ಈ ಯುದ್ಧವು ಭಾರತದ ಚರಿತ್ರೆಯ ನಿರ್ಣಾಯಕ ಯುದ್ಧಗಳಲ್ಲಿ ಒಂದಾಗಿದೆ. ಒಂದನೆಯ ಪೇಶ್ವೆಯ ಕಾಲದಲ್ಲಿ ಪ್ರಾರಂಭವಾದ ಮರಾಠ ಸಾಮ್ರಾಜ್ಯಶಾಹಿ ವಿಸ್ತರಣಾ ನೀತಿ ಮೂರನೇ ಪೇಶ್ವೆ ಬಾಲಾಜಿ ಬಾಜೀರಾಯನ ಕಾಲದಲ್ಲಿ ತನ್ನ ಪರಾಕಾಷ್ಠತೆಯನ್ನು ಮುಟ್ಟಿತು. ಈತನ ಕಾಲದಲ್ಲಿ ಮರಾಠ ಸೈನ್ಯಗಳು ದೆಹಲಿ ಮತ್ತು ಲಾಹೋರ್‌ಗಳ ಮೇಲೆ ಧಾಳಿ ನಡೆಸಿ ಆವುಗಳ ಮೇಲೆ ಮರಾಶ ಸಾರ್ವಭೌಮತ್ವವನ್ನು ಸ್ಥಾಪಿಸಿದವು. ಈ ಧಾಳಿಗಳು ಆಫ್‌ಘಾನಿಸ್ಥಾನದ ಅರಸನಾದ ಅಹ್ಮದ್ಮಷಾ ಅಬ್ದಾಲಿಯನ್ನು ಕೆರಳಿಸಿದವು. ಮರಾಠ ಸೈನ್ಯಗಳು ಪಂಜಾಬಿನ ರಾಜ್ಯಪಾಲನಾಗಿದ್ದ ಅಹ್ಮದ್ಮಾ ಅಬ್ದಾಲಿಯ ಪುತ್ರ ತೈಮೂರ್ ಷಾನನ್ನು ಅಪಜಯಗೊಳಿಸಿದ್ದು ಆತನಿಗೆ ಇನ್ನೂ ಕೋಪ ಹೆಚ್ಚಾಗಲು ಕಾರಣವಾಯಿತು. ಈ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಉದ್ದೇಶದಿಂದಾಗಿ ಅಹ್ಮದ್ ಷಾ ಅಬ್ದಾಲಿಯು ಮರಾಠರ ವಿರುದ್ಧ ದಂಡೆತ್ತಿ ಬಂದನು. ಇದು ತೃತೀಯ ಪಾಣಿಪತ್ ಯುದ್ಧಕ್ಕೆ ಕಾರಣವಾಯಿತು.

ಕ್ರಿ.ಶ.1761 ರಲ್ಲಿ ಮರಾಠ ಮತ್ತು ಅಫ್ಘನ್ ಸೈನ್ಯಗಳು ಇತಿಹಾಸ ಪ್ರಸಿದ್ಧವಾದ ಪಾಣಿಪತ್‌ನ ರಣಭೂಮಿಯಲ್ಲಿ ಸಂಧಿಸಿದವು. ಅಲ್ಲಿ ತೃತೀಯ ಬಾರಿಗೆ ಭಾರತದ ಅದೃಷ್ಟ ನಿರ್ಣಯವಾಯಿತು. ಮರಾಠ ಸೈನ್ಯವು 45,000 ಇತ್ತು. ಅಫ್ಘನ್ನರ ಸೇನೆ 60,000 ಇತ್ತು. ಆಹ್ಮದ್‌ಷಾನು ಉತ್ತಮವಾದ ಕುದುರೆಗಳನ್ನು ಬಲಾಡ್ಯವಾದ ಗುಂಡಿನ ಪಡೆಯನ್ನು ಹೊಂದಿದ್ದನು. ಈತನ ಸೈನಿಕರ ಶಸ್ತ್ರಾಸ್ತ್ರಗಳು ಮರಾಠರಿಗಿಂತ ಉತ್ತಮವಾಗಿದ್ದವು. ಸಣ್ಣ ಪುಟ್ಟ ಘರ್ಷಣೆಯ ನಂತರ ಉಭಯ ಸೇನೆಗಳ ನಡುವೆ ಕ್ರಿ.ಶ. 1761 ಜನವರಿ 14 ರಂದು ನಿರ್ಣಾಯಕವಾದ, ಭೀಕರವಾದ ಕದನ ಜರುಗಿತು. ಈ ಕದನವು ಬೆಳಿಗ್ಗೆಯಿಂದ ಸಂಜೆ ಮೂರು ಗಂಟೆಯವರೆಗೆ ನಡೆಯಿತು. ಮರಾಠರು ಸದಾಶಿವರಾಯನ ಮುಖಂಡತ್ವದಲ್ಲಿ ಶೌರ್ಯ ಸಾಹಸಗಳಿಂದ ಹೋರಾಡಿದರು. ಯುದ್ಧದ ಪ್ರಾರಂಭದಲ್ಲಿ ಮರಾತರೇ ಮೇಲುಗೈ ಪಡೆದಾಗ್ಯೂ ತದನಂತರ ಅಂದರೆ ಮಧ್ಯಾಹ್ನದ ನಂತರ ಅಬ್ದಾಲಿಯು ನಡೆಸಿದ ಹೊಸ ಸೈನಿಕ ಬದಲಾವಣೆ ಮತ್ತು ಕಾರ್ಯಾಚರಣೆಯಿಂದ ಯುದ್ಧದ ಗತಿಯೇ ಬೇರೆಯಾಯಿತು. ಬೆಳಿಗ್ಗಿನಿಂದ ಹೋರಾಡಿ ಬಳಲಿ ಬೆಂಡಾಗಿದ್ದ ಮರಾಠ ಸೈನಿಕರು ಧೈರ್ಯವನ್ನು ಕಳೆದುಕೊಂಡರು. ಅತ್ಯಲ್ಪ ಕಾಲದಲ್ಲಿಯೇ ಮರಾಠರ ಸೋಲು ಖಚಿವಾಗುವತ್ತಾ ಸಾಗಿತ್ತು. ಮರಾಠ ಸೈನಿಕರು ಭಯದಿಂದ ಯುದ್ಧರಂಗದಿಂದ ಓಡತೊಡಗಿದರು. ಆಫ್ಘನ್ ಸೈನಿಕರು ಅವರನ್ನು ಎಲ್ಲಾ ದಿಕ್ಕುಗಳಿಂದಲೂ ಬೆನ್ನಟ್ಟಿದರು. ಮರಾಠ ಸೈನ್ಯದ ಎಲ್ಲಾ ನಾಯಕರು ಮತ್ತು ಅಸಂಖ್ಯಾತ ಸೈನಿಕರು ಯುದ್ಧ ಭೂಮಿಯಲ್ಲಿಯೇ ಮಡಿದರು. ಪೇಶ್ವೆಯ ಹಿರಿಯ ಪುತ್ರನಾದ ವಿಶ್ವಾಸರಾವ್ ಮತ್ತು ಸದಾಶಿವರಾವ್ ಸೇರಿದಂತೆ ಹಲವು ನಾಯಕರು ಮಡಿದರು. ವಿಜಯಿಗಳಿಗೆ ಆಗಾಧ ಪ್ರಮಾಣದಲ್ಲಿ ಸಂಪತ್ತು ಲಭಿಸಿತು. ಮರಾರರು ಆಗಾಧವಾದ ನಷ್ಟವನ್ನು ಅನುಭವಿಸಿದರು. ಈ ಸೋಲಿನ ವಿಷಯ, ಈಗಾಗಲೇ ರೋಗಪೀಡಿತನಾಗಿ ಹಾಸಿಗೆ ಹಿಡಿದಿದ್ದ ಬಾಲಾಜಿ ಬಾಜಿರಾಯನ ಮರಣವನ್ನು ತ್ವರಿತಗೊಳಿಸಿತು. ಆತ ಭಗ್ನ ಹೃದಯಿಯಾಗಿ ಕ್ರಿ.ಶ. 1761 ಜನವರಿ 23 ರಂದು ಮರಣಹೊಂದಿದನು.

ಪರಿಣಾಮಗಳು :

  1. ಭಾರತದ ಚರಿತ್ರೆಯಲ್ಲಿ ಪ್ರಪ್ರಥಮ ಭಾರಿಗೆ ಮರಾಠರು ಸಂಪೂರ್ಣವಾಗಿ ಸೋತು ಹೋದರು.
  2. ಆಬ್ದಾಲಿಯು ದೆಹಲಿಯ ಮೇಲೆ ಧಾಳಿ ಮಾಡಿ ಮೊಗಲರನ್ನು ಅಪಜಯಗೊಳಿಸಿದ್ದರಿಂದ ಮೊಗಲರು ಅವನತಿ ಹೊಂದಬೇಕಾಯಿತು.
  3. ಮುಖ್ಯವಾಗಿ ಮೈಸೂರಿನಲ್ಲಿ ಹೈದರಾಲಿಯ ಏಳಿಗೆಗೆ ಸದವಕಾಶವಾಯಿತು.
  4. ಆಂಗ್ಲರು ಭಾರತದಲ್ಲಿ ಬಲಾಡ್ಯರಾಗಿ ಬೆಳೆಯಲು ಸದವಕಾಶವಾಯಿತು.
  5. ಈ ಕದನ ಭಾರತದ ಚರಿತ್ರೆಗೆ ಒಂದು ಹೊಸ ಆಯಾಮ ನೀಡಿತು.

ಉಪಸಂಹಾರ

ಮೂರನೇ ಪಾಣಿಪತ್ ಯುದ್ಧವು ಭಾರತದ ಇತಿಹಾಸದಲ್ಲಿ ಮಹತ್ತರ ಪರಿಣಾಮ ಬೀರಿದ ಯುದ್ಧವಾಗಿದೆ. ಈ ಸೋಲಿನಿಂದ ಮರಾಠರ ಪ್ರಭಾವ ಕುಗ್ಗಿ, ಹೊಸ ಶಕ್ತಿಗಳು ಭಾರತದಲ್ಲಿ ಉದಯಿಸಲು ಅವಕಾಶ ದೊರೆಯಿತು. ವಿಶೇಷವಾಗಿ ಆಂಗ್ಲರ ಪ್ರಭಾವ ಹೆಚ್ಚಲು ಇದು ಕಾರಣವಾಯಿತು. ಹೀಗಾಗಿ ಈ ಯುದ್ಧವು ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ತಿರುವು ಎಂದು ಪರಿಗಣಿಸಲಾಗುತ್ತದೆ.