ಆರಂಭಿಕ ಜೀವನ
ಸಿಂಹಾಸನಕ್ಕೆ ಆರೋಹಣ
ಪ್ರಾಚೀನ ಭಾರತದಲ್ಲಿ ಆಳ್ವಿಕೆ ನಡೆಸಿದ ಸರ್ವಶ್ರೇಷ್ಟ ಸಾಮ್ರಾಟರಲ್ಲಿ ಅಶೋಕ ಮಹಾಶಯ ಪ್ರಮುಖ. ಈತನನ್ನು ಭಾರತದ ಘನವಂತ ದೊರೆಯೆಂದೇ ಗುರುತಿಸಲಾಗಿದೆ. ವೀರಯೋಧನು ದಿಗ್ವಿಜಯಶಾಲಿಯೂ, ದಕ್ಷ ಆಡಳಿತಗಾರನೂ, ಶಾಸನಗಳ ಆದ್ಯಪ್ರವರ್ತಕನೂ, ಪ್ರಜಾಹಿತಾಕಾಂಕ್ಷಿ ದೊರೆಯೂ ಆದ ಅಶೋಕ ಮಹಾಶಯನ ವ್ಯಕ್ತಿತ್ವ ವಿಶ್ವದ ಚರಿತ್ರೆಯಲ್ಲಿ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ.
ಅಶೋಕ ಬಿಂದುಸಾರನ ಮಗ, ಚಂದ್ರಗುಪ್ತ ಮೌರ್ಯನ ಮೊಮ್ಮಗ, ಅಶೋಕನ ತಾಯಿಯ ಹೆಸರು ʻದುಮ್ಮಾ’. ಬೌದ್ಧ ಧರ್ಮಗ್ರಂಥಗಳ ಪ್ರಕಾರ ಬಿಂದುಸಾರನಿಗೆ 16 ಜನ ಹೆಂಡತಿಯರಿದ್ದರು. ಅವರಿಗೆ 101 ಜನ ಮಕ್ಕಳು ಜನಿಸಿದರು. ಇವರಲ್ಲಿ ಸುಶೀಮ ಹಿರಿಯಮಗ, ಅಶೋಕ ಎರಡನೇ ಮಗ. ಬಾಲ್ಯದಲ್ಲಿ ಪ್ರತಿಭಾವಂತನಾಗಿದ್ದ ಅಶೋಕನು ತನ್ನ 16ನೇ ವಯಸ್ಸಿನಲ್ಲಿ ಉಜ್ಜಯನಿ ಹಾಗೂ ತಕ್ಷಶಿಲಾ ರಾಜ್ಯಗಳ ರಾಜ್ಯಪಾಲನಾಗಿ ಆಡಳಿತದ ಅನುಭವವನ್ನು ಪಡೆದುಕೊಂಡನು. ಉಜ್ಜಯನಿಯಲ್ಲಿರುವಾಗ ಅಶೋಕ “ಮಹಾದೇವಿ” ಎಂಬ ಕನ್ಯೆಯೊಂದಿಗೆ ವಿವಾಹವಾದನು. ಅವರಿಗೆ ಸಂಗಮಿತ್ರೆ ಹಾಗೂ ಮಹೇಂದ್ರ ಎಂಬ ಇಬ್ಬರು ಮಕ್ಕಳಿದ್ದರು.
ತಂದೆಯ ಮರಣದ ನಂತರ ಅಶೋಕ ನಾಲ್ಕು ವರ್ಷ ತಡವಾಗಿ ಅಂದರೆ ಸಾ.ಶ. ಪೂ. 269ರಲ್ಲಿ ಪಟ್ಟಕ್ಕೆ ಬಂದನು. ಈ ಅವಧಿಯಲ್ಲಿ ಅಶೋಕನು ತನ್ನ ಸಹೋದರರ ಜೊತೆಗೆ ಸಿಂಹಾಸನಕ್ಕಾಗಿ ಹೋರಾಟ ಮಾಡಿರಬೇಕು. ಅಶೋಕನ ಆರಂಭಿಕ ಜೀವನದ ಬಗ್ಗೆ ವಿವರ ನೀಡುವ ದೀಪವಂಶ, ಮಹಾವಂಶ ಮತ್ತು ಸಿಲೋನಿನ ವೃತ್ತಾಂತಗಳು ಅಶೋಕನು ತನ್ನ 99 ಮಂದಿ ಸಹೋದರರನ್ನು ಸಂಹರಿಸಿ ಸಿಂಹಾಸನಕ್ಕೆ ಬಂದನೆಂದು, ಆರಂಭದಲ್ಲಿ ಕ್ರೂರಿಯು ಮತ್ತು ಚಂಡಾಲ ಅಶೋಕನಾಗಿದ್ದನೆಂದು ತಿಳಿದುಬರುತ್ತದೆ. ಬೌದ್ಧಮತಾವಲಂಬಿಯಾದ ನಂತರ ಧರ್ಮಾಶೋಕನಾಗಿ ಮಾರ್ಪಟ್ಟನು. ಇಂತಹ ಅಂಶಗಳು ‘ಅರ್ಥವಿಲ್ಲದ ಕಗ್ಗ’ವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಬಿಂದುಸಾರನ ಮರಣಾನಂತರ ಸಿಂಹಾಸನಕ್ಕಾಗಿ ನಡೆದ ದಾಯಾದಿ ಕಲಹದಿಂದ ಬಹುಶಃ ನಾಲ್ಕು ವರ್ಷಗಳ ಕಾಲ ಅಶೋಕನ ಸಿಂಹಾಸನಾರೋಹಣ ತಡವಾಗಿರಬೇಕೆಂದು ಅಭಿಪ್ರಾಯಪಡಲಾಗಿದೆ. ಆದರೆ ಅಶೋಕನ ಮಲ ಸಹೋದರನಾದ ಸುಸೀಮನ ಪ್ರತಿಭಟನೆ, ಅಶೋಕನ ಸಿಂಹಾಸನಾರೋಹಣವನ್ನು 4ವರ್ಷಗಳ ಕಾಲ ಮುಂದೂಡಿತೇ ವಿನಃ ರಕ್ತಮಯ ವಾತಾವರಣ ಕಾರಣವಲ್ಲವೆಂದು ವಿ.ಎ.ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ. ಡಾ|ಆರ್.ಸಿ.ಮಜುಂದಾರ್ ಅಶೋಕನನ್ನು ‘ಚಂಡಾ ಅಶೋಕ’ನೆಂದು ಕರೆಯುವುದು ಸತ್ಯಾಂಶಕ್ಕೆ ದೂರವಾದ ಸಂಗತಿ ಎಂದು ತಿಳಿಸಿದ್ದಾರೆ. ಡಾ. ಜಯಸ್ವಾಲ್ ರವರ ಪ್ರಕಾರ ಪಟ್ಟಾಭಿಷೇಕದ ಕಾಲಕ್ಕೆ ಅಶೋಕನಿಗೆ 21 ವರ್ಷಗಳಾಗಿದ್ದು ವೈದಿಕ ಸಂಪ್ರದಾಯದ ಪ್ರಕಾರ ಪಟ್ಟಾಭಿಷೇಕಕ್ಕೆ 25 ವರ್ಷಗಳಾಗಬೇಕಿದ್ದರಿಂದ 4 ವರ್ಷಗಳ ಕಾಲ ತಡವಾಯಿತು.
ಕಳಿಂಗ ಯುದ್ಧ
ಅಶೋಕನು ದಿಗ್ವಿಜಯಗಳ ಮೂಲಕ ಮೌರ್ಯರ ಅಧಿಪತ್ಯವನ್ನು ವಿಸ್ತರಿಸುವ ಪ್ರಯತ್ನ ಮಾಡಿದನು. ಆತನು ಕೈಗೊಂಡ ದಿಗ್ವಿಜಯವೇ ಕಳಿಂಗ ಯುದ್ಧ.
ಅಶೋಕನು ತನ್ನ 13ನೇ ಬಂಡೆಕಲ್ಲು ಶಾಸನದಲ್ಲಿ ತಾನು ಸಿಂಹಾಸನವೇರಿದ 9ನೇ ವರ್ಷದಲ್ಲಿ ಕಳಿಂಗ ರಾಜ್ಯದ ಮೇಲೆ ಆಕ್ರಮಣ ಕೈಗೊಂಡನೆಂದು ತಿಳಿಸಿದ್ದಾನೆ. ಈ ಯುದ್ಧದ ಪರಿಣಾಮ ಹಾಗೂ ತನ್ನ ರಾಜನೀತಿಯ ಮೇಲೆ ಉಂಟಾದ ಪ್ರಭಾವದ ಬಗ್ಗೆ ವಿವರಿಸಿದ್ದಾನೆ. ತನ್ನ ತಂದೆಯಿಂದ ಅಥವಾ ಅಜ್ಜನಿಂದ ಕಳಿಂಗವು ಗೆಲ್ಲಲ್ಪಟ್ಟಿರಲಿಲ್ಲವೆಂದು ಸ್ಪಷ್ಟಪಡಿಸಿದ್ದಾನೆ. ಅಶೋಕ ಕೈಗೊಂಡ ದಿಗ್ವಿಜಯಗಳಲ್ಲಿ ಕಳಿಂಗ ಯುದ್ಧವೇ ಪ್ರಥಮ ಮತ್ತು ಕೊನೆಯ ಯುದ್ಧವೆಂದು ತಿಳಿದುಬರುತ್ತದೆ. ಕಳಿಂಗ ಯುದ್ಧಕ್ಕೆ ಕಾರಣವೇನೆಂದು ತಿಳಿದುಬರುವುದಿಲ್ಲ. ಆದರೆ ಈ ಯುದ್ಧವು ತನ್ನ ರಾಜನೀತಿಯ ಮೇಲೆ ಜ್ವಲಂತ ಪರಿಣಾಮ ಬೀರಿತೆಂದು ತಿಳಿಸಿದ್ದಾನೆ.
ಕಳಿಂಗ ಎಂಬುದು ಇಂದಿನ ಓರಿಸ್ಸಾದ ಹಳೆಯ ಹೆಸರು. ಈ ರಾಜ್ಯವನ್ನು ಶುದ್ಧ ವರ್ಮ ಎಂಬ ರಾಜ ಆಳುತ್ತಿದ್ದನು. ಕಳಿಂಗವನ್ನು ಗೆಲ್ಲಬೇಕೆಂಬ ಛಲದಿಂದ ಅಶೋಕ ಭಾರಿ ಸೈನ್ಯದೊಂದಿಗೆ ದಾಳಿ ಮಾಡಿದನು. ಸ್ವಭಾವತಃ ಶಾಂತಿ ಪ್ರಿಯರೂ ಹಾಗೂ ಅಹಿಂಸಾವಾದಿಗಳೂ ಆಗಿದ್ದ ಕಳಿಂಗರು ಭಾರೀ ಪ್ರತಿರೋಧವನ್ನು ಒಡ್ಡಿದರು. ಭುವನೇಶ್ವರದಿಂದ 150 ಕೀ. ಮಿ. ದೂರದ ʻದೌಲಿ’ ಎಂಬಲ್ಲಿ ನಡೆದ ಭೀಕರ ಕದನದಲ್ಲಿ ಅಶೋಕನಿಗೆ ಜಯ ಲಭಿಸಿತು. ಈ ಯುದ್ಧದಲ್ಲಿ ಒಂದು ಲಕ್ಷ ಜನರು ಆಸುನೀಗಿದರು. ಸುಮಾರು ಎರಡು ಲಕ್ಷ ಜನರು ಗಾಯಗೊಂಡರು. ಸುಮಾರು ಒಂದೂವರೆ ಲಕ್ಷ ಜನ ಸೆರೆಸಿಕ್ಕರು. ಲಕ್ಷಾಂತರ ಜನ ರೋಗ ರುಜಿನಗಳಿಗೆ ಬಲಿಯಾದರು. ರಣರಂಗದಲ್ಲಿ ರಕ್ತದ ಕಾಲುವೆಯೇ ಹರಿಯಿತು. ಯುದ್ಧದಲ್ಲಿ ಗಂಡಂದಿರನ್ನು, ಮಕ್ಕಳನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿತು. ಇದರಿಂದ ಅಶೋಕನ ಮನ ವಿಲಿವಿಲಿ ಒದ್ದಾಡಿತು. ಅವನ ಹೃದಯ ಕಂಪಿಸಿತು. ಈ ಯುದ್ಧ ಅಶೋಕನ ಜೀವನದ ಗತಿಯನ್ನೇ ಬದಲಿಸಿತು. ಇನ್ನು ಮುಂದೆ ಯುದ್ಧವನ್ನೇ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದನು. ರಕ್ತ ಪಾತದಿಂದ ರಾಜ್ಯ ನಿರ್ಮಾಣ ನಿರರ್ಥಕ ಎಂದು ಅವನಿಗೆ ಅನಿಸಿತು. ರಕ್ತಪಾತ ಹಾಗೂ ಹಿಂಸೆಯ ಮಾರ್ಗವನ್ನು ಬಿಟ್ಟು ಶಾಂತಿ ಹಾಗೂ ಅಹಿಂಸಾಮಾರ್ಗವನ್ನು ತುಳಿಯುವುದಾಗಿ ಅಶೋಕ ಘೋಷಿಸಿದನು.
ಬೌದ್ಧ ಧರ್ಮಕ್ಕೆ ಪರಿವರ್ತನೆ
ಕಳಿಂಗ ಯುದ್ಧದಿಂದ ಮಹತ್ತರ ಪರಿಣಾಮ ಉಂಟಾಯಿತು. ಕಳಿಂಗ ಯುದ್ಧವು ಅಶೋಕ ಮಹಾಶಯನ ಮನಪರಿವರ್ತನೆಗೆ ಮೂಲಕಾರಣವಾಯಿತು. ರಣರಂಗದ ಭೀಭತ್ಸ ದೃಶ್ಯದಿಂದ ಅಶೋಕನ ಮನಕರಗಿತು. ಯುದ್ಧದಿಂದ ಪ್ರಜಾಪೀಡನೆ ಉಂಟಾಗುತ್ತದೆಯೇ ಹೊರತು ಪ್ರಜಾ ಪರಿಪಾಲನೆಯಾಗುವುದಿಲ್ಲ ಎಂದು ಅರ್ಥೈಸಿಕೊಂಡ ಅಶೋಕ ಮಹಾಶಯ ಧರ್ಮಾಶೋಕನಾಗಿ ಮಾರ್ಪಟ್ಟನು. ಕಳಿಂಗ ಯುದ್ಧದಿಂದ ಅಶೋಕನ ಸೈನಿಕ ಆಕ್ರಮಣ ಕೊನೆಗೊಂಡು ಆದ್ಯಾತ್ಮಿಕ ದಿಗ್ವಿಜಯ ಆರಂಭಗೊಂಡಿತು.
ಕಳಿಂಗ ಯುದ್ಧದ ನಂತರ ಅಶೋಕನ ಮನಸ್ಸು ದುಃಖತಪ್ತವಾಯಿತು. ಈ ಹಿನ್ನಲೆಯಲ್ಲಿ ಅಶೋಕನು ಬೌದ್ಧ ಮುನಿ ಉಪಗುಪ್ತನ ಪ್ರಭಾವಕ್ಕೊಳಗಾಗಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡನು. ಇನ್ನು ಮುಂದೆ ಖಡ್ಗವನ್ನು ಹಿಡಿಯಲಾರೆ ಎಂದು ಶಪಥ ಮಾಡಿದನು. ಅಂದಿನಿಂದ ಅವನು ಯುದ್ಧ ವಿಜಯವನ್ನು ತ್ಯಜಿಸಿ ಧರ್ಮ ವಿಜಯವನ್ನು ಆರಂಭಿಸಿದನು. ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅಶೋಕನು ಅದರ ಏಳಿಗೆಗಾಗಿ ಹಗಲಿರುಳು ದುಡಿದನು. ಬೌದ್ಧ ಸ್ಥಳಗಳಾದ ಕಪಿಲವಸ್ತು, ಲುಂಬಿಣಿ, ಸಾರನಾಥ, ಗಯಾ, ಕುಶಿನಗರ, ರಾಜಗೃಹ ಹಾಗೂ ವೈಶಾಲಿಗಳಿಗೆ ಭೇಟಿ ನೀಡಿ ಅಲ್ಲಿ ಅನೇಕ ಸ್ತೂಪಗಳನ್ನು ಹಾಗೂ ವಿಹಾರಗಳನ್ನು ಸ್ಥಾಪಿಸಿದನು. ಬುದ್ಧನ ಜನ್ಮಸ್ಥಳವಾದ ಲುಂಬಿನಿಯಲ್ಲಿ ಒಂದು ಸ್ತೂಪವನ್ನು ನಿರ್ಮಿಸಿ ಅಹಿಂಸೆಯೇ ಪರಮಧರ್ಮ ಎಂದು ಸಾರಿದನು. ಅರಮನೆಗಳಲ್ಲಿ ನಡೆಯುತ್ತಿದ್ದ ಪ್ರಾಣಿ ಬಲಿಯನ್ನು ತಡೆಗಟ್ಟಿದನು. ಸ್ವತಃ ತಾನೇ ಬೇಟೆಯಾಡುವದನ್ನು ನಿಲ್ಲಿಸಿದನು. ಪ್ರಾಣಿ ಹಿಂಸೆ ಮಾಡದಂತೆ ತಡೆಯಲು ಶಾಸನಗಳನ್ನು ಹೊರಡಿಸಿದನು. ಧರ್ಮಪ್ರಚಾರಕ್ಕಾಗಿ ʻಧರ್ಮ ಮಹಾಮಾತ್ರರನ್ನು’ ನೇಮಿಸಿದನು. ತನ್ನ ಸ್ವಂತ ಮಕ್ಕಳಾದ ʻಸಂಗಮಿತ್ರೆ ಹಾಗೂ ಮಹೇಂದ್ರ’ರನ್ನು ಶ್ರೀಲಂಕಾಕ್ಕೆ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕಳುಹಿಸಿದನು. ಸಿಂಹಳದ ರಾಜ ಬೌದ್ಧ ಧರ್ಮವನ್ನು ಸ್ವೀಕರಿಸುವ ಮೂಲಕ ಅನುರಾಧಪುರದಲ್ಲಿ ಒಂದು ಸ್ತೂಪವನ್ನು ನಿರ್ಮಿಸಿದನು. ಅಶೋಕನ ಶ್ರಮದ ಫಲವಾಗಿ ಬೌದ್ಧ ಧರ್ಮವು ಟಿಬೇಟ್, ಚೀನಾ, ಶ್ರೀಲಂಕಾ, ನೇಪಾಳ, ಜಪಾನ್, ಉಜ್ಜಯನಿ, ಕೋರಿಯಾ, ಸಿರಿಯಾ, ಈಜಿಪ್ಟ್, ಮೆಸೋಪೋಟಮಿಯಾ, ಜಾವಾ, ಸುಮಾತ್ರಾ ಹಾಗೂ ಕಾಂಬೋಡಿಯಾಗಳಲ್ಲಿ ಹೆಚ್ಚು ಪ್ರಚಾರಗೊಂಡಿತು. ಅಶೋಕ ಮೂರನೇ ಬೌದ್ಧ ಸಮ್ಮೇಳನವನ್ನು ಪಾಟಲಿಪುತ್ರದಲ್ಲಿ ನೆರವೇರಿಸಿ ಬೌದ್ಧ ಭಿಕ್ಷುಕರ ನಡುವಿನ ಅಂತಃಕಲಹವನ್ನು ಶಮನಗೊಳಿಸಿದನು.
ಅಲ್ಲದೆ ಕಳಿಂಗ ಯುದ್ಧದ ನಂತರ ಪ್ರಜಾಕಲ್ಯಾಣಕ್ಕಾಗಿ ತನ್ನ ಆಡಳಿತವನ್ನು ಮೀಸಲಿಟ್ಟನು. ‘ದಿಗ್ವಿಜಯಕ್ಕಿಂತ ಧರ್ಮವಿಜಯವೇ ಮಿಗಿಲು’ ಎಂಬುದನ್ನು ಅರಿತುಕೊಂಡನು. ಕಲ್ಹಣನ ರಾಜತರಂಗಿಣಿಯ ಪ್ರಕಾರ ಕಳಿಂಗ ಯುದ್ಧಕ್ಕೆ ಮೊದಲು ಆಶೋಕನು ಶಿವನ ಆರಾಧಕನಾಗಿದ್ದನು. ಬೇಟೆಯಾಡುವಲ್ಲಿ ಅಪಾರ ಆಸಕ್ತಿ ತಳೆದಿದ್ದನು. ಯುದ್ಧದ ನಂತರ ಬುದ್ಧನ ತತ್ವಗಳಿಂದ ಪ್ರಭಾವಿತನಾಗಿ ಅಹಿಂಸಾನೀತಿ ಅನುಸರಿಸಿ ಬೌದ್ಧಮತ ಪ್ರಸಾರಕಾರ್ಯ ಕೈಗೊಂಡನು. ತನ್ನ ವಿದೇಶಾಂಗ ನೀತಿಯಲ್ಲಿಯು ಶಾಂತಿಯ ಪಥವನ್ನು ಅನುಸರಿಸಿದನು.
.
ಸಮಾಜಕ್ಕೆ ಅವರ ಕೊಡುಗೆಗಳು ಸೇರಿವೆ:
1. ಕಟ್ಟಡ ರಸ್ತೆಗಳು: ಅಶೋಕನು ತನ್ನ ಸಾಮ್ರಾಜ್ಯದಾದ್ಯಂತ ಸಂಪರ್ಕವನ್ನು ಹೆಚ್ಚಿಸಲು ಸುಸಜ್ಜಿತವಾದ ರಸ್ತೆಗಳನ್ನು ನಿರ್ಮಿಸಿದನು.
2. ಮರಗಳನ್ನು ನೆಡುವುದು: ಅವರು ಈ ರಸ್ತೆಗಳ ಉದ್ದಕ್ಕೂ ಸಾಲು ಮರಗಳನ್ನು ನೆಟ್ಟು ನೆರಳು ಮತ್ತು ಸೌಂದರ್ಯವನ್ನು ಒದಗಿಸಿದನು.
3. ವಿಶ್ರಾಂತಿ ಗೃಹಗಳನ್ನು ಸ್ಥಾಪಿಸುವುದು: ಅವರು ವಿಶ್ರಾಂತಿ ಗೃಹಗಳನ್ನು ಮತ್ತು ಪ್ರಯಾಣಿಕರಿಗೆ ಸೌಕರ್ಯಗಳನ್ನು ನಿರ್ಮಿಸಿದನು.
4. ಔಷಧಾಲಯಗಳು: ಅಶೋಕನು ಮಾನವರು ಮತ್ತು ಪ್ರಾಣಿಗಳಿಗೆ ಔಷಧಾಲಯಗಳನ್ನು ಸ್ಥಾಪಿಸಿದನು, ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಿದನು.
5. ಉಚಿತ ಔಷಧವನ್ನು ಒದಗಿಸುವುದು: ಔಷಧೀಯ ಉದ್ದೇಶಗಳಿಗಾಗಿ ತನ್ನ ನಾಗರಿಕರಿಗೆ ವಿವಿಧ ಗಿಡಮೂಲಿಕೆಗಳನ್ನು ಲಭ್ಯವಾಗುವಂತೆ ಮಾಡಿದರು.
6. ಸ್ವಾತಂತ್ರ್ಯವನ್ನು ನೀಡುವುದು: ಅಶೋಕನು ತನ್ನ ಜನ್ಮದಿನದಂದು ಕೈದಿಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದನು, ಕರುಣೆ ಮತ್ತು ಸಹಾನುಭೂತಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದನು.
ಇಲ್ಲಿ ಅಶೋಕನು ತನ್ನ ರಾಣಿಯರೊಂದಿಗೆ ನಿಂತಿರುವ ಚಿತ್ರವಿರುವ ಕಲ್ಲಿನ ಪಟ್ಟಿಕೆ ಪತ್ತೆಯಾಗಿದೆ. ಇಲ್ಲಿ ಬ್ರಾಹ್ಮಿ ಲಿಪಿಯಲ್ಲಿರುವ “ರಾಯ ಅಶೋಕ” ಎಂಬ ಬರಹವೂ ಇದ್ದು ಇವನನ್ನು ಅಶೋಕನೆಂದು ಗುರುತಿಸಲು ಸಹಕಾರಿಯಾಗಿದೆ.
ಉಪಸಂಹಾರ
ಒಟ್ಟಿನಲ್ಲಿ ಹೇಳುವುದಾದರೆ ಕಳಿಂಗ ಯುದ್ಧವು ಭಾರತದ ಚರಿತ್ರೆಯಲ್ಲಿ ಒಂದು ಮಹತ್ತರ ಮೈಲಿಗಲ್ಲಾಗಿ ಹೊಸಯುಗಕ್ಕೆ ನಾಂದಿಯಾಯಿತು. ಡಾ.ರಾಯ್ ಚೌಧುರಿಯವರು ಅಭಿಪ್ರಾಯಪಡುವಂತೆ ಅಶೋಕ ಮಹಾಶಯನ ಸೈನಿಕ ‘ಆಕ್ರಮಣದ ವಿಜಯ ಅಂತ್ಯಗೊಂಡು ಧರ್ಮವಿಜಯ ಆರಂಭಗೊಂಡಿತು’. ಕಳಿಂಗ ಯುದ್ಧದ ಮೂಲಕ ರಾಜಕೀಯ ಐಕ್ಯತೆಗೂ ಅನುಕೂಲವಾಯಿತು. ಕಳಿಂಗ ಯುದ್ಧದ ನಂತರ ‘ಶಾಂತಿ ಮತ್ತು ಅಹಿಂಸೆ’ ಎಂಬ ತತ್ವಗಳ ಮೇಲೆ ಪ್ರಜಾಕಲ್ಯಾಣ ರಾಜ್ಯ ಸ್ಥಾಪಿಸಿದ ಅಶೋಕ ವಿಶ್ವದಲ್ಲಿಯೇ ಮಾದರಿಯಾದ ಸರ್ವರೂ ಸ್ವೀಕರಿಸುವ ಶ್ರೇಷ್ಠ ತತ್ವಗಳನ್ನು ಕೊಡುಗೆಯಾಗಿ ನೀಡಿದನು. ಹೆಚ್.ಜಿ.ವೇಲ್ಸ್ ಅಭಿಪ್ರಾಯಪಡುವಂತೆ ʻಗೆಲುವಿನ ನಂತರ ಯುದ್ಧವನ್ನು ತ್ಯಜಿಸಿದ ಸೇನಾ ಸಾರ್ವಭೌಮರಲ್ಲಿ ಅಶೋಕನನ್ನು ಬಿಟ್ಟರೆ ಮತ್ತೊಬ್ಬನಿಲ್ಲ’.
Every weekend i used to pay a visit this site, for the reason that i wish for
enjoyment, as this this web site conations in fact pleasant funny
stuff too.