ಜೀವ ವೈವಿಧ್ಯತೆಯ ಪ್ರಕಾರಗಳು

ಜೀವ ವೈವಿಧ್ಯತೆಯ ಪ್ರಕಾರಗಳು

ಭೂಮಿಯ ಮೇಲೆ ವಾಸಿಸುವ ಸಸ್ಯ, ಪ್ರಾಣಿ ಮತ್ತು ಸೂಕ್ಷ್ಮಜೀವಿಗಳಲ್ಲಿರುವ ವೈವಿಧ್ಯತೆಯನ್ನು ಜೀವವೈವಿಧ್ಯತೆ ಎಂದು ಕರೆಯಲಾಗುತ್ತದೆ. ಈ ವೈವಿಧ್ಯತೆ ಜೀವಿಗಳ ಉಳಿವು ಮತ್ತು ವಿಕಾಸಕ್ಕೆ ಸಹಕಾರಿಯಾಗಿದೆ. ಜೀವವೈವಿಧ್ಯತೆಯ ಪ್ರಕಾರಗಳು ಈ ಕೆಳಗಿನಂತಿವೆ,

  1. ಅನುವಂಶಿಯ ವೈವಿಧ್ಯತೆ
  2. ಜೀವ ಪ್ರಭೇದ ವೈವಿಧ್ಯತೆ
  3. ಪರಿಸರ ವ್ಯವಸ್ಥೆಯ ವೈವಿಧ್ಯತೆ

1. ಅನುವಂಶೀಯ ವೈವಿಧ್ಯತೆ: (Genetic diversity)

 ʻʻಜೀವ ಪ್ರಭೇದಗಳ ನಡುವಿನ ಅನುವಂಶೀಯ ವ್ಯತ್ಯಾಸವನ್ನು ಜೀವವೈವಿಧ್ಯತೆ ಎಂದು ಕರೆಯುವರು.ʼʼ ಭೂಮಿಯ ಮೇಲೆ ಜನಿಸಿದ ಒಂದೇ ಪ್ರಭೇದದ ಜೀವಿಗಳಲ್ಲಿ ವಂಶವಾಹಿನಿಯ ಗುಣಗಳು ಭಿನ್ನವಾಗಿ ಕಂಡುಬರುತ್ತವೆ. ಉದಾ:-  ಭತ್ತದ ತಳಿಗಳಲ್ಲಿ ಸುಮಾರು 5000 ಪ್ರಕಾರಗಳಿವೆ ಎಂದು ಹೇಳಲಾಗುತ್ತದೆ. ಮೂಲತಃ ಮಾನವನು ಹೋಮೋ ಸೇಪಿಯನ್‌ ಪ್ರಭೇದಕ್ಕೆ ಸೇರಿದವನಾಗಿದ್ದರೂ ಇದರಲ್ಲಿಯೇ ಸಾವಿರಾರು ತಳಿಗಳನ್ನು ಗುರುತಿಸಬಹುದಾಗಿದೆ. ಹೀಗಾಗಿ ಅವರ ಮೈಬಣ್ಣ, ಎತ್ತರ, ತೂಕ, ಗಾತ್ರ, ಕಣ್ಣಿನ ಬಣ್ಣ ಹಾಗೂ ಮೆದುಳಿನ ತೂಕದಲ್ಲಿ ಭಿನ್ನತೆಯನ್ನು ಕಾಣಬಹುದಾಗಿದೆ. ಈ ರೀತಿಯ ಭಿನ್ನತೆಯು ಅನುವಂಶಿಯ ವೈವಿಧ್ಯತೆಯನ್ನು ವ್ಯಕ್ತಪಡಿಸುತ್ತದೆ. ಪರಿಸರದ ಲಕ್ಷಣಗಳು ಬದಲಾವಣೆಗೊಂಡಂತೆ ಜೀವಿಗಳ ವಂಶ ವಾಹಿನಿಗಳಲ್ಲಿ ಹೊಂದಾಣಿಕೆಯ ಮೂಲಕ ಬದಲಾವಣೆಗಳು ಕಂಡುಬರುತ್ತವೆ. ಒಂದೇ ರೀತಿಯ ಪ್ರಾಣಿ ಪಕ್ಷಿಗಳಲ್ಲಿಯೂ ಈ ಭಿನ್ನತೆಯನ್ನು ನಾವು ಕಾಣಬಹುದಾಗಿದೆ. ಈ ಬದಲಾವಣೆಯನ್ನು ಪ್ರಭೇದ ನಿರ್ಮಾಣ ಕ್ರಿಯೆ ಎಂದು ಕರೆಯಲಾಗಿದೆ. ಜೀವಿಗಳ ಈ ವೈವಿಧ್ಯತೆಯು ವಂಶಾಭಿವೃದ್ಧಿಗೆ ಕಾರಣವಾಗುತ್ತದೆ. ಒಂದು ವೇಳೆ ವಂಶಾಭಿವೃದ್ಧಿ ಕಡಿಮೆಯಾದರೆ ಜೀವಿಗಳು ನಶಿಸಿ ಹೋಗುತ್ತವೆ.

2. ಜೀವ ಪ್ರಭೇದದ ವೈವಿಧ್ಯತೆ: (Species diversity)

ʻʻಒಂದೇ ಭೂಭಾಗದಲ್ಲಿ ಬೇರೆ ಬೇರೆ ತಳಿಯ ಜೀವಿ ಪ್ರಭೇದಗಳು ವಾಸಿಸುತ್ತಿದ್ದರೆ ಅವುಗಳನ್ನು ಜೀವ ಪ್ರಭೇದದ ವೈವಿಧ್ಯತೆ ಎಂದು ಕರೆಯುವರು.ʼʼ ಒಂದೇ ಭೂ ಭಾಗದಲ್ಲಿ ವಾಸಿಸುವ ಜೀವಿಗಳಲ್ಲಿ ಹಲವಾರು ರೀತಿಯ ಭಿನ್ನತೆಗಳು ಕಂಡುಬರುತ್ತದೆ. ಉದಾ ಸೂಕ್ಷ್ಮಾಣು ಜೀವಿ ವೈವಿಧ್ಯತೆ ಸಸ್ಯ ವೈವಿಧ್ಯತೆ ಹಾಗೂ ಪ್ರಾಣಿ ವೈವಿಧ್ಯತೆ. ಒಂದು ಭಾಗದಲ್ಲಿ ವಾಸಿಸುವ ಜೀವಿಗಳ ಸಂಖ್ಯಾ ಪ್ರಮಾಣ ಹೇಗೆ ಸಮನಾಗಿ ಕಂಡು ಬರುವುದಿಲ್ಲವೋ ಹಾಗೆಯೇ ಅವುಗಳ ಸಂಖ್ಯೆ ಹೆಚ್ಚು ಕಡಿಮೆಯಾಗಿರುತ್ತದೆ. ಜೀವ ಪ್ರಭೇದದ ವಿವಿಧ ರೂಪಗಳನ್ನು ಎರಡು ಭಾಗಗಳಾಗಿ ಗುರುತಿಸಬಹುದು. ಅವುಗಳೆಂದರೆ.

  1. ಜೀವ ಪ್ರಭೇದ ಶ್ರೀಮಂತಿಕೆ 2.  ಜೀವ ಪ್ರಭೇದದ ಸಮತಲ ಹಂಚಿಕೆ.

1. ಜೀವ ಪ್ರಭೇದದ ಶ್ರೀಮಂತಿಕೆ: (Species richness)

  1. ಅಲ್ಫಾ ವೈವಿಧ್ಯತೆ:(Alpha diversity) ಒಂದು ಗೊತ್ತಾದ ಪ್ರದೇಶದಲ್ಲಿ ಕಂಡುಬರುವ ಜೀವಿ ಪ್ರಭೇದಗಳ ಒಟ್ಟು ಸಂಖ್ಯೆಯನ್ನು ಆಲ್ಫಾ ವೈವಿಧ್ಯತೆ ಎಂದು ಕರೆಯುವರು. ಇಲ್ಲಿ ವಾಸಿಸುವ ಜೀವಿಗಳು ನಿರ್ದಿಷ್ಟ ಸಮುದಾಯಕ್ಕೆ ಸೇರಿದವುಗಳಾಗಿರುತ್ತವೆ. ಇಲ್ಲಿನ ಶ್ರೀಮಂತ ಜೀವಿ ಸಮುದಾಯಗಳ ಹಂಚಿಕೆ ಸರಿಸಮಾನವಾಗಿರುತ್ತದೆ.
  2. ಬೀಟಾ ವೈವಿಧ್ಯತೆ: (Beta diversity) ಎರಡು ನೆಲೆಗಳಲ್ಲಿಯೂ ಸಾಮಾನ್ಯವಾಗಿ ಕಂಡುಬರುವ ಜೀವ ವೈವಿಧ್ಯಗಳನ್ನು ಬೀಟಾ ವೈವಿಧ್ಯತೆ ಎಂದು ಕರೆಯುವರು.
  3. ಗಾಮಾ ವೈವಿಧ್ಯತೆ: (Gamma diversity) ಒಂದು ಗೊತ್ತಾದ ಪ್ರದೇಶದಲ್ಲಿ ವಿವಿಧ ರೀತಿಯ ಜೀವ ವೈವಿಧ್ಯಗಳು ಕಂಡುಬಂದರೆ ಅದನ್ನು ಗಾಮ ವೈವಿಧ್ಯತೆ ಎಂದು ಕರೆಯಬಹುದಾಗಿದೆ.

2. ಜೀವ ಪ್ರಭೇದದ ಸಮತಲ ಹಂಚಿಕೆ: (Species eveness)

 ಒಂದು ಪ್ರದೇಶದಲ್ಲಿ ಹಲವಾರು ಜಾತಿಯ ಪ್ರಭೇದಗಳು ವಾಸಿಸುತ್ತವೆ. ಅವುಗಳ ಸಂಖ್ಯೆಯಲ್ಲಿ ಏರುಪೇರು ಆಗಿರುವುದು ಸಹಜವಾದ ಕ್ರಿಯೆ. ಒಂದು ವೇಳೆ ಜೀವಿಗಳ ಸಂಖ್ಯೆಯಲ್ಲಿ ಸಮನಾಗಿದ್ದರೆ ಅದನ್ನು ಸಮತಲ ಹಂಚಿಕೆ ಎಂದು ಕರೆಯಲಾಗುವುದು. ಒಂದು ವೇಳೆ ಸಂಖ್ಯೆಯಲ್ಲಿ ಅಸಮಾನತೆ ಕಂಡು ಬಂದರೆ ಅದನ್ನು ಅಸಮತಲ ಹಂಚಿಕೆ ಎಂದು ಹೇಳಬಹುದು.

ಉಪಸಂಹಾರ

ಜೀವವೈವಿಧ್ಯತೆ ಭೂಮಿಯ ಜೀವಸಂಪತ್ತಿನ ಮೂಲಾಧಾರವಾಗಿದ್ದು, ಅದು ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಅನುವಂಶೀಯ, ಜೀವ ಪ್ರಭೇದ ಹಾಗೂ ಪರಿಸರ ವ್ಯವಸ್ಥೆಯ ವೈವಿಧ್ಯತೆಗಳು ಪರಸ್ಪರ ಅವಿಭಾಜ್ಯವಾಗಿ ಸಂಬಂಧಿಸಿದ್ದಾಗಿವೆ. ಈ ವೈವಿಧ್ಯತೆಯು ಜೀವಿಗಳ ಹೊಂದಾಣಿಕೆ, ವಂಶಾಭಿವೃದ್ಧಿ ಮತ್ತು ಉಳಿವಿಗೆ ಸಹಕಾರಿಯಾಗುತ್ತದೆ. ಜೀವವೈವಿಧ್ಯತೆ ಕುಗ್ಗಿದರೆ ಪರಿಸರ ಅಸ್ಥಿರತೆ ಉಂಟಾಗುತ್ತದೆ. ಆದ್ದರಿಂದ ಜೀವವೈವಿಧ್ಯತೆಯ ಸಂರಕ್ಷಣೆ ಮಾನವನ ಪ್ರಮುಖ ಜವಾಬ್ದಾರಿಯಾಗಿದೆ.

ವನ್ಯಜೀವಿ ಸಂರಕ್ಷಣಾ ಯೋಜನೆಗಳು

ವನ್ಯಜೀವಿ ಸಂರಕ್ಷಣಾ ಯೋಜನೆಗಳು

ವನ್ಯಜೀವಿ ಸಂರಕ್ಷಣಾ ಯೋಜನೆಗಳು

ಜೀವ ಪ್ರಭೇದಗಳ ರಕ್ಷಣೆಗಾಗಿ ಭಾರತ ಸರ್ಕಾರವು ಈ ಕೆಳಗಿನ ಯೋಜನೆಗಳನ್ನು ಹಮ್ಮಿಕೊಂಡಿದೆ.

1. ಹುಲಿ ಯೋಜನೆ: (Tiger Project)

ರಾಷ್ಟ್ರೀಯ ಪ್ರಾಣಿ ಎಂದು ಹೆಸರಾದ ಹುಲಿಯು ಇಂದು ಅಳಿವಿನ ಅಂಚಿನಲ್ಲಿದೆ. ಭಾರತವು 1900ರಲ್ಲಿ ಸುಮಾರು 40000 ಹುಲಿಗಳನ್ನು ಹೊಂದಿತ್ತು. ಆದರೆ ಇವುಗಳ ಸಂಖ್ಯೆ 1970ರಲ್ಲಿ 1800 ಕ್ಕೆ ಇಳಿಯಿತು. ಇದರಿಂದ ಆತಂಕಗೊಂಡ ಭಾರತ ಸರ್ಕಾರ ಭಾರತೀಯ ವನ್ಯಜೀವಿ ಮಂಡಳಿಯ ನೇತೃತ್ವದಲ್ಲಿ ಹುಲಿಗಳ ಸಂರಕ್ಷಣೆಗೆಂದು 1970ರಲ್ಲಿ ಒಂದು ವಿಶೇಷ ಕಾರ್ಯವನ್ನು ಸಂಘಟಿಸಿತು. ಇದರ ಪರಿಣಾಮವಾಗಿ 1973 ಏಪ್ರಿಲ್ 1 ರಂದು ʻʻಭಾರತ ಸರ್ಕಾರದ ಹುಲಿ ಯೋಜನೆಯನ್ನು ಜಾರಿಗೆ ತಂದಿತು.ʼʼ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಸ್ಥಾಪನೆ:

ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ 2006ರ ಪ್ರಕಾರ ವನ್ಯಜೀವಿ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಲಾಗಿದೆ. ಈ ಪ್ರಾಧಿಕಾರವು ಈ ಕೆಳಗಿನ ಕಾರ್ಯಗಳನ್ನು ಹಮ್ಮಿಕೊಂಡಿದೆ.

  1. a) ರಾಜ್ಯ ಸರ್ಕಾರ ತಯಾರಿಸಿದ ಹುಲಿ ಸಂರಕ್ಷಣಾ ಯೋಜನೆಗಳಿಗೆ ಅನುಮೋದನೆಯನ್ನು ನೀಡುವುದು.
  2. b) ಹುಲಿ ಮೀಸಲು ಪ್ರದೇಶಗಳಲ್ಲಿ ಗಣಿಗಾರಿಕೆ, ಕೈಗಾರಿಕೆ ಹಾಗೂ ವಿವಿಧ ಯೋಜನೆಗಳನ್ನು ಮಾಡಿದಂತೆ ತಡೆ ನೀಡುವುದು.
  3. c) ಹುಲಿಗಳ ರಕ್ಷಣೆಗಾಗಿ ಕಾಲಕಾಲಕ್ಕೆ ಯೋಜನೆಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡುವುದು.
  4. d) ಸಂರಕ್ಷಣೆಯ ಕ್ರಮಗಳ ಕುರಿತು ಪ್ರಾಧಿಕಾರವು ಸರ್ಕಾರಕ್ಕೆ ಆಗಾಗ ಮಾಹಿತಿ ನೀಡುವುದು.

2) ಆನೆ ಯೋಜನೆ: (Elephant Project)

1992 ರಲ್ಲಿ ಆನೆಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ಮೂಲ ಉದ್ದೇಶಗಳು ಈ ಕೆಳಗಿನಂತಿವೆ.

  1. ಆನೆಗಳ ಆವಾಸಸ್ಥಾನಗಳನ್ನು ರಕ್ಷಿಸುವುದು ಮತ್ತು ಪೋಷಿಸುವುದು.
  2. ಮಾನವ-ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವುದು.
  3. ಸೆರೆಸಿಕ್ಕ ಆನೆಗಳನ್ನು ಸೂಕ್ತ ರೀತಿಯಲ್ಲಿ ಪೋಷಿಸಿ ಬೆಳೆಸುವುದು.
  4. ಈ ಯೋಜನೆಯು ಭಾರತದ 16 ರಾಜ್ಯಗಳಲ್ಲಿ ಜಾರಿಯಲ್ಲಿದೆ.
  5. ಅಧಿಕ ಪ್ರಮಾಣದ ಆನೆ ಸಂತತಿಗಳನ್ನು ಹೊಂದಿದ ರಾಜ್ಯಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ನೆರವನ್ನು ನೀಡುವುದು.

ಭಾರತದಲ್ಲಿ ಇಂದು ಆನೆ ಸುರಕ್ಷಿತಾ ವಲಯಗಳನ್ನು ಸ್ಥಾಪಿಸಲಾಗಿದ್ದು ಈಗ ಒಟ್ಟು 33 ಆನೆ ಸುರಕ್ಷಿತ ವಲಯಗಳಿವೆ. ಪ್ರಸ್ತುತ ಆನೆಗಳ ಸಂಖ್ಯೆ 23,000 ದಿಂದ 41,000 ಕ್ಕೆ ಏರಿಕೆಯಾಗಿದೆ. ಕರ್ನಾಟಕ ಒಂದರಲ್ಲಿ ಒಟ್ಟು 30000ಕ್ಕೂ ಹೆಚ್ಚು ಆನೆಗಳಿವೆ.

3. ರಣಹದ್ದು ಯೋಜನೆ : (Vultura Project)

2006 ರ ಮೇ ತಿಂಗಳಲ್ಲಿ ಭಾರತ ಸರ್ಕಾರವು ರಣಹದ್ದು ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಪ್ರಕಾರ ಮಹಾರಾಷ್ಟ್ರ ಹಾಗೂ ಹರಿಯಾಣಾ ಅರಣ್ಯ ಇಲಾಖೆಗಳು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇವುಗಳು ರಣಹದ್ದು ಉಪಹಾರಗೃಹಗಳನ್ನು  ಆರಂಭಿಸಿವೆ.

  1. ತೀವ್ರವಾಗಿ ಇಳಿಕೆ ಕಾಣುತ್ತಿರುವ ರಣಹದ್ದುಗಳ ಸಂಖ್ಯೆಗಳನ್ನು ಹೆಚ್ಚಿಸುವುದು.
  2. ರಣಹದ್ದು ಉಪಹಾರ ಗೃಹಗಳ ಮೂಲಕ ಡೈಕ್ಲೋಪಿನಾಕ್‌ ಮುಕ್ತ ಸತ್ತ ಜಾನುವಾರುಗಳನ್ನು ರಣಹದ್ದುಗಳಿಗೆ ಆಹಾರವಾಗಿ ನೀಡಲಾಗುವುದು.
  3. ಈ ಉಪಹಾರ ಗೃಹಗಳೊಂದಿಗೆ ಸ್ಥಳೀಯ ಸಾರ್ವಜನಿಕರು ಕೈಜೋಡಿಸಿ ಸ್ವಸ್ಥಾನಗಳಲ್ಲಿ ರಣಹದ್ದುಗಳನ್ನು ರಕ್ಷಿಸುವುದು.
  4. ಗ್ರಾಮಗಳಲ್ಲಿ ಯಾವುದೇ ಪ್ರಾಣಿ ಸತ್ತು ಹೋದರೆ ಗ್ರಾಮೀಣ ಜನರು ಇಲಾಖೆಗೆ ಮಾಹಿತಿ ನೀಡುತ್ತಾರೆ. ಅರಣ್ಯ ಇಲಾಖೆ ಇದನ್ನು ಪರೀಕ್ಷಿಸಿ, ಡೈಕ್ಲೋಪಿನಾಕ್‌ ಮುಕ್ತವಾಗಿದ್ದರೆ ಅದನ್ನು ರಣಹದ್ದು ಗೃಹಗಳಿಗೆ ಸಾಗಿಸುತ್ತಾರೆ ನಂತರ ಸತ್ತ ದನಗಳ ಮಾಲೀಕರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತದೆ.
  5. ರಣಹದ್ದು ಗೂಡುಗಳು ಕಂಡು ಬಂದಾಗ ಅಲ್ಲಿ ಆಹಾರದ ವ್ಯವಸ್ಥೆ ಮಾಡುವುದು.

4. ಸಮುದ್ರ ಆಮೆಗಳ ಯೋಜನೆ: (Sea Turtle Project)

ಪ್ರತಿ ವರ್ಷ ಚಳಿಗಾಲ ಬಂದಿತೆಂದರೆ ಭಾರತದ ಪೂರ್ವ ಕರಾವಳಿಯಲ್ಲಿ ಆಮೆಗಳು ಗೂಡು ಕಟ್ಟಲು ಸಮುದ್ರದಿಂದ ದಡಕ್ಕೆ ಬರುತ್ತವೆ. ಇವುಗಳಲ್ಲಿ ಪ್ರಮುಖವಾದ ಆಮೆಗಳೆಂದರೆ ʻʻಆಲಿವ್‌ ರಿಡ್ಲೆ ಆಮೆʼʼ 1999 ನವೆಂಬರ್ ತಿಂಗಳಲ್ಲಿ ಪರಿಸರ ಹಾಗೂ ಅರಣ್ಯ ಸಚಿವಾಲಯವು ಅಳಿವಿನ ಅಂಚಿನಲ್ಲಿರುವ ಆಮೆಗಳನ್ನು ರಕ್ಷಿಸಲು ಸಮುದ್ರ ಆಮೆಗಳ ಸಂರಕ್ಷಣಾ ಯೋಜನೆಯನ್ನು  ಜಾರಿಗೆ ತಂದಿತು.

ಕಾರ್ಯಗಳು: 

ಒರಿಸ್ಸಾ ರಾಜ್ಯದ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಮಾಜಗಳು ಸ್ಥಳೀಯ ಎನ್ ಜಿ ಒ ಸಹಯೋಗದೊಂದಿಗೆ ಈ ಕೆಳಗಿನ ರಕ್ಷಣಾ ಕಾರ್ಯಗಳನ್ನು ಹಮ್ಮಿಕೊಂಡಿದೆ.

  1. ಸಮುದ್ರದಲ್ಲಿ ಗಸ್ತು ತಿರುಗುವವರೆಗೆ ಸೂಕ್ತವಾದ ದೋಣಿಗಳ ಸಹಾಯವನ್ನು ಒದಗಿಸುವುದು.
  2. ಆಮೆಗಳ ಚಲನವಲನಗಳನ್ನು ಗುರುತಿಸಲು ಕ್ಷೇತ್ರ ಶಿಬಿರಗಳನ್ನು ಹಮ್ಮಿಕೊಳ್ಳುವುದು.
  3. ಸಾಗರದ ಆಮೆಗಳ ಸಾವಿನ ಸಂಖ್ಯೆಯನ್ನು ಲೆಕ್ಕ ಹಾಕುವುದು.
  4. ಅಕ್ರಮ ಮೀನುಗಾರಿಕೆಯನ್ನು ತಡೆಗಟ್ಟುವುದು.

5. ಹಂಗೂಲ್ ಯೋಜನೆ: (Hangul Project)

ಇದನ್ನು ಕಾಶ್ಮೀರ ಕಡವೆ ಎಂದು ಕರೆಯಲಾಗಿದೆ. ಯುರೋಪಿನಲ್ಲಿ ಕಂಡುಬರುವ ಹಿಮಸಾರಂಗ ಜಾತಿಗೆ ಸೇರಿದ ಒಂದು ಜಿಂಕೆ ಪ್ರಭೇದವಾಗಿದೆ. ಇವು ದಟ್ಟವಾದ ನದಿ ಕಾಡುಗಳು, ಎತ್ತರ ಕಣಿವೆಗಳು, ಕಾಶ್ಮೀರ ಕಣಿವೆಯ ಪರ್ವತಗಳು, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರದ ದಚಿಗಾಮ್‌ ರಾಷ್ಟ್ರೀಯ ಉದ್ಯಾನವನದಲ್ಲಿ ಕಂಡುಬಂದಿವೆ. 20ನೇ ಶತಮಾನದ ಹೊತ್ತಿನಲ್ಲಿ 5000 ಇದ್ದ ಈ ಜಿಂಕೆಗಳ ಸಂತತಿ ಆವಾಸಸ್ಥಾನಗಳ ನಾಶ, ಸಾಕುಪ್ರಾಣಿಗಳ ಮೇಯಿಸುವಿಕೆ, ಬೇಟೆಯಾಡುವುದು  ಮುಂತಾದ ಕ್ರಿಯೆಗಳಿಂದ ಇಳಿಮುಖವಾಗಿದೆ. ಇಂದು ಇದು ಅಳಿವಿನಂಚಿನ ಪ್ರಭೇದದ ಗುಂಪಿಗೆ ಸೇರಿದೆ. 1970ರ ವೇಳೆಗೆ ಇವುಗಳ ಸಂಖ್ಯೆ 150ಕ್ಕೆ ಇಳಿಯಿತು ಹೀಗಾಗಿ ಜಮ್ಮು ಕಾಶ್ಮೀರ ರಾಜ್ಯದ ಜೊತೆ ಸೇರಿ IUCN and WWFಗಳು ಸಂರಕ್ಷಣಾ ಯೋಜನೆಯನ್ನು ಜಾರಿಗೆ ತಂದವು. ಇದರಿಂದ 1980ರ ವೇಳೆಗೆ ಜಿಂಕೆಗಳ ಸಂತತಿ 340ಕ್ಕೆ ಏರಿತು. 2009ರ ವೇಳೆಗೆ ʻʻʻಕಾಶ್ಮೀರಿನ ಕೆಂಪುಜಿಂಕೆಯ ಹಂಗೂಲ್‌ನ್ನುʼʼ ರಕ್ಷಿಸಿ ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಅಂದಿನಿಂದ ಜಿಂಕೆಗಳನ್ನು ರಕ್ಷಿಸಲು ಅವುಗಳನ್ನು ಬಂಧಿಸಿ ಅಭಿವೃದ್ಧಿಪಡಿಸಲಾಯಿತು. ಸಂತಾನೋತ್ಪತ್ತಿ ಕೇಂದ್ರಗಳನ್ನು ʻʻಸಿಕರ್‌ಘರ್‌ ಟ್ರಾಲ್‌, ಪುಲುವಾನಾ ಮತ್ತು ಕಂಗನ್ ಜಿಲ್ಲೆಗಳಲ್ಲಿ ತೆರೆಯಲಾಯಿತು. ಆದರೂ ಅವುಗಳ ಪ್ರಗತಿ ಕಂಡುಬಂದಿಲ್ಲ.

6) ಕೆಂಪು ಪಾಂಡಾ ಯೋಜನೆ: (Red Ponda project)

ಇವುಗಳು ಪೂರ್ವ ಹಿಮಾಲಯ ಪರ್ವತಗಳಲ್ಲಿ 1500 ರಿಂದ 4,000 ಮೀಟರ್‌ಗಳಷ್ಟು ಎತ್ತರವಾದ ಪ್ರದೇಶಗಳಲ್ಲಿ ವಾಸಿಸುತ್ತವೆ. ಅರುಣಾಚಲ ಪ್ರದೇಶದಲ್ಲಿ ಇದನ್ನು ʻʻಬೆಕ್ಕು ಕರಡಿʼʼ ಎಂದು ಕರೆಯುತ್ತಾರೆ. ಕೆಂಪು ಪಾಂಡಾ ಯೋಜನೆಯು 1966 ಜಾರಿಗೆ ಬಂದಿತು. ಈ ಯೋಜನೆಯನ್ನು ಪದ್ಮಜಾ ನಾಯ್ಡು ಹಿಮಾಲಯನ್ ವನ್ಯಜೀವಿ ಉದ್ಯಾನವನದಲ್ಲಿ WWF ನ ಸಹಕಾರದೊಂದಿಗೆ ಆರಂಭಿಸಿದರು. ಕೆಂಪು ಪಾಂಡಾಗಳು ಅರುಣಾಚಲ ಪ್ರದೇಶ, ಸಿಕ್ಕಿಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಂಡು ಬಂದಿವೆ. 

7)  ಮಣಿಪುರ ಥಾಮೀನ್ ಯೋಜನೆ : (Manipur Thamin Project)

ಈ ಥಾಮೀನ್ ಜಿಂಕೆಗಳು ಪಣಿಪುರ ಲೋಕ್ತಾ ಕೆರೆಯ ಆಗ್ನೇಯ ಭಾಗದಲ್ಲಿ ಕಂಡುಬರುತ್ತವೆ. ಇದು ಅತ್ಯಂತ ವಿರಳವಾದ ಪ್ರಭೇದವಾಗಿದ್ದು ಅಳಿವಿನಂಚಿನಲ್ಲಿದೆ. ಇದನ್ನು ರಕ್ಷಿಸಲು 1977ರಲ್ಲಿ ಮಣಿಪುರದಲ್ಲಿ ಈ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

8.  ಮೊಸಳೆ ತಳಿ ಸಂವರ್ಧನೆ ಯೋಜನೆ:

ತೀವ್ರವಾಗಿ ಕುಸಿಯುತ್ತಿರುವ ಮೊಸಳೆಗಳನ್ನು ಅಭಿವೃದ್ಧಿಪಡಿಸಲು 1975ರಲ್ಲಿ ಮೊಸಳೆ ತಳಿ ಸಂವರ್ಧನೆ ಯೋಜನೆಯನ್ನು ಆರಂಭಿಸಲಾಯಿತು. ಈ ಯೋಜನೆಯ ರೂವಾರಿ ಗುಜರಾತ್ ರಾಜ್ಯವಾಗಿದೆ. ಈ ಯೋಜನೆಯು ಒರಿಸ್ಸಾದ ʻʻತಿಕರಪಾರʼʼ ಎಂಬಲ್ಲಿ ಆರಂಭವಾಯಿತು. ನಂತರ ಇದನ್ನು ಉತ್ತರಪ್ರದೇಶ, ಮಹಾರಾಷ್ಟ್ರ, ಅಂಡಮಾನ್, ಅಸ್ಸಾಂ, ಬಿಹಾರ ಹಾಗೂ ನಾಗಾಲ್ಯಾಂಡ್‌ಗಳಿಗೂ ವಿಸ್ತರಿಸಲಾಯಿತು.

9. ರಾಮಸರ ಸಮಾವೇಶ: (Ramasara Convention)

ಆರ್ದ್ರ ಭೂಮಿಗಳನ್ನು ಅಥವಾ ಜೀವ ವೈವಿಧ್ಯತೆಗಳನ್ನು ರಕ್ಷಣೆ ಮಾಡಲು ರಾಮಸರ ಸಮಾವೇಶವು ನಡೆಯಿತು. ಈ ರಾಮಸರ ಪ್ರದೇಶವು ಈಗಿನ ಇರಾನ್ ದೇಶದ ಕ್ಯಾಪ್ಸಿಯನ್ ಸಮುದ್ರದ ಕರಾವಳಿಯ ತೇವಭೂಮಿಯಾಗಿದೆ. 1971ರ ಅವಧಿಯಲ್ಲಿ ಪ್ರಪಂಚದ ಹಲವು ದೇಶಗಳು ಈ ತೇವವಾದ ಭೂಮಿಯನ್ನು ರಕ್ಷಿಸುವ ಕುರಿತು ರಾಮಸರ ಪ್ರದೇಶದಲ್ಲಿ ಸಭೆ ಸೇರಿ ಚರ್ಚೆಗಳನ್ನು ನಡೆಸಿ  ಒಂದು ಒಮ್ಮತದ ಅಭಿಪ್ರಾಯಕ್ಕೆ ಬಂದವು. ಈ ಸಮಾವೇಶದಲ್ಲಿ 169 ದೇಶಗಳು ಭಾಗವಹಿಸಿವೆ. ವಿಶ್ವದಾದ್ಯಂತ 2100 ಕ್ಕೂ ಹೆಚ್ಚು ರಾಮಸರ ಸ್ಥಳಗಳನ್ನು ಹೊಂದಿದೆ. ಈ ಸಮಾವೇಶದಲ್ಲಿ ಹಲವಾರು ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಾಸಸ್ಥಾನಗಳು. ನದಿಗಳು ಹಾಗೂ ಹವಳದ ದಿಬ್ಬಗಳನ್ನು ವಿವಿಧ ಬಗೆಯ ತೇವಭೂಮಿಗಳನ್ನಾಗಿ ವರ್ಗೀಕರಿಸಲಾಗಿದೆ. ಹೀಗೆ ವರ್ಗೀಕರಿಸಿದ ಭೂಮಿಗಳನ್ನು ತೇವಭೂಮಿಯ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿರುವ ತೇವ ಭೂಮಿಗಳನ್ನು ರಾಮಸರ ತಾಣಗಳು ಎಂದು ಹೆಸರಿಸಲಾಗಿದೆ.

ಭಾರತ ಹಾಗೂ ರಾಮಸರ ಸಮಾವೇಶ:

ಭಾರತವು ಒಟ್ಟು 27400 ಚೌಗು ಪ್ರದೇಶಗಳನ್ನು ಹೊಂದಿದೆ. ಅದರಲ್ಲಿ 23450 ಒಳನಾಡಿನ ಹಾಗೂ 3950 ಕರಾವಳಿಯ ಚೌಗು ಪ್ರದೇಶಗಳಾಗಿವೆ. 1981 ರಲ್ಲಿ ಭಾರತವು ರಾಮಸರ ಸಮಾವೇಶದ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಯಾಯಿತು. ಚಿಲ್ಕಾ ಹಾಗೂ ಘಾನಾ ಸರೋವರ ಭಾರತದ ಮೊದಲ ರಾಮಸರ ಸರೋವರಗಳಾಗಿವೆ. ಭಾರತದ ಚೌಗು ಪ್ರದೇಶಗಳನ್ನು ರಾಮಸರ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. ಭಾರತದಲ್ಲಿ ಈಗ 89 ರಾಮಸರ ತಾಣಗಳಿವೆ. ಭಾರತದ ಅತಿ ದೊಡ್ಡ ರಾಮಸರ ತಾಣವೆಂದರೆ ಸುಂದರ್‌ ಬನ್ಸ್‌, ವಿಶ್ವದ ಅತೀ ದೊಡ್ಡ ರಾಮಸರ್‌ ತಾಣವೆಂದರೆ ಪಂಥನಾಲ್‌, ಇದು ದಕ್ಷಿಣ ಅಮೆರಿಕದಲ್ಲಿದೆ. ಭಾರತದ ಚಿಕ್ಕ ರಾಮಸರ್‌ ತಾಣ ರೇಣುಕಾ ಚೌಗು ಪ್ರದೇಶ ಹಿಮಾಚಲ ಪ್ರದೇಶದಲ್ಲಿದೆ. ಭಾರತದಲ್ಲಿ ಗರಿಷ್ಠ ರಾಮಸರ ತಾಣಗಳನ್ನು ತಮಿಳುನಾಡು ಹೊಂದಿದೆ. ಇಲ್ಲಿ ಒಟ್ಟು 20 ತಾಣಗಳಿವೆ. ನಂತರ ಉತ್ತರ ಪ್ರದೇಶ ಇಲ್ಲಿ 10 ತಾಣಗಳಿವೆ.

10. ಪವಿತ್ರವನ: (Secred Groves)

ಭಾರತದ ಪ್ರಾಚೀನ ಕಾಲದಿಂದಲೂ ಅರಣ್ಯ ರಕ್ಷಣೆಗೆ ಆದ್ಯತೆ ನೀಡಲಾಗಿದೆ. ವಿವಿಧ ಸಮುದಾಯಗಳು ದೇಶದಾದ್ಯಂತ ಪವಿತ್ರ ವನಗಳನ್ನು ಸ್ಥಾಪಿಸಿ ಸಂರಕ್ಷಿಸಿವೆ. ಇವು ಇಂದಿಗೂ  ಪಳೆಯುಳಿಕೆಯ ಹಾಗೆ ಉಳಿದುಕೊಂಡಿವೆ. ಸಹ್ಯಾದ್ರಿಯ ಪ್ರತಿಯೊಂದು ಗ್ರಾಮಗಳೂ ಈ ಪವಿತ್ರವನ ಸ್ಥಾಪಿಸಿ ರಕ್ಷಿಸಿಕೊಂಡು ಬರುತ್ತಿವೆ. ಇವುಗಳನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತಿದೆ. ಕರ್ನಾಟಕದಲ್ಲಿ ʻದೇವರನಾಡುʼ ಕೇರಳದಲ್ಲಿ ಕಾವು, ಸರ್ಪಕಾವು, ಮಹಾರಾಷ್ಟ್ರದಲ್ಲಿ ದೇವರೈ, ಆಂಧ್ರಪ್ರದೇಶದಲ್ಲಿ ʻʻಪವಿತ್ರ ಕ್ಷೇತ್ರಲುʼʼ ಅರುಣಾಚಲ ಪ್ರದೇಶದಲ್ಲಿ ʻʻಗುಂಪಾʼʼ ಛತ್ತೀಸ್‌ಗಡದಲ್ಲಿ ಸ್ವರ್ಣ, ದೇವಲಾಸ್‌, ತಮಿಳುನಾಡಿನಲ್ಲಿ ʻಕೋವಿಲ್ ಕಾಡುʼ ಉತ್ತರಖಂಡದಲ್ಲಿ ʻದೇರ್‌ಭೂಮಿʼ ಎಂದು ಕರೆಯುತ್ತಾರೆ. ಕೊಡಗಿನಲ್ಲಿಯೇ ಸುಮಾರು 1000 ದೇವರ ಕಾಡುಗಳಿವೆ. ಅರಣ್ಯನಾಶ, ನಗರೀಕರಣ, ದನಕರುಗಳ ಮೇಯುವಿಕೆ ಹಾಗೂ ಜನರ ನಿರ್ಲಕ್ಷದಿಂದಾಗಿ ಹಾಳಾಗಿವೆ.

ಉಪಸಂಹಾರ

ಭಾರತ ಸರ್ಕಾರವು ಜಾರಿಗೆ ತಂದಿರುವ ಈ ಜೀವ ಸಂರಕ್ಷಣಾ ಯೋಜನೆಗಳು ಪ್ರಕೃತಿ ಮತ್ತು ಮಾನವನ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳಲು ಅತ್ಯಂತ ಅಗತ್ಯವಾಗಿವೆ. ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಉಳಿಸುವ ಮೂಲಕ ಪರಿಸರದ ಆರೋಗ್ಯವನ್ನು ಸುಧಾರಿಸುವ ಪ್ರಯತ್ನ ಇದಾಗಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಕಾರವೂ ಈ ಯೋಜನೆಗಳ ಯಶಸ್ಸಿಗೆ ಮುಖ್ಯವಾಗಿದೆ. ಪ್ರತಿಯೊಬ್ಬ ನಾಗರಿಕನು ಪರಿಸರ ಸಂರಕ್ಷಣೆಯ ಹೊಣೆ ಹೊತ್ತಾಗ ಮಾತ್ರ ಭವಿಷ್ಯ ಪೀಳಿಗೆಗೆ ಸುರಕ್ಷಿತ ಪ್ರಕೃತಿಯನ್ನು ನೀಡಲು ಸಾಧ್ಯವಾಗುತ್ತದೆ.

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

ವಿಶ್ವದಲ್ಲಿ ಸುಮಾರು 12 ಮಹಾಜೈವಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರಗಳು ಉಂಟು. ಅದರಲ್ಲಿ ಭಾರತವು ಸಹ ಒಂದು ಎಂದು ಪರಿಗಣಿತವಾಗಿದೆ. ಏಷ್ಯಾದ ಜೈವಿಕ ವೈವಿಧ್ಯ ದೇಶಗಳಲ್ಲಿ ನಾಲ್ಕನೇ ಸಾಧನೆ ಮಾಡಿದ ದೇಶ ಭಾರತವಾಗಿದೆ. ಹಾಗೆ ವಿಶ್ವದ ಸಸ್ಯ ವೈವಿಧ್ಯತೆ ಹೊಂದಿದ ದೇಶಗಳಲ್ಲಿ 10ನೇ ಸ್ಥಾನದಲ್ಲಿದೆ. ಪ್ರಪಂಚದ ದೇಶಿಯ ಕಸೇರುಕಗಳ ಪಟ್ಟಿಯಲ್ಲಿ 11ನೇ ಸ್ಥಾನ ಪಡೆದಿದೆ.

ಭಾರತದಲ್ಲಿ ತೀವ್ರ ಅಪಾಯದ ಅಂಚಿನಲ್ಲಿರುವ ಪ್ರಬಂಧಗಳೆಂದರೆ.

1 ಸಸ್ತನಿಗಳು:

  1. ಚಿಕ್ಕದಾದ ಕಾಡು ಹಂದಿ:  ಈ ಪ್ರಾಣಿಯ ನಾಶದಿಂದಾಗಿ ಇದನ್ನೇ ಅವಲಂಬಿಸಿ ಬದುಕು  ಕಂಡುಕೊಂಡಿದ್ದ ಹಾಗ್ ಎಂಬ ಜೀವಿಯು ಅಳಿವಿನ ಅಂಚಿನಲ್ಲಿದೆ.
  2. ಕೊಂಡಾನ ಇಲಿ:  ಭಾರತದಲ್ಲಿ ಮಾತ್ರ ಕಾಣಸಿಗುವ ಜಲವಾಸಿಯಾಗಿದ್ದು ಇದರ ಆವಾಸಸ್ಥಾನ ನಾಶವಾಗುತ್ತಿದೆ. ಹುಲ್ಲುಗಾವಲು ಮೇಯುವಿಕೆ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಂದ ಇಲಿ ವಿನಾಶದ ಅಂಚಿಗೆ ಬಂದು ತಲುಪಿದೆ.
  3. ಮಲಬಾರ್ ಕಿರುಬ:  ಇದು ಪಶ್ಚಿಮ ಘಟ್ಟದಲ್ಲಿ ಕಂಡುಬರುತ್ತದೆ. ಕಾಡುಗಳ ನಾಶದಿಂದಾಗಿ ಈ ಪ್ರಾಣಿ ಅಪಾಯವನ್ನು ಎದುರಿಸುತ್ತಿದೆ.
  4. ಜಾವಾದ ಘೇಂಡಾಮೃಗ: ಘೇಂಡಾಮೃಗದ 5 ಪ್ರಭೇದಗಳ ಪೈಕಿ ಇದು ಚಿಕ್ಕ ಪ್ರಭೇದವಾಗಿದೆ. ಹಿಮಾಲಯದ ಹಾಗೂ ಈಶಾನ್ಯ ಭಾರತದಲ್ಲಿ ಇದು ಕಂಡುಬರುತ್ತದೆ. ಇಂದು ಭಾರತದಲ್ಲಿ ಈ ಪ್ರಾಣಿ ಇಲ್ಲವಾಗಿದೆ.

2. ಸರಿಸೃಪಗಳು:

  1. ಉದ್ದ ಮುಖದ ಮೊಸಳೆ: ಮೀನುಗಳನ್ನು ತಿಂದು ಬದುಕುವ ಇದು ಚಂಬಲ್‌ ರಾಷ್ಟ್ರೀಯ ಅಭಯಾರಣ್ಯ, ರಾಜಸ್ಥಾನ್‌ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡುಬರುತ್ತದೆ. ಅಣೆಕಟ್ಟು ನಿರ್ಮಾಣ ಹಾಗೂ ಕೃತಕ ಹಡಗುದಾಣ ನಿರ್ಮಾಣ ಮತ್ತು ಮರಳು ಗಣಿಗಾರಿಕೆಯಿಂದ ನಾಶವಾಗಿದೆ.
  2. ಗಿಡುಗ ಮೂಗಿನ ಆಮೆ: ಅತೀ ದುರ್ಬಲವಾದ ಸರಿಸೃಪವಾಗಿದೆ. ಮರುಳು ತೀರ ಬುಡದಲ್ಲಿ ಇದರ ವಾಸ. 25 ರಿಂದ 45 ವರ್ಷ ಬದುಕುತ್ತದೆ. ಆಮೆ ಚಿಪ್ಪು ಮಾರಾಟ, ಮಾಂಸಕ್ಕಾಗಿ ಹಾಗೂ ತೈಲಕ್ಕಾಗಿ ಇದನ್ನು ಕೊಲೆ ಮಾಡಲಾಗುತ್ತದೆ.
  3. ಸಿಸ್ಟಾರ ಹಗಲಿನ ಹಲ್ಲಿ: ಕಾಡಿನಲ್ಲಿ ವಾಸಿಸುವ ದೊಡ್ಡ ಹಲ್ಲಿ ಇದಾಗಿದೆ. ಪ್ರಮುಖವಾಗಿ ಕೀಟಗಳನ್ನು ತಿಂದು ಬದುಕುತ್ತದೆ. ರಾತ್ರಿ ವೇಳೆ ಇದರ ಓಡಾಟ ಹೆಚ್ಚು. ಪಶ್ಚಿಮ ಘಟ್ಟಗಳು, ನೀಲಗಿರಿ ಬೆಟ್ಟಗಳು ಇವುಗಳ ಆವಾಸ ಸ್ಥಾನ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಹಲ್ಲಿಗಳು ಅಳಿವಿನ ಅಂಚಿಗೆ ಬಂದು ತಲುಪಿವೆ.
  4. ಕಾಡು ಗೂಬೆ: ಇದು ಒಣಎಲೆ ಉದುರುವ ಕಾಡುಗಳಲ್ಲಿ ಕಂಡುಬರುತ್ತದೆ. ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ದಕ್ಷಿಣ ಭಾಗದಲ್ಲಿ ಇದರ ವಾಸ. ಮರಗಳ ಸಾಗಾಣಿಕೆ ಮತ್ತು ಮರಗಳ ಕಟಾವುಗಳಿಂದ ಗೂಬೆಗಳು ಕಣ್ಮರೆಯಾಗುತ್ತಿವೆ.

3. ಪಕ್ಷಿಗಳು:

  1. ಬಿಳಿ ಹೊಟ್ಟೆಯ ಕೊಕ್ಕರೆ:  ಅರುಣಾಚಲ ಪ್ರದೇಶ ಹಾಗೂ ಅಸ್ಸಾಂನಲ್ಲಿ ಅತಿ ವಿರಳವಾಗಿ ಕಂಡುಬರುವ ಈ ಪಕ್ಷಿಗಳು ಎತ್ತರದ ಹುಲ್ಲುಗಾವಲುಗಳನ್ನು ಆಶ್ರಯಿಸಿರುತ್ತವೆ. ಬೆಟ್ಟದ ಕಡಿದಾದ ಪ್ರದೇಶಗಳು ಇವುಗಳಿಗೆ ಇಷ್ಟ. ಅತಿಯಾದ ಬೇಟೆಯ ಕಾರಣದಿಂದಾಗಿ ಈ ಪಕ್ಷಿಗಳು ವಿನಾಶದ ಅಂಚಿನಲ್ಲಿದೆ.
  2. ಗುಲಾಬಿ ಬಣ್ಣ ತಲೆಯ ಬಾತುಕೋಳಿ:  ನಿಂತ ನೀರಿನ ಕೊಳಗಳು ಹಾಗೂ ಎತ್ತರದ ಹುಲ್ಲುಗಾವಲನ್ನು ಆಶ್ರಯಿಸಿ ಬದುಕುತ್ತಿರುವ ಈ ಬಾತುಕೋಳಿಯ ತಲೆಯು ಕಡುಗೆಂಪು ಗುಲಾಬಿ ಬಣ್ಣವನ್ನು ಹೊಂದಿದೆ.  ಇವು ಭಾರತ, ಬಾಂಗ್ಲಾದೇಶ ಹಾಗೂ ಮಯನ್ಮಾರಗಳಲ್ಲಿ ಕಂಡುಬಂದಿದೆ. ಜೌಗು ಪ್ರದೇಶಗಳ ಸವಕಳಿ, ಬೇಟೆಗಾರಿಕೆ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದಾಗಿ ಬಾತುಕೋಳಿಗಳ ಸಂತತಿ  ಅಳಿವಿನಂಚಿನಲ್ಲಿದೆ.
  3. ಗೊರವ ಹಕ್ಕಿ:  ಈ ಹಕ್ಕಿಗಳ ಸಂಖ್ಯೆ ಹಠಾತ್ತಾಗಿ ಕಡಿಮೆಯಾಗಿದೆ. ಪಾಳು ಬಿದ್ದ ಭೂಮಿ ಹಾಗೂ ಪೊದೆಗಳಲ್ಲಿ ಇವುಗಳ ವಾಸ. ಸೌದಿ ಅರೇಬಿಯಾ, ಸಿರಿಯಾ, ಈಜಿಪ್ಟ್‌, ಇರಾಕ್, ಭಾರತ ಹಾಗೂ ರಷ್ಯಾದಲ್ಲಿ ಈ ಬಗೆಯ ಪಕ್ಷಿಗಳು ಕಂಡುಬರುತ್ತವೆ. ತಗ್ಗು ಪ್ರದೇಶಗಳ ಸವಕಳಿ ಮತ್ತು ಅವುಗಳ ಆವಾಸಸ್ಥಾನಗಳಲ್ಲಿನ ಕಾಡು ನಾಶದಿಂದಾಗಿ ಗೊರವ ಹಕ್ಕಿಗಳ ಸಂತತಿ ಕಡಿಮೆಯಾಗುತ್ತಿದೆ.
  4. ಹಿಮಾಲಯದ ಕೌಜುಗ:  ಇದು ಹಾರಲು ಬಾರದ ಮತ್ತು ಹುಲ್ಲುಗಾವಲಿನಲ್ಲಿ ವಾಸಿಸುವ ಹಕ್ಕಿ. 1876ರಲ್ಲಿ ಕಂಡುಬಂದ ಈ ಹಕ್ಕಿ ಇಂದು ಆಗೊಮ್ಮೆ ಈಗೊಮ್ಮೆ ಕಂಡುಬರುತ್ತದೆ.
  5. ಸೈಬೀರಿಯನ್ ಕೊಕ್ಕರೆ:  ದೊಡ್ಡ ಗಾತ್ರದ ಸುಂದರ ಪಕ್ಷಿ ಇದಾಗಿದೆ. 2002 ರಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಚೌಗು ಪ್ರದೇಶಗಳಲ್ಲಿ ಇವುಗಳ ವಾಸ. ಕೀಟನಾಶಕಗಳಿಂದ ಈ ಕೊಕ್ಕರೆಗಳು ನಾಶಗೊಳ್ಳುತ್ತವೆ. ಬೇಟೆಗಾರಿಕೆ ಹಾಗೂ ಕೃಷಿ ಭೂಮಿಯ ಪರಿವರ್ತನೆಯು ಸಹ ಇವುಗಳ ಅಳಿವಿಗೆ ಕಾರಣವಾಗಿದೆ.

4. ಉಭಯವಾಸಿಗಳು:

  1. ಭಾರತದ ಗುಂಡ್ಯ ಕಪ್ಪೆ: ಸಮುದ್ರಮಟ್ಟಕ್ಕಿಂತ 200 ಮೀಟರ್ ಎತ್ತರದಲ್ಲಿ ಇವುಗಳ ವಾಸ. ದನ-ಕರುಗಳ ಅತಿಯಾದ ಮೇಯುವಿಕೆ, ಮರ ಸಾಗಾಣಿಕೆ ಹಾಗೂ ರಸ್ತೆ ನಿರ್ಮಾಣದಂತಹ ಕಾರ್ಯಗಳಿಂದ ಈ ಕಪ್ಪೆಗಳ ಸಂತತಿ ನಾಶವಾಗುತ್ತಿದೆ.
  2. ಹುಲಿ ಕಪ್ಪೆ:  ಇದನ್ನು ಮಹಾರಾಷ್ಟ್ರದಲ್ಲಿ ಪತ್ತೆಹಚ್ಚಲಾಗಿದೆ. ಸಮುದ್ರ ಮಟ್ಟದಿಂದ 720 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಕಾಡುಗಳ ನಾಶ ಹಾಗೂ ಅವುಗಳ ವಾಸಸ್ಥಾನಗಳ ನಾಶದಿಂದ ಈ ಕಪ್ಪೆಗಳ ಸಂತತಿ ಕಡಿಮೆಯಾಗುತ್ತಿದೆ.
  3. ಚಾರ್ಲ್ಸ್ ಡಾರ್ವಿನ್ ಕಪ್ಪೆ: ಇದು ಸಮುದ್ರ ಮಟ್ಟದಿಂದ 200 ಮೀಟರ್ ಎತ್ತರದಲ್ಲಿ ಕಂಡು ಬರುತ್ತದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಇವುಗಳ ವಾಸ. ಕಾಡುಗಳ ನಾಶದಿಂದ ಈ ಕಪ್ಪೆಗಳು ವಿನಾಶದ ಅಂಚಿಗೆ ಬಂದು ತಲುಪಿವೆ.
  4. ಬಣ್ಣದ ಹೊಳೆಯುವ ಪೊದೆ ಕಪ್ಪೆ:  ಇದೊಂದು ಅಪರೂಪದ ಬಣ್ಣದ ಕಪ್ಪೆ. ಸಮುದ್ರ ಮಟ್ಟದಿಂದ 269 ಮೀಟರ್ ಎತ್ತರದಲ್ಲಿ ವಾಸಿಸುತ್ತದೆ. ಎರಾವಿಕುಲಂ ಅಭಯಾರಣ್ಯ ಇವುಗಳ ವಾಸ. ಕಾಡುಗಳ ನಾಶ ಹಾಗೂ ಇವುಗಳ ಆವಾಸಸ್ಥಾನಗಳ ನಾಶದಿಂದಾಗಿ ಈ ಕಪ್ಪೆಗಳು ಸಾವಕಾಶವಾಗಿ ಕಣ್ಮರೆಯಾಗುತ್ತಿವೆ.

5.  ಮೀನುಗಳು:

  1. ಪಾಂಡಿಚೇರಿ ಸಾರ್ಕ್:  ಇದು ಸಮುದ್ರ ಕಡಲ ತೀರದಲ್ಲಿ ಕಂಡುಬರುತ್ತದೆ.  ಪಾಕಿಸ್ತಾನದವರೆಗೂ ಈ ಮೀನುಗಳು ಕಂಡುಬರುತ್ತವೆ. ಅನಿಯಂತ್ರಿತ ವಾಣಿಜ್ಯ ಮೀನುಗಾರಿಕೆಯ ಪರಿಣಾಮವಾಗಿ ಇವುಗಳ  ಸಂಖ್ಯೆ ಕಡಿಮೆಯಾಗಿದೆ.
  2. ಗಂಗಾ ನದಿ ಸಾರ್ಕ್: ಅಪರೂಪದಿಂದ ಕೂಡಿದ ಈ ಮೀನುಗಳು ಗಂಗಾ ನದಿಯ ಕೆಸರು ನೀರು ಹಾಗೂ ಬಂಗಾಳಕೊಲ್ಲಿಯಲ್ಲಿ ಕಂಡುಬರುತ್ತವೆ.
  3. ದೊಡ್ಡ ಗಾತ್ರದ ಗರಗಸ ಮೀನು:  ದೊಡ್ಡ ಗಾತ್ರದ ಮೀನು ಗರಗಸ ಹಲ್ಲುಗಳನ್ನು ಹೊಂದಿದೆ. ಇದು ಮೂರು ಮೀಟರ್ ಉದ್ದ ಬೆಳೆಯುವುದರಿಂದ ಇದಕ್ಕೆ ಗೂಳಿ ಶಾರ್ಕ್ ಎಂದು ಕರೆಯುತ್ತಾರೆ. ಹೂಳು ತುಂಬುವುದು, ನೀರಿನ ಮಲೀನತೆ, ಅಣೆಕಟ್ಟು ನಿರ್ಮಾಣ ಹಾಗೂ ಆವಾಸಸ್ಥಾನಗಳ ನಾಶ ಈ ಮೀನುಗಳ ಸಂತತಿಯ ಅವನತಿಗೆ ಕಾರಣವಾಗಿದೆ.
  4. ಚಾಕು ಹಲ್ಲಿನ ಮೀನು:  ಈ ಮೀನು ಬ್ಲೇಡ್ ರೀತಿಯ ಹಲ್ಲುಗಳನ್ನು ಹೊಂದಿದೆ. ಇದು ಸಾಗರದ ಆಳದಲ್ಲಿ ಇರುತ್ತದೆ. ಹಿಂದೂ ಮಹಾಸಾಗರ ಹಾಗೂ ಪೆಸಿಫಿಕ್ ಮಹಾಸಾಗರಗಳಲ್ಲಿ ಇವುಗಳ ವಾಸ. ಹೆಚ್ಚು ಬೇಡಿಕೆ ಇರುವ ಮೀನು ಇದಾಗಿದೆ.

ಉಪಸಂಹಾರ

ಭಾರತದಲ್ಲಿನ ಅಳಿವಿನಂಚಿನಲ್ಲಿರುವ ಹಾಗೂ ಸ್ಥಳೀಯ ಪ್ರಭೇದಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಕಾಡು ನಾಶ, ಅಕ್ರಮ ಬೇಟೆ, ಮಾಲಿನ್ಯ ಮತ್ತು ಆವಾಸಸ್ಥಾನಗಳ ವಿನಾಶವನ್ನು ತಡೆಗಟ್ಟಿದಾಗ ಮಾತ್ರ ಜೀವ ವೈವಿಧ್ಯ ಉಳಿಯಲು ಸಾಧ್ಯ. ಸರ್ಕಾರದ ಕ್ರಮಗಳ ಜೊತೆಗೆ ಜನಜಾಗೃತಿ ಮತ್ತು ಸಮುದಾಯದ ಸಹಭಾಗಿತ್ವ ಅತ್ಯಂತ ಅಗತ್ಯ. ಇಂದೇ ನಾವು ಕೈಗೊಳ್ಳುವ ಸಂರಕ್ಷಣಾ ಪ್ರಯತ್ನಗಳು ನಾಳೆಯ ಪರಿಸರ ಸಮತೋಲನವನ್ನು ನಿರ್ಧರಿಸುತ್ತವೆ. ಪ್ರಕೃತಿಯನ್ನು ಉಳಿಸುವುದೇ ಭವಿಷ್ಯವನ್ನು ಉಳಿಸುವ ಮಾರ್ಗವಾಗಿದೆ

ಭಾರತದ ಜೈವಿಕ ಭೌಗೋಳಿಕ ವಲಯಗಳು

ಭಾರತದ ಜೈವಿಕ ಭೌಗೋಳಿಕ ವಲಯಗಳು

ಭಾರತದ ಜೀವ ವೈವಿಧ್ಯತೆಯು ಅಪಾರ ಸಂಖ್ಯೆಯಲ್ಲಿದೆ. ಇದು ಪಶ್ಚಿಮದಲ್ಲಿ ಉಷ್ಣವಲಯದ ಆಫ್ರಿಕಾ ಹಾಗೂ ಪೂರ್ವದಲ್ಲಿ ಮಲೇಶಿಯಾಗಳ ನಡುವೆ ಇದೆ. ಇದು ಭಿನ್ನವಾದ  ಹವಾಗುಣ ಹಾಗೂ ಭೂ ಸ್ವರೂಪವನ್ನು ಹೊಂದಿದೆ. ಹಾಗಾಗಿ ಭಾರತವು ಹೊಂದಿರುವ ಜೀವ ಪ್ರಭೇದಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಾಸಗೊಳ್ಳುತ್ತಾ ಹೋಗುತ್ತದೆ. 2001ರಲ್ಲಿನ ಭಾರತ ಪರಿಸರ ಪರಿಸ್ಥಿತಿ ವರದಿಯನ್ನು ಆಧರಿಸಿ 1990 ರಲ್ಲಿನ ವಿಂಗಡನೆಗೆ ಅನುಸಾರವಾಗಿ 10 ಭೌಗೋಳಿಕ ವಲಯಗಳನ್ನು ಗುರುತಿಸಲಾಗಿದೆ ಅವುಗಳೆಂದರೆ.

1. ಹೊರಗಿನ ಹಿಮಾಲಯ: (Outer Himalayas)

ಹೊರಗಿನ ಹಿಮಾಲಯ ಪ್ರದೇಶವು ಟಿಬೇಟ್ ಪ್ರಸ್ಥಭೂಮಿ, ಲಡಾಖ, ರಾಹುಲ್, ಸ್ಪಿತಿ ಕಣಿವೆಯ ಕೆಲವು ಭಾಗಗಳನ್ನು ಒಳಗೊಂಡಿದ್ದು ಇದು ಶೀತ ಭೂಮಿಯಾಗಿದೆ. ಇದು ಭಾರತ ದೇಶದ 5.7% ಭೂಭಾಗವನ್ನು ಆವರಿಸಿರುವ ಜೀವರಾಶಿ ಪ್ರದೇಶವಾಗಿದೆ. ಇದು ಸಸ್ಯ ವರ್ಗಗಳಿಂದ ಕೂಡಿದೆ. ಕಪ್ಪು ಕತ್ತಿನ ಕೊಕ್ಕರೆಯಂತಹ ಅಪರೂಪದ ಜೀವಿಗಳು ಇಲ್ಲಿ ಕಂಡುಬರುತ್ತವೆ.

2. ಹಿಮಾಲಯ ಪರ್ವತಗಳು: (The Himalayas)

ಇದೊಂದು ಜೀವ ವೈವಿಧ್ಯತೆಯಿಂದ ಕೂಡಿದ ವಿಶಿಷ್ಟ ಪ್ರದೇಶವಾಗಿದೆ. ಈ ಪ್ರದೇಶಗಳು ದೇಶದ ಉತ್ತರ ಭಾಗದಲ್ಲಿ ವಾಯುವ್ಯದಿಂದ ಈಶಾನ್ಯದವರೆಗೂ ವಿಸ್ತರಿಸಿವೆ. ಇವುಗಳು ಸುಮಾರು 300 ರಿಂದ 6000 ಮೀಟರ್ ಎತ್ತರವಾಗಿವೆ. ಇದು ಭಾರತದ ಭೂಪ್ರದೇಶದ 7.2% ರಷ್ಟು ವಿಸ್ತಾರ ಹೊಂದಿದ್ದು ಕಾಡುಗಳ ಹುಲ್ಲುಗಾವಲು ಮತ್ತು ಅರ್ದ್ರತೆಯಿಂದ ಕೂಡಿದ ಎಲೆ ಉದುರುವ ಅರಣ್ಯ ಭಾಗಗಳನ್ನು ಹೊಂದಿದೆ. ಇಲ್ಲಿ ಕಂಡುಬರುವ ಅಪರೂಪದ ಪ್ರಭೇದಗಳೆಂದರೆ ಹಂಗೂರ್ ಮತ್ತು ಕಸ್ತೂರಿ ಜಿಂಕೆ.

3. ಮರುಭೂಮಿ ಪ್ರದೇಶ: (The desert)

 ಇದು ಭಾರತದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತದೆ. ಈ ಪ್ರದೇಶವು ರಾಜಸ್ಥಾನದ ಮರಳು ಭೂಮಿ ಮತ್ತು ಗುಜರಾತಿನ ಲವಣ ಮರುಭೂಮಿಯಿಂದ ಕೂಡಿದೆ. ಇದು ಭಾರತದ ಭೂ ಪ್ರದೇಶ ಶೇಕಡಾ 67% ರಷ್ಟು ಇದೆ. ತೋಳ, ಮರುಭೂಮಿ ಬೆಕ್ಕು, ಹೌಬಾರಾ ಬಸ್ಟರ್ಡ್ ಹಾಗೂ ಗ್ರೇಟ್ ಇಂಡಿಯನ್ ಬಸ್ಟರ್ಡ್ ಮುಂತಾದ ಅಪಾಯದಂಚಿನಲ್ಲಿರುವ ಪ್ರಭೇದಗಳು ಇಲ್ಲಿ ವಾಸಿಸುತ್ತಿವೆ.

4. ಅರೆ ಶುಷ್ಕ ವಲಯ: ( Semi arid region)

 ಅರಾವಳಿ ಬೆಟ್ಟಗಳನ್ನು ಒಳಗೊಂಡ ಮರುಭೂಮಿ ಹಾಗೂ ದಕ್ಷಿಣದ ಪರ್ಯಾಯ ಪ್ರಸ್ಥಭೂಮಿಯ ನಡುವೆ ಇರುವ ಭೂಭಾಗವೇ ಅರೆ ಶುಷ್ಕ ವಲಯ ಎಂದು ಹೆಸರಾಗಿದೆ. ಇದು ಭಾರತದ ಭೂಪ್ರದೇಶದ 15.6 ರಷ್ಟು ಇದೆ. ಇಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೃತಕ ಹಾಗೂ ನೈಸರ್ಗಿಕ ಸರೋವರಗಳು ಉಂಟು. ಹಾಗೆಯೇ ಜೌಗು ಪ್ರದೇಶಗಳು ಸಹ ಇಲ್ಲಿವೆ. ಇಲ್ಲಿ ತೋಳ, ಸಿಂಹ, ಚಿರತೆ, ಕ್ಯಾರೆಕಲ್ ಹಾಗೂ ಗುಳ್ಳೆನರಿ ಮುಂತಾದ ಪ್ರಾಣಿಗಳು ವಾಸಿಸುತ್ತಿವೆ.

 5. ಪಶ್ಚಿಮ ಘಟ್ಟಗಳು: (The western ghats)

ಇವು ಗುಜರಾತಿನ ತಪತಿ ನದಿಯಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಹಾಗೆಯೇ ಪಶ್ಚಿಮ ಕರಾವಳಿಯ ತೀರ ಪ್ರದೇಶದವರೆಗೂ ಹಬ್ಬಿವೆ. ಇದು ಭಾರತದ ಭೂ ವಿಸ್ತೀರ್ಣದ 58% ರಷ್ಟು ಇದೆ. ಇಲ್ಲಿ ಸಾಕಷ್ಟು ಜೀವ ವೈವಿಧ್ಯತೆಯನ್ನು ಕಾಣಬಹುದಾಗಿದೆ.

6. ದಕ್ಷಿಣದ ಪ್ರಸ್ಥಭೂಮಿ:(Deccan plaleau)

ಇದು ಪರ್ಯಾಯ ಪ್ರಸ್ಥಭೂಮಿಯ ಕೇಂದ್ರ ಹಾಗೂ ದಕ್ಷಿಣ ಭಾಗಗಳನ್ನು ಪೂರ್ಣವಾಗಿ ಒಳಗೊಂಡಿದ್ದು ಅತ್ಯಂತ ವಿಸ್ತಾರವಾಗಿದೆ. ಇಲ್ಲಿ ಬಹುತೇಕ ಅರಣ್ಯಗಳು ಎಲೆ ಉದುರುವ ಅರಣ್ಯಗಳಾಗಿವೆ. ಭಾರತದ ಭೂ ಭಾಗದ 42ರಷ್ಟು ಪ್ರದೇಶವನ್ನು ಹೊಂದಿದೆ. ಚಿರತೆ, ಸಾಂಬಾರ್, ನೀಲ್‌ಗಾಯ್‌, ಚೌಸಿಂಗ್ ಇತ್ಯಾದಿ ಪ್ರಾಣಿಗಳು ಹೇರಳವಾಗಿ ಇಲ್ಲಿ ಕಂಡುಬರುತ್ತವೆ. ಬೊಗಳುವ ಜಿಂಕೆ, ಗೌರ್‌, ಕೆಸರು ಜಿಂಕೆ ಮುಂತಾದವುಗಳು ಸಹ ವಾಸಿಸುತ್ತವೆ.  ಇಲ್ಲಿ ವಿಶಿಷ್ಟ ಶೋಲಾ ಅರಣ್ಯ ಸಹ ಕಂಡುಬರುತ್ತದೆ.

 7. ಗಂಗಾ ಮೈದಾನ: (The gangetic plain)

ಪಶ್ಚಿಮದಲ್ಲಿ ಪಂಜಾಬಿನಿಂದ ಪೂರ್ವದಲ್ಲಿ ಬಂಗಾಳದವರೆಗೂ, ಉತ್ತರದಲ್ಲಿ ಹಿಮಾಲಯದವರೆಗೂ ಕಂಡುಬರುವ ಪ್ರದೇಶವೇ ಗಂಗಾ ಮೈದಾನ. ಭಾರತದ ಒಟ್ಟು ಭೂಪ್ರದೇಶದ 11ರಷ್ಟು ವಿಸ್ತರಿಸಿದೆ. ಘೇಂಡಾಮೃಗ, ಆನೆ, ಎಮ್ಮೆ, ಕೆಸರು ಜಿಂಕೆ, ಚಿಕ್ಕ ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.

 8. ಈಶಾನ್ಯ ವಲಯ: (The north east zone)

ಈ ವಲಯವು ಪರ್ವತ, ಗುಡ್ಡ, ಬೆಟ್ಟ, ಕಣಿವೆ ಹಾಗೂ ಮೈದಾನಗಳಿಂದ ಕೂಡಿದೆ. ಇಲ್ಲಿ ವಾರ್ಷಿಕ ಹೆಚ್ಚು ಮಳೆ ಬೀಳುತ್ತದೆ. ಹೀಗಾಗಿ ಇದೊಂದು ಸಮೃದ್ಧಿಯಿಂದ ಕೂಡಿದ ಪ್ರದೇಶವಾಗಿದೆ. ಭಾರತದಲ್ಲಿ ನೈಜ ಸಸ್ಯವರ್ಗವಿರುವುದು ಇಲ್ಲಿಯೇ. ಇಂಡೋ ಮಲಯಾನ್‌ ಹಾಗೂ ಇಂಡೋ-ಚೀನಾ ಜೀವ ಭೌಗೋಳಿಕ ಪ್ರದೇಶಗಳ ನಡುವಿನ ಸ್ಥಿತ್ಯಂತರ ವಲಯ ಇದಾಗಿದೆ. ಹೀಗಾಗಿ ಇದನ್ನು ಜೀವ ಭೌಗೋಳಿಕ ಪ್ರದೇಶಗಳ ಹೆಬ್ಬಾಗಿಲು ಎನ್ನುವರು. ಆನೆ, ಘೇಂಡಾಮೃಗ, ಕಾಡೆಮ್ಮೆ, ಜಿಂಕೆ ಮುಂತಾದ ಪ್ರಾಣಿಗಳು ಇಲ್ಲಿ ವಾಸಿಸುತ್ತವೆ.

 9. ಕರಾವಳಿ ತೀರ ಪ್ರದೇಶ: (Coastal region)

ಇದು ಭಾರತದ ಪಶ್ಚಿಮ ಹಾಗೂ ಪೂರ್ವ ಕರಾವಳಿಯನ್ನು ಒಳಗೊಂಡಿದ್ದು ಭಾರತದ ಭೂ ಭಾಗದ ಶೇಕಡ 25ರಷ್ಟು ವಿಸ್ತಾರ ಹೊಂದಿದೆ. ಕರಾವಳಿ ಉದ್ದಕ್ಕೂ ಮ್ಯಾಂಗ್ರೋ ಕಾಡುಗಳು ಕಂಡುಬಂದಿವೆ. ಮರಳು ಬೀಚು ಸಾಮಾನ್ಯವಾಗಿ ಕಂಡುಬರುತ್ತದೆ. ಕರಾವಳಿಯ ಒಟ್ಟು ಉದ್ದ 6100 ಕಿಲೋಮೀಟರ್ಗಳು. ಸರ್ವೆಮರ, ಪಂಡಾಸನ್, ಸಮುದ್ರದ ಹುಲ್ಲು ಇಲ್ಲಿನ ಪ್ರಮುಖ ಸಸ್ಯ ವರ್ಗವಾಗಿದೆ.

10. ದ್ವೀಪ ಪ್ರದೇಶ: (The islands)

ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ದೇಶದ ವಿಸ್ತೀರ್ಣದ ಶೇಕಡ 0.03% ರಷ್ಟು ಒಳಗೊಂಡಿದೆ. ಈ ದ್ವೀಪಗಳು ಹವಳದ ದಿಬ್ಬಗಳಿಂದ ಕೂಡಿದೆ. ಇಲ್ಲಿ ಸುಮಾರು 2200 ಪ್ರಭೇದದ ಸಸ್ಯ ಸಂಕುಲವಿದೆ. ಇವುಗಳಲ್ಲಿ 200 ದೇಶೀಯ ಪ್ರಭೇದಗಳಾಗಿವೆ. 255 ಪಕ್ಷಿ ಪ್ರಭೇದಗಳಿವೆ. ಇವುಗಳಲ್ಲಿ 112 ದೇಶಿಯ ಪ್ರಭೇದಗಳೆಂದು ಗುರುತಿಸಲಾಗಿದೆ.

ಜೀವ ಭೌಗೋಳಿಕ ವಲಯಗಳು

ವಲಯಗಳು ಶೇ%   ವಲಯಗಳು ಶೇ%
1. ಹೊರ ಹಿಮಾಲಯ 5.7 6. ದಕ್ಕನ್ ಪ್ರಸ್ಥಭೂಮಿ 42
2. ಹಿಮಾಲಯ ಗಳು 7.2 7. ಗಂಗಾ ಮೈದಾನ 11
3. ಮರುಭೂಮಿ ಪ್ರದೇಶ 6.7 8. ಈಶಾನ್ಯ ವಲಯ 5.2
4. ಅರೆ ಶುಷ್ಕವಲಯ 15.6 9. ಕರಾವಳಿ ತೀರ ಪ್ರದೇಶ 2.5
5. ಪಶ್ಚಿಮ ಘಟ್ಟಗಳು 5.8 10. ದ್ವೀಪ ಪ್ರದೇಶ 0.3

ಉಪಸಂಹಾರ

ಭಾರತದ ಜೈವಿಕ ಭೌಗೋಳಿಕ ವಲಯಗಳು ದೇಶದ ಪರಿಸರ ಸಮೃದ್ಧಿಯ ಪ್ರತೀಕಗಳಾಗಿವೆ. ಪ್ರತಿಯೊಂದು ವಲಯವೂ ವಿಶಿಷ್ಟವಾದ ಸಸ್ಯ ಹಾಗೂ ಪ್ರಾಣಿ ಜಗತ್ತನ್ನು ಹೊಂದಿದ್ದು, ಜೀವ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ಮಹತ್ವದ ಪಾತ್ರ ವಹಿಸುತ್ತಿದೆ. ಈ ವಲಯಗಳ ಸಂರಕ್ಷಣೆ ಮುಂದಿನ ತಲೆಮಾರಿನ ಬದುಕಿಗೆ ಅತ್ಯಂತ ಅಗತ್ಯವಾಗಿದೆ. ಪರಿಸರ ಸಮತೋಲನವನ್ನು ಕಾಪಾಡಲು ಜೈವಿಕ ವಲಯಗಳ ಮಹತ್ವವನ್ನು ಅರಿತುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ.

ಜೀವ ವೈವಿಧ್ಯ ಮತ್ತು ರಕ್ಷಣೆ

ಜೀವ ವೈವಿಧ್ಯ ಮತ್ತು ರಕ್ಷಣೆ

ನಮ್ಮ ಸೌರ ಮಂಡಲದಲ್ಲಿ ಅತ್ಯಂತ ಸುಂದರವಾದ ಗ್ರಹವೆಂದರೆ ಅದು ಭೂಮಿ. ಬೇರೆ ಯಾವ ಗ್ರಹಗಳಲ್ಲಿಯೂ ಜೀವಿಗಳು ಕಂಡುಬರುವುದಿಲ್ಲ. ಈ ಭೂಮಿಯೊಂದು ವೈವಿಧ್ಯಗಳ ಅಗರ. ವಿಭಿನ್ನ ಚರಾಚರಗಳಿಂದ ಕೂಡಿದ ತೆರತೆರನಾದ ಆವಾಸ ಸ್ಥಾನಗಳನ್ನು ಹೊಂದಿದ ಒಂದು ಜೀವ ನಿಧಿ. ಇದೊಂದು ಚಿನ್ನದ ಕಣಜ, ನೀರಿನ ಚಿಲುಮೆ, ಇಂದ್ರನ ನಂದನವನ ಎಲ್ಲಕ್ಕಿಂತ ಮಿಗಿಲಾಗಿ ಭೂಮಿಯೊಂದು ಸೌಂದರ್ಯದ ಗುಡಿಸಲು. ಭೂಮಿಯಲ್ಲಿ ಏನುಂಟು ಏನಿಲ್ಲ ಎಲ್ಲವೂ ಇದೆ. ಪರಿಸ್ಥಿತಿ ಕೈ ಮೀರಿದರೆ ಏನು ಇಲ್ಲದಂತಾಗುತ್ತದೆ. ಇಲ್ಲಿ ಹಿಮದಿಂದ ಕೂಡಿದ ಪ್ರದೇಶಗಳು, ಮರಳು ತುಂಬಿದ ಮರುಭೂಮಿಗಳು, ವಿಶಾಲವಾದ ಸಮುದ್ರ, ಸಾಗರಗಳು, ಕೊಲ್ಲಿಗಳು, ಖಾರಿಗಳು, ಅಂಕುಡೊಂಕಾದ ನದಿಗಳು, ಕಣಿವೆಗಳು, ಬೆಟ್ಟಗುಡ್ಡಗಳು, ಲಕ್ಷಾಂತರ ಪ್ರಭೇದದ ಸಸ್ಯಗಳು, ಕೀಟಗಳು, ಪಕ್ಷಿಗಳು, ಪ್ರಾಣಿಗಳು ಇವೆ. ಒಂದು ಕಡೆ ವಿಶಾಲವಾದ ಬಯಲು ಪ್ರದೇಶ, ಇನ್ನೊಂದೆಡೆ ತಗ್ಗು ಪ್ರದೇಶಗಳು, ಮತ್ತೊಂದು ಕಡೆ ಎತ್ತರವಾದ ಪರ್ವತಗಳು ಮತ್ತೊಂದು ಕಡೆ ಸಿಹಿ ನೀರು ಹಾಗೆಯೇ ಉಪ್ಪು ನೀರು ಸರೋವರಗಳು, ಹೀಗೆಯೇ ಕೋಟಿ ಕೋಟಿ ಬಗೆಯ ಜೀವವೈವಿಧ್ಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇವೆಲ್ಲವುಗಳಿಗೆ ಮೆರಗು ತಂದಿರುವುದು ಇಲ್ಲಿನ ಜನಸಂಖ್ಯೆ. ಕೋಟ್ಯಾಂತರ ಜೀವಿಗಳಿಂದ ತುಂಬಿ ತುಳುಕುತ್ತಿರುವ ಒಂದೇ ಒಂದು ಗ್ರಹವೆಂದರೆ ಅದು ಭೂಮಿ ಮಾತ್ರ. ಈ ಜೀವಿಗಳಿಂದಲೇ ಭೂಮಿಗೆ ಒಂದು ಅರ್ಥ ಬಂದಿದೆ. ಭೂಮಿಗೆ ಚೆಂದ ಹಾಗೂ ಅಂದದ ಸ್ಥಾನ ಮಾನ ಸಿಕ್ಕಿದೆ. ಈ ಭೂಮಿಯ ಮೇಲೆ ವಾಸಿಸುವ ಜೀವಿಗಳು ಒಂದು ಮತ್ತೊಂದರಂತೆ ಇಲ್ಲ. ಹಲವಾರು ಬಗೆಯ ವಿವಿಧತೆಗಳು ಕಂಡುಬರುತ್ತವೆ. ಹೀಗೆ ವಿವಿಧತೆಯಿಂದ ಕೂಡಿದ ಜೀವಿಗಳನ್ನು ಜೀವ ವೈವಿಧ್ಯ ಎಂದು ಕರೆಯುತ್ತೇವೆ. ಈ ಭೂಮಿ ಹುಟ್ಟಿ ಬಂದ ನಂತರ ವಿವಿಧ ಜಾತಿ ವರ್ಗಗಳ ಜೀವಿಗಳು ಭೂಮಿಯ ಮೇಲೆ ವಾಸಿಸಲು ಆರಂಭಿಸಿದವು. ಈ ಜೀವಿಗಳ ತೂಕ, ಆಕಾರ, ದಪ್ಪ, ಎತ್ತರ ಮೊದಲಾದವುಗಳಲ್ಲಿ ವಿಭಿನ್ನತೆಯನ್ನು ಕಾಣಬಹುದು. ಬರಿ ಕಣ್ಣಿಗೆ ಕಾಣದ ಸೂಕ್ಷ್ಮಜೀವಿಗಳಿಂದ ಹಿಡಿದು ಬೃಹತ್ ಗಾತ್ರದ ಆನೆಗಳವರೆಗೆ, ಸಾಗರದಲ್ಲಿ ಈಜುವ ಚಿಕ್ಕ ಚಿಕ್ಕ ಮೀನುಗಳಿಂದ ಹಿಡಿದು ಸುಮಾರು 90 ಅಡಿ ಉದ್ದವಿರುವ ದೊಡ್ಡ ದೊಡ್ಡ ತಿಮಿಂಗಿಲಗಳವರೆಗೆ ಜೀವ ವೈವಿಧ್ಯ ಹರಡಿದೆ ಎಂದರೆ ಆಶ್ಚರ್ಯವಾಗದೆ ಇರದು. ಸಮುದ್ರದಲ್ಲಿ ಕಂಡು ಬರುವ ಚಿಕ್ಕ ಪಾಚಿಗಳಿಂದ ಹಿಡಿದು ಸುಮಾರು 300 ಅಡಿ ಎತ್ತರದವರೆಗೆ ಬೆಳೆಯುವ ದೊಡ್ಡ ದೊಡ್ಡ ಮರಗಳನ್ನು ಈ ಭೂಮಿ ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆ. ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಅನೇಕ ಜಾತಿಯ ಸಸ್ಯಗಳು, ಸಸ್ಯಹಾರಿ, ಪ್ರಾಣಿಗಳು ಹಾಗೂ ಮಾಂಸಾಹಾರಿ ಪ್ರಾಣಿಗಳು ವಾಸಿಸುತ್ತಿವೆ. ಇವುಗಳು ಪರಿಸರವನ್ನು ತಕ್ಕಮಟ್ಟಿಗೆ ಸಮತೂಕದಲ್ಲಿ ಇಡುತ್ತವೆ.

1992ರಲ್ಲಿ  ರಿಯೋಡಿ ಜನೈರೋದಲ್ಲಿ ನಡೆದ ಸಮ್ಮೇಳನದಲ್ಲಿ ಜೀವ ವೈವಿಧ್ಯತೆ ಕುರಿತು ಅರ್ಥ ಸಮೀಟ್‌ನಲ್ಲಿ ಈ ರೀತಿ ವಿವರಿಸಲಾಗಿದೆ. ಒಂದು ಭೂಭಾಗ ಸಾಗರ ಅಥವಾ ಇತರ ಭಾಗದಲ್ಲಿರುವ ಎಲ್ಲ ಜೀವಿ ಪರಿಸರ ವ್ಯವಸ್ಥೆಗಳ ಎಲ್ಲಾ ಜೀವಿಗಳನ್ನು ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳನ್ನು ಒಟ್ಟಾಗಿ ಜೀವ ವೈವಿಧ್ಯತೆ ಎಂದು ಕರೆಯಲಾಗಿದೆ. ಥಾಮಸ್ ಜಾಯ್ ಪ್ರಥಮ ಬಾರಿಗೆ ಬಯಾಲಜಿಕ್ ಡೈವರ್ಸಿಟಿ ಎಂಬ ಪದವನ್ನು 1980ರಲ್ಲಿ ಬಳಸಿದನು. ಮುಂದುವರೆದು ಹಾರ್ವರ್ಡ್ ವಿಶ್ವವಿದ್ಯಾಲಯದ ಡಬ್ಲ್ಯೂ ಡಿ ರೋಜನ್ 1985ರಲ್ಲಿ ಈ ಪದವನ್ನು ಬಳಸಿದನು. ಎಡ್ವರ್ಡ್ ವಿಲ್ಸನ್ ಈ ಪದವನ್ನು ಜನಪ್ರಿಯಗೊಳಿಸಿದನು.

  1. ವಿಶ್ವಸಂಪನ್ಮೂಲಗಳ ಸಂಸ್ಥೆಯ ಪ್ರಕಾರ ಪ್ರಪಂಚದ ಜೀವಿ ತಳಿಗಳ ವಿವಿಧತೆ ಹಾಗೂ ಅವುಗಳು ರೂಪಿಸಿಕೊಂಡಿರುವ ವಿವಿಧ ಸಮುಚ್ಚಯಗಳಿಗೆ ಜೀವವೈವಿಧ್ಯತೆ ಎಂದು ಕರೆಯಲಾಗಿದೆ.
  2. ರಾಬರ್ಟ್‌ ಮಾಲ್ತೂಸ್‌ ಪ್ರಕಾರ ಜೀವಿಗಳ ಜನನ ಸ್ವಾಭಾವಿಕವಾದರೂ ಬೆಳವಣಿಗೆಗೆ ನಡೆದ ಸ್ಪರ್ಧೆಯನ್ನು ವಿಶಾಲವಾಗಿ ಗ್ರಹಿಸಬೇಕು ಎಂದಿದ್ದಾರೆ.
  3. ಚಾರ್ಲ್ಸ್ ಡಾರ್ವಿನ್ ಜೀವ ಜಾತಿಗಳ ಉಗಮ ಬಹಳ ನಿಗೂಢವಾದದ್ದು ಪ್ರಕೃತಿ ಸಹಜವಾದ ಪ್ರಾಣಿಗಳಲ್ಲಿ ಸಸ್ಯಗಳಲ್ಲಿ ಕಂಡುಬರುವ ವ್ಯತ್ಯಾಸಗಳು ಬೇರೆ ಬೇರೆ ಬುಡಕಟ್ಟುಗಳಾಗಿ ಹೇಗೆ ವಿಂಗಡನೆಯಾಗುವವೋ ಅದೇ ರೀತಿ ಅತಿ ದೀರ್ಘಾವಧಿಯವರೆಗೆ ಹೊಸ ಹೊಸ ಜಾತಿಗಳು, ವರ್ಗಗಳು ಬೇರ್ಪಡುತ್ತಾ ಬಂದಿದೆ ಎಂದಿದ್ದಾರೆ.
  4. ಆಲ್ಫ್ರೆಡ್ ರಸೆಲ್ ವಾಲೆಸ್ ಜೀವ ವಿಕಾಸ ವೈವಿಧ್ಯಮಯವಾದದ್ದು. ವಿಸ್ಮಯವಾದುದು ವಿಕಾಸ ಹಂತಗಳು ಈ ಭೂಮಿಯ ಮೇಲೆ ಬಹು ರೋಚಕ ರೋಮಾಂಚಕ ಎಂದಿದ್ದಾರೆ.

ಭೂಮಿಯ ಮೇಲೆ ಕಂಡು ಬರಬಹುದಾದ ಜೀವ ವೈವಿಧ್ಯತೆಯಲ್ಲಿ ಬಿಲಿಯನ್‌ಗಟ್ಟಲೆ ವಿವಿಧ ಬಗೆಯ ಜೀವ ಪ್ರಭೇದಗಳಿವೆ. ಈ ಜೀವ ಪ್ರಭೇದಗಳು ಸುಮಾರು ನಾಲ್ಕು ಬಿಲಿಯನ್ ವರ್ಷಗಳಿಂದ ವಿಕಾಸ ಹೊಂದುತ್ತಾ ಬಂದಿವೆ. ಒಂದು ಅಂದಾಜಿನ ಪ್ರಕಾರ ಒಟ್ಟು ಜೀವಿಗಳ ಸಂಖ್ಯೆಯು ಸುಮಾರು ಏಳು ಬಿಲಿಯನ್ ಅಷ್ಟು ಇರಬಹುದಾಗಿದೆ. ಭೂಮಿಯ ಮೇಲಿನ ಒಟ್ಟು ಜೀವಿಗಳಲ್ಲಿ ಶೇಕಡ 70ರಷ್ಟು ಪ್ರಾಣಿಗಳಿವೆ. ಸಸ್ಯಗಳು 22% ರಷ್ಟು ಇವೆ. ಪ್ರಾಣಿ ಪ್ರಪಂಚದಲ್ಲಿ ಕೀಟಗಳೇ ಅತಿ ಹೆಚ್ಚಾಗಿವೆ. ಭಾರತ ಪ್ರಪಂಚದ 2.4 ರಷ್ಟು ಭೂಭಾಗವನ್ನು ಮಾತ್ರ ಹೊಂದಿದ್ದರೂ 7% ಪ್ರಭೇದಗಳನ್ನು, 17.5% ಜನಸಂಖ್ಯೆಯನ್ನು ಹಾಗೂ 92,000( 7.5%) ಪ್ರಾಣಿ ಪ್ರಭೇದಗಳನ್ನು ಹೊಂದಿದೆ. ಒಂದು ಅಂದಾಜಿನಂತೆ ಜೀವ ಪ್ರಭೇದಗಳ ಲೆಕ್ಕಾಚಾರ ಈ ಕೆಳಗಿನಂತಿವೆ.

ಕಸೇರುಕ ಪ್ರಾಣಿಗಳು ಆಕಸೇರುಕ ಪ್ರಾಣಿಗಳು ಸಸ್ಯಗಳು
1. ಸಸ್ತನಿಗಳು- 4170 ಕೀಟಗಳು-1000000  ಹೂ ಬಿಡುವ ಸಸ್ಯಗಳು- 250000
2.  ಪಕ್ಷಿಗಳು-  9020  ಸಂಧಿಪದಿಗಳು- 200000  ಹೂ ಬಿಡದ ಸಸ್ಯಗಳು- 130000
3. ಸರಿಸೃಪಗಳು- 5085  ಇತರೆ ಅಕಸೇರುಕಗಳು-200000  
4.  ಉಭಯವಾಸಿಗಳು- 3300 ಆಕಸೇರುಕ ಪ್ರಾಣಿಗಳು:  
5.  ಮೀನುಗಳು- 4100    

ಭೂಮಿಯ ಮೇಲೆ ಇಷ್ಟೆಲ್ಲಾ ಸಸ್ಯ, ಪ್ರಾಣಿ, ಪಕ್ಷಿ ಪ್ರಭೇದಗಳಿದ್ದರೂ ಅವೆಷ್ಟೋ ಇನ್ನೂ ಕಣ್ಣಿಗೆ ಕಾಣದಷ್ಟು ಪ್ರಭೇದಗಳು ಉಳಿದುಕೊಂಡಿವೆ. ಈ ಜೀವಿಗಳ ವಾಸಸ್ಥಾನಗಳು ಕಲ್ಪನೆಗೆ ಮೀರಿದ್ದಾಗಿವೆ. ಈ ಜೀವಿಗಳ ವಾಸ ಇಂದು ನಿನ್ನೆಯದಲ್ಲ. ಅದು ಕೋಟಿ ಕೋಟಿ ವರ್ಷಗಳ ನಿರಂತರವಾದ ಕ್ರಿಯೆಯಿಂದ ಆಗಿದ್ದಾಗಿದೆ. ಇಂತಹ ಜಟಿಲವಾದ ಪರಿಸರದಲ್ಲಿ ಕೆಲವು ಪ್ರಾಣಿ, ಪಕ್ಷಿಗಳು ತಮ್ಮ ಕೊಂಡಿಯನ್ನು ಕಳಚಿಕೊಂಡರೆ ಪರಿಸರದಲ್ಲಿ ತಕ್ಷಣವೇ ಅಸಮತೋಲನ ಕಂಡುಬರುತ್ತದೆ. ಮುಖ್ಯವಾಗಿ ಮಾನವನ ದುರಾಸೆಯಿಂದ ಪರಿಸರ ದಿನೇ ದಿನೇ ಅವನತಿಗೊಳ್ಳುತ್ತಿದ್ದು ಅದರೊಂದಿಗೆ ಜೀವಿಗಳು ಕಣ್ಮರೆಯಾಗುತ್ತಿರುವುದು ಅತ್ಯಂತ ಖೇದದ ಸಂಗತಿಯಾಗಿದೆ. ಈಗಾಗಲೇ ಅಮೆರಿಕ ಹಾಗೂ ಬ್ರೆಜಿಲ್ ಗಳಲ್ಲಿ ಮರಗಳನ್ನು ಕಡಿದು ಕದ್ದು ಮಾರುತ್ತಿರುವ ಜಾಲವೊಂದು ಪತ್ತೆಯಾಗಿದೆ.

ಇನ್ನು ಭಾರತದಲ್ಲಿ ಜಿಂಕೆ, ಹುಲಿ, ಚಿರತೆ, ಸಿಂಹ, ಆನೆ, ಕಾಡುಕೋಣ, ಕಾಡೆಮ್ಮೆ ಮುಂತಾದವುಗಳನ್ನು ಕೊಂದು ಅವುಗಳ ಚರ್ಮ, ದಂತ, ಮಾಂಸ, ಕೊಂಬುಗಳನ್ನು ಮಾರಾಟ ಮಾಡುವುದು ಸಾಮಾನ್ಯವಾಗಿದೆ. ಇವುಗಳಿಗೆ ತಡೆಯೊಡದಿದ್ದರೆ ಮುಂದಿನ ದಿನಗಳಲ್ಲಿ ಈ ಪ್ರಾಣಿಗಳನ್ನು ಚಿತ್ರಪಟಗಳಲ್ಲಿ ಕಾಣುವ ಸನ್ನಿವೇಶ ದೂರ ಉಳಿದಿಲ್ಲ ಎಂದು ಹೇಳಬಹುದು. ಇಂತಹ ಪರಿಸ್ಥಿತಿಯ ನಡುವೆ ಅನೇಕ ಜೀವಿಗಳು ಸಂತಾನೋತ್ಪತ್ತಿ ಮಾಡಿ ತಮ್ಮ ಸಂತತಿಗಳನ್ನು ಹೆಚ್ಚಿಸಿಕೊಳ್ಳುತ್ತಿವೆ. ಇನ್ನು ಕೆಲವು ಜೀವಿಗಳು ಸಂತಾನೋತ್ಪತ್ತಿ ಕ್ರಿಯೆಯಲ್ಲಿ ವಿಫಲಗೊಂಡು ಸಾಯುತ್ತಿವೆ. ಹೊಂದಾಣಿಕೆಯ ಅಥವಾ ಬಲಿಷ್ಠ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಯಶಸ್ವಿ ಆದರೆ ಹೊಂದಿಕೊಳ್ಳದ ಅಥವಾ ದುರ್ಬಲಗೊಂಡ ಜೀವಿಗಳು ಸಂತಾನೋತ್ಪತ್ತಿಯಲ್ಲಿ ಅಸಮರ್ಥಗೊಳ್ಳುತ್ತವೆ. ಹೀಗಾಗಿ ಪರಿಸರದಲ್ಲಿ ಏರುಪೇರು ಕಂಡುಬರುತ್ತದೆ.

ಉಪಸಂಹಾರ

ಜೀವ ವೈವಿಧ್ಯವು ಭೂಮಿಯ ಜೀವಂತಿಕೆಯ ಮೂಲವಾಗಿದ್ದು, ಅದರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಾನವನ ಅಜಾಗರೂಕತೆ, ಅರಣ್ಯ ನಾಶ ಮತ್ತು ಅಕ್ರಮ ಬೇಟೆಯಿಂದ ಅನೇಕ ಜೀವ ಪ್ರಭೇದಗಳು ನಾಶದ ಅಂಚಿಗೆ ತಲುಪಿವೆ. ಪರಿಸರದ ಸಮತೋಲನ ಕಾಪಾಡಲು ಸಸ್ಯ, ಪ್ರಾಣಿ ಮತ್ತು ಅವುಗಳ ವಾಸಸ್ಥಾನಗಳನ್ನು ರಕ್ಷಿಸುವುದು ಅತ್ಯಂತ ಅಗತ್ಯ. ಜೀವ ವೈವಿಧ್ಯ ಉಳಿದರೆ ಮಾತ್ರ ಭವಿಷ್ಯದ ಪೀಳಿಗೆಗೆ ಸುರಕ್ಷಿತ ಮತ್ತು ಸುಂದರವಾದ ಭೂಮಿಯನ್ನು ನೀಡಲು ಸಾಧ್ಯ. ಆದ್ದರಿಂದ ಸಂರಕ್ಷಣೆಯತ್ತ ಜಾಗೃತಿಯಿಂದ ಹೆಜ್ಜೆ ಇಡುವುದು ನಮ್ಮ ಕರ್ತವ್ಯವಾಗಿದೆ

ಶಕ್ತಿ ಸಂಪನ್ಮೂಲಗಳ ವರ್ಗೀಕರಣ

ಶಕ್ತಿ ಸಂಪನ್ಮೂಲಗಳ ವರ್ಗೀಕರಣ

ಒಂದು ಕಾರ್ಯವನ್ನು ನಿರ್ವಹಿಸಲು ಬಳಸುವ ಸಾಮರ್ಥ್ಯವನ್ನು ಶಕ್ತಿ ಎಂದು ಕರೆಯಬಹುದು. ಅಥವಾ ಶಕ್ತಿಯನ್ನು ಉತ್ಪಾದಿಸಲು ಬಳಸುವ ನೈಸರ್ಗಿಕ ಮೂಲವನ್ನು ಶಕ್ತಿ ಸಂಪನ್ಮೂಲಗಳು ಎಂದು ಹೆಸರು. ಮಾನವನು ನಿರ್ವಹಿಸುವ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಶಕ್ತಿಯು ಪ್ರಧಾನವಾದ ಪಾತ್ರ ವಹಿಸುತ್ತದೆ. ಈ ಶಕ್ತಿಯು ಹಲವು ಮೂಲಗಳಿಂದ ದೊರೆಯುತ್ತದೆ. ಅವುಗಳನ್ನೇ ಶಕ್ತಿ ಸಂಪನ್ಮೂಲಗಳು ಎಂದು ಕರೆಯಬಹುದು. ಕಲ್ಲಿದ್ದಲು, ನೀರು, ಗಾಳಿ, ಖನಿಜ, ತೈಲ, ಜೈವಿಕ ಅನಿಲ, ವಿದ್ಯುತ್ ಶಕ್ತಿ, ಸೌರ ಶಕ್ತಿ ಹಾಗೂ ಪವನ ಶಕ್ತಿ ಮುಂತಾದವುಗಳು ಪ್ರಮುಖ ಶಕ್ತಿ ಸಂಪನ್ಮೂಲಗಳಾಗಿವೆ. ಒಂದು ದೇಶದ ಪ್ರಗತಿ ನಿಂತಿರುವುದು ಆ ದೇಶದ ಶಕ್ತಿ ಸಂಪನ್ಮೂಲಗಳನ್ನು ಅವಲಂಬಿಸಿದೆ. ಇಂದಿನ ನಮ್ಮ ಆಧುನಿಕ ಜೀವನದಲ್ಲಿ ಶಕ್ತಿಯ ಪಾತ್ರ ತುಂಬಾ ಪ್ರಾಮುಖ್ಯತೆಯನ್ನು ಪಡೆದಿದೆ.

ಶಕ್ತಿ ಸಂಪನ್ಮೂಲಗಳ ವರ್ಗೀಕರಣ: (Classification of energy resources)

ಶಕ್ತಿ ಸಂಪನ್ಮೂಲಗಳನ್ನು ಪ್ರಮುಖವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ.

  1. ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು
  2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು

1. ನವೀಕರಿಸಬಹುದಾದ ಅಥವಾ ಮುಗಿದು ಹೋಗದ ಶಕ್ತಿ ಸಂಪನ್ಮೂಲಗಳು:(Renewable energy resources)

ʻʻಕೆಲವು ಸಂಪನ್ಮೂಲಗಳನ್ನು ಬಳಕೆ ಮಾಡಿದಂತೆಲ್ಲ ನವೀಕರಣ ಹೊಂದುತ್ತವೆ. ಹೀಗಾಗಿ ಇವುಗಳನ್ನು ಮುಗಿದು ಹೋಗದ ಸಂಪನ್ಮೂಲಗಳು ಎಂದು ಕರೆಯುತ್ತಾರೆ.ʼʼ ಈ ಸಂಪನ್ಮೂಲಗಳು ನಿಸರ್ಗದಲ್ಲಿ ಅವ್ಯಾಹತವಾಗಿ ದೊರಕುವುದರಿಂದ ಅವುಗಳನ್ನು ನಿರಂತರವಾಗಿ ಬಳಸಿಕೊಳ್ಳಬಹುದಾಗಿದೆ.

ಉದಾ: ಸೌರಶಕ್ತಿ, ಗಾಳಿ ಶಕ್ತಿ, ಜಲ ವಿದ್ಯುತ್, ಜೈವಿಕ ಅನಿಲ, ಅಣು ಶಕ್ತಿ, ಸಮುದ್ರದ ಅಲೆಗಳು ಮುಂತಾದವುಗಳು ಮುಗಿದು ಹೋಗದಿರುವ ಸಂಪನ್ಮೂಲಗಳಾಗಿವೆ.

2. ನವೀಕರಿಸಲಾಗದ ಅಥವಾ ಮುಗಿದು ಹೋಗುವ ಶಕ್ತಿ ಸಂಪನ್ಮೂಲಗಳು: (Non renewable resources)

ಯಾವ ಶಕ್ತಿ ಸಂಪನ್ಮೂಲಗಳನ್ನು ಪುನರ್ ಬಳಕೆ ಮಾಡಲು ಸಾಧ್ಯವಾಗುವುದಿಲ್ಲವೋ ಅವುಗಳನ್ನು ನವೀಕರಿಸಲಾಗದ ಅಥವಾ ಮುಗಿದುಹೋಗುವ ಶಕ್ತಿ ಸಂಪನ್ಮೂಲಗಳು ಎಂದು ಕರೆಯುತ್ತಾರೆ. ಉದಾ: ಪೆಟ್ರೋಲಿಯಂ, ನೈಸರ್ಗಿಕ ಅನಿಲ ಮೊದಲಾದವುಗಳು.