“ಸಂವಿಧಾನದಲ್ಲಿ ಅಳವಡಿಸಿರುವ ಮೂಲಭೂತ ಹಕ್ಕುಗಳಿಗೂ ಮತ್ತು ಅವುಗಳನ್ನು ಪ್ರಜೆಗಳು ವಾಸ್ತವವಾಗಿ ಅನುಭವಿಸುತ್ತಿರುವುದಕ್ಕೂ ಬಹಳಷ್ಟು ಅಂತರವಿದೆ.”  – ನಾರಿಮನ್. ಡಿ. ಪಾಮರ್

ಮೂಲಭೂತ ಹಕ್ಕುಗಳ ಪರಿಕಲ್ಪನೆ:

“ಯಾವ ಹಕ್ಕುಗಳಿಲ್ಲದೆ ಒಬ್ಬ ಪ್ರಜೆಯು ತನ್ನ ಜೀವನವನ್ನು ನಡೆಸಲು ಸಾಧ್ಯವಾಗುವುದಿಲ್ಲವೋ ಅಂತಹ ಹಕ್ಕುಗಳನ್ನು ಮೂಲಭೂತ ಹಕ್ಕುಗಳು ಎಂದು ಕರೆಯಲಾಗುತ್ತದೆ.ʼ ಜಗತ್ತಿನ ಪ್ರತಿಯೊಂದು ದೇಶಗಳು ತಮ್ಮ ಪ್ರಜೆಗಳಿಗೆ ಸಂವಿಧಾನದ ಮೂಲಕವೇ ಮೂಲಭೂತ ಹಕ್ಕುಗಳನ್ನು ನೀಡಿವೆ. ಈ ಮೂಭೂತ ಹಕ್ಕುಗಳು ಎಲ್ಲಾ ಕಾನೂನು, ನ್ಯಾಯಾಂಗದ ತೀರ್ಮಾನ, ಕಾರ್ಯಾಂಗದ ಆದೇಶಗಳಿಗಿಂತ ಶ್ರೇಷ್ಠ ಹಾಗೂ ಉನ್ನತವಾದವುಗಳಾಗಿವೆ. ಈ ಹಕ್ಕುಗಳನ್ನು ಯಾರಿಂದಲೂ ಕಸಿದುಕೊಳ್ಳುವುದಾಗಲೀ ಅಥವಾ ಮೊಟುಕುಗೊಳಿಸುವುದಾಗಲೀ ಸಾಧ್ಯವಿಲ್ಲ. ಮೂಲಭೂತ ಹಕ್ಕುಗಳು ಎಷ್ಟು ಪ್ರಾಮುಖ್ಯತೆ ಪಡೆದುಕೊಂಡಿವೆಯೆಂದರೆ ಶಾಸಕಾಂಗವು ಮಾಡುವ ಯಾವುದೇ ಕಾನೂನು ಮೂಲಭೂತ ತತ್ವಗಳಿಗೆ ವಿರುದ್ಧವಾದರೆ ಅಂತಹ ಕಾನೂನನ್ನು ಸಂವಿಧಾನಬಾಹಿರ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೊದಲ ಮಹಾಯುದ್ಧದ ನಂತರ ವಿಶ್ವದ ವಿವಿಧ ದೇಶಗಳು ತಮ್ಮ ಪ್ರಜೆಗಳ ಮೂಲಭೂತ ಹಕ್ಕುಗಳಿಗಾಗಿ ಹೋರಾಟ ನಡೆಸಿದವು. ವಿಶ್ವಸಂಸ್ಥೆ ಸಹ ಮಾನವ ಹಕ್ಕುಗಳ ಘೋಷಣೆಯನ್ನು ಡಿಸೆಂಬರ್‌ 10, 1948 ರಂದು ಅಂಗೀಕರಿಸಿತು. ಹಾಗೆಯೇ ಭಾರತದ ಸಂವಿಧಾನವು ಆರಂಭದಲ್ಲಿ 7 ಮೂಲಭೂತ ಹಕ್ಕುಗಳನ್ನು ನೀಡಿತ್ತು. ಆದರೆ 1978ರ 44ನೇ ತಿದ್ದುಪಡಿ ಮೂಲಕ ಆಸ್ತಿಯ ಹಕ್ಕನ್ನು ತೆಗೆದು ಹಾಕಲಾಯಿತು. ಈಗ ಒಟ್ಟು 6 ಮೂಲಭೂತ ಹಕ್ಕುಗಳು ಚಾಲ್ತಿಯಲ್ಲಿವೆ.

ಮೂಲಭೂತ ಹಕ್ಕುಗಳ ಲಕ್ಷಣಗಳು (Characterstics of fundamental rights)

ಭಾರತೀಯ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ತನ್ನದೇ ಅದ ಗುಣಲಕ್ಷಣಗಳನ್ನು ಹೊಂದಿವೆ. ಈ ಲಕ್ಷಣಗಳ ಆಧಾರದ ಮೇಲೆ ಮೂಲಭೂತ ಸ್ವರೂಪವನ್ನು ಅರಿಯಬಹುದು.

1. ಸಾರ್ವತ್ರಿಕತೆ: (Universal)

ಭಾರತದಲ್ಲಿ ಜನಿಸಿರುವ ಎಲ್ಲಾ ಪ್ರಜೆಗಳಿಗೆ ಅನ್ವಯವಾಗುವ ರೀತಿಯಲ್ಲಿ ಮೂಲಭೂತ ಹಕ್ಕುಗಳನ್ನು ಭಾರತದ ಸಂವಿಧಾನದಲ್ಲಿ ಪ್ರಸ್ತಾಪಿಸಲಾಗಿದೆ. ಯಾವುದೇ ಜಾತಿ, ಧರ್ಮ, ಲಿಂಗ, ಭಾಷೆ, ಪ್ರದೇಶ ಹಾಗೂ ಸ್ಥಾನಮಾನಗಳ ಆಧಾರದ ಮೇಲೆ ತಾರತಮ್ಯವನ್ನು ಮಾಡದೆ ದೇಶದ ಎಲ್ಲಾ ಪೌರರಿಗೂ ಸಮಾನವಾದ ಹಕ್ಕುಗಳನ್ನು ನೀಡಿದೆ.

2. ಪೌರರಿಂದ ವಿದೇಶಿಯರ ಪ್ರತ್ಯೇಕತೆ:

ಭಾರತದ ಗಡಿಯೊಳಗೆ ನೆಲೆಸಿರುವ ವಿದೇಶಿಯರಿಗೆ ಭಾರತೀಯ ಪೌರರ ಹಕ್ಕುಗಳನ್ನು ನೀಡಲಾಗಿಲ್ಲ. ಸಂವಿಧಾನದ 15, 16, 20 ಹಾಗೂ 29ನೇ ವಿಧಿಯಲ್ಲಿ ಪ್ರಸ್ತಾಪಿಸಲಾಗಿರುವ ಹಕ್ಕುಗಳನ್ನು ಭಾರತೀಯ ಪೌರರಿಗೆ ಮಾತ್ರ ನೀಡಲಾಗಿದೆ. ಉಳಿದ ಹಕ್ಕುಗಳನ್ನು ಮಾತ್ರ ವಿದೇಶಿಯರು ಅನುಭವಿಸಲು ಅವಕಾಶ ನೀಡಲಾಗಿದೆ.

3. ಸವಿಸ್ತಾರ:

ಮೂಲಭೂತ ಹಕ್ಕುಗಳ ಕುರಿತು ಭಾರತದ ಸಂವಿಧಾನದಲ್ಲಿ ಸುಧೀರ್ಘವಾಗಿ ವಿವರಣೆ ನೀಡಲಾಗಿದೆ. ಮೂರನೇ ಭಾಗದ 14 ರಿಂದ 35ನೇ ವಿಧಿಯವರೆಗೆ ಅಂದರೆ 24 ವಿಧಿಗಳನ್ನು ಮೂಲಭೂತ ಹಕ್ಕುಗಳಿಗೆ ಮೀಸಲಿಡಲಾಗಿದೆ. ಅದರಲ್ಲಿ ಮೂಲಭೂತ ಹಕ್ಕಿನ ವ್ಯಾಪ್ತಿ ಹಾಗೂ ಮಿತಿಗಳನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

4. ಅಲ್ಪ ಸಂಖ್ಯಾತ ಹಿತರಕ್ಷಣೆಗೆ ಅನುವು:

ಭಾರತದ ಮೂಲಭೂತ ಹಕ್ಕುಗಳಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅವರಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕನ್ನು ನೀಡಲಾಗಿದೆ. ಅದರಲ್ಲೂ ವಿಶೇಷವಾಗಿ ಧಾರ್ಮಿಕ ಹಕ್ಕನ್ನು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ.

5. ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳ ಕೊರತೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನಾಗರಿಕ ಹಕ್ಕು ಹಾಗೂ ಸ್ವಾತಂತ್ರ್ಯಗಳನ್ನು ಮಾತ್ರ ನೀಡಿ ಆಹಾರ, ಆರೋಗ್ಯ, ಉದ್ಯೋಗ, ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಹಕ್ಕುಗಳಿಗೆ ಅಗತ್ಯ ಆದ್ಯತೆಗಳನ್ನು ನೀಡಲಾಗಿಲ್ಲ.

6. ಮಿತಿಗಳ ಹೇರಿಕೆ:

ಭಾರತದ ಸಂವಿಧಾನದಲ್ಲಿ ಪ್ರಜೆಗಳಿಗೆ ನೀಡಲಾದ ಮೂಲಭೂತ ಹಕ್ಕುಗಳು ನಿರಂಕುಶವಾದವುಗಳಲ್ಲ. ಪ್ರತಿಯೊಂದು ಹಕ್ಕು ತನ್ನದೇ ಆದ ಮಿತಿಗಳನ್ನು ಹೊಂದಿದೆ. ಸಾಮಾನ್ಯವಾಗಿ ಸಾರ್ವಜನಿಕ ಶಾಂತಿ, ಕಾನೂನು ವ್ಯವಸ್ಥೆ ಹಾಗೂ ದೇಶದ ಅಖಂಡತೆಯ ಕಾರಣಕ್ಕೆ ಸೂಕ್ತವಾದ ನಿರ್ಬಂಧಗಳನ್ನು ಮೂಲಭೂತ ಹಕ್ಕುಗಳ ವಿಷಯದಲ್ಲಿ ಹೇರಲಾಗಿದೆ.

7. ನ್ಯಾಯಾಂಗ ರಕ್ಷಣೆ:

ಭಾರತದ ಪ್ರಜೆಗಳು ಪಡೆದ ಮೂಲಭೂತ ಹಕ್ಕುಗಳಿಗೆ ನ್ಯಾಯಾಂಗದ ಬೆಂಬಲವಿದೆ. ಪ್ರಜೆಗಳ ಹಕ್ಕುಗಳಿಗೆ ತೊಂದರೆಗಳು ಉಂಟಾಗುತ್ತವೆ ಎಂದೆನಿಸಿದಾಗ ಪ್ರಜೆಯಾದವನು ಉಚ್ಛ ಹಾಗೂ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಮೊಕದ್ದಮೆಗಳನ್ನು ಹೂಡಬಹುದು. ನ್ಯಾಯಾಲಯಗಳ ಮೂಲಕ ವ್ಯಕ್ತಿಯಾದವನು ತನ್ನ ಹಕ್ಕುಗಳನ್ನು ರಕ್ಷಿಸಿಕೊಳ್ಳಬಹುದು. ನ್ಯಾಯಾಂಗವು ಪ್ರಜೆಗಳ ಹಕ್ಕುಗಳ ರಕ್ಷಣೆಯ ಭರವಸೆಯನ್ನೂ ನೀಡುತ್ತವೆ.

8. ತಿದ್ದುಪಡಿಗೆ ಆಸ್ಪದ:

ಭಾರತದ ಸಂವಿಧಾನದಿಂದ ನೀಡಲ್ಪಟ್ಟ ಮೂಲಭೂತ ಹಕ್ಕುಗಳು ಶಾಶ್ವತವಾದ ರೂಪವನ್ನು ಪಡೆದಿಲ್ಲ. ಅವುಗಳನ್ನು ಸಂದರ್ಭಗಳಿಗನುಗುಣವಾಗಿ ತಿದ್ದುಪಡಿ ಮಾಡಲು ಸಂಸತ್ತಿಗೆ ಅಧಿಕಾರ ನೀಡಲಾಗಿದೆ. ವಿಶೇಷ ಬಹುಮತದೊಂದಿಗೆ ಮೂಲಭೂತ ಹಕ್ಕುಗಳ ತಿದ್ದುಪಡಿ ಮಾಡಬಹುದು. ಉದಾ: ಆಸ್ತಿಯ ಹಕ್ಕನ್ನು ಸಂಸತ್ತು ತಿದ್ದುಪಡಿ ಮಾಡಿ ರದ್ದುಗೊಳಿಸಿತು.

9. ಅಮಾನತಿಗೆ ಅವಕಾಶ:

ಭಾರತದ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದೇಶದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅಮಾನತ್ತಿನಲ್ಲಿಡಲಾಯಿತು. ಇದರೊಂದಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವವರ ಹಕ್ಕುಗಳನ್ನು ಸಹ ಸಂಸತ್ತು ರದ್ದುಗೊಳಿಸುವ ಅಧಿಕಾರವನ್ನು ಹೊಂದಿದೆ.

10. ಸಂವಿಧಾನಾತ್ಮಕ ಸ್ಥಾನಮಾನ:                 

ಮೂಲಭೂತ ಹಕ್ಕುಗಳು ಭಾರತದ ಸಂವಿಧಾನದ ಅವಿಭಾಜ್ಯ ಅಂಗಗಳಾಗಿವೆ. ಸಾಮಾನ್ಯ ಶಾಸನಗಳು ಇವುಗಳಿಗೆ ವಿರುದ್ಧವಾದ ಅಂಶಗಳನ್ನು ಒಳಗೊಂಡಿದ್ದರೆ ಅವುಗಳನ್ನು ಸಂವಿಧಾನಬಾಹಿರ ಎಂದು ಪರಿಗಣಿಸಿ ರದ್ದುಗೊಳಿಸಲಾಗುತ್ತದೆ.

ಉಪಸಂಹಾರ

ಒಟ್ಟಿನಲ್ಲಿ, ಮೂಲಭೂತ ಹಕ್ಕುಗಳು ಭಾರತೀಯ ಪ್ರಜಾಪ್ರಭುತ್ವದ ಬಲಿಷ್ಠ ಅಡಿಪಾಯವಾಗಿವೆ. ಇವು ಪ್ರಜೆಗಳಿಗೆ ಸ್ವಾತಂತ್ರ್ಯವನ್ನು ಮಾತ್ರವಲ್ಲ, ಜವಾಬ್ದಾರಿಯುತ ನಾಗರಿಕತ್ವವನ್ನೂ ಕಲಿಸುತ್ತವೆ. ಹಕ್ಕುಗಳೊಂದಿಗೆ ಕರ್ತವ್ಯಗಳ ಅರಿವು ಬೆಳೆಸಿಕೊಂಡಾಗ ಮಾತ್ರ ಸಂವಿಧಾನದ ಆಶಯಗಳು ಸಾಕಾರಗೊಳ್ಳುತ್ತವೆ. ಅದರಿಂದ ಮೂಲಭೂತ ಹಕ್ಕುಗಳ ಜ್ಞಾನವು ಪ್ರತಿಯೊಬ್ಬ ಭಾರತೀಯನಿಗೂ ಅನಿವಾರ್ಯವಾಗಿದೆ.