ʻʻ ಸುಸ್ಥಿರ ಅಭಿವೃದ್ಧಿ ಎಂದರೆ ಪ್ರಸ್ತುತ ಪೀಳಿಗೆಯ ಅಗತ್ಯತೆಯನ್ನು ಪೂರೈಸುವಾಗ ಭವಿಷ್ಯದ ಪೀಳಿಗೆಯ ಅಗತ್ಯತೆಗಳಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು.ʼʼ ಇದರ ಅರ್ಥವೆಂದರೆ ಪರಿಸರ, ಆರ್ಥಿಕ ಹಾಗೂ ಸಾಮಾಜಿಕ ಅಂಶಗಳ ನಡುವೆ  ಸಮತೋಲನ ಕಾಯ್ದುಕೊಂಡು ನಾವು ಇಂದು ಬಳಸುವ ಸಂಪನ್ಮೂಲಗಳು ಮುಂದಿನ ಪೀಳಿಗೆಗೂ ಲಭ್ಯವಿರುವಂತೆ ನೋಡಿಕೊಳ್ಳುವುದು. ಉದಾ:  ನಿಗದಿತ ಪ್ರಮಾಣದಲ್ಲಿ ಆದಾಯ ಬರುವಂತೆ ಕಾರ್ಯನಿರ್ವಹಣೆ ಮಾಡುವುದು. ನಿಗದಿತ ಪ್ರಮಾಣದಲ್ಲಿ ಉತ್ಪಾದನೆ, ನಿಗದಿತ ಪ್ರಮಾಣದಲ್ಲಿ ಮಾಂಸ ದೊರಕುವಂತೆ ಮಾಡುವುದು ಮತ್ತು ನಿಗದಿತ ಪ್ರಮಾಣದಲ್ಲಿ ಸಂಪನ್ಮೂಲಗಳು ದೊರಕುವಂತೆ ಮಾಡುವುದು. ಸುಸ್ಥಿರ ಎಂಬ ಪದವು ಪ್ರಥಮ ಬಾರಿಗೆ 1713 ರಲ್ಲಿ ಜರ್ಮನಿಯ ಫಾರೆಸ್ಟ್ರಿ ಕೈಪಿಡಿಯಲ್ಲಿ ಬಳಕೆಯಾಯಿತು. ನಂತರ 1987ರಲ್ಲಿ ವಿಶ್ವ ಸಂಸ್ಥೆಯಿಂದ ನೇಮಕಗೊಂಡಿದ್ದ ಬ್ರಂಡ್ ಟ್ಲಾಂಡ್‌  ಕಮಿಷನ್ ವರದಿಯಲ್ಲಿ ಈ ಪದವನ್ನು ವ್ಯಾಪಕವಾಗಿ ಬಳಕೆ ಮಾಡಲಾಯಿತು. 

ನೈಸರ್ಗಿಕ ಸಂಪನ್ಮೂಲಗಳು ಹಾಳಾಗದಂತೆ ಅವುಗಳನ್ನು ಅಪಾಯಕ್ಕೆ ದೂಡುವುದನ್ನು ತಡೆಗಟ್ಟಿ ಪರಿಸರ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಸ್ಥಿರವಾದ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯೇ ಮೂಲ ಗುರಿಯಾಗಿಬೇಕು. ಅದು ಇಂದಿನ ಮೂಲ ಉದ್ದೇಶವೂ ಆಗಿರಬೇಕು ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಇಂದಿನ ಸಾಮಾಜಿಕ ವ್ಯವಸ್ಥೆಯ ಬಯಕೆಯಾಗಿದೆ. ಇಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಅಭಿವೃದ್ಧಿಗಳು ಸಂಪನ್ಮೂಲಗಳನ್ನು ವಿನಾಶದ ಅಂಚಿಗೆ ತಳ್ಳಿದೆ. ಇವುಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಯು ಅವುಗಳನ್ನು ಅನುಭವಿಸುವಂತೆ ಮಾಡಿ ಸ್ಥಿರತೆಯನ್ನು ಕಾಪಾಡುವುದೇ ಪ್ರಮುಖ ಉದ್ದೇಶವನ್ನು ಸುಸ್ಥಿರತೆಯು ಹೊಂದಿದೆ. ಆದರೆ ಅಭಿವೃದ್ಧಿಯ ನೆಪದಲ್ಲಿ ಇಂದಿನ ಮಾನವ ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಮಾಡುತ್ತಲೇ ಬಂದಿದ್ದಾನೆ. ಅವನು ನೈಸರ್ಗಿಕ ವ್ಯವಸ್ಥೆಯ ಸಮಗ್ರತೆಯನ್ನು ಹಾಗೂ ಸ್ಥಿರತೆಯನ್ನು ಹಾಳು ಮಾಡದೆ ತನ್ನ ಅಗತ್ಯಗಳನ್ನು ಇದ್ದುದರಲ್ಲಿಯೇ ಪೂರೈಸಿಕೊಳ್ಳಬೇಕು. ಇದೇ ಸುಸ್ಥಿರತೆಯ ಮೂಲ ಮಂತ್ರವಾಗಿದೆ. ಪರಿಸರ ಸಂರಕ್ಷಣೆಯಿಂದಲೇ ಸುಸ್ಥಿರತೆ ಸಾಧ್ಯವಾಗಿದೆ ಎಂಬುದನ್ನು ಮಾನವ ಅರಿತುಕೊಳ್ಳಬೇಕು. ಆಧುನಿಕ ಮಾನವನ ಮೂಲ ಗುರಿ ಎಂದರೆ ಆಧುನಿಕ ಅಭಿವೃದ್ಧಿ ಹಾಗೂ ಸುಸ್ಥಿರ ವ್ಯವಸ್ಥೆಯನ್ನು ಏಕಕಾಲದಲ್ಲಿ ಸಾಧಿಸುವುದು ಆಗಬೇಕು. ಸುಸ್ಥಿರತೆಯಿಂದ ಭವಿಷ್ಯದ ಪರಿಸರಕ್ಕೆ ಧಕ್ಕೆ ಆಗಬಾರದು ಮತ್ತು ವರ್ತಮಾನ ಕಾಲದ ಅಗತ್ಯಗಳನ್ನು ಪೂರೈಸಿಕೊಳ್ಳುವಂತಿರಬೇಕು.

1. ಸುಸ್ಥಿರತೆಯ ಪರಿಕಲ್ಪನೆ (Concept of Sustainable Development)

ʻʻ ನಿಸರ್ಗದತ್ತವಾದ ಸಂಪನ್ಮೂಲಗಳಿಗೆ ಚ್ಯುತಿ ಬರದಂತೆ ಅಥವಾ ಅಂತಹ ಸಂಪನ್ಮೂಲಗಳು ಅಭಿವೃದ್ಧಿಯಾಗುವಂತೆ ಮಾನವನಿಂದ ನಿರ್ವಹಿಸಲ್ಪಟ್ಟ ಉತ್ಪಾದಕತೆಯ ಪ್ರಕ್ರಿಯೆಯನ್ನು ಸುಸ್ಥಿರತೆ ಎಂದು ವ್ಯಾಖ್ಯಾನಿಸಬಹುದುʼʼ.  ಭವಿಷ್ಯದ ಹಿತದೃಷ್ಟಿಯಿಂದ ನೈಸರ್ಗಿಕ ಪರಿಸರವನ್ನು ಕಾಪಾಡಿ ಸುಸ್ಥಿರತೆಗೆ ಧಕ್ಕೆ ಬರದಂತೆ ನಡೆದುಕೊಳ್ಳುವುದು ಇಂದಿನ ಮಾನವನ ಆದ್ಯ ಕರ್ತವ್ಯವಾಗಿದೆ. ಕೈಗಾರಿಕಾ ಕ್ರಾಂತಿಯು ಪಾಶ್ಚಿಮಾತ್ಯ ದೇಶಗಳ ಆರ್ಥಿಕ ಹಾಗೂ ಸಾಮಾಜಿಕ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಿತು. ವಿಶ್ವದ ಹಲವಾರು ಪರಿಸರ ಹಾಗೂ ಸಾಮಾಜಿಕ ಬಿಕ್ಕಟ್ಟುಗಳು ಸುಸ್ಥಿರತೆಯ ಅಗತ್ಯಗಳನ್ನು ಬಿಂಬಿಸಿದವು. ಅಂತಹ ಸಾಮಾಜಿಕ ಬಿಕ್ಕಟ್ಟುಗಳು ಈ ಕೆಳಗಿನಂತಿವೆ.

1. ಅಭಿವೃದ್ಧಿಶೀಲ ರಾಷ್ಟ್ರಗಳು ಮಾಡಿದ ಅಧಿಕ ಸಾಲದ ಆಘಾತ

2.  ರಂಗೇಲಾಪ್ ಪರಮಾಣು ದುರಂತ

3.  1950ರ ದಶಕದಲ್ಲಿ ಉಂಟಾದ ಜಪಾನಿನ ಮಿನಾಮಟ ದುರಂತ  

4.  1984ರ ಭೂಪಾಲ ಅನಿಲ ದುರಂತ

5.  ಚೆರ್ನೋಬಿಲ್ ಅಣು ದುರಂತ 1986

6.  1973-1979ರ ನಡುವಿನ ತೈಲ ಅಪಘಾತಗಳು

7.  1923ರ ಅಮೆರಿಕಾದ ಹಣದುಬ್ಬರದ ಏರಿಕೆ.

8. 1907ರ ಅಮೇರಿಕಾದ ಬ್ಯಾಂಕಿಂಗ್ ವ್ಯವಸ್ಥೆ

 ಇದರೊಂದಿಗೆ ಜಾಗತಿಕ ತಾಪಮಾನ, ವಾಯುಮಾಲಿನ್ಯ, ಜಲಮಾಲಿನ್ಯ, ಓಜೋನ್ ಪದರು  ಕ್ಷೀಣ, ಜೀವ ವೈವಿಧ್ಯಗಳ ನಾಶ ಇತ್ಯಾದಿಗಳು.

 ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಹಲವು ಅಂಶಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗಿದೆ. ಅವುಗಳಲ್ಲಿ ಕೆಲವೊಂದು ಈ ಕೆಳಗಿನಂತೆ ನೋಡಬಹುದು.

1. ದಿನೇ ದಿನೇ ಹದಗೆಡುತ್ತಿರುವ ಪರಿಸರ ಮಾಲಿನ್ಯವನ್ನು  ನಿಯಂತ್ರಿಸುವುದು ಮತ್ತು ಪರಿಸರ ಮಾಲಿನ್ಯವಾಗದಂತೆ ತಡೆಯುವುದು.

2.  ಬೆಳೆಯುತ್ತಿರುವ ನಗರಗಳು ಹೆಚ್ಚು ಮಾಲಿನ್ಯಕಾರಕವಾಗಿದ್ದು ಮಾಲಿನ್ಯವನ್ನು ತಡೆಗಟ್ಟಿ ನಗರ ಯೋಜನೆಗಳಿಗೆ ಹೊಸ ಕಾನೂನುಗಳನ್ನು ರೂಪಿಸುವುದು.

3.  ಸಾಮಾಜಿಕ ಅರಣ್ಯವನ್ನು ಬೆಳೆಸುವುದು ಮತ್ತು ಸಂರಕ್ಷಿಸುವುದು.

4.  ಸಂಪನ್ಮೂಲಗಳನ್ನು ಮಿತಿಯಾಗಿ ಬಳಸುವುದು ಮತ್ತು ನೀರನ್ನು ಕಲುಷಿತಗೊಳ್ಳದಂತೆ ನೋಡಿಕೊಳ್ಳುವುದು.

5. ಶಕ್ತಿ ಸಂಪನ್ಮೂಲಗಳನ್ನು ರಕ್ಷಿಸುವುದು.

6.  ಕರಾವಳಿ ಹಾಗೂ ಸಮುದ್ರ ಮೀನುಗಾರಿಕೆಯನ್ನು ಅಭಿವೃದ್ಧಿಪಡಿಸುವುದು.

7.  ಪರಿಸರವನ್ನು ನಾಶ ಮಾಡುವ ಜನರನ್ನು ಹಿಡಿದು ಶಿಕ್ಷಿಸುವುದು.

8.  ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು.

9.  ಹಸಿರು ಕ್ರಾಂತಿಯನ್ನು ಎಲ್ಲೆಡೆ ಪರಿಣಾಮಕಾರಿಯಾಗಿ ಜಾರಿಗೆ ತರುವುದು.

ಇದರೊಂದಿಗೆ 1972ರಲ್ಲಿ ಮೆಡಿಟೇರಿನಿಯನ್ ಸಮುದ್ರ ತೀರವು ಬಹಳ ಮಲಿನಗೊಂಡಿದೆ ಎಂದು ತಿಳಿದು ಅಂತರಾಷ್ಟ್ರೀಯ ಸ್ಟಾಕ್ ಹೋಂ ಸಮ್ಮೇಳನವನ್ನು ಪ್ರಥಮ ಬಾರಿಗೆ ಕರೆಯಲಾಯಿತು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಮೊದಲ ಆದ್ಯತೆಯನ್ನು ನೀಡುವಂತೆ ಯುರೋಪಿನ ದೇಶಗಳಿಗೆ ಕರೆ ನೀಡಲಾಯಿತು. 1973ರಲ್ಲಿ ʻʻದಿ  ಯುರೋಪಿಯನ್ ಕಮ್ಯುನಿಟಿಸ್‌  ಎನ್ವಿರಾನ್ಮೆಂಟ್ ಪ್ರೊಟೆಕ್ವಿವಿಟಿ  ಪ್ರೋಗ್ರಾಮ್” ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಯಾರು ಪರಿಸರ ಮಾಲಿನ್ಯವನ್ನು ಉಂಟುಮಾಡುತ್ತಾರೋ ಅವರು ದಂಡ ಕೊಡಬೇಕಾಗುವುದು ಎಂಬ ತೀರ್ಮಾನವನ್ನು ಅಂಗೀಕರಿಸಲಾಯಿತು. 

 1992 ರಲ್ಲಿ ಬ್ರೆಜಿಲ್ ನ ರಿಯೋಡಿಜನೈರೋದಲ್ಲಿ  ಜರುಗಿದ ಪೃಥ್ವಿ ಸಮ್ಮೇಳನದಲ್ಲಿ ಸುಮಾರು 1500 ವಿಜ್ಞಾನಿಗಳು 99 ನೊಬೆಲ್ ಪ್ರಶಸ್ತಿ ವಿಜೇತರು ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ 21 ಮಾರ್ಗಸೂಚಿ ತತ್ವಗಳನ್ನು ಅಂಗೀಕರಿಸಲಾಯಿತು. ಅದರ ಪ್ರಕಾರ ಮಾಲಿನ್ಯ ಮಾಡಿದವರೇ ದಂಡ ಭರಿಸಬೇಕು. ಜಾಗತಿಕ ಪರಿಸರಕ್ಕೆ ಹಾನಿ ಮಾಡಿದ ದೇಶಗಳೇ ಪರಿಸರವನ್ನು ಸ್ವಚ್ಛಗೊಳಿಸುವ ಹೊಣೆಯನ್ನು ಹೋರಬೇಕು ಮತ್ತು ಅದಕ್ಕೆ ಸಂಬಂಧಿಸಿದಂತೆ ಖರ್ಚು ವೆಚ್ಚಗಳನ್ನು ಆದೇಶಗಳೇ ಭರಿಸಬೇಕು.

2. ಸುಸ್ಥಿರ ಅಭಿವೃದ್ಧಿಯ ಗುರಿಗಳು: ( Sustainable development goal )

ಸುಸ್ಥಿರ ಅಭಿವೃದ್ಧಿಯ ಗುರಿಗಳು 2030ರ ವೇಳೆಗೆ ಜನರನ್ನು ಮತ್ತು ನಮ್ಮ ಗ್ರಹವನ್ನು ಉತ್ತಮಪಡಿಸುವ  ವಿಶ್ವ ಸಂಸ್ಥೆಯ 17 ಗುರಿಗಳಾಗಿವೆ. ಈ ಗುರಿಗಳು ಬಡತನವನ್ನು ನಿರ್ಮೂಲನೆ ಮಾಡುವುದು, ಹಸಿವನ್ನು ಕೊನೆಗಾಣಿಸುವುದು, ಆರೋಗ್ಯ ಹಾಗೂ ಶಿಕ್ಷಣವನ್ನು ಸುಧಾರಿಸುವುದು, ಲಿಂಗಸಮಾನತೆಯನ್ನು ಉಂಟುಮಾಡುವುದು, ಹವಾಮಾನ ಬದಲಾವಣೆಯನ್ನು ಎದುರಿಸುವುದು ಹಾಗೂ ನ್ಯಾಯ ಸಂಸ್ಥೆಗಳನ್ನು ಬಲಪಡಿಸುವುದು ಮುಂತಾದವುಗಳನ್ನು ಒಳಗೊಂಡಿದೆ. ಸುಸ್ಥಿರ ಅಭಿವೃದ್ಧಿಯ 17 ಗುರಿಗಳು ಈ ಕೆಳಗಿನಂತಿವೆ.

೧. ಬಡತನದ ಎಲ್ಲಾ ರೂಪಗಳನ್ನು ನಿರ್ಮೂಲನೆಗೊಳಿಸುವುದು.

೨.  ಆಹಾರ, ಭದ್ರತೆ ಹಾಗೂ ಸುಸ್ಥಿರ ಕೃಷಿಯನ್ನು ಅಭಿವೃದ್ಧಿಪಡಿಸುವುದು.

೩. ಎಲ್ಲರ ಆರೋಗ್ಯ ಹಾಗೂ ಯೋಗಕ್ಷೇಮವನ್ನು ಕಾಪಾಡುವುದು, ಆರೋಗ್ಯದ ಬಗ್ಗೆ ಖಚಿತಪಡಿಸಿಕೊಳ್ಳುವುದು.

೪.  ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಹಾಗೂ ಸಮಾನತೆಯನ್ನು ನೀಡುವುದು.

೫. ಲಿಂಗಸಮಾನತೆಯನ್ನು ಸಾಧಿಸುವುದು ಹಾಗೂ ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವುದು.

೬.  ಕುಡಿಯುವ ನೀರು ಹಾಗೂ ನೈರ್ಮಲ್ಯದ ಬಗ್ಗೆ ಗಮನಹರಿಸುವುದು.

೭. ಪ್ರತಿಯೊಬ್ಬರ ವಿಶ್ವಾಸಾರ್ಹ ಸುಸ್ಥಿರ ಹಾಗೂ ಆಧುನಿಕ ಶಕ್ತಿಯನ್ನು ಖಚಿತ ಪಡಿಸಿಕೊಳ್ಳುವುದು.

೮. ಪ್ರತಿಯೊಬ್ಬರಿಗೂ ಉದ್ಯೋಗ ನೀಡುವುದು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು.

೯.  ಮೂಲಸೌಕರ್ಯವನ್ನು ನೀಡುವ ಮೂಲಕ ಕೈಗಾರೀಕರಣಕ್ಕೆ ಪ್ರೋತ್ಸಾಹ ಕೊಡುವುದು.

೧೦. ದೇಶ ದೇಶಗಳ ನಡುವಿನ ಆರ್ಥಿಕ ಅಸಮಾನತೆಯನ್ನು ಹೋಗಲಾಡಿಸುವುದು.

೧೧. ನಗರಗಳು ಮತ್ತು ಮಾನವ ವಸಹಾತು ಪ್ರದೇಶಗಳಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು.

೧೨. ಸುಸ್ಥಿರ ಬಳಕೆ ಹಾಗೂ ಉತ್ಪಾದನೆಯನ್ನು ಪ್ರೋತ್ಸಾಹಿಸುವುದು.

೧೩. ಹವಾಮಾನ ಬದಲಾವಣೆ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನು ಪರಿಣಾಮಕಾರಿಯಾಗಿ ಎದುರಿಸುವುದು.

೧೪. ಸಾಗರ ಹಾಗೂ ಸಾಗರ ಸಂಪತ್ತನ್ನು ಸಮರ್ಪಕವಾಗಿ ಬಳಸಿಕೊಂಡು ಸಂಪತ್ತಿನ ಸಂರಕ್ಷಣೆಗಾಗಿ ಸತತ ಹೋರಾಡುವುದು.

೧೫. ಪರಿಸರ ಮಾಲಿನ್ಯ, ಅರಣ್ಯ ನಾಶ, ಭೂಮಿಯ ಅವನತಿಯನ್ನು ತಡೆಗಟ್ಟುವುದು ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸುವುದು.

೧೬. ಶಾಂತಿಯುತ ಹಾಗೂ ನ್ಯಾಯಯುತ ಸಮಾಜದ ನಿರ್ಮಾಣ.

೧೭. ಜಾಗತಿಕ ಸಹಭಾಗಿತ್ವವನ್ನು ಪುನರುಜ್ಜೀವನಗೊಳಿಸುವುದು.

ಉಪಸಂಹಾರ

ಸುಸ್ಥಿರತೆ ಮತ್ತು ಸುಸ್ಥಿರ ಅಭಿವೃದ್ಧಿಯು ಇಂದಿನ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಮಹತ್ವದ ಮಾರ್ಗವಾಗಿದೆ. ಪರಿಸರ ಸಂರಕ್ಷಣೆ, ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯ ಇವುಗಳ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ನೈಸರ್ಗಿಕ ಸಂಪನ್ಮೂಲಗಳನ್ನು ಮಿತವಾಗಿ ಬಳಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ. ವಿಶ್ವ ಸಂಸ್ಥೆಯ 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮಾನವ ಸಮಾಜವನ್ನು ಸುರಕ್ಷಿತ ಮತ್ತು ಸಮೃದ್ಧ ಭವಿಷ್ಯದತ್ತ ಕೊಂಡೊಯ್ಯುವ ದಿಕ್ಕು ಸೂಚಿಸುತ್ತವೆ. ಈ ಗುರಿಗಳನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ಉಳಿಸಿಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಸುಸ್ಥಿರತೆಯನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳುವುದು ಕಾಲದ ಅಗತ್ಯವಾಗಿದೆ.