ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು. ರಜಪೂತರ ಕಲಾಸ್ಮಾರಕಗಳು ಒರಿಸ್ಸಾ, ಖಜುರಾಹೋ, ರಾಜಸ್ಥಾನ, ಗುಜರಾತ್, ಮಧ್ಯಭಾರತ ಮತ್ತು ಕಾಥೇವಾಡಗಳಲ್ಲಿ ಕಂಡುಬರುತ್ತದೆ.

1. ಕೋಟೆಗಳು : ರಜಪೂತರ ಕಾಲದಲ್ಲಿ ಅಭೇದ್ಯ ಮತ್ತು ಪ್ರಬಲ ದುರ್ಗ ಅಥವಾ ಕೋಟೆಗಳು ನಿರ್ಮಾಣಗೊಂಡವು. ರಣತಂಬೂರ್, ಚಿತ್ತೂರು, ಕುಂಭಲಘಡ, ಗ್ವಾಲಿಯರ್, ಚಾಂದೇರಿ, ಮಾಂಡು ಮತ್ತು ಅಸೀರ್‌ಘಡದ ಕೋಟೆಗಳು ಪ್ರಮುಖ ಕೋಟೆಗಳಾಗಿವೆ. ಇಂತಹ ಕೋಟೆಗಳಲ್ಲಿ ಸರಳ ರೀತಿಯ ಕಲೆಯಿದ್ದು ಕಲಾ ರಮ್ಯತೆಯು ಕಂಡುಬರುವುದಿಲ್ಲ.

2 ಅರಮನೆಗಳು : ರಜಪೂತರ ಕಲೆಯು ಅರಮನೆಗಳಲ್ಲಿಯೂ ಪ್ರತಿಬಿಂಬಿತವಾಗಿದೆ. ಮಹಮ್ಮದೀಯರ ಧಾಳಿಗೆ ಸಿಕ್ಕು ಅನೇಕ ಅರಮನೆಗಳು ಶಿಥಿಲಗೊಂಡಿವೆ. ಕೆಲವು ಅರಮನೆಗಳು ಯಥಾವತ್ತಾಗಿ ಉಳಿದುಬಂದಿವೆ. ಇವುಗಳಲ್ಲಿ ಗ್ವಾಲಿಯರ್‌ನ ಮಾನ್‌ಸಿಂಹನ ಅರಮನೆ, ಅಂಬರ್ ಮತ್ತು ಉದಯ್‌ ಪುರದ ಅರಮನೆಗಳು ಪ್ರಮುಖವಾಗಿವೆ.

ಜಯಪುರದ ಹವಾಮಹಲ್ (Hawa Mahal) ರಾಜಸ್ಥಾನದ ಅತ್ಯಂತ ಪ್ರಸಿದ್ಧ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದನ್ನು ಗಾಳಿಯ ಅರಮನೆ ಎಂದೂ ಕರೆಯಲಾಗುತ್ತದೆ.

ಹವಾಮಹಲ್ ನಿರ್ಮಾಣ ಮತ್ತು ಇತಿಹಾಸ:
1799ರಲ್ಲಿ ಜೈಪುರದ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ಅವರು ಈ ಮಹಲ್‌ನ್ನು ನಿರ್ಮಿಸಿದರು. ಇದನ್ನು ಪ್ರಸಿದ್ಧ ವಾಸ್ತುಶಿಲ್ಪಿ ಲಾಲ್ ಚಂದ್ ಉಸ್ತಾದ್ ವಿನ್ಯಾಸಗೊಳಿಸಿದರು. ಈ ಕಟ್ಟಡವು ರಾಜಮಹಲ್ ಸಮುಚ್ಚಯದ ಒಂದು ಭಾಗವಾಗಿದ್ದು, ನಗರ ಜೀವನವನ್ನು ಅರಮನೆಯೊಳಗಿನಿಂದಲೇ ವೀಕ್ಷಿಸಲು ಸಹಾಯ ಮಾಡುತ್ತಿತ್ತು.

ವಾಸ್ತುಶಿಲ್ಪ ವೈಶಿಷ್ಟ್ಯಗಳು:
ಹವಾಮಹಲ್‌ ಐದು ಮಹಡಿಗಳ ಎತ್ತರದ ಕಟ್ಟಡವಾಗಿದ್ದು, ಗುಲಾಬಿ ಬಣ್ಣದ ಮರಳುಗಲ್ಲಿನಿಂದ ನಿರ್ಮಿತವಾಗಿದೆ. ಇದರಲ್ಲಿ ಸುಮಾರು 953 ಸಣ್ಣ ಕಿಟಕಿಗಳು (ಜರೋಕಾಗಳು) ಇವೆ. ಈ ಕಿಟಕಿಗಳ ಮೂಲಕ ಗಾಳಿ ನಿರಂತರವಾಗಿ ಹರಿಯುವುದರಿಂದ ಒಳಗೆ ಸದಾ ತಂಪಾದ ವಾತಾವರಣ ಇರುತ್ತಿತ್ತು—ಆದ್ದರಿಂದ “ಹವಾಮಹಲ್” ಎಂಬ ಹೆಸರು ಬಂದಿದೆ. ಕಟ್ಟಡದ ಮುಂಭಾಗವು ಜೇನುಗೂಡು (honeycomb) ಆಕಾರವನ್ನು ಹೊಂದಿದೆ.

ಉದ್ದೇಶ:
ಪರ್ದಾ ಪದ್ಧತಿಯನ್ನು ಪಾಲಿಸುವ ರಾಜಮಹಿಳೆಗಳು ಸಾರ್ವಜನಿಕ ರಸ್ತೆಗಳಲ್ಲಿ ನಡೆಯುವ ಉತ್ಸವಗಳು, ಮೆರವಣಿಗೆಗಳು ಮತ್ತು ದಿನನಿತ್ಯದ ಚಟುವಟಿಕೆಗಳನ್ನು ಯಾರಿಗೂ ಕಾಣಿಸದೇ ವೀಕ್ಷಿಸಲು ಈ ಮಹಲ್ ಬಳಸುತ್ತಿದ್ದರು.

ಸಾಂಸ್ಕೃತಿಕ ಮಹತ್ವ:
ಹವಾಮಹಲ್ ಜೈಪುರದ ರಜಪೂತ ವಾಸ್ತುಶಿಲ್ಪದ ಅದ್ಭುತ ಮಾದರಿಯಾಗಿದ್ದು, ರಾಜಸ್ಥಾನದ ಸಂಸ್ಕೃತಿ ಮತ್ತು ಕಲೆಗಳ ಪ್ರತೀಕವಾಗಿದೆ. ಇಂದು ಇದು ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ತಾಣವಾಗಿದೆ.

ಮಾನ್‌ಸಿಂಗ್ ಅರಮನೆ (Man Singh Palace) ರಾಜಸ್ಥಾನದ ಜೈಪುರದಲ್ಲಿ ಇರುವ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದೆ. ಇದು ರಾಜಪುತ ಹಾಗೂ ಮೊಘಲ್ ವಾಸ್ತುಶಿಲ್ಪದ ಸೊಗಸಾದ ಸಂಯೋಜನೆಯನ್ನು ಪ್ರದರ್ಶಿಸುತ್ತದೆ.

ಇತಿಹಾಸ:
ಈ ಅರಮನೆಯನ್ನು 16ನೇ ಶತಮಾನದಲ್ಲಿ ಅಂಬರ್‌ನ ಮಹಾರಾಜ ಮಾನ್‌ಸಿಂಗ್ I ಅವರು ನಿರ್ಮಿಸಿದರು. ಅವರು ಮೊಘಲ್ ಸಾಮ್ರಾಟ ಅಕ್ಬರ್ ಅವರ ನಿಷ್ಠಾವಂತ ಸೇನಾನಿ ಹಾಗೂ ಸೇನಾಪತಿಯಾಗಿದ್ದರು. ಈ ಅರಮನೆ ಅಂಬರ್ ಕೋಟೆಯ ಒಳಭಾಗದಲ್ಲಿದೆ.

ವಾಸ್ತುಶಿಲ್ಪ:
ಮಾನ್‌ಸಿಂಗ್ ಅರಮನೆ ನಾಲ್ಕು ಮಹಡಿಗಳನ್ನೊಳಗೊಂಡಿದ್ದು, ಕೆಂಪು ಮತ್ತು ಹಳದಿ ಮರಳುಗಲ್ಲಿನಿಂದ ನಿರ್ಮಾಣವಾಗಿದೆ. ಅರಮನೆಯ ಗೋಡೆಗಳ ಮೇಲೆ ಸುಂದರ ಚಿತ್ರಕಲೆಗಳು, ಹೂವಿನ ಅಲಂಕಾರಗಳು ಮತ್ತು ಭೌಮಿತೀಯ ವಿನ್ಯಾಸಗಳು ಕಾಣಸಿಗುತ್ತವೆ. ಒಳಾಂಗಣದಲ್ಲಿರುವ ಸಭಾಂಗಣಗಳು, ಮಂಟಪಗಳು ಮತ್ತು ದರ್ಬಾರ್ ಹಾಲ್‌ಗಳು ಅದರ ವೈಭವವನ್ನು ತೋರಿಸುತ್ತವೆ.

ವಿಶೇಷತೆ:
ಈ ಅರಮನೆ ರಾಜಕುಟುಂಬದ ವಾಸಸ್ಥಳವಾಗಿತ್ತು. ಅರಮನೆಯಲ್ಲಿನ ಚಿತ್ರಗಳು ಹಾಗೂ ಅಲಂಕಾರಗಳು ರಾಜಪುತ ಸಂಸ್ಕೃತಿ ಮತ್ತು ಮೊಘಲ್ ಕಲೆಯ ಪ್ರಭಾವವನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಮಹತ್ವ:
ಮಾನ್‌ಸಿಂಗ್ ಅರಮನೆ ಅಂಬರ್ ಕೋಟೆಯ ಪ್ರಮುಖ ಆಕರ್ಷಣೆಯಾಗಿದ್ದು, ಜೈಪುರದ ಇತಿಹಾಸ, ಶಿಲ್ಪಕಲೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾಗಿದೆ.

3. ದೇವಾಲಯಗಳು : ರಜಪೂತರ ಕಾಲದ ಕಲೆಯು ರಮ್ಯತೆ ಮತ್ತು ವೈಭವವನ್ನು ಕಂಡಿರುವುದು ದೇವಾಲಯಗಳಲ್ಲಿ. ರಜಪೂತರ ಕಾಲದ ಪ್ರಮುಖ ದೇವಾಲಯಗಳೆಂದರೆ:-

ಬಂದೇಲ್ ಖಂಡದಲ್ಲಿನ –ಖುಜುರಾಹೋ ದೇವಾಲಯಗಳು (ಇಲ್ಲಿ 80 ಕ್ಕೂ ಹೆಚ್ಚು ದೇವಾಲಯಗಳಿವೆ)

ಓರಿಸ್ಸಾದ – ಭುವನೇಶ್ವರ, ಪುರಿ ಮತ್ತು ಕೊರ್ನಾಕ್‌ ದೇವಾಲಯ

ಜೋಧಪುರದ – ಓಸಿಯಾ ದೇವಾಲಯ,

ಚಿತ್ತೂರಿನ – ಕಾಳಿಕಾಮಾತಾ ದೇವಾಲಯ,

ಉದಯಪುರದ – ಏಕಲಿಂಗ ದೇವಾಲಯ,

ಮೌಂಟ್ ಅಬುನಲ್ಲಿರುವ – ಅಮೃತಶಿಲೆಯ ಜೈನದೇವಾಲಯಗಳು

ಇವುಗಳು ರಜಪೂತರ ಕಲೆಯನ್ನು ಪ್ರತಿಬಿಂಬಿಸುವ ಮೇರು ಕಲಾಕೃತಿಗಳಾಗಿವೆ.

ದೇವಾಲಯಗಳ ಪ್ರಧಾನ ಲಕ್ಷಣಗಳು

ರಜಪೂತರ ದೇವಾಲಯಗಳಲ್ಲಿ ಗರ್ಭಗೃಹ, ಭವ್ಯವಾದ ಶಿಖರಗಳು, ಶಿಖರದ ಮೇಲಿನ ಚಿನ್ನದ ಕಳಸ, ಗರ್ಭಗೃಹದ ಮುಂದೆ ವಿಶಾಲವಾದ ಸಭಾಮಂಟಪ, ಕಂಬಗಳಲ್ಲಿನ ಸೂಕ್ಷ್ಮಕೆತ್ತನೆ ಇವುಗಳು ಪ್ರಧಾನ ಲಕ್ಷಣಗಳಾಗಿ ಕಂಡುಬರುತ್ತವೆ. ಮಥುರಾದ ಸೂರ್ಯ ದೇವಾಲಯವು ಸೌಂದರ್ಯಕ್ಕೆ ಹೆಸರಾಗಿದೆ. ರುದ್ರಮಾಲಾ ದೇವಾಲಯವು ಅತ್ಯಂತ ವಿಶಾಲ ಮತ್ತು ಅಲಂಕೃತವಾದ ದೇವಾಲಯವೆಂದೇ ಖ್ಯಾತವಾಗಿದೆ. ರಜಪೂತರ ಕಾಲದ ಕೊನೆಯ ದಿನಗಳಲ್ಲಿ ನಿರ್ಮಾಣಗೊಂಡ ದೇವಾಲಯಗಳು ಹೊರಭಾಗದಲ್ಲಿ ಮೊದಲಿನ ದೈವಿಕ ಮತ್ತು ನೈತಿಕ ಚಿತ್ರಗಳ ಜೊತೆಗೆ ಅಶ್ಲೀಲವಾದ ಚಿತ್ರಗಳನ್ನು ಹೊಂದಿದೆ.

ಶಿಲ್ಪಕಲೆ : ರಜಪೂತರ ಕಾಲದಲ್ಲಿ ಶಿಲ್ಪಕಲೆಯು ಕೂಡ ಅಭಿವೃದ್ಧಿಗೊಂಡಿತು. ‘ಆಕೃತಿ ಶಿಲ್ಪಕಲೆ’ ಅಥವಾ ‘ಪ್ಲಾಸ್ಟಿಕ್ ಶಿಲ್ಪಕಲೆಯು’ ಪರಮೋನ್ನತಿ ತಲುಪಿತ್ತು. ಖಜುರಾಹೋದ ಮೂರ್ತಿಶಿಲ್ಪ ಶೃಂಗಾರ ಮೂರ್ತಿಶಿಲ್ಪವೆನಿಸಿದೆ. ಇದರಲ್ಲಿ ಬಿಡಿಸಲ್ಪಟ್ಟ ಮೂರ್ತಿಯ ಮುಖಭಾವ, ದುಂಡನೆಯ ಕೆನ್ನೆಗಳು, ಎದ್ದು ಕಾಣುತ್ತಿರುವ ನೇತ್ರ, ನಾಸಿಕ, ಹುಬ್ಬು, ತುಟಿಗಳು ಆಕರ್ಷಕವಾಗಿ ಮೂಡಿಬಂದಿದೆ.

ಚಂದೇಲರ ಪ್ರಮುಖ ನಗರ ಮಹೋಬದಲ್ಲಿ ಬುದ್ಧ ಹಾಗೂ ತಾರಾ ಮೂರ್ತಿಗಳಿವೆ. ಬ್ರಿಟೀಷ್ ಮ್ಯೂಸಿಯಂ ನಲ್ಲಿರುವ ‘ಸರಸ್ವತಿ ಮೂರ್ತಿ’ ಅಂದಿನ ಶಿಲ್ಪಕಲೆಗೆ ಅತ್ಯುತ್ತಮ ನಿದರ್ಶನವಾಗಿದೆ. ಮೌಂಟ್ ಅಬುದಲ್ಲಿನ ಮೂರ್ತಿಶಿಲ್ಪವು ಅತ್ಯಂತ ಸೂಕ್ಷ್ಮ ಮತ್ತು ಶ್ರೀಮಂತ ಶಿಲ್ಪವೆನಿಸಿದೆ. ಹೀಗೆ ರಜಪೂತರ ಕಾಲದಲ್ಲಿ ಕಲಾ ಶ್ರೀಮಂತಿಕೆಯು ವೈಭವ ಪೂರ್ಣವಾದ ಔನ್ನತ್ಯದ ಸ್ಥಿತಿಯನ್ನು ತಲುಪಿತ್ತು.

ಖಜುರಾಹೋ ದೇವಾಲಯಗಳು:     

ಬಂದೇಲಖಂಡದ ‘ಖಜುರಾಹೊ’ ಇಂದಿನ ಮಧ್ಯಪ್ರದೇಶ ರಾಜ್ಯದಲ್ಲಿದೆ. ಖಜುರಾಹೊ ರಜಪೂತರ ದೇವಾಲಯಗಳ ತವರು ಮನೆ. ಇಲ್ಲಿ ದೇವಾಲಯಗಳ ದೊಡ್ಡ ಸಮೂಹವೇ ಕಂಡು ಬಂದಿದೆ. ಇದಕ್ಕೆ ಮೂಲ ಕಾರಣರಾದವರೆಂದರೆ ಚಂದೇಲ ಆರಸರು. ಇವರು ಕ್ರಿ.ಶ.950ರಿಂದ 1050ರ ಅವಧಿಯಲ್ಲಿ ಖಜುರಾಹೋದಲ್ಲಿ ಅನೇಕ ದೇವಾಲಯಗಳನ್ನು ಕ್ರಿಯಾತ್ಮಕವಾಗಿ ನಿರ್ಮಿಸಿದ್ದಾರೆ. ಖಜುರಾಹೋ ಎಂದರೆ ಖರ್ಜೂರ ವೃಕ್ಷಗಳ ಮಾರ್ಗ ಎಂದರ್ಥ. ಖುಜರಾಹೋ ಮಧ್ಯಪ್ರದೇಶದ ಬಂದೇಲ ಖಂಡದ ಒಂದು ಸಣ್ಣ ಕುಗ್ರಾಮ. ಇದು ಸುಮಾರು 8 ಕಿ.ಮೀ. ವಿಸ್ತಾರ ಹೊಂದಿದೆ. ಇಲ್ಲಿ ಸುಮಾರು 85ಕ್ಕಿಂತಲೂ ಅಧಿಕ ದೇವಾಲಯಗಳನ್ನು ನಿರ್ಮಿಸಲಾಗಿದೆ. ಅವುಗಳಲ್ಲಿ ಶೈವ, ವೈಷ್ಣವ ಹಾಗು ಜೈನಧರ್ಮಗಳಿಗೆ ಸಂಬಂಧಿಸಿದ ಹಲವಾರು ದೇವಾಲಯಗಳು ಇವೆ. ಇವುಗಳನ್ನು ನಾಗರಶೈಲಿಯಲ್ಲಿ ನಿರ್ಮಿಸಲಾಗಿದೆ. ಈ ಎಲ್ಲಾ ದೇವಾಲಯಗಳು ನದಿಯ ದಡದಲ್ಲಿ ನಿರ್ಮಾಣವಾಗಿವೆ. ಈ ದೇವಾಲಯಗಳು ಮಧ್ಯದಲ್ಲಿ ಉಬ್ಬಿಕೊಂಡಂತೆ ಇರುವ ಎತ್ತರವಾದ ದ್ವಾರಗೋಪುರವನ್ನು ಹೊಂದಿವೆ. ಈ ದೇವಾಲಯಗಳ ಶಿಖರಗಳು ಪಿರಾಮಿಡ್ಡಿನಾಕಾರದಲ್ಲಿದೆ. ಖಜುರಾಹೊ ದೇವಾಲಯದ ದೊಡ್ಡ ಶಿಖರದ ಸುತ್ತಲೂ ಚಿಕ್ಕಚಿಕ್ಕ ಶಿಖರಗಳನ್ನು ನಿರ್ಮಿಸಲಾಗಿದೆ. ದೇವಾಲಯಗಳು ಗಾತ್ರ ಹಾಗೂ ರೂಪಗಳಲ್ಲಿ ಎಲ್ಲಿಯೂ ತಮ್ಮ ಪ್ರಭುತ್ವವನ್ನು ಕಳೆದುಕೊಂಡಿಲ್ಲ. ದೇವಾಲಯಗಳು ಮುಖ್ಯವಾಗಿ ನಾಲ್ಕು ಭಾಗಗಳನ್ನು ಹೊಂದಿದ್ದು, ಅವುಗಳೆಂದರೆ ಪ್ರವೇಶ ಮಂಟಪ, ಮಧ್ಯ ಮಂಟಪ, ಅಂತರಾಳ ಹಾಗೂ ಗರ್ಭ ಗೃಹ ಪ್ರಮುಖವಾದವುಗಳಾಗಿವೆ. ಗರ್ಭಗೃಹವು ಕತ್ತಲೆಯಿಂದ ಕೂಡಿದ್ದುದಾಗಿದ್ದು, ಅದರ ಸುತ್ತ ಪ್ರದಕ್ಷಿಣಾ ಪಥವಿದೆ. ದೇವಾಲಯದ ಸುತ್ತಲೂ ಅಸಂಖ್ಯಾತ ಶಿಲ್ಪಗಳಿದ್ದು, ಸುಂದರವಾದ ಕೆತ್ತನೆಯಿಂದ ಕೂಡಿದೆ. ದೇವಾಲಯಕ್ಕೆ ಸಾಮಾನ್ಯವಾಗಿ ಒಂದೇ ಪ್ರವೇಶದ್ವಾರವಿದೆ. ಮೆಟ್ಟಿಲುಗಳನ್ನು ಏರಿ ದೇವಾಲಯ ಪ್ರವೇಶಿಸಬೇಕಾಗುತ್ತದೆ.

ಖಜುರಾಹೊ ಒಂದರಲ್ಲಿಯೇ 30ಕ್ಕಿಂತ ಹೆಚ್ಚು ದೇವಾಲಯಗಳಿವೆ. ಅವುಗಳನ್ನು ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ದೇವಾಲಯಗಳ ಸಮುಚ್ಚಯ ಎಂದು ಕರೆಯಲಾಗಿದೆ. ಆದ ಕಾರಣ ಖಜುರಾಹೊವನ್ನು ಎರಡನೆಯ ವಾರಣಾಸಿ ಎಂದು ಹೆಸರಿಸಲಾಗಿದೆ. ಪೂರ್ವ ಸಮುಚ್ಚಯದಲ್ಲಿ ಬ್ರಹ್ಮ, ವಿಷ್ಣು, ವರುಣ ದೇವಾಲಯಗಳನ್ನು ನಿರ್ಮಿಸಿದ್ದರೆ. ಪಶ್ಚಿಮದಲ್ಲಿ ಲಕ್ಷ್ಮಣ, ಮತಂಗ, ವರಾಹ, ವಿಶ್ವನಾಥ, ನಂದಿ ಹಾಗೂ ಕಂದಾರಿಯ ಮಹಾದೇವ ದೇವಾಲಯಗಳನ್ನು ನಿರ್ಮಿಸಲಾಗಿದೆ. ಹಾಗೆಯೇ ದಕ್ಷಿಣದಲ್ಲಿ ದುಲ್ ಮಹಾದೇವ ಹಾಗೂ ಚತುರ್ಭುಜ ದೇವಾಲಯಗಳನ್ನು ಕಟ್ಟಲಾಗಿದೆ. ಖಜುರಾಹೊದ ದೇವಾಲಯಗಳಲ್ಲಿ ಅತ್ಯಂತ ಮನಮೋಹಕವಾಗಿ ಕಾಣುವ ದೇವಾಲಯವೆಂದರೆ ವಿಶ್ವನಾಥ ದೇವಾಲಯ. ಇದನ್ನು ಕ್ರಿಶ. 1002ರಲ್ಲಿ ಧಂಗವರ್ಮ ಎಂಬುವನ ನಿರ್ಮಿಸಿದನು. ಈ ದೇವಾಲಯ ಪ್ರಾಂಗಣವನ್ನು ಹೊಂದಿದ್ದು, ಕಿರಿದಾದ ಹಾಗೂ ಹಿರಿದಾದ ಶಿಖರಗಳನ್ನು ಹೊಂದಿದೆ. ಮಹಾದೇವ ದೇವಾಲಯ ಖುಜರಾಹೋವಿನ ಅತ್ಯಂತ ಪ್ರಸಿದ್ದ ದೇವಾಲಯವಾಗಿದೆ. ಇದು 166 ಅಡಿ ಎತ್ತರ, 101 ಅಡಿ ಉದ್ದ ಹಾಗೂ 101 ಆಡಿ ಅಗಲವಾಗಿದೆ. ಈ ದೇವಾಲಯವು ಸುಮಾರು 650ಕ್ಕಿಂತಲೂ ಹೆಚ್ಚು ಮೂರ್ತಿ ಶಿಲ್ಪಗಳನ್ನು ಹೊಂದಿದೆ. ಇದರ ಮೇಲ್ಟಾವಣಿ ಗುಮ್ಮಟಾಕಾರದಲ್ಲಿ ಇದೆ.

ಈ ದೇವಾಲಯದ ಪ್ರತಿಶಿಲ್ಪಗಳು ದುಂಡನೆಯ ಕೆನ್ನೆಗಳನ್ನು ಹೊಂದಿದ್ದು, ಮುಖಕ್ಕೆ ಅಂದವನ್ನು ಹೆಚ್ಚಿಸುವ ನೇತ್ರ, ಹುಬ್ಬು, ಕಣ್ಣು, ನಾಸಿಕ ಹಾಗೂ ತುಟಿಗಳನ್ನು ಹೊಂದಿದೆ. ಒಸ್ಸಿಮಾ ಎಂಬಲ್ಲಿ ರಜಪೂತರು ಸುಮಾರು 16 ಹಿಂದೂ ಹಾಗೂ ಜೈನ ದೇವಾಲಯಗಳನ್ನು ನಿರ್ಮಿಸಿದರು. ಚಿತ್ತೂರಿನ ಕಾಳಿಕಾ ದೇಗುಲ ಹಾಗೂ ಉದಯಪುರದ ಏಕಲಿಂಗ ದೇವಾಲಯ ರಜಪೂತರ ಕಲಾ ನೈಪುಣ್ಯತೆಗೆ ಕನ್ನಡಿ ಹಿಡಿದಂತಿದೆ. ಗುಜರಾತಿನ ಸೋಮನಾಥ ದೇವಾಲಯ ಆ ಕಾಲದ ಅತಿ ದೊಡ್ಡ ಶ್ರೀಮಂತ ದೇವಾಲಯವಾಗಿತ್ತು. ಇದನ್ನು ಘಜಿಮಹಮದ್ ನಾಶಗೊಳಿಸಿದನು. ಮಥುರಾ ರಜಪೂತರ ಕಲಾಕೇಂದ್ರವಾಗಿತ್ತು. ಒಟ್ಟಿನಲ್ಲಿ ಖಜುರಾಹೊದ ದೇವಾಲಯಗಳು ರಜಪೂತರ ಹೆಸರನ್ನು ಇಡೀ ವಿಶ್ವದಾದ್ಯಂತ ಅಜರಾಮರವಾಗಿಸಿವೆ.

ಕೋನಾರ್ಕ್ (ಸೂರ್ಯ ದೇವಾಲಯ)

ಕೋನಾರ್ಕ್ ಓರಿಸ್ಸಾದ ಒಂದು ಪ್ರಸಿದ್ಧ ದೇವಾಲಯದ ತಾಣವಾಗಿದೆ. ಓರಿಸ್ಸಾನಿಂದ ಸುಮಾರು 68 ಕಿ.ಮೀ. ದೂರದಲ್ಲಿರುವ ಕೋನಾರ್ಕ್ ಸುಮಾರು 5000 ಜನಸಂಖ್ಯೆಯನ್ನು ಒಳಗೊಂಡಿದೆ. ಓರಿಸ್ಸಾದ ಪುರಿ ಜಿಲ್ಲೆಯಲ್ಲಿರುವ ಕೋನಾರ್ಕ್‌ ನಲ್ಲಿ ಒಟ್ಟು 28 ದೇವಾಲಯಗಳಿದ್ದು, ಇವುಗಳಲ್ಲಿ ಸೂರ್ಯದೇವಾಲಯ ಅತ್ಯಂತ ಪ್ರಮುಖವಾದುದ್ದಾಗಿದೆ. ಸೂರ್ಯನ ಕಿರಣಗಳು ಮೊದಲು ಈ ದೇವಾಲಯದ ಒಳಗಿನ ವಿಗ್ರಹದ ಮೇಲೆ ಒಂದು ನಿರ್ದಿಷ್ಟ ಕೋನದ ಮೇಲೆ ಬೀಳುತ್ತವೆ. ಹೀಗಾಗಿ ಈ ದೇವಾಲಯಕ್ಕೆ ಕೋನ+ಆರ್ಕ=ಕೋನಾರ್ಕ ಎಂಬ ಹೆಸರು ಬಂದಿದೆ. ಈ ದೇವಾಲಯವನ್ನು ಒಂದನೆಯ ನರಸಿಂಹನ ಆಳ್ವಿಕೆಯಲ್ಲಿ ಕಟ್ಟಲಾಯಿತು. ಈಗ ಕೋನಾರ್ಕ ದೇವಾಲಯ ಪಾಳು ಬಿದ್ದು, ಒಂದು ಚೌಕೋನ ಅಂಗಳದ ಮಧ್ಯದಲ್ಲಿ ಇದೆ. ರೇಖಾನಾಗರ ಶೈಲಿಯಲ್ಲಿ ರಚಿತವಾದ ಕೋನಾರ್ಕ್ ದೇವಾಲಯ ಬಂಗಾಳ ಕೊಲ್ಲಿಯ ಸಮುದ್ರ ತೀರದಲ್ಲಿದೆ. ಇದು 865 ಅಡಿ ಉದ್ದ, 540 ಅಡಿ ಅಗಲ ಹಾಗೂ 16 ಅಡಿ ಎತ್ತರದ ಪೀಠದ ಮೇಲೆ ನಿಂತಿದೆ. ಈ ದೇಗುಲದ ನಿರ್ಮಾಣಕ್ಕೆ 12,000 ಜನರು ಸತತವಾಗಿ 12ವರ್ಷಗಳ ಕಾಲ ಶ್ರಮಿಸಿ ನಿರ್ಮಿಸಿದ್ದಾರೆ. ಸುಮಾರು 12 ವರ್ಷಗಳವರೆಗೆ ಬಂದ ಕಂದಾಯದಿಂದ ಇದನ್ನು ನಿರ್ಮಿಸಲಾಗಿದೆ. ಕೋನಾರ್ಕ್ ದೇವಾಲಯದ ನಿರ್ಮಾಣದಲ್ಲಿ ಬಿಳಿ ಮರಳುಕಲ್ಲು ಹಾಗೂ ಕಪ್ಪು ಹಸಿರಿನ ಕ್ಲೋರೈಡ್ ಶಿಲ್ಪ ಶಿಲೆಗಳನ್ನು ಬಳಸಲಾಗಿದೆ. ಇದನ್ನು ನಿರ್ಮಿಸಲು 2000 ಟನ್‌ ಗಳಷ್ಟು ಶಿಲೆಯನ್ನು ಬಳಸಲಾಗಿದೆ. ಕೋನಾರ್ಕ್ ದೇವಾಲಯವನ್ನು ದೂರದಿಂದ ವೀಕ್ಷಿಸಿದಾಗ ಅದು ಕಪ್ಪಾಗಿ ಕಾಣುತ್ತದೆ. ಆದುದರಿಂದ ಸೂರ್ಯದೇವಾಲಯವನ್ನು ಕಷ್ಟು ದೇವಾಲಯ ಅಥವಾ ಬ್ಲಾಕ್ ಪಗೋಡಾ ಎಂದು ಕರೆಯಲಾಗಿದೆ. ಇದರ ಒಟ್ಟು ಎತ್ತರ 228 ಅಡಿಗಳು. ಈ ಸೂರ್ಯದೇಗುಲ ಏಳು ಕುದುರೆಗಳಿಂದ ಎಳೆಯಲ್ಪಡುತ್ತಿರುವ ಒಂದು ಬೃಹತ್ ರಥದ ಮಾದರಿಯ ದೇವಾಲಯವಾಗಿರುವುದು ಒಂದು ವಿಶೇಷ ವಿಶಿಷ್ಠವಾದ ರಥ ದೇಗುಲ 4 ಅಡಿ ಎತ್ತರದ ವೇದಿಕೆಯ ಮೇಲೆ ನಿಂತಿವೆ. ಇದರ ಎರಡೂ ಪಾರ್ಶ್ವಗಳಲ್ಲಿ 9.9 ಅಡಿ ವ್ಯಾಸದ 8 ಕಡ್ಡಿಗಳಿರುವ 12 ಬೃಹತ್ ಚಕ್ರಗಳನ್ನು ಆಳವಡಿಸಲಾಗಿದೆ. ಪ್ರತಿ ಚಕ್ರವೂ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ 3 ಮೀಟರ್ ವ್ಯಾಸವನ್ನು ಹೊಂದಿದೆ. ಈ ಚಕ್ರಗಳನ್ನು 7 ಕುದುರೆಗಳನ್ನು ಎಳೆದೊಯ್ಯುತ್ತಿರುವಂತೆ ಕಂಡುಬರುತ್ತದೆ. ಪ್ರತಿ ಕುದುರೆಯು 5 ಅಡಿ 2 ಅಂಗುಲ ಎತ್ತರವಿದೆ. ಈ 7 ಅಶ್ವಗಳು ವಾರದ 7 ದಿನಗಳನ್ನು 24 ಚಕ್ರಗಳು ದಿನದ 24 ಗಂಟೆಗಳನ್ನು ಚಕ್ರದಲ್ಲಿರುವ 8 ಕಡ್ಡಿಗಳು ದಿನದ 8 ಮುಹೂರ್ತಗಳನ್ನು ಪ್ರತಿಬಿಂಬಿಸುತ್ತವೆ ಎಂದು ನಂಬಲಾಗಿದೆ. ಚಕ್ರಗಳ ಮೇಲೆ ಬೀಳುವ ಸೂರ್ಯನ ಬೆಳಕಿನ ಆಧಾರದ ಮೇಲೆ ಅಲ್ಲಿನ ಸ್ಥಳೀಯರು ನಿಖರವಾದ ಸಮಯವನ್ನು ಹೇಳುತ್ತಾರೆ. ಪ್ರತಿಯೊಂದು ಚಕ್ರಗಳು ವಿವಿಧ ವಿನ್ಯಾಸಗಳಿಂದ ಕೆತ್ತಲ್ಪಟ್ಟಿದ್ದು, ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಸದ್ಯ ಒಂದನ್ನು ಬಿಟ್ಟು ಉಳಿದೆಲ್ಲಾ ಚಕ್ರಗಳು ಹಾಳಾಗಿವೆ. ಇದು ಅತ್ಯಂತ ದುಃಖಕರ ಸಂಗತಿ. ಉಳಿದವುಗಳು ಹಾಳಾಗದಂತೆ ಹಾಗು ಜನರಿಂದ ರಕ್ಷಿಸಲು 3 ಅಡಿ ತಂತಿಬೇಲಿಯನ್ನು ಅಳವಡಿಸಲಾಗಿದೆ. ಇಲ್ಲಿನ ಯುದ್ದಾಶ್ವಗಳನ್ನು ಓರಿಸ್ಸಾ ಸರ್ಕಾರ ರಾಜ್ಯ ಲಾಂಛನವನ್ನಾಗಿ ಸ್ವೀಕರಿಸಿ ನಮ್ಮ ದೇಶದ ಪುರಾತನ ಪರಂಪರೆಗೆ ಗೌರವ ತೋರಿದೆ.

ಸೂರ್ಯದೇವಾಲಯದ ಮಹಾದ್ವಾರದ ವಿಮಾನ ಈಗ ನಮಗೆ ಕಾಣಸಿಗುವುದಿಲ್ಲ. ಆದರೆ, ಇದರ ಮೇಲಿದ್ದ ನವಗ್ರಹ ಕೆತ್ತನೆಯ 20 ಟನ್ ಭಾರದ ಕಲ್ಲು ಚಪ್ಪಡಿ ಜಾರಿಬಿದ್ದು, ಒಡೆದು ಹೋಗಿದೆ. ಸೂರ್ಯದೇವಾಲಯದ ರಕ್ಷಣೆಗಾಗಿ 35 ಅಡಿ ಉದ್ದ ಹಾಗೂ 7 ಅಂಗುಲ ದಪ್ಪ ಕಬ್ಬಿಣದ ತೊಲೆಗಳನ್ನು ಬಳಸಲಾಗಿದೆ. ಈ ದೇವಾಲಯದ ಕಲ್ಲಿನ ಬಾಗಿಲುಗಳು ಸುಂದರ ಕೆತ್ತನೆಯಿಂದ ಕೂಡಿದೆ. ದೇಗುಲದ ಹೊರಮೈನ ಪೂರ್ವ ಗೋಡೆಯ ಮೇಲೆ ಉದಯ ಸೂರ್ಯನ ಮುಖ ಸಂತೋಷವನ್ನು, ಮಧ್ಯಾಹ್ನದ ಸೂರ್ಯ ಕೋಪವನ್ನು ಹಾಗು ಸಾಯಂಕಾಲದ ಸೂರ್ಯ ದಣಿವಿನ ಮುಖಭಾವವನ್ನು ವ್ಯಕ್ತಪಡಿಸುತ್ತದೆ. ದೇವಾಲಯದ ಮುಂದೆ ಒಂದು ಸ್ತಂಭವನ್ನು ನಿಲ್ಲಿಸಲಾಗಿತ್ತು. ಇದನ್ನು ಈಗ ಅದನ್ನು ಪುರಿಗೆ ಕೊಂಡೊಯ್ದು ಜಗನ್ನಾಥ ದೇವಾಲಯದ ಮುಂದೆ ನೆಡಲಾಗಿದೆ. ದೇವಾಲಯದ ತಳಭಾಗ, ಹೊರಭಾಗ ಹಾಗೂ ಮೇಲ್ಟಾವಣಿಯಲ್ಲಿ ಅನೇಕ ಶಿಲ್ಪಗಳನ್ನು ಕೆತ್ತಲಾಗಿದ್ದು, ಅವುಗಳು ವಿವಿಧ ಭಂಗಿಯಲ್ಲಿವೆ. ಈ ದೇವಾಲಯಲ್ಲಿ ಅಸಂಖ್ಯಾತ ರತಿ ಕ್ರೀಡೆಯ ದೃಶ್ಯಾವಳಿಗಳನ್ನು ಕೆತ್ತಲಾಗಿದೆ.

ಒಟ್ಟಿನಲ್ಲಿ ಕೊನಾರ್ಕ್ ಸೂರ್ಯದೇವಾಲಯವು ಆಧುನಿಕ ಭಾರತದ ವಿಸ್ಮಯಗಳಲ್ಲಿ ಒಂದು ಎನಿಸಿದೆ. ಆದರೆ ಭಾರತೀಯರ ದುರಾದೃಷ್ಟವೆಂಬಂತೆ 17ನೆಯ ಶತಮಾನದಲ್ಲಿ ಮುಸ್ಲಿಂರು ಆಕ್ರಮಣ ಮಾಡಿ ದೇವಾಲಯವನ್ನು ಸರ್ವನಾಶಗೊಳಿಸಿದರು. ಅಂದಿನಿಂದ ಈ ದೇವಾಲಯದಲ್ಲಿ ಪೂಜೆ ನಡೆದಿಲ್ಲ.