ಭಾರತದ ಸಂವಿಧಾನದ ವಿಸ್ತಾರ ಹಾಗೂ ಮಹತ್ವವನ್ನು ಅರಿಯಲು ಪ್ರಸ್ತಾವನೆಯಲ್ಲಿರುವ ತತ್ವಗಳ ಸಂಕ್ಷಿಪ್ತ ಮಾಹಿತಿಯನ್ನು ಈ ಕೆಳಗಿನಂತೆ ನೋಡೋಣ,

 

1.  ಭಾರತದ ಪ್ರಜೆಗಳಾದ ನಾವು: (We the people of india) 

 ಭಾರತದ ಸಂವಿಧಾನ ಪ್ರಸ್ತಾವನೆಯು ಭಾರತದ ಪ್ರಜೆಗಳಾದ ನಾವು ಎಂದು ಆರಂಭಗೊಂಡು ನಮ್ಮ ಸಂವಿಧಾನವನ್ನು ನವೆಂಬರ್ 26 1949 ರಂದು ಅಂಗೀಕರಿಸಿ ನಮಗೆ ನಾವೇ ಅರ್ಪಿಸಿಕೊಂಡಿದ್ದೇವೆ ಎಂದು ಅಂತ್ಯಗೊಂಡಿದೆ. ಅಂದರೆ ಇದರ ಅರ್ಥ ಭಾರತದ ಸಂವಿಧಾನವು ಭಾರತೀಯರಿಂದಲೇ ರಚಿತಗೊಂಡಿದೆ ಎಂದರ್ಥ. ಸಂವಿಧಾನ ರಚನಾ ಸಭೆಯ ಸದಸ್ಯರು ಪರೋಕ್ಷವಾಗಿ ಆಯ್ಕೆಯಾಗಿದ್ದರೂ ಪ್ರಜೆಗಳ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳನ್ನು ಚರ್ಚಿಸಿ ದೇಶಕ್ಕೆ ಸೂಕ್ತವಾದ ಸಂವಿಧಾನವನ್ನು ರಚಿಸಿದರು. ಹೆಚ್ಚು ಕಡಿಮೆ ದೇಶದ ಎಲ್ಲಾ ವರ್ಗದ ಜನರಿಗೆ ಪ್ರಾತಿನಿಧ್ಯ ನೀಡಿದ್ದು ಸಂವಿಧಾನ ರಚನಾ ಸಭೆ ಎಲ್ಲರ ಹಿತರಕ್ಷಣೆ ಮತ್ತು ಅಶೋತ್ತರಗಳನ್ನು ಕಾಪಾಡುವಲ್ಲಿ ಸಾಮರ್ಥ್ಯವನ್ನು ಪ್ರದರ್ಶಿಸಿತು. ಸಂವಿಧಾನ ರಚನಾ ಸಭೆಯ ಸದಸ್ಯರು ಭಾರತದ ಪ್ರಜೆಗಳಾದ ನಾವು ಎಂಬ ಘೋಷಣೆಯ ಮೂಲಕ ಸಂವಿಧಾನವನ್ನು ಅಂಗೀಕರಿಸಿದ್ದನ್ನು ಕೆಲವರು ಟೀಸಿದ್ದಾರೆ. ಏಕೆಂದರೆ ವಾಸ್ತವವಾಗಿ ಭಾರತೀಯರೆಲ್ಲರೂ ಸಂವಿಧಾನದ ರಚನೆಯಲ್ಲಿ ಭಾಗವಹಿಸಲಿಲ್ಲ.

2.  ಸಾರ್ವಭೌಮ ರಾಷ್ಟ್ರ: (Sovereign state)

ಪ್ರಸ್ತಾವನೆ ತಿಳಿಸಿರುವ ಹಾಗೆ ಭಾರತವು ಒಂದು ಸರ್ವತಂತ್ರ ಸ್ವತಂತ್ರವುಳ್ಳ ಸಾರ್ವಭೌಮ ರಾಷ್ಟ್ರ. ಭಾರತವು ವಿಶ್ವದ ಯಾವುದೇ ದೇಶಗಳ ಅದೀನಕ್ಕೊಳಪಟ್ಟ ರಾಷ್ಟ್ರವಲ್ಲ. ಸ್ವಾತಂತ್ರ ನಂತರ ಭಾರತವು ಯಾವುದೇ ವಿದೇಶಿ ಶಕ್ತಿಗೆ ಒಳಗಾಗದೆ ತನ್ನ ಆಂತರಿಕ ಹಾಗೂ ಬಾಹ್ಯ ವ್ಯವಹಾರಗಳನ್ನು ತಾನೇ ನಿರ್ವಹಿಸುತ್ತಿದೆ. ಸ್ವತಂತ್ರ ರಾಷ್ಟ್ರ ಕಾಮನ್‌ವೆಲ್ತ್ನಲ್ಲಿ ಸದಸ್ಯ ರಾಷ್ಟ್ರವಾಗಿದ್ದರೂ ತನ್ನ ಸ್ವಾತಂತ್ರವನ್ನಾಗಲಿ ಅಥವಾ ಅಲಿಪ್ತ ನೀತಿಯನ್ನಾಗಲಿ ಕಳೆದುಕೊಂಡಿಲ್ಲ. ಬ್ರಿಟಿಷ್ ರಾಣಿ ಮುಖ್ಯಸ್ಥರಾಗಿರುವ ಕಾಮನ್ವೆಲ್ತ್‌ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಹಕಾರವನ್ನುಂಟು ಮಾಡಲು ಸಹಾಯಕವಾಗಿದೆ. ತನಗೆ ಬೇಡವಾದರೆ ಕಾಮನ್ವೆಲ್ತ್ ನಿಂದ ಹೊರಗೆ ಬರುವ ಅಧಿಕಾರ ಭಾರತಕ್ಕೆ ಇದೆ. ಭಾರತವು ಸ್ವ-ಇಚ್ಛೆಯಿಂದ ಕಾಮನ್ವೆಲ್ತನ ಸದಸ್ಯ ರಾಷ್ಟ್ರವಾಗಿರುವುದರಿಂದ ಅದು ಸ್ವ ಇಚ್ಛೆಯಿಂದ ಹೊರಬರುವ ಅಧಿಕಾರವನ್ನು ಹೊಂದಿದೆ. 

3. ಸಮಾಜವಾದಿ ರಾಷ್ಟ್ರ: (Socialist) 

ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆಗೊಳಿಸಿ ಸಮಾನವಾದ ಸಮಾಜಕ್ಕೆ ಅಡಿಗಲ್ಲನ್ನು ಹಾಕುವ ದೃಷ್ಟಿಯಿಂದ ಭಾರತವು ಸಮಾಜವಾದವನ್ನು ಅನುಸರಿಸಿತು. ಪ್ರಸ್ತಾವನೆಯಲ್ಲಿಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಸಮಾಜವಾದಿ ತತ್ವಗಳನ್ನು ಕಾರ್ಯಗತಗೊಳಿಸುವ ಮೂಲಕ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ನ್ಯಾಯವನ್ನು ಪ್ರಜೆಗಳಿಗೆ ಒದಗಿಸಿಕೊಡುವಂತೆ ಕರೆ ನೀಡಿದೆ. ಸಮಾಜವಾದಿ ಎಂಬ ಪದವು ಸಂವಿಧಾನದಲ್ಲಿರಲಿಲ್ಲ. ಸಂವಿಧಾನಕ್ಕೆ 42ನೇ ತಿದ್ದುಪಡಿಯನ್ನು ತರುವ ಮೂಲಕ ಸಮಾಜವಾದಿ ಎಂಬ ಪದವನ್ನು 1976 ಡಿಸೆಂಬರ್ 18ರಂದು ಪ್ರಸ್ತಾವನೆಯಲ್ಲಿ ಸೇರಿಸಲಾಯಿತು. ಇನ್ನು ಸಂವಿಧಾನದಲ್ಲಿ ರಾಜ್ಯ ನಿರ್ದೇಶಕ ತತ್ವಗಳು ಎಂಬ ಪ್ರತ್ಯೇಕ ಭಾಗವಿದ್ದು ಇದು ರಾಜ್ಯ ನಿರ್ವಹಿಸಬೇಕಾದ ಕಾರ್ಯಗಳ ಬಗ್ಗೆ ಮಾರ್ಗಸೂಚಿಯಾಗಿದೆ. ಇದರಲ್ಲಿ ಸಮಾಜವಾದ, ಉದಾರವಾದ ಹಾಗೂ ಗಾಂಧಿ ತತ್ವಗಳನ್ನು ಅಳವಡಿಸಲಾಗಿದೆ. ಉದಾಹರಣೆ: ಭೂ ಸುಧಾರಣೆ, ಸಂಪನ್ಮೂಲಗಳ ಸಮರ್ಪಕ ಬಳಕೆ, ಸಂಪತ್ತಿನ ಸಮಾನ ಹಂಚಿಕೆ, ಸಮಾನ ಕೆಲಸಕ್ಕೆ ಸಮಾನವಾದ ವೇತನ, ಕಾರ್ಮಿಕರ ಹಾಗೂ ವೃದ್ಧರ ಯೋಗ ಕ್ಷೇಮ ಇವೆ ಕಾರ್ಯಕ್ರಮಗಳನ್ನು ಜಾರಿಗೆ ತರುವಂತೆ ಬಯಸುತ್ತಿದೆ. ಇವುಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತರುವ ನೈತಿಕ ಕರ್ತವ್ಯಗಳೇ ವಿನಹಃ ಅದು ಕಡ್ಡಾಯವಾದದ್ದು ಅಲ್ಲ.

4. ಜಾತ್ಯತೀತ ರಾಷ್ಟ್ರ: (Secular)

 ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಪ್ರಾಧಾನ್ಯತೆಯನ್ನು ನೀಡದೇ ಅಸ್ತಿತ್ವದಲ್ಲಿರುವ ಎಲ್ಲಾ ಧರ್ಮಗಳನ್ನು ಸಮಾನವಾಗಿ ರಾಜ್ಯವು ಗೌರವಿಸುವುದನ್ನು ಜಾತ್ಯತೀತತೆ ಎಂದು ಕರೆಯುವರು. ಭಾರತವು ಸರ್ವಧರ್ಮಗಳ ದೇಶ. ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸಿಖ್ಖರು, ಯಹೂದಿಗಳು, ಜೈನರು ಹಾಗೂ ಬೌದ್ಧರಿದ್ದಾರೆ. ದೇಶದಲ್ಲಿ ಕೋಮು ಸಾಮರಸ್ಯ ಹಾಗೂ ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಭಾರತ ಲೌಕಿಕ ಹಾಗೂ ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಈ ಅಂಶವನ್ನು ಒತ್ತಿ ಹೇಳಲು ಸಂವಿಧಾನದ 42ನೇ ತಿದ್ದುಪಡಿಯ ಮೂಲಕ ಜಾತ್ಯತೀತ ಎಂಬ ಪದವನ್ನು ಪ್ರಸ್ತಾವನೆಗೆ 1976ರಲ್ಲಿ ಕೇಂದ್ರ ಸರ್ಕಾರ ಅಳವಡಿಸಿತು. ಸೆಕ್ಯುಲರ್ ಎಂಬ ಪದಕ್ಕೆ ವಿವಿಧ ಅರ್ಥಗಳಿವೆ. ಜಾತ್ಯತೀತತೆ, ಧರ್ಮಾತೀತತೆ, ಧರ್ಮ ನಿರಪೇಕ್ಷತೆ ಹಾಗೂ ಸರ್ವಧರ್ಮ ಸದ್ಭಾವನೆ ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ತಟಸ್ಥವಾಗಿರುವುದು ಜಾತ್ಯತೀತ ತತ್ವ ಎಂದು ಕೆಲವರು ಹೇಳಿದ್ದಾರೆ.  ಜವಹರಲಾಲ್ ನೆಹರು ಅವರು ಜಾತ್ಯತೀತ ಎಂದರೆ ಲೌಕಿಕವಾದ ಅಲ್ಲ ಅದರಲ್ಲಿ ಆಧ್ಯಾತ್ಮಿಕ ಅಂಶಗಳು ಇರುತ್ತವೆ ಎಂದಿದ್ದಾರೆ.

ಸಂವಿಧಾನದ ಪ್ರಸ್ತಾವನೆಯಲ್ಲಿ ಧಾರ್ಮಿಕ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಲಾಗಿದ್ದು ವ್ಯಕ್ತಿಗಳು ತಮ್ಮ ಆತ್ಮ ಸಾಕ್ಷಿಗೆ ಅನುಸಾರವಾಗಿ ಯಾವುದೇ ಧರ್ಮವನ್ನು ಸ್ವೀಕರಿಸುವ, ಪ್ರಚಾರ ಮಾಡುವ ಹಾಗೂ ನಾಸ್ತಿಕವಾಗಿ ಜೀವನ ಸಾಗಿಸುವ ಪೂರ್ಣ ಸ್ವಾತಂತ್ರ್ಯವನ್ನು ಹೊಂದಿದ್ದಾರೆ.

 5. ಪ್ರಜಾಸತ್ತಾತ್ಮಕತೆ: (Democratic) 

ದೇಶದ ಆಡಳಿತದಲ್ಲಿ ಪ್ರಜೆಗಳು ಭಾಗಿಯಾಗುವ ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವ ಎನ್ನಲಾಗಿದೆ. ಈ ಪ್ರಜಾಪ್ರಭುತ್ವ ಎಂಬ ಪದವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸರ್ ಹೆನ್ರಿ ಮೈನ್ ರವರು ಪ್ರಜಾಪ್ರಭುತ್ವ ಒಂದು ಸರ್ಕಾರ ಪದ್ಧತಿ ಎಂದು ಹೇಳಿದ್ದಾರೆ. ಅಬ್ರಹಂ ಲಿಂಕನ್ ರವರು ಪ್ರಜೆಗಳಿಂದ, ಪ್ರಜೆಗಳಿಗಾಗಿ ಹಾಗೂ ಪ್ರಜೆಗಳಿಗೋಸ್ಕರ ಇರುವ ಸರ್ಕಾರವೇ ಪ್ರಜಾಪ್ರಭುತ್ವ ಎಂದು ಹೇಳಿದ್ದಾರೆ. ಪ್ರಜಾಪ್ರಭುತ್ವವು ಮುಕ್ತತೆ ಹಾಗೂ ಪಾರದರ್ಶಕತೆಯನ್ನು ಅವಲಂಬಿಸಿದ್ದು ಪ್ರಜೆಗಳು ತಮ್ಮ ಸರ್ಕಾರವನ್ನು ತಾವೇ ಪ್ರತಿನಿಧಿಗಳ ಮೂಲಕ ಆಯ್ಕೆ ಮಾಡಿಕೊಳ್ಳುತ್ತಾರೆ. ಸರ್ಕಾರದ ಸರಿ ತಪ್ಪುಗಳನ್ನು ತಿಳಿಹೇಳಿ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡುತ್ತಾರೆ. ಒಂದು ವೇಳೆ ಸರ್ಕಾರ ಸರಿದಾರಿಗೆ ಬಾರದಿದ್ದಾಗ ಬೇಸರಗೊಂಡು ಪ್ರಜೆಗಳು ಸರ್ಕಾರವನ್ನು ಐದು ವರ್ಷಕ್ಕೊಮ್ಮೆ ಬದಲಿಸುವ ಅಧಿಕಾರವನ್ನು ಹೊಂದಿದ್ದಾರೆ.

6. ಗಣರಾಜ್ಯ: (Republic)

ದೇಶದ ಮುಖ್ಯಸ್ಥ ಪ್ರಜೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಚುನಾಯಿತರಾಗುತ್ತಿದ್ದರೆ ಆ ದೇಶವನ್ನು ಗಣರಾಜ್ಯ ಎಂದು ಕರೆಯಲಾಗುತ್ತದೆ. ರಿಪಬ್ಲಿಕ್ ಪದವು ಸಹ ವಿವಿಧ ಅರ್ಥಗಳನ್ನು ಹೊಂದಿದೆ. ರಿಪಬ್ಲಿಕ್ ಸರ್ಕಾರ ರಾಜಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಲೀಕಾಕ್ ಹೇಳಿದರೆ, ಅನೇಕ ವ್ಯಕ್ತಿಗಳಿಂದ  ನಡೆಸುವ ಸರ್ಕಾರ ಪದ್ಧತಿಯಾದರೆ ಅದು ರಿಪಬ್ಲಿಕ್ ಎಂದು ಜೆಲಿನೆಕ್ ಹೇಳಿದ್ದಾರೆ. ಹೊಸ ಆಕ್ಸ್ಫರ್ಡ್ ನಿಘಂಟಿನ ಪ್ರಕಾರ ಪರಮಾಧಿಕಾರ ಪ್ರಜೆಗಳಿಂದ ಮತ್ತು ಅವರಿಂದ ಆಯ್ಕೆಯಾದ ಪ್ರತಿನಿಧಿಗಳ ಅಥವಾ‌ ಅಧಿಕಾರಿಗಳ ಕೈಯಲ್ಲಿ ಇರುವುದೇ ಗಣರಾಜ್ಯ. ಒಟ್ಟಿನಲ್ಲಿ ಭಾರತ ಸರ್ಕಾರವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಟ್ಟಿಲ್ಲ ಎಂಬುದೇ ಆಗಿದೆ. ರಾಷ್ಟ್ರದ ಮುಖ್ಯಸ್ಥರು ಚುನಾವಣೆಯ ಮೂಲಕ ಆಯ್ಕೆಯಾಗುವ ಪದ್ಧತಿಯನ್ನು ಸಂವಿಧಾನದ ಪ್ರಸ್ತಾವನೆಯಲ್ಲಿಯೇ ಪ್ರಸ್ತಾಪಿಸಲಾಗಿದೆ. ಹಾಗೂ ಅಧ್ಯಕ್ಷರ ಅಧಿಕಾರ ಅವಧಿ ಐದು ವರ್ಷಗಳೆಂದು ಸಹ ನಿಗದಿಪಡಿಸಲಾಗಿದೆ. ಹೀಗೆ ಅಮೆರಿಕಾದ ಹಾಗೆ ಭಾರತವು ಗಣರಾಜ್ಯವಾಗಿದೆ. ಆದರೆ ಇಂಗ್ಲೆಂಡ್ ರಾಜ್ಯ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ವಿನಹ ಗಣರಾಜ್ಯವಾಗಿಲ್ಲ. ಇಲ್ಲಿ ರಾಷ್ಟ್ರದ ಮುಖ್ಯಸ್ಥರಾಗಿರುವ ರಾಣಿ ಅಥವಾ ರಾಜ ಪ್ರಜೆಗಳಿಂದ ಆಯ್ಕೆ ಆಗುವುದಿಲ್ಲ.

7. ನ್ಯಾಯ: (Judiciary) 

 ಸಾವಿರಾರು ವರ್ಷಗಳಿಂದ ಭಾರತೀಯ ಸಮಾಜದಲ್ಲಿ ಎದ್ದು ಕಾಣುತ್ತಿದ್ದ ಸಾಮಾಜಿಕ ಅಸಮಾನತೆಗಳಾದ ಕರಿಯ-ಬಿಳಿಯ, ಮೇಲು-ಕೀಳು, ಸೃಶ್ಯ- ಅಸ್ಪೃಶ್ಯ, ಮೇಲುಜಾತಿ, ಕೀಳು ಜಾತಿ ಎಂದು ವಿಂಗಡಿಸಿ ಒಂದು ಜಾತಿಯನ್ನಂತೂ ಸಮಾಜದಿಂದ ಹೊರಗಿಡಲಾಗಿತ್ತು. ಅವರನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕ, ಸಾಮಾಜಿಕವಾಗಿ ಶೋಷಣೆಗೆ ಒಳಪಡಿಸಲಾಗಿತ್ತು. ಅವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣಲಾಗುತ್ತಿತ್ತು. ಈ ಅಸಮಾನತೆಯನ್ನು ಹೋಗಲಾಡಿಸಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸುವ ಉದ್ದೇಶವನ್ನು ಸಂವಿಧಾನ ಹೊಂದಿದೆ. ಸಾಮಾಜಿಕ ನ್ಯಾಯವೆಂದರೆ ವಿವಿಧ ವರ್ಗಗಳಲ್ಲಿ ಹಾಗೂ ಜಾತಿಗಳಲ್ಲಿ ಏಕತೆ ಮತ್ತು ಸಮಾನತೆಯ  ಭಾವನೆಯನ್ನು ಉಂಟುಮಾಡುವುದು, ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಹಾಗೂ ಶ್ರಮಜೀವಿಗಳ ಜೀವನ ಮಟ್ಟವನ್ನು ಸುಧಾರಿಸುವುದು, ಹಾಗೆಯೇ ಬಡತನವನ್ನು ತೊಲಗಿಸಿ ಸಾಧ್ಯವಿದ್ದ ಮಟ್ಟಿಗೆ ಎಲ್ಲರಲ್ಲೂ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನು ಕಾಪಾಡುವುದು ಸಂವಿಧಾನದ ಗುರಿಯಾಗಿದೆ. ಮುಂದುವರೆದು ಹಿಂದುಳಿದ ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ಜನಾಂಗವನ್ನು ರಾಜಕೀಯ ಉನ್ನತಿ ಸಾಧಿಸಲು ಅನುವು ಮಾಡಿಕೊಡುವುದು. ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಎಲ್ಲರಿಗೂ ನ್ಯಾಯ ದೊರೆಯಬೇಕೆಂದು ಪ್ರಸ್ತಾವನೆಯಲ್ಲಿ ಹೇಳಿರುವುದು ಮಾನವೀಯತೆಯ ಹಾಗೂ ಏಕತೆಯ ಸಂಕೇತವಾಗಿದೆ. ಆದರೂ ಈ ಕ್ಷೇತ್ರದಲ್ಲಿ ಎಲ್ಲರಿಗೂ ಸಂಪೂರ್ಣವಾಗಿ ನ್ಯಾಯವನ್ನು ಒದಗಿಸಲು ಸಾಧ್ಯವಾಗಿಲ್ಲ. ಗ್ರಾಮೀಣ ಜನರ ಬದುಕು ಇಂದಿಗೂ ಹಸನವಾಗಿಲ್ಲ. ಬಡವರ ಬದುಕು ಮೂರಾಬಟ್ಟೆಯಾಗುತ್ತಿದೆ. ಇನ್ನು ಅಸ್ಪೃಶ್ಯರ ಬಾಳಂತೂ ನರಕದ ಬಾಗಿಲು ತಟ್ಟಿ ಬಂದಂತೆ ಅನಿಸುತ್ತಿದೆ.  ಜಾತಿಯತೆ ಇನ್ನಷ್ಟು ವಿರಾಟ ರೂಪವನ್ನು ತಾಳಿ ಕೇಕೆ ಹಾಕುತ್ತಿದೆ. ಹಿಂದೆಂದಿಗಿಂತಲೂ ಅವರನ್ನು ತುಚ್ಚವಾಗಿ ಕಾಣಲಾಗುತ್ತಿದೆ. ಅನೇಕರು ಇಂದಿಗೂ ಅನ್ನ, ಬಟ್ಟೆ ಹಾಗೂ ವಸತಿ ಇಲ್ಲದೆ ನರಳುತ್ತಿರುವುದು ನಾಚಿಕೇಡಿನ ವಿಷಯವಾಗಿದೆ. ನಿರ್ಗತಿಕರು ರಸ್ತೆ ಬದಿಯಲ್ಲಿ ಸಿಕ್ಕಿದ್ದನ್ನು ತಿಂದು ಅಲ್ಲೇ ಮಲಗಿ ನರಕದ ಜೀವನವನ್ನು ಅನುಭವಿಸುತ್ತಿರುವುದನ್ನು ನೋಡಿದರೆ ಕರುಳು ಕಿವುಚಿದಂತಾಗುತ್ತದೆ. ಸರ್ಕಾರದ ಯಾವ ಯೋಜನೆಗಳು ಈ ಜನರ ಬವಣೆಯನ್ನು ಈವರೆಗೆ ಕಡಿಮೆ ಮಾಡಿಲ್ಲ.

8. ಸ್ವಾತಂತ್ರ: (Independence)

 ಭಾರತದ ಸಂವಿಧಾನದಲ್ಲಿ ಸ್ವಾತಂತ್ರದ ಪರಿಕಲ್ಪನೆ ಇದೆ. ಪ್ರಸ್ತಾವನೆಯಲ್ಲಿ ವಾಕ್ ಸ್ವಾತಂತ್ರ, ಧರ್ಮ ಸ್ವಾತಂತ್ರ್ಯ, ನಂಬಿಕೆ ಹಾಗೂ ಉಪಾಸನ ಸ್ವಾತಂತ್ರ್ಯಗಳಿಗೆ ಅವಕಾಶ ಕಲ್ಪಿಸಿರುವುದು ಪ್ರಜಾಪ್ರಭುತ್ವದ ಸಂಕೇತವಾಗಿದೆ. ಭಾರತೀಯ ಪ್ರತಿಯೊಬ್ಬ ಪ್ರಜೆಗಳಿಗೆ ತಮ್ಮ ಸ್ವಾತಂತ್ರವನ್ನು ಅನುಭವಿಸಲು ಅವಕಾಶ ಕೊಡಬೇಕು. ಹಾಗೊಂದು ವೇಳೆ ಕೊಡದಿದ್ದರೆ ಪ್ರಜಾಪ್ರಭುತ್ವ ಬಹುಕಾಲ ಬಾಳಲಾರದು. ಸ್ವಾತಂತ್ರ್ಯವಿಲ್ಲದ ವ್ಯಕ್ತಿ ಸಮಾಜದಲ್ಲಿ ಯಾವ ಪ್ರಯೋಜನಕ್ಕೂ ಬಾರದವನಾಗಿ ಸರ್ಕಾರದ ಗುಲಾಮನಾಗಿ ಬದುಕಬೇಕಾಗುತ್ತದೆ. ಸ್ವಾತಂತ್ರ್ಯ ಉಲ್ಲಂಘನೆಯಾಗದಂತೆ ನ್ಯಾಯಾಲಯಗಳು ಆತನ ನೆರವಿಗೆ ಬರಬೇಕು.

 9. ಸಮಾನತೆ: (Equality)

ಮಾನವನಿಗೆ ಸ್ವಾತಂತ್ರ್ಯ ಹೇಗೆ ಅಗತ್ಯವಾಗಿದೆಯೋ ಹಾಗೆ ಸಮಾನತೆಯು ಮುಖ್ಯವಾಗಿದೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಮಾನತೆಯನ್ನು ಹೊರತುಪಡಿಸಿ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಧರ್ಮ, ಜಾತಿ, ಲಿಂಗ, ಬಣ್ಣ ಹಾಗೂ ವಾಸ ಸ್ಥಳದ ಆಧಾರದ ಮೇಲೆ ಅಸಮಾನತೆಯನ್ನು ಮಾಡಬಾರದು. ಅಸಮಾನತೆಯನ್ನು ಮಾಡುವುದು ಶಿಕ್ಷಾರ್ಹ ಅಪರಾಧ. ಸಮಾನ ಸ್ಥಾನ ಹಾಗೂ ಸಮಾನ ಹಕ್ಕುಗಳು ಎಲ್ಲರಿಗೂ ಸಿಗಬೇಕು.

10. ಭ್ರಾತೃತ್ವ: (Liberty)

ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರು ಎಲ್ಲ ಭಾರತೀಯರು ಒಂದೇ ಎಂದು ಸಾರುವ ಸಹೋದರ ಭಾವನೆಯನ್ನು ಭ್ರಾತೃತ್ವ ಎಂದು ಕರೆದಿದ್ದಾರೆ. ಭಾರತ ವೈವಿಧ್ಯತೆಯುಳ್ಳ ದೇಶ. ವಿವಿಧ ಧರ್ಮ, ಜಾತಿ ಜನರು ತಮ್ಮದೇ ಆದ ಸಂಪ್ರದಾಯ, ಆಚರಣೆ, ಭಾಷೆಗಳನ್ನು ಹೊಂದಿದ್ದಾರೆ. ಕೋಮು ಜಾತಿಯ ಭಾವನೆಯನ್ನು ಅಳಿಸಿ ಪರಸ್ಪರ ಹೊಂದಾಣಿಕೆಯ ಮನೋಭಾವನೆಯನ್ನು ಅಳವಡಿಸಿಕೊಳ್ಳಬೇಕು. ಪರಸ್ಪರರು ಸಹೋದರ ಭಾವನೆಯಿಂದ ಬಾಳಬೇಕು.

ಉಪಸಂಹಾರ:

ಒಟ್ಟಿನಲ್ಲಿ, ಸಂವಿಧಾನದ ಪ್ರಸ್ತಾವನೆ ಭಾರತದ ಆತ್ಮ ಮತ್ತು ದಿಕ್ಕುಸೂಚಿಯಾಗಿದೆ. ಇದು ಕೇವಲ ಕಾನೂನು ಪರಿಚಯವಲ್ಲ, ಬದಲಾಗಿ ಮಾನವೀಯ ಮೌಲ್ಯಗಳ ಘೋಷಣೆಯಾಗಿದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಕಾರ್ಯರೂಪಕ್ಕೆ ತರುವುದೇ ಸಂವಿಧಾನದ ನಿಜವಾದ ಆಶಯ. ಈ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ನಿಜವಾದ ಪ್ರಜಾಪ್ರಭುತ್ವ ಸಾಧ್ಯವಾಗುತ್ತದೆ.