ಭಾರತದ ಆರ್ಥಿಕ ಬೆಳವಣಿಗೆ ಉದ್ಯೋಗ ಸೃಷ್ಟಿ, ನೀರಾವರಿ, ವಿದ್ಯುತ್ ಹಾಗೂ ಕೃಷಿ ಅಭಿವೃದ್ಧಿಗಾಗಿ ಭಾರತ ಸರ್ಕಾರವು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿತು. ಈ ಯೋಜನೆಯು 1951ರಲ್ಲಿ ಆರಂಭವಾಯಿತು. ಅಂದಿನಿಂದ ಪ್ರವಾಸೋದ್ಯಮಕ್ಕೂ ಸಹ ಸೂಕ್ತ ಗಮನವನ್ನು ಸರ್ಕಾರ ನೀಡಿತು.

 1. ಮೊದಲನೇ ಪಂಚವಾರ್ಷಿಕ ಯೋಜನೆ (1951-1956)

1951ರಲ್ಲಿ ಜಾರಿಗೆ ಬಂದ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮವು ಸಾರಿಗೆ ಸಚಿವಾಲಯದ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು ಅದರಡಿಯಲ್ಲಿ ಪ್ರವಾಸೋದ್ಯಮ ವಿಭಾಗವನ್ನು ಸ್ಥಾಪಿಸಲಾಯಿತು. ಈ ಯೋಜನೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪ್ರವಾಸಿ ಸೌಲಭ್ಯಗಳ ಸೀಮಿತ ಕಲ್ಪನೆಗೆ ಒತ್ತು ನೀಡಲಾಯಿತು.

2. ಎರಡನೇ ಪಂಚವಾರ್ಷಿಕ ಯೋಜನೆ (1956-1961)

ಈ ಯೋಜನೆಯಲ್ಲಿ ದೇಶದ ವಿವಿಧ ಇಲಾಖೆಗಳಿಗೆ ಮೀಸಲಾಗಿಟ್ಟ ಹಣದ ಜೊತೆಗೆ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 3,36,00,000 ರೂಗಳನ್ನು ಮೀಸಲಾಗಿಡಲಾಯಿತು. ಈ ಹಣದಿಂದ ವಿದೇಶಿ ಪ್ರವಾಸಿಗರ ವಸತಿಗಾಗಿ ತಂಗುದಾಣಗಳು, ಪ್ರವಾಸಿ ಕೇಂದ್ರಗಳಲ್ಲಿ ಉತ್ತಮ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಸ್ಥಳಿಯ ಪ್ರವಾಸಿಗರಿಗಾಗಿ ಯಾತ್ರಿ ನಿವಾಸಗಳನ್ನು ಸ್ಥಾಪಿಸುವುದು ಮುಂತಾದ ಗುರಿಗಳನ್ನು ಹೊಂದಲಾಗಿತ್ತು. ಅದರಂತೆ ಔರಂಗಬಾದ್, ಆಗ್ರಾ, ವಾರಣಾಸಿ, ಜಮ್ಮು ಹಾಗೂ ಕಾಶ್ಮೀರದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಗೊಳಿಸಲಾಯಿತು.

 3. ಮೂರನೇ ಪಂಚವಾರ್ಷಿಕ ಯೋಜನೆ (1961-1966)

ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಭಾರತ ಸರ್ಕಾರವು ಪ್ರವಾಸೋದ್ಯಮದ ಅಭಿವೃದ್ಧಿಗಾಗಿ 510.45 ಲಕ್ಷ ರೂಗಳನ್ನು ಖರ್ಚು ಮಾಡಿತು. ಗಯಾ, ಖಜುರಾಹೋ, ಭುವನೇಶ್ವರ, ಕೊನಾರ್ಕ್‌, ಕಂಚಿ, ಮಧುರೈ, ಸಾಂಚಿ, ತಿರುಚನಾಪಲ್ಲಿ ಹಾಗೂ ಮಹಾಬಲಿಪುರಂಗಳನ್ನು ಅಭಿವೃದ್ಧಿಪಡಿಸಲಾಯಿತು. 1966 ರಿಂದ 1969ರ ವರೆಗೆ 3 ವಾರ್ಷಿಕ ಯೋಜನೆಗಳು ಜಾರಿಯಲ್ಲಿದ್ದವು.

ಈ ಅವಧಿಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಕ್ರಮವಾಗಿ 28.41 ಲಕ್ಷ (1966), 42.66 ಲಕ್ಷ (1968), 67.06 ಲಕ್ಷ (1969) ರೂಗಳನ್ನು ಖರ್ಚು ಮಾಡಲಾಯಿತು. ಈ ಅವಧಿಯಲ್ಲಿ ಕಾಜೀರಂಗ, ಬಂಡಿಪುರ, ಘಿರ್‌, ಮಧುಮಾಲ, ಪೆರಿಯಾರ್ ಹಾಗೂ ತೊಡಬಾ ವನ್ಯಜೀವಿಧಾಮಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಯಿತು.

ದೆಹಲಿ, ಆಗ್ರಾ, ಗಂಗಾ ಕಣಿವೆ, ಅಜಂತ ಗುಹೆಗಳು, ತಮಿಳುನಾಡಿನ ದೇವಾಲಯಗಳು, ಹೈದ್ರಾಬಾದ್ ಸ್ಮಾರಕಗಳು, ಒರಿಸ್ಸಾ ದೇವಾಲಯಗಳು, ಹೈದ್ರಾಬಾದ್ ಸ್ಮಾರಕಗಳು, ಓರಿಸ್ಸಾ ದೇವಾಲಯಗಳು, ಮೈಸೂರು, ಮಧ್ಯಪ್ರದೇಶ, ರಾಜಸ್ತಾನ್, ಇಂಡಸ್ ಕಣಿವೆಗಳು, ಗೋವಾ ಹಾಗೂ ಕೇರಳ ಸ್ಮಾರಕಗಳ ವೈವಿಧ್ಯತೆಯನ್ನು ಗುರುತಿಸಲಾಯಿತು.

4. ನಾಲ್ಕನೇ ಪಂಚವಾರ್ಷಿಕ ಯೋಜನೆ (1969-1974)

ನಾಲ್ಕನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮದ ಮೂಲಸೌಕರ್ಯ, ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯಗಳಿಗೆ ಹಾಗೂ ಬೀಚ್, ರೆಸಾರ್ಟ್, ಸಾಂಸ್ಕೃತಿಕ ಪರಂಪರೆ ಹಾಗೂ ಸಾಹಸ ಪ್ರವಾಸ ಉದ್ಯಮಕ್ಕೆ ಒತ್ತು ನೀಡಲಾಯಿತು. ಇದರೊಂದಿಗೆ ನಲಂದಾ, ಅಜಂತಾ, ಎಲ್ಲೋರ ಹಾಗೂ ಸಾಂಚಿಗಳಲ್ಲಿ ವಸತಿ, ಪ್ರವಾಸಿ ಬಂಗಲೆಗಳ ದುರಸ್ತಿ, ತೆರಿಗೆ ರಹಿತ ಅಂಗಡಿಗಳ ಅಭಿವೃದ್ಧಿಗೆ ಆದ್ಯತೆ ಕಲ್ಪಿಸಲಾಯಿತು. ಸುಮಾರು 25 ಕೋಟಿ ರೂಗಳನ್ನು ಖರ್ಚು ಮಾಡಿ ಹೋಟೆಲ್‌ಗಳನ್ನು ನಿರ್ಮಿಸಲಾಯಿತು. ಸಮುದ್ರ ತೀರ ಪ್ರದೇಶಗಳಲ್ಲಿ 17 ಯೂತ್‌ ಹಾಸ್ಟೆಲ್‌ಗಳು, ರೆಸಾರ್ಟ್‌ಗಳನ್ನು ನಿರ್ಮಾಣ ಮಾಡಲಾಯಿತು. ಇದಕ್ಕಾಗಿ 360 ಲಕ್ಷರೂಪಾಯಿಗಳನ್ನು ಬಳಕೆ ಮಾಡಿಕೊಳ್ಳಲಾಯಿತು. ಇದೇ ಸಮಯದಲ್ಲಿ ಕೇರಳದ ಕೋವಲಂ ಬೀಚ್‌ನ್ನು ಅಭಿವೃದ್ಧಿಗೊಳಿಸಲಾಯಿತು.

5. ಐದನೇ ಪಂಚವಾರ್ಷಿಕ ಯೋಜನೆ (1974-1979)

ಭಾರತ ಸರ್ಕಾರವು ಪ್ರವಾಸೋದ್ಯಮ ಇಲಾಖೆಗೆ 44 ಕೋಟಿ ಹಾಗೂ ITDC ಗೆ 34 ಕೋಟಿ ಒಟ್ಟು 78 ಕೋಟಿ ರೂಪಾಯಿಗಳನ್ನು ಒದಗಿಸಿತು. ಈ ವೇಳೆಯಲ್ಲಿ ಮಹಾಬಲಿಪುರಂ, ಕೋವಲಂ ಬೀಚ್‌, ರೆಸಾರ್ಟ್ ವಿಂಟರ್ ಸ್ಟೋರ್ಟ್‌ ರೆಸಾರ್ಟ್ (ಶ್ರೀನಗರ) ಗೋವಾ ಬೀಚ್, ಕುಲು-ಮನಾಲಿ ರೆಸಾರ್ಟ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ವಿಶ್ವಸಂಸ್ಥೆಯ ಅಧ್ಯಯನ ತಂಡದ ಶಿಫಾರಸ್ಸಿನಂತೆ ಕೋವಲಂ ಬೀಚ್‌ನಲ್ಲಿ 1700 ಕೊಠಡಿಗಳ ಒಂದು ವಸತಿಗೃಹವನ್ನು ನಿರ್ಮಾಣ ಮಾಡಲಾಯಿತು. ಅದೇ ರೀತಿ ಭಾರತದ ವಿವಿಧ ಪ್ರದೇಶಗಳಲ್ಲಿ ಯೂತ್ ಹಾಸ್ಟೆಲ್‌ಗಳು ಹಾಗೂ ಪ್ರವಾಸಿ ಬಂಗಲೆಗಳನ್ನು ನಿರ್ಮಿಸಲಾಯಿತು. ಇದರೊಂದಿಗೆ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೋನಾರ್ಕ್‌, ಖಜರಾಹೋ, ಆಗ್ರಾ, ಬೋಧಗಯಾ, ಫತೇಪುರ ಸಿಕ್ರಿ, ಹಂಪಿ, ರಾಜಗೃಹ, ಕುಸಿನಗರ, ಸಾರನಾಥ ಹಾಗೂ ಶ್ರಾವಸ್ತಿಗಳನ್ನು ಅಭಿವೃದ್ಧಿಪಡಿಸಲಾಯಿತು.

6. 6ನೇ ಪಂಚ ವಾರ್ಷಿಕ ಯೋಜನೆ (1980 1985)

ಆರನೇ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಕೇವಲ 187 ಕೋಟಿ ರೂಗಳ ಅಲ್ಪಮೊತ್ತವನ್ನು ಮೀಸಲಿಡಲಾಯಿತು. ಈ ಅವಧಿಯಲ್ಲಿ ವಿದೇಶಿ ಪ್ರವಾಸಿಗರು ಸುಮಾರು 35 ಲಕ್ಷದಷ್ಟು ಬರಬಹುದು ಎಂದು ಅಂದಾಜಿಸಲಾಗಿತ್ತು. 1980- 85 ಅವಧಿಯಲ್ಲಿ 441 ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳನ್ನು 61 ಪ್ರವಾಸಿ ವೃತ್ತಗಳಾಗಿ ವಿಭಜಿಸಲಾಯಿತು. ಅವುಗಳಲ್ಲಿ 40ನ್ನು ಅಭಿವೃದ್ದಿಪಡಿಸಲಾಯಿತು.  1985ರಲ್ಲಿ ಪ್ರವಾಸೋದ್ಯಮವನ್ನು ಒಂದು ಉದ್ದಿಮೆಯಾಗಿ ಪರಿಗಣಿಸಲಾಯಿತು. 1982ರಲ್ಲಿ ಹೊಸ ಪ್ರವಾಸೋದ್ಯಮ ನೀತಿಯನ್ನು ಪ್ರಕಟಿಸಲಾಯಿತು. ಈ ಸಂದರ್ಭದಲ್ಲಿ ಟೂರಿಸ್ಟ್ ಲಾಡ್ಜ್‌ ಹಾಗೂ ಯಾತ್ರಿ ನಿವಾಸಗಳನ್ನು ಸ್ಥಾಪಿಸಲಾಯಿತು.

7. 7ನೇ ಪಂಚವಾರ್ಷಿಕ ಯೋಜನೆ (1985-1990)

7ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಪ್ರವಾಸೋದ್ಯಮವು ಒಂದು ಉದ್ದಿಮೆ ಎಂದು ಪರಿಗಣಿಸಲಾಯಿತು. ಅಂದಿನ ಪ್ರಧಾನಿ ರಾಜೀವ್‌ಗಾಂಧಿಯವರು 125 ಕೋಟಿ ರೂಗಳನ್ನು ಪ್ರವಾಸೋದ್ಯಮ ಬೆಳವಣಿಗೆಗೆ ಮೀಸಲಾಗಿರಿಸಿದರು. ಈ ಅವಧಿಯಲ್ಲಿ ದೇಶದ 15 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಪ್ರವಾಸೋದ್ಯಮವನ್ನು ಒಂದು ಉದ್ದಿಮೆ ಎಂದು ಸಾರಿದವು.

8. ಎಂಟನೇ ಪಂಚವಾರ್ಷಿಕ ಯೋಜನೆ (1990-1995)

ಈ ಯೋಜನೆಯಲ್ಲಿ ಭಾರತ ಸರ್ಕಾರವು ಪ್ರವಾಸೋದ್ಯಮ ಇಲಾಖೆಗೆ 272 ಕೋಟಿ ರೂಗಳನ್ನು ಮೀಸಲಾಗಿರಿಸಿತು. ಇದರಲ್ಲಿ ಬೌದ್ಧಯಾತ್ರ ಸ್ಥಳಗಳ ಅಭಿವೃದ್ಧಿಗಾಗಿ 100 ಕೋಟಿ ರೂಗಳನ್ನು ನೀಡಲಾಯಿತು. 1991ರಲ್ಲಿ ಬೀಚುಗಳ ಪರಿಸರ ರಕ್ಷಣೆಗೆ ZONE  ಮಾಡಲಾಯಿತು. 1992ರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಜಾರಿಗೆ ತರಲಾಯಿತು. ಇದೇ ಸಂದರ್ಭದಲ್ಲಿ 37 ಸಾವಿರ ಹೋಟೆಲ್ ಕೊಠಡಿಗಳು ನಿರ್ಮಾಣವಾದವು. 1991ರಲ್ಲಿ ಭಾರತಕ್ಕೆ 1.78 ಮಿಲಿಯನ್ ವಿದೇಶಿ ಪ್ರವಾಸಿಗರು ಆಗಮಿಸಿದರೆ 1992ರಲ್ಲಿ ಅದು 2.35 ಮಿಲಿಯನ್‌ಗೆ ಏರಿತು. 1992ರ ಅವಧಿಯಲ್ಲಿ ವಿದೇಶಿ ವಿನಿಮಯಗಳಿಕೆ 4093 ಕೋಟಿ ಆದರೆ 1997 ಅದು 10,117 ಕೋಟಿಗೆ ಏರಿತು. ಗೋವಾದಲ್ಲಿ ಸುಮಾರು 5 ಕೋಟಿ ರೂ ವೆಚ್ಚದ ವಾಟರ್ ಸ್ಪೋರ್ಟ್ಸ್‌ನ್ನು ನಿರ್ಮಿಸಲಾಯಿತು. 1995 ರಿಂದ 96ರ ವೇಳೆಗೆ ಪ್ರವಾಸೋದ್ಯಮವು 8.5 ಮಿಲಿಯನ್ ಜನರಿಗೆ ಉದ್ಯೋಗವನ್ನು ನೀಡಿತು.

9. 9ನೇ ಪಂಚವಾರ್ಷಿಕ ಯೋಜನೆ (1997-2002)

ಪ್ರವಾಸೋದ್ಯಮದ ಬೆಳವಣಿಗೆಗಾಗಿ ಈ ಯೋಜನೆಯಲ್ಲಿ ಸುಮಾರು 1000 ಕೋಟಿ ರೂಪಾಯಿಗಳನ್ನು ತೆಗೆದಿರಿಸಲಾಯಿತು. ಈ ಹಣವನ್ನು ವಿಮಾನ, ರೈಲು ಹಾಗೂ ರಸ್ತೆಗಳ ನಿರ್ಮಾಣಕ್ಕಾಗಿ ಖರ್ಚು ಮಾಡಲಾಯಿತು. ಹೋಟೆಲ್ ಸಿಬ್ಬಂದಿ, ಪ್ರವಾಸಿ ನಿರ್ವಾಹಕರು ಹಾಗೂ ಮಾರ್ಗದರ್ಶಿ ತರಬೇತಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಲಾಯಿತು. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರವಾಸಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಖಾಸಗಿ ಕಾಲೇಜುಗಳಿಗೆ ತರಬೇತಿ ಕೋರ್ಸ್‌ಗಳನ್ನು ತೆರೆಯಲು ಅನುಮತಿ ನೀಡಲಾಯಿತು.

10. 10ನೇ ಪಂಚವಾರ್ಷಿಕ ಯೋಜನೆ (2002-2007)

ಈ ಯೋಜನೆಯಲ್ಲಿ ಪ್ರವಾಸೋದ್ಯಮಕ್ಕೆ 830 ಕೋಟಿ ರೂಗಳನ್ನು ಖರ್ಚು ಮಾಡಲು ತೀರ್ಮಾನಿಸಲಾಯಿತು. ಈ ಅವಧಿಯಲ್ಲಿ ಪ್ರವಾಸೋದ್ಯಮವನ್ನು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ವಿದೇಶಿ ವಿನಿಮಯ ಗಳಿಕೆಯ ಮೂಲವಾಗಿ ಪ್ರೋತ್ಸಾಹಿಸಲಾಯಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ನೆಚ್ಚಿನ ತಾಣವಾಗಿ ಬಿಂಬಿಸಲು ಮಾರ್ಕೆಟಿಂಗ್ ತಂತ್ರವನ್ನು ಅಳವಡಿಸಲಾಯಿತು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಸುಧಾರಿಸಲು ಹೂಡಿಕೆಗಳನ್ನು ಆಕರ್ಷಿಸಲು ಪ್ರಯತ್ನಿಸಲಾಯಿತು. ಇಂಟರ್ನೆಟ್ ಹಾಗೂ ಹೊಸ ತಂತ್ರಜ್ಞಾನಗಳನ್ನು ಬಳಸಿ ವಿವಿಧ ಪ್ರವಾಸಿ ತಾಣಗಳನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಲಾಯಿತು.

11. 11ನೇ ಪಂಚವಾರ್ಷಿಕ ಯೋಜನೆ (2007-2012)

ಈ ಯೋಜನೆಯಲ್ಲಿ ಪ್ರವಾಸಿ ತಾಣಗಳು ಮೂಲಸೌಕರ್ಯಗಳನ್ನು ಹೆಚ್ಚಿಸಲು ಸರ್ಕಾರ ಗಮನಹರಿಸಿತು. ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹಣ ತೊಡಗಿಸಲು ಪ್ರೋತ್ಸಾಹ ನೀಡಲಾಯಿತು. ಪ್ರವಾಸೋದ್ಯಮವನ್ನು ಉದ್ಯೋಗ ಸೃಷ್ಟಿಯ ಮೂಲ ಎಂದು ಪರಿಗಣಿಸಲಾಯಿತು. ಹಂಪಿ, ಬಾದಾಮಿ, ಮೈಸೂರು ಸುತ್ತಮುತ್ತ ಐತಿಹಾಸಿಕ ತಾಣಗಳ ಮೂಲ ಸೌಕರ್ಯವನ್ನು ಹೆಚ್ಚಿಸಲಾಯಿತು. ಪರಿಸರಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಯಿತು.

12. 12ನೇ ಪಂಚ ವಾರ್ಷಿಕ ಯೋಜನೆ (2012-2017)

ಈ ಯೋಜನೆಯಲ್ಲಿ ಪ್ರವಾಸೋದ್ಯಮಕ್ಕೆ 16,000 ಕೋಟಿ ಹಣವನ್ನು ಮೀಸಲಿಡಲಾಯಿತು. ಪ್ರವಾಸಿ ಸ್ಥಳಗಳಲ್ಲಿ ಮೂಲಸೌಕರ್ಯವನ್ನು ಒದಗಿಸುವುದು ಮತ್ತು ಸುಸ್ಥಿರ ಪ್ರವಾಸ ಉದ್ಯಮವನ್ನು ಉತ್ತೇಜಿಸುವುದು, ಬೌದ್ಧ-ಜೈನ-ಸಿಕ್ ಹಾಗೂ ಸೂಫಿ ಪ್ರವಾಸೋದ್ಯಮದಂತಹ ಧಾರ್ಮಿಕ ಸ್ಥಳಗಳ ಅಭಿವೃದ್ಧಿಗೆ ಗಮನಹರಿಸುವುದು ಗ್ರಾಮೀಣ ಪ್ರವಾಸೋದ್ಯಮವನ್ನು ಬೆಳೆಸುವುದು ಹಾಗೂ ಹೊಸ ಮಾರುಕಟ್ಟೆಗಳನ್ನು ತೆರೆಯುವುದು ಈ ಯೋಜನೆಯ ಮೂಲ ಗುರಿಯಾಗಿತ್ತು.

13. ನೀತಿ ಆಯೋಗ (2015 ರಿಂದ)

12ನೇ ಪಂಚವಾರ್ಷಿಕ ಯೋಜನೆಯೇ ಕೊನೆಯದಾಗಿದ್ದು ಅದರ ಬದಲಿಗೆ 2015ರಿಂದ ನೀತಿ ಆಯೋಗ ಜಾರಿಯಲ್ಲಿದೆ.  ಬದಲಾಗಿ ಕೇಂದ್ರ ಸರ್ಕಾರ ದೀರ್ಘಕಾಲಿಕ ಅಭಿವೃದ್ಧಿ ತಂತ್ರಗಳು 3 ವರ್ಷ ಕ್ರಿಯಾಯೋಜನೆ ಹಾಗೂ 7 ವರ್ಷಗಳ ಕಾರ್ಯತಂತ್ರದ ದಾಖಲೆಯನ್ನು ಬಳಸುತ್ತಿದೆ. 2017ರ ನಂತರ 5 ವರ್ಷಗಳ ಯೋಜನೆಯ ಬದಲಿಗೆ 15 ವರ್ಷಗಳ ದೃಷ್ಟಿಕೋನ ದಾಖಲೆ ಹಾಗೂ ನೀತಿ ಆಯೋಗದ ಮೂಲಕ ಕಾರ್ಯತಂತ್ರ ರೂಪಿಸಲಾಗುತ್ತಿದೆ. ಇದರಲ್ಲಿ ಭಾರತದ ಪ್ರವಾಸೋದ್ಯಮದ ಬೆಳವಣಿಗೆ, ಸಾಂಸ್ಕೃತಿಕ ಪರಂಪರೆಯ ರಕ್ಷಣೆ ಹಾಗೂ ಸ್ಮಾರಕಗಳ ರಕ್ಷಣೆಯ ಹೊಣೆಯನ್ನು ಹೊಂದಲಾಗಿದೆ.