ಭಾರತದ ಸಂವಿಧಾನದ ರಚನೆಗೆ ಅನೇಕರು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕೊಡುಗೆಗಳನ್ನು ನೀಡಿದ್ದಾರೆ. ಆ ಪೈಕಿ ಕೆಲವರು ಗಣನೀಯ ಪಾತ್ರ ನಿರ್ವಹಿಸಿದ್ದಾರೆ. ಅವರಲ್ಲಿ ಪ್ರಮುಖ ನಾಯಕರ ಕೊಡುಗೆಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

1. ಜವಾಹರಲಾಲ್ ನೆಹರು ಪಾತ್ರ: 

ಭಾರತದ ಸ್ವಾತಂತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಜವಹರಲಾಲ್ ನೆಹರು ಅವರು ಸ್ವಾತಂತ್ರದ ಹೊಸ್ತಿಲಲ್ಲಿ ಹಂಗಾಮಿ ಸರ್ಕಾರದ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ನಂತರ ದೇಶದ ಪ್ರಥಮ ಪ್ರಧಾನಿಯಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಅಲಿಪ್ತ ನೀತಿ, ಪಂಚಶೀಲ ಹಾಗೂ ಪಂಚವಾರ್ಷಿಕ ಯೋಜನೆಗಳಿಗೆ ಅಡಿಪಾಯ ಹಾಕಿ ಪ್ರಜಾಸತ್ತಾತ್ಮಕವಾದ ಸಮಾಜದ ನಿರ್ಮಾಣಕ್ಕೆ ಕಾರಣರಾದರು. ಸ್ವಾತಂತ್ರ್ಯ ಚಳುವಳಿಯ ಕಾವು ಅಧಿಕಗೊಂಡ ಕಾಲದಲ್ಲಿ ಅಂದರೆ 1933 ಅಕ್ಟೋಬರ್ 2ರಂದು ಭಾರತದ ಹೊಸ ಸಂವಿಧಾನದ ರಚನೆಗೆ ಅವರು ಪ್ರಥಮ ಬಾರಿ ಬ್ರಿಟಿಷ್ ಸರ್ಕಾರಕ್ಕೆ ಆಗ್ರಹಿಸಿದರು. 1934 ರಲ್ಲಿ ಭಾರತೀಯ ಕಾಂಗ್ರೆಸ್ ಇವರಿಗೆ ಪೂರ್ಣ ಬೆಂಬಲವನ್ನು ನೀಡಿತು. 1938ರಲ್ಲಿ ಹರಿಪುರ ಕಾಂಗ್ರೆಸ್ ಭಾರತಕ್ಕೆ ಹೊಸ ಸಂವಿಧಾನ ರಚಿಸುವಂತೆ ಆಂಗ್ಲರ ಮೇಲೆ ಒತ್ತಡವನ್ನು ಹಾಕುವ ನಿರ್ಣಯವನ್ನು ಅಂಗೀಕರಿಸಿತು

ಆನಂತರ ಜವಾಹರ್ ಲಾಲ್ ನೆಹರು ಅವರು 1946 ಡಿಸೆಂಬರ್ 13ರಂದು ಸಂವಿಧಾನ ರಚನಾ ಸಭೆಯಲ್ಲಿ ಧ್ಯೇಯೋದ್ದೇಶಗಳ ನಿರ್ಣಯವನ್ನು ಮಂಡಿಸಿದರು. ಈ ನಿರ್ಣಯವು ಸ್ವಾಯತ್ತ ಪ್ರಾಂತ್ಯಗಳಿಂದ ಕೂಡಿದ ಒಕ್ಕೂಟ, ಜನತಾ ಪರಮಾಧಿಕಾರ, ಭಾರತದ ವಿವಿಧ ಜನಾಂಗಗಳ ಹಕ್ಕುಗಳ ಭರವಸೆ, ಮನುಕುಲದ ಕಲ್ಯಾಣ, ದೇಶದ ಐಕ್ಯತೆ ಹಾಗೂ ಸಾರ್ವಭೌಮತ್ವ, ಸಂವಿಧಾನ ರಚಿಸುವಾಗ ಮಾಡಬೇಕಾದ ಕಾರ್ಯಗಳು, ಗುರಿಗಳು, ಸಂವಿಧಾನ ಒಳಗೊಳ್ಳಬೇಕಾದ ಆದರ್ಶಗಳು ಹಾಗೂ ಸಂವಿಧಾನ ವ್ಯಾಪ್ತಿಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಸಂವಿಧಾನ ರಚನಾ ಸಮಿತಿಯು ಪ್ರಮುಖ ವಿಚಾರಗಳ ಚರ್ಚೆಗಾಗಿ ಒಂದು ಸಮಿತಿಯನ್ನು ರಚಿಸಿತು. ಈ ಸಮಿತಿಯ ಅಧ್ಯಕ್ಷೀಯ ಸ್ಥಾನವನ್ನು ನೆಹರೂ ಅವರ ವಹಿಸಿಕೊಂಡಿದ್ದರು. ಈ ಸಮಿತಿಯು ಹಲವಾರು ದಿನಗಳ ಕಾಲ ವಿವಿಧ ರೀತಿಯ ಚರ್ಚೆಗಳನ್ನು ನಡೆಸಿತು. ಆಗ ಜವಾಹರಲಾಲ್ ನೆಹರು ಅವರು ಒಕ್ಕೂಟ ರಚನೆ, ಅಲ್ಪಸಂಖ್ಯಾತರ ಹಕ್ಕುಗಳು, ಭಾಷೆ ಹಾಗೂ ಗಡಿ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಭಾಷಣ ಮಾಡಿದರು. ಇದರ ಜೊತೆಗೆ ಅಂಬೇಡ್ಕರರು ತಾಳುತ್ತಿದ್ದ ನಿಲುವುಗಳಿಗೆ ಬೆಂಬಲವನ್ನು ಸೂಚಿಸುವ ಮೂಲಕ ಸಂವಿಧಾನದ ಬಗ್ಗೆ ಸರ್ವಸಮ್ಮತವಾದ ಒಮ್ಮತದ ನಿರ್ಧಾರವನ್ನು ಕೈಗೊಳ್ಳಲು ನೆಹರು ಪ್ರಯತ್ನಿಸಿದರು.

2. ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್‌ರ ಪಾತ್ರ: (Contribution of Ambedkar)

ಭಾರತದ ಸಂವಿಧಾನ ರಚನಾ ಸಮಿತಿಯು ಕಾರ್ಯ ನಿರ್ವಹಿಸುತ್ತಿರುವ ನಡುವೆಯೇ ಲಾರ್ಡ್ ಮೌಂಟ್ ಬ್ಯಾಟನ್ನರ ಯೋಜನೆಯಂತೆ ದೇಶವನ್ನು ವಿಭಜಿಸಿ ಭಾರತ ಹಾಗೂ ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳನ್ನಾಗಿ ಅಸ್ತಿತ್ವಕ್ಕೆ ತರಲಾಯಿತು. ಆಗ ನೂತನವಾಗಿ ವಿಭಜನೆಗೊಂಡ ಪಾಕಿಸ್ತಾನವು ತನ್ನದೇ ಆದ ಹೊಸ ಸಂವಿಧಾನವನ್ನು ಹೊಂದಲು ಅವಕಾಶ ನೀಡಲಾಯಿತು. ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳು ಪಾಕಿಸ್ತಾನಕ್ಕೆ ಸೇರ್ಪಡೆಯಾದ ಕಾರಣ ಆ ಪ್ರದೇಶದ ಸ್ಥಾನಗಳು ಸಂವಿಧಾನ ರಚನಾ ಸಮಿತಿಯಲ್ಲಿ ಕಡಿತವಾದವು. ಹೀಗಾಗಿ ರಚನಾ ಸಭೆಯ ಸದಸ್ಯರ ಸಂಖ್ಯೆ 389ರಿಂದ 299 ಕ್ಕೆ ಇಳಿಯಿತು. 299 ಸದಸ್ಯರ ಪೈಕಿ ಬ್ರಿಟಿಷ್ ಪ್ರಾಂತ್ಯಗಳಿಂದ 22೯ ಹಾಗೂ ದೇಶಿಯ ಸಂಸ್ಥಾನಗಳಿಂದ 70 ಸದಸ್ಯರು ರಚನಾ ಸಭೆಯಲ್ಲಿ ಉಳಿದುಕೊಂಡರು. ಅಂಬೇಡ್ಕರರು ಮುಸ್ಲಿಂ ಲೀಗ್ ಅಧಿಕಾರದಲ್ಲಿದ್ದ ಪ್ರದೇಶವಾದ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿದ್ದರು. ಅವರು ಆಯ್ಕೆಗೊಂಡ ಪ್ರದೇಶ ಪಾಕಿಸ್ತಾನಕ್ಕೆ ಸೇರಿದ ಕಾರಣ ಅಂಬೇಡ್ಕರ್ ತಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು. ದಲಿತ ಜನಾಂಗ ಭಾರತದಲ್ಲಿಯೇ ಅಧಿಕ ಪ್ರಮಾಣದಲ್ಲಿ ಇರುವಾಗ ಪಾಕಿಸ್ತಾನ ಸಂವಿಧಾನ ರಚನಾ ಸಮಿತಿಯ ಸದಸ್ಯತ್ವವನ್ನು ಪಡೆದುಕೊಂಡು ತಾನೇನು ಸಾಧಿಸಬೇಕಾಗಿದೆ ಎಂಬ ಸ್ಪಷ್ಟ ನಿಲುವು ಅಂಬೇಡ್ಕರರದ್ದಾಗಿತ್ತು. ಬಳಿಕ ಅವರು ಮುಂಬೈ ಪ್ರಾಂತ್ಯದಿಂದ ಆಯ್ಕೆಯಾಗಿ ತಮ್ಮ ಆಳವಾದ ಪಾಂಡಿತ್ಯ, ಸತತ ಅಧ್ಯಯನ, ಹಿತಮಿತವಾದ ಮಾತುಗಾರಿಕೆ, ದೇಶದ ಮುಂದಿನ ದೂರ ದೃಷ್ಟಿ ಮುಂತಾದವುಗಳಿಂದ ಅವರು ದೇಶದ ಅಗ್ರಗಣ್ಯ ನಾಯಕರಾಗಿ ಗುರುತಿಸಿಕೊಂಡರು. 1947 ಆಗಸ್ಟ್ 30 ರಂದು ಡಾ. ಬಿಆರ್ ಅಂಬೇಡ್ಕರ್ ಅವರನ್ನು ಕರಡು ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಈ ಸಮಿತಿಯಲ್ಲಿ ಅನೇಕರು ಸದಸ್ಯರಾಗಿ ಆಯ್ಕೆಗೊಂಡಿದ್ದರು. ಕರಡು ಸಮಿತಿಯ ಸದಸ್ಯರು ಒಂದಿಲ್ಲ ಒಂದು ಕಾರಣದಿಂದ ಸಭೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದರು. ಅಂಬೇಡ್ಕರ್ ಒಬ್ಬರೇ ಹಗಲಿರುಳು ಎನ್ನದೆ ನಿರಂತರವಾಗಿ ಸಂವಿಧಾನ ರಚನೆಯಲ್ಲಿ ತೊಡಗಿ ತಮ್ಮ ಇಡೀ ಜೀವನದ ಸರ್ವಸ್ವವನ್ನು ಧಾರೆ ಎರೆದರು.

 ಸತತ ಅಧ್ಯಯನ, ದೂರದೃಷ್ಟಿ ಹಾಗೂ ದೇಹ ಬಾಧೆಯನ್ನು ಲೆಕ್ಕಿಸದೆ ಕರಡು ಪ್ರತಿಯನ್ನು ರಚಿಸಿ ಸಿದ್ಧಗೊಳಿಸಿದರು. ಹೀಗೆ ಸಿದ್ಧಗೊಂಡ ಸಂವಿಧಾನದ ಕರಡು ಪ್ರತಿಯ ಕುರಿತು ದೀರ್ಘಕಾಲದವರೆಗೆ ಚರ್ಚೆಗಳು ನಡೆದವು. ಜನರಿಂದ ಸ್ವೀಕರಿಸಲಾದ ಅಹವಾಲುಗಳು, ಸಲಹೆ ಹಾಗೂ ಸೂಚನೆಗಳನ್ನು ಪರಿಶೀಲಿಸಿ ಅನೇಕ ತಿದ್ದುಪಡಿಗಳನ್ನು ಮಾಡಲಾಯಿತು. ಸಂವಿಧಾನದ ಅಂಗೀಕಾರದ ವೇಳೆ ಸದಸ್ಯರು ಕೇಳುತ್ತಿದ್ದ ಪ್ರಶ್ನೆಗಳು, ವ್ಯಕ್ತಪಡಿಸಿದ ಸಂಶಯ, ಗೊಂದಲಗಳಿಗೆ ಡಾ. ಅಂಬೇಡ್ಕರ್ ನಿರರ್ಗಳವಾಗಿ ಉತ್ತರಿಸಿ ಸದಸ್ಯರುಗಳನ್ನು ಬೆರಗಾಗುವಂತೆ ಮಾಡಿದರು. ದೇಶದ ಭೌಗೋಳಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನವನ್ನು ರಚಿಸುವುದು ಇದೆಯಲ್ಲಾ ಅದು ಒಂದು ಸವಾಲಿನ ಸಂಗತಿ. ಅಂತಹ ಸವಾಲನ್ನು ಎದುರಿಸಿ ನಿಂತ ಧೀಮಂತ ವ್ಯಕ್ತಿ ಡಾಕ್ಟರ್ ಅಂಬೇಡ್ಕರ್. ಹೀಗಾಗಿ ಅವರನ್ನು ಆಧುನಿಕ ಮನು, ಸಂವಿಧಾನ ಶಿಲ್ಪಿ, ಸಂವಿಧಾನ ಪಿತಾಮಹ, ಸಂವಿಧಾನ ಜನಕ ಹಾಗೂ ದಲಿತ ಸೂರ್ಯ ಎಂಬ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಭಾರತದ ಸಂವಿಧಾನ ರಚನೆಗೆ ಅಂಬೇಡ್ಕರ್‌ ಕೊಡುಗೆಯ ಬಗ್ಗೆ ಭಾರತದ ಮೊದಲ ರಾಷ್ಟ್ರಪತಿ ಡಾ|| ಬಾಬುರಾಜೇಂದ್ರ ಪ್ರಸಾದರು ಹೀಗೆ ಹೇಳಿದ್ದಾರೆ.

ʻʻ ಸಂವಿಧಾನ ಸಭೆಯ ಅಧ್ಯಕ್ಷನಾಗಿ ಪ್ರತಿದಿನ ಚಟುವಟಿಕೆಗಳನ್ನು ಬಹಳ ಕೂಲಂಕುಷವಾಗಿ ಗಮನಿಸಿದ್ದೇನೆ. ಸಂವಿಧಾನ ಕರಡು ರಚನೆ ಸಮಿತಿ ಮತ್ತು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ|| ಬಿ.ಆರ್‌ ಅಂಬೇಡ್ಕರ್‌ ಅವರು ಇಷ್ಟು ಶ್ರದ್ಧೆ ಮತ್ತು ಉತ್ಸುಕತೆಯಿಂದ ಈ ಕಾರ್ಯವನ್ನು ನಡೆಸಿದ್ದಕ್ಕೆ ಎಲ್ಲರಿಗಿಂತ ಹೆಚ್ಚು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಡಾ|| ಬಿ.ಆರ್‌ ಅಂಬೇಡ್ಕರ್‌ರವರನ್ನು ಕರಡು ರಚನೆ ಸಮಿತಿಗೆ ಸೇರಿಸಿದ್ದು ಮತ್ತು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ನಾವು ಮಾಡಿದ ಅತ್ಯತ್ತಮ ಕೆಲಸ.

 ಸಂವಿದಾನ ರಚನಾ ಸಮಿತಿಯ ಉಪಾಧ್ಯಕ್ಷರಾಗಿದ್ದ ಶ್ರೀ ಟಿ.ಟಿ. ಕೃಷ್ಣಮಾಚಾರಿ ಹೇಳುತ್ತಾರೆ. ʻʻಸಂವಿಧಾನ ಕರಡು ಸಮಿತಿಗೆ ನೇಮಕವಾದ ೭ ಜನ ಸದಸ್ಯರಲ್ಲಿ ಒಬ್ಬರು ಮಧ್ಯದಲ್ಲಿ ರಾಜೀನಾಮೆ ನೀಡಿದರು. ಆ ಜಾಗಕ್ಕೆ ಬೇರೊಬ್ಬರನ್ನು ನೇಮಕಗೊಳಿಸಲಾಯಿತು. ಆದರೆ ಒಬ್ಬರು ನಿಧನರಾದರು ಅವರ ಜಾಗಕ್ಕೆ ಯಾರನ್ನೂ ತುಂಬಲಿಲ್ಲ. ಮತ್ತೊಬ್ಬರು ಅಮೇರಿಕಾದಲ್ಲಿಯೇ ಇದ್ದರು. ಅವರ ಜಾಗವನ್ನು ಬೇರೆಯವರು ತುಂಬಲಿಲ್ಲ. ಇನ್ನೊಬ್ಬರು ರಾಜ್ಯದ ಆಡಳಿತದ ಕಾರ್ಯದಲ್ಲಿ ನಿರತರಾಗಿದ್ದರು ಮತ್ತೇ ಇಬ್ಬರು ದೆಹಲಿಯಿಂದ ದೂರವೇ ಉಳಿದರು. ಕಾರಣ ಅವರು ಅನಾರೋಗ್ಯದಿಂದ ನರಳುತ್ತಿದ್ದರು. ನಂತರ ಸಂವಿಧಾನದ ಕರಡನ್ನು ರಚಿಸುವ ಭಾರ ಡಾ|| ಅಂಬೇಡ್ಕರ್‌ರವರ ಮೇಲೆ ಬಿತ್ತು. ಅವರು ಆ ಕಾರ್ಯವನ್ನು ಒಂಟಿಯಾಗಿ ನಿಭಾಯಿಸಿದ ರೀತಿ ಶ್ಲಾಘನೀಯ ಮತ್ತು ನಾವೆಲ್ಲಾ ಯಾವುದೇ ಅನುಮಾನಗಳಿಲ್ಲದೆ ಅವರಿಗೆ ಚಿರಋಣಿಯಾಗಿರಬೇಕು.

3. ವಲ್ಲಭಭಾಯಿ ಪಟೇಲರ ಕೊಡುಗೆ:(Contribution of Vallabhai Patel)

ಸರ್ದಾರ್ ವಲ್ಲಭಬಾಯಿ ಪಟೇಲರು ಸಹ ಭಾರತ ಸಂವಿಧಾನದ ರಚನೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ್ದರು. ಜೊತೆಗೆ ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಮಂತ್ರಿ ಹಾಗೂ ಗೃಹ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಈ ನಡುವೆ ಸಂವಿಧಾನ ರಚನಾ ಸಮಿತಿಯ ಸದಸ್ಯರಾಗಿ ಭಾರತೀಯ ಸಂವಿಧಾನ ರಚನೆಯ ಕಾರ್ಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿ ಜನಮನದಲ್ಲಿ ಅಜರಾಮರವಾಗಿ ಉಳಿದರು. ಈ ಕಾರಣದಿಂದ ಪಟೇಲರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯುತ್ತಾರೆ. ರಚನಾ ಸಭೆಯ ಕೊಡುಗೆಯಲ್ಲಿ ಇವರ ಪಾತ್ರವನ್ನು ಈ ಕೆಳಗಿನಂತೆ ನೋಡಬಹುದು.

೧) ಸುಮಾರು 500ಕ್ಕೂ ಹೆಚ್ಚಿನ ದೇಶಿಯ ಸಂಸ್ಥಾನಗಳನ್ನು ಏಕೀಕರಿಸಿ ಭಾರತದಲ್ಲಿ ಸೇರ್ಪಡೆಗೊಳಿಸಿದ ಅವರ ಕಾರ್ಯ ಪ್ರಪಂಚವೇ ಮೆಚ್ಚುವಂತದ್ದಾಗಿತ್ತು.

೨)  ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಕುರಿತು ಸಂವಿಧಾನ ರಚನಕಾರರ ಗಮನ ಸೆಳೆದು ಭಾರತವನ್ನು ಒಂದು ಒಕ್ಕೂಟ ದೇಶವನ್ನಾಗಿ ಮಾಡಿದ ಕೀರ್ತಿ ಪಟೇಲರಿಗೆ ಸಲ್ಲುತ್ತದೆ.

೩)  ಮೂಲಭೂತ ಹಕ್ಕುಗಳ ಉಪಸಮಿತಿಯ ಮುಖ್ಯಸ್ಥರಾಗಿ ಅವರು ಕೈಗೊಂಡ ಕಾರ್ಯಗಳು ಹೆಚ್ಚು ಜನಪ್ರಿಯಗೊಂಡವು.

೪)  ಪ್ರಾಂತೀಯ ಸಂವಿಧಾನ ಸಮಿತಿಯ ಅಧ್ಯಕ್ಷರಾಗಿ ಒಕ್ಕೂಟ ವ್ಯವಸ್ಥೆ ರಚನೆಗೆ ತಮ್ಮದೇ ಆದ ಕೊಡುಗೆ ನೀಡಿದರು.

೫)  ಬಹುಸಂಖ್ಯಾತರ ಹಕ್ಕುಗಳೊಂದಿಗೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಮತೋಲನಗೊಳಿಸಲು ಸಂವಿಧಾನ ರಚನಕಾರರನ್ನು ಒತ್ತಾಯಿಸಿ ಯಶಸ್ವಿಯಾದರು.

೬)  ಸಂವಿಧಾನದ ಮೂಲಭೂತ ಹಕ್ಕುಗಳ ಪಟ್ಟಿಯನ್ನು ಪಟೇಲರು ಬೆಂಬಲಿಸಿ ನಾಗರೀಕ ಹಕ್ಕುಗಳು ಜನರಿಗೆ ದೊರೆಯುವಂತೆ ಮಾಡಿದರು.

೭)  ಸಂವಿಧಾನ ರಚನಾ ಸಭೆಯ ವಿವಿಧ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿದರು.

೮)  ಪಟೇಲರು ಅಖಿಲ ಭಾರತದ ಸೇವೆಗಳ ಸೃಷ್ಟಿ ಹಾಗು ರಾಜ್ಯಗಳ ಆಡಳಿತದ ಕುರಿತು ಚರ್ಚಿಸಿ ಜಾರಿಗೊಳಿಸಿದರು. 

ಉಪಸಂಹಾರ

ಭಾರತದ ಸ್ವಾತಂತ್ರ್ಯ ನಂತರ ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಿದ ಮಹತ್ವದ ದಾಖಲೆ ಎಂದರೆ ಭಾರತೀಯ ಸಂವಿಧಾನ. ಇದನ್ನು ರೂಪಿಸಲು ಅನೇಕ ಪ್ರಜ್ಞಾವಂತ ನಾಯಕರು ತಮ್ಮ ಬುದ್ಧಿಮತ್ತೆ, ಅನುಭವ ಮತ್ತು ದೂರದೃಷ್ಟಿಯನ್ನು ಸಮರ್ಪಿಸಿದರು. ಅವರಲ್ಲಿಯೇ ಜವಾಹರಲಾಲ್ ನೆಹರು, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ವಲ್ಲಭಭಾಯಿ ಪಟೇಲ ಅವರ ಕೊಡುಗೆಗಳು ಅತ್ಯಂತ ಮಹತ್ವಪೂರ್ಣವಾಗಿವೆ.