ಜನಸಂಖ್ಯೆ ಹೆಚ್ಚಿದಂತೆ ದೇಶದ ಮೇಲೆ ಅದರ ಪರಿಣಾಮಗಳು ಕೂಡ ಹೆಚ್ಚಾಗುತ್ತವೆ. ಆಹಾರ, ಉದ್ಯೋಗ, ಶಿಕ್ಷಣ ಹಾಗೂ ಆರೋಗ್ಯದಂತಹ ಮೂಲಭೂತ ಅಗತ್ಯಗಳ ಮೇಲೆ ಜನಸಂಖ್ಯಾ ಬೆಳವಣಿಗೆ ನೇರ ಪರಿಣಾಮ ಬೀರುತ್ತದೆ. ಈ ಬ್ಲಾಗ್‌ನಲ್ಲಿ ಜನಸಂಖ್ಯಾ ಏರಿಕೆಯ ವಿವಿಧ ದುಷ್ಪರಿಣಾಮಗಳನ್ನು ವಿವರಿಸಲಾಗಿದೆ.

1.  ತಲಾ ಆದಾಯ ಕಡಿಮೆ:  ಭಾರತವು ಕೃಷಿ ಪ್ರಧಾನವಾದ ದೇಶ. ಶೇ 80% ಜನ ಕೃಷಿಯನ್ನೇ  ಅವಲಂಬಿಸಿ ಬದುಕುತ್ತಿದ್ದಾರೆ. ಜನಸಂಖ್ಯೆ ಏರಿದಂತೆ ಕೃಷಿ ಭೂಮಿಯಲ್ಲಿ ಭಾಗಗಳಾಗುತ್ತದೆ. ಹೀಗೆ ಆದಾಗ ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗುತ್ತದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾದರೆ ತಲಾ ಆದಾಯವೂ ಇಳಿಮುಖವಾಗುತ್ತದೆ. ಯಾವಾಗ ತಲಾ ಆದಾಯವು ಇಳಿಕೆಯಾಗುವುದೋ ರಾಷ್ಟ್ರೀಯ ಆದಾಯವೂ ಸಹ ಕುಸಿಯುತ್ತದೆ.

2. ಬಡತನ:  ಜನಸಂಖ್ಯಾ ಏರಿಕೆ ಮತ್ತು ಬಡತನ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚುತ್ತಿರುವ ಜನಸಂಖ್ಯೆ ಬಡತನಕ್ಕೆ ಕಾರಣವಾದರೆ, ಬಡತನವು ಅಧಿಕ ಜನಸಂಖ್ಯೆಗೆ ಕಾರಣವಾಗುತ್ತದೆ. ಜನಸಂಖ್ಯೆ ಹೆಚ್ಚಿದಂತೆ ಆಹಾರ, ವಸತಿ, ಬಟ್ಟೆ ಪೌಷ್ಟಿಕ ಆಹಾರದಲ್ಲಿಯೂ ಕೊರತೆ ಎದ್ದುಕಾಣುತ್ತದೆ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದಂತೆ ಚಿಕ್ಕ ಮನೆಯಲ್ಲಿ ಗಾಳಿ, ಬೆಳಕಿನ ಸೌಲಭ್ಯಗಳಿಲ್ಲದೆ ಹಲವಾರು ರೋಗಗಳಿಗೆ ಗುರಿಯಾಗಬೇಕಾಗುವುದು. ಬಡತನದಿಂದ ಅರೆಹೊಟ್ಟೆ ಉಂಡು, ಹರುಕು ಬಟ್ಟೆಗಳನ್ನು ಹಾಕಿ, ಮರುಕು ಮನೆಯಲ್ಲಿ ವಾಸಿಸುವ ಪರಿಸ್ಥಿತಿ ಬರುತ್ತದೆ.

3. ನಿರುದ್ಯೋಗ :  ಮಿತಿಮೀರಿದ ಜನಸಂಖ್ಯೆ ನಿರುದ್ಯೋಗಕ್ಕೆ ಕಾರಣವಾಗುತ್ತದೆ. ಕೃಷಿಯ ಯಾಂತ್ರೀಕರಣ ಫಲವಾಗಿ ಸಾವಿರಾರು ಗ್ರಾಮೀಣರು ನಿರುದ್ಯೋಗಿಗಳಾಗಿದ್ದಾರೆ. ಕೈಗಾರಿಕಾ ಕ್ಷೇತ್ರದಲ್ಲಿನ ಹೊಸತನ, ವಿಜ್ಞಾನ ತಂತ್ರಜ್ಞಾನ, ಗಣಕ ಯಂತ್ರದ ಉಪಯೋಗ, ಬುಲ್‌ಡೋಜರ್‌ ಬಳಕೆ ಮೊದಲಾದ ವಿಶೇಷ ಸಾಧನೆಗಳಿಂದ ನಿರುದ್ಯೋಗ ಸಮಸ್ಯೆ ಬೃಹದಾಕಾರವಾಗಿ ಹೆಚ್ಚುತ್ತಿದೆ.

4. ಮಾನವ ಶಕ್ತಿಯ ಬಳಕೆ:  ಆರ್ಥಿಕವಾಗಿ ಹಿಂದುಳಿಯುವಿಕೆ, ಮಂದಗತಿಯ ವ್ಯಾಪಾರ ಅಭಿವೃದ್ಧಿ ಮತ್ತು ವಿಸ್ತರಣೆ ಚಟುವಟಿಕೆಗಳಿಂದ ಮಾನವ ಶಕ್ತಿಯ ಬಳಕೆ ಕಡಿಮೆಯಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಶಕ್ತಿಯ ಬಳಕೆಯ ಅಭಾವದಿಂದಾಗಿ ನಿರುದ್ಯೋಗ, ಬಡತನ ಹಾಗೂ ಕಡಿಮೆ ಉತ್ಪಾದನೆಯಂತಹ ಸಮಸ್ಯೆಗಳು ಕಾಡುತ್ತಿವೆ.

5. ಕಡಿಮೆ ಉತ್ಪಾದನೆ ಖರ್ಚು ಹೆಚ್ಚು:  ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಆಹಾರ ಉತ್ಪಾದನೆ ಕಡಿಮೆಯಾಗಿ ಖರ್ಚು ಹೆಚ್ಚಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಉತ್ಪಾದನೆ ಮತ್ತು ವಿತರಣೆ ಸಾಧ್ಯವಾಗದೇ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಇದರ ಪರಿಣಾಮವೇ ಹಣದುಬ್ಬರ ಎಂದು ಹೇಳಬಹುದು.

6. ಮೂಲಸೌಕರ್ಯಗಳ ಕೊರತೆ: ಮಾನವನ ಮೂಲಸೌಕರ್ಯಗಳಾದ ಆಹಾರ, ನೀರು, ವಸತಿ ಹಾಗೂ ಶಿಕ್ಷಣ ಮೊದಲಾದ ಅಭಿವೃದ್ಧಿಗಳು ಜನಸಂಖ್ಯಾ ಬೆಳವಣಿಗೆ ಅಗತ್ಯಕ್ಕೆ ಸಮಾನಾಗಿ ಆಗುತ್ತಿಲ್ಲ. ಇದರ ಪರಿಣಾಮ ಕುಡಿಯುವ ನೀರು ಆರೋಗ್ಯ ಆಹಾರ ವಸತಿ ಸೌಲಭ್ಯ ಮೊದಲಾದವುಗಳ ಮೇಲೆ ಬೀರುತ್ತದೆ.

7. ಕೆಲಸ ಮಾಡುವವರ ಸಂಖ್ಯೆ ಕಡಿಮೆ:  ಒಬ್ಬ ವ್ಯಕ್ತಿ ದುಡಿಯುವುದು ಹಲವಾರು ಜನರು ಕುಳಿತು ಉಣ್ಣುವುದು ಇದು ಅತಿಯಾದ ಜನಸಂಖ್ಯಾ ಏರಿಕೆಯ ಪ್ರಭಾವ. ಕುಟುಂಬದ ಯಜಮಾನ ಒಬ್ಬನೇ ದುಡಿದು ಹಾಕುವುದು ಮತ್ತು ಐದಾರು ಜನರು ದುಡಿಯದೇ ಹಾಗೆ ಇರುವುದು ಆದಾಯದ ಅಸಮಾನತೆಗೆ ಕಾರಣವಾಗುತ್ತದೆ.

8.  ಕಡಿಮೆ ಉಳಿತಾಯ: ಜನಸಂಖ್ಯಾ ಸ್ಪೋಟದಿಂದ ಉಳಿತಾಯ ಮಾಡುವುದು ಬಹಳ ಕಷ್ಟವಾಗುತ್ತಿದೆ. ಬಂದ ಆದಾಯ ಮಕ್ಕಳ ಆರೋಗ್ಯ, ಬಟ್ಟೆ, ಆಹಾರ, ನೀರು, ಶಿಕ್ಷಣ ಮುಂತಾದವುಗಳಿಗೆ ಖರ್ಚಾಗುತ್ತದೆ. ಇದರಿಂದ ಉಳಿತಾಯ ಮಾಡುವುದು ಕುಟುಂಬದ ಹಿರಿಯರಿಗೆ ತುಂಬಾ ನೋವಿನ ಸಂಗತಿಯಾಗಿದೆ.

9.  ವಸ್ತುಗಳ ಬೆಲೆ ಏರಿಕೆ: . ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯ ವಸ್ತುಗಳ ಉತ್ಪಾದನೆ ಮಾಡಲು ಸಾಧ್ಯವಾಗದ ಕಾರಣದಿಂದ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಜನರ ಬೇಡಿಕೆಗೆ ತಕ್ಕ ವಸ್ತುಗಳ ಪೂರೈಕೆ ಇರದಿದ್ದರೆ ಬೆಲೆಗಳು ಏರಿ ಸಮಸ್ಯೆಗಳು ಉದ್ಭವವಾಗುತ್ತವೆ.

10. ವೈದ್ಯಕೀಯ ಸೌಲಭ್ಯಗಳ ಅಭಾವ: 2000 ದ ವೇಳೆಗೆ ಪ್ರಪಂಚದ ಎಲ್ಲಾ ಜನರಿಗೂ ಆರೋಗ್ಯ ಎಂಬ ವಿಶ್ವಸಂಸ್ಥೆಯ ಪೋಷಣೆಯು ಹಾಗೆಯೇ ಉಳಿದಿದೆ. ಜನಸಂಖ್ಯೆ ಪ್ರಮಾಣ ಅಧಿಕವಾಗಿ ಬೆಳೆಯುತ್ತಿರುವ ಕಾರಣ ಆರೋಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ದಿನೇ ದಿನೇ ಔಷಧಿಗಳ ಬೆಲೆ ಏರಿಕೆಯಾಗುತ್ತಿರುವುದಕ್ಕೆ ಜನಸಂಖ್ಯೆಯೇ ಕಾರಣವಾಗಿದೆ.

ಉಪಸಂಹಾರ

ಹೀಗೆ ಜನಸಂಖ್ಯೆಯು ಮಿತಿಮೀರಿ ಏರುತ್ತಿರುವುದರಿಂದ ಸರ್ಕಾರ ರೂಪಿಸುವ ಯಾವುದೇ ಕಲ್ಯಾಣ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಮಹಿಳೆಯರ ಮೇಲಿನ ಶೋಷಣೆ ಹೆಚ್ಚುತ್ತದೆ. ಪರಿಸರ ಹಾಳಾಗಿ ಮಾನವ ಶಕ್ತಿ ನಷ್ಟವಾಗುತ್ತದೆ. ಪ್ರಾದೇಶಿಕ ಅಸಮತೋಲನ ಉಂಟಾಗಿ ಜನರಲ್ಲಿ ಕ್ಷೋಭೆಗಳು ಉಂಟಾಗುತ್ತವೆ. ಇದರಿಂದ ಸಮಾಜದಲ್ಲಿ ಶಾಂತಿ, ಸುರಕ್ಷತೆ, ನೆಮ್ಮದಿಗೆ ಭಂಗಗಳುಂಟಾಗುತ್ತವೆ.