ಪರಿಚಯ
ರಾಜಪೂತರು ಪ್ರಾರಂಭಿಕ ಮಧ್ಯಯುಗೀನ ಭಾರತದಲ್ಲಿ ಶಕ್ತಿಶಾಲಿ ಯೋಧ ವರ್ಗವಾಗಿ ಹೊರಹೊಮ್ಮಿದರು. ಧೈರ್ಯ, ಗೌರವ, ನಿಷ್ಠೆ ಮತ್ತು ರಾಜಧರ್ಮ ಎಂಬ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು. 8ರಿಂದ 12ನೇ ಶತಮಾನಗಳ ನಡುವೆ ಉತ್ತರ ಹಾಗೂ ಮಧ್ಯ ಭಾರತದ ವಿವಿಧ ಭಾಗಗಳಲ್ಲಿ ಆಳಿದ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಪ್ರಮುಖ ರಾಜಪೂತ ವಂಶಗಳಾಗಿದ್ದರು. ಈ ವಂಶಗಳು ಹೊರಗಿನ ಆಕ್ರಮಣಗಳಿಗೆ ತಡೆಯೊಡ್ಡಿದಷ್ಟೇ ಅಲ್ಲದೆ, ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಉತ್ತೇಜನ ನೀಡಿ ಮಧ್ಯಯುಗೀನ ಭಾರತೀಯ ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದವು.
ಗೂರ್ಜರ ಪ್ರತಿಹಾರರು (ರಾಜಧಾನಿ – ಕನೂಜ್)
ಗೂರ್ಜರ ಪ್ರತಿಹಾರರು ರಾಮಾಯಣ ಕಾವ್ಯದ ಪ್ರಸಿದ್ಧ ಸೂರ್ಯವಂಶಕ್ಕೆ ಸೇರಿದ ಲಕ್ಷ್ಮಣನ ಹಾಗೂ ಹರಿಚಂದ್ರನೆಂಬ ಬ್ರಾಹ್ಮಣನ ವಂತಜರೆಂದು ಹೇಳಲಾಗಿದೆ. ಇವರು ಕ್ರಿ.ಶ.6ನೆಯ ಶತಮಾನದ ಉತ್ತರಾರ್ಧದ ಸುಮಾರಿಗೆ ಪ್ರಾಬಲ್ಯಾ ಬಂದರು. ಮೊದಲನೆಯ ನಾಗಭಟನು ಪ್ರತಿಹಾರ ಸ್ಥಾಪಕನಾಗಿದ್ದನು. ಇವನು ಕ್ರಿ.ಶ.725ರಿಂದ 740ರವರೆಗೆ ಆಳ್ವಿಕೆ ಮಾಡಿದನೆಂದು ಹೇಳಲಾಗಿದೆ. ಇವನು ಅರಬ್ಬರ ದಾಳಿಯನ್ನು ಯಶಸ್ವಿಯಾಗಿ ಎದುರಿಸಿದನು. ಅನಂತರ ಬಲಿಷ್ಠ ಮೇಚ್ಚ ದೊರೆಯ ಬೃಹತ್ ಸೇನೆಯನ್ನು ಸೆದೆಬಡಿದನು. ಈತನ ಆಳ್ವಿಕೆಯ ನಂತರ ವತ್ಸರಾಜ ಕ್ರಿ.ಶ.778ರಲ್ಲಿ ಅಧಿಕಾರಕ್ಕೆ ಬಂದನು.
ವತ್ಸರಾಜ : (ಕ್ರಿ.ಶ 778-805)
ವತ್ಸರಾಜನು ಗೂರ್ಜರ ಪ್ರತಿಹಾರರ ಪ್ರಮುಖ ದೊರೆಯಾಗಿದ್ದಾನೆ. ಇವನು ಒಂದನೆಯ ನಾಗಭಟನಿಮೊಮ್ಮಗ. ಇವನು ಅತ್ಯಂತ ಧೈರ್ಯಶಾಲಿಯಾದ ಅರಸನಾಗಿದ್ದನು. ಇವನು ತನ್ನ ಆಡಳಿತಾವಧಿಯಲ್ಲಿ ಸಾಕಷ್ಟು ಯುದ್ಧಗಳನ್ನು ಮಾಡಿದನು. ಇದರಿಂದ ವತ್ಸರಾಜನ ಸಾಮ್ರಾಜ್ಯ ಸಾಕಷ್ಟು ವಿಸ್ತಾರ ಹೊಂದಿದ್ದಿತು. ಇವನು ಬಂಗಾಳದ ಅರಸನಾದ ಧರ್ಮಪಾಲನನ್ನು ಸೋಲಿಸಿದನು. ನಂತರ ರಜಪೂತಾನದ ರಾಜನನ್ನು ಸೋಲಿಸಿ ಹಿಮ್ಮೆಟ್ಟಿಸಿದನು. ಇದಾದ ಕೆಲವೇ ದಿನಗಳಲ್ಲಿ ವತ್ಸರಾಜನು ಕನೂಜ್ ಮೇಲೆ ದಾಳಿ ನಡೆಸಿ ಅಲ್ಲಿನ ರಾಜನಾದ ಇಂದ್ರಾಯುಧನನ್ನು ಸೋಲಿಸಿದನು. ಸೋತ ಇಂದ್ರಾಯುಧ ವತ್ಸರಾಜನ ಮಾಂಡಲಿಕ ದೊರೆಯಾದನು. ಇದನ್ನು ಸಹಿಸದ ಧರ್ಮಪಾಲನು ವತ್ಸರಾಜನ ವಿರುದ್ಧ ದಂಡೆತ್ತಿ ಬಂದನು. ಹೀಗೆ ಗೌಡದೇಶದ ಧರ್ಮಪಾಲ ಹಾಗೂ ವತ್ಸರಾಜ ಕನೂಜ್ನ ವಿಷಯದಲ್ಲಿ ಪರಸ್ಪರ ಯುದ್ಧಕ್ಕೆ ನಿಂತರು. ಈ ಯುದ್ಧದಲ್ಲಿ ಧರ್ಮಪಾಲ ಸೋತು ಶರಣಾದನು. ಈ ಯುದ್ಧದ ವಿಷಯವನ್ನು ರಾಘವಪುರ ಶಿಲಾಶಾಸನ ತಿಳಿಸುತ್ತದೆ. ವತ್ಸರಾಜನ ಅಧಿಕಾರಾವಧಿಯಲ್ಲಿ ಪ್ರತಿಹಾರರು, ಪಾಲರು ಹಾಗೂ ರಾಷ್ಟ್ರಕೂಟರ ನಡುವೆ ತ್ರಿಕೋನ ಸ್ಪಧೆ ಏರ್ಪಟ್ಟಿತು. ಆದರೆ, ರಾಷ್ಟ್ರಕೂಟ ದೊರೆ ಧ್ರುವನು ವತ್ಸರಾಜನನ್ನು ಯುದ್ಧವೊಂದರಲ್ಲಿ ಸೋಲಿಸಿ ಓಡಿಸಿದನು. ಹೀಗೆ ಯುದ್ಧದಲ್ಲಿ ಪರಾಭವಗೊಂಡ ವತ್ಸರಾಜ ಮಾನಸಿಕವಾಗಿ ಕೊರಗಿ ನಿಧನನಾದನು.
ಎರಡನೆಯ ನಾಗಭಟ: (ಕ್ರಿ.ಶ.905-833)
ವತ್ಸರಾಜನ ಮರಣದ ನಂತರ ಎರಡನೆಯ ನಾಗಭಟನು ಸಿಂಹಾಸನಕ್ಕೆ ಬಂದನು. ಇವನು ಕ್ರಿ.ಶ.805 ರಿಂದ 833ರವರೆಗೆ ಆಡಳಿತ ನಡೆಸಿದನು. ಇವನು ಅಪ್ರತಿಮ ಶೂರನಾಗಿದ್ದು, ಪ್ರತಿಹಾರ ರಾಜ್ಯವನ್ನು ವಿಸ್ತರಿಸಿದನು. ಕ್ರಿ.ಶ.807ರ ತಾಮ್ರ ಶಾಸನದ ಪ್ರಕಾರ ಎರಡನೆಯ ನಾಗಭಟನು ರಾಷ್ಟ್ರಕೂಟರ ಅರಸನಾದ ಮೂರನೆಯ ಗೋವಿಂದನಿಂದ ಪರಾಭವ ಹೊಂದಿದನೆಂದು ತಿಳಿದುಬಂದಿದೆ. ಈತನ ಪ್ರಮುಖ ಯುದ್ಧಗಳೆಂದರೆ,
1) ಕನೂಜ್ ಮೇಲಿನ ಆಕ್ರಮಣ: ಎರಡನೆಯ ನಾಗಭಟನು ಕನೂಜ್ ಮೇಲೆ ದಾಳಿ ಮಾಡಿ ಅಲ್ಲಿನ ಅರಸನಾದ ಚಕ್ರಾಯುಧನನ್ನು ಸೋಲಿಸಿದನು. ಅನಂತರ ಕನೂಜ್ ಎರಡನೆಯ ನಾಗಭಟನ ಆಡಳಿತಕ್ಕೆ ಒಳಪಟ್ಟಿತು. ಅಂದಿನಿಂದ ಕನೂಜ್ ಎರಡನೆಯ ನಾಗಭಟನ ರಾಜಧಾನಿಯಾಯಿತು.
2) ಧರ್ಮಪಾಲನನ್ನು ಸೋಲಿಸಿದುದು: ಕನೂಜ್ ಅರಸನಾದ ಚಕ್ರಾಯುಧನು ಧರ್ಮಪಾಲನ ಆಶ್ರಯದಲ್ಲಿದ್ದನು. ಎರಡನೆಯ ನಾಗಭಟನಿಂದ ಚಕ್ರಾಯುಧ ಪರಾಭವಗೊಂಡ ನಂತರ ಧರ್ಮಪಾಲನು ನಾಗಭಟನ ವಿರುದ್ಧ ಹೋರಾಟ ಆರಂಭಿಸಿದನು. ಈ ಹೋರಾಟದಲ್ಲಿ ಧರ್ಮಪಾಲನು ಸೋಲನುಭವಿಸಿದನು. ಈ ಯುದ್ಧದ ಕುರಿತು ಗ್ವಾಲಿಯರ್ ಶಾಸನ ಮಾಹಿತಿ ಒದಗಿಸುತ್ತದೆ.
3) ರಾಷ್ಟ್ರಕೂಟರ ವಿರುದ್ಧ ದಾಳಿ: ಧರ್ಮಪಾಲನನ್ನು ಪರಾಭವಗೊಳಿಸಿದ ನಾಗಭಟನು ರಾಷ್ಟ್ರಕೂಟರ ಪ್ರದೇಶಗಳ ಕಡೆಗೆ ಗಮನಹರಿಸಿದನು. ಆದರೆ, ರಾಷ್ಟ್ರಕೂಟರ ದೊರೆ 3ನೆಯ ಗೋವಿಂದ ನಾಗಭಟನನ್ನು ಸೋಲಿಸಿ ಆತನ ಮುಂದುವರಿಕೆಗೆ ತಡೆಯೊಡ್ಡಿದನು. ಗ್ವಾಲಿಯರ್ ಶಾಸನವೇ ಹೇಳುವಂತೆ ಎರಡನೆಯ ನಾಗಭಟನು ಆಂದ್ರ, ಸಿಂದ್, ವಿದರ್ಭ ಹಾಗೂ ಕಳಿಂಗ ರಾಜ್ಯಗಳನ್ನು ಗೆದ್ದುಕೊಂಡನು.
4) ಮುಸ್ಲಿಮರ ಮೇಲೆ ದಾಳಿ: ಎರಡನೆಯ ನಾಗಭಟನು ಬಕ್ಷರನ ಸುಲ್ತಾನನನ್ನು ಸೋಲಿಸಿದನೆಂದು ಗ್ವಾಲಿಯರ್ ಶಾಸನವೇ ಹೇಳುತ್ತದೆ. ಅದು ಅಲ್ಲದೆ ಎರಡನೆಯ ನಾಗಭಟನು ತನ್ನ ಸಾಮಂತನಾದ ಗೋವಿಂದರಾಜನ ಜೊತೆಗೂಡಿ ಮುಸ್ಲಿಂರನ್ನು ಓಡಿಸಿದನೆಂದು ಹೇಳಲಾಗಿದೆ. ನಾಗಭಟನ ನಂತರ ಅವನ ಮಗ ರಾಮಭದ್ರ ಅಧಿಕಾರಕ್ಕೆ ಬಂದನು. ಇವನು ಕೇವಲ 3 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದನು. ಇವನ ನಂತರ ಇವನ ಮಗನಾದ ಮಿಹಿರ ಭೋಜ ತನ್ನ ತಂದೆಯನ್ನು ಕೊಂದು ಅಧಿಕಾರಕ್ಕೆ ಬಂದನು.
ಮಿಹಿರ ಭೋಜ : (ಕ್ರಿ.ಶ. 836-865)
ಇವನು ಗೂರ್ಜರ ಪ್ರತಿಹಾರ ಚಕ್ರವರ್ತಿಗಳಲ್ಲಿಯೇ ಅತ್ಯಂತ ಶಕ್ತಿಶಾಲಿ ಹಾಗೂ ಪ್ರಸಿದ್ಧ ಅರಸನಾಗಿದ್ದನು. ಇವನು ಪ್ರತಿಹಾರ ಸಾಮ್ರಾಜ್ಯವನ್ನು ಸಾಕಷ್ಟು ವಿಸ್ತರಿಸಿದನು. ಈತ ಧ್ರುವ ಹಾಗೂ ಧರ್ಮಪಾಲರಿಗೆ ಸರಿಸಮವಾದ ಸ್ಥಾನವನ್ನು ಪಡೆದನು. ಇವನು ಭಗವತಿಯ ಪರಮಭಕ್ತನಾಗಿದ್ದನು. ಪ್ರಭಾಸ, ಆದಿ ಹಾಗೂ ಮಿಹಿರ ಎಂಬ ಬಿರುದುಗಳನ್ನು ಪಡೆದಿದ್ದನು. ಇವನು ಕ್ರಿಶ. 836ರಲ್ಲಿ ‘ಬರಾಹ್’ ತಾಮ್ರಶಾಸನವನ್ನು ಹೊರಡಿಸಿದನು.
ದಿಗ್ವಿಜಯಗಳು:
1) ಬಂದೇಲ್ಖಂಡದ ವಶ : ಬಂದೇಲ್ ಖಂಡವು ತನ್ನ ತಂದೆಯ ಕಾಲದಿಂದಲೂ ಸ್ವತಂತ್ರವಾಗಿದ್ದ ಕಾರಣದಿಂದ ಮಿಹಿರಬೋಜನು ಅಧಿಕಾರಕ್ಕೆ ಬಂದ ತಕ್ಷಣವೇ ಬಂದೇಲ್ ಖಂಡದ ಮೇಲೆ ದಂಡೆತ್ತಿಹೋಗಿ ಅಲ್ಲಿನ ರಾಜನಾದ ಜಯಶಕ್ತಿಯನ್ನು ಸೋಲಿಸಿ ಅದನ್ನು ತನ್ನ ರಾಜ್ಯದಲ್ಲಿ ಸೇರ್ಪಡೆಗೊಳಿಸಿದನು.
2) ರಾಜಪುತಾನದ ವಿರುದ್ಧ ದಂಡಯಾತ್ರೆ : ಮಿಹಿರಭೋಜನು ರಜಪೂತಾನದ ವಿರುದ್ಧ ದಾಳಿ ಮಾಡಿ ಅದನ್ನು ಗೆದ್ದು ತನ್ನ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿದನು. ಈತನ ರಜಪೂತಾನದ ದಾಳಿಯ ಕುರಿತು ವರಾಹ ಹಾಗೂ ದೌಲತ್ಪುರದ ಶಾಸನಗಳು ಮಾಹಿತ ನೀಡುತ್ತವೆ.
3) ಪಂಜಾಬ್ ಮೇಲಿನ ದಾಳಿ: ಕಲ್ದಣನು ತನ್ನ ರಾಜತರಂಗಿಣಿಯಲ್ಲಿ ಬರೆದಂತೆ ಪಂಜಾಬಿನ ಕರ್ನಲ್ ಪ್ರಾಂತ್ಯವು ಮಿಹಿರಭೋಜನ ಸಾಮ್ರಾಜ್ಯದ ಒಂದು ಭಾಗವಾಗಿತ್ತು. ಆದರೆ, ಇದನ್ನು ಕಾಶ್ಮೀರದ ಶಂಕರ ವರ್ಮನ್ ಎಂಬ ಅರಸ ಗೆದ್ದುಕೊಂಡಿದ್ದನು. ಆದರೆ, ಮಿಹಿರಭೋಜನು ಪುನಃ ಪಂಜಾಬ್ ಮೇಲೆ ದಾಳಿ ಮಾಡಿ ಶಂಕರವರ್ಮನನ್ನು ಸೋಲಿಸಿ ಪಂಜಾಬನ್ನು ವಶಪಡಿಸಿಕೊಂಡನು.
4) ಪಶ್ಚಿಮ ಭಾರತದ ವಿರುದ್ಧ ದಾಳಿ: ಮಿಹಿರ ಭೋಜನ ಪಶ್ಚಿಮ ಭಾರತದಲ್ಲಿ ನೆಲೆಯೂರಿದ್ದ ಹೂಣರ ವಿರುದ್ಧ ದಾಳಿ ಮಾಡಿದನು. ಈ ದಂಡಯಾತ್ರೆಯ ನಾಯಕತ್ವವನ್ನು ಬಲವರ್ಮ ವಹಿಸಿದ್ದನು. ಮಿಹಿರ ಭೋಜನ ದಾಳಿಗೆ ಹೆದರಿದ ಹೂಣರು ಭಾರತದಿಂದ ಕಾಲೆಗೆದರು.
5) ಮಧ್ಯಭಾರತದ ಮೇಲೆ ದಾಳಿ: ಮಿಹಿರ ಭೋಜನು ಮಧ್ಯಭಾರತದ ಪ್ರದೇಶಗಳಾದ ಗ್ವಾಲಿಯರ್, ಝಾನ್ಸಿಗಳನ್ನು ವಶಪಡಿಸಿಕೊಂಡು ಅಲ್ಲಿ ತನ್ನ ಪ್ರತಿನಿಧಿಗಳನ್ನು ನೇಮಿಸಿದನು ಎಂದು ಗ್ವಾಲಿಯರ್ ಹಾಗೂ ದೇಘರ್ ಶಾಸನಗಳು ಹೇಳಿವೆ. 6) ರಾಷ್ಟ್ರಕೂಟರೊಂದಿಗೆ ಹೋರಾಟ: ರಾಷ್ಟ್ರಕೂಟ ದೊರೆಗಳಾದ ಅಮೋಘವರ್ಷ ಹಾಗೂ ಕೃಷ್ಣರ ವಿರುದ್ಧ ಮಿಹಿರಭೋಜನು ದಾಳಿ ಮಾಡಿ ಅವರನ್ನು ಸೋಲಿಸಿ ಕನೂಜನ್ನು ವಶಪಡಿಸಿಕೊಂಡನು. ನಂತರ ನರ್ಮದಾ ನದಿಯವರೆಗೆ ತನ್ನ ರಾಜ್ಯವನ್ನು ವಿಸ್ತರಿಸಿದನು. ರಾಷ್ಟ್ರಕೂಟರು ಹಾಗು ಮಿಹಿರಭೋಜನ ನಡುವೆ ಹಲವಾರು ಯುದ್ಧಗಳು ನಡೆದು ಅವರಿಬ್ಬರೂ ಸಾಕಷ್ಟು ಬಳಲಿದರು.
6) ಪಾಲರೊಂದಿಗೆ ಯುದ್ಧ: ಪಾಲ ದೊರೆ ದೇವಪಾಲನು ಅತ್ಯಂತ ಶಕ್ತಿಶಾಲಿ ಹಾಗು ಸಮರ್ಥ ದೊರೆಯಾಗಿದ್ದನು. ಇವನು ವಿಂದ್ಯಾಚಲ ಪೂರ್ವಗಡಿ ಭಾಗಗಳು ಹಾಗೂ ಉತ್ತರ ಗಡಿ ಪ್ರದೇಶಗಳ ರಾಜ್ಯಗಳಿಂದ ಅಧಿಕ ಪ್ರಮಾಣದ ತೆರಿಗೆಯನ್ನು ವಸೂಲಿಮಾಡಿ ದರ್ಪದಿಂದ ಮೆರೆಯುತ್ತಿದ್ದನು. ಇದರಿಂದ ಮಿಹಿರಭೋಜನು ದೇವಪಾಲನ ವಿರುದ್ಧ ಹಲವಾರು ಬಾರಿ ದಂಡಯಾತ್ರೆಯನ್ನು ಕೈಗೊಂಡನು. ಈ ದಂಡಯಾತ್ರೆಗಳು ಇಬ್ಬರಿಗೂ ಸಮಬಲದ ಗೆಲವುಗಳನ್ನು ತಂದುಕೊಟ್ಟವು.
ಮಿಹಿರಭೋಜನ ನಂತರ ಮಹೇಂದ್ರಪಾಲ ಹಾಗೂ ಎರಡನೆಯ ಭೋಜ ಕ್ರಮವಾಗಿ ಪ್ರತಿಹಾರರ ದೊರೆಗಳಾಗಿ ಅಧಿಕಾರ ಚಲಾಯಿಸಿದರು. ಇವರ ನಂತರ ಒಂದನೆಯ ಮಹಿಪಾಲ ಪ್ರತಿಹಾರರ ದೊರೆಯಾದನು.
ಒಂದನೆಯ ಮಹಿಪಾಲ:
ಎರಡನೆಯ ಭೋಜನ ನಂತರ ಒಂದನೆಯ ಮಹಿಪಾಲನು ಪ್ರತಿಹಾರರ ಅರಸನಾದನು. ಇವನು ಅತ್ಯಂತ ಶಕ್ತಿಶಾಲಿ ಅರಸನಾಗಿದ್ದು, ಕನೋಜನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡನು. ಈತ ಅಧಿಕಾರಕ್ಕೆ ಬಂದ ಹೊಸದರಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಿದನು. ಆದರೂ ಮಹಿಪಾಲ ದಕ್ಷ ಆಡಳಿತ ನಡೆಸುವ ಮೂಲಕ ಹೆಸರುವಾಸಿಯಾದನು.
1) ರಾಷ್ಟ್ರಕೂಟರೊಂದಿಗೆ ಯುದ್ಧ: ಸಿಂಹಾಸನಕ್ಕೆ ಬಂದ ಹೊಸದರಲ್ಲಿಯೇ ಒಂದನೆಯ ಮಹಿಪಾಲನಿಗೆ ರಾಷ್ಟ್ರಕೂಟರೊಂದಿಗೆ ಹೋರಾಟ ಮಾಡುವ ಸಂದರ್ಭ ಬಂದಿತು. ರಾಷ್ಟ್ರಕೂಟ ದೊರೆ ಇಂದ್ರನು ಕನೂಜನ್ನು ಸೂರೆಗೊಂಡು ಮಾಳವ ಹಾಗೂ ಉಚೈನಿಗಳನ್ನು ವಶಪಡಿಸಿಕೊಂಡನು. ಮಹಿಪಾಲ ಈ ಯುದ್ಧದಲ್ಲಿ ಸೋತು ರಣರಂಗದಿಂದ ಪಲಾಯನ ಮಾಡಿದನು. ಆದರೆ ಮಹಿಪಾಲ ಮತ್ತೊಮ್ಮೆ ರಾಷ್ಟ್ರಕೂಟರ ಅರಸ 3ನೆಯ ಇಂದ್ರನ ಕಾಲದಲ್ಲಿ ಕನೂಜನ್ನು ಮರಳಿ ಪಡೆದನು.
2) ಪಾಲರೊಂದಿಗೆ ಮಹಿಪಾಲನ ನೀತಿ: ಮಹಿಪಾಲನು ಪಾಲರೊಂದಿಗೆ ಯಾವುದೇ ರೀತಿಯಲ್ಲಿ ಯುದ್ಧಕ್ಕೆ ಹೋಗದೆ ಪಾಲರಿಗೆ ಸೋನೆ ನದಿಯ ಪೂರ್ವ ಭಾಗದಲ್ಲಿ ಪ್ರದೇಶಗಳನ್ನು ನೀಡಿದನು.
3) ಮಹಿಪಾಲನ ಇತರೆ ಯುದ್ಧಗಳು: ಮಹಿಪಾಲನು ಮೇಖಲ, ಕಳಿಂಗ, ಕೇರಳ ಹಾಗು ಕುಂತಲ ಮುಂತಾದ ಪ್ರದೇಶಗಳನ್ನು ಗೆದ್ದು ತನ್ನ ರಾಜ್ಯದಲ್ಲಿ ವಿಲೀನಗೊಳಿಸಿದನು. ಧಾರಾ ಹಾಗೂ ಉಜೈನಿಗಳನ್ನು ಗೆದ್ದನೆಂದು ಪ್ರತಾಪಗಡ ಶಾಸನ ತಿಳಿಸುತ್ತದೆ.
4) ಸಾಮ್ರಾಜ್ಯ ವಿಸ್ತರಣೆ: ಮಹಿಪಾಲನ ಸಾಮ್ರಾಜ್ಯವು ಪಶ್ಚಿಮ ಬಿಹಾರದ ಗಡಿಗಳವರೆಗೂ ವಿಸ್ತರಿಸಿದ್ದಿತು. ಇವನಿಗೆ ನಿರ್ಭಯರಾಜನೆಂಬ ಬಿರುದು ಇದ್ದಿತು. ಮಹಿಪಾಲನು ಸಾಹಿತ್ಯಾಭಿಮಾನಿಯಾಗಿದ್ದು ಸ್ವತಃ ತಾನೇ ಅನೇಕ ಕೃತಿಗಳನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿ ರಾಜಶೇಖರನು ಬಾಲರಾಮಾಯಣ, ಬಾಲಭಾರತ, ಕರ್ಪೂರಮಂಜರಿ ಹಾಗು ಕಾವ್ಯಮೀಮಾಂಸ ಎಂಬ ಕೃತಿಗಳನ್ನು ರಚಿಸಿದನು. ವಿದ್ಯಪಾಲ ಎಂಬುದು ಇವನ ಮೇರು ಕೃತಿ. ರಾಜಶೇಖರನ ಕರ್ಪೂರ ಮಂಜರಿಯು ಭಾರತೀಯ ಇತಿಹಾಸದಲ್ಲಿನ ಸಾಹಿತ್ಯದ ಅತ್ಯಂತ ಶ್ರೇಷ್ಠ ಸುಖಾಂತ ನಾಟಕವಾಗಿದೆ. ಇವನ ನಂತರ ಎರಡನೆಯ ಮಹೇಂದ್ರಪಾಲ, ದೇವಪಾಲ, ಎರಡನೆಯ ವಿನಾಯಕಪಾಲ, ಎರಡನೆಯ ಮಹಿಪಾಲ, ವಿಜಯಪಾಲ ಹಾಗೂ ರಾಜ್ಯಪಾಲ ಅಧಿಕಾರ ನಡೆಸಿದರು. ನಂತರ ಬಂದ ಚಂದೇಲರು, ಕಳಚೂರಿಗಳು ಹಾಗೂ ಚೌಹಾನರು ಗೂರ್ಜರ ಪ್ರತಿಹಾರರನ್ನು ಮೂಲೆಗುಂಪು ಮಾಡಿದರು. ಅಂದಿಗೆ ಪ್ರತಿಹಾರರ ರಾಜ್ಯ ಅವನತಿ ಹೊಂದಿತು.
ಚೌಹಾನರು (ರಾಜಧಾನಿ-ಅಜ್ಮೀರ್, ಜೈಪುರ)
ರಜಪೂತರಲ್ಲಿ ಚೌಹಾನ ಸಂತತಿಯೇ ಅತ್ಯಂತ ಪ್ರಮುಖವಾದುದು. ಇವರು ಏಳನೆಯ ಶತಮಾನದಲ್ಲಿಯೇ ಶಾಕಂಬರಿಯನ್ನು ಪಡೆದುಕೊಂಡಿದ್ದರು. ಹೀಗಾಗಿ ಚೌಹಾನ ವಂಶದಲ್ಲಿ ಶಾಕಂಭರೀಯ ಚೌಹಾನರು, ರಣಸ್ತಂಭಪುರದ ಚೌಹಾನರು, ನಾಡೋಲಿಯ ಚೌಹಾನರು, ಜಾಬಾಲಿಪುರದ ಚೌಹಾನರು, ಸತ್ಯಪುರದ ಚೌಹಾನರು ಹಾಗೂ ದೇವಾಡದ ಚೌಹಾನರು ಎಂಬ ವಿವಿಧ ಶಾಖೆಗಳು ಇದ್ದವು. ಈ ಶಾಖೆಗಳಲ್ಲಿ ಶಾಕಂಬರಿಯ ಚೌಹಾನರೇ ಪ್ರಮುಖರು. ‘ಜೈಪುರ’ ಇವರ ರಾಜಧಾನಿಯಾಗಿತ್ತು. ಇವರು ಪ್ರತಿಹಾರರ ಸಾಮಂತರಾಗಿದ್ದರು. ಚಾಂದ್ ಬರ್ದಾಯಿಯ ಪೃಥ್ವಿರಾಜರಾಸೋ, ನಯಚಂದ್ರನ ಹಮ್ಮಿರ ಕಾವ್ಯ ಹಾಗೂ ಫೆರಸ್ತನ ಬರವಣಿಗೆಗಳು ಚೌಹಾನರ ಇತಿಹಾಸದ ಮೇಲೆ ಬೆಳಕು ಚಲ್ಲುತ್ತವೆ. ಇವರ ಮೂಲದ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲವಾದರೂ ಚಾಂದ್ ಬರ್ದಾಯಿಯ ಪ್ರಕಾರ ಬ್ರಹ್ಮನು ಮೌಂಟ ಅಬುವಿನಲ್ಲಿ ಯಜ್ಞ ಕೈಗೊಂಡಾಗ ಆ ಯಜ್ಞಕುಂಡದ ಮೂಲಕ ಚೌಹಾನರ ಮೂಲ ಪುರುಷ ಹೊರಬಂದನೆಂದು ಹೇಳಲಾಗಿದೆ.
ವಸುದೇವ ಚೌಹಾನ ಸಂತತಿಯ ಸ್ಥಾಪಕ. ಇವನ ನಂತರ ಬಂದ ಇಮ್ಮಡಿ ವಿಗ್ರರಾಜ ಕ್ರಿ.ಶ 973ರ ವರೆಗೆ ಆಳ್ವಿಕೆ ನಡೆಸಿದನು. ಇವನು ಅನಿಲ್ವಾಡದ ಮೊದಲನೆಯ ಮೂಲ ರಾಜನನ್ನು ಸೋಲಿಸಿದನೆಂದು ಹೇಳಲಾಗಿದೆ. ತದನಂತರ ಕ್ರಿಶ 1105 ರಲ್ಲಿ ಮೊದಲನೆಯ ಪೃಥ್ವಿರಾಜ ಅಧಿಕಾರಕ್ಕೆ ಬಂದನು. ಇವನ ಮಗ ಅಜಯರಾಜನು ಅಜಮೀರ ನಗರವನ್ನು ನಿರ್ಮಿಸಿದನು. ಅಜಯರಾಜನ ನಂತರ ಅವನ ಮಗ ಅರ್ಣೋರಾಜ ಅಧಿಕಾರಕ್ಕೆ ಬಂದನು. ಇವನು ಕಾಂಚನದೇವಿಯನ್ನು ಮದುವೆಯಾದನು. ಇವನು ಕ್ರಿ.ಶ 1153ರವರೆಗೆ ಅಧಿಕಾರ ಚಲಾಯಿಸಿದನು.
ನಾಲ್ಕನೆಯ ವಿಗ್ರರಾಜ: (1153-1163)
ಅರ್ಣೋರಾಜನ ಮಗನಾದ ವಿಗ್ರರಾಜ ಕ್ರಿ.ಶ 1153 ರಿಂದ 1163ರ ವರೆಗೆ ಆಳ್ವಿಕೆ ನಡೆಸಿದನು. ಇವನು ಚೌಹಾನರಲ್ಲಿಯೇ ಪ್ರಸಿದ್ಧ ದೊರೆಯಾಗಿದ್ದನು. ಇವನಿಗೆ ಬಿಸಿಲದೇವ ಎಂದು ಇನ್ನೊಂದು ಹೆಸರಿದ್ದೀತು. ಇವನ ಆಡಳಿತಾವಧಿಯಲ್ಲಿ ಚೌಹಾನರ ಸಾಮ್ರಾಜ್ಯ ವಿಶಾಲವಾಗಿ ಹರಡಿತ್ತು. ಇವನು ದೆಹಲಿಯನ್ನು ತೋಮರ ರಾಜನಿಂದ ವಶಪಡಿಸಿಕೊಂಡನು. ನಂತರ ಚಾಲುಕ್ಯ ಅರಸ ಕುಮಾರ ಪಾಲನ ಮೇಲೆ ದಂಡಯಾತ್ರೆಯನ್ನು ಕೈಗೊಂಡು ತನ್ನ ತಂದೆಗೆ ಆಗಿದ್ದ ಅವಮಾನದ ಸೇಡನ್ನು ತೀರಿಸಿಕೊಂಡನು. ಈತ ಮುಸ್ಲಿಂ ರೊಂದಿಗೆ ಸಾಕಷ್ಟು ಯುದ್ಧಗಳನ್ನು ಮಾಡಿದನು. ಅವರಿಂದ ಯಮುನಾ ಹಾಗೂ ಸೆಟ್ಲಜ್ ನದಿಗಳ ನಡುವಣ ಪ್ರದೇಶಗಳನ್ನು ವಶಪಡಿಸಿಕೊಂಡನು. ಪರಮಾರರಿಂದ ಜ್ವಾಲಾಪುರವನ್ನು ಗೆದ್ದುಕೊಂಡನು. ಹೀಗೆ ವಿಶಾಲ ಸಾಮ್ರಾಜ್ಯವನ್ನು ನಿರ್ಮಿಸಿದ್ದ ನಾಲ್ಕನೆಯ ವಿಗ್ರರಾಜನಿಗೆ ʻಮಹಾರಾಜಾಧಿರಾಜ ಹಾಗೂ ಪರಮೇಶ್ವರ’ ಇಂಬ ಬಿರುದುಗಳನ್ನು ನೀಡಲಾಗಿತ್ತು. ಈತ ದಿಗ್ವಿಜಯಿಶಾಲಿಯಾಗಿದ್ದುದು ಅಲ್ಲದೆ ಉತ್ತಮ ಕವಿಯೂ ಆಗಿದ್ದನು. ಇವನು ‘ಹರಕೇಲಿ’ಎಂಬ ನಾಟಕವನ್ನು ರಚಿಸಿದ್ದಾನೆ. ಇವನ ಆಸ್ಥಾನದ ಕವಿಯಾಗಿದ್ದ ಸೋಮದೇವ ʻಲಲಿತಾವಿಗ್ರಹ’ ಎಂಬ ನಾಟಕವನ್ನು ಬರೆದಿದ್ದಾನೆ. ಈ ಮೇಲಿನ ಎರಡು ನಾಟಕಗಳ ತುಣುಕುಗಳನ್ನು ಅಜ್ಜರನ ಒಂದು ಪ್ರಧಾನವಾದ ಮಸೀದಿಯಲ್ಲಿನ ಹಾಸುಗಲ್ಲುಗಳ ಮೇಲೆ ಕೆತ್ತಲಾಗಿದೆ. ವಿಗ್ರರಾಜನು ಅಣ್ಣೀರಿನಲ್ಲಿ ಒಂದು ಶಾಲೆಯೊಂದನ್ನು ಸ್ಥಾಪಿಸಿದನು. ವಿಗ್ರರಾಜನ ನಂತರ ಅವನ ಸೋದರ ಸೋಮೇಶ್ವರನ ಮಗ ಮೂರನೆಯ ಪೃಥ್ವಿರಾಜ ಸಿಂಹಾಸನಕ್ಕೆ ಬಂದನು.
ಮಾಳವದ ಪರಮಾರರು: (ರಾಜಧಾನಿ ಧಾರಾ)
ಗೂರ್ಜರ ಪ್ರತಿಹಾರರಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡ ಪರಮಾರರು ಅಧಿಕಾರಕ್ಕೆ ಬಂದರು. ಇವರು ರಾಷ್ಟ್ರಕೂಟ ಅರಸರ ಸಾಮಂತರಾಗಿದ್ದರು. ರಜಪೂತಾನದ ಸಿರೋಹಿ ರಾಜ್ಯದ ಮೌಂಟ್ ಅಬು ಪರಮಾರರ ಮೂಲ ಸ್ಥಳ. ಇವರ ಮೊದಲ ರಾಜಧಾನಿ ಉಜೈನಿ ಆಗಿದ್ದು, ನಂತರ ಧಾರಾ ನಗರವನ್ನು ಎರಡನೆಯ ರಾಜಧಾನಿಯನ್ನಾಗಿ ಮಾಡಿಕೊಂಡರು. ಉಪೇಂದ್ರ ಪರಮಾರ ಮನೆತನದ ಸ್ಥಾಪಕ. ಇವನು ಮೌಂಟ್ ಅಬು ಬಳಿಯ ಚಂದ್ರವತಿಯ ಕಡೆಯಿಂದ ಬಂದವನೆಂದು ಹೇಳಲಾಗಿದೆ. ಇವನ ನಂತರ ಒಂದನೆಯ ವೈರಸಿಂಹ, ಸೀಯಕ, ಎರಡನೆಯ ವೈರಸಿಂಹ, ಎರಡನೆಯ ಸೀಯಕ ಕ್ರಮವಾಗಿ ಮಾಳವವನ್ನು ಆಳಿದರು.
ವಾಕ್ಷತಿ ಮುಂಜ;
ಇವನು ಪರಮಾರರ ಏಳನೆಯ ದೊರೆ. ಈತ ಕ್ರಿ.ಶ.993ರಲ್ಲಿ ಅಧಿಕಾರಕ್ಕೆ ಬಂದನು. ಇವನಿಗೆ ವಾಕ್ರತಿ, ಉತ್ಸಲ, ಅಮೋದವಂಶ ಎಂಬ ಬಿರುದುಗಳಿದ್ದವು.
ಇವನ ಸಾಮ್ರಾಜ್ಯ ಪೂರ್ವದ ಬಿಲ್ಲಾದಿಂದ ಪಶ್ಚಿಮದ ಸಬರಮತಿವರೆಗೆ ವಿಸ್ತರಿಸಿದ್ದಿತು. ವಾಕೃತಿ ಅನೇಕ ಯುದ್ಧಗಳನ್ನು ಮಾಡಿದ್ದಾನೆ. ಅವುಗಳೆಂದರೆ,
1) ಕಲಚೂರಿಗಳ ಮೇಲೆ ದಾಳಿ: ಕಲಚೂರಿ ಚಕ್ರವರ್ತಿ ಎರಡನೆಯ ಯುವರಾಜನು ವಾಕ್ರತಿ ಮುಂಜಿನಿಂದ ಸೋತು ತ್ರಿಪುರಿಯನ್ನು ಆತನಿಗೆ ನೀಡಿದನು.
2) ಗುಜರಾತಿನ ಚಾಲುಕ್ಯರ ವಿರುದ್ಧ ದಂಡಯಾತ್ರೆ: ವಾಕೃತಿ ಮುಂಜ ಗುಜರಾತಿನ ಚಾಲುಕ್ಯ ಅರಸನಾದ ಒಂದನೆಯ ಮೂಲರಾಜನನ್ನು ಸೋಲಿಸಿ ಅವನನ್ನು ಮಾರ್ವಾಟದ ಮರುಭೂಮಿಯವರೆಗೆ ಅಟ್ಟಿಸಿಕೊಂಡು ಹೋದನು.
3) ಚೋಳರ ವಿರುದ್ಧ ವಿಜಯ: ಮುಂಜನು ಚೋಳರ ವಿರುದ್ಧ ಹಲವಾರು ಬಾರಿ ವಿಜಯಸಾಧಿಸಿದ್ದನೆಂದು ಅನೇಕ ಇತಿಹಾಸಕಾರರು ಹೇಳಿದ್ದಾರೆ.
4) ಚಾಹಮಾನರ ವಿರುದ್ಧ ಹೋರಾಟ: ವಾಕ್ಷತಿ ಮುಂಜನು ಚಾಹಮಾನರ ಬಲಿರಾಜನನ್ನು ಸೋಲಿಸಿ ಮೌಂಟ ಅಬು ಹಾಗು ಜೋದಪುರ ಪ್ರದೇಶವನ್ನು ವಶಪಡಿಸಿಕೊಂಡನೆಂದು ಕಂತೇರಿ ಶಾಸನದಲ್ಲಿ ತಿಳಿಸಲಾಗಿದೆ. ಮೌಂಟ ಅಬುವನ್ನು ಗೆದ್ದ ನಂತರ ಮುಂಜ ತನ್ನ ಮಗನಾದ ಅರಣ್ಯ ರಾಜನನ್ನು ಮೌಂಟ ಅಬುವಿನ ಪ್ರಾಂತಾಧಿಕಾರಿಯನ್ನಾಗಿ ನೇಮಿಸಿದನು.
5) ಗುಹಿಲರ ಮೇಲಿನ ದಾಳಿ: ಮುಂಜನು ಗುಹಿಲರ ಅರಸನಾದ ಶಕ್ತಿ ಕುಮಾರನ ವಿರುದ್ಧ ದಂಡಯಾತ್ರೆಯನ್ನು ಕೈಗೊಂಡನು. ಈ ಯುದ್ಧದಲ್ಲಿ ಶಕ್ತಿಕುಮಾರ ಸೋತು ಮುಂಜನಿಗೆ ಸಾಕಷ್ಟು ಪ್ರಮಾಣದಲ್ಲಿ ಸಂಪತ್ತನ್ನು ನೀಡಿದನು.
6) ಹೂಣರ ಮೇಲೆ ದಾಳಿ: ಮುಂಜನು ಉತ್ತರ ಮಾಳವದಲ್ಲಿ ಹೂಣರನ್ನು ಸೋಲಿಸಿದನು.
7) ಲಾಟರ ವಿರುದ್ಧ ದಂಡಯಾತ್ರೆ: ತಪತಿ ನದಿಯ ದಡದಲ್ಲಿದ್ದ ಲಾಟ ದೇಶವು ಕಲ್ಯಾಣಿ ಚಾಲುಕ್ಯರ ಅರಸನಾದ ಎರಡನೆಯ ತೈಲಪನ ಆಳ್ವಿಕೆಗೆ ಒಳಪಟ್ಟಿತು. ಆಗ ಮಂಜನು ಲಾಟದ ಮೇಲೆ ದಾಳಿ ಮಾಡಿ ಎರಡನೆಯ ತೈಲಪನ ದಂಡನಾಯಕನಾದ ಬಾರಪ್ಪನನ್ನು ಸೋಲಿಸಿ ಲಾಟನ್ನು ವಶಪಡಿಸಿಕೊಂಡನು.
8) ಕರ್ನಾಟಕದ ಚಾಲುಕ್ಯರ ವಿರುದ್ಧ ಹೋರಾಟ: ಎರಡನೆಯ ತೈಲಪನ ವಿರುದ್ಧ ಮುಂಜ ಆರು ಬಾರಿ ದಂಡಯಾತ್ರೆಯನ್ನು ಕೈಗೊಂಡನಾದರೂ ಅವನನ್ನು ಸಂಪೂರ್ಣವಾಗಿ ಸೋಲಿಸಲು ಅವನಿಂದ ಸಾಧ್ಯವಾಗಿರಲಿಲ್ಲ. ಇದರಿಂದ ವ್ಯಾಕುಲನಾದ ಮುಂಜ ಏಳನೆಯ ಬಾರಿಗೆ ಚಾಲುಕ್ಯ ದೊರೆ ತೈಲಪನ ವಿರುದ್ಧ ದಂಡಯಾತ್ರೆಗೆ ಸಿದ್ಧತೆಯನ್ನು ಮಾಡಿಕೊಂಡನು. ಆಗ ಮುಂಜನ ದಂಡನಾಯಕನಾದ ರುದ್ರಾದಿತ್ಯ ಮುಂದೆ ಆಗಬಹುದಾಗಿದ್ದ ಅಪಾಯವನ್ನು ತನ್ನ ಒಡೆಯನಿಗೆ ತಿಳಿಸಿದನು. ಆದರೂ ರುದ್ರಾದಿತ್ಯನ ಮಾತನ್ನು ತಿರಸ್ಕರಿಸಿ ಗೋದಾವರಿ ನದಿಯನ್ನು ದಾಟಿ ಚಾಲುಕ್ಯರ ವಿರುದ್ಧ ಧಾಳಿ ಮಾಡಿದನು. ಆದರೆ ತೈಲಪನ ಸೈನಿಕರು ಮುಂಜನನ್ನು ಸುತ್ತುವರೆದು ಸೆರೆಹಿಡಿದರು. ಸೆರೆಸಿಕ್ಕ ಮುಂಜನನ್ನು ತೈಲಪ ಬಂಧನದಲ್ಲಿ ಇರಿಸಿದನು. ಕಾರಾಗೃಹದಲ್ಲಿ ಇದ್ದಾಗ ತೈಲಪನ ತಂಗಿ ಮುಂಜನಲ್ಲಿ ಅನುರಕ್ತಳಾದಳು. ಈ ವಿಷಯ ಗೊತ್ತಾಗುತ್ತಲೇ ತೈಲಪ ಮುಂಜನನ್ನು ಹಿಡಿದು ರುಂಡವನ್ನು ತುಂಡರಿಸಿದನು. ಹೀಗೆ ಮಹಾನ್ ಪರಾಕ್ರಮಿಯಾಗಿದ್ದ ಮುಂಜನ ಬದುಕು ದುರಂತದಲ್ಲಿ ಅಂತ್ಯವಾಯಿತು.
ಮುಂಜನು ಕೇವಲ ದಿಗ್ವಿಜಯಿಯಾಗಿರದೆ ಕಲಾಪೋಷಕನೂ ಆಗಿದ್ದನು. ಇವನು ಅನೇಕ ಕವಿಗಳಿಗೆ ಆಶ್ರಯದಾತನಾಗಿದ್ದನು. ಪದ್ಮಗುಪ್ತನೆಂಬ ಕವಿ ‘ಸಾಹಸಾಂಕಚರಿತ’ ಎಂಬ ಕೃತಿಯನ್ನು ರಚಿಸಿದನು. ಧನಂಜಯ ‘ದಶರೂಪಕ’ವನ್ನು ಬರೆದನು. ಭಟ್ಟಹಾಲಾಯುಧ, ಅಮಿತಗತಿ, ಶುಭನ ಎಂಬುವವರೂ ಸಹ ಉತ್ತಮ ಕವಿಗಳಾಗಿದ್ದರು. ಮುಂಜನು ತನ್ನ ಅಧಿಕಾರಾವಧಿಯಲ್ಲಿ ಅನೇಕ ಕೆರೆಗಳನ್ನು ಹಾಗೂ ದೇವಾಲಯಗಳನ್ನು ನಿರ್ಮಿಸಿದನು.
ಉಪಸಂಹಾರ
ಈ ರೀತಿಯಾಗಿ ಚೌಹಾನರು, ಪರಮಾರರು ಮತ್ತು ಪ್ರತಿಹಾರರು ಎಂಬ ವಂಶಗಳ ಮೂಲಕ ರಾಜಪೂತರು ಸೈನಿಕ ಶಕ್ತಿ, ಸಾಂಸ್ಕೃತಿಕ ಪೋಷಣೆ ಮತ್ತು ಪ್ರಾದೇಶಿಕ ಆಡಳಿತದ ದೀರ್ಘಕಾಲಿಕ ಪರಂಪರೆಯನ್ನು ಭಾರತೀಯ ಇತಿಹಾಸದಲ್ಲಿ ಬಿಟ್ಟುಹೋಗಿದ್ದಾರೆ.