ಮೊಗಲ್ ಸುಲ್ತಾನರು ನಿರಂಕುಶ ಪ್ರಭುಗಳಾಗಿದ್ದರು. ಇವರ ಆಡಳಿತದಲ್ಲಿ ಸುಲ್ತಾನನೇ ಪರಮಾಧಿಕಾರಿ, ಎಲ್ಲಾ ಅಧಿಕಾರಗಳು ಅವನಲ್ಲೇ ಕೇಂದ್ರಿಕೃತವಾಗಿದ್ದವು. ಆದಾಗ್ಯೂ ಔರಂಗಜೇಬನನ್ನು ಬಿಟ್ಟರೆ ಉಳಿದವರು ಉದಾರಿಗಳು ಮತ್ತು ಪ್ರಗತಿಪರರಾಗಿದ್ದರು. ಸುಲ್ತಾನರು ಜನರಿಗೆ ಸುಖಶಾಂತಿಗಳನ್ನು ಮತ್ತು ನ್ಯಾಯವನ್ನು ದೊರಕಿಸಿಕೊಡುವಲ್ಲಿ ಆಸಕ್ತಿ ಹೊಂದಿದ್ದರು. ಪ್ರತಿಯೊಂದು ದಾಖಲೆ, ನಿರ್ಣಯ ಮತ್ತು ಕಾನೂನುಗಳನ್ನು ವಿವರವಾಗಿ ಇಡುತ್ತಿದ್ದು ಆಗಿನ ಕಾಲದ ವೈಶಿಷ್ಟ್ಯ. ಇಂತಹ ದಾಖಲೆಗಳ ಸಂಖ್ಯೆ ವಿಪರೀತವಾಗಿತ್ತು. ಸರ್ಕಾರ ಹಲವಾರು ಕಾರ್ಖಾನೆಗಳನ್ನು ಸ್ಥಾಪಿಸಿ ಸುಲ್ತಾನನಿಗೆ, ಆಸ್ಥಾನದವರಿಗೆ, ಅಂತಃಪುರದವರಿಗೆ ಬೇಕಾದ ಎಲ್ಲಾ ವಸ್ತುಗಳನ್ನು ತಯಾರಿಸುತ್ತಿದ್ದುದು ಅದರ ವೈಶಿಷ್ಟವಾಗಿತ್ತು. ಮೊಗಲ್ ಆಡಳಿತ ವ್ಯವಸ್ಥೆಯಲ್ಲಿ ಮುಸ್ಲಿಂ ತತ್ವಗಳಿಗೆ ದೊರೆತಿದ್ದ ಮಾನ್ಯತೆ ಕಡಿಮೆ. ಹಲವು ವಿಷಯಗಳಲ್ಲಿ ಅವರು ಹಿಂದೂ ಪರಂಪರೆಯನ್ನು ಅನುಸರಿಸಿದ್ದರು. ಔರಂಗಜೇಬ್ ಮಾತ್ರ ಇದಕ್ಕೆ ಹೊರತಾಗಿದ್ದ.

1. ಕೇಂದ್ರಾಡಳಿತ

ಸುಲ್ತಾನ : ಮೊಗಲ್ ಸುಲ್ತಾನರಿಗಿದ್ದ ಅಧಿಕಾರಗಳು ಅಪರಿಮಿತ. ಇವರ ಅಧಿಕಾರ ಮತ್ತು ತೀರ್ಮಾನವನ್ನು ಯಾರೂ ಪ್ರಶ್ನಿಸುವಂತಿರಲಿಲ್ಲ. ಅರ್ತಾರ್ಥ್ ಸಾಮ್ರಾಟನು ಸಾಮ್ರಾಜ್ಯದ ಪರಮಾಧಿಕಾರಿ. ಸುಲ್ತಾನರು ಇಸ್ಲಾಂ ಧರ್ಮದ ಪರಂಪರೆಗೆ ಅನುಗುಣವಾಗಿ, ರಾಜ್ಯಭಾರ ಮಾಡಬೇಕಾಗಿತ್ತು. ಆದರೆ ಶಕ್ತಿಶಾಲಿ ಸುಲ್ತಾನನು ತಾನು ಇಚ್ಚಿಸಿದಲ್ಲಿ ಅದಕ್ಕೆ ವಿರುದ್ಧವಾಗಿ ನಡೆಯಬಹುದಾಗಿತ್ತು. ಮೊಗಲರಲ್ಲಿ ಹಿರಿಯ ಮಗನಿಗೆ ಸಿಂಹಾಸನವೆಂಬ ಕಾನೂನು ಇರಲಿಲ್ಲ. ತತ್ಪರಿಣಾಮವಾಗಿ ಕತ್ತಿಯೇ ಉತ್ತರಾಧಿಕಾರವನ್ನು ನಿರ್ಧರಿಸುವ ಶಕ್ತಿಯಾಗಿತ್ತು. ಇದರಿಂದಾಗಿಯೇ ಉತ್ತರಾಧಿಕಾರ ಯುದ್ಧಗಳು ಸಾಮಾನ್ಯವಾಗಿದ್ದವು. ಸಾಮ್ರಾಟನು ಸಾಮ್ರಾಜ್ಯದ ಪ್ರಮುಖನಾಗಿ, ಶ್ರೇಷ್ಠ ದಂಡನಾಯಕನಾಗಿ, ಶ್ರೇಷ್ಠ ನ್ಯಾಯಾಧೀಶನಾಗಿ ಮತ್ತು ಕಾನೂನು ಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಎಲ್ಲಾ ಪ್ರಮುಖಾಧಿಕಾರಿಗಳನ್ನು ನೇಮಿಸುವ, ಬಡ್ತಿ ನೀಡುವ ಮತ್ತು ಅವರ ಹುದ್ದೆಗಳನ್ನು ರದ್ದುಮಾಡುವ ಅಧಿಕಾರ ಆತನಿಗಿತ್ತು. ಸಾಮ್ರಾಜ್ಯದಲ್ಲಿ ಈತನ ಮಾತೇ ಕಾನೂನಾಗಿತ್ತು.

ಮಂತ್ರಿಗಳು : ಸುಲ್ತಾನನಿಗೆ ಕೇಂದ್ರಾಡಳಿತದಲ್ಲಿ ಸೂಕ್ತ ಸಲಹೆ ಮತ್ತು ಸಹಕಾರ ನೀಡಲು ಕೆಲವು ಮಂತ್ರಿಗಳಿದ್ದರು. ಅವರುಗಳು ಮತ್ತು ಅವರುಗಳ ಕಾರ್ಯಗಳನ್ನು ಈ ಕೆಳಕಂಡಂತೆ ವಿವರಿಸಲಾಗಿದೆ.

ಪ್ರಧಾನಮಂತ್ರಿ : ಈತನಿಗೆ ವಕೀಲ್, ವಜೀರ, ದಿವಾನ್ ಎಂಬ ಹೆಸರುಗಳಿದ್ದವು. ಈತ ಸಾಮಾನ್ಯವಾಗಿ ಹಣಕಾಸು ಇಲಾಖೆಯ ಜವಾಬ್ದಾರಿ ಹೊತ್ತಿದ್ದ. ಅಲ್ಲದೆ ನಾಗರೀಕ ಆಡಳಿತಗಾರನಾಗಿದ್ದ. ಈತ ರಾಜ್ಯದ ಆದಾಯ ಮತ್ತು ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದ. ಇವನು ಸುಲ್ತಾನನಿಗೂ ಉಳಿದ ಮಂತ್ರಿಗಳಿಗೂ ಕೊಂಡಿಯಾಗಿರುತ್ತಿದ್ದ. ಸುಲ್ತಾನನ ಗೈರು ಹಾಜರಿಯಲ್ಲಿ ಅವನ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಈತನಿಗೆ ಹಲವು ಸಹಾಯಕರಿದ್ದು, ಖಜಾನೆ ಈತನ ಹಿಡಿತದಲ್ಲಿತ್ತು. ಕಂದಾಯದ ಬಗ್ಗೆ ಈತನದೇ ಅಂತಿಮ ತೀರ್ಮಾನವಾಗಿತ್ತು.

ಮೀರ್‌ ಭಕ್ಷಿ : ಈತ ಸೇನಾ ವಿಭಾಗದ ಮುಖ್ಯಸ್ಥ. ಸೈನ್ಯದ ಮೇಲ್ವಿಚಾರಕನಾಗಿದ್ದ. ಈತ ಮನ್ಸಬ್ದಾರರನ್ನೂ ನೇಮಿಸುತ್ತಿದ್ದ. ಮನ್ಸಬ್ದಾರರಿಗೆ ಮತ್ತು ಸೈನಿಕರಿಗೆ ಸಂಬಳ ನೀಡುವ ಜವಾಬ್ದಾರಿ ಈತನದಾಗಿತ್ತು. ಸೈನ್ಯದಲ್ಲಿ ರಾಜನ ಆಜ್ಞೆಗಳನ್ನು ಜಾರಿಗೆ ತರುವ, ಕುದುರೆಗಳಿಗೆ ಮುದ್ರೆ ಹಾಕುವ, ಕೆಲಸದ ಮೇಲ್ವಿಚಾರಣೆ ನಡೆಸುವ ಮತ್ತು ಮನ್ಸಬ್‌ದಾರರು ತಮಗೆ ನಿಗಧಿಪಡಿಸಿದ ಸಂಖ್ಯೆಯ ಸೈನಿಕರನ್ನು ಹೊಂದಿರುವರೇ ಅಥವಾ ಇಲ್ಲವೆ ಎಂಬುದನ್ನು ವಿಚಾರಿಸುವ ಅಧಿಕಾರ ಆತನಿಗಿತ್ತು.

ಖಾನ್-ಇ-ಸಾಮಾನ್ : ಇವನು ಅರಮನೆಯ ಕಾರ್ಯನಿರ್ವಾಹಕ, ಅರ್ತಾರ್ಥ್ ಸಾಮ್ರಾಟನ ಗೃಹ ಕೃತ್ಯಗಳ ಅಧಿಕಾರಿಯಾಗಿದ್ದು, ಆಸ್ಥಾನ, ಅಂತಃಪುರ, ಪರಿವಾರ, ಸೇವಕರು ಇತ್ಯಾದಿಗಳ ಮೇಲ್ವಿಚಾರಣೆ ನಡೆಸುತ್ತಿದ್ದನು. ಅಲ್ಲದೆ ಸರ್ಕಾರದ ಕಾರ್ಖಾನೆಗಳ ಮೇಲ್ವಿಚಾರಕನೂ ಆಗಿದ್ದ.

ಮುಖ್ಯಖಾಜಿ : ಸುಲ್ತಾನನು ಸಾಮ್ರಾಜ್ಯದ ಶ್ರೇಷ್ಠ ನ್ಯಾಯಾಧೀಶ ಮತ್ತು ಶ್ರೇಷ್ಠ ನ್ಯಾಯಾಲಯವಾಗಿದ್ದರೂ, ಆತನಿಗೆ ಎಲ್ಲಾ ನ್ಯಾಯ ವಿಷಯಗಳಿಗೆ ಗಮನಹರಿಸಲು ಸಮಯವಿರಲಿಲ್ಲ. ತತ್ಪರಿಣಾಮವಾಗಿ ಆ ಕಾರ್ಯವನ್ನು ಕೇಂದ್ರದಲ್ಲಿ ಮುಖ್ಯ ಖಾಜಿಗೆ ವಹಿಸಲಾಗಿತ್ತು. ಈತ ಪ್ರಾಂತ್ಯಗಳ, ಜಿಲ್ಲೆಗಳ ಮತ್ತು ನಗರಗಳ ಖಾಜಿಗಳನ್ನು ನೇಮಿಸುತ್ತಿದ್ದ.

ಸಾದರ್-ಉಸ್-ಸಾದರ್ : ಇವನು ಧಾರ್ಮಿಕ ಇಲಾಖೆಯ ಮುಖ್ಯಸ್ಥ, ಶಿಕ್ಷಣ, ಧಾರ್ಮಿಕ ಸಂಸ್ಥೆಗಳು ಇವನ ಅಧಿಕಾರದ ವ್ಯಾಪ್ತಿಗೆ ಬರುತ್ತಿದ್ದವು.

ಮುಹತ್ಸಿಬ್ : ಇವನು ನೈತಿಕ ಮತ್ತು ಸಾಮಾಜಿಕ ಅಧಿಕಾರಿಯಾಗಿದ್ದ. ಮದ್ಯಪಾನ, ಅಫೀಮು ಸೇವನೆ, ಜೂಜು ಮತ್ತು ಇತರ ನ್ಯಾಯಬಾಹಿರ ಕ್ರಮಗಳನ್ನು ತಡೆಯುವುದು ಈತನ ಜವಾಬ್ದಾರಿಯಾಗಿತ್ತು.

ಮೀರ್‌ ಆತೀಷ್ : ಫಿರಂಗಿ ಪಡೆಯ ಮುಖ್ಯಸ್ಥನಾದ ಈತನ ಹಿಡಿತದಲ್ಲಿ ಎಲ್ಲಾ ಫಿರಂಗಿಗಳಿದ್ದವು. ಅರಮನೆ, ಕೋಟೆಯ ಜವಾಬ್ದಾರಿ ಇವನದಾಗಿತ್ತು.

ದಾರೋಗಾ-ಇ-ಡಾಕ್-ಚೌಕಿ : ಈತ ಗೂಢಾಚಾರ ಪಡೆಯ ಮುಖ್ಯಸ್ಥನಾಗಿದ್ದು ಗೂಢಾಚಾರರನ್ನು ಸಾಮ್ರಾಜ್ಯದ ಎಲ್ಲೆಡೆ ಕಳುಹಿಸಿ, ಅವರಿಂದ ಸುದ್ದಿ ಸಂಗ್ರಹಿಸಿ, ಸಾಮ್ರಾಟನ ಗಮನಕ್ಕೆ ತರುವುದು ಈತನ ಕರ್ತವ್ಯವಾಗಿತ್ತು. ಈತನ ಕೈಕೆಳಗೆ ಪ್ರಾಂತ್ಯಗಳಲ್ಲಿ ಮತ್ತು ಪರಗಣಗಳಲ್ಲಿ ಗೂಢಾಚಾರ ಅಧಿಕಾರಿಗಳಿದ್ದರು.

2. ಪ್ರಾಂತ್ಯಾಡಳಿತ

ಸಾಮ್ರಾಜ್ಯದ ಸುವ್ಯವಸ್ಥಿತ ಆಡಳಿತಕ್ಕಾಗಿ ಸಾಮ್ರಾಜ್ಯವನ್ನು ಹಲವಾರು ಸುಬಾ ಅಥವಾ ಪ್ರಾಂತ್ಯಗಳಾಗಿ ವಿಭಜಿಸಲಾಗಿತ್ತು. ಅಕ್ಬರನ ಕಾಲದಲ್ಲಿ ಇವುಗಳ ಸಂಖ್ಯೆ 15 ಇತ್ತು. ಆದರೆ ಔರಂಗಜೇಬನ ಕಾಲದಲ್ಲಿ ಇವುಗಳ ಸಂಖ್ಯೆ 25 ಕ್ಕೆ ಏರಿತು. ಪ್ರತಿಯೊಂದು ಪ್ರಾಂತ್ಯಕ್ಕೂ ರಾಜ್ಯಪಾಲನಿದ್ದು, ಇವನನ್ನು ಅಕ್ಬರನ  ಕಾಲದಲ್ಲಿ ಸಿಪಾಹ್ ಸಾಲಾರ್ ಎಂದೂ ಆತನ ಉತ್ತಾರಾಧಿಕಾರಿಗಳ ಕಾಲದಲ್ಲಿ ಸುಬಾದಾರ್ ಅಥವಾ ನಿಜಾಮ್ ಎಂದು ಕರೆಯಲಾಗಿತ್ತು. ಈತನನ್ನು ಸಾಮ್ರಾಟ ನೇಮಿಸುತ್ತಿದ್ದ. ಪ್ರಾಂತ್ಯದ ಸಾಮಾನ್ಯ ಆಡಳಿತ, ಶಾಂತಿ, ಶಿಸ್ತು, ಕಾನೂನು ಪಾಲನೆ ಮತ್ತು ಕಂದಾಯ ವಸೂಲಿಯ ಮೇಲ್ವಿಚಾರಣೆ ಈತನ ಕರ್ತವ್ಯವಾಗಿತ್ತು. ಈತನು ಪ್ರಾಂತ್ಯದ ಸೇನೆಯ ದಂಡನಾಯಕನಾಗಿ ಮತ್ತು ನ್ಯಾಯಾಧೀಶನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವನನ್ನು ಆಗಾಗ್ಗೆ ವರ್ಗಾವಣೆ ಮಾಡಲಾಗುತ್ತಿತ್ತು. ಇವನಿಗೆ ಅಧಿಕಾರಗಳಿದ್ದಾಗ್ಯೂ ಚಕ್ರವರ್ತಿಯ ಹಿಡಿತದಲ್ಲಿರಬೇಕಾಗಿತ್ತು. ದಿವಾನ: ಪ್ರಾಂತ್ಯಗಳಲ್ಲಿ ದಿವಾನರೆಂಬ ಅಧಿಕಾರಿಗಳಿದ್ದರು. ಇವರನ್ನು ಕೇಂದ್ರ ಸರ್ಕಾರವೇ ನೇಮಿಸುತ್ತಿತ್ತು. ಇವರು ಸ್ವತಂತ್ರರಾಗಿದ್ದು, ಸುಬಾದಾರರ ಚಟುವಟಿಕೆಗಳ ಮೇಲೆ ಗಮನಹರಿಸಬೇಕಿತ್ತು. ಇವರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಾಗಿದ್ದರು. ದಿವಾನನು ಕಂದಾಯ ಇಲಾಖೆಯ ಮುಖ್ಯಸ್ಥನಾಗಿದ್ದು, ಕಂದಾಯ ನಿಗದಿ ಮತ್ತು ವಸೂಲಿ ಮೇಲ್ವಿಚಾರಣೆ ಮಾಡಬೇಕಾಗಿತ್ತು. ನಾಗರೀಕ ನ್ಯಾಯ ನೀಡುವ ಹಕ್ಕು ಇವನಿಗೆ ಇದ್ದು, ಈತ ಕೇಂದ್ರದ ವಜೀರನಿಗೆ ನೇರವಾಗಿ ಹೊಣೆಗಾರನಾಗಿದ್ದ. ಈ ಮೇಲ್ಕಂಡ ಅಧಿಕಾರಿಗಳಲ್ಲದೆ, ಪ್ರಾಂತ್ಯಗಳಲ್ಲಿ ಭಕ್ಷ ಸಾದರ್, ಖಾಜಿ, ಕೊತ್ವಾಲ, ವಕಿಯಾ ನವೀಸ್ ಮುಂತಾದ ಅನೇಕ ಅಧಿಕಾರಿಗಳಿದ್ದರು. ಇವರೆಲ್ಲರೂ ಕೇಂದ್ರದಲ್ಲಿ ಅದೇ ನಾಮಾಂಕಿತ ಹೊಂದಿದ ಅಧಿಕಾರಿಗಳ ಕೆಲಸಗಳನ್ನು ಪ್ರಾಂತ್ಯಗಳಲ್ಲಿ ನಿರ್ವಹಿಸುತ್ತಿದ್ದರು.

3. ಜಿಲ್ಲೆಯ ಆಡಳಿತ

ಪ್ರಾಂತ್ಯಗಳನ್ನು ಸರ್ಕಾರ್ ಅಥವಾ ಜಿಲ್ಲೆಗಳಾಗಿ ವಿಭಜಿಸಿದ್ದರು. ಪ್ರತಿಯೊಂದು ಸರ್ಕಾರ್‌ಗೆ ಈಗಿನ ಜಿಲ್ಲಾಧಿಕಾರಿ ರೀತಿ ಒಬ್ಬ ಪೌಜುದಾರ ಎಂಬ ಅಧಿಕಾರಿ ಇದ್ದ. ಇವನು ಸುಬಾದಾರನ ಕೈಕೆಳಗೆ ಕೆಲಸ ನಿರ್ವಹಿಸುತ್ತಿದ್ದ. ಈತ ತನ್ನ ಸರ್ಕಾರದಲ್ಲಿ ಆಡಳಿತ ಮತ್ತು ಕಾನೂನು ವ್ಯವಸ್ಥೆ ಮಾಡುವುದರ ಜೊತೆಗೆ ಸೇನಾ ತುಕಡಿಯ ನಾಯಕನಾಗಿದ್ದ. ಅಂದರೆ, ಡಾ|| ಜಾದುನಾಥ್ ಸರ್ಕಾ‌ರ್ ಪ್ರಕಾರ ಸ್ಥಳೀಯ ದಂಗೆಗಳನ್ನು ಅಡಗಿಸುವ, ದರೋಡೆಕೋರರನ್ನು ಹತ್ತಿಕ್ಕುವ, ಕಳ್ಳರನ್ನು ಮತ್ತು ವಂಚಕರನ್ನು ಶಿಕ್ಷುವ ಮತ್ತು ತೆರಿಗೆ ಕೊಡದವರನ್ನು ದಂಡಿಸುವ ಅಧಿಕಾರ ಹೊಂದಿದ್ದನು.

4. ಪರಗಣಗಳ ಆಡಳಿತ

ಸರ್ಕಾರಗಳನ್ನು (ಜಿಲ್ಲೆಗಳನ್ನು) ಹಲವು ಪರಗಣಗಳಾಗಿ ವಿಂಗಡಿಸಲಾಗಿತ್ತು. ಪ್ರತಿಯೊಂದು ಪರಗಣಗಳಲ್ಲಿ ಶೀಕ್‌ದಾರ್, ಅಮೀಲ್, ಪೋತ್‌ದಾರ್ ಮತ್ತು ಕುನಂಗೊ ಎಂಬ ಅಧಿಕಾರಿಗಳಿದ್ದರು. ಶೀಕ್‌ದಾರ್ ಪರಗಣಗಳ ಮುಖ್ಯ ಆಡಳಿತಾ ಧಿಕಾರಿಯಾಗಿದ್ದು, ಸಾಮಾನ್ಯ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ಅಮೀಲನ ಮುಖ್ಯ ಕೆಲಸ ಕಂದಾಯ ನಿಗದಿ ಮತ್ತು ವಸೂಲಿ. ಪೋತ್‌ದಾರನು ಪರಗಣದ ಖಜಾನೆ ಅಧಿಕಾರಿ, ಕುನಂಗೊ ಕಂದಾಯ ವಸೂಲಿ ಬಗ್ಗೆ ದಾಖಲೆಗಳನ್ನು ಇಡುತ್ತಿದ್ದನು.

5. ನಗರಾಡಳಿತ

ನಗರದ ಮುಖ್ಯ ಆಡಳಿತಗಾರ ಕೊತ್ವಾಲ್, ಈತ ಕೇಂದ್ರದಿಂದ ನೇಮಿಸಲ್ಪಟ್ಟ ರಕ್ಷಣಾಧಿಕಾರಿ. ಇವನ ಮುಖ್ಯ ಕರ್ತವ್ಯಗಳೆಂದರೆ:

  1. ನಗರದ ರಕ್ಷಣೆ.
  2. ಮಾರುಕಟ್ಟೆ ನಿಯಂತ್ರಣ
  3. ಉತ್ತರಾಧಿಕಾರಿಗಳಿಲ್ಲದ ಆಸ್ತಿ ರಕ್ಷಣೆ ಮತ್ತು ವಿಲೆವಾರಿ.
  4. ದುಷ್ಕರ್ಮಿಗಳ ಮೇಲೆ ಸದಾ ಗಮನವಿಡುವುದು ಮತ್ತು ಅಪರಾಧಗಳನ್ನು ತಡೆಗಟ್ಟುವುದು.
  5. ಸಮಾಜದಲ್ಲಿನ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸುವುದು.
  6. ಸಮಾಧಿ ಸ್ಥಳಗಳ ಮತ್ತು ಕಸಾಯಿಖಾನೆಗಳ ನಿಯಂತ್ರಣ.

ಇದಕ್ಕಾಗಿ ಕೊತ್ವಾಲ ರಕ್ಷಣಾದಳವನ್ನು ಹೊಂದಿರಬೇಕಾಗಿತ್ತು. ನಗರವನ್ನು ಅನೇಕ ವಿಭಾಗಗಳಾಗಿ ವಿಂಗಡಿಸಿ, ಅವುಗಳಿಗೆ ನಂಬಿಕೆಗೆ ಅರ್ಹರಾದ ಅಧಿಕಾರಿಗಳನ್ನು ನೇಮಿಸುತ್ತಿದ್ದ. ಈ ಅಧಿಕಾರಿಗಳು ಅಲ್ಲಿನ ಎಲ್ಲಾ ನಿವಾಸಿಗಳ ವಿವರಗಳನ್ನು ಇಟ್ಟುಕೊಳ್ಳಬೇಕಾಗಿತ್ತು. ಗೂಢಾಚಾರರ ಮೂಲಕ ಸುದ್ದಿಸಮಾಚಾರವನ್ನು ಸಂಗ್ರಹಿಸಿ, ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕಾಗಿತ್ತು. ವೇಶ್ಯೆಯರ, ನೃತ್ಯಗಾರ್ತಿಯರ, ಮಾದಕಪಾನೀಯಗಳ ವ್ಯಾಪಾರಿಗಳ ಮತ್ತು ಸೋಮಾರಿಗಳ ಮೇಲೆ ಗಮನಹರಿಸಬೇಕಾಗಿತ್ತು. ದೊಡ್ಡ ನಗರಗಳನ್ನು ಹಲವು ಮೊಹಲ್ಲಾಗಳಾಗಿ ವಿಂಗಡಿಸಲಾಗಿತ್ತು. ಕುಶಲಕರ್ಮಿಗಳು ತಮ್ಮದೇ ಆದ ಸಂಘಸಂಸ್ಥೆಗಳನ್ನು ಹೊಂದಿದ್ದರು. ಪ್ರತಿಯೊಂದು ನಗರದ ಸುತ್ತ ಸಣ್ಣ ಕೋಟೆ ಇರುತ್ತಿತ್ತು. ಸರ್ಕಾರ ಆಂತರಿಕ ಭದ್ರತೆ, ರಸ್ತೆಗಳ ಸ್ವಚ್ಛತೆ, ಮಾರುಕಟ್ಟೆಗಳ ನಿಯಂತ್ರಣ ಮತ್ತು ತೆರಿಗೆಯ ವಸೂಲಿ ಕಾರ್ಯಗಳಿಗೆ ತನ್ನ ಕಾರ್ಯವನ್ನು ಸೀಮಿತಗೊಳಿಸಿತ್ತು. ಬೀದಿ ದೀಪಗಳ ವ್ಯವಸ್ಥೆ, ನೀರು ಸರಬರಾಜು, ಆರೋಗ್ಯ, ಶಿಕ್ಷಣ ಮುಂತಾದವುಗಳು ಜನತೆಗೆ ಬಿಟ್ಟ ವಿಷಯಗಳಾಗಿದ್ದವು.

6. ಗ್ರಾಮಾಡಳಿತ

ಡಾ.ಪಿ.ಶರಣ್ ಪ್ರಕಾರ ಮೊಗಲ್ ಸಾಮ್ರಾಟರು ಗ್ರಾಮಗಳ ಆಡಳಿತಕ್ಕೆ ಹೆಚ್ಚು ಗಮನ ನೀಡಿದರು. ಮತ್ತು ಹಳ್ಳಿಯ ಜನರ ಸಮಸ್ಯೆಗಳ ನಿವಾರಣೆಗೆ ಕ್ರಮಕೈಗೊಂಡಿದ್ದರು. ಗ್ರಾಮಾಧಿಕಾರಿಗಳಲ್ಲಿ ಮುಖದ್ದಂ, ಪಟ್ಟಾರಿ ಮತ್ತು ಚೌಕಿದಾರ ಪ್ರಮುಖರು, ಗ್ರಾಮಗಳ ಆಡಳಿತ ಪಂಚಾಯಿತಿಗಳ ಮೂಲಕ ನಡೆಯುತ್ತಿತ್ತು. ಕುಟುಂಬಗಳ ಪ್ರಮುಖರು ಪಂಚಾಯಿತಿಯ ಸದಸ್ಯರಾಗಿರುತ್ತಿದ್ದರು. ಅವರಿಗೆ ಗ್ರಾಮದ ಆಡಳಿತದ ಬಗ್ಗೆ, ನ್ಯಾಯ ವಿತರಣೆ ಬಗ್ಗೆ, ಕಂದಾಯದ ವಸೂಲಾತಿಯ ಬಗ್ಗೆ, ಗ್ರಾಮದ ನೈರ್ಮಲ್ಯ, ಶಾಂತಿ, ಶಿಸ್ತು, ರಕ್ಷಣೆಯ ಬಗ್ಗೆ ನಿರ್ಣಯ ಮಾಡುವ ಅಧಿಕಾರವಿತ್ತು. ಗ್ರಾಮದ ಮುಖ್ಯಸ್ಥನಾಗಿದ್ದ ಮುಖದ್ದಂ ಪಂಚಾಯಿತಿಯ ಅಧ್ಯಕ್ಷನೂ ಆಗಿದ್ದನು. ಕೇಂದ್ರ ಸರ್ಕಾರ ಗ್ರಾಮದ ಆಡಳಿತದಲ್ಲಿ ಹೆಚ್ಚಾಗಿ ಹಸ್ತಕ್ಷೇಪಮಾಡುವಂತಿರಲಿಲ್ಲ.

ಉಪಸಂಹಾರ

ಮೊಗಲ್ ಆಡಳಿತ ವ್ಯವಸ್ಥೆ ಕೇಂದ್ರದಿಂದ ಗ್ರಾಮ ಮಟ್ಟದವರೆಗೆ ಸುವ್ಯವಸ್ಥಿತವಾಗಿತ್ತು. ಸಾಮ್ರಾಟನಿಗೆ ಅಪಾರ ಅಧಿಕಾರಗಳಿದ್ದರೂ ಮಂತ್ರಿಗಳು ಮತ್ತು ಅಧಿಕಾರಿಗಳ ಸಹಾಯದಿಂದ ಆಡಳಿತ ನಡೆಯುತ್ತಿತ್ತು. ಈ ವ್ಯವಸ್ಥೆಯ ಮೂಲಕ ಶಾಂತಿ, ಕಾನೂನು ಮತ್ತು ಕಂದಾಯ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸಲಾಯಿತು. ಆದ್ದರಿಂದ ಮೊಗಲ್ ಆಡಳಿತ ವ್ಯವಸ್ಥೆ ಭಾರತೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ.