ಭಾರತದ ನ್ಯಾಯಾಲಯಗಳು ಏಣಿಯೋಪಾದಿಯಲ್ಲಿ ರಚನೆಯಾಗಿವೆ. ಈ ಏಣಿಯೋಪಾದಿಯಲ್ಲಿ ಸರ್ವೋಚ್ಚ ನ್ಯಾಯಾಲಯವು ಅತ್ಯುನ್ನತ ಹಂತದಲ್ಲಿದೆ. ನಂತರ ಉಚ್ಛ ನ್ಯಾಯಾಲಯ, ಅದರ ಕೆಳಗೆ ಅಧೀನದ ನ್ಯಾಯಾಲಯಗಳು ಬರುತ್ತವೆ. ಸುಪ್ರೀಂಕೋರ್ಟ್ ನೀಡುವ ತೀರ್ಪು ಅದರ ಕೆಳಗಿನ ಎಲ್ಲ ನ್ಯಾಯಾಲಯಗಳಿಗೆ ಸಂಬಂಧಿಸಿರುತ್ತದೆ. ೧೯೫೦ ಜನವರಿ ೨೮ ರಂದು ಸರ್ವೋಚ್ಚ ನ್ಯಾಯಾಲಯವು ಸ್ಥಾಪನೆಯಾಯಿತು. ʻʻಧರ್ಮವಿದ್ದಲ್ಲಿ ನ್ಯಾಯʼʼ ಎಂಬುದು ಸರ್ವೋಚ್ಚ ನ್ಯಾಯಾಲಯದ ದ್ಯೇಯ ವಾಕ್ಯವಾಗಿದೆ. ಭಾರತದ ಸಂವಿಧಾನದ ೫ನೇ ಭಾಗದ ೪ನೇ ಅಧ್ಯಾಯದಲ್ಲಿ 124 ರಿಂದ 147ನೇ ವಿಧಿಯವರೆಗೆ ಸರ್ವೋಚ್ಚ ನ್ಯಾಯಾಲಯದ ರಚನೆ ಹಾಗೂ ಅದರ ಅಧಿಕಾರ ವ್ಯಾಪ್ತಿಯನ್ನು ವಿವರಿಸಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ರಚನೆ: (Composition of Suprime Court)

 ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲ್ಪಂಕ್ತಿಯಲ್ಲಿರುವ ಸರ್ವೋಚ್ಚ ನ್ಯಾಯಾಲಯವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದೆ.

1. ಒಟ್ಟು ನ್ಯಾಯಾಧೀಶರ ಸಂಖ್ಯೆ: (Total Number of Judges)

1950 ಜನವರಿ 28ರಂದು ಸರ್ವೋಚ್ಚ ನ್ಯಾಯಾಲಯವು ತನ್ನ ಕಾರ್ಯವನ್ನು ಆರಂಭಿಸಿದಾಗ ಒಬ್ಬ ಮುಖ್ಯ ನ್ಯಾಯಾಧೀಶ ಹಾಗೂ ಏಳು ಮಂದಿ ನ್ಯಾಯಾಧೀಶರು ಹಾಜರಿದ್ದರು. ಸಂಸತ್ತು ಕಾಲಕ್ರಮೇಣ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿತು. 1956 ರಲ್ಲಿ 10, 1960ರಲ್ಲಿ 13, 1977ರಲ್ಲಿ 17, 1985ರಲ್ಲಿ 25, 2008ರಲ್ಲಿ 30, ಹಾಗೂ 2019ರಲ್ಲಿ 33ಕ್ಕೆ ಹೆಚ್ಚಿಸಿತು. ಪ್ರಸ್ತುತ ಈಗ ಸರ್ವೋಚ್ಚ ನ್ಯಾಯಾಲಯವು ಒಬ್ಬ ಮುಖ್ಯ ನ್ಯಾಯಾಧೀಶರು ಮತ್ತು 33 ನ್ಯಾಯಾಧೀಶರುಗಳನ್ನು ಒಳಗೊಂಡಿದೆ. ʻʻನವದೆಹಲಿ ಸರ್ವೋಚ್ಚ ನ್ಯಾಯಾಲಯದ ಕೇಂದ್ರ ಕಚೇರಿಯಾಗಿದೆ.ʼʼ

2. ನ್ಯಾಯಾಧೀಶರ ನೇಮಕ: (Appointment Of Judges)

ʻʻ ಸಂವಿಧಾನದ 124 (೧)  ವಿಧಿಯ ಅನ್ವಯ ಸರ್ವೋಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ರಾಷ್ಟ್ರಪತಿಯು ನೇಮಿಸುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರನ್ನು ನೇಮಿಸುವಾಗ ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಹಾಗೂ ಅಲ್ಲಿನ ಹಿರಿಯ ವಕೀಲರು ಮತ್ತು ಪ್ರಧಾನ ಮಂತ್ರಿ ಮತ್ತು ಮಂತ್ರಿಮಂಡಲದ ಸಲಹೆಯನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನ ʻʻಕೊಲಿಜಿಯಂ ಸಲಹೆಯನ್ನು ಪಡೆಯಲಾಗುತ್ತದೆ. ಇದರಿಂದ ನ್ಯಾಯಾಧೀಶರ ನೇಮಕದಲ್ಲಿ ರಾಜಕೀಯ ಒತ್ತಡಗಳಿಗೆ ಹೆಚ್ಚು ಅವಕಾಶ ಇರುವುದಿಲ್ಲ. ಆದರೆ ನ್ಯಾಯಾಧೀಶರ ನೇಮಕದಲ್ಲಿ ರಾಷ್ಟ್ರಪತಿ ತಮ್ಮ ವಿವೇಚನೆಯನ್ನು ಉಪಯೋಗಿಸಬಹುದು.

3. ಅರ್ಹತೆಗಳು: (Qualification)

 ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಲು ಸಂವಿಧಾನದ 124 (೩)  ವಿಧಿಯ ಪ್ರಕಾರ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  1. a) ಭಾರತದ ಪ್ರಜೆಯಾಗಿರಬೇಕು.
  2. b) ಯಾವುದೇ ಉಚ್ಛ ನ್ಯಾಯಾಲಯದಲ್ಲಿ ಐದು ವರ್ಷ ನ್ಯಾಯಾಧೀಶನಾಗಿ ಅಥವಾ ಹತ್ತು ವರ್ಷ ನ್ಯಾಯವಾದಿಯಾಗಿ ಅನುಭವ ಪಡೆದಿರಬೇಕು.
  3. c) ರಾಷ್ಟ್ರಪತಿಯ ದೃಷ್ಟಿಯಲ್ಲಿ ಉತ್ತಮ ಕಾನೂನು ಪಂಡಿತನ ಆಗಿರಬೇಕು.

4. ನ್ಯಾಯಾಧೀಶರ ಪ್ರಮಾಣವಚನ: (Oath of Chief Justice)

ಸಂವಿಧಾನದ 124 (೬)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಧೀಶರುಗಳಿಗೆ ರಾಷ್ಟ್ರಪತಿಗಳು ಪ್ರಮಾಣವಚವನ್ನು ಬೋಧಿಸುತ್ತಾರೆ.ʼʼ ರಾಷ್ಟ್ರಪತಿಗಳ ಸಮ್ಮುಖದಲ್ಲಿ ಮುಖ್ಯ ನ್ಯಾಯಾಧೀಶರು ಭಾರತದ ಸಾರ್ವಭೌಮತ್ವ, ಅಖಂಡತೆ ಹಾಗೂ ಸಂವಿಧಾನವನ್ನು ಎತ್ತಿ ಹಿಡಿಯಲು ಯಾವ ಭಯ ಅಥವಾ ಪಕ್ಷಪಾತವಿಲ್ಲದೆ ನ್ಯಾಯ ವಿತರಣೆ ಮಾಡುವ ಘೋಷಣೆಯನ್ನು ಮೂರನೇ ಅನುಸೂಚಿಯಲ್ಲಿ ತಿಳಿಸಿರುವಂತೆ ಪ್ರತಿಜ್ಞೆ ಮಾಡುತ್ತಾರೆ.

5. ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿ: (Term of Power of the Chief Justice)

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಲು ಸಂವಿಧಾನದಲ್ಲಿ ಯಾವುದೇ ಕನಿಷ್ಠ ವಯೋಮಿತಿಯನ್ನಾಗಲಿ ಅಥವಾ ನಿರ್ದಿಷ್ಟ ಅಧಿಕಾರಾವಧಿಯನ್ನಾಗಲಿ ಸ್ಪಷ್ಟಪಡಿಸಿಲ್ಲ ಹೀಗಾಗಿ ನ್ಯಾಯಾಧೀಶರಾಗಿ ನೇಮಕಗೊಂಡ ವ್ಯಕ್ತಿ ತಾನು ನೇಮಕಗೊಂಡ ದಿನದಿಂದ 65 ವರ್ಷ ವಯಸ್ಸಾಗುವವರೆಗೆ ಅಧಿಕಾರಾವಧಿ ಹೊಂದಿರುತ್ತಾನೆ. ರಾಜೀನಾಮೆ ಮರಣ ಅಥವಾ ಪದಚ್ಯುತಿ ಕಾರಣಗಳಿಂದ 65 ವರ್ಷದೊಳಗೆ ನ್ಯಾಯಾಧೀಶರ ಅವಧಿಯಲ್ಲಿ ಕಡಿತಗೊಳ್ಳುವ ಸಾಧ್ಯತೆ ಇದೆ.

6. ವೇತನ ಮತ್ತು ಭತ್ಯೆಗಳು:  (Salary and Allowances)

ಸಂಸತ್ತು ಕಾಲ ಕಾಲಕ್ಕೆ ನಿಗದಿಪಡಿಸಿದ ಮಾಸಿಕ ವೇತನ ಹಾಗೂ ಇತರ ಸೌಲಭ್ಯಗಳನ್ನು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು ಪಡೆದುಕೊಳ್ಳುತ್ತಾರೆ. ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ೨,80,000 ಹಾಗೂ ಇತರೆ ನ್ಯಾಯಾಧೀಶರು ಎರಡು ಲಕ್ಷದ ಐವತ್ತು ಸಾವಿರ ಮಾಸಿಕ ವೇತನವನ್ನು ಪಡೆಯುತ್ತಿದ್ದಾರೆ. ಇದರೊಂದಿಗೆ ಉಚಿತ ನಿವಾಸ, ಉಚಿತ ದೂರವಾಣಿ, ಉಚಿತ ವಿದ್ಯುತ್ ಹಾಗೂ ಅಂತರ್ಜಾಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಜೊತೆಗೆ ಮಾಸಿಕ 25000 ಸೇವಕರ ಭತ್ಯೆಯನ್ನು ನ್ಯಾಯಾಧೀಶರು ಪಡೆಯುತ್ತಾರೆ. ಮುಂದುವರೆದು ಅವರಿಗೆ ಎರಡು ವಾಹನ, ಪೊಲೀಸ್ ಭದ್ರತೆ, ವಾರ್ಷಿಕ 30 ಬಾರಿ ಉಚಿತ ವಿಮಾನ ಪ್ರಯಾಣ. ವೈದ್ಯಕೀಯ ವೆಚ್ಚ ಹಾಗೂ ನಿವೃತ್ತಿ ಸೌಲಭ್ಯಗಳನ್ನು ದೊರೆಯುತ್ತವೆ. ನ್ಯಾಯಾಧೀಶರು ಹಾಗೂ ಇತರೆ ಸಿಬ್ಬಂದಿಗಳ ವೇತನಗಳನ್ನು ʻʻಭಾರತದ ಸಂಚಿತ ನಿಧಿಯಿಂದ ಭರಿಸಲಾಗುತ್ತದೆ.ʼʼ

7. ನ್ಯಾಯಾಧೀಶರ ಪದಚ್ಯುತಿ: (Impeachment of Chief Justice)

ಸಂವಿಧಾನದ 124ನೇ ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅಸಮರ್ಥತೆ ಹಾಗೂ ಅಸಭ್ಯ ವರ್ತನೆಯ ಕಾರಣದಿಂದ ಮಹಾಭಿಯೋಗದ ಮೂಲಕ ಪದಚ್ಯುತಗೊಳಿಸಲು ಅವಕಾಶವಿದೆ. ನ್ಯಾಯಾಧೀಶರನ್ನು ವಾಗ್ದಂಡನೆಗೆ ಗುರಿಪಡಿಸುವ ನಿರ್ಣಯವನ್ನು ಕನಿಷ್ಟ ಪಕ್ಷ 100 ಲೋಕಸಭಾ ಸದಸ್ಯರು ಹಾಗೂ 50 ರಾಜ್ಯಸಭಾ ಸದಸ್ಯರು ಸಹಿ ಹಾಕಿ ರಾಷ್ಟ್ರಪತಿಗಳ ಮೂಲಕ ಎಂದು ನಮೂದಿಸಿ ನಿರ್ಣಯವನ್ನು ಲೋಕಸಭಾಪತಿ ಅಥವಾ ರಾಜ್ಯಸಭಾಪತಿಗೆ ನೀಡಬೇಕು. ನಂತರ ಇಬ್ಬರು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಒಬ್ಬ ನ್ಯಾಯ ತಜ್ಞರನ್ನು ಒಳಗೊಂಡ ಸಮಿತಿಯು ನ್ಯಾಯಾಧೀಶರು ದೋಷಿ ಎಂದು ಪರಿಗಣಿಸಬೇಕು. ಹಾಗೂ ಯಾವ ಸದನದಲ್ಲಿ ಪದಚ್ಯುತಿ ನಿರ್ಣಯ ಉದ್ಭವವಾಗುತ್ತದೆಯೋ ಆ ಸದನದಲ್ಲಿ ಸಮಿತಿಯ ವರದಿ ಹಾಗೂ ಪದಚ್ಯುತಿ ನಿರ್ಣಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ರಾಷ್ಟ್ರಪತಿಯನ್ನು ಉದ್ದೇಶಿಸಿ ಉಭಯ ಸದನಗಳು ಒಟ್ಟು ಸದನದಲ್ಲಿ ಹಾಜರಿದ್ದು ಮತಚಲಾಯಿಸಿದ ಸದಸ್ಯರಲ್ಲಿ ೨/೩  ಬಹುಮತದಿಂದ ಮಂಡಿಸಿದಾಗ ಅದಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತರೆ ಮಾತ್ರ ಮುಖ್ಯ ನ್ಯಾಯಾಧೀಶರನ್ನು ಪದಚ್ಯುತಗೊಳಿಸಬಹುದು.

8. ನ್ಯಾಯಾಧೀಶರ ಸ್ವಾತಂತ್ರ್ಯ: (Independence of Judges)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿಷ್ಪಕ್ಷಪಾತವಾಗಿ ನ್ಯಾಯ ವಿತರಣೆ ಮಾಡಲು ಸಂವಿಧಾನದಲ್ಲಿ ಹಲವು ಅವಕಾಶಗಳನ್ನು ಕಲ್ಪಿಸಲಾಗಿದೆ. ನ್ಯಾಯಾಧೀಶರು ನಿರ್ಭೀತಿಯಿಂದ ಯಾರ ಪ್ರಭಾವಕ್ಕೆ ಒಳಗಾಗದೆ ಸ್ವತಂತ್ರವಾಗಿ ನ್ಯಾಯ ದಾನ ಮಾಡಲು ಸಂವಿಧಾನ ರಚನಕಾರರು ಈ ಕೆಳಗಿನ ಅಂಶಗಳನ್ನು ಅಳವಡಿಸಿದ್ದಾರೆ.

a) ನ್ಯಾಯಾಧೀಶರು ಕೊಟ್ಟ ತೀರ್ಪು, ಅವರ ಕೆಲಸ ಕಾರ್ಯಗಳು ಮುಂತಾದವುಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ. ಪೌರರಲ್ಲಿ ನ್ಯಾಯಾಲಯದ ಬಗ್ಗೆ ಅಗೌರವ ಅವಿಶ್ವಾಸಗಳನ್ನು ಹುಟ್ಟಿಸುವಂತೆ ಹಾಗೂ ನ್ಯಾಯಾಧೀಶರುಗಳಿಗೆ ಅಗೌರವ ತರುವಂತಹ ರೀತಿಯಲ್ಲಿ ಟೀಕೆಗಳನ್ನು ಮಾಡುವಂತಿಲ್ಲ.

b) ರಾಷ್ಟ್ರಪತಿಗಳು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಿಸುವಾಗ ಕಡ್ಡಾಯವಾಗಿ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚನೆ ಮಾಡಬೇಕು. ಹೀಗಾದಾಗ ನೇಮಕಾತಿಗಳು ರಾಜಕೀಯ ಒತ್ತಡಕ್ಕೆ ಒಳಗಾಗುವುದಿಲ್ಲ ಇದು ನ್ಯಾಯಾಧೀಶರನ್ನು ಕಾರ್ಯಾಂಗದ ಮಧ್ಯಪ್ರವೇಶಿಸುವಿಕೆಯಿಂದ ತಡೆಗಟ್ಟುತ್ತದೆ

c) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಮನಬಂದಂತೆ ಪದಚ್ಯುತಗೊಳಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುವುದಿಲ್ಲ. ಉಭಯ ಸದನಗಳು ೨/೩ ಬಹುಮತದಿಂದ ನಿರ್ಣಯವನ್ನು ಪಾಸು ಮಾಡಿ ರಾಷ್ಟ್ರಪತಿಗಳಿಗೆ ಕಳುಹಿಸಿದರೆ ಮಾತ್ರ ರಾಷ್ಟ್ರಪತಿಗಳು ನ್ಯಾಯಾಧೀಶರನ್ನು ಪದಚ್ಯುತಗೊಳಿಸುತ್ತಾರೆ. ಇದರಿಂದ ನ್ಯಾಯಾಂಗವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ.

d) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ರಾಷ್ಟ್ರಪತಿಗಳು ಕಾರ್ಯಾಂಗದ ಸಲಹೆ ಮೇರೆಗೆ ನೇಮಕಾತಿ ಮಾಡುತ್ತಾರೆ. ಹೀಗಾಗಿ ನ್ಯಾಯಾಧೀಶರು ರಾಷ್ಟ್ರಪತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುವುದಿಲ್ಲ ಅವರು ತಮ್ಮ ಉತ್ತಮವಾದ ನಡತೆಯಿಂದ ಕಾರ್ಯನಿರ್ವಹಿಸುತ್ತಾರೆ. ನ್ಯಾಯಾಧೀಶರ ಅಸಭ್ಯ ವರ್ತನೆ ಹಾಗೂ ಅಸಮರ್ಥತೆಯ ಕಾರಣದಿಂದ ಅವರನ್ನು ಅಧಿಕಾರದಿಂದ ಕೆಳಗಿಳಿಸಬಹುದು. ಆದರೂ ಶಾಸಕಾಂಗದ ೨/೩ ಬಹುಮತದ ಆಧಾರದ ಮೇಲೆ ರಾಷ್ಟ್ರಪತಿಯವರನ್ನು ಉದ್ದೇಶಿಸಿ ನಿರ್ಣಯ ಮಂಡಿಸಬೇಕು.

e) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಸಂಸತ್ತು ಕಾಲ ಕಾಲಕ್ಕೆ ಪರಿಷ್ಕರಿಸಿ ನೀಡುತ್ತದೆ. ಆದರೆ ವೇತನವನ್ನು ಕಡಿತಗೊಳಿಸಿ ನೀಡುವ ಅಧಿಕಾರ ಸಂಸತ್ತಿಗೆ ಇಲ್ಲ. 360 ನೇ ವಿಧಿಯ ಪ್ರಕಾರ ದೇಶದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದರೆ ಮಾತ್ರ ನ್ಯಾಯಾಧೀಶರ ವೇತನ ಹಾಗೂ ಭತ್ಯೆಯನ್ನು ಕಡಿತಗೊಳಿಸಬಹುದು ವಿಧಿ 125 (3).

f)ಸಂವಿಧಾನದ 146 (3)  ವಿಧಿಯ ಪ್ರಕಾರ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನ ಹಾಗೂ ಆಡಳಿತಾತ್ಮಕ ವೆಚ್ಚವನ್ನು ಭಾರತದ ಸಂಚಿತ ನಿಧಿಯಿಂದ ನೀಡಲಾಗುತ್ತದೆ.

g) ಸಂವಿಧಾನದ 121 ನೇ ವಿಧಿಯ ಪ್ರಕಾರ ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ಸಂದರ್ಭವನ್ನು ಹೊರತುಪಡಿಸಿ ನ್ಯಾಯಾಧೀಶರ ನಡುವಳಿಕೆಯ ಕುರಿತು ಸಂಸತ್ತಿನಲ್ಲಿ ಚರ್ಚಿಸುವಂತಿಲ್ಲ.

h) ಸಂವಿಧಾನದ 124 (೭) ವಿಧಿಯಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ನಿವೃತ್ತಿಯ ನಂತರ ಭಾರತದ ಯಾವುದೇ ನ್ಯಾಯಾಲಯದಲ್ಲಿ ವಕೀಲಿ ವೃತ್ತಿಯನ್ನು ಮಾಡುವಂತಿಲ್ಲ. ಇದು ನ್ಯಾಯಾಧೀಶರು ಯಾವುದೇ ಆಸೆ ಆಮಿಷೆಗಳಿಗೆ ಒಳಗಾಗದಂತೆ ತಡೆಯುತ್ತದೆ.

ಉಪಸಂಹಾರ

ಒಟ್ಟಾರೆ, ಸರ್ವೋಚ್ಚ ನ್ಯಾಯಾಲಯವು ಭಾರತದ ಸಂವಿಧಾನದ ಆತ್ಮವನ್ನು ಉಳಿಸಿ ಕಾಯುವ ಮಹತ್ವದ ಸಂಸ್ಥೆಯಾಗಿದೆ. ನ್ಯಾಯಾಧೀಶರ ಸ್ವಾತಂತ್ರ್ಯ, ಭದ್ರತೆ ಮತ್ತು ನಿಯಮಿತ ನೇಮಕಾತಿ ವಿಧಾನಗಳು ನ್ಯಾಯಾಂಗದ ಗೌರವವನ್ನು ಹೆಚ್ಚಿಸುತ್ತವೆ. ಮಹಾಭಿಯೋಗದಂತಹ ಕಠಿಣ ವಿಧಾನವು ನ್ಯಾಯಾಂಗದ ಪಾವಿತ್ರ್ಯವನ್ನು ಕಾಯ್ದುಕೊಳ್ಳುತ್ತದೆ. ಹೀಗಾಗಿ ಸರ್ವೋಚ್ಚ ನ್ಯಾಯಾಲಯವು ದೇಶದ ನ್ಯಾಯ ಮತ್ತು ಸಮಾನತೆಯ ಮೂಲಸ್ತಂಭವಾಗಿದೆ.