ಪರಿಚಯ:
ರಜಪೂತಗಳ ಮೂಲದ ಪ್ರಶ್ನೆ ಭಾರತೀಯ ಇತಿಹಾಸಲೇಖನದಲ್ಲಿ ದೀರ್ಘಕಾಲದಿಂದಲೂ ಚರ್ಚೆಗೆ ಒಳಗಾಗಿರುವ ಮಹತ್ವದ ವಿಷಯವಾಗಿದೆ. ಕೆಲ ಪಂಡಿತರು ರಾಜಪುತರಿಗೆ ವಿದೇಶೀ ಮೂಲವಿದೆ ಎಂದು ವಾದಿಸಿದರೆ, ಇನ್ನಿತರರು ಅವು ಸಂಪೂರ್ಣವಾಗಿ ಭಾರತೀಯ ಮೂಲದವರೇ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ವಿಭಿನ್ನ ಸಾಕ್ಷ್ಯಗಳು ಮತ್ತು ವಿಧಾನಗಳನ್ನು ಆಧರಿಸಿದ ಈ ಪರಸ್ಪರ ವಿರೋಧಿ ಅಭಿಪ್ರಾಯಗಳು ಪಂಡಿತರ ನಡುವೆ ತೀವ್ರ ಚರ್ಚೆಗೆ ಕಾರಣವಾಗಿವೆ.

ರಜಪೂತ ಎಂಬ ಪದವನ್ನು ಪ್ರಪ್ರಥಮ ಬಾರಿಗೆ ಕ್ರಿ.ಶ.17ನೆಯ ಶತಮಾನದಲ್ಲಿ ಬಳಸಲಾಯಿತು. ರಜಪೂತರು ಯಾರು? ಅವರ ಮೂಲ ಎಲ್ಲಿಯದು? ಇವುಗಳಿಗೆ ಸಮರ್ಪಕವಾದ ಉತ್ತರಗಳು ದೊರೆತಿಲ್ಲ. ಇವರು ಕ್ಷತ್ರಿಯರ ಜೊತೆಗೆ ಯಾವ ಸಂಬಂಧವನ್ನು ಹೊಂದಿದ್ದರು ಎಂಬ ವಿಷಯವೂ ತಿಳಿಯದು. ಇದರಿಂದಾಗಿ ರಜಪೂತರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದ್ದರಿಂದ ಇತಿಹಾಸಕಾರರ ವಿಭಿನ್ನ ಸಿದ್ಧಾಂತಗಳನ್ನು ಈ ಕೆಳಗಿನಂತೆ ನೋಡಬಹುದು.

1) ವಿದೇಶಿ ಮೂಲದ ಸಿದ್ಧಾಂತ:

ರಜಪೂತರ ವಿದೇಶಿ ಮೂಲ ಸಿದ್ಧಾಂತವನ್ನು ಪ್ರತಿಪಾದಿಸಿದವರು ಕರ್ನಲ್ ಟಾಡ್, ವಿ.ಎ.ಸ್ಮಿತ್ ಹಾಗೂ ಕ್ರೂಕ್ ಮುಂತಾದವರು. ವಿದೇಶದಿಂದ ಬಂದು ಭಾರತದಲ್ಲಿಯೇ ನೆಲಸಿದ ಶಕರು, ಕುಶಾನರು ಹಾಗು ಹೂಣರು ಭಾರತದ ಮೇಲೆ ದಾಳಿ ಮಾಡಿ ಅಂತಿಮವಾಗಿ ಅವರು ಭಾರತೀಯರೊಂದಿಗೆ ಬೆರೆತುಹೋದರು. ವೈದಿಕ ಹಾಗೂ ಬೌದ್ಧ ಧರ್ಮದ ಪ್ರಭಾವಕ್ಕೆ ಒಳಗಾದ ಇವರು ಭಾರತೀಯ ಧರ್ಮವನ್ನು ಅನುಸರಿಸಲಾರಂಭಿಸಿದರು. ಕಾಲಾನಂತರ ಭಾರತೀಯರೊಂದಿಗೆ ವೈವಾಹಿಕ ಸಂಬಂಧವನ್ನು ಬೆಳಸಿಕೊಂಡಿದುದು ಅಲ್ಲದೆ ಭಾರತೀಯ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಸ್ವೀಕರಿಸಿ ಭಾರತೀಯರೇ ಆದರು. ತಮ್ಮ ಮೂಲ ಸತ್ವವನ್ನು ಕಳೆದುಕೊಂಡು ಭಾರತೀಯತೆಯನ್ನು ಅಳವಡಿಸಿಕೊಂಡರು. ಶಿವ, ಸೂರ್ಯ, ಬುದ್ಧ ಹಾಗೂ ಅಗ್ನಿ ಮುಂತಾದ ದೇವತೆಗಳನ್ನು ಪೂಜಿಸುವ ಮೂಲಕ ಭಾರತೀಯ ಹೆಸರುಗಳನ್ನು ಇಟ್ಟುಕೊಂಡು ಕೊನೆಗೆ ಭಾರತೀಯರೇ ಆದರು. ಅಶ್ವಮೇಧಯಾಗ, ಅಶ್ವಪೂಜೆ, ಸ್ತ್ರೀಯರ ಸ್ಥಾನಮಾನ, ಮಧ್ಯಸೇವನೆ, ಆಯುಧಗಳ ಪೂಜೆ ಮುಂತಾದ ವಿಷಯಗಳಲ್ಲಿ ವಿದೇಶಿಯರಾದ ಶಕರು, ಹೂಣರು ಹಾಗೂ ಕುಶಾನರ ಮತ್ತು ರಜಪೂತರ ನಡುವೆ ಯಾವ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ರಜಪೂತರು ಹಾಗೂ ವಿದೇಶಿ ಬುಡಕಟ್ಟುಗಳ ನಡುವಿನ ಹೋಲಿಕೆಯನ್ನು ಬಯಲಿಗೆಳೆದ ಇತಿಹಾಸ ತಜ್ಞರೆಂದರೆ ಕರ್ನಲ್ ಟಾಡ್. ಕರ್ನಲ್ ಟಾಡ್‌ ಈ ಅಭಿಪ್ರಾಯವನ್ನು ಬೆಂಬಲಿಸಿದವರೆಂದರೆ ವಿಲಿಯಂ ಬ್ರೂಕ್, ಡಾ| ಈಶ್ವರಿ ಪ್ರಸಾದ್ ಹಾಗೂ ಡಾ॥ ಬಂಡಾರಕರ್.ರಜಪೂತರು ತಮ್ಮನ್ನು ರಾಜಪುತ್ರರು ಎಂದು ಕರೆದುಕೊಂಡಿದ್ದಾರೆ. ರಜಪೂತ ಎಂಬ ಪದವು ರಾಜಪುತ್ರ ಎಂಬ ಪದದ ಅಪಬ್ರಂಶವಾಗಿದೆ. ರಜಪೂತರು ವಿದೇಶಿ ಮೂಲದವರು ಎಂಬ ಅಭಿಪ್ರಾಯವನ್ನು ವಿದ್ವಾಂಸರು ಈ ಕೆಳಗಿನ ಅಂಶಗಳಿಂದಲೂ ದೃಡಪಡಿಸಿದ್ದಾರೆ.

1) ರಜಪೂತರು ಎನ್ನುವ ವಿಶಿಷ್ಟ ಹೆಸರು ವೇದಗಳ ಕಾಲದ ಸಾಹಿತ್ಯದಲ್ಲಿ ಎಲ್ಲಿಯೂ ಕಂಡು ಬರುವುದಿಲ್ಲ. ಆದರೆ ಇಂತಹ ಹೆಸರು ಹೂಣರು ಭಾರತಕ್ಕೆ ಬಂದಾಗಿನಿಂದ ಈಚೆಗೆ ಕಂಡುಬರುತ್ತದೆ. ಆದುದರಿಂದ ರಜಪೂತರು ವಿದೇಶಿಯರು ಎಂಬ ವಾದವನ್ನು ಇತಹಾಸಕಾರರು ಮಂಡಿಸುತ್ತಾರೆ.

2) ರಜಪೂತರು ಆಚರಿಸುತ್ತಿದ್ದ ಅಗ್ನಿಪೂಜೆ ಹೂಣರು ಹಾಗೂ ಶಕರಿಂದ ಬಳುವಳಿಯಾಗಿ ಬಂದಿದೆ.

3) ಭಾರತಕ್ಕೆ ಬಂದ ವಿದೇಶಿ ದಾಳಿಕೋರರು ಹಿಂದೂ ಧರ್ಮವನ್ನು ಒಪ್ಪಿಕೊಂಡರು. ಇವರು ಯುದ್ಧ ಪ್ರಿಯರು ಹಾಗೂ ಆಕ್ರಮಣಶೀಲರೂ ಆಗಿದ್ದು, ಸಹಜವಾಗಿ ಅವರು ಹೋರಾಟದ ಪ್ರವೃತ್ತಿಯನ್ನು ಅಳವಡಿಸಿಕೊಂಡಿದ್ದರು. ನಂತರ ಕ್ಷತ್ರಿಯ ವರ್ಗಕ್ಕೆ ಸೇರಿ ಗುಜರಾತ್ ಪ್ರಾಂತದಲ್ಲಿ ನೆಲಸಿದರು.

4) ರಜಪೂತ ಮನೆತನಗಳಾದ ಚೌಹಾನರು, ಪ್ರತೀಹಾರರು, ಪರಮಾರರು ಹಾಗೂ ಸೋಲಂಕಿಗಳು ಶಕರಿಂದ ರೂಪಾಂತರ ಹೊಂದಿದವರೆಂದು ಕರ್ನಲ್ ಟಾಡ್ ಅಭಿಪ್ರಾಯಪಟ್ಟಿದ್ದಾರೆ.

2) ದೇಶೀಯ ಸಿದ್ಧಾಂತ ಅಥವಾ ಸೂರ್ಯ ಕುಲ ಸಿದ್ಧಾಂತ:

ಗೌರಿಶಂಕರ್ ಓಝ, ವೇದವ್ಯಾಸ, ಡಾ|| ಸಿ.ಎ.ವೈದ್ಯ ಮುಂತಾದ ವಿದ್ವಾಂಸರು ರಜಪೂತರು ವಿದೇಶಿಯರು ಅಲ್ಲ. ಅವರು ದೇಶೀಯರೇ ಆಗಿದ್ದಾರೆ ಎಂದು ವಾದಿಸಿದ್ದಾರೆ. ಇವರು ರಜಪೂತರ ವಿದೇಶಿ ಮೂಲವನ್ನು ತಿರಸ್ಕರಿಸುತ್ತಾರೆ. ಗೌರಿಶಂಕರ್ ಓಝರವರು ತಮ್ಮ ‘ಹಿಸ್ಟರಿ ಆಪ್ ರಾಜಪುಠಾಣ ಎಂಬ ಕೃತಿಯಲ್ಲಿ ರಜಪೂತರು ಭಾರತೀಯರು ಎಂದು ವಾದಿಸಿದ್ದಾರೆ. ರಜಪೂತರು ಆರ್ಯ ಜನಾಂಗಕ್ಕೆ ಸೇರಿದವರು ಹಾಗೂ ಕ್ಷತ್ರಿಯ ವಂಶಗಳಾದ ಸೂರ್ಯ ಹಾಗೂ ಚಂದ್ರ ವಂಶಗಳಿಗೆ ಸೇರಿದವರು ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಶ್ರೀರಾಮನಿಂದ ವಂಶೋದ್ಧವವಾದವರು ಸೂರ್ಯವಂಶೀಯರು, ಶ್ರೀಕೃಷ್ಣನ ಸಂತತಿಯವರು ಚಂದ್ರವಂಶಸ್ಥರೆಂದು ತಿಳಿಯಲಾಗಿದೆ. ಬೌದ್ಧಿಕ ದೇಹ ಪ್ರಮಾಣ, ಸ್ವಾಭಿಮಾನ, ತ್ಯಾಗದ ಗುಣಗಳು ಆರ್ಯವಂಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಇವೆಲ್ಲ ಗುಣಗಳು ರಜಪೂತರಲ್ಲಿ ಕಂಡುಬಂದಿದ್ದರಿಂದ ಅವರು ವಿದೇಶಿಯರು ಎಂದು ಹೇಳಲು ಬರುವುದಿಲ್ಲ ಎಂದು ಹೇಳಲಾಗಿದೆ. ರಜಪೂತರ ಭಾರತೀಯ ಮೂಲವನ್ನು ಪ್ರತಿಪಾದಿಸುವ ಆರ್.ಸಿ. ಮುಜುಮ್ದಾರರು “ರಜಪೂತರು ಕ್ಷತ್ರಿಯ ಮೂಲದವರಾಗಿದ್ದು ಪುರಾಣಗಳಲ್ಲಿ ಮತ್ತು ಬಾಣನ ಹರ್ಷಚರಿತದಲ್ಲಿ ರಜಪೂತರ ಹೆಸರನ್ನು ಉಲ್ಲೇಖಿಸಲಾಗಿದೆ. ರಜಪೂತ ಮೂಲದವರು ಕ್ಷತ್ರಿಯ ಹಾಗೂ ಬ್ರಾಹ್ಮಣ ಪಂಗಡಕ್ಕೂ ಸೇರಿದವರಾಗಿದ್ದರು. ರಜಪೂತರ ಮೂಲ ಪದ ರಾಜಪುತ್ರ ಪದವನ್ನು ಮಹಾ ಭಾರತದಲ್ಲಿಯೂ ಕಾಣಬಹುದಾಗಿದೆ. ಮಹಾಭಾರತದ ವಿರಾಟ ಪರ್ವದಲ್ಲಿ ಬ್ರೌಪದಿಯನ್ನು ರಾಜಪುತ್ರಿಯೆಂದು ಸಂಭೋದಿಸಲಾಗಿದೆ. ರಾಜಸ್ಥಾನದ ಅರಸರು ಇಂದಿಗೂ ಚಂದ್ರವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಬಿಕಾನೇರ್, ಮೇವಾಡ್ ಹಾಗೂ ಜಯಪುರದ ಅರಸರು ಇಂದಿಗೂ ಸೂರ್ಯವಂಶಕ್ಕೆ ಸೇರಿದವರು ಎಂದು ಹೇಳಲಾಗಿದೆ.

3) ಅಗ್ನಿಕುಲ ಸಿದ್ಧಾಂತ:

ಅನೇಕ ರಜಪೂತ ಅರಸರು ತಮ್ಮನ್ನು ಅಗ್ನಿಕುಲದವರು ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಕಥೆಯೊಂದನ್ನು ಚಾಂದ್ ಬರ್ದಾಯ್ ಬರೆದ ‘ಪೃಥ್ವಿರಾಜರಾಸೋ’ ಎಂಬ ಕಾವ್ಯದಲ್ಲಿ ಕಾಣಬಹುದಾಗಿದೆ. ಪುರಾಣ ಪುರುಷನಾದ ಪರಷುರಾಮನು ಕ್ಷತ್ರಿಯರನ್ನು ನಾಶಮಾಡಿದಾಗ ಬ್ರಾಹ್ಮಣರು ರಕ್ಷಕರಿಲ್ಲದೆ ಪರಿತಪಿಸಿದರು. ಅವರು ತಮ್ಮನ್ನು ರಕ್ಷಿಸುವ ಯೋಧರಿಗಾಗಿ ಒಂದು ಯಜ್ಞವೊಂದನ್ನು ನಡೆಸಿದರು. ಈ ಯಜ್ಞವು ಸುಮಾರು 40 ದಿನಗಳವರೆಗೆ ನಡೆಯಿತು. ಯಜ್ಞದ ಕೊನೆಯ ದಿನದಲ್ಲಿ ಅಲ್ಲಿನ ಅಗ್ನಿಕುಂಡದಲ್ಲಿ ನಾಲ್ಕು ಜನ ವೀರ ಪುರಷರು ಉದ್ಭವಗೊಂಡರು. ಅವರು ಚೌಹಾನರು, ಪ್ರತಿಹಾರ, ಪರಮಾರ ಹಾಗೂ ಚಾಲುಕ್ಯ ಎಂಬ ನಾಲ್ಕು ವಂಶಗಳ ಮೂಲ ವ್ಯಕ್ತಿಗಳಾಗಿದ್ದರು. ಈ ಸಿದ್ಧಾಂತವು ಪೌರಾಣಿಕ ಅಂಶಗಳಿಗೆ ಸಂಬಂಧಪಟ್ಟ ಕಾರಣದಿಂದ ವಿದ್ವಾಂಸರು ಇದರ ಕಡೆಗೆ ಹೆಚ್ಚು ಒಲವು ತೋರಿಸಿಲ್ಲ. ಡಾ| ಈಶ್ವರಿ ಪ್ರಸಾದರು ಈ ಸಿದ್ಧಾಂತ ಕಾಲ್ಪನಿಕವಾಗಿದೆ ಎಂದು ಹೇಳಿದ್ದಾರೆ.

4) ಗೊಂಡ ವಂಶದ ಅರಸರ ಸಿದ್ಧಾಂತ:

ರಜಪೂತರು ಇಲ್ಲಿನ ಮೂಲ ನಿವಾಸಿಗಳ ವಂಶಸ್ತರಾಗಿದ್ದಾರೆ ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸತ್ಯನಾಥ ಅಯ್ಯರ್ ಅವರು ರಜಪೂತರು ಗೊಂಡರು ಹಾಗೂ ಭಾರರೆಂಬ ಮೂಲದವರಾಗಿದ್ದು, ಭಾರತೀಯರಲ್ಲಿಯೇ ಅನಾಗರಿಕ ಗುಂಪುಗಳಾಗಿದ್ದರು. ಮುದ್ರೆ ಎಂಬ ಬ್ರಾಹ್ಮಣ ಕುಲದವರಿಂದ ಸ್ಥಾಪಿಸಲ್ಪಟ್ಟ ಕೆಲವು ವಂಶೀಯರು ನಂತರ ಕ್ಷತ್ರಿಯರೆಂದು ಪ್ರಸಿದ್ಧರಾದರು. ಇದಕ್ಕೆ ಕಾರಣವೆಂದರೆ ಅವರು ಕ್ಷತ್ರಿಯರೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದುದು. ರಜಪೂತ ರಾಣಿಯಾದ ರಾಣಿ ದುರ್ಗಾವತಿ ‘ಗೊಂಡ ವಂಶ’ಕ್ಕೆ ಸೇರಿದವಳಾಗಿದ್ದಳೆಂಬುದು ಗಮನಿಸಬೇಕಾದ ಅಂಶವಾಗಿದೆ.

5) ಸರ್ವಸಮ್ಮತ ಸಿದ್ಧಾಂತ:

ಮೇಲಿನ ಎಲ್ಲಾ ಸಿದ್ಧಾಂತಗಳ ಆಧಾರದ ಮೇಲೆ ತಿಳಿದುಬರುವುದೇನೆಂದರೆ ರಜಪೂತರು ಪೂರ್ಣವಾಗಿ ಭಾರತೀಯರೂ ಅಲ್ಲ. ಪೂರ್ಣವಾಗಿ ವಿದೇಶಿಯರೂ ಅಲ್ಲ. ಅವೆರಡರ ಸಂಗಮವೇ ರಜಪೂತರು. ವಿದೇಶಿಯರಾದ ಹೂಣರು, ಕುಶಾನರು ಹಾಗೂ ಶಕರು ಭಾರತೀಯ ಬಹುಸಂಖ್ಯಾತ ಜನರೊಂದಿಗೆ ಬೆರೆತು ಕ್ಷತ್ರಿಯರೆನಿಸಿಕೊಂಡರು. ಆರಂಭದಲ್ಲಿ ರಜಪೂತರು ಹುಟ್ಟು ಹೋರಾಟಗಾರರಾಗಿದ್ದು ಸದಾ ಯುದ್ಧೋತ್ಸಾಹಿಗಳಾಗಿದ್ದರು. ಕಾಲ ಕಳೆದಂತೆ ಅವರಲ್ಲಿ ವಿದೇಶಿಯ ಭಾವನೆ ಮರೆತುಹೋಗಿ ಭಾರತೀಯ ಸಂಸ್ಕೃತಿ ಮನೆ ಮಾಡಿತು. ನಂತರದ ದಿನಗಳಲ್ಲಿ ರಜಪೂತರು ಸ್ವಾತಂತ್ರ್ಯ ಅಭಿಮಾನ ಹಾಗೂ ಆತ್ಮಗೌರವವನ್ನು ಬೆಳೆಸಿಕೊಂಡರು. ಮುಸ್ಲಿಂರನ್ನು ಎದುರಿಸುವ ಶಕ್ತಿಯನ್ನು ಬೆಳೆಸಿಕೊಂಡರು. ಆದರೆ ಮುಸ್ಲಿಂ ಸುಲ್ತಾನರ ಮೋಸ, ವಂಚನೆ ಹಾಗು ಕುಯುಕ್ತಿಯಿಂದ ರಜಪೂತರು ಸೋಲನುಭವಿಸಬೇಕಾಯಿತು. ಒಟ್ಟಿನಲ್ಲಿ ರಜಪೂತರು ವಿದೇಶಿಯರೆಂದು ಕಂಡುಬಂದರೂ ಅವರು ಭಾರತೀಯರೇ ಎಂಬ ವಾದವನ್ನು ಅಲ್ಲಗಳೆಯುವಂತಿಲ್ಲ.

ಉಪಸಂಹಾರ:
ಅಂತಿಮವಾಗಿ, ರಾಜಪುತಗಳ ಮೂಲದ ಕುರಿತು ನಡೆಯುವ ವಾದವಿವಾದಗಳು ಇತಿಹಾಸವು ಸದಾ ಬೆಳೆಯುವ ಹಾಗೂ ಪುನರ್ವ್ಯಾಖ್ಯಾನಗೊಳ್ಳುವ ವಿಷಯವೆಂಬುದನ್ನು ತೋರಿಸುತ್ತವೆ. ಪಂಡಿತರು ತಮ್ಮ ತಮ್ಮ ಸಿದ್ಧಾಂತಗಳನ್ನು ಉತ್ಸಾಹದಿಂದ ಸಮರ್ಥಿಸಿದರೂ, ಅಂತಿಮ ಒಮ್ಮತದ ಕೊರತೆ ಇತಿಹಾಸವು ವ್ಯಾಖ್ಯಾನದ ಮೇಲೂ ಅವಲಂಬಿತವಾಗಿದೆ ಎಂಬುದನ್ನು ನೆನಪಿಸುತ್ತದೆ.