ವಿಧಾನಸಭೆಯು ಶಾಸಕಾಂಗದ ಕೆಳಮನೆ. ಸಂಸತ್ತಿನ ಕೆಳಮನೆಯಾದ ಲೋಕಸಭೆಯ ಹಾಗೆ ರಾಜ್ಯ ಶಾಸಕಾಂಗಗಳಲ್ಲಿ ಕೆಳಮನೆಯಾದ ವಿಧಾನ ಸಭೆಯು ಭಾರತದ ಎಲ್ಲಾ ರಾಜ್ಯಗಳಲ್ಲೂ ಜಾರಿಯಲ್ಲಿರುತ್ತದೆ. ದ್ವಿ ಸದನಗಳಲ್ಲಿ ವಿಧಾನಸಭೆಯೇ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಇಲ್ಲಿ ಪ್ರಜೆಗಳಿಂದ ನೇರವಾಗಿ ಚುನಾಯಿತರಾದ ಪ್ರತಿನಿಧಿಗಳಿರುತ್ತಾರೆ.

1. ವಿಧಾನಸಭೆಯ ಸದಸ್ಯರ ಸಂಖ್ಯೆ: (Total number of members of Legislative Assembly)

ಸಂವಿಧಾನದ 170 (೧)ನೇ ವಿಧಿಯ ಪ್ರಕಾರ ರಾಜ್ಯವೊಂದರ ವಿಧಾನಸಭೆಯ ಸದಸ್ಯರ ಸಂಖ್ಯೆ 500ನ್ನು ಮೀರುವಂತಿಲ್ಲ ಹಾಗೂ ಕನಿಷ್ಠ ೬೦ಕ್ಕಿಂತ ಕಡಿಮೆ ಇಡಬಾರದು ಹೇಳಿದೆ. ಮುಂದುವರೆದು ಆಯಾ ರಾಜ್ಯದ ಜನಸಂಖ್ಯೆಯನ್ನು ಆಧರಿಸಿ ಸಂವಿಧಾನವೇ ಪ್ರತಿಯೊಂದು ರಾಜ್ಯದ ವಿಧಾನ ಸಭೆಯ ಸದಸ್ಯರ ಸಂಖ್ಯೆಯನ್ನು ನಿಗದಿಪಡಿಸಿದೆ. ಉದಾಹರಣೆ ಆಂಧ್ರಪ್ರದೇಶ ೨೯೪, ಬಿಹಾರ್ 242, ಗುಜರಾತ್ 182, ಕರ್ನಾಟಕ 224, ಕೇರಳ 140, ಮಧ್ಯಪ್ರದೇಶ ೨೩೦, ಮಹಾರಾಷ್ಟ್ರ 288 ಹಾಗೂ ಉತ್ತರ ಪ್ರದೇಶಗಳಿಗೆ 403 ವಿಧಾನಸಭಾ ಸ್ಥಾನಗಳನ್ನು ನೀಡಲಾಗಿದೆ. ಅಂದರೆ ಆಯಾ ರಾಜ್ಯಗಳ ಜನಸಂಖ್ಯೆ ಆಧಾರದ ಮೇಲೆ ವಿಧಾನಸಭಾ ಸ್ಥಾನಗಳು ಹಂಚಿಕೆಯಾಗಿವೆ. ಆದರೆ ಚಿಕ್ಕ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಕಡಿಮೆ ಇರುತ್ತದೆ. ಉದಾಹರಣೆ ಗೋವಾ 40, ಸಿಕ್ಕಿಂ 32, ಮಿಜೋರಾಂ 40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

2. ಚುನಾವಣಾ ವಿಧಾನ: (Election Method)

ವಿಧಾನಸಭಾ ಸದಸ್ಯರು ಪ್ರಜೆಗಳಿಂದ ನೇರವಾಗಿ ಚುನಾಯಿತರಾಗುತ್ತಾರೆ. ಸಂವಿಧಾನದ 61ನೇ ತಿದ್ದುಪಡಿಯ ಪ್ರಕಾರ 18 ವರ್ಷ ಪೂರೈಸಿದ ಪುರುಷ ಮತ್ತು ಮಹಿಳೆಯರು ಪ್ರತಿ ೫ ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಮತದಾನ ಪದ್ದತಿಯ ಮೂಲಕ ಮತ ಚಲಾಯಿಸುತ್ತಾರೆ. ಪ್ರಜೆಗಳು ಯಾವುದೇ ಆಮಿಷಕ್ಕೆ ಒಳಗಾಗದೆ, ಅಡ್ಡಿ ಆತಂಕಗಳಿಲ್ಲದೆ ವಿಧಾನಸಭಾ ಸದಸ್ಯರನ್ನು ರಹಸ್ಯ ಮತದಾನದ ಮೂಲಕ ಆಯ್ಕೆ ಮಾಡುತ್ತಾರೆ. ಲೋಕಸಭಾ ಸ್ಥಾನದಂತೆಯೇ ಇಲ್ಲಿಯೂ ಕೂಡ ಪರಿಶಿಷ್ಟ ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಕೆಲವೊಂದು ಸ್ಥಾನಗಳನ್ನು ಮೀಸಲಿಡಲಾಗುತ್ತದೆ.

3. ವಿಧಾನಸಭಾ ಸದಸ್ಯರ ಅರ್ಹತೆಗಳು: (Qualifications of Legislative Members)

 ವಿಧಾನಸಭಾ ಸದಸ್ಯನಾಗಲು ಈ ಕೆಳಗಿನ ಅರ್ಹತೆಗಳು ಇರಲೇಬೇಕು

1. ಸಂವಿಧಾನದ 173 ನೇ ವಿಧಿಯ ಪ್ರಕಾರ ಆತ ಭಾರತದ ಪ್ರಜೆಯಾಗಿರಬೇಕು.

2. ಆತ ಕನಿಷ್ಠ 25 ವರ್ಷ ವಯಸ್ಸಿನವನಾಗಿರಬೇಕು.

3. ಸಂಸತ್ತಿನ ಅಥವಾ ಕಾನೂನಿನಿಂದ ನಿಗದಿಪಡಿಸಲ್ಪಟ್ಟ ಅರ್ಹತೆಗಳಿರಬೇಕು.

4. ಸಂವಿಧಾನಕ್ಕೆ  ವಿಧೇಯನಾಗಿರಬೇಕು.

5. ಕೇಂದ್ರ ಅಥವಾ ರಾಜ್ಯ ಸರ್ಕಾರಗಳಲ್ಲಿ ಯಾವುದೇ ಲಾಭದಾಯಕ ಹುದ್ದೆಯಲ್ಲಿ ಇರಬಾರದು.

6. ದಿವಾಳಿ, ಮತಿವಿಕಲ ಅಥವಾ ಬುದ್ಧಿಮಾಂದ್ಯನಾಗಿರಬಾರದು.

4. ಸದಸ್ಯರ ಅಧಿಕಾರಾವಧಿ: (Terms and Power of Members)

 ಸಾಮಾನ್ಯವಾಗಿ ವಿಧಾನಸಭೆಯ ಸದಸ್ಯರ ಅಧಿಕಾರ ಅವಧಿ ೫ ವರ್ಷಗಳು, ಅವಧಿಗಿಂತ ಮೊದಲೇ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ರಾಜ್ಯಪಾಲರು ವಿಧಾನಸಭೆಯನ್ನು ವಿಸರ್ಜಿಸಬಹುದು. ಆಗ ಅಧಿಕಾರ ಅವಧಿ ಕಡಿಮೆಯಾಗುತ್ತದೆ. ಸಂವಿಧಾನದ 356ನೇ ವಿಧಿಯ ಪ್ರಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾದರೆ ರಾಷ್ಟ್ರಪತಿಯೂ ಸಹ ವಿಧಾನಸಭೆಯನ್ನು ವಿಸರ್ಜಿಸಬಹುದು. ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ ವಿದಾನ ಸಭೆಯ ಅವಧಿಯನ್ನು ಸಂಸತ್ತು ಒಂದು ವರ್ಷದವರೆಗೆ ಮುಂದುವರಿಸಬಹುದು. ತುರ್ತು ಪರಿಸ್ಥಿತಿ ರದ್ದಾದ ೬ ತಿಂಗಳೊಳಗಾಗಿ ಚುನಾವಣೆಗಳು ನಡೆಯಬೇಕು.

5. ಅಧಿವೇಶನಗಳು: (Sessions)

ವಿಧಾನಸಭೆಯ ಅಧಿವೇಶನವನ್ನು ಕರೆಯುವುದು ಅಥವಾ ಮುಂದೂಡುವುದು ರಾಜ್ಯಪಾಲರ ವಿವೇಚನೆಗೆ ಸೇರಿರುತ್ತದೆ. ವಿಧಾನ ಸಭೆಯು ವಾರ್ಷಿಕ 3 ಬಾರಿ ಅಧಿವೇಶನವನ್ನು ಕರೆಯಬೇಕು. ಈ ಅಧಿವೇಶನಗಳು ಮುಂಗಡಪತ್ರ ಅಧಿವೇಶನ, ಮಳೆಗಾಲದ ಅಧಿವೇಶನ ಹಾಗೂ ಚಳಿಗಾಲದ ಅಧಿವೇಶನಗಳಾಗಿವೆ. ವಿಧಾನಸಭಾ ಅಧಿವೇಶನಗಳ ನಡುವಿನ ಅಂತರ ಕನಿಷ್ಠ ೬ ತಿಂಗಳು ಮೀರುವಂತಿಲ್ಲ. ಅಂದರೆ ವಾರ್ಷಿಕವಾಗಿ ಎರಡು ಬಾರಿಯಾದರೂ ಅಧಿವೇಶನವನ್ನು ಕರೆಯಲೇಬೇಕು. 

6. ಕೋರಂ: (Quoram)

ʻʻವಿಧಾನಸಭೆ ಅಧಿವೇಶನದಲ್ಲಿ ಕನಿಷ್ಠ ಸಂಖ್ಯೆಯ ಸದಸ್ಯರು ಹಾಜರಿರಬೇಕಾದ ಕ್ರಮವನ್ನು ಕೋರಂ ಎಂದು ಕರೆಯಲಾಗುತ್ತದೆʼʼ. ವಿಧಾನಸಭೆಯ ಅಧಿವೇಶನಕ್ಕೆ ಕನಿಷ್ಠ ೧/೧೦  ಭಾಗದಷ್ಟು ಸದಸ್ಯರು ಹಾಜರಿರಲೇಬೇಕು. ಅಂದರೆ ೨24 ಸದಸ್ಯರ ಪೈಕಿ 23 ಜನ ಸದಸ್ಯರು ಹಾಜರಾದರೆ ಕೋರಂ ಬಂದ ಹಾಗೆಯೇ. ಒಂದು ವೇಳೆ ಕೋರಂ ಇಲ್ಲದ್ದರೆ ಸಭಾಧ್ಯಕ್ಷರು ಅಧಿವೇಶನವನ್ನು ಮುಂದೂಡುತ್ತಾರೆ.

7. ಸಭಾಪತಿ ಮತ್ತು ಉಪ ಸಭಾಪತಿ: (Speaker and Deputy Speaker)

ವಿಧಾನಸಭೆ ಚುನಾವಣೆಯ ನಂತರ ಬಹುಮತ ಪಡೆದ ಪಕ್ಷದ ಸದಸ್ಯರು ಸೇರಿ ತಮ್ಮಲ್ಲಿ ಒಬ್ಬನನ್ನು ಸಭಾಪತಿ ಮತ್ತು ಇನ್ನೊಬ್ಬನನ್ನು ಉಪ ಸಭಾಪತಿಯನ್ನಾಗಿ ತಮ್ಮಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಆಯ್ಕೆಯಾದ ಸಭಾಪತಿಯು ವಿಧಾನ ಸಭೆಯ ಕಾರ್ಯಕಲಾಪಗಳ ಜವಾಬ್ದಾರಿಯನ್ನು ಹೊರುತ್ತಾರೆ. ಸಭಾಪತಿ ಹಾಗೂ ಉಪಸಭಾಪತಿಗಳು ೫ ವರ್ಷಗಳ ಅವಧಿಗೆ ಅಧಿಕಾರದಲ್ಲಿ ಇರುತ್ತಾರೆ. ಸದನದ ಶಾಸಕೀಯ ವ್ಯವಹಾರಗಳನ್ನು ಸುಸೂತ್ರವಾಗಿ ಗೌರವ, ಶಿಸ್ತು ಹಾಗೂ ಗಂಭೀರವಾಗಿ ನಡೆಸುವ ಜವಾಬ್ದಾರಿಯ ಸಹ ಸಭಾಪತಿಯ ಮೇಲಿರುತ್ತದೆ. ವಿಧಾನಸಭಾ ಸಭಾಪತಿಗಳು ಜಂಟಿ ಸಮಾವೇಶಗಳ ಅಧ್ಯಕ್ಷತೆಯನ್ನು ವಹಿಸುವ ಕಾರ್ಯವನ್ನಲ್ಲದೆ ಲೋಕಸಭಾ ಅಧ್ಯಕ್ಷರು ನಿರ್ವಹಿಸುವ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಸಭಾಪತಿಗಳ ಗೈರುಹಾಜರಿ, ನಿಧನ, ಅನಾರೋಗ್ಯ ಮತ್ತು ವಿದೇಶಿ ಪ್ರವಾಸದಂತಹ ಸಮಯದಲ್ಲಿ ಉಪಸಭಾಪತಿಗಳು ಸಭಾಪತಿಗಳ ಕಾರ್ಯವನ್ನು ನಿರ್ವಹಿಸುತ್ತಾರೆ.

ಅ) ಸದನದ ಎಲ್ಲಾ ಆದೇಶಗಳನ್ನು ಸಭಾಪತಿಯ ಮೂಲಕವೇ  ನೆರವೇರಿಸಲಾಗುತ್ತದೆ.

ಆ)  ರಾಜ್ಯಪಾಲರಿಂದ ಬರುವ ಯಾವುದೇ ಸಂದೇಶಗಳನ್ನು ಸಭಾಪತಿಯ ಮೂಲಕವೇ ಸದನಕ್ಕೆ ತಿಳಿಸಲಾಗುತ್ತದೆ.

ಇ)  ಒಂದು ಮಸೂದೆ ಅದು ಹಣಕಾಸು ಮಸೂದೆಯೋ ಅಥವಾ ಅಲ್ಲವೋ ಎಂಬುದನ್ನು ತೀರ್ಮಾನಿಸುವ ಅಧಿಕಾರ ಸಭಾಪತಿಗೆ ಇರುತ್ತದೆ.

ಈ) ಸಭಾಪತಿಯ ನಿರ್ಣಯಗಳನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ.

ಉ) ಯಾವುದೇ ಸದಸ್ಯರು ಸಭಾಪತಿಯ ಅನುಮತಿಯನ್ನು ಪಡೆಯದ ಹೊರತು ಸದನದಲ್ಲಿ ಮಾತನಾಡುವಂತಿಲ್ಲ.

ಊ) ಒಂದು ಮಸೂದೆಯನ್ನು ಮಂಡಿಸುವಾಗ ಸದನದಲ್ಲಿ ಸರಿ ಸಮಾನವಾದ ಮತಗಳು ಬಂದಾಗ ಸಭಾಪತಿಗೆ ನಿರ್ಣಾಯಕ ಮತ ನೀಡುವ ಹಕ್ಕು ಇದೆ. ಸದನದಲ್ಲಿ ಈ ಕೆಳಗಿನ ಶಬ್ದಗಳನ್ನು ಬಳಸಿದಂತೆ ನಿರ್ಬಂಧ ಹೇರಲಾಗಿದೆ. ಸುಳ್ಳುಗಾರ, ಗೂಂಡಾ, ನರಕ, ರಾಷ್ಟ್ರದೋಹಿ, ಕೆಲಸಕ್ಕೆ ಬಾರದವನು, ಕುರಿ, ಮೂರ್ಖ, ಬಾಡಿಗೆ ಜನ, ದುರಹಂಕಾರಿ, ರೌಡಿ ಅಯೋಗ್ಯ ಮುಂತಾದವುಗಳು.  ʻʻಸಭಾಪತಿಗಳು ತಮ್ಮ ರಾಜೀನಾಮೆಯನ್ನು ಡೆಪ್ಯೂಟಿ ಸ್ಪೀಕರವರಿಗೆ ನೀಡಬೇಕು.ʼʼ ಡೆಪ್ಯೂಟಿ ಸ್ಪೀಕರ್ ತಮ್ಮ ರಾಜೀನಾಮೆಯನ್ನು  ಸ್ಪೀಕರವರಿಗೆ ನೀಡಬೇಕು.

8. ವೇತನ ಮತ್ತು ವಿನಾಯಿತಿಗಳು: (Salary and Immunities)

ವಿಧಾನಸಭಾ ಸದಸ್ಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅವರಿಗೆ ಅಗತ್ಯವಾದ ವೇತನ ಹಾಗೂ ಸೌಲಭ್ಯಗಳನ್ನು ನೀಡಲಾಗುತ್ತದೆ. ಅವರಿಗೆ ಮಾಸಿಕವೇತನ ಮತ್ತು ನಿವೃತ್ತಿವೇತನ ನೀಡಲಾಗುತ್ತದೆ. ಜೊತೆಗೆ ಉಚಿತ ದೂರವಾಣಿ ಕರೆಗಳು, ಉಚಿತ ನಿವಾಸ ಸೌಲಭ್ಯ, ಆರೋಗ್ಯ ಸೇವೆ, ವಿದ್ಯುತ್‌ ಸೌಲಭ್ಯಗಳನ್ನು ಪಡೆಯುತ್ತಾರೆ.

ಉಪಸಂಹಾರ

ಒಟ್ಟಾರೆ ವಿಧಾನಸಭೆ ರಾಜ್ಯ ಪ್ರಜಾಪ್ರಭುತ್ವದ ಮೂಲಸ್ತಂಭವಾಗಿದೆ. ಜನರ ಆಶಯಗಳನ್ನು ಕಾನೂನಿನ ರೂಪಕ್ಕೆ ತರಲು ಹಾಗೂ ಸರ್ಕಾರವನ್ನು ಜವಾಬ್ದಾರಿಯುತವಾಗಿ ನಡೆಸಲು ಇದು ಸಹಾಯಕವಾಗಿದೆ. ಸಭಾಪತಿ, ಸದಸ್ಯರು ಮತ್ತು ಅಧಿವೇಶನಗಳ ಮೂಲಕ ರಾಜ್ಯದ ಆಡಳಿತ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತದೆ. ಆದ್ದರಿಂದ ವಿಧಾನಸಭೆಯ ರಚನೆ ಮತ್ತು ಕಾರ್ಯವಿಧಾನವನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.