗಿವೆ ಎಂದು ಕಂಡುಬಂದರೆ ಅವುಗಳನ್ನು ರದ್ದುಗೊಳಿಸುವ ನ್ಯಾಯಾಧೀಶರ ಅಧಿಕಾರವನ್ನು ನ್ಯಾಯಾಂಗದ ವಿಮರ್ಶೆ ಎಂದು ಕರೆಯಲಾಗಿದೆ. ಶಾಸನಗಳಿಂದ ಸಂವಿಧಾನಾತ್ಮಕತೆಯನ್ನು ರಕ್ಷಿಸಲು ನ್ಯಾಯಾಂಗ ವಿಮರ್ಶಾಧಿಕಾರವು ಅನಿವಾರ್ಯ ಎಂದು ಎಂ.ವಿ ಪೈಲಿ ಹೇಳಿದ್ದಾರೆ ಶಾಸಕಾಂಗದ ಸಾರ್ವಭೌಮತ್ವದಿಂದ ಸಾಂವಿಧಾನಿಕ ಸಾರ್ವಭೌಮತ್ವವನ್ನು ಸಂರಕ್ಷಿಸುವ ಸಾಧನ ಎಂಬುದು ಜಸ್ಟಿನ್ ಮುಖರ್ಜಿಯವರ ಅಭಿಪ್ರಾಯವಾಗಿದೆ.

ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ: (Scope of the Power of Judicial Review)

 ನ್ಯಾಯಾಂಗ ವಿಮರ್ಶಾಧಿಕಾರದ ವ್ಯಾಪ್ತಿ ಈ ಕೆಳಗಿನಂತಿವೆ.

  1. ಸಂವಿಧಾನ ತಿದ್ದುಪಡಿಗೆ ಸಂಬಂಧಿಸಿದ ಕಾಯಿದೆಗಳು.
  2. ರಾಷ್ಟ್ರೀಕೃತ ಸಂಸ್ಥೆಗಳು ತೆಗೆದುಕೊಂಡ ನಿರ್ಧಾರಗಳು.
  3. ಕೇಂದ್ರ ಕಾರ್ಯಾಂಗ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಹೊರಡಿಸಿದ ಆದೇಶಗಳು ಸುತ್ತೋಲೆಗಳು ಹಾಗೂ ನಿರ್ಧಾರಗಳು.
  4. ಸಂಸತ್ತು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳು ಹೊರಡಿಸಿದ ಶಾಸನಗಳು.

ನ್ಯಾಯಾಂಗ ವಿಮರ್ಶಾಧಿಕಾರದ ಮಿತಿಗಳು: (Limitation of the Power of Judicial Review)

ನ್ಯಾಯಾಂಗ ವಿಮರ್ಶೆಗಳು ಸಂವಿಧಾನದ ಭಾಗವಾಗಿದ್ದರೂ ಪ್ರಜೆಗಳು ಅವುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ. ನ್ಯಾಯಾಲಯಗಳ ಮೇಲೆ ಸಂವಿಧಾನವೇ ಕೆಲವೊಂದು ಮಿತಿಗಳನ್ನು ಏರಿದೆ ಅವುಗಳೆಂದರೆ.

  1. ಸಂವಿಧಾನದ ನಾಲ್ಕನೇ ಭಾಗದಲ್ಲಿನ ರಾಜ್ಯ ನಿರ್ದೇಶಕ ತತ್ವಗಳು.
  2. ಸಂವಿಧಾನದ 163ನೇ ವಿಧಿಯ ಪ್ರಕಾರ ರಾಜ್ಯ ಮಂತ್ರಿಮಂಡಲದಿಂದ ರಾಜ್ಯಪಾಲರು ಪಡೆಯುವ ಸಲಹೆಗಳು.
  3. ಸಂವಿಧಾನದ 122 ಹಾಗೂ 212ನೇ ವಿಧಿಯ ಅನ್ವಯ ಕ್ರಮವಾಗಿ ಸಂಸತ್ತು ಹಾಗೂ ರಾಜ್ಯ ಶಾಸಕಾಂಗಗಳ ಸಭಾಧ್ಯಕ್ಷರು ಹಾಗೂ ಅವರ ಕಾರ್ಯಕಲಾಪಗಳು.
  4. ಚುನಾವಣಾ ಮತಕ್ಷೇತ್ರಗಳ ಪುನರ್ ವಿಂಗಡನ ಆಯೋಗ ಹಾಗೂ ಸ್ಥಾನಗಳ ಹಂಚಿಕೆ.
  5. ಸಂವಿಧಾನದ 9ನೇ ಅನುಸೂಚಿಯಲ್ಲಿ ಸೇರಿಸಲಾದ ಶಾಸನಗಳು.

ಉಪಸಂಹಾರ

ಒಟ್ಟಾರೆ, ನ್ಯಾಯಾಂಗ ವಿಮರ್ಶಾಧಿಕಾರವು ಸಂವಿಧಾನದ ರಕ್ಷಣೆಗೆ ಹಾಗೂ ಪ್ರಜಾಪ್ರಭುತ್ವದ ಸ್ಥಿರತೆಗೆ ಅಗತ್ಯವಾದ ಶಕ್ತಿ ಆಗಿದೆ. ಇದು ಸರ್ಕಾರದ ಮೂರು ಅಂಗಗಳ ಮೇಲೆ ಸಮತೋಲನ ಸಾಧಿಸುತ್ತದೆ. ಆದರೆ ಸಂವಿಧಾನವು ವಿಧಿಸಿರುವ ಮಿತಿಗಳನ್ನು ಗೌರವಿಸುವುದು ಕೂಡ ಅವಶ್ಯಕವಾಗಿದೆ. ಹೀಗಾಗಿ ನ್ಯಾಯಾಂಗ ವಿಮರ್ಶಾಧಿಕಾರವು ಹಕ್ಕು ಮತ್ತು ಜವಾಬ್ದಾರಿಗಳ ಸಮನ್ವಯದ ಪ್ರತಿರೂಪವಾಗಿದೆ.

ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಲಯಗಳು

ಮೂಲಭೂತ ಹಕ್ಕುಗಳ ರಕ್ಷಕನಾಗಿ ನ್ಯಾಯಾಲಯಗಳು

ಸಂವಿಧಾನದಲ್ಲಿ ಪ್ರಜೆಗಳಿಗೆ ಆರು ಮೂಲಭೂತ ಹಕ್ಕುಗಳನ್ನು ನೀಡಿದೆ. ಅವುಗಳಿಗೆ ಶಾಸಕಾಂಗ, ಕಾರ್ಯಾಂಗ ಹಾಗೂ ಪ್ರಜೆಗಳಿಂದ ಚ್ಯುತಿ ಬರದಂತೆ ಕಾಪಾಡುವುದು ಉಚ್ಛ ನ್ಯಾಯಾಲಯದ ಕರ್ತವ್ಯವಾಗಿದೆ. ಸರ್ವೋಚ್ಛ ನ್ಯಾಯಾಲಯದ ಹಾಗೆಯೇ ಉಚ್ಛ ನ್ಯಾಯಾಲಯವು ಸಂವಿಧಾನಿಕ ರಿಟ್‌ಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಹೊಂದಿದೆ ಅವುಗಳೆಂದರೆ.

1. ಹೇಬಿಯಸ್ಕಾರ್ಪಸ್ (ಬಂಧಿ ಪ್ರತ್ಯಕ್ಷಿಕರಣ) : ಹೇಬಿಯಸ್ ಕಾರ್ಪಸ್ ಎಂದರೆ ʻʻದೇಹ ಸಮೇತ ಹಾಜರುಪಡಿಸುವುದು ಎಂದರ್ಥ. ಬಂಧನಕ್ಕೆ ಒಳಗಾದ ವ್ಯಕ್ತಿಯು ವ್ಯಕ್ತಿಯ ಸಂಬಂಧಿಕರು ಅಥವಾ ಸ್ನೇಹಿತರು ಆತಂಕದಿಂದ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬಹುದು.  ಬಂಧಿತ ವ್ಯಕ್ತಿಯನ್ನು 24 ಗಂಟೆಗಳೊಳಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಬೇಕೆಂದು ನ್ಯಾಯಾಲಯಗಳು ಆಜ್ಞೆ ಮಾಡುತ್ತವೆ. ಬಂಧನಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಲು ಸರ್ಕಾರಿ ಅಧಿಕಾರಿಗಳು ಅಥವಾ ಖಾಸಗಿ ಅಧಿಕಾರಿಗಳ ವಿರುದ್ಧ ಹೊರಡಿಸುವ ರಿಟ್‌ ಇದಾಗಿದೆ.

2. ಮ್ಯಾಂಡಮಸ್(ಪರಮಾದೇಶ): ಮ್ಯಾಂಡಮಸ್ ಎಂದರೆ ʻʻಆದೇಶ ಎಂದರ್ಥʼʼ ಈ ರಿಟ್‌ ಮೂಲಕ ವ್ಯಕ್ತಿಯೊಬ್ಬನು ತನ್ನ ಕರ್ತವ್ಯದ ಕುರಿತು ಉದಾಸೀನತೆ ತೋರಿದರೆ ಇದರಿಂದ ತೊಂದರೆಗೊಳಗಾದ ವ್ಯಕ್ತಿಗಳು. ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯಗಳಲ್ಲಿ ತಮ್ಮ ಹಕ್ಕುಗಳ ರಕ್ಷಣೆಗಾಗಿ ಮನವಿಯನ್ನು ಸಲ್ಲಿಸುತ್ತಾರೆ. ಆಗ ಸಾರ್ವಜನಿಕ ಉದ್ಯೋಗಿಗೆ ತನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆಜ್ಞೆ ಮಾಡುತ್ತದೆ. ಈ ರೀತಿಯ ರಿಟ್‌ನ್ನು ಸರ್ಕಾರಿ ಉದ್ಯೋಗಿಯ ವಿರುದ್ಧ ಹೊರಡಿಸಬಹುದೇ ಹೊರತು ಖಾಸಗಿ ವ್ಯಕ್ತಿಗಳ ವಿರುದ್ಧ ಅಲ್ಲ.

3. ಪ್ರೋಹಿಬಿಷನ್‌ (ಪ್ರತಿಬಂಧಕ) ಪ್ರೋಹಿಬಿಷನ್ ಎಂದರೆ ʻʻತಡೆʼʼ ಎಂದರ್ಥ. ಅದೀನ ನ್ಯಾಯಾಲಯಗಳಿಗೆ ತಮ್ಮ ತೀರ್ಪಿನ ದಾಖಲೆಗಳನ್ನು ಪರಿಶೀಲಿಸಲು ತನಗೆ ಸಲ್ಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆಯನ್ನು ಪ್ರೋಹಿಬಿಷನ್ ಎಂದು ಕರೆಯುತ್ತೇವೆ. ಕೆಳ ನ್ಯಾಯಾಲಯಗಳು ತನಗೆ ಇಲ್ಲದ ಅಧಿಕಾರವನ್ನು ಚಲಾಯಿಸಿದರೆ. ಅದನ್ನು ಚಲಾಯಿಸದಂತೆ ತಡೆಯುವ ಅಧಿಕಾರವನ್ನು ಉಚ್ಛ ನ್ಯಾಯಾಲಯ ಹೊಂದಿದೆ.

4. ಸರ್ಕಿಯೋರರಿ(ಉತ್ಪ್ರೇಕ್ಷಣಾ) : ಇದರ ಪ್ರಕಾರ ಕೆಳಗಿನ ನ್ಯಾಯಾಲಯಗಳ ತೀರ್ಪುಗಳಿಂದ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬಂದರೆ ಅಂತಹ ಮೊಕದ್ದಮೆಗಳನ್ನು ಕೆಳಗಿನ ನ್ಯಾಯಾಲಯಗಳು ಮೇಲಿನ ನ್ಯಾಯಾಲಗಳಿಗೆ ವರ್ಗಾಯಿಸಬೇಕೆಂದು ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಆದೇಶ ಹೊರಡಿಸುತ್ತದೆ.  ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ತೀರ್ಪು ನೀಡಿದ ಅಧೀನ ನ್ಯಾಯಾಲಯಗಳ ಕ್ರಮವನ್ನು ಪ್ರೋಹಿಬಿಷನ್ ತಡೆದರೆ ಅಧಿಕಾರ ವ್ಯಾಪ್ತಿಯನ್ನು ಉಲ್ಲಂಘಿಸಿ ನಡೆಯುತ್ತಿರುವ  ವಿಚಾರಣೆಯನ್ನು  ಸರ್ಶಿರೋರರಿ ತಡೆಯುತ್ತದೆ.

5. ಕೋವಾರಂಟೊ(ಅಧಿಕಾರ ವೆಚ್ಚ) : ʻʻಸಾರ್ವಜನಿಕ ಹುದ್ದೆಯನ್ನು ಅಕ್ರಮವಾಗಿ ಪಡೆದುಕೊಂಡವರ ವಿರುದ್ಧ ಮತ್ತು ಆ ಹುದ್ದೆಯನ್ನು ತೆರೆವುಗೊಳಿಸುವಂತೆ ಸರ್ವೋಚ್ಛ ಅಥವಾ ಉಚ್ಛ ನ್ಯಾಯಾಲಯವು ಹೊರಡಿಸುವ ಆಜ್ಞೆ ಇದಾಗಿದೆ. ಜೇಷ್ಠತೆಯನ್ನು ಉಲ್ಲಂಘಿಸಿ ಅಕ್ರಮವಾಗಿ ಒಂದು ಹುದ್ದೆಯನ್ನು ಒಬ್ಬಾತ ಪಡೆದಿದ್ದರೆ ಜೇಷ್ಠತೆಯಿಂದ ವಂಚಿತನಾದ ವ್ಯಕ್ತಿಯು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರೆ ಆಗ ನ್ಯಾಯಾಲಯವು  ಕೋವಾರಂಟೋ ಹೊರಡಿಸುತ್ತದೆ. ಇದರಿಂದ ವ್ಯಕ್ತಿಗೆ ಸಲ್ಲಬೇಕಾದ ನ್ಯಾಯ ಸಲ್ಲಿಸಿದಂತಾಗುತ್ತದೆ.

ಉಪಸಂಹಾರ

ಮೂಲಭೂತ ಹಕ್ಕುಗಳ ಸಮರ್ಥನೆ ಪ್ರಜಾಪ್ರಭುತ್ವದ ಹೃದಯವಾಗಿದೆ. ರಿಟ್‌ಗಳ ಮೂಲಕ ನ್ಯಾಯಾಲಯಗಳು ಪ್ರಜೆಗಳ ಹಕ್ಕುಗಳನ್ನು ಕಾಪಾಡಿ ನ್ಯಾಯವನ್ನು ಸ್ಥಾಪಿಸುತ್ತವೆ. ಇದು ಸಂವಿಧಾನದ ಮಹತ್ವವನ್ನು ಹಾಗೂ ನ್ಯಾಯಾಂಗದ ಸ್ವಾತಂತ್ರ್ಯವನ್ನು ತೋರಿಸುತ್ತದೆ. ಹೀಗಾಗಿ ರಿಟ್‌ಗಳು ನಾಗರಿಕರ ಹಕ್ಕುಗಳ ರಕ್ಷಣೆಗೆ ಬಲವಾದ ಸಾಧನಗಳಾಗಿವೆ.

ಉಚ್ಛ ನ್ಯಾಯಾಲಯಗಳ ರಚನೆ

ಉಚ್ಛ ನ್ಯಾಯಾಲಯಗಳ ರಚನೆ

ಉಚ್ಛ ನ್ಯಾಯಾಲಯಗಳ ರಚನೆ: (Composition of High Court)

ಉಚ್ಛ ನ್ಯಾಯಾಲಯಗಳ ರಚನೆಯನ್ನು ಈ ಕೆಳಗಿನಂತೆ ಕಾಣಬಹುದು.

1. ನ್ಯಾಯಾಧೀಶರ ಸಂಖ್ಯೆ: (Total Number of Judges)

ಭಾರತದ ಎಲ್ಲಾ ಉಚ್ಛ ನ್ಯಾಯಾಲಯಗಳು ಒಬ್ಬ ಮುಖ್ಯ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳನ್ನು ಒಳಗೊಂಡಿರುತ್ತವೆ. ಆದರೆ ದೇಶದ ಎಲ್ಲಾ ನ್ಯಾಯಾಲಗಳ ನ್ಯಾಯಾಧೀಶರ ಸಂಖ್ಯೆ ಒಂದೇ ಆಗಿರುವುದಿಲ್ಲ. ಆಯಾ ಉಚ್ಛ ನ್ಯಾಯಾಲಯಗಳ ಕಾರ್ಯಭಾರದ ಆಧಾರದ ಮೇಲೆ ನ್ಯಾಯಾಧೀಶರ ಸಂಖ್ಯೆಯನ್ನು ನಿಗದಿಪಡಿಸಲಾಗಿರುತ್ತದೆ. ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ರಾಷ್ಟ್ರಪತಿಗಳ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಪ್ರಸ್ತುತ ಭಾರತದ 25 ರಾಜ್ಯಗಳ ಉಚ್ಛ ನ್ಯಾಯಾಲಯಗಳಲ್ಲಿ ಒಟ್ಟು 815 ಕಾಯಂ ನ್ಯಾಯಾಧೀಶರ ಅನುಮೋದಿತ ಹುದ್ದೆಗಳಿವೆ.

2. ನ್ಯಾಯಾಧೀಶರ ನೇಮಕ: (Appointment of Judges)

ʻʻಸಂವಿಧಾನದ 217 ನೇ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಇತರೆ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ನೇಮಕಮಾಡುತ್ತಾರೆ.ʼʼ ರಾಷ್ಟ್ರಪತಿಗಳು ಉಚ್ಛನ್ಯಾಯಾಲಯದ ನ್ಯಾಯಾಧೀಶರನ್ನು ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲದ ಸಲಹೆ ಮೇರೆಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರು ಸಂಬಂಧಿಸಿದ ರಾಜ್ಯಪಾಲರೊಂದಿಗೆ ಸಮಾಲೋಚಿಸಿ ನೇಮಕ ಮಾಡುತ್ತಾರೆ.

3. ಅರ್ಹತೆಗಳು: (Qualification)

 ಉಚ್ಛ ನ್ಯಾಯಾಲಯದ ನ್ಯಾಯಾಧೀಶನಾಗಲು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು

  1. ಭಾರತದ ಪ್ರಜೆಯಾಗಿರಬೇಕು.
  2. ಜಿಲ್ಲಾ ಮಟ್ಟದ ಅಥವಾ ಅದಕ್ಕಿಂತ ಕೆಳಹಂತದ ನ್ಯಾಯಾಲಯಗಳಲ್ಲಿ ಕನಿಷ್ಠ 10 ವರ್ಷ ನ್ಯಾಯವಾದಿಯಾಗಿ ಕೆಲಸ ಮಾಡಿದ ಅನುಭವವಿರಬೇಕು.
  3. ಒಂದು ಅಥವಾ ಹೆಚ್ಚು ಉಚ್ಛ ನ್ಯಾಯಾಲಯಗಳಲ್ಲಿ ನ್ಯಾಯವಾದಿಯಾಗಿ ಹತ್ತು ವರ್ಷ ಸೇವೆ ಸಲ್ಲಿಸಿರಬೇಕು.
  4. ರಾಷ್ಟ್ರಪತಿಗಳ ಅಭಿಪ್ರಾಯದಲ್ಲಿ ಆತ ಉತ್ತಮ  ನ್ಯಾಯಶಾಸ್ತ್ರಜ್ಞನಾಗಿರಬೇಕು.

4. ಪ್ರಮಾಣವಚನ: (Oath)

 ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶನಾಗಿ ನೇಮಕಗೊಳ್ಳುವವರಿಗೆ ಆ ರಾಜ್ಯದ ರಾಜ್ಯಪಾಲರು ಪ್ರಮಾಣವಚನವನ್ನು ಬೋಧಿಸುತ್ತಾರೆ.

5. ಅಧಿಕಾರಾವಧಿ: (Term of Power)

ಉಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ನಿರ್ದಿಷ್ಟ ವಯೋಮಿತಿಯನ್ನು ತಿಳಿಸಿಲ್ಲ. ಆದರೆ 62 ವರ್ಷ ವಯೋಮಿತಿ ಆದ ನಂತರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಅಧಿಕಾರದಿಂದ ನಿರ್ಗಮಿಸಬೇಕು. ರಾಜೀನಾಮೆ, ಮರಣ ಹಾಗೂ ದುರ್ನಡತೆಯಿಂದ ನ್ಯಾಯಾಧೀಶರನ್ನು ಅವಧಿಗೆ ಮುನ್ನವೇ ಅಧಿಕಾರದಿಂದ ವಜಾಗೊಳಿಸಬಹುದು. 62 ವರ್ಷ ಮುನ್ನವೇ ರಾಜೀನಾಮೆ ನೀಡಲು ಬಯಸಿದರೆ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗೆ ನೀಡುವ ಮೂಲಕ ಪದತ್ಯಾಗ ಮಾಡಬೇಕು.

6. ವರ್ಗಾವಣೆ: (Transfer)

ಸಂವಿಧಾನದ 2೨2ರ ವಿಧಿಯ ಪ್ರಕಾರ ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಸಂಪರ್ಕಿಸಿ ಬೇರೆ ನ್ಯಾಯಾಲಯಕ್ಕೆ ವರ್ಗಾಯಿಸಬಹುದು.

7. ಪದಚ್ಯುತಿ: (Impeachment) 

ಉಚ್ಛ ನ್ಯಾಯಾಲಯದ ನ್ಯಾಯಾಧೀಶರನ್ನು, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ರೀತಿಯಲ್ಲಿಯೇ ಪದಚ್ಯುತಿಗೊಳಿಸುತ್ತಾರೆ. ನ್ಯಾಯಾಧೀಶರನ್ನು ಭ್ರಷ್ಟಾಚಾರ, ಅವಿಧೇಯತೆ ಅಥವಾ ಸಂವಿಧಾನದ ಉಲ್ಲಂಘನೆ ಕಾರಣದಿಂದ ರಾಷ್ಟ್ರಪತಿಗಳು ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸುತ್ತಾರೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪ್ರತ್ಯೇಕವಾಗಿ ಆ ಸದನದ ೨/೩ ಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಹಾಜರಿದ್ದು ಒಟ್ಟು ಸದಸ್ಯರ ಸಂಖ್ಯೆಯ ಬಹುಮತದೊಂದಿಗೆ ಪದಚ್ಯುತಿ ಪ್ರಸ್ತಾವನೆಯನ್ನು ಅನುಮೋದಿಸಬೇಕಾಗುತ್ತದೆ.

8. ವೇತನ ಮತ್ತು ಭತ್ಯೆಗಳು: (Salary and Allowances)

ಉಚ್ಛ ನ್ಯಾಯಾಲಯಗಳ ಮುಖ್ಯನ್ಯಾಧೀಶರು ಹಾಗೂ ಇತರ ನ್ಯಾಯಾದೀಶರ ವೇತನವನ್ನು ಸಂಸತ್ತು ಆಗಾಗ ಪರಿಪ್ಕರಿಸಿ ನೀಡುತ್ತದೆ. ಇವರ ವೇತನ ಹಾಗೂ ಭತ್ಯೆಗಳನ್ನು ಆಯಾ ರಾಜ್ಯಗಳ ʻʻರಾಜ್ಯ ಸಂಚಿತ ನಿಧಿಯಿಂದ ʻʻಭರಿಸಲಾಗುತ್ತದೆ. ಉಚ್ಛ ನ್ಯಾಯಾಲಯಗಳ ಮುಖ್ಯ ನ್ಯಾಯಾದೀಶರು ೨,೫೦,೦೦೦ ಹಾಗೂ ಇತರ ನ್ಯಾಯಾದೀಶರು ೨,೨೫,೦೦೦ ರೂಗಳನ್ನು ಮಾಸಿಕ ವೇತನವಾಗಿ ಪಡೆಯುತ್ತಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ ಸೌಲಭ್ಯ, ವಿದ್ಯುತ್‌ ಸೌಲಭ್ಯ ಹಾಗೂ ಅಂತರ್‌ಜಾಲ ಸೌಲಭ್ಯಗಳನ್ನು ಒದಸಲಾಗುತ್ತದೆ. ಇದರೊಂದಿಗೆ ತಿಂಗಳಿಗೆ ೨೫೦೦೦ ಸೇವಕರ ಭತ್ಯೆಯನ್ನು ನೀಡಲಾಗುತ್ತದೆ. ಮುಂದುವರೆದು ಎರಡು ವಾಹನಗಳು, ಪೋಲಿಸ್‌ ಭದ್ರತೆ, ವಾರ್ಷಿಕ 30 ಸಾರಿ ಉಚಿತ ವಿಮಾನ ಪ್ರಯಾಣ, ವೈದ್ಯಕೀಯ ವೆಚ್ಚ ಹಾಗು ನಿವೃತ್ತಿ ವೇತನದಂತದ ಸೌಲಭ್ಯಗಳನ್ನು ನ್ಯಾಯಾಧೀಶರಿಗೆ ನೀಡಲಾಗುತ್ತದೆ. ನಿವೃತ್ತಿಯ ಬಳಿಕ ತಾನು ಕಾರ್ಯನಿರ್ವಹಿಸಿದ ನ್ಯಾಯಾಲಯವನ್ನು ಹೊರತುಪಡಿಸಿ ಉಳಿದ ಉಚ್ಛ ನ್ಯಾಯಾಲಯಗಳಲ್ಲಿ ಅಥವಾ ಸರ್ವೋಚ್ಛ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ. 

ಉಪಸಂಹಾರ

ಒಟ್ಟಿನಲ್ಲಿ, ಉಚ್ಛ ನ್ಯಾಯಾಲಯಗಳ ರಚನೆ ಮತ್ತು ಕಾರ್ಯಪದ್ಧತಿ ಭಾರತೀಯ ಸಂವಿಧಾನದ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ನ್ಯಾಯಾಧೀಶರ ನೇಮಕ, ವರ್ಗಾವಣೆ ಮತ್ತು ಪದಚ್ಯುತಿ ಕ್ರಮಗಳು ನ್ಯಾಯಾಂಗದ ಸ್ವಾಯತ್ತತೆಯನ್ನು ಬಲಪಡಿಸುತ್ತವೆ. ವೇತನ ಮತ್ತು ಸೌಲಭ್ಯಗಳ ಮೂಲಕ ನ್ಯಾಯಾಧೀಶರ ಗೌರವವನ್ನು ಕಾಪಾಡಲಾಗುತ್ತದೆ. ಈ ವ್ಯವಸ್ಥೆ ದೇಶದಲ್ಲಿ ನ್ಯಾಯಸಮ್ಮತ ಮತ್ತು ಪಾರದರ್ಶಕ ಆಡಳಿತವನ್ನು ಸ್ಥಾಪಿಸಲು ಸಹಾಯಕವಾಗಿದೆ.

ಭಾರತದ ಸರ್ವೋಚ್ಚ ನ್ಯಾಯಾಲಯದ ರಚನೆ

ಭಾರತದ ನ್ಯಾಯಾಲಯಗಳು ಏಣಿಯೋಪಾದಿಯಲ್ಲಿ ರಚನೆಯಾಗಿವೆ. ಈ ಏಣಿಯೋಪಾದಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅತ್ಯುನ್ನತ ಹಂತದಲ್ಲಿದೆ. ನಂತರ ಉಚ್ಛ ನ್ಯಾಯಾಲಯ, ಅದರ ಕೆಳಗೆ ಅಧೀನದ ನ್ಯಾಯಾಲಯಗಳು ಬರುತ್ತವೆ. ಸುಪ್ರೀಂಕೋರ್ಟ್ ನೀಡುವ ತೀರ್ಪು ಅದರ ಕೆಳಗಿನ ಎಲ್ಲ ನ್ಯಾಯಾಲಯಗಳಿಗೆ ಸಂಬಂಧಿಸಿರುತ್ತದೆ. ೧೯೫೦ ಜನವರಿ ೨೮ ರಂದು ಸರ್ವೋಚ್ಚ ನ್ಯಾಯಾಲಯವು ಸ್ಥಾಪನೆಯಾಯಿತು. ʻʻಧರ್ಮವಿದ್ದಲ್ಲಿ ನ್ಯಾಯʼʼ ಎಂಬುದು ಸರ್ವೋಚ್ಚ ನ್ಯಾಯಾಲಯದ ದ್ಯೇಯ ವಾಕ್ಯವಾಗಿದೆ. ಭಾರತದ ಸಂವಿಧಾನದ ೫ನೇ ಭಾಗದ ೪ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಯವರೆಗೆ ಸರ್ವೋಚ್ಚ ನ್ಯಾಯಾಲಯದ ರಚನೆ ಹಾಗೂ ಅದರ ಅಧಿಕಾರ ವ್ಯಾಪ್ತಿಯನ್ನು ವಿವರಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ರಚನೆ: (Composition of Suprime Court)

 ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲ್ಪಂಕ್ತಿಯಲ್ಲಿರುವ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.

1. ಒಟ್ಟು ನ್ಯಾಯಾಧೀಶರ ಸಂಖ್ಯೆ: (Total Number of Judges)

1950 ಜನವರಿ 28ರಂದು ಸರ್ವೋಚ್ಚ ನ್ಯಾಯಾಲಯವು ತನ್ನ ಕಾರ್ಯವನ್ನು ಆರಂಭಿಸಿದಾಗ ಒಬ್ಬ ಮುಖ್ಯ ನ್ಯಾಯಾಧೀಶ ಹಾಗೂ ಏಳು ಮಂದಿ ನ್ಯಾಯಾಧೀಶರು ಹಾಜರಿದ್ದರು. ಸಂಸತ್ತು ಕಾಲಕ್ರಮೇಣ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿತು. 1956 ರಲ್ಲಿ 10, 1960ರಲ್ಲಿ 13, 1977ರಲ್ಲಿ 17, 1985ರಲ್ಲಿ 25, 2008ರಲ್ಲಿ 30, ಹಾಗೂ 2019ರಲ್ಲಿ 33ಕ್ಕೆ ಹೆಚ್ಚಿಸಿತು. ಪ್ರಸ್ತುತ ಈಗ ಸರ್ವೋಚ್ಚ ನ್ಯಾಯಾಲಯವು ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು 33 ನ್ಯಾಯಾಧೀಶರುಗಳನ್ನು ಒಳಗೊಂಡಿದೆ. ʻʻನವದೆಹಲಿ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಕಚೇರಿಯಾಗಿದೆ.ʼʼ

2. ನ್ಯಾಯಾಧೀಶರ ನೇಮಕ: (Appointment Of Judges)

ʻʻ ಸಂವಿಧಾನದ 124 (೧)  ವಿಧಿಯ ಅನ್ವಯ ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಯು ನೇಮಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಿಸುವಾಗ ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಅಲ್ಲಿನ ಹಿರಿಯ ವಕೀಲರು ಮತ್ತು ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ʻʻಕೊಲಿಜಿಯಂ ಸಲಹೆಯನ್ನು ಪಡೆಯಲಾಗುತ್ತದೆ. ಇದರಿಂದ ನ್ಯಾಯಾಧೀಶರ ನೇಮಕದಲ್ಲಿ ರಾಜಕೀಯ ಒತ್ತಡಗಳಿಗೆ ಹೆಚ್ಚು ಅವಕಾಶ ಇರುವುದಿಲ್ಲ. ಆದರೆ ನ್ಯಾಯಾಧೀಶರ ನೇಮಕದಲ್ಲಿ ರಾಷ್ಟ್ರಪತಿ ತಮ್ಮ ವಿವೇಚನೆಯನ್ನು ಉಪಯೋಗಿಸಬಹುದು.

3. ಅರ್ಹತೆಗಳು: (Qualification)

 ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದ 124 (೩)  ವಿಧಿಯ ಪ್ರಕಾರ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. a) ಭಾರತದ ಪ್ರಜೆಯಾಗಿರಬೇಕು.
  2. b) ಯಾವುದೇ ಉಚ್ಛ ನ್ಯಾಯಾಲಯದಲ್ಲಿ ಐದು ವರ್ಷ ನ್ಯಾಯಾಧೀಶನಾಗಿ ಅಥವಾ ಹತ್ತು ವರ್ಷ ನ್ಯಾಯವಾದಿಯಾಗಿ ಅನುಭವ ಪಡೆದಿರಬೇಕು.
  3. c) ರಾಷ್ಟ್ರಪತಿಯ ದೃಷ್ಟಿಯಲ್ಲಿ ಉತ್ತಮ ಕಾನೂನು ಪಂಡಿತನ ಆಗಿರಬೇಕು.

4. ನ್ಯಾಯಾಧೀಶರ ಪ್ರಮಾಣವಚನ: (Oath of Chief Justice)

ಸಂವಿಧಾನದ 124 (೬)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚವನ್ನು ಬೋಧಿಸುತ್ತಾರೆ.ʼʼ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಮುಖ್ಯ ನ್ಯಾಯಾಧೀಶರು ಭಾರತದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯಲು ಯಾವ ಭಯ ಅಥವಾ ಪಕ್ಷಪಾತವಿಲ್ಲದೆ ನ್ಯಾಯ ವಿತರಣೆ ಮಾಡುವ ಘೋಷಣೆಯನ್ನು ಮೂರನೇ ಅನುಸೂಚಿಯಲ್ಲಿ ತಿಳಿಸಿರುವಂತೆ ಪ್ರತಿಜ್ಞೆ ಮಾಡುತ್ತಾರೆ.

5. ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿ: (Term of Power of the Chief Justice)

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ಯಾವುದೇ ಕನಿಷ್ಠ ವಯೋಮಿತಿಯನ್ನಾಗಲಿ ಅಥವಾ ನಿರ್ದಿಷ್ಟ ಅಧಿಕಾರಾವಧಿಯನ್ನಾಗಲಿ ಸ್ಪಷ್ಟಪಡಿಸಿಲ್ಲ ಹೀಗಾಗಿ ನ್ಯಾಯಾಧೀಶರಾಗಿ ನೇಮಕಗೊಂಡ ವ್ಯಕ್ತಿ ತಾನು ನೇಮಕಗೊಂಡ ದಿನದಿಂದ 65 ವರ್ಷ ವಯಸ್ಸಾಗುವವರೆಗೆ ಅಧಿಕಾರಾವಧಿ ಹೊಂದಿರುತ್ತಾನೆ. ರಾಜೀನಾಮೆ ಮರಣ ಅಥವಾ ಪದಚ್ಯುತಿ ಕಾರಣಗಳಿಂದ 65 ವರ್ಷದೊಳಗೆ ನ್ಯಾಯಾಧೀಶರ ಅವಧಿಯಲ್ಲಿ ಕಡಿತಗೊಳ್ಳುವ ಸಾಧ್ಯತೆ ಇದೆ.

6. ವೇತನ ಮತ್ತು ಭತ್ಯೆಗಳು:  (Salary and Allowances)

ಸಂಸತ್ತು ಕಾಲ ಕಾಲಕ್ಕೆ ನಿಗದಿಪಡಿಸಿದ ಮಾಸಿಕ ವೇತನ ಹಾಗೂ ಇತರ ಸೌಲಭ್ಯಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ೨,80,000 ಹಾಗೂ ಇತರೆ ನ್ಯಾಯಾಧೀಶರು ಎರಡು ಲಕ್ಷದ ಐವತ್ತು ಸಾವಿರ ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ, ಉಚಿತ ವಿದ್ಯುತ್ ಹಾಗೂ ಅಂತರ್ಜಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಜೊತೆಗೆ ಮಾಸಿಕ 25000 ಸೇವಕರ ಭತ್ಯೆಯನ್ನು ನ್ಯಾಯಾಧೀಶರು ಪಡೆಯುತ್ತಾರೆ. ಮುಂದುವರೆದು ಅವರಿಗೆ ಎರಡು ವಾಹನ, ಪೊಲೀಸ್ ಭದ್ರತೆ, ವಾರ್ಷಿಕ 30 ಬಾರಿ ಉಚಿತ ವಿಮಾನ ಪ್ರಯಾಣ. ವೈದ್ಯಕೀಯ ವೆಚ್ಚ ಹಾಗೂ ನಿವೃತ್ತಿ ಸೌಲಭ್ಯಗಳನ್ನು ದೊರೆಯುತ್ತವೆ. ನ್ಯಾಯಾಧೀಶರು ಹಾಗೂ ಇತರೆ ಸಿಬ್ಬಂದಿಗಳ ವೇತನಗಳನ್ನು ʻʻಭಾರತದ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ.ʼʼ

7. ನ್ಯಾಯಾಧೀಶರ ಪದಚ್ಯುತಿ: (Impeachment of Chief Justice)

ಸಂವಿಧಾನದ 124ನೇ ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅಸಮರ್ಥತೆ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸಲು ಅವಕಾಶವಿದೆ. ನ್ಯಾಯಾಧೀಶರನ್ನು ವಾಗ್ದಂಡನೆಗೆ ಗುರಿಪಡಿಸುವ ನಿರ್ಣಯವನ್ನು ಕನಿಷ್ಟ ಪಕ್ಷ 100 ಲೋಕಸಭಾ ಸದಸ್ಯರು ಹಾಗೂ 50 ರಾಜ್ಯಸಭಾ ಸದಸ್ಯರು ಸಹಿ ಹಾಕಿ ರಾಷ್ಟ್ರಪತಿಗಳ ಮೂಲಕ ಎಂದು ನಮೂದಿಸಿ ನಿರ್ಣಯವನ್ನು ಲೋಕಸಭಾಪತಿ ಅಥವಾ ರಾಜ್ಯಸಭಾಪತಿಗೆ ನೀಡಬೇಕು. ನಂತರ ಇಬ್ಬರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಒಬ್ಬ ನ್ಯಾಯ ತಜ್ಞರನ್ನು ಒಳಗೊಂಡ ಸಮಿತಿಯು ನ್ಯಾಯಾಧೀಶರು ದೋಷಿ ಎಂದು ಪರಿಗಣಿಸಬೇಕು. ಹಾಗೂ ಯಾವ ಸದನದಲ್ಲಿ ಪದಚ್ಯುತಿ ನಿರ್ಣಯ ಉದ್ಭವವಾಗುತ್ತದೆಯೋ ಆ ಸದನದಲ್ಲಿ ಸಮಿತಿಯ ವರದಿ ಹಾಗೂ ಪದಚ್ಯುತಿ ನಿರ್ಣಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರಪತಿಯನ್ನು ಉದ್ದೇಶಿಸಿ ಉಭಯ ಸದನಗಳು ಒಟ್ಟು ಸದನದಲ್ಲಿ ಹಾಜರಿದ್ದು ಮತಚಲಾಯಿಸಿದ ಸದಸ್ಯರಲ್ಲಿ ೨/೩  ಬಹುಮತದಿಂದ ಮಂಡಿಸಿದಾಗ ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತರೆ ಮಾತ್ರ ಮುಖ್ಯ ನ್ಯಾಯಾಧೀಶರನ್ನು ಪದಚ್ಯುತಗೊಳಿಸಬಹುದು.

8. ನ್ಯಾಯಾಧೀಶರ ಸ್ವಾತಂತ್ರ್ಯ: (Independence of Judges)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ನ್ಯಾಯ ವಿತರಣೆ ಮಾಡಲು ಸಂವಿಧಾನದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ನ್ಯಾಯಾಧೀಶರು ನಿರ್ಭೀತಿಯಿಂದ ಯಾರ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ನ್ಯಾಯ ದಾನ ಮಾಡಲು ಸಂವಿಧಾನ ರಚನಕಾರರು ಈ ಕೆಳಗಿನ ಅಂಶಗಳನ್ನು ಅಳವಡಿಸಿದ್ದಾರೆ.

a) ನ್ಯಾಯಾಧೀಶರು ಕೊಟ್ಟ ತೀರ್ಪು, ಅವರ ಕೆಲಸ ಕಾರ್ಯಗಳು ಮುಂತಾದವುಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ. ಪೌರರಲ್ಲಿ ನ್ಯಾಯಾಲಯದ ಬಗ್ಗೆ ಅಗೌರವ ಅವಿಶ್ವಾಸಗಳನ್ನು ಹುಟ್ಟಿಸುವಂತೆ ಹಾಗೂ ನ್ಯಾಯಾಧೀಶರುಗಳಿಗೆ ಅಗೌರವ ತರುವಂತಹ ರೀತಿಯಲ್ಲಿ ಟೀಕೆಗಳನ್ನು ಮಾಡುವಂತಿಲ್ಲ.

b) ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುವಾಗ ಕಡ್ಡಾಯವಾಗಿ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ಮಾಡಬೇಕು. ಹೀಗಾದಾಗ ನೇಮಕಾತಿಗಳು ರಾಜಕೀಯ ಒತ್ತಡಕ್ಕೆ ಒಳಗಾಗುವುದಿಲ್ಲ ಇದು ನ್ಯಾಯಾಧೀಶರನ್ನು ಕಾರ್ಯಾಂಗದ ಮಧ್ಯಪ್ರವೇಶಿಸುವಿಕೆಯಿಂದ ತಡೆಗಟ್ಟುತ್ತದೆ

c) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮನಬಂದಂತೆ ಪದಚ್ಯುತಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದಿಲ್ಲ. ಉಭಯ ಸದನಗಳು ೨/೩ ಬಹುಮತದಿಂದ ನಿರ್ಣಯವನ್ನು ಪಾಸು ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿದರೆ ಮಾತ್ರ ರಾಷ್ಟ್ರಪತಿಗಳು ನ್ಯಾಯಾಧೀಶರನ್ನು ಪದಚ್ಯುತಗೊಳಿಸುತ್ತಾರೆ. ಇದರಿಂದ ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

d) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಕಾರ್ಯಾಂಗದ ಸಲಹೆ ಮೇರೆಗೆ ನೇಮಕಾತಿ ಮಾಡುತ್ತಾರೆ. ಹೀಗಾಗಿ ನ್ಯಾಯಾಧೀಶರು ರಾಷ್ಟ್ರಪತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುವುದಿಲ್ಲ ಅವರು ತಮ್ಮ ಉತ್ತಮವಾದ ನಡತೆಯಿಂದ ಕಾರ್ಯನಿರ್ವಹಿಸುತ್ತಾರೆ. ನ್ಯಾಯಾಧೀಶರ ಅಸಭ್ಯ ವರ್ತನೆ ಹಾಗೂ ಅಸಮರ್ಥತೆಯ ಕಾರಣದಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಆದರೂ ಶಾಸಕಾಂಗದ ೨/೩ ಬಹುಮತದ ಆಧಾರದ ಮೇಲೆ ರಾಷ್ಟ್ರಪತಿಯವರನ್ನು ಉದ್ದೇಶಿಸಿ ನಿರ್ಣಯ ಮಂಡಿಸಬೇಕು.

e) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಸಂಸತ್ತು ಕಾಲ ಕಾಲಕ್ಕೆ ಪರಿಷ್ಕರಿಸಿ ನೀಡುತ್ತದೆ. ಆದರೆ ವೇತನವನ್ನು ಕಡಿತಗೊಳಿಸಿ ನೀಡುವ ಅಧಿಕಾರ ಸಂಸತ್ತಿಗೆ ಇಲ್ಲ. 360 ನೇ ವಿಧಿಯ ಪ್ರಕಾರ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೆ ಮಾತ್ರ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಕಡಿತಗೊಳಿಸಬಹುದು ವಿಧಿ 125 (3).

f)ಸಂವಿಧಾನದ 146 (3)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಆಡಳಿತಾತ್ಮಕ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

g) ಸಂವಿಧಾನದ 121 ನೇ ವಿಧಿಯ ಪ್ರಕಾರ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಸಂದರ್ಭವನ್ನು ಹೊರತುಪಡಿಸಿ ನ್ಯಾಯಾಧೀಶರ ನಡುವಳಿಕೆಯ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ.

h) ಸಂವಿಧಾನದ 124 (೭) ವಿಧಿಯಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತಿಯ ನಂತರ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಮಾಡುವಂತಿಲ್ಲ. ಇದು ನ್ಯಾಯಾಧೀಶರು ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದಂತೆ ತಡೆಯುತ್ತದೆ.

ಉಪಸಂಹಾರ

ಒಟ್ಟಾರೆ, ಸರ್ವೋಚ್ಚ ನ್ಯಾಯಾಲಯವು ಭಾರತದ ಸಂವಿಧಾನದ ಆತ್ಮವನ್ನು ಉಳಿಸಿ ಕಾಯುವ ಮಹತ್ವದ ಸಂಸ್ಥೆಯಾಗಿದೆ. ನ್ಯಾಯಾಧೀಶರ ಸ್ವಾತಂತ್ರ್ಯ, ಭದ್ರತೆ ಮತ್ತು ನಿಯಮಿತ ನೇಮಕಾತಿ ವಿಧಾನಗಳು ನ್ಯಾಯಾಂಗದ ಗೌರವವನ್ನು ಹೆಚ್ಚಿಸುತ್ತವೆ. ಮಹಾಭಿಯೋಗದಂತಹ ಕಠಿಣ ವಿಧಾನವು ನ್ಯಾಯಾಂಗದ ಪಾವಿತ್ರ್ಯವನ್ನು ಕಾಯ್ದುಕೊಳ್ಳುತ್ತದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯವು ದೇಶದ ನ್ಯಾಯ ಮತ್ತು ಸಮಾನತೆಯ ಮೂಲಸ್ತಂಭವಾಗಿದೆ.

ಮಂತ್ರಿಮಂಡಲದ ಕಾರ್ಯಗಳು

ಮಂತ್ರಿಮಂಡಲದ ಕಾರ್ಯಗಳು

ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ಮಂತ್ರಿಮಂಡಲವು ಕಾರ್ಯಾಂಗದ ಹೃದಯವಾಗಿದೆ. ಇದು ವಿಧಾನಸಭೆಯೊಂದಿಗೆ ಸಮನ್ವಯ ಸಾಧಿಸಿ ಶಾಸನಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತದೆ. ರಾಜ್ಯದ ಹಣಕಾಸು ವ್ಯವಸ್ಥೆ, ನೇಮಕಾತಿ ಪ್ರಕ್ರಿಯೆಗಳು ಮತ್ತು ವಿವಿಧ ಇಲಾಖೆಗಳ ಮೇಲ್ವಿಚಾರಣೆಯ ಮೂಲಕ ಸುಸೂತ್ರ ಆಡಳಿತವನ್ನು ಒದಗಿಸುತ್ತದೆ.

 ರಾಜ್ಯ ಮಂತ್ರಿ ಮಂಡಲದ ಕಾರ್ಯಗಳು ಈ ಕೆಳಗಿನಂತಿವೆ;

1. ಶಾಸನೀಯ ಕಾರ್ಯಗಳು: (Legislative Powers)

ವಿಧಾನಸಭೆಯಲ್ಲಿ ಮಸೂದೆಗಳನ್ನು ಮಂಡಿಸುವ, ವಿವರಿಸುವ ಹಾಗೂ ಸಮರ್ಥಿಸುವ ಕಾರ್ಯವನ್ನು ಮಂತ್ರಿ ಮಂಡಲದ ಮಂತ್ರಿಗಳು ಮಾಡಬೇಕಾಗುತ್ತದೆ. ವಿಧಾನಸಭೆಯ ಅಧಿವೇಶನದ ಕಾಲಾವಧಿ ಮತ್ತು ಕಲಾಪಗಳನ್ನು ಕ್ಯಾಬಿನೆಟ್ ನಿರ್ಧರಿಸುತ್ತದೆ. ಹೀಗಾಗಿ ಮಂತ್ರಿ ಮಂಡಲ ಕಾರ್ಯಾಂಗದ ಭಾಗವಾಗಿದ್ದರೂ ಶಾಸನಾತ್ಮಕ ಕಾರ್ಯಗಳನ್ನು ಸಹ ನಿರ್ವಹಿಸಬೇಕು.

2. ನೀತಿ ನಿರೂಪಣಾ ಕಾರ್ಯಗಳು:

 ರಾಜ್ಯದ ಆಂತರಿಕ ಭದ್ರತೆ ಮತ್ತು ಅಂತರಾಜ್ಯ ನೀತಿಗಳನ್ನು ನಿರ್ಧರಿಸುವ ಕಾರ್ಯವನ್ನು ರಾಜ್ಯ ಮಂತ್ರಿ ಮಂಡಲ ಮಾಡುತ್ತದೆ. ಜೊತೆಗೆ ಜನರ ಜೀವನವನ್ನು ನಿರೂಪಿಸುವ ಶಿಕ್ಷಣ, ಅರಣ್ಯ, ಕೈಗಾರಿಕೆ ಹಾಗೂ ಸಾರಿಗೆ ಮುಂತಾದ ರಂಗಗಳ ನೀತಿಗಳನ್ನು ನಿರ್ಧರಿಸುತ್ತದೆ. ಇದರ ಜೊತೆಗೆ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ.

3. ಕಾರ್ಯಾಂಗ ನಿಯಂತ್ರಣ ಕಾರ್ಯಗಳು:

ರಾಜ್ಯಪಾಲರು ಕಾರ್ಯಾಂಗದ ಅಧಿಕಾರಗಳನ್ನು ಚಲಾಯಿಸುವ ಮಂತ್ರಿ ಮಂಡಲ ರಾಜ್ಯಪಾಲರಿಗೆ ಸಹಾಯ ಸಹಕಾರ ನೀಡುತ್ತದೆ. ಕಾರ್ಯಾಂಗದ ಪ್ರತಿಯೊಬ್ಬ ಸಚಿವ ಸಹ ತನ್ನ ಖಾತೆಯ ಮೇಲೆ ನಿಯಂತ್ರಣಾಧಿಕಾರವನ್ನು ಹೊಂದಿರುತ್ತಾನೆ.

4. ನೇಮಕಾತಿ ಕಾರ್ಯಗಳು: (Appointment Powers)

ನ್ಯಾಯವಾದಿ, ಲೆಕ್ಕ ಪರಿಶೋಧಕರು ಮುಂತಾದ ನೇಮಕಾತಿ ಸಂದರ್ಭಗಳಲ್ಲಿ ಮಂತ್ರಿಮಂಡಲವು ರಾಜ್ಯಪಾಲರಿಗೆ ಸಹಕಾರ ನೀಡುತ್ತದೆ. ಹಾಗೆಯೇ ರಾಜ್ಯ ಲೋಕಸೇವಾ ಆಯೋಗ ಮತ್ತು ಹಣಕಾಸು ಆಯೋಗಗಳ ನೇಮಕಾತಿಯಲ್ಲಿಯೂ ಸಚಿವ ಸಂಪುಟ ಭಾಗಿಯಾಗುತ್ತದೆ.

5. ಹಣಕಾಸಿನ ಕಾರ್ಯಗಳು: (Finanacial Powers) 

ರಾಜ್ಯ ಹಣಕಾಸಿನ ಮೇಲೆ ಮಂತ್ರಿಮಂಡಲದ ನಿಯಂತ್ರಣವನ್ನು ಹೊಂದಿದೆ. ಪ್ರತಿಯೊಬ್ಬ ಸಚಿವನು ತನ್ನ ಖಾತೆಗೆ ನಿಗದಿಪಡಿಸಲಾದ ಮೊತ್ತಕ್ಕೆ ವಿಧಾನಸಭೆಯಿಂದ ಅಂಗೀಕಾರ ಪಡೆದುಕೊಳ್ಳುತ್ತಾನೆ.

ಉಪಸಂಹಾರ

ಒಟ್ಟಾರೆ, ರಾಜ್ಯ ಮಂತ್ರಿಮಂಡಲವು ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ಶಾಸನೀಯ, ಕಾರ್ಯಾಂಗ, ಹಣಕಾಸು ಹಾಗೂ ನೇಮಕಾತಿ ಕಾರ್ಯಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ದಿಕ್ಕು ನೀಡುತ್ತದೆ. ಜನಪರ ನೀತಿಗಳನ್ನು ರೂಪಿಸಿ ಜಾರಿಗೆ ತರುವ ಮೂಲಕ ಜನರ ಕಲ್ಯಾಣವನ್ನು ಸಾಧಿಸುವುದು ಮಂತ್ರಿಮಂಡಲದ ಮುಖ್ಯ ಉದ್ದೇಶವಾಗಿದೆ.