ವಿಜಯನಗರ ಸಾಮ್ರಾಜ್ಯದ ಯುಗದಲ್ಲಿ ಸಾಮಾಜಿಕ ವ್ಯವಸ್ಥೆ ವರ್ಣಾಶ್ರಮ ಧರ್ಮದ ಮೇಲೆ ನಿಂತಿತ್ತು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳ ಮೂಲಕ ಸಮಾಜವು ವಿವಿಧ ಹಂತಗಳಲ್ಲಿ ಸಂಘಟಿತವಾಗಿತ್ತು. ವಿವಿಧ ಧರ್ಮಗಳ ಜನರು ಸಹ ಇಲ್ಲಿ ಸಹಜವಾಗಿ ಜೀವನ ನಡೆಸುತ್ತಿದ್ದರು. ಈ ಕಾಲದ ಸಾಮಾಜಿಕ ವ್ಯವಸ್ಥೆ ಸಂಪ್ರದಾಯ, ಆಚರಣೆ ಮತ್ತು ಜೀವನ ಶೈಲಿಗಳ ಸಮನ್ವಯವನ್ನು ತೋರಿಸುತ್ತದೆ.

1. ವರ್ಣ ಮತ್ತು ಜಾತಿ ವ್ಯವಸ್ಥೆ : ವಿಜಯನಗರದ ಸಾಮಾಜಿಕ ವ್ಯವಸ್ಥೆಯು ವರ್ಣಾಶ್ರಮ ಧರ್ಮಗಳ ಮೇಲೆ ರೂಪಿತವಾಗಿತ್ತು. ಚತುವರ್ಣಗಳಾದ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ವರ್ಣಗಳಿದ್ದವು. ಹಿಂದೂಗಳ ಜೊತೆಗೆ ಮುಸ್ಲಿಮರು, ಜೈನರು, ಕ್ರೈಸ್ತಮತಿಯರೂ ಸಾಮ್ರಾಜ್ಯದಲ್ಲಿ ಜೀವಿಸುತ್ತಿದ್ದರು.

ಶೂದ್ರ ಗುಂಪಿನಲ್ಲಿ ಕೈಕಸುಬುಗಳಲ್ಲಿ ನಿರತರಾಗಿದ್ದ ಮಡಿವಾಳ, ಗಾಣಿಗ, ಮರಗೆಲಸದವ, ಕಮ್ಮಾರ, ಕುಂಬಾರ, ನಾವಿಕ, ಬೇಟೆಗಾರ ಮೊದಲಾದ ಹಲವಾರು ಜಾತಿಗಳಿದ್ದವು. ಇವಲ್ಲದೆ ಪಂಚವರ್ಣವೂ ಇದ್ದು, ಅಸ್ಪೃಶ್ಯತೆಯು ಆಚರಣೆಯಲ್ಲಿತ್ತು. ಸಮಾಜದ ಹೆಚ್ಚಿನ ಜನತೆಯು ಕೃಷಿಯನ್ನೇ ಪ್ರಮುಖ ಕಸುಬಾಗಿ ಹೊಂದಿದ್ದರು. ವ್ಯಾಪಾರವು ಲಾಭದಾಯಕ ಹುದ್ದೆಯಾದ್ದರಿಂದ ಬೇರೆ ಬೇರೆ ವರ್ಗದ ಜನರು ಈ ವೃತ್ತಿಯಲ್ಲಿ ನಿರತರಾಗಿದ್ದರು.

2. ಬ್ರಾಹ್ಮಣರ ಸ್ಥಾನಮಾನ : ಬ್ರಾಹ್ಮಣರಿಗೆ ಸಮಾಜದಲ್ಲಿ ಹೆಚ್ಚಿನ ಗೌರವವಿತ್ತು. ವಿದ್ಯಾವಂತರಾದ ಅವರು ರಾಜರ ಆಸ್ಥಾನದಲ್ಲಿ ಇರುತ್ತಿದ್ದರು. ದೇವಾಲಯಗಳಲ್ಲಿ ಪೂಜೆ, ವೇದಮಂತ್ರ ಪಠನ, ಅಧ್ಯಯನಗಳಲ್ಲಿ ನಿರತರಾಗಿದ್ದರು. ಆರಸರು ಹಲವು ಹಳ್ಳಿಗಳನ್ನು, ಭೂಮಿಯನ್ನು ಅವರಿಗೆ ದಾನವಾಗಿ ನೀಡಿದ್ದರು. ಅವರನ್ನು ಚೆನ್ನಾಗಿ ಇಟ್ಟುಕೊಂಡರೆ ತಮಗೂ, ತಮ್ಮ ರಾಜ್ಯಕ್ಕೂ ಒಳ್ಳೆಯದಾಗುವುದೆಂದು ಆರಸರು ನಂಬಿದ್ದರು. ಕೆಲವು ಮಂದಿ ಬ್ರಾಹ್ಮಣರು ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಸ್ಥಾನವನ್ನು ಪಡೆದಿದ್ದರು. ಬಹುತೇಕ ಮಂದಿ ಅಧಿಕಾರಿಗಳು ಅವರೇ ಆಗಿರುತ್ತಿದ್ದರು. ಆದಾಗ್ಯೂ ವಿದೇಶಿಯರ ದೃಷ್ಟಿಯಲ್ಲಿ ಅವರಿಗೆ ಒಳ್ಳೆಯ ಹೆಸರು ಇರಲಿಲ್ಲ. ಬಾರ್ಬೋಸ, ನ್ಯೂನಿಜ್ ಮೊದಲಾದವರು ಅವರನ್ನು ಹೊಟ್ಟೆಬಾಕರೆಂದೂ, ಆಸೆಬುರುಕರೆಂದೂ ಕರೆದಿದ್ದಾರೆ. ಒಟ್ಟಿನಲ್ಲಿ ಸಮಾಜದಲ್ಲಿ ಅವರಿಗೆ ವಿಶೇಷ ಗೌರವವಿದ್ದಿತು.

3. ವೈಶ್ಯರ ಸ್ಥಾನಮಾನ : ವೈಶ್ಯರು ವ್ಯಾಪಾರ ವಾಣಿಜ್ಯದಲ್ಲಿ ತೊಡಗಿದ್ದರು. ಅವರು ತಮ್ಮದೇ ಆದ ಸಂಘ ಸಂಸ್ಥೆಗಳನ್ನು ಸ್ಥಾಪಿಸಿಕೊಂಡು, ಅರಸರಿಂದ ಅನೇಕ ವ್ಯಾಪಾರ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮಮಟ್ಟದ ಜೀವನ ನಡೆಸುತ್ತಿದ್ದರು. ವ್ಯಾಪಾರ ಲಾಭದಾಯಕವಾಗಿದ್ದುದರಿಂದ ಬೇರೆ ಬೇರೆ ವರ್ಗದವರೂ ಈ ಕ್ಷೇತ್ರಕ್ಕೆ ಇಳಿಯುತ್ತಿದ್ದರು.

4. ಶೂದ್ರರ ಸ್ಥಾನಮಾನ : ಶೂದ್ರರಿಗೆ ಸಮಾಜದಲ್ಲಿ ಗೌರವ ಕಡಿಮೆ ಇತ್ತು. ಅವರು ನಿರ್ಲಕ್ಷಿತ ಗುಂಪಿಗೆ ಸೇರಿದವರಾಗಿದ್ದರು. ಆಸ್ಪೃಶ್ಯರು ಉನ್ನತವರ್ಗದ ಜನರಿಂದ ಬಹುದೂರವಿದ್ದರು. ಅವರು ಊರಿನ ಕೆಲಸಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ವಹಿಸಿದ್ದರು.

5. ನಗರಗಳಲ್ಲಿ : ರಾಜಧಾನಿ ಮತ್ತು ಭವ್ಯನಗರಗಳಲ್ಲಿ ಶ್ರೀಮಂತರು, ವ್ಯಾಪಾರಿಗಳು, ಅಧಿಕಾರಿವರ್ಗದವರು, ವಿದ್ಯಾವಂತರು, ಕಲಾರಾಧಕರು ಜೀವಿಸುತ್ತಿದ್ದರು. ಇವರ ಸೇವೆಗೆ ಅನೇಕ ಮಂದಿ ದಾಸದಾಸಿಯರು ಇರುತ್ತಿದ್ದರು.

6. ಸ್ತ್ರೀಯರ ಸ್ಥಾನಮಾನ : ಸ್ತ್ರೀಗೆ ಸಮಾಜದಲ್ಲಿ ಗಣ್ಯಸ್ಥಾನವಿದ್ದಿತು. ಆದರೂ ಆಕೆ ಸಮಾಜದ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಿರಲಿಲ್ಲ. ಈ ವಿಷಯವನ್ನು ಪೇಯಿಸ್ ಎಂಬ ವಿದೇಶಿಯನು ಮನನೊಂದು ಹೇಳಿದ್ದಾನೆ.

ರಾಣಿಯರ ಸೇವೆಗಾಗಿ ಆನೇಕ ಮಂದಿ ದಾಸಿಯರಿರುತ್ತಿದ್ದರು. ವಿದ್ಯಾಭ್ಯಾಸವು ಮೇಲ್ವರ್ಗದ ಸ್ತ್ರೀಯರಿಗೆ ಮಾತ್ರ ಸೀಮಿತವಾಗಿತ್ತು. ಅವರು ಸಂಗೀತ ಮತ್ತು ನೃತ್ಯದಲ್ಲೂ ಶಿಕ್ಷಣ ಪಡೆಯುತ್ತಿದ್ದರು. ಶಿಕ್ಷಣ ಪಡೆದ ಸ್ತ್ರೀಯರ ಸಂಖ್ಯೆಯು ಗಣನೀಯವಾಗಿರಲಿಲ್ಲ. 2ನೇ ದೇವರಾಯನ ಕಾಲದಲ್ಲಿ (ಆಸ್ಥಾನದಲ್ಲಿ) ಹೊನ್ನಮ್ಮ ಎಂಬ ಸ್ತ್ರೀಯು ವರದಿಗಾರಳಾಗಿದ್ದಳೆಂದೂ, ಅಚ್ಚುತರಾಯನ ಕಾಲದಲ್ಲಿ ತಿರುಮಲಾಂಬೆ ಎಂಬುವಳು ಅಂತಹುದೇ ಹುದ್ದೆಯಲ್ಲಿದ್ದಳೆಂದು ತಿಳಿದುಬರುತ್ತದೆ. ಒಂದು ಶಾಸನದ ಪ್ರಕಾರ ಪಾತ್ರಿ ಎಂಬ ನಟಿಯೊಬ್ಬಳಿದ್ದು, ಅವಳು ನಾಟಕದಲ್ಲಿ ಪಾತ್ರವಹಿಸುತ್ತಿದ್ದಳೆಂದು ವಿವರಿಸಲಾಗಿದೆ. ಹಳ್ಳಿಗಾಡಿನ ಸ್ತ್ರೀಯರು ಬೇಸಾಯ, ದನಕರುಗಳ ಸಾಕಾಣಿಕೆ, ನೂಲುವುದು, ನೇಯುವುದು ಮತ್ತು ಇತರ ಕಸಬುಗಳಲ್ಲಿ ನುರಿತಿದ್ದು ವಿಭಿನ್ನ ಕೆಲಸಗಳಲ್ಲಿ ನಿರತರಾಗಿದ್ದರು.

7. ವೈಶ್ಯಾವೃತ್ತಿ : ವೇಶ್ಯಾವೃತ್ತಿಯು ಪಟ್ಟಣಗಳಲ್ಲಿ ಹೆಚ್ಚಾಗಿತ್ತು. ರಾಜಧಾನಿಯಲ್ಲಿ ಹನ್ನೆರಡು ಸಾವಿರ ವೇಶ್ಯೆಯರಿದ್ದುದಾಗಿಯೂ, ಅವರಿಂದ ಬರುತ್ತಿದ್ದ ವೃತ್ತಿ ತೆರಿಗೆಯನ್ನು ನಗರ ರಕ್ಷಣಾ ಪಡೆಯ ನಿರ್ವಹಣೆಗೆ ನೀಡಲಾಗುತ್ತಿತ್ತೆಂದು ವರ್ಣಿತವಾಗಿದೆ.

8. ದೇವದಾಸಿ ಪದ್ಧತಿ : ದೇವದಾಸಿ ಪದ್ಧತಿಯು ಆಚರಣೆಯಲ್ಲಿತ್ತು. ದೇವದಾಸಿಯರು ಉತ್ಕೃಷ್ಟ ಕಲಾವಿದೆಯರಾಗಿದ್ದರು. ವೇಶ್ಯೆಯರು ಮತ್ತು ದೇವದಾಸಿಯರು ವೈಭವದ ಜೀವನ ನಡೆಸುತ್ತಿದ್ದರೆಂದು ತಿಳಿದುಬರುತ್ತದೆ. ಕೃಷ್ಣದೇವರಾಯನ ಆಸ್ಥಾನದಲ್ಲಿ ಸುಮಾರು 400 ಮಂದಿ ದೇವದಾಸಿಯರು ಇದ್ದರು.

9. ಸಾಮಾಜಿಕ ಪಿಡುಗುಗಳು : ಸಾಮಾಜಿಕ ಪಿಡುಗುಗಳಾದ ಸಹಗಮನ, ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪದ್ಧತಿಗಳು ಆಚರಣೆಯಲ್ಲಿದ್ದವು.

10. ಬಹುಪತ್ನಿತ್ವ : ಬಹುಪತ್ನಿತ್ವ ಪದ್ಧತಿಯೂ ಆಚರಣೆಯಲ್ಲಿತ್ತು. ಅರಸರು ಹಾಗೂ ಶ್ರೀಮಂತರು ಅನೇಕ ಮಂದಿ ಪತ್ನಿಯರನ್ನು ಪಡೆದಿರುತ್ತಿದ್ದರು. ಬಹುಮಂದಿ ಪತ್ನಿಯರನ್ನು ಪಡೆದವನು ಸಮಾಜದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿರುತ್ತಿದ್ದನು. ಕೃಷ್ಣದೇವರಾಯನ ಪತ್ನಿಯರಲ್ಲಿ ತಿರುಮಲಾಂಬಿಕೆ, ಚಿನ್ನಾದೇವಿ ಮತ್ತು ಜಗನ್ನೋಹಿನಿಯರು ಪಟ್ಟಮಹಿಷಿಯರಾಗಿದ್ದರು.

11. ಆಹಾರ ಪದ್ಧತಿ : ಬ್ರಾಹ್ಮಣರು, ಜೈನರು ಮತ್ತು ವೀರಶೈವರು ಶುದ್ಧ ಸಸ್ಯಹಾರಿಗಳಾಗಿದ್ದರಂತೆ. ಉಳಿದ ಪಂಗಡಗಳ ಜನರು ಸಸ್ಯಹಾರ ಮತ್ತು ಮಾಂಸಹಾರಗಳನ್ನು ಉಪಯೋಗಿಸುತ್ತಿದ್ದರು. ರಾಗಿ, ಭತ್ತ, ಜೋಳ, ಕಬ್ಬು ಇವುಗಳ ಜೊತೆಗೆ ಹಣ್ಣುಗಳು, ತರಕಾರಿ, ದ್ವಿದಳ ಧಾನ್ಯಗಳು ಮತ್ತು ಎಣ್ಣೆಬೀಜಗಳನ್ನು ಬೆಳೆಯುತ್ತಿದ್ದರು. ಹಬ್ಬ ಮತ್ತು ಇತರ ಸಂಭ್ರಮದ ದಿನಗಳಲ್ಲಿ ಜನತೆ ಕುರಿ, ಕೋಳಿ, ಮೇಕೆ, ಕೋಣ, ಹೋರಿ ಮೊದಲಾದವುಗಳನ್ನು ಬಲಿಕೊಡುತ್ತಿದ್ದರಂತೆ (ವಿದೇಶಿ ಯಾತ್ರಿಕರ ಅಭಿಪ್ರಾಯ), ಮಂಗಳರಸನ, ʻಸೂಪಶಾಸ್ತ್ರ’ ದಲ್ಲಿ ವಿವಿಧ ರೀತಿಯ ಪಾನೀಯಗಳ ವರ್ಣನೆಯಿದೆ.

12. ಉಡುಗೆ ತೊಡುಗೆಗಳು : ಶ್ರೀಮಂತರು ಮತ್ತು ಆಸ್ಥಾನಿಕರು ರೇಷ್ಮೆ ಜರತಾರಿ ಉಡುಪುಗಳನ್ನು ಧರಿಸುತ್ತಿದ್ದರು. ಹತ್ತಿ ಉಡುಪುಗಳು ಬಳಕೆಯಲ್ಲಿದ್ದವು. ಗಂಡಸರು ಮಂಡಿಯವರೆಗೆ ಪಂಚೆಯುಡುತ್ತಿದ್ದು, ಮೈಮೇಲೆ ಆಂಗಿ ಅಥವಾ ತುಂಡು ಬಟ್ಟೆಯನ್ನು, ತಲೆಗೆ ಪೇಟವನ್ನು ಉಪಯೋಗಿಸುತ್ತಿದ್ದರು. ಸ್ತ್ರೀಯರು ಹೆಚ್ಚುಮಟ್ಟಿಗೆ ಹತ್ತಿಸೀರೆ, ಕೆಲವು ಸಂದರ್ಭಗಳಲ್ಲಿ ರೇಷ್ಮೆಯ ಸೀರೆಯುಡುತ್ತಿದ್ದು ಅವರು ಬಳೆ, ಮೂಗುತಿ, ಓಲೆ, ಕಂಠಿಹಾರಗಳನ್ನು ಧರಿಸುತ್ತಿದ್ದರೆಂದು ವಿದೇಶಿ ಬರಹಗಾರರು ತಿಳಿಸಿರುವರು.

13. ಮನರಂಜನೆ : ಬೇಟೆ ಯಾಡುವುದು, ಟಗರು ಕಾಳಗ, ಗೂಳಿಕಾಳಗ ಮತ್ತು ಜಟ್ಟಿಕಾಳಗ ಮೊದಲಾದ ಸಾಂಪ್ರದಾಯಿಕ ಆಟಗಳಿದವು.

14. ಹಬ್ಬ ಹರಿದಿನಗಳು : ಮಹಾನವಮಿ ಮತ್ತು ದೀಪಾವಳಿ ಹಬ್ಬಗಳನ್ನು ಜನರು ಸಂಭ್ರಮದಿಂದ ಆಚರಿಸುತ್ತಿದ್ದರು. ನವರಾತ್ರಿಯು ಆ ಕಾಲದ ವಿಶೇಷ ಆಕರ್ಷಕ ಸಮಾರಂಭವಾಗಿತ್ತು. ಕೃಷ್ಣದೇವರಾಯನ ಕಾಲದಲ್ಲಿ ನವರಾತ್ರಿಯನ್ನು ನೋಡಿದ ಡೋಮಿಂಗೋ ಪೇಯಿಸ್ ಅದನ್ನು ವಿಶೇಷವಾಗಿ ವರ್ಣಿಸಿರುವನು. ಸಮಾಜದಲ್ಲಿ ಹಲವಾರು ಸಂಪ್ರದಾಯಗಳು, ಕಟ್ಟುಪಾಡುಗಳು ಇದ್ದು ಜನತೆ ಅವುಗಳಿಗೆ ಮನ್ನಣೆ ನೀಡುವುದು ಪರಿಪಾಠವಾಗಿತ್ತು.

ಉಪಸಂಹಾರ

ಒಟ್ಟಿನಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ಸಾಮಾಜಿಕ ವ್ಯವಸ್ಥೆ ಸಂಪ್ರದಾಯಗಳು, ವರ್ಣವ್ಯವಸ್ಥೆ ಮತ್ತು ವಿವಿಧ ವೃತ್ತಿಗಳ ಮೇಲೆ ಆಧಾರಿತವಾಗಿತ್ತು. ಜನರು ತಮ್ಮ ಸಂಸ್ಕೃತಿ, ಧರ್ಮ ಮತ್ತು ಹಬ್ಬಗಳನ್ನು ಗೌರವದಿಂದ ಆಚರಿಸುತ್ತಿದ್ದರು. ಮಹಿಳೆಯರು, ವ್ಯಾಪಾರಿಗಳು ಮತ್ತು ವಿವಿಧ ವರ್ಗದ ಜನರು ಸಮಾಜದಲ್ಲಿ ತಮ್ಮದೇ ಆದ ಪಾತ್ರವನ್ನು ವಹಿಸಿದ್ದರು. ಈ ಎಲ್ಲವುಗಳು ಆ ಕಾಲದ ಸಮಾಜದ ವೈಭವ ಮತ್ತು ವೈವಿಧ್ಯತೆಯನ್ನು ತೋರಿಸುತ್ತವೆ.