ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆಯಲ್ಲಿ ಭಾರತೀಯ ಮತ್ತು ಇತರ ಧರ್ಮಗಳು ಹಾಗೂ ಸಂಸ್ಕೃತಿಗಳ ಪಾತ್ರ

ಪರಿಸರ ಸಂರಕ್ಷಣೆ ಅನಾದಿಕಾಲದಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆಯಾಗಿದೆ. ಪ್ರಕೃತಿಯಲ್ಲಿನ ನೆಲೆ, ನೀರು, ವಾಯು, ಕಾಡು, ಸಸ್ಯ, ಪ್ರಾಣಿಗಳಿಗೆ ದೈಹಿಕ ಸ್ಥಾನವನ್ನು ನೀಡಲಾಗುತ್ತಿತ್ತು. ಜನರು ಪ್ರಕೃತಿಗೆ ಹೆದರಿ ಅದರ ನಾಶಕ್ಕೆ ಪ್ರಯತ್ನಿಸುತ್ತಿರಲಿಲ್ಲ. ನಮ್ಮ ಪೂರ್ವಜರು ಪ್ರಕೃತಿಯನ್ನು ಆಧರಣೀಯವಾಗಿ ಪೂಜಿಸುತ್ತಿದ್ದರು. ಈ ಕಾರಣದಿಂದಾಗಿ ಕಾಡು ಸಮೃದ್ಧವಾಗಿ ಬೆಳೆದು ನಿಂತಿತು. 

  1. ಭಾರತೀಯ ಎಲ್ಲಾ ಧರ್ಮಗಳು ಪ್ರಕೃತಿ, ಭೂಮಿ, ಜೀವಿಗಳು ಮುಂತಾದವುಗಳನ್ನು ದೇವರ ಸೃಷ್ಟಿ ಇವುಗಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಹೇಳಿವೆ. ಪ್ರಾಚೀನ ಧರ್ಮಗಳಲ್ಲಿ ಒಂದಾದ “ಬಹಾಯಿ” ಮಾನವ ಜೀವನ ಹಾಗೂ ಪ್ರಕೃತಿಗೆ ಅತ್ಯಂತ ನಿಕಟ ಸಂಬಂಧವನ್ನು ಏರ್ಪಡಿಸಿತ್ತು. ಜೇನು, ಹೂ, ಅದರ ಬಣ್ಣ ಸುವಾಸನೆಗೆ ಚ್ಯುತಿ ಬರದಂತೆ ಅದರ ಮಧುವನ್ನು ಹೀರುವಂತೆ ಮಾನವ ಸಹ ಪ್ರಕೃತಿಯಲ್ಲಿ ಇದ್ದು ಇಲ್ಲದಂತೆ ಬದುಕಬೇಕು ಎಂದು ಹೇಳಿದೆ. ಪ್ರತಿಯೊಬ್ಬನು ಬೌದ್ಧಿಕವಾಗಿ ಬೆಳೆದು ಅಹಿಂಸೆಯನ್ನು ಅಳವಡಿಸಿಕೊಂಡು ಹಿಂಸೆಯನ್ನು ತ್ಯಜಿಸಬೇಕೆಂದು ಹೇಳುವ ಮೂಲಕ ಅತಿಯಾದ ಆಸೆಯು ಮನುಷ್ಯನ ದುಃಖಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದೆ.
  2. ಕ್ರೈಸ್ತ ಧರ್ಮದಲ್ಲಿ ಪರಿಸರ ರಕ್ಷಣೆಯನ್ನು ಮಾಡುವ ಹಲವಾರು ಪದ್ಯಗಳು ನಮಗೆ ಗೋಚರಿಸುತ್ತವೆ. ನಾವಿರುವ ಪರಿಸರವನ್ನು ಹಾಳು ಮಾಡಬಾರದು, ನಮ್ಮ ರಕ್ತ ಮಣ್ಣಿನಲ್ಲಿ ಸೇರಿದರೆ ಮಣ್ಣು ಕಲುಷಿತಗೊಳ್ಳುವುದು, ಆಹಾರವನ್ನು ಹಾಳು ಮಾಡುವುದು ಮಹಾ ಪಾಪವಾಗಿದೆ, ಪ್ರತಿಯೊಬ್ಬ ಮಾನವ ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಭೂಮಿಯು ನಮಗಾಗಿ ದೇವರಿಂದ ಸೃಷ್ಟಿಯಾಗಿದೆ ಎಂದು ಕ್ರೈಸ್ತ ಧರ್ಮದಲ್ಲಿ ವಿವರಿಸಲಾಗಿದೆ.
  3. ಕನ್‌ಪ್ಯೂಸಿಯಸ್‌ ಧರ್ಮವು ಪ್ರಕೃತಿಯನ್ನು ಪೂಜಿಸುತ್ತಾ ಬಾಳುವುದನ್ನು ಹೇಳಿಕೊಟ್ಟಿದೆ. ಪ್ರಕೃತಿ ಇಲ್ಲದೆ ಮನುಷ್ಯನಿಲ್ಲ ಎಂಬುದು ಕನ್‌ಪ್ಯೂಸಸಿಯಸ್ ಧರ್ಮದ ತಿರುಳಾಗಿದೆ. ತಾನು ಪ್ರಕೃತಿಗೆ ಒಳ್ಳೆಯದನ್ನು ಮಾಡಿದರೆ ಪ್ರಕೃತಿ ತನಗಾಗಿ ಒಳ್ಳೆಯದನ್ನು ಮಾಡುತ್ತದೆ. ಕೊಡು ಮತ್ತು ಪಡೆದುಕೊಳ್ಳು ಎಂಬುದು ಪ್ರಕೃತಿಯ ನೀತಿಯಾಗಿದೆ. ಗಿಡ, ಮರ, ಪ್ರಾಣಿ, ಪಕ್ಷಿಗಳನ್ನು ಹಿಂಸಿಸುವುದು ಅಂದರೆ ತನ್ನನ್ನು ತಾನು ಹಿಂಸಿಸಿಕೊಂಡಂತೆ ಎಂದು ಕನ್‌ಪ್ಯೂಸಿಯಸ್ ಧರ್ಮ ಸಾರಿದೆ.
  4. ಇಸ್ಲಾಂ ಧರ್ಮದ ಸ್ಥಾಪಕ ಮಹಮ್ಮದ್ ಪೈಗಂಬರ್ ಹೀರಾ ಎಂಬ ಗುಹೆಯಲ್ಲಿ ಜ್ಞಾನೋದಯವನ್ನು ಪಡೆದುಕೊಂಡನು. ಹಾಗಾಗಿ ಇಸ್ಲಾಂ ಧರ್ಮ ಪರಿಸರ ಸುಸ್ಥಿರ ಬಳಕೆಯ ವಿವರಣೆಯನ್ನು ನೀಡುತ್ತದೆ. ಸಂಪನ್ಮೂಲಗಳನ್ನು ಅತಿಯಾಗಿ ಬಳಕೆ ಮಾಡಬಾರದು ಸಾಧ್ಯವಾದಷ್ಟು ಪರಿಸರ ರಕ್ಷಣೆ ಆಗಬೇಕು ಎಂಬುದು ಇಸ್ಲಾಂ ಧರ್ಮದ ಕುರಾನಿನ ವಾಕ್ಯವಾಗಿದೆ.
  5. ಭಾರತದಲ್ಲಿಯೇ ಜನಿಸಿದ ಜೈನ ಧರ್ಮವು ಅಹಿಂಸೆಯನ್ನೇ ಪ್ರಧಾನ ಗುರಿಯನ್ನಾಗಿಸಿಕೊಂಡಿದೆ. ಭೂಮಿಯ ಮೇಲಿನ ಜೀವ ಜಂತುಗಳಿಗೆ ಹಾನಿಯಾಗುವಂತಹ ಯಾವುದೇ ಪಾಪಕರ್ಮಗಳನ್ನು ಮಾಡದಂತೆ ಸಂದೇಶ ನೀಡಿದೆ. ಜೈನರು ಹುಳ ಹುಪ್ಪಡಿಗಳು ಬಾಯಿಯೊಳಗೆ ಪ್ರವೇಶಿಸದಂತೆ ಮೂಗಿಗೆ ಬಟ್ಟೆಯನ್ನು ಕಟ್ಟಿಕೊಳ್ಳುತ್ತಾರೆ. ಸಾಯಂಕಾಲದೊಳಗೆ ಅವರು ಊಟವನ್ನು ಮುಗಿಸುತ್ತಾರೆ. ಕೃಷಿ ಕಾರ್ಯ ಜೈನರಲ್ಲಿ ನಿಷಿದ್ಧ. ಏಕೆಂದರೆ ಭೂಮಿ ಒಳಗಿನ ಯಾವುದೇ ಜೀವಿಗಳಿಗೆ ಹಾನಿಯಾಗುವುದನ್ನು ಅವರು ಸಹಿಸುವುದಿಲ್ಲ. 
  6. ಇನ್ನೂ ಹಿಂದೂ ಧರ್ಮದ ನಂಬಿಕೆ ಅಪಾರವಾಗಿದ್ದು ಹಲವಾರು ದೇವರುಗಳ ವಾಹನಗಳು ಪಶು ಪಕ್ಷಿಗಳಾಗಿವೆ. ಉದಾ: ಬ್ರಹ್ಮನು ಸೃಷ್ಟಿಕರ್ತ ಆತನ ವಾಹನ ಗರುಡ, ಶಿವನ ವಾಹನ ನಂದಿ, ಸರಸ್ವತಿಯ ವಾಹನ ನವಿಲು, ಪಾರ್ವತಿಯ ವಾಹನ ಹುಲಿ, ಶನಿಯ ವಾಹನ ಕಾಗೆ, ಗಣೇಶನ ವಾಹನ ಇಲಿ, ಯಮನ ವಾಹನ ಕೋಣ. ಇವುಗಳ ಹಿಂದಿನ ಸತ್ಯವೆಂದರೆ ಪ್ರಕೃತಿ ರಕ್ಷಣೆಯೇ ಆಗಿದೆ. ಭಾರತೀಯರು ಕೆಲವು ಹಬ್ಬ ಹರಿದಿನಗಳಲ್ಲಿ ವೃಕ್ಷ ಪೂಜೆ, ಗರಿಕೆ, ತುಳಸಿ, ಬಿಲ್ವ, ಅರಳಿ, ಬೇವು ಮುಂತಾದವುಗಳನ್ನು ಪೂಜಿಸಿ ಪೂಜ್ಯನೀಯ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಹಿಂದಿನ ಕಾಲದಲ್ಲಿ ಮಾನವರು ಪೃಥ್ವಿ, ಅಗ್ನಿ, ವಾಯು, ಸೂರ್ಯ, ಚಂದ್ರ, ನಕ್ಷತ್ರಗಳನ್ನು ದೇವರ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಿದ್ದರು. ಇಂದಿಗೂ ಇವುಗಳ ಪೂಜೆ ಅವ್ಯಾಹತವಾಗಿ ನಡೆದುಕೊಂಡು ಬರುತ್ತಿವೆ. ಇದು ಅಲ್ಲದೆ ಪ್ರಾಣಿ-ಪಕ್ಷಿ, ಗಿರಿ, ಶಿಖರ, ಬೆಟ್ಟ, ಗುಡ್ಡಗಳನ್ನು ದೈವಿಕ ದೃಷ್ಟಿಯಿಂದ ಕಾಣಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗಿಡಮರಗಳಿಗೆ ಗೌರವ ನೀಡುವುದು, ಅವುಗಳನ್ನು ದೇವರ ಸಮಾನವೆಂದು ಭಾವಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ದತಿಯಾಗಿದೆ. ಇದಕ್ಕೆ ಕಾರಣ ಮರಗಳು ನಮಗೆ ತಂಪಾದ ನೆರಳು, ಹಿತವಾದ ಗಾಳಿ, ಸುಂದರವಾದ ಜೀವನವನ್ನು ನೀಡುತ್ತವೆ. ಅದಕ್ಕೆ ಜಾನಪದ ಗೀತೆಯಲ್ಲಿ ಬೇವಿನ ಮರವನ್ನು ಹಾಡಿ ಹೋಗಲಾಗಿದೆ. ಬ್ಯಾಸಿಗೆ ದಿವಸಕ್ಕ ಬೇವಿನ ಮರತಂಪು ಎಂದು ಬಣ್ಣಿಸಲಾಗಿದೆ. ಈ ಮರಗಳು ಗ್ರಾಮೀಣ ಜನರ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಕೆಲವು ಅರಣ್ಯಗಳಂತೂ ದೇವರ ಕಾಡು ಎಂದು ಹೆಸರಾಗಿವೆ. ಅಲ್ಲಲ್ಲಿ ಅರಣ್ಯಗಳ ನಡುವೆ ಮರದ ದೇವರುಗಳನ್ನು ಇಟ್ಟಿರುವುದನ್ನು ಇಂದಿಗೂ ಕಾಣಬಹುದಾಗಿದೆ.
  7. ಬುದ್ಧನು ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವನ್ನು ಪಡೆದನು. ಹೀಗಾಗಿ ಬೌದ್ಧ ಧರ್ಮೀಯರಿಗೆ ಬೋಧಿವೃಕ್ಷ ಅತ್ಯಂತ ಪವಿತ್ರವಾದ ಮರವಾಗಿದೆ.
  8. ವೈಷ್ಣವ ಧರ್ಮದಲ್ಲಿ ವಿಷ್ಣು ದಶಾವತಾರದಲ್ಲಿ ಪ್ರಾಣಿಗಳ ರೂಪದಲ್ಲಿ ಅವತರಿಸಿದ್ದಾನೆ. ಮತ್ಸ್ಯಾವತಾರ, ಕೂರ್ಮಾವತಾರ(ಆಮೆ), ವರಾಹಾವತಾರ(ಹಂದಿ) ರೂಪ ತಾಳಿದ್ದಾನೆ.

ಉಪಸಂಹಾರ

ಭಾರತೀಯ ಹಾಗೂ ಇತರ ಧರ್ಮಗಳು ಪರಿಸರ ಸಂರಕ್ಷಣೆಯನ್ನು ಕೇವಲ ಕರ್ತವ್ಯವಲ್ಲದೆ ಧಾರ್ಮಿಕ ಮತ್ತು ನೈತಿಕ ಹೊಣೆಗಾರಿಕೆಯಾಗಿ ಕಂಡಿವೆ. ಪ್ರಕೃತಿಯನ್ನು ಪೂಜ್ಯವಾಗಿ ಕಾಣುವ ಈ ಸಂಸ್ಕೃತಿ ಮಾನವನಲ್ಲಿ ಸಂಯಮ, ಅಹಿಂಸೆ ಮತ್ತು ಜವಾಬ್ದಾರಿಯುತ ಬಳಕೆಯ ಮನೋಭಾವವನ್ನು ಬೆಳೆಸಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಪರಿಸರ ಸಮತೋಲನವನ್ನು ಕಾಪಾಡಬಹುದು. ಹೀಗಾಗಿ ಧರ್ಮ ಮತ್ತು ಸಂಸ್ಕೃತಿ ಪರಿಸರ ಸಂರಕ್ಷಣೆಯ ಶಕ್ತಿಯುತ ಆಧಾರಗಳಾಗಿವೆ.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವರೂಪ

ಪರಿಸರ ಅಧ್ಯಯನ ಎಂಬುದು ಮಾನವ ಮತ್ತು ಪ್ರಕೃತಿ ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ವಿಶಾಲ ಹಾಗೂ ಸಮಗ್ರ ವಿಷಯವಾಗಿದೆ. ಮಾಲಿನ್ಯ, ಹವಾಮಾನ ಬದಲಾವಣೆ, ಅರಣ್ಯ ನಾಶ, ಜೀವ ವೈವಿಧ್ಯತೆಯ ಹಾನಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ಕ್ಷಯದಂತಹ ಪರಿಸರ ಸಮಸ್ಯೆಗಳು ಬಹಳ ಸಂಕೀರ್ಣ ಸ್ವಭಾವದ್ದಾಗಿವೆ. ಇವುಗಳನ್ನು ಒಂದೇ ವಿಷಯದ ಮೂಲಕ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಪರಿಸರ ಅಧ್ಯಯನವು ವಿಜ್ಞಾನ, ಸಾಮಾಜಿಕ ವಿಜ್ಞಾನ, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ ಮತ್ತು ಮಾನವಿಕ ಶಾಸ್ತ್ರಗಳಿಂದ ಜ್ಞಾನವನ್ನು ಒಳಗೊಂಡ ಬಹುಶಾಸ್ತ್ರೀಯ ದೃಷ್ಟಿಕೋನವನ್ನು ಅಳವಡಿಸಿಕೊಂಡಿದೆ. ಇದರಿಂದ ವಿದ್ಯಾರ್ಥಿಗಳಿಗೆ ಪರಿಸರ ಸಮಸ್ಯೆಗಳ ಸಮಗ್ರ ಅರಿವು ದೊರೆಯುತ್ತದೆ.

ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವ

1. ಪರಿಸರ ಅಧ್ಯಯನ ಮತ್ತು ನೈಸರ್ಗಿಕ ವಿಜ್ಞಾನಗಳು

ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೂವಿಜ್ಞಾನ ಮತ್ತು ಪರಿಸರಶಾಸ್ತ್ರದಂತಹ ನೈಸರ್ಗಿಕ ವಿಜ್ಞಾನಗಳು ಪರಿಸರ ಅಧ್ಯಯನದ ಮೂಲಭೂತ ಆಧಾರವಾಗಿವೆ. ಜೀವಶಾಸ್ತ್ರವು ಪರಿಸರ ವ್ಯವಸ್ಥೆಗಳು ಮತ್ತು ಜೀವ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ರಸಾಯನಶಾಸ್ತ್ರವು ಗಾಳಿ, ನೀರು, ಮಣ್ಣು ಮತ್ತು ಮಾಲಿನ್ಯಕಾರಕಗಳ ರಾಸಾಯನಿಕ ಸ್ವಭಾವವನ್ನು ವಿವರಿಸುತ್ತದೆ. ಭೌತಶಾಸ್ತ್ರವು ಶಕ್ತಿ ಪ್ರವಾಹ ಮತ್ತು ಹವಾಮಾನ ವ್ಯವಸ್ಥೆಗಳ ಅಧ್ಯಯನಕ್ಕೆ ಸಹಕಾರಿ.

2. ಪರಿಸರ ಅಧ್ಯಯನ ಮತ್ತು ಸಾಮಾಜಿಕ ವಿಜ್ಞಾನಗಳು

ಪರಿಸರ ಸಮಸ್ಯೆಗಳು ಮಾನವ ಚಟುವಟಿಕೆಗಳೊಂದಿಗೆ ನಿಕಟವಾಗಿ ಸಂಬಂಧಿಸಿದ್ದಾಗಿವೆ. ಸಮಾಜಶಾಸ್ತ್ರ, ಮಾನವಶಾಸ್ತ್ರ, ರಾಜಕೀಯ ಶಾಸ್ತ್ರ ಮತ್ತು ಭೂಗೋಳಶಾಸ್ತ್ರವು ಜನಸಂಖ್ಯೆ ವೃದ್ಧಿ, ನಗರೀಕರಣ, ಸಾಂಸ್ಕೃತಿಕ ಆಚರಣೆಗಳು ಮತ್ತು ಸಾಮಾಜಿಕ ಅಸಮಾನತೆಗಳು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿವರಿಸುತ್ತವೆ. ಇವು ಮಾನವ ಸಮಾಜ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

3. ಪರಿಸರ ಅಧ್ಯಯನ ಮತ್ತು ಅರ್ಥಶಾಸ್ತ್ರ

ಪರಿಸರ ಅಧ್ಯಯನದಲ್ಲಿ ಅರ್ಥಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಪರಿಸರ ಅರ್ಥಶಾಸ್ತ್ರವು ನೈಸರ್ಗಿಕ ಸಂಪನ್ಮೂಲಗಳ ಬಳಕೆ, ವೆಚ್ಚ–ಲಾಭ ವಿಶ್ಲೇಷಣೆ, ಪರಿಸರ ಹಾನಿಯ ಆರ್ಥಿಕ ಪರಿಣಾಮಗಳು ಮತ್ತು ಸುಸ್ಥಿರ ಸಂಪನ್ಮೂಲ ನಿರ್ವಹಣೆಯನ್ನು ಅಧ್ಯಯನ ಮಾಡುತ್ತದೆ. ಇದು ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ನಡುವಿನ ಸಮತೋಲನ ಸಾಧಿಸಲು ಸಹಾಯ ಮಾಡುತ್ತದೆ.

4. ಪರಿಸರ ಅಧ್ಯಯನ ಮತ್ತು ಕಾನೂನು

ಪರಿಸರ ಸಂರಕ್ಷಣೆಗೆ ಬಲಿಷ್ಠ ಕಾನೂನು ವ್ಯವಸ್ಥೆಯ ಅಗತ್ಯವಿದೆ. ಪರಿಸರ ಅಧ್ಯಯನವು ಪರಿಸರ ಸಂಬಂಧಿತ ಕಾನೂನುಗಳು, ನೀತಿಗಳು ಮತ್ತು ನಿಯಮಾವಳಿಗಳನ್ನು ಒಳಗೊಂಡಿದೆ. ಇವು ನೈಸರ್ಗಿಕ ಸಂಪನ್ಮೂಲಗಳ ಬಳಕೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಮಾರ್ಗದರ್ಶನ ನೀಡುತ್ತವೆ. ಪರಿಸರ ಕಾನೂನುಗಳ ಜ್ಞಾನವು ನಾಗರಿಕರ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಯಲು ಸಹಾಯಕವಾಗುತ್ತದೆ.

5. ಪರಿಸರ ಅಧ್ಯಯನ ಮತ್ತು ತಂತ್ರಜ್ಞಾನ

ತಂತ್ರಜ್ಞಾನವು ಪರಿಸರ ಸಮಸ್ಯೆಗಳ ಪರಿಹಾರದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ, ಮಾಲಿನ್ಯ ನಿಯಂತ್ರಣ ಸಾಧನಗಳು, ಜಿಐಎಸ್ (GIS) ಮತ್ತು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನಗಳನ್ನು ಪರಿಸರ ಅಧ್ಯಯನ ಒಳಗೊಂಡಿದೆ. ಇವು ಪರಿಸರ ಹಾನಿಯನ್ನು ಕಡಿಮೆ ಮಾಡಿ ಸುಸ್ಥಿರ ಅಭಿವೃದ್ಧಿಗೆ ಸಹಾಯ ಮಾಡುತ್ತವೆ.

6. ಪರಿಸರ ಅಧ್ಯಯನ ಮತ್ತು ಮಾನವಿಕ ಶಾಸ್ತ್ರಗಳು

ನೈತಿಕತೆ, ತತ್ವಶಾಸ್ತ್ರ, ಇತಿಹಾಸ ಮತ್ತು ಸಾಹಿತ್ಯದಂತಹ ಮಾನವಿಕ ಶಾಸ್ತ್ರಗಳು ಪರಿಸರ ಅಧ್ಯಯನಕ್ಕೆ ಮೌಲ್ಯಾಧಾರಿತ ದೃಷ್ಟಿಕೋನವನ್ನು ನೀಡುತ್ತವೆ. ಪರಿಸರ ನೈತಿಕತೆ ಪ್ರಕೃತಿಯತ್ತ ಮಾನವನ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಇತಿಹಾಸವು ಮಾನವ–ಪರಿಸರ ಸಂಬಂಧಗಳ ಬೆಳವಣಿಗೆಯನ್ನು ತಿಳಿಸುತ್ತದೆ.

7. ಪರಿಸರ ಅಧ್ಯಯನ ಮತ್ತು ಸಾರ್ವಜನಿಕ ಆರೋಗ್ಯ

ಪರಿಸರ ಪರಿಸ್ಥಿತಿಗಳು ಮಾನವ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಮಾಲಿನ್ಯ, ವಿಷಕಾರಿ ಪದಾರ್ಥಗಳು, ಅಶುದ್ಧ ನೀರು ಮತ್ತು ಅಸಮರ್ಪಕ ಸ್ವಚ್ಛತೆ ಮಾನವ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ಪರಿಸರ ಅಧ್ಯಯನವು ಆರೋಗ್ಯ ವಿಜ್ಞಾನಗಳೊಂದಿಗೆ ಸಂಯೋಜನೆಗೊಂಡು ಆರೋಗ್ಯಕರ ಪರಿಸರದ ಅಗತ್ಯವನ್ನು ವಿವರಿಸುತ್ತದೆ.

ಉಪಸಂಹಾರ

ಪರಿಸರ ಅಧ್ಯಯನವು ನೈಸರ್ಗಿಕ ವಿಜ್ಞಾನಗಳು, ಸಾಮಾಜಿಕ ವಿಜ್ಞಾನಗಳು, ಅರ್ಥಶಾಸ್ತ್ರ, ಕಾನೂನು, ತಂತ್ರಜ್ಞಾನ, ಮಾನವಿಕ ಶಾಸ್ತ್ರಗಳು ಮತ್ತು ಆರೋಗ್ಯ ವಿಜ್ಞಾನಗಳನ್ನು ಒಟ್ಟುಗೂಡಿಸುವ ಬಹುಶಾಸ್ತ್ರೀಯ ವಿಷಯವಾಗಿದೆ. ಈ ಸಮಗ್ರ ದೃಷ್ಟಿಕೋನವು ಪರಿಸರ ಸಮಸ್ಯೆಗಳ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಲು ಅತ್ಯಂತ ಅಗತ್ಯವಾಗಿದೆ. ಪರಿಸರ ಅಧ್ಯಯನದ ಬಹುಶಾಸ್ತ್ರೀಯ ಸ್ವಭಾವವು ವಿದ್ಯಾರ್ಥಿಗಳನ್ನು ಜವಾಬ್ದಾರಿಯುತ, ಜಾಗೃತ ಮತ್ತು ಪರಿಸರ ಸ್ನೇಹಿ ನಾಗರಿಕರನ್ನಾಗಿ ರೂಪಿಸುತ್ತದೆ.

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ʻʻ ಸುಸ್ಥಿರ ಅಭಿವೃದ್ಧಿ ಎಂದರೆ ಪ್ರಸ್ತುತ ಪೀಳಿಗೆಯ ಅಗತ್ಯತೆಯನ್ನು ಪೂರೈಸುವಾಗ ಭವಿಷ್ಯದ ಪೀಳಿಗೆಯ ಅಗತ್ಯತೆಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು.ʼʼ ಇದರ ಅರ್ಥವೆಂದರೆ ಪರಿಸರ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳ ನಡುವೆ  ಸಮತೋಲನ ಕಾಯ್ದುಕೊಂಡು ನಾವು ಇಂದು ಬಳಸುವ ಸಂಪನ್ಮೂಲಗಳು ಮುಂದಿನ ಪೀಳಿಗೆಗೂ ಲಭ್ಯವಿರುವಂತೆ ನೋಡಿಕೊಳ್ಳುವುದು. ಉದಾ:  ನಿಗದಿತ ಪ್ರಮಾಣದಲ್ಲಿ ಆದಾಯ ಬರುವಂತೆ ಕಾರ್ಯನಿರ್ವಹಣೆ ಮಾಡುವುದು. ನಿಗದಿತ ಪ್ರಮಾಣದಲ್ಲಿ ಉತ್ಪಾದನೆ, ನಿಗದಿತ ಪ್ರಮಾಣದಲ್ಲಿ ಮಾಂಸ ದೊರಕುವಂತೆ ಮಾಡುವುದು ಮತ್ತು ನಿಗದಿತ ಪ್ರಮಾಣದಲ್ಲಿ ಸಂಪನ್ಮೂಲಗಳು ದೊರಕುವಂತೆ ಮಾಡುವುದು. ಸುಸ್ಥಿರ ಎಂಬ ಪದವು ಪ್ರಥಮ ಬಾರಿಗೆ 1713 ರಲ್ಲಿ ಜರ್ಮನಿಯ ಫಾರೆಸ್ಟ್ರಿ ಕೈಪಿಡಿಯಲ್ಲಿ ಬಳಕೆಯಾಯಿತು. ನಂತರ 1987ರಲ್ಲಿ ವಿಶ್ವ ಸಂಸ್ಥೆಯಿಂದ ನೇಮಕಗೊಂಡಿದ್ದ ಬ್ರಂಡ್ ಟ್ಲಾಂಡ್‌  ಕಮಿಷನ್ ವರದಿಯಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು. 

ನೈಸರ್ಗಿಕ ಸಂಪನ್ಮೂಲಗಳು ಹಾಳಾಗದಂತೆ ಅವುಗಳನ್ನು ಅಪಾಯಕ್ಕೆ ದೂಡುವುದನ್ನು ತಡೆಗಟ್ಟಿ ಪರಿಸರ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸ್ಥಿರವಾದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೇ ಮೂಲ ಗುರಿಯಾಗಿಬೇಕು. ಅದು ಇಂದಿನ ಮೂಲ ಉದ್ದೇಶವೂ ಆಗಿರಬೇಕು ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಇಂದಿನ ಸಾಮಾಜಿಕ ವ್ಯವಸ್ಥೆಯ ಬಯಕೆಯಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಳು ಸಂಪನ್ಮೂಲಗಳನ್ನು ವಿನಾಶದ ಅಂಚಿಗೆ ತಳ್ಳಿದೆ. ಇವುಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಯು ಅವುಗಳನ್ನು ಅನುಭವಿಸುವಂತೆ ಮಾಡಿ ಸ್ಥಿರತೆಯನ್ನು ಕಾಪಾಡುವುದೇ ಪ್ರಮುಖ ಉದ್ದೇಶವನ್ನು ಸುಸ್ಥಿರತೆಯು ಹೊಂದಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಇಂದಿನ ಮಾನವ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಮಾಡುತ್ತಲೇ ಬಂದಿದ್ದಾನೆ. ಅವನು ನೈಸರ್ಗಿಕ ವ್ಯವಸ್ಥೆಯ ಸಮಗ್ರತೆಯನ್ನು ಹಾಗೂ ಸ್ಥಿರತೆಯನ್ನು ಹಾಳು ಮಾಡದೆ ತನ್ನ ಅಗತ್ಯಗಳನ್ನು ಇದ್ದುದರಲ್ಲಿಯೇ ಪೂರೈಸಿಕೊಳ್ಳಬೇಕು. ಇದೇ ಸುಸ್ಥಿರತೆಯ ಮೂಲ ಮಂತ್ರವಾಗಿದೆ. ಪರಿಸರ ಸಂರಕ್ಷಣೆಯಿಂದಲೇ ಸುಸ್ಥಿರತೆ ಸಾಧ್ಯವಾಗಿದೆ ಎಂಬುದನ್ನು ಮಾನವ ಅರಿತುಕೊಳ್ಳಬೇಕು. ಆಧುನಿಕ ಮಾನವನ ಮೂಲ ಗುರಿ ಎಂದರೆ ಆಧುನಿಕ ಅಭಿವೃದ್ಧಿ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಏಕಕಾಲದಲ್ಲಿ ಸಾಧಿಸುವುದು ಆಗಬೇಕು. ಸುಸ್ಥಿರತೆಯಿಂದ ಭವಿಷ್ಯದ ಪರಿಸರಕ್ಕೆ ಧಕ್ಕೆ ಆಗಬಾರದು ಮತ್ತು ವರ್ತಮಾನ ಕಾಲದ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬೇಕು.

1. ಸುಸ್ಥಿರತೆಯ ಪರಿಕಲ್ಪನೆ (Concept of Sustainable Development)

ʻʻ ನಿಸರ್ಗದತ್ತವಾದ ಸಂಪನ್ಮೂಲಗಳಿಗೆ ಚ್ಯುತಿ ಬರದಂತೆ ಅಥವಾ ಅಂತಹ ಸಂಪನ್ಮೂಲಗಳು ಅಭಿವೃದ್ಧಿಯಾಗುವಂತೆ ಮಾನವನಿಂದ ನಿರ್ವಹಿಸಲ್ಪಟ್ಟ ಉತ್ಪಾದಕತೆಯ ಪ್ರಕ್ರಿಯೆಯನ್ನು ಸುಸ್ಥಿರತೆ ಎಂದು ವ್ಯಾಖ್ಯಾನಿಸಬಹುದುʼʼ.  ಭವಿಷ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಪರಿಸರವನ್ನು ಕಾಪಾಡಿ ಸುಸ್ಥಿರತೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಮಾನವನ ಆದ್ಯ ಕರ್ತವ್ಯವಾಗಿದೆ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿತು. ವಿಶ್ವದ ಹಲವಾರು ಪರಿಸರ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಸುಸ್ಥಿರತೆಯ ಅಗತ್ಯಗಳನ್ನು ಬಿಂಬಿಸಿದವು. ಅಂತಹ ಸಾಮಾಜಿಕ ಬಿಕ್ಕಟ್ಟುಗಳು ಈ ಕೆಳಗಿನಂತಿವೆ.

1. ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡಿದ ಅಧಿಕ ಸಾಲದ ಆಘಾತ

2.  ರಂಗೇಲಾಪ್ ಪರಮಾಣು ದುರಂತ

3.  1950ರ ದಶಕದಲ್ಲಿ ಉಂಟಾದ ಜಪಾನಿನ ಮಿನಾಮಟ ದುರಂತ  

4.  1984ರ ಭೂಪಾಲ ಅನಿಲ ದುರಂತ

5.  ಚೆರ್ನೋಬಿಲ್ ಅಣು ದುರಂತ 1986

6.  1973-1979ರ ನಡುವಿನ ತೈಲ ಅಪಘಾತಗಳು

7.  1923ರ ಅಮೆರಿಕಾದ ಹಣದುಬ್ಬರದ ಏರಿಕೆ.

8. 1907ರ ಅಮೇರಿಕಾದ ಬ್ಯಾಂಕಿಂಗ್ ವ್ಯವಸ್ಥೆ

 ಇದರೊಂದಿಗೆ ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಓಜೋನ್ ಪದರು  ಕ್ಷೀಣ, ಜೀವ ವೈವಿಧ್ಯಗಳ ನಾಶ ಇತ್ಯಾದಿಗಳು.

 ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಹಲವು ಅಂಶಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಈ ಕೆಳಗಿನಂತೆ ನೋಡಬಹುದು.

1. ದಿನೇ ದಿನೇ ಹದಗೆಡುತ್ತಿರುವ ಪರಿಸರ ಮಾಲಿನ್ಯವನ್ನು  ನಿಯಂತ್ರಿಸುವುದು ಮತ್ತು ಪರಿಸರ ಮಾಲಿನ್ಯವಾಗದಂತೆ ತಡೆಯುವುದು.

2.  ಬೆಳೆಯುತ್ತಿರುವ ನಗರಗಳು ಹೆಚ್ಚು ಮಾಲಿನ್ಯಕಾರಕವಾಗಿದ್ದು ಮಾಲಿನ್ಯವನ್ನು ತಡೆಗಟ್ಟಿ ನಗರ ಯೋಜನೆಗಳಿಗೆ ಹೊಸ ಕಾನೂನುಗಳನ್ನು ರೂಪಿಸುವುದು.

3.  ಸಾಮಾಜಿಕ ಅರಣ್ಯವನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು.

4.  ಸಂಪನ್ಮೂಲಗಳನ್ನು ಮಿತಿಯಾಗಿ ಬಳಸುವುದು ಮತ್ತು ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು.

5. ಶಕ್ತಿ ಸಂಪನ್ಮೂಲಗಳನ್ನು ರಕ್ಷಿಸುವುದು.

6.  ಕರಾವಳಿ ಹಾಗೂ ಸಮುದ್ರ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.

7.  ಪರಿಸರವನ್ನು ನಾಶ ಮಾಡುವ ಜನರನ್ನು ಹಿಡಿದು ಶಿಕ್ಷಿಸುವುದು.

8.  ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು.

9.  ಹಸಿರು ಕ್ರಾಂತಿಯನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ಇದರೊಂದಿಗೆ 1972ರಲ್ಲಿ ಮೆಡಿಟೇರಿನಿಯನ್ ಸಮುದ್ರ ತೀರವು ಬಹಳ ಮಲಿನಗೊಂಡಿದೆ ಎಂದು ತಿಳಿದು ಅಂತರಾಷ್ಟ್ರೀಯ ಸ್ಟಾಕ್ ಹೋಂ ಸಮ್ಮೇಳನವನ್ನು ಪ್ರಥಮ ಬಾರಿಗೆ ಕರೆಯಲಾಯಿತು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡುವಂತೆ ಯುರೋಪಿನ ದೇಶಗಳಿಗೆ ಕರೆ ನೀಡಲಾಯಿತು. 1973ರಲ್ಲಿ ʻʻದಿ  ಯುರೋಪಿಯನ್ ಕಮ್ಯುನಿಟಿಸ್‌  ಎನ್ವಿರಾನ್ಮೆಂಟ್ ಪ್ರೊಟೆಕ್ವಿವಿಟಿ  ಪ್ರೋಗ್ರಾಮ್” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯಾರು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತಾರೋ ಅವರು ದಂಡ ಕೊಡಬೇಕಾಗುವುದು ಎಂಬ ತೀರ್ಮಾನವನ್ನು ಅಂಗೀಕರಿಸಲಾಯಿತು. 

 1992 ರಲ್ಲಿ ಬ್ರೆಜಿಲ್ ನ ರಿಯೋಡಿಜನೈರೋದಲ್ಲಿ  ಜರುಗಿದ ಪೃಥ್ವಿ ಸಮ್ಮೇಳನದಲ್ಲಿ ಸುಮಾರು 1500 ವಿಜ್ಞಾನಿಗಳು 99 ನೊಬೆಲ್ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ 21 ಮಾರ್ಗಸೂಚಿ ತತ್ವಗಳನ್ನು ಅಂಗೀಕರಿಸಲಾಯಿತು. ಅದರ ಪ್ರಕಾರ ಮಾಲಿನ್ಯ ಮಾಡಿದವರೇ ದಂಡ ಭರಿಸಬೇಕು. ಜಾಗತಿಕ ಪರಿಸರಕ್ಕೆ ಹಾನಿ ಮಾಡಿದ ದೇಶಗಳೇ ಪರಿಸರವನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಹೋರಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಆದೇಶಗಳೇ ಭರಿಸಬೇಕು.

2. ಸುಸ್ಥಿರ ಅಭಿವೃದ್ಧಿಯ ಗುರಿಗಳು: ( Sustainable development goal )

ಸುಸ್ಥಿರ ಅಭಿವೃದ್ಧಿಯ ಗುರಿಗಳು 2030ರ ವೇಳೆಗೆ ಜನರನ್ನು ಮತ್ತು ನಮ್ಮ ಗ್ರಹವನ್ನು ಉತ್ತಮಪಡಿಸುವ  ವಿಶ್ವ ಸಂಸ್ಥೆಯ 17 ಗುರಿಗಳಾಗಿವೆ. ಈ ಗುರಿಗಳು ಬಡತನವನ್ನು ನಿರ್ಮೂಲನೆ ಮಾಡುವುದು, ಹಸಿವನ್ನು ಕೊನೆಗಾಣಿಸುವುದು, ಆರೋಗ್ಯ ಹಾಗೂ ಶಿಕ್ಷಣವನ್ನು ಸುಧಾರಿಸುವುದು, ಲಿಂಗಸಮಾನತೆಯನ್ನು ಉಂಟುಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸುವುದು ಹಾಗೂ ನ್ಯಾಯ ಸಂಸ್ಥೆಗಳನ್ನು ಬಲಪಡಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಯ 17 ಗುರಿಗಳು ಈ ಕೆಳಗಿನಂತಿವೆ.

೧. ಬಡತನದ ಎಲ್ಲಾ ರೂಪಗಳನ್ನು ನಿರ್ಮೂಲನೆಗೊಳಿಸುವುದು.

೨.  ಆಹಾರ, ಭದ್ರತೆ ಹಾಗೂ ಸುಸ್ಥಿರ ಕೃಷಿಯನ್ನು ಅಭಿವೃದ್ಧಿಪಡಿಸುವುದು.

೩. ಎಲ್ಲರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡುವುದು, ಆರೋಗ್ಯದ ಬಗ್ಗೆ ಖಚಿತಪಡಿಸಿಕೊಳ್ಳುವುದು.

೪.  ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಸಮಾನತೆಯನ್ನು ನೀಡುವುದು.

೫. ಲಿಂಗಸಮಾನತೆಯನ್ನು ಸಾಧಿಸುವುದು ಹಾಗೂ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವುದು.

೬.  ಕುಡಿಯುವ ನೀರು ಹಾಗೂ ನೈರ್ಮಲ್ಯದ ಬಗ್ಗೆ ಗಮನಹರಿಸುವುದು.

೭. ಪ್ರತಿಯೊಬ್ಬರ ವಿಶ್ವಾಸಾರ್ಹ ಸುಸ್ಥಿರ ಹಾಗೂ ಆಧುನಿಕ ಶಕ್ತಿಯನ್ನು ಖಚಿತ ಪಡಿಸಿಕೊಳ್ಳುವುದು.

೮. ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

೯.  ಮೂಲಸೌಕರ್ಯವನ್ನು ನೀಡುವ ಮೂಲಕ ಕೈಗಾರೀಕರಣಕ್ಕೆ ಪ್ರೋತ್ಸಾಹ ಕೊಡುವುದು.

೧೦. ದೇಶ ದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು.

೧೧. ನಗರಗಳು ಮತ್ತು ಮಾನವ ವಸಹಾತು ಪ್ರದೇಶಗಳಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು.

೧೨. ಸುಸ್ಥಿರ ಬಳಕೆ ಹಾಗೂ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.

೧೩. ಹವಾಮಾನ ಬದಲಾವಣೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು.

೧೪. ಸಾಗರ ಹಾಗೂ ಸಾಗರ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪತ್ತಿನ ಸಂರಕ್ಷಣೆಗಾಗಿ ಸತತ ಹೋರಾಡುವುದು.

೧೫. ಪರಿಸರ ಮಾಲಿನ್ಯ, ಅರಣ್ಯ ನಾಶ, ಭೂಮಿಯ ಅವನತಿಯನ್ನು ತಡೆಗಟ್ಟುವುದು ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸುವುದು.

೧೬. ಶಾಂತಿಯುತ ಹಾಗೂ ನ್ಯಾಯಯುತ ಸಮಾಜದ ನಿರ್ಮಾಣ.

೧೭. ಜಾಗತಿಕ ಸಹಭಾಗಿತ್ವವನ್ನು ಪುನರುಜ್ಜೀವನಗೊಳಿಸುವುದು.

ಉಪಸಂಹಾರ

ಸುಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಯು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಇವುಗಳ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ವಿಶ್ವ ಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮಾನವ ಸಮಾಜವನ್ನು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯದತ್ತ ಕೊಂಡೊಯ್ಯುವ ದಿಕ್ಕು ಸೂಚಿಸುತ್ತವೆ. ಈ ಗುರಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಸುಸ್ಥಿರತೆಯನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.