ಭೂಮಂಡಲದಲ್ಲಿರುವ ಸಮಸ್ತ ಜೀವ ಜಂತುಗಳು ಪರಿಸರಕ್ಕೆ ಹೊಂದಿಕೊಂಡು ಬದುಕುತ್ತಿವೆ. ಆದರೆ ಮಾನವ ಮಾತ್ರ ಇದಕ್ಕೆ ವಿರುದ್ಧವಾಗಿದ್ದಾನೆ. ಜೀವ ವೈವಿಧ್ಯತೆಗಳು ಪರಿಸರಕ್ಕೆ ಯಾವುದೇ ಹಾನಿಯನ್ನು ಮಾಡದೆ ಕಾಲಮಾನಕ್ಕೆ ಅನುಗುಣವಾಗಿ ಬದುಕು ಸಾಗಿಸಿಕೊಂಡು ಹೋಗುತ್ತವೆ. ಆದರೆ ಮನುಷ್ಯ ಮಾತ್ರ ಪರಿಸರಕ್ಕೆ ಯಾವಾಗಲೂ ಧಕ್ಕೆಯನ್ನು ತರುತ್ತಲೇ ಇರುತ್ತಾನೆ. ಪರಿಸರದ ಮೇಲೆ ನಿರಂತರವಾಗಿ ದೌರ್ಜನ್ಯ ಎಸೆಗುತ್ತಲೇ ಬಂದಿದ್ದಾನೆ. ಅಭಿವೃದ್ಧಿಯ ನೆಪದಲ್ಲಿ ಮಾಡಬಾರದ ಪಾಪಗಳನ್ನು ಮಾಡುತ್ತಿದ್ದಾನೆ. ಜೀವ ಜಂತುಗಳ ಪ್ರಾಣಕ್ಕೆ ಕುತ್ತು ತರುತ್ತಿದ್ದಾನೆ. ಪರಿಸರದ ಸಮತೋಲನವನ್ನು ತಪ್ಪಿಸುತ್ತಿದ್ದಾನೆ. ಇತರೆ ಜೀವಿಗಳ ಪ್ರಾಣಕ್ಕೆ ಸಂಚಕಾರ ತರುತ್ತಾ ತನ್ನ ಪ್ರಾಣವನ್ನು ಕೊನೆಗೊಳಿಸಲೆತ್ನಿಸುತ್ತಾನೆ. ಭವಿಷ್ಯದಲ್ಲಿ ಭರವಸೆ ಮೂಡಿಸುವ ಬದಲು ನಿರಾಶೆ ಮೂಡಿಸುತ್ತಿದ್ದಾನೆ. ಭೂಮಿಗೆ ತಾನೇ ಒಡೆಯನೆಂದು ಬಿಂಬಿಸುತ್ತ ಮೆರೆಯುತ್ತಿದ್ದಾನೆ. ಮಾನವೀಯತೆಯನ್ನು ಮರೆಯುತ್ತಿದ್ದಾನೆ. ತಾನು ಬದುಕಿದರೆ ಸಾಕು ಉಳಿದವರೆಂದೇನು ಆಗಬೇಕಾಗಿದೆ ಎಂಬ ನಿರ್ಲಿಪ್ತ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾನೆ. ನೀತಿ, ನಿಯಮ, ಸಂಸ್ಕಾರ, ಸಂಪ್ರದಾಯಗಳನ್ನು ಕಾಲ ಕಸವನ್ನಾಗಿ ಮಾಡಿಕೊಂಡಿದ್ದಾನೆ. ಕಾಡುಗಳನ್ನು ನಿರ್ದಾಕ್ಷಿಣ್ಯವಾಗಿ ಕತ್ತರಿಸುತ್ತಿದ್ದಾನೆ. ಪ್ರಾಣಿಗಳನ್ನು ಕ್ರೂರವಾಗಿ ಹಿಂಸಿಸುತ್ತಿದ್ದಾನೆ. ನೀರನ್ನು ಚರಂಡಿ ಆಗಿಸಿದ್ದಾನೆ. ಭೂಮಿಯ ಮಣ್ಣನ್ನು ಮಲಿನಗೊಳಿಸಿದ್ದಾನೆ. ವಾಯುವನ್ನು ಇನ್ನಿಲ್ಲದಂತೆ ಕುಲಗೆಡಿಸುತ್ತಿದ್ದಾನೆ. ಶಬ್ದ ಮಾಲಿನ್ಯವಂತು ಹೇಳುತಿರದು. ಲಕ್ಷಾಂತರ ಜನರು ಶಬ್ದ ಮಾಲಿನ್ಯದಿಂದ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ತ್ಯಾಜ್ಯಗಳ ಸಂಗ್ರಹಕ್ಕೆ ಪಾರವೇ ಇಲ್ಲ. ಎಲ್ಲೇ ಹೋದರು ಗಬ್ಬು ವಾಸನೆ ಮೂಗಿಗೆ ಅಪ್ಪಳಿಸುತ್ತಿದೆ.  ಹೀಗಾಗಿ ಮಾನವನು ಪರಿಸರದ ಮಾಲಿನ್ಯವನ್ನು ಅರಿತು ಬದುಕಲು ಹಲವು ನೀತಿಯನ್ನು ಅನುಸರಿಸಬೇಕು. ಹಲವು ಸಮಸ್ಯೆಗಳಿಗೆ ತಾನೇ ಪರಿಹಾರ ಕಂಡುಕೊಳ್ಳಬೇಕು. ಬದುಕು ಮತ್ತು ಬದುಕಲು ಬಿಡು ಎಂಬ ನೀತಿಯನ್ನು ಪಾಲಿಸಬೇಕು. ಕೆಲವು ನೀತಿಯುತ ನಿರ್ಧಾರಗಳನ್ನು ಮಾನವ ಮಾಡಬೇಕು. ಅವುಗಳು  ಈ ಕೆಳಗಿನಂತಿವೆ.

1. ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಕಾದಿರಿಸುವುದು:

ನೈಸರ್ಗಿಕ ಸಂಪನ್ಮೂಲಗಳನ್ನು ಕೇವಲ ನಾವು ಮಾತ್ರ ಉಪಯೋಗಿಸಿದರೆ ಸಾಲದು. ಅದು ಮುಂದಿನ ಪೀಳಿಗೆಗೂ ಬೇಕು. ಹೀಗಿರುವಾಗ ಈ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡುವ ಯಾವ ಪ್ರಯತ್ನವನ್ನು ಮಾಡದೆ ಕೇವಲ ತಮ್ಮ ಸ್ವಾರ್ಥಕ್ಕಾಗಿ ಬಳಸುತ್ತಿರುವುದು ನೈತಿಕವಾಗಿ ಒಳ್ಳೆಯದಲ್ಲ. ಪೆಟ್ರೋಲ್, ಕಲ್ಲಿದ್ದಲು, ಅರಣ್ಯ, ವನ್ಯಜೀವಿಗಳು ಮುಂತಾದವುಗಳನ್ನು ನಾವೇ ಹಾಳು ಮಾಡಿದರೆ ಬರಲಿರುವ ಮುಂದಿನ ತಲೆಮಾರುಗಳ ಗತಿ ಏನು. ನೆಲ, ಜಲ, ವಾಯು, ಶಬ್ದ ಮಾಲಿನ್ಯಗಳನ್ನು ನಾವೇ ಮಾಡಿ ಹೋದರೆ ನಾವೇ ಹಲವು ರೋಗಗಳನ್ನು ನಮ್ಮ ಮುಂದಿನವರಿಗೆ ಬಿಟ್ಟು ಹೋದಂತೆಲ್ಲವೆ. ಹೀಗೆ ಮಾಡುವುದು ನೈತಿಕವಾಗಿ ಎಷ್ಟು ಸರಿ. ಅದಕ್ಕಾಗಿ ನಾವು ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಕಾಪಾಡಿ ಅದನ್ನು ಮುಂದಿನವರಿಗೆ ಹಸ್ತಾಂತರಸಬೇಕಲ್ಲವೇ. ಅದು ಮನುಷ್ಯ ಧರ್ಮವಾಗಿದೆ.

2. ಇತರೆ ಜೀವ ವೈವಿಧ್ಯತೆಗಳಿಗೆ ಬದುಕುವ ಹಕ್ಕಿದೆ:

ಮಾನವನ ಹಾಗೆ ಭೂಮಿಯ ಮೇಲೆ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳು ಸಹ ಬದುಕುವ ಹಕ್ಕನ್ನು ಪಡೆದಿವೆ ಎಂಬುದು ಪರಿಸರದ ನೈತಿಕ ನಿಯಮವಾಗಿದೆ. ಈ ಜೀವಿಗಳ ಬದುಕನ್ನು ಕಿತ್ತುಕೊಳ್ಳುವುದು ಹಾಗೂ ಅವುಗಳ ಜೀವಕ್ಕೆ ಹಾನಿಯನ್ನುಂಟು ಮಾಡಿ ವಿನಾಶಕ್ಕೆ ಕಾರಣವಾಗುವ ಮನುಷ್ಯರಿಗೆ ಯಾವುದೇ ಹಕ್ಕಿಲ್ಲ. ನಾವು ಭೂಮಿಯ ಒಡೆಯರು ಇತರರೆಲ್ಲ ನಾಶವಾಗಬಲ್ಲ ವಸ್ತುಗಳು ಎಂಬ ಅಹಂಕಾರವನ್ನು ಮಾನವ ತೊಡೆದು ಹಾಕಬೇಕು. ನಾವು ಬದುಕೋಣ ಇತರರನ್ನು ಬದುಕಲು ಬಿಡೋಣ ಎಂಬ ತತ್ವವನ್ನು ಮಾನವ ತನ್ನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

 3. ನೈಸರ್ಗಿಕ ಸಂಪನ್ಮೂಲಗಳ ಬಳಕೆ ಹಾಗೂ ಲಭ್ಯತೆ:

ಇಂದು ನೈಸರ್ಗಿಕ ಲಭ್ಯತೆ ಹಾಗೂ ಬಳಕೆಯಲ್ಲಿ ಸಾಮಾನ್ಯವಾಗಿ ತಾರತಮ್ಯ ಕಂಡುಬರುತ್ತದೆ. ಉದಾ: ಅಭಿವೃದ್ಧಿ ಹೊಂದಿದ ದೇಶಗಳು ಬಹುಪಾಲು ಸಂಪನ್ಮೂಲಗಳನ್ನು ಖಾಲಿ ಮಾಡಿ ಅಭಿವೃದ್ಧಿ ಹೊಂದುತ್ತಿರುವ ಬಡದೇಶಗಳ ಸಂಪನ್ಮೂಲಗಳ ಮೇಲೆ ಕಣ್ಣು ಹಾಕಿವೆ. ಇದು ಬಡ ರಾಷ್ಟ್ರಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳುವ ಉಪಾಯವಾಗಿದೆ. ಒಂದು ದೇಶದ ಆರ್ಥಿಕವಾಗಿ ಮುಂದುವರೆದ ನಗರಗಳು ಮತ್ತು ಅಲ್ಲಿನ ನಿವಾಸಿಗಳು ಗ್ರಾಮೀಣ ಪ್ರದೇಶದ ಜನರಿಗಿಂತ ಹೆಚ್ಚು ಸಂಪನ್ಮೂಲಗಳನ್ನು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ನಗರವಾಸಿಗಳ ಅಮಾನವೀಯ ಚಟುವಟಿಕೆಗಳ ದುಷ್ಪರಿಣಾಮಗಳನ್ನು ಗ್ರಾಮೀಣ ಜನರು ಅನುಭವಿಸಬೇಕಾಗುತ್ತದೆ.

ನೈಸರ್ಗಿಕ ಸಂಪನ್ಮೂಲಗಳ ನಾಶದಿಂದಾಗಿ ಪುರುಷರಿಗಿಂತ ಸ್ತ್ರೀಯರೇ ಹೆಚ್ಚು ನೋವು ಅನುಭವಿಸುತ್ತಾರೆ. ಉದಾ: ಕಾಡು ನಾಶವಾದರೆ ಹೆಣ್ಣು ಮಕ್ಕಳಿಗೆ ಉರುವಲು ಸೌದೆ ಇರಲಾರವು. ಅವರು ದನ, ಕರುಗಳಿಗೆ ಮೇವು ಸಂಗ್ರಹಿಸುವುದು ದುಸ್ತರವಾಗುತ್ತದೆ. ನೀರು ಖಾಲಿಯಾದರೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ನೀರು ತರಬೇಕು.

4. ಭಾರತದ ಸುರಕ್ಷತಾ ಸಂಪ್ರದಾಯದ ಮುಂದುವರಿಕೆ:

ಭಾರತವು ಶ್ರೀಮಂತ ಸಂಪನ್ಮೂಲಗಳಿಂದ ಕೂಡಿದ ಪ್ರಬಲ ರಾಷ್ಟ್ರವಾಗಿದೆ. ಇದು ಬಹು ಸಂಸ್ಕೃತಿಯ ದೇಶವಾಗಿದೆ. ಈ ಸಂಸ್ಕೃತಿಯು ಭಾರತದ ನದಿಗಳು, ಕೆರೆ, ತೊರೆ, ಸರೋವರ, ಸಾಗರ, ಗುಡ್ಡ, ಬೆಟ್ಟ, ಪರ್ವತಗಳು, ಅರಣ್ಯ ಹಾಗೂ ಪ್ರಾಣಿಗಳನ್ನು ದೇವರೆಂದು ಭಾವಿಸಿ ಅವುಗಳನ್ನು ಕಾಪಾಡುವ ಮೂಲಕ ನೈಸರ್ಗಿಕ ಸೃಷ್ಟಿಗೆ ಧಾರ್ಮಿಕ ಸ್ಥಾನಮಾನ ನೀಡುತ್ತಾ ಬಂದಿದೆ. ಪ್ರಾಚೀನ ಕಾಲದ ಎಲ್ಲಾ ದೇವಾಲಯಗಳ ಮುಂದೆ ನೀರಿನ ಪುಷ್ಕರಣಿಗಳು ನಿರ್ಮಾಣವಾಗಿರುವುದನ್ನು ನೋಡಿದರೆ ನಿಸರ್ಗವನ್ನು ದೇವರ ಸ್ಥಾನದಲ್ಲಿಟ್ಟ ಪ್ರಪಂಚದ ಒಂದೇ ಒಂದು ದೇಶವೆಂದರೆ ಅದು ಭಾರತ ಎಂದು ಹೇಳಬಹುದು. ನದಿ ಪರ್ವತಗಳನ್ನು ದೇವರ ಹೆಸರಿನಿಂದ ಕರೆಯಲಾಗಿದೆ. ಆಲದ ಮರ, ಅಶ್ವತ ಮರ ಹಾಗೂ ತುಳಸಿ ಸಸ್ಯಗಳನ್ನು ದೈವಿ ಮಟ್ಟಕ್ಕೆ ಏರಿಸುವುದು ನಮ್ಮ ಸಂಸ್ಕೃತಿಯ ಪ್ರತೀಕ.

 5. ಪರಿಸರಸ್ನೇಹಿ ಜೀವನ ಶೈಲಿ:

ಇಂದಿನ ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಪರಿಸರದ ಬಗ್ಗೆ ಗೌರವವಾಗಲಿ, ಕಾಳಜಿಯಾಗಲಿ ಇಲ್ಲವೆಂದು ಹೇಳಬಹುದು. ಹಾಗಾಗಿ ಅವರನ್ನು ಪರಿಸರದ ಕಡೆಗೆ ಸೆಳೆಯುವಂತೆ ಮಾಡಿ ಅವರಲ್ಲಿ ನಿಸರ್ಗ ಪ್ರೇಮವನ್ನು ಬೆಳೆಸಬೇಕಾದದ್ದು ದೊಡ್ಡವರ ಕರ್ತವ್ಯವಾಗಿದೆ. ಪರಿಸರವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಅದನ್ನು ಅನುಭವಿಸುವಂತೆ ಮಾಡಬೇಕೆಂದು ವಿದ್ಯಾರ್ಥಿಗಳು ಅಥವಾ ಯುವಕರಿಗೆ ತಿಳಿ ಹೇಳಬೇಕು.

6. ಭೂಮಿಯ ಬಗ್ಗೆ ಪ್ರತಿಯೊಬ್ಬ ಮಾನವನ ಪವಿತ್ರವಾದ ಭಾವನೆಯನ್ನು ಬೆಳೆಸಿಕೊಳ್ಳಬೇಕು.

7. ಪರಿಸರದ ಯಾವುದೋ ಒಂದು ಭಾಗವನ್ನು ಅನುಭವಿಸಿ ಹಾಗೆಯೇ ಬಿಟ್ಟು ಹೋಗದೆ ಅದನ್ನು ಮೊದಲಿನ ಸ್ಥಿತಿಗೆ ತಂದು ನಿಲ್ಲಿಸಬೇಕಾದದ್ದು ಪ್ರತಿಯೊಬ್ಬರ ಕರ್ತವ್ಯವಾಗಬೇಕು.

8. ಸಮಪಾಲು, ಸಮಾನ ಹಂಚಿಕೆ ಹಾಗೂ ಸಮಬಾಳು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು.

9. ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸುವುದು ಸಹ ನೈತಿಕ ಜವಾಬ್ದಾರಿಯಾಗಿದೆ.

ಉಪಸಂಹಾರ

ಪರಿಸರವನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಮಾನವನ ನೈತಿಕ ಹೊಣೆಗಾರಿಕೆಯಾಗಿದೆ. ನಿಸರ್ಗದೊಂದಿಗೆ ಸಹಜವಾಗಿ ಬದುಕುವ ಸಂಸ್ಕೃತಿಯನ್ನು ನಾವು ಪುನರುಜ್ಜೀವನಗೊಳಿಸಬೇಕು. ಇತರೆ ಜೀವಿಗಳಿಗೆ ಬದುಕುವ ಹಕ್ಕನ್ನು ಗೌರವಿಸುವ ಮನೋಭಾವ ಬೆಳೆಸಬೇಕು. ಇಂದು ನಾವು ತೆಗೆದುಕೊಳ್ಳುವ ನಿರ್ಧಾರಗಳೇ ನಾಳೆಯ ಭವಿಷ್ಯವನ್ನು ರೂಪಿಸುತ್ತವೆ. ಹೀಗಾಗಿ ಪರಿಸರ ಸ್ನೇಹಿ ಬದುಕೇ ಶಾಶ್ವತ ಬದುಕು ಎಂಬುದನ್ನು ಅರಿಯಬೇಕು.